ದೇವರು ವರ-ಶಾಪ ನೀಡಲ್ಲ, ಅವಕಾಶ ಕೊಡ್ತಾನೆ: ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಭಾವುಕ ಪೋಸ್ಟ್

ಡಿಕೆ ಶಿವಕುಮಾರ್ & ಸಿದ್ದರಾಮಯ್ಯImage Credit source: tv9

ಬೆಂಗಳೂರು, ಮೇ 29: ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ (Siddaramaiah) ರಾಜೀನಾಮೆ ನೀಡಿದ ಬೆನ್ನಲ್ಲೇ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಎಕ್ಸ್ (ಟ್ವಿಟರ್) ಖಾತೆಯಲ್ಲಿ ಅತ್ಯಂತ ಭಾವುಕ ಮತ್ತು ಗೌರವಪೂರ್ವಕ ಸಂದೇಶ ಹಂಚಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರ ಐದು ದಶಕಗಳ ರಾಜಕೀಯ ಸೌಹಾರ್ದತೆ, ಹೋರಾಟದ ಹಾದಿ ಮತ್ತು ಜನಪರ ಆಡಳಿತವನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಡಿಕೆ ಶಿವಕುಮಾರ್, ‘ವೇಗವಾಗಿ ನಡೆಯಬೇಕೆಂದರೆ ಒಬ್ಬನೇ ನಡೆಯಬೇಕು, ಸುದೀರ್ಘ ದೂರ ಸಾಗಬೇಕೆಂದರೆ ಜೊತೆಯಾಗಿ ನಡೆಯಬೇಕು’ ಎಂಬ ಗಾದೆಯೊಂದಿಗೆ ಕರುನಾಡಿನ ಪ್ರಗತಿಗಾಗಿ ಸಿದ್ದರಾಮಯ್ಯ ಜತೆ ಒಟ್ಟಾಗಿ ಸಾಗುವ ಬಗ್ಗೆ ಪುನರುಚ್ಚರಿಸಿದ್ದಾರೆ.

ಮುಖ್ಯಾಂಶಗಳು

  • ಸಿದ್ದರಾಮಯ್ಯ ರಾಜಕೀಯ ಯಾನ ಯುವ ಪೀಳಿಗೆಗೆ ಮಾದರಿ ಎಂದು ಬಣ್ಣಿಸಿದ ಡಿಕೆಶಿ.
  • 2020ರಲ್ಲಿ ತಾವು ಕೆಪಿಸಿಸಿ ಅಧ್ಯಕ್ಷರಾದಾಗಿನಿಂದ ಇಂದಿನವರೆಗೂ ಸಿದ್ದರಾಮಯ್ಯ ಅವರು ತಮಗೆ ಭದ್ರವಾದ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಕೃತಜ್ಞತೆ ಸಲ್ಲಿಕೆ.
  • ಸಿದ್ದರಾಮಯ್ಯ ಹಿರಿಯ ಅನುಭವ ಮತ್ತು ಮಾರ್ಗದರ್ಶನ ಅತ್ಯಗತ್ಯ ಎಂದ ಡಿಸಿಎಂ

ಡಿಕೆ ಶಿವಕುಮಾರ್ ಎಕ್ಸ್ ಸಂದೇಶದಲ್ಲೇನಿದೆ?

‘ದೇವರು ವರ ಅಥವಾ ಶಾಪ ನೀಡುವುದಿಲ್ಲ, ಆತ ಕೇವಲ ಅವಕಾಶಗಳನ್ನು ಮಾತ್ರ ನೀಡುತ್ತಾನೆ. ಆ ಸಿಕ್ಕ ಅವಕಾಶದಲ್ಲಿ ನಾವು ಏನನ್ನು ಸಾಧಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ. ಈ ಆಲೋಚನೆಗೆ ನಮ್ಮ ಸಿದ್ದರಾಮಯ್ಯ ಅವರ ಜೀವನವೇ ಅತ್ಯುತ್ತಮ ಉದಾಹರಣೆ. ಮೈಸೂರು ಜಿಲ್ಲೆಯ ಸಣ್ಣ ಹಳ್ಳಿಯೊಂದರಲ್ಲಿ ಹುಟ್ಟಿ-ಬೆಳೆದು, ಸತತ ಹೋರಾಟಗಳ ಮೂಲಕ ರಾಜಕೀಯ ಪ್ರವೇಶಿಸಿ, ಸಾಮಾಜಿಕ ನ್ಯಾಯದ ಹರಿಕಾರರಾಗಿ ಹಾಗೂ ಬಡವರ ಬಂಧುವಾಗಿ ಕರ್ನಾಟಕದ ಮುಖ್ಯಮಂತ್ರಿಯಾದವರು ನನ್ನ ಆತ್ಮೀಯ ಶ್ರೇಯೋಭಿಲಾಷಿ ಸಿದ್ದರಾಮಯ್ಯನವರು’ ಎಂದು ಡಿಕೆ ಶಿವಕುಮಾರ್ ಉಲ್ಲೇಖಿಸಿದ್ದಾರೆ.

ಡಿಕೆ ಶಿವಕುಮಾರ್ ಎಕ್ಸ್ ಸಂದೇಶ

‘ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ಯಶಸ್ವಿ, ಪ್ರಭಾವಶಾಲಿ ಮತ್ತು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವ ದೀರ್ಘಾವಧಿ ಮುಖ್ಯಮಂತ್ರಿಯಾಗಿ ಅವರು ಮೈಲಿಗಲ್ಲು ಸ್ಥಾಪಿಸಿದ್ದಾರೆ. ಅವರ ಜನಕೇಂದ್ರಿತ ಯೋಜನೆಗಳು ಮತ್ತು ರಾಜ್ಯದ ವಿವಿಧ ವಲಯಗಳ ಅಭಿವೃದ್ಧಿಗೆ ನೀಡಿದ ಕೊಡುಗೆಗಳು ಎಂದಿಗೂ ಮರೆಯಲಾಗದವು. ಸುಮಾರು 50 ವರ್ಷಗಳ ಅವರ ಸುದೀರ್ಘ ರಾಜಕೀಯ ಅನುಭವ ಮತ್ತು ಸಾಮಾಜಿಕ ಕಾಳಜಿ ಸದಾ ಸ್ಮರಣೀಯ. 2020ರಲ್ಲಿ ನಾನು ಕೆಪಿಸಿಸಿ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ಇಂದಿನವರೆಗೂ ಸಿದ್ದರಾಮಯ್ಯ ಅವರು ನನ್ನ ಹೆಗಲಿಗೆ ಹೆಗಲು ಕೊಟ್ಟು ಪಕ್ಷ ಸಂಘಟನೆಯಲ್ಲಿ ಭದ್ರ ಸ್ತಂಭದಂತೆ ಜೊತೆಯಾಗಿ ನಿಂತಿದ್ದಾರೆ’ ಎಂದು ಡಿಕೆಶಿ ಬರೆದಿದ್ದಾರೆ.

