Chikkamagaluru: ಕಾಫಿನಾಡ ಹುಡುಗ, ಚೀನಾ ಹುಡುಗಿ; ಚಿಕ್ಕಮಗಳೂರಲ್ಲಿ ನಡೀತು ಅದ್ಧೂರಿ ಕಲ್ಯಾಣ – Kannada News | Love Transcends Borders: Chikkamagaluru Boy Marries Chinese Girl

ಚೀನಾ ಯುವತಿ ವರಿಸಿದ ಚಿಕ್ಕಮಗಳೂರಿನ ಯುವಕ.

ಚಿಕ್ಕಮಗಳೂರು, ಜನವರಿ 23: ಈತ ಕಾಫಿನಾಡು ಚಿಕ್ಕಮಗಳೂರಿನ ಯುವಕ, ಆಕೆ ದೂರದ ಚೀನಾದ ಯುವತಿ. ವಿದೇಶದಲ್ಲಿ ವಿದ್ಯಾಭ್ಯಾಸದ ವೇಳೆ ಇಬ್ಬರಿಗೂ ಪರಸ್ಪರ ಪರಿಚಯವಾಗಿತ್ತು. ಬಳಿಕ ಸ್ನೇಹ ಪ್ರೀತಿಗೆ ತಿರುಗಿತ್ತು.  ಇಬ್ಬರ ಕಡೆಯವರ ಪೋಷಕರೂ ಮಕ್ಕಳ ಪ್ರೀತಿಯನ್ನು ಖುಷಿಯಿಂದ ಒಪ್ಪಿದ್ದು, ಅದ್ಧೂರಿಯಾಗಿ ವಿವಾಹ ಕಾರ್ಯಕ್ರಮ ನಡೆಸಿದ್ದಾರೆ. ಬಂಧು ಬಾಂಧವರ ಸಮ್ಮುಖದಲ್ಲಿ ಚಿಕ್ಕಮಗಳೂರಿನ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಅದ್ಧೂರಿ ಮದುವೆ ಸಮಾರಂಭ ನೆರವೇರಿದೆ.

ಹಿಂದೂ ಸಂಪ್ರದಾಯದಂತೆ, ಶಾಸ್ತ್ರೋಕ್ತವಾಗಿ ಮದುವೆ

ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡಿನ‌ ಯುವಕ ರೂಪಕ್ ಮತ್ತು ಚೀನಾ ಮೂಲದ ಯುವತಿ ಜಡೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಯಾಗಿದ್ದು, ಆಸ್ಟ್ರೇಲಿಯಾದಲ್ಲಿ ಓದುವಾಗ ಇಬ್ಬರ ಮಧ್ಯೆ ಪ್ರೇಮಾಂಕುರ ಆಗಿದೆ. ಚೀನಾದಿಂದ ಮಗಳನ್ನ ಕರೆತಂದು ಆಕೆಯ ಹೆತ್ತವರು ರೂಪಕ್​​ಗೆ ದಾರೆ ಎರೆದು ಕೊಟ್ಟಿದ್ದಾರೆ. ವೀಶೇಷ ಅಂದ್ರೆ ಹಿಂದೂ ಸಂಪ್ರದಾಯದಂತೆ, ಶಾಸ್ತ್ರೋಕ್ತವಾಗಿ ಮದುವೆ ನಡೆದಿದೆ. ಅಪ್ಪಟ ಭಾರತೀಯ ಶೈಲಿಯಲ್ಲಿ ದಂಪತಿ ಕಂಗೊಳಿಸಿದ್ದು, ವರ ರೂಪಕ್​​ ಪಂಚೆ, ಶರ್ಟ್​​ನಲ್ಲಿ ಮಿಂಚಿದ್ರೆ, ವಧು ಜಡೆ ಚೀನಾದವಳಾದರೂ ಸೀರೆ ಉಟ್ಟಿದ್ದು ನೆರೆದಿದ್ದವರ ಹುಬ್ಬೇರಿಸಿದೆ.

ಇದನ್ನೂ ಓದಿ: ಬೆಣ್ಣೆ ನಗರಿ ಹುಡುಗಿಗೆ ಮನಸೋತ ನ್ಯೂಜಿಲೆಂಡ್‌ ಯುವಕ! ಅಪ್ಪಟ ಹಿಂದೂ ಸಂಪ್ರದಾಯದಂತೆ ದಾವಣಗೆರೆಯಲ್ಲಿ ನಡೀತು ಅದ್ದೂರಿ ವಿವಾಹ

ಭಾರತೀಯ ಸಂಪ್ರದಾಯವನ್ನು ಯುವತಿ ಮೆಚ್ಚಿದ್ದು, ಚಿಕ್ಕಮಗಳೂರಿನ ಸೌಂದರ್ಯ ಕಂಡು ಆಕೆ ಮಾರು ಹೋಗಿದ್ದಾಳೆ. ವಧು ರೂಪಕ್ ಚಿಕ್ಕಮಗಳೂರಿನವರಾದರೂ ಆಸ್ಟ್ರೇಲಿಯಾದಲ್ಲಿ ಸೆಟಲ್​​ ಆಗಿದ್ದಾರೆ. ಯುವತಿಯೂ ಸದ್ಯ ಅಲ್ಲೇ ನೆಲೆಸಿರುವ ಕಾರಣ, ದಂಪತಿಯ ಮುಂದಿನ ಜೀವನವನ್ನು ವಿದೇಶದಲ್ಲಿಯೇ ಕಳೆಯಲ್ಲಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಇತ್ತೀಚೆಗೆ ಇಂತಹ ಪ್ರೇಮ ವಿವಾಹಗಳು ರಾಜ್ಯದಲ್ಲಿ ಮೇಲಿಂದ ಮೆಲೆ ಸದ್ದು ಮಾಡ್ತಿವೆ. ಕಳೆದ ಡಿಸೆಂಬರ್​​ನಲ್ಲಿ ದಾವಣಗೆರೆ ಹುಡುಗಿಯೊಬ್ಬಳು ನ್ಯೂಜಿಲೆಂಡ್‌ನ ಯುವಕನ ಜೊತೆ ದಾಂಪತ್ಯಕ್ಕೆ ಕಾಲಿಟ್ಟ ವಿಚಾರ ಭಾರಿ ಸುದ್ದಿಯಾಗಿತ್ತು. ಪ್ರೇಮಕ್ಕೆ ದೇಶ-ಭಾಷೆಯೆಂಬ ತಾರತಮ್ಯವಿಲ್ಲವೆಂದು ಮತ್ತೊಮ್ಮೆ ಸಾಭೀತಾಗಿತ್ತಲ್ಲದೆ, ಯುವಕ ವಿದೇಶಿಗನಾದರೂ ಅರಿಶಿಣ ಶಾಸ್ತ್ರ, ಧಾರೆ ಶಾಸ್ತ್ರ ಎಂದು ಅಪ್ಪಟ ಹಿಂದೂ ಸಂಪ್ರದಾಯದಂತೆ ಬೆಣ್ಣೆ ನಗರಿಯ ಹುಡುಗಿಯ ಕೈ ಹಿಡಿದಿದ್ದು ಸುದ್ದಿಯಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:20 pm, Fri, 23 January 26

Source link

ಕೇವಲ 58 ರನ್‌ಗಳಿಗೆ ಶ್ರೀಲಂಕಾ ಆಲೌಟ್; 9 ವಿಕೆಟ್​ಗಳಿಂದ ಗೆದ್ದ ಆಸ್ಟ್ರೇಲಿಯಾ – Kannada News | U19 World Cup: Australia Dominates Sri Lanka by 9 Wickets; Will Bayliss Stars with 5 Wickets

2026 ರ ಐಸಿಸಿ ಅಂಡರ್-19 ವಿಶ್ವಕಪ್​ನ (ICC U19 World Cup 2026) ಗುಂಪು ಹಂತ ಮುಗಿಯುವ ಹಂತಕ್ಕೆ ಬಂದಿದೆ. ಈ ಸುತ್ತಿನಲ್ಲಿ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ (Australia U19 vs Sri Lanka U19) ಮುಖಾಮುಖಿಯಾಗಿದ್ದವು. ಎರಡೂ ತಂಡಗಳ ಬಲಿಷ್ಠವಾಗಿ ಕಾಣಿಸುತ್ತಿದ್ದರಿಂದ ಕಠಿಣ ಪೈಪೋಟಿ ನಿರೀಕ್ಷಿಸಲಾಗಿತ್ತು. ಆದರೆ ಪಂದ್ಯ ಆರಂಭವಾದ ಕೆಲವೇ ನಿಮಿಷಗಳಲ್ಲಿ ಫಲಿತಾಂಶ ಗೋಚರಿಸಿತು. ಉಭಯ ತಂಡಗಳ ನಡುವಿನ ಈ ಪಂದ್ಯವು ಕೇವಲ 31 ಓವರ್‌ಗಳಲ್ಲಿ, ಒಟ್ಟು 119 ರನ್‌ಗಳಿಗೆ ಅಂತ್ಯವಾಯಿತು. ಇದಕ್ಕೆ ಕಾರಣ ಆಸ್ಟ್ರೇಲಿಯಾದ ವೇಗಿ ವಿಲ್ ಬೈರೋಮ್. ಶ್ರೀಲಂಕಾದ ಬ್ಯಾಟಿಂಗ್ ಬೆನ್ನೇಲುಬು ಮುರಿದ ಆಸೀಸ್ ವೇಗಿಗಳು ಇಡೀ ಲಂಕಾ ತಂಡವನ್ನು ಕೇವಲ 58 ರನ್‌ಗಳಿಗೆ ಆಲೌಟ್ ಮಾಡಿದರು.

