Video: ಆಹ್ವಾನವಿಲ್ಲದೆ ಬಂದು ಮದುವೆ ಮನೆಯಲ್ಲಿ ಊಟ ಮಾಡಿ, ಹರಿದ ಜೇಬಿನಿಂದ 10 ರೂ. ತೆಗೆದು ವಧುವಿನ ಕೈಗಿಟ್ಟ ಮಾನಸಿಕ ಅಸ್ವಸ್ಥ

ಗುವಾಹಟಿ, ಮೇ 28: ಅಸ್ಸಾಂನಲ್ಲಿ ನಡೆದ ಮದುವೆಯೊಂದರಲ್ಲಿ ಕರೆಯದೇ ಇದ್ದರೂ ಬಂದು ಊಟ ಮಾಡಿದ್ದ ಮಾನಸಿಕ ಅಸ್ವಸ್ಥ ಹೋಗುವಾಗ ವಧುವಿಗೆ 10 ರೂ. ಉಡುಗೊರೆ ಕೊಟ್ಟು ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲಿ ಸೇರಿದ್ದ ಅತಿಥಿಗಳೊಂದಿಗೆ ಅತ್ಯಂತ ಶಾಂತವಾಗಿ ಕುಳಿತು ಅವರು ಊಟ ಮಾಡಿದ್ದರು. ಆ ವ್ಯಕ್ತಿಯ ಮುಗ್ಧತೆಯನ್ನು ಕಂಡು ಅಲ್ಲಿದ್ದ ಯಾರೊಬ್ಬರೂ ಆತನನ್ನು ಪ್ರಶ್ನಿಸಲಿಲ್ಲ ಅಥವಾ ಹೊರಗೆ ಹಾಕಲಿಲ್ಲ.

ಆದರೆ, ಊಟ ಮುಗಿಸಿ ಅಲ್ಲಿಂದ ಹೊರಡುವ ಮುನ್ನ ಆ ವ್ಯಕ್ತಿ ಮಾಡಿದ ಕೆಲಸ ಎಲ್ಲರ ಹೃದಯ ಮುಟ್ಟುವಂತಿತ್ತು. ಆತ ತನ್ನ ಹರಿದ ಜೇಬಿನಿಂದ ಅತ್ಯಂತ ಜಾಗರೂಕತೆಯಿಂದ ಹತ್ತು ರೂಪಾಯಿಯ ಮುದ್ದೆಯಾಗಿದ್ದ ನೋಟನ್ನು ಹೊರಗೆ ತೆಗೆದು, ಅಲ್ಲಿಯೇ ಇದ್ದ ನವವಧುವಿನ ಕೈಯಲ್ಲಿ ಅತ್ಯಂತ ಪ್ರೀತಿಯಿಂದ ಉಡುಗೊರೆ ರೂಪದಲ್ಲಿ ಕೊಟ್ಟು ಹೋಗಿದ್ದಾರೆ.
ಅವರ ಈ ನಿಸ್ವಾರ್ಥ ನಡೆ ಮತ್ತು ಮುಗ್ಧ ಪ್ರೀತಿಯನ್ನು ಕಂಡು ವಧು ಸೇರಿದಂತೆ ಮದುವೆ ಮನೆಯಲ್ಲಿದ್ದ ಪ್ರತಿಯೊಬ್ಬರ ಕಣ್ಣುಗಳು ಆನಂದಬಾಷ್ಪದಿಂದ ತುಂಬಿ ಬಂದವು. ಈ ಜಗತ್ತಿನಲ್ಲಿ ಮಾನವೀಯತೆ ಇನ್ನು ಸತ್ತಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಗೆ ಮುಕ್ತಿ: 5 ಬೃಹತ್ ಫ್ಲೈಓವರ್‌ಗಳ ನಿರ್ಮಾಣಕ್ಕೆ ಜಿಬಿಎ ಅಧಿಕೃತ ಟೆಂಡರ್ ಆಹ್ವಾನ

ಸಾಂದರ್ಭಿಕ ಚಿತ್ರ (ಎಐ)Image Credit source: MediaForge AI

ಬೆಂಗಳೂರು, ಮೇ 28: ಸಿಲಿಕಾನ್ ಸಿಟಿ ಬೆಂಗಳೂರಿನ ದೈನಂದಿನ ಟ್ರಾಫಿಕ್ ಕಿರಿಕಿರಿ ಕಡಿಮೆ ಮಾಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಕೊನೆಗೂ ಅಧಿಕೃತವಾಗಿ ಅಖಾಡಕ್ಕಿಳಿದಿದೆ. ಹಲವು ವರ್ಷಗಳಿಂದ ಕಾಗದದ ಮೇಲೆಯೇ ನೆನಗುದಿಗೆ ಬಿದ್ದಿದ್ದ ಪ್ರಮುಖ ಮೇಲ್ಸೇತುವೆ ಯೋಜನೆಗಳಿಗೆ ಜಿಬಿಎ ಈಗ ಮರುಜೀವ ನೀಡಿದೆ. ನಗರದ ಅತ್ಯಂತ ದಟ್ಟಣೆಯ ಮತ್ತು ಪ್ರಮುಖ 5 ಭಾಗಗಳಲ್ಲಿ ಹೊಸ ಫ್ಲೈಓವರ್‌ಗಳನ್ನು ನಿರ್ಮಾಣ ಮಾಡಲು ಪ್ರಾಧಿಕಾರವು ಭರ್ಜರಿ ತಯಾರಿ ನಡೆಸಿದ್ದು, ಇದಕ್ಕಾಗಿ ಅಧಿಕೃತವಾಗಿ ಟೆಂಡರ್ ಪ್ರಕ್ರಿಯೆಯನ್ನು ಆರಂಭಿಸಿದೆ.

ಮುಖ್ಯಾಂಶಗಳು

  • ಬೆಂಗಳೂರಿನ ಪ್ರಮುಖ ಜಂಕ್ಷನ್‌ಗಳಲ್ಲಿ ಸಿಗ್ನಲ್ ಮುಕ್ತ ಸಂಚಾರ ಕಲ್ಪಿಸುವ ಉದ್ದೇಶ.
  • ಜಿಬಿಎಯಿಂದ 5 ಹೊಸ ಫ್ಲೈಓವರ್‌ಗಳಿಗೆ ಟೆಂಡರ್ ಆಹ್ವಾನ.
  • ಮಿನರ್ವ ಸರ್ಕಲ್, ಕೆ.ಆರ್. ಮಾರ್ಕೆಟ್, ಓಲ್ಡ್ ಮದ್ರಾಸ್ ರಸ್ತೆ ಹಾಗೂ ಯಲಹಂಕ ಮಾರ್ಗಗಳ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್.

ಯಾವೆಲ್ಲಾ ಭಾಗಗಳಲ್ಲಿ ಹೊಸ ಫ್ಲೈಓವರ್‌?

  1. ನಗರದ ಹೃದಯಭಾಗ ಮತ್ತು ಹೊರವಲಯಗಳನ್ನು ಸಂಪರ್ಕಿಸುವ ಅತ್ಯಂತ ಪ್ರಮುಖ 5 ಮಾರ್ಗಗಳನ್ನು ಗುರುತಿಸಿ ಈ ಬೃಹತ್ ಯೋಜನೆಗೆ ನೀಲನಕ್ಷೆ ಸಿದ್ಧಪಡಿಸಲಾಗಿದೆ.
  2. ಮಿನರ್ವ ಸರ್ಕಲ್‌ನಿಂದ ಹಡ್ಸನ್ ಸರ್ಕಲ್‌ವರೆಗೆ: ಕೇಂದ್ರ ವಾಣಿಜ್ಯ ವಲಯದ ಸಂಚಾರ ದಟ್ಟಣೆ ಕಡಿಮೆ ಮಾಡಲು ಬೃಹತ್ ಮೇಲ್ಸೇತುವೆ.
  3. ಕೆ.ಆರ್. ಮಾರ್ಕೆಟ್ ಟು ಟೌನ್ ಹಾಲ್ ಲೂಪ್: ಪ್ರಸ್ತುತ ಇರುವ ಕೆ.ಆರ್. ಮಾರ್ಕೆಟ್ ಫ್ಲೈಓವರ್‌ಗೆ ಟೌನ್ ಹಾಲ್ ಭಾಗದಿಂದ ಹೊಸದಾಗಿ ಲೂಪ್ ಸಂಪರ್ಕ ಕಲ್ಪಿಸುವುದು.
  4. ಓಲ್ಡ್ ಮದ್ರಾಸ್ ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿ: ಐಟಿ ಉದ್ಯೋಗಿಗಳಿಗೆ ಸುಗಮ ಸಂಚಾರ ಕಲ್ಪಿಸಲು ಈ ಪ್ರಮುಖ ಸಂಪರ್ಕ ಮೇಲ್ಸೇತುವೆ ನೆರವಾಗಲಿದೆ.
  5. ಶೋಲೆ ಸರ್ಕಲ್‌ನಿಂದ ಸೈಂಟ್ ಜಾನ್ಸ್ ಆಸ್ಪತ್ರೆ: ನಿರಂತರ ವಾಹನ ದಟ್ಟಣೆ ಇರುವ ಈ ಜಂಕ್ಷನ್‌ನಲ್ಲಿ ಸಿಗ್ನಲ್ ಮುಕ್ತ ರಸ್ತೆ ನಿರ್ಮಾಣ.

