ಕಣ್ಣುಗಳಿಂದ ಆಗಾಗ ನೀರು ಬರುವುದು ಕೆಲವು ರೋಗದ ಮುನ್ಸೂಚನೆಯಾಗಿರಬಹುದು ಎಚ್ಚರ! – Kannada News | Watery Eyes and Health: Expert Insights on Causes

Watery Eyes And Health Expert Insights On CausesImage Credit source: Getty Images

ಅನೇಕರಿಗೆ ಕಣ್ಣುಗಳಲ್ಲಿ ಪದೇ ಪದೇ ನೀರು ಬರುವುದನ್ನು ನೀವು ನೋಡಿರಬಹುದು. ಇದು ನೋಡುವುದಕ್ಕೆ ಸಾಮಾನ್ಯ ಸಮಸ್ಯೆಯಂತೆ ಕಾಣಿಸಬಹುದು, ಆದರೆ ಕೆಲವೊಮ್ಮೆ ಇಂತಹ ಲಕ್ಷಣಗಳು ಆರೋಗ್ಯ ಸಮಸ್ಯೆಯನ್ನು ಸಹ ಸೂಚಿಸುತ್ತದೆ. ಧೂಳು, ಹೊಗೆ, ಗಾಳಿ ಅಥವಾ ದೀರ್ಘಕಾಲದವರೆಗೆ ಟಿವಿ, ಲ್ಯಾಪ್ಟಾಪ್, ಮೊಬೈಲ್ ನೋಡುವುದು ಕಣ್ಣಿನ ಕಿರಿಕಿರಿ ಮತ್ತು ಕಣ್ಣುಗಳಲ್ಲಿ ನೀರು ಬರಲು ಕಾರಣವಾಗಬಹುದು. ಆದರೆ ಈ ಸಮಸ್ಯೆ ಪದೇ ಪದೇ ಕಂಡುಬಂದರೆ ಅದನ್ನು ನಿರ್ಲಕ್ಷಿಸಬಾರದು. ಕಣ್ಣುಗಳಲ್ಲಿ ನಿರಂತರವಾಗಿ ನೀರು (Watery Eyes) ಬರುವುದು ಅಲರ್ಜಿ, ಸೋಂಕುಗಳು ಅಥವಾ ಕಣ್ಣೀರಿನ ನಾಳಗಳಲ್ಲಿನ ಅಡಚಣೆಗಳಿಗೆ ಸಂಬಂಧಿಸಿರಬಹುದು. ಈ ರೀತಿಯ ಸಮಸ್ಯೆ ವಯಸ್ಸಾದ ಮೇಲೂ ಕಂಡುಬರುತ್ತದೆ. ಇದರ ಜೊತೆಗೆ, ಕಣ್ಣುಗಳ ಮೇಲ್ಮೈ ಒಣಗುವುದರಿಂದ ದೇಹವು ಹೆಚ್ಚು ಕಣ್ಣೀರು ಉತ್ಪಾದಿಸಲು ಒತ್ತಡ ಹೇರುತ್ತದೆ, ಇದರಿಂದಾಗಿ ಕಣ್ಣುಗಳಿಂದ ನೀರು ಬರುತ್ತವೆ. ಹಾಗಾಗಿ ಸರಿಯಾದ ಸಮಯಕ್ಕೆ ಈ ಸಮಸ್ಯೆಗಳನ್ನು ಗುರುತಿಸಿ ಕಣ್ಣುಗಳಿಗೆ ಹಾನಿಯಾಗುವುದನ್ನು ತಡೆಯುವುದು ಬಹಳ ಮುಖ್ಯವಾಗುತ್ತದೆ. ಹಾಗಾದರೆ ಪದೇ ಪದೇ ಕಣ್ಣಲ್ಲಿ ನೀರು ಬರುವುದು ಯಾವ ರೋಗಗಳ ಲಕ್ಷಣ, ಇದನ್ನು ತಡೆಯಲು ಏನು ಮಾಡಬಹುದು ಎಂಬುದನ್ನು ತಿಳಿದುಕೊಳ್ಳಿ.

ಕಣ್ಣುಗಳಲ್ಲಿ ಪದೇ ಪದೇ ನೀರು ಬರುವುದಕ್ಕೆ ಕಾರಣವೇನು?

ಸರ್ ಗಂಗಾ ರಾಮ್ ಆಸ್ಪತ್ರೆಯ ಕಣ್ಣಿನ ವಿಭಾಗದ ಮಾಜಿ ಮುಖ್ಯಸ್ಥ ಡಾ. ಎ.ಕೆ. ಗ್ರೋವರ್ ಹೇಳುವ ಪ್ರಕಾರ, ಕಣ್ಣುಗಳಲ್ಲಿ ಪದೇ ಪದೇ ನೀರು ಬರುವುದಕ್ಕೆ ಹಲವಾರು ಕಾರಣಗಳಿರುತ್ತವೆ. ಅಲರ್ಜಿಕ್ ಕಾಂಜಂಕ್ಟಿವಿಟಿಸ್‌ನಲ್ಲಿ, ತುರಿಕೆ, ಕೆಂಪು ಮತ್ತು ಕಣ್ಣುಗಳಲ್ಲಿ ನೀರು ಬರುವುದು ಸಾಮಾನ್ಯ ಲಕ್ಷಣ. ಕಣ್ಣಿನ ಸೋಂಕು ಇದ್ದರೆ ಅತಿಯಾದ ನೀರು ಬರಬಹುದು. ಕೆಲವು ಸಮಯದಲ್ಲಿ ಕಣ್ಣುಗಳ ಶುಷ್ಕತೆಯಿಂದ ಹೆಚ್ಚು ಕಣ್ಣೀರು ಉತ್ಪಾದಿಸುತ್ತವೆ, ಇದು ಅತಿಯಾದ ನೀರು ಬರುವಿಕೆಗೆ ಕಾರಣವಾಗುತ್ತದೆ. ಇದೆಲ್ಲದರ ಜೊತೆಗೆ ಕಣ್ಣೀರಿನ ನಾಳಗಳಲ್ಲಿನ ಅಡಚಣೆ ಕೂಡ ಕಣ್ಣುಗಳಲ್ಲಿ ನಿರಂತರವಾಗಿ ನೀರು ಬರಲು ಕಾರಣವಾಗಬಹುದು.ಕೆಲವು ಸಂದರ್ಭಗಳಲ್ಲಿ, ಸೈನಸ್ ಸಮಸ್ಯೆಗಳು ಅಥವಾ ವಯಸ್ಸಾಗುವುದು ಕೂಡ ಕಣ್ಣುಗಳಲ್ಲಿ ನೀರು ಬರಲು ಕಾರಣವಾಗಬಹುದು. ಆದ್ದರಿಂದ, ಸರಿಯಾದ ಕಾರಣವನ್ನು ಗುರುತಿಸುವುದು ಬಹಳ ಮುಖ್ಯವಾಗುತ್ತದೆ.

ಇದನ್ನೂ ಓದಿ: ನೀವು ಮೊಬೈಲ್, ಲ್ಯಾಪ್‌ಟಾಪ್‌ ಹೆಚ್ಚಾಗಿ ಬಳಸುತ್ತೀರಾ? ಹಾಗಿದ್ರೆ ಈ ಅಭ್ಯಾಸಗಳನ್ನು ಸರಿಪಡಿಸಿಕೊಳ್ಳಲೇಬೇಕು!

ಕಣ್ಣುಗಳಲ್ಲಿ ಪದೇ ಪದೇ ನೀರು ಬರುವುದನ್ನು ತಡೆಯುವುದು ಹೇಗೆ?

ಕಣ್ಣುಗಳಲ್ಲಿ ನೀರು ಬರುತ್ತಿದ್ದರೆ, ಮೊದಲು ನಿಮ್ಮ ಕಣ್ಣುಗಳನ್ನು ಉಜ್ಜುವುದನ್ನು ತಪ್ಪಿಸಿ. ಧೂಳು ಮತ್ತು ಹೊಗೆಯಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಿಕೊಳ್ಳಿ. ಅತಿಯಾದ ಮೊಬೈಲ್ ಬಳಕೆಯಿಂದಲೂ ಈ ರೀತಿಯಾಗಬಹುದು. ಹಾಗಾಗಿ ಈ ರೀತಿಯ ಸಮಸ್ಯೆ ಬಹಳ ಸಮಯದವರೆಗೆ ಮುಂದುವರಿದರೆ, ನೀವೇ ಔಷಧಿ ತೆಗೆದುಕೊಳ್ಳುವ ಬದಲು, ವೈದ್ಯರ ಬಳಿ ಹೋಗಿ ಪರೀಕ್ಷಿಸಿಕೊಳ್ಳಿ. ಸಮಯೋಚಿತ ಚಿಕಿತ್ಸೆಯು ಕಣ್ಣುಗಳಲ್ಲಿನ ಗಂಭೀರ ಸಮಸ್ಯೆಗಳನ್ನು ತಡೆಯಬಹುದು. ಮಧ್ಯಂತರಗಳಲ್ಲಿ ನಿಮ್ಮ ಕಣ್ಣುಗಳಿಗೆ ವಿಶ್ರಾಂತಿ ನೀಡಿ. ತಣ್ಣೀರಿನಿಂದ ನಿಮ್ಮ ಕಣ್ಣುಗಳನ್ನು ತೊಳೆಯುವುದು ಕೆಲವು ಸಂದರ್ಭಗಳಲ್ಲಿ ಪರಿಹಾರ ನೀಡುತ್ತದೆ. ಜೊತೆಗೆ ಕೊಳಕು ಕೈಗಳಿಂದ ನಿಮ್ಮ ಕಣ್ಣುಗಳನ್ನು ಮುಟ್ಟಬೇಡಿ. ಕಣ್ಣಿನ ಆರೋಗ್ಯಕ್ಕೆ ಹೆಚ್ಚಿನ ಗಮನ ಕೊಡಿ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪೆಂಗ್ವಿನ್ 70 ಕಿಮೀ ನಡೆದು ಹೋಗಿದ್ದೇಕೆ? ಇದರ ಹಿಂದಿನ ಅಸಲಿ ಕಥೆ ಇಲ್ಲಿದೆ – Kannada News | Viral Lonely Penguin: Unraveling the True Story Behind Instagram’s Mystery Video