ಆಸೀಸ್ ಮಾರಕ ದಾಳಿ

ಜನವರಿ 23 ರಂದು ನಮೀಬಿಯಾದ ವಿಂಡ್‌ಹೋಕ್‌ನಲ್ಲಿ ನಡೆದ ಈ ಗ್ರೂಪ್ ಎ ಪಂದ್ಯದಲ್ಲಿ ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡಿತು. ಶ್ರೀಲಂಕಾದ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಇನ್ನಿಂಗ್ಸ್‌ನ ಮೂರನೇ ಓವರ್‌ನ ವೇಳೆಗೆ ತಂಡವು ಕೇವಲ 3 ರನ್‌ಗಳನ್ನು ಗಳಿಸಿ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಚಾರ್ಲ್ಸ್ ಲೆಚ್ಮಂಡ್ ಎರಡೂ ವಿಕೆಟ್‌ಗಳನ್ನು ಪಡೆದರು. ಆ ನಂತರ ದಾಳಿಗಿಳಿದ ವಿಲ್ ಬೈರಾಮ್ ಶ್ರೀಲಂಕಾದ ಬ್ಯಾಟ್ಸ್‌ಮನ್‌ಗಳನ್ನು ಒಬ್ಬೊಬ್ಬರನ್ನಾಗಿ ಪೆವಿಲಿಯನ್​ಗೆ ಕಳುಹಿಸಲು ಪ್ರಾರಂಭಿಸಿದರು. ಹೀಗಾಗಿ ಇಡೀ ಲಂಕಾ ತಂಡವು ಕೇವಲ 58 ರನ್‌ಗಳಿಗೆ ಆಲೌಟ್ ಆಯಿತು.

ಆಸೀಸ್ ಪರ ಮಾರಕ ದಾಳಿ ನಡೆಸಿದ ವಿಲ್ ಬೈರೋಮ್ 6.5 ಓವರ್‌ಗಳ ಸ್ಪೆಲ್‌ನಲ್ಲಿ ಕೇವಲ 14 ರನ್‌ಗಳನ್ನು ಬಿಟ್ಟುಕೊಟ್ಟು 5 ವಿಕೆಟ್‌ಗಳನ್ನು ಪಡೆದರು. ಇದರ ಪರಿಣಾಮವಾಗಿ ಶ್ರೀಲಂಕಾ ತಂಡದ 11 ಬ್ಯಾಟ್ಸ್‌ಮನ್‌ಗಳಲ್ಲಿ 9 ಮಂದಿ ಒಂದೇ ಅಂಕಿಯ ಸ್ಕೋರ್‌ಗೆ ಔಟಾದರು. ಕವಿಜಾ ಗಮಗೆ (10) ಮತ್ತು ಚಾಮಿಕಾ ಹೀನಾಟಿಗಲ (14) ಮಾತ್ರ ಎರಡಂಕಿಯ ರನ್‌ ತಲುಪುವಲ್ಲಿ ಯಶಸ್ವಿಯಾದರು.

U19 ವಿಶ್ವಕಪ್​ನಲ್ಲಿ ಗೆಲುವಿನ ಶುಭಾರಂಭ ಮಾಡಿದ ಯಂಗ್ ಇಂಡಿಯಾ

ಆಸ್ಟ್ರೇಲಿಯಾಗೆ ಸುಲಭ ಜಯ

ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಕೂಡ ಮೊದಲ ಓವರ್‌ನಲ್ಲಿಯೇ ವಿಲ್ ಮಲಾಜುಕ್ ಅವರ ವಿಕೆಟ್ ಕಳೆದುಕೊಂಡಿತು. ಕೆಲವೇ ದಿನಗಳ ಹಿಂದೆ ಅಂಡರ್-19 ವಿಶ್ವಕಪ್‌ನಲ್ಲಿ ವೇಗದ ಶತಕದ ದಾಖಲೆ ನಿರ್ಮಿಸಿದ್ದ ವಿಲ್ ಮಲಾಜುಕ್ ವಿಕೆಟ್ ಪತನ ಆಸೀಸ್​ಗೆ ಆರಂಭಿಕ ಆಘಾತ ನೀಡಿತ್ತು. ಆದರೆ ಆ ನಂತರ ಜೊತೆಯಾದ ನಿತೇಶ್ ಸ್ಯಾಮ್ಯುಯೆಲ್ ಮತ್ತು ಸ್ಟೀವನ್ ಹೊಗನ್ ತಂಡವನ್ನು 12 ಓವರ್‌ಗಳಲ್ಲಿ ಗೆಲುವಿನ ದಡ ಮುಟ್ಟಿಸಿರು. ಅಂತಿಮವಾಗಿ ಆಸ್ಟ್ರೇಲಿಯಾ 9 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:04 pm, Fri, 23 January 26

Source link

ಸಾಮಾನ್ಯ ಹೂಡಿಕೆದಾರರು ಈ ಬಾರಿಯ ಬಜೆಟ್​ನಲ್ಲಿ ಗಮನಿಸಬೇಕಾದ ಸಂಗತಿಗಳಿವು – Kannada News | Union Budget 2026, LTCG rationalization to Fiscal discipline, key things for retail investors to observe

ನವದೆಹಲಿ, ಜನವರಿ 23: ಟ್ಯಾರಿಫ್, ಯುದ್ಧ, ದರ್ಪ, ಭಯ, ಅನಿಶ್ಚಿತತೆ ಇತ್ಯಾದಿ ಬಿಕ್ಕಟ್ಟಿನ ಸ್ಥಿತಿಯಲ್ಲಿ ಜಗತ್ತು ಇರುವ ಹೊತ್ತಲ್ಲೇ ಭಾರತ ಸರ್ಕಾರ ಮುಂಬರುವ ವರ್ಷಕ್ಕೆ ಬಜೆಟ್ (Union Budget) ರೂಪಿಸಿದೆ. ಫೆಬ್ರುವರಿ 1ರಂದು ಬಜೆಟ್ ಮಂಡನೆ ಆಗುತ್ತದೆ. ಆರ್ಥಿಕತೆ ಬೆಳವಣಿಗೆಗೆ ಪೂರಕವಾಗುವ ಅಂಶಗಳನ್ನು ಬಜೆಟ್​ನಿಂದ ನಿರೀಕ್ಷಿಸಲಾಗುತ್ತಿದೆ. ಸಾಮಾನ್ಯ ರೀಟೇಲ್ ಹೂಡಿಕೆದಾರರು ಈ ಬಜೆಟ್​ನಲ್ಲಿ ಏನು ನಿರೀಕ್ಷಿಸಬಹುದು, ಅಥವಾ ಗಮನಿಸಬಹುದು? ಇಲ್ಲಿದೆ ಒಂದಷ್ಟು ವಿವರ.

ಕ್ಯಾಪಿಟಲ್ ಗೇನ್ ಟ್ಯಾಕ್ಸ್​ನಲ್ಲಿ ಬದಲಾವಣೆ

ಸರ್ಕಾರ ಕಳೆದ ಒಂದು ವರ್ಷದಲ್ಲಿ ಜಿಎಸ್​ಟಿ ಮತ್ತು ಆದಾಯ ತೆರಿಗೆಯನ್ನು ಕಡಿಮೆಗೊಳಿಸಿದೆ ಮತ್ತು ಸರಳೀಕೃತಗೊಳಿಸಿದೆ. ಆದರೆ, ಷೇರು ಮಾರುಕಟ್ಟೆಯ ರೀಟೇಲ್ ಹೂಡಿಕೆದಾರರಿಗೆ ಟ್ಯಾಕ್ಸ್ ಹೊರೆ ಹೆಚ್ಚು ಇದೆ. ಎರಡು ವರ್ಷದ ಹಿಂದಿನ ಬಜೆಟ್​ನಲ್ಲಿ ಸರ್ಕಾರ ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಅನ್ನು ಶೇ. 12.5ಕ್ಕೆ ಏರಿಸಿತ್ತು. ಅದರ ಜೊತೆಗೆ, ವಿನಾಯಿತಿ ಮಿತಿಯನ್ನು 1 ಲಕ್ಷ ರೂನಿಂದ 1.25 ಲಕ್ಷ ರೂಗೂ ಏರಿಸಿತ್ತು. ಈಗ ಎಲ್​ಟಿಸಿಜಿ ಟ್ಯಾಕ್ಸ್ ಅನ್ನು ಕಡಿಮೆಗೊಳಿಸಲಿ ಮತ್ತು ಎಕ್ಸೆಂಪ್ಷನ್ ಲಿಮಿಟ್ ಏರಲಿ ಎಂದು ರೀಟೇಲ್ ಹೂಡಿಕೆದಾರರು ಬಯಸುತ್ತಿದ್ದಾರೆ. ಎಲ್​ಟಿಸಿಜಿಯನ್ನು ಕಡಿಮೆ ಮಾಡಿದರೆ ದೀರ್ಘಾವಧಿ ಹೂಡಿಕೆಗೆ ಉತ್ತೇಜನ ಸಿಕ್ಕಬಹುದು.

