ಗೂಗಲ್, ಮೈಕ್ರೋಸಾಫ್ಟ್ ಇತ್ಯಾದಿ ಟೆಕ್ ಕಂಪನಿಗಳ ಬ್ರಿಟಿಷ್ ಈಸ್ಟ್ ಇಂಡಿಯಾ ಸಂಸ್ಥೆಗೆ ಹೋಲಿಸಿದ ಶ್ರೀಧರ್ ವೆಂಬು – Kannada News | Sridhar Vembu compares today’s tech giants to British East India Company

ನವದೆಹಲಿ, ಫೆಬ್ರುವರಿ 15: ಜೋಹೋ ಸಂಸ್ಥಾಪಕ ಶ್ರೀಧರ್ ವೆಂಬು (Sridhar Vembu) ಅವರು ಜಾಗತಿಕ ಟೆಕ್ ದೈತ್ಯ ಕಂಪನಿಗಳನ್ನು ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಗೆ ಹೋಲಿಕೆ ಮಾಡಿದ್ದಾರೆ. ಗೂಗಲ್ ಸಂಸ್ಥೆ ಒಂದೇ ದಿನದಲ್ಲಿ 32 ಬಿಲಿಯನ್ ಡಾಲರ್​ನಷ್ಟು (3 ಲಕ್ಷ ಕೋಟಿ ರೂ) ಫಂಡ್ ಸೃಷ್ಟಿಸಿಕೊಂಡಿರುವುದನ್ನು ಉಲ್ಲೇಖಿಸುತ್ತಾ, ವೆಂಬು ಅವರು ಈ ಅನಿಸಿಕೆ ವ್ಯಕ್ತಪಡಿಸಿದ್ದಾರೆ. 17ನೇ ಶತಮಾನದಲ್ಲಿ ಆರಂಭವಾದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ 19ನೇ ಶತಮಾನದ ಮಧ್ಯ ಭಾಗದವರೆಗೂ ಅಸ್ತಿತ್ವದಲ್ಲಿತ್ತು. 200ಕ್ಕೂ ಹೆಚ್ಚು ವರ್ಷ ಕಾಲ ಜಗತ್ತಿನ ಹಲವು ಭಾಗಗಳನ್ನು ತನ್ನ ಅಂಕೆಯಲ್ಲಿಟ್ಟುಕೊಂಡಿತ್ತು. ಈಗಿನ ಟೆಕ್ ಕಂಪನಿಗಳನ್ನು ಈಸ್ಟ್ ಇಂಡಿಯಾ ಕಂಪನಿಗೆ ಹೋಲಿಕೆ ಮಾಡಿರುವುದು ಕುತೂಹಲದ ಸಂಗತಿ.

ಗೂಗಲ್ ಕಂಪನಿಯ ಅಗಾಧ ಫಂಡ್ ಎತ್ತುವಳಿ ಸಾಮರ್ಥ್ಯದ ಬಗ್ಗೆ ಅವಿರಳ್ ಭಟ್ನಾಗರ್ ಅವರು ಹಾಕಿದ ಎಕ್ಸ್ ಪೊಸ್ಟ್​ಗೆ ಶ್ರೀಧರ್ ವೆಂಬು ಪ್ರತಿಕ್ರಿಯೆಯಾಗಿ ಹೋಲಿಕೆ ಮಾಡಿದ್ದಾರೆ.

ಇದನ್ನೂ ಓದಿ: ನಗರಗಳೇ ಅಭಿವೃದ್ಧಿ ಯಂತ್ರಗಳು; ಸರ್ಕಾರದಿಂದ 1 ಲಕ್ಷ ಕೋಟಿ ರೂ ಅರ್ಬನ್ ಚಾಲೆಂಜ್ ಫಂಡ್

‘ಗೂಗಲ್ 1 ದಿನದಲ್ಲಿ 32 ಬಿಲಿಯನ್ ಸಾಲ ಪಡೆದಿದೆ. ಭಾರತದಂತಹ ಸಾರ್ವಭೌಮ ಸರ್ಕಾರಕ್ಕೆ ಇಷ್ಟು ಸಾಲ ಎತ್ತಲು 100 ದಿನ ಬೇಕಾಗುತ್ತದೆ. ಗೂಗಲ್ 1 ಬಿಲಿಯನ್ ಡಾಲರ್ ಮೌಲ್ಯದ 100 ವರ್ಷದ ಬಾಂಡ್ ಅನ್ನೂ ವಿತರಿಸುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಹೋಲಿಸಿದರೆ ಭಾರತದ ಅತ್ಯಂತ ಸುದೀರ್ಘ ಬಾಂಡ್ 40 ವರ್ಷದ್ದು. ದೊಡ್ಡ ಟೆಕ್ ಕಂಪನಿಗಳು ಈಗ ಫಂಡ್ ರೈಸಿಂಗ್ ಅಗಾಧತೆಯಲ್ಲಿ ಮತ್ತು ಅವಧಿಯಲ್ಲಿ ಸಾರ್ವಭೌಮ ರಾಷ್ಟ್ರಗಳಂತೆ ಕಾರ್ಯನಿರ್ವಹಿಸುತ್ತಿವೆ’ ಎಂದು ಹೂಡಿಕೆದಾರರೂ ಆಗಿರುವ ಅವಿರಳ್ ಭಟ್ನಾಗರ್ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಜೋಹೋ ಕಾರ್ಪೊರೇಶನ್​ನ ಸಂಸ್ಥಾಪಕರಾದ ಶ್ರೀಧರ್ ವೆಂಬು ಅವರು ಈಗಿನ ಟೆಕ್ ಕಂಪನಿಗಳನ್ನು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗೆ ಹೋಲಿಸಿದ್ದಾರೆ.

ಶ್ರೀಧರ್ ವೆಂಬು ಅವರ ಎಕ್ಸ್ ಪೋಸ್ಟ್

ಇದನ್ನೂ ಓದಿ: ಆಂಟ್ರೋಪಿಕ್ ಹಾಗೂ ಇತರ 13 ಎಐ ಕಂಪನಿಗಳೊಂದಿಗೆ ಮುಕೇಶ್ ಅಂಬಾನಿ ಅವರ ಜಿಯೋ ಮೈತ್ರಿ

ಗೂಗಲ್, ಮೈಕ್ರೋಸಾಫ್ಟ್, ಆ್ಯಪಲ್, ಮೆಟಾ, ಎನ್​ವಿಡಿಯಾ, ಅಮೇಜಾನ್ ಮತ್ತು ಟೆಸ್ಲಾ ಕಂಪನಿಗಳನ್ನು ಬಿಗ್ ಟೆಕ್ ಅಥವಾ ಮ್ಯಾಗ್ನಿಫಿಕೆಂಟ್ ಸೆವೆನ್ ಕಂಪನಿಗಳೆಂದು ಬಣ್ಣಿಸಲಾಗುತ್ತದೆ. ಈ ಒಂದೊಂದು ಕಂಪನಿಯ ಮಾರುಕಟ್ಟೆ ಮೌಲ್ಯವು ದೊಡ್ಡ ದೇಶದ ಜಿಡಿಪಿಗೆ ಸಮವಾಗಿದೆ. ಆ್ಯಪಲ್ ಕಂಪನಿಯ ಮೌಲ್ಯವು ಇಟಲಿಗಿಂತ ಹೆಚ್ಚಿನದ್ದಾಗಿದೆ. ಮಾರುಕಟ್ಟೆಯಲ್ಲಿ ಇವುಗಳ ಏಕಸ್ವಾಮ್ಯ ಎದ್ದು ಕಾಣುವಂತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 5:19 pm, Sun, 15 February 26

