ಕೊನೆಗೂ ದಿಲ್ಲಿಯಲ್ಲಿ ಮೌನ ಮುರಿದ ಡಿಕೆ ಶಿವಕುಮಾರ್, ಪ್ರಮಾಣವಚನದ ಬಗ್ಗೆ ಹೇಳಿದ್ದಿಷ್ಟು

ನವದೆಹಲಿ, (ಮೇ 29): ಕಳೆದ ಎರಡ್ಮೂರು ದಿನಗಳಿಂದ ಮೌನಕ್ಕೆ ಶರಣಾಗಿದ್ದ ಡಿಕೆ ಶಿವಕುಮಾರ್ (DK Shivakumar) ಕೊನೆಗೂ ತುಟಿ ಬಿಚ್ಚಿ ಮಾತನಾಡಿದ್ದಾರೆ. ಸಿದ್ದರಾಮಯ್ಯ (Siddaramaiah) ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದ ಬೆನ್ನಲ್ಲೇ ಡಿಕೆ ಶಿವಕುಮಾರ್ ಸಹ ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಹೊಸ ಸಚಿವ ಸಂಪುಟದ ಬಗ್ಗೆ ಚರ್ಚೆ ನಡೆಸಿದ್ದಾರೆ. ಇನ್ನು ಇದೇ ವೇಳೆ ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್, ನಾಳೆ (ಮೇ 30) ಸಿಎಲ್ ಪಿ ಸಭೆ (ಕಾಂಗ್ರೆಸ್ ಶಾಸಕಾಂಗ ಸಭೆ) ಕರೆದಿದ್ದು, ಹೈಕಮಾಂಡ್ ನಾಯಕರು ವೀಕ್ಷಕರಾಗಿ ಬರಲಿದ್ದಾರೆ. ಹೀಗಾಗಿ ಯಾವುದೇ ಶಾಸಕರು ದೆಹಲಿಗೆ ಬರಬೇಡಿ ಎಂದು ಹೇಳಿದ್ದೇವೆ. ಕೆಲ ವಿಚಾರಗಳನ್ನ ಸಿದ್ದರಾಮಯ್ಯನವರ ನಾವು ಚರ್ಚೆ ಮಾಡಿದ್ದೇವೆ. ಸಿಎಲ್ ಪಿ ಬಳಿಕ ಪ್ರಮಾಣ ವಚನಕ್ಕೆ ದಿನ ನಿಗಧಿಯಾಗಲಿದೆ ಎಂದು ಸ್ಪಷ್ಟಪಡಿಸಿದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹಳದಿ ಶಾಸ್ತ್ರದ ವೇಳೆ ಅವಘಡ, ಯುವತಿ ದೇಹ ಸುಟ್ಟಿದ್ದರೂ ಆಕೆಯನ್ನೇ ಮದುವೆಯಾದ ವರ

ಕಾನ್ಪುರ, ಮೇ 29: ಹಳದಿ ಶಾಸ್ತ್ರದ ವೇಳೆ ಸಂಭವಿಸಿದ ಸ್ಫೋಟದಲ್ಲಿ ಯುವತಿ ದೇಹ ಸುಟ್ಟು ಹೋಗಿದ್ದರೂ, ವರ ಆಕೆಯೇ ಬೇಕೆಂದು ಹಠ ತೊಟ್ಟು ಮದುವೆಯಾಗಿರುವ ಘಟನೆ ಕಾನ್ಪುರದಲ್ಲಿ ನಡೆದಿದೆ. ಮದುವೆಯ ಮುನ್ನಾದಿನದ ಹಳದಿ (Haldi) ಶಾಸ್ತ್ರದ ಸಂಭ್ರಮದಲ್ಲಿದ್ದಾಗ, ದಿಢೀರನೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ವಧು ಸೇರಿದಂತೆ ಹಲವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ದೇಹ ಸುಟ್ಟುಹೋಗಿದ್ದರಿಂದ ವಧುವಿನ ಕುಟುಂಬಸ್ಥರು ಮದುವೆ ಮುರಿದುಬೀಳಬಹುದು ಎಂಬ ಆತಂಕದಲ್ಲಿದ್ದರು.
ಆದರೆ, ಕಷ್ಟದ ಸಮಯದಲ್ಲಿ ಕೈಬಿಡದ ವರ, ರೂಪಕ್ಕಿಂತ ಗುಣವೇ ಮುಖ್ಯ ಎಂದು ಆಸ್ಪತ್ರೆಯಲ್ಲೇ ಆಕೆಯ ಕೈ ಹಿಡಿದು ಮದುವೆಯಾಗಿದ್ದಾನೆ. ವರನ ನಿರ್ಧಾರ ಮತ್ತು ಧೈರ್ಯಕ್ಕೆ ದೇಶಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಈ ದಂಪತಿ ನಿಜವಾದ ಪ್ರೀತಿಗೆ ಅತ್ಯಮೂಲ್ಯ ಉದಾಹರಣೆಯಾಗಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಉಪ ರಾಷ್ಟ್ರಪತಿಗಳಿಂದ ಶ್ರೀ ರವಿಶಂಕರ್​​ ಗುರೂಜಿ ಗುಣಗಾನ: ವಿಶೇಷ ಅಂಚೆ ಚೀಟಿ ಬಿಡುಗಡೆ

