WhatsApp Username: ಯೂಸರ್​ನೇಮ್ ಇಟ್ಟು ಪೋನ್ ನಂಬರ್ ರಹಸ್ಯವಾಗಿಡಿ; ವಾಟ್ಸಾಪ್​ನಲ್ಲಿ ಹೊಸ ಫೀಚರ್ – Kannada News | WhatsApp’s new feature username that allows users to keep their phone number secret

ಬೆಂಗಳೂರು, ಜೂನ್ 30: ಇನ್ಮುಂದೆ ವಾಟ್ಸಾಪ್‌ನಲ್ಲಿ (WhatsApp) ಯಾರಿಗಾದರೂ ಸಂದೇಶ ಕಳುಹಿಸಬೇಕಾದರೆ ನಿಮ್ಮ ವೈಯಕ್ತಿಕ ಫೋನ್ ನಂಬರ್ ಬಹಿರಂಗಪಡಿಸಬೇಕಾದ ಅಗತ್ಯವಿರುವುದಿಲ್ಲ. ವಾಟ್ಸಾಪ್ ಸಂಸ್ಥೆಯು ಬಳಕೆದಾರರ ಗೌಪ್ಯತೆಯನ್ನು (Privacy) ಹೆಚ್ಚಿಸಲು ‘ಯೂಸರ್‌ನೇಮ್’ (Usernames) ಎನ್ನುವ ಹೊಸ ಫೀಚರ್ ಪರಿಚಯಿಸುತ್ತಿದೆ. ನೀವು ಫೋನ್ ನಂಬರ್ ಬದಲು ಯೂಸರ್​ನೇಮ್ ಗುರುತಿನಲ್ಲಿ ಮೆಸೇಜ್ ಶೇರ್ ಮಾಡಿಕೊಳ್ಳಲು ಅವಕಾಶ ಇದೆ. ಕುನಾಲ್ ಶಾ (Kunal Shah) ಅವರು ವಾಟ್ಸಾಪ್ ಮುಖ್ಯಸ್ಥರಾಗಿ ಸೇರಿದ ಬಳಿಕ ಈ ಪ್ಲಾಟ್​ಫಾರ್ಮ್​ನಲ್ಲಿ ಮೊದಲ ಪ್ರಮುಖ ಅಪ್​ಡೇಟ್ ಇದು.

ವಾಟ್ಸಾಪ್‌ನ ನೂತನ ಸಿಇಒ ಕುನಾಲ್ ಶಾ ಅವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. “ಸಮಯ ಪ್ರಮುಖವಾದದ್ದು. ಜಗತ್ತಿಗೆ ಈ ಫೀಚರ್ ಬಿಡುಗಡೆಯಾಗುವ ಮುನ್ನವೇ ನಾನು ವಾಟ್ಸಾಪ್ ಸೇರಿ ನನ್ನ ಯೂಸರ್‌ನೇಮ್ ಪಡೆದುಕೊಂಡಿದ್ದೇನೆ. ನಿಮ್ಮ ಹೆಸರನ್ನು ಕಾಯ್ದಿರಿಸಲು ಇದುವೇ ಸರಿಯಾದ ಸಮಯ” ಎಂದು ಅವರು ಬಳಕೆದಾರರಿಗೆ ಕರೆ ನೀಡಿದ್ದಾರೆ.

ವಾಟ್ಸಾಪ್ ಸಿಇಒ ಕುನಾಲ್ ಶಾ ಅವರ ಟ್ವೀಟ್

ಈ ‘ಯೂಸರ್‌ನೇಮ್’ ಫೀಚರ್​ನ ಮುಖ್ಯ ಉದ್ದೇಶವೇನು?

ಪ್ರಸ್ತುತ ವಾಟ್ಸಾಪ್‌ನಲ್ಲಿ ಹೊಸಬರ ಜೊತೆ ಚಾಟ್ ಮಾಡಬೇಕಾದರೆ ಫೋನ್ ನಂಬರ್ ಹಂಚಿಕೊಳ್ಳುವುದು ಅನಿವಾರ್ಯವಾಗಿದೆ. ಆದರೆ, ಅಪರಿಚಿತರು, ನೆರೆಹೊರೆಯವರು ಅಥವಾ ಕಚೇರಿಯ ಕೆಲಸದ ನಿಮಿತ್ತ ಸಿಗುವವರಿಗೆ ಫೋನ್ ನಂಬರ್ ಕೊಡುವುದು ಹಲವರಿಗೆ ಇಷ್ಟವಿರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ನಿಮ್ಮ ಫೋನ್ ನಂಬರ್ ಬದಲಿಗೆ ಕೇವಲ ಒಂದು ಯೂಸರ್‌ನೇಮ್ (ಉದಾಹರಣೆಗೆ: @Kumar) ನೀಡುವ ಮೂಲಕ ಚಾಟ್ ಮಾಡಬಹುದು. ಇದರಿಂದ ನಿಮ್ಮ ಮೊಬೈಲ್ ನಂಬರ್ ಸುರಕ್ಷಿತವಾಗಿರಲಿದೆ.

ಇದನ್ನೂ ಓದಿ: ಐಟಿಆರ್ ಸಲ್ಲಿಕೆಯಿಂದ ಟಿಡಿಎಸ್ ಪಾವತಿವರೆಗೆ, ಜುಲೈನಲ್ಲಿ ಡೆಡ್​ಲೈನ್​ಗಳಿವೆ, ಗಮನಿಸಿ

ಇದು ಇನ್‌ಸ್ಟಾಗ್ರಾಮ್ ಅಥವಾ ಎಕ್ಸ್ (ಟ್ವಿಟರ್) ನಂತೆ ಸಾರ್ವಜನಿಕವಾಗಿ ಯಾರಿಗೆ ಬೇಕಾದರೂ ಹುಡುಕಲು ಸಿಗುವ ಖಾತೆಯಾಗಿರುವುದಿಲ್ಲ. ನಿಮ್ಮ ಯೂಸರ್‌ನೇಮ್ ಅನ್ನು ನೀವು ಯಾರಿಗೆ ನೀಡುತ್ತೀರೋ, ಅವರು ಮಾತ್ರ ನಿಮ್ಮನ್ನು ಸಂಪರ್ಕಿಸಬಹುದಾಗಿದೆ.

ಭದ್ರತೆಗಾಗಿ ‘ಯೂಸರ್‌ನೇಮ್ ಕೀ’

ಹೆಚ್ಚುವರಿ ಭದ್ರತೆಗಾಗಿ ವಾಟ್ಸಾಪ್ ‘ಯೂಸರ್‌ನೇಮ್ ಕೀ’ (Username Key) ಎಂಬ ಆಯ್ಕೆಯನ್ನು ನೀಡುತ್ತಿದೆ. ಹೊಸದಾಗಿ ಯಾರಾದರೂ ನಿಮ್ಮ ಯೂಸರ್‌ನೇಮ್ ಬಳಸಿ ಸಂದೇಶ ಕಳುಹಿಸಬೇಕಾದರೆ, ನೀವು ನಿಗದಿಪಡಿಸಿದ ಈ ‘ಕೀ’ (ಪಾಸ್‌ವರ್ಡ್‌ನಂತಹ ಕೋಡ್) ಅನ್ನು ಅವರು ನಮೂದಿಸಬೇಕಾಗುತ್ತದೆ.