Source link

ಗಂಡು ಹುಲಿ ಮೃತದೇಹ ಪತ್ತೆ: ಡ್ಯಾಂನಲ್ಲಿ ಶವ ತೇಲುತ್ತಿರುವುದನ್ನು ಕಂಡು ಬೆಚ್ಚಿಬಿದ್ದ ಪ್ರವಾಸಿಗರು – Kannada News | Chamarajanagar: Male Tiger Carcass Found in Gundal Reservoir

ಹುಲಿಯ ಮೃತದೇಹ ಪತ್ತೆImage Credit source: tv9 kannada

ಚಾಮರಾಜನಗರ, ಫೆಬ್ರವರಿ 15: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಗುಂಡಾಲ್​​ ಜಲಾಶಯದಲ್ಲಿ ಗಂಡು ಹುಲಿಯ ಮೃತದೇಹ (tiger deadbody) ಪತ್ತೆ ಆಗಿರುವಂತಹ ಘಟನೆ ನಡೆದಿದೆ. ಡ್ಯಾಂನಲ್ಲಿ ಹುಲಿಯ ಶವ ತೇಲುತ್ತಿರುವುದನ್ನು ನೋಡಿದ ಪ್ರವಾಸಿಗರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಕೊಳ್ಳೇಗಾಲ ಪೊಲೀಸರು ಮತ್ತು ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್ ಸಿಬ್ಬಂದಿ ಭೇಟಿ ನೀಡಿದ್ದಾರೆ. ಸದ್ಯ ಜಲಾಶಯದಿಂದ ಹುಲಿಯ ಮೃತದೇಹವನ್ನು ಅರಣ್ಯ ಸಿಬ್ಬಂದಿ ಹೊರತೆಗೆದಿದ್ದು, ಪಶು ವೈದ್ಯರಿಂದ ಸ್ಥಳದಲ್ಲೇ ಹುಲಿಯ ಮರಣೋತ್ತರ ಪರೀಕ್ಷೆ ಮಾಡಿ, ಸ್ಯಾಂಪಲ್ ಸಂಗ್ರಹಿಸಿ ಎಫ್​ಎಸ್​ಎಲ್​ಗೆ ರವಾನಿಸಿದ್ದಾರೆ.

ಚಾಮರಾಜನಗರದಲ್ಲಿ ಮಿತಿಮೀರಿದ ಚಿರತೆ ಉಪಟಳ

ಇನ್ನು ಗಡಿನಾಡು ಚಾಮರಾಜನಗರದಲ್ಲಿ ದಿನ ಕಳೆದಂತೆ ಚಿರತೆ ಉಪಟಳವೂ ಮಿತಿಮೀರಿದೆ. ಇತ್ತೀಚೆಗೆ ಹನೂರು ಭಾಗದಲ್ಲಿ ಚಿರತೆ ದಾಳಿ ನಡೆಸಿ ಮೂರು ಕುರಿಯನ್ನ ತಿಂದು ತೇಗಿತ್ತು. ಕಳೆದ ಒಂದುವರೆ ತಿಂಗಳಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಬರೋಬ್ಬರಿ 15 ಕಡೆ ಚಿರತೆ ದಾಳಿ ನಡೆದಿದೆ.

ಇದನ್ನೂ ಓದಿ: ಜನರನ್ನ ಬಲಿ ಪಡೆಯುತ್ತಿದ್ದ ಹುಲಿಗಳ ಸೆರೆ: ಆಪರೇಷನ್​ T2 ಆಲ್ಫಾ 5ನೇ ಹಂತದ ಕಾರ್ಯಾಚರಣೆಯೂ ಯಶಸ್ವಿ

ಗಡಿ ನಾಡು ಚಾಮರಾದನಗರ ಅಪಾರ ವನ್ಯ ಮೃಗಗಳ ಸಂಪತ್ತು ಹೊಂದಿರುವ ಜಿಲ್ಲೆ. ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್ ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್ ನಂತಹ ಎರೆಡೆರೆಡು ಟೈಗರ್ ರಿಸರ್ವ್ ಫಾರೆಸ್ಟ್ ಹಾಗೂ ಕಾವೇರಿ ವೈಲ್ಡ್ ಲೈಫ್ ಮಲೆ ಮಹದೇಶ್ವರ ವನ್ಯಜೀವಿಧಾಮವಿದೆ.

ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ತೆರಳುತ್ತಿದ್ದ ಭಕ್ತನ ಕತ್ತು ಸೀಳಿ ಕೊಂದು ಹೊತ್ತೊಯ್ದಿದ್ದ ಚಿರತೆ ಕೊನೆಗೂ ಸೆರೆ

ಇಷ್ಟೊಂದು ಅಪಾರ ಸಂಪತ್ತು ವನ್ಯ ಮೃಗಗಳು ಇರುವ ಈ ಜಿಲ್ಲೆಯಲ್ಲಿ ದಿನ ಕಳೆದಂತೆ ಚಿರತೆ ಉಪಟಳ ಹೆಚ್ಚಾಗಿದೆ. ಕಾಡಿನಿಂದ ನಾಡಿಗೆ ಬರುವ ಚಿರತೆಗಳು ಜಾನುವಾರುಗಳ ಮೇಲೆ ದಾಳಿ ಮಾಡುತ್ತಿವೆ. ಮಾದಪ್ಪನ ಭಕ್ತನನ್ನ ಕೊಂದು ತಿಂದ ನರಭಕ್ಷಕ ಚಿರತೆ ಸೆರೆಯಾದ ಬಳಿಕವು ಹನೂರು ಭಾಗದಲ್ಲಿ ಮತ್ತೆ ಮಹಾಲಿಂಗನಕಟ್ಟೆಯಲ್ಲಿ ಚಿರತೆ ದಾಳಿ ನಡೆಸಿ 3 ಮೇಕೆಗಳನ್ನ ತಿಂದು ತೇಗಿತ್ತು.

ಕರ್ನಾಟಕದ ನತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮಹಾಶಿವರಾತ್ರಿ ಸಂಭ್ರಮದ ಮಧ್ಯೆ ಶಿವಲಿಂಗ ಮೂರ್ತಿ ಭಗ್ನ: ರೊಚ್ಚಿಗೆದ್ದ ಗ್ರಾಮಸ್ಥರು – Kannada News | Gadag: Shivling and Nandi Idol Vandalised in on Shivaratri

ಗದಗ, ಫೆಬ್ರವರಿ 15: ಜಿಲ್ಲೆಯ ಮುಂಡರಗಿ ತಾಲೂಕಿನ ಸಿಂಗಟಾಲೂರು ಗ್ರಾಮದಲ್ಲಿ ಮಹಾಶಿವರಾತ್ರಿ ಹಬ್ಬದಂದೇ ಅಹಿತಕರ ಘಟನೆವೊಂದು ನಡೆದಿದೆ. ತುಂಗಭದ್ರಾ ನದಿ ದಡದಲ್ಲಿರುವ ಐತಿಹಾಸಿಕ ರಾಮಲಿಂಗೇಶ್ವರ ದೇವಾಲಯದಲ್ಲಿನ ಶಿವಲಿಂಗ, ಅದರ ಪಾಣಿಪೀಠ ಮತ್ತು ನಂದಿ ವಿಗ್ರಹವನ್ನು ದುಷ್ಕರ್ಮಿಗಳು ಭಗ್ನಗೊಳಿಸಿದ್ದಾರೆ. ಅಹೋರಾತ್ರಿ ಘಟನೆ ನಡೆದಿದೆ. ದೇಶಾದ್ಯಂತ ಶಿವರಾತ್ರಿಯನ್ನು ಭಕ್ತಿ ಭಾವದಿಂದ ಆಚರಿಸುತ್ತಿರುವಾಗ ಈ ರೀತಿಯ ಘಟನೆ ನಡೆದಿರುವುದು ಭಕ್ತರಲ್ಲಿ ತೀವ್ರ ನೋವುಂಟು ಮಾಡಿದೆ. ಸದ್ಯ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು ಆರೋಪಿಗಳನ್ನು ಬಂಧಿಸದಿದ್ದರೆ ಡಿಸಿ ಕಚೇರಿ ಬಳಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