ಇನ್​​ಸ್ಟಾಗ್ರಾಮ್ (Instagram) ರೀಲ್ಸ್ ಓಪನ್ ಮಾಡಿದರೆ ಸಾಕು ಎಲ್ಲ ಕಡೆಗಳಲ್ಲೂ ಒಂಟಿ ಪೆಂಗ್ವಿನ್​​ದೇ ಕಥೆ. ಒಂದು ಪೆಂಗ್ವಿನ್ ಒಂಟಿಯಾಗಿ ಪರ್ವತದ ಕಡೆ ನಡೆದು ಸಾಗುತ್ತಿದೆ. ವಿಡಿಯೋ ನೋಡಿ ಕೆಲವರು ತುಂಬಾನೇ ಮರುಗಿದ್ದರು. ಇನ್ನೂ ಕೆಲವರು ಮೀಮ್ ಮಾಡಿದ್ದರು. ‘ಈ ಪೆಂಗ್ವಿನ್​​ಗೆ ಏನಾಗಿದೆ’ ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿತ್ತು. ಆದರೆ, ಈ ವಿಡಿಯೋದ ಅಸಲಿ ಕಥೆಯೇ ಬೇರೆ ಇದೆ. ಆ ಬಗ್ಗೆ ಇಲ್ಲಿದೆ ವಿವರ.

ಈ ಒಂಟಿ ಪೆಂಗ್ವಿನ್ ಸಮುದ್ರದ ಕಡೆಗೆ ಹಿಂಡಿನ ಹಿಂದೆ ಹೋಗದೆ ಒಂಟಿಯಾಗಿ ತೆರಳಿದೆ. ಹಿಂಡಿನಿಂದ ಬೇರ್ಪಟ್ಟ ಸ್ಥಳದಿಂದ 70 ಕಿಮೀದಿಂದ ದೂರದಲ್ಲಿರೋ ಪರ್ವತದ ಬಳಿ ಸಾಗಿದೆ. ಇದು ಡಾಕ್ಯುಮೆಂಟರಿಯೊಂದರ ದೃಶ್ಯ. ವೆನಾ ಹೆಜೋಗ್ ನಿರ್ದೇಶನದ ‘ಎನ್​​ಕೌಂಟರ್​​ ಎಟ್​ ದಿ ಎಂಡ್ ಆಫ್​ ದಿ ವರ್ಲ್ಡ್’ ಸಾಕ್ಷ್ಯ ಚಿತ್ರದ ದೃಶ್ಯದ ಭಾಗ ಇದು. ಬರೋಬ್ಬರಿ 19 ವರ್ಷಗಳ ಬಳಿಕ ಈ ವಿಡಿಯೋ ವೈರಲ್ ಆಗಿದೆ.

ಈ ವಿಡಿಯೋ ಯೂಟ್ಯೂಬ್​​ಗೆ ಅಪ್​​ಲೋಡ್ ಆಗಿದ್ದು 2010ರಲ್ಲಿ. ‘ಖಿನ್ನತೆಗೆ ಒಳಗಾದ ಪೆಂಗ್ವಿನ್’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಶೇರ್  ಮಾಡಲಾಗಿತ್ತು. ಆ ಸಂದರ್ಭದಲ್ಲಿ ಇದು ಚರ್ಚೆಗೆ ಕಾರಣ ಆಗಿತ್ತು. 2014ರಲ್ಲಿ ಈ ವಿಡಿಯೋ ಮತ್ತೊಮ್ಮೆ ಹರಿದಾಡಿದೆ.

ಅಡೆಲೀ ಪೆಂಗ್ವಿನ್‌ಗಳು ಸಾಮಾನ್ಯವಾಗಿ ತಮ್ಮ ಸಂತಾನೋತ್ಪತ್ತಿ ಸ್ಥಳ ಮತ್ತು ಆಹಾರ ಸಿಗೋ ಸಮುದ್ರದಂಚಿನಲ್ಲೇ ಇರುತ್ತವೆ. ಆದರೆ, ಏನೂ ಇಲ್ಲದ ಪರ್ವತದ ಕಡೆ ನಡೆದು ಹೋಗೋದು ತುಂಬಾನೇ ಅಪರೂಪ.

ಈ ಬಗ್ಗೆ ಪೆಂಗ್ವಿನ್ ಬಗ್ಗೆ ಅಧ್ಯಯನ ಮಾಡೋರು ಹೇಳೋದೇ ಬೇರೆ. ಪೆಂಗ್ವಿನ್ ಕೆಲವೊಮ್ಮೆ ಬಂಡೆಗೆ ಡಿಕ್ಕಿ ಹೊಡೆದುಕೊಳ್ಳುತ್ತವಂತೆ. ಕೆಲವೊಮ್ಮೆ ದಿಕ್ಕು ತಪ್ಪಿದಾಗ ಗೊಂದಲಕ್ಕೆ ಒಳಗಾಗಿ ಅವು ಈ ರೀತಿ ನಡೆಯುತ್ತವೆಯಂತೆ. ಆಗ ಅವರು ಲೆಕ್ಕವಿಲ್ಲದಷ್ಟು ದೂರ ನಡೆದು ಬಿಡ್ತವೆ. ಅವುಗಳನ್ನು ಮತ್ತೆ ಗುಂಪಿಗೆ ತಂದು ಬಿಟ್ಟರೂ ಅದು ಮತ್ತೆ ಸಾಗೋದು ಆ ಪರ್ವತದ ಕಡೆಗೆ. ನರ ಸಂಬಂಧಿ ಕಾಯಿಲೆ ಇರಬಹುದು ಎಂದು ಕೆಲವರು ಹೇಳುತ್ತಾರೆ. ಯುವ ಪೆಂಗ್ವಿನ್​​ಗಳು ಹೊಸದರ ಹುಡುಕಾಟದಲ್ಲಿ ಈ ರೀತಿ ಮಾಡುತ್ತವೆ ಎಂಬ ಮಾತೂ ಇದೆ.

ಇದನ್ನೂ ಓದಿ: ಇನ್​​ಸ್ಟಾಗ್ರಾಮ್​ನಲ್ಲಿರೋದು ಆರಾಧ್ಯಾ ಖಾತೆಯಾ? ಐಶ್ವರ್ಯಾ ನೀಡಿದರು ಸ್ಪಷ್ಟನೆ

ವೈಜ್ಞಾನಿಕ ದೃಷ್ಟಿಕೋನದಿಂದ ಇದು ಅಷ್ಟು ಚಿಂತಿಸೋ ವಿಷಯವಲ್ಲ. ಅನೇಕ ಪ್ರಾಣಿ ಪ್ರಭೇದಗಳಲ್ಲಿ ಈ ರೀತಿಯ ನಡವಳಿಕೆ ಇರುತ್ತದೆ ಎಂಬುದು ವನ್ಯಜೀವಿ ಸಂಶೋಧಕರು ಅಭಿಪ್ರಾಯ. ಸೋಶಿಯಲ್ ಮೀಡಿಯಾದಲ್ಲಿ ಇದನ್ನು ಮೀಮ್​ ರೂಪದಲ್ಲಿ ಬಳಸಲಾಗುತ್ತಿದೆ. ಕೆಲವರು ಇದನ್ನು ಇತ್ತೀಚಿಗೆ ಜನರು ಬಳಲುತ್ತಿರುವ ಖಿನ್ನತೆಗೆ ಹಾಗೂ ಒಂಟಿತನಕ್ಕೆ ಹೋಲಿಕೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:51 am, Sat, 24 January 26

Source link

ತ್ರಿ ಸೆಂಚುರಿ… ಸರ್ಫರಾಝ್ ಖಾನ್ ವಿಶ್ವ ದಾಖಲೆ – Kannada News | Sarfaraz Khan set a new record in cricket

ಸರ್ಫರಾಝ್ ಖಾನ್ (Sarfaraz Khan) ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ದೇಶೀಯ ಅಂಗಳದಲ್ಲಿ ಒಂದೇ ಸೀಸನ್​ನಲ್ಲಿ ಮೂರು ಸೆಂಚುರಿ ಸಿಡಿಸುವ ಮೂಲಕ. ಈ ಸೆಂಚುರಿಗಳೊಂದಿಗೆ ವಿಶೇಷ ಸಾಧನೆಗೈದ ಮೊದಲ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ಸರ್ಫರಾಝ್ ಖಾನ್ ತಮ್ಮದಾಗಿಸಿಕೊಂಡಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಹೈದರಾಬಾದ್ ವಿರುದ್ಧದ ರಣಜಿ ಪಂದ್ಯದಲ್ಲಿ ಮುಂಬೈ ಪರ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸರ್ಫರಾಝ್ ಖಾನ್ 219 ಎಸೆತಗಳಲ್ಲಿ 9 ಭರ್ಜರಿ ಸಿಕ್ಸ್ ಹಾಗೂ 19 ಫೋರ್​ಗಳೊಂದಿಗೆ 227 ರನ್​ ಬಾರಿಸಿ ಅಬ್ಬರಿಸಿದ್ದಾರೆ.