ಆರ್ಟ್​​ ಆಫ್​​ ಲಿವಿಂಗ್​​ ಕಾರ್ಯಕ್ರಮದಲ್ಲಿ ಭಾಗಿಯಾದ ಉಪ ರಾಷ್ಟ್ರಪತಿಗಳು

ಬೆಂಗಳೂರು,ಮೇ 29 : ದಿ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಯುವ ಅಭಿವೃದ್ಧಿ, ಉದ್ಯಮಶೀಲತೆ, ಸುಸ್ಥಿರತೆ, ಪ್ರಜ್ಞೆಯ ಅಧ್ಯಯನಗಳು ಮತ್ತು ಶಿಕ್ಷಣವನ್ನು ಒಳಗೊಂಡ ಐದು ಪ್ರಮುಖ ಉಪಕ್ರಮಗಳಿಗೆ ಭಾರತದ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಚಾಲನೆ ನೀಡಿದ್ದಾರೆ. ದಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45 ವರ್ಷಗಳ ಮಾನವೀಯ ಸೇವೆ ಮತ್ತು ಈ ತಿಂಗಳು 70 ವರ್ಷಕ್ಕೆ ಕಾಲಿಟ್ಟ ಶ್ರೀ ರವಿ ಶಂಕರ್ ಗುರೂಜಿ ಅವರ ಜೀವನಪರ್ಯಂತ ಶಾಂತಿ, ಯೋಗಕ್ಷೇಮ ಮತ್ತು ಮಾನವೀಯ ಮೌಲ್ಯಗಳಿಗೆ ನೀಡಿದ ಕೊಡುಗೆಯನ್ನು ಸ್ಮರಿಸುವ ಕಾರ್ಯಕ್ರಮ ಇದಾಗಿದೆ.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ , ಇಂದು ನಡೆಯುತ್ತಿರುವುದು ಒಂದು ಶ್ರೇಷ್ಠ ದೃಷ್ಟಿಯ ಆಚರಣೆಯಾಗಿದ್ದು, ಇದು ಖಂಡಗಳಾದ್ಯಂತ ಲಕ್ಷಾಂತರ ಜನರ ಜೀವನವನ್ನು ಸ್ಪರ್ಶಿಸಿದೆ. ದಿ ಆರ್ಟ್ ಆಫ್ ಲಿವಿಂಗ್ 182 ದೇಶಗಳಲ್ಲಿ ಇರುವುದು ನನಗೆ ಆಶ್ಚರ್ಯವನ್ನುಂಟು ಮಾಡಿದೆ. ಮಾನವ ವರ್ಗದ ಬಹುತೇಕ ನಾಗರಿಕತೆಯು ಈ ಆಂದೋಲನದ ಮೂಲಕ ಸಂಪರ್ಕಗೊಳ್ಳುತ್ತಿದೆ ಎಂದಿದ್ದಾರೆ. ಸಂಘರ್ಷ ಮತ್ತು ಅನಿಶ್ಚಿತತೆಯಿಂದ ಗುರುತಿಸಲ್ಪಟ್ಟ ಜಗತ್ತಿನಲ್ಲಿ, ಶ್ರೀ ರವಿ ಶಂಕರ್ ಗುರೂಜಿ ಅವರು ವಿವೇಕ, ಅರಿವು, ಶಾಂತಿ ಮತ್ತು ಸೌಹಾರ್ದತೆಯ ಮೌಲ್ಯಗಳೊಂದಿಗೆ ಮಾನವೀಯತೆಯನ್ನು ಪ್ರೇರೇಪಿಸುವುದನ್ನು ಮುಂದುವರೆಸಿರೋದಾಗಿ ಶ್ಲಾಘಿಸಿದ್ದಾರೆ. ರವಿಶಂಕರ್​​ ಗುರೂಜಿ ಅವರ ಸರಳತೆ ಮತ್ತು ಪ್ರಭಾವವನ್ನು ಶ್ಲಾಘಿಸಿದ ರಾಧಾಕೃಷ್ಣನ್, ಅವರ ನಗು, ವಿನಮ್ರತೆ ಮತ್ತು ಪ್ರೀತಿ ಪ್ರತಿಯೊಬ್ಬರ ಹೃದಯವನ್ನೂ ಸ್ಪರ್ಶಿಸುತ್ತದೆ. ಅವರ ಕೊಡುಗೆಯನ್ನು ಅಸಾಧಾರಣವಾಗಿಸುವುದು ಅವರು ಸಾಕಾರವಾಗಿಸಿರುವ ವಿನಯ ಮತ್ತು ಮಾನವೀಯತೆ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಧ್ಯಾನ ಮೂಲಭೂತ ಅವಶ್ಯಕತೆ’

ಉಪ ರಾಷ್ಟ್ರಪತಿಗಳನ್ನು ಸ್ವಾಗತಿಸಿ ಮಾತನಾಡಿದ ಶ್ರೀ ರವಿಶಂಕರ್​​ ಗುರೂಜಿ, ಧ್ಯಾನವು ಈಗ ಕೇವಲ ಐಷಾರಾಮವಾಗಿ ಉಳಿದಿಲ್ಲ ಎಂಬುದನ್ನು ಇಂದು ಪ್ರಪಂಚ ಗುರುತಿಸಿದೆ. ವಿಶ್ವ ಧ್ಯಾನ ದಿನವನ್ನು ಘೋಷಿಸಲು 192 ದೇಶಗಳು ಒಗ್ಗೂಡಿರುವುದರಿಂದ, ಧ್ಯಾನವು ಆರೋಗ್ಯಕರ, ಸಂತೋಷದ ಮತ್ತು ಒತ್ತಡ-ಮುಕ್ತ ಜೀವನಕ್ಕೆ ಒಂದು ಮೂಲಭೂತ ಅವಶ್ಯಕತೆ ಎಂಬ ತಿಳುವಳಿಕೆ ಹೆಚ್ಚುತ್ತಿದೆ ಎಂದಿದ್ದಾರೆ. ಜೊತೆಗೆ ಜ್ಞಾನ, ಧ್ಯಾನ ಮತ್ತು ಸಂಗೀತ ಎಂಬ ಮೂರು ವಿಷಯಗಳು ಯಾವಾಗಲೂ ನಮ್ಮೊಂದಿಗೆ ಜೀವನದುದ್ದಕ್ಕೂ ಇರಬೇಕು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಆರ್ಟ್ ಆಫ್ ಲಿವಿಂಗ್​ನ ಪರಿಶ್ರಮದಿಂದ ಮಹಿಮಾಪುರ ಗುಡ್ಡ ಈಗ ಹಸಿರುಮಯ

ಸಭೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಈ ಜಾಗತಿಕ ಆಂದೋಲನದ ಬೇರುಗಳು ನಮ್ಮ ಪುಣ್ಯಭೂಮಿಗೆ ಸಂಪರ್ಕಗೊಂಡಿರುವುದು ಕರ್ನಾಟಕಕ್ಕೆ ಹೆಮ್ಮೆಯ ವಿಷಯವಾಗಿದೆ. ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲ, ದಿ ಆರ್ಟ್ ಆಫ್ ಲಿವಿಂಗ್ ವಿವಿಧ ಕಾರ್ಯಕ್ರಮಗಳ ಮೂಲಕ ವೈಯಕ್ತಿಕ, ಸಮುದಾಯ ಮತ್ತು ಜಾಗತಿಕ ಮಟ್ಟದಲ್ಲಿ ಶಾಂತಿ ಮತ್ತು ಯೋಗಕ್ಷೇಮವನ್ನು ಉತ್ತೇಜಿಸುತ್ತಿದೆ. ಮಾನವೀಯ ಸೇವೆಗೆ ಮೀರಿ, ಶ್ರೀ ರವಿಶಂಕರ ಗುರೂಜಿ ಅವರ ಶಾಂತಿ ನಿರ್ಮಾಣದ ಪ್ರಯತ್ನಗಳು ದೀರ್ಘಕಾಲದ ಸಂಘರ್ಷಗಳನ್ನು ಪರಿಹರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿವೆ. ಮಾನವೀಯ ಮೌಲ್ಯಗಳ ಪುನರುಜ್ಜೀವನದ ಮೂಲಕ ಹಿಂಸಾಚಾರ ಮುಕ್ತ ಮತ್ತು ಒತ್ತಡ ಮುಕ್ತ ಸಮಾಜದ ಅವರ ದೃಷ್ಟಿಯು ಪ್ರಪಂಚದಾದ್ಯಂತ ಮೆಚ್ಚುಗೆ ಮತ್ತು ಮನ್ನಣೆಯನ್ನು ಪಡೆದಿದೆ ಎಂದಿದ್ದಾರೆ.

ಅಂಚೆ ಚೀಟಿ ಅನಾವರಣ

ದಿ ಆರ್ಟ್ ಆಫ್ ಲಿವಿಂಗ್‌ ವೈಯಕ್ತಿಕ ಯೋಗಕ್ಷೇಮ, ಸಾಮಾಜಿಕ ಪರಿವರ್ತನೆ ಮತ್ತು ಜಾಗತಿಕ ಶಾಂತಿಗೆ ನೀಡಿದ 45 ವರ್ಷಗಳ ಕೊಡುಗೆಯನ್ನು ಗುರುತಿಸುವ ಸ್ಮರಣಾರ್ಥ ಅಂಚೆ ಚೀಟಿಯನ್ನೂ ಇದೇ ವೇಳೆ ಉಪ ರಾಷ್ಟ್ರಪತಿಗಳು ಗಣ್ಯರೊಂದಿಗೆ ಅನಾವರಣಗೊಳಿಸಿದ್ದಾರೆ.

