ತೀರ್ಪು ವಿಳಂಬಕ್ಕೆ ಸುಪ್ರೀಂ ಬ್ರೇಕ್: ಹೈಕೋರ್ಟ್‌ಗಳಿಗೆ 3 ತಿಂಗಳ ಡೆಡ್‌ಲೈನ್, ಜಾಮೀನು ಸಿಕ್ಕರೆ ಅದೇ ದಿನ ಬಿಡುಗಡೆ

ನವದೆಹಲಿ, ಮೇ 29: ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ತೀರ್ಪುಗಳು ಮತ್ತು ಜಾಮೀನು ಆದೇಶಗಳ ವಿಳಂಬಕ್ಕೆ ಮುಕ್ತಿ ಹಾಡಲು ಸುಪ್ರೀಂಕೋರ್ಟ್(Supreme Court)​ ಶುಕ್ರವಾರ ಒಂದು  ಮಹತ್ವದ ನಿರ್ದೇಶನ ನೀಡಿದೆ. ತೀರ್ಪು ನೀಡಲು ವಿಳಂಬ ಮಾಡುವುದರಿಂದ ದಾವೆದಾರರಿಗೆ ತುಂಬಲಾರದ ನಷ್ಟವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಎಲ್ಲಾ ಹೈಕೋರ್ಟ್‌ಗಳಿಗೆ ಕಟ್ಟುನಿಟ್ಟಾದ ಗಡುವನ್ನು ವಿಧಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಸಂವಿಧಾನದ 142 ನೇ ವಿಧಿಯಡಿ ತಮಗಿರುವ ವಿಶೇಷ ಅಧಿಕಾರವನ್ನು ಬಳಸಿ ಈ  ಆದೇಶಗಳನ್ನು ಹೊರಡಿಸಿದೆ.

3 ತಿಂಗಳೊಳಗೆ ತೀರ್ಪು ಕಡ್ಡಾಯ: ಹೈಕೋರ್ಟ್‌ಗಳು ಯಾವುದೇ ಪ್ರಕರಣದ ವಾದ-ಪ್ರತಿವಾದ ಆಲಿಸಿ ಆದೇಶವನ್ನು ಕಾಯ್ದಿರಿಸಿದ (Reserved) ದಿನಾಂಕದಿಂದ ಗರಿಷ್ಠ 3 ತಿಂಗಳ ಒಳಗಾಗಿ ಅಂತಿಮ ತೀರ್ಪನ್ನು ಪ್ರಕಟಿಸಬೇಕು.

ಜಾಮೀನು ಅರ್ಜಿಗಳಿಗೆ ವಿಶೇಷ ಆದ್ಯತೆ: ವೈಯಕ್ತಿಕ ಸ್ವಾತಂತ್ರ್ಯದ ಪ್ರಕರಣಗಳಲ್ಲಿ ತ್ವರಿತ ನಿರ್ಧಾರಗಳು ಅಗತ್ಯ. ಹೀಗಾಗಿ ಜಾಮೀನು ಅರ್ಜಿಗಳ ಆದೇಶಗಳನ್ನು ಅದೇ ದಿನ ಪ್ರಕಟಿಸಬೇಕು. ಒಂದು ವೇಳೆ ಆದೇಶ ಕಾಯ್ದಿರಿಸಿದರೆ, ಮರುದಿನವೇ ಅದನ್ನು ಪ್ರಕಟಿಸಿ, ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಬೇಕು.

ಮತ್ತಷ್ಟು ಓದಿ: ಸುಪ್ರೀಂಕೋರ್ಟ್​ ಆದೇಶದಿಂದ ದರ್ಶನ್​​ಗೆ ಹೆಚ್ಚಿತು ಸಂಕಷ್ಟ; 2028ರವರೆಗೂ ಬರಲ್ಲ ಡಿ ಬಾಸ್ ಸಿನಿಮಾ?

ಅದೇ ದಿನ ಜೈಲಿನಿಂದ ಬಿಡುಗಡೆ: ಜಾಮೀನು ಅಥವಾ ಶಿಕ್ಷೆ ಅಮಾನತು ಆದೇಶ ಹೊರಬಿದ್ದ ತಕ್ಷಣ ಆ ಮಾಹಿತಿಯನ್ನು ಜೈಲು ಅಧಿಕಾರಿಗಳಿಗೆ ತ್ವರಿತವಾಗಿ ತಲುಪಿಸಬೇಕು. ಅಗತ್ಯ ಪ್ರಕ್ರಿಯೆಗಳನ್ನು ಮುಗಿಸಿ ವಿಚಾರಣಾಧೀನ ಕೈದಿಗಳನ್ನು ಅದೇ ದಿನ ಅಥವಾ ಹೆಚ್ಚೆಂದರೆ ಮರುದಿನವೇ ಜೈಲಿನಿಂದ ಬಿಡುಗಡೆ ಮಾಡಬೇಕು.

24 ಗಂಟೆಗಳಲ್ಲಿ ಅಪ್‌ಲೋಡ್: ಹೈಕೋರ್ಟ್‌ಗಳು ನೀಡುವ ಎಲ್ಲಾ ತೀರ್ಪುಗಳನ್ನು ಅವು ಪ್ರಕಟವಾದ 24 ಗಂಟೆಗಳ ಒಳಗೆ ಆಯಾ ಹೈಕೋರ್ಟ್‌ನ ಅಧಿಕೃತ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡುವುದು ಕಡ್ಡಾಯ.

ಆದೇಶದ ಹಿನ್ನೆಲೆ ಏನು?
ಜಾರ್ಖಂಡ್ ಹೈಕೋರ್ಟ್‌ನಲ್ಲಿ ತೀರ್ಪುಗಳು ದೀರ್ಘಕಾಲದವರೆಗೆ ವಿಳಂಬವಾಗುತ್ತಿದ್ದ ವಿಷಯಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸುವಾಗ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ. ತೀರ್ಪಿನ ಕಾರ್ಯಕಾರಿ (Main) ಭಾಗವನ್ನು ಪ್ರಕಟಿಸುವ ದಿನಾಂಕವನ್ನೇ ಅಧಿಕೃತ ‘ತೀರ್ಪಿನ ದಿನಾಂಕ’ ಎಂದು ಪರಿಗಣಿಸಲಾಗುವುದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಕೋರ್ಟ್ ಮಹತ್ವದ ಹೇಳಿಕೆ: ಹೈಕೋರ್ಟ್‌ಗಳು ಸಾವಿರಾರು ಜನರು ನ್ಯಾಯವನ್ನು ಬಯಸಿ ಬರುವ ಪ್ರಾಥಮಿಕ ಸಂಸ್ಥೆಗಳಾಗಿವೆ. ಇಲ್ಲಿ ಸಮಯಕ್ಕೆ ಸರಿಯಾಗಿ ತೀರ್ಪು ನೀಡುವುದು ಅತ್ಯಗತ್ಯ. ಈ ನಿಯಮಗಳು ಯಾವುದೇ ನ್ಯಾಯಾಧೀಶರು ಅಥವಾ ಸಂಸ್ಥೆಯ ಮೇಲೆ ಆಕ್ಷೇಪ ಹೇರಲು ಅಲ್ಲ, ಬದಲಿಗೆ ನ್ಯಾಯದಾನ ಪ್ರಕ್ರಿಯೆಯನ್ನು ವೇಗಗೊಳಿಸಲು ತರಲಾಗಿದೆ.

