ನೋಟು ಹಾಳಾಗುವ ಭಯ ಬೇಡ; ಕಾಗದದ ಬದಲು ಪಾಲಿಮರ್ ನೋಟು ಮುದ್ರಿಸಲು ಸರ್ಕಾರದ ಆಲೋಚನೆ

ನವದೆಹಲಿ, ಮೇ 29: ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶದಲ್ಲಿ ಚಾಲ್ತಿಯಲ್ಲಿರುವ ಸಾಂಪ್ರದಾಯಿಕ ಕಾಗದದ ನೋಟುಗಳ ಬದಲಿಗೆ ಪ್ಲಾಸ್ಟಿಕ್ ಅಥವಾ ಪಾಲಿಮರ್ ಬ್ಯಾಂಕ್‌ನೋಟುಗಳನ್ನು (Polymer Banknotes) ಪರಿಚಯಿಸಲು ಗಂಭೀರ ಚಿಂತನೆ ನಡೆಸಿದೆ. ನೋಟು ಮುದ್ರಣದ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ನಕಲಿ ನೋಟುಗಳ ಹಾವಳಿಗೆ ಬ್ರೇಕ್ ಹಾಕುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಆರಂಭದಲ್ಲಿ ದೇಶದ ಐದು ಆಯ್ದ ನಗರಗಳಲ್ಲಿ (ವಿವಿಧ ಹವಾಮಾನ ವಲಯಗಳನ್ನು ಆಧರಿಸಿ) ₹10 ಮುಖಬೆಲೆಯ ಪಾಲಿಮರ್ ನೋಟುಗಳನ್ನು ಪ್ರಾಯೋಗಿಕವಾಗಿ (Pilot Project) ಚಲಾವಣೆಗೆ ತರಲು ಸಿದ್ಧತೆಗಳು ನಡೆದಿವೆ.

ಕಾಗದದ ನೋಟುಗಳನ್ನು ಮುದ್ರಿಸಲು ಸರ್ಕಾರಕ್ಕೆ ಸಾಕಷ್ಟು ವೆಚ್ಚವಾಗುತ್ತದೆ. ಆರ್​ಬಿಐ ದತ್ತಾಂಶದ ಪ್ರಕಾರ 2023-24ರಲ್ಲಿ ನೋಟುಗಳ ಮುದ್ರಣಕ್ಕೆ 5,101.4 ಕೋಟಿ ರೂ ವೆಚ್ಚವಾಗಿತ್ತು. 2024-25ರಲ್ಲಿ ಇದು 6,372.8 ಕೋಟಿ ರೂಗೆ ಏರಿತ್ತು. ಪಾಲಿಮರ್​ನಿಂದ ನೋಟು ತಯಾರಿಸುವುದರಿಂದ ಸಾಕಷ್ಟು ಹಣ ಉಳಿಸಬಹುದು. ಇದರ ಜೊತೆಗೆ ಇನ್ನೂ ಹಲವು ರೀತಿಯ ಅನುಕೂಲಗಳನ್ನು ಪ್ಲಾಸ್ಟಿಕ್ ನೋಟುಗಳು ಒದಗಿಸುತ್ತವೆ.

ಇದನ್ನೂ ಓದಿ: ಭಾರತಕ್ಕೆ ಬರಲಿದೆ ಅತ್ಯಾಧುನಿಕ ಸಬ್‌ಸ್ಟ್ರೇಟ್ ತಂತ್ರಜ್ಞಾನ: ಒಡಿಶಾ ಸರ್ಕಾರ, ಇಂಟೆಲ್ ಮತ್ತು 3DGS ಒಪ್ಪಂದಕ್ಕೆ ಅಶ್ವಿನಿ ವೈಷ್ಣವ್ ಶ್ಲಾಘನೆ

ಕಾಗದದ ನೋಟುಗಳಿಗಿಂತ ಪಾಲಿಮರ್ ನೋಟುಗಳು ಹೇಗೆ ಉತ್ತಮ?

  • ದೀರ್ಘ ಬಾಳಿಕೆ: ಭಾರತದಲ್ಲಿ ಕಾಗದದ ನೋಟುಗಳ ಸರಾಸರಿ ಆಯಸ್ಸು ತುಂಬಾ ಕಡಿಮೆ. ಆದರೆ ಪ್ಲಾಸ್ಟಿಕ್ ನೋಟುಗಳು ಕಾಗದದ ನೋಟುಗಳಿಗಿಂತ ಕನಿಷ್ಠ 2 ರಿಂದ 4 ಪಟ್ಟು ಹೆಚ್ಚು ದಿನ ಬಾಳಿಕೆ (Durability) ಬರುತ್ತವೆ. ಇವುಗಳನ್ನು ಸುಲಭವಾಗಿ ಹರಿಯಲು ಅಥವಾ ಮಡಚಲು ಸಾಧ್ಯವಿಲ್ಲ.
  • ವಾಟರ್​ಪ್ರೂಫ್ ಮತ್ತು ಸ್ವಚ್ಛ: ಪಾಲಿಮರ್ ನೋಟುಗಳು ಸಂಪೂರ್ಣವಾಗಿ ಜಲನಿರೋಧಕ (Waterproof) ಆಗಿರುತ್ತವೆ. ಆಕಸ್ಮಿಕವಾಗಿ ಬಟ್ಟೆ ಒಗೆಯುವಾಗ ಜೇಬಿನಲ್ಲಿ ಉಳಿದರೂ ಇವು ಹಾಳಾಗುವುದಿಲ್ಲ. ಇವುಗಳ ಮೇಲ್ಮೈ ನಯವಾಗಿರುವುದರಿಂದ ಕೊಳಕು, ಎಣ್ಣೆ ಅಥವಾ ಬೆವರು ಇವುಗಳಿಗೆ ಅಂಟಿಕೊಳ್ಳುವುದಿಲ್ಲ. ಹೀಗಾಗಿ ಇವು ಕಾಗದದ ನೋಟುಗಳಿಗಿಂತ ಹೆಚ್ಚು ಸ್ವಚ್ಛವಾಗಿರುತ್ತವೆ.
  • ನಕಲಿ ನೋಟು ತಡೆ: ಪ್ಲಾಸ್ಟಿಕ್ ನೋಟುಗಳನ್ನು ನಕಲು ಮಾಡುವುದು (Counterfeit) ಅತ್ಯಂತ ಕಷ್ಟಕರ. ಇದರಲ್ಲಿ ಪಾರದರ್ಶಕ ವಿಂಡೋಗಳು (Transparent Windows), ಅಡಗಿದ ಅಕ್ಷರಗಳು ಮತ್ತು ಅತ್ಯಾಧುನಿಕ ಮೆಟಾಮೆರಿಕ್ ಶಾಯಿಗಳನ್ನು (Metameric Inks) ಬಳಸಲಾಗುವುದರಿಂದ ಸುರಕ್ಷತೆ ಹೆಚ್ಚಾಗಿರುತ್ತದೆ.
  • ಪರಿಸರ ಸ್ನೇಹಿ: ಈ ನೋಟುಗಳು ಹಳೆಯದಾದಾಗ ಅಥವಾ ಚಲಾವಣೆಯಿಂದ ಹೊರಗುಳಿದಾಗ ಇವುಗಳನ್ನು ಕರಗಿಸಿ ಮರುಬಳಕೆ (Recycle) ಮಾಡಬಹುದು. ಇದರಿಂದ ಪ್ಲಾಸ್ಟಿಕ್ ಬಕೆಟ್ ಅಥವಾ ಮಗ್‌ಗಳಂತಹ ಇತರ ವಸ್ತುಗಳನ್ನು ತಯಾರಿಸಬಹುದು. ಇವುಗಳ ಸಂಪೂರ್ಣ ಜೀವಿತಾವಧಿಯಲ್ಲಿ ಹಸಿರುಮನೆ ಅನಿಲಗಳ (Greenhouse Gases) ಹೊರಸೂಸುವಿಕೆ ಕಡಿಮೆಯಿರುತ್ತದೆ. ಈ ಮೂಲಕ ಪ್ಲಾಸ್ಟಿಕ್ ನೋಟುಗಳು ಪರಿಸರಸ್ನೇಹಿ (Eco-Friendly) ಕೂಡ ಹೌದು.
  • ಎಟಿಎಂ ಯಂತ್ರಗಳಿಗೆ ಸೂಕ್ತ: ಪ್ಲಾಸ್ಟಿಕ್ ನೋಟುಗಳು ಎಟಿಎಂ (ATM) ಮತ್ತು ನೋಟು ಎಣಿಕೆ ಯಂತ್ರಗಳಲ್ಲಿ ಅತ್ಯಂತ ಸುಗಮವಾಗಿ ಕಾರ್ಯನಿರ್ವಹಿಸುತ್ತವೆ. ಇವು ಹರಿದು ಯಂತ್ರಗಳಲ್ಲಿ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಇರುವುದಿಲ್ಲ.