ವಿದ್ಯಾರ್ಥಿಗಳ ಜೊತೆ ಸಂವಾದ

ಆಶ್ರಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಉಪ ರಾಷ್ಟ್ರಪತಿಗಳು ಸಂಸ್ಥೆಯ ವಿವಿಧ ಸೌಲಭ್ಯಗಳನ್ನು ವೀಕ್ಷಿಸಿದ್ದಾರೆ. ಗುರುಕುಲಕ್ಕೆ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಸಂವಾದವನ್ನೂ ನಡೆಸಿದ್ದಾರೆ. ಶ್ರೀ ಪ್ರತಾಪ ಗಣಪತಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಅವರು, ಶ್ರೀ ಸೋಮನಾಥ ಜ್ಯೋತಿರ್ಲಿಂಗದ ಪವಿತ್ರ ಅಂಶಗಳ ದರ್ಶನ ಪಡೆಯುವ ಜೊತೆಗೆ ಸುಮಾರು 1,600 ಸ್ಥಳೀಯ ಹಸುಗಳಿರುವ ಗೋಶಾಲೆಗೆ ಭೇಟಿ ನೀಡಿದ್ದಾರೆ.

ಚಾಲನೆ ನೀಡಲಾದ ಉಪಕ್ರಮಗಳಲ್ಲಿ ಯುವ ವೃತ್ತಿ ಶ್ರೇಷ್ಠತಾ ಕಾರ್ಯಕ್ರಮ (Youth Career Excellence Program), ಪೂರ್ವ ಜ್ಞಾನ ವ್ಯವಸ್ಥೆಗಳ ಅಧ್ಯಾಪಕರು (Faculty of Eastern Knowledge Systems), ಆರ್ಟ್ ಆಫ್ ಲಿವಿಂಗ್ ಇನ್ನೋವೇಶನ್ ಮತ್ತು ಉದ್ಯಮಶೀಲತಾ ಇನ್‌ಕ್ಯುಬೇಶನ್ (Art of Living Innovation and Entrepreneurship Incubation), ಪ್ರಜ್ಞೆಯ ಅಧ್ಯಯನಗಳು ಮತ್ತು ಮಾನವ ಸಾಮರ್ಥ್ಯದ ಉತ್ಕೃಷ್ಟತಾ ಕೇಂದ್ರ (Centre of Excellence on Consciousness Studies and Human Potential), ಮತ್ತು ಇಕೋ ಶಾಂತಿ (Eco Shanti) ಸೇರಿವೆ.

ಈ ಸಮಾರಂಭದೊಂದಿಗೆ ದಿ ಆರ್ಟ್ ಆಫ್ ಲಿವಿಂಗ್ ಅಂತರಾಷ್ಟ್ರೀಯ ಕೇಂದ್ರದಲ್ಲಿ ಒಂದು ತಿಂಗಳ ಕಾಲ ನಡೆದ ಆಚರಣೆಯು ಮುಕ್ತಾಯಗೊಂಡಿದೆ. ಭಾರತ ಮತ್ತು ಪ್ರಪಂಚದಾದ್ಯಂತದ ರಾಜಕೀಯ ವಲಯದ ರಾಷ್ಟ್ರೀಯ ನಾಯಕರು, ವ್ಯಾಪಾರ ದಿಗ್ಗಜರು, ಕ್ರೀಡಾಪಟುಗಳು, ಉದ್ಯಮಿಗಳು, ಶಿಕ್ಷಣ ತಜ್ಞರು, ಧರ್ಮ ಗುರುಗಳು, ರಾಜತಾಂತ್ರಿಕರು, ಕಲಾವಿದರು ಮತ್ತು ಸಾಮಾಜಿಕ ಪರಿವರ್ತನಾಕಾರರು ಸೇರಿದಂತೆ 678 ಗಣ್ಯ ಅತಿಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ವಿಶೇಷ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:29 pm, Fri, 29 May 26

Source link

ಸಿದ್ದರಾಮಯ್ಯ ಆಪ್ತರೇ ಸಹಿ ಸಂಗ್ರಹಿಸಿ ಬೆನ್ನಿಗೆ ಚೂರಿ ಹಾಕಿದ್ರಾ? ಜಾರಕಿಹೊಳಿ ಏನಂದ್ರು ನೋಡಿ

ಬೆಂಗಳೂರು, ಮೇ 29: ಸಿದ್ದರಾಮಯ್ಯ ಬೆನ್ನಿಗೆ ಅವರ ಆಪ್ತರು ಚೂರಿ ಹಾಕಿದ ಆರೋಪಗಳಿಗೆ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಹೈಕಮಾಂಡ್‌ನ ಪೂರ್ವ ನಿರ್ಧರಿತ ಒಪ್ಪಂದದಂತೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ. ಇದು ಯಾವುದೇ ರೀತಿಯ ಆಂತರಿಕ ರಾಜಕೀಯ ಸಂಘರ್ಷದ ಪ್ರಶ್ನೆಯೇ ಅಲ್ಲ ಎಂದು ಜಾರಕಿಹೊಳಿ ದೃಢಪಡಿಸಿದ್ದಾರೆ. ಸಿದ್ದರಾಮಯ್ಯನವರ ವಿರುದ್ಧ ಸಹಿ ಸಂಗ್ರಹ ಅಭಿಯಾನ ನಡೆದಿರುವ ವರದಿಗಳನ್ನು, ಆರೋಪಗಳನ್ನು ಸುಳ್ಳು ಎಂದು ಜಾರಕಿಹೊಳಿ ತಳ್ಳಿಹಾಕಿದರು. ಅಂತಹ ಯಾವುದೇ ಸಹಿ ಹೈಕಮಾಂಡ್‌ಗೆ ತಲುಪಿಲ್ಲ ಅಥವಾ ಅದರ ಬಗ್ಗೆ ಚರ್ಚೆಯೂ ನಡೆದಿಲ್ಲ ಎಂದರು. ಇದು ಯಾರೋ ವಾಟ್ಸ್‌ಆ್ಯಪ್ ಅಥವಾ ಟ್ವೀಟರ್‌ನಲ್ಲಿ ಹರಿಬಿಟ್ಟ ಸುಳ್ಳು ಸುದ್ದಿ ಎಂದು ಅವರು ಹೇಳಿದರು.

