ಇಂಡೋನೇಷ್ಯಾ, ಏಪ್ರಿಲ್ 2: ಪೂರ್ವ ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಯುಎಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್ಜಿಎಸ್) ಪ್ರಕಾರ, ಭೂಕಂಪದ ಕೇಂದ್ರಬಿಂದು ಮೊಲುಕ್ಕಾ ಸಮುದ್ರದಲ್ಲಿ ಸುಮಾರು 35 ಕಿಲೋಮೀಟರ್ ಆಳದಲ್ಲಿದೆ. ಬಲವಾದ ಕಂಪನಗಳ ನಂತರ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಭೂಕಂಪದಿಂದ ಆಸ್ತಿ ಮತ್ತು ಜೀವಕ್ಕೆ ಎಷ್ಟು ಹಾನಿಯಾಗಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಗುರುವಾರ ಬೆಳಿಗ್ಗೆ ಲಡಾಖ್ ಕೇಂದ್ರಾಡಳಿತ ಪ್ರದೇಶದ ಲೇಹ್ ಪ್ರದೇಶದಲ್ಲಿಯೂ ಭೂಕಂಪನದ ಅನುಭವವಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ (ಎನ್ಸಿಎಸ್) ಮಾಹಿತಿಯ ಪ್ರಕಾರ, ಇಂದು ಮುಂಜಾನೆ ಭೂಕಂಪ ಸಂಭವಿಸಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಉತ್ತರ ಭಾಗದಲ್ಲಿ ಲಘು ಭೂಕಂಪನದ ಅನುಭವವಾಗಿದೆ. ಆದಾಗ್ಯೂ, ಅದರ ತೀವ್ರತೆ ಕಡಿಮೆ ಇತ್ತು.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 5ನೇ ಪಂದ್ಯದ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ವೇಗಿ ಮೊಹಮ್ಮದ್ ಶಮಿ (Mohammed Shami) ಭರ್ಜರಿ ದಾಖಲೆ ನಿರ್ಮಿಸಿದ್ದಾರೆ. ಅದು ಸಹ ಇನಿಂಗ್ಸ್ನ ಮೊದಲ ಓವರ್ನ ಮೊದಲ ಎಸೆತದಲ್ಲೇ ವಿಕೆಟ್ ಕಬಳಿಸುವ ಮೂಲಕ ಎಂಬುದು ವಿಶೇಷ.
ಲಕ್ನೋನ ಏಕನಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 18.4 ಓವರ್ಗಳಲ್ಲಿ 141 ರನ್ಗಳಿಸಿ ಆಲೌಟ್ ಆಗಿತ್ತು. ಈ ಗುರಿಯನ್ನು ಬೆನ್ನತ್ತಲು ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ಕೆಎಲ್ ರಾಹುಲ್ ಅವರನ್ನು ಮೊಹಮ್ಮದ್ ಶಮಿ ಮೊದಲ ಎಸೆತದಲ್ಲೇ ಔಟ್ ಮಾಡಿದ್ದರು.
ಈ ವಿಕೆಟ್ನೊಂದಿಗೆ ಐಪಿಎಲ್ ಇತಿಹಾಸದಲ್ಲಿ ಮೊದಲ ಓವರ್ನ ಮೊದಲ ಎಸೆತದಲ್ಲಿ 5 ಬಾರಿ ವಿಕೆಟ್ ಪಡೆದ ಮೊದಲ ಬೌಲರ್ ಎಂಬ ದಾಖಲೆಯನ್ನು ಮೊಹಮ್ಮದ್ ಶಮಿ ತಮ್ಮದಾಗಿಸಿಕೊಂಡಿದ್ದಾರೆ. ಶಮಿ ಈ ಹಿಂದೆ ಇನಿಂಗ್ಸ್ನ ಮೊದಲ ಎಸೆತದಲ್ಲಿ ಜಾಕ್ ಕಾಲಿಸ್ (2014), ಕೆಎಲ್ ರಾಹುಲ್ (2022), ಫಿಲ್ ಸಾಲ್ಟ್ (2023), ಶೇಕ್ ರಶೀದ್ (2025) ಅವರ ವಿಕೆಟ್ ಪಡೆದಿದ್ದರು.