ನಿಮ್ಮ ಯೂಸರ್‌ನೇಮ್ ಕಾಯ್ದಿರಿಸುವುದು ಹೇಗೆ?

ಜೂನ್ 29 ರಿಂದ ಜಾಗತಿಕವಾಗಿ ಈ ಯೂಸರ್‌ನೇಮ್ ಕಾಯ್ದಿರಿಸುವ ಪ್ರಕ್ರಿಯೆ ಆರಂಭವಾಗಿದ್ದು, ಹಂತಹಂತವಾಗಿ ಎಲ್ಲ ಬಳಕೆದಾರರಿಗೆ ಸಿಗಲಿದೆ. ನಿಮ್ಮ ಆ್ಯಪ್‌ನಲ್ಲಿ ಈ ಆಯ್ಕೆ ಬಂದಾಗ ಕೆಳಗಿನ ಹಂತಗಳನ್ನು ಅನುಸರಿಸಿ:

  • ನಿಮ್ಮ ವಾಟ್ಸಾಪ್ ಆ್ಯಪ್ ಅನ್ನು ಅಪ್‌ಡೇಟ್ ಮಾಡಿ.
  • ಆ್ಯಪ್‌ನ Settings (ಸೆಟ್ಟಿಂಗ್ಸ್) ಗೆ ಹೋಗಿ.
  • Account (ಅಕೌಂಟ್) ಮೇಲೆ ಕ್ಲಿಕ್ ಮಾಡಿ.
  • ಅಲ್ಲಿ Username (ಯೂಸರ್‌ನೇಮ್) ಆಯ್ಕೆಯನ್ನು ಆರಿಸಿ.
  • ನಿಮಗೆ ಬೇಕಾದ, ಲಭ್ಯವಿರುವ ಹೆಸರನ್ನು ಆಯ್ಕೆ ಮಾಡಿ ಕನ್ಫರ್ಮ್ ಮಾಡಿ.

ಇದನ್ನೂ ಓದಿ: AI Agents: 2027ರ ವೇಳೆಗೆ ಟೆಕ್ ತಂಡಗಳನ್ನು ಬದಲಾಯಿಸಲಿವೆ ‘AI ಏಜೆಂಟ್‌ಗಳು’; ಏನಿದು ಹೊಸ ಟೆಕ್ನಾಲಜಿ?

ಹಾಗೆಯೇ, ನಿಮ್ಮ ಫೇಸ್​ಬುಕ್ ಅಥವಾ ಇನ್​ಸ್ಟಾಗ್ರಾಮ್ ಪ್ಲಾಟ್​ಫಾರ್ಮ್​ನಲ್ಲಿರುವ ಐಡಿ ಹೆಸರನ್ನೂ ವಾಟ್ಸಾಪ್ ಯೂಸರ್​ನೇಮ್ ಆಗಿ ನಿಗದಿ ಮಾಡಿಕೊಳ್ಳಬಹುದು. ಯಾವ ಯೂಸರ್​ನೇಮ್ ಇಟ್ಟುಕೊಳ್ಳುವುದು ಎನ್ನುವ ಗೊಂದಲ ಮೂಡಿದಲ್ಲಿ, ವಾಟ್ಸಾಪ್​ನಲ್ಲೇ ಯೂಸರ್​ನೇಮ್ ಜನರೇಟರ್ ಎನ್ನುವ ಹೆಲ್ಪ್ ಸರ್ವಿಸ್ ಇರುತ್ತದೆ. ಅದನ್ನು ಬಳಸಬಹುದು.

ಸೆಲಬ್ರಿಟಿಗಳ ಹೆಸರು ದುರ್ಬಳಕೆ ಕಷ್ಟಸಾಧ್ಯ

ಗಮನಿಸಬೇಕಾದ ಸಂಗತಿ ಎಂದರೆ, ಸೆಲೆಬ್ರಿಟಿಗಳು ಹಾಗೂ ಪ್ರಸಿದ್ಧ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ಖಾತೆಗಳು ಸೃಷ್ಟಿಯಾಗುವುದನ್ನು ತಡೆಯಲು ಅವರ ಯೂಸರ್‌ನೇಮ್‌ಗಳನ್ನು ವಾಟ್ಸಾಪ್ ಮೊದಲೇ ಕಾಯ್ದಿರಿಸಿದೆ. ಹೀಗಾಗಿ, ಹೆಸರು ದುರ್ಬಳಕೆ ಮಾಡಿಕೊಳ್ಳಲು ಕಷ್ಟಸಾಧ್ಯವಾಗಲಿದೆ.

ನಿಮ್ಮ ಹಳೆಯ ಚಾಟ್‌ಗಳು, ಬ್ಲಾಕ್ ಲಿಸ್ಟ್ ಹಾಗೂ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಭದ್ರತೆಗಳು ಎಂದಿನಂತೆಯೇ ಮುಂದುವರಿಯಲಿವೆ. ಈ ವರ್ಷದ ಅಂತ್ಯದ ವೇಳೆಗೆ ಈ ಫೀಚರ್ ಜಗತ್ತಿನಾದ್ಯಂತ ಸಂಪೂರ್ಣವಾಗಿ ಲಭ್ಯವಾಗಲಿದೆ.

ವಾಟ್ಸಾಪ್ ಯೂಸರ್​ನೇಮ್ ಫೀಚರ್ ಪ್ರೊಮೋಟ್ ಮಾಡುವ ಅಧಿಕೃತ ವಿಡಿಯೋ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 12:14 pm, Tue, 30 June 26

Source link

ಬಾಗಲಕೋಟೆಯಲ್ಲಿ ಸರಕಾರಿ ನೌಕರರ ಅಂಧಾ ದರ್ಬಾರ್​​: ನಗರಸಭೆಯಲ್ಲಿ ಹೊರಗಿನವರಿಂದ ಕಚೇರಿ ಕಾರ್ಯ! – Kannada News | Bagalkot city municipality: Outsiders Caught Handling Official Work; Commissioner Promises Action

ಬಾಗಲಕೋಟೆ ನಗರ ಸಭೆಯ ಕಚೇರಿImage Credit source: Tv9 Kannada

ಬಾಗಲಕೋಟೆ, ಜೂನ್​​ 30: ಜಿಲ್ಲೆಯಲ್ಲಿ ಸರ್ಕಾರಿ ನೌಕರರ ಅಂಧಾ ದರ್ಬಾರ್​​ ಪ್ರಕರಗಳು ಹೆಚ್ಚುತ್ತಿದ್ದು, ಇತ್ತೀಚೆಗೆ ಕಲಾದಗಿ ಕಲಾದಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯ ಪತ್ನಿ ರೋಗಿಗಳ ತಪಾಸಣೆ ನಡೆಸಿದ್ದ ಪ್ರಕರಣ ಮಾಸುವ ಮುನ್ನವೇ ಅಧಿಕಾರಿಗಳ ಮತ್ತೊಂದು ಕಳ್ಳಾಟ ಬಯಲಾಗಿದೆ. ಬಾಗಲಕೋಟೆ ನಗರ ಸಭೆಯಲ್ಲಿ ಹೊರಗಿನವರು ಕಚೇರಿ ಕಾರ್ಯ ಮಾಡುತ್ತಿರುವ ವಿಚಾರ ಬಹಿರಂಗಗೊಂಡಿದ್ದು, ಸಿಬ್ಬಂದಿಯ ಕಾರುಬಾರು ಭಾರಿ ಚರ್ಚೆಗೆ ಗ್ರಾಸವಾಗಿದೆ.

