ಬೆಂಗಳೂರು, ಮೇ 29: ಬೆಂಗಳೂರಿನಲ್ಲಿ ಭಾನುವಾರ ಸಂಜೆ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ಸಭೆ ನಡೆಯಲಿದೆ. ಈ ಬಗ್ಗೆ ಇದ್ದ ಗೊಂದಲಗಳಿಗೆ ತೆರೆ ಬಿದ್ದಿದ್ದು, ಕೆಪಿಸಿಸಿ ಕಚೇರಿಯಿಂದ ಎಲ್ಲಾ ಶಾಸಕರಿಗೂ ಬೆಂಗಳೂರಿನಲ್ಲೇ ಇರುವಂತೆ ಸೂಚನೆ ನೀಡಲಾಗಿದೆ. ಬಹುತೇಕ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭೆ ನಡೆಯುವ ಸಾಧ್ಯತೆ ಇದೆ. ಸಿಎಲ್ಪಿ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗುತ್ತದೆ. ಈ ವೇಳೆ ಹೈಕಮಾಂಡ್ ನಾಯಕರಿಂದ ಮುಂದಿನ ಮುಖ್ಯಮಂತ್ರಿಯನ್ನು ಘೋಷಿಸಲಾಗುತ್ತದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಹಿಂದೆ ಸಿದ್ದರಾಮಯ್ಯನವರ ಆಯ್ಕೆ ಪ್ರಕ್ರಿಯೆಯಲ್ಲಿ ನಡೆದಂತೆ ಚುನಾವಣೆ ನಡೆಯದೆ, ಹೈಕಮಾಂಡ್ನ ನೇರ ನಿರ್ಧಾರವನ್ನು ಸಭೆಯಲ್ಲಿ ಪ್ರಕಟಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ. ಸಿಎಲ್ಪಿ ನಾಯಕನ ಆಯ್ಕೆಯಾದ ಬಳಿಕ ಮುಂದಿನ ಮುಖ್ಯಮಂತ್ರಿಯ ಪ್ರಮಾಣ ವಚನ ಸಮಾರಂಭದ ದಿನಾಂಕವನ್ನೂ ನಿಗದಿಪಡಿಸುವ ಸಾಧ್ಯತೆ ಇದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನಿರ್ದೇಶಕ ಪ್ರೇಮ್ ಹಾಗೂ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕಾಂಬಿನೇಷನ್ನ ಬಹುನಿರೀಕ್ಷಿತ ‘KD-ದಿ ಡೆವಿಲ್’ (KD Movie) ಸಿನಿಮಾ ಥಿಯೇಟರ್ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಈಗ ಸಿನಿಮಾ ಡಿಜಿಟಲ್ ಪರದೆಯ ಮೇಲೆ ಅಬ್ಬರಿಸಲು ಸಜ್ಜಾಗಿದೆ. ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿದ್ದ ಈ ಚಿತ್ರ ಜೂನ್ 5 ರಂದು ಜೀ5 ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಅಧಿಕೃತವಾಗಿ ಸ್ಟ್ರೀಮಿಂಗ್ ಆರಂಭಿಸಲಿದೆ. ವಿಶೇಷವೆಂದರೆ, ಕನ್ನಡದ ಜೊತೆಗೆ ದಕ್ಷಿಣ ಭಾರತದ ಪ್ರಮುಖ ಭಾಷೆಗಳಾದ ತೆಲುಗು, ತಮಿಳು ಹಾಗೂ ಮಲಯಾಳಂನಲ್ಲೂ ಈ ಸಿನಿಮಾ ವೀಕ್ಷಣೆಗೆ ಲಭ್ಯವಿದೆ.
ನಿರ್ದೇಶಕ ಪ್ರೇಮ್ ‘ಜೋಗಿ’ ಚಿತ್ರದಲ್ಲಿ ಅಮ್ಮ ಹಾಗೂ ಮಗನ ಕಥೆ ಹೇಳಿ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಈ ಬಾರಿ ಅಣ್ಣ-ತಮ್ಮನ ಕಥೆ ಹೇಳಿದ್ದಾರೆ. ಈ ಚಿತ್ರದಲ್ಲಿ ಅವರು ಪ್ರೇಕ್ಷಕರನ್ನು 70ರ ದಶಕದ ಕಾಲಘಟ್ಟಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಣ್ಣನೇ ಸರ್ವಸ್ವ ಎಂದು ಬದುಕುವ ‘ಕಾಳಿದಾಸ ಅಲಿಯಾಸ್ ಕೆಡಿ’ ಪಾತ್ರದಲ್ಲಿ ಧ್ರುವ ಸರ್ಜಾ ಕಾಣಿಸಿಕೊಂಡಿದ್ದಾರೆ.
ಅಣ್ಣ-ತಮ್ಮನ ನಡುವಿನ ಭಾವನಾತ್ಮಕ ಬಾಂಧವ್ಯದ ಜೊತೆಗೆ ಆ ಕಾಲದ ರಾಜಕೀಯ ಪೈಪೋಟಿ ಮತ್ತು ರಕ್ತಸಿಕ್ತ ರೌಡಿಸಂ ಕಥೆಯನ್ನು ಚಿತ್ರ ಒಳಗೊಂಡಿದೆ. ಧ್ರುವ ಅವರು ಮಾಸ್ ಹಾಗೂ ಆ್ಯಕ್ಷನ್ ಮೂಲಕ ಅಭಿಮಾನಿಗಳ ಎದುರು ಬಂದಿದ್ದಾರೆ. ‘ಕೆಡಿ’ ಸಿನಿಮಾದ ಮತ್ತೊಂದು ದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಚಿತ್ರದ ಅದ್ದೂರಿ ತಾರಾಗಣ. ಈ ಸಿನಿಮಾದಲ್ಲಿ ಭಾರತೀಯ ಚಿತ್ರರಂಗದ ಘಟಾನುಘಟಿ ಕಲಾವಿದರು ಒಂದಾಗಿದ್ದಾರೆ.
ಕ್ರೇಜಿಸ್ಟಾರ್ ವಿ. ರವಿಚಂದ್ರನ್, ರಮೇಶ್ ಅರವಿಂದ್, ಬಾಲಿವುಡ್ ನಟ ಸಂಜಯ್ ದತ್, ಶಿಲ್ಪಾ ಶೆಟ್ಟಿ, ರೀಷ್ಮಾ ನಾಣಯ್ಯ ಬಣ್ಣ ಹಚ್ಚಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಚಿತ್ರದ ಪ್ರಮುಖ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಂಡು ಚಿತ್ರದ ತೂಕವನ್ನು ಹೆಚ್ಚಿಸಿದ್ದಾರೆ. ಕನ್ನಡದ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ ಈ ಚಿತ್ರವನ್ನು ದೊಡ್ಡ ಬೆಕಟ್ನಲ್ಲಿ ನಿರ್ಮಿಸಿದೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಇದೆ.
