Karnataka Weather Forecast: ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಎಚ್ಚರಿಕೆ!

ಬೆಂಗಳೂರು, ಮೇ 30: ರಾಜ್ಯದ ಕರಾವಳಿ ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ (Weather) ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ವರುಣನ ಆರ್ಭಟ ಹೆಚ್ಚಿರಲಿದ್ದು, ಕೆಲವು ಜಿಲ್ಲೆಗಳಲ್ಲಿ ಒಣ ಹವಾಮಾನ ಮುಂದುವರಿಯಲಿದೆ.

ಮುಖ್ಯಾಂಶಗಳು

  • ಕರಾವಳಿಯ ಮೂರು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
  • ಒಳನಾಡಿನ ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯ ಮುನ್ಸೂಚನೆ.
  • ಸಾರ್ವಜನಿಕರು ಹಾಗೂ ರೈತರು ಸಿಡಿಲು ಮತ್ತು ಗಾಳಿಗೆ ಎಚ್ಚರಿಕೆ ವಹಿಸಿ.

ಎಲ್ಲೆಲ್ಲಿ ಮಳೆ?

ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಹಾವೇರಿ, ಗದಗ, ಕೊಪ್ಪಳ, ಧಾರವಾಡ ಮತ್ತು ರಾಯಚೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಬಿರುಗಾಳಿ (ಗಂಟೆಗೆ 40-50 ಕಿ.ಮೀ ವೇಗ) ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಉಳಿದ ಜಿಲ್ಲೆಗಳಲ್ಲಿ ಒಣ ಹವಾಮಾನ ಮುಂದುವರಿಯಲಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಹಾಸನ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಗಂಟೆಗೆ 40 ರಿಂದ 50 ಕಿ.ಮೀ ವೇಗದ ಬಲವಾದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.

ರಾಜ್ಯದ ಪ್ರಮುಖ ಭಾಗಗಳಲ್ಲಿ, ವಿಶೇಷವಾಗಿ ದಕ್ಷಿಣ ಒಳನಾಡಿನಲ್ಲಿ ವರುಣನ ಆರ್ಭಟ ಹೆಚ್ಚಿರಲಿದ್ದು, ಸಾರ್ವಜನಿಕರು ಮತ್ತು ರೈತರು ಬಿರುಗಾಳಿ ಹಾಗೂ ಸಿಡಿಲಿನ ಬಗ್ಗೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಉಳಿದಂತೆ ಉತ್ತರ ಒಣ ಹವೆಯೂ ಕೆಲವು ಜಿಲ್ಲೆಗಳಲ್ಲಿ ಮುಂದುವರಿಯಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಆ ದಾಖಲೆ, ಈ ದಾಖಲೆ ಅಲ್ಲ… ಇದು ವೈಭವ್ ಸೂರ್ಯವಂಶಿ ವಿಶ್ವ ದಾಖಲೆ

Source link

ಬಾಕ್ಸ್​ ಆಫೀಸ್​​ನಲ್ಲಿ ದಾಖಲೆ ಬರೆದ ‘ಕರುಪ್ಪು’ ಸಿನಿಮಾ; 300 ಕೋಟಿ ರೂಪಾಯಿ ಕಲೆಕ್ಷನ್

ಕಾಲಿವುಡ್ ನಟ ಸೂರ್ಯ ಮತ್ತು ಬಹುಭಾಷಾ ನಟಿ ತ್ರಿಷಾ ಅಭಿನಯದ ‘ಕರುಪ್ಪು’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಮೇ 15ರಂದು ಬಿಡುಗಡೆಯಾದ ಈ ಚಿತ್ರ ಪ್ರೇಕ್ಷಕರ ಮನಗೆದ್ದಿದೆ. ಇದೀಗ ವಿಶ್ವಾದ್ಯಂತ ಬರೋಬ್ಬರಿ 300 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ದಾಖಲೆ ಬರೆದಿದೆ. ನಟ ಸೂರ್ಯ ಮತ್ತು ತ್ರಿಷಾ ಜೋಡಿಯ ಈ ಅದ್ಭುತ ಯಶಸ್ಸನ್ನು ಚಿತ್ರತಂಡ ಸಂಭ್ರಮಿಸಿದೆ.

ನಿರ್ಮಾಣ ಸಂಸ್ಥೆ ‘ಡ್ರೀಮ್ ವಾರಿಯರ್ ಪಿಕ್ಚರ್ಸ್’ ಈ ಕುರಿತು ಪೋಸ್ಟರ್ ಹಂಚಿಕೊಂಡಿದ್ದು, ‘ಬಾಕ್ಸ್ ಆಫೀಸ್‌ನಲ್ಲಿ ಸೂರ್ಯ ಅವರ ಬಿಗ್ಗೆಸ್ಟ್ ಬ್ಲಾಸ್ಟ್ ಕರುಪ್ಪು ವಿಶ್ವಾದ್ಯಂತ 300 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದ್ದು, ಮೆಗಾ ಬ್ಲಾಕ್‌ಬಸ್ಟರ್ ಆಗಿ ಹೊರಹೊಮ್ಮಿದೆ’ ಎಂದು ಬರೆದುಕೊಂಡಿದೆ. ಭಾರತದಲ್ಲೇ ಈ ಸಿನಿಮಾ ಬರೋಬ್ಬರಿ 194.55 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ. ನೆಟ್ ಕಲೆಕ್ಷನ್ 168.15 ಕೋಟಿ ರೂ. ಆಗಿದೆ.

‘ಕರುಪ್ಪು’ ಸಿನಿಮಾ ಸೂರ್ಯ ಮತ್ತು ತ್ರಿಷಾ ಇಬ್ಬರ ಕೆರಿಯರ್‌ನಲ್ಲೂ ದೊಡ್ಡ ಮೈಲಿಗಲ್ಲಾಗಿದೆ. ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರವನ್ನು ಪ್ರೇಕ್ಷಕರು ಮುಗಿಬಿದ್ದು ನೋಡುತ್ತಿದ್ದು, ಇಬ್ಬರ ನಟನೆಗೆ ಮೆಚ್ಚುಗೆ ಸಿಗುತ್ತಿದೆ. ಆರ್. ಜೆ. ಬಾಲಾಜಿ ನಿರ್ದೇಶನದ ಈ ಚಿತ್ರಕ್ಕೆ ಸಾಯಿ ಅಭ್ಯಂಕರ್ ಸಂಗೀತ ನೀಡಿದ್ದು, ಜಿ. ಕೆ. ವಿಷ್ಣು ಅವರ ಛಾಯಾಗ್ರಹಣವಿದೆ. ಸೂರ್ಯ ಮತ್ತು ತ್ರಿಷಾ ಜೊತೆಗೆ ಇಂದ್ರನ್ಸ್ ಹಾಗೂ ಅನಘಾ ಮಾಯಾ ರವಿ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ.

‘ಕರುಪ್ಪು 2’ ಸೀಕ್ವೆಲ್ ಬಗ್ಗೆ ನಿರ್ದೇಶಕರ ಪ್ಲಾನ್!