ಇದನ್ನೂ ಓದಿ: ಪಿಎಂ ಕಿಸಾನ್ ಹಣ ಎರಡು ಪಟ್ಟು ಹೆಚ್ಚಾಗುತ್ತಾ? ರೈತರ ನಿರೀಕ್ಷೆ ಈ ಬಜೆಟ್​ನಲ್ಲಿ ಈಡೇರುತ್ತಾ?

ಷೇರು ಖರೀದಿಸಿ 12 ತಿಂಗಳ ನಂತರ ಮಾರಿದರೆ ಅದಕ್ಕೆ ಎಲ್​ಟಿಸಿಜಿ ಅನ್ವಯ ಆಗುತ್ತದೆ. 12 ತಿಂಗಳ ಒಳಗೆ ಮಾರಿದರೆ, ಅದಕ್ಕೆ ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಅನ್ವಯ ಆಗುತ್ತದೆ. ಸದ್ಯ ಎಸ್​ಟಿಸಿಜಿ ಷೇರುಗಳಿಗೆ ಶೇ. 20ರಷ್ಟಿದೆ. ಷೇರುಗಳು, ಈಕ್ವಿಟಿ ಫಂಡ್​ಗಳಿಗೆ ಶೇ. 20 ಎಲ್​ಟಿಸಿಜಿ ಇದೆ. ಬೇರೆ ಆಸ್ತಿಗಳ ಮಾರಾಟದಿಂದ ಬಂದ ಲಾಭವಾದರೆ ಅದು ವ್ಯಕ್ತಿಯ ಆದಾಯ ತೆರಿಗೆ ಸ್ಲಾಬ್ ದರಗಳು ಅನ್ವಯ ಆಗುತ್ತದೆ.

ಸರ್ಕಾರದಿಂದ ಬಂಡವಾಳ ವೆಚ್ಚ ಹೆಚ್ಚಲಿ ಎನ್ನುವ ನಿರೀಕ್ಷೆ

ಕಳೆದ ಕೆಲ ವರ್ಷಗಳಿಂದ ದೇಶದ ಆರ್ಥಿಕ ಅಭಿವೃದ್ಧಿಗೆ ಮುಖ್ಯ ಶಕ್ತಿಯಾಗಿರುವುದು ಸರ್ಕಾರದ ಬಂಡವಾಳ ವೆಚ್ಚ. ಇನ್​ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್​ಗಳಿಗೆ ಸರ್ಕಾರದಿಂದ ಸಾಕಷ್ಟು ಬಂಡವಾಳ ವೆಚ್ಚ ಬೇಕಾಗುತ್ತದೆ. ಹಾಗೆಯೇ, ಡಿಫೆನ್ಸ್, ವಿದ್ಯುತ್, ಉತ್ಪಾದನೆ ಇತ್ಯಾದಿ ಕ್ಷೇತ್ರಗಳಲ್ಲೂ ಸರ್ಕಾರದಿಂದ ಹಣ ಹರಿದುಹೋಗಬೇಕಾಗುತ್ತದೆ. ಆರ್ಥಿಕ ಪ್ರಗತಿಗೆ ಕಾರಣವಾಗುವ ಸೆಕ್ಟರ್​ಗಳಿಗೆ ಬಜೆಟ್​ನಲ್ಲಿ ಎಷ್ಟು ಮಹತ್ವ ಕೊಡಲಾಗುತ್ತದೆ ಎಂಬುದನ್ನು ಗಮನಿಸಬೇಕಾಗುತ್ತದೆ.

ಇದನ್ನೂ ಓದಿ: ಬಜೆಟ್ 2026: ಆಸ್ಪತ್ರೆಗಳು ಹೆಚ್ಚಬೇಕು, ಸ್ಥಳೀಯ ಉತ್ಪಾದನೆ ಹೆಚ್ಚಬೇಕು- ಹೆಲ್ತ್​ಕೇರ್ ಉದ್ಯಮದ ಬಜೆಟ್ ನಿರೀಕ್ಷೆಗಳು…

ವಿತ್ತೀಯ ಕೊರತೆ ತಗ್ಗಿಸುವುದು ಸೇರಿದಂತೆ ಹಣಕಾಸು ಶಿಸ್ತು

ಸರ್ಕಾರವು ವಿತ್ತೀಯ ಕೊರತೆ ಅಥವಾ ಫಿಸ್ಕಲ್ ಡೆಫಿಸಿಟ್ ಅನ್ನು ತಗ್ಗಿಸುವತ್ತ ಗಮನ ಕೊಡುತ್ತಿದೆ. ಸಾಲವನ್ನೂ ಕೂಡ ಕಡಿಮೆಗೊಳಿಸಲು ಪ್ರಯತ್ನಿಸುತ್ತಿದೆ. ಮುಂದಿನ ಐದಾರು ವರ್ಷದಲ್ಲಿ ಸಾಲವು ದೇಶದ ಜಿಡಿಪಿಯ ಶೇ. 50ಕ್ಕಿಂತ ಕಡಿಮೆ ಇರಲಾಗುವಂತೆ ಸರ್ಕಾರ ಗುರಿ ಇಟ್ಟಿದೆ. ಈ ರೀತಿ ಸರ್ಕಾರವು ಆರ್ಥಿಕ ಶಿಸ್ತು ಕಾಯ್ದುಕೊಂಡಾಗ ವಿದೇಶೀ ಹೂಡಿಕೆದಾರರು ದೇಶದ ಮಾರುಕಟ್ಟೆಗೆ ಬರುವುದು ಹೆಚ್ಚಾಗುತ್ತದೆ. ಹೂಡಿಕೆಗಳು ಹೆಚ್ಚಾದಾಗ ಮಾರುಕಟ್ಟೆ ಬೆಳೆಯುತ್ತದೆ, ಹೆಚ್ಚು ರಿಟರ್ನ್ಸ್ ಕೊಡುತ್ತದೆ. ಹೀಗಾಗಿ, ಬಜೆಟ್​ನಲ್ಲಿ ಫಿಸ್ಕಲ್ ಡೆಫಿಸಿಟ್​ಗೆ ಸರ್ಕಾರ ಎಷ್ಟು ಗುರಿ ಇಟ್ಟಿದೆ ಎಂದು ಗಮನಿಸಬೇಕಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ತಬ್ಬಿಕೊಂಡ ಕ್ಷಣ ವಿವರಿಸಿದ ಗಿಲ್ಲಿ – Kannada News | Gilli Nata talks about Rakshita Shetty and his winning moment in BBK 12

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋನಲ್ಲಿ ಗಿಲ್ಲಿ ನಟ ಹಾಗೂ ರಕ್ಷಿತಾ ಶೆಟ್ಟಿ ಅವರು ಫಿನಾಲೆ ಅಂತಿಮ ಹಂತಕ್ಕೆ ಬಂದಿದ್ದರು. ಸುದೀಪ್ ಅವರ ಅಕ್ಕಪಕ್ಕದಲ್ಲಿ ಅವರಿಬ್ಬರು ನಿಂತಿದ್ದರು. ಕೊನೆಗೂ ಗೆದ್ದಿದ್ದು ಗಿಲ್ಲಿ ನಟ. ಆ ಕ್ಷಣದಲ್ಲಿ ರಕ್ಷಿತಾ ಶೆಟ್ಟಿ (Rakshita Shetty) ಅವರು ಓಡಿ ಬಂದು ಗಿಲ್ಲಿಯನ್ನು ತಬ್ಬಿಕೊಂಡು ಅಭಿನಂದನೆ ಸಲ್ಲಿಸಿದ್ದರು. ಅದರ ಬಗ್ಗೆ ಗಿಲ್ಲಿ ನಟ ಅವರು ಈಗ ಮಾತನಾಡಿದ್ದಾರೆ. ‘ಒಂದು ವೇಳೆ ರಕ್ಷಿತಾ ಶೆಟ್ಟಿ ಗೆದ್ದಿದ್ದರೆ ನನಗೆ ಬೇಜಾರು ಆಗುತ್ತಿತ್ತು. ಅದು ಸಹಜ. ಆದರೆ ನಾನು ಗೆದ್ದಾಗ ರಕ್ಷಿತಾ ಬಂದು ಹಗ್ ಮಾಡಿ, ಅಭಿನಂದನೆ ತಿಳಿಸಿದಳು. ಅವಳು ಖುಷಿಪಟ್ಟಳು. ಆ ಖುಷಿ ನಿಜವಾಗಿ ಕಾಣಿಸುತ್ತಿತ್ತು. ನನ್ನ ಗೆಲುವಿನ ಖುಷಿ ಅವಳ ಕಣ್ಣಿನಲ್ಲಿ ಕಾಣಿಸಿತು. ಆ ಕಾರಣಕ್ಕಾಗಿಯೇ ಅವಳು ಎಲ್ಲರಿಗೂ ಇಷ್ಟ ಆಗುವುದು’ ಎಂದು ಗಿಲ್ಲಿ ನಟ (Gilli Nata) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪ್ರಜ್ವಲ್ ರೇವಣ್ಣಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾದ ತನಿಖಾ ತಂಡಕ್ಕೆ ಭರ್ಜರಿ ಬಹುಮಾನ! – Kannada News | Prajwal Revanna case: Police officers get Rs 35 lakh cash incentive for effective case