 

Source link

ರಣಜಿ ಟ್ರೋಫಿ ಸೆಮಿಫೈನಲ್​; ನಾಯಕನಾಗಿ 2ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್ – Kannada News | Devdutt Padikkal’s 9th First Class Century and 3500 Runs Powers Karnataka in Ranji Trophy Semifinal

ಲಕ್ನೋದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 2025-26ರ ರಣಜಿ ಟ್ರೋಫಿಯ ಸೆಮಿಫೈನಲ್‌ ಪಂದ್ಯದಲ್ಲಿ ಉತ್ತರಾಖಂಡ್ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕರ್ನಾಟಕ ತಂಡ ಮೊದಲ ದಿನದಂದು ಅಮೋಘ ಪ್ರದರ್ಶನ ನೀಡಿದೆ. ಅನುಭವಿ ಆರಂಭಿಕ ಕೆಎಲ್ ರಾಹುಲ್ 141 ರನ್​ಗಳ ಉಪಯುಕ್ತ ಇನ್ನಿಂಗ್ಸ್ ಆಡಿದರೆ, ತಂಡದ ನಾಯಕ ದೇವದತ್ ಪಡಿಕ್ಕಲ್ ಅದ್ಭುತ ಶತಕ ಬಾರಿಸಿ ತಂಡವನ್ನು ಮುನ್ನಡೆಸಿದರು. ಇದು ಈ ಅವೃತ್ತಿಯ ರಣಜಿ ಟ್ರೋಫಿಯಲ್ಲಿ ಪಡಿಕ್ಕಲ್ ಅವರ ಎರಡನೇ ಶತಕವಾಗಿದ್ದು, ಒಟ್ಟಾರೆಯಾಗಿ, ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಪಡಿಕ್ಕಲ್ ಅವರ ಒಂಬತ್ತನೇ ಶತಕವಾಗಿವಾಗಿದೆ. ಈ ಶತಕದಿಂದಾಗಿ ಪಡಿಕ್ಕಲ್ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 3,500 ರನ್‌ಗಳ ಗಡಿ ಕೂಡ ದಾಟಿದ್ದಾರೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡಕ್ಕೆ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕ ಮಯಾಂಕ್ ಅಗರ್ವಾಲ್ 5 ರನ್‌ಗಳಿಸಿ ಔಟಾದರು. ಹೀಗಾಗಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಪಡಿಕ್ಕಲ್, ಶತಕ ವೀರ ಕೆಎಲ್ ರಾಹುಲ್ (141) ಅವರೊಂದಿಗೆ 278 ರನ್‌ಗಳ ಬೃಹತ್ ಪಾಲುದಾರಿಕೆಯನ್ನು ರೂಪಿಸಿ ತಂಡವನ್ನು 300 ರನ್‌ಗಳ ಗಡಿ ದಾಟಿಸಿದರು. ಮೊದಲ ದಿನದಾಟದ ಎರಡನೇ ಸೆಷನ್​ನಲ್ಲಿ ಈ ಇಬ್ಬರು ಆಟಗಾರರು ತಮ್ಮ ತಮ್ಮ ಶತಕ ಪೂರೈಸಿದರು.

ಈ ಪಂದ್ಯದಲ್ಲಿ 116 ನೇ ರನ್‌ ಕಲೆಹಾಕಿದ ಕೂಡಲೇ ಪಡಿಕ್ಕಲ್ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 3,500 ರನ್‌ಗಳ ಗಡಿ ದಾಟಿದ್ದಾರೆ. 53 ಪಂದ್ಯಗಳಲ್ಲಿ 41 ಕ್ಕೂ ಹೆಚ್ಚು ಸರಾಸರಿಯಲ್ಲಿ ರನ್ ಕಲೆಹಾಕಿರುವ ಪಡಿಕ್ಕಲ್, ಈ ಮಾದರಿಯಲ್ಲಿ 19 ಅರ್ಧಶತಕಗಳನ್ನು ಬಾರಿಸಿದ್ದಾರೆ.

ಪ್ರಸ್ತುತ ರಣಜಿ ಆವೃತ್ತಿಯಲ್ಲಿ ಪಡಿಕ್ಕಲ್, ತಮ್ಮ ಮೊದಲ ಶತಕವನ್ನು ಪಂಜಾಬ್ ವಿರುದ್ಧ ಬಾರಿಸಿದ್ದರು. ಈ ಪಂದ್ಯದಲ್ಲಿ ಪಡಿಕ್ಕಲ್ ಕೇವಲ 85 ಎಸೆತಗಳಲ್ಲಿ ಅಜೇಯ 120 ರನ್​ಗಳ ಇನ್ನಿಂಗ್ಸ್ ಆಡಿದ್ದರು. ಈ ಆವೃತ್ತಿಯಲ್ಲಿ ಒಂಬತ್ತು ಇನ್ನಿಂಗ್ಸ್‌ಗಳನ್ನಾಡಿರುವ ಪಡಿಕ್ಕಲ್ 420 ಕ್ಕೂ ಹೆಚ್ಚು ರನ್‌ ಕೆಲಹಾಕಿದ್ದಾರೆ. ಇದರಲ್ಲಿ ಒಂದು ಅರ್ಧಶತಕದ ಜೊತೆಗೆ ಎರಡು ಶತಕಗಳು ಸೇರಿವೆ.

Source link

ಬಿಗ್ ಶಾಕ್ ಕೊಟ್ಟ KSRTC: ನಾಳೆಯಿಂದಲೇ ನೂತನ ಪರಿಷ್ಕ್ರತ ದರ ಜಾರಿಗೆ – Kannada News | KSRTC Hikes Luggage Transport Price, effect From February 16th

ಬೆಂಗಳೂರು, (ಫೆಬ್ರವರಿ 15): ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳಲ್ಲಿ ಪ್ರಯಾಣಿಕ ರಹಿತವಾಗಿ ಸಾಗಿಸುವ ಲಗೇಜ್ ದರ ಏರಿಕೆ ಮಾಡಲಾಗಿದೆ. ಈ ಬಗ್ಗೆ ಕೆಎಸ್‌ಆರ್‌ಟಿಸಿ ಎಂಡಿ ಅಕ್ರಂ ಪಾಷಾರಿಂದ ಮಾಹಿತಿ ನೀಡಿದ್ದು, ನಾಳೆಯಿಂದ (ಫೆಬ್ರವರಿ 16) ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಕ ರಹಿತವಾಗಿ ಸಾಗಿಸುವ ಲಗೇಜ್‌ಗೆ ನೂತನ ಪರಿಷ್ಕ್ರತ ದರ ಜಾರಿಗೆಯಾಗಲಿದೆ ಎಂದು ಆದೇಶ ಹೊರಡಿಸಿದ್ದಾರೆ.

ಡಿಸೇಲ್, ಸಿಬ್ಬಂದಿ ಹಾಗೂ ಇತರೆ ಖರ್ಚುಗಳ ಹಿನ್ನೆಲೆ ಲಗೇಜ್ ದರ ಏರಿಕೆ ಮಾಡಲಾಗಿದೆ. ಈ ಮೊದಲು 2021ರಲ್ಲಿ ಲಗೇಜ್ ದರ ಏರಿಕೆಯಾಗಿತ್ತು. ಅದಾದ ಬಳಿಕ ಟಿಕೆಟ್ ದರ ಪರಿಷ್ಕ್ರರಣೆ ಆದಾಗ ಲಗೇಜ್ ದರ ಏರಿಕೆಯಾಗಿರಲಿಲ್ಲ. ಹೀಗಾಗಿ ಲಗೇಜ್ ಸಾಗಿರುವ ದರ ಹೆಚ್ಚಳ ಮಾಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಎಂಡಿ ಅಕ್ರಂ ಪಾಷಾ ಆದೇಶದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಬಸ್ ಟಿಕೆಟ್ ದರ ಏರಿಕೆ ಆಗಿದ್ಯಾ? ಅಂತೆ-ಕಂತೆಗಳಿಗೆ ಸ್ಪಷ್ಟನೆ ನೀಡಿದ ಕೆಎಸ್‌ಆರ್‌ಟಿಸಿ

ಎಷ್ಟು ದರ ಏರಿಕೆ?