ಯಲಹಂಕ ಪೊಲೀಸ್ ಸ್ಟೇಷನ್‌ನಿಂದ ಕೋಗಿಲು ಕ್ರಾಸ್‌ವರೆಗೆ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಯಲಹಂಕ ಭಾಗದ ಟ್ರಾಫಿಕ್ ಸುಧಾರಣೆಗೆ ಈ ಮೇಲ್ಸೇತುವೆ ಸಹಕಾರಿಯಾಗಲಿದೆ.

ಸಾರ್ವಜನಿಕ ವಲಯದಿಂದ ವ್ಯಕ್ತವಾದ ಮೆಚ್ಚುಗೆ

ಈ ಐದು ಬೃಹತ್ ಯೋಜನೆಗಳು ಜಾರಿಗೆ ಬಂದರೆ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ವಾಹನ ಸವಾರರು ಗಂಟೆಗಟ್ಟಲೆ ಕಾಯುವುದು ತಪ್ಪಲಿದೆ ಎಂದು ಜಿಬಿಎ ಮುಖ್ಯಸ್ಥರಾದ ಮಹೇಶ್ವರ್ ರಾವ್ ತಿಳಿಸಿದ್ದಾರೆ. ವಿಶೇಷವಾಗಿ ಸಾರ್ವಜನಿಕರಿಗೆ ತಲೆನೋವಾಗಿದ್ದ ಮಾರುಕಟ್ಟೆ ಮತ್ತು ಯಲಹಂಕ ಭಾಗದಲ್ಲಿ ಇನ್ಮುಂದೆ ಸಂಚಾರ ಸುಗಮವಾಗಲಿದೆ.

ಇದನ್ನೂ ಓದಿ: ಬೆಂಗ್ಳೂರಿನಲ್ಲಿ 3BHK ಅಪಾರ್ಟ್‌ಮೆಂಟ್‌ನ ತಿಂಗಳ ಬಾಡಿಗೆ 1.1 ಲಕ್ಷ ರೂ, ವೈರಲ್ ಆಯ್ತು ಪೋಸ್ಟ್

ಟೆಂಡರ್ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಹಂತ ಹಂತವಾಗಿ ಕಾಮಗಾರಿಗಳು ಆರಂಭವಾಗಲಿದ್ದು, ಜಿಬಿಎ ತೆಗೆದುಕೊಂಡಿರುವ ಈ ತ್ವರಿತ ನಿರ್ಧಾರಕ್ಕೆ ಬೆಂಗಳೂರಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಯೋಜನೆಗಳಿಗೆ ಈಗ ಟೆಂಡರ್ ಭಾಗ್ಯ ಸಿಕ್ಕಿದ್ದು, ಕಾಮಗಾರಿಗಳು ಕಾಲಮಿತಿಯಲ್ಲಿ ಮುಗಿದು ಟ್ರಾಫಿಕ್ ಕಷ್ಟದಿಂದ ಮುಕ್ತಿ ಸಿಗಲಿ ಎನ್ನುವುದೇ ಸಾರ್ವಜನಿಕರ ಆಶಯವಾಗಿದೆ.

ವರದಿ: ಅರುಣ್ ಕುಮಾರ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಂಗ್ಲಿಷ್ ಬರಲ್ಲ ಅಂತ ನನ್ನನ್ನು ಬಡವ ಅಂದುಕೊಂಡರು: ಪಂಕಜ್ ತ್ರಿಪಾಠಿ

ಬಾಲಿವುಡ್ ಚಿತ್ರರಂಗದಲ್ಲಿ ಇಂದು ಪಂಕಜ್ ತ್ರಿಪಾಠಿ ಅತ್ಯಂತ ಗೌರವಾನ್ವಿತ ಮತ್ತು ಅದ್ಭುತ ನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಆದರೆ, ಈ ಯಶಸ್ಸಿನ ಹಿಂದಿರುವುದು ಸುದೀರ್ಘ ವರ್ಷಗಳ ಕಠಿಣ ಹೋರಾಟ ಮತ್ತು ಅವಮಾನಗಳ ಕಥೆ. ತಮ್ಮ ನಟನಾ ಕನಸನ್ನು ಹೊತ್ತು 2001ರಲ್ಲಿ ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (NSD) ಸೇರಿದಾಗ ತಾವು ಎದುರಿಸಿದ ಸಾಂಸ್ಕೃತಿಕ ಆಘಾತ ಮತ್ತು ಭಾಷಾ ತಾರತಮ್ಯದ ಬಗ್ಗೆ ಪಂಕಜ್ ಇತ್ತೀಚಿನ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.

ಯೂಟ್ಯೂಬ್ ಚಾನೆಲ್ ‘ಯುವಾ’ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಪಂಕಜ್, ‘2001ರಲ್ಲಿ ನಾನು ದೆಹಲಿಗೆ ಬಂದಾಗ ನನಗೆ ದೊಡ್ಡ ಕಲ್ಚರಲ್ ಶಾಕ್ ಎದುರಾಗಿತ್ತು. ಅಲ್ಲಿ ಮೊದಲ ಬಾರಿಗೆ ಹುಡುಗಿಯರು ಸಿಗರೇಟ್ ಸೇದುವುದನ್ನು ನೋಡಿದಾಗ, ‘ಇವರು ಎಂತಹ ಹುಡುಗಿಯರು?’ ಎಂದು ಆಶ್ಚರ್ಯಪಟ್ಟುಕೊಂಡಿದ್ದೆ. ಆದರೆ, ಒಂದು 15 ದಿನಗಳ ನಂತರ ನನ್ನ ಆಲೋಚನಾ ಶೈಲಿ ತಪ್ಪಾಗಿತ್ತು ಮತ್ತು ಯಾರನ್ನೂ ಹಾಗೆ ಅಳೆಯಬಾರದು ಎಂಬ ಸತ್ಯ ನನಗೆ ಅರ್ಥವಾಯಿತು’ ಎಂದು ತಮ್ಮ ಹಳೆಯ ನೆನಪನ್ನು ಹಂಚಿಕೊಂಡಿದ್ದಾರೆ.

ಹಿಂದಿ ಮಾಧ್ಯಮದ ಹಿನ್ನೆಲೆಯಿಂದ ಬಂದಿದ್ದ ಪಂಕಜ್ ಅವರಿಗೆ ಭಾಷೆಯೇ ದೊಡ್ಡ ಸವಾಲಾಗಿತ್ತು. ‘ನನ್ನ ಭಾಷೆಯನ್ನು ನೋಡಿ ಜನರು ತಕ್ಷಣವೇ ನನ್ನನ್ನು ಜಡ್ಜ್ ಮಾಡುತ್ತಿದ್ದರು. ಒಬ್ಬ ವ್ಯಕ್ತಿಗೆ ಸರಾಗವಾಗಿ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ ಎಂದರೆ, ಅವನು ತುಂಬಾ ಬಡ ಹಿನ್ನೆಲೆಯಿಂದ ಬಂದಿದ್ದಾನೆ ಅಥವಾ ಅವನಿಗೆ ಜ್ಞಾನದ ಕೊರತೆ ಇದೆ ಎಂದೇ ಜನರು ಭಾವಿಸುತ್ತಾರೆ. ಇಂದಿಗೂ ಜನರು ನಿಮ್ಮ ಸಾಮರ್ಥ್ಯವನ್ನು ನೀವು ಮಾತನಾಡುವ ಭಾಷೆಯ ಆಧಾರದ ಮೇಲೆ ಅಳೆಯುತ್ತಾರೆ. ಆದರೆ ವಾಸ್ತವದಲ್ಲಿ, ಭಾಷೆಗೂ ಮತ್ತು ಒಬ್ಬರ ಸಾಮರ್ಥ್ಯಕ್ಕೂ ಯಾವುದೇ ಸಂಬಂಧವಿರುವುದಿಲ್ಲ,’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಇಂತಹ ಅನುಭವಗಳು ಯಾರನ್ನಾದರೂ ಕೀಳರಿಮೆಗೆ ತಳ್ಳಬಹುದು. ಆದರೆ ಪಂಕಜ್ ಮಾತ್ರ ಇದಕ್ಕೆ ಧೃತಿಗೆಡಲಿಲ್ಲ. ‘ಇಂತಹ ಪರಿಸ್ಥಿತಿಯನ್ನು ಎದುರಿಸಲು ಎರಡೇ ದಾರಿ ಇರುತ್ತದೆ. ಒಂದೋ ನೀವು ಕೀಳರಿಮೆಗೆ ಒಳಗಾಗಬೇಕು, ಇಲ್ಲವೇ ಅದನ್ನೆಲ್ಲ ಮೀರಿ ಬೆಳೆಯಬೇಕು. ಅದೃಷ್ಟವಶಾತ್ ನಾನು ಎಂದಿಗೂ ಕೀಳರಿಮೆಯ ಸುಳಿಗೆ ಸಿಲುಕಲಿಲ್ಲ ಮತ್ತು ನನ್ನ ಅಸ್ತಿತ್ವದ ಬಗ್ಗೆ ನನಗೆ ಗೊಂದಲವಿರಲಿಲ್ಲ. ಅದೇ ನನ್ನನ್ನು ಆ ಕಷ್ಟದ ದಿನಗಳಲ್ಲಿ ಕಾಪಾಡಿತು’ ಎಂದಿದ್ದಾರೆ.