ಇದಕ್ಕೂ ಮುನ್ನ ನಡೆದ ವಿಜಯ್ ಹಝಾರೆ ಏಕದಿನ ಟೂರ್ನಿಯಲ್ಲಿ ಗೋವಾ ವಿರುದ್ಧದ ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಸರ್ಫರಾಝ್ ಖಾನ್ ಕೇವಲ 75 ಎಸೆತಗಳಲ್ಲಿ 14 ಸಿಕ್ಸರ್ ಹಾಗೂ 9 ಫೋರ್​ಗಳೊಂದಿಗೆ 157 ರನ್ ಬಾರಿಸಿದ್ದರು. 

ಈ ಮೇಲಿನ ಎರಡು ಶತಕಗಳಿಗೂ ಮುನ್ನ ಸರ್ಫರಾಝ್ ಖಾನ್ ಸೈಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಅಸ್ಸಾಂ ವಿರುದ್ಧ ಕೇವಲ 47 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಈ ಮೂರು ಶತಕಗಳೊಂದಿಗೆ ಇದೀಗ ಸರ್ಫರಾಝ್ ಖಾನ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಅಂದರೆ ಒಂದೇ ಸೀಸನ್​ನಲ್ಲಿ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ದ್ವಿಶತಕ, ಲಿಸ್ಟ್ ಎ (ಏಕದಿನ) ಕ್ರಿಕೆಟ್​ನಲ್ಲಿ 150 ಹಾಗೂ ಟಿ20 ಕ್ರಿಕೆಟ್​ನಲ್ಲಿ 100 ರನ್ ಬಾರಿಸಿದ ಭಾರತದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹಾಗೆಯೇ ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ 3ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದಕ್ಕೂ ಮುನ್ನ ಇಂಗ್ಲೆಂಡ್​ ಡೇನಿಯಲ್ ಬೆಲ್-ಡ್ರಮಂಡ್ ಹಾಗೂ ಅಲೆಕ್ಸ್ ಹೇಲ್ಸ್ ಮಾತ್ರ ಈ ಸಾಧನೆ ಮಾಡಿದ್ದರು.  2016 ಮತ್ತು 2023 ರಲ್ಲಿ ಡೇನಿಯಲ್ ಬೆಲ್-ಡ್ರಮಂಡ್ ಒಂದೇ ಸೀಸನ್​ನಲ್ಲೂ ಮೂರು ಸ್ವರೂಪಗಳಲ್ಲಿ 200+, 150+, 100+ ರನ್​ ಗಳಿಸಿದ್ದರು. ಇದಾದ ಬಳಿಕ 2017 ರಲ್ಲಿ ಅಲೆಕ್ಸ್ ಹೇಲ್ಸ್ ಈ ಸಾಧನೆ ಸರಿಗಟ್ಟಿದ್ದರು.

ಇದೀಗ ಸರ್ಫರಾಝ್ ಖಾನ್ 2025-26 ರ ದೇಶೀಯ ಸೀಸನ್​ ಮೂಲಕ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 200+, ಏಕದಿನ ಕ್ರಿಕೆಟ್​ನಲ್ಲಿ 150+ ರನ್, ಟಿ20 ಕ್ರಿಕೆಟ್​ನಲ್ಲಿ 100+ ರನ್​ಗಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ವಿಶೇಷ ವಿಶ್ವ ದಾಖಲೆ ಬರೆದ ಮೊದಲ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ.

Published On – 2:08 pm, Sat, 24 January 26

Source link

Kumar Shashti: ಜ. 24 ಕುಮಾರ ಷಷ್ಠಿ; ಸುಬ್ರಹ್ಮಣ್ಯ ಪೂಜೆಯ ಮಹತ್ವ ಮತ್ತು ಪ್ರಯೋಜನಗಳು – Kannada News | Kumar Shashti: Rituals, Significance, and Benefits of Worshipping Lord Subrahmanya

ಕುಮಾರ ಷಷ್ಠಿಯು ಭಗವಾನ್ ಸುಬ್ರಹ್ಮಣ್ಯ ಸ್ವಾಮಿಯ ಜನ್ಮದಿನವಾಗಿದೆ. ಈ ವರ್ಷ ಕುಮಾರ ಷಷ್ಠಿ ಜ. 24ರಂದು ಬಂದಿದೆ. ಸುಬ್ರಹ್ಮಣ್ಯನನ್ನು ಕುಮಾರ, ಕಾರ್ತಿಕೇಯ, ಮುರುಗನ್, ಸ್ಕಂದ, ಷಣ್ಮುಖ ಎಂಬ ವಿವಿಧ ಹೆಸರುಗಳಿಂದ ಸ್ಮರಿಸಲಾಗುತ್ತದೆ. ಈ ನಾಮಾವಳಿಗಳು ಅವನ ದೈವಿಕ ಶಕ್ತಿ ಮತ್ತು ಗುಣಗಳನ್ನು ಪ್ರತಿಬಿಂಬಿಸುತ್ತವೆ. ಪ್ರತಿ ಶುಕ್ಲಪಕ್ಷದ ಆರನೇ ದಿನದಂದು ಬರುವ ಕುಮಾರ ಷಷ್ಠಿಯು ಶಿವ-ಪಾರ್ವತಿಯರ ಪುತ್ರನಾದ ಸುಬ್ರಹ್ಮಣ್ಯ ಸ್ವಾಮಿ ತಾರಕಾಸುರನನ್ನು ಸಂಹಾರ ಮಾಡಲು ಜನ್ಮವೆತ್ತಿದ ದಿನವೆಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ.

ಸುಬ್ರಹ್ಮಣ್ಯ ಪೂಜೆಯ ಮಹತ್ವ ಮತ್ತು ಪ್ರಯೋಜನಗಳು:

ಸುಬ್ರಹ್ಮಣ್ಯ ಸ್ವಾಮಿಯ ಪೂಜೆಯು ಭಕ್ತರಿಗೆ ಧೈರ್ಯ, ಶಕ್ತಿ ಮತ್ತು ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ನೀಡುತ್ತದೆ. ಕುಮಾರ ಸ್ವಾಮಿಯು ನಾಗಾಂಶವನ್ನು ಹೊಂದಿರುವ ಕಾರಣ, ವಿವಾಹ, ಸಂತಾನ, ಸರ್ಪದೋಷ ನಿವಾರಣೆ ಮತ್ತು ಆರೋಗ್ಯ ಸುಧಾರಣೆಗಾಗಿ ಈ ದಿನ ವಿಶೇಷವಾಗಿ ಆರಾಧಿಸಲಾಗುತ್ತದೆ. ಭಕ್ತರು ಕುಕ್ಕೆ ಸುಬ್ರಹ್ಮಣ್ಯ, ಘಾಟಿ ಸುಬ್ರಹ್ಮಣ್ಯ ಮತ್ತು ಸಂಡೂರಿನಂತಹ ಪ್ರಮುಖ ಸುಬ್ರಹ್ಮಣ್ಯ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಈ ಪೂಜೆಯಿಂದ ಚರ್ಮ ರೋಗಗಳು, ಮಾನಸಿಕ ಖಿನ್ನತೆ, ಮಕ್ಕಳಿಲ್ಲದಿರುವಿಕೆ, ಪದೇ ಪದೇ ಕಾಡುವ ಆರೋಗ್ಯ ಸಮಸ್ಯೆಗಳು, ಕಣ್ಣಿನ ದೃಷ್ಟಿದೋಷ, ಮಾಟಮಂತ್ರ ಮತ್ತು ವಾಮಾಚಾರದಂತಹ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಎಂದು ನಂಬಲಾಗಿದೆ.

ಇದನ್ನೂ ಓದಿ: ಹವಳವನ್ನು ಯಾರು ಧರಿಸಬಹುದು? ಇದರ ಪ್ರಯೋಜನ ಮತ್ತು ಧರಿಸುವ ವಿಧಾನ ತಿಳಿಯಿರಿ

ಕುಮಾರ ಷಷ್ಠಿ ಆಚರಣೆಯ ವಿಧಾನಗಳು:

ಕುಮಾರ ಷಷ್ಠಿ ಆಚರಣೆಯಲ್ಲಿ ಹಲವು ವಿಧಿವಿಧಾನಗಳಿವೆ. ಭಕ್ತರು ಹುತ್ತಗಳಿಗೆ ದರ್ಶನ ನೀಡಿ ಪೂಜಿಸುತ್ತಾರೆ. ನಾಗಬನಗಳಲ್ಲಿ ಹಾಲಿನ ಅಭಿಷೇಕ ಮಾಡುವುದು ಮತ್ತೊಂದು ಪ್ರಮುಖ ಆಚರಣೆ. ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ದೇವರಿಗೆ ಅಭಿಷೇಕ ಮಾಡಿಸಿ ದರ್ಶನ ಪಡೆಯುವುದು ಪುಣ್ಯಪ್ರದ ಎಂದು ಹೇಳಲಾಗುತ್ತದೆ. ದರ್ಶನಂ ಪುಣ್ಯಂ, ಸ್ಪರ್ಶನಂ ಪಾಪನಾಶನಂ ಎಂಬ ನಂಬಿಕೆ ಇದೆ. ತಮಿಳುನಾಡಿನಂತಹ ಕೆಲವು ಪ್ರದೇಶಗಳಲ್ಲಿ ಭಕ್ತರು ಕುಮಾರ ಷಷ್ಠಿಯ ದಿನದಂದು ಕಾವಡಿಗಳನ್ನು ಹೊತ್ತು ನಡೆದು ತಮ್ಮ ಭಕ್ತಿಯನ್ನು ಪ್ರದರ್ಶಿಸುತ್ತಾರೆ.