ಕೇಂದ್ರ ಮತ್ತು ರಾಜ್ಯಗಳ ಕೆಳ ನ್ಯಾಯಾಲಯಗಳಿಗೂ ನಿಯಮಿತ ಜಾಮೀನು ಆದೇಶಗಳ ಕುರಿತು ತಕ್ಷಣದ ಮಾಹಿತಿ ನೀಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದ್ದು, ಈ ಆದೇಶದಿಂದಾಗಿ ದೇಶಾದ್ಯಂತ ಲಕ್ಷಾಂತರ ಜನರಿಗೆ ವರದಾನವಾಗಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮುಟ್ಟಿನ ನೈರ್ಮಲ್ಯ ದಿನ: ಸಮರ್ಪಕ ನೀತಿ ಮತ್ತು ಅನುಷ್ಠಾನಕ್ಕೆ ಮಹಿಳೆಯರ ಒತ್ತಾಯ

ಮೇ 28 ರಂದು ವಿಶ್ವ ಮುಟ್ಟಿನ ನೈರ್ಮಲ್ಯ ದಿನದ (World Menstrual Hygiene Day) ಅಂಗವಾಗಿ, News9 ವಾಹಿನಿಯು ಭಾರತದ ಅತ್ಯಂತ ಪ್ರಭಾವಶಾಲಿ ಮಹಿಳೆಯರನ್ನು ಒಟ್ಟುಗೂಡಿಸಿ ‘ದಿ ಶಿ-ಕಾನಮಿ ಅಜೆಂಡಾ, ಪಿರಿಯಡ್ ಪವರ್’ (The SHEconomy Agenda, Period Power) ಎಂಬ ವಿಶೇಷ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಮುಟ್ಟಿನ ಬಡತನ (period poverty), ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಒಳಗೊಳ್ಳುವಿಕೆ, ಶೌಚಾಲಯದ ಮೂಲಸೌಕರ್ಯಗಳು ಮತ್ತು ಭಾರತಕ್ಕೆ ತುರ್ತಾಗಿ ಅಗತ್ಯವಿರುವ ಮುಟ್ಟಿನ ನೀತಿ ಸುಧಾರಣೆಗಳ ಕುರಿತು ಗಂಭೀರ ಚರ್ಚೆ ನಡೆಸಲಾಯಿತು.

ಕೆಲಸದ ಸ್ಥಳಗಳಲ್ಲಿ ನಿರ್ಲಕ್ಷ್ಯ ಮತ್ತು ಅಗತ್ಯ ಸುಧಾರಣೆಗಳು

ಸಂಶೋಧನೆಗಳ ಪ್ರಕಾರ, ಮುಟ್ಟಿನ ದಿನಗಳು ಮಹಿಳೆಯರ ಕೆಲಸದ ದಕ್ಷತೆಯ ಮೇಲೆ ಪರಿಣಾಮ ಬೀರುತ್ತವೆ. ಆದಾಗ್ಯೂ, ಭಾರತದ ಬಹುತೇಕ ಕಚೇರಿಗಳಲ್ಲಿ ಇದಕ್ಕೆ ಸಂಬಂಧಿಸಿದ ಯಾವುದೇ ಅಧಿಕೃತ ನೀತಿಗಳಿಲ್ಲ. ಇದು ಕೇವಲ ರಜೆ ನೀಡುವುದಕ್ಕೆ ಸೀಮಿತವಾಗಿರದೆ, ಸ್ವಚ್ಛವಾದ ಶೌಚಾಲಯಗಳು, ಬಳಸಿದ ಸ್ಯಾನಿಟರಿ ಪ್ಯಾಡ್‌ಗಳನ್ನು ವಿಲೇವಾರಿ ಮಾಡುವ ಬಿನ್‌ಗಳು, ಕಚೇರಿ ಅವಧಿಯಲ್ಲಿ ಅಗತ್ಯ ವಿರಾಮಗಳು ಮತ್ತು ಮುಟ್ಟಿನ ನೋವಿನ ಬಗ್ಗೆ ಮುಕ್ತವಾಗಿ ಮಾತನಾಡುವಂತಹ ವಾತಾವರಣ ನಿರ್ಮಾಣವಾಗಬೇಕಿದೆ ಎಂಬಿತ್ಯಾದಿ ಅಭಿಪ್ರಾಯಗಳು ಈ ಚರ್ಚೆಯ ವೇಳೆ ಬಂದವು.

ಸುಲಭ್ ಇಂಟರ್ನ್ಯಾಷನಲ್ ಸಂಸ್ಥೆಯ ರಾಷ್ಟ್ರೀಯ ನಿರ್ದೇಶಕಿ ನಿರ್ಜಾ ಭಟ್ನಾಗರ್ ಅವರು, “ನಮ್ಮ ಕೆಲಸದ ಸಂಸ್ಕೃತಿ ಇನ್ನೂ ಪುರುಷ ಪ್ರಧಾನವಾಗಿದೆ. ಕಚೇರಿಗಳು ಲಿಂಗ-ಅಂತರ್ಗತವಾಗಿರಬೇಕು (gender-inclusive) ಮತ್ತು ಮುಟ್ಟಿನ ರಜೆಯಂತಹ (menstrual leave) ನೀತಿಗಳನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದರು.

ಇದನ್ನೂ ಓದಿ: ಪ್ರತಿದಿನ 1 ಕಿಲೋಮೀಟರ್ ನಡೆದರೆ ಎಷ್ಟು ಕ್ಯಾಲೊರಿ ಕರಗುತ್ತೆ ಗೊತ್ತಾ? ಇಲ್ಲಿದೆ ಆರೋಗ್ಯ ತಜ್ಞರು ನೀಡಿರುವ ಮಹತ್ವದ ಮಾಹಿತಿ

ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರಾದ ಗೀತಾ ಲುತ್ರಾ, “ಸ್ವಚ್ಛ ಮತ್ತು ಬಳಸಲು ಯೋಗ್ಯವಾದ ಶೌಚಾಲಯಗಳು ಮೊದಲ ಅವಶ್ಯಕತೆಯಾಗಿದೆ. ಇತರ ರಜೆಗಳಂತೆಯೇ ಮುಟ್ಟಿನ ರಜೆಗೂ ಕಚೇರಿಗಳಲ್ಲಿ ಅವಕಾಶವಿರಬೇಕು” ಎಂದು ಒತ್ತಾಯಿಸಿದರು.

ಮುಟ್ಟಿನ ಬಗೆಗಿನ ಸಾಮಾಜಿಕ ಕಳಂಕ

ಮ್ಯಾಕ್ಸ್ ಹೆಲ್ತ್‌ಕೇರ್‌ನ ಐವಿಎಫ್ ವಿಭಾಗದ ಮುಖ್ಯಸ್ಥರಾದ ಡಾ. ಸುರ್ವೀನ್ ಘುಮನ್ ಸಿಂಧು ಮಾತನಾಡಿ, “ಮುಟ್ಟಿನ ರಜೆಯಂತಹ ಕ್ರಮಗಳ ಮೂಲಕ ಅಧಿಕೃತ ಮಾನ್ಯತೆ ಸಿಗುವವರೆಗೂ, ಜನರು ಮುಟ್ಟಿನ ಬಗ್ಗೆ ಬಹಿರಂಗವಾಗಿ ಮಾತನಾಡಲು ಹಿಂಜರಿಯುತ್ತಾರೆ. ಮುಟ್ಟು ಎಂಬುದು ಪ್ರಕೃತಿ ಸಹಜ ಪ್ರಕ್ರಿಯೆ ಎಂಬುದನ್ನು ನಾವು ಒಪ್ಪಿಕೊಂಡು, ಯಾವುದೇ ಪೂರ್ವಾಗ್ರಹವಿಲ್ಲದೆ ಈ ಸಮಸ್ಯೆಯನ್ನು ಪರಿಹರಿಸಬೇಕಾಗಿದೆ” ಎಂದು ತಿಳಿಸಿದರು.