ಇದನ್ನೂ ಓದಿ: ಶೇರುಗಳಂತೆ ರಿಯಲ್ ಎಸ್ಟೇಟ್ ಆಸ್ತಿಯಲ್ಲಿ ಪಾಲು ಖರೀದಿಸಿ… ಇದು REITs ಮತ್ತು InvITs ಕೊಡುವ ಅವಕಾಶ

ಯಾವೆಲ್ಲಾ ದೇಶಗಳಲ್ಲಿ ಪ್ಲಾಸ್ಟಿಕ್ ನೋಟುಗಳಿವೆ?

ವಿಶ್ವದಲ್ಲೇ ಮೊದಲ ಬಾರಿಗೆ 1988 ರಲ್ಲಿ ಆಸ್ಟ್ರೇಲಿಯಾ ದೇಶವು ಪಾಲಿಮರ್ ನೋಟುಗಳನ್ನು ಪರಿಚಯಿಸಿತು. ಪ್ರಸ್ತುತ ಬ್ರಿಟನ್ (UK), ಕೆನಡಾ, ನ್ಯೂಜಿಲೆಂಡ್, ರೊಮೇನಿಯಾ, ವಿಯೆಟ್ನಾಂ ಮತ್ತು ಮಾಲ್ಡೀವ್ಸ್ ಸೇರಿದಂತೆ 20 ಕ್ಕೂ ಹೆಚ್ಚು ದೇಶಗಳು ಸಂಪೂರ್ಣವಾಗಿ ಅಥವಾ ಭಾಗಶಃ ಪ್ಲಾಸ್ಟಿಕ್ ಕರೆನ್ಸಿಯನ್ನು ಬಳಸುತ್ತಿವೆ.

ಭಾರತದಲ್ಲಿರುವ ಸವಾಲುಗಳೇನು?

ಭಾರತದಂತಹ ವೈವಿಧ್ಯಮಯ ಹವಾಮಾನ ಮತ್ತು ಅತಿ ಹೆಚ್ಚು ತಾಪಮಾನ ಹೊಂದಿರುವ ದೇಶದಲ್ಲಿ ಪ್ಲಾಸ್ಟಿಕ್ ನೋಟುಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದು ಪ್ರಮುಖ ಸವಾಲಾಗಿದೆ. ಅತಿಯಾದ ಉಷ್ಣಾಂಶಕ್ಕೆ ಇವು ಹಾನಿಗೊಳಗಾಗದಂತೆ ತಡೆಯಲು ಆರ್‌ಬಿಐ ದೀರ್ಘಾವಧಿಯ ಸಂಶೋಧನೆಗಳನ್ನು ನಡೆಸುತ್ತಿದೆ. ಮೊದಲ ಹಂತದ ಪ್ರಾಯೋಗಿಕ ಪರೀಕ್ಷೆಯು ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ಭಾರತೀಯರ ಕೈಯಲ್ಲೂ ಪ್ಲಾಸ್ಟಿಕ್ ರೂಪಾಯಿ ನೋಟುಗಳು ಓಡಾಡಲಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಎತೊ ಕ ನಾಯ್’: ಜೆನ್ ಜಿ ಪ್ರೇಕ್ಷಕರಿಗಾಗಿ ಹೊಸ ಸಿನಿಮಾ ಘೋಷಿಸಿದ ‘ಹೊಂಬಾಳೆ ಫಿಲ್ಮ್ಸ್’

‘ಕೆಜಿಎಫ್’, ‘ಸಲಾರ್’ ರೀತಿಯ ಕಮರ್ಷಿಯಲ್ ಬ್ಲಾಕ್‌ಬಸ್ಟರ್‌ಗಳು, ನಮ್ಮ ಮಣ್ಣಿನ ಸೊಗಡಿನ ‘ಕಾಂತಾರ’ ಹಾಗೂ ಭವ್ಯ ಅನಿಮೇಷನ್ ಲೋಕದ ‘ಮಹಾವತಾರ ನರಸಿಂಹ’ ಚಿತ್ರಗಳ ಮೂಲಕ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆದಿರುವ ಹೆಮ್ಮೆಯ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್’ (Hombale Films) ಈಗ ಮತ್ತೊಂದು ವಿಭಿನ್ನ ಪ್ರಯೋಗಕ್ಕೆ ಕೈಹಾಕಿದೆ. ಸದಾ ಹೊಸತನಕ್ಕೆ ಒತ್ತು ನೀಡುವ ಈ ಸಂಸ್ಥೆ, ಇದೀಗ ಇಂದಿನ ಯುವ ಪೀಳಿಗೆ ಹಾಗೂ ‘ಜೆನ್ ಜಿ’ (Gen Z) ಪ್ರೇಕ್ಷಕರನ್ನು ಸೆಳೆಯಲು ಸಂಪೂರ್ಣ ಕಂಟೆಂಟ್ ಆಧಾರಿತ ಹಿಪ್-ಹಾಪ್ ಮ್ಯೂಸಿಕಲ್ ಕಥಾಹಂದರ ಹೊಂದಿರುವ ‘ಎತೊ ಕ ನಾಯ್’ (Yeto Ka Naay) ಸಿನಿಮಾವನ್ನು ಘೋಷಿಸಿದೆ.

ಸಂಪೂರ್ಣವಾಗಿ ಮುಂಬೈ ನಗರದ ಹಿನ್ನೆಲೆಯಲ್ಲಿ ಮೂಡಿಬರಲಿರುವ ಈ ಚಿತ್ರದ ಹಿಂದಿ ಅವತರಣಿಕೆಯನ್ನು ‘ವೈಕೆಎನ್ ಪೆಹಲಾ ವಾರ್’ ಹೆಸರಿನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ. ಇದು ಭಾರತೀಯ ಸಿನಿಮಾ ರಂಗದಲ್ಲಿ ಹೊಸದೊಂದು ಸಂಗೀತದ ಜರ್ನಿಗೆ ಮುನ್ನುಡಿ ಬರೆಯಲಿದೆ ಎಂದು ನಿರೀಕ್ಷಿಸಲಾಗಿದೆ. ತಾಂತ್ರಿಕ ತಂಡದ ಬಗ್ಗೆಯೂ ಮಾಹಿತಿ ಸಿಕ್ಕಿದೆ.

ಈ ಸಿನಿಮಾಗೆ ವಿಜಯ್ ಕಿರಗಂದೂರು ಅವರು ಬಂಡವಾಳ ಹೂಡುತ್ತಿದ್ದಾರೆ. ಸಾರಂಗ್ ಸಂಜೀವ್ ಸಾಠಾಯೆ ಅವರು ನಿರ್ದೇಶನ ಮಾಡುತ್ತಿದ್ದಾರೆ. ಸಾರಂಗ್ ಸಾಠಾಯೆ, ಸುಜಯ್ ಜಾಧವ್, ಸೃಷ್ಟಿ ತಾವಡೆ ಮತ್ತು ಶ್ರೇಯಸ್ ಸಾಗ್ವೇಕರ್ ಅವರು ಚಿತ್ರಕಥೆ ಬರೆದಿದ್ದಾರೆ. ಎ.ವಿ. ಪ್ರಫುಲ್ಲಚಂದ್ರ ಅವರ ಸಂಗೀತ, ಹರ್ಷವೀರ್ ಒಬೆರಾಯ್ ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಇರಲಿದೆ.

‘ಎತೊ ಕ ನಾಯ್’ ಮೋಷನ್ ಪೋಸ್ಟರ್:

ಸದ್ಯಕ್ಕೆ ಮುಂಬೈನಲ್ಲಿ ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಇದೇ ವರ್ಷದ ಅಂತ್ಯದೊಳಗೆ ಸಿನಿಮಾವನ್ನು ಬೆಳ್ಳಿತೆರೆಗೆ ತರಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ನಿರ್ಮಾಣ ಸಂಸ್ಥೆಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸಿನಿಮಾದ ಶೀರ್ಷಿಕೆಯನ್ನು ಅನಾವರಣ ಮಾಡಲಾಗಿದೆ.