ನಗರ ಸಭೆಗೆ ಸಂಬಂಧವೇ ಇಲ್ಲದವರು ಕಚೇರಿಯ ಕೊಠಡಿಯಲ್ಲಿ ಲ್ಯಾಪ್‌ಟಾಪ್ ಇಟ್ಟುಕೊಂಡು ಕರ ವಸೂಲಿಗೆ ಸಂಬಂಧಿಸಿದ ದಾಖಲೆ, ತೆರಿಗೆ ಚಲನ್ ತಯಾರಿಸುತ್ತಿದ್ದಾರೆ. ಬಾಳಪ್ಪ ನಿಡಸೋಸಿ ಎಂಬ ಬಿಲ್‌ ಕಲೆಕ್ಟರ್ ತಾನು‌ ಮಾಡಬೇಕಾದ ಕೆಲಸವನ್ನು ಹೊರಗಿನ ಯುವಕರಿಂದ ಮಾಡಿಸಿ ನಿಯಮ ಉಲ್ಲಂಘನೆ ಮಾಡಿದ್ದಾರೆ. ತನ್ನ ಕೆಲಸವನ್ನು ನಗರ ಸಭೆಗೆ ಸಂಬಂಧವೇ ಇಲ್ಲದ ಯುವಕರಿಂದ ಮಾಡಿಸುತ್ತಿದ್ದು, ಇದನ್ನ ಬೇರೆ ಅಧಿಕಾರಿ ಸಮರ್ಥಿಸಿಕೊಂಡಿದ್ದಾರೆ. ನಗರ ಸಭೆಯಿಂದ ನೇಮಕವಾಗದ, ಹೊರಗುತ್ತಿಗೆ ನೌಕರರೂ ಅಲ್ಲದವರು ರಾಜಾರೋಷವಾಗಿ ನಗರಸಭೆ ಕೊಠಡಿಯಲ್ಲಿ ಡಾಟಾ ಎಂಟ್ರಿ ಕೆಲಸ ಮಾಡುತ್ತಿರುವ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ರೋಗಿಗಳ ಜೀವದ ಜೊತೆ ಚೆಲ್ಲಾಟ; ಪತಿ ಸರಕಾರಿ ವೈದ್ಯ, ಆದರೆ ಚಿಕಿತ್ಸೆ ನೀಡೋದು ಪತ್ನಿ!

ಸೂಕ್ತ ಕ್ರಮದ ಭರವಸೆ

ಇನ್ನು ಈ ಬಗ್ಗೆ ನಗರಸಭೆ ಆಯುಕ್ತ ಆರ್. ವಾಸಣ್ಣ ಪ್ರತಿಕ್ರಿಯಿಸಿದ್ದು, ವಿಚಾರ ತನಗೆ ಗೊತ್ತಿಲ್ಲ. ಬಾಳಪ್ಪ ಅವರು ತನ್ನಿಂಸದ ಯಾವುದೇ ಅನುಮತಿ ಪಡೆದಿಲ್ಲ. ಅಲ್ಲದೆ, ಈ ರೀತಿ ಕೆಲಸ ಮಾಡಿಸುವುದು ತಪ್ಪು. ಹೀಗಾಗಿ ಕೂಡಲೇ ಅವರಿಗೆ ‌ನೊಟೀಸ್ ಜಾರಿ ಮಾಡುತ್ತೇವೆ. ಹೊರಗಿನವರನ್ನು ನಗರಸಭೆಯಿಂದ ಕಳುಹಿಸುವ ಜೊತೆಗೆ ಅಧಿಕಾರಿಯ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ಅವರು ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 12:18 pm, Tue, 30 June 26

Source link

ಶಾಲಾ ಮಕ್ಕಳ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ; ಸ್ಪರ್ಧೆಯಲ್ಲಿ ಭಾಗವಹಿಸಲು ಹೀಗೆ ಮಾಡಿ – Kannada News | SCIFF 2026: Apply for School Cinema International Children’s Film Festival

ಶಾಲಾ ಮಕ್ಕಳ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ; ಸ್ಪರ್ಧೆಯಲ್ಲಿ ಭಾಗವಹಿಸಲು ಹೀಗೆ ಮಾಡಿ

ವಿಶ್ವದ ಅತಿ ದೊಡ್ಡ ಮಕ್ಕಳ ಚಲನಚಿತ್ರೋತ್ಸವಗಳಲ್ಲಿ ಒಂದಾದ ‘ಸ್ಕೂಲ್ ಸಿನಿಮಾ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್’ (SCIFF) ತನ್ನ 10ನೇ ಆವೃತ್ತಿಯ ದಿನಾಂಕಗಳನ್ನು ಪ್ರಕಟಿಸಿದೆ. ಈ ಸಾಲಿನ ಚಲನಚಿತ್ರೋತ್ಸವವು 2026ರ ನವೆಂಬರ್ 14ರಿಂದ 30ರವರೆಗೆ ಭಾರತದಾದ್ಯಂತ ವಿವಿಧ ಶಾಲೆಗಳಲ್ಲಿ ನಡೆಯಲಿದೆ. ಈ ಉತ್ಸವದಲ್ಲಿ ಪ್ರದರ್ಶಿಸಲು ಸಿನಿಮಾಗಳನ್ನು ಕಳುಹಿಸುವಂತೆ ಜಾಗತಿಕ ಮಟ್ಟದ ಚಲನಚಿತ್ರ ನಿರ್ಮಾಪಕರಿಗೆ ಮುಕ್ತ ಆಹ್ವಾನ ನೀಡಲಾಗಿದೆ.

‘ಸ್ಕೂಲ್ ಸಿನಿಮಾ’ ಸಂಸ್ಥೆಯು ಯಶಸ್ವಿಯಾಗಿ 15 ವರ್ಷಗಳನ್ನು ಪೂರೈಸಿದೆ. ಪ್ರಸ್ತುತ ಈ ಕಾರ್ಯಕ್ರಮವು ಭಾರತದ 28 ರಾಜ್ಯಗಳ 350 ನಗರಗಳಲ್ಲಿದೆ. ಸುಮಾರು 905 ಶಾಲೆಗಳ 6,70,796ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಇದು ತಲುಪಿದೆ. ಮಕ್ಕಳಲ್ಲಿ ಜೀವನ ಕೌಶಲಗಳು, ಸಾಮಾಜಿಕ-ಭಾವನಾತ್ಮಕ ಕಲಿಕೆ ಮತ್ತು ಸೃಜನಶೀಲತೆಯನ್ನು ಬೆಳೆಸಲು ಸಿನಿಮಾ ಪ್ರಬಲ ಮಾಧ್ಯಮವಾಗಿದೆ ಎಂಬುದನ್ನು ಈ ಸಂಸ್ಥೆ ಸಾಬೀತುಪಡಿಸಿದೆ.

