ಈ ಸಲನೂ ಕಪ್ ನಮ್ದೆ: ಈ ಲೆಕ್ಕಾಚಾರಕ್ಕಿದೆ ಬಲವಾದ ಕಾರಣ! – Kannada News | Why History Says RCB Will Win IPL 2026

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲ್​ಗೇರಿದೆ. ಅದರಂತೆ ಮೇ 31 ರಂದು ನಡೆಯಲಿರುವ ಫೈನಲ್​ ಪಂದ್ಯದಲ್ಲಿ ಆರ್​ಸಿಬಿ ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಲಿದೆ. ಇಲ್ಲಿ ಆರ್​ಸಿಬಿ ಎದುರಾಳಿಯಾಗಿ ಬರಲಿರುವುದು ಯಾರು ಎಂಬುದೇ ಕುತೂಹಲ.

ಏಕೆಂದರೆ ಇದೀಗ ಫೈನಲ್ ರೇಸ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್, ರಾಜಸ್ಥಾನ್ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್​ ತಂಡಗಳಿವೆ. ಈ ಮೂರು ತಂಡಗಳಲ್ಲಿ ಒಂದು ಟೀಮ್ ಇಂದು ಹೊರಬೀಳಲಿದೆ. ಅಂದರೆ ಎಲಿಮಿನೇಟರ್ ಪಂದ್ಯವಾಡಲಿರುವ ಸನ್​ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳಲ್ಲಿ ಒಂದು ಟೀಮ್​ನ ಐಪಿಎಲ್ ಅಭಿಯಾನ ಇಂದು ಅಂತ್ಯಗೊಳ್ಳಲಿದೆ. ಇದಾದ ಬಳಿಕ ದ್ವಿತೀಯ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಈ ಮ್ಯಾಚ್​ನಲ್ಲಿ ಗೆಲ್ಲುವ ತಂಡ ಫೈನಲ್​ಗೇರಲಿದೆ.

ಹೀಗೆ ಯಾರೇ ಬಂದರೂ ಈ ಬಾರಿ ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರುವ ರಣ ಉತ್ಸಾಹದಲ್ಲಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. ಇದಕ್ಕೆ ಕೇವಲ ತಂಡದ ಪ್ರಸ್ತುತ ಫಾರ್ಮ್ ಮಾತ್ರವಲ್ಲ, ಕಳೆದ 8 ಸೀಸನ್‌ಗಳ ಐಪಿಎಲ್ ಇತಿಹಾಸವೂ ಬೆನ್ನಿಗಿದೆ.

ಅಂದರೆ ಕಳೆದ 8 ವರ್ಷಗಳ ಐಪಿಎಲ್ ಪ್ಲೇಆಫ್​ ಇತಿಹಾಸವನ್ನು ಗಮನಿಸಿದರೆ, ಕ್ವಾಲಿಫೈಯರ್-1 ಪಂದ್ಯದಲ್ಲಿ ಗೆದ್ದ ತಂಡವೇ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಬಾರಿ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದಿರುವುದು ಆರ್​ಸಿಬಿ. ಹೀಗಾಗಿಯೇ ಈ ಸಲ ಕೂಡ ಕಪ್ ನಮ್ದೇ ಎನ್ನುತ್ತಿದ್ದಾರೆ ಆರ್​ಸಿಬಿ ಅಭಿಮಾನಿಗಳು.

ಕಳೆದ 8 ವರ್ಷಗಳ ಇತಿಹಾಸ!

  1. 2025: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಕ್ವಾಲಿಫೈಯರ್ 1 ವಿನ್ನರ್)
  2. 2024: ಕೊಲ್ಕತ್ತಾ ನೈಟ್ ರೈಡರ್ಸ್ (ಕ್ವಾಲಿಫೈಯರ್ 1 ವಿನ್ನರ್)
  3. 2023: ಚೆನ್ನೈ ಸೂಪರ್ ಕಿಂಗ್ಸ್ (ಕ್ವಾಲಿಫೈಯರ್ 1 ವಿನ್ನರ್)
  4. 2022: ಗುಜರಾತ್ ಟೈಟಾನ್ಸ್ (ಕ್ವಾಲಿಫೈಯರ್ 1 ವಿನ್ನರ್)
  5. 2021: ಚೆನ್ನೈ ಸೂಪರ್ ಕಿಂಗ್ಸ್ (ಕ್ವಾಲಿಫೈಯರ್ 1 ವಿನ್ನರ್)
  6. 2020: ಮುಂಬೈ ಇಂಡಿಯನ್ಸ್ (ಕ್ವಾಲಿಫೈಯರ್ 1 ವಿನ್ನರ್)
  7. 2019: ಮುಂಬೈ ಇಂಡಿಯನ್ಸ್ (ಕ್ವಾಲಿಫೈಯರ್ 1 ವಿನ್ನರ್)
  8. 2018: ಚೆನ್ನೈ ಸೂಪರ್ ಕಿಂಗ್ಸ್ (ಕ್ವಾಲಿಫೈಯರ್ 1 ವಿನ್ನರ್)

ಇದನ್ನೂ ಓದಿ: Rajat Patidar: ಒಂದು ಪರೀಕ್ಷೆ ನಡೆಸಬೇಕಿತ್ತು, ಅದಕ್ಕಾಗಿ ಆತನನ್ನು ಕಣಕ್ಕಿಳಿಸಿದೆವು!

2018 ರಿಂದ 2025 ರವರೆಗೆ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದ ತಂಡಗಳೇ ಐಪಿಎಲ್​​ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಬಾರಿ ಮೊದಲ ಕ್ವಾಲಿಫೈಯರ್ ಮ್ಯಾಚ್ ಗೆದ್ದಿರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು. ಹೀಗಾಗಿ ಈ ಸಲನೂ ಕಪ್ ನಮ್ದೇ ಎನ್ನಬಹುದು.

Published On – 12:57 pm, Wed, 27 May 26

Source link

ಹುಬ್ಬಳ್ಳಿ-ಧಾರವಾಡ ಪಾಲಿಕೆ ವಿಭಜನೆ: ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಷರತ್ತುಬದ್ಧ ಅನುಮೋದನೆ – Kannada News | Hubballi Dharwad Bifurcation: Governor Thawarchand Gehlot Gives Conditional Approval for Separate Dharwad Civic Body

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆImage Credit source: One India

ಧಾರವಾಡ, ಮೇ 27: ಅವಳಿ ನಗರದ ಜನರಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (HDMC) ವಿಭಜನೆ ಪ್ರಸ್ತಾವನೆಗೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಮಹತ್ವದ ಷರತ್ತುಬದ್ಧ ಅನುಮೋದನೆ ನೀಡಿದ್ದಾರೆ. ಆದರೆ, ರಾಜ್ಯಪಾಲರು ವಿಧಿಸಿರುವ ಕಠಿಣ ನಿಬಂಧನೆಗಳಿಂದಾಗಿ ಪ್ರತ್ಯೇಕ ಪಾಲಿಕೆ ರಚನೆಯ ಕಡತ ಸದ್ಯಕ್ಕೆ ರಾಜ್ಯ ಸರ್ಕಾರಕ್ಕೆ ವಾಪಸ್ ಹೋಗಿದ್ದು, ಧಾರವಾಡಿಗರ ಹೋರಾಟ ಮತ್ತೊಂದು ತಿರುವು ಪಡೆದುಕೊಂಡಿದೆ.

ಮುಖ್ಯಾಂಶಗಳು

  • ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಪ್ರಸ್ತಾವನೆಗೆ ರಾಜ್ಯಪಾಲರ ಷರತ್ತುಬದ್ಧ ಅನುಮೋದನೆ.
  • ರಾಷ್ಟ್ರೀಯ ಜನಗಣತಿ ಪ್ರಕ್ರಿಯೆ ಮುಗಿಯುವವರೆಗೆ ಪಾಲಿಕೆ ವಿಭಜನೆ ಜಾರಿಗೆ ಬರುವುದಿಲ್ಲ.
  • ವಿಭಜನೆಯಿಂದ ಕೇಂದ್ರದ ಹಣಕಾಸು ಆಯೋಗದ ಭಾರಿ ಅನುದಾನ ಕೈತಪ್ಪುವ ಭೀತಿಯಿದೆ.