ಇದನ್ನೂ ಓದಿ: ‘ನಿನಗೆ ಸರಿಯಾಗಿ ಏಟು ಬೀಳುತ್ತೆ’; ಪಂಕಜ್ ತ್ರಿಪಾಠಿಗೆ ನಾನಾ ಪಾಟೇಕರ್ ಬೆದರಿಕೆವೊಡ್ಡಿದ್ದೇಕೆ?

ಸುದೀರ್ಘ ಹೋರಾಟದ ನಂತರ 2012ರ ‘ಗ್ಯಾಂಗ್ಸ್ ಆಫ್ ವಾಸೇಪುರ್’ ಸಿನಿಮಾ ಪಂಕಜ್ ತ್ರಿಪಾಠಿ ಅವರ ವೃತ್ತಿಜೀವನಕ್ಕೆ ದೊಡ್ಡ ಬ್ರೇಕ್ ನೀಡಿತು. ಆದರೆ ಮುಂಬೈನಲ್ಲಿ ಅವಕಾಶಗಳಿಗಾಗಿ ಅಲೆಯುತ್ತಿದ್ದ ದಿನಗಳಲ್ಲಿ ಇವರ ಇಡೀ ಕುಟುಂಬವನ್ನು ಮುನ್ನಡೆಸಿದ್ದು ಅವರ ಪತ್ನಿ ಮೃದುಲಾ. ಪಂಕಜ್ ಅವರ ಕನಸಿಗಾಗಿ ಮೃದುಲಾ ಅವರೊಬ್ಬರೇ ದುಡಿದು ಮನೆ ನಡೆಸುತ್ತಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Twisha Sharma death case: ಮಾಡೆಲ್ ತ್ವಿಶಾ ಶರ್ಮಾ ಸಾವು: ಅತ್ತೆ, ನಿವೃತ್ತ ನ್ಯಾಯಾಧೀಶೆ ಗಿರಿಬಾಲ ಸಿಂಗ್ ನಿರೀಕ್ಷಣಾ ಜಾಮೀನು ರದ್ದು

ಭೋಪಾಲ್, ಮೇ 28: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಮಾಡೆಲ್ ತ್ವಿಶಾ ಶರ್ಮಾ(Twisha Sharma) ಅವರ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರಿ ತಿರುವು ಸಿಕ್ಕಿದೆ. ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ನಿವೃತ್ತ ಜಿಲ್ಲಾ ನ್ಯಾಯಾಧೀಶೆ ಹಾಗೂ ತ್ವಿಶಾ ಶರ್ಮಾ ಅತ್ತೆಗೆ ಕೆಳ ನ್ಯಾಯಾಲಯ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಮಧ್ಯಪ್ರದೇಶ ಹೈಕೋರ್ಟ್​ ರದ್ದುಗೊಳಿಸಿದೆ. ಇದರಿಂದಾಗಿ ಗಿರಿಬಾಲಾ ಅವರನ್ನು ಬಂಧಿಸಲು ಕೇಂದ್ರ ತನಿಖಾ ದಳಕ್ಕೆ (CBI) ಇದ್ದ ಎಲ್ಲಾ ಕಾನೂನು ಅಡೆತಡೆಗಳು ನಿವಾರಣೆಯಾಗಿದ್ದು, ಯಾವುದೇ ಕ್ಷಣದಲ್ಲಿ ಅವರು ಬಂಧನಕ್ಕೊಳಗಾಗಬಹುದು ಅಥವಾ ನ್ಯಾಯಾಲಯಕ್ಕೆ ಶರಣಾಗಬಹುದು.

ಹೈಕೋರ್ಟ್ ಜಾಮೀನು ರದ್ದುಗೊಳಿಸಲು ಕಾರಣಗಳೇನು?
ನ್ಯಾ. ದೇವನಾರಾಯಣ್ ಮಿಶ್ರಾ ಅವರು 17 ಪುಟಗಳ ಕಠಿಣ ಆದೇಶವನ್ನು ಹೊರಡಿಸಿದ್ದಾರೆ. ಮೇ 15, 2026 ರಂದು ಭೋಪಾಲ್‌ನ ಸೆಷನ್ಸ್ ನ್ಯಾಯಾಲಯವು ಗಿರಿಬಾಲಾ ಅವರಿಗೆ ನಿರೀಕ್ಷಣಾ ಜಾಮೀನು ನೀಡಿತ್ತು, ಇದನ್ನು ಹೈಕೋರ್ಟ್ ಈಗ ರದ್ದುಗೊಳಿಸಿದೆ. ಮೃತರ ಕುಟುಂಬದವರು ಸಲ್ಲಿಸಿದ ವಾಟ್ಸಾಪ್ ಸಂದೇಶಗಳಲ್ಲಿ ತ್ವಿಶಾ ಶರ್ಮಾ ಮೇಲೆ ಅವರ ಪತಿ ಮತ್ತು ಅತ್ತೆ ಗಿರಿಬಾಲಾ ಅವರಿಗೆ ಅನುಮಾನ ಇತ್ತು. ಆಕೆಗೆ ಗರ್ಭಪಾತ ಮಾಡಿಸಿಕೊಳ್ಳುವಂತೆ ನಿತ್ಯ ಒತ್ತಡ ಹೇರುತ್ತಿದ್ದರು ಎಂಬುದು ಸಾಬೀತಾಗಿದೆ.

ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ತ್ವಿಶಾ ಅವರ ದೇಹದ ಮೇಲೆ ಹಲವು ಗಾಯದ ಗುರುತುಗಳು ಪತ್ತೆಯಾಗಿವೆ ಎಂದು ಸಿಬಿಐ ಕೋರ್ಟ್‌ಗೆ ತಿಳಿಸಿದೆ. ಆರೋಪಿಗಳು ತನಿಖೆಗೆ ಸಹಕರಿಸುತ್ತಿಲ್ಲ ಮತ್ತು ಸಾಕ್ಷ್ಯಗಳನ್ನು ತಿರುಚುವ ಸಾಧ್ಯತೆ ಹೆಚ್ಚಿದೆ ಎಂದು ಸಿಬಿಐ ವಾದಿಸಿದೆ. ಕೆಳ ನ್ಯಾಯಾಲಯವು ಪ್ರಕರಣದ ಗಂಭೀರತೆಯನ್ನು ಸರಿಯಾಗಿ ಪರಿಗಣಿಸಲು ವಿಫಲವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಮತ್ತಷ್ಟು ಓದಿ: ಕೋರ್ಟ್​ ಮುಂದೆ ಶರಣಾದ ತ್ವಿಶಾ ಶರ್ಮಾ ಗಂಡನ ಕಾನೂನು ಲೈಸೆನ್ಸ್ ರದ್ದು

ಪತಿಯೂ ಸಿಬಿಐ ವಶಕ್ಕೆ:
ಮೇ 12 ರಂದು ತ್ವಿಶಾ ಶರ್ಮಾ ಅವರು ತಮ್ಮ ವೈವಾಹಿಕ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಸಾವಿನ ತನಿಖೆಯನ್ನು ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ಸಿಬಿಐ ವಹಿಸಿಕೊಂಡಿದೆ. ತ್ವಿಶಾ ಅವರ ಪತಿ, ವಕೀಲ ಸಮರ್ಥ್ ಸಿಂಗ್ ಅವರು ಘಟನೆಯ ನಂತರ 10 ದಿನಗಳ ಕಾಲ ತಲೆಮರೆಸಿಕೊಂಡಿದ್ದರು. ಮೇ22 ರಂದು ಅವರನ್ನು ಜಬಲ್ಪುರದಲ್ಲಿ ವಿಶೇಷ ತನಿಖಾ ತಂಡ ಬಂಧಿಸಿತ್ತು. ಪ್ರಸ್ತುತ ಭೋಪಾಲ್ ನ್ಯಾಯಾಲಯವು ಸಮರ್ಥ್ ಸಿಂಗ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಸಿಬಿಐ ಕಸ್ಟಡಿಗೆ ಒಪ್ಪಿಸಿದೆ.