ಇದೀಗ ಕೆಎಲ್ ರಾಹುಲ್ ಅವರನ್ನು ಮತ್ತೊಮ್ಮೆ ಮೊದಲ ಎಸೆತದಲ್ಲೇ ಔಟ್ ಮಾಡುವ ಮೂಲಕ ಐಪಿಎಲ್ನಲ್ಲಿ 5 ಬಾರಿ ಇನಿಂಗ್ಸ್ನ ಮೊದಲ ಓವರ್ನ ಮೊದಲ ಎಸೆತದಲ್ಲಿ ಏಕೈಕ ಬೌಲರ್ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಒಂದೇ ಬ್ಯಾಟರ್ನ ಎರಡು ಬಾರಿ ಇನಿಂಗ್ಸ್ನ ಮೊದಲ ಎಸೆತದಲ್ಲಿ ಔಟ್ ಮಾಡಿದ 2ನೇ ವೇಗಿ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಇಂತಹದೊಂದು ಅಪರೂಪದ ಸಾಧನೆ ಮಾಡಿದ್ದು ಮುಂಬೈ ಇಂಡಿಯನ್ಸ್ ತಂಡದ ಮಾಜಿ ವೇಗಿ ಲಸಿತ್ ಮಾಲಿಂಗ. 2011 ರಲ್ಲಿ ಮತ್ತು 2015 ರಲ್ಲಿ ಮಯಾಂಕ್ ಅಗರ್ವಾಲ್ ಅವರನ್ನು ಇನಿಂಗ್ಸ್ನ ಮೊದಲ ಎಸೆತದಲ್ಲೇ ಔಟ್ ಮಾಡಿ ಮಾಲಿಂಗ ಈ ದಾಖಲೆ ಬರೆದಿದ್ದರು. ಇದೀಗ ಕೆಎಲ್ ರಾಹುಲ್ ಅವರನ್ನು ಎರಡು ಬಾರಿ (2022, 2026) ಮೊದಲ ಎಸೆತಗಳಲ್ಲಿ ಔಟ್ ಮಾಡಿ ಮೊಹಮ್ಮದ್ ಶಮಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ 4 ಓವರ್ಗಳನ್ನು ಎಸೆದ ಮೊಹಮ್ಮದ್ ಶಮಿ ಕೇವಲ 28 ರನ್ ನೀಡಿ 1 ವಿಕೆಟ್ ಕಬಳಿಸಿದ್ದರು. ಈ ಉತ್ತಮ ಬೌಲಿಂಗ್ ಪ್ರದರ್ಶನದ ಹೊರತಾಗಿಯೂ ಡೆಲ್ಲಿ ಕ್ಯಾಪಿಟಲ್ಸ್ ತಂಡವು 17.1 ಓವರ್ಗಳಲ್ಲಿ 145 ರನ್ ಬಾರಿಸುವ ಮೂಲಕ 6 ವಿಕೆಟ್ಗಳ ಜಯ ಸಾಧಿಸಿದೆ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 5ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೋಲನುಭವಿಸಿದೆ. ಈ ಸೋಲಿನ ಬೆನ್ನಲ್ಲೇ ಎಲ್ಎಸ್ಜಿ ತಂಡದ ಮಾಲೀಕರಾದ ಸಂಜೀವ್ ಗೋಯೆಂಕಾ ಅವರು ನಾಯಕ ರಿಷಭ್ ಪಂತ್ ಅವರೊಂದಿಗೆ ಚರ್ಚಿಸುತ್ತಿರುವುದು ಕಂಡು ಬಂದಿದೆ.
ಲಕ್ನೋನ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಲಕ್ನೋ ಸೂಪರ್ ಜೈಂಟ್ಸ್ 18.4 ಓವರ್ಗಳಲ್ಲಿ 141 ರನ್ಗಳಿಸಿ ಆಲೌಟ್ ಆಗಿದ್ದರು. ಈ ಗುರಿಯನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ 17.1 ಓವರ್ಗಳಲ್ಲಿ ಚೇಸ್ ಮಾಡಿ 6 ವಿಕೆಟ್ಗಳ ಜಯ ಸಾಧಿಸಿದೆ.
ಇತ್ತ ತವರಿನಲ್ಲಿ ನಡೆದ ಮೊದಲ ಪಂದ್ಯದಲ್ಲೇ ಕಳಪೆ ಪ್ರದರ್ಶನ ನೀಡಿ ಲಕ್ನೋ ಸೂಪರ್ ಜೈಂಟ್ಸ್ ಸೋಲೊಪ್ಪಿಕೊಂಡಿರುವುದಕ್ಕೆ ಎಲ್ಎಸ್ಜಿ ಮಾಲೀಕರಾದ ಸಂಜೀವ್ ಗೋಯೆಂಕಾ ಅವರು ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗುತ್ತಿದೆ.
ಪಂದ್ಯದ ನಂತರ ಸಂಜೀವ್ ಗೋಯೆಂಕಾ ಅವರು ರಿಷಭ್ ಪಂತ್ ಮತ್ತು ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಅವರೊಂದಿಗೆ ಗಂಭೀರವಾಗಿ ಮಾತನಾಡುತ್ತಿರುವುದು ಕಂಡುಬಂದಿದ್ದು, ಈ ವೇಳೆ ಗೋಯೆಂಕಾ ಅವರು ಕೈಸನ್ನೆ ಮಾಡುತ್ತಾ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಪಂತ್ ಶಾಂತವಾಗಿ ಅವರಿಗೆ ಉತ್ತರಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅಂದಹಾಗೆ ಸಂಜೀವ್ ಗೋಯೆಂಕಾ ಹೀಗೆ ತಂಡದ ನಾಯಕನಿಗೆ ಕ್ಲಾಸ್ ತೆಗೆದುಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. 2024ರಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡ ಹೀನಾಯವಾಗಿ ಸೋತಾಗ ಮೈದಾನದಲ್ಲೇ ಅಂದಿನ ನಾಯಕ ಕೆಎಲ್ ರಾಹುಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದು ದೊಡ್ಡ ವಿವಾದವಾಗಿತ್ತು. ಇದೀಗ ಸೋಲಿನ ಬೆನ್ನಲ್ಲೇ ರಿಷಭ್ ಪಂತ್ಗೆ ಕ್ಲಾಸ್ ತೆಗೆದುಕೊಳ್ಳುತ್ತಿರುವ ಗೋಯೆಂಕಾ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಟುವಿನೋ ಥಾಮಸ್ ಅವರು ‘ಟಾಕ್ಸಿಕ್’ ಸಿನಿಮಾದಲ್ಲಿ (Toxic) ನಟಿಸಿದ್ದಾರೆ ಎನ್ನಲಾಗುತ್ತಿದೆ. ಅವರು ಮಲಯಾಳಂ ನಟ. ವರ್ಷಕ್ಕೆ 2-3 ಸಿನಿಮಾಗಳನ್ನು ಮಾಡಿ ಅವರಿಗೆ ಅಭ್ಯಾಸ. ಹೀಗಾಗಿ, ದೀರ್ಘ ಕಾಲ ಶೂಟ್ ಆಗುವ ಸಿನಿಮಾಗಳಲ್ಲಿ ನಟಿಸದೇ ಇರಲು ಅವರು ಇಷ್ಟಪಡುತ್ತಾರೆ. ಹೀಗಿರುವಾಗಲೇ, ಟುವಿನೋ ಅವರು ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್ಟಿಆರ್ ಅವರ ‘ಡ್ರ್ಯಾಗನ್’ ಸಿನಿಮಾದಿಂದ ಹೊರ ನಡೆದಿದ್ದಾರೆ. ಈ ಬಗ್ಗೆ ಅವರೇ ಮಾಹಿತಿ ನೀಡಿದ್ದಾರೆ.
