ಮೈಸೂರು, ಮಾರ್ಚ್ 30: ಜಿಲ್ಲೆಯ ಸರಗೂರು ತಾಲೂಕಿನ ನುಗು ಜಲಾಶಯದ ಬಳಿ ಕಾಡಿನಿಂದ ನಾಡಿಗೆ ಬಂದ ಕಾಡಾನೆಗಳು ಮುಖ್ಯ ರಸ್ತೆಗೆ ನುಗ್ಗಿ ಕೆಲಕಾಲ ಆತಂಕ ಸೃಷ್ಟಿಸಿವೆ. ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಓಡಿಸಲು ಮುಂದಾದ ವೇಳೆ, ಕಾಡಾನೆಗಳು ಜೀಪ್ ಮೇಲೆ ದಾಳಿ ನಡೆಸಿ ಜಖಂಗೊಳಿಸಿವೆ. ಅದೃಷ್ಟವಶಾತ್ ಜೀಪ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಳಿಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕಾಡಾನೆಗಳನ್ನು ಮತ್ತೆ ಕಾಡಿಗೆ ಹಿಂತಿರುಗಿಸಿದ್ದಾರೆ.
ಕಲಬುರಗಿ, ಮಾರ್ಚ್ 30: ಕಲಬುರಗಿ (Kalaburagi) ಜಿಲ್ಲೆಯಲ್ಲಿ ರೈತರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಬೆಳೆ ನಷ್ಟ ಅನುಭವಿಸಿದ್ದ ರೈತರು ಹಿಂಗಾರು ಹಾಗೂ ಬೇಸಿಗೆ ಬೆಳೆಗಳ ಮೂಲಕ ಬದುಕು ಕಟ್ಟಿಕೊಳ್ಳಬೇಕೆಂದು ನಿರೀಕ್ಷೆ ಇಟ್ಟಿದ್ದರು. ಆದರೆ ಇದೀಗ ‘ಕಸ್ಕೂಟಾ’ ಎಂಬ ರೋಗದಿಂದ ಬೆಳೆಗಳು ನಾಶವಾಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಚಿಂಚೋಳಿ ತಾಲೂಕಿನ ಗಾರಂಪಳ್ಳಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈ ಸಮಸ್ಯೆ ಗಂಭೀರವಾಗಿ ಕಾಣಿಸಿಕೊಂಡಿದೆ. ರೈತರು ತಮ್ಮ ಜಮೀನಿನಲ್ಲಿ ಒಣಗಿ ಹೋಗಿರುವ ತೊಗರಿ ಬೆಳೆಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ತೊಗರಿ, ಈರುಳ್ಳಿ ಸೇರಿದಂತೆ ಹಲವು ಬೆಳೆಗಳಿಗೆ ಕಸ್ಕೂಟಾ ಎಂಬ ರೋಗ ಆವರಿಸಿ ಬೆಳೆಗಳನ್ನು ಸಂಪೂರ್ಣವಾಗಿ ಹಾಳು ಮಾಡುತ್ತಿದೆ ಎಂದು ರೈತರು ತಿಳಿಸಿದ್ದಾರೆ.
ಈ ಭಾಗದ ರೈತರು ಈ ಬಾರಿ ಅತಿಯಾದ ಮಳೆಯಿಂದ ಮುಂಗಾರು ಬೆಳೆಗಳನ್ನು ಕಳೆದುಕೊಂಡಿದ್ದರು. ಸಾಲ ಮಾಡಿ ಬೆಳೆದ ಬೆಳೆ ಹಾಳಾದ ಕಾರಣ, ಸಾಲ ತೀರಿಸಲು ಹಾಗೂ ಕುಟುಂಬದ ಜೀವನ ಸಾಗಿಸಲು ಹಿಂಗಾರು ಮತ್ತು ಬೇಸಿಗೆ ಬೆಳೆಗಳ ಮೇಲೆ ನಿರೀಕ್ಷೆ ಇಟ್ಟಿದ್ದರು. ಆದರೆ ಈಗ ಬೆಳೆಗಳು ಕೈಗೆ ಬರುತ್ತವೆ ಎನ್ನುವಷ್ಟರಲ್ಲಿ ಕಸ್ಕೂಟಾ ರೋಗ ವ್ಯಾಪಕವಾಗಿ ಹರಡಿದ್ದು, ಜಮೀನಿನಲ್ಲಿ ಬೆಳೆದಿರುವ ಬೆಳೆಗಳನ್ನು ನಿಂತಲ್ಲೇ ಒಣಗಿಸುತ್ತಿದೆ.
ಸಾಲ ಮಾಡಿ ಬೆಳೆ ಬೆಳೆದ ರೈತರಿಗೆ ಈ ರೋಗ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಹಿಂಗಾರು ಹಾಗೂ ತೋಟಗಾರಿಕೆ ಬೆಳೆಗಳಿಗೂ ಹಾನಿ ಉಂಟಾಗಿರುವುದರಿಂದ ರೈತರು ಆತಂಕಕ್ಕೊಳಗಾಗಿದ್ದಾರೆ. ಸರ್ಕಾರ ತಕ್ಷಣ ರೈತರ ಸಮಸ್ಯೆಗೆ ಸ್ಪಂದಿಸಿ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಇಲ್ಲವಾದರೆ ಸಾಲದ ಒತ್ತಡದಿಂದ ಬದುಕು ಸಾಗಿಸಲು ಕಷ್ಟವಾಗುತ್ತದೆ ಎಂದು ತಮ್ಮ ಅಸಹಾಯತೆಯನ್ನು ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಚಿಂಚೋಳಿ, ಚಿತ್ತಾಪುರ ಮತ್ತು ಸೇಡಂ ತಾಲೂಕುಗಳಲ್ಲಿನ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಬೆಳೆಗಳಿಗೆ ಈ ರೋಗದಿಂದ ಹಾನಿಯಾಗಿದೆ. ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ರೋಗದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.