ಬಿಎನ್‌ಎಸ್ (BNS) ಕಾಯ್ದೆಯ ವಿವಿಧ ಸೆಕ್ಷನ್‌ಗಳು ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆಯಡಿ ಇಬ್ಬರ ಮೇಲೂ ಪ್ರಕರಣ ದಾಖಲಾಗಿದ್ದು, ನಿವೃತ್ತ ನ್ಯಾಯಾಧೀಶರೇ ಈ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವುದು ಭಾರಿ ಸಂಚಲನ ಸೃಷ್ಟಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬುಧವಾರವೂ ಜಾರ್ಜ್‌ಕುಟ್ಟಿ ಕಮಾಲ್; 7 ದಿನಕ್ಕೆ ‘ದೃಶ್ಯಂ 3’ ಗಳಿಕೆ ಎಷ್ಟು?

ಮಲಯಾಳಂ ನಟ ಮೋಹನ್‌ಲಾಲ್ ಮತ್ತು ನಿರ್ದೇಶಕ ಜೀತು ಜೋಸೆಫ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಚಿತ್ರ ‘ದೃಶ್ಯಂ 3’, ಬಾಕ್ಸ್ ಆಫೀಸ್‌ನಲ್ಲಿ ನಾಗಾಲೋಟ ಮುಂದುವರಿಸಿದೆ. ಮೇ 21ರಂದು ರಿಲೀಸ್ ಆದ ಈ ಫ್ಯಾಮಿಲಿ ಕ್ರೈಮ್ ಥ್ರಿಲ್ಲರ್ ಸಿನಿಮಾ, ಮೊದಲ ವಾರಾಂತ್ಯದಲ್ಲಿ ಭರ್ಜರಿ ಕಮಾಯಿ ಮಾಡಿತ್ತು. ವಾರದ ದಿನಗಳಲ್ಲಿ ಸಹಜವಾಗಿಯೇ ಕಲೆಕ್ಷನ್ ಕೊಂಚ ಕುಸಿದಿತ್ತಾದರೂ, ಬುಧವಾರ (ಮೇ 27) ಚಿತ್ರದ ಗಳಿಕೆಯಲ್ಲಿ ಅನಿರೀಕ್ಷಿತ ಪ್ರಗತಿ ಕಂಡುಬಂದಿದೆ. ಇದರೊಂದಿಗೆ ಬಿಡುಗಡೆಯಾದ ಕೇವಲ 7 ದಿನಗಳಲ್ಲೇ ಸಿನಿಮಾ ಭಾರತದಾದ್ಯಂತ 75 ಕೋಟಿ ರೂಪಾಯಿ ಗಳಿಕೆ ಮಾಡಿ ದಾಖಲೆ ಬರೆದಿದೆ.

ಬಾಕ್ಸ್ ಆಫೀಸ್ ಟ್ರ್ಯಾಕರ್ ‘ಸ್ಯಾಕ್ನಿಲ್ಕ್’ ಅಂಕಿ-ಅಂಶಗಳ ಪ್ರಕಾರ, 7ನೇ ದಿನ ಈ ಚಿತ್ರ ಭಾರತದಲ್ಲಿ ಬರೋಬ್ಬರಿ 6.65 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ವಿಶೇಷವೆಂದರೆ, ಮಂಗಳವಾರ ಈ ಚಿತ್ರ 6.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇಂದು (ಮೇ 28) ಬಕ್ರೀದ್ ಪ್ರಯುಕ್ತ ಸರ್ಕಾರಿ ರಜೆ ಇದ್ದು, ಚಿತ್ರ ಮತ್ತಷ್ಟು ಗಳಿಸಬಹುದು.
ಭಾರತದಲ್ಲಿ ಚಿತ್ರದ 7 ದಿನಗಳ ಒಟ್ಟು ನೆಟ್ ಕಲೆಕ್ಷನ್ 75.30 ಕೋಟಿ ರೂಪಾಯಿಗೆ ತಲುಪಿದ್ದು, ಗ್ರಾಸ್ ಕಲೆಕ್ಷನ್ 87.38 ಕೋಟಿ ರೂಪಾಯಿ ಮುಟ್ಟಿದೆ. ಭಾರತದಷ್ಟೇ ವಿದೇಶದಲ್ಲೂ ಈ ಚಿತ್ರಕ್ಕೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. 7ನೇ ದಿನ ವಿದೇಶಿ ಮಾರುಕಟ್ಟೆಯಿಂದಲೇ ಚಿತ್ರಕ್ಕೆ 5 ಕೋಟಿ ರೂಪಾಯಿ ಹರಿದುಬಂದಿದೆ. ಇದರೊಂದಿಗೆ ವಿದೇಶದ ಒಟ್ಟು ಗ್ರಾಸ್ ಗಳಿಕೆ ಬರೋಬ್ಬರಿ 95.70 ಕೋಟಿ ರೂಪಾಯಿಗೆ ತಲುಪಿದೆ.

ಭಾರತ ಹಾಗೂ ವಿದೇಶಿ ಕಲೆಕ್ಷನ್ ಎರಡನ್ನೂ ಒಟ್ಟುಗೂಡಿಸಿದರೆ, ‘ದೃಶ್ಯಂ 3’ ಚಿತ್ರದ ವಿಶ್ವಾದ್ಯಂತ ಒಟ್ಟು ಜಾಗತಿಕ ಗ್ರಾಸ್ ಕಲೆಕ್ಷನ್ ಸದ್ಯ 183.08 ಕೋಟಿ ರೂಪಾಯಿ ತಲುಪಿದೆ. ಇನ್ನು ಕೇವಲ ಎರಡು ದಿನಗಳಲ್ಲಿ ಸಿನಿಮಾ ಸುಲಭವಾಗಿ 200 ಕೋಟಿ ಕ್ಲಬ್ ಸೇರುವುದು ಖಚಿತವಾಗಿದೆ.

ಇದನ್ನೂ ಓದಿ:  ಭಾರತಕ್ಕಿಂತ ವಿದೇಶದಲ್ಲಿ ಹೆಚ್ಚು ಕಲೆಕ್ಷನ್ ಮಾಡಿದ ‘ದೃಶ್ಯಂ 3’; ಒಟ್ಟೂ ಗಳಿಕೆ ಎಷ್ಟು?

ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಪ್ರೇಕ್ಷಕರು ಮಾತ್ರ ಚಿತ್ರಕ್ಕೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಮೋಹನ್‌ಲಾಲ್ ಜೊತೆಗೆ ಮೀನಾ, ಅನ್ಸಿಬಾ ಹಸನ್, ಎಸ್ತರ್ ಅನಿಲ್, ಸಿದ್ದಿಕ್ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bengaluru Air Quality: ಸಿಲಿಕಾನ್ ಸಿಟಿಯಲ್ಲಿ ಇವತ್ತು ಉಸಿರಾಡಲು ಯೋಗ್ಯವಾದ ಗಾಳಿ!

ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ವಾಯು ಗುಣಮಟ್ಟದಲ್ಲಿ ಸುಧಾರಣೆ!

ಬೆಂಗಳೂರು, ಮೇ 28: ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕವು (AQI) ಹೆಚ್ಚಾಗಿ ‘ಸಾಧಾರಣ’ (Moderate) ಹಾಗೂ ಕೆಲವು ಜಿಲ್ಲೆಗಳಲ್ಲಿ ‘ಉತ್ತಮ’ (Good) ಮಟ್ಟದಲ್ಲಿದೆ. ಇತ್ತೀಚೆಗೆ ರಾಜ್ಯದ ಹಲವೆಡೆ ಬಿದ್ದ ಮಳೆ ಮತ್ತು ಬಿರುಗಾಳಿಯ ಕಾರಣದಿಂದಾಗಿ ವಾತಾವರಣದಲ್ಲಿನ ಧೂಳಿನ ಕಣಗಳು ನಿಯಂತ್ರಣಕ್ಕೆ ಬಂದಿದ್ದು, ವಾಯು ಮಾಲಿನ್ಯದ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ.