ಬೆಂಗಳೂರು ಬಿಟ್ಟರೆ ರಾಜ್ಯದಲ್ಲೇ ಅತ್ಯಂತ ದೊಡ್ಡದಾದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಧಾರವಾಡವನ್ನು ಪ್ರತ್ಯೇಕಿಸಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಹುಬ್ಬಳ್ಳಿಗೇ ಹೆಚ್ಚಿನ ಅನುದಾನ ಸಿಗುತ್ತಿದೆ ಎಂಬ ಅಸಮಾಧಾನದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಕಳೆದ ವರ್ಷ ಧಾರವಾಡ ಪ್ರತ್ಯೇಕ ಪಾಲಿಕೆ ಘೋಷಿಸಿದ್ದರು. ಆದರೆ ಈಗ ಈ ಪ್ರಕ್ರಿಯೆಗೆ ಕಾನೂನು ಮತ್ತು ತಾಂತ್ರಿಕ ಒಳಸುಳಿಗಳು ಎದುರಾಗಿವೆ.

ರಾಜ್ಯಪಾಲರು ವಿಧಿಸಿರುವ ಪ್ರಮುಖ ಷರತ್ತುಗಳೇನು?

ರಾಜ್ಯಪಾಲರು ಪ್ರಸ್ತಾವನೆಯನ್ನು ಪುರಸ್ಕರಿಸಿದ್ದರೂ, ಅದನ್ನು ತಕ್ಷಣ ಜಾರಿಗೆ ತರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  • ಸದಸ್ಯರ ಅವಧಿ ಪೂರ್ಣಗೊಳ್ಳಬೇಕು: ಪ್ರಸ್ತುತ ಇರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚುನಾಯಿತ ಸದಸ್ಯರ 5 ವರ್ಷಗಳ ಅಧಿಕಾರ ಅವಧಿ ಪೂರ್ಣಗೊಂಡ ನಂತರವೇ ವಿಭಜನೆ ಜಾರಿಗೆ ಬರಬೇಕು.
  • ಜನಗಣತಿ ನಿರ್ದೇಶನಾಲಯದ ಅಡ್ಡಿ: 2026ರ ಜನವರಿ 1ರಿಂದ 2027ರ ಮಾರ್ಚ್ 31ರವರೆಗೆ ಯಾವುದೇ ಆಡಳಿತಾತ್ಮಕ ಘಟಕಗಳ ಗಡಿ ಬದಲಾಯಿಸಬಾರದು ಎಂದು ಜನಗಣತಿ ನಿರ್ದೇಶನಾಲಯ ಸೂಚಿಸಿದೆ. ಹಾಗಾಗಿ, ರಾಷ್ಟ್ರೀಯ ಜನಗಣತಿ ಪ್ರಕ್ರಿಯೆ ಮುಗಿಯುವವರೆಗೆ ಈ ವಿಭಜನೆಯ ಅಧಿಸೂಚನೆ ಜಾರಿ ಮಾಡುವಂತಿಲ್ಲ.
  • ಆರ್ಥಿಕ ನೆರವಿನ ಸವಾಲು: ವಿಭಜನೆಯ ನಂತರ ಎರಡೂ ಪಾಲಿಕೆಗಳಿಗೆ ಆರ್ಥಿಕ ನಷ್ಟವಾಗದಂತೆ ಆದಾಯ ಹಂಚಿಕೆ ಮಾಡಲು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಪಾಲರು ಕಡತವನ್ನು ಸರ್ಕಾರಕ್ಕೆ ಹಿಂತಿರುಗಿಸಿದ್ದಾರೆ.

56 ಸಾವಿರ ಕೋಟಿ ಅನುದಾನಕ್ಕೆ ಕಂಟಕ?

ಕೇಂದ್ರದಿಂದ ಬರುವ ಸುಮಾರು 56,000 ಕೋಟಿ ರೂ. ಅನುದಾನ ಸಿಗಬೇಕಾದರೆ ಪಾಲಿಕೆ ವ್ಯಾಪ್ತಿಯಲ್ಲಿ ಕನಿಷ್ಠ 10 ಲಕ್ಷದಿಂದ 40 ಲಕ್ಷ ಜನಸಂಖ್ಯೆ ಇರಬೇಕು. ಒಂದು ವೇಳೆ ಅವಳಿ ನಗರ ವಿಭಜನೆಯಾದರೆ, ಹುಬ್ಬಳ್ಳಿ ಮತ್ತು ಧಾರವಾಡ ಎರಡರಲ್ಲೂ ಜನಸಂಖ್ಯೆ 10 ಲಕ್ಷಕ್ಕಿಂತ ಕೆಳಗೆ ಇಳಿಯುತ್ತದೆ.

ಇದನ್ನೂ ಓದಿ ಹುಬ್ಬಳ್ಳಿ-ಧಾರವಾಡ ಪಾಲಿಕೆ ವಿಭಜನೆಗೆ ಬಿಜೆಪಿಯಿಂದ ಹೊಸ ತಗಾದೆ: ಇಲ್ಲಿದೆ ಅಸಲಿ ಕಾರಣ

ಇದರಿಂದಾಗಿ ಕೇಂದ್ರದ ಭಾರಿ ಮೊತ್ತದ ಅನುದಾನ ಕೈತಪ್ಪಿ, ಎರಡೂ ನಗರಗಳ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ ಎನ್ನುವುದು ಬಿಜೆಪಿ ಸದಸ್ಯರ ವಾದವಾಗಿದೆ. ರಾಜಕೀಯ ಮೇಲಾಟ ಹಾಗೂ ತಾಂತ್ರಿಕ ಸಂಕಷ್ಟಗಳ ನಡುವೆಯೂ ಧಾರವಾಡದ ಪ್ರತ್ಯೇಕ ಪಾಲಿಕೆಗಾಗಿ ಹೋರಾಟ ಸಮಿತಿ ತನ್ನ ಹೋರಾಟವನ್ನು ಮುಂದುವರಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:01 pm, Wed, 27 May 26

Source link

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನಿರ್ಧಾರದ ಬೆನ್ನಲ್ಲೇ ಆಪ್ತ ಸಚಿವರಿಗೆ ಶುರುವಾಯ್ತು ಟೆನ್ಷನ್ – Kannada News | Siddaramaiahs Firm Decision to Resign: Ministers Plead for Delay Over Pending Work

ಬೆಂಗಳೂರು, ಮೇ.27: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದಿಢೀರ್ ರಾಜೀನಾಮೆ ನಿರ್ಧಾರದಿಂದ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎದ್ದಿದೆ. ದೆಹಲಿಯಿಂದ ಮರಳಿದ ನಂತರ ಸಿದ್ದರಾಮಯ್ಯ ಅವರು ತಮ್ಮ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬದ್ಧರಾಗಿದ್ದಾರೆ. ಇದು ಕೆಲವು ಆಪ್ತ ಸಚಿವರು ಮತ್ತು ಶಾಸಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇಲಾಖೆಗಳಲ್ಲಿ ಬಾಕಿ ಉಳಿದಿರುವ ಹಲವಾರು ಅನುದಾನದ ಆದೇಶಗಳು ಮತ್ತು ಯೋಜನೆಗಳಿಗೆ ಸಿಎಂ ಸಮ್ಮತಿ ಅಗತ್ಯವಿದೆ. ಸಿದ್ದರಾಮಯ್ಯ ಅವರು ತಕ್ಷಣವೇ ರಾಜೀನಾಮೆ ನೀಡಿದರೆ ಈ ಕೆಲಸಗಳು ನಿಂತುಹೋಗುವ ಭೀತಿ ಸಚಿವರನ್ನು ಕಾಡುತ್ತಿದೆ. ಆದ್ದರಿಂದ, ಸಚಿವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಕನಿಷ್ಠ ರಾಜ್ಯಸಭೆ ಚುನಾವಣೆ ಮುಗಿಯುವ ಜೂನ್ 18ರವರೆಗೆ ರಾಜೀನಾಮೆಯನ್ನು ಮುಂದೂಡುವಂತೆ ಮನವಿ ಮಾಡಿದ್ದಾರೆ. ಆದರೆ, ಹೈಕಮಾಂಡ್ ನಾಯಕರ ಸೂಚನೆಯನ್ನು ಒಪ್ಪಿಕೊಂಡಿರುವ ಸಿದ್ದರಾಮಯ್ಯ, ತಮ್ಮ ನಿರ್ಧಾರದಿಂದ ಹಿಂದೆ ಸರಿಯಲು ನಿರಾಕರಿಸಿದ್ದಾರೆ. ಯಾವುದೇ ಒತ್ತಡಕ್ಕೂ ಮಣಿಯದೆ ನಾಳೆಯೇ ರಾಜೀನಾಮೆ ನೀಡುವ ತಮ್ಮ ದೃಢ ನಿಲುವನ್ನು ಅವರು ಸಚಿವರುಗಳಿಗೆ ಸ್ಪಷ್ಟಪಡಿಸಿದ್ದಾರೆ. ಹೊಸ ಫೈಲ್‌ಗಳನ್ನು ಚಲಿಸದಂತೆ ಸೂಚಿಸಿದ್ದಾರೆ. ರಣದೀಪ್ ಸಿಂಗ್ ಸುರ್ಜೆವಾಲಾ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಈ ಕುರಿತು ಮತ್ತಷ್ಟು ಚರ್ಚೆ ನಡೆಯುವ ನಿರೀಕ್ಷೆ ಇದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೊಗ್ಗಿನ ಜಡೆ, ಬಗೆಬಗೆಯ ತಿನಿಸುಗಳು! ಮಗಳಂತೆ ಸಾಕಿದ ಹಸುವಿಗೆ ಶಾಸ್ತ್ರೋಕ್ತವಾಗಿ ಸೀಮಂತ – Kannada News | Kolar Farmer Family Hosts Traditional ‘Seemantha’ Baby Shower for Pregnant Cow