ಬೆಂಗಳೂರು, (ಜನವರಿ 22): ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧ ಅಪರಾಧ ಸಾಬೀತುಪಡಿಸಿದ ತನಿಖಾ ತಂಡಕ್ಕೆ ಗೃಹ ಇಲಾಖೆ ನಗದು ಬಹುಮಾನ ಘೋಷಿಸಿದೆ. ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರವನ್ನು ಸಾಬೀತುಪಡಿಸುವಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ತನಿಖಾ ತಂಡದ 30 ಅಧಿಕಾರಿ, ಸಿಬ್ಬಂದಿಗೆ 25 ಲಕ್ಷ ರೂ. ನಗದು ಬಹುಮಾನ ಘೋಷಣೆ ಮಾಡಿದೆ. ಪ್ರಜ್ವಲ್ ರೇವಣ್ಣ ಪ್ರಕರಣ ತನಿಖಾ ತಂಡಕ್ಕೆ 25 ಲಕ್ಷ ರೂ. ಜೊತೆಗೆ ಪೊಲೀಸ್ ಇಲಾಖೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಅಧಿಕಾರಿ, ಸಿಬ್ಬಂದಿಗೆ ಸೇರಿದಂತೆ ವಿವಿಧ ದರ್ಜೆ ಅಧಿಕಾರಿ, ಸಿಬ್ಬಂದಿಗೆ ಒಟ್ಟು ಒಟ್ಟಾರೆ 35 ಲಕ್ಷ ರೂ. ಬಹುಮಾನವನ್ನು ಘೋಷಿಸಿದೆ.

ಯಾರ್ಯಾರಿಗೆ ಎಷ್ಟು ಹಣ?

ಎಸ್‌ಐಟಿ ಮುಖ್ಯಸ್ಥ ಬಿ.ಕೆ. ಸಿಂಗ್, ಡಿಐಜಿ ಸೀಮಾ ಲಾಟ್ಕರ್, ಎಸ್‌ಪಿ ಸುಮನ್ ಡಿ ಪನ್ನೇಕರ್, ಎಸ್‌ಪಿ, ಸಿಎ ಸೈಮನ್, ಎಸಿಪಿ ಸತ್ಯನಾರಾಯಣ ಸಿಂಗ್, ಇನ್ಸ್ಪೆಕ್ಟರ್‌ಗಳಾದ ರಾವ್ ಗಣೇಶ್ ಜನಾರ್ದನ್, ಶೋಭಾ ಜಿ, ಸುಮಾರಾಣಿ, ಹೇಮಂತ್ ಕುಮಾರ್ ಸೇರಿದಂತೆ 30 ಮಂದಿ ಅಧಿಕಾರಿಗಳು, ಸಿಬ್ಬಂದಿಗೆ ಈ 25 ಲಕ್ಷ ರೂ. ನಗದು ಬಹುಮಾನ ನೀಡಲಾಗಿದೆ.

ಡಿಜಿ ಮತ್ತು ಐಜಿಪಿ ದರ್ಜೆ ಅಧಿಕಾರಿಗಳಿಗೆ ತಲಾ 20 ಸಾವಿರದಂತೆ ಒಟ್ಟು 25 ಲಕ್ಷ ರು, ಡಿಜಿಪಿ, ಎಡಿಜಿಪಿ ಮತ್ತು ಐಜಿಪಿ(ರಾಜ್ಯ ವ್ಯಾಪ್ತಿ) ಅಧಿಕಾರಿಗಳಿಗೆ ತಲಾ 8 ಸಾವಿರದಂತೆ ಒಟ್ಟು 3 ಲಕ್ಷ ರು, ಇಲಾಖೆಯ ಇತರೆ ಅಧಿಕಾರಿ-ಸಿಬ್ಬಂದಿಗೆ ತಲಾ 5 ಸಾವಿರದಂತೆ ಒಟ್ಟು 2 ಲಕ್ಷ ರು. ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಲಾ 5 ಸಾವಿರದಂತೆ ಒಟ್ಟು 1 ಲಕ್ಷ ನಗದನ್ನು ಒಳ ಆಡಳಿತ ಇಲಾಖೆ ಮಂಜೂರು ಮಾಡಿದೆ.

ಆದೇಶದಲ್ಲೇನಿದೆ?

ಹಾಸನ ಜಿಲ್ಲಾ ಮಾಜಿ ಸಂಸದ ಪುಜ್ವಲ್ ರೇವಣ್ಣ ಮತ್ತು ಹೆಚ್.ಡಿ ರೇವಣ್ಣ ವಿರುದ್ಧ ದಾಖಲಾಗಿರುವ ಪುಕರಣಗಳ ತನಿಖೆ ಕುರಿತು ರಚಿಸಿರುವ ವಿಶೇಷ ತನಿಖಾ ತಂಡವು ಸದರಿರವರುಗಳ ವಿರುದ್ಧ ಒಟ್ಟು 04 ಪಕರಣ ಮತ್ತು ಹೆಚ್.ಡಿ ರೇವಣ್ಣ ರವರ ವಿರುದ್ಧ ದಾಖಲಾಗಿರುವ ಒಟ್ಟು 01 ಪುಕರಣಗಳ ತನಿಖಾ ಕಾಲದಲ್ಲಿ ಸಮರ್ಪಕವಾಗಿ ತನಿಖೆ ಕೈಗೊಂಡು ಸಾಕ್ಷಾಧಾರಗಳನ್ನು ಸಂಗ್ರಹಿಸಿ, ಒಟ್ಟು 05 ಪ್ರಕರಣಗಳಲ್ಲಿ ದೋಷಾರೋಪಣ ಪಟ್ಟಿಯನ್ನು ಸಿದ್ಧಪಡಿಸಿ ಘನ ನ್ಯಾಯಾಲಯಕ್ಕೆ ಸಲ್ಲಿಸಿರುತ್ತದೆ. ಸದರಿ ಪುಕರಣಗಳ ಪೈಕಿ ಸಿ.ಐ.ಡಿ. ಸೈಬರ್ ಕ್ರೈಂ ಪೊಲೀಸ್ ಠಾಣಾ ಮೊ.ಸಂ.02/2024ರ ಪ್ರಕರಣದಲ್ಲಿ ನ್ಯಾಯಾಲಯ ವಿಚಾರಣೆ ವಿಚಾರಣೆ ಪೂರ್ಣಗೊಂಡು ಪುಕರಣದ ಆರೋಪಿಯಾದ ಪ್ರಜ್ವಲ್ ರೇವಣ್ಯ ಕೃತ್ಯ ಸಾಭೀತಾಗಿದ್ದರಿಂದ ಅಪರಾಧಿಗೆ ಅಜೀವ ಕಾರವಾಸ ಮತ್ತು 11,60,000 ರೂ. ದಂಡವನ್ನು ವಿಧಿಸಿ ದಂಡದ ಮೊತ್ತದಲ್ಲಿ 11,25,000 ರೂ. ಹಣವನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡಲು ಆದೇಶಿಸಲಾಗಿದೆ.

ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಮಗ್ರ ತನಿಖೆ ನಡೆಸಿ ಅಪರಾಧಿಗೆ ಶಿಕ್ಷೆ ವಿಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸದ್ಯ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಪೊಲೀಸ್ ಪಡೆಯಲ್ಲಿ ವೃತ್ತಿಪರತೆ, ಹೊಣೆಗಾರಿಕೆ ಮತ್ತು ಶ್ರೇಷ್ಠತೆಯನ್ನು ಉತ್ತೇಜಿಸುವ ಉದ್ದೇಶದೊಂದಿಗೆ ನಗದು ಪ್ರಶಸ್ತಿಗಳನ್ನು ನೀಡಲಾಗಿದೆ ಎಂದು ಗೃಹ ಇಲಾಖೆ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 5:56 pm, Fri, 23 January 26

Source link

ಎಷ್ಟೇ ಕಡಿಮೆ ತಿಂದ್ರು ತೂಕ ಹೆಚ್ಚಾಗುವುದಕ್ಕೆ ಕಾರಣ ಏನ್ ಗೊತ್ತಾ? ಇದನ್ನು ತಡೆಯಲು ಈ ಟಿಪ್ಸ್ ಪಾಲಿಸಿ – Kannada News | Weight Gain Mystery: When Eating Less Isn’t Enough

Doctors Reveal Why You Can Gain Weight On A Low Calorie DietImage Credit source: Getty Images

ದಪ್ಪವಾಗುವ ಭಯದಲ್ಲಿ ಕಡಿಮೆ ತಿನ್ನುವವರನ್ನು ನೀವು ನೋಡಿರಬಹುದು. ಆದರೂ ಕೂಡ ಅವರ ತೂಕ ಕಡಿಮೆಯಾಗುವುದಿಲ್ಲ ಬದಲಾಗಿ ಹೆಚ್ಚುತ್ತಲೇ ಇರುತ್ತದೆ. ತೂಕ ಕಡಿಮೆ ಮಾಡಿಕೊಳ್ಳುವ ಆಸೆ ಇರುವವರು ಸಾಮಾನ್ಯವಾಗಿ ತಮ್ಮ ಆಹಾರದ ಮೇಲೆ ಹೆಚ್ಚಿನ ನಿಯಂತ್ರಣ ಇಟ್ಟುಕೊಂಡಿರುತ್ತಾರೆ. ಜೊತೆಗೆ ತುಂಬಾ ಕಡಿಮೆ ಪ್ರಮಾಣದಲ್ಲಿ ಸಕ್ಕರೆ ಸೇವನೆ ಮಾಡುತ್ತಾರೆ, ಇಷ್ಟಾದರೂ ಕೂಡ ಅವರ ತೂಕ (Weight) ನಿಯಂತ್ರಣದಲ್ಲಿರುವುದಿಲ್ಲ. ಇಂತಹ ಸಮಸ್ಯೆ ಇದ್ದರೆ, ಅದನ್ನು ಎಂದಿಗೂ ಹಗುರವಾಗಿ ಪರಿಗಣಿಸಬೇಡಿ. ಇದು ದೇಹದಲ್ಲಿನ ಕೆಲವು ಕಾಯಿಲೆಗಳ ಲಕ್ಷಣವಾಗಿರಬಹುದು. ಅಷ್ಟೇ ಅಲ್ಲ, ಚಯಾಪಚಯ ಕ್ರಿಯೆಗೆ ನೇರವಾಗಿ ಸಂಬಂಧಿಸಿರಬಹುದು. ಹಾಗಾದರೆ ಈ ರೀತಿಯಾಗುವುದಕ್ಕೆ ನಿಜವಾದ ಕಾರಣಗಳೇನು, ಯಾಕೆ ಈ ರೀತಿಯ ಸಮಸ್ಯೆ ಉಂಟಾಗುತ್ತದೆ, ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ತಿಳಿದುಕೊಳ್ಳಿ.

ರಾಜೀವ್ ಗಾಂಧಿ ಆಸ್ಪತ್ರೆಯ ಅಸೋಸಿಯೇಟ್ ಪ್ರೊಫೆಸರ್ ಡಾ. ಅಜಿತ್ ಜೈನ್ ಅವರು ಹೇಳುವ ಪ್ರಕಾರ, ಕಡಿಮೆ ಪ್ರಮಾಣದಲ್ಲಿ ಆಹಾರ ಸೇವನೆ ಮಾಡಿದರೂ ಕೂಡ ತೂಕ ಹೆಚ್ಚಾಗುವುದು ಅನೇಕರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆ. ಅದರಲ್ಲಿಯೂ 40 ವರ್ಷದ ನಂತರ ಈ ರೀತಿಯಾಗುವುದು ಹೆಚ್ಚಾಗುತ್ತದೆ. ಇದಕ್ಕೆ ಪ್ರಮುಖ ಕಾರಣವೆಂದರೆ ನಿಧಾನ ಚಯಾಪಚಯ ಕ್ರಿಯೆ. ಒಬ್ಬ ವ್ಯಕ್ತಿಯ ದೇಹವು ಕ್ಯಾಲೊರಿಗಳನ್ನು ಸುಡುವಾಗ ತೆಗೆದುಕೊಳ್ಳುವ ಸಮಯ ನಿಧಾನವಾಗುವುದರಿಂದ ಕಡಿಮೆ ತಿಂದರೂ ತೂಕ ಹೆಚ್ಚಾಗುತ್ತದೆ. ಹಾಗಾಗಿ ಏನೆ ತಿಂದರೂ ದೇಹದಲ್ಲಿ ಕೊಬ್ಬು ಸಂಗ್ರಹವಾಗುತ್ತದೆ, ಇದು ಬೊಜ್ಜು ಮತ್ತು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಹಾರ್ಮೋನುಗಳ ಅಸಮತೋಲನವೂ ಒಂದು ಪ್ರಮುಖ ಸಮಸ್ಯೆ:

ಡಾ. ಅಜಿತ್ ಹೇಳುವ ಪ್ರಕಾರ, ಆಹಾರ ಸೇವನೆಯ ಪ್ರಮಾಣವನ್ನು ಕಡಿಮೆ ಮಾಡಿದರೂ ಕೂಡ ತೂಕ ಹೆಚ್ಚಾಗುವುದಕ್ಕೆ ಮತ್ತೊಂದು ಪ್ರಮುಖ ಕಾರಣವೆಂದರೆ ಹಾರ್ಮೋನುಗಳ ಅಸಮತೋಲನ. ಇಂತಹ ಸಮಸ್ಯೆಗಳು ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಸಾಮಾನ್ಯವಾಗಿ ಪಿಸಿಓಎಸ್, ಋತುಬಂಧ ಅಥವಾ ಗರ್ಭಧಾರಣೆಯ ನಂತರ ಉಂಟಾಗುವ ಹಾರ್ಮೋನುಗಳ ಬದಲಾವಣೆಗಳಿಂದಾಗಿ ತೂಕ ಹೆಚ್ಚಾಗಬಹುದು. 40 ವರ್ಷದ ನಂತರ ಈ ಸಮಸ್ಯೆಗಳು ಹೆಚ್ಚು ಸಾಮಾನ್ಯವಾಗುತ್ತವೆ. ವಯಸ್ಸು ಹೆಚ್ಚಾದಂತೆ, ತೂಕ ಕೂಡ ಹೆಚ್ಚಾಗುತ್ತದೆ.

ಇದನ್ನೂ ಓದಿ: ಈ ಜ್ಯೂಸ್‌ ಕುಡಿಯಿರಿ, ನಿಮ್ಮ ಹೊಟ್ಟೆಯ ಕೊಬ್ಬು ಬೆಣ್ಣೆಯಂತೆ ಕರಗುತ್ತದೆ

ಆಹಾರ ಸೇವನೆ ಮಾಡುವ ಸರಿಯಾದ ವಿಧಾನ ತಿಳಿಯದಿರುವುದು:

ಸಾಮಾನ್ಯವಾಗಿ ಕೆಲವರು ಆಹಾರವನ್ನು ಸರಿಯಾದ ರೀತಿಯಲ್ಲಿ ಸೇವನೆ ಮಾಡುವುದಿಲ್ಲ. ಅಂದರೆ, ಅಗತ್ಯಕ್ಕಿಂತ ಕಡಿಮೆ ತಿನ್ನುತ್ತಾರೆ ಅಥವಾ ದೀರ್ಘಕಾಲದವರೆಗೆ ಹಸಿವಿನಿಂದ ಇರುತ್ತಾರೆ. ಇಂತಹ ಸಂದರ್ಭಗಳಲ್ಲಿ, ದೇಹ ಕೊಬ್ಬನ್ನು ಸುಡುವುದಿಲ್ಲ ಬದಲಾಗಿ ಅದನ್ನು ಸಂಗ್ರಹಿಸಲು ಪ್ರಾರಂಭಿಸುತ್ತದೆ, ಹಾಗಾಗಿ ಈ ರೀತಿಯ ಅಭ್ಯಾಸಗಳು ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಜೊತೆಗೆ ಸ್ಟೀರಾಯ್ಡ್ ಔಷಧಿಗಳನ್ನು ತೆಗೆದುಕೊಳ್ಳುವವರಲ್ಲಿಯೂ ಕೂಡ ಈ ರೀತಿಯ ಸಮಸ್ಯೆ ಕಂಡುಬರುತ್ತದೆ.