ಚಿತ್ರದ ಭರ್ಜರಿ ಗೆಲುವಿನ ಬೆನ್ನಲ್ಲೇ ನಿರ್ದೇಶಕ ಆರ್. ಜೆ. ಬಾಲಾಜಿ ಸೀಕ್ವೆಲ್ ಮಾಡುವ ಆಲೋಚನೆಯನ್ನು ಹಂಚಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ಒಂದು ವೇಳೆ ಕರುಪ್ಪು ಚಿತ್ರಕ್ಕೆ ಸೀಕ್ವೆಲ್ ಸಾಧ್ಯವಾದರೆ, ಈ ಬಾರಿ ದೇವರು ಮತ್ತು ರಾಜಕೀಯ ನಡುವಿನ ಸಂಘರ್ಷವನ್ನು ತೋರಿಸಲು ಬಯಸುತ್ತೇನೆ. ನನ್ನ ಹಿಂದಿನ ಮೂಕುದಿ ಅಮ್ಮನ್ ಸಿನಿಮಾ ದೇವರು ಮತ್ತು ನಕಲಿ ಸ್ವಾಮೀಜಿ ನಡುವಿನ ಕಥೆಯಾಗಿತ್ತು. ಈಗಿನ ಕರುಪ್ಪು ಸಿನಿಮಾ ದೇವರು ಮತ್ತು ನ್ಯಾಯಾಂಗ ನಡುವಿನ ಹೋರಾಟವಾಗಿದೆ. ಮುಂದಿನ ಚಿತ್ರದಲ್ಲಿ ರಾಜಕೀಯವನ್ನು ತರಲಿದ್ದೇನೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಇಳಯರಾಜಾ ಬಗ್ಗೆ ವ್ಯಂಗ್ಯ: ಕ್ಷಮೆಯಾಚಿಸಿದ ‘ಕರುಪ್ಪು’ ಚಿತ್ರತಂಡ

ಆದರೆ ಈ ಕಥೆಯ ಮೇಲೆ ಕೆಲಸ ಮಾಡಲು ತಮಗೆ ಇನ್ನೂ ಸ್ವಲ್ಪ ಸಮಯ ಬೇಕು ಎಂದಿರುವ ಅವರು, ಪ್ರೇಕ್ಷಕರು ಮೊದಲ ಭಾಗವನ್ನು ಮರೆತ ನತರವೇ ಅತ್ಯುತ್ತಮವಾದ ಸೀಕ್ವೆಲ್ ಕೊಡುವ ಯೋಜನೆ ನನ್ನದು ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಜ್ಮೀರ್ ಹತ್ಯಾಕಾಂಡದಲ್ಲಿ ಟ್ವಿಸ್ಟ್​: ವೆಬ್​ ಸೀರೀಸ್ ನೋಡಿ ನಾಲ್ವರನ್ನು ಕೊಂದ 17ರ ಬಾಲಕ, ಸಿಕ್ಕಿಬಿದ್ದಿದ್ದು ಹೀಗೆ

ಅಜ್ಮೀರ್, ಮೇ 30: ರಾಜಸ್ಥಾನದ ಅಜ್ಮೀರ್​ ಜಿಲ್ಲೆಯ ಮಾಜಿ ಸರಪಂಚ್ ರಾಮ್ ಸಿಂಗ್ ಚೌಧರಿ ಸೇರಿದಂತೆ ಒಂದೇ ಕುಟುಂಬದ ನಾಲ್ವರ ಸಜೀವದಹನ ಪ್ರಕರಣಕ್ಕೆ ಇದೀಗ ದೊಡ್ಡ ತಿರುವುದು ಸಿಕ್ಕಿದೆ. ಆರಂಭದಲ್ಲಿ ಇದೊಂದು ಕಾರು ಅಪಘಾತ(Accident) ಎನ್ನಲಾಗಿತ್ತು. ಆದರೆ, ಪೊಲೀಸರ ಹದ್ದಿನ ಕಣ್ಣಿನ ತನಿಖೆಯಿಂದಾಗಿ ಇದು ಅಪರಾಧ ಜಗತ್ತಿನ ವೆಬ್ ಸೀರೀಸ್ ನೋಡಿ, ಆಸ್ತಿಗಾಗಿ 17 ವರ್ಷದ ಮಗನೇ ರೂಪಿಸಿದ ಭೀಕರ ಕೊಲೆ ಎಂಬ ಆಘಾತಕಾರಿ ಸತ್ಯ ಬಯಲಾಗಿದೆ.

ಚಹಾ ಕುಡಿಯುವಾಗ ಸಿಕ್ಕಿಬಿದ್ದ ಹಂತಕ

ಘಟನೆಯ ನಂತರ ಇಡೀ ಕುಟುಂಬ ಕಣ್ಣೀರಿಡುತ್ತಿದ್ದರೆ, ರಾಮ್ ಸಿಂಗ್ ಅವರ 17 ವರ್ಷದ ಅಪ್ರಾಪ್ತ ಮಗ ಮಾತ್ರ ಶಾಂತನಾಗಿದ್ದ. ತನ್ನ ತಾಯಿ ಪಕ್ಕದಲ್ಲಿ ಕುಳಿತು ಆಕೆಯನ್ನು ಸಮಾಧಾನಪಡಿಸುತ್ತಾ, ಅತ್ಯಂತ ನಿರಾಳವಾಗಿ ಚಹಾ ಕುಡಿಯುತ್ತಿದ್ದ. ಸಾವಿನ ಮನೆಯಲ್ಲಿ ಬಾಲಕನ ಈ ಅಸಹಜ ನಡವಳಿಕೆಯೇ ಪೊಲೀಸರಿಗೆ ಮೊದಲ ಅನುಮಾನ ಮೂಡಿಸಿತು.

ಅಪಘಾತದ ಕಥೆ ಫೇಲ್ ಆಗಿದ್ದು ಹೇಗೆ?

ಕೊಲೆಯನ್ನು ಅಪಘಾತವೆಂದು ಬಿಂಬಿಸಲು ಶವಗಳನ್ನು ಸ್ಕಾರ್ಪಿಯೋ ಕಾರಿನಲ್ಲಿಟ್ಟು ಬೆಂಕಿ ಹಚ್ಚಲಾಗಿತ್ತು. ಆದರೆ ಪೊಲೀಸರು ಸೂಕ್ಷ್ಮವಾಗಿ ಗಮನಿಸಿದಾಗ ಎರಡು ಪ್ರಮುಖ ಸಾಕ್ಷ್ಯಗಳು ಸಿಕ್ಕಿವೆ.

ಖಾಲಿ ಇದ್ದ ಮುಂಭಾಗದ ಸೀಟು: ಕಾರು ಅಪಘಾತವಾಗಿದ್ದರೆ ಯಾರಾದರೂ ಒಬ್ಬರು ಡ್ರೈವಿಂಗ್ ಸೀಟಿನಲ್ಲಿ ಇರಬೇಕಿತ್ತು, ಆದರೆ ಎಲ್ಲಾ ನಾಲ್ಕು ಶವಗಳು ಹಿಂಬದಿಯ ಸೀಟಿನಲ್ಲಿದ್ದವು.

ಇರಿತದ ಗಾಯಗಳು: ಮೃತರಲ್ಲಿ ಒಬ್ಬರಾದ ಎರಡನೇ ಪತ್ನಿ ಸರ್ಗ್ಯಾನ್ ದೇಹದ ಮೇಲೆ ಚೂರಿಯಿಂದ ಇರಿದ ಗಾಯಗಳಿದ್ದವು. ಇದರಿಂದಾಗಿ ಪೊಲೀಸರು ತನಿಖೆಯ ದಿಕ್ಕನ್ನು ಬದಲಿಸಿದರು.

5 ತಿಂಗಳ ಕ್ರಿಮಿನಲ್ ಸ್ಕೆಚ್ ಮತ್ತು ವೆಬ್ ಸೀರೀಸ್ ಗೀಳು

ಪೊಲೀಸ್ ವಿಚಾರಣೆಯಲ್ಲಿ ಬಾಲಕ ತನ್ನ ತಪ್ಪು ಒಪ್ಪಿಕೊಂಡಿದ್ದಾನೆ. ತಂದೆ ರಾಮ್ ಸಿಂಗ್ ಎರಡನೇ ಮದುವೆಯಾಗಿದ್ದರಿಂದ ಆಸ್ತಿ ಕೈತಪ್ಪುವ ಭಯ ಮತ್ತು ಮೊದಲ ತಾಯಿಗೆ ನೀಡುತ್ತಿದ್ದ ಕಿರುಕುಳದಿಂದಾಗಿ ಬಾಲಕ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ.