ಸಿದ್ದರಾಮಯ್ಯ ಅನುಪಸ್ಥಿತಿ ಕಾಂಗ್ರೆಸ್‌ಗೆ ಕಾಡುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅವರು ರಾಜ್ಯ ರಾಜಕಾರಣದಲ್ಲಿಯೇ ಇರಲಿದ್ದಾರೆ ಎಂದರು. 2028ರಲ್ಲಿ ಪಕ್ಷವನ್ನು ಗೆಲ್ಲಿಸಲು ಕೆಲಸ ಮಾಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಹೊಸ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟ ರಚನೆಯಾದ ನಂತರ ಅವರ ಅನುಭವವನ್ನು ಪಕ್ಷವು ಸೂಕ್ತ ಸಮಯದಲ್ಲಿ ಬಳಸಿಕೊಳ್ಳಲಿದೆ ಎಂದು ಜಾರಕಿಹೊಳಿ ಸ್ಪಷ್ಟಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೂರ್ಯ ನಟನೆಯ ಹಿಟ್ ಸಿನಿಮಾಕ್ಕೆ ‘ಕಾಂತಾರ’, ‘ಸಪ್ತ ಸಾಗರದಾಚೆ’ ಸ್ಪೂರ್ತಿ

ಸೂರ್ಯ (Suriya) ಹಾಗೂ ತ್ರಿಷಾ (Trisha Krishnan) ನಟಿಸಿ ಆರ್​​ಜೆ ಬಾಲಾಜಿ ನಿರ್ದೇಶನ ಮಾಡಿರುವ ‘ಕರುಪ್ಪು’ ಸಿನಿಮಾ ಕೆಲ ವಾರಗಳ ಹಿಂದಷ್ಟೆ ಬಿಡುಗಡೆ ಆಗಿದ್ದು, ದೊಡ್ಡ ಹಿಟ್ ಆಗಿದೆ. ಸತತ ಸೋಲು ಕಾಣುತ್ತಿದ್ದ ಸೂರ್ಯಗೆ ಮತ್ತೆ ಮರು ಜೀವ ನೀಡಿದೆ ಈ ಸಿನಿಮಾ. ಬಾಕ್ಸ್ ಆಫೀಸ್​​ನಲ್ಲಿ ಈಗಾಗಲೇ 200 ಕೋಟಿಗೂ ಹೆಚ್ಚು ಮೊತ್ತ ಗಳಿಸಿದ್ದು, ಭರ್ಜರಿ ಗಳಿಕೆಯನ್ನು ಮುಂದುವರೆಸಿದೆ. ಭಿನ್ನ ಕತೆಯುಳ್ಳ ಈ ಸಿನಿಮಾಕ್ಕೆ ಕನ್ನಡದ ಎರಡು ಸೂಪರ್ ಹಿಟ್ ಸಿನಿಮಾಗಳು ಸ್ಪೂರ್ತಿಯಂತೆ. ಈ ಬಗ್ಗೆ ಖುದ್ದು ಸಿನಿಮಾದ ನಿರ್ದೇಶಕ ಬಾಲಾಜಿ ಹೇಳಿಕೊಂಡಿದ್ದಾರೆ.

ಹಾಲಿವುಡ್ ರಿಪೋರ್ಟರ್ ಯೂಟ್ಯೂಬ್ ಚಾನೆಲ್​​ಗೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಬಾಲಾಜಿ, ‘ನಾನು ಮೊದಲು ಸಿನಿಮಾಕ್ಕೆ ಒಂದು ಕ್ಲೈಮ್ಯಾಕ್ಸ್ ಬರೆದಿದ್ದೆ ಆದರೆ ಆ ಕ್ಲೈಮ್ಯಾಕ್ಸ್ ನನಗೆ ಇಷ್ಟವಾಗಿರಲಿಲ್ಲ. ನನಗೆ ಏನು ಮಾಡುವುದು ಎಂದು ತೋಚದೆ ಸುಮ್ಮನಾಗಿದ್ದೆ. ಆಗ ಒಮ್ಮೆ ನನ್ನ ಗೆಳೆಯ ಅಮೆರಿಕದಿಂದ ಬಂದ, ನಾನೂ ಹಾಗೂ ಅವನು ಚೆನ್ನೈನ ಮಲ್ಟಿಪ್ಲೆಕ್ಸ್​ ಒಂದರಲ್ಲಿ ಸಿನಿಮಾ ನೋಡಲು ಹೋದೆವು. ಅದು ‘ಕಾಂತಾರ ಚಾಪ್ಟರ್ 1’ ಆಗಿತ್ತು. ಆ ಸಿನಿಮಾ ನೋಡುವಾಗ ಕ್ಲೈಮ್ಯಾಕ್ಸ್ ವೇಳೆ ಸಿನಿಮಾ ನೋಡುತ್ತಿದ್ದ ಪ್ರೇಕ್ಷಕರು ಮಂತ್ರಮುಗ್ಧರಾದಂತೆ ನನಗೆ ಭಾಸಾಯ್ತು. ಅದೂ ಮಲ್ಟಿಪ್ಲೆಕ್ಸ್​​ನಲ್ಲಿ’ ಎಂದು ಅವರು ವಿವರಿಸಿದ್ದಾರೆ.

‘ಆಗ ನನಗೆ ಆ ಐಡಿಯಾ ಅನ್ನು ‘ಕರುಪ್ಪು’ ಸಿನಿಮಾಕ್ಕೆ ಬಳಸಬೇಕು ಎನಿಸಿತು. ಏಕೆಂದರೆ ನಾನು ಕರುಪ್ಪು ಸ್ವಾಮಿಯ ಬಗ್ಗೆ ಸಿನಿಮಾ ಮಾಡುತ್ತಿದ್ದೇನೆ. ಆ ಸ್ವಾಮಿಯ ಅಗಾಧತೆ ತೋರಿಸಬೇಕು ಎಂದರೆ ಅದು ಗ್ರ್ಯಾಂಡ್ ಇರಬೇಕು ಎನಿಸಿತು. ಹಾಗಾಗಿ ನಾನು ‘ಕಾಂತಾರ’ದ ದೃಶ್ಯವನ್ನು ಸ್ಪೂರ್ತಿಯಾಗಿಟ್ಟುಕೊಂಡು ‘ಕರುಪ್ಪು’ ಸಿನಿಮಾದ ಕ್ಲೈಮ್ಯಾಕ್ಸ್ ಡಿಸೈನ್ ಮಾಡಿದೆ’ ಎಂದಿದ್ದಾರೆ ಬಾಲಾಜಿ.

ಇದನ್ನೂ ಓದಿ:ಇಳಯರಾಜಾ ಬಗ್ಗೆ ವ್ಯಂಗ್ಯ: ಕ್ಷಮೆಯಾಚಿಸಿದ ‘ಕರುಪ್ಪು’ ಚಿತ್ರತಂಡ

‘ಹಾಗೆಯೇ ನಾನು ಸಿನಿಮಾದ ಒಂದು ಬಿಟ್ ಅನ್ನು ಕನ್ನಡದ ‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದಿಂದ ತೆಗೆದುಕೊಂಡೆ. ನಾನು ನಿರ್ದೇಶಕ ಹೇಮಂತ್ ರಾವ್ ಅವರಿಗೆ ಕರೆ ಮಾಡಿ ತಾವು ಹೀಗೆ ಸಿನಿಮಾದಿಂದ ಒಂದು ಐಡಿಯಾವನ್ನು ತೆಗೆದುಕೊಂಡು ಬಳಸಿಕೊಳ್ಳುತ್ತಿರುವುದಾಗಿ ಹೇಳಿದೆ. ಅದಕ್ಕೆ ಅವರು ಬಹಳ ಖುಷಿಯಿಂದ ಒಪ್ಪಿಗೆ ನೀಡಿದರು’ ಎಂದು ಬಾಲಾಜಿ ಹೇಳಿದ್ದಾರೆ.