‘ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಸಚಿವನಾಗಿ ಹಾಗೂ ಉಪಮುಖ್ಯಮಂತ್ರಿಯಾಗಿ ಅವರ ಅನುಭವ, ಬುದ್ಧಿವಂತಿಕೆ ಮತ್ತು ರಾಜಕೀಯ ದೂರದೃಷ್ಟಿಯಿಂದ ನಿರಂತರವಾಗಿ ಕಲಿಯುವ ಸೌಭಾಗ್ಯ ನನ್ನದಾಗಿತ್ತು. ಮುಂಬರುವ ದಿನಗಳಲ್ಲೂ ರಾಜ್ಯದ ಕಲ್ಯಾಣಕ್ಕಾಗಿ ಮತ್ತು ನಮ್ಮ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಅವರ ಹಿರಿಯ ಅನುಭವದ ಮಾರ್ಗದರ್ಶನ ಮತ್ತು ಬೆಂಬಲ ನಮಗೆ ಹೀಗೆಯೇ ಮುಂದುವರಿಯುತ್ತದೆ ಎಂದು ನಾನು ಪ್ರಾಮಾಣಿಕವಾಗಿ ಆಶಿಸುತ್ತೇನೆ. ವೇಗವಾಗಿ ನಡೆಯಬೇಕಾದರೆ ಒಬ್ಬನೇ ನಡೆಯಬೇಕು, ಸುದೀರ್ಘ ದೂರ ಸಾಗಬೇಕಾದರೆ ಜೊತೆಯಾಗಿ ನಡೆಯಬೇಕು ಎಂಬ ನಾಣ್ಣುಡಿಯಂತೆ, ಕರ್ನಾಟಕದ ಜನರ ಸೇವೆಗಾಗಿ ಮತ್ತು ರಾಜ್ಯದ ಪ್ರಗತಿಗಾಗಿ ನಾವೆಲ್ಲರೂ ಒಟ್ಟಾಗಿ ಮುನ್ನಡೆಯೋಣ ಎಂದು ಡಿಕೆ ಶಿವಕುಮಾರ್ ತಮ್ಮ ಎಕ್ಸ್ ಸಂದೇಶದಲ್ಲಿ ಬರೆದುಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬರುತ್ತಿದೆ ಸಿಎಂ ವಿಜಯ್ ಪುತ್ರನ ಮೊದಲ ಸಿನಿಮಾ, ಬಿಡುಗಡೆ ದಿನಾಂಕ ಘೋಷಣೆ

ತಮಿಳು ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್ (Thalapathy Vijay) ಈಗ ಸಿಎಂ ಆಗಿದ್ದಾರೆ. ಚಿತ್ರರಂಗಕ್ಕೆ ವಿದಾಯ ಹೇಳಿದ್ದಾರೆ. ವಿಜಯ್ ಅವರ ಸ್ಥಾನವನ್ನು ತುಂಬಬಲ್ಲ ನಟ ಯಾರು ಎಂಬ ಚರ್ಚೆ ಶುರುವಾಗಿದೆ. ಇದೆಲ್ಲದರ ನಡುವೆ ಸಿಎಂ ವಿಜಯ್ ಅವರ ಪುತ್ರನ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಸಿನಿಮಾದ ಬಿಡುಗಡೆ ದಿನಾಂಕವನ್ನು ಸಹ ಘೋಷಣೆ ಮಾಡಲಾಗಿದೆ. ಕೂಡಲೇ ಸಿನಿಮಾದ ಟ್ರೈಲರ್ ಸಹ ಬಿಡುಗಡೆ ಆಗಲಿದೆ.

ವಿಜಯ್ ಅವರ ಪುತ್ರ ಜೇಸನ್ ಸಂಜಯ್ ತಮಿಳು ಚಿತ್ರರಂಗದ ಪ್ರವೇಶಿಸಿದ್ದಾರೆ ಆದರೆ ನಟನಾಗಿ ಅಲ್ಲ ಬದಲಿಗೆ ನಿರ್ದೇಶಕನಾಗಿ. ಜೇಸನ್ ಸಂಜಯ್ ನಿರ್ದೇಶನ ಮಾಡಿರುವ ಮೊದಲ ಸಿನಿಮಾ ಇದೀಗ ಬಿಡುಗಡೆಗೆ ರೆಡಿಯಾಗಿದೆ. ಜೇಸನ್ ಅವರು ಸಂದೀಪ್ ಕೃಷ್ಣ ಅವರನ್ನು ನಾಯಕನನ್ನಾಗಿ ಹಾಕಿಕೊಂಡು ‘ಸಿಗ್ಮ’ ಹೆಸರಿನ ಸಿನಿಮಾ ನಿರ್ದೇಶಿಸಿದ್ದಾರೆ. ಇದೊಂದು ಯೂತ್​​ಫುಲ್ ಆಕ್ಷನ್ ಸಿನಿಮಾ ಆಗಿದ್ದು, ಸಿನಿಮಾ ಜುಲೈ31ಕ್ಕೆ ಬಿಡುಗಡೆ ಆಗಲಿದೆ.

ವಿಜಯ್ ಪುತ್ರನ ಮೊದಲ ಸಿನಿಮಾಕ್ಕೆ ದೊಡ್ಡ ನಿರ್ಮಾಣ ಸಂಸ್ಥೆ ಆಗಿರುವ ಲೈಕಾ ಪ್ರೊಡಕ್ಷನ್ಸ್​ ಬಂಡವಾಳ ಹೂಡಿದೆ. ಈ ಸಿನಿಮಾನಲ್ಲಿ ನಟಿ ಫಾರಿಯಾ ಅಬ್ದುಲ್ಲಾ ನಾಯಕಿ. ಕನ್ನಡಿಗ ಸಂಪತ್ ರಾಜ್ ಸಹ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು, ಭಿನ್ನವಾಗಿ, ಫ್ರೆಶ್ ಆಗಿ ಸಿನಿಮಾವನ್ನು ಜೇಸನ್ ಸಂಜಯ್ ನಿರ್ದೇಶಿಸಿದಂತಿದ್ದಾರೆ. ಸಿನಿಮಾಕ್ಕೆ ಎಸ್ ತಮನ್ ಅವರು ಸಂಗೀತ ನೀಡಿದ್ದಾರೆ.

ಇದನ್ನೂ ಓದಿ:ವಿಜಯ್ ಕೊನೆಯ ಸಿನಿಮಾ ಆಗಬೇಕಿದ್ದಿದ್ದು ‘ಜನ ನಾಯಗನ್’ ಅಲ್ಲ, ಮತ್ಯಾವುದು?

ಜೇಸನ್ ವಿಜಯ್ ಅವರಿಗೆ ಇದು ಮೊದಲ ಸಿನಿಮಾ ಆಗಿದೆ. ಜೇಸನ್ ವಿಜಯ್, ನಾಯಕನಾಗಿ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿಗಳು ಹರಡಿದ್ದವು ಆದರೆ ಅವರು ನಿರ್ದೇಶಕನಾಗಿ ತಮಿಳು ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ಸಿನಿಮಾ ಆರಂಭಕ್ಕೂ ಮುನ್ನ ಕತೆಯನ್ನು ವಿಜಯ್ ಅವರಿಗೆ ಹೇಳಿ ಒಪ್ಪಿಗೆಯನ್ನು ಸಂಜಯ್ ಪಡೆದುಕೊಂಡಿದ್ದರಂತೆ.