  • 1 ರಿಂದ 5 ಸ್ಟೇಜ್ ವರೆಗೆ 6 ರೂಪಾಯಿ ( ಈ ಹಿಂದೆ 5 ರುಪಾಯಿ ದರವಿತ್ತು ).
  • 6 ರಿಂದ 12 ಸ್ಟೇಜ್ ವರೆಗೆ 12 ರೂಪಾಯಿ ( ಈ ಹಿಂದೆ 10 ರುಪಾಯಿ ದರವಿತ್ತು ).
  • 156 ರಿಂದ 160 ಸ್ಟೇಜ್ ವರೆಗೆ 145 ರೂಪಾಯಿ ( ಈ ಹಿಂದೆ 123 ರುಪಾಯಿ ದರವಿತ್ತು )

ಇನ್ನು ಕೆಲ ದಿನಗಳ ಹಿಂದೆ ಕೆಎಸ್​​ಆರ್​​ಟಿಸಿ ಬಸ್ ಟಿಕೆಟ್ ದರ ಹೆಚ್ಚಳದ ಸುದ್ದಿ ಹಬ್ಬಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಬಳಿಕ ಎಚ್ಚೆತ್ತುಕೊಂಡ ಕೆಎಸ್​​ಆರ್​​ಟಿಸಿ, ಯಾವುದೇ ಟಿಕೆಟ್ ದರ ಏರಿಕೆ ಆಗಿಲ್ಲ ಎಂದು ಸ್ಪಷ್ಟಪಡಿಸಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Vastu Tips: ಈ ಚಿತ್ರ ನಿಮ್ಮ ಮನೆಯಲ್ಲಿದ್ದರೆ ಸಂಪತ್ತು ಮತ್ತು ಸಕಾರಾತ್ಮಕ ಶಕ್ತಿಗೆಂದೂ ಕೊರತೆಯಾಗದು! – Kannada News | Vastu paintings for home prosperity attract wealth and positivity

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಪ್ರತಿಯೊಂದು ವಸ್ತುವಿಗೂ ಒಂದು ಶಕ್ತಿ ಇರುತ್ತದೆ ಎಂದು ನಂಬಲಾಗುತ್ತದೆ. ವಿಶೇಷವಾಗಿ ವರ್ಣಚಿತ್ರಗಳು ಮನೆಯ ವಾತಾವರಣವನ್ನು ಸಕಾರಾತ್ಮಕವಾಗಿ ಬದಲಾಯಿಸುವ ಸಾಮರ್ಥ್ಯ ಹೊಂದಿವೆ. ಸರಿಯಾದ ದಿಕ್ಕಿನಲ್ಲಿ ಶುಭ ಸಂಕೇತಗಳನ್ನು ಪ್ರತಿಬಿಂಬಿಸುವ ಚಿತ್ರಗಳನ್ನು ಇಟ್ಟರೆ ಲಕ್ಷ್ಮಿ ದೇವಿ ಅವರ ಆಶೀರ್ವಾದ ದೊರೆಯುತ್ತದೆ, ಆರ್ಥಿಕ ಸಮಸ್ಯೆಗಳು ಕಡಿಮೆಯಾಗುತ್ತವೆ ಮತ್ತು ಮನೆಗೆ ಸಮೃದ್ಧಿ ಪ್ರವೇಶಿಸುತ್ತದೆ ಎಂದು ಹೇಳಲಾಗುತ್ತದೆ.

ಓಡುತ್ತಿರುವ ಏಳು ಕುದುರೆಗಳ ಚಿತ್ರವನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇಡುವುದು ಪ್ರಗತಿ ಮತ್ತು ಯಶಸ್ಸಿನ ಸಂಕೇತವಾಗಿದೆ. ಈ ಚಿತ್ರ ಜೀವನದಲ್ಲಿ ವೇಗ ಮತ್ತು ಉತ್ಸಾಹವನ್ನು ತರುತ್ತದೆ ಎಂದು ನಂಬಲಾಗಿದೆ. ಅದೇ ರೀತಿ ಚಿನ್ನದ ನಾಣ್ಯಗಳು ಅಥವಾ ಹಣದ ಮರದ ಚಿತ್ರವನ್ನು ದಕ್ಷಿಣ ಅಥವಾ ಪೂರ್ವ ದಿಕ್ಕಿನಲ್ಲಿ ಇಟ್ಟರೆ ಧನಲಾಭ ಮತ್ತು ನಗದು ಹರಿವು ಹೆಚ್ಚುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ.

ಹರಿಯುವ ನೀರು ಅಥವಾ ಜಲಪಾತದ ಚಿತ್ರವು ಸಮೃದ್ಧಿ ಮತ್ತು ನಿರಂತರ ಹಣದ ಪ್ರವಾಹದ ಸಂಕೇತವಾಗಿದೆ. ಇದನ್ನು ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡುವುದು ಉತ್ತಮ. ನವಿಲಿನ ಚಿತ್ರವು ಸೌಂದರ್ಯ ಮತ್ತು ಸಕಾರಾತ್ಮಕ ಶಕ್ತಿಯನ್ನು ಸೂಚಿಸುತ್ತದೆ; ಪೂರ್ವ-ಈಶಾನ್ಯ ಭಾಗದಲ್ಲಿ ಇದನ್ನು ಇಟ್ಟರೆ ಮನೆಯಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ ಎಂದು ನಂಬಲಾಗಿದೆ. ಉದಯಿಸುತ್ತಿರುವ ಸೂರ್ಯನ ಚಿತ್ರವನ್ನು ಪೂರ್ವ ದಿಕ್ಕಿನಲ್ಲಿ ಇಡುವುದರಿಂದ ಹೊಸ ಅವಕಾಶಗಳು ಮತ್ತು ವೃತ್ತಿ ಬೆಳವಣಿಗೆ ಸಾಧ್ಯವಾಗುತ್ತದೆ.

ಇದನ್ನೂ ಓದಿ: ಮನೆಯ ಹತ್ತಿರ ಪಾರಿಜಾತ ಗಿಡ ಇರುವುದು ಅಶುಭನಾ? ಜ್ಯೋತಿಷ್ಯ ಸಲಹೆ ಇಲ್ಲಿದೆ

ಹೀಗಾಗಿ, ಮನೆಯಲ್ಲಿ ಇಡುವ ಪ್ರತಿಯೊಂದು ಚಿತ್ರವೂ ಕೇವಲ ಅಲಂಕಾರವಲ್ಲ; ಅದು ನಮ್ಮ ಜೀವನದ ಮೇಲೆ ಪ್ರಭಾವ ಬೀರುವ ಶಕ್ತಿಯ ಪ್ರತೀಕವಾಗಿದೆ ಎಂಬ ನಂಬಿಕೆ ಇದೆ. ಸರಿಯಾದ ಆಯ್ಕೆ ಮತ್ತು ಸರಿಯಾದ ದಿಕ್ಕು ಮನೆಯ ಸಮೃದ್ಧಿಗೆ ಮಾರ್ಗ ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೆಲದ ಮೇಲಿನ ಹಠಮಾರಿ ಕಲೆಗಳನ್ನು ಹೋಗಲಾಡಿಸಲು ಜಸ್ಟ್‌ ಈ ಟಿಪ್ಸ್‌ ಪಾಲಿಸಿ – Kannada News | Adding these items to mop water can easily remove stains from floors