ತೂಕ ಹೆಚ್ಚಾಗುವುದನ್ನು ತಡೆಯಲು ಸಲಹೆಗಳು:

  • ಸಮತೋಲಿತ ಆಹಾರವನ್ನು ಸೇವನೆ ಮಾಡಿ. ಯಾವುದೇ ಕಾರಣಕ್ಕೂ ಕಡಿಮೆ ಪ್ರಮಾಣದಲ್ಲಿ ತಿನ್ನಬೇಡಿ.
  • ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ವ್ಯಾಯಾಮ ಮಾಡಿ.
  • 7- 8 ಗಂಟೆ ನಿದ್ರೆ ಮಾಡುವುದನ್ನು ಮರೆಯಬೇಡಿ.
  • ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಯೋಗ ಅಥವಾ ಧ್ಯಾನವನ್ನು ಅಭ್ಯಾಸ ಮಾಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್ – Kannada News | Sydney Sixers Reach BBL Final: Smith Shines After Babar Azam’s Controversial Exit

ಬಿಗ್ ಬ್ಯಾಷ್ ಲೀಗ್​ನಲ್ಲಿ ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಆಝಂ ಅವರ ಕಳಪೆ ಪ್ರದರ್ಶನ ಹಾಗೂ ವಿವಾದಗಳಿಂದ ಸಾಕಷ್ಟು ಸದ್ದು ಮಾಡಿದ್ದ ಸಿಡ್ನಿ ಸಿಕ್ಸರ್ಸ್​ ತಂಡ ಇದೀಗ ಫೈನಲ್​ಗೇರುವಲ್ಲಿ ಯಶಸ್ವಿಯಾಗಿದೆ. ಬಾಬರ್ ಆಝಂ ತಂಡದಿಂದ ಹೊರಬಿದ್ದ ಬಳಿಕ ನಡೆದ ಪ್ಲೇಆಫ್‌ ಸುತ್ತಿನ ಪಂದ್ಯದಲ್ಲಿ ಹೋಬಾರ್ಟ್ ಹರಿಕೇನ್ಸ್ ತಂಡವನ್ನು ಎದುರಿಸಿದ್ದ ಸಿಡ್ನಿ ಸಿಕ್ಸರ್ಸ್ 57 ರನ್‌ಗಳಿಂದ ಪಂದ್ಯವನ್ನು ಗೆದ್ದು ಫೈನಲ್​ಗೆ ಟಿಕೆಟ್ ಪಡೆಯಿತು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸಿಡ್ನಿ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತ್ತು. ಎಲ್ಲಾ ಬ್ಯಾಟ್ಸ್‌ಮನ್​ಗಳು ಉತ್ತಮ ಆರಂಭವನ್ನೇ ಪಡೆದರು. ಆದರೆ ದೊಡ್ಡ ಇನ್ನಿಂಗ್ಸ್‌ ಆಡುವಲ್ಲಿ ವಿಫಲರಾದರು. ಆದಾಗ್ಯೂ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಸ್ಟೀವ್ ಸ್ಮಿತ್ 43 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ 65 ರನ್ ಗಳಿಸಿದರು.

ಈ ಗುರಿ ಬೆನ್ನಟ್ಟಿದ ಹೋಬಾರ್ಟ್, ಸಿಡ್ನಿ ಸಿಕ್ಸರ್ಸ್ ಬೌಲರ್‌ಗಳ ದಾಳಿಗೆ ತತ್ತರಿಸಿತು. ಬೆನ್ ಡ್ವಾರ್ಷಿಯಸ್ 26 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದರೆ, ಮಿಚೆಲ್ ಸ್ಟಾರ್ಕ್ ಕೂಡ 4 ಓವರ್‌ಗಳಲ್ಲಿ ಕೇವಲ 29 ರನ್‌ಗಳಿಗೆ 2 ವಿಕೆಟ್‌ಗಳನ್ನು ಪಡೆದರು. ಶಾನ್ ಅಬಾಟ್ ಮತ್ತು ಜೋಯಲ್ ಡೇವಿಡ್ ತಲಾ 2 ವಿಕೆಟ್ ಪಡೆದರು. ಜ್ಯಾಕ್ ಎಡ್ವರ್ಡ್ಸ್ ಒಂದು ವಿಕೆಟ್ ಪಡೆದರು. ಅಂತಿಮವಾಗಿ ಹೋಬಾರ್ಟ್ 141 ರನ್‌ಗಳಿಗೆ ಔಟಾಯಿತು.

Source link

ರಾಹುಲ್​​ ಗಾಂಧಿ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು? – Kannada News | Karnataka high court grants permission for bike taxis riders reveal rahul gandhis assurance

ಬೆಂಗಳೂರು, ಜನವರಿ 23: ಬೈಕ್​​ ಟ್ಯಾಕ್ಸಿಗೆ ಕರ್ನಾಟಕ ಹೈಕೋರ್ಟ್​​ ಗ್ರೀನ್​​ ಸಿಗ್ನಲ್​​ ನೀಡಿರುವ ಹಿನ್ನೆಲೆ ಅದನ್ನೇ ನಂಬಿ ಜೀವನ ನಡೆಸುತ್ತಿದ್ದವರು ಕೇಕ್​​ ಕತ್ತರಿಸಿ ಸಂಭ್ರಮಿಸಿದ್ದಾರೆ. ನಮ್ಮ ಹೋರಾಕ್ಕೆ ಫಲ ಸಿಕ್ಕಿದೆ, ಕೋರ್ಟ್​​ ಹೇಳಿರುವಂತೆ ರೂಲ್ಸ್​​ ಫ್ರೇಮ್​​ ಮಾಡುವ ಬಗ್ಗೆ ಸರ್ಕಾರ ನಿರ್ಧರಿಸಬೇಕಿದೆ. ಬೈಕ್​​ ಟ್ಯಾಕ್ಸಿ ವಿಚಾರವಾಗಿ ಈ ಹಿಂದೆ ರಾಹುಲ್​​ ಗಾಂಧಿ ಅವರನ್ನು ಭೇಟಿ ಮಾಡಿದ್ದೆವು. ಆ ವೇಳೆ ಅಗತ್ಯ ಪ್ರಯತ್ನ ಮಾಡೋದಾಗಿ ಅವರು ಹೇಳಿದ್ದರು. ಅದರಂತೆ ಈಗ ನಮ್ಮ ಪರ ತೀರ್ಪು ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ವೈಟ್​​ ನಂಬರ್​​ ಪ್ಲೇಟ್​​ನಲ್ಲೇ ಬೈಕ್​​ ಟ್ಯಾಕ್ಸಿ ಸೇವೆ ಮುಂದುವರಿಯಬೇಕು, ಟ್ಯಾಕ್ಸ್​​ ಪಾವತಿಸಲು ನಾವು ರೆಡಿ ಇದ್ದೇವೆ. 15 ರಾಜ್ಯಗಳಲ್ಲಿ ವೈಟ್​​ ಪ್ಲೇಟ್​​ ಬೈಕ್​ ಟ್ಯಾಕ್ಸಿಗಳಿಗೆ ಈಗಾಲೇ ಅನುಮತಿ ನೀಡಿದ್ದಾರೆ. ಈ ಬಗ್ಗೆ ಮಾಹಿತಿಯನ್ನು ಸಾರಿಗೆ ಸಚಿವರಿಗೆ, ಕೋರ್ಟ್​​ಗೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Best Investments: ಚಿನ್ನ, ಬೆಳ್ಳಿ ಮತ್ತು ಷೇರು- ಹೂಡಿಕೆಗೆ ಈ ಮೂರರಲ್ಲಿ ಯಾವುದು ಉತ್ತಮ? – Kannada News | Gold, Silver and Sensex, Rudra Murthy explains investment strategy in a podcast with TV9 Kannada

ಬೆಂಗಳೂರು, ಜನವರಿ 23: ಯಾವುದರಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ರಿಟರ್ನ್ಸ್ ಸಿಗುತ್ತದೆ? ಚಿನ್ನವೋ, ಬೆಳ್ಳಿಯೋ ಅಥವಾ ಷೇರುಗಳೋ ಎಂದು ಯಾರಾದರೂ ಕೇಳಿದರೆ ಏನು ಹೇಳಬಹುದು? ಕಳೆದ ಒಂದು ವರ್ಷದಿಂದ ಮಾತ್ರವೇ ಮಾರುಕಟ್ಟೆಯನ್ನು ಗಮನಿಸುತ್ತಿರುವವರು ಯಾರಾದರೂ ಇದ್ದರೆ ಅವರು ಥಟ್ಟನೆ ಹೇಳುವ ಹೆಸರು ಬೆಳ್ಳಿ ಅಥವಾ ಚಿನ್ನ. ಆದರೆ, ದೀರ್ಘಾವಧಿಯಲ್ಲಿ, ಅಂದರೆ ಐದಾರು ದಶಕಗಳಿಂದ ಮಾರುಕಟ್ಟೆಗಳಲ್ಲಿ ಇನ್ವೆಸ್ಟ್​ಮೆಂಟ್ ಮಾಡುತ್ತಿರುವವರನ್ನು ಕೇಳಿದಾಗ ಷೇರುಪೇಟೆಯ ಹೆಸರು ಸೂಚಿಸುತ್ತಾರೆ. ಟಿವಿ9 ಪಾಡ್​ಕ್ಯಾಸ್ಟ್​ವೊಂದರಲ್ಲಿ ಮಾತನಾಡುತ್ತಿದ್ದ ಹೂಡಿಕೆ ತಜ್ಞ ರುದ್ರಮೂರ್ತಿ (Rudra Murthy) ಅವರು ಅಂಕಿ ಅಂಶ ಸಮೇತ ಯಾವ್ಯಾವ ಹೂಡಿಕೆಗೆ ಎಷ್ಟು ರಿಟರ್ನ್ ಬಂದಿದೆ ಎಂಬುದರ ಮಾಹಿತಿ ನೀಡಿದ್ದಾರೆ.