ಕೃಷಿ ವಿಜ್ಞಾನಿಗಳು ನಡೆಸಿದ ಅಧ್ಯಯನದ ಪ್ರಕಾರ, ಇದು ವಿದೇಶದಿಂದ ಹರಡಿರುವ ರೋಗವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಈ ಕುರಿತು ಸರ್ಕಾರಕ್ಕೆ ವರದಿ ಕೂಡ ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ. ಆದರೆ ರೋಗ ತಡೆಗಟ್ಟಲು ಯಾವುದೇ ಕ್ರಿಮಿನಾಶಕ ಅಥವಾ ಔಷಧಿಯನ್ನು ಇನ್ನೂ ನೀಡಿಲ್ಲವೆಂದು ರೈತರು ದೂರಿದ್ದಾರೆ.
ಕಳೆದ ವಾರ ಜಿಲ್ಲಾ ಉಸ್ತುವಾರಿ ಸಚಿವರು ಚಿಂಚೋಳಿ ಭೇಟಿ ನೀಡಿದ ವೇಳೆ ರೈತರು ತಮ್ಮ ಸಮಸ್ಯೆಯನ್ನು ಅವರ ಗಮನಕ್ಕೆ ತಂದಿದ್ದರು. ಆದರೂ ಮೂರು ತಾಲೂಕಿನ ರೈತರಿಗೆ ಇನ್ನೂ ಯಾವುದೇ ಸ್ಪಷ್ಟ ಪರಿಹಾರ ದೊರೆತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಸರ್ಕಾರ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಬೌಲಿಂಗ್ ಮಾಡದಂತೆ ಕ್ಯಾಮರೋನ್ ಗ್ರೀನ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಬಂಧ ಹೇರಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ಪರ ಕಣಕ್ಕಿಳಿಯುತ್ತಿರುವ ಗ್ರೀನ್ ಫಿಟ್ನೆಸ್ ಸಮಸ್ಯೆಯಿಂದ ಬಳುತ್ತಿದ್ದು, ಹೀಗಾಗಿ ಕೇವಲ ಬ್ಯಾಟರ್ ಆಗಿ ಕಣಕ್ಕಿಳಿಯುವಂತೆ ಸೂಚಿಸಲಾಗಿದೆ.
ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ಕ್ಯಾಮರೋನ್ ಗ್ರೀನ್ ಅವರನ್ನು ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಬರೋಬ್ಬರಿ 25.20 ಕೋಟಿ ರೂ.ಗೆ ಖರೀದಿಸಿದೆ. ಆದರೆ ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಅವರು ಬೌಲಿಂಗ್ ಮಾಡಿರಲಿಲ್ಲ.
ಇದಕ್ಕೆ ಮುಖ್ಯ ಕಾರಣ ಕ್ರಿಕೆಟ್ ಆಸ್ಟ್ರೇಲಿಯಾದ ಸೂಚನೆ. ಅಂದರೆ ಬೆನ್ನು ನೋವಿನಿಂದ ಬಳಲುತ್ತಿರುವ ಕ್ಯಾಮರೋನ್ ಗ್ರೀನ್ಗೆ ಬೌಲಿಂಗ್ ಮಾಡಲು ಎನ್ಒಸಿ ನೀಡಲಾಗಿಲ್ಲ. ಸಂಪೂರ್ಣ ಫಿಟ್ನೆಸ್ ಸಾಧಿಸುವರೆಗೆ ಕೇವಲ ಬ್ಯಾಟರ್ ಆಗಿ ಆಡುವಂತೆ ಸೂಚಿಸಲಾಗಿದೆ.
2024ರ ಕೊನೆಯಲ್ಲಿ ಅವರು ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರ ದೀರ್ಘಕಾಲದ ಫಿಟ್ನೆಸ್ ಕಾಪಾಡಿಕೊಳ್ಳಲು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ (CA) ಅವರ ಬೌಲಿಂಗ್ ಮೇಲೆ ಸದ್ಯಕ್ಕೆ ನಿರ್ಬಂಧ ಹೇರಿದೆ.
ಇದಾಗ್ಯೂ ಐಪಿಎಲ್ನ ದ್ವಿತಿಯಾರ್ಧದ ವೇಳೆಗೆ ಅವರು ಸಂಪೂರ್ಣವಾಗಿ ಫಿಟ್ನೆಸ್ ಸಾಧಿಸಲಿದ್ದಾರೆ ಎಂದು ತಿಳಿದು ಬಂದಿದೆ. ಅಂದರೆ ಏಪ್ರಿಲ್ ಎರಡನೇ ವಾರದ ವೇಳೆಗೆ ಅವರು ಬೌಲಿಂಗ್ ಆರಂಭಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಹೀಗಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆರಂಭಿಕ ಪಂದ್ಯಗಳಲ್ಲಿ ಕ್ಯಾಮರೋನ್ ಗ್ರೀನ್ ಕೇವಲ ಬ್ಯಾಟರ್ ಆಗಿ ಮಾತ್ರ ಕಣಕ್ಕಿಳಿಯಲಿದ್ದಾರೆ. ಅತ್ತ ಅನುಭವಿ ವೇಗಿಗಳ ಕೊರತೆ ಎದುರಿಸುತ್ತಿರುವ ಕೆಕೆಆರ್ ತಂಡಕ್ಕೆ ಗ್ರೀನ್ ಅವರ ಫಿಟ್ನೆಸ್ ಸಮಸ್ಯೆಯು ಹಿನ್ನಡೆಯಾಗಿ ಪರಿಣಮಿಸಿರುವುದು ಸುಳ್ಳಲ್ಲ.