ಮುಟ್ಟಿನ ನೈರ್ಮಲ್ಯ ದಿನದ ಅಂಗವಾಗಿ ನ್ಯೂಸ್9ನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅತಿಥಿಗಳು (Photo credit: News9)

ನೀತಿಗಳ ಅನುಷ್ಠಾನದಲ್ಲಿನ ಸವಾಲುಗಳು

ನೀತಿ ಆಯೋಗದ ಮಾಜಿ ನಿರ್ದೇಶಕಿ ಊರ್ವಶಿ ಪ್ರಸಾದ್ ಅವರು ನೀತಿಗಳನ್ನು ಅನುಷ್ಠಾನಕ್ಕೆ ತರಲು ಇರುವ ಸವಾಲುಗಳನ್ನು ಪ್ರಸ್ತಾಪಿಸಿದರು. “ಅನೇಕ ನೀತಿಗಳು ಕೇವಲ ಕಾಗದದ ಮೇಲಿರುತ್ತವೆಯೇ ಹೊರತು ಸರಿಯಾಗಿ ಅನುಷ್ಠಾನಕ್ಕೆ ಬರುವುದಿಲ್ಲ. ಮಹಿಳೆಯರಿಗಾಗಿ ತರುವ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂಬ ಮನಸ್ಥಿತಿ ಇಂದಿಗೂ ಇದೆ. ಈ ಮನಸ್ಥಿತಿ ಬದಲಾಗಬೇಕಿದೆ” ಎಂದರು ಊರ್ವಳಿ ಪ್ರಸಾದ್.

ಹ್ಯೂಮನ್ ಕ್ಯಾಪಿಟಲ್ ಕಂಪನಿಯ ಸಲಹೆಗಾರ್ತಿ ಡಾ. ಕಿರಣ್‌ಪ್ರೀತ್ ಕೌರ್ ಅವರೂ ಈ ಅಭಿಪ್ರಾಯಕ್ಕೆ ಧ್ವನಿಗೂಡಿಸಿದರು. ಅಲ್ಲದೆ, “ಮುಟ್ಟಿನ ಆರೋಗ್ಯ ಮತ್ತು ಅದಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ” ಎಂದು ಪ್ರತಿಪಾದಿಸಿದರು.

ಇದನ್ನೂ ಓದಿ: ಥೈರಾಯ್ಡ್‌ನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ; ಆಹಾರದಲ್ಲಿ ಈ ಬದಲಾವಣೆಯನ್ನು ಅಗತ್ಯವಾಗಿ ಮಾಡಿಕೊಳ್ಳಿ

ಎವರೆಸ್ಟ್ ಶಿಖರವೇರಿದ ಮಹಿಳೆಯ ಸಾಹಸ ಗಾಥೆ

ಹಿಮಾಲಯದಲ್ಲಿ ಎವರೆಸ್ಟ್ ಶಿಖರ ಏರಿದ ಮಹಿಳಾ ಸಾಹಸಿ ಸುನಿತಾ ಸಿಂಗ್ ಚೋಕನ್ ಕೂಡ ಈ ಚರ್ಚೆಯಲ್ಲಿ ಪಾಲ್ಗೊಂಡು, ಪರ್ವತಾರೋಹಣದಲ್ಲಿ ಎದುರಾದ ಸವಾಲುಗಳನ್ನು ಪ್ರಸ್ತಾಪಿಸಿದರು. “ನಾನು ಎವರೆಸ್ಟ್ ಏರುವ ಸಮಯದಲ್ಲಿ ಮುಟ್ಟಾಗಿದ್ದೆ. ಆಮ್ಲಜನಕದ ಕೊರತೆ ಮತ್ತು ತೀವ್ರ ದೈಹಿಕ ಸವಾಲುಗಳ ನಡುವೆಯೂ ನಾನು ಮುನ್ನಡೆದು ಶಿಖರ ತಲುಪಿದೆ” ಎಂದರು. ಮಹಿಳೆಯರು ಯಾವುದೇ ಸೂಕ್ತ ಬೆಂಬಲ ಅಥವಾ ಮಾನ್ಯತೆ ಇಲ್ಲದಿದ್ದರೂ ಇಂತಹ ಕಠಿಣ ಪರಿಸ್ಥಿತಿಗಳಲ್ಲಿ ಅಸಾಧಾರಣ ಸಾಧನೆಗಳನ್ನು ಮಾಡುತ್ತಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

ಭಾರತದಲ್ಲಿ ಮಹಿಳೆಯರು ಸುರಕ್ಷಿತವಾಗಿ, ಗೌರವಯುತವಾಗಿ ಮತ್ತು ಖಾಸಗಿತನ ಕಾಯ್ದುಕೊಂಡು ಮುಟ್ಟನ್ನು ನಿರ್ವಹಿಸುವುದು ಇಂದಿಗೂ ಒಂದು ಸವಾಲಾಗಿದೆ. ಶಾಲೆಗಳಲ್ಲಿ ಶೌಚಾಲಯದ ಕೊರತೆಯಿಂದ ಹಿಡಿದು ಕಚೇರಿಗಳಲ್ಲಿ ಮುಟ್ಟಿನ ನೋವನ್ನು ನಿರ್ಲಕ್ಷಿಸುವವರೆಗೆ ಹಲವು ವ್ಯವಸ್ಥಿತ ಮತ್ತು ಸಾಂಸ್ಕೃತಿಕ ಅಡೆತಡೆಗಳಿವೆ. ಇವುಗಳನ್ನು ಹೋಗಲಾಡಿಸಲು ಕಟ್ಟುನಿಟ್ಟಿನ ನೀತಿಗಳು ಮತ್ತು ಸಮಾಜದ ಮನಸ್ಥಿತಿಯಲ್ಲಿ ಬದಲಾವಣೆ ಅತ್ಯಗತ್ಯ ಎಂದು ಈ ಸಂವಾದದಲ್ಲಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮನೆ ಮಾಲೀಕರು ಹೊರಗೆ ಹೋದಾಗ ಮಕ್ಕಳನ್ನು ಮಲಗಿಸಿ 1.5 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕದ್ದ ಕೆಲಸದಾಕೆ

ಮನೆ ಮಾಲೀಕರು ಮಾರುಕಟ್ಟೆಗೆ ಹೋಗಿರುವಾಗ ಮನೆ ಕೆಲಸದಾಕೆ ಮಕ್ಕಳಿಗೆ ಊಟದಲ್ಲಿ ನಿದ್ರೆ ಬೆರೆಸಿ ತಿನ್ನಿಸಿ ಮಲಗಿಸಿದ್ದಾಳೆ. ಬಳಿಕ ಆಕೆ ಕೆಲವೇ ನಿಮಿಷಗಳಲ್ಲಿ ಮನೆಯಲ್ಲಿದ್ದ 1.5 ಕೋಟಿ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ದೋಚಿ ಪರಾರಿಯಾಗಿದ್ದಾಳೆ. ಈ ಇಡೀ ಆಘಾತಕಾರಿ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹೀಗಾಗಿ ಮನೆಯಲ್ಲಿ ಮಕ್ಕಳ ಜತೆ ಕೆಲಸದಾಕೆಯನ್ನು ಬಿಟ್ಟು ಹೋಗುವುದು ಅಥವಾ ಮನೆಯಲ್ಲಿ ಕೆಲಸದವರನ್ನು ಒಂಟಿಯಾಗಿರಲು ಬಿಡುವುದು ಕಷ್ಟಕರವಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ದೇವರು ವರ-ಶಾಪ ನೀಡಲ್ಲ, ಅವಕಾಶ ಕೊಡ್ತಾನೆ: ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಭಾವುಕ ಪೋಸ್ಟ್