ತಾವು ಜಿಮ್ ಕ್ಯಾರಿಯ ಹಾಲಿವುಡ್ ಸಿನಿಮಾದ ಒಂದು ಸೀನ್​ ಇಂದಲೂ ಸ್ಪೂರ್ತಿ ಪಡೆದು ಒಂದು ದೃಶ್ಯವನ್ನು ಸ್ಪೂರ್ತಿಯಾಗಿ ತೆಗೆದುಕೊಂಡಿರುವುದಾಗಿಯೂ ಬಾಲಾಜಿ ಹೇಳಿದ್ದಾರೆ. ಹೇಮಂತ್ ರಾವ್ ಮತ್ತು ರಿಷಬ್ ಅವರನ್ನು ಕೇಳಿ ಅನುಮತಿ ಪಡೆಯುವ ಅವಕಾಶ ಇತ್ತು ಹಾಗಾಗಿ ನಾನು ಪಡೆದುಕೊಂಡೆ ಎಂದು ಸಹ ಬಾಲಾಜಿ ಹೇಳಿದ್ದಾರೆ. ‘ಕರುಪ್ಪು’ ಸಿನಿಮಾವು ಕರುಪ್ಪು ಸ್ವಾಮಿ ದೇವರು ಸಾಮಾಜಿಕ ವಿಷಯದ ಬಗ್ಗೆ ಹೋರಾಡುವ ಕತೆಯನ್ನು ಒಳಗೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

GT vs RR: ಗೆದ್ದ ಇತಿಹಾಸವೇ ಇಲ್ಲ: ಹಿಸ್ಟರಿ ಬದಲಿಸುತ್ತಾ, ಮರುಕಳಿಸುತ್ತಾ?

ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2026) ಕ್ವಾಲಿಫೈಯರ್-2 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡವು ಮೇ 31 ರಂದು ನಡೆಯಲಿರುವ ಐಪಿಎಲ್​ ಫೈನಲ್​ಗೆ ಎಂಟ್ರಿ ಕೊಡಲಿದೆ. ಹಾಗೆಯೇ ಸೋತ ತಂಡದ ಐಪಿಎಲ್ ಅಭಿಯಾನ ಅಂತ್ಯಗೊಳ್ಳಲಿದೆ. ಹೀಗಾಗಿ ಇಂದಿನ ಮ್ಯಾಚ್​ನಲ್ಲಿ ಗೆಲ್ಲಲು ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸುವುದು ದಿಟ.

ಗೆದ್ದ ಇತಿಹಾಸವೇ ಇಲ್ಲ!

ಕುತೂಹಲಕಾರಿ ವಿಷಯ ಎಂದರೆ ರಾಜಸ್ಥಾನ್ ರಾಯಲ್ಸ್ ತಂಡವು ಐಪಿಎಲ್​ನ ಪ್ಲೇಆಫ್​ ಪಂದ್ಯಗಳಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಗೆದ್ದ ಇತಿಹಾಸವೇ ಇಲ್ಲ. ಅಂದರೆ ಎರಡು ಬಾರಿ ಮುಖಾಮುಖಿಯಾದಾಗಲೂ ಆರ್​ಆರ್ ವಿರುದ್ಧ ಗೆಲ್ಲುವಲ್ಲಿ ಗುಜರಾತ್ ಟೈಟಾನ್ಸ್ ತಂಡ ಯಶಸ್ವಿಯಾಗಿದೆ.

  • 2022ರ ಕ್ವಾಲಿಫೈಯರ್ 1: ಐಪಿಎಲ್ 2022 ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತ್ತು.
  • 2022 ಫೈನಲ್: ಐಪಿಎಲ್​ 2022ರ ಮೊದಲ ಕ್ವಾಲಿಫೈಯರ್​ನಲ್ಲಿ ಸೋತಿದ್ದ ರಾಜಸ್ಥಾನ್ ರಾಯಲ್ಸ್ ತಂಡವು ದ್ವಿತೀಯ ಕ್ವಾಲಿಫೈಯರ್​ನಲ್ಲಿ ಗೆಲ್ಲುವ ಮೂಲಕ ಫೈನಲ್​ಗೇರಿತ್ತು. ಆದರೆ ಫೈನಲ್​ನಲ್ಲೂ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 7 ವಿಕೆಟ್​ಗಳ ಸೋಲುಣಿಸಿ ಗುಜರಾತ್ ಟೈಟಾನ್ಸ್ ತಂಡವು ಚೊಚ್ಚಲ ಬಾರಿ ಟ್ರೋಫಿ ಎತ್ತಿ ಹಿಡಿದಿದ್ದರು.

ಬದಲಿಸುತ್ತಾ ಹಿಸ್ಟರಿ?

ಗುಜರಾತ್ ಟೈಟಾನ್ಸ್ ವಿರುದ್ಧ ಪ್ಲೇಆಫ್​ ಹಂತದಲ್ಲಿ 2 ಬಾರಿ ಸೋತಿರುವ ರಾಜಸ್ಥಾನ್ ರಾಯಲ್ಸ್ ಈ ಬಾರಿ ಹಿಸ್ಟರಿ ಬದಲಿಸುತ್ತಾ? ಎಂಬುದೇ ಕುತೂಹಲ. ಏಕೆಂದರೆ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಸತತ 6 ಪಂದ್ಯಗಳಲ್ಲಿ ಸೋತಿದ್ದ ರಾಜಸ್ಥಾನ್ ರಾಯಲ್ಸ್ ನಿರ್ಣಾಯಕ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ದ್ವಿತೀಯ ಕ್ವಾಲಿಫೈಯರ್​ಗೆ ಅರ್ಹತೆ ಪಡೆದುಕೊಂಡಿದೆ. ಈ ಅರ್ಹತೆಯೊಂದಿಗೆ ಇದೀಗ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಅತ್ತ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಸೋಲಿನ ಸರಪಳಿ ಕಳಚಿರುವ ರಾಜಸ್ಥಾನ್ ರಾಯಲ್ಸ್ ಗುಜರಾತ್ ಟೈಟಾನ್ಸ್ ವಿರುದ್ಧ ಕೂಡ ಗೆಲ್ಲಲಿದೆಯಾ ಎಂಬುದೇ ಸದ್ಯ ಕುತೂಹಲ.

ಮರುಕಳಿಸುತ್ತಾ ಇತಿಹಾಸ?

ಅತ್ತ ರಾಜಸ್ಥಾನ್ ರಾಯಲ್ಸ್ ಹಿಸ್ಟರಿ ಬದಲಿಸಲು ಪ್ಲ್ಯಾನ್ ರೂಪಿಸುತ್ತಿದ್ದರೆ, ಇತ್ತ ಗುಜರಾತ್ ಟೈಟಾನ್ಸ್ ತಂಡವು ಪ್ಲೇಆಫ್​ನಲ್ಲಿ ಆರ್​ಆರ್​ ವಿರುದ್ಧ ಹ್ಯಾಟ್ರಿಕ್ ಗೆಲುವು ಸಾಧಿಸಲು ಯೋಜನೆ ಸಿದ್ಧಪಡಿಸುತ್ತಿದ್ದಾರೆ. ಅಂದರೆ 2022ರ ಕ್ವಾಲಿಫೈಯರ್​ ಪಂದ್ಯದ ಫಲಿತಾಂಶವನ್ನೇ ಮರು ಸೃಷ್ಟಿಸಲು ಗುಜರಾತ್ ಟೈಟಾನ್ಸ್ ಪ್ಲ್ಯಾನ್ ರೂಪಿಸಿಕೊಂಡಿದೆ.