ಕರ್ನಾಟಕದಲ್ಲಿ ‘ಸ್ಕೂಲ್ ಸಿನಿಮಾ’ ಪ್ರಭಾವ

ನಮ್ಮ ಕರ್ನಾಟಕ ರಾಜ್ಯದಲ್ಲೂ ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ರಾಜ್ಯದ 36 ನಗರಗಳ 130 ಶಾಲೆಗಳಲ್ಲಿ ಇದನ್ನು ಜಾರಿಗೊಳಿಸಲಾಗಿದೆ. ಇದರ ಮೂಲಕ 1,00,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉತ್ತಮ ಸಿನೆಮಾ ಕಲಿಕೆ ಸಿಗುತ್ತಿದೆ. ಕಳೆದ ಆವೃತ್ತಿಗಳಲ್ಲಿ ಈ ಚಲನಚಿತ್ರೋತ್ಸವವು ದೇಶದ 41,000 ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ತಲುಪಿತ್ತು. ಒಟ್ಟು 5 ದಶಲಕ್ಷಕ್ಕೂ ಹೆಚ್ಚು ಮಕ್ಕಳು ಇದರ ಪ್ರಯೋಜನ ಪಡೆದಿದ್ದಾರೆ.

ಚಲನಚಿತ್ರ ಪ್ರವೇಶಕ್ಕೆ ಮಾರ್ಗಸೂಚಿಗಳು

  1. ಅರ್ಹತೆ: ಲೈವ್ ಆಕ್ಷನ್, ಅನಿಮೇಷನ್ ಮತ್ತು ಡಾಕ್ಯುಮೆಂಟರಿ ಸಿನಿಮಾಗಳನ್ನು ಕಳುಹಿಸಬಹುದು. ಇವು ಶಾರ್ಟ್ ಫಿಲ್ಮ್ ಅಥವಾ ಫೀಚರ್ ಫಿಲ್ಮ್ ರೂಪದಲ್ಲಿ ಇರಬಹುದು.
  2. ಷರತ್ತುಗಳು: ಸಿನಿಮಾಗಳು 2022ರ ಜನವರಿ 1ರ ನಂತರ ನಿರ್ಮಾಣವಾಗಿರಬೇಕು. ಎಲ್ಲಾ ಭಾಷೆಯ ಸಿನಿಮಾಗಳಿಗೂ ಕಡ್ಡಾಯವಾಗಿ ಇಂಗ್ಲಿಷ್ ಸಬ್‌ಟೈಟಲ್ ಇರಬೇಕು.
  3. ವಯೋಮಿತಿ: ಈ ಸಿನಿಮಾಗಳು 5ರಿಂದ 16 ವರ್ಷದ ಒಳಗಿನ ಶಾಲಾ ಮಕ್ಕಳಿಗಾಗಿ ಇರಬೇಕು.
  4. ಕೊನೆಯ ದಿನಾಂಕ: ಸಿನಿಮಾಗಳನ್ನು ಕಳುಹಿಸಲು 2026ರ ಆಗಸ್ಟ್ 15 ಕೊನೆಯ ದಿನವಾಗಿದೆ. ಆಸಕ್ತರು https://filmfreeway.com/SchoolCinemaInternationalFilmFestival ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದು.

ಅತ್ಯುತ್ತಮ ಚಿತ್ರಗಳಿಗೆ ಪ್ರಶಸ್ತಿ ಗೌರವ

ಈ ಚಲನಚಿತ್ರೋತ್ಸವದಲ್ಲಿ ಶ್ರೇಷ್ಠ ಸಿನಿಮಾಗಳನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ. ಬೆಸ್ಟ್ ಲೈವ್ ಆಕ್ಷನ್, ಬೆಸ್ಟ್ ಅನಿಮೇಷನ್ ಮತ್ತು ಬೆಸ್ಟ್ ಡಾಕ್ಯುಮೆಂಟರಿ ವಿಭಾಗಗಳಲ್ಲಿ ಶಾರ್ಟ್ ಹಾಗೂ ಫೀಚರ್ ಫಿಲ್ಮ್‌ಗಳಿಗೆ ಪ್ರತ್ಯೇಕ ಪ್ರಶಸ್ತಿಗಳನ್ನು ಘೋಷಿಸಲಾಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮತದಾರರ ಪಟ್ಟಿ ಪರಿಷ್ಕರಣೆ: ಸಿಎಂ ಮನೆಯಿಂದಲೇ ಎಸ್​ಐಆರ್​ಗೆ ಚಾಲನೆ! – Kannada News | Karnataka Special Intensive Revision 2026: CM DK Shivakumar Launches SIR Campaign From Residence

ಬೆಂಗಳೂರು, ಜೂನ್ 30: ರಾಜ್ಯಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026 (SIR) ಕಾರ್ಯವು ಇಂದಿನಿಂದ ಅಧಿಕೃತವಾಗಿ ಆರಂಭವಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಅಧಿಕಾರಿಗಳೊಂದಿಗೆ ಸಹಕರಿಸಿ,7 ದಿನಗಳಲ್ಲೇ ಎಲ್ಲರಿಗೂ ಫಾರ್ಮ್​ ಕೊಡುತ್ತಾರೆ. ದಯವಿಟ್ಟು ನಿಮ್ಮ ಫೋನ್ ನಂಬರ್, ಆಧಾರ್ ಕಾರ್ಡ್​ ಮಾಹಿತಿಗಾಗಿ ಕೊಡಬೇಕು. ಬೇರೆ ರಾಜ್ಯದಲ್ಲಿ ಗ್ಯಾರಂಟಿ ನಿಲ್ಲಿಸುತ್ತಿದ್ದಾರೆ. ಮತದಾನ ಇಲ್ಲದೆ ಇದ್ರೆ ನಾವು ಯಾಕೆ ಗ್ಯಾರಂಟಿ ಕೊಡಬೇಕು? ಹೀಗಾಗಿ ಈ ಅಭಿಯಾನದಲ್ಲಿ ಭಾಗಿಯಾಗಿ ನಿಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಿ ಎಂದು ಸಿಎಂ ಹೇಳಿದ್ದಾರೆ.