ಮುಖ್ಯಾಂಶಗಳು

  • ಇತ್ತೀಚಿನ ಮಳೆಯಿಂದಾಗಿ ಬೆಂಗಳೂರಿನಲ್ಲಿ ಇಂದಿನ ವಾಯು ಗುಣಮಟ್ಟ ಸಾಧಾರಣ ಮಟ್ಟದಲ್ಲಿದೆ.
  • ಧಾರವಾಡದಲ್ಲಿ ವಾಯು ಮಾಲಿನ್ಯದ ಪ್ರಮಾಣ ಸೂಕ್ಷ್ಮ ಆರೋಗ್ಯದವರಿಗೆ ಹಾನಿಕಾರಕವಾಗಿದೆ.
  • ಗದಗ ಜಿಲ್ಲೆಯಲ್ಲಿ ಇಂದು ರಾಜ್ಯದಲ್ಲೇ ಅತ್ಯಂತ ಶುದ್ಧವಾದ ಗಾಳಿ ದಾಖಲಾಗಿದೆ.

ಬೆಂಗಳೂರಿನ ಇಂದಿನ ವಾಯು ಗುಣಮಟ್ಟ ಹೇಗಿದೆ?

ಬೆಂಗಳೂರು ನಗರದಲ್ಲಿ ಇಂದು ಸರಾಸರಿ AQI 92 ರಿಂದ 94ರಷ್ಟಿದ್ದು, ಇದು ‘ಸಾಧಾರಣ’ ವಲಯಕ್ಕೆ ಸೇರುತ್ತದೆ.

ಹೆಬ್ಬಾಳ: 69 AQI (ಸಾಧಾರಣ)
ಕುಂದಲಹಳ್ಳಿ: 97 AQI (ಸಾಧಾರಣ)
ಬಿಟಿಎಂ ಲೇಔಟ್: 88 AQI (ಸಾಧಾರಣ)
ಬಸವನಗುಡಿ: 84 AQI (ಸಾಧಾರಣ)

ಬೆಂಗಳೂರಿನಲ್ಲಿ ಸದ್ಯಕ್ಕೆ PM2.5 ಕಣಗಳ ಪ್ರಮಾಣ ಹೆಚ್ಚಾಗಿದ್ದು, ಸೂಕ್ಷ್ಮ ಆರೋಗ್ಯ ಸಮಸ್ಯೆ ಇರುವವರು (ಅಸ್ತಮಾ ಅಥವಾ ಶ್ವಾಸಕೋಶದ ತೊಂದರೆ ಇರುವವರು) ದೀರ್ಘಕಾಲದವರೆಗೆ ಹೊರಾಂಗಣದಲ್ಲಿ ಕಳೆಯುವಾಗ ಸ್ವಲ್ಪ ಎಚ್ಚರಿಕೆ ವಹಿಸುವುದು ಒಳ್ಳೆಯದು. ಸಾಮಾನ್ಯ ಜನರಿಗೆ ಈ ವಾತಾವರಣದಿಂದ ಯಾವುದೇ ತೊಂದರೆಯಿಲ್ಲ.

ಕರ್ನಾಟಕದ ಇತರೆ ನಗರಗಳ ವಾಯು ಮಾಲಿನ್ಯದ ಸ್ಥಿತಿ

  • ಧಾರವಾಡ: 118 AQI (ಇದು ಸೂಕ್ಷ್ಮ ಆರೋಗ್ಯ ಹೊಂದಿರುವವರಿಗೆ ಹಾನಿಕಾರಕ ಮಟ್ಟದಲ್ಲಿದೆ).
  • ಮೈಸೂರು: 63 AQI (ಸಾಧಾರಣ ಹಾಗೂ ಆರೋಗ್ಯಕರ).
  • ಶಿವಮೊಗ್ಗ ಮತ್ತು ಚಿಕ್ಕಮಗಳೂರು: 32 AQI (ಉತ್ತಮ ಮತ್ತು ಅತ್ಯಂತ ಶುದ್ಧ ಗಾಳಿ).
  • ಗದಗ: 17 AQI (ರಾಜ್ಯದಲ್ಲೇ ಇವತ್ತು ಅತ್ಯಂತ ಶುದ್ಧವಾದ ಗಾಳಿ ಹೊಂದಿರುವ ನಗರ).
  • ಬಾಗಲಕೋಟೆ ಮತ್ತು ರಾಮನಗರ: 73 AQI (ಸಾಧಾರಣ).

ಒಟ್ಟಾರೆಯಾಗಿ ಹೇಳುವುದಾದರೆ, ಕರ್ನಾಟಕದ ಬಹುತೇಕ ಭಾಗಗಳಲ್ಲಿ ವಾಯು ಮಾಲಿನ್ಯ ಸದ್ಯಕ್ಕೆ ನಿಯಂತ್ರಣದಲ್ಲಿದೆ. ಕೈಗಾರಿಕಾ ಪ್ರದೇಶಗಳು ಮತ್ತು ವಾಹನ ದಟ್ಟಣೆ ಹೆಚ್ಚಿರುವ ಧಾರವಾಡ ಹಾಗೂ ಬೆಂಗಳೂರಿನ ಕೆಲವು ವಾಣಿಜ್ಯ ವಲಯಗಳನ್ನು ಹೊರತುಪಡಿಸಿದರೆ, ಉಳಿದ ಜಿಲ್ಲೆಗಳಲ್ಲಿ ಜನರು ನೆಮ್ಮದಿಯಾಗಿ ನಿಟ್ಟುಸಿರು ಬಿಡಬಹುದಾದ ವಾತಾವರಣವಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚೀನಾದಿಂದ ತಪ್ಪಿಸಿಕೊಂಡು ಸಮುದ್ರದಲ್ಲಿ ರಬ್ಬರ್ ದೋಣಿಯಲ್ಲಿ 30 ಗಂಟೆಗಳ ಕಾಲ ಪ್ರಯಾಣಿಸಿ ದಕ್ಷಿಣ ಕೊರಿಯಾ ತಲುಪಿದ ಮಾಜಿ ಪೊಲೀಸ್

ಸೋಲ್, ಮೇ 28: ಚೀನಾ(China)ದಿಂದ ತಪ್ಪಿಸಿಕೊಂಡು ದಕ್ಷಿಣ ಕೊರಿಯಾಗೆ ಬಂದಿದ್ದ ಮಾಜಿ ಪೊಲೀಸ್ ಅಧಿಕಾರಿಯನ್ನು ದಕ್ಷಿಣ ಕೊರಿಯಾ ಪೊಲೀಸರು ಬಂಧಿಸಿದ್ದಾರೆ. ಆದರೆ ಅವರು ದಕ್ಷಿಣ ಕೊರಿಯಾಗೆ ಬರಲು ಮಾಡಿರುವ ಪ್ರಯತ್ನ ಸಣ್ಣ ಪುಟ್ಟದಲ್ಲ. ಮಾಜಿ ಪೊಲೀಸ್ ಅಧಿಕಾರಿ ಡಾಂಗ್ ಗುವಾಂಗ್​ಪಿಂಗ್​ ಸಣ್ಣ ರಬ್ಬರ್ ದೋಣಿಯಲ್ಲಿ 30 ಗಂಟೆಗಳ ಕಾಲ ಸಮುದ್ರದಲ್ಲಿ ಪ್ರಯಾಣಿಸಿ ಬಳಿಕ ದಕ್ಷಿಣ ಕೊರಿಯಾ ತಲುಪಿದ್ದಾರೆ. ಚೀನಾದಿಂದ ಹೇಗಾದರೂ ಮಾಡಿ ತಪ್ಪಿಸಿಕೊಂಡು, ಕೆನಡಾದಲ್ಲಿ ಆಶ್ರಯ ಪಡೆದಿರುವ ತನ್ನ ಪತ್ನಿ ಮತ್ತು ಮಗಳನ್ನು ಸೇರಲು ಅವರು ಈ ಅಪಾಯಕಾರಿ ಸಾಹಸ ಮಾಡಿದ್ದಾರೆ.

ದಡ ಸೇರುವ ಮುನ್ನ ಕೆಟ್ಟುಹೋದ ದೋಣಿ
ವರದಿಗಳ ಪ್ರಕಾರ, ಡಾಂಗ್ ಅವರು ಚೀನಾದ ಶಾಂಡೊಂಗ್ ಪ್ರಾಂತ್ಯದ ವೈಹೈನಿಂದ ದೋಣಿಯಲ್ಲಿ ಪ್ರಯಾಣ ಬೆಳೆಸಿದ್ದರು. ಪಶ್ಚಿಮ ದಕ್ಷಿಣ ಕೊರಿಯಾದ ಟೇನ್ ಕೌಂಟಿಯನ್ನು ಸಮೀಪಿಸುತ್ತಿದ್ದಂತೆ ಅವರ ದೋಣಿಯ ಎಂಜಿನ್ ಕೆಟ್ಟುಹೋಗಿತ್ತು. ಎರಡು ದಿನಗಳಿಂದ ನಿದ್ರೆಯಿಲ್ಲದೆ ಕುಸಿದು ಬೀಳುವ ಹಂತದಲ್ಲಿದ್ದ ಡಾಂಗ್ ಅವರ ದೋಣಿಯನ್ನು ಸ್ಥಳೀಯ ಮೀನುಗಾರರು ಗುರುತಿಸಿದರು. ತಕ್ಷಣವೇ ದಕ್ಷಿಣ ಕೊರಿಯಾದ ಕರಾವಳಿ ಕಾವಲು ಪಡೆ (Coast Guard) ಧಾವಿಸಿ ಅವರನ್ನು ರಕ್ಷಿಸಿದೆ. ವಲಸೆ ನಿಯಮಗಳ ಉಲ್ಲಂಘನೆಯ ಶಂಕೆಯ ಮೇಲೆ ಸದ್ಯ ಅವರನ್ನು ಬಂಧನದಲ್ಲಿಡಲಾಗಿದೆ.