ಕೋಲಾರ, ಮೇ 27: ತಾಲೂಕಿನ ಕಳ್ಳಿಪುರ ಗ್ರಾಮದ ರೈತ ಬಸವರಾಜ್ ಎಂಬುವರ ಕುಟುಂಬವು ತಮ್ಮ ಮನೆಯ ‘ಗೌರಿ’ ಎಂಬ ಹಸು ಗರ್ಭಧರಿಸಿದ ಹಿನ್ನೆಲೆಯಲ್ಲಿ ಅದಕ್ಕೆ ಶಾಸ್ತ್ರೋಕ್ತವಾಗಿ ಸೀಮಂತ ಕಾರ್ಯಕ್ರಮ ಆಯೋಜಿಸಿತ್ತು. ಪ್ರೀತಿಯ ಹಸುವಿಗೆ ಸುಂದರವಾದ ಮೊಗ್ಗಿನ ಜಡೆ ಹಾಕಿ, ಬಗೆಬಗೆಯ ತಿಂಡಿ-ತಿನಿಸುಗಳನ್ನು ನೀಡಿ ಸತ್ಕರಿಸಲಾಯಿತು. ಈ ವಿಶೇಷ ಆಚರಣೆಗೆ ಗ್ರಾಮದ ಮಹಿಳೆಯರನ್ನು ಆಹ್ವಾನಿಸಲಾಗಿತ್ತು. ಹಸುವಿಗೆ ಆರತಿ ಬೆಳಗಿ, ಬಂದ ಮಹಿಳೆಯರಿಗೆ ಸಾಂಪ್ರದಾಯಿಕವಾಗಿ ಅರಿಶಿನ-ಕುಂಕುಮ ಹಾಗೂ ತಾಂಬೂಲ ನೀಡಿ ಸೀಮಂತವನ್ನು ಸಂಭ್ರಮಿಸಲಾಯಿತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Gold Rate: ಬಂಗಾರದ ಬೆಲೆ ಎರಡು ದಿನದಲ್ಲಿ 100 ರೂ ಇಳಿಕೆ – Kannada News | Gold Price Today on 27th May 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಮೇ 27: ಚಿನ್ನದ ಬೆಲೆ ಇವತ್ತೂ ಕಡಿಮೆ ಆಗಿದೆ. ನಿನ್ನೆ 45 ರೂ ತಗ್ಗಿದ್ದ ಇದರ ಬೆಲೆ (Gold Rates) ಇವತ್ತು 55 ರೂ ಇಳಿದಿದೆ. ಎರಡು ದಿನದಲ್ಲಿ ಗ್ರಾಮ್​ಗೆ 100 ರೂ ಕಡಿಮೆ ಆದಂತಾಗಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಬಂಗಾರದ ದರ ಏರಿದೆ. ಇನ್ನೊಂದೆಡೆ, ಬೆಳ್ಳಿ ಬೆಲೆ ನಿಂತ ನೀರಾಗಿದೆ. ಕಳೆದ ಒಂದು ವಾರದಿಂದ ಬೆಲೆಯಲ್ಲಿ ವ್ಯತ್ಯಾಸ ಆಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,45,100 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,58,290 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 28,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,45,100 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 28,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 29,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮೇ 27ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,829 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,510 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,872 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 285 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,829 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,510 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 285 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,510 ರೂ
  • ಚೆನ್ನೈ: 14,650 ರೂ
  • ಮುಂಬೈ: 14,510 ರೂ
  • ದೆಹಲಿ: 14,625 ರೂ
  • ಕೋಲ್ಕತಾ: 14,510 ರೂ
  • ಕೇರಳ: 14,510 ರೂ
  • ಅಹ್ಮದಾಬಾದ್: 14,515 ರೂ
  • ಜೈಪುರ್: 14,525 ರೂ
  • ಲಕ್ನೋ: 14,525 ರೂ
  • ಭುವನೇಶ್ವರ್: 14,510 ರೂ

ಇದನ್ನೂ ಓದಿ: ಎಐನಿಂದ ಸದ್ಯದಲ್ಲೇ ಮನುಷ್ಯರಿಗೆ ಕೆಲಸ ಇಲ್ಲವಾಗುತ್ತೆ ಎನ್ನುತ್ತಿದ್ದ ಸ್ಯಾಮ್ ಆಲ್ಟ್​ಮ್ಯಾನ್ ಬಾಯಿಂದ ಈಗ ಬೇರೆಯೇ ಮಾತು

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 590 ರಿಂಗಿಟ್ (14,246 ರುಪಾಯಿ)
  • ದುಬೈ: 543.75 ಡಿರಾಮ್ (14,176 ರುಪಾಯಿ)
  • ಅಮೆರಿಕ: 148.50 ಡಾಲರ್ (14,199 ರುಪಾಯಿ)
  • ಸಿಂಗಾಪುರ: 196.10 ಸಿಂಗಾಪುರ್ ಡಾಲರ್ (14,713 ರುಪಾಯಿ)
  • ಕತಾರ್: 544.50 ಕತಾರಿ ರಿಯಾಲ್ (14,310 ರೂ)
  • ಸೌದಿ ಅರೇಬಿಯಾ: 560 ಸೌದಿ ರಿಯಾಲ್ (14,295 ರುಪಾಯಿ)
  • ಓಮನ್: 57.20 ಒಮಾನಿ ರಿಯಾಲ್ (14,225 ರುಪಾಯಿ)
  • ಕುವೇತ್: 45.33 ಕುವೇತಿ ದಿನಾರ್ (14,158 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 285 ರೂ
  • ಚೆನ್ನೈ: 295 ರೂ
  • ಮುಂಬೈ: 285 ರೂ
  • ದೆಹಲಿ: 285 ರೂ
  • ಕೋಲ್ಕತಾ: 285 ರೂ
  • ಕೇರಳ: 295 ರೂ
  • ಅಹ್ಮದಾಬಾದ್: 285 ರೂ
  • ಜೈಪುರ್: 285 ರೂ
  • ಲಕ್ನೋ: 285 ರೂ
  • ಭುವನೇಶ್ವರ್: 295 ರೂ
  • ಪುಣೆ: 285

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಯಶ್ ಯಾವಾಗ ಬರ್ತಾರೆ? ಖುದ್ದು ಯಶ್ ಕೊಟ್ಟಿದ್ದಾರೆ ಉತ್ತರ – Kannada News | Yash announce Toxic movie feature in BGMI game

ಯಶ್ (Yash) ನಟನೆಯ ಬಹು ನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ ಬಿಡುಗಡೆ ಎರಡು ಬಾರಿ ಮುಂದೂಡಲ್ಪಟ್ಟಿದೆ. ‘ಟಾಕ್ಸಿಕ್’ ಯಾವಾಗ ಬಿಡುಗಡೆ ಆಗಲಿದೆ ಎಂಬ ಬಗ್ಗೆ ಖಾತ್ರಿಯೂ ಇಲ್ಲ. ಹೊಸ ಬಿಡುಗಡೆ ದಿನಾಂಕ ಇನ್ನೂ ಘೋಷಣೆ ಆಗಿಲ್ಲ. ಈಗ ಯಶ್ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ ಎಂಬ ಮಾಹಿತಿಯೂ ಇಲ್ಲ. ಇದೀಗ ಇದೇ ವಿಷಯವಾಗಿ ಜಾಹೀರಾತೊಂದು ಬಿಡುಗಡೆ ಆಗಿದ್ದು, ಎಲ್ಲರೂ ‘ಯಶ್ ಎಲ್ಲಿ?’ ‘ಯಶ್ ಯಾವಾಗ ಬರ್ತಾರೆ’ ಎಂದು ಹುಡುಕಾಡುತ್ತಿದ್ದಾರೆ. ಅದಕ್ಕೆ ಸ್ವತಃ ಯಶ್ ಉತ್ತರ ಕೊಟ್ಟಿದ್ದಾರೆ.