‘ಡ್ರ್ಯಾಗನ್’ ಸಿನಿಮಾ ಶೂಟಿಂಗ್ ಶುರುವಾಗಿ ಬಹು ಸಮಯ ಕಳೆದಿದೆ. ಈ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಅವರು ಸಾಕಷ್ಟು ಸಮಯ ತೆಗೆದುಕೊಂಡು ಚಿತ್ರದ ಶೂಟ್ ಮಾಡುತ್ತಿದ್ದಾರೆ. ಹೀಗಾಗಿ, ಟುವಿನೋ ಅವರು ಈ ಸಿನಿಮಾದಲ್ಲಿ ನಟಿಸಲು ಹಿಂದೇಟು ಹಾಕಿದ್ದಾರೆ. ‘ನಾವು ಮಲಯಾಳಂನಲ್ಲಿ ಭಿನ್ನವಾಗಿ ಕೆಲಸ ಮಾಡುತ್ತೇವೆ. ತೆಲುಗಿಗಿಂತ ನಾವು ಸಿನಿಮಾ ಶೂಟಿಂಗ್ನ ಬೇಗನೆ ಮುಗಿಸುತ್ತೇವೆ. ನಾವು ವರ್ಷಕ್ಕೆ 4-5 ಚಲನಚಿತ್ರಗಳನ್ನು ಮಾಡುತ್ತೇವೆ. ಡ್ರ್ಯಾಗನ್ಗೆ ಡೇಟ್ಸ್ ನೀಡುವುದು 4-5 ಚಲನಚಿತ್ರಗಳಿಗೆ ತೊಂದರೆ ಮಾಡಿದಂತೆ’ ಎಂದಿದ್ದಾರೆ ಅವರು.
ತೆಲುಗು ಚಿತ್ರರಂಗದವರು ಹೆಚ್ಚು ದಿನ ತೆಗೆದುಕೊಳ್ಳುತ್ತಾರೆ ಎಂಬ ಬಗ್ಗೆ ಟುವಿನೋ ಥಾಮಸ್ಗೆ ಯಾವುದೇ ಅಸಮಾಧಾನ ಇಲ್ಲ. ಮಲಯಾಳಂ ಸಣ್ಣ ಉದ್ಯಮ. ಕಡಿಮೆ ಬಜೆಟ್ನಲ್ಲಿ ಸಿನಿಮಾ ಮಾಡಲಾಗುತ್ತದೆ. ಹೀಗಾಗಿ ಚಿತ್ರವನ್ನು ಬೇಗ ರಿಲೀಸ್ ಮಾಡುವುದು ಅವರಿಗೆ ಮುಖ್ಯವಾಗಿದೆ. ಆದರೆ, ತೆಲುಗು ಚಿತ್ರರಂಗದಲ್ಲಿ ಈ ಮಾಡೆಲ್ ತರೋದು ಕಷ್ಟ. ಸಿನಿಮಾಗಳು ಬಿಗ್ ಬಜೆಟ್ನವಾಗಿರುತ್ತವೆ. ದೊಡ್ಡ ದೊಡ್ಡ ಸೆಟ್ಗಳ ನಿರ್ಮಾಣ ಮಾಡಬೇಕಾಗಿರುತ್ತದೆ. ಇದಕ್ಕೆಲ್ಲ ಸಾಕಷ್ಟು ಸಮಯ ಹಿಡಿಯುತ್ತದೆ.
‘ಟಾಕ್ಸಿಕ್’ ಸಿನಿಮಾಗೂ ಸಾಕಷ್ಟು ದಿನಗಳ ಕಾಲ ಶೂಟ್ ನಡೆದಿದೆ. ಟುವಿನೋ ಥಾಮಸ್ ಪಾತ್ರ ಹೆಚ್ಚು ಹೊತ್ತು ತೆರೆಮೇಲೆ ಕಾಣಿಸಿಕೊಳ್ಳದಿರಬಹುದು. ಈ ಕಾರಣದಿಂದ ಅವರು ಸಿನಿಮಾದಲ್ಲಿ ನಟಿಸಿರಬಹುದು ಎಂದು ಅನೇಕರು ಊಹಿಸಿದ್ದಾರೆ. ಸಿನಿಮಾ ನೋಡಿದ ಬಳಿಕವೇ ಈ ಬಗ್ಗೆ ತಿಳಿಯಲಿದೆ.