ಇದನ್ನೂ ಓದಿ: AB de Villiers: ವೈಭವ್​ನ ನೋಡಿದಾಗ ನನಗೆ ಆ ಬ್ಯಾಟರ್​ ನೆನಪಾಗ್ತಾರೆ!

ಈ ಪ್ಲ್ಯಾನ್​ಗೆ ಮರು ಪ್ಲ್ಯಾನ್ ರೂಪಿಸಿ ರಾಜಸ್ಥಾನ್ ರಾಯಲ್ಸ್ ಫೈನಲ್​ಗೇರಲಿದೆಯಾ? ಅಥವಾ ಗುಜರಾತ್ ಟೈಟಾನ್ಸ್ ಮೂರನೇ ಬಾರಿ ಫೈನಲ್​ಗೆ ಎಂಟ್ರಿ ಕೊಡಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

Source link

ನಮ್ಮ ದೊಡ್ಡ ಸಿಂಹಗಳಿಗೆ ಅಭಿನಂದನೆಗಳು: ವಿಜಯ ಮಲ್ಯ

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ರಾಯಲ್ ಚಾಲೆಂಜರ್ಸ್ ಬೆಂಳೂರು (RCB) ತಂಡ ಫೈನಲ್​ಗೇರಿದೆ. ನಿರ್ಣಾಯಕ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 92 ರನ್​ಗಳ ಅಮೋಘ ಗೆಲುವು ದಾಖಲಿಸಿರುವ ಆರ್​ಸಿಬಿ ಇದೇ ಮೊದಲ ಬಾರಿಗೆ ಬ್ಯಾಕ್ ಟು ಬ್ಯಾಕ್ ಫೈನಲ್​ಗೆ ಎಂಟ್ರಿ ಕೊಟ್ಟಿದೆ.

ಹೀಗೆ ಐತಿಹಾಸಿಕ ಸಾಧನೆ ಮಾಡಿರುವ ಆರ್​ಸಿಬಿ ತಂಡವನ್ನು ಅಭಿನಂದಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಮಾಲೀಕರಾದ ವಿಜಯ ಮಲ್ಯ ಟ್ವೀಟ್ ಮಾಡಿದ್ದಾರೆ.

“ಧರ್ಮಶಾಲಾದಲ್ಲಿ ಭರ್ಜರಿ ಜಯ ಸಾಧಿಸಿದ ಆರ್‌ಸಿಬಿ ನಮ್ಮ ದೊಡ್ಡ ಸಿಂಹಗಳಿಗೆ ಹಾರ್ದಿಕ ಅಭಿನಂದನೆಗಳು. ಬೆಂಗಳೂರಿನ ಸಿಂಹಗಳಂತೆ ನೀವು ಜೋರಾಗಿ ಗರ್ಜಿಸಿದ್ದೀರಿ. ಹಾಲಿ ಚಾಂಪಿಯನ್ಸ್ ಆಗಿ ಮತ್ತೊಮ್ಮೆ ಐಪಿಎಲ್ ಫೈನಲ್‌ಗೆ ಲಗ್ಗೆ ಇಟ್ಟಿದ್ದೀರಿ,” ಎಂದು ವಿಜಯ ಮಲ್ಯ ಎಕ್ಸ್​ ಖಾತೆಯಲ್ಲಿಬರೆದುಕೊಂಡಿದ್ದಾರೆ.

ವಿಜಯ ಮಲ್ಯ ಅವರ ಈ ಟ್ವೀಟ್ ಭಾರೀ ವೈರಲ್ ಆಗಿದ್ದು, ಆರೆ್​ಸಿಬಿ ಅಭಿಮಾನಿಗಳಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತದೆ. ಅಂದಹಾಗೆ ವಿಜಯ್ ಮಲ್ಯ ಆರ್​ಸಿಬಿ ತಂಡದ ಸಂಸ್ಥಾಪಕರು. 2008 ರಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ತಂಡಗಳ ಬಿಡ್ಡಿಂಗ್​ನಲ್ಲಿ ಮಲ್ಯ ಅವರು ಆರ್​ಸಿಬಿ ತಂಡವನ್ನು 455 ಕೋಟಿ ರೂ. ನೀಡಿ ಖರೀದಿಸಿದ್ದರು.

ಆದರೆ 2016 ರಲ್ಲಿ ಆರ್ಥಿಕ ಮುಗ್ಗಟ್ಟು ಎದುರಿಸಿ ಸಾಲದ ಸುಳಿಗೆ ಸಿಲುಕಿದ ವಿಜಯ ಮಲ್ಯ ಭಾರತದಿಂದ ಪಾಲಾಯನ ಮಾಡಿ, ಈಗ ಇಂಗ್ಲೆಂಡ್​ನಲ್ಲಿ ನೆಲೆಸಿದ್ದಾರೆ. ಇದಾದ ಬಳಿಕ ಆರ್​ಸಿಬಿ ತಂಡದ ಮಾಲೀಕತ್ವವು ಯುನೈಟೆಡ್ ಸ್ಪಿರಿಟ್ಸ್ ಕಂಪೆನಿಯ ಹೆಸರಿನಲ್ಲಿತ್ತು, ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯನ್ನು ಬಿರ್ಲಾ ಒಕ್ಕೂಟ ಖರೀದಿಸಿದೆ.

ಫೈನಲ್ ಪಂದ್ಯ ಯಾವಾಗ?

ಇಂಡಿಯನ್ ಪ್ರೀಮಿಯರ್ ಲೀಗ್​ನ ಫೈನಲ್ ಪಂದ್ಯವು ಮೇ 31 ರಂದು ನಡೆಯಲಿದೆ. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗುಜರಾತ್ ಟೈಟಾನ್ಸ್ ಅಥವಾ ರಾಜಸ್ಥಾನ್ ರಾಯಲ್ಸ್ ಕಣಕ್ಕಿಳಿಯಲಿದೆ. ಅಂದರೆ ಮೇ 29 ರಂದು ನಡೆಯಲಿರುವ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್​ಗೇರಲಿದೆ.

ಇದನ್ನೂ ಓದಿ: IPL 2026: ಆರೆಂಜ್ ಕ್ಯಾಪ್​ಗಾಗಿ ನಾಲ್ವರ ನಡುವೆ ನೇರ ಪೈಪೋಟಿ

ದ್ವಿತೀಯ ಕ್ವಾಲಿಫೈಯರ್​ನಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಲಿದ್ದು, ಈ ಮ್ಯಾಚ್​ನಲ್ಲಿ ಗೆಲ್ಲುವ ತಂಡ ಫೈನಲ್​ಗೇರಿದರೆ, ಸೋಲುವ ತಂಡ ಟೂರ್ನಿಯಿಂದ ಹೊರಬೀಳಲಿದೆ.