ಇದೀಗ ‘ಟಾಕ್ಸಿಕ್’ಗೆ ಸಂಬಂಧಿಸಿದ ಜಾಹೀರಾತೊಂದು ಬಿಡುಗಡೆ ಆಗಿದ್ದು, ಜಾಹೀರಾತಿನಲ್ಲಿ ತೋರಿಸಿರುವಂತೆ ಯುವಕರು ‘ಯಶ್ ಯಾವಾಗ ಬರ್ತಾರೆ?’, ‘ಟಾಕ್ಸಿಕ್ ಯಾವಾಗ ಬರುತ್ತೆ’ ಎಂದು ಕೇಳುತ್ತಿದ್ದಾರೆ. ನ್ಯೂಸ್ ಚಾನೆಲ್​​ಗಳಲ್ಲೂ ‘ಯಶ್ ಯಾವಾಗ ಬರ್ತಾರೆ’ ಎಂಬುದೇ ಪ್ರಶ್ನೆ. ಇದಕ್ಕೆ ಖುದ್ದು ಯಶ್ ಉತ್ತರ ಕೊಟ್ಟಿದ್ದು, ‘ಟಾಕ್ಸಿಕ್’ ಬರುತ್ತೆ, ಅದೂ ಧಮಾಕ ಮಾಡಿಕೊಂಡು ಬರುತ್ತೆ, ಆದರೆ ಸ್ವಲ್ಪ ಕಾಯಿರಿ’ ಎಂದಿದ್ದಾರೆ. ಆದರೆ ಯಶ್ ಮಾತ್ರ ನಾಳೆಯೇ ಬರುತ್ತಿದ್ದಾರೆ. ಬಿಜಿಎಂಐ (ಬ್ಯಾಟಲ್​​ಗ್ರೌಂಡ್ ಮೊಬೈಲ್ ಇಂಡಿಯಾ) ಮೂಲಕ.

‘ಟಾಕ್ಸಿಕ್’ ಇದೀಗ ಭಾರತದ ಬಲು ಜನಪ್ರಿಯ ಆನ್​​ಲೈನ್ ಗೇಮ್ ಆಗಿರುವ ಬಿಜಿಎಂಐ ಜೊತೆ ಕೊಲ್ಯಾಬರೇಟ್ ಆಗಿದ್ದು, ಬಿಜಿಎಂಐನ ‘ಟಾಕ್ಸಿಕ್’ ವರ್ಷನ್ ಇದೀಗ ಡೌನ್​​ಲೊಡ್​​ಗೆ ಲಭ್ಯವಿದೆ. ಈ ಹೊಸ ಗೇಮ್​​ನಲ್ಲಿ ‘ಟಾಕ್ಸಿಕ್’ ಸಿನಿಮಾನಲ್ಲಿ ಬಳಸಿದ ಆಯುಧಗಳು ಸಿಗಲಿವೆ. ಜೊತೆಗೆ ಯಶ್ ಅವರ ಧ್ವನಿಯೂ ಸಹ ಗೇಮ್​​ನಲ್ಲಿ ಇರಲಿದೆ. ‘ಟಾಕ್ಸಿಕ್’ ಚಲನಚಿತ್ರದ ಥೀಮ್ ಆಧಾರಿತ ವಿಶೇಷ ಸ್ಕಿನ್‌ಗಳು ಮತ್ತು ಔಟ್‌ಫಿಟ್‌ಗಳು ಲಭ್ಯವಿರಲಿವೆ. ಯಶ್ ಅವರ ವಿಶಿಷ್ಟ ಶೈಲಿಯ ಹೇರ್‌ಸ್ಟೈಲ್, ಉಡುಪು ಮತ್ತು ಆಕ್ಷನ್ ಮ್ಯಾನರಿಸಂಗಳನ್ನು ಗೇಮ್‌ನಲ್ಲಿ ಅಳವಡಿಸಲಾಗಿದೆಯಂತೆ.

ಈ ಹಿಂದಿನ ಅಪ್‌ಡೇಟ್‌ಗಳಲ್ಲಿ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ, ಶಾರುಖ್ ಖಾನ್ ಅವರ ಧ್ವನಿ ಕೇಳುತ್ತಿತ್ತು. ಹೊಸ ಆವೃತ್ತಿಯಲ್ಲಿ ಯಶ್ ಅವರ ಖಡಕ್ ಧ್ವನಿ ಸಹ ಇರಲಿದೆ. ‘ಎನಿಮೀಸ್ ಅಹೆಡ್’, ‘ಫಾಲೋ ಮಿ’ ಇನ್ನಿತರೆ ಗೇಮ್ ಕಮಾಂಡ್​​ಗಳು ಯಶ್ ಅವರ ಖಡಕ್ ಧ್ವನಿಯಲ್ಲಿ ಕೇಳಬಹುದಾಗಿದೆ. ಯಶ್ ಅಭಿಮಾನಿಗಳಿಗಂತೂ ಇದು ಹಬ್ಬವೇ ಸರಿ. ಬಿಜಿಎಂಐ ಹೊಸ ಅಪ್​​ಡೇಟ್​​ನ ಗೇಮ್ ಆಡುವವರು ವಿಶೇಷ ‘ಟಾಕ್ಸಿಕ್’ ಕ್ರೇಟ್‌ಗಳನ್ನು ಅನ್‌ಲಾಕ್ ಮಾಡಬಹುದು. ಇದರಲ್ಲಿ ಚಿತ್ರದ ಪೋಸ್ಟರ್‌ಗಳಲ್ಲಿ ಕಾಣಿಸಿಕೊಂಡಿರುವ ರೀತಿಯ ಗನ್‌ ಸ್ಕಿನ್‌ಗಳು ಮತ್ತು ಡ್ರೆಸ್‌ಗಳು ಇರಲಿವೆ. ಗೇಮ್​ ಜೊತೆಗೆ ಯಶ್ ಅವರ ಸಹಯೋಗವನ್ನು ಸೆಲೆಬ್ರೇಟ್ ಮಾಡಲು ಗೇಮ್‌ನಲ್ಲಿ ಸಣ್ಣ ಪುಟ್ಟ ಮಿಷನ್‌ಗಳನ್ನು ನೀಡಲಾಗುತ್ತದೆ. ಈ ಮಿಷನ್‌ಗಳನ್ನು ಪೂರ್ಣಗೊಳಿಸಿದರೆ ಉಚಿತವಾಗಿ ಯಶ್ ಸಂಬಂಧಿತ ರಿವಾರ್ಡ್‌ಗಳನ್ನು ಪಡೆಯಬಹುದಾಗಿರುತ್ತದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

NeGD Summer Internship 2026: ಕೇಂದ್ರ ಸರ್ಕಾರದ ಐಟಿ ಇಲಾಖೆಯಲ್ಲಿ ಇಂಟರ್ನ್‌ಶಿಪ್ ಮಾಡಲು ಇಲ್ಲಿದೆ ಸುವರ್ಣಾವಕಾಶ! – Kannada News | NeGD Summer Internship 2026: Non Technical Roles for Students in Digital India

ಕೇಂದ್ರ ಸರ್ಕಾರದ ಐಟಿ ಇಲಾಖೆಯಲ್ಲಿ ಇಂಟರ್ನ್‌ಶಿಪ್

ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಅಡಿಯಲ್ಲಿ ಕಾರ್ಯನಿರ್ವಹಿಸುವ ಡಿಜಿಟಲ್ ಇಂಡಿಯಾ ಕಾರ್ಪೊರೇಷನ್‌ನ ರಾಷ್ಟ್ರೀಯ ಇ-ಆಡಳಿತ ವಿಭಾಗವು (NeGD), 2026 ರ ಸಾಲಿನ ತಾಂತ್ರಿಕೇತರ ಬೇಸಿಗೆ ಇಂಟರ್ನ್‌ಶಿಪ್ ಕಾರ್ಯಕ್ರಮಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ದೇಶದ ಡಿಜಿಟಲ್ ರೂಪಾಂತರದ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಇದೊಂದು ಅಪರೂಪದ ಅವಕಾಶವಾಗಿದೆ.