ಬೆಂಗಳೂರು: ಇಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಸೂಚ್ಯಂಕವು (AQI) 58 ರಿಂದ 95 ರ ಆಸುಪಾಸಿನಲ್ಲಿ ದಾಖಲಾಗಿದೆ. ಇದನ್ನು ಹವಾಮಾನ ಇಲಾಖೆಯು ‘ಸಾಧಾರಣ’ (Moderate) ಅಥವಾ ‘ತೃಪ್ತಿಕರ’ (Satisfactory) ವರ್ಗಕ್ಕೆ ಸೇರಿಸಿದೆ. ನಗರದ ಕೆಲವು ಭಾಗಗಳಾದ ಬಿಟಿಎಂ ಲೇಔಟ್ ಮತ್ತು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮಾಲಿನ್ಯದ ಮಟ್ಟ ತುಸು ಹೆಚ್ಚಿದ್ದು, ಅಲ್ಲಿನ AQI 100ರ ಗಡಿ ದಾಟಿದೆ. ಇದು ಶ್ವಾಸಕೋಶದ ಸಮಸ್ಯೆ ಇರುವವರಿಗೆ ಹಾಗೂ ಮಕ್ಕಳಿಗೆ ಸ್ವಲ್ಪ ಕಿರಿಕಿರಿ ಉಂಟುಮಾಡಬಹುದು.
ಕರಾವಳಿ ಭಾಗದಲ್ಲಿ ಇತ್ತೀಚೆಗೆ ವಾಯು ಗುಣಮಟ್ಟದಲ್ಲಿ ಏರುಪೇರಾಗುತ್ತಿದೆ. ಇಂದು ಇಲ್ಲಿನ AQI 150ರ ಆಸುಪಾಸಿನಲ್ಲಿದ್ದು, ಇದು ‘ಕಳಪೆ’ (Poor) ಮಟ್ಟಕ್ಕೆ ಹತ್ತಿರದಲ್ಲಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹವಾಮಾನ ತಕ್ಕಮಟ್ಟಿಗೆ ಉತ್ತಮವಾಗಿದ್ದು, AQI 80-90 ರಷ್ಟಿದೆ. ಕಲಬುರಗಿ ಮತ್ತು ಬೆಳಗಾವಿ ಭಾಗದಲ್ಲಿ ಬಿಸಿಲಿನ ತಾಪ ಹೆಚ್ಚಿದ್ದರೂ, ವಾಯು ಮಾಲಿನ್ಯದ ಮಟ್ಟ ನಿಯಂತ್ರಣದಲ್ಲಿದೆ (AQI ಸುಮಾರು 110-120)
ನಗರವಾರು ವಾಯು ಗುಣಮಟ್ಟ ಸೂಚ್ಯಂಕ:
ನಗರ / ಪ್ರದೇಶ
ಗಾಳಿಯ ಮಟ್ಟ (AQI)
ಸ್ಥಿತಿ (Status)
ಬೆಂಗಳೂರು
85 – 105
ಸಾಧಾರಣ (Moderate)
ಮಂಗಳೂರು
140 – 155
ಕಳಪೆ (Poor)
ಉಡುಪಿ
135 – 150
ಕಳಪೆ ಹಂತಕ್ಕೆ ಸಮೀಪ
ಹಾಸನ
65 – 75
ತೃಪ್ತಿಕರ (Satisfactory)
ಚಿಕ್ಕಮಗಳೂರು
55 – 65
ಉತ್ತಮ (Good)
ಹುಬ್ಬಳ್ಳಿ
110 – 125
ಸಾಧಾರಣ (Moderate)
ರಾಯಚೂರು
120 – 135
ಧೂಳು ಮಿಶ್ರಿತ ಗಾಳಿ
ಬೀದರ್
105 – 115
ಸಾಧಾರಣ
ವಿಜಯಪುರ
115 – 130
ಸಾಧಾರಣ
ಮಲೆನಾಡು ಭಾಗ
40 – 60
ಅತ್ಯುತ್ತಮ (Excellent)
ಗಾಳಿಯಲ್ಲಿ PM2.5 ಮತ್ತು PM10 ಕಣಗಳ ಪ್ರಮಾಣ ಹೆಚ್ಚಾಗಿರುವುದು ಕಂಡುಬಂದಿದೆ. ಹಿರಿಯ ನಾಗರಿಕರು ಮತ್ತು ಉಸಿರಾಟದ ತೊಂದರೆ ಇರುವವರು ಮಧ್ಯಾಹ್ನದ ವೇಳೆ ಮತ್ತು ವಾಹನ ಸಂಚಾರ ಹೆಚ್ಚಿರುವ ಸಮಯದಲ್ಲಿ ಹೊರಹೋಗುವಾಗ ಜಾಗರೂಕರಾಗಿರಬೇಕು. ಧೂಳು ಹೆಚ್ಚಿರುವ ಪ್ರದೇಶಗಳಲ್ಲಿ ಸಂಚರಿಸುವಾಗ ಮಾಸ್ಕ್ ಧರಿಸುವುದು ಉತ್ತಮ. ಬೆಳಿಗ್ಗೆ ಮತ್ತು ಸಂಜೆಯ ಗರಿಷ್ಠ ಸಂಚಾರದ ಸಮಯದಲ್ಲಿ ಮನೆಯ ಕಿಟಕಿಗಳನ್ನು ಮುಚ್ಚಿಡುವುದು ಸೂಕ್ತ. ಮನೆಯ ಸುತ್ತಮುತ್ತ ಹೆಚ್ಚು ಗಿಡಗಳನ್ನು ಬೆಳೆಸುವುದರಿಂದ ಶುದ್ಧ ಗಾಳಿ ಪಡೆಯಲು ಸಾಧ್ಯ.