ಅಜ್ಜ ಅಜ್ಜಿಯಂದಿರಿಗೆ (grandparents) ಪಿಜ್ಜಾ ಬರ್ಗರ್ ಕೊಟ್ಟರೆ ಅಷ್ಟಾಗಿ ಇಷ್ಟ ಪಡಲ್ಲ. ಈ ಹಿರಿಜೀವಗಳಿಗೆ ಮನೆಯಲ್ಲಿ ತಯಾರಿಸಿದ ರುಚಿಕರ ಆಹಾರಗಳನ್ನು ಸವಿಯುವುದೇ ಇಷ್ಟ. ಆದರೆ ಈ 92 ವರ್ಷದ ಈ ಅಜ್ಜಿ ತುಂಬಾ ಅಪ್ಡೇಟ್ ಆದಂತೆ ಕಾಣುತ್ತಿದ್ದಾರೆ. ಮೊಮ್ಮಗಳು ಅಜ್ಜಿಗೆ ಪಿಜ್ಜಾ ತಂದು ಕೊಟ್ಟಿದ್ದಾಳೆ. ಬಹಳ ಖುಷಿಯಿಂದ ಬಾಯಿ ಚಪ್ಪರಿಸಿಕೊಂಡು ಪಿಜ್ಜಾ ತಿನ್ನುವ ಅಜ್ಜಿಯ ವಿಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದೆ.
@viewsandbrewsss ಹೆಸರಿನ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಈ ವಿಡಿಯೋವನ್ನು ಮೊಮ್ಮಗಳು ಹಂಚಿಕೊಂಡಿದ್ದಾಳೆ. ನನ್ನ ಅಜ್ಜಿ ಪಕ್ಕಾ ಪಿಜ್ಜಾ ಪ್ರಿಯೆ. 92 ವರ್ಷದ ಎಲ್ಲರಿಗೂ ಖಿಚಡಿ ಬೇಕಂತೇನಿಲ್ಲ ಎಂದು ಬರೆದುಕೊಂಡಿದ್ದಾರೆ. ಈ ಕ್ಲಿಪಿಂಗ್ನಲ್ಲಿ ಅಜ್ಜಿ ಪಿಜ್ಜಾ ತುಂಡುಗಳನ್ನು ತಿನ್ನುತ್ತಾ ಸಖತ್ ಎಂಜಾಯ್ ಮಾಡುತ್ತಿರುವುದನ್ನು ಕಾಣಬಹುದು. ತನಗೆ ಕುಡಿಯಲು ಥಮ್ಸ್ ಅಪ್ ಬೇಕೆಂದು ಕೇಳುತ್ತಿದ್ದಾರೆ. ಅವರಿಗಾದ ಖುಷಿಯೂ ಅವರ ಮುಖದಲ್ಲಿ ನಗುವಿನಲ್ಲಿ ವ್ಯಕ್ತವಾಗಿದೆ.
ಈ ವಿಡಿಯೋ ಒಂದು ಲಕ್ಷ ತೊಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಅಜ್ಜಿಯನ್ನು ಖುಷಿಯಾಗಿಸಿರುವ ಮೊಮ್ಮಗಳ ಪ್ರಯತ್ನ ಚೆನ್ನಾಗಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಈ ಜನರೇಷನ್ ಮಕ್ಕಳು ತಮ್ಮ ಅಜ್ಜ ಅಜ್ಜಿಯಂದಿರಿಗೆ ಪಿಜ್ಜಾ ತಿನ್ನಿಸುವುದನ್ನು ನೋಡಲು ಖುಷಿಯಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಅಜ್ಜಿಯ ಮುಖದಲ್ಲಿ ಸಂತೋಷ ಎಲ್ಲಾ ಹೇಳ್ತಿದೆ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳ ಸಮಗ್ರತೆ ಮತ್ತು ಭದ್ರತೆ ಕಾಪಾಡುವ ನಿಟ್ಟಿನಲ್ಲಿ ಬಿಸಿಸಿಐ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈ ನಿರ್ಧಾರದಂತೆ ಇನ್ಮುಂದೆ ಐಪಿಎಲ್ ಆಟಗಾರರು ಹಾಗೂ ಸಿಬ್ಬಂದಿಗಳು ಕ್ರೀಡಾಂಗಣದ ಪ್ರದೇಶಗಳಲ್ಲಿ ಯಾವುದೇ ರೀತಿಯ ಸ್ಮಾರ್ಟ್ ಗ್ಲಾಸ್ ಬಳಸುವಂತಿಲ್ಲ. ಪ್ರಸ್ತುತ ಟೂರ್ನಿಯಿಂದಲೇ ಸ್ಮಾರ್ಟ್ ಗ್ಲಾಸ್ ಅಥವಾ ಹೈ-ಟೆಕ್ ಗ್ಲಾಸ್ ಧರಿಸದಂತೆ ಆಟಗಾರರಿಗೆ ಹಾಗೂ ಸಿಬ್ಬಂದಿಗಳಿಗೆ ಸೂಚಿಸಲಾಗಿದೆ. ಹೀಗಾಗಿ ಇನ್ಮುಂದೆ ಐಪಿಎಲ್ ವೇಳೆ ಸ್ಮಾರ್ಟ್ ಗ್ಲಾಸ್ ಧರಿಸಲು ಅವಕಾಶ ಇರುವುದಿಲ್ಲ.
ಈ ನಿಷೇಧಕ್ಕೆ ಕಾರಣವೇನು?
ಸ್ಮಾರ್ಟ್ ಗ್ಲಾಸ್ಗಳ ಮೂಲಕ ರಹಸ್ಯವಾಗಿ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಬಹುದು. ಹಾಗೆಯೇ ಇಂತಹ ಗ್ಲಾಸ್ಗಳ ಮೂಲಕ ತಂಡದ ಪ್ಲ್ಯಾನ್ಗಳು ಸೋರಿಕೆಯಾಗಬಹುದು.
ಲೈವ್ ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್ ಅಥವಾ ಸ್ಪಾಟ್ ಫಿಕ್ಸಿಂಗ್ ದಂಧೆಗೆ ಇಂತಹ ಸ್ಮಾರ್ಟ್ ಗ್ಲಾಸ್ ಬಳಕೆಯಾಗುವ ಅಪಾಯವಿದೆ.