ಲಭ್ಯವಿರುವ ಹುದ್ದೆಗಳು ಮತ್ತು ಇಲಾಖೆಗಳ ವಿವರ:

ಈ ಇಂಟರ್ನ್‌ಶಿಪ್ ಕಾರ್ಯಕ್ರಮದ ಅಡಿಯಲ್ಲಿ ಒಟ್ಟು 10 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಇವುಗಳಲ್ಲಿ ಕಾರ್ಯಕ್ರಮ ನಿರ್ವಹಣೆಗೆ 5 ಹುದ್ದೆಗಳು, ಜಾಗೃತಿ ಮತ್ತು ಸಂವಹನಕ್ಕೆ 2 ಹುದ್ದೆಗಳು, ಸಾಮರ್ಥ್ಯ ವೃದ್ಧಿಗೆ 2 ಹುದ್ದೆಗಳು, ತಂತ್ರಜ್ಞಾನ ನಿರ್ವಹಣೆಗೆ 2 ಹುದ್ದೆಗಳು ಹಾಗೂ ಯೋಜನಾ ಮೌಲ್ಯಮಾಪನ ವಿಭಾಗಕ್ಕೆ 1 ಹುದ್ದೆಯನ್ನು ಮೀಸಲಿಡಲಾಗಿದೆ. ಆಯ್ಕೆಯಾಗುವ ಇಂಟರ್ನ್‌ಗಳಿಗೆ ನೀತಿ ದಸ್ತಾವೇಜೀಕರಣ, ದತ್ತಾಂಶ ವಿಶ್ಲೇಷಣೆ, ಭಾಷಾ ಸಂಸ್ಕರಣೆ (NLP) ಮತ್ತು ದತ್ತಾಂಶ ಗೌಪ್ಯತೆ ಸಂಶೋಧನೆಯಂತಹ ಡಿಪಿಡಿಪಿ (DPDP) ಕಾಯ್ದೆಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಮೇಲೆ ಕೆಲಸ ಮಾಡುವ ಸುವರ್ಣಾವಕಾಶ ಸಿಗಲಿದೆ. ಇದರ ಜೊತೆಗೆ, ಕೃತಕ ಬುದ್ಧಿಮತ್ತೆ (AI), ಬ್ಲಾಕ್‌ಚೈನ್ ಮತ್ತು ಕ್ಲೌಡ್ ಕಂಪ್ಯೂಟಿಂಗ್‌ನಂತಹ ಸಮಕಾಲೀನ ಆಧುನಿಕ ತಾಂತ್ರಿಕ ಕ್ಷೇತ್ರಗಳಲ್ಲಿ ಪ್ರಾಯೋಗಿಕ ಅನುಭವವನ್ನು ಗಳಿಸಲು ಇದು ಸಹಕಾರಿಯಾಗಲಿದೆ.

ಅರ್ಜಿ ಸಲ್ಲಿಸಲು ಇರಬೇಕಾದ ಶೈಕ್ಷಣಿಕ ಅರ್ಹತೆಗಳು:

ಈ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ತಮ್ಮ ಹಿಂದಿನ ಶೈಕ್ಷಣಿಕ ಕೋರ್ಸ್‌ಗಳಲ್ಲಿ ಕನಿಷ್ಠ ಶೇಕಡಾ 60 ರಷ್ಟು ಅಂಕಗಳನ್ನು ಗಳಿಸಿರಬೇಕು. ಶೈಕ್ಷಣಿಕ ಹಿನ್ನೆಲೆಗೆ ಸಂಬಂಧಿಸಿದಂತೆ, 10+2+4 ವ್ಯವಸ್ಥೆಯಲ್ಲಿ ಎಂಜಿನಿಯರಿಂಗ್‌ನ ಅಂತಿಮ ಅಥವಾ ಅಂತಿಮ ಪೂರ್ವ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ. ಅಲ್ಲದೆ, 10+2+5 ವ್ಯವಸ್ಥೆಯಲ್ಲಿ ಡಿಪ್ಲೊಮಾ, ಡ್ಯುಯಲ್ ಪದವಿ ಅಥವಾ ಸಂಯೋಜಿತ ಕೋರ್ಸ್‌ಗಳ ಅಂತಿಮ ಅಥವಾ ಪೂರ್ವ-ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವವರು ಕೂಡ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಆದಾಗ್ಯೂ, ಸಂಸ್ಥೆಯ ಅಗತ್ಯತೆಗಳನ್ನು ಪರಿಗಣಿಸಿ ಸಂಬಂಧಪಟ್ಟ ಅಧಿಕಾರಿಗಳ ಅನುಮೋದನೆಯೊಂದಿಗೆ ಶೈಕ್ಷಣಿಕ ಅರ್ಹತೆಯಲ್ಲಿ ಸ್ವಲ್ಪ ಮಟ್ಟಿನ ಸಡಿಲಿಕೆಯನ್ನು ನೀಡಬಹುದಾಗಿದೆ. ಆದರೆ ಕನಿಷ್ಠ ಅರ್ಹತೆಗಳನ್ನು ಹೊಂದಿದ ತಕ್ಷಣ ಆಯ್ಕೆ ಖಾತರಿಯಾಗುವುದಿಲ್ಲ ಮತ್ತು ಉತ್ತಮ ಶೈಕ್ಷಣಿಕ ದಾಖಲೆಯೊಂದಿಗೆ ಹೆಚ್ಚುವರಿ ಕೌಶಲ್ಯ ಹೊಂದಿರುವವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮತ್ತು ಮಾನದಂಡಗಳು:

ಅಭ್ಯರ್ಥಿಗಳ ಅಂತಿಮ ಆಯ್ಕೆಯನ್ನು ಅರ್ಹತಾ ಪರೀಕ್ಷೆಗಳಲ್ಲಿ ಅವರು ಗಳಿಸಿದ ಅಂಕಗಳ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡುವ ಮೂಲಕ ಪ್ರಕ್ರಿಯೆಗೊಳಿಸಲಾಗುತ್ತದೆ. ತದನಂತರ, ಆಂತರಿಕ ಆಯ್ಕೆ ಸಮಿತಿಯು ನಡೆಸುವ ಸಂದರ್ಶನ ಅಥವಾ ಮೌಲ್ಯಮಾಪನದ ಮೂಲಕ ಸೂಕ್ತ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುತ್ತದೆ. ವಿಶೇಷವೆಂದರೆ, ಕೇಂದ್ರ ಶಿಕ್ಷಣ ಸಚಿವಾಲಯ ಬಿಡುಗಡೆ ಮಾಡುವ ಎನ್‌ಐಆರ್‌ಎಫ್ (NIRF) ಶ್ರೇಯಾಂಕದಲ್ಲಿ ದೇಶದ ಅಗ್ರ 100 ಸಂಸ್ಥೆಗಳಲ್ಲಿ ಸ್ಥಾನ ಪಡೆದಿರುವ ವಿಶ್ವವಿದ್ಯಾಲಯ ಅಥವಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಈ ಆಯ್ಕೆ ಪ್ರಕ್ರಿಯೆಯಲ್ಲಿ ಹೆಚ್ಚುವರಿ ಆದ್ಯತೆ ನೀಡಲಾಗುತ್ತದೆ.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಸರಳ ವಿಧಾನ:

ಆಸಕ್ತ ವಿದ್ಯಾರ್ಥಿಗಳು ಸಚಿವಾಲಯದ (MeitY) ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ. ವೆಬ್‌ಸೈಟ್‌ನ ಮುಖಪುಟದಲ್ಲಿರುವ “Key Offers” (ಕೀ ಆಫರ್‌ಗಳು) ವಿಭಾಗಕ್ಕೆ ತೆರಳಿ, ಅಲ್ಲಿ “Schemes and Services” (ಯೋಜನೆಗಳು ಮತ್ತು ಸೇವೆಗಳು) ಅಡಿಯಲ್ಲಿ ಲಭ್ಯವಿರುವ “NeGD Non-Technical (Summer) Internship Program” ಲಿಂಕ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ, “Detailed Documents” ವಿಭಾಗದಲ್ಲಿ ಕಾಣಿಸುವ ಅರ್ಜಿ ನಮೂನೆಯ ಲಿಂಕ್ ಕ್ಲಿಕ್ ಮಾಡಿ, ಕೇಳಲಾದ ಎಲ್ಲಾ ಅಗತ್ಯ ವಿವರಗಳನ್ನು ನಿಖರವಾಗಿ ಭರ್ತಿ ಮಾಡಿ ಅರ್ಜಿಯನ್ನು ಸಬ್ಮಿಟ್ ಮಾಡಬೇಕು. ಮುಂದಿನ ದಿನಗಳ ಉಲ್ಲೇಖಕ್ಕಾಗಿ ಭರ್ತಿ ಮಾಡಿದ ಅರ್ಜಿಯ ಪ್ರತಿಯನ್ನು ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳುವುದು ಉತ್ತಮ.