ಇದಲ್ಲದೆ, ಜಪ ಮಾಡುವುದು, ದೇವರ ಧ್ಯಾನ ಮಾಡುವುದು ಮತ್ತು ದೇವರ ಹೆಸರಿನಲ್ಲಿ ದಾನ ನೀಡುವುದು ಕೂಡ ಈ ದಿನದ ವಿಶೇಷ. ಬೆಳಗಿನ ಜಾವ ಸ್ನಾನ ಮಾಡುವಾಗ ನೀರಿಗೆ ಸ್ವಲ್ಪ ಅರಿಶಿಣ ಬೆರೆಸಿ ಸ್ನಾನ ಮಾಡುವುದರಿಂದ ಮತ್ತು ಮಕ್ಕಳಿಗೆ ಅರಿಶಿಣ ನೀರಿಗೆ ಹಾಕಿ ಸ್ನಾನ ಮಾಡಿಸುವುದರಿಂದ ಶುಭ ಫಲಗಳು ಸಿಗುತ್ತವೆ. ಸ್ಕಂದ ಕವಚ ಪಠಣ, ಸುಬ್ರಹ್ಮಣ್ಯ ಅಷ್ಟೋತ್ತರಗಳು ಮತ್ತು ಓಂ ಶರವಣಭವಾಯ ನಮಃ ಎಂಬ ಮಂತ್ರವನ್ನು ಜಪಿಸುವುದು ಅತ್ಯಂತ ಪರಿಣಾಮಕಾರಿ ಎಂದು ಹೇಳಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜನಾರ್ದನ ರೆಡ್ಡಿ ಮಾಡೆಲ್ ಹೌಸ್​ಗೆ ಬೆಂಕಿ ಪ್ರಕರಣಕ್ಕೆ ಸ್ಫೋಟಕ ತಿರುವು: ರೀಲ್ಸ್ ಮಾಡಲು ಹೋಗಿ ಬೆಂಕಿ ಹಚ್ಚಿದ್ರಾ ಅಪ್ರಾಪ್ತರು? – Kannada News | Janardhan Reddy Model House Fire Case Takes unexpected Turn, Minors Detained Over Reels Angle

ಜನಾರ್ದನ ರೆಡ್ಡಿ ಮಾಡೆಲ್ ಹೌಸ್ ಬೆಂಕಿ

ಬಳ್ಳಾರಿ, ಜನವರಿ 24: ಬಳ್ಳಾರಿಯಲ್ಲಿ (Ballari) ಗಂಗಾವತಿ ಶಾಸಕ ಜನಾರ್ದನ ರೆಡ್ಡಿಗೆ (Janardhan Reddy) ಸೇರಿದ ಮಾಡೆಲ್ ಹೌಸ್‌ಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಇದೀಗ ಸ್ಫೋಟಕ ಟ್ವಿಸ್ಟ್ ದೊರೆತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಅಪ್ರಾಪ್ತರು ಸೇರಿ ಒಟ್ಟು 8 ಜನರನ್ನು ಬಳ್ಳಾರಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಳ್ಳಾರಿಯ ಕೌಲ್‌ಬಜಾರ್ ಪ್ರದೇಶದ ನಿವಾಸಿಗಳಾದ 8 ಜನರನ್ನು ವಶಕ್ಕೆ ಪಡೆಯಲಾಗಿದ್ದು, ಸಾಮಾಜಿಕ ಜಾಲತಾಣಗಳಿಗಾಗಿ ರೀಲ್ಸ್ ಮಾಡುತ್ತಿರುವ ವೇಳೆ ಅಜಾಗರೂಕತೆಯಿಂದ ಅಥವಾ ದುರುದ್ದೇಶದಿಂದ ಮಾಡೆಲ್ ಹೌಸ್‌ಗೆ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಕುರಿತು ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ಮುಂದುವರೆಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ರುಕ್ಮಿಣಿ ಅವೆನ್ಯೂ ಲೇಔಟ್‌ನಲ್ಲಿರುವ ಸೈಟ್ ಇಂಜಿನಿಯರ್ ರಿಜ್ವಾನ್ ಅವರು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನಲ್ಲಿ ಉಲ್ಲೇಖಿಸಿದ ಪ್ರಕಾರ, ಶುಕ್ರವಾರ ಸಂಜೆ ಸುಮಾರು 5.30ರ ವೇಳೆಗೆ 20 ರಿಂದ 25 ವರ್ಷ ವಯಸ್ಸಿನ 8ರಿಂದ 10 ಮಂದಿ ಕಿಡಿಗೇಡಿಗಳು ಮಾಡೆಲ್ ಹೌಸ್‌ಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.

ಈ ಮಾಡೆಲ್ ಹೌಸ್ ಜನಾರ್ದನ ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮೀ ಅವರಿಗೆ ಸೇರಿದ್ದಾಗಿದೆ. ಬೆಂಕಿಯಿಂದ ಟಿವಿ, ಕುರ್ಚಿಗಳು, ಸೋಫಾ ಸೆಟ್‌ಗಳು, ಕಿಚನ್ ಸೆಟ್, ಎಸಿ, ಫ್ರಿಡ್ಜ್, ವುಡನ್ ಬಾಗಿಲುಗಳು ಸೇರಿದಂತೆ ಹಲವು ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಅಂದಾಜು 1.25 ಕೋಟಿ ರೂ. ಮೌಲ್ಯದ ವಸ್ತುಗಳು ಹಾನಿಯಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅದೃಷ್ಟವಶಾತ್, ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ರಾಜಕೀಯ ಆಯಾಮದಲ್ಲೂ ತನಿಖೆ?

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಬಳ್ಳಾರಿಯನ್ನು ಭಸ್ಮ ಮಾಡುತ್ತೇವೆ’ ಎಂಬ ಶಾಸಕ ಭರತ್ ರೆಡ್ಡಿ ಹೇಳಿಕೆಯನ್ನು ಗಮನದಲ್ಲಿಟ್ಟುಕೊಂಡು ತನಿಖೆ ನಡೆಸಬೇಕು ಎಂದು ರಿಜ್ವಾನ್ ದೂರಿನಲ್ಲಿ ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ರಾಜಕೀಯ ಪ್ರೇರಿತ ಕೃತ್ಯವೇ ಎಂಬ ಅಂಶವನ್ನೂ ಪರಿಶೀಲಿಸುತ್ತಿದ್ದಾರೆ.

ಪ್ರಕರಣದ ಹಿನ್ನೆಲೆ

ಈ ಮಾಡೆಲ್ ಹೌಸ್ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಪತ್ನಿಗೆ ಸೇರಿದ್ದು ಎನ್ನಲಾಗಿದೆ. ಜಿ ಸ್ಕ್ವೇರ್ ಲೇಔಟ್‌ನಲ್ಲಿರುವ ಈ ಆಸ್ತಿ ಒಟ್ಟು 109 ಎಕರೆ ವ್ಯಾಪ್ತಿಯ ಲೇಔಟ್‌ನ ಭಾಗವಾಗಿದೆ. ಈ ಮಾಡೆಲ್ ಹೌಸ್‌ಗೆ ಬೆಂಕಿ ಹಚ್ಚಿರುವುದರ ಹಿಂದೆ ಕಾಂಗ್ರೆಸ್ ಬೆಂಬಲಿಗರ ಕೈವಾಡವಿದೆ ಎಂಬ ಗಂಭೀರ ಆರೋಪಗಳು ಶುಕ್ರವಾರ ಕೇಳಿಬಂದಿದ್ದವು.