ಕೆಲ ತಿಂಗಳುಗಳಲ್ಲಿ ವಿಜಯ್ ಖಾಸಗಿ ಬದುಕಿನಲ್ಲಿ ಸಾಕಷ್ಟು ವ್ಯತ್ಯಾಸಗಳು ನಡೆದಿವೆ. ವಿಜಯ್ ಪತ್ನಿ ಸಂಗೀತ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ವಿಜಯ್ ಸಹ ತಮ್ಮ ತ್ರಿಷಾ ಜೊತೆಗಿನ ಸಂಬಂಧವನ್ನು ಬಹಿರಂಗಪಡಿಸಿದ್ದಾರೆ. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಬಳಿಕ ವಿಜಯ್ ಪುತ್ರ ಸಂಜಯ್, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೆಸರಿನ ಜೊತೆಗೆ ಇದ್ದ ವಿಜಯ್ ಹೆಸರನ್ನು ತೆಗೆದು ಹಾಕಿದ್ದಾರೆ. ಈಗ ಮಗನ ಮೊದಲ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ವಿಜಯ್ ಬೆಂಬಲ ನೀಡುತ್ತಾರಾ ಅಥವಾ ದೂರವೇ ನಿಲ್ಲುತ್ತಾರಾ? ಎಂಬುದು ಕುತೂಹಲ ಕೆರಳಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಿಲ್ಕ್ ಬೋರ್ಡ್ ಜಂಕ್ಷನ್ ಈಗ ‘ಸ್ವಿಮ್ಮಿಂಗ್ ಪೂಲ್’!: ಕೋಟಿ ಕೋಟಿ ಖರ್ಚು ಮಾಡಿದ್ರೂ ಸುಧಾರಿಸದ ಸಿಲಿಕಾನ್ ಸಿಟಿ

ಬೆಂಗಳೂರು ಮೇ,29: ಸಿಲಿಕಾನ್ ಸಿಟಿಯಲ್ಲಿ ಸಂಚಾರ ದಟ್ಟಣೆಗೆ (Traffic) ಸದಾ ಪ್ರಸಿದ್ಧಿ ಪಡೆದಿರುವ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್, ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಇಡೀ ರಸ್ತೆ ಯಾವ ಮಟ್ಟಿಗೆ ಮುಳುಗಡೆಯಾಗಿದೆ ಎಂದರೆ, ಇದು ಬೆಂಗಳೂರಿನ ಅತ್ಯಂತ ಬ್ಯುಸಿ ರಸ್ತೆಯೋ ಅಥವಾ ಯಾವುದಾದರೂ ಈಜುಕೊಳವೋ (Swimming Pool) ಎಂದು ಸಾರ್ವಜನಿಕರು ಮೂಗಿನ ಮೇಲೆ ಬೆರಳಿಡುವಂತಾಗಿದೆ. ಈ ಅವ್ಯವಸ್ಥೆ ಬಗ್ಗೆ @Karnataka Portfolio ಎಂಬ ಎಕ್ಸ್​​ ಖಾತೆ ವಿಡಿಯೋವೊಂದನ್ನು ಹಂಚಿಕೊಂಡಿದೆ.

ಇಲ್ಲಿ ಅತ್ಯಂತ ಅಘಾತಕಾರಿ ವಿಷಯವೆಂದರೆ, ನಗರದ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಲು ಇತ್ತೀಚೆಗಷ್ಟೇ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಹೊಸ ಮೆಟ್ರೋ ನಿಲ್ದಾಣದ ಸುತ್ತಮುತ್ತಲಿನ ಇಡೀ ಪ್ರದೇಶವೇ ಮಳೆ ನೀರಿನಿಂದ ಮುಳುಗಿಹೋಗಿದೆ. ನಗರದ ಡ್ರೈನೇಜ್ (Drainage) ವ್ಯವಸ್ಥೆ ಹಾಗೂ ಮೂಲಸೌಕರ್ಯದ ಯೋಜನೆಯನ್ನು ಬಿಬಿಎಂಪಿ ಯಾವ ರೀತಿ ರೂಪಿಸಿದೆ ಎಂಬ ಬಗ್ಗೆ ಈ ದೃಶ್ಯಗಳು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಇಲ್ಲಿದೆ ನೋಡಿ ಎಕ್ಸ್​​ ವಿಡಿಯೋ:

ನೀರಿನ ತೀವ್ರತೆಗೆ ದ್ವಿಚಕ್ರ ವಾಹನಗಳು ಹಾಗೂ ಕಾರುಗಳು ರಸ್ತೆಯಲ್ಲೇ ಅರ್ಧ ಮುಳುಗಿದ ಸ್ಥಿತಿಯಲ್ಲಿ ಸಾಗಲು ತೀವ್ರವಾಗಿ ಪರದಾಡಿದವು. ಕಚೇರಿ ಮುಗಿಸಿ ಮನೆಗೆ ಮರಳುತ್ತಿದ್ದ ನೂರಾರು ಪ್ರಯಾಣಿಕರು ಗಂಟೆಗಟ್ಟಲೆ ಭೀಕರ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಸಂಕಷ್ಟ ಅನುಭವಿಸಿದರು. ಪ್ರತಿ ವರ್ಷ ಮಳೆಗಾಲ ಬಂದಾಗಲೂ ಬೆಂಗಳೂರಿನ ಪ್ರಮುಖ ರಸ್ತೆಗಳು ಹೀಗೆ ನೀರಿನಲ್ಲಿ ಕಣ್ಮರೆಯಾಗುವುದು ಸಿಟಿ ಜನರಿಗೆ ಈಗ ಮಾಮೂಲಿ ಎಂಬಂತಾಗಿದೆ.

ಇದನ್ನೂ ಓದಿ: ಮೆಟ್ರೋ ನಿಲ್ದಾಣದ ರಸ್ತೇಲಿ 3 ಅಡಿಯಷ್ಟು ನಿಂತ ಮಳೆ‌ನೀರು! ವಾಹನ ಸವಾರರ ಪರದಾಟ

“ಮೆಟ್ರೋ ಕಾರಿಡಾರ್‌ಗಳಂತಹ ಬೃಹತ್ ಯೋಜನೆಗಳಿಗೆ ಕೋಟಿ ಕೋಟಿ ರೂಪಾಯಿ ಹಣ ಖರ್ಚು ಮಾಡಲಾಗುತ್ತದೆ. ಆದರೆ, ಸಣ್ಣ ಮಳೆ ಬಂದರೆ ನೀರು ಸರಾಗವಾಗಿ ಹರಿದು ಹೋಗಲು ಒಂದು ಸರಿಯಾದ ರಾಜಕಾಲುವೆ ಅಥವಾ ಡ್ರೈನೇಜ್ ವ್ಯವಸ್ಥೆ ಮಾಡಲು ಈ ಅಧಿಕಾರಿಗಳಿಗೆ ಸಾಧ್ಯವಿಲ್ಲವೇ?” ಎಂದು ನೆಟ್ಟಿಗರು ಹಾಗೂ ಸಾರ್ವಜನಿಕರು ಬಿಬಿಎಂಪಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಿಲ್ಕ್ ಬೋರ್ಡ್‌ನ ಈ ಅವಸ್ಥೆಯ ವಿಡಿಯೋಗಳು ಈಗ ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗುತ್ತಿವೆ.

ಬೆಂಗಳೂರಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಿ.ಕೆ. ಶಿವಕುಮಾರ್​​ ಕೈ ಬಿಡದ ಆಂದ್ಲೆ ಶ್ರೀ ಜಗದೀಶ್ವರಿ: ಸತ್ಯವಾಯ್ತು ದೇವಿ ನೀಡಿದ್ದ ಶುಭ ಸೂಚನೆ!