ಸದಾಶಿವನಗರದ ನಿವಾಸದಲ್ಲಿ ಸಿಎಂ ಅಧಿಕಾರಿಗಳಿಂದ ಗಣತಿ ನಮೂನೆ ಪಡೆದು, ಭರ್ತಿ ಮಾಡಿದ ಸಿಎಂ ಅಭಿಯಾನಕ್ಕೆ ಚಾಲನೆ ನೀಡುವ ಮೂಲಕ ಮತದಾರರಿಗೆ ಪ್ರೇರಣೆ ನೀಡಿದ್ದಾರೆ. ಈ ವೇಳೆ ಸಿಎಂ ಅವರ ತವರೂರು ಕನಕಪುರ ಒಳಗೊಂಡ ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಉಪಸ್ಥಿತರಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Trigraha Yoga: ಜುಲೈನಲ್ಲಿ ‘ತ್ರಿಗ್ರಹ ಯೋಗ’; ಈ 5 ರಾಶಿಯವರಿಗೆ ಒಲಿಯಲಿದೆ ಅಪಾರ ಧನಸಂಪತ್ತು ಮತ್ತು ಕೀರ್ತಿ! – Kannada News | July 2026 Astrology: 5 Zodiac Signs to Get Bumper Profits and Career Success

ಹೊಸ ತಿಂಗಳು ಪ್ರಾರಂಭವಾಗುತ್ತಿದ್ದಂತೆ ಗ್ರಹಗಳ ಸ್ಥಿತಿಯಲ್ಲೂ ದೊಡ್ಡ ಬದಲಾವಣೆಗಳು ಕಂಡುಬರುತ್ತಿವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜುಲೈ ತಿಂಗಳು ಗ್ರಹ ಮತ್ತು ನಕ್ಷತ್ರಗಳ ಚಲನೆಯ ದೃಷ್ಟಿಯಿಂದ ಅತ್ಯಂತ ವಿಶೇಷವಾಗಿರಲಿದೆ. ಈ ತಿಂಗಳು ಸೂರ್ಯ, ಬುಧ ಮತ್ತು ಗುರು ಗ್ರಹಗಳು ಸೇರಿ ಅತ್ಯಂತ ಶುಭಕರವಾದ ‘ತ್ರಿಗ್ರಹ ಯೋಗ’ವನ್ನು ರೂಪಿಸುತ್ತಿವೆ. ಇದರೊಂದಿಗೆ, ಜುಲೈ 27 ರಂದು ನ್ಯಾಯದೇವನಾದ ಶನಿ ದೇವನು ಮೀನ ರಾಶಿಯಲ್ಲಿ ಹಿಮ್ಮೆಟ್ಟಲಿದ್ದಾನೆ (Retrograde).

ಜ್ಯೋತಿಷಿಗಳ ಪ್ರಕಾರ, ಗೋಚಾರದಲ್ಲಿರುವ ಗುರು ಮತ್ತು ಹಿಮ್ಮುಖ ಚಲನೆಯ ಶನಿಯು ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರಲಿದ್ದರೂ, ವಿಶೇಷವಾಗಿ 5 ರಾಶಿಯ ಜನರಿಗೆ ಬಂಪರ್ ಲಾಭ ಹಾಗೂ ವೃತ್ತಿ-ವ್ಯವಹಾರದಲ್ಲಿ ಅಭೂತಪೂರ್ವ ಯಶಸ್ಸನ್ನು ನೀಡಲಿದ್ದಾರೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ಇಲ್ಲಿ ತಿಳಿದುಕೊಳ್ಳಿ.

ಮೇಷ ರಾಶಿ:

ಮೇಷ ರಾಶಿಯ ಅಧಿಪತಿ ಮಂಗಳ. ಈ ಜುಲೈ ತಿಂಗಳು ನಿಮಗೆ ಅತ್ಯಂತ ಕ್ರಿಯಾಶೀಲತೆ ಮತ್ತು ಶಿಸ್ತಿನಿಂದ ಕೂಡಿರಲಿದೆ. ನೀವು ಕೆಲಸದ ಸ್ಥಳದಲ್ಲಿ ಪಡುವ ಕಠಿಣ ಪರಿಶ್ರಮಕ್ಕೆ ಈ ಬಾರಿ ಪೂರ್ಣ ಫಲಿತಾಂಶ ಸಿಗಲಿದೆ. ಉದ್ಯೋಗಿಗಳಿಗೆ ಹೊಸ ಮತ್ತು ದೊಡ್ಡ ಜವಾಬ್ದಾರಿಗಳು ಹೆಗಲೇರಬಹುದು. ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಾಗ ಕುಟುಂಬದ ಸದಸ್ಯರು ನೀಡುವ ಸಲಹೆಗಳು ನಿಮಗೆ ಗರಿಷ್ಠ ಪ್ರಯೋಜನವನ್ನು ತಂದುಕೊಡಲಿವೆ.

ವೃಷಭ ರಾಶಿ:

ವೃಷಭ ರಾಶಿಯ ಅಧಿಪತಿ ಶುಕ್ರ ಗ್ರಹ. ಜುಲೈ ತಿಂಗಳು ನಿಮಗೆ ಆರ್ಥಿಕವಾಗಿ ಭರ್ಜರಿ ಲಾಭ ತರಲಿದೆ. ವೃತ್ತಿಜೀವನದಲ್ಲಿ ಪ್ರಗತಿ ಕಾಣಲು ಹೊಸ ಅವಕಾಶಗಳು ಒದಗಿಬರಲಿವೆ. ಉದ್ಯೋಗ ಮತ್ತು ವ್ಯಾಪಾರ ಎರಡರಲ್ಲೂ ಕೈತುಂಬಾ ಲಾಭ ಸಿಗಲಿದೆ. ಬಹಳ ದಿನಗಳಿಂದ ನಿಂತುಹೋಗಿದ್ದ ಯೋಜನೆಗಳು ಈಗ ಪುನಃ ವೇಗ ಪಡೆದುಕೊಳ್ಳಲಿವೆ. ಕಷ್ಟದ ಸಮಯದಲ್ಲಿ ಸ್ನೇಹಿತರಿಂದ ಸಂಪೂರ್ಣ ಬೆಂಬಲ ಸಿಗಲಿದೆ.

ಇದನ್ನೂ ಓದಿ: ಶುಕ್ರ-ಕೇತು ಸಂಯೋಗ; ಈ 4 ರಾಶಿಯವರು ಜುಲೈನಲ್ಲಿ ಅತ್ಯಂತ ಜಾಗರೂಕರಾಗಿರಿ

ಕರ್ಕಾಟಕ ರಾಶಿ:

ಕರ್ಕಾಟಕ ರಾಶಿಯನ್ನು ಚಂದ್ರನು ಆಳುತ್ತಾನೆ. ಜುಲೈ ತಿಂಗಳು ನಿಮಗೆ ಅತ್ಯಂತ ಅನುಕೂಲಕರವಾಗಿರಲಿದೆ. ಈ ತಿಂಗಳು ಕರ್ಕಾಟಕ ರಾಶಿಯವರು ತಮ್ಮ ವೃತ್ತಿಜೀವನದಲ್ಲಿ ಹೊಸ ಯಶಸ್ಸನ್ನು ಮತ್ತು ಎತ್ತರವನ್ನು ತಲುಪಲಿದ್ದಾರೆ. ಹಣ ಗಳಿಕೆಗೆ ಒಂದಕ್ಕಿಂತ ಹೆಚ್ಚು ಸುವರ್ಣ ಅವಕಾಶಗಳು ಸೃಷ್ಟಿಯಾಗಲಿವೆ. ಕೆಲಸದ ಸ್ಥಳದಲ್ಲಿ ನಿಮ್ಮ ಕೀರ್ತಿ ಮತ್ತು ಗೌರವ ದುಪ್ಪಟ್ಟಾಗಲಿದೆ. ಉದ್ಯೋಗಿಗಳಿಗೆ ಪ್ರಮೋಷನ್ ಸಿಗುವ ಸಾಧ್ಯತೆ ಇದೆ.