ಇದನ್ನೂ ಓದಿ: ‘ದೇವಿ‌ ಮಹಾತ್ಮೆ’ ಸಿನಿಮಾದ ಆಡಿಯೋ ರೈಟ್ಸ್ ಖರೀದಿಸಿದ ‘ಹೊಂಬಾಳೆ ಮ್ಯೂಸಿಕ್’

ಈ ಹೊಸ ಸಿನಿಮಾದ ಘೋಷಣೆಯ ಬೆನ್ನಲ್ಲೇ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಆಂತರಿಕ ಮೂಲಗಳಿಂದ ಮಹತ್ವದ ಮಾಹಿತಿಯೊಂದು ಲಭ್ಯವಾಗಿದೆ. ಸದ್ಯ ಸಂಸ್ಥೆಯು ಕನ್ನಡದ ವೈವಿಧ್ಯಮಯ ಹಾಗೂ ವಿಭಿನ್ನ ಕಥಾಹಂದರಗಳನ್ನು ಸತತವಾಗಿ ಆಲಿಸುತ್ತಿದೆ. ಸ್ಯಾಂಡಲ್‌ವುಡ್‌ನಲ್ಲಿ ಶೀಘ್ರದಲ್ಲೇ ಕಂಟೆಂಟ್ ಆಧಾರಿತ ವಿಶಿಷ್ಟ ಕನ್ನಡ ಚಿತ್ರಗಳನ್ನು ಪ್ರಕಟಿಸಲು ಸಂಸ್ಥೆಯು ಯೋಜಿಸುತ್ತಿದ್ದು, ಕನ್ನಡಿಗರಿಗೆ ಮತ್ತಷ್ಟು ಉನ್ನತ ಗುಣಮಟ್ಟದ ಸಿನಿಮಾಗಳನ್ನು ನೀಡಲು ಹೊಂಬಾಳೆ ಫಿಲ್ಮ್ಸ್ ಸಜ್ಜಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಧುರಂಧರ್’ ಯಶಸ್ಸು ಸಹಿಸದವರಿಂದ ರಣ್ವೀರ್ ಸಿಂಗ್ ವಿರುದ್ಧ ಪಿತೂರಿ’

ಡಾನ್ 3’ (Don 3) ಸಿನಿಮಾದ ಒಪ್ಪಂದ ಮುರಿದು ಚಿತ್ರದಿಂದ ಹೊರನಡೆದ ಕಾರಣ ನಟ ರಣವೀರ್ ಸಿಂಗ್ (Ranveer Singh) ವಿರುದ್ಧ ಅಸಹಕಾರವನ್ನು ಸಿನಿಮಾ ನೌಕರರ ಸಂಘ ಘೋಷಿಸಿದೆ. ರಣ್ವೀರ್ ಸಿಂಗ್ ಅವರು ಒಪ್ಪಂದ ಮುರಿದಿದ್ದು ಮಾತ್ರವಲ್ಲದೆ ಸಿನಿಮಾದ ಪ್ರೀ ಪ್ರೊಡಕ್ಷನ್​​ಗೆ ಆಗಿರುವ ಖರ್ಚನ್ನು ಕೊಡಲು ನಿರಾಕರಿಸಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಸಿನಿಮಾದ ನಿರ್ಮಾಪಕ ಫರ್ಹಾನ್ ಅಖ್ತರ್ ಸಿನಿಮಾ ಒಕ್ಕೂಟಕ್ಕೆ ದೂರು ನೀಡಿದ್ದರು. ಈಗ ರಣ್ವೀರ್ ಸಿಂಗ್ ಮೇಲೆ ಹೇರಲಾಗಿರುವ ಅನಧಿಕೃತ ನಿಷೇಧದ ಬಗ್ಗೆ ಚಿತ್ರರಂಗಕ್ಕೆ ಸಂಬಂಧಿಸಿದವರು ನಾನಾ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಖ್ಯಾತ ಲೇಖಕಿ ಶೋಭಾ ಡೇ ಸಹ ಈ ಬಗ್ಗೆ ಮಾತನಾಡಿದ್ದು, ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳ ಯಶಸ್ಸನ್ನು ತಡೆದುಕೊಳ್ಳಲಾಗದು ಕೆಲವರು ರಣ್ವೀರ್ ಸಿಂಗ್ ವಿರುದ್ಧ ಹೀಗೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ಶೋಭಾ ಡೇ, ಫರ್ಹಾನ್ ಅಖ್ತರ್ ಅವರೊಂದಿಗಿನ ಈ ವಿವಾದವನ್ನು ರಣವೀರ್ ಸಿಂಗ್ ಅತ್ಯಂತ ಪ್ರಬುದ್ಧತೆಯಿಂದ ನಿಭಾಯಿಸುತ್ತಿರುವುದನ್ನು ಶ್ಲಾಘಿಸಿದ್ದಾರೆ. ಚಲನಚಿತ್ರ ಕಾರ್ಮಿಕರ ಒಕ್ಕೂಟವಾದ ಎಫ್​​ಡಬ್ಲುಐಸಿಇ (FWICE) ರಣವೀರ್ ವಿರುದ್ಧ ಕೈಗೊಂಡಿರುವ ಅಸಹಕಾರ ನಿರ್ಧಾರವು ಕೇವಲ ರಣವೀರ್ ಅವರನ್ನಷ್ಟೇ ಅಲ್ಲದೆ, ಇತ್ತೀಚೆಗೆ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ನಿರ್ದೇಶಕ ಆದಿತ್ಯ ಧರ್ ಮತ್ತು ಅವರ ತಂಡವನ್ನು ಗುರಿಯಾಗಿಸಿಕೊಂಡು ಮಾಡುತ್ತಿರುವ ವ್ಯವಸ್ಥಿತ ಸಂಚು ಎಂದು ಅವರು ಹೇಳಿದ್ದಾರೆ.

ತಮ್ಮ ವಿಡಿಯೋದಲ್ಲಿ ಈ ವಿವಾದವನ್ನು ದೆಹಲಿಯ ಪ್ರಸಿದ್ಧ ‘ಜಿಮ್ಖಾನಾ ಕ್ಲಬ್’ ವಿವಾದಕ್ಕೆ ಹೋಲಿಸಿರುವ ಶೋಭಾ ಡೇ, ‘ಇದೆಲ್ಲವೂ ಅಧಿಕಾರ, ನಿಯಂತ್ರಣ ಮತ್ತು ಜನರನ್ನು ಹತ್ತಿಕ್ಕುವ ಆಟವಾಗಿದೆ. ರಣವೀರ್ ಸಿಂಗ್ ಅತ್ಯಂತ ಬುದ್ಧಿವಂತ ಮತ್ತು ಸರಿಯಾದ ಮಾರ್ಗದರ್ಶನ ಹೊಂದಿರುವ ನಟ. ಅವರು ಈ ವಿಷಯದಲ್ಲಿ ಸಂಪೂರ್ಣ ಮೌನ ಕಾಯ್ದುಕೊಂಡಿದ್ದಾರೆ. ತಮ್ಮ ಅಭಿಮಾನಿಗಳೇ ತಮ್ಮ ಪರವಾಗಿ ಹೋರಾಡುವಂತೆ ಮಾಡುತ್ತಿದ್ದಾರೆ’ ಎಂದಿದ್ದಾರೆ.

ಒಕ್ಕೂಟವು ದೇಶದ ಅತ್ಯಂತ ಯಶಸ್ವಿ ನಟನಿಗೆ ಸ್ಟುಡಿಯೋ ಪ್ರವೇಶಿಸದಂತೆ ತಡೆಯುವ ಮೂಲಕ ತಮಗೆ ತಾವೇ ಪ್ರಾಮುಖ್ಯತೆ ತಂದುಕೊಳ್ಳಲು ಯತ್ನಿಸುತ್ತಿದೆ. ಆದರೆ ಇದರಿಂದಾಗಿ ಯಾವುದೇ ತಪ್ಪಿಲ್ಲದ ಎಷ್ಟೋ ತಂತ್ರಜ್ಞರು ಮತ್ತು ಕಾರ್ಮಿಕರು ಕೆಲಸ ಕಳೆದುಕೊಳ್ಳುವಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ‘ಒಂದು ವೇಳೆ ಎಕ್ಸೆಲ್ ಎಂಟರ್‌ಟೈನ್‌ಮೆಂಟ್, ಫರ್ಹಾನ್ ಅಖ್ತರ್ ಮತ್ತು ರಣವೀರ್ ನಡುವೆ ಭಿನ್ನಾಭಿಪ್ರಾಯಗಳಿದ್ದರೆ, ಅವರು ವಕೀಲರನ್ನು ನೇಮಿಸಿಕೊಂಡು ನ್ಯಾಯಾಲಯಕ್ಕೆ ಹೋಗಬೇಕಿತ್ತೇ ವಿನಃ ಇಂತಹ ಚಿತ್ರರಂಗದ ಸಂಘಟನೆಗಳನ್ನು ಮಧ್ಯೆ ತರಬಾರದಿತ್ತು’ ಎಂದು ಶೋಭಾ ಡೇ ಕಿಡಿಕಾರಿದ್ದಾರೆ.