ಕಳೆದ 5 ತಿಂಗಳುಗಳಿಂದ ಆತ ಅಪರಾಧ ಆಧಾರಿತ ವೆಬ್ ಸರಣಿಗಳು (Crime Web Series) ಮತ್ತು ಆನ್‌ಲೈನ್ ಗೇಮ್‌ಗಳನ್ನು ನೋಡಿ, ಪೊಲೀಸರಿಂದ ಹೇಗೆ ತಪ್ಪಿಸಿಕೊಳ್ಳಬೇಕು ಹಾಗೂ ಸಾಕ್ಷ್ಯಗಳನ್ನು ಹೇಗೆ ನಾಶಪಡಿಸಬೇಕು ಎಂದು ಸ್ಕೆಚ್ ಹಾಕಿದ್ದ.

ಮತ್ತಷ್ಟು ಓದಿ: ಬೆಳಗಾವಿ: ರಾಯಬಾಗದಲ್ಲಿ ಭೀಕರ ರಸ್ತೆ ಅಪಘಾತ, ಗೂಡ್ಸ್ ಆಟೋ ಡಿಕ್ಕಿಯಾಗಿ ಒಂದೇ ಕುಟುಂಬದ ಮೂವರ ದುರ್ಮರಣ

ಘಟನೆಯ ರಾತ್ರಿ ನಡೆದಿದ್ದೇನು?

ಘಟನೆಯ ರಾತ್ರಿ ತಂದೆ ರಾಮ್ ಸಿಂಗ್ ಮತ್ತು ಎರಡನೇ ಪತ್ನಿ ಬಿಯರ್ ಕುಡಿದು ಮಲಗಿದ್ದರು. ಮುಂಜಾನೆ 4 ಗಂಟೆಗೆ ಮೊಬೈಲ್‌ನಲ್ಲಿ ಗೇಮ್ ಆಡುತ್ತಿದ್ದ ಬಾಲಕ, ತಂದೆಯ ಕೋಣೆಗೆ ನುಗ್ಗಿ ಅವರ ಕಿವಿಯ ಬಳಿ ಚಾಕುವಿನಿಂದ ಇರಿದು ಕೊಂದಿದ್ದಾನೆ.

ಆದರೆ ಈ ಗಲಾಟೆಯಿಂದ ಎರಡನೇ ಪತ್ನಿ ಸರ್ಗ್ಯಾನ್ ಎಚ್ಚರಗೊಂಡು ಕಿರುಚಾಡಿದ್ದಾಳೆ. ಆಗ ಬಾಲಕನಿಗೆ ಸಹಾಯ ಮಾಡಲು ಆತನ ತಾಯಿ (ಮೊದಲ ಪತ್ನಿ ಸುನೀತಾ) ಮತ್ತು ಸಹೋದರಿ ಕೂಡ ಕೋಣೆಗೆ ಬಂದಿದ್ದಾರೆ. ನಂತರ ಎಲ್ಲರೂ ಸೇರಿ ಎರಡನೇ ಪತ್ನಿ ಸರ್ಗ್ಯಾನ್, ತಾಯಿ ಪುಸಿ ದೇವಿ ಮತ್ತು ಬ್ಯಾಂಕ್ ವ್ಯವಹಾರ ನೋಡಿಕೊಳ್ಳುತ್ತಿದ್ದ ಸೊಸೆ ಮಹಿಮಾಳನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಬಳಿಕ ಸಾಕ್ಷ್ಯ ನಾಶಕ್ಕೆ ಕಾರಿನೊಳಗೆ ಹಾಕಿ ಬೆಂಕಿ ಹಚ್ಚಿದ್ದರು.

ವೆಬ್ ಸೀರೀಸ್ ನೋಡಿ ಪರ್ಫೆಕ್ಟ್ ಮರ್ಡರ್ ಮಾಡಲು ಹೊರಟಿದ್ದ ಅಪ್ರಾಪ್ತ ಬಾಲಕ ಹಾಗೂ ಆತನ ತಾಯಿಯ ನಾಟಕವನ್ನು ಅಜ್ಮೀರ್ ಪೊಲೀಸರು ಯಶಸ್ವಿಯಾಗಿ ಪತ್ತೆಹಚ್ಚಿದ್ದು, ಆರೋಪಿಗಳನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Horoscope Today: ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮೇ 30, ಶನಿವಾರದ ದ್ವಾದಶ ರಾಶಿಗಳ ಫಲಾಫಲವನ್ನು ನೀಡಿದ್ದಾರೆ. ಈ ದಿನದಂದು ಪರಾಭವನಾಮ ಸಂವತ್ಸರ, ಉತ್ತರಾಯಣ, ಅಧಿಕ ಜೇಷ್ಠ ಮಾಸ, ಗ್ರೀಷ್ಮ ಋತು, ಶುಕ್ಲ ಪಕ್ಷ, ಚತುರ್ದಶಿ, ಶಿವಯೋಗ, ವಣಿಕ ಕರಣ, ವಿಶಾಖ ನಕ್ಷತ್ರ ಇಂದಿನ ಪ್ರಮುಖ ಪಂಚಾಂಗ ವಿವರಗಳಾಗಿವೆ. ಈ ದಿನದ ರಾಹುಕಾಲ ಬೆಳಗ್ಗೆ 9:00 ರಿಂದ 10:40 ರವರೆಗೆ ಇದ್ದು, ಸಂಕಲ್ಪ ಕಾಲ ಮಧ್ಯಾಹ್ನ 1:53 ರಿಂದ 3:29 ರವರೆಗೆ ಇರುತ್ತದೆ. ಇಂದು ರವಿ ವೃಷಭ ರಾಶಿಯಲ್ಲಿ ಹಾಗೂ ಚಂದ್ರ ತುಲಾ ರಾಶಿಯ ವಿಶಾಖ ನಕ್ಷತ್ರದಲ್ಲಿ ಸಂಚಾರ ಮಾಡುತ್ತಿದ್ದಾನೆ. ಇದು ಪ್ರತಿ ರಾಶಿಯವರ ಮೇಲೆ ವಿಭಿನ್ನವಾಗಿ ಪ್ರಭಾವ ಬೀರಲಿದೆ ಎಂದು ಗುರೂಜಿ ಹೇಳಿದ್ದಾರೆ.

 

 

Source link

ಕರ್ನಾಟಕದ ನೂತನ ಸಿಎಂ ಆಯ್ಕೆಗೆ ಕ್ಷಣಗಣನೆ: ಇಂದು ಸಂಜೆ 4ಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಮಹತ್ವದ ಸಭೆ

ಸಿದ್ದರಾಮಯ್ಯ & ಡಿಕೆ ಶಿವಕುಮಾರ್Image Credit source: tv9

ಬೆಂಗಳೂರು, ಮೇ 30: ಕರ್ನಾಟಕ ರಾಜಕಾರಣದಲ್ಲಿ ಸಿದ್ದರಾಮಯ್ಯ (Siddaramaiah) ಆಡಳಿತ ಪರ್ವ ಅಧಿಕೃತವಾಗಿ ಅಂತ್ಯಗೊಂಡಿದ್ದು, ನೂತನ ಮುಖ್ಯಮಂತ್ರಿಯ ಪಟ್ಟಾಭಿಷೇಕಕ್ಕೆ ವೇದಿಕೆ ಸಂಪೂರ್ಣ ಸಿದ್ಧವಾಗಿದೆ. ಸಿದ್ದರಾಮಯ್ಯ ರಾಜೀನಾಮೆಯನ್ನು ರಾಜ್ಯಪಾಲರು ಅಂಗೀಕರಿಸಿದ ಬೆನ್ನಲ್ಲೇ, ಮುಂದಿನ ಜವಾಬ್ದಾರಿ ವಹಿಸಿಕೊಳ್ಳಲು ಕಾಂಗ್ರೆಸ್ ಪಾಳಯದಲ್ಲಿ ಭರ್ಜರಿ ಕಸರತ್ತು ಆರಂಭವಾಗಿದೆ. ಇಡೀ ರಾಜ್ಯದ ದೃಷ್ಟಿ ಇಂದು ಸಂಜೆ ವಿಧಾನಸೌಧದಲ್ಲಿ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಮಹತ್ವದ ಸಭೆಯತ್ತ ನೆಟ್ಟಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಅವರ ಹೆಸರೇ ಮುಖ್ಯಮಂತ್ರಿ ಹುದ್ದೆಗೆ ಬಹುತೇಕ ಅಂತಿಮವಾಗಿದ್ದು, ಇಂದಿನ ಸಭೆಯಲ್ಲಿ ಹೈಕಮಾಂಡ್ ಅಧಿಕೃತ ತೀರ್ಮಾನವನ್ನು ಪ್ರಕಟಿಸಲಿದೆ.