ವಾಷಿಂಗ್ಟನ್, ಏಪ್ರಿಲ್ 2: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಜತೆಗಿನ ಯುದ್ಧದ ಬಗ್ಗೆ ಮಹತ್ವದ ಸುದ್ದಿಗೋಷ್ಠಿ ನಡೆಸಿದ್ದಾರೆ. ಅದರಲ್ಲಿ ನಾವು ಇರಾನ್ ಜತೆ ಯಾವುದೇ ಒಪ್ಪಂದ ಮಾಡಿಕೊಳ್ಳುವುದಿಲ್ಲ, ಅದು ಪರಿಮಾಣು ಶಕ್ತಿಯಾಗಲು ನಾವು ಬಿಡುವುದಿಲ್ಲ ಎಂದು ಹೇಳಿದ್ದಾರೆ.ಇರಾನ್, ಯುಎಸ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದೆ. ಯುದ್ಧ ಪ್ರಾರಂಭವಾಗಿ 34 ದಿನಗಳು ಕಳೆದಿವೆ ಮತ್ತು ಹೊಸ ಮುಖಾಮುಖಿಯ ಭಯ ಹೊರಹೊಮ್ಮುತ್ತಿದೆ.
ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರಗಳು, ಬ್ಯಾಲಿಸ್ಟಿಕ್ ಕ್ಷಿಪಣಿ ತಾಣಗಳು ಮತ್ತು ಶೇಖರಣಾ ಬಂಕರ್ಗಳು ಸೇರಿದಂತೆ 12,300 ಕ್ಕೂ ಹೆಚ್ಚು ಇರಾನಿನ ಗುರಿಗಳ ಮೇಲೆ ಇದುವರೆಗೆ ದಾಳಿ ಮಾಡಿದೆ ಎಂದು ಯುಎಸ್ ಮಿಲಿಟರಿ ಹೇಳಿದೆ. 155 ಕ್ಕೂ ಹೆಚ್ಚು ಹಡಗುಗಳು ಹಾನಿಗೊಳಗಾಗಿವೆ ಅಥವಾ ನಾಶವಾಗಿವೆ. ಯುದ್ಧ ಪ್ರಾರಂಭವಾದಾಗಿನಿಂದ, ಆಧುನಿಕ ಫೈಟರ್ ಜೆಟ್ಗಳು ಮತ್ತು ಬಾಂಬರ್ಗಳನ್ನು ಬಳಸಿಕೊಂಡು 13,000 ಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ಹಾರಿಸಲಾಗಿದೆ ಎಂದು ಮಿಲಿಟರಿ ಹೇಳುತ್ತದೆ.
ಮಧ್ಯಪ್ರಾಚ್ಯದಲ್ಲಿ ನಿರಂತರ ದಾಳಿಗಳ ಮಧ್ಯೆ, ಟ್ರಂಪ್ ಇಂದು ಯುದ್ಧದ ಕುರಿತು ತಮ್ಮ ಮೊದಲ ಪ್ರೈಮ್ಟೈಮ್ ಭಾಷಣ ಮಾಡಿದರು. ವಿಯೆಟ್ನಾಂ ಯುದ್ಧವು 18 ವರ್ಷಗಳ ಕಾಲ ನಡೆಯಿತು ಮತ್ತು ದೀರ್ಘ ಯುದ್ಧಗಳು ನಡೆದಿವೆ ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದರು. ಆಪರೇಷನ್ ಎಪಿನ್ ಫ್ಯೂರಿ ಮುಂದುವರೆಯುತ್ತದೆ ಎಂದರು.
ಇರಾನ್ನಲ್ಲಿ ಅಮೆರಿಕ ತನ್ನ ಎಲ್ಲಾ ಮಿಲಿಟರಿ ಉದ್ದೇಶಗಳನ್ನು ಸಾಧಿಸುವ ಹಂತಕ್ಕೆ ಹತ್ತಿರದಲ್ಲಿದೆ, ಸಾಧ್ಯವಾದಷ್ಟು ಬೇಗ ಕಾರ್ಯಾಚರಣೆ ಕೊನೆಗೊಳಿಸುವುದಾಗಿ ಭರವಸೆ ನೀಡಿದರು. ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯಲು ಬಿಡಬಾರದು. ವಾಷಿಂಗ್ಟನ್ ತನ್ನ ಗಲ್ಫ್ ಮಿತ್ರರಾಷ್ಟ್ರಗಳನ್ನು ರಕ್ಷಿಸುತ್ತದೆ ಎಂದು ಅವರು ಭರವಸೆ ನೀಡಿದರು.