ಇದನ್ನೂ ಓದಿ: ಬಳ್ಳಾರಿ ಬ್ಯಾನರ್ ಗಲಾಟೆ ಮಾಸುವ ಮುನ್ನವೇ ರೆಡ್ಡಿ,ಶ್ರೀರಾಮುಲುಗೆ ಸೇರಿದ ಮಾಡೆಲ್ ಹೌಸ್​ಗೆ ಬೆಂಕಿ

ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ, ಹಿಂದಿನ ಬ್ಯಾನರ್ ಗಲಾಟೆ ಸಂದರ್ಭದಲ್ಲೇ ಬೆಂಕಿ ಹಚ್ಚುವ ಬೆದರಿಕೆ ಹಾಕಲಾಗಿತ್ತು. ಅದಕ್ಕೆ ಸಾಕ್ಷಿ ಎಂಬಂತೆ ಈಗ ಈ ಘಟನೆ ನಡೆದಿದೆ ಎಂದು ಆರೋಪಿಸಿದ್ದಾರೆ. ಈ ಪ್ರಕರಣವು ಮುಂದಿನ ದಿನಗಳಲ್ಲಿ ರಾಜಕೀಯ ವಲಯದಲ್ಲಿ ಮತ್ತಷ್ಟು ಅಲ್ಲೋಲಕಲ್ಲೋಲ ಸೃಷ್ಟಿಸುವ ಸಾಧ್ಯತೆ ಇದೆ. ಸದ್ಯ ಪೊಲೀಸರು ವಶಕ್ಕೆ ಪಡೆದವರನ್ನು ವಿಚಾರಣೆ ನಡೆಸುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

India Test Squad: ಭಾರತ ಟೆಸ್ಟ್ ತಂಡ ಪ್ರಕಟ – Kannada News | India women’s squad for Australia Test Series

ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧದ ಟೆಸ್ಟ್ ಸರಣಿಗಾಗಿ ಭಾರತ ಮಹಿಳಾ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ ಈ ತಂಡವನ್ನು ಹರ್ಮನ್​ಪ್ರೀತ್ ಕೌರ್​ ಮುನ್ನಡೆಸಲಿದ್ದಾರೆ. ಇನ್ನು ಉಪನಾಯಕಿಯಾಗಿ ಸ್ಮೃತಿ ಮಂಧಾನ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಈ ತಂಡದಲ್ಲಿ ಪ್ರತೀಕಾ ರಾವಲ್ ಕೂಡ ಕಾಣಿಸಿಕೊಂಡಿದ್ದಾರೆ. ಏಕದಿನ ವಿಶ್ವಕಪ್​ನ ಅಂತಿಮ ಪಂದ್ಯಗಳ ವೇಳೆ ಗಾಯಗೊಂಡಿದ್ದ ಪ್ರತೀಕಾ ಇದೀಗ ಸಂಪೂರ್ಣ ಗುಣಮುಖರಾಗಿದ್ದು, ಹೀಗಾಗಿ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಅದರಂತೆ ಈ ಬಾರಿ ಟೀಮ್ ಇಂಡಿಯಾ ಪರ ಸ್ಮೃತಿ ಮಂಧಾನ ಹಾಗೂ ಪತ್ರೀಕಾ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ.

ಮತ್ತೊಂದೆಡೆ ಸ್ಫೋಟಕ ಬ್ಯಾಟರ್ ಶಫಾಲಿ ವರ್ಮಾ ಕೂಡ ತಂಡದಲ್ಲಿದ್ದಾರೆ. ಹೀಗಾಗಿ ಶಫಾಲಿಯನ್ನು ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಸಿ ಪ್ರಯೋಗ ನಡೆಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಹಾಗೆಯೇ ಜೆಮಿಮಾ ರೊಡ್ರಿಗಸ್, ಅಮನ್​ಜೋತ್ ಕೌರ್, ಹರ್ಲೀನ್ ಡಿಯೋಲ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇವರೊಂದಿಗೆ ವಿಕೆಟ್ ಕೀಪರ್​ಗಳಾಗಿ ಆಯ್ಕೆಯಾಗಿರುವುದು ರಿಚಾ ಘೋಷ್ ಹಾಗೂ ಉಮಾ ಚೆಟ್ರಿ.

ಇನ್ನು ವೇಗದ ಬೌಲರ್​ಗಳಾಗಿ ಕ್ರಾಂತಿ ಗೌಡ್, ರೇಣುಕಾ ಸಿಂಗ್ ಠಾಕೂರ್ ಟೀಮ್ ಇಂಡಿಯಾದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ಅದರಂತೆ ಭಾರತ ಮಹಿಳಾ ಟೆಸ್ಟ್ ತಂಡ ಈ ಕೆಳಗಿನಂತಿದೆ.

ಭಾರತ ಮಹಿಳಾ ಟೆಸ್ಟ್ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಜೆಮಿಮಾ ರೊಡ್ರಿಗಸ್ , ಅಮನ್​ಜೋತ್ ಕೌರ್, ರಿಚಾ ಘೋಷ್ ( ವಿಕೆಟ್ ಕೀಪರ್), ಉಮಾ ಚೆಟ್ರಿ (ವಿಕೆಟ್ ಕೀಪರ್), ಪ್ರತೀಕಾ ರಾವಲ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ರೇಣುಕಾ ಸಿಂಗ್ ಠಾಕೂರ್, ಸ್ನೇಹ್ ರಾಣಾ, ಕ್ರಾಂತಿ ಗೌಡ್, ವೈಷ್ಣವಿ ಶರ್ಮಾ, ಸಯಾಲಿ ಸತ್ಘರೆ.

ಇದನ್ನೂ ಓದಿ: ಇದು ಟೀಮ್ ಇಂಡಿಯಾ, ಟಿ20 ವಿಶ್ವಕಪ್​ಗೂ ಮುನ್ನ ಇತರೆ ತಂಡಗಳಿಗೆ ಎಚ್ಚರಿಕೆ!

ಭಾರತ ಮಹಿಳಾ ಏಕದಿನ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ರೇಣುಕಾ ಸಿಂಗ್ ಠಾಕೂರ್, ಶ್ರೀ ಚರಣಿ, ವೈಷ್ಣವಿ ಶರ್ಮಾ, ಕ್ರಾಂತಿ ಗೌಡ್, ಸ್ನೇಹ ರಾಣಾ, ದೀಪ್ತಿ ಶರ್ಮಾ,ರಿಚಾ ಘೋಷ್ (ವಿಕೆಟ್ ಕೀಪರ್), ಜಿ ಕಮಲಿನಿ (ವಿಕೆಟ್ ಕೀಪರ್), ಕಾಶ್ವೀ ಗೌತಮ್, ಅಮನ್​ಜೋತ್ ಕೌರ್, ಜೆಮಿಮಾ ರೊಡ್ರಿಗಸ್, ಹರ್ಲೀನ್ ಡಿಯೋಲ್.

ಭಾರತ ಮಹಿಳಾ ಟಿ20 ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ರೇಣುಕಾ ಸಿಂಗ್ ಠಾಕೂರ್, ಶ್ರೀ ಚರಣಿ, ವೈಷ್ಣವಿ ಶರ್ಮಾ, ಕ್ರಾಂತಿ ಗೌಡ್, ಸ್ನೇಹ ರಾಣಾ, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಜಿ ಕಮಲಿನಿ (ವಿಕೆಟ್ ಕೀಪರ್), ಅರುಂಧತಿ ರೆಡ್ಡಿ, ಅಮನ್​ಜೋತ್ ಕೌರ್, ಜೆಮಿಮಾ ರೊಡ್ರಿಗಸ್, ಭಾರ್ತಿ ಫುಲ್ಮಾಲಿ, ಶ್ರೇಯಾಂಕಾ ಪಾಟೀಲ್.

Source link

ದೇಶದಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆ 350ಕ್ಕೆ ಹೆಚ್ಚಿಸುವ ಗುರಿ: ಕರ್ನಾಟಕಕ್ಕೆ ಹೊಸ ವಿಮಾನ ನಿಲ್ದಾಣದ ಭರವಸೆ – Kannada News | Indian Aviation Soars: Economic Growth and 350 New Airports by 2047, Connecting Tier 2 Cities

ದೆಹಲಿ,ಜ.24: ಭಾರತವು ಪ್ರಸ್ತುತ ವಿಶ್ವದ ಮೂರನೇ ಅತಿದೊಡ್ಡ ದೇಶೀಯ ವಿಮಾನಯಾನ ಮಾರುಕಟ್ಟೆಯಾಗಿ (India aviation market) ಹೊರಹೊಮ್ಮಿದೆ. ಅಮೇರಿಕಾ ಮತ್ತು ಚೀನಾದ ನಂತರ ಭಾರತವು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ದಿನದಿಂದ ದಿನಕ್ಕೆ ವಿಮಾನ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಹೇಳಿದ್ದಾರೆ. ವಿಮಾನಯಾನ ಕ್ಷೇತ್ರದ ಭವಿಷ್ಯದ ಬಗ್ಗೆ ಅತ್ಯಂತ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದೆ ಎಂದು ಹೇಳಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಬಂದು 100 ವರ್ಷ ತುಂಬುವ (2047 – ವಿಕಸಿತ ಭಾರತ) ವೇಳೆಗೆ ದೇಶದಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆಯನ್ನು 350ಕ್ಕೆ ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಹೇಳಿದ್ದಾರೆ.

ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಜಾಗತಿಕ ಪಾಲುದಾರರನ್ನುದ್ದೇಶಿಸಿ ಮಾತನಾಡಿದ ರಾಮ್ ಮೋಹನ್ ನಾಯ್ಡು, ಕಳೆದ 10 ವರ್ಷಗಳಲ್ಲಿ ಭಾರತದ ವಿಮಾನ ನಿಲ್ದಾಣಗಳ ಸಂಖ್ಯೆ 74 ರಿಂದ 157ಕ್ಕೆ ಏರಿಕೆಯಾಗಿದೆ. ದೇಶದ ಪ್ರತಿಯೊಂದು ಸಾಮಾನ್ಯ ಪ್ರಜೆಗೂ ವಿಮಾನ ಪ್ರಯಾಣ ಲಭ್ಯವಾಗುವಂತೆ ಮಾಡುವುದು ಮತ್ತು ಸಣ್ಣ ನಗರಗಳನ್ನು ವಾಯುಮಾರ್ಗದ ಮೂಲಕ ಸಂಪರ್ಕಿಸುವುದು, ನಮ್ಮ ಪ್ರಮುಖ ಗುರಿಯಾಗಿದೆ. ಕೇವಲ ಮೆಟ್ರೋ ನಗರಗಳಲ್ಲದೆ, ಎರಡನೇ ಮತ್ತು ಮೂರನೇ ಶ್ರೇಣಿಯ ನಗರಗಳಲ್ಲಿ ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುವುದು. ವಿಮಾನ ನಿಲ್ದಾಣಗಳನ್ನು ಕೇವಲ ಪ್ರಯಾಣದ ಕೇಂದ್ರಗಳನ್ನಾಗಿ ಮಾಡದೆ, ಅವುಗಳನ್ನು ಆರ್ಥಿಕ ಚಟುವಟಿಕೆಗಳ ಕೇಂದ್ರಗಳನ್ನಾಗಿ (Aviation Hubs) ಪರಿವರ್ತಿಸುವ ಕೆಲಸವನ್ನು ಕೂಡ ಮಾಡಲಾಗುವುದು.

ಗುಡ್ಡಗಾಡು ಮತ್ತು ದುರ್ಗಮ ಪ್ರದೇಶಗಳಿಗೆ ಹೆಲಿಕಾಪ್ಟರ್ ಮತ್ತು ಸಣ್ಣ ವಿಮಾನಗಳ ಸೇವೆಯನ್ನು ವಿಸ್ತರಿಸುವುದು ಎಂದು ಹೇಳಿದ್ದಾರೆ. 2047 ರ ವೇಳೆಗೆ ದೇಶವು ತನ್ನ ವಿಮಾನ ನಿಲ್ದಾಣ ಜಾಲವನ್ನು ಪ್ರಸ್ತುತ 164 ರಿಂದ 350 ವಿಮಾನ ನಿಲ್ದಾಣಗಳಿಗೆ ವಿಸ್ತರಿಸುವ ಗುರಿಯನ್ನು ಹೊಂದಿದೆ, ಆದರೆ ಭಾರತೀಯ ವಾಹಕಗಳು ಸುಮಾರು 1,700 ಹೊಸ ವಿಮಾನಗಳಿಗೆ ಆದೇಶಗಳನ್ನು ನೀಡಿವೆ, ಇದು ಬಲವಾದ ಬೇಡಿಕೆ ಮತ್ತು ಸಾಮರ್ಥ್ಯ ವಿಸ್ತರಣೆಯನ್ನು ಪ್ರತಿಬಿಂಬಿಸುತ್ತದೆ.  ಭಾರತದಲ್ಲಿ ವಿಮಾನ ಘಟಕಗಳ ಉತ್ಪಾದನೆ ಮತ್ತು ನಿರ್ವಹಣೆ, ದುರಸ್ತಿ ಬಗ್ಗೆಯೂ ಹೆಚ್ಚಿನ ಗಮನ ನೀಡಲಾಗುತ್ತಿದೆ.

ಇದನ್ನೂ ಓದಿ: ‘ಟ್ರಾಫಿಕ್​​​ ಕಾರಣದಿಂದ ನಾನು ಹುಟ್ಟಿ ಬೆಳೆದ ಬೆಂಗಳೂರನ್ನು ಬಿಡುತ್ತಿದ್ದೇನೆ’: ಮಂಗಳೂರಿಗೆ ಹೋಗುವ ನಿರ್ಧಾರ ಮಾಡಿದ ಉದ್ಯಮಿ

ಕರ್ನಾಟಕದ ಮೇಲಾಗುವ ಪರಿಣಾಮ:

ಹೊಸ ನಿಲ್ದಾಣಗಳು: ಶಿವಮೊಗ್ಗ, ವಿಜಯಪುರ ನಿಲ್ದಾಣಗಳು ಈಗಾಗಲೇ ಕಾರ್ಯಾರಂಭ ಮಾಡಿದ್ದು, ರಾಯಚೂರು, ಕಾರವಾರ ಮತ್ತು ಚಿಕ್ಕಮಗಳೂರಿನಂತಹ ಕಡೆಗಳಲ್ಲಿ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ವೇಗ ಸಿಗಲಿದೆ.

ಪ್ರವಾಸೋದ್ಯಮ: ಹಂಪಿ, ಕೊಡಗು ಮತ್ತು ಕರಾವಳಿ ಭಾಗಗಳಿಗೆ ವಿಮಾನ ಸಂಪರ್ಕ ಸುಲಭವಾಗುವುದರಿಂದ ಪ್ರವಾಸೋದ್ಯಮ ಬೆಳೆಯಲಿದೆ.2047 ರ ವೇಳೆಗೆ ಭಾರತವು ಕೇವಲ ಪ್ರಯಾಣಿಕರಲ್ಲದೆ, ‘ವಿಮಾನ ದುರಸ್ತಿ ಮತ್ತು ನಿರ್ವಹಣೆ’ (MRO) ಕ್ಷೇತ್ರದಲ್ಲೂ ಜಾಗತಿಕ ಕೇಂದ್ರವಾಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಂದಿನಿಂದ ಮೂರು ದಿನ ಕಲರ್ಸ್​​​ನಲ್ಲಿ’ಅನುಬಂಧ ಅವಾರ್ಡ್ಸ್‌’; ಕಿರುತೆರೆ ವೀಕ್ಷಕರಿಗೆ ಹಬ್ಬ – Kannada News | Colors Kannada Celebrates 12th Year Anubandha Awards with Serial Artist and Stars

ಕಳೆದ ವಾರ ಬಿಗ್ ಬಾಸ್ (Bigg Boss) ಫಿನಾಲೆ ಪೂರ್ಣಗೊಂಡಿದೆ. ವೀಕೆಂಡ್​​​ನಲ್ಲಿ ಸುದೀಪ್ ಅವರ ಎಪಿಸೋಡ್ ನೋಡೋಕೆ ಸಿಗೋದಿಲ್ಲವಲ್ಲ ಎಂದು ವೀಕ್ಷಕರು ಬೇಸರದಲ್ಲಿ ಇದ್ದರು. ಆದರೆ, ಕಲರ್ಸ್ ಕನ್ನಡ ವೀಕ್ಷಕರು ಬೇಸರ ಮಾಡಿಕೊಳ್ಳುವ ಅಗತ್ಯವೇ ಇಲ್ಲ. ಇಂದಿನಿಂದ ಮೂರು ದಿನ ಅಂದರೆ ಜನವರಿ 24, 25 ಮತ್ತು 26ರಂದು 12ನೇ ವರ್ಷದ ‘ಅನುಬಂಧ ಅವಾರ್ಡ್ಸ್’ ಕಾರ್ಯಕ್ರಮ ಸಂಜೆ 7ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗಲಿದೆ. ಕಿರುತೆರೆ ಕಲಾವಿದರ ಜೊತೆಗೆ ಹಿರಿತೆರೆ ದಿಗ್ಗಜರ ಸಮಾಗಮ ಆಗಲಿದೆ.

‘ಅನುಬಂಧ ಅವಾರ್ಡ್ಸ್’ ಕೇವಲ ಪ್ರಶಸ್ತಿ ಸಮಾರಂಭವಾಗಿ ಉಳಿದಿಲ್ಲ. ಇದು ಕಲರ್ಸ್ ಕನ್ನಡ ಕಲಾವಿದರು ಹಾಗೂ ವೀಕ್ಷಕರ ಪಾಲಿಗೆ ಮನೆಯ ಹಬ್ಬ. ಇಲ್ಲಿ ವಿವಿಧ ವಿಭಾಗದಲ್ಲಿ ಅವಾರ್ಡ್ಸ್ ನೀಡಲಾಗುತ್ತದೆ. ನೆಚ್ಚಿನ ನಟ/ನಟಿ, ನೆಚ್ಚಿನ ಸೊಸೆ, ನೆಚ್ಚಿನ ಅತ್ತೆ, ನೆಚ್ಚಿನ ವಿಲನ್ ಹೀಗೆ ಹಲವು ವಿಭಾಗಗಳಲ್ಲಿ ಅವಾರ್ಡ್ ಕೊಡಲಾಗುತ್ತದೆ.
ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರು ಬಣ್ಣದ ಲೋಕಕ್ಕೆ ಬಂದು 50 ವರ್ಷಗಳು ತುಂಬಿವೆ. ಅದೇ ರೀತಿ ‘ಭಾಗ್ಯ’ ಪಾತ್ರಧಾರಿ ಸುಷ್ಮಾ ರಾವ್ ಅವರು ಕಿರುತೆರೆಯಲ್ಲಿ 25 ವರ್ಷಗಳ ಸುದೀರ್ಘ ಪಯಣ ಪೂರೈಸಿದ್ದಾರೆ. ಇಬ್ಬರಿಗೂ ವೇದಿಕೆ ಮೇಲೆ ವಿಶೇಷ ಗೌರವ ಸಲ್ಲಿಸಲಾಗುತ್ತಿದೆ.