ಮುಖ್ಯಾಂಶಗಳು

  • ಇಂದು ಸಂಜೆ 4 ಗಂಟೆಗೆ ವಿಧಾನಸೌಧದ ಕಾನ್ಫರೆನ್ಸ್ ಹಾಲ್‌ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆ ನಿಗದಿ.
  • ಪಕ್ಷದಲ್ಲಿ ಒಗ್ಗಟ್ಟು ಪ್ರದರ್ಶಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮೂಲಕವೇ ಡಿ.ಕೆ. ಶಿವಕುಮಾರ್ ಹೆಸರನ್ನು ಪ್ರಸ್ತಾಪಿಸಲು ಹೈಕಮಾಂಡ್ ಮಾಸ್ಟರ್ ಪ್ಲಾನ್.
  • ಜೂನ್ 5, 6 ಅಥವಾ 7 ರಂದು ನೂತನ ಸಿಎಂ ಪದಗ್ರಹಣಕ್ಕೆ ಜ್ಯೋತಿಷಿ ದ್ವಾರಕನಾಥ್ ಅವರಿಂದ ಶುಭ ಮುಹೂರ್ತ ನಿಗದಿ.

ವಿಮಾನದಲ್ಲೇ ಸಚಿವ ಸಂಪುಟದ ಪಟ್ಟಿ ಪರಿಶೀಲಿಸಿದ್ದ ಡಿಕೆಶಿ

ಇಂದು ಸಂಜೆ ನಡೆಯಲಿರುವ ಶಾಸಕಾಂಗ ಸಭೆಯಲ್ಲಿ ನೂತನ ಸಿಎಲ್‌ಪಿ ನಾಯಕನ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಎಐಸಿಸಿ ನಾಯಕರ ಸಮ್ಮುಖದಲ್ಲಿ ಹೈಕಮಾಂಡ್ ತೀರ್ಮಾನವನ್ನು ಪ್ರಕಟಿಸಲಾಗುತ್ತದೆ. ನೂತನ ಸರ್ಕಾರ ಹಾಗೂ ಸಂಪುಟ ರಚನೆಗೆ ಡಿ.ಕೆ. ಶಿವಕುಮಾರ್ ಈಗಾಗಲೇ ಭರ್ಜರಿ ನೀಲನಕ್ಷೆ ಸಿದ್ಧಪಡಿಸಿಕೊಂಡಿದ್ದಾರೆ. ಇತ್ತೀಚೆಗೆ ದೆಹಲಿಗೆ ತೆರಳುವಾಗ ವಿಮಾನದಲ್ಲೇ ಸಂಭಾವ್ಯ ಸಚಿವರ ಪಟ್ಟಿಯನ್ನು ಹಿಡಿದು ಪರಿಶೀಲನೆ ನಡೆಸಿದ್ದ ಡಿಕೆಶಿ, ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದ ಡಿಕೆಶಿ, ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಖರ್ಗೆ ಅವರ ಪಾದಸ್ಪರ್ಶ ಮಾಡಿ ಆಶೀರ್ವಾದ ಪಡೆದಿದ್ದಾರೆ. ಆದಾಗ್ಯೂ, ಪ್ರಮಾಣವಚನ ಸ್ವೀಕರಿಸಲಿರುವ ಸಚಿವರ ಪಟ್ಟಿಯನ್ನು ಅವರು ಗೌಪ್ಯವಾಗಿಟ್ಟಿದ್ದಾರೆ.

ಭವ್ಯ ಪದಗ್ರಹಣಕ್ಕೆ ಮುಹೂರ್ತ ಫಿಕ್ಸ್

ಇನ್ನೊಂದೆಡೆ ನೂತನ ಮುಖ್ಯಮಂತ್ರಿಗಳ ಪದಗ್ರಹಣ ಸಮಾರಂಭವನ್ನು ವಿಧಾನಸೌಧದ ಮುಂಭಾಗ ನಡೆಸಬೇಕೇ ಅಥವಾ ಕಂಠೀರವ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಬೇಕೇ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಭವ್ಯ ಸಮಾರಂಭಕ್ಕೆ ದಿನಾಂಕ ನಿಗದಿಪಡಿಸಲು ಡಿಕೆಶಿ ಅವರು ತಮ್ಮ ಆಪ್ತ ರಾಜಗುರು ದ್ವಾರಕನಾಥ್ ಅವರ ಬಳಿ ಸಮಯ ಕೇಳಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ದ್ವಾರಕನಾಥ್, ಜೂನ್ 5, 6 ಮತ್ತು 7 ರಂದು ಅತ್ಯಂತ ಶುಭದಾಯಕವಾದ ಮೂರು ದಿನಾಂಕಗಳನ್ನು ನೀಡಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಟೀಮ್​​​ಗೆ ಢವಢವ: ಈ 13 ಜನರಿಗೆ ಸಚಿವ ಸ್ಥಾನ ಫಿಕ್ಸ್​​?

ಡಿಕೆಶಿ ಮುಖ್ಯಮಂತ್ರಿಯಾಗುತ್ತಿರುವುದು ಅವರ ಅಭಿಮಾನಿ ವಲಯದಲ್ಲಿ ಭಾರಿ ಹರ್ಷ ತಂದಿದ್ದು, ಯಾವುದೇ ವಿಘ್ನ ಎದುರಾಗದಿರಲಿ ಎಂದು ರಾಜ್ಯದ ಹಲವೆಡೆ ವಿಶೇಷ ಪೂಜೆ ಪುನಸ್ಕಾರಗಳನ್ನು ಮಾಡಿಸಲಾಗುತ್ತಿದೆ. ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ‘ಪ್ರಮಾಣವಚನ ಸಮಾರಂಭಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆಯಿಂದಲೇ 50 ಸಾವಿರಕ್ಕೂ ಹೆಚ್ಚು ಬೆಂಬಲಿಗರು ಭಾಗವಹಿಸಲಿದ್ದೇವೆ’ ಎಂದು ತಿಳಿಸಿದ್ದಾರೆ. ಇಂದಿನ ಸಭೆಯೊಂದಿಗೆ ರಾಜ್ಯದ ಮುಂದಿನ ಆಡಳಿತ ಚುಕ್ಕಾಣಿ ಯಾರಿಗೆ ಸಿಗಲಿದೆ ಎಂಬ ಅಧಿಕೃತ ಚಿತ್ರಣ ಲಭ್ಯವಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Daily Devotional: ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ? ಹಾಗಾದರೆ ಈ ವೀಡಿಯೋ ನೋಡಿ