ಮನೆಯನ್ನು ಶುಚಿಯಾಗಿ ಇಟ್ಟುಕೊಳ್ಳುವುದು ಅತ್ಯಗತ್ಯ. ಹೌದು ಅದರಲ್ಲೂ ಸ್ವಚ್ಛತೆಯ ದೃಷ್ಟಿಯಿಂದ ಪ್ರತಿನಿತ್ಯ ನೆಲವನ್ನು (Floor Cleaning) ಗುಡಿಸಿ ಒರೆಸಲೇಬೇಕು. ಇಲ್ಲದಿದ್ದರೆ ಕೀಟಾಣು, ಸೂಕ್ಷ್ಮಜೀವಿಗಳು ನೆಲದಲ್ಲಿಯೇ ನೆಲೆಗೊಳ್ಳುವುದು ಮಾತ್ರವಲ್ಲದೆ, ಕಲೆ, ಕೊಳೆಗಳಿಂದಾಗಿ ಟೈಲ್ಸ್‌, ಗ್ರಾನೈಟ್‌ನ ಸೌಂದರ್ಯವೇ ಹಾಳಾಗಿ ಹೋಗುತ್ತದೆ. ಅದಕ್ಕಾಗಿ ಪ್ರನಿತ್ಯ ಎಲ್ಲರೂ ನೆಲ ಒರೆಸುತ್ತಾರೆ. ಆದ್ರೆ ನಿತ್ಯ ನೆಲ ಒರೆಸಿದರೂ ಟೈಲ್ಸ್‌ ಮೇಲೆ ಅಂಟಿರುವ ಕಲೆಗಳು ಹೋಗುತ್ತಿಲ್ಲ ಎಂದು ಹಲವರು ದೂರುತ್ತಿರುತ್ತಾರೆ. ಹೀಗಿರುವಾಗ ದುಬಾರಿ ಕ್ಲೀನರ್‌ಗಳನ್ನು ಬಲಸುವ ಬದಲು ಮನೆಯಲ್ಲಿಯೇ ಲಭ್ಯವಿರುವ ಈ ಕೆಲವೊಂದು ವಸ್ತುಗಳನ್ನು ನೆಲ ಒರೆಸುವ ನೀರಿಗೆ ಸೇರಿಸಿ ನೆಲ ಕ್ಲೀನ್‌ ಮಾಡುವುದರಿಂದ ಹಠಮಾರಿ ಕಲೆಗಳನ್ನೂ ನಿಮಿಷದಲ್ಲಿ ಹೋಗಲಾಡಿಸಬಹುದು.  ಜೊತೆಗೆ ನೆಲ ಪಳಪಳನೆ ಹೊಳೆಯುತ್ತದೆ.

ನೆಲದ ಮೇಲಿನ ಹಠಮಾರಿ ಕಲೆಗಳನ್ನು ಹೋಗಲಾಡಿಸುವುದು ಹೇಗೆ?

ಉಪ್ಪು ಮತ್ತು ಶಾಂಪೂ: ನೆಲ ಒರೆಸುವ ನೀರಿಗೆ ಒಂದು ಟೀಚಮಚ ಕಲ್ಲು ಉಪ್ಪನ್ನು ಹಾಗೂ ಶಾಂಪೂ ಸೇರಿಸಿ ಶಾಂಪೂ ಬದಲಿಗೆ ಲಿಕ್ವಿಡ್ ಹ್ಯಾಂಡ್ ವಾಶ್ ಅನ್ನು ಸಹ ಬಳಸಬಹುದು. ಇವು ನೆಲದ ಮೇಲೆ ಅಂಟಿರುವ ಕಲೆಯನ್ನು ಹಾಗೂ ವಾಸನೆಯನ್ನು ಸುಲಭವಾಗಿ ತೆಗೆದು ಹಾಕುತ್ತದೆ. ಮತ್ತು ನೆಲದ ಹೊಳಪನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ವಾರಕ್ಕೆ ಎರಡು ಬಾರಿ ಈ ವಿಧಾನವನ್ನು ಅನುಸರಿಸುವುದರಿಂದ ಟೈಲ್ಸ್‌ ಹಳದಿ ಬಣ್ಣಕ್ಕೆ ತಿರುಗುವುದನ್ನು ತಡೆಯಬಹುದು.

ಅಡಿಗೆ ಸೋಡಾ ಪೇಸ್ಟ್:  ನೆಲದ ಮೇಲೆ ಹಳೆಯ ಮೊಂಡುತನದ ಕಲೆಗಳಿದ್ದರೆ ಅವುಗಳನ್ನು ಹೋಗಲಾಡಿಸಲು, ಒಂದು ಕಪ್‌ನಲ್ಲಿ ಸ್ವಲ್ಪ ನೀರು ಮತ್ತು ಅಡಿಗೆ ಸೋಡಾವನ್ನು ಬೆರೆಸಿ ದಪ್ಪ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಕಲೆ ಇರುವ ಪ್ರದೇಶಕ್ಕೆ ಹಚ್ಚಿ. 15-20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ, ಒದ್ದೆಯಾದ ಬಟ್ಟೆ ಸ್ಕ್ರಬ್ ಮಾಡಿ. ಇದು ಪರಿಣಾಮಕಾರಿಯಾಗಿ ಕಲೆಗಳನ್ನು ತೊಡೆದುಹಾಕುತ್ತದೆ.

ಉಗುರು ಬೆಚ್ಚಗಿನ ನೀರು:  ಉಗುರು ಬೆಚ್ಚಗಿನ ನೀರಿನಿಂದ ನೆಲ ಒರೆಸುವುದರಿಂದ  ನೆಲದ ಸಂಗ್ರಹವಾದ ಧೂಳು ಬೇಗನೆ ನಿವಾರಣೆಯಾಗುತ್ತದೆ ಮತ್ತು ನೆಲವು ಸ್ವಚ್ಛವಾಗಿ ಕಾಣುವಂತೆ ಮಾಡುತ್ತದೆ. ಈ ವಿಧಾನವು ದೈನಂದಿನ ಶುಚಿಗೊಳಿಸುವಿಕೆಗೆ ಒಳ್ಳೆಯದು. ಬಯಸಿದಲ್ಲಿ, ನೀವು ಈ ನೀರಿಗೆ  ಕೆಲವು ಹನಿ ನಿಂಬೆ ರಸವನ್ನು ಕೂಡ ಸೇರಿಸಬಹುದು, ಇದು ಸೌಮ್ಯವಾದ, ತಾಜಾ ಪರಿಮಳವನ್ನು ನೀಡುತ್ತದೆ.

ಇದನ್ನೂ ಓದಿ: ನೀರಿನ ಬಾಟಲಿಯಿಂದ ಬರುವ ಕೆಟ್ಟ ವಾಸನೆಯನ್ನು ಹೋಗಲಾಡಿಸಲು ಸರಳ ಸಲಹೆ ಪಾಲಿಸಿ

ವಿನೆಗರ್: ವಿನೆಗರ್ ಒಂದು ನೈಸರ್ಗಿಕ ಕ್ಲೀನರ್ ಆಗಿದೆ. ಇದನ್ನು ನೆಲ ಒರೆಸುವ ನೀರಿಗೆ ಬೆರೆಸಿ ನೆಲ ಕ್ಲೀನ್‌ ಮಾಡುವುದರಿಂದ  ಕಲೆ, ಕೊಳೆಯನ್ನು ಸುಲಭವಾಗಿ ತೆಗೆದುಹಾಕುತ್ತದೆ. ಇದು ಟೈಲ್ಸ್ ಮತ್ತು ಮಾರ್ಬಲ್‌ ಮೇಲೆ ವಿಶೇಷವಾಗಿ ಪರಿಣಾಮಕಾರಿಯಾಗಿದೆ.