ಕಲರ್ಸ್​​ನ ‘ರಾಮಾಚಾರಿ’ ಧಾರಾವಾಹಿ ಸಾವಿರ ಕಂತು ಪೂರೈಸಿದೆ. ಇದನ್ನು ಸಂಭ್ರಮಿಸಲು ಕನ್ನಡ ಚಿತ್ರರಂಗದ ರಾಮಾಚಾರಿ ಎಂದೇ ಫೇಮಸ್ ಆದ ರವಿಚಂದ್ರನ್ ಆಗಮಿಸಲಿದ್ದಾರೆ.

‘ಸು ಫ್ರಮ್ ಸೋ’ ಸಿನಿಮಾ ಥಿಯೇಟರ್​ ಬಳಿಕ ಒಟಿಟಿ ಹಾಗೂ ಟಿವಿಗೆ ಬಂತು. ಕಲರ್ಸ್​​​ನಲ್ಲೇ ಈ ಸಿನಿಮಾ ಪ್ರಸಾರ ಕಂಡಿದೆ. ಹೀಗಾಗಿ, ಚಿತ್ರದ ನಿರ್ದೇಶಕ ಜೆ.ಪಿ. ತುಮಿನಾಡ್ ಮತ್ತು ಕಲಾವಿದರಾದ ಶನೀಲ್ ಗೌತಮ್, ಪುಷ್ಪರಾಜ್ ಬೋಳಾರ್ ವೇದಿಕೆ ಏರಲಿದ್ದಾರೆ. ಸಿನಿಮಾಗೆ ಅವಾರ್ಡ್ ಕೂಡ ಸಿಗಲಿದೆ. ನಟ-ನಿರ್ದೇಶಕ ರಾಜ್ ಬಿ. ಶೆಟ್ಟಿ ಗೆ ಅವರ ತಾಯಿ ವೇದಿಕೆ ಮೇಲೆ ಸರ್​​ಪ್ರೈಸ್ ನೀಡಿದ್ದಾರೆ. ‘ಹುಚ್ಚ’ ಸಿನಿಮಾ ಖ್ಯಾತಿಯ ನಟಿ ರೇಖಾ ವೇದವ್ಯಾಸ್ ಸುದೀರ್ಘ ಕಾಲದ ನಂತರ ಈ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಪುನೀತ್ ಹೆಸರಲ್ಲಿ ಕಲರ್ಸ್ ಕನ್ನಡ ‘ಕಲರ್ಸ್‌ ಕನ್ನಡಿಗ’ ಪ್ರಶಸ್ತಿ ಪ್ರದಾನ ಮಾಡುತ್ತದೆ. ಈ ಅವಾರ್ಡ್​​ನ ಬಾಲ್ಯ ವಿವಾಹದ ವಿರುದ್ಧ ಹೋರಾಡುತ್ತಿರುವ ಬಾಗಲಕೋಟೆಯ ಗಟ್ಟಿಗಿತ್ತಿ ಗುರಮ್ಮ ಸಂಕಿನಮಠ ಅವರಿಗೆ ನೀಡಲಾಗಿದೆ. ‘ಥಟ್‌ ಅಂತ ಹೇಳಿ’ ನಡೆಸಿಕೊಡೋ ಡಾ. ನಾ. ಸೋಮೇಶ್ವರ್‌, ಶಾಸಕ ಪ್ರದೀಪ್‌ ಈಶ್ವರ್‌, ನಿರ್ದೇಶಕ ತರುಣ್‌ ಸುಧೀರ್-ಸೋನಲ್‌ ಮೊಂತೇರೋ, ಅನು‌ ಪ್ರಭಾಕರ್- ರಘು ಮುಖರ್ಜಿ ಅನುಬಂಧ ವೇದಿಕೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಜಿಯೋ ಹಾಟ್‌ಸ್ಟಾರ್‌ ಒಟಿಟಿಯಲ್ಲಿ ‘ಮಾರ್ಕ್‌’: ಜ.23ರಿಂದ 4 ಭಾಷೆಗಳಲ್ಲಿ ಪ್ರಸಾರ

ಈ ಬಾರಿ 37 ಅವಾರ್ಡ್​​​​ಗಳನ್ನು ನೀಡಲಾಗುತ್ತಿದೆ. 15ಕ್ಕೂ ಹೆಚ್ಚು ಪ್ರದರ್ಶನಗಳಿವೆ. ಗಿಚ್ಚಿ ಗಿಲಿಗಿಲಿ ತಂಡದ ಕಾಮಿಡಿ ಸ್ಕಿಟ್‌ಗಳು ವೀಕ್ಷಕರನ್ನು ನಗೆಗಡಲಲ್ಲಿ ತೆಲಿಸೋದು ಪಕ್ಕಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪೌರಾಯುಕ್ತೆಗೆ ನಿಂದನೆ ಕೇಸ್: ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ರಕ್ಷಣೆಗೆ ನಿಂತಿದ್ದಾರಾ ಪ್ರಭಾವಿ ಸಚಿವ? ಬಲವಾಯ್ತು ಅನುಮಾನ – Kannada News | Threat, abuse to woman official: Is a Powerful Minister Shielding Congress Leader Rajeev Gowda? Doubts Grow

ಪೌರಾಯುಕ್ತೆಗೆ ನಿಂದನೆ ಕೇಸ್: ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ರಕ್ಷಣೆಗೆ ನಿಂತಿದ್ದಾರಾ ಪ್ರಭಾವಿ ಸಚಿವ?

ಚಿಕ್ಕಬಳ್ಳಾಪುರ, ಜನವರಿ 24: ಶಿಡ್ಲಘಟ್ಟ ಪೌರಾಯುಕ್ತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ಕಾಂಗ್ರೆಸ್ (Congress) ಮುಖಂಡ ರಾಜೀವ್ ಗೌಡಗೆ (Rajeev Gowda) ಕರ್ನಾಟಕ ಹೈಕೋರ್ಟ್ ಕೂಡ ಛೀಮಾರಿ ಹಾಕಿದೆ. ಇದರಿಂದ, ಪರೋಕ್ಷವಾಗಿ ಸರ್ಕಾರಕ್ಕೂ ಮುಖಭಂಗವಾಗಿದೆ. ಇಷ್ಟೆಲ್ಲಾ ಆದರೂ ರಾಜೀವ್ ಗೌಡ ಬಂಧನವಾಗಿಲ್ಲ. ಪ್ರಭಾವಿ ಸಚಿವರೊಬ್ಬರು ರಾಜೀವ್ ಗೌಡ ರಕ್ಷಣೆಗೆ ನಿಂತಿದ್ದಾರೆಯೇ ಎಂಬ ಅನುಮಾನ ಇದೀಗ ಬಲವಾಗಿದೆ. ಹಿರಿಯ ಮಂತ್ರಿಯೊಬ್ಬರು ರಾಜೀವ್ ಗೌಡ ಪತ್ನಿ ಸಹನಾ ಜೊತೆ ದೂರವಾಣಿ ಸಂಪರ್ಕದಲ್ಲಿದ್ದಾರೆ. ಅವರೇ ಬಂಧನದಿಂದ ತಪ್ಪಿಸಿಕೊಳ್ಳಲು ಬೇಕಾದ ಮಾರ್ಗದರ್ಶನ ಮಾಡುತ್ತಿದ್ದಾರೆ ಎಂಬ ವಿಚಾರ ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಪ್ರಭಾವಿ ಸಚಿವರ ಕಾರಣ ಪೊಲೀಸರು ಅಸಹಾಯಕರಾಗಿದ್ದಾರೆ. ಇದರಿಂದಾಗಿ ರಾಜೀವ್ ಗೌಡ ಬಂಧನ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.

ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಪೊಲೀಸರು ಶೋಧ ನಡೆಸಿದ್ದರು ಇನ್ನೂ ರಾಜೀವ್ ಗೌಡ ಬಂಧನ ವಾಗದಿರುವುದು, ಪ್ರಭಾವಿ ಸಚಿವರ ಹಸ್ತಕ್ಷೇಪದ ಕುರಿತ ಅನುಮಾನಗಳಿಗೆ ಪುಷ್ಟಿ ನೀಡಿದೆ.

ಶಿಡ್ಲಘಟ್ಟ ಪೊಲೀಸರಿಂದ ನಾಲ್ಕು ನೋಟಿಸ್ ಜಾರಿ

ಪೌರಾಯುಕ್ತೆಗೆ ನಿಂದಿಸಿರುವ ಪ್ರಕರಣದಲ್ಲಿ ರಾಜೀವ್ ಗೌಡ ವಿರುದ್ಧ ಶಿಡ್ಲಘಟ್ಟ ಪೊಲೀಸರು ನಾಲ್ಕು ನೋಟಿಸ್ ಜಾರಿ ಮಾಡಿದ್ದಾರೆ. ಆದರೆ, ಮನೆಗಳಿಗೆ ಬೀಗ ಜಡಿದು ರಾಜೀವ್ ಗೌಡ ತಲೆಮೆರೆಸಿಕೊಂಡಿದ್ದಾರೆ. ಅವರ ಪತ್ನಿ ಸಹನಾ ಕೂಡ ಮನೆಯಲ್ಲಿ ಇಲ್ಲವೆಂಬ ಮಾಹಿತಿ ಲಭ್ಯವಾಗಿದೆ.