ಇದನ್ನೂ ಓದಿ:

‘ಧುರಂಧರ್’ ಚಿತ್ರದ ಭಾರಿ ಯಶಸ್ಸಿನ ನಂತರ ನಿರ್ದೇಶಕ ಆದಿತ್ಯ ಧರ್ ಅವರು ಬಾಲಿವುಡ್‌ನ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಗೆ ದೊಡ್ಡ ಬೆದರಿಕೆಯಾಗಿ ಮಾರ್ಪಟ್ಟಿದ್ದಾರೆಯೇ? ಎಂದು ಪ್ರಶ್ನಿಸಿರುವ ಶೋಭಾ, ರಣವೀರ್ ಮೌನವಾಗಿರುವುದೇ ಅವರ ಬ್ರ್ಯಾಂಡ್ ಮೌಲ್ಯ ಮತ್ತು ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೊನೆಯಲ್ಲಿ ಅವರು ಫರ್ಹಾನ್ ಅಖ್ತರ್ ಅವರಿಗೆ ಈ ಸಮಸ್ಯೆಯನ್ನು ಕಾನೂನುಬದ್ಧವಾಗಿ ನ್ಯಾಯಾಲಯದಲ್ಲೇ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

‘ಡಾನ್ 3’ ಚಿತ್ರಕ್ಕೆ ರಣವೀರ್ ಸಿಂಗ್ ಅವರನ್ನು ನಾಯಕನನ್ನಾಗಿ 2023 ರಲ್ಲಿ ಘೋಷಿಸಲಾಗಿತ್ತು. ಆದರೆ, ಆದಿತ್ಯ ಧರ್ ಅವರ ‘ಧುರಂಧರ್’ ಚಿತ್ರದ ದೊಡ್ಡ ಯಶಸ್ಸಿನ ನಂತರ, ಡಿಸೆಂಬರ್ 2025 ರಲ್ಲಿ ರಣವೀರ್ ಸಿಂಗ್ ಹಠಾತ್ ಆಗಿ ‘ಡಾನ್ 3’ ಚಿತ್ರದಿಂದ ಹೊರನಡೆದರು. ಇದರಿಂದ ತಮಗೆ 45 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ನಿರ್ಮಾಪಕ ಫರ್ಹಾನ್ ಅಖ್ತರ್ ಕಳೆದ ಏಪ್ರಿಲ್‌ನಲ್ಲಿ ಸಿನಿಮಾ ನೌಕರರ ಒಕ್ಕೂಟದ ಮೊರೆ ಹೋಗಿದ್ದರು. ಇದರ ಬೆನ್ನಲ್ಲೇ ಒಕ್ಕೂಟವು ರಣವೀರ್ ಸಿಂಗ್ ವಿರುದ್ಧ ಅಸಹಕಾರದ ನಿರ್ದೇಶನವನ್ನು ಹೊರಡಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಾರಾಗೃಹ ಇಲಾಖೆಯ ಕೋಟ್ಯಂತರ ರೂ ಮೌಲ್ಯದ ಕಟ್ಟಡವನ್ನೇ ಕಬ್ಜ ಮಾಡಿದ ಭಲೇ ಕಿಲಾಡಿಗಳು

ಕಾರಾಗೃಹ ಇಲಾಖೆಯ ಕಟ್ಟಡImage Credit source: tv9 kannada

ಬೆಂಗಳೂರು, ಮೇ 29: ಸುಮಾರು 40ರಿಂದ 50 ಕೋಟಿ ರೂ ಮೌಲ್ಯದ ಕಾರಾಗೃಹ ಇಲಾಖೆಯ ಕಟ್ಟಡದ ಮೇಲೆ ಖದೀಮರು ಕಣ್ಣು ಹಾಕಿದ್ದಾರೆ. ಸ್ವತ್ತು ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಅಧೀನದಲ್ಲಿರುವ ಗಾಂಧಿನಗರದ 2ನೇ ಅಡ್ಡರಸ್ತೆಯಲ್ಲಿರುವ ಮೈಸೂರು ಡಿಸ್ಮಾರ್ಜ್ ಪ್ರಿಸನರ್ಸ್ ಏಡ್ ಸೊಸೈಟಿಯ ಆಸ್ತಿಯನ್ನು (Property) ಕಬ್ಜ ಮಾಡಲಾಗಿದೆ. ಈ ಬಗ್ಗೆ ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

ಮುಖ್ಯಾಂಶಗಳು

  • ಮೈಸೂರು ಕಾರಾಗೃಹ ಆಸ್ತಿ ಕಬ್ಜ: ಕೋಟಿ ರೂ. ಮೌಲ್ಯದ ಜಾಗದ ಮೇಲೆ ಖದೀಮರ ಕಣ್ಣು
  • ಖಾಸಗಿ ವ್ಯಕ್ತಿಗಳ ಮೇಲೆ ದೂರು, ಪೊಲೀಸರಿಂದ ನೋಟಿಸ್​
  • ಕೆಲಸ ಮಾಡಿಸಲು ಮುಂದಾದ ಸಮಯದಲ್ಲಿ ಅತಿಕ್ರಮಣ ಬೆಳಕಿಗೆ

ಖಾಸಗಿ ವ್ಯಕ್ತಿಗಳ ವಿರುದ್ಧ ದೂರು

ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಗೆ ಸೇರಿದ ಆಸ್ತಿಯನ್ನು ಖಾಸಗಿ ವ್ಯಕ್ತಿಗಳಾದ ಖಲಿಂ ಹಾಗೂ ಅನಿಲ್ ಎಂಬುವವರು ಕಳೆದ ಒಂದು ವರ್ಷದಿಂದಲೂ ಬಳಕೆ ಮಾಡುತ್ತಿದ್ದರು. ಶ್ರೀಶೈಲ್​​ ಎಸ್​ ಮೇಟಿ ಎಂಬುವವರು ಇಬ್ಬರ ವಿರುದ್ಧ ದೂರು ನೀಡಿದ್ದಾರೆ.

ಇದನ್ನೂ ಓದಿ: ಕೈದಿಗಳಿಗೆ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ

ಕಳೆದ ಒಂದು ವರ್ಷದಿಂದಲೂ ಕಾರಾಗೃಹ ಇಲಾಖೆಯ ಆಸ್ತಿಯನ್ನು ಅನುಮತಿ ಪಡೆಯದೇ ಕಟ್ಟಡದ ಒಂದನೇ ಮಹಡಿಯನ್ನು ಅನಿಲ್ ಅತಿಕ್ರಮಣ ಮಾಡಿದ್ದು, ಖಲಿಂ ಹಳೆಯ ಸಾಮಗ್ರಿಗಳನ್ನು ಕಾರಾಗೃಹ ಇಲಾಖೆಗೆ ಸೇರಿದ ಆಸ್ತಿಯಲ್ಲಿ ತಂದು ಹಾಕಿದ್ದಾನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಇಬ್ಬರಿಗೂ ನೋಟಿಸ್​​ ನೀಡಿರುವ ಪೊಲೀಸರು ವಿಚಾರಣೆಗೆ ಕರೆದಿದ್ದಾರೆ.

ಜಾಗ ಅತಿಕ್ರಮಣವಾಗಿದ್ದು ಗೊತ್ತಾಗಿದ್ದು ಹೇಗೆ?