ಡಿಕೆ ಶಿವಕುಮಾರ್ & ಸಿದ್ದರಾಮಯ್ಯImage Credit source: tv9

ಬೆಂಗಳೂರು, ಮೇ 29: ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ (Siddaramaiah) ರಾಜೀನಾಮೆ ನೀಡಿದ ಬೆನ್ನಲ್ಲೇ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಎಕ್ಸ್ (ಟ್ವಿಟರ್) ಖಾತೆಯಲ್ಲಿ ಅತ್ಯಂತ ಭಾವುಕ ಮತ್ತು ಗೌರವಪೂರ್ವಕ ಸಂದೇಶ ಹಂಚಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರ ಐದು ದಶಕಗಳ ರಾಜಕೀಯ ಸೌಹಾರ್ದತೆ, ಹೋರಾಟದ ಹಾದಿ ಮತ್ತು ಜನಪರ ಆಡಳಿತವನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಡಿಕೆ ಶಿವಕುಮಾರ್, ‘ವೇಗವಾಗಿ ನಡೆಯಬೇಕೆಂದರೆ ಒಬ್ಬನೇ ನಡೆಯಬೇಕು, ಸುದೀರ್ಘ ದೂರ ಸಾಗಬೇಕೆಂದರೆ ಜೊತೆಯಾಗಿ ನಡೆಯಬೇಕು’ ಎಂಬ ಗಾದೆಯೊಂದಿಗೆ ಕರುನಾಡಿನ ಪ್ರಗತಿಗಾಗಿ ಸಿದ್ದರಾಮಯ್ಯ ಜತೆ ಒಟ್ಟಾಗಿ ಸಾಗುವ ಬಗ್ಗೆ ಪುನರುಚ್ಚರಿಸಿದ್ದಾರೆ.

ಮುಖ್ಯಾಂಶಗಳು

  • ಸಿದ್ದರಾಮಯ್ಯ ರಾಜಕೀಯ ಯಾನ ಯುವ ಪೀಳಿಗೆಗೆ ಮಾದರಿ ಎಂದು ಬಣ್ಣಿಸಿದ ಡಿಕೆಶಿ.
  • 2020ರಲ್ಲಿ ತಾವು ಕೆಪಿಸಿಸಿ ಅಧ್ಯಕ್ಷರಾದಾಗಿನಿಂದ ಇಂದಿನವರೆಗೂ ಸಿದ್ದರಾಮಯ್ಯ ಅವರು ತಮಗೆ ಭದ್ರವಾದ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಕೃತಜ್ಞತೆ ಸಲ್ಲಿಕೆ.
  • ಸಿದ್ದರಾಮಯ್ಯ ಹಿರಿಯ ಅನುಭವ ಮತ್ತು ಮಾರ್ಗದರ್ಶನ ಅತ್ಯಗತ್ಯ ಎಂದ ಡಿಸಿಎಂ

ಡಿಕೆ ಶಿವಕುಮಾರ್ ಎಕ್ಸ್ ಸಂದೇಶದಲ್ಲೇನಿದೆ?

‘ದೇವರು ವರ ಅಥವಾ ಶಾಪ ನೀಡುವುದಿಲ್ಲ, ಆತ ಕೇವಲ ಅವಕಾಶಗಳನ್ನು ಮಾತ್ರ ನೀಡುತ್ತಾನೆ. ಆ ಸಿಕ್ಕ ಅವಕಾಶದಲ್ಲಿ ನಾವು ಏನನ್ನು ಸಾಧಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ. ಈ ಆಲೋಚನೆಗೆ ನಮ್ಮ ಸಿದ್ದರಾಮಯ್ಯ ಅವರ ಜೀವನವೇ ಅತ್ಯುತ್ತಮ ಉದಾಹರಣೆ. ಮೈಸೂರು ಜಿಲ್ಲೆಯ ಸಣ್ಣ ಹಳ್ಳಿಯೊಂದರಲ್ಲಿ ಹುಟ್ಟಿ-ಬೆಳೆದು, ಸತತ ಹೋರಾಟಗಳ ಮೂಲಕ ರಾಜಕೀಯ ಪ್ರವೇಶಿಸಿ, ಸಾಮಾಜಿಕ ನ್ಯಾಯದ ಹರಿಕಾರರಾಗಿ ಹಾಗೂ ಬಡವರ ಬಂಧುವಾಗಿ ಕರ್ನಾಟಕದ ಮುಖ್ಯಮಂತ್ರಿಯಾದವರು ನನ್ನ ಆತ್ಮೀಯ ಶ್ರೇಯೋಭಿಲಾಷಿ ಸಿದ್ದರಾಮಯ್ಯನವರು’ ಎಂದು ಡಿಕೆ ಶಿವಕುಮಾರ್ ಉಲ್ಲೇಖಿಸಿದ್ದಾರೆ.

ಡಿಕೆ ಶಿವಕುಮಾರ್ ಎಕ್ಸ್ ಸಂದೇಶ

‘ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ಯಶಸ್ವಿ, ಪ್ರಭಾವಶಾಲಿ ಮತ್ತು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವ ದೀರ್ಘಾವಧಿ ಮುಖ್ಯಮಂತ್ರಿಯಾಗಿ ಅವರು ಮೈಲಿಗಲ್ಲು ಸ್ಥಾಪಿಸಿದ್ದಾರೆ. ಅವರ ಜನಕೇಂದ್ರಿತ ಯೋಜನೆಗಳು ಮತ್ತು ರಾಜ್ಯದ ವಿವಿಧ ವಲಯಗಳ ಅಭಿವೃದ್ಧಿಗೆ ನೀಡಿದ ಕೊಡುಗೆಗಳು ಎಂದಿಗೂ ಮರೆಯಲಾಗದವು. ಸುಮಾರು 50 ವರ್ಷಗಳ ಅವರ ಸುದೀರ್ಘ ರಾಜಕೀಯ ಅನುಭವ ಮತ್ತು ಸಾಮಾಜಿಕ ಕಾಳಜಿ ಸದಾ ಸ್ಮರಣೀಯ. 2020ರಲ್ಲಿ ನಾನು ಕೆಪಿಸಿಸಿ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ಇಂದಿನವರೆಗೂ ಸಿದ್ದರಾಮಯ್ಯ ಅವರು ನನ್ನ ಹೆಗಲಿಗೆ ಹೆಗಲು ಕೊಟ್ಟು ಪಕ್ಷ ಸಂಘಟನೆಯಲ್ಲಿ ಭದ್ರ ಸ್ತಂಭದಂತೆ ಜೊತೆಯಾಗಿ ನಿಂತಿದ್ದಾರೆ’ ಎಂದು ಡಿಕೆಶಿ ಬರೆದಿದ್ದಾರೆ.