ಸಾರಭೂತ ತೈಲಗಳು: ನಿಮ್ಮ ಮನೆಯಲ್ಲಿ ನಿರಂತರ ಸುಗಂಧ ಬೇಕಾದರೆ, ಒರೆಸುವ ನೀರಿಗೆ ಕೆಲವು ಹನಿ ಲ್ಯಾವೆಂಡರ್ ಅಥವಾ ಇತರ ಸಾರಭೂತ ತೈಲಗಳನ್ನು ಸೇರಿಸಿ. ಇದು  ಮನೆಗೆ ಸುಗಂಧ ಮತ್ತು ಸಕಾರಾತ್ಮಕ ಶಕ್ತಿಯನ್ನು ತುಂಬುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಪಿ, ಹೃದ್ರೋಗ ಇರುವವರು ಹವಾಮಾನ ಬದಲಾಗುತ್ತಿರುವಾಗ ಹೆಚ್ಚು ಜಾಗರೂಕರಾಗಿರಬೇಕು ಎಂಬುದಕ್ಕೆ ಕಾರಣವೇನು? – Kannada News | How Weather Affects BP and Heart Health

ಇತ್ತೀಚಿನ ದಿನಗಳಲ್ಲಿ, ಹವಾಮಾನ ಪದೇ ಪದೇ ಬದಲಾಗುತ್ತಿದೆ. ಕೆಲವೊಮ್ಮೆ ಶೀತ, ಆರ್ದ್ರತೆ ಮತ್ತೆ ಕೆಲವೊಮ್ಮೆ ಬೆಚ್ಚಗಿನ ವಾತಾವರಣ. ಈ ರೀತಿಯ ಏರಿಳಿತಗಳು ದೇಹದ ಸಾಮಾನ್ಯ ಸಮತೋಲನವನ್ನು ಅಡ್ಡಿಪಡಿಸಬಹುದು, ಅಷ್ಟು ಮಾತ್ರವಲ್ಲ ರಕ್ತದೊತ್ತಡ (BP) ಮತ್ತು ಹೃದಯ ಸಂಬಂಧಿ ಆರೋಗ್ಯ ಸಮಸ್ಯೆ ಇರುವವರಿಗೆ ಇದರಿಂದ ಆಗುವ ಅಪಾಯ ಹೆಚ್ಚಾಗಿರುತ್ತದೆ. ಇಂತಹ ಸಮಯದಲ್ಲಿ, ರೋಗಿಗಳಿಗೆ ತಲೆನೋವು, ತಲೆತಿರುಗುವಿಕೆ, ಹಠಾತ್ ಆಯಾಸ, ಆತಂಕ, ಎದೆಯಲ್ಲಿ ಭಾರ, ಉಸಿರಾಟದ ತೊಂದರೆ, ಅತಿಯಾದ ಬೆವರುವುದು ಅಥವಾ ಅನಿಯಮಿತ ಹೃದಯ ಬಡಿತ ಕಂಡುಬರುವುದು ಸೇರಿದಂತೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಅನುಭವಕ್ಕೆ ಬರಬಹುದು. ಕೆಲವರಲ್ಲಿ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಂಡುಬರುತ್ತದೆ. ಹಾಗಾಗಿ ಲಕ್ಷಣಗಳನ್ನು ಸರಿಯಾಗಿ ಗುರುತಿಸಿ ಅವುಗಳನ್ನು ತಡೆಗಟ್ಟಬೇಕು.

ಲಕ್ಷಣಗಳು ಹೇಗಿರುತ್ತವೆ?

ಸಾಮಾನ್ಯವಾಗಿ ಇದು ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರಬಹುದು. ಕೆಲವರಲ್ಲಿ ಹಸಿವು ಕಡಿಮೆಯಾಗುವುದು, ದೇಹ ದೌರ್ಬಲ್ಯ ಮತ್ತು ಕೆಲಸದಲ್ಲಿ ಆಸಕ್ತಿಯ ಕೊರತೆಯಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇನ್ನು ಕೆಲವರಲ್ಲಿ, ಎದ್ದ ತಕ್ಷಣ ಭಾರವಾದ ಭಾವನೆ ಅಥವಾ ದಿನವಿಡೀ ಆಲಸ್ಯ ಅನುಭವಕ್ಕೆ ಬರಬಹುದು. ಈ ಲಕ್ಷಣಗಳು ದೇಹ ಬದಲಾಗುತ್ತಿರುವ ಪರಿಸರ ಅಥವಾ ಹವಾಮಾನಕ್ಕೆ ಹೊಂದಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಸೂಚಿಸುತ್ತವೆ. ಅಂತಹ ಸಂದರ್ಭಗಳಲ್ಲಿ, ಈ ರೋಗಲಕ್ಷಣಗಳನ್ನು ನಿರ್ಲಕ್ಷಿಸುವುದು ಹಾನಿಕಾರಕವಾಗಬಹುದು. ಹಾಗಾಗಿ ಸಮಯಕ್ಕೆ ಸರಿಯಾಗಿ ಜಾಗೃತೆ ವಹಿಸುವುದು ಬಹಳ ಮುಖ್ಯವಾಗುತ್ತದೆ.

ಹವಾಮಾನ ಬದಲಾವಣೆ ಬಿಪಿ ಮತ್ತು ಹೃದಯ ಸಂಬಂಧಿ ಸಮಸ್ಯೆಗಳಿರುವವರ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ರಾಜೀವ್ ಗಾಂಧಿ ಆಸ್ಪತ್ರೆಯ ಹೃದ್ರೋಗ ವಿಭಾಗದ ಡಾ. ಅಜಿತ್ ಜೈನ್ ಹೇಳುವ ಪ್ರಕಾರ್, ಹವಾಮಾನದಲ್ಲಿನ ಬದಲಾವಣೆಯಾದಾಗ, ದೇಹವು ತನ್ನನ್ನು ತಾನು ಹೊಂದಿಸಿಕೊಳ್ಳಲು ಶ್ರಮಿಸಬೇಕಾಗುತ್ತದೆ. ಶೀತ, ಶಾಖ ಮತ್ತು ತೇವಾಂಶದಲ್ಲಿನ ಹಠಾತ್ ಬದಲಾವಣೆಗಳು ಹೃದಯದ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡಬಹುದು. ತಾಪಮಾನದಲ್ಲಿನ ವ್ಯತ್ಯಾಸಗಳು ರಕ್ತದೊತ್ತಡ ಅಸಮತೋಲನಕ್ಕೆ ಕಾರಣವಾಗಬಹುದು, ಇದು ಅಧಿಕ ಅಥವಾ ಕಡಿಮೆ ರಕ್ತದೊತ್ತಡಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಇನ್ನು, ಆರ್ದ್ರತೆಯಲ್ಲಿ, ದೇಹದಾದ್ಯಂತ ಆಮ್ಲಜನಕವನ್ನು ತಲುಪಿಸಲು ಹೃದಯವು ಹೆಚ್ಚು ಶ್ರಮಿಸಬೇಕಾಗುತ್ತದೆ, ಇದು ಆಯಾಸ ಮತ್ತು ಉಸಿರಾಟದ ತೊಂದರೆಗೆ ಕಾರಣವಾಗಬಹುದು. ಅದೇ ರೀತಿ, ಅತಿಯಾದ ಬೆವರುವಿಕೆಯು ದೇಹದಲ್ಲಿ ನೀರು ಮತ್ತು ಅಗತ್ಯ ಖನಿಜಗಳ ಕೊರತೆಯನ್ನು ಉಂಟುಮಾಡಬಹುದು, ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಪರಿಗಣಿಸಲಾಗಿದೆ. ಹವಾಮಾನದಲ್ಲಿನ ಬದಲಾವಣೆಗಳು ದೈನಂದಿನ ದಿನಚರಿ, ಆಹಾರ ಮತ್ತು ನಿದ್ರೆಯ ಮೇಲೂ ಪರಿಣಾಮ ಬೀರುತ್ತವೆ ಮತ್ತು ಕಾಲಾನಂತರದಲ್ಲಿ ಈ ಅಭ್ಯಾಸಗಳು ಹೃದಯ ಸಂಬಂಧಿತ ಸಮಸ್ಯೆಗಳನ್ನು ಹೆಚ್ಚಿಸಬಹುದು.