ಮತ್ತೊಂದೆಡೆ ರಾಜೀವ್ ಗೌಡ ವಿಚಾರ ಚಿಕ್ಕಬಳ್ಳಾಪುರ, ಕೋಲಾರ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ನ ಎರಡು ಬಣಗಳ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಯಿತೇ ಎಂಬ ಪ್ರಶ್ನೆಯೂ ಮೂಡಿದೆ. ಒಬ್ಬರು ಪ್ರಭಾವಿ ಸಚಿವರು ರಾಜೀವ್ ಗೌಡ ರಕ್ಷಣೆಗೆ ನಿಂತಿದ್ದರೆ, ಮತ್ತೊಬ್ಬರು ಆತನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಮಹಿಳಾಧಿಕಾರಿಗೆ ಧಮ್ಕಿ: ಕಾಂಗ್ರೆಸ್ ನಾಯಕನಿಗೆ ಶಾಕ್ ಮೇಲೆ ಶಾಕ್, ಕೋರ್ಟ್​​ ಬಳಿಕ ಪಕ್ಷದಿಂದ ಶಾಸ್ತಿ

ಸದ್ಯ ರಾಜೀವ್ ಗೌಡರನ್ನು ಕೆಪಿಸಿಸಿ ಶಿಸ್ತು ಪಾಲನಾ ಸಮಿತಿಯ ಶಿಫಾರಸಿನ ಮೇರೆಗೆ ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಪ್ರಕರಣ ಸಂಬಂಧ ಆರೋಪಿ ರಾಜೀವ್ ಗೌಡಗೆ ಕೆಪಿಸಿಸಿ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಆದರೆ ಅದಕ್ಕೆ ಯಾವುದೇ ಉತ್ತರ, ಪ್ರತಿಕ್ರಿಯೆ ನೀಡಿರಲಿಲ್ಲ. ಇದರ ಬೆನ್ನಲ್ಲೇ ರಾಜೀವ್ ಗೌಡನನ್ನು ಪಕ್ಷದಿಂದ ಅಮಾನತು ಮಾಡುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಶೇಖರ್ ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷರಿಗೆ ಶಿಫಾರಸು ಮಾಡಿದ್ದರು. ಸದ್ಯ ಇಷ್ಟೆಲ್ಲ ಆಗಿಯೂ ರಾಜೀವ್ ಗೌಡ ಬಂಧ ಆಗದಿರುವುದು, ಪ್ರಭಾವಿ ಸಚಿವರೊಬ್ಬರು ಆತನ ರಕ್ಷಣೆ ನಿಂತಿದ್ದಾರೆ ಎಂಬ ಅನುಮಾನಗಳಿಗೆ ಪುಷ್ಟಿ ನೀಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾನ್‌ವೆಜ್, ಅದ್ರಲ್ಲೂ ಚಿಕನ್ ಪ್ರಿಯರಿಗೆ ಶಾಕ್: ಬೆಂಗಳೂರು ಸೇರಿ ಕರ್ನಾಟಕದ ಹಲವೆಡೆ ಕೋಳಿ ಮಾಂಸದ ಬೆಲೆ ಭಾರೀ ಏರಿಕೆ – Kannada News | Chicken Price Hike Shocks Non Veg Lovers in Bangalore Karnataka, Rates May Touch Rs 380 per Kg

ಬೆಂಗಳೂರು, ಜನವರಿ 24: ಬೆಂಗಳೂರು ಸೇರಿದಂತೆ ಕರ್ನಾಟಕದ (Karnataka) ಹಲವು ನಗರಗಳಲ್ಲಿ ನಾನ್‌ವೆಜ್ ಪ್ರಿಯರಿಗೆ ದೊಡ್ಡ ಶಾಕ್ ಎದುರಾಗಿದೆ. ದಿನನಿತ್ಯದ ಆಹಾರ ಪಟ್ಟಿಯಲ್ಲಿರುವ ಕೋಳಿ ಮಾಂಸದ ಬೆಲೆ (Chicken Price) ಏಕಾಏಕಿ ಗಗನಕ್ಕೇರಿದ್ದು, ವಿಶೇಷವಾಗಿ ವಿದೌಟ್ ಸ್ಕಿನ್ ಚಿಕನ್ ತಿನ್ನುವವರಿಗೆ ಇದು ತಲೆನೋವಾಗಿ ಪರಿಣಮಿಸಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಕೆಜಿ ಕೋಳಿ ಮಾಂಸ 260 ರಿಂದ 280 ರೂಗಳ ನಡುವೆ ಲಭ್ಯವಿದ್ದರೆ, ಇದೀಗ ಅದೇ ಚಿಕನ್ ಬೆಲೆ 340 ರಿಂದ 350 ರೂ ಗಡಿ ದಾಟಿದೆ. ಕೆಲ ಪ್ರದೇಶಗಳಲ್ಲಿ ಈಗಾಗಲೇ ಕೆಜಿಗೆ 350 ರೂ ದರ ತಲುಪಿದ್ದು, ಮುಂದಿನ ದಿನಗಳಲ್ಲಿ 370–380 ರೂ ಆಗುವ ಸಾಧ್ಯತೆಯೂ ಇದೆ ಎಂದು ವ್ಯಾಪಾರಿಗಳು ಅಂದಾಜಿಸಿದ್ದಾರೆ.

ಚಿಕನ್ ಬೆಲೆ ಏರಿಕೆಗೆ ಕಾರಣವೇನು?

ಕೋಳಿ ಮಾಂಸದ ದಿಢೀರ್ ಬೆಲೆ ಏರಿಕೆಗೆ ಹಲವು ಕಾರಣಗಳಿವೆ. ಪ್ರಮುಖವಾಗಿ ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಕೋಳಿ ಸಾಕಾಣೆದಾರರು ನಡೆಸುತ್ತಿರುವ ಪ್ರತಿಭಟನೆ ಇದಕ್ಕೆ ಕಾರಣ ಎನ್ನಲಾಗಿದೆ. ನಿರ್ವಹಣಾ ವೆಚ್ಚ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಂಪನಿಗಳು ಹೆಚ್ಚು ಹಣ ನೀಡಬೇಕು ಎಂದು ಕೋಳಿ ಸಾಕಾಣೆದಾರರು ಒತ್ತಾಯಿಸುತ್ತಿದ್ದಾರೆ.

ಇದೇ ಸಮಯದಲ್ಲಿ ಕೋಳಿ ಉತ್ಪಾದನೆಯಲ್ಲೂ ಕುಸಿತ ಕಂಡುಬಂದಿದ್ದು, ಬೇಡಿಕೆಗೆ ತಕ್ಕಂತೆ ಪೂರೈಕೆ ಸಾಧ್ಯವಾಗುತ್ತಿಲ್ಲ. ಇದರಿಂದ ಮಾರುಕಟ್ಟೆಯಲ್ಲಿ ಚಿಕನ್ ಕೊರತೆ ಉಂಟಾಗಿ, ದರ ಏರಿಕೆಗೆ ಕಾರಣವಾಗಿದೆ.

ನಾನ್‌ವೆಜ್ ಹೋಟೆಲ್‌ಗಳಲ್ಲೂ ದರ ಹೆಚ್ಚಳ ಸಾಧ್ಯತೆ

ಚಿಕನ್ ಬೆಲೆ ಏರಿಕೆಯಿಂದ ನಾನ್‌ವೆಜ್ ರೆಸ್ಟೋರೆಂಟ್‌ಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಚಿಕನ್ ಬಿರಿಯಾನಿ, ಚಿಕನ್ ಕಬಾಬ್ ಸೇರಿದಂತೆ ಹಲವು ನಾನ್‌ವೆಜ್ ಖಾದ್ಯಗಳ ದರ ಹೆಚ್ಚಾಗುವ ಸೂಚನೆಗಳು ಕಂಡುಬಂದಿವೆ.

ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಭಾಗಗಳಿಗೆ ತಮಿಳುನಾಡಿನಿಂದ ಕೋಳಿ ಮತ್ತು ಕೋಳಿ ಮಾಂಸ ಪೂರೈಕೆ ಆಗುತ್ತಿರುವ ಹಿನ್ನೆಲೆಯಲ್ಲಿ, ಹೊರರಾಜ್ಯದ ಬೆಳವಣಿಗೆಗಳು ರಾಜ್ಯದ ಮಾರುಕಟ್ಟೆಯ ಮೇಲೂ ನೇರ ಪರಿಣಾಮ ಬೀರುತ್ತಿವೆ.

ಇದನ್ನೂ ಓದಿ: ರಾಜ್ಯ ಕಡಲೆ ಬೆಳೆಗಾರರ ಬೆನ್ನಿಗೆ ನಿಂತ ಕೇಂದ್ರ ಸರ್ಕಾರ, ಬೆಂಬಲ ಬೆಲೆ ಎಷ್ಟು?

ಒಟ್ಟಿನಲ್ಲಿ, ಚಿಕನ್ ಪ್ರಿಯರಿಗೆ ಇದು ಖಂಡಿತವಾಗಿಯೂ ಶಾಕಿಂಗ್ ಸುದ್ದಿ. ಮುಂದಿನ ದಿನಗಳಲ್ಲಿ ಚಿಕನ್ ದರ ಯಾವ ಮಟ್ಟಿಗೆ ಏರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ವರದಿ: ನಟರಾಜ್, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:14 pm, Sat, 24 January 26

Source link

Exit mobile version