‘ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಸಚಿವನಾಗಿ ಹಾಗೂ ಉಪಮುಖ್ಯಮಂತ್ರಿಯಾಗಿ ಅವರ ಅನುಭವ, ಬುದ್ಧಿವಂತಿಕೆ ಮತ್ತು ರಾಜಕೀಯ ದೂರದೃಷ್ಟಿಯಿಂದ ನಿರಂತರವಾಗಿ ಕಲಿಯುವ ಸೌಭಾಗ್ಯ ನನ್ನದಾಗಿತ್ತು. ಮುಂಬರುವ ದಿನಗಳಲ್ಲೂ ರಾಜ್ಯದ ಕಲ್ಯಾಣಕ್ಕಾಗಿ ಮತ್ತು ನಮ್ಮ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಅವರ ಹಿರಿಯ ಅನುಭವದ ಮಾರ್ಗದರ್ಶನ ಮತ್ತು ಬೆಂಬಲ ನಮಗೆ ಹೀಗೆಯೇ ಮುಂದುವರಿಯುತ್ತದೆ ಎಂದು ನಾನು ಪ್ರಾಮಾಣಿಕವಾಗಿ ಆಶಿಸುತ್ತೇನೆ. ವೇಗವಾಗಿ ನಡೆಯಬೇಕಾದರೆ ಒಬ್ಬನೇ ನಡೆಯಬೇಕು, ಸುದೀರ್ಘ ದೂರ ಸಾಗಬೇಕಾದರೆ ಜೊತೆಯಾಗಿ ನಡೆಯಬೇಕು ಎಂಬ ನಾಣ್ಣುಡಿಯಂತೆ, ಕರ್ನಾಟಕದ ಜನರ ಸೇವೆಗಾಗಿ ಮತ್ತು ರಾಜ್ಯದ ಪ್ರಗತಿಗಾಗಿ ನಾವೆಲ್ಲರೂ ಒಟ್ಟಾಗಿ ಮುನ್ನಡೆಯೋಣ ಎಂದು ಡಿಕೆ ಶಿವಕುಮಾರ್ ತಮ್ಮ ಎಕ್ಸ್ ಸಂದೇಶದಲ್ಲಿ ಬರೆದುಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬರುತ್ತಿದೆ ಸಿಎಂ ವಿಜಯ್ ಪುತ್ರನ ಮೊದಲ ಸಿನಿಮಾ, ಬಿಡುಗಡೆ ದಿನಾಂಕ ಘೋಷಣೆ

ತಮಿಳು ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್ (Thalapathy Vijay) ಈಗ ಸಿಎಂ ಆಗಿದ್ದಾರೆ. ಚಿತ್ರರಂಗಕ್ಕೆ ವಿದಾಯ ಹೇಳಿದ್ದಾರೆ. ವಿಜಯ್ ಅವರ ಸ್ಥಾನವನ್ನು ತುಂಬಬಲ್ಲ ನಟ ಯಾರು ಎಂಬ ಚರ್ಚೆ ಶುರುವಾಗಿದೆ. ಇದೆಲ್ಲದರ ನಡುವೆ ಸಿಎಂ ವಿಜಯ್ ಅವರ ಪುತ್ರನ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಸಿನಿಮಾದ ಬಿಡುಗಡೆ ದಿನಾಂಕವನ್ನು ಸಹ ಘೋಷಣೆ ಮಾಡಲಾಗಿದೆ. ಕೂಡಲೇ ಸಿನಿಮಾದ ಟ್ರೈಲರ್ ಸಹ ಬಿಡುಗಡೆ ಆಗಲಿದೆ.

ವಿಜಯ್ ಅವರ ಪುತ್ರ ಜೇಸನ್ ಸಂಜಯ್ ತಮಿಳು ಚಿತ್ರರಂಗದ ಪ್ರವೇಶಿಸಿದ್ದಾರೆ ಆದರೆ ನಟನಾಗಿ ಅಲ್ಲ ಬದಲಿಗೆ ನಿರ್ದೇಶಕನಾಗಿ. ಜೇಸನ್ ಸಂಜಯ್ ನಿರ್ದೇಶನ ಮಾಡಿರುವ ಮೊದಲ ಸಿನಿಮಾ ಇದೀಗ ಬಿಡುಗಡೆಗೆ ರೆಡಿಯಾಗಿದೆ. ಜೇಸನ್ ಅವರು ಸಂದೀಪ್ ಕೃಷ್ಣ ಅವರನ್ನು ನಾಯಕನನ್ನಾಗಿ ಹಾಕಿಕೊಂಡು ‘ಸಿಗ್ಮ’ ಹೆಸರಿನ ಸಿನಿಮಾ ನಿರ್ದೇಶಿಸಿದ್ದಾರೆ. ಇದೊಂದು ಯೂತ್​​ಫುಲ್ ಆಕ್ಷನ್ ಸಿನಿಮಾ ಆಗಿದ್ದು, ಸಿನಿಮಾ ಜುಲೈ31ಕ್ಕೆ ಬಿಡುಗಡೆ ಆಗಲಿದೆ.

ವಿಜಯ್ ಪುತ್ರನ ಮೊದಲ ಸಿನಿಮಾಕ್ಕೆ ದೊಡ್ಡ ನಿರ್ಮಾಣ ಸಂಸ್ಥೆ ಆಗಿರುವ ಲೈಕಾ ಪ್ರೊಡಕ್ಷನ್ಸ್​ ಬಂಡವಾಳ ಹೂಡಿದೆ. ಈ ಸಿನಿಮಾನಲ್ಲಿ ನಟಿ ಫಾರಿಯಾ ಅಬ್ದುಲ್ಲಾ ನಾಯಕಿ. ಕನ್ನಡಿಗ ಸಂಪತ್ ರಾಜ್ ಸಹ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು, ಭಿನ್ನವಾಗಿ, ಫ್ರೆಶ್ ಆಗಿ ಸಿನಿಮಾವನ್ನು ಜೇಸನ್ ಸಂಜಯ್ ನಿರ್ದೇಶಿಸಿದಂತಿದ್ದಾರೆ. ಸಿನಿಮಾಕ್ಕೆ ಎಸ್ ತಮನ್ ಅವರು ಸಂಗೀತ ನೀಡಿದ್ದಾರೆ.

ಇದನ್ನೂ ಓದಿ:ವಿಜಯ್ ಕೊನೆಯ ಸಿನಿಮಾ ಆಗಬೇಕಿದ್ದಿದ್ದು ‘ಜನ ನಾಯಗನ್’ ಅಲ್ಲ, ಮತ್ಯಾವುದು?

ಜೇಸನ್ ವಿಜಯ್ ಅವರಿಗೆ ಇದು ಮೊದಲ ಸಿನಿಮಾ ಆಗಿದೆ. ಜೇಸನ್ ವಿಜಯ್, ನಾಯಕನಾಗಿ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿಗಳು ಹರಡಿದ್ದವು ಆದರೆ ಅವರು ನಿರ್ದೇಶಕನಾಗಿ ತಮಿಳು ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ಸಿನಿಮಾ ಆರಂಭಕ್ಕೂ ಮುನ್ನ ಕತೆಯನ್ನು ವಿಜಯ್ ಅವರಿಗೆ ಹೇಳಿ ಒಪ್ಪಿಗೆಯನ್ನು ಸಂಜಯ್ ಪಡೆದುಕೊಂಡಿದ್ದರಂತೆ.