ಪ್ರತಿಯೊಬ್ಬ ವ್ಯಕ್ತಿಯೂ ತನ್ನದಾದ ಒಂದು ಮನೆ ಮತ್ತು ಕಾರು ಹೊಂದಬೇಕೆಂಬ ಆಸೆ ಹೊಂದಿರುತ್ತಾನೆ. ಆದರೆ ಎಷ್ಟೇ ದುಡಿದರೂ ಕೆಲವರಿಗೆ ಈ ಕನಸು ನನಸಾಗುವುದು ಕಷ್ಟವಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮನೆ ಮತ್ತು ವಾಹನ ಹೊಂದುವ ಯೋಗವು ರಾಶಿ ಚಕ್ರದ ನಾಲ್ಕನೇ ಮನೆಯ ಸ್ಥಿತಿಗತಿಗಳನ್ನು ಅವಲಂಬಿಸಿರುತ್ತದೆ. ಮಂಗಳ ಗ್ರಹವು ಭೂಮಿ ಮತ್ತು ಆಸ್ತಿಗೆ ಕಾರಕವಾಗಿದ್ದರೆ, ಶುಕ್ರ ಗ್ರಹವು ವಾಹನ ಮತ್ತು ಐಷಾರಾಮಕ್ಕೆ ಕಾರಕವಾಗಿದೆ. ನಾಲ್ಕನೇ ಮನೆಯ ಅಧಿಪತಿಯು ದುರ್ಬಲನಾಗಿದ್ದರೆ ಅಥವಾ ದುಷ್ಟ ಗ್ರಹಗಳ ಜೊತೆಗಿದ್ದರೆ, ಈ ಯೋಗ ಪ್ರಾಪ್ತಿ ಕಷ್ಟವಾಗುತ್ತದೆ.

ಆದರೆ ಇದಕ್ಕೆ ಪರಿಹಾರಗಳೂ ಇವೆ. ತಾಯಿಗೆ ಸಮಾನರಾದ ಹಿರಿಯರಿಗೆ ಗೌರವ ನೀಡುವುದು, ಬುಧವಾರದಂದು ಗಣಪತಿಗೆ ದುರ್ವೆ ಅರ್ಪಿಸುವುದು, ಐದು ಬುಧವಾರಗಳ ಕಾಲ ಬೆಲ್ಲ ಮತ್ತು ತುಪ್ಪದ ನೈವೇದ್ಯ ಅರ್ಪಿಸುವುದು ಹಾಗೂ ಮಂಗಳವಾರದಂದು ಹನುಮಂತ ಅಥವಾ ಸುಬ್ರಹ್ಮಣ್ಯ ದೇವರ ದರ್ಶನ ಮಾಡುವುದರಿಂದ ಶುಭ ಫಲಗಳು ದೊರೆಯಬಹುದು. ಧರ್ಮ ಮಾರ್ಗದಲ್ಲಿ ನಡೆದು, ಸಕಾರಾತ್ಮಕ ಮನಸ್ಥಿತಿ ಕಾಪಾಡಿಕೊಳ್ಳುವುದು ಸಹ ಮನೆ-ಕಾರು ಯೋಗಕ್ಕೆ ಸಹಾಯಕವಾಗುತ್ತದೆ ಎಂದು ಗುರೂಜಿ ತಿಳಿಸಿದ್ದಾರೆ.

 

Source link

‘ಟಾಕ್ಸಿಕ್ ಸೆಟ್​​ನಲ್ಲಿ ಹಾಯ್, ಹೆಲೋ ಹೇಳೋಕೆ ಅವಕಾಶವೇ ಇರಲಿಲ್ಲ’; ಕಿಯಾರಾ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ (Toxic Movie) ಚಿತ್ರದಲ್ಲಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಚಿತ್ರೀಕರಣದ ದಿನಗಳ ಬಗ್ಗೆ ಮಾತನಾಡಿರುವ ಕಿಯಾರಾ, ನಿರ್ದೇಶಕಿ ಗೀತು ಮೋಹನ್‌ದಾಸ್ ಸೆಟ್‌ನಲ್ಲಿ ತಮಗೆ ಹಾಕಿದ್ದ ಕಡಕ್ ರೂಲ್ಸ್ ಹಾಗೂ ಕನ್ನಡದಲ್ಲಿ ನಟಿಸುವಾಗ ಎದುರಾದ ಸವಾಲುಗಳನ್ನು ಹಂಚಿಕೊಂಡಿದ್ದಾರೆ.

‘ಹಾಯ್, ಹೆಲೋ’ಗೆ ಇರಲಿಲ್ಲ ಅವಕಾಶ

ಯಾವಾಗಲೂ ಶೂಟಿಂಗ್ ಸೆಟ್‌ಗೆ ಬಂದ ತಕ್ಷಣ ಎಲ್ಲರಿಗೂ ನಗುನಗುತ್ತಾ ‘ಹಾಯ್, ಗುಡ್ ಮಾರ್ನಿಂಗ್’ ಎಂದು ಮಾತನಾಡಿಸುವುದು ಕಿಯಾರಾ ಅವರ ಅಭ್ಯಾಸವಂತೆ. ಆದರೆ ‘ಟಾಕ್ಸಿಕ್’ ಸೆಟ್‌ನಲ್ಲಿ ಇದಕ್ಕೆ ಬ್ರೇಕ್ ಬಿದ್ದಿತ್ತು. ಈ ಬಗ್ಗೆ ಕಿಯಾರಾ ಮಾಹಿತಿ ನೀಡಿದ್ದಾರೆ.

‘ನಿರ್ದೇಶಕಿ ಗೀತು ಮೋಹನ್‌ದಾಸ್ ಅವರು ನನಗೆ ಮೊದಲೇ ಖಡಕ್ ಆಗಿ ಹೇಳಿದ್ದರು. ನಾಳೆ ನೀನು ಸೆಟ್‌ಗೆ ಬರುವಾಗ ನಿನ್ನ ಪಾತ್ರದ ಮೂಡ್‌ನಲ್ಲೇ ಇರಬೇಕು. ನನಗೆ ಯಾವುದೇ ಔಪಚಾರಿಕ ಮಾತುಕತೆಗಳು ಬೇಡ. ಯಾರಿಗೂ ಹಾಯ್, ಹಲೋ ಎನ್ನಬೇಡ. ನಿನ್ನ ಟೀಮ್ ಜೊತೆಯೂ ಮಾತನಾಡಬೇಡ. ಕೇವಲ ನಿನ್ನ ಕ್ಯಾರೆಕ್ಟರ್ ಜೋನ್‌ನಲ್ಲಿ ಮಾತ್ರ ಇರು ಎಂದು ಸೂಚಿಸಿದ್ದರು. ಪಾತ್ರದ ತೀವ್ರತೆಯನ್ನು ಕಾಯ್ದುಕೊಳ್ಳಲು ಗೀತು ಈ ರೀತಿ ಮಾಡುತ್ತಿದ್ದರು’ ಎಂದು ಕಿಯಾರಾ ನೆನಪಿಸಿಕೊಂಡಿದ್ದಾರೆ.