ವಿಶೇಷ ತಂತ್ರಜ್ಞಾನ ಕಂಪೆನಿಗಳು ಆಟಗಾರರಿಗೆ ಮತ್ತು ತಂಡದ ಸಿಬ್ಬಂದಿಗಳಿಗೆ ವಿಶೇಷ ಸ್ಮಾರ್ಟ್ ಗ್ಲಾಸ್ ಮಾರಾಟ ಮಾಡಲು ಪ್ರಯತ್ನಿಸುತ್ತಿವೆ ಎಂಬ ಮಾಹಿತಿಯೊಂದು ಬಿಸಿಸಿಐಗೆ ಸಿಕ್ಕಿದೆ.
ಈ ಎಲ್ಲಾ ಕಾರಣಗಳಿಂದಾಗಿ ಬಿಸಿಸಿಐ ಇಂಡಿಯನ್ ಪ್ರೀಮಿಯರ್ ಲೀಗ್ ವೇಳೆ ಸ್ಮಾರ್ಟ್ ಗ್ಲಾಸ್ ಬಳಕೆಯನ್ನು ನಿಷೇಧಿಸಿದೆ.
ಕಠಿಣ ಕ್ರಮದ ಎಚ್ಚರಿಕೆ:
ಈ ನಿಯಮವನ್ನು ಉಲ್ಲಂಘಿಸುವ ಆಟಗಾರರು ಅಥವಾ ಸಿಬ್ಬಂದಿಗೆ ಭಾರಿ ಮೊತ್ತದ ದಂಡ ಮತ್ತು ತಕ್ಷಣದ ಅಮಾನತು ಶಿಕ್ಷೆಯನ್ನು ವಿಧಿಸಲಾಗುವುದು ಎಂದು ಬಿಸಿಸಿಐ ಎಚ್ಚರಿಕೆ ನೀಡಿದೆ. ಅಲ್ಲದೆ ಪ್ರಸ್ತುತ ನಡೆಯುತ್ತಿರುವ ಕ್ವಾಲಿಫೈಯರ್-2 ಹಾಗೂ ಫೈನಲ್ ಪಂದ್ಯಗಳ ವೇಳೆ ಸ್ಮಾರ್ಟ್ ಗ್ಲಾಸ್ ಹಾಗೂ ಹೈ-ಟೆಕ್ ಗ್ಲಾಸ್ಗಳನ್ನು ಬಳಸದಂತೆ ಸೂಚಿಸಲಾಗಿದೆ.
ಮೊಬೈಲ್ ಬಳಸುವುದು ನಿಷೇಧ:
ಆರ್ಸಿಬಿ ಮತ್ತು ಆರ್ಆರ್ ನಡುವಣ ಪಂದ್ಯದ ವೇಳೆ ಡಗೌಟ್ನಲ್ಲಿ ಮೊಬೈಲ್ ಬಳಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಪಂದ್ಯದ ವೇಳೆ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆ.
ಹಾಗೆಯೇ ಪಂದ್ಯದ ವೇಳೆ ಫ್ರಾಂಚೈಸಿ ಮಾಲೀಕರು ಡಗೌಟ್ಗೆ ಪ್ರವೇಶಿಸುವುದನ್ನು, ಮ್ಯಾಚ್ ನಡುವೆ ಮೈದಾನಕ್ಕೆ ಎಂಟ್ರಿ ಕೊಡುವುದನ್ನು ಹಾಗೂ ಆಟಗಾರರನ್ನು ಮಾತನಾಡಿಸುವುದನ್ನು ಬಿಸಿಸಿಐ ನಿಷೇಧಿಸಿದೆ.
ಇನ್ಮುಂದೆ ಬಸ್ ಟಿಕೆಟ್ಗಳ ಮೇಲೂ ಬರಲಿದೆ ಜಾಹೀರಾತು! Image Credit source: The Hindu
ಬೆಂಗಳೂರು, ಮೇ 29: ನೌಕರರ ವೇತನ ಪರಿಷ್ಕರಣೆ ಹಾಗೂ ಬಾಕಿ ಪಾವತಿಸಲು ಹಣವಿಲ್ಲದೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಬಿಎಂಟಿಸಿ (BMTC), ಸಾಲದ ಸುಳಿಯಿಂದ ಹೊರಬರಲು ಇದೀಗ ಹೊಸ ಆದಾಯದ ಮೂಲ ಹುಡುಕಿದೆ. ಈಗಾಗಲೇ ಬಸ್ಗಳ ಮೇಲೆ ಜಾಹೀರಾತು ಪ್ರದರ್ಶಿಸುತ್ತಿರುವ ನಿಗಮ, ಈಗ ಪ್ರಯಾಣಿಕರಿಗೆ ನೀಡುವ ಟಿಕೆಟ್ಗಳ ಮೇಲೂ ಜಾಹೀರಾತು ಮುದ್ರಿಸಲು ಟೆಂಡರ್ ಆಹ್ವಾನಿಸಿದೆ.
ಮುಖ್ಯಾಂಶಗಳು
ಆರ್ಥಿಕ ಸಂಕಷ್ಟದಲ್ಲಿರುವ ಬಿಎಂಟಿಸಿ ಆದಾಯಕ್ಕಾಗಿ ಬಸ್ ಟಿಕೆಟ್ಗಳ ಮೇಲೆ ಜಾಹೀರಾತು ಪ್ರದರ್ಶಿಸಲಿದೆ.
ಪ್ರತಿದಿನ 45 ಲಕ್ಷ ಪ್ರಯಾಣಿಕರನ್ನು ತಲುಪಲು ಒಂದು ವರ್ಷದ ಅವಧಿಗೆ ಟೆಂಡರ್ ಆಹ್ವಾನ.
ತಂಬಾಕು, ಮದ್ಯ ಮತ್ತು ಅಶ್ಲೀಲ ಜಾಹೀರಾತುಗಳ ಮುದ್ರಣಕ್ಕೆ ನಿಗಮದಿಂದ ಕಡ್ಡಾಯ ನಿಷೇಧ.