1986ರಲ್ಲಿ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನ ಸೆನ್ಸೆಕ್ಸ್ ಸೂಚ್ಯಂಕ 100 ಅಂಕಗಳೊಂದಿಗೆ ಆರಂಭವಾಯಿತು. ಇವತ್ತು ಅದು 88,000 ಅಂಕಗಳನ್ನು ದಾಟಿದೆ. ಈ 40 ವರ್ಷದಲ್ಲಿ ಅದು ಕೊಟ್ಟಿರುವ ರಿಟರ್ನ್ ಶೇ. 82,000. ಇದೇ ವೇಳೆ, ಚಿನ್ನದ ಬೆಲೆ 1986ರಲ್ಲಿ 10 ಗ್ರಾಮ್​ಗೆ 2,150 ರೂ ಇತ್ತು. ಇವತ್ತು ಅದು 1,50,000 ರೂ ದಾಟಿದೆ. ಬೆಳ್ಳಿ 1986ರಲ್ಲಿ ಒಂದು ಕಿಲೋಗೆ 4,000 ರೂ ಇತ್ತು. ಇವತ್ತು ಅದರ ಬೆಲೆ 3.60 ಲಕ್ಷ ರೂ ಆಗಿದೆ. ಚಿನ್ನ ಮತ್ತು ಬೆಳ್ಳಿ ಕ್ರಮವಾಗಿ ಶೇ. 7,000 ಮತ್ತು ಶೇ. 8,000 ರಿಟರ್ನ್ಸ್ ಕೊಟ್ಟಿವೆ. ಅಂದರೆ ಚಿನ್ನ ಮತ್ತು ಬೆಳ್ಳಿ ಕೊಟ್ಟಿರುವುದಕ್ಕಿಂತ ಸೆನ್ಸೆಕ್ಸ್ ಹತ್ತು ಪಟ್ಟು ಹೆಚ್ಚು ಲಾಭ ಕೊಟ್ಟಿದೆ ಎನ್ನುವ ಅಂಶವನ್ನು ರುದ್ರಮೂರ್ತಿ ತಿಳಿಸಿದ್ದಾರೆ.

ಹೂಡಿಕೆ ಮಾಡಬೇಕೆನ್ನುವವರು ದೀರ್ಘಾವಧಿಯಲ್ಲಿ ಯಾವ ಸರಕು ಎಷ್ಟು ಉತ್ತಮ ಸಾಧನೆ ತೋರಿದೆ ಎಂಬುದನ್ನು ಗಮನಿಸಿ ಹೂಡಿಕೆ ಮಾಡಬೇಕು ಎಂಬುದು ರುದ್ರ ಮೂರ್ತಿ ಅವರ ಸಲಹೆ.

ಇದನ್ನೂ ಓದಿ: Gold Rate Today Bangalore: 10 ಗ್ರಾಮ್ ಚಿನ್ನದ ಬೆಲೆ 5,400 ರೂ ಏರಿಕೆ

ಚಿನ್ನ, ಬೆಳ್ಳಿ ಬೆಲೆ ಏರಲು ಏನು ಕಾರಣ?

ರುದ್ರಮೂರ್ತಿ ಅವರ ಪ್ರಕಾರ ಚಿನ್ನದ ಬೆಲೆ ಏರಲು ಪ್ರಮುಖ ಕಾರಣಗಳಲ್ಲಿ ಡೊನಾಲ್ಡ್ ಟ್ರಂಪ್ ಅವರ ನೀತಿ ಒಂದು. ಜಾಗತಿಕ ಅನಿಶ್ಚಿತ ಸ್ಥಿತಿ ಮತ್ತೊಂದು ಕಾರಣ. ಸೆಂಟ್ರಲ್ ಬ್ಯಾಂಕುಗಳು ಹೆಚ್ಚೆಚ್ಚು ಚಿನ್ನ ಖರೀದಿಸುತ್ತಿರುವುದೂ ಮಗದೊಂದು ಕಾರಣ.

ಬೆಳ್ಳಿ ಬೆಲೆ ಇನ್ನೂ ಹೆಚ್ಚಿನ ವೇಗದಲ್ಲಿ ಏರಲು ಕಾರಣ ಎಂದರೆ ಅದರ ಕೈಗಾರಿಕೆ ಬಳಕೆ. ಎಐ ಪೋಷಿಸಲು ಬೇಕಾದ ಸರ್ವರ್, ಇವಿ ವಾಹನ, ಸೋಲಾರ್ ಪ್ಯಾನಲ್ ಇತ್ಯಾದಿಗಳ ತಯಾರಿಕೆಗೆ ಸಿಲ್ವರ್ ಅಗತ್ಯ. ಹೀಗಾಗಿ, ಬೆಳ್ಳಿ ಬೆಲೆ ಒಂದು ವರ್ಷದಲ್ಲಿ ಎರಡು ಪಟ್ಟು ಹೆಚ್ಚಾಗಿದೆ ಎನ್ನುತ್ತಾರೆ ರುದ್ರಮೂರ್ತಿ.

ದೇಶದ ಜಿಡಿಪಿಗಿಂತ ಹೆಚ್ಚಿನ ಮೌಲ್ಯದ ಚಿನ್ನ ಹೊಂದಿದ್ದಾರೆ ಸಾಮಾನ್ಯ ಜನರು

ರುದ್ರಮೂರ್ತಿ ಮತ್ತೊಂದು ಕುತೂಹಲಕಾರಿ ಅಂಶವನ್ನು ಎತ್ತಿ ತೋರಿಸಿದ್ದಾರೆ. ಭಾರತದ ಸೆಂಟ್ರಲ್ ಬ್ಯಾಂಕ್ ಆದ ಆರ್​ಬಿಐ ಬಳಿ 880 ಟನ್ ಚಿನ್ನ ಇದೆ. ಆದರೆ, ಸಾಮಾನ್ಯ ಭಾರತೀಯ ಜನರ ಬಳಿ 34,500 ಟನ್ ಚಿನ್ನ ಇದೆ. ಇದನ್ನು ಇವತ್ತಿನ ಬೆಲೆಗೆ ಹೋಲಿಸಿದರೆ ಇವುಗಳ ಒಟ್ಟು ಮೌಲ್ಯ 5.7 ಟ್ರಿಲಿಯನ್ ಡಾಲರ್ ಆಗುತ್ತದೆ. ಭಾರತದ ಷೇರು ಮಾರುಕಟ್ಟೆಯ ಒಟ್ಟು ಗಾತ್ರ ಸುಮಾರು 4 ಟ್ರಿಲಿಯನ್ ಡಾಲರ್​ಗಿಂತ ತುಸು ಹೆಚ್ಚಿರಬಹುದು. ಜನರ ಬಳಿ ಇದಕ್ಕೂ ಹೆಚ್ಚಿನ ಮೌಲ್ಯದ ಚಿನ್ನ ಇದೆ.

ಇದನ್ನೂ ಓದಿ: ಸುಕನ್ಯಾ ಸಮೃದ್ಧಿ ಯೋಜನೆಗೆ 11 ವರ್ಷ; ಈವರೆಗೆ ಶುರುವಾಗಿದ್ದು ನಾಲ್ಕೂವರೆ ಕೋಟಿ ಅಕೌಂಟ್; ಸ್ಕೀಮ್ ಲಾಭಗಳೇನು?

ಕಾಪರ್, ಅಲೂಮಿನಿಯಮ್ ಮೇಲೆ ಹೂಡಿಕೆ ಮಾಡಬಹುದಾ?

ಕಾಪರ್ ಮತ್ತು ಅಲೂಮಿಯಮ್​ಗಳು ಭವಿಷ್ಯದ ಬೆಳ್ಳಿ ಎಂದು ರುದ್ರಮೂರ್ತಿ ಬಣ್ಣಿಸುತ್ತಾರೆ. ಚಿನ್ನ ಮತ್ತು ಸಿಲ್ವರ್​ಗಳಲ್ಲಿ ಇಟಿಎಫ್ ಮೂಲಕ ಹೂಡಿಕೆ ಮಾಡಬಹುದು. ಆದರೆ, ಕಾಪರ್ ಮತ್ತು ಅಲೂಮಿನಿಯಮ್​ಗೆ ಇಟಿಎಫ್​ಗಳಿಲ್ಲ. ತಾಮ್ರದ ಮೇಲೆ ಹೂಡಿಕೆ ಮಾಡಬೇಕೆನ್ನುವವರು ಹಿಂದೂಸ್ತಾನ್ ಕಾಪರ್ ಎನ್ನುವ ತಾಮ್ರ ತಯಾರಕ ಕಂಪನಿಯ ಷೇರಿನ ಮೇಲೆ ಹೂಡಿಕೆ ಮಾಡಬಹುದು. ನಾಲ್ಕೋ, ಹಿಂಡಾಲ್ಕೋ ಇತ್ಯಾದಿ ಅಲೂಮಿನಿಯಂ ತಯಾರಕ ಕಂಪನಿಗಳ ಷೇರುಗಳ ಮೇಲೆ ಬೇಕಾದರೆ ಹೂಡಿಕೆ ಮಾಡಬಹುದು. ಅಥವಾ ನಿಫ್ಟಿ ಮೆಟಲ್ ಇಂಡೆಕ್ಸ್​ನಲ್ಲಿ ಹೂಡಿಕೆ ಮಾಡಬಹುದು ಎಂದು ರುದ್ರ ಮೂರ್ತಿ ಅವರು ಟಿವಿ9 ಪಾಡ್​ಕ್ಯಾಸ್ಟ್​ನಲ್ಲಿ ಸಲಹೆ ಕೊಡುತ್ತಾರೆ.