ಜೈಲಿನಲ್ಲಿ ತಯಾರಾಗುವ ಬೇಕರಿ ತಿನಿಸುಗಳು ಹಾಗೂ ಬಟ್ಟೆ ವ್ಯಾಪಾರ ಮಳಿಗೆ ತೆರೆಯಲು ಕಾರಾಗೃಹ ಇಲಾಖೆ ಸಜ್ಜಾಗಿತ್ತು. ಹೀಗಾಗಿ ಕಟ್ಟಡ ಹಳೆಯದಾದ ಹಿನ್ನೆಲೆ ಹೊಸದಾಗಿ ಕಟ್ಟಡ ನಿರ್ಮಾಣ ಮಾಡಿ ಜೈಲು ಉತ್ಪನ್ನಗಳ ಮಾರಾಟ ಮಳಿಗೆ ತೆರೆಯಲು ಮುಂದಾಗಿದೆ. ಈ ವೇಳೆ ಅತಿಕ್ರಮಣ ಆಗಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಜೈಲುಗಳಲ್ಲಿ ಅಕ್ರಮ ಚಟುವಟಿಕೆ ತಡೆಗೆ ಅಲೋಕ್ ಕುಮಾರ್ ದಿಟ್ಟ ಕ್ರಮ: ಕೈದಿಗಳ ಭೇಟಿಗೆ ಹೊಸ ರೂಲ್ಸ್

ಇನ್ನು ಮೈಸೂರು ಮಹಾರಾಜರು ಕಾರಾಗೃಹ ಇಲಾಖೆಗೆ ಹತ್ತು ಸಾವಿರ ಚದರ ಅಡಿ ಜಾಗವನ್ನು ದಾನವಾಗಿ ಕೊಟ್ಟಿದ್ದಾರೆ. ಇಂದಿನ ಮಾರುಕಟ್ಟೆಯ ಬೆಲೆ ಪ್ರಕಾರ 40ರಿಂದ 50 ಕೋಟಿ ರೂ ಮೌಲ್ಯ ಎನ್ನಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಡಿಕೆ ಶಿವಕುಮಾರ್​​​​​​​ ಸಿಎಂ ಆಗಲು ಆಕೆಯೇ ಕಾರಣ! ಅವರ ಜೀವನದ ಅದೃಷ್ಟ ಲಕ್ಷ್ಮಿ ಎಂದ ಸುಧಾಕರ್

ಬೆಂಗಳೂರು, ಮೇ.29: ಚಿಕ್ಕಬಳ್ಳಾಪುರದ ಬಿಜೆಪಿ ಸಂಸದ ಡಾ. ಕೆ. ಸುಧಾಕರ್ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಭವಿಷ್ಯ ಮತ್ತು ಇತ್ತೀಚಿನ ವೈಯಕ್ತಿಕ ಘಟನೆಗಳ ಕುರಿತು ಮಾತನಾಡಿದ್ದಾರೆ. ಸಿದ್ದರಾಮಯ್ಯ ಅವರು ರಾಜ್ಯ ರಾಜಕಾರಣದಲ್ಲೇ ಮುಂದುವರಿಯುವ ನಿರ್ಧಾರ ಡಿ.ಕೆ. ಶಿವಕುಮಾರ್ ಅವರ ಆಡಳಿತಕ್ಕೆ ಒಂದು ರೀತಿಯಲ್ಲಿ ಎಚ್ಚರಿಕೆ ಗಂಟೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಡಾ. ಸುಧಾಕರ್ ಪ್ರಕಾರ, ಸಿದ್ದರಾಮಯ್ಯ ಅವರನ್ನು ಜೊತೆಗೆ ಕರೆದುಕೊಂಡು ಮುಂದಿನ ಎರಡು ವರ್ಷಗಳನ್ನು ಪೂರೈಸುವುದು ಮತ್ತು 2028ರ ಚುನಾವಣೆಯಲ್ಲಿ ಅವರ ಸಹಕಾರ ಪಡೆಯುವುದು ಡಿ.ಕೆ. ಶಿವಕುಮಾರ್ ಅವರಿಗೆ ದೊಡ್ಡ ಸವಾಲುಗಳು. ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರು ಎದುರಿಸಬೇಕಾದ ಒತ್ತಡಗಳ ಬಗ್ಗೆಯೂ ಅವರು ಉಲ್ಲೇಖಿಸಿದ್ದಾರೆ. ಅದೇ ಸಮಯದಲ್ಲಿ, ಡಿ.ಕೆ. ಶಿವಕುಮಾರ್ ಅವರ ಹೋರಾಟ ಮತ್ತು ದೃಢಸಂಕಲ್ಪವನ್ನು ಸುಧಾಕರ್ ಶ್ಲಾಘಿಸಿದ್ದಾರೆ. ಇತ್ತೀಚೆಗೆ ಎಸ್.ಎಂ. ಕೃಷ್ಣ ಅವರ ಹುಟ್ಟುಹಬ್ಬದಂದೇ ಡಿ.ಕೆ. ಶಿವಕುಮಾರ್ ಅವರ ಮೊಮ್ಮಗಳು ಜನಿಸಿರುವುದನ್ನು ಪ್ರಸ್ತಾಪಿಸಿದ ಸುಧಾಕರ್, ಈ ಘಟನೆ ಅವರಿಗೆ “ಅದೃಷ್ಟ ಲಕ್ಷ್ಮಿ” ಯನ್ನು ತಂದಿದೆ ಎಂದು ಹೇಳಿ, ಡಿ.ಕೆ. ಶಿವಕುಮಾರ್ ಅವರಿಗೆ ಶುಭ ಹಾರೈಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಅಪ್ಪನಿಗೆ ಚಿನ್ನದ ಉಂಗುರ ಉಡುಗೊರೆ ನೀಡಿದ ಪುಟ್ಟ ಬಾಲಕಿ; ಹೃದಯಸ್ಪರ್ಶಿ ವೀಡಿಯೊ ವೈರಲ್

ತನ್ನ ಯೂಟ್ಯೂಬ್‌ ಆದಾಯದ ಮೊದಲ ಸಂಪಾದನೆಯಿಂದ ತಂದೆಗೆ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡಿದ ಪುಟ್ಟ ಬಾಲಕಿಯ ಹೃದಯಸ್ಪರ್ಶಿ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿ ನೆಟ್ಟಿಗರ ಮನ ಗೆದ್ದಿದೆ. ವಿಡಿಯೊದಲ್ಲಿ ಮುದ್ದಾದ ಬಾಲಕಿ ತಂದೆಯ ಮುಂದೆ ಮಂಡಿಯೂರಿ ಪ್ರೀತಿಯಿಂದ ಉಂಗುರ ತೊಡಿಸುತ್ತಿರುವ ದೃಶ್ಯ ಎಲ್ಲರ ಗಮನ ಸೆಳೆಯುತ್ತದೆ. ಮಗಳ ಮುಖದಲ್ಲಿನ ಹೆಮ್ಮೆ ಮತ್ತು ಸಂತೋಷ ಸ್ಪಷ್ಟವಾಗಿ ಕಾಣುತ್ತಿದ್ದರೆ, ಆಕೆಯ ಈ ಅಮೂಲ್ಯ ಉಡುಗೊರೆಯನ್ನು ಕಂಡ ತಂದೆ ಭಾವುಕರಾಗಿ ಮಗಳ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವ ಕ್ಷಣ ನೋಡುಗರ ಕಣ್ಣೀರನ್ನು ತರಿಸುತ್ತದೆ. ಬಳಿಕ ತಂದೆಯ ಆಶೀರ್ವಾದ ಪಡೆದುಕೊಂಡ ಬಾಲಕಿ ಸಂತೋಷದಿಂದ ಸಣ್ಣದಾಗಿ ನೃತ್ಯ ಮಾಡುವ ದೃಶ್ಯ ವಿಡಿಯೊಗೆ ಇನ್ನಷ್ಟು ಮಧುರತೆಯನ್ನು ತುಂಬಿದೆ. ಮಗಳು-ತಂದೆಯ ನಡುವಿನ ಅಪಾರ ಪ್ರೀತಿ, ಕೃತಜ್ಞತೆ ಮತ್ತು ಬಾಂಧವ್ಯದ ಈ ಅಪೂರ್ವ ಕ್ಷಣವನ್ನು ಕಂಡ ನೆಟ್ಟಿಗರು ಭಾವುಕರಾಗಿ ಮೆಚ್ಚುಗೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕೊನೆಗೂ ಗೆದ್ದ ಸಲ್ಮಾನ್ ಖಾನ್? ‘ಮಾತೃಭೂಮಿ’ ಚಿತ್ರಕ್ಕೆ ಭರ್ಜರಿ ಪಾಸಿಟಿವ್ ವಿಮರ್ಶೆ

ಸಲ್ಮಾನ್ ಖಾನ್ ಅವರು ಇತ್ತೀಚೆಗೆ ಅದೆಷ್ಟು ಸೋಲುಗಳನ್ನು ಕಂಡರೋ. ಬಹುಶಃ ಅವರಿಗೂ ಅದರ ಲೆಕ್ಕ ತಪ್ಪಿ ಹೋಗಿರಬಹುದು. ಒಂದು ಕಾಲದಲ್ಲಿ ಬಾಲಿವುಡ್​​ನಲ್ಲಿ ದೊಡ್ಡ ಮಟ್ಟದಲ್ಲಿ ಪಾರುಪತ್ಯ ನಡೆಸಿದ್ದ ಅವರು, ಈಗ ಗೆಲ್ಲಲು ಹಾತೊರೆಯುತ್ತಿದ್ದಾರೆ. ಈಗ ಸಲ್ಮಾನ್ ಖಾನ್ ಅವರು ‘ಮಾತೃಭೂಮಿ’ ಸಿನಿಮಾ ಮೂಲಕ ದೊಡ್ಡ ಗೆಲುವು ಕಾಣುವ ನಿರೀಕ್ಷೆಯಲ್ಲಿ ಇದ್ದಾರೆ. ಹೀಗಿರುವಾಗಲೇ ಸಿನಿಮಾಗೆ ಪಾಸಿಟಿವ್ ವಿಮರ್ಶೆ ಸಿಕ್ಕಿದೆ.