ಇದನ್ನೂ ಓದಿ: ರೈಲ್ವೆಯಲ್ಲಿ 11,127 ಹುದ್ದೆಗಳಿಗೆ ನೇಮಕಾತಿ; ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ

ಪ್ರಮುಖ ದಿನಾಂಕಗಳು ಮತ್ತು ಇಂಟರ್ನ್‌ಶಿಪ್ ಅವಧಿ:

ಈ ಪ್ರತಿಷ್ಠಿತ ಇಂಟರ್ನ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಜೂನ್ 7 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಜೂನ್ ಮೂರನೇ ವಾರದಲ್ಲಿ ಸಂದರ್ಶನ ಮತ್ತು ಮೌಲ್ಯಮಾಪನ ಪ್ರಕ್ರಿಯೆಗಳು ನಡೆಯಲಿದ್ದು, ಜೂನ್ ನಾಲ್ಕನೇ ವಾರದಲ್ಲಿ ಆಯ್ಕೆಯಾದವರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಇಂಟರ್ನ್‌ಶಿಪ್ ಪ್ರೋಗ್ರಾಂ ಜುಲೈ ತಿಂಗಳಿನಲ್ಲಿ ಅಧಿಕೃತವಾಗಿ ಆರಂಭವಾಗಿ ಸೆಪ್ಟೆಂಬರ್ ತನಕ (ಒಟ್ಟು ಮೂರು ತಿಂಗಳು) ಮುಂದುವರಿಯಲಿದೆ. ಸಂಸ್ಥೆಯ ತುರ್ತು ಅಗತ್ಯಗಳು ಮತ್ತು ವಿದ್ಯಾರ್ಥಿಗಳ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಪರಿಗಣಿಸಿ ಈ ಅವಧಿಯನ್ನು ಇನ್ನೂ ಮೂರು ತಿಂಗಳವರೆಗೆ ವಿಸ್ತರಿಸುವ ಅವಕಾಶವೂ ಇರುತ್ತದೆ. ಇಂಟರ್ನ್‌ಶಿಪ್ ಯಶಸ್ವಿಯಾಗಿ ಮುಗಿಸುವ ವಿದ್ಯಾರ್ಥಿಗಳಿಗೆ ಆಯಾ ವಿಭಾಗದ ಮುಖ್ಯಸ್ಥರ ಅನುಮೋದನೆಯೊಂದಿಗೆ ಪ್ರಮಾಣಪತ್ರ ಮತ್ತು ಮಾಸಿಕ ಸ್ಟೈಫಂಡ್ (Stipend) ನೀಡಲಾಗುತ್ತದೆ.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಣವೀರ್ ವಿವಾದ ಬಳಿಕ ‘ಡಾನ್ 3’ ಚಿತ್ರಕ್ಕೆ ಮರಳಲು ಶಾರುಖ್ ರೆಡಿ; ಹಾಕಿದ ಷರತ್ತೇನು? – Kannada News | Don 3 Controversy: Ranveer’s Exit, SRK’s Condition & The Next Don Mystery

‘ಡಾನ್ 3’ (Don 3) ಚಿತ್ರದ ವಿವಾದ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಸದ್ಯ ಬಿ-ಟೌನ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಶಾರುಖ್ ಖಾನ್ ಅವರು ‘ಡಾನ್’ ಹಾಗೂ ‘ಡಾನ್ 2’ ಸಿನಿಮಾಗಳಲ್ಲಿ ನಟಿಸಿ ಜಾಗತಿಕ ಮಟ್ಟದಲ್ಲಿ ದೊಡ್ಡ ಯಶಸ್ಸು ತಂದುಕೊಟ್ಟಿದ್ದರು. ಆ ಬಳಿಕ ನಿರ್ದೇಶಕ ಫರ್ಹಾನ್ ಅಖ್ತರ್ ಅವರು ‘ಡಾನ್ 3’ ಚಿತ್ರಕ್ಕೆ ರಣವೀರ್ ಸಿಂಗ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ಆದರೆ, ರಣವೀರ್ ಸಿಂಗ್ ಸಿನಿಮಾದಿಂದ ದಿಢೀರ್ ಹೊರನಡೆದಿರುವುದರಿಂದ ಅವರು ಈ ಚಿತ್ರದಲ್ಲಿ ನಟಿಸುವುದು ಬಹುತೇಕ ಅನುಮಾನವಾಗಿದೆ. ಈ ಬೆಳವಣಿಗೆಯಿಂದಾಗಿ ಈಗ ‘ಡಾನ್ 3’ ಚಿತ್ರಕ್ಕೆ ಮುಂದಿನ ನಾಯಕ ಯಾರು? ಶಾರುಖ್ ಖಾನ್ ಮತ್ತೆ ಡಾನ್ ಆಗಿ ಮರಳುತ್ತಾರಾ? ಎಂಬ ಕುತೂಹಲ ಎಲ್ಲರಲ್ಲಿ ಮೂಡಿದೆ.

ರಣವೀರ್ ಸಿಂಗ್ ಚಿತ್ರದಿಂದ ಹೊರಬಿದ್ದ ತಕ್ಷಣವೇ, ಆ ಪಾತ್ರಕ್ಕೆ ಬಾಲಿವುಡ್ ಸೂಪರ್‌ಸ್ಟಾರ್ ಹೃತಿಕ್ ರೋಷನ್ ಅವರನ್ನು ಕರೆತರಲಾಗುತ್ತಿದೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ ಈ ಬಗ್ಗೆ ಸ್ವತಃ ಸ್ಪಷ್ಟನೆ ನೀಡಿದ್ದ ಹೃತಿಕ್, ‘ಕೇವಲ ವದಂತಿಯಾಗಿ ಆರಂಭವಾದ ಮಾತುಗಳು ಈಗ ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿವೆ. ಆದರೆ ‘ಡಾನ್ 3’ ಚಿತ್ರಕ್ಕಾಗಿ ಚಿತ್ರತಂಡ ನನ್ನನ್ನು ಯಾವುದೇ ಹಂತದಲ್ಲೂ ಸಂಪರ್ಕಿಸಿಲ್ಲ ಎಂಬುದನ್ನು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ’ ಎಂದು ಸುಮ್ಮನೆ ಹರಡಿದ್ದ ಸುದ್ದಿಗೆ ಬ್ರೇಕ್ ಹಾಕಿದ್ದರು.

ಮರುಪ್ರವೇಶಕ್ಕೆ ಶಾರುಖ್ ಖಾನ್ ಷರತ್ತು?

ಮತ್ತೊಂದೆಡೆ, ಶಾರುಖ್ ಖಾನ್ ಅವರೇ ಮತ್ತೆ ‘ಡಾನ್’ ಆಗಿ ಕಂಬ್ಯಾಕ್ ಮಾಡಲಿದ್ದಾರೆ ಎಂಬ ಬಲವಾದ ವರದಿಗಳು ಕೇಳಿಬರುತ್ತಿವೆ. ಆದರೆ, ಕಿಂಗ್ ಖಾನ್ ಮರಳಿ ಬರಲು ಒಂದು ಮುಖ್ಯ ಷರತ್ತು ವಿಧಿಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ‘ಜವಾನ್’ ಚಿತ್ರದ ನಿರ್ದೇಶಕ ಅಟ್ಲೀ ಅವರು ಈ ಚಿತ್ರವನ್ನು ನಿರ್ದೇಶಿಸುವುದಾದರೆ ಮಾತ್ರ ತಾವು ನಟಿಸಲು ಸಿದ್ಧ ಎಂದು ಶಾರುಖ್ ಹೇಳಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಶಾರುಖ್ ಖಾನ್ ಅವರಾಗಲಿ ಅಥವಾ ನಿರ್ಮಾಣ ಸಂಸ್ಥೆಯಾಗಲಿ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.

ನಿರ್ದೇಶಕ ಫರ್ಹಾನ್ ಅಖ್ತರ್ ಮೌನ:

ಇಷ್ಟೆಲ್ಲಾ ಗೊಂದಲ ಹಾಗೂ ವಿವಾದಗಳು ಸೃಷ್ಟಿಯಾಗಿದ್ದರೂ, ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ಫರ್ಹಾನ್ ಅಖ್ತರ್ ಮಾತ್ರ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಸಂಪೂರ್ಣ ಮೌನ ವಹಿಸಿದ್ದಾರೆ. ಅವರ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯೂ ಸಹ ಚಿತ್ರದ ಭವಿಷ್ಯದ ಬಗ್ಗೆ ಅಥವಾ ಮುಂದಿನ ನಾಯಕ ಯಾರು ಎಂಬುದರ ಕುರಿತು ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಇದನ್ನೂ ಓದಿ: ‘ಡಾನ್ 3’ ವಿವಾದ: ಚಿತ್ರರಂಗದಿಂದ ಬ್ಯಾನ್ ಆದ ಬಳಿಕ ಮೌನ ಮುರಿದ ರಣವೀರ್ ಸಿಂಗ್‌

ಅಮಿತಾಭ್ ಬಚ್ಚನ್ ಮತ್ತು ಶಾರುಖ್ ಖಾನ್ ಅವರಂತಹ ದಿಗ್ಗಜರು ನಟಿಸಿ ಬೆಳೆಸಿದ ‘ಡಾನ್’ ಸರಣಿಯ ಮುಂದಿನ ನಾಯಕ ಯಾರಾಗಲಿದ್ದಾರೆ ಎಂಬುದು ಸದ್ಯಕ್ಕೆ ದೊಡ್ಡ ಸಸ್ಪೆನ್ಸ್ ಆಗಿ ಉಳಿದಿದೆ. ಈ ಚಿತ್ರವನ್ನು ಅರ್ಧಕ್ಕೆ ಕೈ ಬಿಡೋ ಬಗ್ಗೆಯೂ ನಿರ್ಮಾಪಕರು ಯೋಚಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪಟ್ಟದ ಪಗಡೆಯಾಟಕ್ಕೆ ಹೊಸ ಟ್ವಿಸ್ಟ್​​: ರಾಹುಲ್​​ ಬಳಿ ಪರಮೇಶ್ವರ್​​ರನ್ನ ಸಿಎಂ ಮಾಡಿ ಎಂದರಾ ಸಿದ್ದರಾಮಯ್ಯ? – Kannada News | Siddaramaiahs Impending Resignation: Dr. G. Parameshwara Recommended for Karnataka Chief Minister.