ಬೆಂಗಳೂರು, ಏ.1: ಚೈತ್ರ ಪೌರ್ಣಮಿ ಹಿಂದೂ ಧರ್ಮದಲ್ಲಿ ಅತ್ಯಂತ ಮಹತ್ವದ ಪರ್ವ ದಿನಗಳಲ್ಲಿ ಒಂದಾಗಿದೆ. ಇದನ್ನು ದವನದ ಹುಣ್ಣಿಮೆ ಎಂದೂ ಕರೆಯಲಾಗುತ್ತದೆ. ವರ್ಷದ ಪ್ರಥಮ ಮಾಸವಾದ ಚೈತ್ರ ಮಾಸದಲ್ಲಿ ಬರುವ ಈ ಮೊದಲ ಪೂರ್ಣಿಮೆಗೆ ವಿಶೇಷ ಪ್ರಾಮುಖ್ಯತೆ ಇದೆ. ಈ ದಿನ ಭಗವಾನ್ ವಿಷ್ಣು ಮತ್ತು ಕರ್ಮಗಳ ಲೆಕ್ಕ ಇಡುವ ಚಿತ್ರಗುಪ್ತನನ್ನು ಪೂಜಿಸಲಾಗುತ್ತದೆ. ಪವಿತ್ರ ಸ್ನಾನ ಮಾಡಿ, ವಿಷ್ಣು ಸಹಸ್ರನಾಮ ಜಪಿಸುವುದು ಅಥವಾ “ಓಂ ನಮೋ ಭಗವತೇ ವಾಸುದೇವಾಯ” ಮಂತ್ರ ಪಠಿಸುವುದು ಶ್ರೇಷ್ಠ. ಅನ್ನದಾನ, ವಸ್ತ್ರದಾನ ಮಾಡುವುದರಿಂದ ಕರ್ಮಗಳ ಪ್ರಭಾವ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ. ಸಾಕ್ಷಾತ್ ಇಂದ್ರ ಮತ್ತು ಶಿವನು ಕೂಡ ಈ ಪೌರ್ಣಮಿಯ ಮಹತ್ವವನ್ನು ಸಾರಿದ್ದಾರೆ. ದೇವಾಲಯಗಳಿಗೆ ಭೇಟಿ ನೀಡುವುದು, ಹಿರಿಯರ ಆಶೀರ್ವಾದ ಪಡೆಯುವುದು, ದಾನ ಧರ್ಮಗಳನ್ನು ಮಾಡುವುದು ಈ ದಿನದ ಆಚರಣೆಯ ಪ್ರಮುಖ ಭಾಗವಾಗಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.
ಬೆಂಗಳೂರು, ಏಪ್ರಿಲ್ 2: ಬೆಂಗಳೂರು ನಗರದ ಐತಿಹಾಸಿಕ ಮತ್ತು ಸಾಂಪ್ರದಾಯಿಕ ಉತ್ಸವವಾದ ಬೆಂಗಳೂರು ಕರಗ ಭಕ್ತಿಭಾವ ಹಾಗೂ ವೈಭವದಿಂದ ಬುಧವಾರ ರಾತ್ರಿ ನೆರವೇರಿತು. ಕಣ್ಣು ಹಾಯಿಸಿದಷ್ಟು ಭಕ್ತಸಾಗರ ಕಂಡುಬಂದಿದ್ದು, ಎಲ್ಲೆಡೆ “ಗೋವಿಂದ ಗೋವಿಂದ” ಎಂಬ ನಾಮಸ್ಮರಣೆಯೊಂದಿಗೆ ಭಕ್ತರು ಹರ್ಷೋದ್ಘಾರ ಮಾಡಿದರು. ಮಲ್ಲಿಗೆ ಹೂಗಳಿಂದ ಅಲಂಕೃತಗೊಂಡ ದ್ರೌಪದಮ್ಮನ ಕರಗ ಭಕ್ತಿಯ ಕೇಂದ್ರಬಿಂದುವಾಗಿದ್ದು, ಖಡ್ಗ ಹಿಡಿದ ವೀರಕುಮಾರರ ಅಬ್ಬರ ಮಧ್ಯೆ ಕರಗ ಮೆರವಣಿಗೆ ರಾತ್ರಿಯಿಡೀ ಸಂಭ್ರಮ ಸಡಗರದಿಂದ ಸಾಗಿತು. ನಗರದ ವಿವಿಧ ಭಾಗಗಳಲ್ಲಿ ನಡೆದ ರಥಗಳ ಮೆರವಣಿಗೆಯ ವೈಭವವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು.