ಪ್ರತಿದಿನ ಸುಮಾರು 6,275 ಬಸ್ಗಳಲ್ಲಿ 45 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಿದ್ದು, ಈ ಬೃಹತ್ ನೆಟ್ವರ್ಕ್ ಬಳಸಿಕೊಂಡು ಒಂದು ವರ್ಷದ ಅವಧಿಗೆ ಟಿಕೆಟ್ ಜಾಹೀರಾತು ನೀಡಲು ಅವಕಾಶ ಕಲ್ಪಿಸಲಾಗಿದೆ. ಬಿಎಂಟಿಸಿ ಸದ್ಯ ವಾರ್ಷಿಕವಾಗಿ ಜಾಹೀರಾತುಗಳಿಂದ 57.48 ಕೋಟಿ ರೂ. ಆದಾಯ ಗಳಿಸುತ್ತಿದ್ದು, ಈ ಹೊಸ ಯೋಜನೆಯಿಂದ ಆದಾಯ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
ಪ್ರಯಾಣಿಕರ ಆಗ್ರಹ
ಆದಾಯ ಕ್ರೋಡೀಕರಣಕ್ಕೆ ಇದು ಒಳ್ಳೆಯ ನಿರ್ಧಾರ. ಆದರೆ ಟಿಕೆಟ್ಗಳ ಮೇಲೆ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಜಾಹೀರಾತುಗಳಿರಲಿ. ಗುಟ್ಕಾ, ಪಾನ್ ಮಸಾಲಾ, ಮದ್ಯ ಅಥವಾ ಯಾವುದೇ ಅಶ್ಲೀಲ ಜಾಹೀರಾತುಗಳನ್ನು ಹಾಕಬೇಡಿ ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
ಸಾರ್ವಜನಿಕರ ಈ ಬೇಡಿಕೆಗೆ ಪೂರಕವಾಗಿ ತಂಬಾಕು, ಮಾದಕ ದ್ರವ್ಯ ಹಾಗೂ ಅಶ್ಲೀಲ ವಸ್ತುಗಳ ಜಾಹೀರಾತುಗಳಿಗೆ ನಿಗಮ ಕಡ್ಡಾಯ ನಿಷೇಧ ಹೇರಿದೆ. ಒಟ್ಟಿನಲ್ಲಿ, ನೌಕರರ ಬೇಡಿಕೆ ಈಡೇರಿಸಲು ಪರದಾಡುತ್ತಿರುವ ಬಿಎಂಟಿಸಿಗೆ ಈ ಟಿಕೆಟ್ ಜಾಹೀರಾತು ತಂತ್ರ ಕೈಹಿಡಿಯಲಿದೆಯೇ ಎಂದು ಕಾದುನೋಡಬೇಕಿದೆ.
ಕೇಂದ್ರ ಸರ್ಕಾರದ ಅಧೀನದಲ್ಲಿರುವ ಪ್ರತಿಷ್ಠಿತ ಸಂಸ್ಥೆಯಲ್ಲಿ ತಾಂತ್ರಿಕ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಒಂದು ಭರ್ಜರಿ ಸಿಹಿ ಸುದ್ದಿ. ಭಾರತ ಸರ್ಕಾರದ ರೈಲ್ವೆ ಸಚಿವಾಲಯದ ಒಳಪಡುವ ನವರತ್ನ ಸಾರ್ವಜನಿಕ ವಲಯದ ಉದ್ಯಮವಾದ ರೈಲ್ಟೆಲ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (RailTel) ಪ್ರಸಕ್ತ ಸಾಲಿನ ಬೃಹತ್ ನೇಮಕಾತಿ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ದಕ್ಷಿಣ ವಲಯದ ಅತ್ಯಂತ ಮಹತ್ವಾಕಾಂಕ್ಷಿ KSWAN ಯೋಜನೆಗಾಗಿ ಅನುಭವ ಹೊಂದಿರುವ ತಾಂತ್ರಿಕ ತಜ್ಞರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುವ ಸುವರ್ಣ ಅವಕಾಶ ದೊರೆಯಲಿದೆ.
ರೈಲ್ಟೆಲ್ ನೇಮಕಾತಿ ಪ್ರಕ್ರಿಯೆಯ ಹಿನ್ನೆಲೆ ಮತ್ತು ಉದ್ಯೋಗದ ಸ್ವರೂಪ:
ರೈಲ್ಟೆಲ್ ಸಂಸ್ಥೆಯು ದೇಶಾದ್ಯಂತ ರೈಲ್ವೆ ಹಳಿಗಳ ಉದ್ದಕ್ಕೂ ಆಪ್ಟಿಕ್ ಫೈಬರ್ ನೆಟ್ವರ್ಕ್ ಅನ್ನು ನಿರ್ವಹಿಸುವ ಮತ್ತು ಪ್ರಮುಖ ಡೇಟಾ ಸೆಂಟರ್ಗಳನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊಂದಿದೆ. ಪ್ರಸ್ತುತ ಹೊರಡಿಸಲಾಗಿರುವ ಈ ಅಧಿಕೃತ ಅಧಿಸೂಚನೆಯು ಮುಕ್ತ ಮಾರುಕಟ್ಟೆಯಿಂದ (Open Market) ಅತ್ಯಂತ ಕ್ರಿಯಾಶೀಲ ಮತ್ತು ಅರ್ಹ ಭಾರತೀಯ ನಾಗರಿಕರನ್ನು ಆಯ್ಕೆ ಮಾಡುವ ಉದ್ದೇಶವನ್ನು ಹೊಂದಿದೆ. ಈ ನೇಮಕಾತಿಯು ಸಂಪೂರ್ಣವಾಗಿ ಐದು ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ (Contract Basis) ನಡೆಯಲಿದ್ದು, ಪ್ರತಿಭಾವಂತ ವೃತ್ತಿಪರರಿಗೆ ಕೇಂದ್ರ ಸರ್ಕಾರದ ಬೃಹತ್ ಯೋಜನೆಯೊಂದರಲ್ಲಿ ಪ್ರತ್ಯಕ್ಷವಾಗಿ ಕೆಲಸ ಮಾಡುವ ಉತ್ತಮ ಅನುಭವವನ್ನು ಇದು ಒದಗಿಸಿಕೊಡುತ್ತದೆ.
ನೆನಪಿನಲ್ಲಿಡಬೇಕಾದ ಪ್ರಮುಖ ದಿನಾಂಕಗಳು ಮತ್ತು ಗಡುವು:
ಈ ಉದ್ಯೋಗಾವಕಾಶಕ್ಕೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಅತ್ಯಂತ ಸೀಮಿತ ಸಮಯಾವಕಾಶವನ್ನು ನೀಡಲಾಗಿದೆ. ಈ ನೇಮಕಾತಿಯ ಅಧಿಕೃತ ಪ್ರಕಟಣೆಯನ್ನು 20 ಮೇ 2026 ರಂದು ಹೊರಡಿಸಲಾಗಿದ್ದು, ಆನ್ಲೈನ್ ಅಥವಾ ನಿಗದಿಪಡಿಸಿದ ಮಾದರಿಯಲ್ಲಿ ಅರ್ಜಿ ಸಲ್ಲಿಸಲು ಮೇ 30 ಅಂತಿಮ ದಿನವಾಗಿರುತ್ತದೆ. ಅಭ್ಯರ್ಥಿಗಳ ವಯೋಮಿತಿ ಮತ್ತು ಶೈಕ್ಷಣಿಕ ಅರ್ಹತೆ ಸೇರಿದಂತೆ ಎಲ್ಲಾ ಅರ್ಹತಾ ಮಾನದಂಡಗಳನ್ನು ಪರಿಗಣಿಸಲು ಈ ಕೊನೆಯ ದಿನಾಂಕವನ್ನೇ ಕಟ್ಆಫ್ ದಿನವನ್ನಾಗಿ ನಿಗದಿಪಡಿಸಲಾಗಿದೆ. ಇನ್ನು ಸಂದರ್ಶನದ ತಾತ್ಕಾಲಿಕ ದಿನಾಂಕಗಳನ್ನು ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಮುಗಿದ ನಂತರ ರೈಲ್ಟೆಲ್ ವೆಬ್ಸೈಟ್ನಲ್ಲಿ ಪ್ರತ್ಯೇಕವಾಗಿ ಪ್ರಕಟಿಸಲಾಗುವುದು.