ಬೆಂಗಳೂರು, ಮೇ 27: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಕುರಿತು ತೀವ್ರ ರಾಜಕೀಯ ಚರ್ಚೆ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ (ಮೇ 28) ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ್ದು, ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗಿದೆ ಎಂದು ವರದಿಯಾಗಿದೆ. ದೆಹಲಿಯಲ್ಲಿ ನಡೆದ ಮ್ಯಾರಥಾನ್ ಸಭೆಗಳ ನಂತರ ಈ ಬೆಳವಣಿಗೆಗಳು ನಡೆದಿವೆ. ಈ ಸಂದರ್ಭದಲ್ಲಿ, ಸಿದ್ದರಾಮಯ್ಯನವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮುಂದೆ ತೆರವಾಗುವ ಮುಖ್ಯಮಂತ್ರಿ ಸ್ಥಾನಕ್ಕೆ ಡಾ. ಜಿ. ಪರಮೇಶ್ವರ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರಂತೆ. ಪಕ್ಷ ಸಂಘಟನೆಯಲ್ಲಿನ ಅನುಭವ ಮತ್ತು ಆಡಳಿತದಲ್ಲಿನ ಪರಿಣತಿಯನ್ನು ಉಲ್ಲೇಖಿಸಿ, ಡಾ. ಜಿ. ಪರಮೇಶ್ವರ ಅವರು ಸಿಎಂ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ನಾನು ಯಾವ ತಪ್ಪು ಮಾಡಿಲ್ಲ’- 6 ತಿಂಗಳು ಜೈಲು ಶಿಕ್ಷೆ ವಿಧಿಸಿದ ಸಿಂಗಾಪುರ್ ಕೋರ್ಟ್ ತೀರ್ಪಿಗೆ ಬೈಜು ಬೇಸರ – Kannada News | Byju Raveendran disappointed with Singapore court judgement sentencing his for 6 month jail

ಸಿಂಗಾಪುರ, ಮೇ 27: ತನ್ನ ವಿರುದ್ಧ 6 ತಿಂಗಳ ಜೈಲು ಶಿಕ್ಷೆ ವಿಧಿಸಿರುವ ಸಿಂಗಾಪುರ ಕೋರ್ಟ್​ನ ತೀರ್ಪಿನ ಬಗ್ಗೆ ಬೈಜು ರವೀಂದ್ರನ್ (Byju Raveendran) ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ಈ ಇಡೀ ಪ್ರಕರಣವನ್ನು ಮಾಧ್ಯಮಗಳಲ್ಲಿ ಬಿಂಬಿಸುತ್ತಿರುವ ರೀತಿ ನನ್ನ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಕಲ್ಪನೆಯನ್ನು ಮೂಡಿಸುತ್ತಿದೆ. ನಾವೀಗಾಗಲೇ ಹೂಡಿಕೆದಾರರೊಂದಿಗೆ ಅಂತಿಮ ಹಂತದ ಸಂಧಾನ ಮಾತುಕತೆಯಲ್ಲಿದ್ದೇವೆ (Settlement Talks),” ಎಂದು ಸ್ಪಷ್ಟಪಡಿಸಿದ್ದಾರೆ.

“ಸಾಲಗಾರರು ಹಾಗೂ ಕತಾರ್ ಇನ್ವೆಸ್ಟ್‌ಮೆಂಟ್ ಅಥಾರಿಟಿ (QIA) ಒಳಗೊಂಡಂತೆ ಎಲ್ಲಾ ಪ್ರಮುಖ ಭಾಗಿದಾರರೊಂದಿಗೆ ನಾವು ಒಪ್ಪಂದಕ್ಕೆ ಬಂದಿದ್ದೇವೆ. ಕೇವಲ ಕೆಲವು ಸಣ್ಣ ವಿಷಯಗಳು ಮಾತ್ರ ಬಾಕಿ ಉಳಿದಿವೆ. ಈ ಮಾತುಕತೆಗಳ ಸಮಯದಲ್ಲಿ, ನನ್ನ ಕಡೆಯಿಂದಾಗಲಿ ಅಥವಾ ಇತರ ಸಂಸ್ಥಾಪಕರಿಂದಾಗಲಿ ಯಾವುದೇ ತಪ್ಪು ನಡೆದಿಲ್ಲ ಎಂಬುದನ್ನು ಎಲ್ಲಾ ಕಡೆಯವರು ಒಪ್ಪಿಕೊಂಡಿದ್ದಾರೆ. ಇಂತಹ ಸೂಕ್ಷ್ಮ ಹಂತದಲ್ಲಿ ಕತಾರ್ ಇನ್ವೆಸ್ಟ್‌ಮೆಂಟ್ ಈ ರೀತಿಯ ಕಾನೂನು ಒತ್ತಡದ ತಂತ್ರಗಳನ್ನು ಬಳಸುತ್ತಿರುವುದು ಅತ್ಯಂತ ದುರದೃಷ್ಟಕರ” ಎಂದು ಬೈಜುಸ್ ಸಂಸ್ಥಾಪಕರಾದ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ತಾವು ಯಾವುದೇ ಹಣವನ್ನು ವೈಯಕ್ತಿಕವಾಗಿ ಪಡೆದಿಲ್ಲ ಮತ್ತು ವಿವಾದಿತ ಹಣವನ್ನು ಕೇವಲ ಉದ್ಯಮದ ಕಾನೂನಾತ್ಮಕ ಉದ್ದೇಶಗಳಿಗಾಗಿಯೇ ಬಳಸಲಾಗಿದೆ ಎಂದು ಪ್ರತಿಪಾದಿಸಿದ ಅವರಿ, “ಒಂದು ಕಡೆಯ ಸುಳ್ಳು ವರದಿಗಳನ್ನು ನಾನು ಸುಮ್ಮನೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ,” ಎಂದು ನ್ಯಾಯಾಲಯದ ತೀರ್ಪನ್ನು ಬಲವಾಗಿ ತಿರಸ್ಕರಿಸಿದ್ದಾರೆ.

ಸಿಂಗಾಪುರ ನ್ಯಾಯಾಲಯದ ಆದೇಶವೇನು?

ಬೈಜುಸ್ ಸಂಸ್ಥೆ ಸಾಲಗಾರರಿಗೆ ಹಣ ವಾಪಸ್ ಮಾಡದೇ ಇರುವ ಆರೋಪಕ್ಕೆ ಸಂಬಂಧಿಸಿದ ಕೋರ್ಟ್ ಕೇಸ್ ಇದು. ಕೋರ್ಟ್ ಆದೇಶವನ್ನೂ ಪಾಲಿಸಿಲ್ಲ ಎನ್ನುವ ಆರೋಪವೂ ಬೈಜು ರವೀಂದ್ರನ್ ಮೇಲಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ನಿಂದನೆ (Contempt of Court) ಆರೋಪ ಇದ್ದು, ಆ ಪ್ರಕರಣದಲ್ಲಿ ಬೈಜು ರವೀಂದ್ರನ್ ಅವರನ್ನು ದೋಷಿ ಎಂದು ಸಿಂಗಾಪುರ ಕೋರ್ಟ್ ಪರಿಗಣಿಸಿ ತೀರ್ಪು ನೀಡಿದೆ.