‘ಟಾಕ್ಸಿಕ್’ ಚಿತ್ರವನ್ನು ಏಕಕಾಲದಲ್ಲಿ ಇಂಗ್ಲಿಷ್ ಹಾಗೂ ಕನ್ನಡ ಎರಡೂ ಭಾಷೆಗಳಲ್ಲಿ ಚಿತ್ರೀಕರಿಸಲಾಗುತ್ತಿದೆ. ಇದು ತಮಗೆ ದೊಡ್ಡ ಸವಾಲಾಗಿತ್ತು ಎಂದು ಕಿಯಾರಾ ಒಪ್ಪಿಕೊಂಡಿದ್ದಾರೆ. ಮೊದಲಿಗೆ ಇಂಗ್ಲಿಷ್‌ನಲ್ಲಿ ದೃಶ್ಯದ ಶೂಟಿಂಗ್ ನಡೆಯುತ್ತಿತ್ತು. ಅದು ಓಕೆ ಆದ ಬಳಿಕ ಅದೇ ದೃಶ್ಯವನ್ನು ಕನ್ನಡದಲ್ಲಿ ಚಿತ್ರೀಕರಿಸಲಾಗುತ್ತಿತ್ತು. ಕನ್ನಡ ಭಾಷೆ ಬಾರದ ಕಾರಣ, ಕಿಯಾರಾ ಅವರು ಪ್ರತಿ ದಿನ ಶೂಟಿಂಗ್‌ಗೂ ಮುನ್ನ ಹಿಂದಿನ ರಾತ್ರಿಯೇ ಕುಳಿತು ಡೈಲಾಗ್‌ಗಳನ್ನು ಬಾಯಿಪಾಠ ಮಾಡುತ್ತಿದ್ದರಂತೆ.

ಇದನ್ನೂ ಓದಿ: ‘‘ಟಾಕ್ಸಿಕ್’ ಪ್ರೇಮಕತೆ ಸಂಪೂರ್ಣ ಭಿನ್ನ’: ಕತೆಯ ಬಗ್ಗೆ ನಾಯಕಿ ಕಿಯಾರಾ ಮಾತು 

ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ ಅನುಭವದ ಬಗ್ಗೆ ಮಾತನಾಡಿದ ಅವರು, ‘ಸಣ್ಣಪುಟ್ಟ ಸಾಂಸ್ಕೃತಿಕ ವ್ಯತ್ಯಾಸಗಳಿರಬಹುದು. ಆದರೆ ಅಂತಿಮವಾಗಿ ನಾವೆಲ್ಲರೂ ಭಾರತೀಯರು. ಹಾಗಾಗಿ ಇಲ್ಲಿನ ಕೆಲಸದ ಶೈಲಿ ನನಗೆ ಹೊಸದೇನೂ ಅನಿಸಲಿಲ್ಲ. ಬಾಲಿವುಡ್ ಹಾಗೂ ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡಿದಂತೆಯೇ ಇಲ್ಲೂ ಕೂಡ ಒಳ್ಳೆಯ ಅನುಭವ ಸಿಕ್ಕಿದೆ. ಇಲ್ಲಿನ ಸ್ಟಾರ್‌ಡಮ್ ಹಾಗೂ ಮೇಕಿಂಗ್ ಶೈಲಿ ಅದ್ಭುತವಾಗಿದೆ’ ಎಂದು ಹೊಗಳಿದ್ದಾರೆ.
ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಯಶ್, ನಯನತಾರಾ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಜೂನ್ 4ರಂದು ತೆರೆಕಾಣಬೇಕಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ಚಿತ್ರದ ಬಿಡುಗಡೆ ದಿನಾಂಕವನ್ನು ಸದ್ಯಕ್ಕೆ ಮುಂದೂಡಲಾಗಿದ್ದು, ಹೊಸ ದಿನಾಂಕದ ಅಧಿಕೃತ ಪ್ರಕಟಣೆ ಬಾಕಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದಿನ ಭವಿಷ್ಯ: ಇಂದು ಈ ರಾಶಿಯವರ ಹಳೆಯದಾದ ದೊಡ್ಡ ತಪ್ಪೊಂದು ಹೊರಬಲಿದೆ..

ಮೇಷ ರಾಶಿ :

ಆಕ್ಷೇಪಕ್ಕೆ ಸಕಾರಣವನ್ನು ಕೊಡುವುದು ಸೂಕ್ತ. ಇದರಿಂದ ತೊಂದರೆ ಸಿಕ್ಕಿಹಾಕಿಕೊಳ್ಳುವ ಸ್ಥಿತಿ ತಪ್ಪುತ್ತದೆ. ಸಂಗಾತಿಯೊಂದಿಗೆ ಜಗಳ ಉಂಟಾದರೂ ಅವರು ಶಾಂತಿ ಕಾಪಾಡುತ್ತಾರೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿ ಮನಸ್ಸಿಗೆ ನೆಮ್ಮದಿ ಪಡೆಯಿರಿ. ಇದರಲ್ಲಿ ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ. ಕಾರ್ಯಗಳನ್ನು ಹಂಚಿ ನೀವು ನಿಶ್ಚಿಂತರಾಗುವಿರಿ. ಯಾರದ್ದಾದರೂ ಪ್ರಲೋಭನೆಗೆ ಒಳಗಾಗುವ ಸಾಧ್ಯತೆ ಇದೆ.

ವೃಷಭ ರಾಶಿ :

ಇಂದು ನಂಬಿಕೆಯ ವಿಚಾರದಲ್ಲಿ ಮನಸ್ಸು ಮುರಿದುಹೋಗುವುದು. ಹಣಕಾಸನ್ನು ಭದ್ರವಾಗಿ ಇಟ್ಟುಕೊಳ್ಳಿ. ಮೋಸ ಹೋಗುವ ಸಾಧ್ಯತೆ ಇದೆ. ಮಕ್ಕಳಿಗೆ ಸಹಾಯ ಮಾಡಿ ಒಳ್ಳೆಯ ಸಂಬಂಧ ಬೆಳೆಸಿಕೊಳ್ಳಿ. ಪ್ರೇಮ ಜೀವನದಲ್ಲಿ ಪ್ರಾಮಾಣಿಕತೆ ಮುಖ್ಯ. ಸಮರ್ಥನೆಯನ್ನು ಕೊಟ್ಟು ಸಮಯವನ್ನು ವ್ಯರ್ಥಮಾಡಬೇಡಿ. ಸ್ವಲ್ಪ‌ಕಾಲದಲ್ಲಿ ಎಲ್ಲವೂ ಸ್ಪಷ್ಟವಾಗಿ ಗೋಚರವಾಗುವುದು. ಆರ್ಥಿಕ ಯೋಜನೆಗಳಿಗೆ ಉತ್ತೇಜನ ದೊರೆಯಲಿದೆ.

ಮಿಥುನ ರಾಶಿ :

ಕಾರ್ಯದ ಒತ್ತಡದಿಂದ ಪೂರ್ತಿಯಾಗಿ ಆಗದೇ ಹೋಗಬಹುದು. ನಾಯಕತ್ವದ ಹೊಣೆಗಾರಿಕೆಗಳೂ ಹೆಚ್ಚಾಗುತ್ತವೆ. ಸಂಗಾತಿಯು ನಿಮ್ಮ ಉತ್ಸುಕತೆಗೆ ಭಂಗ ತರಬಹುದು. ಆತ್ಮತೃಪ್ತಿ ಹೊಸ ಬಾಗಿಲುಗಳನ್ನು ತೆರೆಯುತ್ತದೆ. ಉದ್ಯೋಗದಲ್ಲಿ ಧೈರ್ಯದಿಂದ ಹೊಸ ಪ್ರಯತ್ನ ನಡೆಸಿ. ಸ್ಪರ್ಧಾ ಮನೋಭಾವವಿಲ್ಲದೇ ಎಲ್ಲರ ಜೊತೆ ಖುಷಿಯಿಂದ ಭಾಗವಹಿಸಿ. ಉದಾಸೀನತೆಯೇ ನಿಮ್ಮ ಉದ್ಯೋಗಕ್ಕೆ ಮುಳುವಾಗಬಹುದು. ಉದ್ಯಮದ ಕಾರಣಕ್ಕೆ ಅಧಿಕ ಸುತ್ತಾಟವು ಇರುವುದು.