ಖಾಲಿ ಇರುವ ಹುದ್ದೆಗಳು ಮತ್ತು ಸಂಬಳದ ವಿವರಗಳು:
ಈ ನೇಮಕಾತಿ ಅಡಿಯಲ್ಲಿ ಒಟ್ಟು 17 ವಿವಿಧ ಶ್ರೇಣಿಯ ತಾಂತ್ರಿಕ ಮತ್ತು ಮ್ಯಾನೇಜ್ಮೆಂಟ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇದರಲ್ಲಿ ಅತ್ಯುನ್ನತ ಹುದ್ದೆಯಾದ ಪ್ರಾಜೆಕ್ಟ್ ಡೈರೆಕ್ಟರ್ಗೆ ವಾರ್ಷಿಕ 17,32,810 ರೂ. ವರೆಗೆ ಮತ್ತು ಪ್ರಾಜೆಕ್ಟ್ ಮ್ಯಾನೇಜರ್ಗೆ 13,10,400ರೂ. ವರೆಗೆ ಆಕರ್ಷಕ ವೇತನ ಪ್ಯಾಕೇಜ್ (Annual CTC) ನಿಗದಿಪಡಿಸಲಾಗಿದೆ. ಇವುಗಳೊಂದಿಗೆ ನೆಟ್ವರ್ಕ್ ಸ್ಪೆಷಲಿಸ್ಟ್, ನೆಟ್ವರ್ಕ್ ಮತ್ತು ಸೆಕ್ಯೂರಿಟಿ ಅಡ್ಮಿನ್ಗಳು, ಸರ್ವರ್ ಅಡ್ಮಿನ್, ವಿವಿಧ ಹಂತದ ನೆಟ್ವರ್ಕ್ ಇಂಜಿನಿಯರ್ಗಳು, ಸೆಂಟ್ರಲ್ ಹೆಲ್ಪ್ಡೆಸ್ಕ್ ಸಿಬ್ಬಂದಿ, ಎಲೆಕ್ಟ್ರಿಕಲ್ ಟೆಕ್ನಿಷಿಯನ್ ಮತ್ತು ಫೀಲ್ಡ್ ಇಂಜಿನಿಯರ್ ಸೇರಿದಂತೆ ಒಟ್ಟು 22 ಖಾಲಿ ಸೀಟುಗಳನ್ನು ಭರ್ತಿ ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರತಿಯೊಂದು ಹುದ್ದೆಯ ಜವಾಬ್ದಾರಿಗೆ ತಕ್ಕಂತೆ ವಾರ್ಷಿಕ ಸಂಬಳವು ಲಕ್ಷಾಂತರ ರೂಪಾಯಿಗಳಲ್ಲಿ ಇರಲಿದೆ.
ಅರ್ಜಿ ಸಲ್ಲಿಸುವ ಸುಲಭ ವಿಧಾನ ಮತ್ತು ಅಧಿಕೃತ ಮಾಹಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅರ್ಹ ಅಭ್ಯರ್ಥಿಗಳು ರೈಲ್ಟೆಲ್ ಸಂಸ್ಥೆಯ ಅಧಿಕೃತ ವೆಬ್ಸೈಟ್ ಆದ www.railtel.inಗೆ ಭೇಟಿ ನೀಡಬೇಕಾಗುತ್ತದೆ. ವೆಬ್ಸೈಟ್ನಲ್ಲಿ ಲಭ್ಯವಿರುವ ‘Careers’ ವಿಭಾಗದಲ್ಲಿ ಈ ಉದ್ಯೋಗದ (No. RCIL/2026/P&A/01/SR) ಸಂಪೂರ್ಣ ಪಿಡಿಎಫ್ (PDF) ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು, ಶೈಕ್ಷಣಿಕ ಅರ್ಹತೆ ಮತ್ತು ನಿಗದಿತ ಅನುಭವದ ವಿವರಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ಮೇ 30 ರೊಳಗೆ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿರುವುದರಿಂದ, ಕೊನೆಯ ಕ್ಷಣದ ಸರ್ವರ್ ಮತ್ತು ತಾಂತ್ರಿಕ ದೋಷಗಳನ್ನು ತಪ್ಪಿಸಲು ಆಸಕ್ತರು ಇಂದೇ ತಮ್ಮ ಅರ್ಜಿಗಳನ್ನು ಸಲ್ಲಿಸುವುದು ಸೂಕ್ತವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮೇ 29: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೈ ಕಮಾಂಡ್ ನಾಯಕರು ಸತೀಶ್ ಜಾರಕಿಹೊಳಿ ಅವರನ್ನು ಆಯ್ಕೆ ಮಾಡಲು ಮುಂದಾಗಿದ್ದಾರೆ ಎಂಬುದು ತಿಳಿದುಬಂದಿದೆ. ಈ ಕುರಿತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ಸತೀಶ್ ಜಾರಕಿಹೊಳಿಗೆ ಕರೆ ಮಾಡಿ ಪ್ರಸ್ತಾಪ ಮಾಡಿದ್ದಾರೆ. ಆದರೆ, ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಳ್ಳಲು ಒಂದು ಪ್ರಮುಖ ಷರತ್ತು ವಿಧಿಸಿದ್ದಾರೆ. ಅವರು ಸಚಿವ ಸ್ಥಾನದ ಜೊತೆಗೆ ಕೆಪಿಸಿಸಿ ಅಧ್ಯಕ್ಷರಾಗಲು ಇಚ್ಛಿಸಿದ್ದಾರೆ ಎಂದು ತಿಳಿದುಬಂದಿದೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ, ಡಿ.ಕೆ. ಶಿವಕುಮಾರ್ ಅವರ ಮುಖ್ಯಮಂತ್ರಿ ಹುದ್ದೆಗೆ ಮತ್ತು ಸತೀಶ್ ಜಾರಕಿಹೊಳಿ ಅವರ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ದಾರಿ ಸುಗಮವಾಗಿದೆ ಎಂದು ವರದಿಯಾಗಿದೆ. ಜಾರಕಿಹೊಳಿ ಅವರು ಕಳೆದ ಒಂದು ವರ್ಷದಿಂದಲೂ ಇದೇ ನಿರೀಕ್ಷೆಯಲ್ಲಿದ್ದರು. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದರೆ ಮಾತ್ರ ತಾನು ಕೆಪಿಸಿಸಿ ಅಧ್ಯಕ್ಷನಾಗುವುದಾಗಿ ಅವರು ತಿಳಿಸಿದ್ದರು. ಕೇವಲ ಕೆಪಿಸಿಸಿ ಅಧ್ಯಕ್ಷನಾಗಿ ಅಧಿಕಾರವಿಲ್ಲದೆ ಕೆಲಸ ಮಾಡುವುದು ಕಷ್ಟಕರ ಎಂದು ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಹೈ ಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ವಂಡರ್ ಕಿಡ್ ಖ್ಯಾತಿಯ ವೈಭವ್ ಸೂರ್ಯವಂಶಿಯ (Vaibhav Sooryavanshi) ಆರ್ಭಟ ಮುಂದುವರೆದಿದೆ. ಯುವ ದಾಂಡಿಗನ ಈ ಆರ್ಭಟವೇ ಈಗ ಕ್ರಿಕೆಟ್ ಲೋಕದ ಹಾಟ್ ಟಾಪಿಕ್. ಈ ಟಾಪಿಕ್ ಕುರಿತಾಗಿ ಸಿಡಿಲಬ್ಬರದ ಸಿಡಿಲಮರಿ ಎಬಿ ಡಿವಿಲಿಯರ್ಸ್ ಕೂಡ ಮಾತನಾಡಿದ್ದಾರೆ.