ಇದನ್ನೂ ಓದಿ: ಬೈಜುಸ್ ಸಂಸ್ಥಾಪಕ ಬೈಜು ರವೀಂದ್ರನ್​ಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿದ ಸಿಂಗಾಪುರ ಕೋರ್ಟ್

ಬೈಜು ರವೀಂದ್ರನ್ ಅವರ ಈ ಸ್ಪಷ್ಟನೆಯ ನಡುವೆಯೂ, ಸಿಂಗಾಪುರ ನ್ಯಾಯಾಲಯವು ಅವರನ್ನು **ನ್ಯಾಯಾಂಗ ನಿಂದನೆ (Contempt of Court)** ಪ್ರಕರಣದಲ್ಲಿ ದೋಷಿ ಎಂದು ಘೋಷಿಸಿ ಈ ಕೆಳಗಿನ ಕಠಿಣ ಆದೇಶಗಳನ್ನು ನೀಡಿದೆ:

6 ತಿಂಗಳ ಜೈಲು ಶಿಕ್ಷೆ

ನ್ಯಾಯಾಲಯದ ಆದೇಶಗಳನ್ನು ಪದೇ ಪದೇ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಬೈಜು ಅವರಿಗೆ 6 ತಿಂಗಳ ಸಿವಿಲ್ ಜೈಲು ಶಿಕ್ಷೆ ವಿಧಿಸಲಾಗಿದೆ ಮತ್ತು ಅಧಿಕಾರಿಗಳ ಮುಂದೆ ಶರಣಾಗುವಂತೆ ಸೂಚಿಸಲಾಗಿದೆ. ಸಿಂಗಾಪುರ ಡಾಲರ್ $90,000 (ಸುಮಾರು 67 ಲಕ್ಷ ರೂ) ಕಾನೂನು ವೆಚ್ಚವನ್ನು ನ್ಯಾಯಾಲಯಕ್ಕೆ ಪಾವತಿಸಲು ಆದೇಶಿಸಲಾಗಿದೆ. ‘ಬೀಆರ್ ಇನ್ವೆಸ್ಟ್‌ಕೋ ಪ್ರೈವೇಟ್ ಲಿಮಿಟೆಡ್’ (Beeaar Investco Pte) ಎಂಬ ಕಂಪನಿಯ ಮಾಲೀಕತ್ವದ ನಿಖರ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.

ಏನಿದು ಬೈಜೂಸ್ ವಿರುದ್ಧದ ಪ್ರಕರಣ?

ಈ ಕಾನೂನು ಹೋರಾಟವು ಕತಾರ್‌ನ ಸಾರ್ವಭೌಮ ನಿಧಿ ಸಂಸ್ಥೆಯಾದ ಕತಾರ್ ಇನ್‌ವೆಸ್ಟ್‌ಮೆಂಟ್ ಅಥಾರಿಟಿಯ (QIA) ಅಂಗಸಂಸ್ಥೆಯಾದ ‘ಕತಾರ್ ಹೋಲ್ಡಿಂಗ್ಸ್’ ಸಲ್ಲಿಸಿದ ದೂರಿನಿಂದ ಆರಂಭವಾಗಿದೆ. ಬೈಜೂಸ್ ಸಂಸ್ಥೆಯು ಉದ್ಯೋಗಿಗಳನ್ನು ವಜಾಗೊಳಿಸುತ್ತಿದ್ದ ಮತ್ತು ತೀವ್ರ ಆರ್ಥಿಕ ನಷ್ಟ ಅನುಭವಿಸುತ್ತಿದ್ದ ಕಠಿಣ ದಿನಗಳಲ್ಲಿ ಈ ಸಂಸ್ಥೆಯು ಬೈಜೂಸ್‌ನಲ್ಲಿ ಭಾರಿ ಹೂಡಿಕೆ ಮಾಡಿತ್ತು.

ಬೈಜು ಆಸ್ತಿ ವಿವರ ಬಹಿರಂಗಪಡಿಸದಿರುವುದು

ಏಪ್ರಿಲ್ 2024 ರಿಂದ ಬೈಜು ರವೀಂದ್ರನ್ ಅವರು ತಮ್ಮ ವೈಯಕ್ತಿಕ ಹಾಗೂ ಕಾರ್ಪೊರೇಟ್ ಆಸ್ತಿಪಾಸ್ತಿಗಳ ವಿವರಗಳನ್ನು ಬಹಿರಂಗಪಡಿಸುವಂತೆ ಸಿಂಗಾಪುರ ನ್ಯಾಯಾಲಯ ನೀಡಿದ್ದ ನಿರ್ದೇಶನಗಳನ್ನು ಪಾಲಿಸಿರಲಿಲ್ಲ. ಕೋರ್ಟ್ ಆದೇಶಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದ್ದೇ ಈ ಜೈಲು ಶಿಕ್ಷೆಯ ತೀರ್ಪಿಗೆ ಮುಖ್ಯ ಕಾರಣವಾಗಿದೆ.

ಬೈಜುಸ್ ವಿರುದ್ಧ ಜಾಗತಿಕವಾಗಿ ಮುಂದುವರಿದಿರುವ ಇತರ ಕಾನೂನು ಸಂಕಷ್ಟಗಳು

ಬೈಜು ರವೀಂದ್ರನ್ ಅವರ ಕಾನೂನು ಹೋರಾಟ ಕೇವಲ ಸಿಂಗಾಪುರಕ್ಕೆ ಮಾತ್ರ ಸೀಮಿತವಾಗಿಲ್ಲ. ಬೈಜೂಸ್‌ನ ಅಂತರರಾಷ್ಟ್ರೀಯ ವಿಭಾಗವು ಪಡೆದಿದ್ದ 1.2 ಬಿಲಿಯನ್ ಡಾಲರ್ ಸಾಲದ ಮರುಪಾವತಿಗೆ ಸಂಬಂಧಿಸಿದಂತೆ ಅಮೆರಿಕದ ಸಾಲಗಾರರು ಮತ್ತು ನ್ಯಾಯಾಲಯಗಳು ಈಗಾಗಲೇ ಬೈಜು ವಿರುದ್ಧ ತೀವ್ರ ಕಾನೂನು ಕ್ರಮಗಳನ್ನು ಜರುಗಿಸುತ್ತಿವೆ. ಅಲ್ಲೂ ಕೂಡ ಮಾಹಿತಿ ನೀಡದ ಕಾರಣಕ್ಕೆ ಅವರ ಮೇಲೆ ಈ ಹಿಂದೆ ಸಿವಿಲ್ ನಿಂದನೆ ಆರೋಪ ಹೊರಿಸಲಾಗಿತ್ತು.

ಇದನ್ನೂ ಓದಿ: ಎಐನಿಂದ ಸದ್ಯದಲ್ಲೇ ಮನುಷ್ಯರಿಗೆ ಕೆಲಸ ಇಲ್ಲವಾಗುತ್ತೆ ಎನ್ನುತ್ತಿದ್ದ ಸ್ಯಾಮ್ ಆಲ್ಟ್​ಮ್ಯಾನ್ ಬಾಯಿಂದ ಈಗ ಬೇರೆಯೇ ಮಾತು

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಗೆ ನೀಡಬೇಕಾಗಿದ್ದ 159 ಕೋಟಿ ರೂ ಪ್ರಾಯೋಜಕತ್ವದ (Sponsorship) ಬಾಕಿ ಹಣದ ವಿವಾದದಿಂದಾಗಿ, ಬೈಜೂಸ್‌ನ ಪೋಷಕ ಸಂಸ್ಥೆಯಾದ ‘ಥಿಂಕ್ ಅಂಡ್ ಲರ್ನ್ ಪ್ರೈವೇಟ್ ಲಿಮಿಟೆಡ್’ ಸದ್ಯ ಕಾರ್ಪೊರೇಟ್ ದಿವಾಳಿತನ ನಿಯಂತ್ರಣ ಪ್ರಕ್ರಿಯೆಗೆ (CIRP) ಒಳಗಾಗಿದೆ.

ಒಂದು ಕಾಲದಲ್ಲಿ 22 ಬಿಲಿಯನ್ ಡಾಲರ್ ಮೌಲ್ಯದೊಂದಿಗೆ ಜಾಗತಿಕ ಮಟ್ಟದಲ್ಲಿ ಭಾರತದ ಅತ್ಯಂತ ದೊಡ್ಡ ಯಶಸ್ವಿ ಸ್ಟಾರ್ಟ್‌ಅಪ್ ಆಗಿ ಮಿಂಚಿದ್ದ ಬೈಜೂಸ್ ಮತ್ತು ಅದರ ಸಂಸ್ಥಾಪಕ ಬೈಜು ರವೀಂದ್ರನ್, ಸದ್ಯ ಸಾಲದ ಸುಳಿ ಹಾಗೂ ಬಹುರಾಷ್ಟ್ರೀಯ ಕಾನೂನು ಬಿಕ್ಕಟ್ಟಿನ ಮಧ್ಯೆ ಸಿಲುಕಿದ್ದಾರೆ. ಸದ್ಯ ಅವರು ಸಿಂಗಾಪುರದಲ್ಲಿದ್ದಾರೆಯೇ ಅಥವಾ ಬೇರೆ ದೇಶದಲ್ಲಿದ್ದಾರೆಯೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version