ಕರ್ಕಾಟಕ ರಾಶಿ :

ಉಳಿದಿರುವ ಗೃಹಕೃತ್ಯಗಳನ್ನು ಪೂರೈಸಲು ಒಂದು ಅನುಕೂಲಕರ ದಿನ. ಉದ್ಯೋಗದಲ್ಲಿ ವಿವೇಕ ಮತ್ತು ತಾರ್ಕಿಕತೆ ಅವಶ್ಯ. ಚಟುವಟಿಕೆಗಳ ಮೂಲಕ ಪುನಶ್ಚತನಗೊಳ್ಳುತ್ತದೆ. ಆರೋಗ್ಯದಲ್ಲಿ ತಾಳ್ಮೆಯೇ ಮುಖ್ಯ. ಹೊಸ ನಿಲುವಿನಿಂದ ಭವಿಷ್ಯ ನಿರ್ಮಿಸಿ. ಆಪ್ತರು ಎನಿಸಿದ ಸ್ನೇಹಿತರ ಜೊತೆ ಆಗಿದ್ದ ನೋವನ್ನು ಹೇಳಿಕೊಂಡು ಹಗುರಾಗಿ. ವೈಯಕ್ತಿಕ ಸಮಸ್ಯೆಯನ್ನು ನೀವು ಯಾರ ಬಳಿಯೂ ಹೇಳಿಕೊಳ್ಳುವುದು ಕಷ್ಟವಾದೀತು. ಸುಮ್ಮನೇ ಎಲ್ಲದಕ್ಕೂ ಒಪ್ಪಿಗೆಯನ್ನು ಸೂಚಿಸುವುದು ಬೇಡ.

ಸಿಂಹ ರಾಶಿ :

ನಿಮ್ಮ ಮುಂಗೋಪವು ನಿಮ್ಮವರಿಗೆ ಮುಜುಗರವಾಗಬಹುದು. ಉದ್ಯೋಗದಿಂದ ಹೊರನಡೆಯುವ ಸಾಧ್ಯತೆ ಇದೆ. ನೆಮ್ಮದಿಯನ್ನು ಕಾಣುವಾಗಲೇ ಈ ಘಟನೆ ನಿಮ್ಮನ್ನು ಆತಂಕಕ್ಕೆ ದೂಡಲಿದೆ. ಪ್ರೀತಿ ಜೀವನ ಚೈತನ್ಯ ತುಂಬಿದಂತೆ ತೋರುತ್ತದೆ. ದೊಡ್ಡ ಮೊತ್ತದ ವ್ಯವಹಾರವನ್ನು ಮಾಡುವಾಗ ಭಯವಿರುವುದು. ನಿಮ್ಮ ಶಾಂತವಾದ ಮನಸ್ಸೇ ಹಲವು ಸಮಸ್ಯೆಗಳನ್ನು ದೂರ ಮಾಡುವುದು. ಪ್ರಾಮಾಣಿಕತೆಯು ಇಂದು ನಿಮಗೆ ವರದಾನವಾಗುವುದು.

ಕನ್ಯಾ ರಾಶಿ:

ಮನೆಯವರ ಮಾತಿನಿಂದ ಮನೆಯ ಬಗ್ಗೆ ನಿಮಗೆ ಒಲವು ಕಡಮೆಯಾದೀತು. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ತಪ್ಪು ಎಲ್ಲ ಕಡೆಯಿಂದ ಸುತ್ತಿ ನಿಮ್ಮ ಬುಡಕ್ಕೇ ಬರವುದು. ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ಕುಟುಂಬದ ಕೇಂದ್ರಬಿಂದುವಾಗಿ ನೀವು ಬೆಳಗಬಹುದು. ಕಾನೂನಾತ್ಮಕ ವಿಷಯಕ್ಕೆ ಸರಿಯಾದ ಸಲಹೆಯನ್ನು ಪಡೆಯುವಿರಿ. ನೀವು ಸ್ನೇಹಿತನೊಂದಿಗೆ ಯಾವುದೇ ವಿವಾದವನ್ನು ಹೊಂದಿದ್ದರೆ, ಅವರು ನಿಮ್ಮನ್ನು ಸಮಾಧಾನಪಡಿಸಲು ಬರಬಹುದು.

ತುಲಾ ರಾಶಿ :

ಆತ್ಮವಿಶ್ವಾಸದ ಮೂಲಕ ನೀವು ದೈಹಿಕ, ಮಾನಸಿಕ ಸಂಕಟವನ್ನು ಎದುರಿಸಬಹುದು. ಹಳೆಯ ನೆನಪಿನಿಂದ ಶಕ್ತಿ ಕುಗ್ಗಬಹುದು. ಹಣಕಾಸು ಯೋಜನೆಗಳಲ್ಲಿ ಜಾಗರೂಕತೆ ಅವಶ್ಯಕ. ಮನೆಯ ಒತ್ತಡ ಹೆಚ್ಚಾಗಬಹುದು, ಆದರೆ ಸಹಕಾರದಿಂದ ಅದು ಕಡಿಮೆಯಾಗುತ್ತದೆ. ಜನರೊಂದಿಗೆ ಇಣುಕು ನೋಟದಿಂದ ವ್ಯವಹರಿಸಬೇಕು. ಇದರಿಂದ ನಿಮ್ಮ ಮೇಲಿರುವ ಭಾವನೆಯು ಬದಲಾಗುವುದು. ಕೃತಜ್ಞತೆಯನ್ನು ಸ್ಮರಿಸಿಕೊಳ್ಳುವಿರಿ. ಇಂದು ಕೆಲಸಕ್ಕಾಗಿ ಓಡಾಡುವುದು ವ್ಯರ್ಥವೇ ಆಗುವುದು.

ವೃಶ್ಚಿಕ ರಾಶಿ :

ಅವಿವಾಹಿತರಿಗೆ ಮಾಂಗಲ್ಯ ಭಾಗ್ಯ ಕೂಡಿಬರಲಿದೆ. ಮಮಕಾರದಿಂದ ಕೊನೆಗೆ ದುಃಖವೇ ಆಗಬಹುದು. ಕ್ರೀಡೆಯಲ್ಲಿ ಜಯಗಳಿಸುವ ಸಾಧ್ಯತೆ ಇದೆ. ಸಂಬಂಧಿಗಳೊಂದಿಗೆ ಸಣ್ಣ ಪ್ರಯಾಣ ನೆಮ್ಮದಿ ತರಬಹುದು. ಪ್ರೇಮ ಜೀವನದಲ್ಲಿ ಗಾಢತೆಯ ಅನುಭವ. ಪ್ರೇಯಸಿ ಜೊತೆಯಲ್ಲಿ ಹೊರಗೆ ವಾಯುವಿಹಾರಕ್ಕೆ ಹೋಗುವಿರಿ. ನೀವು ವ್ಯವಹಾರದಲ್ಲಿ ಪಾಲುದಾರರಾಗುವುದು ಉತ್ತಮ, ಇದು ನಿಮ್ಮ ವ್ಯವಹಾರವನ್ನು ಇನ್ನಷ್ಟು ವಿಸ್ತರಿಸುತ್ತದೆ.

ಧನು ರಾಶಿ :

ಯಾರ ಮಾತಿಗೂ ಮನಸೋಲದೇ ನಿಮ್ಮದಾದುದನ್ನು ಮಾಡಿ. ಇಂದು ನಿಮ್ಮ ಕೆಲಸದ ಸ್ಥಳದಲ್ಲಿ ಪ್ರೀತಿ ಮೇಲುಗೈ ಸಾಧಿಸುತ್ತದೆ. ಮನೆಯವರೊಂದಿಗೆ ಹೆಚ್ಚು ಕಾಲ ಇಲ್ಲದಿದ್ದರೆ ಸಂಬಂಧಗಳ ಮೇಲೆ ವಿಪರೀತ ಪರಿಣಾಮ ಬೀರುತ್ತದೆ. ಸಹೋದ್ಯೋಗಿಗಳೊಂದಿಗೆ ಒಳ್ಳೆಯ ಸಂಬಂಧ ಬೆಳೆಸಿಕೊಳ್ಳಿ. ನಿಮ್ಮ ಸಂಗಾತಿಯ ಜೊತೆ ಚರ್ಚಿಸಿದರೆ ಅದು ನಿಮಗೆ ಉತ್ತಮ. ನೀವು ಹಳೆಯ ಸ್ನೇಹಿತರನ್ನು ಭೇಟಿ ಮಾಡಲು ಹೋಗಬಹುದು. ಸ್ವಂತ ಬುದ್ಧಿಯಿಂದ ನಿಮ್ಮ ಕಾರ್ಯವನ್ನು ಮಾಡಿಕೊಳ್ಳಿ.