ಧಾರವಾಡ, ಮಾರ್ಚ್ 30: ಕೇಂದ್ರ ಕಾರಾಗೃಹದಲ್ಲಿ ಪೋಕ್ಸೊ ಪ್ರಕರಣದ ಆರೋಪಿಯೊಬ್ಬ ಜೈಲಿನಿಂದಲೇ ಅಪ್ರಾಪ್ತ ಬಾಲಕಿಗೆ ವಿಡಿಯೋ ಕರೆ ಮಾಡಿ ನಿರಂತರ ಕಿರುಕುಳ ನೀಡಿರುವ ಘಟನೆ ವರದಿಯಾಗಿದೆ. ಈ ಆರೋಪಿಯು ಬಾಲಕಿಗೆ ಬೆದರಿಕೆ ಹಾಕುತ್ತಾ, ನ್ಯಾಯಾಲಯದಲ್ಲಿ ತನ್ನ ಪರವಾಗಿ ಮಾತನಾಡಲು ಒತ್ತಾಯಿಸಿದ್ದಾನೆ. ಆರೋಪಿಯು ತನ್ನ ಕೈ ಮೇಲೆ ಸಂತ್ರಸ್ತೆಯ ಹೆಸರನ್ನು ಬರೆದುಕೊಂಡು ವಿಡಿಯೋ ಕರೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಈ ಘಟನೆಯು ಜೈಲುಗಳಲ್ಲಿ ಮೊಬೈಲ್ ಫೋನ್ಗಳ ಸುಲಭ ಲಭ್ಯತೆ ಮತ್ತು ಬಳಕೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪೊಲೀಸ್ ಅಧಿಕಾರಿಗಳು ಜೈಲುಗಳಲ್ಲಿ ಮೊಬೈಲ್ಗಳ ಬಳಕೆಗೆ ಅವಕಾಶವಿಲ್ಲ ಎಂದು ಪದೇ ಪದೇ ಹೇಳುತ್ತಿರುತ್ತಾರೆ. ಆದರೆ, ಈ ಪ್ರಕರಣವು ಇದಕ್ಕೆ ವ್ಯತಿರಿಕ್ತವಾದ ಚಿತ್ರಣವನ್ನು ನೀಡಿದೆ. ಲವ್ ಜಿಹಾದ್ ಆರೋಪವೂ ಕೇಳಿಬಂದಿರುವ ಈ ಪ್ರಕರಣದ ಆರೋಪಿಯು ಬಾಲಕಿಗೆ ನಿರಂತರವಾಗಿ ಹಿಂಸೆ ನೀಡುತ್ತಿದ್ದು, ಆಕೆಯ ಕುಟುಂಬ ಆತಂಕಗೊಂಡಿದೆ. ಜೈಲಾಧಿಕಾರಿಗಳ ಸಹಾಯವಿಲ್ಲದೆ ಇಂತಹ ಕೃತ್ಯ ಅಸಾಧ್ಯ ಎಂದು ಕುಟುಂಬದವರು ಆರೋಪಿಸಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಶುಭಾರಂಭ ಮಾಡಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 20 ಓವರ್ಗಳಲ್ಲಿ 220 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ (78) ಹಾಗೂ ರಯಾನ್ ರಿಕೆಲ್ಟನ್ (81) ಸ್ಫೋಟಕ ಅರ್ಧಶತಕ ಬಾರಿಸಿದರು. ಈ ಹಾಫ್ ಸೆಂಚುರಿಗಳ ನೆರವಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡವು 19.1 ಓವರ್ಗಳಲ್ಲಿ 224 ರನ್ಗಳಿಸಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಈ ಗೆಲುವಿನ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ ಹಾಗೂ ರಯಾನ್ ರಿಕೆಲ್ಟನ್ ಅವರ ಬ್ಯಾಟಿಂಗ್ ವೈಖರಿಯನ್ನು ಹಾಡಿ ಹೊಗಳಿದ್ದಾರೆ. ಅದರಲ್ಲೂ ಹಿಟ್ಮ್ಯಾನ್ನ ಸಿಡಿಲಬ್ಬರದ ಬ್ಯಾಟಿಂಗ್ಗೆ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ಪಾಂಡ್ಯ, ಐಪಿಎಲ್ ಸೀಸನ್ನ ಮೊದಲ ಪಂದ್ಯದಲ್ಲಿ ಗೆಲ್ಲಲು ನಾವು 13 ವರ್ಷಗಳಿಂದ ಕಾಯುತ್ತಿದ್ದೆವು. ಇದೀಗ ಈ ಕಾಯುವಿಕೆ ಕೊನೆಗೊಂಡಿರುವುದು ಸಂತಸದ ವಿಷಯ. ಅದು ಸಹ ಬೃಹತ್ ಮೊತ್ತವನ್ನು ಬೆನ್ನತ್ತಿ ಗೆದ್ದಿರುವುದು ಖುಷಿಯ ವಿಚಾರ.
ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಪವರ್ಪ್ಲೇನಲ್ಲಿ ಬ್ಯಾಟಿಂಗ್ ಮಾಡಿದ ರೀತಿ ನೋಡಿಯೇ ನಮಗೆ ಈ ಪಿಚ್ ಬ್ಯಾಟಿಂಗ್ ಸ್ನೇಹಿ ಎಂಬುದು ನಮಗೆ ತಿಳಿದಿತ್ತು. ಇದಾಗ್ಯೂ ನಾವು ಕೆಕೆಆರ್ 240, 250 ರನ್ಗಳಿಸದಂತೆ ತಡೆಯುವುದು ನಮ್ಮ ಉದ್ಧೇಶವಾಗಿತ್ತು. ಏಕೆಂದರೆ 240 ಕ್ಕಿಂತ ಹೆಚ್ಚಿನ ಮೊತ್ತ ಗಳಿಸಿದರೆ ಚೇಸ್ ಮಾಡುವುದು ಸುಲಭವಲ್ಲ.