ಕೆಲ ತಿಂಗಳುಗಳಲ್ಲಿ ವಿಜಯ್ ಖಾಸಗಿ ಬದುಕಿನಲ್ಲಿ ಸಾಕಷ್ಟು ವ್ಯತ್ಯಾಸಗಳು ನಡೆದಿವೆ. ವಿಜಯ್ ಪತ್ನಿ ಸಂಗೀತ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ವಿಜಯ್ ಸಹ ತಮ್ಮ ತ್ರಿಷಾ ಜೊತೆಗಿನ ಸಂಬಂಧವನ್ನು ಬಹಿರಂಗಪಡಿಸಿದ್ದಾರೆ. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಬಳಿಕ ವಿಜಯ್ ಪುತ್ರ ಸಂಜಯ್, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೆಸರಿನ ಜೊತೆಗೆ ಇದ್ದ ವಿಜಯ್ ಹೆಸರನ್ನು ತೆಗೆದು ಹಾಕಿದ್ದಾರೆ. ಈಗ ಮಗನ ಮೊದಲ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ವಿಜಯ್ ಬೆಂಬಲ ನೀಡುತ್ತಾರಾ ಅಥವಾ ದೂರವೇ ನಿಲ್ಲುತ್ತಾರಾ? ಎಂಬುದು ಕುತೂಹಲ ಕೆರಳಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಿಲ್ಕ್ ಬೋರ್ಡ್ ಜಂಕ್ಷನ್ ಈಗ ‘ಸ್ವಿಮ್ಮಿಂಗ್ ಪೂಲ್’!: ಕೋಟಿ ಕೋಟಿ ಖರ್ಚು ಮಾಡಿದ್ರೂ ಸುಧಾರಿಸದ ಸಿಲಿಕಾನ್ ಸಿಟಿ

ಬೆಂಗಳೂರು ಮೇ,29: ಸಿಲಿಕಾನ್ ಸಿಟಿಯಲ್ಲಿ ಸಂಚಾರ ದಟ್ಟಣೆಗೆ (Traffic) ಸದಾ ಪ್ರಸಿದ್ಧಿ ಪಡೆದಿರುವ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್, ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಇಡೀ ರಸ್ತೆ ಯಾವ ಮಟ್ಟಿಗೆ ಮುಳುಗಡೆಯಾಗಿದೆ ಎಂದರೆ, ಇದು ಬೆಂಗಳೂರಿನ ಅತ್ಯಂತ ಬ್ಯುಸಿ ರಸ್ತೆಯೋ ಅಥವಾ ಯಾವುದಾದರೂ ಈಜುಕೊಳವೋ (Swimming Pool) ಎಂದು ಸಾರ್ವಜನಿಕರು ಮೂಗಿನ ಮೇಲೆ ಬೆರಳಿಡುವಂತಾಗಿದೆ. ಈ ಅವ್ಯವಸ್ಥೆ ಬಗ್ಗೆ @Karnataka Portfolio ಎಂಬ ಎಕ್ಸ್​​ ಖಾತೆ ವಿಡಿಯೋವೊಂದನ್ನು ಹಂಚಿಕೊಂಡಿದೆ.

ಇಲ್ಲಿ ಅತ್ಯಂತ ಅಘಾತಕಾರಿ ವಿಷಯವೆಂದರೆ, ನಗರದ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಲು ಇತ್ತೀಚೆಗಷ್ಟೇ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಹೊಸ ಮೆಟ್ರೋ ನಿಲ್ದಾಣದ ಸುತ್ತಮುತ್ತಲಿನ ಇಡೀ ಪ್ರದೇಶವೇ ಮಳೆ ನೀರಿನಿಂದ ಮುಳುಗಿಹೋಗಿದೆ. ನಗರದ ಡ್ರೈನೇಜ್ (Drainage) ವ್ಯವಸ್ಥೆ ಹಾಗೂ ಮೂಲಸೌಕರ್ಯದ ಯೋಜನೆಯನ್ನು ಬಿಬಿಎಂಪಿ ಯಾವ ರೀತಿ ರೂಪಿಸಿದೆ ಎಂಬ ಬಗ್ಗೆ ಈ ದೃಶ್ಯಗಳು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಇಲ್ಲಿದೆ ನೋಡಿ ಎಕ್ಸ್​​ ವಿಡಿಯೋ:

ನೀರಿನ ತೀವ್ರತೆಗೆ ದ್ವಿಚಕ್ರ ವಾಹನಗಳು ಹಾಗೂ ಕಾರುಗಳು ರಸ್ತೆಯಲ್ಲೇ ಅರ್ಧ ಮುಳುಗಿದ ಸ್ಥಿತಿಯಲ್ಲಿ ಸಾಗಲು ತೀವ್ರವಾಗಿ ಪರದಾಡಿದವು. ಕಚೇರಿ ಮುಗಿಸಿ ಮನೆಗೆ ಮರಳುತ್ತಿದ್ದ ನೂರಾರು ಪ್ರಯಾಣಿಕರು ಗಂಟೆಗಟ್ಟಲೆ ಭೀಕರ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಸಂಕಷ್ಟ ಅನುಭವಿಸಿದರು. ಪ್ರತಿ ವರ್ಷ ಮಳೆಗಾಲ ಬಂದಾಗಲೂ ಬೆಂಗಳೂರಿನ ಪ್ರಮುಖ ರಸ್ತೆಗಳು ಹೀಗೆ ನೀರಿನಲ್ಲಿ ಕಣ್ಮರೆಯಾಗುವುದು ಸಿಟಿ ಜನರಿಗೆ ಈಗ ಮಾಮೂಲಿ ಎಂಬಂತಾಗಿದೆ.

ಇದನ್ನೂ ಓದಿ: ಮೆಟ್ರೋ ನಿಲ್ದಾಣದ ರಸ್ತೇಲಿ 3 ಅಡಿಯಷ್ಟು ನಿಂತ ಮಳೆ‌ನೀರು! ವಾಹನ ಸವಾರರ ಪರದಾಟ

“ಮೆಟ್ರೋ ಕಾರಿಡಾರ್‌ಗಳಂತಹ ಬೃಹತ್ ಯೋಜನೆಗಳಿಗೆ ಕೋಟಿ ಕೋಟಿ ರೂಪಾಯಿ ಹಣ ಖರ್ಚು ಮಾಡಲಾಗುತ್ತದೆ. ಆದರೆ, ಸಣ್ಣ ಮಳೆ ಬಂದರೆ ನೀರು ಸರಾಗವಾಗಿ ಹರಿದು ಹೋಗಲು ಒಂದು ಸರಿಯಾದ ರಾಜಕಾಲುವೆ ಅಥವಾ ಡ್ರೈನೇಜ್ ವ್ಯವಸ್ಥೆ ಮಾಡಲು ಈ ಅಧಿಕಾರಿಗಳಿಗೆ ಸಾಧ್ಯವಿಲ್ಲವೇ?” ಎಂದು ನೆಟ್ಟಿಗರು ಹಾಗೂ ಸಾರ್ವಜನಿಕರು ಬಿಬಿಎಂಪಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಿಲ್ಕ್ ಬೋರ್ಡ್‌ನ ಈ ಅವಸ್ಥೆಯ ವಿಡಿಯೋಗಳು ಈಗ ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗುತ್ತಿವೆ.

ಬೆಂಗಳೂರಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಿ.ಕೆ. ಶಿವಕುಮಾರ್​​ ಕೈ ಬಿಡದ ಆಂದ್ಲೆ ಶ್ರೀ ಜಗದೀಶ್ವರಿ: ಸತ್ಯವಾಯ್ತು ದೇವಿ ನೀಡಿದ್ದ ಶುಭ ಸೂಚನೆ!