ಖಾಸಗಿ ಲೈವ್ ಚರ್ಚೆಯಲ್ಲಿ ಕಾಣಿಸಿಕೊಂಡ ಎಬಿಡಿ, ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಅನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. “ನನಗೆ ವೈಭವ್ ಅತ್ಯಂತ ಪ್ರಭಾವಶಾಲಿ ಎಂದು ಅನಿಸಿದ್ದು ಆತನ ಸಿದ್ಧತೆ. ಅಂದರೆ 15ನೇ ವಯಸ್ಸಿನಲ್ಲಿರುವ ಆತನಿಗೆ ಇರುವುದು ಅದ್ಭುತ ಸ್ಪಷ್ಟತೆ. ಎದುರಾಳಿ ಬೌಲರ್ಗಳ ಶೈಲಿಯನ್ನು ಅಧ್ಯಯನ ಮಾಡುವುದು ಅಂದುಕೊಂಡಷ್ಟು ಸುಲಭವಲ್ಲ”.
“ಮೈದಾನದ ಪರಿಸ್ಥಿತಿಯನ್ನು ಅರಿತುಕೊಳ್ಳುವುದು, ಪಂದ್ಯಕ್ಕೂ ಮುನ್ನ ಅದಕ್ಕೆ ಮಾನಸಿಕವಾಗಿ ಸಿದ್ಧರಾಗುವುದು, ಯಾವುದೂ ಸಹ ಸುಲಭವಲ್ಲ. ಆದರೆ ಇವೆಲ್ಲದಕ್ಕೂ ಆತ ಸಿದ್ಧಗೊಳ್ಳುತ್ತಿದ್ದಾನೆ. ಪಂದ್ಯಕ್ಕೂ ಮುನ್ನ ಮಾನಸಿಕವಾಗಿ ಸಿದ್ಧನಾಗುತ್ತಿರುವ ರೀತಿಯೇ ಅಪರೂಪವಾದದ್ದು” ಎಂದು ಎಬಿ ಡಿಲಿಯರ್ಸ್ ಹೇಳಿದ್ದಾರೆ.
“ನನಗೆ ಕೆಲವೊಮ್ಮೆ ವೈಭವ್ ಸೂರ್ಯವಂಶಿಯ ಆಟವು ಆಸ್ಟ್ರೇಲಿಯಾದ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್ ಅವರನ್ನು ನೆನಪಿಸುತ್ತದೆ. ಹೇಡನ್ ಕೂಡ ಮ್ಯಾಚ್ ಆರಂಭಕ್ಕೂ ಮುನ್ನ ಮೈದಾನದ ಪಿಚ್ ಮೇಲೆ ನಿಂತು, ತಾನು ಹೇಗೆ ಬ್ಯಾಟಿಂಗ್ ಮಾಡಬೇಕು. ಯಾವ ರೀತಿ ಶಾಟ್ಗಳನ್ನು ಬಾರಿಸಬೇಕು ಎಂಬುದನ್ನು ಕಣ್ಮುಚ್ಚಿ ದೃಶ್ಯೀಕರಿಸಿಕೊಳ್ಳುತ್ತಿದ್ದೆರು. ವೈಭವ್ ಸೂರ್ಯವಂಶಿ ಕೂಡ ಪಂದ್ಯಕ್ಕೂ ಮುನ್ನ ಈ ರೀತಿ ಸಿದ್ಧತೆ ಮಾಡಿಕೊಳ್ಳುತ್ತಿರುವುದನ್ನು ನೋಡಿದೆ” ಎಂದು ಎಬಿಡಿ ಹೇಳಿದ್ದಾರೆ.
“ಕುತೂಹಲಕಾರಿ ವಿಷಯ ಎಂದರೆ ವೈಭವ್ ಸೂರ್ಯವಂಶಿ ಯಾರನ್ನೇ ನಕಲು ಮಾಡಲು ಮುಂದಾಗುತ್ತಿಲ್ಲ ಎಂಬುದು. ಅಂದರೆ ಆತ ಹೊಸದಾಗಿ ರೂಪುಗೊಳ್ಳುತ್ತಿದ್ದಾನೆ. ತಾನು ಹೇಗೆ ಬ್ಯಾಟಿಂಗ್ ಮಾಡಬೇಕು, ಯಾವ ರೀತಿ ಒಗ್ಗಿಕೊಳ್ಳಬೇಕು, ಅಭ್ಯಾಸಗಳನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಇದೆ. ವಿಶ್ವದ ಅತ್ಯುತ್ತಮ ಆಟಗಾರರು ತಮ್ಮ ವೃತ್ತಿಜೀವನದ ಆರಂಭದಲ್ಲಿ ತಮಗೆ ಯಾವುದೇ ಸೂಕ್ತ ಎಂಬುದು ಕಂಡುಕೊಳ್ಳುತ್ತಾರೆ. ವೈಭವ್ ಸೂರ್ಯವಂಶಿ ಕೂಡ ಅದೇ ಹಾದಿಯಲ್ಲಿದ್ದಾರೆ. ತಮಗೇನು ಬೇಕು ಎಂಬ ಸೂತ್ರವನ್ನು ಆರಂಭದಲ್ಲೇ ಕಂಡುಕೊಂಡಿದ್ದಾರೆ”.