ಅದರಂತೆ ನಮ್ಮ ಬೌಲರ್ಗಳು ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 220 ರನ್ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಈ ಮೊತ್ತವನ್ನು ಚೇಸ್ ಮಾಡಬಹುದು ಎಂಬ ನಂಬಿಕೆಯಿತ್ತು. ಇದಕ್ಕಾಗಿ ನಾವು ಉತ್ತಮ ಆರಂಭ ಪಡೆಯಬೇಕಿತ್ತು. ಅಂತಹದೊಂದು ಆರಂಭವನ್ನು ರೋಹಿತ್ ಶರ್ಮಾ ಹಾಗೂ ರಯಾನ್ ರಿಕೆಲ್ಟನ್ ಒದಗಿಸಿದ್ದರು.
ರೋಹಿತ್ ಶರ್ಮಾ ಕೆಲ ಅತ್ಯುತ್ತಮ ಹೊಡೆತಗಳನ್ನು ಬಾರಿಸಿದ್ದರು. ಇದೇ ವೇಳೆ ರಿಕೆಲ್ಟನ್ ಕೂಡ ಅದ್ಭುತವಾಗಿ ಆಡಿದ್ದರು. ನಾನು ಕೆಲ ಬ್ಯಾಟ್ಸ್ಮನ್ಗಳು ಅದ್ಭುತ ಹೊಡೆತಗಳನ್ನು ಬಾರಿಸುವುದನ್ನುನೋಡಿದ್ದೇನೆ. ಆದರೆ ರೋಹಿತ್ ಶರ್ಮಾ ಅವರ ಶಾಟ್ಗಳನ್ನು ನೋಡುವಾಗ, ಎಲ್ಲರೂ ಬಾಯಿ ಬಿಟ್ಟುಕೊಂಡಿರುತ್ತಾರೆ. ಅಂತಹದೊಂದು ಅಸಾಧಾರಣ ಬ್ಯಾಟಿಂಗ್.
ರೋಹಿತ್ ಶರ್ಮಾನ ಬ್ಯಾಟಿಂಗ್ ನೋಡಿದ್ರೇನೇ ಗೊತ್ತಾಗುತ್ತದೆ. ಅವರು ಎಂತಹ ಆಟಗಾರ ಎಂಬುದು. ಅವರು ಪ್ರದರ್ಶನವನ್ನು ಅಸಾಧಾರಣ, ಅದ್ಭುತ ಎನ್ನುವುದಕ್ಕಿಂತ ಕಡಿಮೆ ಏನೂ ಇಲ್ಲ. ರೋಹಿತ್ ಶರ್ಮಾ ಅವರ ಈ ಸಿಡಿಲಬ್ಬರದ ಬ್ಯಾಟಿಂಗ್ ನೋಡಿ ನನಗಂತು ತುಂಬಾ ಖುಷಿಯಾಗಿದೆ.
ಹಾಗೆಯೇ ಈ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಕೂಡ ಉತ್ತಮ ಬೌಲಿಂಗ್ ಮಾಡಿದ್ದರು. ಈ ಸೀಸನ್ ಆರಂಭಕ್ಕೂ ಮುನ್ನವೇ ನಾನು ಅವನಿಗೆ ಹೇಳಿದ್ದೆ, ‘ಫ್ರಾಂಚೈಸಿಗಳನ್ನು ಬದಲಿಸುವುದು ಸಾಕು. ನಿಮ್ಮ ವೃತ್ತಿಜೀವನದ ಉಳಿದ ಭಾಗ ಇಲ್ಲಿಯೇ ಇರಬೇಕೆಂದು ನಾನು ಬಯಸುತ್ತೇನೆ’ ಎಂದು. ಇದೀಗ ಮುಂಬೈ ಇಂಡಿಯನ್ಸ್ನಲ್ಲಿ ಸಿಕ್ಕ ಅವಕಾಶವನ್ನು ಶಾರ್ದೂಲ್ ಬಳಸಿಕೊಂಡಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ 13 ವರ್ಷಗಳ ಬಳಿಕ ಮೊದಲ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ತಂಡ ಗೆದ್ದಿರುವುದು ನಿಜಕ್ಕೂ ಖುಷಿ ಕೊಟ್ಟಿದೆ. ಇದೇ ಪ್ರದರ್ಶನವನ್ನು ಮುಂದಿನ ಪಂದ್ಯಗಳಲ್ಲೂ ಮುಂದುವರೆಸುವ ವಿಶ್ವಾಸವಿದೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.
ಜೈಪುರ, ಮಾರ್ಚ್ 30: ಗುಬಾಬಿ ಆನೆ ಮೇಲೆ ಗುಲಾಬಿ ಸುಂದರಿಯೊಬ್ಬಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಕ್ರೋಶಕ್ಕೂ ಕಾರಣವಾಗಿದೆ. ಜೈಪುರದಲ್ಲಿ ಜೂಲಿಯಾ ಬುರುಲೆವಾ ಎಂಬಾಕೆ ಆನೆಗೆ ಗುಲಾಬಿ ಬಣ್ಣ ಬಳಿದು, ತಾನೂ ಗುಲಾಬಿ ಬಣ್ಣ ಹಚ್ಚಿಕೊಂಡು ಫೋಟೊ ಶೂಟ್ ಮಾಡಿಕೊಂಡಿದ್ದಾಳೆ. ವಿದೇಶಿಯರಿಗೆ ಭಾರತದಲ್ಲಿ ಏನಾದರೂ ಮಾಡಲು ಅವಕಾಶವಿದೆಯೇ, ಬೇರೆ ಯಾವುದೇ ದೇಶದಲ್ಲಿ ಕಾನೂನಿನಡಿಯಲ್ಲಿ ಇಂಥಾ ಕೆಲಸಕ್ಕೆ ಅನುಮತಿ ಇದೆಯೇ. ಕೆಲವೊಮ್ಮೆ ಇಲ್ಲಿನ ನಿಯಮಗಳು ಸಾಮಾನ್ಯ ಜನರಿಗೆ ಮಾತ್ರ ಅಸ್ತಿತ್ವದಲ್ಲಿವೆ, ಯಾರಾದರೂ ಬಂದು ನಮ್ಮ ದೇಶದಲ್ಲಿ ಏನು ಬೇಕಾದರೂ ಮಾಡಬಹುದೇ ಎಂದು ಪ್ರಶ್ನೆಗಳನ್ನು ಕೇಳಿದ್ದಾರೆ.