ಕಾರವಾರ, ಮೇ 29: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಆಂದ್ಲೆ ಶ್ರೀ ಜಗದೀಶ್ವರಿ ದೇವಸ್ಥಾನಕ್ಕೆ ಈ ಹಿಂದೆ ಭೇಟಿ ನೀಡಿದ್ದ ಡಿ.ಕೆ. ಶಿವಕುಮಾರ್​​ ಭೇಟಿ ನೀಡಿದ್ದರು. ದೇವಿಯ ಅನುಗ್ರಹದಿಂದಲೇ ಅವರೀಗ ಕರ್ನಾಟಕದ ನೂತನ ಸಿಎಂ ಆಗುವುದು ಬಹುತೇಕ ಖಚಿತ ಎಂಬ ಮಾತುಗಳು ಕೇಳಿಬಂದಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ದೇವಸ್ಥಾನದ ಅರ್ಚಕ ಗಣೇಶ್ ನಾಯ್ಕ್, ಡಿಸೆಂಬರ್ ತಿಂಗಳಲ್ಲಿ ಡಿ‌.ಕೆ‌.ಶಿವಕುಮಾರ್ ದೇಗುಲಕ್ಕೆ ಬಂದಿದ್ದರು. ಅಂದು ಅವರು ಕೇಳಿದ್ದಕ್ಕೆ ದೇವಿ ಒಳ್ಳೆಯ ಸೂಚನೆ ಕೊಟ್ಟಿದ್ದಳು. ಎರಡು ತಿಂಗಳಲ್ಲಿ ಮುಖ್ಯಮಂತ್ರಿ ಸ್ಥಾನದ ಮುನ್ಸೂಚನೆಯೂ ಅವರಿಗೆ ಹೈಕಮಾಂಡ್​​​​​ನಿಂದ ಸಿಕ್ಕಿತ್ತು. ನಿತ್ಯ ಬೆಳಗ್ಗೆ ಪೂಜೆ ಸಲ್ಲಿಸುವಂತೆ ಅವರ ಕಡೆಯವರು ತಿಳಿಸಿದ್ದು, ತಾಯಿ ಪ್ರಸಾದ ಕೊಡುತ್ತಿರುವುದರ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಇಲ್ಲಿ ತಾಯಿ ಪ್ರಸಾದ ಕೊಟ್ಟ ಪ್ರಕಾರವೇ ಅವರಿಗೆ ಅಲ್ಲಿ ಆಗುತ್ತಿತ್ತು. ಸಿಎಂ ಆಗುವವರೆಗೆ ನಿತ್ಯ ಸಂಕಲ್ಪ ಮಾಡಲು ತೀರ್ಮಾನಿಸಲಾಗಿದ್ದು, ಸಿಎಂ ಆದ ಬಳಿಕವೂ ದೇವಿಯ ಅನುಗ್ರಹ ಅವರಿಗೆ ಇರುತ್ತೆ. ಡಿ.ಕೆ.ಶಿವಕುಮಾರ್ ಹೆಸರಲ್ಲಿ 2 ತಿಂಗಳಿನಿಂದ ಸಂಕಲ್ಪ ಮಾಡಲಾಗ್ತಿದೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಮುಹೂರ್ತ ಫಿಕ್ಸ್: ಇಲ್ಲಿದೆ ದಿನಾಂಕ, ಸಮಯದ ವಿವರ

ಬೆಂಗಳೂರು, ಮೇ 29: ಬೆಂಗಳೂರಿನಲ್ಲಿ ಭಾನುವಾರ ಸಂಜೆ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆ ನಡೆಯಲಿದೆ. ಈ ಬಗ್ಗೆ ಇದ್ದ ಗೊಂದಲಗಳಿಗೆ ತೆರೆ ಬಿದ್ದಿದ್ದು, ಕೆಪಿಸಿಸಿ ಕಚೇರಿಯಿಂದ ಎಲ್ಲಾ ಶಾಸಕರಿಗೂ ಬೆಂಗಳೂರಿನಲ್ಲೇ ಇರುವಂತೆ ಸೂಚನೆ ನೀಡಲಾಗಿದೆ. ಬಹುತೇಕ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭೆ ನಡೆಯುವ ಸಾಧ್ಯತೆ ಇದೆ. ಸಿಎಲ್‌ಪಿ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗುತ್ತದೆ. ಈ ವೇಳೆ ಹೈಕಮಾಂಡ್ ನಾಯಕರಿಂದ ಮುಂದಿನ ಮುಖ್ಯಮಂತ್ರಿಯನ್ನು ಘೋಷಿಸಲಾಗುತ್ತದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಹಿಂದೆ ಸಿದ್ದರಾಮಯ್ಯನವರ ಆಯ್ಕೆ ಪ್ರಕ್ರಿಯೆಯಲ್ಲಿ ನಡೆದಂತೆ ಚುನಾವಣೆ ನಡೆಯದೆ, ಹೈಕಮಾಂಡ್‌ನ ನೇರ ನಿರ್ಧಾರವನ್ನು ಸಭೆಯಲ್ಲಿ ಪ್ರಕಟಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ. ಸಿಎಲ್‌ಪಿ ನಾಯಕನ ಆಯ್ಕೆಯಾದ ಬಳಿಕ ಮುಂದಿನ ಮುಖ್ಯಮಂತ್ರಿಯ ಪ್ರಮಾಣ ವಚನ ಸಮಾರಂಭದ ದಿನಾಂಕವನ್ನೂ ನಿಗದಿಪಡಿಸುವ ಸಾಧ್ಯತೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜೀ5ನಲ್ಲಿ ಪ್ರಸಾರ ಕಾಣಲಿದೆ ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾ; ಇಲ್ಲಿದೆ ಮಾಹಿತಿ

ನಿರ್ದೇಶಕ ಪ್ರೇಮ್ ಹಾಗೂ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕಾಂಬಿನೇಷನ್‌ನ ಬಹುನಿರೀಕ್ಷಿತ ‘KD-ದಿ ಡೆವಿಲ್’ (KD Movie) ಸಿನಿಮಾ ಥಿಯೇಟರ್​​ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಈಗ ಸಿನಿಮಾ ಡಿಜಿಟಲ್ ಪರದೆಯ ಮೇಲೆ ಅಬ್ಬರಿಸಲು ಸಜ್ಜಾಗಿದೆ. ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿದ್ದ ಈ ಚಿತ್ರ ಜೂನ್ 5 ರಂದು ಜೀ5 ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಅಧಿಕೃತವಾಗಿ ಸ್ಟ್ರೀಮಿಂಗ್ ಆರಂಭಿಸಲಿದೆ. ವಿಶೇಷವೆಂದರೆ, ಕನ್ನಡದ ಜೊತೆಗೆ ದಕ್ಷಿಣ ಭಾರತದ ಪ್ರಮುಖ ಭಾಷೆಗಳಾದ ತೆಲುಗು, ತಮಿಳು ಹಾಗೂ ಮಲಯಾಳಂನಲ್ಲೂ ಈ ಸಿನಿಮಾ ವೀಕ್ಷಣೆಗೆ ಲಭ್ಯವಿದೆ.