“ಈಗ ಜಸ್ಟ್ 15 ವರ್ಷ ಅಷ್ಟೇ. ಈಗಲೇ ಆತನಿಗೆ ಕೆರಿಯರ್ ಬಗ್ಗೆ ಸ್ಪಷ್ಟತೆ ಇದೆ. ಇದೇ ಹಾದಿಯಲ್ಲಿ ಸಾಗಿದರೆ ವೈಭವ್ ಸೂರ್ಯವಂಶಿ ಸೂಪರ್ ಸ್ಟಾರ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ವೈಭವ್ ಸೂರ್ಯವಂಶಿ ಮುಂಬರುವ ದಿನಗಳಲ್ಲಿ ಕ್ರಿಕೆಟ್ ಅಂಗಳವನ್ನು ಆಳಿದರೂ ಅಚ್ಚರಿಪಡಬೇಕಿಲ್ಲ” ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ನಟನೆಯ, ಗೀತು ಮೋಹನ್ದಾಸ್ ನಿರ್ದೇಶನದ ‘ಟಾಕ್ಸಿಕ್’ (Toxic) ಸಿನಿಮಾ ಸದ್ಯ ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ. ಆದರೆ, ಇತ್ತೀಚೆಗೆ ಈ ಸಿನಿಮಾದ ರಿಲೀಸ್ ದಿನಾಂಕ ಪದೇ ಪದೇ ಮುಂದಕ್ಕೆ ಹೋಗುತ್ತಿರುವುದಕ್ಕೆ ನೆಗೆಟಿವ್ ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ಎಲ್ಲಾ ಗೊಂದಲಗಳ ನಡುವೆ, ಚಿತ್ರದ ನಾಯಕಿ ಕಿಯಾರಾ ಅಡ್ವಾಣಿ ಅವರು ‘ಟಾಕ್ಸಿಕ್’ ಸಿನಿಮಾದ ಶೂಟಿಂಗ್ ಅನುಭವವನ್ನು ಹಂಚಿಕೊಳ್ಳುವ ಮೂಲಕ ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಕಿಯಾರಾ, ‘ನೀವು ಗಂಡು ಮತ್ತು ಹೆಣ್ಣಿನ ನಡುವಿನ ಸಂಬಂಧವನ್ನು ನೋಡುವ ರೀತಿಯನ್ನು ಟಾಕ್ಸಿಕ್ ಸಿನಿಮಾ ಸಂಪೂರ್ಣವಾಗಿ ಬದಲಾಯಿಸುತ್ತದೆ. ಸ್ವತಃ ನನಗೂ ಕೂಡ, ನಿರ್ದೇಶಕಿ ಗೀತು ಅವರು ಈ ಕಥೆಯನ್ನು ವಿವರಿಸಿದಾಗ ಓಹ್, ಈ ರೀತಿಯೂ ಇರಲು ಸಾಧ್ಯವೇ? ಎಂದು ಅರ್ಥ ಮಾಡಿಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು’ ಎಂದಿದ್ದಾರೆ.
‘ಯಾವಾಗ ಅವರು ನನಗೆ ನಾಡಿಯಾ ಪಾತ್ರದ ಬಗ್ಗೆ ವಿವರಿಸಿದರೋ, ಆಗ ನನಗೆ ಅನಿಸಿದ್ದು— ವಾಹ್, ನಾನು ಕೂಡ ನನ್ನ ಸ್ವಂತ ಆಲೋಚನೆಗಳಲ್ಲಿ ಹಾಗೂ ಬದುಕುವ ರೀತಿಯಲ್ಲಿ ಇಷ್ಟೊಂದು ನಿರ್ಲಿಪ್ತವಾಗಿ ಮತ್ತು ಸ್ವತಂತ್ರವಾಗಿರಲು ಸಾಧ್ಯವಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು’ ಎಂದುಕೊಂಡೆ’ ಎಂದು ಕಿಯಾರಾ ವಿವರಿಸಿದರು.
‘ಟಾಕ್ಸಿಕ್’ ತಮಗೆ ಅತ್ಯಂತ ಸವಾಲಿನ ಸಿನಿಮಾ ಎಂದಿದ್ದಾರೆ. ‘ಮೊದಲ ಬಾರಿಗೆ ನಾವು ಈ ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ಶೂಟ್ ಮಾಡಿದ್ದೇವೆ. ಒಂದು ಸೀನ್ ಅನ್ನು ಮೊದಲು ಇಂಗ್ಲಿಷ್ನಲ್ಲಿ ಚಿತ್ರೀಕರಿಸಿ, ಅದು ಓಕೆ ಆದ ನಂತರ ಅದೇ ಸೀನ್ ಅನ್ನು ಮತ್ತೆ ಕನ್ನಡದಲ್ಲಿ ಶೂಟ್ ಮಾಡಲಾಗಿದೆ’ ಎಂದು ಚಿತ್ರದ ಮೇಕಿಂಗ್ ಶೈಲಿಯನ್ನು ಬಿಚ್ಚಿಟ್ಟಿದ್ದಾರೆ.
ಕನ್ನಡ ತಮಗೆ ಹೊಸ ಭಾಷೆಯಾಗಿರುವುದರಿಂದ ಡೈಲಾಗ್ಸ್ ಹೇಳುವುದು ಸುಲಭವಲ್ಲ ಎಂದಿರುವ ಕಿಯಾರಾ, ‘ನಾನು ಶೂಟಿಂಗ್ಗೆ ಮುನ್ನಾದಿನ ರಾತ್ರಿಯೇ ಕನ್ನಡದ ಡೈಲಾಗ್ಗಳನ್ನು ಸಂಪೂರ್ಣವಾಗಿ ಬಾಯಿಪಾಠ ಮಾಡುತ್ತಿದ್ದೆ. ಶಾಲೆಯಲ್ಲಿದ್ದಾಗ ಮಾಡುತ್ತಿದ್ದ ಈ ಬಾಯಿಪಾಠದ ಅಭ್ಯಾಸ ಈಗ ನನಗೆ ಬೇರೆ ಭಾಷೆಯ ಸಿನಿಮಾಗಳನ್ನು ಮಾಡುವಾಗ ಸಹಾಯಕ್ಕೆ ಬರುತ್ತಿದೆ’ ಎಂದು ನಕ್ಕಿದ್ದಾರೆ.