ಸಿಂಹ ರಾಶಿ:

ಸಿಂಹ ರಾಶಿಯ ಅಧಿಪತಿ ಸೂರ್ಯ ದೇವ. ಜುಲೈ ತಿಂಗಳ ಆರಂಭದಲ್ಲೇ ನಿಮಗೆ ದೊಡ್ಡ ರಿಲೀಫ್ ಸಿಗಲಿದೆ. ದೀರ್ಘಕಾಲದಿಂದ ನಿಮ್ಮನ್ನು ಕಾಡುತ್ತಿದ್ದ ಮಾನಸಿಕ ಒತ್ತಡ ಹಾಗೂ ಆತಂಕಗಳು ದೂರವಾಗಲಿವೆ. ಬಾಕಿ ಉಳಿದಿರುವ ಎಲ್ಲಾ ಪ್ರಮುಖ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ನಿಮ್ಮ ವೃತ್ತಿಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರಲಿದ್ದು, ನಿಮ್ಮ ಆತ್ಮವಿಶ್ವಾಸ ಗಣನೀಯವಾಗಿ ಹೆಚ್ಚಾಗಲಿದೆ.

ಕನ್ಯಾ ರಾಶಿ:

ಕನ್ಯಾ ರಾಶಿಯ ಅಧಿಪತಿ ಬುಧ ಗ್ರಹ. ಈ ತಿಂಗಳು ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಅದ್ಭುತ ಸುಧಾರಣೆ ಕಂಡುಬರಲಿದೆ. ಕನ್ಯಾ ರಾಶಿಯವರ ಆರ್ಥಿಕ ವ್ಯವಹಾರಗಳು ಉತ್ತಮಗೊಳ್ಳಲಿವೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ನಿಮ್ಮ ಶ್ರಮಕ್ಕೆ ತಕ್ಕಂತೆ ಸಕಾರಾತ್ಮಕ ಫಲಿತಾಂಶಗಳು ನಿಮ್ಮದಾಗಲಿವೆ. ಸಮಾಜದಲ್ಲಿ ನಿಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ. ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿಗಳು ಸಿಗಲಿದ್ದು, ಅದನ್ನು ನೀವು ಯಶಸ್ವಿಯಾಗಿ ನಿಭಾಯಿಸಲಿದ್ದೀರಿ.

ಗಮನಿಸಿ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣವಾಗಿ ಜ್ಯೋತಿಷ್ಯ ಶಾಸ್ತ್ರದ ನಂಬಿಕೆಗಳು ಮತ್ತು ಜ್ಯೋತಿಷಿಗಳ ಅಭಿಪ್ರಾಯಗಳನ್ನು ಆಧರಿಸಿದೆ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿವಾಹಿತೆ ಜೊತೆ ಪರಾರಿಯಾಗಿದ್ದಕ್ಕೆ ಯುವಕನ ಮನೆ ಧ್ವಂಸ ಕೇಸ್​​: ಪೊಲೀಸ್​​ ಕಮಿಷನರ್​​ ಹೇಳಿದ್ದೇನು? – Kannada News | Belagavi Police Commissioner Reacts to House Demolition Linked to Youth Eloping with Married Woman

ಬೆಳಗಾವಿ, ಜೂನ್​​ 30: ತಾಲೂಕಿನ ಭರಮ್ಯಾನಟ್ಟಿ ಗ್ರಾಮದಲ್ಲಿ ನಡೆದ ಪ್ರೇಮ ಪ್ರಕರಣವೊಂದು ಹಿಂಸಾಚಾರಕ್ಕೆ ತಿರುಗಿದೆ. ವಿವಾಹಿತೆಯ ಜೊತೆ ಯುವಕನೋರ್ವ ಪರಾರಿಯಾದ ಕಾರಣಕ್ಕೆ, ಆ ಯುವಕನ ಮನೆ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ ಘಟನೆ ವರದಿಯಾಗಿದೆ. ಈ ಸಂಬಂಧ ಬೆಳಗಾವಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ನಿನ್ನೆ ಸಂಜೆ ಸುಮಾರು 6 ಗಂಟೆಗೆ ಭರಮ್ಯಾನಟ್ಟಿ ಗ್ರಾಮದ ಭೀಮಪ್ಪ ಅವರ ಮಗ ಯಲ್ಲಪ್ಪ ನಾಯಕ್ ಅವರ ಮನೆ ಮೇಲೆ ಕೆಲವು ಜನರು ದಾಳಿ ನಡೆಸಿದ್ದಾರೆ. ಯಲ್ಲಪ್ಪ, ಗ್ರಾಮದ ವಿವಾಹಿತೆ ನಾಗವ್ವ ಅವರೊಂದಿಗೆ ಓಡಿ ಹೋಗಿದ್ದಾರೆ ಎನ್ನಲಾಗಿದ್ದು, ಈ ಕಾರಣಕ್ಕೆ ನಾಗವ್ವ ಅವರ ಸಂಬಂಧಿಕರು ದಾಳಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಸಂತ್ರಸ್ತರು ದೂರು ನೀಡಿದ್ದು, ನಾಗರಾಜ್ ಬಾಳಪ್ಪ ನಾಯಕ್, ರವಿ ಬಿಜ್ಗಟ್ಟಿ, ಈಶ್ವರ್ ಶಿವಪ್ಪ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ, ಆಸ್ತಿಪಾಸ್ತಿಗೆ ಸಾಕಷ್ಟು ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ಬಂಧನಕ್ಕಾಗಿ ವಿಶೇಷ ತಂಡ ರಚಿಸಲಾಗಿದ್ದು, ಶೀಘ್ರದಲ್ಲೇ ದಸ್ತಗಿರಿ ಮಾಡಲಾಗುವುದು. ಕಾನೂನನ್ನು ಕೈಗೆತ್ತಿಕೊಂಡವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕಾರವಾರದಲ್ಲಿ ಅಬ್ಬರಿಸಿದ ಮಳೆರಾಯ; ಹಲವೆಡೆ ರಸ್ತೆಗಳು ಜಲಾವೃತ!

ಕಾರವಾರ, ಜೂನ್ 30: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ಭಾರಿ ಅವಾಂತರ ಸೃಷ್ಟಿಯಾಗಿದೆ. ಕಾರವಾರ ಸೇರಿದಂತೆ ಅನೇಕ ಕಡೆಗಳಲ್ಲಿ ರಸ್ತೆಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ.