ಕೆನಡಾದಲ್ಲಿ ಆಶ್ರಯ ಪಡೆದಿರುವ ಡಾಂಗ್, ಈ ಹಿಂದೆ ಕನಿಷ್ಠ ಮೂರು ಬಾರಿ ಚೀನಾದಿಂದ ತಪ್ಪಿಸಿಕೊಂಡಿದ್ದರು, ಆದರೆ ಪ್ರತಿ ಬಾರಿಯೂ ವಾಪಸ್ ಕಳುಹಿಸಲ್ಪಟ್ಟಿದ್ದರು. ಅವರು ಥೈಲ್ಯಾಂಡ್ ಮತ್ತು ನಂತರ ವಿಯೆಟ್ನಾಂಗೆ ಪಲಾಯನ ಮಾಡಿದ್ದರು, ಆದರೆ ಆ ದೇಶಗಳಲ್ಲಿನ ಅಧಿಕಾರಿಗಳು ಅವರನ್ನು ಬಂಧಿಸಿ ಚೀನಾಗೆ ಕಳುಹಿಸಿದ್ದರು.

ಮತ್ತಷ್ಟು ಓದಿ: ಜಮ್ಮು ಕಾಶ್ಮೀರ, ಲಡಾಖ್ ಭಾರತದ ಅವಿಭಾಜ್ಯ ಅಂಗ; ಪಾಕಿಸ್ತಾನ-ಚೀನಾಗೆ ವಿದೇಶಾಂಗ ಸಚಿವಾಲಯ ಚಾಟಿ

ದೇಶವಿರೋಧಿ ಕೆಲಸದಲ್ಲಿ ಅವರು ತೊಡಗಿಕೊಂಡಿದ್ದಕ್ಕೆ ಅವರನ್ನು ಕೆಲಸದಿಂದ ವಜಾ ಮಾಡಲಾಗಿತ್ತು.
2015 ರಲ್ಲಿ ಥೈಲ್ಯಾಂಡ್‌ಗೆ ಪಲಾಯನ ಮಾಡಿದ್ದರೂ ಇವರನ್ನು ಮತ್ತೆ ಚೀನಾಕ್ಕೆ ಗಡೀಪಾರು ಮಾಡಲಾಯಿತು. ನಂತರ ತೈವಾನ್ ದ್ವೀಪಕ್ಕೆ ಈಜಲು ಯತ್ನಿಸಿ ಸೋತಿದ್ದರು. 2020 ರಲ್ಲಿ ವಿಯೆಟ್ನಾಂಗೆ ಅಕ್ರಮವಾಗಿ ಪ್ರವೇಶಿಸಿದಾಗಲೂ ಅಲ್ಲಿನ ಸರ್ಕಾರ ಇವರನ್ನು ಬಂಧಿಸಿ ಚೀನಾಕ್ಕೆ ಒಪ್ಪಿಸಿತ್ತು.

ಚೀನಾ-ಕೆನಡಾ ಕಾರ್ಯಕರ್ತೆ ಶೆಂಗ್ ಕ್ಸು ಸೇರಿದಂತೆ ಹಲವು ಹಕ್ಕುಗಳ ಗುಂಪುಗಳು ಡಾಂಗ್ ಅವರನ್ನು ಯಾವುದೇ ಕಾರಣಕ್ಕೂ ಮತ್ತೆ ಚೀನಾಕ್ಕೆ ವಾಪಸ್ ಕಳುಹಿಸಬಾರದು ಎಂದು ದಕ್ಷಿಣ ಕೊರಿಯಾ ಸರ್ಕಾರವನ್ನು ಒತ್ತಾಯಿಸುತ್ತಿವೆ. ಒಂದು ವೇಳೆ ಅವರನ್ನು ಚೀನಾಕ್ಕೆ ಗಡೀಪಾರು ಮಾಡಿದರೆ ಅವರಿಗೆ ಜೈಲು ಶಿಕ್ಷೆ, ಚಿತ್ರಹಿಂಸೆ ಅಥವಾ ಸಾವು ಸಂಭವಿಸುವ ಭೀತಿ ಇದೆ ಎಂದು ಕೆನಡಾ ಅಧಿಕಾರಿಗಳಿಗೂ ಪತ್ರ ಬರೆಯಲಾಗಿದೆ. ಪ್ರಸ್ತುತ ಚೀನಾದೊಂದಿಗೆ ಸಂಬಂಧ ಸುಧಾರಿಸಲು ಯತ್ನಿಸುತ್ತಿರುವ ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೇ ಮ್ಯುಂಗ್ ಅವರಿಗೆ ಈ ಪ್ರಕರಣ ರಾಜಕೀಯವಾಗಿ ಅತ್ಯಂತ ಸೂಕ್ಷ್ಮ ಸವಾಲಾಗಿ ಪರಿಣಮಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸಿಎಂ ಬದಲಾದರೇ ಇಡೀ ಸಂಪುಟವೇ ಬದಲು! ಮಹತ್ವದ ಬದಲಾವಣೆಗೆ ಸಿದ್ಧವಾಗಿದೆ ಪ್ಲಾನ್

ಮುಖ್ಯಮಂತ್ರಿ ಬದಲಾದರೇ ಇಡೀ ತಂಡವೇ ಬದಲು!Image Credit source: tv9

ಬೆಂಗಳೂರು, ಮೇ 28: ಕರ್ನಾಟಕ ರಾಜಕೀಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ರಾಜೀನಾಮೆ ಪ್ರಕ್ರಿಯೆ ಬೆನ್ನಲ್ಲೇ, ರಾಜ್ಯ ಸಚಿವ ಸಂಪುಟದಲ್ಲಿ ಅತ್ಯಂತ ಪ್ರಮುಖ ಹಾಗೂ ಮಹತ್ವದ ಬದಲಾವಣೆಗಳಿಗೆ ಹೈಕಮಾಂಡ್ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದೆ ಎಂಬುದು ತಿಳಿದುಬಂದಿದೆ. ಸಾಂವಿಧಾನಿಕ ನಿಯಮಗಳ ಪ್ರಕಾರ, ಮುಖ್ಯಮಂತ್ರಿಯೊಬ್ಬರು ರಾಜೀನಾಮೆ ನೀಡಿದ ತಕ್ಷಣ ಅವರ ಇಡೀ ಸಚಿವ ಸಂಪುಟವು ಸ್ವಯಂಚಾಲಿತವಾಗಿ ರದ್ದಾಗುತ್ತದೆ ಮತ್ತು ಸಚಿವರು ತಮ್ಮ ಸ್ಥಾನಗಳನ್ನು ಕಳೆದುಕೊಳ್ಳುತ್ತಾರೆ. ಹೊಸ ಮುಖ್ಯಮಂತ್ರಿ ಅಧಿಕಾರ ವಹಿಸಿಕೊಂಡ ನಂತರವೇ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಬೇಕಾಗುತ್ತದೆ. ಈ ತಾಂತ್ರಿಕ ಪ್ರಕ್ರಿಯೆಯನ್ನೇ ಬಳಸಿಕೊಂಡು ಕಾಂಗ್ರೆಸ್ ಹೈಕಮಾಂಡ್ ಇಡೀ ತಂಡವನ್ನೇ ಬದಲಾಯಿಸಲು ಮುಂದಾಗಿದ್ದು, ಜಿದ್ದಾಜಿದ್ದಿಗೆ ಬಿದ್ದಿರುವ ಬಣಗಳನ್ನು ಶಾಂತಗೊಳಿಸಲು ಭಾರಿ ಜಾತಿ ಸಮೀಕರಣದ ಹೊಸ ಸೂತ್ರವನ್ನು ಸಿದ್ಧಪಡಿಸಿದೆ ಎನ್ನಲಾಗಿದೆ.

ಮುಖ್ಯಾಂಶಗಳು

  • ಮುಖ್ಯಮಂತ್ರಿ ರಾಜೀನಾಮೆಯಿಂದ ಇಡೀ ಸಚಿವ ಸಂಪುಟ ರದ್ದು.
  • ನೂತನ ಸಿಎಂ ನೇತೃತ್ವದಲ್ಲಿ ಹೊಸ ಟೀಮ್ ರಚನೆಗೆ ಕಸರತ್ತು.
  • ಸಿಎಂ ಪುತ್ರ ಡಾ. ಯತೀಂದ್ರಗೆ ಡಿಸಿಎಂ ಪಟ್ಟ ನೀಡಲು ಹೈಕಮಾಂಡ್ ಒಲವು.