ಈ ಸಂದರ್ಭದಲ್ಲಿ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಗರುಡಾಚಾರ್, ಎನ್.ಎ. ಹ್ಯಾರಿಸ್ ಸೇರಿದಂತೆ ಹಲವರು ಕರಗದ ದರ್ಶನ ಪಡೆದು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಬೆಂಗಳೂರು, ಏ.2: ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಮಾರ್ಚ್ 2ರಂದು ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನವು ಪರಾಭವನಾ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಶುಕ್ಲ ಪಕ್ಷ, ಪೂರ್ಣಿಮಾ ತಿಥಿ, ಹಸ್ತ ನಕ್ಷತ್ರವನ್ನು ಒಳಗೊಂಡಿರುವ ವಿಶೇಷ ದಿನವಾಗಿದೆ. ಇದು ಚಿತ್ರ ಪೌರ್ಣಮಿ, ದವನದ ಹುಣ್ಣಿಮೆ ಹಾಗೂ ಯುಗಾದಿಯ ನಂತರದ ಮೊದಲ ಹುಣ್ಣಿಮೆಯಾಗಿರುವುದರಿಂದ ಪವಿತ್ರ ದಿನವಾಗಿದೆ. ಅಕ್ಕಮಹಾದೇವಿ ಜಯಂತಿ ಮತ್ತು ಕೆಲವು ಕಡೆ ಹನುಮ ಜಯಂತಿಯನ್ನೂ ಆಚರಿಸಲಾಗುತ್ತದೆ. ಕುಜ ಗ್ರಹವು ಕುಂಭ ರಾಶಿಯಿಂದ ಮೀನ ರಾಶಿಗೆ ಮಧ್ಯಾಹ್ನ 3:37ಕ್ಕೆ ಸಂಚಾರ ಮಾಡಲಿದೆ. ರವಿ ಮೀನ ರಾಶಿಯಲ್ಲಿದ್ದರೆ, ಚಂದ್ರ ಕನ್ಯಾ ರಾಶಿಯಲ್ಲಿ ಸಾಗುತ್ತಿದ್ದಾನೆ. ಈ ದಿನವು ದೇವತಾರಾಧನೆ, ಜಪ, ದಾನ-ಧರ್ಮಾದಿಗಳಿಗೆ ಅತ್ಯಂತ ಶುಭಕರವಾಗಿದೆ ಎಂದು ಗುರೂಜಿ ತಿಳಿಸಿದ್ದಾರೆ. ಪ್ರತಿಯೊಂದು ರಾಶಿಯವರಿಗೆ ಅವರ ಅದೃಷ್ಟ ಸಂಖ್ಯೆ, ಶುಭ ಬಣ್ಣ ಮತ್ತು ಜಪಿಸಬೇಕಾದ ಮಂತ್ರದೊಂದಿಗೆ ವೈಯಕ್ತಿಕ ಮಾರ್ಗದರ್ಶನ ನೀಡಲಾಗಿದೆ.
ಬೆಂಗಳೂರು, ಏಪ್ರಿಲ್ 2: ಕರ್ನಾಟಕ ಶೈಕ್ಷಣಿಕ ವಲಯದಲ್ಲಿ ಭಾರಿ ಸಂಚಲನ ಮೂಡಿಸಿರುವ ಎಸ್ಎಸ್ಎಲ್ಸಿ (SSLC) ತೃತೀಯ ಭಾಷಾ ಪರೀಕ್ಷೆಯಲ್ಲಿ ಅಂಕಗಳ ಬದಲಿಗೆ ಗ್ರೇಡ್ ನೀಡುವ ಸರ್ಕಾರದ ತೀರ್ಮಾನ ಈಗ ಕಾನೂನು ಹೋರಾಟಕ್ಕೆ ನಾಂದಿ ಹಾಡಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಈ ದಿಢೀರ್ ಘೋಷಣೆಯು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಕರಿ ನೆರಳು ಬೀರಲಿದೆ ಎಂದು ಆರೋಪಿಸಿ ಹೈಕೋರ್ಟ್ನಲ್ಲಿ (Karnataka High Court) ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ದಾಖಲಾಗಿದೆ. ಬೆಂಗಳೂರಿನ ನಿವಾಸಿಗಳಾದ ಎಚ್.ಎನ್. ಚಂದನಾ ಮತ್ತು ಎಸ್. ವೆಂಕಟೇಶ್ ಸಲ್ಲಿಸಿರುವ ಈ ಅರ್ಜಿಯಲ್ಲಿ, ಸರ್ಕಾರದ ನಡೆಯನ್ನು ‘ಅಸಂವಿಧಾನಿಕ’ ಎಂದು ಉಲ್ಲೇಖಿಸಲಾಗಿದೆ.
ಮುಖ್ಯವಾಗಿ, ಯಾವುದೇ ಒಂದು ದೊಡ್ಡ ಶೈಕ್ಷಣಿಕ ಬದಲಾವಣೆ ಮಾಡುವ ಮುನ್ನ ಸಾರ್ವಜನಿಕರ ಅಥವಾ ಶಿಕ್ಷಣ ತಜ್ಞರ ಅಭಿಪ್ರಾಯ ಪಡೆಯುವುದು ಅತ್ಯಗತ್ಯ. ಆದರೆ, ಈ ವಿಷಯದಲ್ಲಿ ಸರ್ಕಾರ ಅಂತಹ ಯಾವುದೇ ಪ್ರಕ್ರಿಯೆ ನಡೆಸದೆ, ಸಚಿವ ಸಂಪುಟದ ಒಪ್ಪಿಗೆಯನ್ನೂ ಪಡೆಯದೆ ಏಕಪಕ್ಷೀಯವಾಗಿ ತೀರ್ಮಾನಿಸಿದೆ ಎಂಬುದು ಅರ್ಜಿದಾರರ ಪ್ರಬಲ ವಾದ.
ಅರ್ಜಿಯಲ್ಲಿನ ಪ್ರಮುಖ ಅಂಶಗಳು
ವಿದ್ಯಾರ್ಥಿಗಳ ಗೊಂದಲ: ಪರೀಕ್ಷೆಗಳು ನಡೆಯುತ್ತಿರುವಾಗಲೇ ಇಂತಹ ಹೇಳಿಕೆ ನೀಡಿರುವುದು ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ಅತಂತ್ರ ಸ್ಥಿತಿ ನಿರ್ಮಿಸಿದೆ.
ಸಮಾನತೆಯ ಹಕ್ಕಿನ ಉಲ್ಲಂಘನೆ: ಸಂವಿಧಾನದ 14 ಮತ್ತು 21ನೇ ವಿಧಿಯಡಿ ನೀಡಲಾದ ಸಮಾನತೆ ಮತ್ತು ಶಿಕ್ಷಣದ ಹಕ್ಕಿಗೆ ಇದು ಚ್ಯುತಿ ತರುತ್ತದೆ.