ಹವಾಮಾನ ಇಲಾಖೆಯು ಜುಲೈ 2ರವರೆಗೆ ಉತ್ತರ ಕನ್ನಡ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು ಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗುವಂತೆ ಜನರಿಗೆ ಮನವಿ ಮಾಡಿದ್ದಾರೆ. ನದಿ ದಡ ಹಾಗೂ ಕಡಲತೀರಕ್ಕೆ ಜನರು ತೆರಳದಂತೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ. ಭಾರಿ ಮಳೆಯ ಪರಿಣಾಮವಾಗಿ, ಅನೇಕ ವಸತಿ ಪ್ರದೇಶಗಳು ಮತ್ತು ನಿವೇಶನಗಳಿಗೆ ನೀರು ನುಗ್ಗಿದೆ. ತುರ್ತು ಕಾರ್ಯಾಚರಣೆ ಕೇಂದ್ರಗಳು ಸಕ್ರಿಯವಾಗಿದ್ದು, ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ಅನಗತ್ಯವಾಗಿ ಹೊರಗೆ ಹೋಗದಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಮಹಿಳೆಯರು ಎಲ್ಲಿ?‘ ಎಂದವರಿಗೆ ಜುಲೈ 1ಕ್ಕೆ ಸಿಗ್ತಾರೆ ಬನ್ನಿ ಎಂದ ಯಶ್ – Kannada News | Toxic movie heroines teaser releasing on July 1

ಯಶ್ (Yash) ನಟನೆಯ ‘ಟಾಕ್ಸಿಕ್’, ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಸಿನಿಮಾದ ಬಿಡುಗಡೆ ದಿನಾಂಕವನ್ನು ಇತ್ತೀಚೆಗಷ್ಟೆ ಘೋಷಿಸಲಾಗಿದೆ. ಸಿನಿಮಾದ ಆನ್​ಲೈನ್ ಪ್ರಚಾರ ಈಗಾಗಲೇ ಆರಂಭವಾಗಿದೆ. ‘ಟಾಕ್ಸಿಕ್’ನಲ್ಲಿ ಯಶ್ ದ್ವಿಪಾತ್ರದಲ್ಲಿ ನಟಿಸಿದ್ದು, ಯಶ್ ಅವರ ಎರಡೂ ಪಾತ್ರಗಳ ಟೀಸರ್ ಅನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಆದರೆ ಸಿನಿಮಾನಲ್ಲಿ ಐವರು ನಾಯಕಿಯರು ಇದ್ದಾರೆ ಆದರೆ ಯಶ್ ಅವರ ಪಾತ್ರವನ್ನು ಮಾತ್ರವೇ ಹೈಲೆಟ್ ಮಾಡಲಾಗಿದೆ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತಪಡಿಸಿದ್ದರು. ಇದೀಗ ಅದಕ್ಕೆ ಖುದ್ದು ಯಶ್ ಉತ್ತರ ನೀಡಿದ್ದಾರೆ, ಮಾತ್ರವಲ್ಲದೆ, ಮಹಿಳೆಯರು ಎಲ್ಲಿ? ಎಂದವರಿಗೆ ಮಾಹಿತಿ ನೀಡಿದ್ದಾರೆ.

ಯಶ್ ಅವರು ಇದೀಗ ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ‘ಮಹಿಳೆಯರು ಎಲ್ಲಿ’ (where is ladies?) ಎಂದವರಿಗೆ, ಉತ್ತರಿಸಿದ್ದಾರೆ. ‘ಮಹಿಳೆಯರು ಬರಲು ತುಸು ಸಮಯ ತೆಗೆದುಕೊಳ್ಳುತ್ತಾರೆ’ ಎಂದಿರುವ ಯಶ್, ನಾಳೆ (ಜುಲೈ 1)ಕ್ಕೆ ಮಹಿಳೆಯರು ಬರಲಿದ್ದಾರೆ. ನೀವು ಸ್ವಲ್ಪ ಬಿಡುವು ಮಾಡಿಕೊಂಡು ಬನ್ನಿ’ ಎಂದಿದ್ದಾರೆ. ಜೊತೆಗೆ ಕೆವಿಎನ್ ಪ್ರೊಡಕ್ಷನ್ಸ್​​ನ ಯೂಟ್ಯೂಬ್ ಚಾನೆಲ್ ಲಿಂಕ್ ಹಂಚಿಕೊಂಡಿದ್ದಾರೆ.

ಯಶ್ ಹಂಚಿಕೊಂಡಿರುವ ಪೋಸ್ಟ್​​ನಂತೆ, ಜುಲೈ 1 ರಂದು ಸಿನಿಮಾದ ನಾಯಕಿಯರು ಕ್ಯಾರೆಕ್ಟರ್ ಟೀಸರ್ ಬಿಡುಗಡೆ ಆಗುವ ಸಂಭವ ಇದೆ. ಸಿನಿಮಾನಲ್ಲಿ ಯಶ್ ಜೊತೆಗೆ ಬರೋಬ್ಬರಿ ಐವರು ನಾಯಕಿಯರು ನಟಿಸಿದ್ದಾರೆ. ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್. ಸಿನಿಮಾದ ಎಲ್ಲ ನಾಯಕಿಯರ ಪಾತ್ರಗಳ ಬಗೆಗಿನ ಟೀಸರ್ ಅನ್ನು ನಾಳೆ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ:ಯಶ್​​ ಶ್ರಮ, ಪ್ರತಿಭೆಯನ್ನು ಕೊಂಡಾಡಿದ ಬಾಲಿವುಡ್ ನಟಿ

ಸಿನಿಮಾನಲ್ಲಿ ನಯನತಾರಾ ಗಂಗಾ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ, ಕಿಯಾರಾ ಅಡ್ವಾಣಿ ನಾಡಿಯಾ ಹೆಸರಿನ ಪಾತ್ರ, ತಾರಾ ಸುತಾರಿಯಾ ರೆಬೆಕಾ ಹೆಸರಿನ ಪಾತ್ರ, ಹುಮಾ ಖುರೇಷಿ ಎಲಿಜಬೆತ್ ಹೆಸರಿನ ಪಾತ್ರ ಮತ್ತು ರುಕ್ಮಿಣಿ ವಸಂತ್ ಮೆಲಿಸಾ ಹೆಸರಿನ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾದ ಕತೆ ನಾಯಕಿ ಪ್ರಧಾನವೇ ಆಗಿದೆ ಎನ್ನಲಾಗುತ್ತಿದೆ. ಯಶ್ ಅವರಷ್ಟೆ ಪವರ್​​ಫುಲ್ ಪಾತ್ರಗಳಲ್ಲಿ ಈ ನಟಿಯರು ನಟಿಸಿದ್ದಾರೆ ಎನ್ನಲಾಗಿದೆ.

‘ಟಾಕ್ಸಿಕ್’ ಸಿನಿಮಾವನ್ನು ಗೀತು ಮೋಹನ್​​ದಾಸ್ ನಿರ್ದೇಶಿಸಿದ್ದಾರೆ. ಸಿನಿಮಾಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್​​ಸ್ಟರ್ ಮೈಂಡ್ಸ್ ಒಟ್ಟಿಗೆ ಬಂಡವಾಳ ಹೂಡಿದೆ. ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ರಾಜೀವ್ ರವಿ ಅವರು ಸಿನಿಮಾಟೊಗ್ರಫಿ ಮಾಡಿದ್ದಾರೆ. ಸಿನಿಮಾ ಆಗಸ್ಟ್ 26 ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಆಕ್ಸಿಜನ್ ಸಿಲಿಂಡರ್ ಸ್ಫೋಟ: ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಭಾರಿ ಅಗ್ನಿ ಅವಘಡ – Kannada News | Fire Breaks Out in Davangere District Hospitals Operation Theatre After Oxygen Cylinder Blast