4 ಡಿಸಿಎಂ ಹುದ್ದೆಗಳ ಭಾರಿ ಲೆಕ್ಕಾಚಾರ

ಸಿದ್ದರಾಮಯ್ಯ ರಾಜಕೀಯ ಹಿರಿತನ ಹಾಗೂ ಗೌರವಕ್ಕೆ ಯಾವುದೇ ಧಕ್ಕೆ ಬಾರದಂತೆ ನೋಡಿಕೊಳ್ಳಲು ಹೈಕಮಾಂಡ್ ಹಲವು ಪ್ರಮುಖ ಭರವಸೆಗಳನ್ನು ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೊಸದಾಗಿ ಸೃಷ್ಟಿಸಲು ಉದ್ದೇಶಿಸಿರುವ 4 ಡಿಸಿಎಂ ಹುದ್ದೆಗಳಲ್ಲಿ, ಒಬಿಸಿ (OBC) ಕೋಟಾದ ಅಡಿಯಲ್ಲಿ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಸ್ಥಾನ ನೀಡಲು ಗಂಭೀರ ಚಿಂತನೆ ನಡೆದಿದೆ. ಇನ್ನುಳಿದಂತೆ ದಲಿತ ಕೋಟಾದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅಥವಾ ಡಾ. ಜಿ. ಪರಮೇಶ್ವರ್, ಮುಸ್ಲಿಂ ಕೋಟಾದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅಥವಾ ಸ್ಪೀಕರ್ ಯು.ಟಿ. ಖಾದರ್, ಲಿಂಗಾಯತ ಕೋಟಾದಡಿ ಸಚಿವರಾದ ಈಶ್ವರ ಖಂಡ್ರೆ ಅಥವಾ ಎಂ.ಬಿ. ಪಾಟೀಲ್ ಹಾಗೂ ಅಲ್ಪಸಂಖ್ಯಾತ ಕೋಟಾದಲ್ಲಿ ಕೆ.ಜೆ. ಜಾರ್ಜ್ ಅವರ ಹೆಸರುಗಳು ರೇಸ್‌ನಲ್ಲಿವೆ ಎಂದು ಹೇಳಲಾಗುತ್ತಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ಹೊಸ ಸಂಪುಟ ಕಸರತ್ತು

ಮುಂದಿನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಳ್ಳುವುದು ಬಹುತೇಕ ನಿಶ್ಚಿತವಾಗಿರುವುದರಿಂದ, ಅವರು ಸದ್ಯ ಹೊಂದಿರುವ ಕೆಪಿಸಿಸಿ (KPCC) ಅಧ್ಯಕ್ಷ ಸ್ಥಾನಕ್ಕೆ ಹೊಸಬರನ್ನು ನೇಮಿಸಬೇಕಾಗುತ್ತದೆ. ಮೊದಲಿನಿಂದಲೂ ಈ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನದ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಪಟ್ಟವೂ ಸಿಗುವ ದಟ್ಟ ಸಾಧ್ಯತೆಗಳಿವೆ. ಈ ನಡುವೆ ಶಾಸಕ ವಿಶ್ವಾಸ್ ವಸಂತ್ ವೈದ್ಯ ಅವರು ಸತೀಶ್ ಜಾರಕಿಹೊಳಿ ಪರ ಬ್ಯಾಟಿಂಗ್ ಮಾಡಿದ್ದು, ಅವರಿಗೆ ಅಧ್ಯಕ್ಷ ಸ್ಥಾನ ನೀಡಿದರೆ ಪಕ್ಷ ಸಂಘಟನೆಗೆ ಮತ್ತಷ್ಟು ಅನುಕೂಲವಾಗಲಿದೆ ಎಂದಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆಗೆ ಎದುರಾಗುತ್ತಾ ಬಿಗ್ ಟ್ವಿಸ್ಟ್? ರಾತ್ರೋರಾತ್ರಿ ಬೆಂಗಳೂರು ತೊರೆದು ಮುಂಬೈಗೆ ರಾಜ್ಯಪಾಲ ಗೆಹ್ಲೋಟ್!

ಮತ್ತೊಂದೆಡೆ, ಸಚಿವರಾದ ಜಮೀರ್ ಅಹ್ಮದ್ ಮತ್ತು ಸತೀಶ್ ಜಾರಕಿಹೊಳಿ ಈಗಾಗಲೇ ಪ್ರತ್ಯೇಕವಾಗಿ ಸಭೆ ನಡೆಸಿರುವುದು ಕುತೂಹಲ ಮೂಡಿಸಿದೆ. ಒಟ್ಟಾರೆ ಹೊಸ ಸಂಪುಟದಲ್ಲಿ ಹಾಲಿ ಕಾರ್ಯಾಧ್ಯಕ್ಷರಿಗೆ ಹಾಗೂ ಹೊಸ ಶಾಸಕರಿಗೆ ಸಚಿವ ಸ್ಥಾನ ಮತ್ತು ನಿಗಮ ಮಂಡಳಿಗಳಲ್ಲಿ ಹೆಚ್ಚಿನ ಅವಕಾಶ ನೀಡಲು ಹೈಕಮಾಂಡ್ ಮುಂದಾಗಿದ್ದು, ಇಂದಿನ ರಾಜಕೀಯ ಬೆಳವಣಿಗೆಗಳ ಮೇಲೆ ಎಲ್ಲವೂ ನಿರ್ಧಾರವಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ಮುಂದಿನ ಕೆಲವು ದಿನಗಳಲ್ಲಿ ರಾಜ್ಯಾದ್ಯಂತ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ

ಮುಂದಿನ ಕೆಲವು ದಿನಗಳಲ್ಲಿ ರಾಜ್ಯಾದ್ಯಂತ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ

ಬೆಂಗಳೂರು, ಮೇ 28: ರಾಜ್ಯದಾದ್ಯಂತ ವರುಣನ ಅಬ್ಬರ ಮುಂದುವರಿದಿದ್ದು, ರಾಜ್ಯದ ಕರಾವಳಿ ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆಯಾಗುವ (Weather) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಲಾಖೆಯು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ.

ಮುಖ್ಯಾಂಶಗಳು

  • ಕರಾವಳಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
  • ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಗಾಳಿಯೊಂದಿಗೆ ಸಾಧಾರಣ ಮಳೆಯ ಮುನ್ಸೂಚನೆ ನೀಡಲಾಗಿದೆ.
  • ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ನಿರೀಕ್ಷೆಯಿದೆ.

ಎಲ್ಲೆಲ್ಲಿ ಮಳೆ?

ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.ಉತ್ತರ ಒಳನಾಡಿನ ಬೀದರ್, ಕಲ್ಬುರ್ಗಿ, ವಿಜಯಾಪುರ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಗಂಟೆಗೆ 50 ರಿಂದ 60 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಸಾಧಾರಣ ಮಳೆಯಾಗಲಿದೆ. ಇನ್ನು ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ್ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಗಂಟೆಗೆ 40 ರಿಂದ 50 ಕಿ.ಮೀ ವೇಗದ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಯಿದೆ.

ಇನ್ನು ದಕ್ಷಿಣ ಒಳನಾಡಿನ ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಭಾರಿ ಗಾಳಿ (ಗಂಟೆಗೆ 50-60 ಕಿ.ಮೀ) ಸಹಿತ ಮಳೆಯಾಗಲಿದೆ. ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಗಂಟೆಗೆ 40-50 ಕಿ.ಮೀ ವೇಗದ ಗಾಳಿಯೊಂದಿಗೆ ಮಳೆ ಮುನ್ಸೂಚನೆ ಇದೆ.

ಅಲ್ಲದೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಜಿಟಿಜಿಟಿ ಅಥವಾ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಸಾರ್ವಜನಿಕರು ಮತ್ತು ರೈತರು ಮುನ್ನೆಚ್ಚರಿಕೆ ವಹಿಸಲು ಕೋರಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ರಿಷಭ್ ಪಂತ್ ಸೇರಿ 3 ಸ್ಟಾರ್ ಆಟಗಾರರಿಗೆ ಸಂಜೀವ್ ಗೋಯೆಂಕಾ ಕೋಕ್?