‘ನಾನು ಶಾಲೆಯಲ್ಲಿ ಯಾವಾಗಲೂ ಫ್ರಂಟ್ ಬೆಂಚ್ ಸ್ಟೂಡೆಂಟ್ ಆಗಿದ್ದವಳು. ಹಾಗಾಗಿ ಸೆಟ್ಗೆ ಹೋಗುವ ಮುನ್ನ ನನ್ನ ಡೈಲಾಗ್ಸ್ ಮಾತ್ರವಲ್ಲದೆ, ಎದುರಿಗಿರುವ ಸಹ ನಟರ ಡೈಲಾಗ್ಗಳನ್ನೂ ಕೇಳಿಕೊಂಡು ಪಕ್ಕಾ ಪ್ರಿಪರೇಷನ್ನೊಂದಿಗೆ ಹೋಗುತ್ತೇನೆ. ಡೈಲಾಗ್ಗಳು ನಮ್ಮ ತಲೆಯಲ್ಲಿ ಸಂಪೂರ್ಣವಾಗಿ ಅಚ್ಚಾಗಿದ್ದರೆ ಮಾತ್ರ ಸೆಟ್ನಲ್ಲಿ ಯಾವುದೇ ಗೊಂದಲವಿಲ್ಲದೆ ಅತ್ಯುತ್ತಮವಾಗಿ ಎಮೋಷನ್ಸ್ ಮತ್ತು ನಟನೆಯನ್ನು ಹೊರಹಾಕಲು ಸಾಧ್ಯ’ ಎಂದು ಕಿಯಾರಾ ತಮ್ಮ ವೃತ್ತಿಪರತೆಯನ್ನು ಹಂಚಿಕೊಂಡಿದ್ದಾರೆ. ಕಿಯಾರಾ ಅವರ ಈ ಮಾತುಗಳು ‘ಟಾಕ್ಸಿಕ್’ ಸಿನಿಮಾ ಪ್ರೇಕ್ಷಕರಿಗೆ ಕಂಟೆಂಟ್ ವಿಷಯದಲ್ಲಿ ಹೊಸ ಥ್ರಿಲ್ ನೀಡಲಿದೆ ಎಂಬುದನ್ನು ಸಾಬೀತುಪಡಿಸಿದೆ.
ದಕ್ಷಿಣ ಭಾರತ ಹಾಗೂ ಬಾಲಿವುಡ್ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಲಕ್ಕಿ ಸುಂದರಿ ಎಂದೇ ಹೆಸರಾಗಿದ್ದ ಕರಾವಳಿ ಸುಂದರಿ ಪೂಜಾ ಹೆಗ್ಡೆ ಅವರ ಸುವರ್ಣ ಯುಗಕ್ಕೆ ಸದ್ಯ ಗ್ರಹಣ ಹಿಡಿದಂತಾಗಿದೆ. ಇತ್ತೀಚಿನ ವರ್ಷಗಳಲ್ಲಿ ಈ ನಟಿಯ ಸಿನಿಮಾಗಳು ದಕ್ಷಿಣ ಹಾಗೂ ಬಾಲಿವುಡ್ (Bollywood) ಎರಡೂ ಕಡೆ ಬ್ಯಾಕ್-ಟು-ಬ್ಯಾಕ್ ಸೋಲನ್ನು ಕಾಣುತ್ತಿವೆ. ದೊಡ್ಡ ದೊಡ್ಡ ಸೂಪರ್ಸ್ಟಾರ್ಗಳ ಜೊತೆ ಬಣ್ಣ ಹಚ್ಚಿದರೂ ಬಾಕ್ಸ್ ಆಫೀಸ್ನಲ್ಲಿ ಗೆಲುವು ಮಾತ್ರ ಪೂಜಾ ಅವರಿಗೆ ಮರೀಚಿಕೆಯಾಗಿದೆ. ಹಿಂದಿ ಸಿನಿಮಾ ಮೂಲಕ ಅವರು ಗೆಲುವಿನ ಭರವಸೆಯಲ್ಲಿದ್ದಾರೆ.
2021ರ ‘ಮೋಸ್ಟ್ ಎಲಿಜಬೆಲ್ ಬ್ಯಾಚುಲರ್’ ಸಿನಿಮಾದಿಂದ ಪೂಜಾ ಸೋಲು ಶುರುವಾಯಿತು. ನಂತರ ‘ರಾಧೆ ಶ್ಯಾಮ್’, ಆಚಾರ್ಯ, ಬೀಸ್ಟ್ , ಕಿಸಿ ಕಾ ಭಾಯ್ ಕಿಸಿ ಕಿ ಜಾನ್, ಸರ್ಕಸ್, ‘ದೇವ’, ‘ರೆಟ್ರೋ’ ಸಿನಿಮಾಗಳು ಸೋತವು. ‘ಜನ ನಾಯಗನ್’ ರಿಲೀಸ್ ಇನ್ನೂ ಸಂಕಷ್ಟದಲ್ಲಿದೆ. ಹೀಗಾಗಿ ಪೂಜಾ ಹೆಗ್ಡೆ ಮುಟ್ಟಿದ್ದೆಲ್ಲ ಚಿನ್ನ ಆಗೋ ಕಾಲ ಹೋಗಿದೆ.
ಸತತ ಸೋಲುಗಳಿಂದ ಕಳೆಗುಂದಿರುವ ಪೂಜಾ ಹೆಗ್ಡೆ ಅವರ ಕರಿಯರ್ಗೆ ಈಗ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಸಿನಿಮಾ ಒಂದು ಪ್ರಮುಖ ಆಶಾಕಿರಣವಾಗಿ ಮೂಡಿಬಂದಿದೆ. ಈ ಚಿತ್ರದ ಮೂಲಕ ಅವರು ತಮ್ಮ ಫ್ಲಾಪ್ಗಳ ಸರಣಿಗೆ ಬ್ರೇಕ್ ಹಾಕಲು ಭರ್ಜರಿ ತಯಾರಿ ನಡೆಸಿದ್ದಾರೆ.
ಡೇವಿಡ್ ಧವನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ವರುಣ್ ಧವನ್ ನಾಯಕರಾಗಿರುವ ಈ ಎಂಟರ್ಟೈನರ್ ಸಿನಿಮಾ, ನಟಿಯ ಕೆರಿಯರ್ಗೆ ಹೊಸ ತಿರುವು ನೀಡುವ ನಿರೀಕ್ಷೆ ಇದೆ. ಪೂಜಾ ಹೆಗ್ಡೆ ಕೂಡ ಈ ಪ್ರಾಜೆಕ್ಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದು, ತಮ್ಮ ಕಳೆದುಹೋದ ‘ಲಕ್ಕಿ ಹೀರೋಯಿನ್’ ಪಟ್ಟವನ್ನು ಮರಳಿ ಪಡೆಯಲು ಎದುರು ನೋಡುತ್ತಿದ್ದಾರೆ. ಈ ಚಿತ್ರ ಜೂನ್ 5ರಂದು ರಿಲೀಸ್ ಆಗುತ್ತಿದೆ.