ಇದನ್ನೂ ಓದಿ: ಹೈಬಿಪಿ ಇರುವವರಿಗೆ ತಲೆಯ ಹಿಂಭಾಗದಲ್ಲಿ ನೋವು ಕಂಡುಬರುತ್ತದೆಯೇ?

ಹೇಗೆ ರಕ್ಷಿಸಿಕೊಳ್ಳಬಹುದು?

ಬದಲಾಗುತ್ತಿರುವ ಹವಾಮಾನದಲ್ಲಿ, ಜನರು ಸಮತೋಲಿತ ಆಹಾರವನ್ನು ಸೇವನೆ ಮಾಡಬೇಕು. ನಿರ್ಜಲೀಕರಣವನ್ನು ತಪ್ಪಿಸಲು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು. ಸಾಧ್ಯವಾದಷ್ಟು ಮನೆಯಲ್ಲಿ ತಯಾರಿಸಿದ ಊಟವನ್ನು ಸೇವನೆ ಮಾಡಿ. ಹವಾಮಾನಕ್ಕೆ ಅನುಗುಣವಾಗಿ ಉಡುಗೆ ತೊಡಿ. ಇದರಿಂದ ಶೀತ ಅಥವಾ ಶಾಖವನ್ನು ತಪ್ಪಿಸಬಹುದು. ಪ್ರತಿದಿನ ಲಘು ವ್ಯಾಯಾಮ ಮಾಡಿ, ಆದರೆ ದಣಿವು ಹೆಚ್ಚಿದ್ದಾಗ ವಿಶ್ರಾಂತಿ ಪಡೆಯಿರಿ. ಒತ್ತಡದಿಂದ ದೂರವಿರಲು ಮತ್ತು ಮನಸ್ಸನ್ನು ಶಾಂತವಾಗಿರಿಸಿಕೊಳ್ಳಲು ಪ್ರಯತ್ನಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂಧರ್’ ಸಿನಿಮಾ ಆಫರ್ ತಿರಸ್ಕರಿಸಿದರಾ ನಾಗಾರ್ಜುನ? – Kannada News | Did Dhurandhar’s Rehman Dakait character offered to Akkineni Nagarjuna first

ಬಾಲಿವುಡ್‌ನ ಇತ್ತೀಚಿನ ಬ್ಲಾಕ್‌ಬಸ್ಟರ್ ಸಿನಿಮಾ ‘ಧುರಂಧರ್’ (Dhurandhar) ಬಾಕ್ಸ್ ಆಫೀಸ್‌ನಲ್ಲಿ ಇತಿಹಾಸವನ್ನೇ ಬರೆದಿದೆ. ರಣ್ವೀರ್ ಸಿಂಗ್ ನಾಯಕನಾಗಿ ನಟಿಸಿರುವ ಈ ಸಿನಿಮಾನಲ್ಲಿ ಅವರಷ್ಟೆ ಪ್ರಾಮುಖ್ಯತೆಯನ್ನು ಇತರೆ ಪಾತ್ರಗಳು ಸಹ ಪಡೆದುಕೊಂಡಿವೆ. ಅದರಲ್ಲೂ ರಹಮಾನ್ ಡಕೈತ್ ಪಾತ್ರವಂತೂ ಸೂಪರ್ ಹಿಟ್ ಆಗಿದೆ. ಪಾತ್ರದಲ್ಲಿ ನಟಿಸಿರುವ ಅಕ್ಷಯ್ ಖನ್ನಾ, ತಾವೇಕೆ ಬಾಲಿವುಡ್​ನ ಪ್ರತಿಭಾವಂತ ನಟ ಎಂಬುದನ್ನು ಸಾಬೀತುಪಡಿಸಿದ್ದಾರೆ. ಆದರೆ ಈ ಪಾತ್ರ ಮೊದಲಿಗೆ ದಕ್ಷಿಣದ ಸ್ಟಾರ್ ನಟನಿಗೆ ಆಫರ್ ಮಾಡಲಾಗಿತ್ತು ಎನ್ನಲಾಗುತ್ತಿದೆ. ತೆಲುಗಿನ ಸ್ಟಾರ್ ಹೀರೋ ಆಗಿರುವ ಅಕ್ಕಿನೇನಿ ನಾಗಾರ್ಜುನ ಅವರಿಗೆ ರಹಮಾನ್ ಡಕೈತ್ ಪಾತ್ರ ಆಫರ್ ಆಗಿತ್ತು, ಆದರೆ ಅವರು ಪಾತ್ರವನ್ನು ತಿರಸ್ಕರಿಸಿದರು ಎನ್ನಲಾಗುತ್ತಿದೆ. ಈಗ ಸ್ವತಃ ನಾಗಾರ್ಜುನ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ ನಾಗಾರ್ಜುನ, ‘ಖಂಡಿತವಾಗಿಯೂ ಇಲ್ಲ, ನನಗೆ ಈ ಪಾತ್ರದ ಆಫರ್ ಬಂದಿರಲಿಲ್ಲ. ಆದರೆ ಅಂತಹ ಅದ್ಭುತ ಪಾತ್ರ ನನಗೆ ಸಿಗಬೇಕಿತ್ತು ಎಂದು ಈಗ ಅನಿಸುತ್ತಿದೆ. ‘ಧುರಂಧರ್’ ಒಂದು ಅದ್ಭುತ ಸಿನಿಮಾ. ನಿರ್ದೇಶಕ ಆದಿತ್ಯ ಧರ್ ಅವರ ಮೇಕಿಂಗ್ ಶೈಲಿ ನನಗೆ ತುಂಬಾ ಇಷ್ಟವಾಯಿತು. ಚಿತ್ರದಲ್ಲಿ ಪ್ರತಿಯೊಬ್ಬರೂ ಅದ್ಭುತವಾಗಿ ನಟಿಸಿದ್ದಾರೆ, ವಿಶೇಷವಾಗಿ ಅಕ್ಷಯ್ ಖನ್ನಾ ಅವರ ಅಭಿನಯ ಅದ್ಭುತವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮೂಲಕ ತಮಗೆ ಆಫರ್ ಬಂದಿಲ್ಲ ಎಂಬ ವಿಷಯವನ್ನು ಸ್ಪಷ್ಟಪಡಿಸಿ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ನಾಗಾರ್ಜುನ ಅವರು ಕೆಲ ತಿಂಗಳ ಹಿಂದೆ ಬಿಡುಗಡೆ ಆದ ‘ಕೂಲಿ’ ಸಿನಿಮಾನಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾ ದೊಡ್ಡ ಹಿಟ್ ಆಗದೇ ಇದ್ದರೂ ಸಹ ನಾಗಾರ್ಜುನ ಅವರು ಹೊಸ ಪ್ರಯೋಗಕ್ಕೆ ತಮ್ಮನ್ನು ಒಗ್ಗಿಸಿಕೊಂಡಿದ್ದು ಪ್ರಶಂಸೆಗೆ ಕಾರಣವಾಯ್ತು. ಇದೇ ಕಾರಣಕ್ಕೆ ಈಗ ‘ಧುರಂಧರ್’ ಸಿನಿಮಾದ ನೆಗೆಟಿವ್ ರೋಲ್ ಆಫರ್ ಸಹ ಬಂದಿರಬಹುದು ಎಂದು ನೆಟ್ಟಿಗರು ಊಹೆ ಮಾಡಿ ಸುದ್ದಿ ಹಬ್ಬಿಸಿದ್ದರು. ಆದರೆ ಅದನ್ನು ನಾಗಾರ್ಜುನ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ತಾವು ಅಂಥಹಾ ಪಾತ್ರದಲ್ಲಿ ನಟಿಸಲು ಸಿದ್ದ ಎಂದು ಪರೋಕ್ಷವಾಗಿ ಹೇಳಿದ್ದಾರೆ. ನಾಗಾರ್ಜುನ ಅವರು ಇತ್ತೀಚೆಗೆ ವಿಲನ್ ಪಾತ್ರ, ಪ್ರಮುಖ ಪೋಷಕ ಪಾತ್ರಗಳಲ್ಲಿ ಸಹ ನಟಿಸುತ್ತಿದ್ದಾರೆ ಧನುಶ್ ನಾಯಕನಾಗಿ ನಟಿಸಿದ್ದ ‘ಕುಬೇರ’ ಸಿನಿಮಾನಲ್ಲಿಯೂ ನಾಗಾರ್ಜುನ ಪ್ರಮುಖ ಪೋಷಕ ಪಾತ್ರದಲ್ಲಿ ನಟಿಸಿದ್ದರು.