ದಾವಣಗೆರೆ, ಜೂನ್​​ 30: ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಆಪರೇಷನ್ ಥಿಯೇಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ದಾವಣಗೆರೆಯ ಚಿಗಟೇರಿಯಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ. ಸಕಾಲಕ್ಕೆ ಅಗ್ನಿಶಾಮಕ ಸಿಬ್ಬಂದಿ ಬಂದಿದ್ದರಿಂದ ಸಂಭವನೀಯ ದೊಡ್ಡ ದುರಂತವೊಂದು ತಪ್ಪಿದೆ. ಆಸ್ಪತ್ರೆಯ ಗಾಜು ಒಡೆದು ಒಳ ಪ್ರವೇಶಿಸಿದ್ದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಆಪರೇಷನ್ ಥಿಯೇಟರ್‌ನಲ್ಲಿ ಇನ್ನಷ್ಟು ಆಕ್ಸಿಜನ್ ಸಿಲಿಂಡರ್‌ಗಳಿದ್ದವು. ಅವು ಕೂಡ ಸ್ಫೋಟಗೊಂಡಿದ್ದರೆ ಭಾರಿ ಅನಾಹುತ ಸಂಭವಿಸುತ್ತಿತ್ತು. ಆದರೆ ಸಕಾಲದಲ್ಲಿ ಸಿಬ್ಬಂದಿ ಬೆಂಕಿ ನಂದಿಸಿದ್ದರಿಂದ ತಪ್ಪಿರುವ ಭಾರಿ ಅವಘಡ ತಪ್ಪಿದೆ. ಇನ್ನು ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಯಂತ್ರೋಪಕರಣಗಳು ಬೆಂಕಿಗಾಹುತಿಯಾಗಿವೆ. ಸಿಲಿಂಡರ್ ಸ್ಫೋಟಗೊಂಡಾಗ ಯಾವುದೇ ರೋಗಿಗಳು ಇರಲಿಲ್ಲ. ಇಂದು ಒಂಬತ್ತು ರೋಗಿಗಳಿಗೆ ಆಪರೇಷನ್‌ ನಡೆಸಬೇಕಿತ್ತು. ಇದಕ್ಕಾಗಿ ಅರವಳಿಕೆ ತಜ್ಞರು ಸಿದ್ಧತೆ ಮಾಡಿಕೊಂಡಿದ್ದರು. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ 22 ವೈದ್ಯ ಸಿಬ್ಬಂದಿ, ರೋಗಿಗಳು, ಸಂಬಂಧಿಕರು ಸಹ ಆಸ್ಪತ್ರೆಯಿಂದ ಹೊರಬಂದಿದ್ದರು ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Gold Rate: ಹತ್ತು ಗ್ರಾಮ್ ಚಿನ್ನದ ಬೆಲೆ 2,650 ರೂ ಇಳಿಕೆ; ಬೆಳ್ಳಿಯೂ ಕುಸಿತ – Kannada News | Gold Price Today on 30th June 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಜೂನ್ 30: ಚಿನ್ನದ ಬೆಲೆ ಸತತ ಎರಡನೇ ದಿನ ಇಳಿದಿದೆ. ನಿನ್ನೆ 85 ರೂ ಇಳಿದಿದ್ದ ಬಂಗಾರದ ದರ (Gold Rates) ಇವತ್ತು ಮಂಗಳವಾರ ಬರೋಬ್ಬರಿ 265 ರೂಗಳಷ್ಟು ತಗ್ಗಿದೆ. ಈ ಮೂಲಕ ಆಭರಣ ಚಿನ್ನದ ಬೆಲೆ ಮತ್ತೊಮ್ಮೆ 13,000 ರೂ ಗಡಿಯೊಳಗೆ ಬಂದಿದೆ. ಅಪರಂಜಿ ಚಿನ್ನದ ಬೆಲೆ 14,000 ರೂ ಮಟ್ಟಕ್ಕಿಂತ ಕೆಳಗಿಳಿಯುವ ಸನ್ನಾಹದಲ್ಲಿದೆ. ವಿದೇಶಗಳಲ್ಲೂ ಹಲವೆಡೆ ಇದರ ಬೆಲೆ ಕಡಿಮೆ ಆಗಿದೆ. ಇನ್ನು, ಬೆಳ್ಳಿ ಬೆಲೆ ಐದು ರೂ ಕಡಿಮೆಗೊಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,28,450 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,40,130 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 23,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,28,450 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 23,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 24,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜೂನ್ 30ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,013 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,845 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,510 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,013 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,845 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 12,845 ರೂ
  • ಚೆನ್ನೈ: 13,300 ರೂ
  • ಮುಂಬೈ: 12,845 ರೂ
  • ದೆಹಲಿ: 12,860 ರೂ
  • ಕೋಲ್ಕತಾ: 12,845 ರೂ
  • ಕೇರಳ: 12,845 ರೂ
  • ಅಹ್ಮದಾಬಾದ್: 12,850 ರೂ
  • ಜೈಪುರ್: 12,860 ರೂ
  • ಲಕ್ನೋ: 12,860 ರೂ
  • ಭುವನೇಶ್ವರ್: 12,845 ರೂ

ಇದನ್ನೂ ಓದಿ: ಐಟಿಆರ್ ಸಲ್ಲಿಕೆಯಿಂದ ಟಿಡಿಎಸ್ ಪಾವತಿವರೆಗೆ, ಜುಲೈನಲ್ಲಿ ಡೆಡ್​ಲೈನ್​ಗಳಿವೆ, ಗಮನಿಸಿ

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 531 ರಿಂಗಿಟ್ (12,348 ರುಪಾಯಿ)
  • ದುಬೈ: 485.75 ಡಿರಾಮ್ (12,590 ರುಪಾಯಿ)
  • ಅಮೆರಿಕ: 132.50 ಡಾಲರ್ (12,542 ರುಪಾಯಿ)
  • ಸಿಂಗಾಪುರ: 180 ಸಿಂಗಾಪುರ್ ಡಾಲರ್ (13,162 ರುಪಾಯಿ)
  • ಕತಾರ್: 486.50 ಕತಾರಿ ರಿಯಾಲ್ (12,365 ರೂ)
  • ಸೌದಿ ಅರೇಬಿಯಾ: 499 ಸೌದಿ ರಿಯಾಲ್ (12,579 ರುಪಾಯಿ)
  • ಓಮನ್: 51.70 ಒಮಾನಿ ರಿಯಾಲ್ (12,712 ರುಪಾಯಿ)
  • ಕುವೇತ್: 41.14 ಕುವೇತಿ ದಿನಾರ್ (12,649 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 235 ರೂ
  • ಚೆನ್ನೈ: 245 ರೂ
  • ಮುಂಬೈ: 235 ರೂ
  • ದೆಹಲಿ: 235 ರೂ
  • ಕೋಲ್ಕತಾ: 235 ರೂ
  • ಕೇರಳ: 245 ರೂ
  • ಅಹ್ಮದಾಬಾದ್: 235 ರೂ
  • ಜೈಪುರ್: 235 ರೂ
  • ಲಕ್ನೋ: 235 ರೂ
  • ಭುವನೇಶ್ವರ್: 245 ರೂ
  • ಪುಣೆ: 235

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version