Source link

‘ಪೆದ್ದಿ’ ಚಿತ್ರಕ್ಕೆ ಸರ್ಕಾರದಿಂದ ಬಂಪರ್ ಆಫರ್: ಟಿಕೆಟ್ ದರ ಹೆಚ್ಚಳ, ಪ್ರೀಮಿಯರ್ ಶೋಗಳಿಗೆ ಗ್ರೀನ್ ಸಿಗ್ನಲ್

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಬುಚ್ಚಿ ಬಾಬು ಸನಾ ಕಾಂಬಿನೇಷನ್‌ನ ಬಹುನಿರೀಕ್ಷಿತ ಚಿತ್ರ ‘ಪೆದ್ದಿ’ (Peddi Movie) ಈಗಾಗಲೇ ಚಿತ್ರರಂಗದಲ್ಲಿ ಭಾರಿ ಸಂಚಲನ ಮೂಡಿಸಿದೆ. ಹಳ್ಳಿಯ ಯುವಕನ ಪಾತ್ರದಲ್ಲಿ ರಾಮ್ ಚರಣ್ ಕಣ್ಮನ ಸೆಳೆಯುತ್ತಿದ್ದರೆ, ಅವರಿಗೆ ಜೋಡಿಯಾಗಿ ಬಾಲಿವುಡ್ ಸುಂದರಿ ಜಾನ್ವಿ ಕಪೂರ್ ನಟಿಸುತ್ತಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಸಿನಿಮಾದ ಟ್ರೈಲರ್‌ನಲ್ಲಿ ಚರಣ್ ಅವರ ಖಡಕ್ ನಟನೆ ಮತ್ತು ಆಕ್ಷನ್ ದೃಶ್ಯಗಳು ಅಭಿಮಾನಿಗಳನ್ನು ಹುಚ್ಚೆಬ್ಬಿಸಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಆಕಾಶಕ್ಕೆ ಮುಟ್ಟಿಸಿವೆ. ಈಗ ಸಿನಿಮಾಗೆ ಒಂದು ಗುಡ್ ನ್ಯೂಸ್ ಕೂಡ ಸಿಕ್ಕಿದೆ.

ಬುಚ್ಚಿ ಬಾಬು ಸನಾ ಅವರು ಹಲವು ವರ್ಷಗಳ ಸುದೀರ್ಘ ಗ್ಯಾಪ್ ನಂತರ ನಿರ್ದೇಶಿಸುತ್ತಿರುವ ಚಿತ್ರ ಇದಾಗಿರುವುದರಿಂದ ಹಾಗೂ ಚರಣ್ ಅವರ ಮಾಸ್ ಲುಕ್ ಸಖತ್ ಹೈಪ್ ಕ್ರಿಯೇಟ್ ಮಾಡಿರುವುದರಿಂದ ಸಿನಿಪ್ರೇಕ್ಷಕರು ಜೂನ್ 4 ರ ಬಿಡುಗಡೆಗೆ ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಸೆನ್ಸಾರ್ ಪ್ರಕ್ರಿಯೆ ಮುಗಿಸಿಕೊಂಡಿರುವ ‘ಪೆದ್ದಿ’ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುವುದು ಗ್ಯಾರಂಟಿ ಎನ್ನಲಾಗುತ್ತಿದೆ.

ಮೆಗಾ ಅಭಿಮಾನಿಗಳಿಗೆ ಆಂಧ್ರ ಪ್ರದೇಶ ಸರ್ಕಾರದ ಬಂಪರ್ ಸುದ್ದಿ!

ಚಿತ್ರದ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ಆಂಧ್ರ ಪ್ರದೇಶ (AP) ಸರ್ಕಾರ ಮೆಗಾ ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ‘ಪೆದ್ದಿ’ ಚಿತ್ರದ ವಿಶೇಷ ಪ್ರದರ್ಶನ ಹಾಗೂ ಟಿಕೆಟ್ ದರ ಹೆಚ್ಚಳಕ್ಕೆ ಸರ್ಕಾರ ಅಧಿಕೃತವಾಗಿ ಹಸಿರು ನಿಶಾನೆ ತೋರಿಸಿದೆ.

ವಿಶೇಷ ಪ್ರೀಮಿಯರ್ ಶೋಗಳು: ಚಿತ್ರ ಬಿಡುಗಡೆಯಾಗುವ ಮುನ್ನಾ ದಿನವೇ, ಅಂದರೆ ಜೂನ್ 3 ರಂದು ರಾತ್ರಿ 8 ಗಂಟೆಯಿಂದಲೇ ವಿಶೇಷ ಪ್ರೀಮಿಯರ್ ಶೋಗಳನ್ನು ಪ್ರದರ್ಶಿಸಲು ಸರ್ಕಾರ ಅನುಮತಿ ನೀಡಿದೆ.

ದಿನಕ್ಕೆ 5 ಪ್ರದರ್ಶನ: ಸಿನಿಮಾ ಬಿಡುಗಡೆಯಾದ ಮೊದಲ ವಾರದವರೆಗೆ ಪ್ರತಿದಿನ 5 ಶೋಗಳನ್ನು ಪ್ರದರ್ಶಿಸಲು ಥಿಯೇಟರ್‌ಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಟಿಕೆಟ್ ದರ ಹೆಚ್ಚಳ: ಸರ್ಕಾರದ ಆದೇಶದಂತೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ 100 ರೂ. ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ 125 ರೂ. ವರೆಗೆ ಟಿಕೆಟ್ ದರವನ್ನು ಹೆಚ್ಚಿಸಿಕೊಳ್ಳಬಹುದು.

ಪ್ರೀಮಿಯರ್ ಶೋ ದರ: ಜೂನ್ 3 ರಂದು ನಡೆಯಲಿರುವ ವಿಶೇಷ ಪ್ರೀಮಿಯರ್ ಶೋಗಳ ಟಿಕೆಟ್ ದರವನ್ನು ಗರಿಷ್ಠ 600 ರೂ. ಎಂದು ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ‘ಪೆದ್ದಿ’ ಸಿನಿಮಾದಲ್ಲಿ ನೆಗೆಟಿವ್ ಶೇಡ್ ಪಾತ್ರ? ಶಿವಣ್ಣ ಹೇಳಿದ್ದಿಷ್ಟು

ಸರ್ಕಾರದ ಈ ನಿರ್ಧಾರದಿಂದ ಮೆಗಾ ಅಭಿಮಾನಿಗಳು ಸಖತ್ ಖುಷಿಯಾಗಿದ್ದು, ಜೂನ್ 4 ರಂದು ‘ಪೆದ್ದಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಯಾವ ರೀತಿಯ ಹೊಸ ದಾಖಲೆಗಳನ್ನು ಬರೆಯಲಿದೆ ಎಂಬುದನ್ನು ನೋಡಲು ಚಿತ್ರರಂಗ ಕಾಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Job Opportunity: ಮಂಗಳೂರಿನಲ್ಲಿ ಪದವೀಧರರಿಗೆ ಉತ್ತಮ ಉದ್ಯೋಗಾವಕಾಶ; ನಾಳೆ ನೇರ ಸಂದರ್ಶನ!