‘ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್​’ ಅನ್ನೋದು ಸಿನಿಮಾದ ಹೆಸರು. ಈ ಚಿತ್ರವನ್ನು ಅಪೂರ್ವ ಲಖಿಯಾ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿರುವಾಗಲೇ ಸಲ್ಮಾನ್ ಖಾನ್ ಆಪ್ತ ಬಳಗದವರು ಚಿತ್ರವನ್ನು ವೀಕ್ಷಣೆ ಮಾಡಿದ್ದಾರೆ.

ನಿರ್ದೇಶಕ ಸುಭಾಷ್ ಘಾಯ್, ಕಬೀರ್ ಖಾನ್, ರಿತೇಶ್ ದೇಶ್​ಮುಖ್, ಸಲ್ಮಾನ್ ಖಾನ್ ಸೇರಿದಂತೆ ಅನೇಕರು ಸಿನಿಮಾ ವೀಕ್ಷಣೆ ಮಾಡಿದ್ದಾರೆ. ನಿರ್ಮಾಪಕ ಸಿದ್ಧಾರ್ಥ್ ರಾಯ್ ಕಪೂರ್ ಕೂಡ ಸಿನಿಮಾ ಪ್ರದರ್ಶನದ ವೇಳೆ ಇದ್ದರು. ಈ ಸಿನಿಮಾ ನೋಡಿದ ಬಳಿಕ ಸುಭಾಷ್ ಅವರು ತಮ್ಮ ವಿಮರ್ಶೆ ತಿಳಿಸಿದ್ದಾರೆ.

‘ನನ್ನ ನೆಚ್ಚಿನ ನಿರ್ದೇಶಕರೆಲ್ಲರೂ ಇಂದು ಫುಡ್ ಸ್ಕ್ವೇರ್​ನಲ್ಲಿ ಒಂದಾಗಿ, ಅಪೂರ್ವ ಲಖಿಯಾ ಅವರ ‘ಮಾತೃಭೂಮಿ’ ಚಿತ್ರದ ಪ್ರಾಥಮಿಕ ಆವೃತ್ತಿ ವೀಕ್ಷಿಸಿದೆವು. ಸಿನಿಮಾ ಅದ್ಭುತವಾಗಿದೆ. ಭಾರತ ಮತ್ತು ಚೀನಾದ ಸೈನಿಕರು ತಮ್ಮ ದೇಶ ಹಾಗೂ ಕುಟುಂಬಗಳ ಮೇಲಿಟ್ಟಿರುವ ಶಾಂತಿ-ಗೌರವದ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಚಿತ್ರಾಂಗದಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ’ ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ರಣವೀರ್ ಸಿಂಗ್‌, ಫರ್ಹಾನ್ ಅಖ್ತರ್ ನಡುವಿನ ಜಗಳ ಬಿಡಿಸಲು ಸಲ್ಮಾನ್ ಖಾನ್ ಎಂಟ್ರಿ?

ಸಿನಿಮಾದ ಕಥಾವಸ್ತು ಬದಲಾವಣೆ ಹಾಗೂ ಚಿತ್ರ ಪದೇ ಪದೇ ತಡವಾಗುತ್ತಿರುವ ಬಗ್ಗೆ ಅನೇಕರು ಟೀಕೆ ಹೊರಹಾಕಿದ್ದರು. ಹೀಗಿರುವಾಗಲೇ ಸಿನಿಮಾ ಬಗ್ಗೆ ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ಸಲ್ಮಾನ್ ಖಾನ್ ಚಿತ್ರಕ್ಕೆ ದೊಡ್ಡ ಶಕ್ತಿ ನೀಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ArivuPro Academy: ಸಿಎ, ಎಸಿಸಿಎ ಸೇರಿದಂತೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕೋರ್ಸ್​ಗಳಿಗೆ ಗುಣಮಟ್ಟದ ತರಬೇತಿ ನೀಡುವ ಅರಿವುಪ್ರೋ

ಅರಿವುಪ್ರೋ ಅಕಾಡೆಮಿ ವಿದ್ಯಾರ್ಥಿಗಳುImage Credit source: Arivupro Academy

ಇಂದಿನ ತೀವ್ರ ಸ್ಪರ್ಧಾತ್ಮಕ ಶೈಕ್ಷಣಿಕ ವಲಯದಲ್ಲಿ, ವಿದ್ಯಾರ್ಥಿಗಳು ಕೇವಲ ಸಾಂಪ್ರದಾಯಿಕ ಪದವಿಗಳಿಗಷ್ಟೇ ಸೀಮಿತವಾಗದೆ ಕೌಶಲ್ಯಾಧಾರಿತ ಕಲಿಕೆ, ಜಾಗತಿಕ ಮನ್ನಣೆ ಹೊಂದಿರುವ ಕೋರ್ಸ್‌ಗಳು ಮತ್ತು ಉತ್ತಮ ವೃತ್ತಿಜೀವನದ ಅವಕಾಶಗಳ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಈ ಬದಲಾವಣೆಯನ್ನು ಮನಗಂಡಿರುವ ‘ಅರಿವುಪ್ರೋ ಅಕಾಡೆಮಿ’ (ArivuPro Academy), ಹಣಕಾಸು (Finance) ಮತ್ತು ಅಕೌಂಟಿಂಗ್ ಕ್ಷೇತ್ರಗಳಲ್ಲಿ ಯಶಸ್ವಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಸಾವಿರಾರು ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಪ್ರಮುಖ ವೃತ್ತಿಪರ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಿದೆ.

ದಕ್ಷಿಣ ಭಾರತದಾದ್ಯಂತ ವಿದ್ಯಾರ್ಥಿಗಳ ನೆಚ್ಚಿನ ತಾಣವಾಗಿರುವ ಅರಿವುಪ್ರೋ ಅಕಾಡೆಮಿಯು (arivupro.com/) CA, CS, CMA, ACCA, US CMA, CPA, CFA, FRM ಮತ್ತು CIA ನಂತಹ ಪ್ರತಿಷ್ಠಿತ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವೃತ್ತಿಪರ ಕೋರ್ಸ್‌ಗಳಿಗೆ ಸಮಗ್ರ ತರಬೇತಿಯನ್ನು ನೀಡುತ್ತಿದೆ.

ಅರಿವುಪ್ರೋ ಅಕಾಡೆಮಿ ವಿದ್ಯಾರ್ಥಿಗಳು

ವೃತ್ತಿ ಕೇಂದ್ರಿತ ಕಲಿಕೆಗೆ ಆದ್ಯತೆ

ಸಾಂಪ್ರದಾಯಿಕ ಕೋಚಿಂಗ್ ಸೆಂಟರ್‌ಗಳಿಗಿಂತ ಭಿನ್ನವಾಗಿ, ಅರಿವುಪ್ರೋ ಅಕಾಡೆಮಿಯು ವಿದ್ಯಾರ್ಥಿಗಳ ವೃತ್ತಿಜೀವನದ ಬೆಳವಣಿಗೆ ಮತ್ತು ಉದ್ಯಮಕ್ಕೆ ಅಗತ್ಯವಿರುವ ಸಿದ್ಧತೆಗಳಿಗೆ ಹೆಚ್ಚಿನ ಒತ್ತು ನೀಡುತ್ತದೆ. ಪ್ರತಿ ವಿದ್ಯಾರ್ಥಿಯ ಸಾಮರ್ಥ್ಯವನ್ನು ಗುರುತಿಸಿ, ಅವರ ವೃತ್ತಿಪರ ಗುರಿಗಳಿಗೆ ಅನುಗುಣವಾಗಿ ವೈಯಕ್ತಿಕ ಮಾರ್ಗದರ್ಶನವನ್ನು ಇಲ್ಲಿ ನೀಡಲಾಗುತ್ತದೆ. ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಫೈನಾನ್ಸ್ ಮತ್ತು ಅಕೌಂಟಿಂಗ್ ವೃತ್ತಿಪರರಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ, ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ, ಉದ್ಯಮದ ಪರಿಚಯ ಮತ್ತು ಪರೀಕ್ಷಾ ಕೇಂದ್ರಿತ ತರಬೇತಿಯನ್ನು ನೀಡುವ ಮೂಲಕ ಅವರ ಉದ್ಯೋಗಾವಕಾಶಗಳನ್ನು ಸಂಸ್ಥೆಯು ಹೆಚ್ಚಿಸುತ್ತಿದೆ.

‘ಅರಿವುಪ್ರೋ ಒನ್’ ಸಮಗ್ರ ಕಲಿಕಾ ವೇದಿಕೆ

ವೃತ್ತಿಪರ ಶಿಕ್ಷಣವನ್ನು ಹೆಚ್ಚು ಸುಲಭ ಮತ್ತು ಪರಿಣಾಮಕಾರಿಯಾಗಿಸಲು, ಅಕಾಡೆಮಿಯು ‘ಅರಿವುಪ್ರೋ ಒನ್’ (ArivuPro One) ಎಂಬ ಸಂಯೋಜಿತ ಡಿಜಿಟಲ್ ಲರ್ನಿಂಗ್ ಪ್ಲಾಟ್​ಫಾರ್ಮ್ ಪರಿಚಯಿಸಿದೆ. ಈ ಒಂದೇ ವೇದಿಕೆಯಡಿ ವಿದ್ಯಾರ್ಥಿಗಳಿಗೆ ಈ ಕೆಳಗಿನ ಸೌಲಭ್ಯಗಳು ಲಭ್ಯವಿವೆ:

  • ಲೈವ್ (Live) ಕ್ಲಾಸ್​ಗಳು ಮತ್ತು ರೆಕಾರ್ಡೆಡ್ ಕ್ಲಾಸ್​ಗಳು
  • ಸಂಶಯ ನಿವಾರಣೆಗಾಗಿ ಪ್ರತ್ಯೇಕ ಸೆಷನ್‌ಗಳು.
  • ಮಾದರಿ ಪರೀಕ್ಷೆಗಳು (Mock Tests) ಮತ್ತು ಕಾರ್ಯಕ್ಷಮತೆಯ ವಿಶ್ಲೇಷಣೆ.
  • ವೈಯಕ್ತಿಕ ಮಾರ್ಗದರ್ಶನ (Mentorship) ಮತ್ತು ಪ್ರಗತಿ ಟ್ರ್ಯಾಕಿಂಗ್.
  • ವೃತ್ತಿಜೀವನದ ಮಾರ್ಗದರ್ಶನ ಮತ್ತು ಬೆಂಬಲ.

ಅರಿವುಪ್ರೋ ಅಕಾಡೆಮಿಯ ಸಾಧಕ ವಿದ್ಯಾರ್ಥಿಗಳು

ಪದವಿ ಮತ್ತು ವೃತ್ತಿಪರ ಕೋರ್ಸ್‌ಗಳ ಸಮನ್ವಯ

ಅರಿವುಪ್ರೋ ಅಕಾಡೆಮಿಯು ವಿದ್ಯಾರ್ಥಿಗಳಿಗೆ ತಮ್ಮ ಪದವಿ ಶಿಕ್ಷಣದ ಜೊತೆಯಲ್ಲೇ ವೃತ್ತಿಪರ ಅರ್ಹತೆಗಳನ್ನು ಪಡೆಯಲು ನೆರವಾಗುವ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದೆ. ವಿದ್ಯಾರ್ಥಿಗಳು ಆನ್‌ಲೈನ್ ಬಿ.ಕಾಂ (Online BCom) ಪದವಿಯೊಂದಿಗೆ ಸಿಎ, ಸಿಎಸ್, ಸಿಎಂಎ, ಎಸಿಸಿಎ, ಯುಎಸ್ ಸಿಎಂಎ, ಇಎ, ಸಿಐಎ ಮತ್ತು ಎಫ್‌ಆರ್‌ಎಂ ನಂತಹ ವೃತ್ತಿಪರ ಕೋರ್ಸ್‌ಗಳನ್ನು ಒಟ್ಟಿಗೇ ಕಲಿಯಬಹುದು. ಈ ವಿನ್ಯಾಸವು ವಿದ್ಯಾರ್ಥಿಗಳು ಪದವಿ ಮತ್ತು ವೃತ್ತಿಪರ ಪರೀಕ್ಷೆಗಳೆರಡನ್ನೂ ಸಮರ್ಥವಾಗಿ ಬ್ಯಾಲೆನ್ಸ್ ಮಾಡಲು ಮತ್ತು ವೃತ್ತಿಜೀವನದಲ್ಲಿ ವೇಗವಾಗಿ ಮುನ್ನಡೆಯಲು ಸಹಕಾರಿಯಾಗಿದೆ.

ಅನುಭವಿ ತಜ್ಞರ ಮಾರ್ಗದರ್ಶನ

ಉದ್ಯಮದ ಪರಿಣಿತರು ಮತ್ತು ಅರ್ಹ ವೃತ್ತಿಪರರನ್ನೊಳಗೊಂಡ ಬೋಧಕ ಮಂಡಳಿಯು ಅರಿವುಪ್ರೋ ಅಕಾಡೆಮಿಯ ಪ್ರಮುಖ ಶಕ್ತಿಯಾಗಿದೆ. ಕೇವಲ ತರಗತಿಯ ಬೋಧನೆಗಷ್ಟೇ ಸೀಮಿತವಾಗದೆ, ಪರೀಕ್ಷಾ ತಂತ್ರಗಳು, ಸಮಯ ನಿರ್ವಹಣೆ, ವೃತ್ತಿ ಯೋಜನೆ ಮತ್ತು ಉದ್ಯಮದ ನಿರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಮಾರ್ಗದರ್ಶನ ನೀಡಲಾಗುತ್ತದೆ. ಈ ಯಶಸ್ವಿ ಮೆಂಟರ್‌ಶಿಪ್ ಮಾದರಿಯೇ ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕೆ ಕಾರಣವಾಗಿದೆ.

ಅರಿವುಪ್ರೋ ಅಕಾಡೆಮಿಯ ಕ್ಲಾಸ್​ರೂಂ

ದಕ್ಷಿಣ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಬ್ರ್ಯಾಂಡ್

ಬೆಂಗಳೂರು, ಚೆನ್ನೈ ಮತ್ತು ಕೊಯಮತ್ತೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ತನ್ನ ಶಾಖೆಗಳನ್ನು ವಿಸ್ತರಿಸಿರುವ ಅರಿವುಪ್ರೋ, ಸಾವಿರಾರು ವಿದ್ಯಾರ್ಥಿಗಳ ವಿಶ್ವಾಸ ಗಳಿಸಿದೆ. ಸಂಸ್ಥೆಯು ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ಮಾದರಿಗಳಲ್ಲಿ ತರಬೇತಿ ನೀಡುತ್ತಿದ್ದು, ದೇಶದ ಯಾವುದೇ ಮೂಲೆಯ ವಿದ್ಯಾರ್ಥಿಗಳಿಗೂ ಗುಣಮಟ್ಟದ ವೃತ್ತಿಪರ ಶಿಕ್ಷಣ ಲಭ್ಯವಾಗುವಂತೆ ಮಾಡಿದೆ.

ಶಿಕ್ಷಣವು ಕೇವಲ ಪರೀಕ್ಷೆಗಳನ್ನು ಪಾಸು ಮಾಡುವುದಕ್ಕೆ ಮಾತ್ರ ಸೀಮಿತವಾಗಿರದೆ, ದೀರ್ಘಕಾಲೀನ ಯಶಸ್ವಿ ವೃತ್ತಿಜೀವನಕ್ಕೆ ನಾಂದಿಯಾಗಬೇಕು ಎಂದು ನಂಬಿರುವ ಅರಿವುಪ್ರೋ ಅಕಾಡೆಮಿಯು ಭಾರತದಲ್ಲಿ ವೃತ್ತಿಪರ ಶಿಕ್ಷಣದ ಭವಿಷ್ಯವನ್ನು ರೂಪಿಸುತ್ತಿದೆ.