ಇದನ್ನೂ ಓದಿ:‘ಧುರಂಧರ್ 2’ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ ‘ಟಾಕ್ಸಿಕ್’

ಇದೀಗ ನಾಗಾರ್ಜುನ ಅವರು ವೃತ್ತಿಜೀವನದ 100ನೇ ಸಿನಿಮಾನಲ್ಲಿ ನಟಿಸಲು ತಯಾರಿ ನಡೆಸಿದ್ದಾರೆ. ಇದನ್ನು ಆರ್‌ ಕಾರ್ತಿಕ್ ನಿರ್ದೇಶಿಸುತ್ತಿದ್ದು, ಈ ಚಿತ್ರದಲ್ಲಿ ನಟಿ ಟಬು ಕೂಡ ನಟಿಸುವ ಸಾಧ್ಯತೆ ಇದೆ. ಸಿನಿಮಾಕ್ಕೆ ‘ಲಾಟರಿ ಕಿಂಗ್’ ಎಂದು ಹೆಸರಿಡಲಾಗಿದೆ. ಸಿನಿಮಾವನ್ನು ನಾಗಾರ್ಜುನ ಅವರ ಅನ್ನಪೂರ್ಣ ಸ್ಟುಡಿಯೋಸ್​​ ವತಿಯಿಂದಲೇ ನಿರ್ಮಾಣ ಮಾಡಲಾಗುತ್ತಿದೆ. ಇನ್ನು ಮುಂದಿನ ವರ್ಷದ ಸಂಕ್ರಾಂತಿಗೆ ತಮ್ಮ ನಟನೆಯ ಸಿನಿಮಾ ಬಿಡುಗಡೆ ಮಾಡುವುದಾಗಿ ಈಗಾಗಲೇ ನಾಗಾರ್ಜುನ ಘೋಷಣೆ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಣಜಿ ಟ್ರೋಫಿ ಸೆಮಿಫೈನಲ್​ನಲ್ಲಿ 141 ರನ್ ಚಚ್ಚಿದ ರಾಹುಲ್ – Kannada News | KL Rahul’s Century Powers Karnataka in Ranji Semifinal vs Uttarakhand

ಕರ್ನಾಟಕ ಹಾಗೂ ಉತ್ತರಾಖಂಡ ನಡುವಿನ 2025-26 ರ ಆವೃತ್ತಿಯ ರಣಜಿ ಟ್ರೋಫಿ ಸೆಮಿಫೈನಲ್‌ ಪಂದ್ಯ ಇಂದಿನಿಂದ ಲಕ್ನೋದ ಏಕನಾ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಉತ್ತರಾಖಂಡ, ಕರ್ನಾಟಕವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್‌ ಆರಂಭಿಸಿದ ಕರ್ನಾಟಕ ತಂಡವು ಕಳಪೆ ಆರಂಭ ಪಡೆದುಕೊಂಡಿತು. ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಕೇವಲ 5 ರನ್‌ಗಳಿಸಿ ಔಟಾದರು. ಆದಾಗ್ಯೂ, ಆ ಬಳಿಕ ಜೊತೆಯಾದ ನಾಯಕ ದೇವದತ್ ಪಡಿಕ್ಕಲ್ ಹಾಗೂ ರಾಹುಲ್ 200 ಕ್ಕೂ ಹೆಚ್ಚು ರನ್‌ಗಳ ಜೊತೆಯಾಟ ನಡೆಸಿದರು. ಇದೇ ವೇಳೆ ರಾಹುಲ್ ತಮ್ಮ 25 ನೇ ಪ್ರಥಮ ದರ್ಜೆ ಶತಕವನ್ನು ಪೂರೈಸಿದರು.

ರಾಹುಲ್ 153 ಎಸೆತಗಳಲ್ಲಿ ರಣಜಿಯಲ್ಲಿ ಸತತ ಎರಡನೇ ಶತಕ ಬಾರಿಸಿದರು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಮುಂಬೈ ವಿರುದ್ಧ ಗೆಲುವಿನ ಶತಕ ಬಾರಿಸಿದ್ದ ರಾಹುಲ್ ಸೆಮಿಫೈನಲ್​ನಲ್ಲಿ ಶತಕ ಬಾರಿಸಿ ತಂಡವನ್ನು ಸಂಕಷ್ಟದಿಂದ ಹೊರತಂದರು. ಅಂತಿಮವಾಗಿ ತಮ್ಮ ಇನ್ನಿಂಗ್ಸ್​ನಲ್ಲಿ 211 ಎಸೆತಗಳನ್ನು ಎದುರಿಸಿದ ರಾಹುಲ್ 11 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 141 ರನ್ ಬಾರಿಸಿದರು.

ರಣಜಿ ಟ್ರೋಫಿಯಲ್ಲಿ ಕೆಎಲ್ ರಾಹುಲ್ ಅವರ ಪ್ರದರ್ಶನ ಅದ್ಭುತವಾಗಿದೆ. ಮೇಲೆ ಹೇಳಿದಂತೆ ಕ್ವಾರ್ಟರ್ ಫೈನಲ್‌ನಲ್ಲಿ, ಮುಂಬೈ ವಿರುದ್ಧದ ಎರಡನೇ ಇನ್ನಿಂಗ್ಸ್‌ನಲ್ಲಿ ಕೆಎಲ್ ರಾಹುಲ್ ಅದ್ಭುತ ಶತಕದೊಂದಿಗೆ ಕರ್ನಾಟಕವನ್ನು ಗೆಲುವಿನತ್ತ ಕೊಂಡೊಯ್ದರು. ಮುಂಬೈ ನೀಡಿದ 325 ರನ್‌ಗಳ ಗುರಿ ಬೆನ್ನಟ್ಟಿದ ಕರ್ನಾಟಕ ಪರ ಕೆಎಲ್ ರಾಹುಲ್ 182 ಎಸೆತಗಳಲ್ಲಿ 130 ರನ್ ಗಳಿಸುವ ಮೂಲಕ ತಮ್ಮ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಅದಕ್ಕೂ ಮೊದಲು ಕೆಎಲ್ ರಾಹುಲ್ ಪಂಜಾಬ್ ವಿರುದ್ಧವೂ ಅರ್ಧಶತಕ ಸಿಡಿಸಿದ್ದರು. ಇದರರ್ಥ ರಾಹುಲ್ ಆಡಿರುವ ಮೂರು ರಣಜಿ ಟ್ರೋಫಿ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version