ಐಪಿಎಲ್ 2026ರ ಸೀಸನ್ ಲಕ್ನೋ ಸೂಪರ್ ಜೈಂಟ್ಸ್ (LSG) ಪಾಲಿಗೆ ಸಂಪೂರ್ಣ ನಿರಾಸೆ ಮೂಡಿಸಿದೆ. ಟೂರ್ನಿಯುದ್ದಕ್ಕೂ ತಡಕಾಡಿದ ಲಕ್ನೋ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ತೃಪ್ತಿಪಡಬೇಕಾಗಿ ಬಂತು. ಇಡೀ ಸೀಸನ್‌ನಲ್ಲಿ ಆಡಿದ 14 ಪಂದ್ಯಗಳ ಪೈಕಿ ಕೇವಲ 4ರಲ್ಲಿ ಮಾತ್ರ ಜಯಗಳಿಸಿದರೆ, ಬರೋಬ್ಬರಿ 10 ಪಂದ್ಯಗಳಲ್ಲಿ ಹೀನಾಯ ಸೋಲು ಅನುಭವಿಸಿತು. ಆರಂಭದಲ್ಲಿ ಸತತ ಎರಡು ಪಂದ್ಯಗಳನ್ನು ಗೆದ್ದರೂ, ಆ ನಂತರ ಸತತ 6 ಪಂದ್ಯಗಳಲ್ಲಿ ಸೋತಿದ್ದು ತಂಡದ ಪತನಕ್ಕೆ ಕಾರಣವಾಯಿತು. ಈ ಕಳಪೆ ಪ್ರದರ್ಶನದ ಬೆನ್ನಲ್ಲೇ ತಂಡದ ಮ್ಯಾನೇಜ್‌ಮೆಂಟ್ ಮುಂದಿನ ಸೀಸನ್‌ಗಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಮುಂದಾಗಿದ್ದು, ಐಪಿಎಲ್ 2027ರ ಮಿನಿ ಹರಾಜಿಗೂ ಮುನ್ನ ಮೂವರು ಪ್ರಮುಖ ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಆ ಮೂವರು ಆಟಗಾರರ ವಿವರ ಇಲ್ಲಿದೆ:

ರಿಷಭ್ ಪಂತ್

ಲಕ್ನೋ ತಂಡದ ನಾಯಕ ರಿಷಭ್ ಪಂತ್ ಅವರನ್ನು ತಂಡದಿಂದ ಬಿಡುಗಡೆ ಮಾಡಿ, ಹರಾಜಿನಲ್ಲಿ ಕಡಿಮೆ ಮೊತ್ತಕ್ಕೆ ಮರಳಿ ಖರೀದಿಸಲು ಫ್ರಾಂಚೈಸಿ ಯೋಚಿಸುತ್ತಿದೆ. ಲಕ್ನೋ ತಂಡ ಸೇರಿದಾಗಿನಿಂದ ಪಂತ್ ನಾಯಕತ್ವ ಹಾಗೂ ಬ್ಯಾಟಿಂಗ್ ಎರಡರಲ್ಲೂ ಸಂಪೂರ್ಣ ವೈಫಲ್ಯ ಕಂಡಿದ್ದಾರೆ. 2025ರ ಸೀಸನ್‌ನಲ್ಲಿ 13 ಇನ್ನಿಂಗ್ಸ್‌ಗಳಿಂದ ಕೇವಲ 269 ರನ್ ಗಳಿಸಿದ್ದ ಪಂತ್, ತಂಡ ಟೂರ್ನಿಯಿಂದ ಹೊರಬಿದ್ದ ನಂತರವಷ್ಟೇ ಶತಕ ಬಾರಿಸಿದ್ದರು.

2026ರ ಸೀಸನ್‌ನಲ್ಲೂ ಇವರ ಫಾರ್ಮ್ ಸುಧಾರಿಸಲಿಲ್ಲ. ಇಡೀ ಟೂರ್ನಿಯಲ್ಲಿ ಗಳಿಸಿದ್ದು ಕೇವಲ 312 ರನ್ ಮಾತ್ರ. ಐಪಿಎಲ್‌ನಲ್ಲಿನ ಈ ಕಳಪೆ ಪ್ರದರ್ಶನದಿಂದಾಗಿ ಪಂತ್ ಭಾರತ ಏಕದಿನ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಲ್ಲದೆ, ಟೆಸ್ಟ್ ತಂಡದ ಉಪನಾಯಕತ್ವವನ್ನೂ ಕಿತ್ತುಕೊಳ್ಳಲಾಗಿದೆ. ಹೀಗಾಗಿ ಇವರನ್ನು ನಾಯಕತ್ವದಿಂದ ಕೆಳಗಿಳಿಸಿ ಬಿಡುಗಡೆ ಮಾಡಲು ಲಕ್ನೋ ಚಿಂತಿಸುತ್ತಿದೆ.

ನಿಕೋಲಸ್ ಪೂರನ್

2025ರ ಮೆಗಾ ಹರಾಜಿಗೂ ಮುನ್ನ ಲಕ್ನೋ ಫ್ರಾಂಚೈಸಿ ಬರೋಬ್ಬರಿ 21 ಕೋಟಿ ರೂಪಾಯಿ ನೀಡಿ ನಿಕೋಲಸ್ ಪೂರನ್ ಅವರನ್ನು ರಿಟೇನ್ ಮಾಡಿಕೊಂಡಿತ್ತು. ಆದರೆ ಈ ವೆಸ್ಟ್‌ಇಂಡೀಸ್ ಆಟಗಾರನ ಮೇಲೆ ಇಟ್ಟಿದ್ದ ನಂಬಿಕೆ ಹುಸಿಯಾಗಿದೆ. ಲಕ್ನೋ ತಂಡದ ಉಪನಾಯಕನೂ ಆಗಿರುವ ಪೂರನ್, 2026ರ ಸೀಸನ್‌ನಲ್ಲಿ ಆಡಿದ 14 ಇನ್ನಿಂಗ್ಸ್‌ಗಳಲ್ಲಿ ಗಳಿಸಿದ್ದು ಕೇವಲ 234 ರನ್‌ಗಳನ್ನು ಮಾತ್ರ. ಮಧ್ಯಮ ಕ್ರಮಾಂಕದಲ್ಲಿ ಪೂರನ್ ಸತತವಾಗಿ ಫ್ಲಾಪ್ ಆಗಿದ್ದು ಕೂಡ ಲಕ್ನೋ ತಂಡ ಕೊನೆಯ ಸ್ಥಾನಕ್ಕೆ ಕುಸಿಯಲು ಪ್ರಮುಖ ಕಾರಣವಾಯಿತು.

ಇದನ್ನೂ ಓದಿ: ರಿಷಭ್ ಪಂತ್​ಗೆ ಗೇಟ್ ಪಾಸ್​? ಟಾಮ್ ಮೂಡಿ ಬಿಚ್ಚಿಟ್ಟ ಸತ್ಯ!

ಮಯಾಂಕ್ ಯಾದವ್

ಭಾರತದ ಯುವ ವೇಗಿ ಮಯಾಂಕ್ ಯಾದವ್ ಅವರನ್ನು 11 ಕೋಟಿ ರೂಪಾಯಿ ನೀಡಿ ಲಕ್ನೋ ತಂಡ ಉಳಿಸಿಕೊಂಡಿತ್ತು. ಆದರೆ ಇವರ ಫಿಟ್‌ನೆಸ್ ಸಮಸ್ಯೆ ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ. 2025ರ ಐಪಿಎಲ್‌ನಲ್ಲಿ ಕೇವಲ ಎರಡು ಪಂದ್ಯಗಳನ್ನಾಡಿ ಗಾಯದ ಸಮಸ್ಯೆಯಿಂದ ಹೊರಬಿದ್ದಿದ್ದ ಮಯಾಂಕ್, 2026ರ ಸೀಸನ್‌ನಲ್ಲಿ ಕಂಬ್ಯಾಕ್ ಮಾಡಿದರೂ ಕೇವಲ 4 ಪಂದ್ಯಗಳನ್ನಷ್ಟೇ ಆಡಲು ಸಾಧ್ಯವಾಯಿತು. ಅಷ್ಟೇ ಅಲ್ಲದೆ, ಬೌಲ್ ಮಾಡಿದ 16 ಓವರ್‌ಗಳಲ್ಲಿ ಒಂದೂ ವಿಕೆಟ್ ಪಡೆಯಲು ಇವರಿಂದ ಸಾಧ್ಯವಾಗಲಿಲ್ಲ. ಹೀಗಾಗಿ ಇಷ್ಟೊಂದು ಭಾರಿ ಮೊತ್ತ ನೀಡಿ ಇವರನ್ನು ತಂಡದಲ್ಲಿ ಇಟ್ಟುಕೊಳ್ಳುವ ಬದಲು, ರಿಲೀಸ್ ಮಾಡಿ ನಂತರ ಕಡಿಮೆ ಬೆಲೆಗೆ ಆರ್ಟಿಎಂ ಮೂಲಕ ಖರೀದಿಸುವುದು ಲಕ್ನೋ ಪ್ಲಾನ್ ಆಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version