ಕಾರವಾರ, ಮೇ 29: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಆಂದ್ಲೆ ಶ್ರೀ ಜಗದೀಶ್ವರಿ ದೇವಸ್ಥಾನಕ್ಕೆ ಈ ಹಿಂದೆ ಭೇಟಿ ನೀಡಿದ್ದ ಡಿ.ಕೆ. ಶಿವಕುಮಾರ್​​ ಭೇಟಿ ನೀಡಿದ್ದರು. ದೇವಿಯ ಅನುಗ್ರಹದಿಂದಲೇ ಅವರೀಗ ಕರ್ನಾಟಕದ ನೂತನ ಸಿಎಂ ಆಗುವುದು ಬಹುತೇಕ ಖಚಿತ ಎಂಬ ಮಾತುಗಳು ಕೇಳಿಬಂದಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ದೇವಸ್ಥಾನದ ಅರ್ಚಕ ಗಣೇಶ್ ನಾಯ್ಕ್, ಡಿಸೆಂಬರ್ ತಿಂಗಳಲ್ಲಿ ಡಿ‌.ಕೆ‌.ಶಿವಕುಮಾರ್ ದೇಗುಲಕ್ಕೆ ಬಂದಿದ್ದರು. ಅಂದು ಅವರು ಕೇಳಿದ್ದಕ್ಕೆ ದೇವಿ ಒಳ್ಳೆಯ ಸೂಚನೆ ಕೊಟ್ಟಿದ್ದಳು. ಎರಡು ತಿಂಗಳಲ್ಲಿ ಮುಖ್ಯಮಂತ್ರಿ ಸ್ಥಾನದ ಮುನ್ಸೂಚನೆಯೂ ಅವರಿಗೆ ಹೈಕಮಾಂಡ್​​​​​ನಿಂದ ಸಿಕ್ಕಿತ್ತು. ನಿತ್ಯ ಬೆಳಗ್ಗೆ ಪೂಜೆ ಸಲ್ಲಿಸುವಂತೆ ಅವರ ಕಡೆಯವರು ತಿಳಿಸಿದ್ದು, ತಾಯಿ ಪ್ರಸಾದ ಕೊಡುತ್ತಿರುವುದರ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಇಲ್ಲಿ ತಾಯಿ ಪ್ರಸಾದ ಕೊಟ್ಟ ಪ್ರಕಾರವೇ ಅವರಿಗೆ ಅಲ್ಲಿ ಆಗುತ್ತಿತ್ತು. ಸಿಎಂ ಆಗುವವರೆಗೆ ನಿತ್ಯ ಸಂಕಲ್ಪ ಮಾಡಲು ತೀರ್ಮಾನಿಸಲಾಗಿದ್ದು, ಸಿಎಂ ಆದ ಬಳಿಕವೂ ದೇವಿಯ ಅನುಗ್ರಹ ಅವರಿಗೆ ಇರುತ್ತೆ. ಡಿ.ಕೆ.ಶಿವಕುಮಾರ್ ಹೆಸರಲ್ಲಿ 2 ತಿಂಗಳಿನಿಂದ ಸಂಕಲ್ಪ ಮಾಡಲಾಗ್ತಿದೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಮುಹೂರ್ತ ಫಿಕ್ಸ್: ಇಲ್ಲಿದೆ ದಿನಾಂಕ, ಸಮಯದ ವಿವರ

ಬೆಂಗಳೂರು, ಮೇ 29: ಬೆಂಗಳೂರಿನಲ್ಲಿ ಭಾನುವಾರ ಸಂಜೆ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆ ನಡೆಯಲಿದೆ. ಈ ಬಗ್ಗೆ ಇದ್ದ ಗೊಂದಲಗಳಿಗೆ ತೆರೆ ಬಿದ್ದಿದ್ದು, ಕೆಪಿಸಿಸಿ ಕಚೇರಿಯಿಂದ ಎಲ್ಲಾ ಶಾಸಕರಿಗೂ ಬೆಂಗಳೂರಿನಲ್ಲೇ ಇರುವಂತೆ ಸೂಚನೆ ನೀಡಲಾಗಿದೆ. ಬಹುತೇಕ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭೆ ನಡೆಯುವ ಸಾಧ್ಯತೆ ಇದೆ. ಸಿಎಲ್‌ಪಿ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗುತ್ತದೆ. ಈ ವೇಳೆ ಹೈಕಮಾಂಡ್ ನಾಯಕರಿಂದ ಮುಂದಿನ ಮುಖ್ಯಮಂತ್ರಿಯನ್ನು ಘೋಷಿಸಲಾಗುತ್ತದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಹಿಂದೆ ಸಿದ್ದರಾಮಯ್ಯನವರ ಆಯ್ಕೆ ಪ್ರಕ್ರಿಯೆಯಲ್ಲಿ ನಡೆದಂತೆ ಚುನಾವಣೆ ನಡೆಯದೆ, ಹೈಕಮಾಂಡ್‌ನ ನೇರ ನಿರ್ಧಾರವನ್ನು ಸಭೆಯಲ್ಲಿ ಪ್ರಕಟಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ. ಸಿಎಲ್‌ಪಿ ನಾಯಕನ ಆಯ್ಕೆಯಾದ ಬಳಿಕ ಮುಂದಿನ ಮುಖ್ಯಮಂತ್ರಿಯ ಪ್ರಮಾಣ ವಚನ ಸಮಾರಂಭದ ದಿನಾಂಕವನ್ನೂ ನಿಗದಿಪಡಿಸುವ ಸಾಧ್ಯತೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜೀ5ನಲ್ಲಿ ಪ್ರಸಾರ ಕಾಣಲಿದೆ ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾ; ಇಲ್ಲಿದೆ ಮಾಹಿತಿ

ನಿರ್ದೇಶಕ ಪ್ರೇಮ್ ಹಾಗೂ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕಾಂಬಿನೇಷನ್‌ನ ಬಹುನಿರೀಕ್ಷಿತ ‘KD-ದಿ ಡೆವಿಲ್’ (KD Movie) ಸಿನಿಮಾ ಥಿಯೇಟರ್​​ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಈಗ ಸಿನಿಮಾ ಡಿಜಿಟಲ್ ಪರದೆಯ ಮೇಲೆ ಅಬ್ಬರಿಸಲು ಸಜ್ಜಾಗಿದೆ. ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿದ್ದ ಈ ಚಿತ್ರ ಜೂನ್ 5 ರಂದು ಜೀ5 ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಅಧಿಕೃತವಾಗಿ ಸ್ಟ್ರೀಮಿಂಗ್ ಆರಂಭಿಸಲಿದೆ. ವಿಶೇಷವೆಂದರೆ, ಕನ್ನಡದ ಜೊತೆಗೆ ದಕ್ಷಿಣ ಭಾರತದ ಪ್ರಮುಖ ಭಾಷೆಗಳಾದ ತೆಲುಗು, ತಮಿಳು ಹಾಗೂ ಮಲಯಾಳಂನಲ್ಲೂ ಈ ಸಿನಿಮಾ ವೀಕ್ಷಣೆಗೆ ಲಭ್ಯವಿದೆ.

ನಿರ್ದೇಶಕ ಪ್ರೇಮ್ ‘ಜೋಗಿ’ ಚಿತ್ರದಲ್ಲಿ ಅಮ್ಮ ಹಾಗೂ ಮಗನ ಕಥೆ ಹೇಳಿ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಈ ಬಾರಿ ಅಣ್ಣ-ತಮ್ಮನ ಕಥೆ ಹೇಳಿದ್ದಾರೆ. ಈ ಚಿತ್ರದಲ್ಲಿ ಅವರು ಪ್ರೇಕ್ಷಕರನ್ನು 70ರ ದಶಕದ ಕಾಲಘಟ್ಟಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಣ್ಣನೇ ಸರ್ವಸ್ವ ಎಂದು ಬದುಕುವ ‘ಕಾಳಿದಾಸ ಅಲಿಯಾಸ್ ಕೆಡಿ’ ಪಾತ್ರದಲ್ಲಿ ಧ್ರುವ ಸರ್ಜಾ ಕಾಣಿಸಿಕೊಂಡಿದ್ದಾರೆ.