ನಿರ್ದೇಶಕ ಪ್ರೇಮ್ ‘ಜೋಗಿ’ ಚಿತ್ರದಲ್ಲಿ ಅಮ್ಮ ಹಾಗೂ ಮಗನ ಕಥೆ ಹೇಳಿ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಈ ಬಾರಿ ಅಣ್ಣ-ತಮ್ಮನ ಕಥೆ ಹೇಳಿದ್ದಾರೆ. ಈ ಚಿತ್ರದಲ್ಲಿ ಅವರು ಪ್ರೇಕ್ಷಕರನ್ನು 70ರ ದಶಕದ ಕಾಲಘಟ್ಟಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಣ್ಣನೇ ಸರ್ವಸ್ವ ಎಂದು ಬದುಕುವ ‘ಕಾಳಿದಾಸ ಅಲಿಯಾಸ್ ಕೆಡಿ’ ಪಾತ್ರದಲ್ಲಿ ಧ್ರುವ ಸರ್ಜಾ ಕಾಣಿಸಿಕೊಂಡಿದ್ದಾರೆ.

ಅಣ್ಣ-ತಮ್ಮನ ನಡುವಿನ ಭಾವನಾತ್ಮಕ ಬಾಂಧವ್ಯದ ಜೊತೆಗೆ ಆ ಕಾಲದ ರಾಜಕೀಯ ಪೈಪೋಟಿ ಮತ್ತು ರಕ್ತಸಿಕ್ತ ರೌಡಿಸಂ ಕಥೆಯನ್ನು ಚಿತ್ರ ಒಳಗೊಂಡಿದೆ. ಧ್ರುವ ಅವರು ಮಾಸ್ ಹಾಗೂ ಆ್ಯಕ್ಷನ್ ಮೂಲಕ ಅಭಿಮಾನಿಗಳ ಎದುರು ಬಂದಿದ್ದಾರೆ. ‘ಕೆಡಿ’ ಸಿನಿಮಾದ ಮತ್ತೊಂದು ದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಚಿತ್ರದ ಅದ್ದೂರಿ ತಾರಾಗಣ. ಈ ಸಿನಿಮಾದಲ್ಲಿ ಭಾರತೀಯ ಚಿತ್ರರಂಗದ ಘಟಾನುಘಟಿ ಕಲಾವಿದರು ಒಂದಾಗಿದ್ದಾರೆ.

ಇದನ್ನೂ ಓದಿ: 20 ದಿನಕ್ಕೆ‘ಕೆಡಿ’ಸಿನಿಮಾ ಗಳಿಸಿದ್ದೆಷ್ಟು? ನಿರ್ಮಾಪಕರಿಗೆ ಲಾಭವೋ, ನಷ್ಟವೋ?

ಕ್ರೇಜಿಸ್ಟಾರ್ ವಿ. ರವಿಚಂದ್ರನ್, ರಮೇಶ್ ಅರವಿಂದ್, ಬಾಲಿವುಡ್ ನಟ ಸಂಜಯ್ ದತ್, ಶಿಲ್ಪಾ ಶೆಟ್ಟಿ, ರೀಷ್ಮಾ ನಾಣಯ್ಯ ಬಣ್ಣ ಹಚ್ಚಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಚಿತ್ರದ ಪ್ರಮುಖ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಂಡು ಚಿತ್ರದ ತೂಕವನ್ನು ಹೆಚ್ಚಿಸಿದ್ದಾರೆ. ಕನ್ನಡದ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ ಈ ಚಿತ್ರವನ್ನು ದೊಡ್ಡ ಬೆಕಟ್​​ನಲ್ಲಿ ನಿರ್ಮಿಸಿದೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ನನ್ನ ಅಜ್ಜಿ ಪಿಜ್ಜಾ ಪ್ರಿಯೆ; ಬಾಯಿ ಚಪ್ಪರಿಸಿಕೊಂಡು ಪಿಜ್ಜಾ ತಿಂದ ಅಜ್ಜಿ

ಅಜ್ಜ ಅಜ್ಜಿಯಂದಿರಿಗೆ (grandparents) ಪಿಜ್ಜಾ ಬರ್ಗರ್ ಕೊಟ್ಟರೆ ಅಷ್ಟಾಗಿ ಇಷ್ಟ ಪಡಲ್ಲ. ಈ ಹಿರಿಜೀವಗಳಿಗೆ ಮನೆಯಲ್ಲಿ ತಯಾರಿಸಿದ ರುಚಿಕರ ಆಹಾರಗಳನ್ನು ಸವಿಯುವುದೇ ಇಷ್ಟ. ಆದರೆ ಈ 92 ವರ್ಷದ ಈ ಅಜ್ಜಿ ತುಂಬಾ ಅಪ್ಡೇಟ್ ಆದಂತೆ ಕಾಣುತ್ತಿದ್ದಾರೆ. ಮೊಮ್ಮಗಳು ಅಜ್ಜಿಗೆ ಪಿಜ್ಜಾ ತಂದು ಕೊಟ್ಟಿದ್ದಾಳೆ. ಬಹಳ ಖುಷಿಯಿಂದ ಬಾಯಿ ಚಪ್ಪರಿಸಿಕೊಂಡು ಪಿಜ್ಜಾ ತಿನ್ನುವ ಅಜ್ಜಿಯ ವಿಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದೆ.

@viewsandbrewsss ಹೆಸರಿನ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಈ ವಿಡಿಯೋವನ್ನು ಮೊಮ್ಮಗಳು ಹಂಚಿಕೊಂಡಿದ್ದಾಳೆ. ನನ್ನ ಅಜ್ಜಿ ಪಕ್ಕಾ ಪಿಜ್ಜಾ ಪ್ರಿಯೆ. 92 ವರ್ಷದ ಎಲ್ಲರಿಗೂ ಖಿಚಡಿ ಬೇಕಂತೇನಿಲ್ಲ ಎಂದು ಬರೆದುಕೊಂಡಿದ್ದಾರೆ. ಈ ಕ್ಲಿಪಿಂಗ್‌ನಲ್ಲಿ ಅಜ್ಜಿ ಪಿಜ್ಜಾ ತುಂಡುಗಳನ್ನು ತಿನ್ನುತ್ತಾ ಸಖತ್ ಎಂಜಾಯ್ ಮಾಡುತ್ತಿರುವುದನ್ನು ಕಾಣಬಹುದು. ತನಗೆ ಕುಡಿಯಲು ಥಮ್ಸ್ ಅಪ್ ಬೇಕೆಂದು ಕೇಳುತ್ತಿದ್ದಾರೆ. ಅವರಿಗಾದ ಖುಷಿಯೂ ಅವರ ಮುಖದಲ್ಲಿ ನಗುವಿನಲ್ಲಿ ವ್ಯಕ್ತವಾಗಿದೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ರೈಲಿನಲ್ಲಿ ಬ್ರೇಸ್ಲೆಟ್‌ ಮಾರಿ ಸ್ವಾಭಿಮಾನದ ಬದುಕು ಕಟ್ಟಿಕೊಂಡ ಅಜ್ಜಿ, ವೈರಲ್ ಆಯ್ತು ದೃಶ್ಯ

ಈ ವಿಡಿಯೋ ಒಂದು ಲಕ್ಷ ತೊಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಅಜ್ಜಿಯನ್ನು ಖುಷಿಯಾಗಿಸಿರುವ ಮೊಮ್ಮಗಳ ಪ್ರಯತ್ನ ಚೆನ್ನಾಗಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಈ ಜನರೇಷನ್ ಮಕ್ಕಳು ತಮ್ಮ ಅಜ್ಜ ಅಜ್ಜಿಯಂದಿರಿಗೆ ಪಿಜ್ಜಾ ತಿನ್ನಿಸುವುದನ್ನು ನೋಡಲು ಖುಷಿಯಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಅಜ್ಜಿಯ ಮುಖದಲ್ಲಿ ಸಂತೋಷ ಎಲ್ಲಾ ಹೇಳ್ತಿದೆ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version