ಬೆಂಗಳೂರು, ಮಾರ್ಚ್ 30: ಮಧ್ಯಪ್ರಾಚ್ಯದಲ್ಲಿ ಯುದ್ಧ ಭಾರತ ಸೇರಿ ಜಗತ್ತಿನ ಬಹುತೇಕ ರಾಷ್ಟ್ರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಕಮರ್ಷಿಯಲ್ ಸಿಲಿಂಡರ್ಗಳ ಅಭಾವದಿಂದಾಗಿ ಕರ್ನಾಟಕವೂ ಸೇರಿ ನಾನಾ ರಾಜ್ಯಗಳು ಹೆಚ್ಚಿನ ಪ್ರಮಾಣದ ತೊಂದರೆಯನ್ನು ಅನುಭವಿಸುತ್ತಿವೆ. ಇದರ ನೇರ ಎಫೆಕ್ಟ್ ಹೋಟೆಲ್ ಉದ್ಯಮಕ್ಕೆ ಆಗಿದ್ದು, ರಾಜ್ಯದ ಬಹುತೇಕ ಹೋಟೆಲ್ಗಳ ಮಾಲಕರು ಭಾರಿ ನಷ್ಟ ಅನುಭವಿಸುತ್ತಿದ್ದಾರೆ. ಕೆಲವರು ಹೋಟೆಲ್ಗಳ ಬಾಗಿಲು ಕ್ಲೋಸ್ ಮಾಡಿದ್ದರೆ, ಇನ್ನು ಕೆಲವರು ಕೆಲ ಸಮಯ ಅಥವಾ ಮೆನು ಕಡಿತ ಮಾಡಿ ಗ್ರಾಹಕರಿಗೆ ಸೇವೆ ನೀಡುತ್ತಿದ್ದಾರೆ. ಸಿಲಿಂಡರ್ ಸಮಸ್ಯೆ ಬಗೆಯರಿಯಬಹುದೆಂಬ ನಿರೀಕ್ಷೆ ಸದ್ಯಕ್ಕೆ ಬಹುತೇಕ ಹುಸಿಯಾಗಿರುವ ಕಾರಣ, ಕೆಲ ಮಾಲಕರು ಅನ್ನ ನೀಡುತ್ತಿದ್ದ ಹೋಟೆಲ್ಗಳನ್ನೇ ಮಾರಲು ಮುಂದಾಗಿದ್ದಾರೆ.
ಎಲ್ಪಿಜಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಕೊರತೆ ಹಿನ್ನೆಲೆ ಹೋಟೆಲ್ ನಡೆಸಲು ಸಾಧ್ಯವಾಗದ ಕಾರಣ ಬೆಂಗಳೂರಿನ 20ರಿಂದ 25 ಹೋಟೆಲ್ಗಳ ಮಾಲೀಕರು ಅವುಗಳನ್ನು ಮಾರಲು ಮುಂದಾಗಿದ್ದಾರೆ ಎಂದು ಹೋಟೆಲ್ ಮಾಲೀಕರ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್ ತಿಳಿಸಿದ್ದಾರೆ. ಸಣ್ಣ ಮತ್ತು ಮಧ್ಯಮ ಹೋಟೆಲ್ ಮಾಲೀಕರಿಗೆ ಭಾರಿ ಸಂಕಷ್ಟಕ್ಕೆ ಸಿಲುಕಿದ್ದು, ಬೆಂಗಳೂರಲ್ಲೇ ಶೇ.25ರಷ್ಟು ಹೋಟೆಲ್ಗಳ ಮಾರಾಟಕ್ಕೆ ಚಿಂತನೆ ನಡೆದಿದೆ. ಸಿಲಿಂಡರ್ ಸಿಗದೆ ಹೋಟೆಲ್ ಮಾಲೀಕರು ಮೆನು ಕಡಿತಗೊಳಿಸಿದ ಕಾರಣಕ್ಕೆ ಗ್ರಾಹಕರ ಸಂಖ್ಯೆ ಇಳಿಕೆಯಾಗಿದೆ. ದೋಸೆ ಕೌಂಟರ್ ಕೂಡ ಬಂದ್ ಆಗಿದ್ದರಿಂದ ಗ್ರಾಹಕರು ಬರ್ತಿಲ್ಲ. ಮತ್ತೊಂದೆಡೆ ಹೋಟೆಲ್ ಉದ್ಯಮ ಕುಸಿತ ಹಾಗೂ ಕೆಲಸ ಕಡಿಮೆ ಇರುವ ಹಿನ್ನೆಲೆ ಸಿಬ್ಬಂದಿಯೂ ತಮ್ಮ ಊರುಗಳಿಗೆ ತೆರಳಿದ್ದಾರೆ. ಈ ಎಲ್ಲ ಕಾರಣಗಳಿಂದ ಕೆಲವರು ಹೋಟೆಲ್ ಮುಚ್ಚುವ ನಿರ್ಧಾರ ಮಾಡರೋದಾಗಿ ಅವರು ತಿಳಿಸಿದ್ದಾರೆ.