ಅರಿವುಪ್ರೋ ಅಕಾಡೆಮಿ ಸಿಬ್ಬಂದಿಯ ಎಐ ಸೃಷ್ಟಿತ ಚಿತ್ರ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

  • ಅಧಿಕೃತ ವೆಬ್‌ಸೈಟ್: ಅರಿವುಪ್ರೋ ಅಕಾಡೆಮಿಯ ಅಧಿಕೃತ ವೆಬ್‌ಸೈಟ್‌ಗೆ (www.arivupro.com/) ಭೇಟಿ ನೀಡಿ ಅಥವಾ ಹತ್ತಿರದ ಶಾಖೆಯನ್ನು ಸಂಪರ್ಕಿಸಬಹುದು.
  • ಫೋನ್ ಸಂಖ್ಯೆ: +91 9686665253
  • ಇಮೇಲ್: help@arivupro.com

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಆಪ್ತರನ್ನೇ ಅನ್​ಫಾಲೋ ಮಾಡಿದ್ದಕ್ಕೆ ಕಾರಣ ತಿಳಿಸಿದ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್

ಬಾಲಿವುಡ್‌ನ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹರ್ (Karan Johar) ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ದಿಢೀರನೆ ಚಿತ್ರರಂಗದ ಹಲವು ಸ್ಟಾರ್‌ ನಟ-ನಟಿಯರು ಹಾಗೂ ಆಪ್ತ ಸ್ನೇಹಿತರನ್ನು ಅನ್‌ಫಾಲೋ (Unfollow) ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದರು. ಇದೀಗ ಈ ಎಲ್ಲಾ ಚರ್ಚೆಗಳಿಗೆ ಸ್ವತಃ ಕರಣ್ ಜೋಹರ್ ಅವರೇ ತೆರೆ ಎಳೆದಿದ್ದು, ತಮ್ಮ ಈ ನಡೆಗೆ ಅಸಲಿ ಕಾರಣವನ್ನು ಸ್ಪಷ್ಟಪಡಿಸಿದ್ದಾರೆ. ಗುರುವಾರ (ಮೇ 28) ಕರಣ್ ಜೋಹರ್ ಅವರು ಇನ್‌ಸ್ಟಾಗ್ರಾಮ್ ಫಾಲೋಯಿಂಗ್ ಲಿಸ್ಟ್‌ನಿಂದ ಶಾರುಖ್ ಖಾನ್ (Shah Rukh Khan), ಕರೀನಾ ಕಪೂರ್, ಮಲೈಕಾ ಅರೋರಾ, ಕಾರ್ತಿಕ್ ಆರ್ಯನ್, ಅನನ್ಯಾ ಪಾಂಡೆ ಮತ್ತು ತಮ್ಮ ದಶಕಗಳ ಆಪ್ತ ಸ್ನೇಹಿತ-ವಸ್ತ್ರವಿನ್ಯಾಸಕ ಮನೀಶ್ ಮಲ್ಹೋತ್ರಾ ಸೇರಿದಂತೆ ಹಲವರನ್ನು ತೆಗೆದುಹಾಕಿದ್ದರು.

ಅಷ್ಟೇ ಅಲ್ಲದೆ, ತಮ್ಮದೇ ಗರಡಿಯಲ್ಲಿ ಬೆಳೆದ ಆಲಿಯಾ ಭಟ್, ವರುಣ್ ಧವನ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರನ್ನೂ ಸಹ ಅವರು ಅನ್‌ಫಾಲೋ ಮಾಡಿದ್ದರು. ಆದರೆ, ಈ ಪಟ್ಟಿಯಲ್ಲಿ ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಅವರ ಹೆಸರು ಮಾತ್ರ ಇನ್ನೂ ಹಾಗೇ ಉಳಿದಿರುವುದು ನೆಟ್ಟಿಗರ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಸದ್ಯ ಕರಣ್ ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೇವಲ 78 ಜನರನ್ನು ಮಾತ್ರ ಫಾಲೋ ಮಾಡುತ್ತಿರುವುದು ಕಾಣಿಸುತ್ತಿದೆ.

ಬಾಲಿವುಡ್ ವಲಯದಲ್ಲಿ ಈ ಅನ್‌ಫಾಲೋ ಸಂಗತಿ ಬಗ್ಗೆ ನಾನಾ ರೀತಿಯ ವದಂತಿಗಳು ಮತ್ತು ಗಾಸಿಪ್‌ಗಳು ಹರಡಲಾರಂಭಿಸಿದವು. ಚಿತ್ರರಂಗದ ಆಪ್ತರ ನಡುವೆ ಏನಾದರೂ ಬಿರುಕು ಮೂಡಿದೆಯೇ ಎಂಬ ಚರ್ಚೆಗಳೂ ನಡೆದವು. ಈ ಎಲ್ಲಾ ಗೊಂದಲಗಳಿಗೆ ಗುರುವಾರ ರಾತ್ರಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಕರಣ್ ಜೋಹರ್ ನೇರ ಉತ್ತರ ನೀಡಿದ್ದಾರೆ.

‘ಇದು ಕೇವಲ ಡಿಜಿಟಲ್ ಡಿಟಾಕ್ಸ್ ಅಷ್ಟೇ! ಸೋಶಿಯಲ್ ಮೀಡಿಯಾದಲ್ಲಿ ನನ್ನ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡುವುದನ್ನು ಕಡಿಮೆ ಮಾಡಿಕೊಳ್ಳಲು ನಾನು ಎಲ್ಲರನ್ನೂ ಅನ್‌ಫಾಲೋ ಮಾಡುತ್ತಿದ್ದೇನೆ’ ಎಂದು ಕರಣ್ ಜೋಹರ್ ಅವರು ಸ್ಪಷ್ಟನೆ ನೀಡಿದ್ದಾರೆ. ತಮ್ಮ ವೈಯಕ್ತಿಕ ನಿರ್ಧಾರವನ್ನು ಮಾಧ್ಯಮಗಳು ದೊಡ್ಡ ಸುದ್ದಿಯನ್ನಾಗಿ ಮಾಡುತ್ತಿರುವುದಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬದಲಾದ ಕರಣ್ ಜೋಹರ್; ಬಾಲಿವುಡ್ ನೆಪೋ ಕಿಡ್ಸ್ ಕಳ್ಳಾಟ ಬಯಲು ಮಾಡಿದ ನಿರ್ಮಾಪಕ

‘ದಯವಿಟ್ಟು ಇದನ್ನು ರಾಷ್ಟ್ರೀಯ ಸುದ್ದಿ ಮಾಡಬೇಡಿ. ಜನರನ್ನು ಸೆಳೆಯಲು ಬೇರೆ ಯಾವುದಾದರೂ ವಿಷಯ ಹುಡುಕಿಕೊಳ್ಳಿ! ಇದು ತೀರಾ ಅಪ್ರಸ್ತುತವಾದ ವಿಚಾರ’ ಎಂದು ಕರಣ್ ಜೋಹರ್ ಅವರು ಟೀಕೆ ಮಾಡಿದ್ದಾರೆ. ಅನ್‌ಫಾಲೋ ಮಾಡಿದ್ದರ ಹಿಂದೆ ಯಾವುದೇ ವೈಯಕ್ತಿಕ ದ್ವೇಷ ಅಥವಾ ಮುನಿಸು ಇಲ್ಲ ಎಂಬುದು ಈ ಸ್ಪಷ್ಟನೆಯಿಂದ ತಿಳಿದಂತಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಎಸ್ಟೇಟ್​​​ನಲ್ಲಿ ಬೀಡುಬಿಟ್ಟ ಕಾಡಾನೆಗಳ ಹಿಂಡು: ಗಜಪಡೆ ಕಂಡು ಸಾರ್ವಜನಿಕರು ಕಂಗಾಲು

ಚಿಕ್ಕಮಗಳೂರು, ಮೇ 29: ಜಿಲ್ಲೆಯಲ್ಲಿ ಕಾಡಾನೆ ಉಪಟಳ ಮುಂದುವರಿದಿದ್ದು, ಕಡವಂತಿಯ ವಡ್ಡಿಗುಡ್ಡ ಎಸ್ಟೇಟ್​ನಲ್ಲಿ ಗಜಪಡೆ ಪ್ರತ್ಯಕ್ಷವಾಗಿದೆ. ಕಡವಂತಿ, ಬಿಳಗೊಳ, ಹ್ಯಾರಂಬಿಪುರ, ಪುರ, ಮಲ್ಲಿಗೆಖಾನ್, ಬೇರಣಗೋಡು ಸುತ್ತಮುತ್ತವೇ ಕಾಡಾನೆಗಳು ಸಂಚಾರ ಮಾಡುತ್ತಿದ್ದು, ಇವುಗಳ ಹಾವಳಿ ತಡೆಗಟ್ಟುವಂತೆ ಸ್ಥಳೀಯ ನಿವಾಸಿಗಳು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಬಾಳೆಹೊನ್ನೂರು ವಲಯ ಅರಣ್ಯ ವ್ಯಾಪ್ತಿಯಲ್ಲಿ ಆನೆಗಳು ಜನವಸತಿ ಪ್ರದೇಶಗಳ ಸಮೀಪವೇ ಪ್ರತ್ಯಕ್ಷವಾಗ್ತಿರೋದು ಸಾರ್ವಜನಿಕರ ಆತಂಕ ಹೆಚ್ಚಿಸಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version