ಅಧಿಕೃತ ಆದೇಶದ ಕೊರತೆ: ಸಚಿವರು ಕೇವಲ ಮೌಖಿಕವಾಗಿ ಹೇಳಿಕೆ ನೀಡಿದ್ದಾರೆಯೇ ಹೊರತು, ಈವರೆಗೆ ಯಾವುದೇ ಅಧಿಕೃತ ಗೆಜೆಟ್ ಅಧಿಸೂಚನೆ ಹೊರಬಂದಿಲ್ಲ. ಆದರೂ ಇದನ್ನು ಜಾರಿಗೆ ತರಲು ಹೊರಟಿರುವುದು ಕಾನೂನುಬಾಹಿರ.
ಸರ್ಕಾರದ ಹೊಸ ನಿಯಮ ಏನು?
ತೃತೀಯ ಭಾಷೆಯ (ಹಿಂದಿ/ಇತರ) ಅಂಕಗಳನ್ನು ಒಟ್ಟು ಫಲಿತಾಂಶಕ್ಕೆ ಪರಿಗಣಿಸುವುದಿಲ್ಲ.
ಒಟ್ಟು 625 ಅಂಕಗಳ ಬದಲಿಗೆ ಕೇವಲ 525 ಅಂಕಗಳ ಆಧಾರದ ಮೇಲೆ ಶೇಕಡಾವಾರು ಲೆಕ್ಕ ಹಾಕಲಾಗುತ್ತದೆ.
ತೃತೀಯ ಭಾಷೆಯಲ್ಲಿ ಕೇವಲ ಎ, ಬಿ, ಸಿ, ಡಿ ಗ್ರೇಡ್ಗಳನ್ನು ಮಾತ್ರ ನೀಡಲಾಗುತ್ತದೆ.
ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾದ ‘ಹಿಂದಿ’ ಭಾಷೆ
ಈಗಾಗಲೇ ಈ ವಿಷಯವು ರಾಜಕೀಯ ಬಣ್ಣ ಪಡೆದುಕೊಂಡಿದೆ. ರಾಜ್ಯ ಸರ್ಕಾರವು ‘ಹಿಂದಿ ಹೇರಿಕೆ’ ತಡೆಯುವ ನೆಪದಲ್ಲಿ ತ್ರಿಭಾಷಾ ಸೂತ್ರಕ್ಕೆ ಎಳ್ಳುನೀರು ಬಿಟ್ಟು, ಪರೋಕ್ಷವಾಗಿ ದ್ವಿಭಾಷಾ ನೀತಿಯನ್ನು ಜಾರಿಗೊಳಿಸುತ್ತಿದೆ ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ. ಹಿಂದಿ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರ ದೇಶದ್ರೋಹದ ಕೆಲಸ ಮಾಡುತ್ತಿದೆ ಎಂದು ಮಾಜಿ ಸಚಿವ ಅಶ್ವತ್ಥ್ ನಾರಾಯಣ ಆಕ್ರೋಶ ವ್ಯಕ್ತಪಡಿಸಿದ್ದರು.
ಮತ್ತೊಂದೆಡೆ, SSLC 3ನೇ ಭಾಷೆಯ ಅಂಕಗಳನ್ನು ರದ್ದುಗೊಳಿಸಿರುವ ನಿರ್ಧಾರದಿಂದ, ಉರ್ದು ಹಾಗೂ ಸಂಸ್ಕೃತವನ್ನು ಪ್ರಥಮ ಭಾಷೆಯಾಗಿ ಓದುವವರಿಗೆ 3ನೇ ಭಾಷೆಯಾದ ‘ಕನ್ನಡ’ಕ್ಕೆ ಮಹತ್ವ ಇಲ್ಲದಂತಾಗುವುದಿಲ್ಲವೇ ಎಂಬ ಪ್ರಶ್ನೆಯೂ ಉದ್ಭವಿಸಿತ್ತು. ಕನ್ನಡ ಉಳಿಸಲು, ಹಿಂದಿ ಹೇರಿಕೆ ತಡೆಯಲು ಹೊಸ ನಿಯಮ ಜಾರಿಗೆ ತರಲಾಗಿದೆ ಎಂದು ಸರ್ಕಾರ ಹೇಳುತ್ತಿದ್ದ. ಆದರೆ, ಇಲ್ಲಿ ಕನ್ನಡ 3ನೇ ಭಾಷೆ ಇದ್ದವರ ವಿಚಾರದಲ್ಲಿ ಕನ್ನಡಕ್ಕೆ ಅನ್ಯಾಯವಾದಂತಲ್ಲವೇ ಎಂಬ ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಈ ವಿವಾದಾತ್ಮಕ ನಿರ್ಧಾರಕ್ಕೆ ಹೈಕೋರ್ಟ್ ತಡೆ ನೀಡಲಿದೆಯೇ ಅಥವಾ ಸರ್ಕಾರದ ಈ ಹೊಸ ಶೈಕ್ಷಣಿಕ ಪ್ರಯೋಗ ಮುಂದುವರಿಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಶೀಘ್ರದಲ್ಲೇ ಈ ಅರ್ಜಿಯ ವಿಚಾರಣೆ ನಡೆಯುವ ಸಾಧ್ಯತೆಯಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