ಸಿಲಿಂಡರ್ಗಳ ಅಭಾವದಿಂದಾಗಿ ಕಲಬುರಗಿಯಲ್ಲಿ ಹೋಟೆಲ್ ನಡೆಸೋದು ಕಷ್ಟ ಎಂಬ ಸ್ಥಿತಿ ಉದ್ಭವಿಸಿದೆ. ಹೀಗಿದ್ದರೂ ಗ್ಯಾಸ್ ಏಜೆನ್ಸಿಗಳು ದುಬಾರಿ ಹಣ ಪಡೆದುಕೊಂಡು ಕಾಳ ಸಂತೆಯಲ್ಲಿ ಅವುಗಳನ್ನು ಮಾರುತ್ತಿದ್ದಾರೆ ಎಂದು ಹೋಟೆಲ್, ಬೇಕರಿ ಮತ್ತು ವಸತಿಗೃಹ ಮಾಲೀಕರ ಸಂಘ ಅಲವತ್ತುಕೊಂಡಿದೆ. ಹೋಟೆಲ್ಗಳಿಗೆ ಮೀಸಲಿಟ್ಟ ಸಿಲಿಂಡರ್ಗಳನ್ನು ಈ ರೀತಿ ಮಾರಾಟ ಮಾಡಿದರೆ ನಮ್ಮ ಕತೆ ಏನು ಎಂದು ಪ್ರಶ್ನಿಸಿರುವ ಸಂಘ, ಜಿಲ್ಲಾಡಳಿತ ಕೂಡಲೇ ಸಮಸ್ಯೆ ಪರಿಹರಿಸಲು ಮುಂದಾಗಬೇಕು ಎಂದು ಆಗ್ರಹಿಸಿದೆ.
ಹುಬ್ಬಳ್ಳಿ, ಮಾರ್ಚ್ 30: ಕಮರ್ಷಿಯಲ್ ಟ್ಯಾಕ್ಸ್ ಅಡಿಟ್ ವಿಭಾಗದ ಡಿಸಿ ಭರತ್ ಹೆಗಡೆ ಜಿಎಸ್ಟಿ ಬಾಕಿ ಹೆಸರಿನಲ್ಲಿ ಲಂಚಕ್ಕೆ ಬೇಡಿಕೆ ಇಟ್ಟ ಹಿನ್ನೆಲೆ ಲೋಕಾ (Lokayukta) ಬಲೆಗೆ ಬಿದ್ದಿದ್ದಾರೆ. ಅವರ ಈ ಅವ್ಯವಹಾರದ ಬಗ್ಗೆ ಪೆಟ್ರೋಲ್ ಬಂಕ್ ಮಾಲೀಕರೊಬ್ಬರು ದೂರು ನೀಡಿದ ಹಿನ್ನೆಲೆ ಕಾರ್ಯಾಚರಣೆ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು ಭರತ್ ಹೆಗಡೆಯನ್ನು ಟ್ರ್ಯಾಪ್ ಮಾಡಿದ್ದಾರೆ.
60 ಲಕ್ಷ ರೂ. ಹಣಕ್ಕೆ ಬೇಡಿಕೆ
ಕಮರ್ಷಿಯಲ್ ಟ್ಯಾಕ್ಸ್ ಅಡಿಟ್ ವಿಭಾಗದ ಡೆಪ್ಯುಟಿ ಕಮಿಷನರ್ (DC) ಆಗಿರುವ ಭರತ್ ಹೆಗಡೆ, ರಾಜ್ಯದ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಪ್ರಮುಖ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿ. ತೆರಿಗೆ ಪರಿಶೀಲನೆ (ಆಡಿಟ್), ಜಿಎಸ್ಟಿ ಸಂಬಂಧಿತ ಪ್ರಕರಣಗಳ ಪರಿಶೀಲನೆ ಹಾಗೂ ವ್ಯಾಪಾರಿಗಳ ತೆರಿಗೆ ಬಾಕಿ ವಿಚಾರಗಳನ್ನು ನೋಡಿಕೊಳ್ಳುವುದು ಇವರ ಜವಾಬ್ದಾರಿಯಾಗಿದೆ. ಆದರೆ ಇವರು, ವಿಶ್ವನಾಥ್ ನಾಯಕ್ ಎಂಬ ಪೆಟ್ರೋಲ್ ಬಂಕ್ ಮಾಲೀಕರಿಗೆ 60 ಲಕ್ಷ ರೂ.ಜಿಎಸ್ಟಿ ಹಣ ಕಟ್ಟಬೇಕು ಎಂದು ನೋಟಿಸ್ ನೀಡಿದ್ದಲ್ಲದೆ ಪ್ರಕರಣವನ್ನು ಸುಗಮಗೊಳಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪಗಳು ಕೇಳಿಬಂದಿವೆ.