ಮಕರ ರಾಶಿ :

ಮಕ್ಕಳ ತುಂಟಾಟಕ್ಕೆ ಅವರಿಗೆ ಬೈದು ಅವರ ದ್ವೇಷಕ್ಕೆ ಕಾರಣರಾಗುವಿರಿ. ದಾಂಪತ್ಯದಲ್ಲಿ ಆಪ್ತಭಾವವಿರಲಿದೆ. ಜಾಣ ಕಿವುಡುತನದಿಂದ ದೊಡ್ಡವರಾಗುವುದು ಬೇಡ. ಹಣಕಾಸಿನಲ್ಲಿ ಎಚ್ಚರಿಕೆ ಅಗತ್ಯ. ಸಂಗಾತಿಯೊಂದಿಗೆ ಜಗಳವಾದರೂ, ತಾಳ್ಮೆ ಬೇಕು. ಕೆಲಸದ ಕಡೆ ನೂರಕ್ಕೆ ನೂರು ಗಮನ ನೀಡಿ. ವಿದೇಶದಲ್ಲಿರುವ ಕುಟುಂಬದ ಸದಸ್ಯರಿಂದ ನಿಮಗೆ ಶುಭ ಸುದ್ದಿಯು ಬರುವುದು. ರಾಜಕೀಯವಾಗಿ ಒತ್ತಡಗಳು ಬರಬಹುದು. ಅದನ್ನು ತಾಳ್ಮೆಯಿಂದ ಎದುರಿಸಬೇಕು.

ಕುಂಭ ರಾಶಿ :

ಸಾಮಾಜಿಕ ಜಾಲತಾಣದಲ್ಲಿ ಸಮಯವನ್ನು ಹೆಚ್ಚು ಕಳೆಯಬಹುದು. ಜೀವನದ ತೊಂದರೆಗಳನ್ನು ಸಂಬಂಧಿಕರೊಂದಿಗೆ ಹಂಚಿಕೊಳ್ಳಬೇಡಿ. ಹಣದ ಹೂಡಿಕೆ ಕುರಿತು ಯೋಚಿಸಿ ನಿರ್ಧಾರ ಮಾಡಿ. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಇರುವಾಗ ಸಹನೆವಹಿಸಿ. ಪ್ರೇಮದಲ್ಲಿ ವಿಶಿಷ್ಟ ಅನುಭವ ಸಾಧ್ಯ. ಆತುರದಲ್ಲಿ ಯಾವುದೇ ಕೆಲಸ ಮಾಡುವುದನ್ನು ಮುಖ್ಯ ಕಾರ್ಯಗಳೇ ಮರೆತುಹೋಗಬಹುದು. ನಿಮ್ಮ ವಿರೋಧಿಗಳಲ್ಲಿ ಒಬ್ಬರು ನಿಮಗೆ ಕಿರುಕುಳ ನೀಡಲು ಪ್ರಯತ್ನಿಸಬಹುದು.

ಮೀನ ರಾಶಿ :

ನಿಮ್ಮೊಳಗೆ ಮಾಡುವ ಕಾರ್ಯದಲ್ಲಿ ಅತೃಪ್ತಭಾವವು ಇರಲಿದೆ‌. ಯಾರದೋ ಕೆಲಸದಲ್ಲಿ ಮಗ್ನರಾಗುವಿರಿ. ಆಲಸ್ಯವು ಮೈತುಂಬಿಕೊಂಡು ನಿದ್ರೆಯನ್ನು ಮಾಡುವ ಮನಃಸ್ಥಿತಿಯಲ್ಲಿ ಇರುವಿರಿ. ಹಣಕಾಸಿನ ಕೆಲಸಗಳಲ್ಲಿ ಯಶಸ್ಸು ಸಿಗಬಹುದು. ಸಂಗಾತಿಯ ಕುಟುಂಬದ ಅಡ್ಡಿ ಕೆಲವೊಂದು ವ್ಯತ್ಯಯ ತಂದರೂ, ನಿಮ್ಮ ಸಹನೆಗೆ ಅದರ ಬಗ್ಗೆ ಪ್ರಭಾವ ಬೀರುವುದಿಲ್ಲ. ನಿಮ್ಮ ಯೋಜನೆಗಳನ್ನು ನೀವು ವೇಗಗೊಳಿಸುತ್ತೀರಿ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಅಧಿಕ ಜ್ಯೇಷ್ಠ, ಸೌರ ಮಾಸ : ವೃಷಭ, ಮಹಾನಕ್ಷತ್ರ : ರೋಹಿಣೀ, ವಾರ : ಶನಿ, ಪಕ್ಷ : ಶುಕ್ಲ, ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ಅನೂರಾಧಾ, ಯೋಗ : ವರಿಯಾನ್, ಕರಣ : ವಣಿಜ, ಸೂರ್ಯೋದಯ – 05 – 56 am, ಸೂರ್ಯಾಸ್ತ – 06 – 47 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:09 – 10:46, ಯಮಗಂಡ ಕಾಲ 13:58 – 15:35, ಗುಳಿಕ ಕಾಲ 05:56 – 07:33

-ಲೋಹಿತ ಹೆಬ್ಬಾರ್-8762924271 (what’s app only)

Source link

GT vs RR: ಶುಭ್​ಮನ್ ಗಿಲ್ ಶತಕ; ಗುಜರಾತ್​ಗೆ ಫೈನಲ್ ಟಿಕೆಟ್

ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಪಿಸಿಎ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ್ ಹಾಗೂ ಗುಜರಾತ್ ನಡುವಿನ ಕ್ವಾಲಿಫೈಯರ್ 2 ಪಂದ್ಯದಲ್ಲಿ ರಾಜಸ್ಥಾನ್ ತಂಡವನ್ನು 7 ವಿಕೆಟ್​ಗಳಿಂದ ಮಣಿಸಿದ ಗುಜರಾತ್ ಟೈಟಾನ್ಸ್ ತಂಡ 2026 ರ ಐಪಿಎಲ್ ಫೈನಲ್​ಗೆ ಟಿಕೆಟ್ ಪಡೆದುಕೊಂಡಿದೆ. ಈ ಹೈವೋಲ್ಟೇಜ್ ಕದನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್ 214 ರನ್ ಬಾರಿಸಿ ಗುಜರಾತ್​ಗೆ 215 ರನ್​ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಗುಜರಾತ್ 18.4 ಓವರ್​ಗಳಲ್ಲಿ ಗೆಲುವಿನ ದಡ ಮುಟ್ಟಿತು. ಇದೀಗ ಮೇ 31 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್​ಸಿಬಿ ತಂಡವನ್ನು ಎದುರಿಸಲಿದೆ. ವಾಸ್ತವವಾಗಿ ಇದೇ ಗುಜರಾತ್ ವಿರುದ್ಧ ಕ್ವಾಲಿಫೈಯರ್ 1 ರಲ್ಲಿ ಗೆಲ್ಲುವ ಮೂಲಕ ಆರ್​ಸಿಬಿ ಫೈನಲ್​ಗೇರಿತ್ತು. ಇದೀಗ ಈ ಎರಡು ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಲಿದೆ.

Source link

Exit mobile version