ಮಂಗಳೂರಿನಲ್ಲಿ ಉದ್ಯೋಗಾವಕಾಶImage Credit source: Pinterest

ಮಂಗಳೂರಿನಲ್ಲಿ ಉದ್ಯೋಗ ಹುಡುಕುತ್ತಿರುವ ಪದವೀಧರರಿಗೆ ಕರ್ನಾಟಕ ಸರ್ಕಾರವು ಒಂದು ಉತ್ತಮ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಕರ್ನಾಟಕ ಸರ್ಕಾರದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ (ದಕ್ಷಿಣ ಕನ್ನಡ ಜಿಲ್ಲೆ) ಜಂಟಿಯಾಗಿ “ನೇರ ಸಂದರ್ಶನ” (Walk-in Interview) ಕಾರ್ಯಕ್ರಮವನ್ನು ಆಯೋಜಿಸಿದೆ. ಪ್ರತಿಷ್ಠಿತ ‘ವಿ.ಆರ್.ಎನ್ ಇನ್ನೋಟೆಕ್’ (VRN Innotech) ಕಂಪನಿಯ ವತಿಯಿಂದ ಮಂಗಳೂರಿನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಈ ಸಂದರ್ಶನ ನಡೆಯುತ್ತಿದ್ದು, ಆಸಕ್ತ ನಿರುದ್ಯೋಗಿ ಯುವಕ-ಯುವತಿಯರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಖಾಲಿ ಇರುವ ಹುದ್ದೆಗಳು ಮತ್ತು ಅಗತ್ಯವಿರುವ ಶೈಕ್ಷಣಿಕ ಅರ್ಹತೆ:

ಈ ಉದ್ಯೋಗ ಮೇಳದಲ್ಲಿ ಪ್ರಮುಖವಾಗಿ ಕಸ್ಟಮರ್ ಸಪೋರ್ಟ್ ಎಕ್ಸಿಕ್ಯೂಟಿವ್ (Customer Support Executive) ಮತ್ತು ಟೆಲಿಕಾಲರ್ (Telicaller) ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ (Any Degree) ಪಡೆದ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ. ಭಾಷಾ ಪ್ರಾವೀಣ್ಯತೆಗೆ ಸಂಬಂಧಿಸಿದಂತೆ, ಅಭ್ಯರ್ಥಿಗಳಿಗೆ ಮಲಯಾಳಂ, ಹಿಂದಿ, ಇಂಗ್ಲಿಷ್ ಅಥವಾ ತಮಿಳು ಭಾಷೆಗಳಲ್ಲಿ ಯಾವುದಾದರೂ ಒಂದು ಅಥವಾ ಹೆಚ್ಚಿನ ಭಾಷೆಗಳ ಜ್ಞಾನವಿರುವುದು ಕಡ್ಡಾಯವಾಗಿದೆ.

ಇದನ್ನೂ ಓದಿ: 16 ಸರ್ಕಾರಿ ಉದ್ಯೋಗ ತಿರಸ್ಕರಿಸಿ IPS ಆದ ಯುವತಿ; ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ತೃಪ್ತಿ ಭಟ್ ಯಶೋಗಾಥೆ

ಸಂದರ್ಶನ ನಡೆಯುವ ದಿನಾಂಕ, ಸಮಯ ಮತ್ತು ಸ್ಥಳದ ವಿವರಗಳು:

ಈ ನೇರ ಸಂದರ್ಶನವನ್ನು ಮೇ 30 ರಂದು (ಶನಿವಾರ) ಆಯೋಜಿಸಲಾಗಿದೆ. ಸಂದರ್ಶನವು ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 01:00 ಗಂಟೆಯವರೆಗೆ ಮಾತ್ರ ನಡೆಯಲಿದ್ದು, ಅಭ್ಯರ್ಥಿಗಳು ನಿಗದಿತ ಸಮಯದೊಳಗೆ ಹಾಜರಾಗಬೇಕಿರುತ್ತದೆ.

ಸಂದರ್ಶನ ನಡೆಯುವ ನಿಖರ ಸ್ಥಳ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಕೊಠಡಿ ಸಂಖ್ಯೆ: 04, ನೆಲಮಹಡಿ, ಪ್ರಜಾ ಸೌಧ, ಜಿಲ್ಲಾಡಳಿತ ಭವನ ಕಟ್ಟಡ, ಪಡೀಲ್, ಮಂಗಳೂರು – 575 007.

ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆಗಳು ಮತ್ತು ಸಂಪರ್ಕ ಮಾಹಿತಿ:

ಈ ಸಂದರ್ಶನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಇಚ್ಛಿಸುವ ಅಭ್ಯರ್ಥಿಗಳು ತಮ್ಮ ಸಂಪೂರ್ಣ ವಿವರಗಳನ್ನು ಒಳಗೊಂಡ ಅಪ್ಡೇಟೆಡ್ ಬಯೋಡೇಟಾ (Resume/CV) ದೊಂದಿಗೆ ನೇರವಾಗಿ ಸಂದರ್ಶನ ಸ್ಥಳಕ್ಕೆ ಬರಬೇಕಾಗಿ ವಿನಂತಿಸಲಾಗಿದೆ. ಅತ್ಯಂತ ಪ್ರಮುಖ ವಿಷಯವೆಂದರೆ, ಈ ಉದ್ಯೋಗ ಸಂದರ್ಶನ ಕಾರ್ಯಕ್ರಮವು ಸಂಪೂರ್ಣವಾಗಿ ಉಚಿತವಾಗಿದ್ದು, ಅಭ್ಯರ್ಥಿಗಳು ಯಾವುದೇ ರೀತಿಯ ಶುಲ್ಕವನ್ನು ಪಾವತಿಸುವ ಅಗತ್ಯವಿರುವುದಿಲ್ಲ. ಈ ನೇಮಕಾತಿಗೆ ಸಂಬಂಧಿಸಿದಂತೆ ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಂದೇಹಗಳಿದ್ದಲ್ಲಿ ಅಭ್ಯರ್ಥಿಗಳು ಅಧಿಕೃತ ದೂರವಾಣಿ ಸಂಖ್ಯೆ 0824 2457139 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: 30 ಸೆಕೆಂಡುಗಳಲ್ಲಿ ಹಲವರಿಗೆ ಕಚ್ಚಿದ ಬೀದಿ ನಾಯಿ

ಬೀದಿ ನಾಯಿಯೊಂದು ಕೇವಲ 30 ಸೆಕೆಂಡುಗಳ ಅವಧಿಯಲ್ಲಿ ರಸ್ತೆಯಲ್ಲಿದ್ದ ಹಲವು ಯುವಕರ ಮೇಲೆ ದಾಳಿ ನಡೆಸಿ, ಕಚ್ಚಿ ಗಾಯಗೊಳಿಸಿರುವ ಭೀಕರ ಘಟನೆ ನಡೆದಿದೆ. ನಾಯಿಯ ಆಕ್ರಮಣಕಾರಿ ದಾಳಿಯಿಂದ ದಿಕ್ಕೆಟ್ಟ ಯುವಕರು ಪ್ರಾಣಭಯದಿಂದ ಓಡಿದ್ದಾರೆ. ಈ ಆಘಾತಕಾರಿ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ಎಷ್ಟೇ ಓಡಿದರೂ, ಕುರ್ಚಿಯಲ್ಲಿ ಹೊಡೆದರೂ ಕೂಡ ನಾಯಿ ಬಿಡದೆ ಒಬ್ಬರಾದ ಮೇಲೆ ಒಬ್ಬರಿಗೆ ಕಚ್ಚಿದೆ. ಘಟನೆ ಎಲ್ಲಿ ನಡೆದಿದೆ ಎನ್ನುವ ಮಾಹಿತಿ ಲಭ್ಯವಿಲ್ಲ. ಯುವಕರು ಮಾತನಾಡುತ್ತಾ ಕುಳಿತಿರುವಾಗ ಹಿಂದಿನಿಂದ ನಾಯಿ ದಾಳಿ ಮಾಡಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version