ಈ ಕುರಿತು ವಿಶ್ವನಾಥ್ ನಾಯಕ್ ಹುಬ್ಬಳ್ಳಿಯಿಂದ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ತೆರಳಿ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸೂಕ್ತ ಯೋಜನೆಯೊಂದಿಗೆ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡಿದ್ದಾರೆ. ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ದೇವರಾಜು ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಬೆಂಗಳೂರಿನಿಂದ ಬಂದ ಆರು ಅಧಿಕಾರಿಗಳ ತಂಡ ಭರತ್ರನ್ನು ಬಲೆಗೆ ಬೀಳಿಸಿದೆ. ಮುಂಜಾನೆ ಸುಮಾರು 11:30ರ ವೇಳೆಗೆ ಹುಬ್ಬಳ್ಳಿ ನವನಗರದಲ್ಲಿರುವ ಕಮರ್ಷಿಯಲ್ ಟ್ಯಾಕ್ಸ್ ಕಚೇರಿಯಲ್ಲಿ ಟ್ರ್ಯಾಪ್ ಕಾರ್ಯಾಚರಣೆ ನಡೆಸಿ ಭರತ್ ಹೆಗಡೆಯನ್ನು ಬಲೆಗೆ ಬೀಳಿಸಲಾಗಿದ್ದು, ಘಟನೆ ನಂತರ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ನವದೆಹಲಿ, ಮಾರ್ಚ್ 30: ಎಚ್ಡಿಎಫ್ಸಿ ಬ್ಯಾಂಕ್, ಬಂಧನ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕುಗಳು ಹೊಸ ಹಣಕಾಸು ವರ್ಷದಿಂದ ಎಟಿಎಂ ಬಳಕೆಯ ನಿಯಮಗಳಲ್ಲಿ (ATM transaction rules) ಬದಲಾವಣೆ ಮಾಡಿವೆ. ಯುಪಿಐ ಆಧಾರಿತ ಎಟಿಎಂ ವಿತ್ಡ್ರಾಯಲ್, ಉಚಿತ ಎಟಿಎಂ ಟ್ರಾನ್ಸಾಕ್ಷನ್ ಮಿತಿ ಇತ್ಯಾದಿ ನಿಯಮಗಳ ಪರಿಷ್ಕರಣೆ ಮಾಡಲಾಗಿದೆ. ಏಪ್ರಿಲ್ 1ರಿಂದ ಈ ಹೊಸ ಎಟಿಎಂ ಟ್ರಾನ್ಸಾಕ್ಷನ್ ನಿಯಮಗಳು ಚಾಲನೆಗೆ ಬರಲಿವೆ.
ಎಚ್ಡಿಎಫ್ಸಿ ಬ್ಯಾಂಕ್ ಎಟಿಎಂ ನಿಯಮಗಳು
ಎಚ್ಡಿಎಫ್ಸಿ ಬ್ಯಾಂಕ್ ತನ್ನ ಹಲವು ಎಟಿಎಂಗಳಲ್ಲಿ ಯುಪಿಐ ಆಧಾರಿತ ಕ್ಯಾಷ್ ವಿತ್ಡ್ರಾಯಲ್ ಸೌಲಭ್ಯ ನೀಡುತ್ತದೆ. ಯುಪಿಐ ಮೂಲಕ ಎಟಿಎಂನಲ್ಲಿ ಮಾಡಲಾಗುವ ಪ್ರತೀ ಟ್ರಾನ್ಸಾಕ್ಷನ್ ಅನ್ನೂ ಮಾಮೂಲಿಯ ಎಟಿಎಂ ಟ್ರಾನ್ಸಾಕ್ಷನ್ ಎಂದೇ ಪರಿಗಣಿಸಲಾಗುತ್ತದೆ. ಅಂದರೆ, ಎಟಿಎಂ ಫ್ರೀ ಯೂಸೇಜ್ ಲಿಮಿಟ್ ಲೆಕ್ಕಾಚಾರಕ್ಕೆ ಇದು ಬರುತ್ತದೆ.
ಎಚ್ಡಿಎಫ್ಸಿ ಬ್ಯಾಂಕ್ನ ಗ್ರಾಹಕರು ಆ ಬ್ಯಾಂಕ್ನ ಎಟಿಎಂಗಳಲ್ಲಿ ತಿಂಗಳಿಗೆ ಐದು ಬಾರಿ ಕ್ಯಾಷ್ ವಿತ್ಡ್ರಾ ಮಾಡಿದರೆ ಶುಲ್ಕ ಇರುವುದಿಲ್ಲ. ನೀವು ಎಟಿಎಂ ಕಾರ್ಡ್ ಬಳಸಿ ತಿಂಗಳಿಗೆ ಐದು ಬಾರಿ ಕ್ಯಾಷ್ ವಿತ್ಡ್ರಾ ಮಾಡುತ್ತೀರಿ. ನಂತರ ಯುಪಿಐ ಬಳಸಿ ಎಟಿಎಂನಲ್ಲಿ ಒಮ್ಮೆ ಕ್ಯಾಷ್ ವಿತ್ಡ್ರಾ ಮಾಡುತ್ತೀರಿ. ಆಗ ನಿಮ್ಮ ಎಟಿಎಂ ಟ್ರಾನ್ಸಾಕ್ಷನ್ ಸಂಖ್ಯೆ 6ಕ್ಕೆ ಏರುತ್ತದೆ. ಇದು ಐದು ಉಚಿತ ಟ್ರಾನ್ಸಾಕ್ಷನ್ ಮಿತಿ ಮೀರಿದಂತಾಗುತ್ತದೆ. ಪ್ರತೀ ಹೆಚ್ಚುವರಿ ಟ್ರಾನ್ಸಾಕ್ಷನ್ಗೆ 23 ರೂ ಶುಲ್ಕ ಇರುತ್ತದೆ.