ಮಾಲತೇಶ್ ಅವರೊಂದಿಗಿನ ಪಾಡ್​ಕ್ಯಾಸ್ಟ್​ನ ವಿಡಿಯೋ ಲಿಂಕ್ ಇಲ್ಲಿದೆ:

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಇಂದಿರಾ’ ಶೀರ್ಷಿಕೆಯಲ್ಲಿ ಹೊಸ ಸಿನಿಮಾ; ಟೈಟಲ್ ಬಗ್ಗೆ ಸ್ಪಷ್ಟನೆ ನೀಡಿದ ಚಿತ್ರತಂಡ – Kannada News | New Kannada movie titled Indira But not a political film

ಇಂದಿನ ತಲೆಮಾರಿನ ಪ್ರೇಕ್ಷಕರನ್ನು ಗಮನದಲ್ಲಿ ಇಟ್ಟುಕೊಂಡು ‘ಇಂದಿರಾ’ ಸಿನಿಮಾ (Indira Movie) ನಿರ್ಮಾಣ ಮಾಡಲಾಗುತ್ತಿದೆ. ಈ ಚಿತ್ರದಲ್ಲಿ ಜೆನ್ ಜೀ (Gen Z) ಜೀವನ ಶೈಲಿಯ ಕುರಿತ ಕಥೆ ಇರಲಿದೆ. ಈ ತಲೆಮಾರಿನ ಯುವಕರ ಅಂಗೈಯಲ್ಲಿ ಯಾವಾಗಲೂ ಸ್ಮಾರ್ಟ್‌ ಪೋನ್‌ ಇರುತ್ತದೆ. ಈ ತಂತ್ರಜ್ಞಾನವನ್ನು ಹೇಗೆಲ್ಲ ಬಳಸಿಕೊಳ್ಳಲಾಗುತ್ತಿದೆ? ಹೇಗೆಲ್ಲ ಬಳಸಿಕೊಳ್ಳಬಹುದು ಎಂಬ ಕಥೆಯನ್ನು ‘ಇಂದಿರಾ’ ಸಿನಿಮಾ ಮೂಲಕ ಹೇಳಲಾಗುವುದು. ಈ ಹಿಂದೆ ‘ರಾವೆನ್‌’ ಸಿನಿಮಾ ನಿರ್ದೇಶಿಸಿದ್ದ ವೇದ್‌ ಅವರು ಈಗ ‘ಇಂದಿರಾ’ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

‘ಕಿರಣ್‌ ಫಿಲ್ಮ್ಸ್’ ಮೂಲಕ ಕಿರಣ್‌ ಕುಮಾರ್‌ ಎಂ. ಅವರು ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಟೈಟಲ್ ಬಗ್ಗೆ ಅವರು ಸ್ಪಷ್ಟನೆ ನೀಡಿದರು. ‘ಇಂದಿರಾ ಎಂಬ ಶೀರ್ಷಿಕೆ ಇದ್ದರೂ ಕೂಡ ಈ ಸಿನಿಮಾಕ್ಕೂ ಇಂದಿರಾ ಗಾಂಧಿಯವರಿಗೂ ಯಾವುದೇ ಸಂಬಂಧವಿಲ್ಲ. ಇದು ರಾಜಕೀಯ ಕಥೆಯಾಧಾರಿತ ಸಿನಿಮಾವಲ್ಲ. ಆದರೆ ಸಿನಿಮಾದ ಕಥೆಯಲ್ಲಿ ಇಂದಿನ ಹಲವು ವಿದ್ಯಮಾನಗಳ ಬಗ್ಗೆ ಚರ್ಚಿಸುತ್ತಿದ್ದೇವೆ. ಸಿನಿಮಾದ ಕಥೆಗೆ ತಕ್ಕಂತೆ ಪವರ್‌ಫುಲ್‌ ಟೈಟಲ್‌ ಇರಬೇಕೆಂಬ ಕಾರಣಕ್ಕೆ ಈ ಹೆಸರಿಡಲಾಗಿದೆ’ ಎಂದು ಅವರು ಹೇಳಿದ್ದಾರೆ.

‘ಇಂದಿನ ಜೆನ್‌ ಜೀ ಪ್ರೇಕ್ಷಕರಿಗೆ ಕನೆಕ್ಟ್‌ ಆಗುವ ಸಿನಿಮಾ ಇದಾಗಿರುವುದರಿಂದ, ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಈ ಸಿನಿಮಾ ನಿರ್ಮಿಸುತ್ತಿದ್ದೇವೆ. ಕನ್ನಡದ ಜೊತೆಗೆ ಇತರ ಭಾಷೆಗಳಲ್ಲೂ ಈ ಸಿನಿಮಾವನ್ನು ತೆರೆಗೆ ತರುವ ಯೋಜನೆಯಿದೆ. ಈಗಾಗಲೇ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಪೂರ್ಣಗೊಂಡಿದ್ದು, ಇದೇ ವರ್ಷಾಂತ್ಯಕ್ಕೆ ಸಿನಿಮಾವನ್ನು ತೆರೆಗೆ ತರುವ ಯೋಚನೆಯಲ್ಲಿದ್ದೇವೆ’ ಎಂದು ನಿರ್ಮಾಪಕರು ಹೇಳಿದರು.

‘ಇದೊಂದು ಮಹಿಳಾ ಪ್ರಧಾನ ಕಥಾಹಂದರದ ಸಿನಿಮಾ. ಹಾಗಾಗಿ ಸಿನಿಮಾಕ್ಕೆ ಇಂದಿರಾ ಎಂದು ಹೆಸರಿಟ್ಟಿದ್ದೇವೆ. ಈ ಸಿನಿಮಾದಲ್ಲಿ ಮನರಂಜನೆಯ ಜೊತೆಗೆ ಸಮಾಜಕ್ಕೆ ಒಂದು ಸಂದೇಶ ಕೂಡ ಇರಲಿದೆ’ ಎಂದು ನಿರ್ದೇಶಕ ವೇದ್‌ ಅವರು ಹೇಳಿದ್ದಾರೆ. ರವಿವರ್ಮ ಅವರು ಛಾಯಾಗ್ರಹಣ ಹಾಗೂ ಧನುಶ್‌ ಅವರು ಸಂಕಲನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಇದನ್ನೂ ಓದಿ: ಜಿಯೋ ಹಾಟ್‌ಸ್ಟಾರ್‌ ಒಟಿಟಿಯಲ್ಲಿ ‘ಮಾರ್ಕ್‌’: ಜ.23ರಿಂದ 4 ಭಾಷೆಗಳಲ್ಲಿ ಪ್ರಸಾರ

‘ಇಂದಿರಾ’ ಸಿನಿಮಾದ ಮುಖ್ಯ ಪಾತ್ರಕ್ಕೆ ಕನ್ನಡದ ಜನಪ್ರಿಯ ನಟಿಯೊಬ್ಬರನ್ನು ಕರೆತರುವ ಪ್ಲ್ಯಾನ್ ಚಿತ್ರತಂಡಕ್ಕೆ ಇದೆ. ಅದು ಯಾರು ಎಂಬುದು ನಂತರದ ದಿನಗಳಲ್ಲಿ ತಿಳಿಯಲಿದೆ. ಮಾರ್ಚ್‌ ತಿಂಗಳ ಕೊನೆಯೊಳಗೆ ಕಲಾವಿದರು ಮತ್ತು ತಂತ್ರಜ್ಞರನ್ನು ಅಂತಿಮಗೊಳಿಸಿ, ಶೂಟಿಂಗ್ ಆರಂಭಿಸಲಾಗುವುದು. ಟೈಟಲ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾ.ಮ. ಹರೀಶ್‌, ಟಿ.ಪಿ. ಸಿದ್ಧರಾಜು, ನಿತ್ಯಾನಂದ ಪ್ರಭು, ಭಾ.ಮ. ಗಿರೀಶ್‌, ದೇವ್ ದೇವಯ್ಯ ಮುಂತಾದವರು ಆಗಮಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version