ಅಣ್ಣ-ತಮ್ಮನ ನಡುವಿನ ಭಾವನಾತ್ಮಕ ಬಾಂಧವ್ಯದ ಜೊತೆಗೆ ಆ ಕಾಲದ ರಾಜಕೀಯ ಪೈಪೋಟಿ ಮತ್ತು ರಕ್ತಸಿಕ್ತ ರೌಡಿಸಂ ಕಥೆಯನ್ನು ಚಿತ್ರ ಒಳಗೊಂಡಿದೆ. ಧ್ರುವ ಅವರು ಮಾಸ್ ಹಾಗೂ ಆ್ಯಕ್ಷನ್ ಮೂಲಕ ಅಭಿಮಾನಿಗಳ ಎದುರು ಬಂದಿದ್ದಾರೆ. ‘ಕೆಡಿ’ ಸಿನಿಮಾದ ಮತ್ತೊಂದು ದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಚಿತ್ರದ ಅದ್ದೂರಿ ತಾರಾಗಣ. ಈ ಸಿನಿಮಾದಲ್ಲಿ ಭಾರತೀಯ ಚಿತ್ರರಂಗದ ಘಟಾನುಘಟಿ ಕಲಾವಿದರು ಒಂದಾಗಿದ್ದಾರೆ.

ಇದನ್ನೂ ಓದಿ: 20 ದಿನಕ್ಕೆ‘ಕೆಡಿ’ಸಿನಿಮಾ ಗಳಿಸಿದ್ದೆಷ್ಟು? ನಿರ್ಮಾಪಕರಿಗೆ ಲಾಭವೋ, ನಷ್ಟವೋ?

ಕ್ರೇಜಿಸ್ಟಾರ್ ವಿ. ರವಿಚಂದ್ರನ್, ರಮೇಶ್ ಅರವಿಂದ್, ಬಾಲಿವುಡ್ ನಟ ಸಂಜಯ್ ದತ್, ಶಿಲ್ಪಾ ಶೆಟ್ಟಿ, ರೀಷ್ಮಾ ನಾಣಯ್ಯ ಬಣ್ಣ ಹಚ್ಚಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಚಿತ್ರದ ಪ್ರಮುಖ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಂಡು ಚಿತ್ರದ ತೂಕವನ್ನು ಹೆಚ್ಚಿಸಿದ್ದಾರೆ. ಕನ್ನಡದ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ ಈ ಚಿತ್ರವನ್ನು ದೊಡ್ಡ ಬೆಕಟ್​​ನಲ್ಲಿ ನಿರ್ಮಿಸಿದೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ನನ್ನ ಅಜ್ಜಿ ಪಿಜ್ಜಾ ಪ್ರಿಯೆ; ಬಾಯಿ ಚಪ್ಪರಿಸಿಕೊಂಡು ಪಿಜ್ಜಾ ತಿಂದ ಅಜ್ಜಿ

ಅಜ್ಜ ಅಜ್ಜಿಯಂದಿರಿಗೆ (grandparents) ಪಿಜ್ಜಾ ಬರ್ಗರ್ ಕೊಟ್ಟರೆ ಅಷ್ಟಾಗಿ ಇಷ್ಟ ಪಡಲ್ಲ. ಈ ಹಿರಿಜೀವಗಳಿಗೆ ಮನೆಯಲ್ಲಿ ತಯಾರಿಸಿದ ರುಚಿಕರ ಆಹಾರಗಳನ್ನು ಸವಿಯುವುದೇ ಇಷ್ಟ. ಆದರೆ ಈ 92 ವರ್ಷದ ಈ ಅಜ್ಜಿ ತುಂಬಾ ಅಪ್ಡೇಟ್ ಆದಂತೆ ಕಾಣುತ್ತಿದ್ದಾರೆ. ಮೊಮ್ಮಗಳು ಅಜ್ಜಿಗೆ ಪಿಜ್ಜಾ ತಂದು ಕೊಟ್ಟಿದ್ದಾಳೆ. ಬಹಳ ಖುಷಿಯಿಂದ ಬಾಯಿ ಚಪ್ಪರಿಸಿಕೊಂಡು ಪಿಜ್ಜಾ ತಿನ್ನುವ ಅಜ್ಜಿಯ ವಿಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದೆ.

@viewsandbrewsss ಹೆಸರಿನ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಈ ವಿಡಿಯೋವನ್ನು ಮೊಮ್ಮಗಳು ಹಂಚಿಕೊಂಡಿದ್ದಾಳೆ. ನನ್ನ ಅಜ್ಜಿ ಪಕ್ಕಾ ಪಿಜ್ಜಾ ಪ್ರಿಯೆ. 92 ವರ್ಷದ ಎಲ್ಲರಿಗೂ ಖಿಚಡಿ ಬೇಕಂತೇನಿಲ್ಲ ಎಂದು ಬರೆದುಕೊಂಡಿದ್ದಾರೆ. ಈ ಕ್ಲಿಪಿಂಗ್‌ನಲ್ಲಿ ಅಜ್ಜಿ ಪಿಜ್ಜಾ ತುಂಡುಗಳನ್ನು ತಿನ್ನುತ್ತಾ ಸಖತ್ ಎಂಜಾಯ್ ಮಾಡುತ್ತಿರುವುದನ್ನು ಕಾಣಬಹುದು. ತನಗೆ ಕುಡಿಯಲು ಥಮ್ಸ್ ಅಪ್ ಬೇಕೆಂದು ಕೇಳುತ್ತಿದ್ದಾರೆ. ಅವರಿಗಾದ ಖುಷಿಯೂ ಅವರ ಮುಖದಲ್ಲಿ ನಗುವಿನಲ್ಲಿ ವ್ಯಕ್ತವಾಗಿದೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ರೈಲಿನಲ್ಲಿ ಬ್ರೇಸ್ಲೆಟ್‌ ಮಾರಿ ಸ್ವಾಭಿಮಾನದ ಬದುಕು ಕಟ್ಟಿಕೊಂಡ ಅಜ್ಜಿ, ವೈರಲ್ ಆಯ್ತು ದೃಶ್ಯ

ಈ ವಿಡಿಯೋ ಒಂದು ಲಕ್ಷ ತೊಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಅಜ್ಜಿಯನ್ನು ಖುಷಿಯಾಗಿಸಿರುವ ಮೊಮ್ಮಗಳ ಪ್ರಯತ್ನ ಚೆನ್ನಾಗಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಈ ಜನರೇಷನ್ ಮಕ್ಕಳು ತಮ್ಮ ಅಜ್ಜ ಅಜ್ಜಿಯಂದಿರಿಗೆ ಪಿಜ್ಜಾ ತಿನ್ನಿಸುವುದನ್ನು ನೋಡಲು ಖುಷಿಯಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಅಜ್ಜಿಯ ಮುಖದಲ್ಲಿ ಸಂತೋಷ ಎಲ್ಲಾ ಹೇಳ್ತಿದೆ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಐಪಿಎಲ್​ ಆಟಗಾರರಿಗೆ ಎಚ್ಚರಿಕೆ: ಸ್ಮಾರ್ಟ್​ ಗ್ಲಾಸ್ ನಿಷೇಧ!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳ ಸಮಗ್ರತೆ ಮತ್ತು ಭದ್ರತೆ ಕಾಪಾಡುವ ನಿಟ್ಟಿನಲ್ಲಿ ಬಿಸಿಸಿಐ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈ ನಿರ್ಧಾರದಂತೆ ಇನ್ಮುಂದೆ ಐಪಿಎಲ್ ಆಟಗಾರರು ಹಾಗೂ ಸಿಬ್ಬಂದಿಗಳು ಕ್ರೀಡಾಂಗಣದ ಪ್ರದೇಶಗಳಲ್ಲಿ ಯಾವುದೇ ರೀತಿಯ ಸ್ಮಾರ್ಟ್ ಗ್ಲಾಸ್ ಬಳಸುವಂತಿಲ್ಲ. ಪ್ರಸ್ತುತ ಟೂರ್ನಿಯಿಂದಲೇ ಸ್ಮಾರ್ಟ್ ಗ್ಲಾಸ್  ಅಥವಾ  ಹೈ-ಟೆಕ್ ಗ್ಲಾಸ್ ಧರಿಸದಂತೆ ಆಟಗಾರರಿಗೆ ಹಾಗೂ ಸಿಬ್ಬಂದಿಗಳಿಗೆ ಸೂಚಿಸಲಾಗಿದೆ. ಹೀಗಾಗಿ ಇನ್ಮುಂದೆ ಐಪಿಎಲ್​ ವೇಳೆ ಸ್ಮಾರ್ಟ್ ಗ್ಲಾಸ್ ಧರಿಸಲು ಅವಕಾಶ ಇರುವುದಿಲ್ಲ.

ಈ ನಿಷೇಧಕ್ಕೆ ಕಾರಣವೇನು?

  • ಸ್ಮಾರ್ಟ್ ಗ್ಲಾಸ್​ಗಳ ಮೂಲಕ ರಹಸ್ಯವಾಗಿ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಬಹುದು. ಹಾಗೆಯೇ ಇಂತಹ ಗ್ಲಾಸ್​ಗಳ ಮೂಲಕ ತಂಡದ ಪ್ಲ್ಯಾನ್​ಗಳು ಸೋರಿಕೆಯಾಗಬಹುದು.
  • ಲೈವ್ ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್ ಅಥವಾ ಸ್ಪಾಟ್ ಫಿಕ್ಸಿಂಗ್ ದಂಧೆಗೆ ಇಂತಹ ಸ್ಮಾರ್ಟ್ ಗ್ಲಾಸ್​ ಬಳಕೆಯಾಗುವ ಅಪಾಯವಿದೆ.
  • ವಿಶೇಷ ತಂತ್ರಜ್ಞಾನ ಕಂಪೆನಿಗಳು ಆಟಗಾರರಿಗೆ ಮತ್ತು ತಂಡದ ಸಿಬ್ಬಂದಿಗಳಿಗೆ ವಿಶೇಷ ಸ್ಮಾರ್ಟ್​ ಗ್ಲಾಸ್ ಮಾರಾಟ ಮಾಡಲು ಪ್ರಯತ್ನಿಸುತ್ತಿವೆ ಎಂಬ ಮಾಹಿತಿಯೊಂದು ಬಿಸಿಸಿಐಗೆ ಸಿಕ್ಕಿದೆ.

ಈ ಎಲ್ಲಾ ಕಾರಣಗಳಿಂದಾಗಿ ಬಿಸಿಸಿಐ ಇಂಡಿಯನ್ ಪ್ರೀಮಿಯರ್ ಲೀಗ್​ ವೇಳೆ ಸ್ಮಾರ್ಟ್ ಗ್ಲಾಸ್ ಬಳಕೆಯನ್ನು ನಿಷೇಧಿಸಿದೆ.

ಕಠಿಣ ಕ್ರಮದ ಎಚ್ಚರಿಕೆ:

ಈ ನಿಯಮವನ್ನು ಉಲ್ಲಂಘಿಸುವ ಆಟಗಾರರು ಅಥವಾ ಸಿಬ್ಬಂದಿಗೆ ಭಾರಿ ಮೊತ್ತದ ದಂಡ ಮತ್ತು ತಕ್ಷಣದ ಅಮಾನತು ಶಿಕ್ಷೆಯನ್ನು ವಿಧಿಸಲಾಗುವುದು ಎಂದು ಬಿಸಿಸಿಐ ಎಚ್ಚರಿಕೆ ನೀಡಿದೆ. ಅಲ್ಲದೆ ಪ್ರಸ್ತುತ ನಡೆಯುತ್ತಿರುವ ಕ್ವಾಲಿಫೈಯರ್-2 ಹಾಗೂ ಫೈನಲ್ ಪಂದ್ಯಗಳ ವೇಳೆ ಸ್ಮಾರ್ಟ್ ಗ್ಲಾಸ್ ಹಾಗೂ ಹೈ-ಟೆಕ್ ಗ್ಲಾಸ್​ಗಳನ್ನು ಬಳಸದಂತೆ ಸೂಚಿಸಲಾಗಿದೆ.

ಮೊಬೈಲ್ ಬಳಸುವುದು ನಿಷೇಧ:

ಆರ್​ಸಿಬಿ ಮತ್ತು ಆರ್​ಆರ್​ ನಡುವಣ ಪಂದ್ಯದ ವೇಳೆ ಡಗೌಟ್​ನಲ್ಲಿ ಮೊಬೈಲ್ ಬಳಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಪಂದ್ಯದ ವೇಳೆ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆ.

ಹಾಗೆಯೇ ಪಂದ್ಯದ ವೇಳೆ ಫ್ರಾಂಚೈಸಿ ಮಾಲೀಕರು ಡಗೌಟ್​ಗೆ ಪ್ರವೇಶಿಸುವುದನ್ನು, ಮ್ಯಾಚ್ ನಡುವೆ ಮೈದಾನಕ್ಕೆ ಎಂಟ್ರಿ ಕೊಡುವುದನ್ನು ಹಾಗೂ ಆಟಗಾರರನ್ನು ಮಾತನಾಡಿಸುವುದನ್ನು ಬಿಸಿಸಿಐ ನಿಷೇಧಿಸಿದೆ.

ಇದನ್ನೂ ಓದಿ: ವಿಶ್ವ ದಾಖಲೆ… ಪೊಲಾರ್ಡ್​ಗೆ​ 652 ಇನಿಂಗ್ಸ್, ವೈಭವ್​ಗೆ ಜಸ್ಟ್​ 33 ಇನಿಂಗ್ಸ್​!

ಇದರ ಜೊತೆಗೆ ಇದೀಗ ಭದ್ರತೆಯನ್ನು ಕಾಪಾಡಿಕೊಳ್ಳಲು ಹಾಗೂ ಐಪಿಎಲ್​ನ ಪಾರದರ್ಶಕತೆಯನ್ನು ಹೆಚ್ಚಿಸಲು ಇಂಡಿಯನ್ ಪ್ರೀಮಿಯರ್ ಲೀಗ್ ಮಂಡಳಿ ಸ್ಮಾರ್ಟ್ ಗ್ಲಾಸ್ ಬಳಕೆಯನ್ನು ನಿಷೇಧಿಸಿದೆ.

Published On – 11:06 am, Fri, 29 May 26

Source link

ಬಿಎಂಟಿಸಿ ಹೊಸ ಪ್ಲಾನ್: ಇನ್ಮುಂದೆ ಬಸ್ ಟಿಕೆಟ್‌ಗಳ ಮೇಲೂ ಬರಲಿದೆ ಜಾಹೀರಾತು!

ಇನ್ಮುಂದೆ ಬಸ್ ಟಿಕೆಟ್‌ಗಳ ಮೇಲೂ ಬರಲಿದೆ ಜಾಹೀರಾತು!
Image Credit source: The Hindu

ಬೆಂಗಳೂರು, ಮೇ 29: ನೌಕರರ ವೇತನ ಪರಿಷ್ಕರಣೆ ಹಾಗೂ ಬಾಕಿ ಪಾವತಿಸಲು ಹಣವಿಲ್ಲದೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಬಿಎಂ‌ಟಿಸಿ (BMTC), ಸಾಲದ ಸುಳಿಯಿಂದ ಹೊರಬರಲು ಇದೀಗ ಹೊಸ ಆದಾಯದ ಮೂಲ ಹುಡುಕಿದೆ. ಈಗಾಗಲೇ ಬಸ್‌ಗಳ ಮೇಲೆ ಜಾಹೀರಾತು ಪ್ರದರ್ಶಿಸುತ್ತಿರುವ ನಿಗಮ, ಈಗ ಪ್ರಯಾಣಿಕರಿಗೆ ನೀಡುವ ಟಿಕೆಟ್‌ಗಳ ಮೇಲೂ ಜಾಹೀರಾತು ಮುದ್ರಿಸಲು ಟೆಂಡರ್ ಆಹ್ವಾನಿಸಿದೆ.

ಮುಖ್ಯಾಂಶಗಳು

  • ಆರ್ಥಿಕ ಸಂಕಷ್ಟದಲ್ಲಿರುವ ಬಿಎಂಟಿಸಿ ಆದಾಯಕ್ಕಾಗಿ ಬಸ್ ಟಿಕೆಟ್‌ಗಳ ಮೇಲೆ ಜಾಹೀರಾತು ಪ್ರದರ್ಶಿಸಲಿದೆ.
  • ಪ್ರತಿದಿನ 45 ಲಕ್ಷ ಪ್ರಯಾಣಿಕರನ್ನು ತಲುಪಲು ಒಂದು ವರ್ಷದ ಅವಧಿಗೆ ಟೆಂಡರ್ ಆಹ್ವಾನ.
  • ತಂಬಾಕು, ಮದ್ಯ ಮತ್ತು ಅಶ್ಲೀಲ ಜಾಹೀರಾತುಗಳ ಮುದ್ರಣಕ್ಕೆ ನಿಗಮದಿಂದ ಕಡ್ಡಾಯ ನಿಷೇಧ.

ಪ್ರತಿದಿನ ಸುಮಾರು 6,275 ಬಸ್‌ಗಳಲ್ಲಿ 45 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಿದ್ದು, ಈ ಬೃಹತ್ ನೆಟ್‌ವರ್ಕ್ ಬಳಸಿಕೊಂಡು ಒಂದು ವರ್ಷದ ಅವಧಿಗೆ ಟಿಕೆಟ್ ಜಾಹೀರಾತು ನೀಡಲು ಅವಕಾಶ ಕಲ್ಪಿಸಲಾಗಿದೆ. ಬಿಎಂಟಿಸಿ ಸದ್ಯ ವಾರ್ಷಿಕವಾಗಿ ಜಾಹೀರಾತುಗಳಿಂದ 57.48 ಕೋಟಿ ರೂ. ಆದಾಯ ಗಳಿಸುತ್ತಿದ್ದು, ಈ ಹೊಸ ಯೋಜನೆಯಿಂದ ಆದಾಯ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ಪ್ರಯಾಣಿಕರ ಆಗ್ರಹ

ಆದಾಯ ಕ್ರೋಡೀಕರಣಕ್ಕೆ ಇದು ಒಳ್ಳೆಯ ನಿರ್ಧಾರ. ಆದರೆ ಟಿಕೆಟ್‌ಗಳ ಮೇಲೆ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಜಾಹೀರಾತುಗಳಿರಲಿ. ಗುಟ್ಕಾ, ಪಾನ್ ಮಸಾಲಾ, ಮದ್ಯ ಅಥವಾ ಯಾವುದೇ ಅಶ್ಲೀಲ ಜಾಹೀರಾತುಗಳನ್ನು ಹಾಕಬೇಡಿ ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.

ಸಾರ್ವಜನಿಕರ ಈ ಬೇಡಿಕೆಗೆ ಪೂರಕವಾಗಿ ತಂಬಾಕು, ಮಾದಕ ದ್ರವ್ಯ ಹಾಗೂ ಅಶ್ಲೀಲ ವಸ್ತುಗಳ ಜಾಹೀರಾತುಗಳಿಗೆ ನಿಗಮ ಕಡ್ಡಾಯ ನಿಷೇಧ ಹೇರಿದೆ. ಒಟ್ಟಿನಲ್ಲಿ, ನೌಕರರ ಬೇಡಿಕೆ ಈಡೇರಿಸಲು ಪರದಾಡುತ್ತಿರುವ ಬಿಎಂಟಿಸಿಗೆ ಈ ಟಿಕೆಟ್ ಜಾಹೀರಾತು ತಂತ್ರ ಕೈಹಿಡಿಯಲಿದೆಯೇ ಎಂದು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 11:06 am, Fri, 29 May 26

Source link

RailTel Recruitment 2026: ಬೆಂಗಳೂರಿನಲ್ಲಿ ಬಂಪರ್ ಉದ್ಯೋಗವಕಾಶ; ವಿವಿಧ ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ!

ಬೆಂಗಳೂರಿನಲ್ಲಿ ಬಂಪರ್ ಉದ್ಯೋಗವಕಾಶ

ಕೇಂದ್ರ ಸರ್ಕಾರದ ಅಧೀನದಲ್ಲಿರುವ ಪ್ರತಿಷ್ಠಿತ ಸಂಸ್ಥೆಯಲ್ಲಿ ತಾಂತ್ರಿಕ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಒಂದು ಭರ್ಜರಿ ಸಿಹಿ ಸುದ್ದಿ. ಭಾರತ ಸರ್ಕಾರದ ರೈಲ್ವೆ ಸಚಿವಾಲಯದ ಒಳಪಡುವ ನವರತ್ನ ಸಾರ್ವಜನಿಕ ವಲಯದ ಉದ್ಯಮವಾದ ರೈಲ್‌ಟೆಲ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (RailTel) ಪ್ರಸಕ್ತ ಸಾಲಿನ ಬೃಹತ್ ನೇಮಕಾತಿ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ದಕ್ಷಿಣ ವಲಯದ ಅತ್ಯಂತ ಮಹತ್ವಾಕಾಂಕ್ಷಿ KSWAN ಯೋಜನೆಗಾಗಿ ಅನುಭವ ಹೊಂದಿರುವ ತಾಂತ್ರಿಕ ತಜ್ಞರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುವ ಸುವರ್ಣ ಅವಕಾಶ ದೊರೆಯಲಿದೆ.

ರೈಲ್‌ಟೆಲ್ ನೇಮಕಾತಿ ಪ್ರಕ್ರಿಯೆಯ ಹಿನ್ನೆಲೆ ಮತ್ತು ಉದ್ಯೋಗದ ಸ್ವರೂಪ:

ರೈಲ್‌ಟೆಲ್ ಸಂಸ್ಥೆಯು ದೇಶಾದ್ಯಂತ ರೈಲ್ವೆ ಹಳಿಗಳ ಉದ್ದಕ್ಕೂ ಆಪ್ಟಿಕ್ ಫೈಬರ್ ನೆಟ್‌ವರ್ಕ್ ಅನ್ನು ನಿರ್ವಹಿಸುವ ಮತ್ತು ಪ್ರಮುಖ ಡೇಟಾ ಸೆಂಟರ್‌ಗಳನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊಂದಿದೆ. ಪ್ರಸ್ತುತ ಹೊರಡಿಸಲಾಗಿರುವ ಈ ಅಧಿಕೃತ ಅಧಿಸೂಚನೆಯು ಮುಕ್ತ ಮಾರುಕಟ್ಟೆಯಿಂದ (Open Market) ಅತ್ಯಂತ ಕ್ರಿಯಾಶೀಲ ಮತ್ತು ಅರ್ಹ ಭಾರತೀಯ ನಾಗರಿಕರನ್ನು ಆಯ್ಕೆ ಮಾಡುವ ಉದ್ದೇಶವನ್ನು ಹೊಂದಿದೆ. ಈ ನೇಮಕಾತಿಯು ಸಂಪೂರ್ಣವಾಗಿ ಐದು ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ (Contract Basis) ನಡೆಯಲಿದ್ದು, ಪ್ರತಿಭಾವಂತ ವೃತ್ತಿಪರರಿಗೆ ಕೇಂದ್ರ ಸರ್ಕಾರದ ಬೃಹತ್ ಯೋಜನೆಯೊಂದರಲ್ಲಿ ಪ್ರತ್ಯಕ್ಷವಾಗಿ ಕೆಲಸ ಮಾಡುವ ಉತ್ತಮ ಅನುಭವವನ್ನು ಇದು ಒದಗಿಸಿಕೊಡುತ್ತದೆ.

ನೆನಪಿನಲ್ಲಿಡಬೇಕಾದ ಪ್ರಮುಖ ದಿನಾಂಕಗಳು ಮತ್ತು ಗಡುವು:

ಈ ಉದ್ಯೋಗಾವಕಾಶಕ್ಕೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಅತ್ಯಂತ ಸೀಮಿತ ಸಮಯಾವಕಾಶವನ್ನು ನೀಡಲಾಗಿದೆ. ಈ ನೇಮಕಾತಿಯ ಅಧಿಕೃತ ಪ್ರಕಟಣೆಯನ್ನು 20 ಮೇ 2026 ರಂದು ಹೊರಡಿಸಲಾಗಿದ್ದು, ಆನ್‌ಲೈನ್ ಅಥವಾ ನಿಗದಿಪಡಿಸಿದ ಮಾದರಿಯಲ್ಲಿ ಅರ್ಜಿ ಸಲ್ಲಿಸಲು ಮೇ 30 ಅಂತಿಮ ದಿನವಾಗಿರುತ್ತದೆ. ಅಭ್ಯರ್ಥಿಗಳ ವಯೋಮಿತಿ ಮತ್ತು ಶೈಕ್ಷಣಿಕ ಅರ್ಹತೆ ಸೇರಿದಂತೆ ಎಲ್ಲಾ ಅರ್ಹತಾ ಮಾನದಂಡಗಳನ್ನು ಪರಿಗಣಿಸಲು ಈ ಕೊನೆಯ ದಿನಾಂಕವನ್ನೇ ಕಟ್‌ಆಫ್ ದಿನವನ್ನಾಗಿ ನಿಗದಿಪಡಿಸಲಾಗಿದೆ. ಇನ್ನು ಸಂದರ್ಶನದ ತಾತ್ಕಾಲಿಕ ದಿನಾಂಕಗಳನ್ನು ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಮುಗಿದ ನಂತರ ರೈಲ್‌ಟೆಲ್ ವೆಬ್‌ಸೈಟ್‌ನಲ್ಲಿ ಪ್ರತ್ಯೇಕವಾಗಿ ಪ್ರಕಟಿಸಲಾಗುವುದು.

ಖಾಲಿ ಇರುವ ಹುದ್ದೆಗಳು ಮತ್ತು ಸಂಬಳದ ವಿವರಗಳು:

ಈ ನೇಮಕಾತಿ ಅಡಿಯಲ್ಲಿ ಒಟ್ಟು 17 ವಿವಿಧ ಶ್ರೇಣಿಯ ತಾಂತ್ರಿಕ ಮತ್ತು ಮ್ಯಾನೇಜ್‌ಮೆಂಟ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇದರಲ್ಲಿ ಅತ್ಯುನ್ನತ ಹುದ್ದೆಯಾದ ಪ್ರಾಜೆಕ್ಟ್ ಡೈರೆಕ್ಟರ್‌ಗೆ ವಾರ್ಷಿಕ 17,32,810 ರೂ. ವರೆಗೆ ಮತ್ತು ಪ್ರಾಜೆಕ್ಟ್ ಮ್ಯಾನೇಜರ್‌ಗೆ 13,10,400ರೂ. ವರೆಗೆ ಆಕರ್ಷಕ ವೇತನ ಪ್ಯಾಕೇಜ್ (Annual CTC) ನಿಗದಿಪಡಿಸಲಾಗಿದೆ. ಇವುಗಳೊಂದಿಗೆ ನೆಟ್‌ವರ್ಕ್ ಸ್ಪೆಷಲಿಸ್ಟ್, ನೆಟ್‌ವರ್ಕ್ ಮತ್ತು ಸೆಕ್ಯೂರಿಟಿ ಅಡ್ಮಿನ್‌ಗಳು, ಸರ್ವರ್ ಅಡ್ಮಿನ್, ವಿವಿಧ ಹಂತದ ನೆಟ್‌ವರ್ಕ್ ಇಂಜಿನಿಯರ್‌ಗಳು, ಸೆಂಟ್ರಲ್ ಹೆಲ್ಪ್‌ಡೆಸ್ಕ್ ಸಿಬ್ಬಂದಿ, ಎಲೆಕ್ಟ್ರಿಕಲ್ ಟೆಕ್ನಿಷಿಯನ್ ಮತ್ತು ಫೀಲ್ಡ್ ಇಂಜಿನಿಯರ್ ಸೇರಿದಂತೆ ಒಟ್ಟು 22 ಖಾಲಿ ಸೀಟುಗಳನ್ನು ಭರ್ತಿ ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರತಿಯೊಂದು ಹುದ್ದೆಯ ಜವಾಬ್ದಾರಿಗೆ ತಕ್ಕಂತೆ ವಾರ್ಷಿಕ ಸಂಬಳವು ಲಕ್ಷಾಂತರ ರೂಪಾಯಿಗಳಲ್ಲಿ ಇರಲಿದೆ.

ಅರ್ಜಿ ಸಲ್ಲಿಸುವ ಸುಲಭ ವಿಧಾನ ಮತ್ತು ಅಧಿಕೃತ ಮಾಹಿತಿ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅರ್ಹ ಅಭ್ಯರ್ಥಿಗಳು ರೈಲ್‌ಟೆಲ್ ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಆದ www.railtel.in ಗೆ ಭೇಟಿ ನೀಡಬೇಕಾಗುತ್ತದೆ. ವೆಬ್‌ಸೈಟ್‌ನಲ್ಲಿ ಲಭ್ಯವಿರುವ ‘Careers’ ವಿಭಾಗದಲ್ಲಿ ಈ ಉದ್ಯೋಗದ (No. RCIL/2026/P&A/01/SR) ಸಂಪೂರ್ಣ ಪಿಡಿಎಫ್ (PDF) ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿಕೊಂಡು, ಶೈಕ್ಷಣಿಕ ಅರ್ಹತೆ ಮತ್ತು ನಿಗದಿತ ಅನುಭವದ ವಿವರಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ಮೇ 30 ರೊಳಗೆ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿರುವುದರಿಂದ, ಕೊನೆಯ ಕ್ಷಣದ ಸರ್ವರ್ ಮತ್ತು ತಾಂತ್ರಿಕ ದೋಷಗಳನ್ನು ತಪ್ಪಿಸಲು ಆಸಕ್ತರು ಇಂದೇ ತಮ್ಮ ಅರ್ಜಿಗಳನ್ನು ಸಲ್ಲಿಸುವುದು ಸೂಕ್ತವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version