ಬಂಧನ್ ಬ್ಯಾಂಕ್ ಎಟಿಎಂ ಟ್ರಾನ್ಸಾಕ್ಷನ್ ಮಿತಿ ಪರಿಷ್ಕರಣೆ
ಬಂಧನ್ ಬ್ಯಾಂಕ್ನ ಎಟಿಎಂಗಳಲ್ಲಿ ಅದರ ಗ್ರಾಹಕರು ತಿಂಗಳಿಗೆ ಐದು ಬಾರಿ ಉಚಿತವಾಗಿ ಹಣದ ಟ್ರಾನ್ಸಾಕ್ಷನ್ ಮಾಡಬಹುದು. ಹಣಕಾಸು ಅಲ್ಲದ ಟ್ರಾನ್ಸಾಕ್ಷನ್ಗಳಿಗೆ ಮಿತಿ ಇಲ್ಲ. ಬೆಂಗಳೂರು, ಹೈದರಾಬಾದ್ ಸೇರಿದಂತೆ ಆರು ಮೆಟ್ರೋ ನಗರಗಳಲ್ಲಿ ಬೇರೆ ಬ್ಯಾಂಕ್ ಎಟಿಎಂಗಳಾದರೆ ಮೂರು ಉಚಿತ ಟ್ರಾನ್ಸಾಕ್ಷನ್ಗೆ ಅವಕಾಶ ಇದೆ. ಮೆಟ್ರೋ ಅಲ್ಲದ ನಗರಗಳಲ್ಲಿ ಐದು ಉಚಿತ ಟ್ರಾನ್ಸಾಕ್ಷನ್ಗೆ ಅವಕಾಶ ಇದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಬೇರೆ ಬೇರೆ ಡೆಬಿಟ್ ಕಾರ್ಡ್ಗಳಿಗೆ ದಿನದ ವಿತ್ಡ್ರಾಯಲ್ ಮಿತಿಯಲ್ಲಿ ಬದಲಾವಣೆ ಮಾಡಿದೆ. ಅದರ ಪ್ಲಾಟಿನಂ, ಗೋಲ್ಡ್ ಮತ್ತು ಬ್ಯುಸಿನೆಸ್ ಡೆಬಿಟ್ ಕಾರ್ಡ್ಗಳಿಂದ ಎಟಿಎಂಗಳಲ್ಲಿ ಕ್ಯಾಷ್ ವಿತ್ಡ್ರಾ ಮಾಡುವ ಮಿತಿಯನ್ನು ಒಂದು ಲಕ್ಷ ರೂನಿಂದ 50,000 ರೂಗೆ ಇಳಿಸಿದೆ.
ಪಿಎನ್ಬಿಯ ಸಿಗ್ನೇಚರ್ ಡೆಬಿಟ್ ಕಾರ್ಡ್ಗಳಾದರೆ ದಿನದ ವಿತ್ಡ್ರಾಯಲ್ ಮಿತಿ 1.5 ಲಕ್ಷ ರೂನಿಂದ 75,000 ರೂಗೆ ಇಳಿಯಲಿದೆ. ಮೇಲೆ ತಿಳಿಸಿದ ವಿವಿಧ ಬ್ಯಾಂಕುಗಳ ಹೊಸ ಎಟಿಎಂ ಟ್ರಾನ್ಸಾಕ್ಷನ್ ನಿಯಮಗಳು ಏಪ್ರಿಲ್ 1ರಿಂದ ಚಾಲನೆಗೆ ಬರಲಿವೆ.
IPL 2026: ಮೊದಲ ಮ್ಯಾಚ್ನಲ್ಲಿ ಭರ್ಜರಿ ಜಯ ಸಾಧಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ತನ್ನ ಎರಡನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವನ್ನು ಎದುರಿಸಲಿದೆ. ಏಪ್ರಿಲ್ 5 ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಸಿಎಸ್ಕೆ ತಂಡದ ಸ್ಟಾರ್ ಆಟಗಾರ ಮಹೇಂದ್ರ ಸಿಂಗ್ ಧೋನಿ (MS Dhoni) ಅಲಭ್ಯರಾಗಲಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಸ್ನಾಯು ಸೆಳೆತದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಇಂದು (ಮಾ.30) ನಡೆಯಲಿರುವ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಇನ್ನು ಏಪ್ರಿಲ್ 5 ರಂದು ನಡೆಯಲಿರುವ ಆರ್ಸಿಬಿ ವಿರುದ್ಧದ ಮ್ಯಾಚ್ನಿಂದಲೂ ಹೊರಗುಳಿಯುವುದು ಖಚಿತವಾಗಿದೆ.
ಸ್ನಾಯು ಸೆಳೆತದ ಕಾರಣದಿಂದಾಗಿ ಎಂಎಸ್ ಧೋನಿ ಕನಿಷ್ಠ ಎರಡು ವಾರಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಸಿಎಸ್ಕೆ ಮ್ಯಾನೇಜ್ಮೆಂಟ್ ತಿಳಿಸಿದೆ. ಅಂದರೆ ಕನಿಷ್ಠ 6 ಪಂದ್ಯಗಳಿಂದ ಅವರು ಹೊರಗುಳಿಯುವುದು ಬಹುತೇಕ ಖಚಿತವಾಗಿದೆ.
ಎಂಎಸ್ ಧೋನಿ ಅನುಪಸ್ಥಿತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿಕೆಟ್ ಕೀಪರ್ ಜವಾಬ್ದಾರಿಯನ್ನು ಸಂಜು ಸ್ಯಾಮ್ಸನ್ ನಿರ್ವಹಿಸಲಿದ್ದಾರೆ. ಅಂದರೆ ಸಂಜು ಸ್ಯಾಮ್ಸನ್ ಸಿಎಸ್ಕೆ ಪರ ವಿಕೆಟ್ ಕೀಪರ್-ಬ್ಯಾಟರ್ ಆಗಿ ಪಾದಾರ್ಪಣೆ ಮಾಡಲಿದ್ದಾರೆ.
ಇನ್ನು ಸಂಪೂರ್ಣ ಫಿಟ್ನೆಸ್ ಸಾಧಿಸಿದರೆ ಮಹೇಂದ್ರ ಸಿಂಗ್ ಧೋನಿ ಏಪ್ರಿಲ್ 23 ರಂದು ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಬಹುದು. ಅಂದರೆ ಧೋನಿ ಕನಿಷ್ಠ 6 ಮ್ಯಾಚ್ಗಳನ್ನು ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ.