ಮುಡಾ ಹಗರಣ: ಸಿದ್ದರಾಮಯ್ಯ ಆಪ್ತನ 10 ಸ್ಥಿರ ಆಸ್ತಿಗಳು ಮುಟ್ಟುಗೋಲು – Kannada News | Muda Scam Case: ED Attaches Siddaramaiah Close Aide Marigowda Property

ಬೆಂಗಳೂರು.ಮೈಸೂರು, (ಜನವರಿ 22): ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ಇತರರ ವಿರುದ್ಧದ ಮುಡಾ ಹಗರಣ ಪ್ರಕರಣದಲ್ಲಿ (Muda Scam Case) ಮಹತ್ವದ ಬೆಳವಣಿಗೆ ನಡೆದಿದೆ. ಸಿದ್ದರಾಮಯ್ಯನವರ ಪರಮಾಪ್ತ, ಮುಡಾದ ಮಾಜಿ ಅಧ್ಯಕ್ಷ ಮರೀಗೌಡ (Marigowda)  ಕೂಡ ಅಕ್ರಮ ನಿವೇಶನ ಪಡೆದಿರುವುದು ಬೆಳಕಿಗೆ ಬಂದಿದೆ. ಇಡಿ ದಾಳಿ ವೇಳೆ ಸೈಟ್‌ಗಳ ಹಂಚಿಕೆಯಲ್ಲಿ ನಿಯಮಗಳನ ಉಲ್ಲಂಘನೆ ಕಂಡುಬಂದಿತ್ತು. ಹೀಗಾಗಿ ಇಡಿ, ಮರಿಗೌಡಗೆ ಸೇರಿದ 10 ಸ್ಥಿರ ಆಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.

ಮರಿಗೌಡಗೆ ಸೇರಿದ 10 ಸ್ಥಿರ ಆಸ್ತಿಗಳು ಮುಟ್ಟುಗೋಲು

ಇಡಿ ದಾಳಿ ವೇಳೆ ಸೈಟ್‌ಗಳ ಹಂಚಿಕೆಯಲ್ಲಿ ನಿಯಮಗಳನ ಉಲ್ಲಂಘನೆ ಕಂಡುಬಂದಿತ್ತು. ಈ ಸಂಬಂಧ ಇನ್ನಷ್ಟು ತನಿಖೆ ನಡೆಸಿದಾಗ ಮುಡಾದ ಮಾಜಿ ಅಧ್ಯಕ್ಷ ಮರಿಗೌಡ ಕೂಡ ಅಕ್ರಮ ನಿವೇಶನ ಪಡೆದಿರುವುದು ಬೆಳಕಿಗೆ ಬಂದಿದೆ. ಈ ಹಿಂದೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಆಯುಕ್ತರಾಗಿದ್ದ ಜಿ.ಟಿ.ದಿನೇಶ್ ಕುಮಾರ್ ಅವರ ಸಹಾಯದಿಂದ ಮರೀಗೌಡ ಅಕ್ರಮವಾಗಿ ಸೈಟ್ ಪಡೆದಿದ್ದಾರೆ ಎನ್ನುವುದು ಗೊತ್ತಾಗಿದೆ. ಇದರಿಂದ ಇಡಿ, ಮರಿಗೌಡಗೆ ಸೇರಿದ 10 ಸ್ಥಿರ ಆಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ. 6 ಅಕ್ರಮ ಮುಡಾ ನಿವೇಶನಗಳು, 3 ಸ್ಥಿರ ಆಸ್ತಿಗಳು ಮತ್ತು 20.85 ಕೋಟಿ ರೂ. ಮಾರುಕಟ್ಟೆ ಮೌಲ್ಯದ ಒಂದು ವಾಣಿಜ್ಯ ಕಟ್ಟಡ ಮುಟ್ಟುಗೋಲು ಹಾಕಿದೆ.

ಇದನ್ನೂ ಓದಿ: ಮುಡಾದಲ್ಲಿ ಅಕ್ರಮ ದೃಢ: 100 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿದ ಇಡಿ

ಇದೇ ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ, ಈಗಾಗಲೇ 283 ಮುಡಾ ಸೈಟ್‌ಗಳು ಮತ್ತು 03 ವೈಯಕ್ತಿಕ ಆಸ್ತಿ ಸೇರಿದಂತೆ ಒಟ್ಟು 60 ಕೋಟಿ ರೂಪಾಯಿ ಮೌಲ್ಯದ ಅಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಂಡಿತ್ತು.

ಇನ್ನೊಂದೆಡೆ ಇದೇ ಪ್ರಕರಣದಲ್ಲಿ ಈಗಾಗಲೇ ಇಡಿ ಬಂಧನಕ್ಕೊಳಗಾಗಿರುವ ಮುಡಾ ಮಾಜಿ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಸದ್ಯ ಜೈಲಿನಲ್ಲಿದ್ದು, ನಿನ್ನೆ ಅಷ್ಟೇ ಅವರ ಜಾಮೀನು ಅರ್ಜಿಯನ್ನು ಸಹ ಹೈಕೋರ್ಟ್ ವಜಾ ಮಾಡಿದೆ. ಇನ್ನು ಸಿದ್ದರಾಮಯ್ಯ ವಿರುದ್ಧದ ಲೋಕಾಯುಕ್ತ ಸಲ್ಲಿಸಿರುವ ಬಿ ರಿಪೋರ್ಟ್​ ಪ್ರಶ್ನಿಸಿ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಲಾಗಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್​ ವಿಚಾರಣೆ ನಡೆಸಿದ್ದು,  ಜನವರಿ 28ಕ್ಕೆ ಆದೇಶ ಕಾಯ್ದಿರಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

RCB: ಆರ್​ಸಿಬಿ ಖರೀದಿಗೆ ಖಜಾನೆ ತೆರೆದ 2 ಲಕ್ಷ ಕೋಟಿ ರೂ. ಒಡೆಯ

Source link

ಆಸ್ಕರ್ ನಾಮಿನೇಷನ್ಸ್ ಘೋಷಣೆ: ಭಾರತದ ‘ಹೋಮ್​​ಬೌಂಡ್​’ಗೆ ನಿರಾಸೆ – Kannada News | Oscars 2026 nominations announced: Homebound movie out of the race

ಸಿನಿಮಾಗಳಿಗೆ ನೀಡಲಾಗುವ ಜಗತ್ತಿನ ಅತ್ಯುತ್ತಮ ಪ್ರಶಸ್ತಿ ಎನ್ನಲಾಗುವ ‘ಆಸ್ಕರ್ಸ್’ನ 2026ನೇ (Oscar 2026) ಸಾಲಿನ ಪ್ರಶಸ್ತಿಗೆ ನಾಮಿನೇಟ್ ಆಗಿರುವ ಸಿನಿಮಾಗಳ ಪಟ್ಟಿಯನ್ನು ಇಂದು (ಜನವರಿ 22) ಬಿಡುಗಡೆ ಮಾಡಲಾಗಿದೆ. ಭಾರತದ ‘ಹೋಮ್​​ಬೌಂಡ್’ ಸಿನಿಮಾ ವಿದೇಶಿ ಸಿನಿಮಾಗಳ ಪಟ್ಟಿಯಲ್ಲಿ ಅಂತಿಮ 15 ಸಿನಿಮಾಗಳಲ್ಲಿ ಸ್ಥಾನ ಪಡೆದುಕೊಂಡು, ನಾಮಿನೇಟ್ ಆಗುವ ಭರವಸೆ, ನಿರೀಕ್ಷೆಯನ್ನು ಮೂಡಿಸಿತ್ತು. ಆದರೆ ಅಂತಿಮ ಸುತ್ತಿಗೆ ಆಯ್ಕೆ ಆಗಲು ವಿಫಲವಾಗಿ ರೇಸಿನಿಂದ ಹೊರಬಿದ್ದಿದೆ.

ಕರಣ್ ಜೋಹರ್ ನಿರ್ಮಾಣ ಮಾಡಿ, ನೀರಜ್ ಗಯ್ವಾನ್ ನಿರ್ದೇಶನ ಮಾಡಿರುವ ‘ಹೋಮ್​​ಬೌಂಡ್’ ಸಿನಿಮಾ ಭಾರತದಲ್ಲಿರುವ ಜಾತಿ ಪದ್ಧತಿ, ಧರ್ಮ ವಿಭಜನೆ, ಮಹಿಳಾ ದೌರ್ಜನ್ಯ ಇನ್ನಿತರೆ ವಿಷಯಗಳ ಮೇಲೆ ಬೆಳಕು ಚೆಲ್ಲಿತ್ತು, ಸಿನಿಮಾನಲ್ಲಿ ಇಶಾನ್ ಕಟ್ಟರ್, ಜಾನ್ಹವಿ ಕಪೂರ್ ಮತ್ತು ವಿಶಾಲ್ ಜೇಟ್ವ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಸಿನಿಮಾ ಚಿತ್ರಮಂದಿರಗಳಲ್ಲಿ ಒಳ್ಳೆಯ ಪ್ರದರ್ಶನ ಕಾಣಲಿಲ್ಲ, ಆದರೆ ಆಸ್ಕರ್​​ಗೆ ರೇಸಿನಲ್ಲಿ ಈ ವರ್ಷ ಗಮನ ಸೆಳೆಯಿತು. ಅಂತಿಮ 15 ಪಟ್ಟಿಯಲ್ಲಿ ಸಹ ಆಯ್ಕೆ ಆಗಿತ್ತು. ಆದರೆ ನಾಮಿನೇಷನ್ಸ್​ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲವಾಗಿದೆ.

ಡಾಕ್ಯುಮೆಂಟರಿ ಮತ್ತು ಶಾರ್ಟ್ ಡಾಕ್ಯುಮೆಂಟರಿ ವಿಭಾಗಗಳಲ್ಲಿ ಭಾರತ ಕಳೆದ ಕೆಲ ವರ್ಷಗಳಿಂದ ಆಸ್ಕರ್ಸ್​​ನಲ್ಲಿ ಗಮನ ಸೆಳೆದಿತ್ತು. ಆದರೆ ಈ ಬಾರಿ ಅದೂ ಸಹ ಇಲ್ಲವಾಗಿದೆ. ಭಾರತದಲ್ಲಿ ನಿರ್ಮಾಣವಾದ ಯಾವ ಡಾಕ್ಯುಮೆಂಟರಿ ಅಥವಾ ಶಾರ್ಟ್ ಡಾಕ್ಯುಮೆಂಟರಿ ಈ ಬಾರಿ ಆಸ್ಕರ್ಸ್ ನಾಮಿನೇಷನ್ಸ್​​ನಲ್ಲಿ ಸ್ಥಾನ ಪಡೆದಿಲ್ಲ. ಆದರೆ ಭಾರತೀಯ ಮೂಲದ ಅಮೆರಿಕನ್ ಪ್ರಜೆ ಗೀತಾ ಗಂಭೀರ್ ನಿರ್ದೇಶನ ಮಾಡಿರುವ ‘ದಿ ಪರ್ಫೆಕ್ಟ್ ನೇಬರ್’ ಡಾಕ್ಯುಮೆಂಟರಿ ನಾಮಿನೇಷನ್ಸ್​​ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

ಇದನ್ನೂ ಓದಿ:ಆಸ್ಕರ್ ರೇಸಿನಲ್ಲಿರುವ ‘ಹೋಮ್​ಬೌಂಡ್​’ಗೆ ಕಾನೂನು ಸಂಕಷ್ಟ

ವಿದೇಶಿ ವಿಭಾಗದಲ್ಲಿ ಬ್ರಜಿಲ್, ಟುನೇಷಿಯಾ, ಫ್ಯಾನ್ಸ್, ನೋರ್ವೆ, ಸ್ಪೈನ್​​ ದೇಶದ ಸಿನಿಮಾಗಳು ಆಯ್ಕೆ ಆಗಿವೆ. ಇನ್ನು ಒಟ್ಟಾರೆಯಾಗಿ ‘ಸಿನ್ನರ್ಸ್’ ಸಿನಿಮಾ ಅತಿ ಹೆಚ್ಚು ವಿಭಾಗಗಳಲ್ಲಿ ನಾಮಿನೇಟ್ ಆಗಿದೆ. ಸಿನ್ನರ್ಸ್ ಸಿನಿಮಾವು ಬರೋಬ್ಬರಿ 16 ನಾಮಿನೇಷನ್ಸ್​​ಗಳನ್ನು ಬಾಚಿಕೊಂಡು ದಾಖಲೆ ಬರೆದಿದೆ. ಕಳೆದ ವರ್ಷದ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಒಂದಾದ ಲಿಯಾನಾರ್ಡೊ ಡಿಕ್ಯಾಪ್ರಿಕೋವ್ ನಟನೆಯ ‘ಒನ್ ಬ್ಯಾಟಲ್ ಆಫ್ಟರ್ ಅನದರ್’ ಸಿನಿಮಾ ಬರೋಬ್ಬರಿ 12 ನಾಮಿನೇಷನ್​​ಗಳನ್ನು ಪಡೆದುಕೊಂಡಿದೆ. ಮಾತ್ರವಲ್ಲದೆ, ಲಿಯೊನಾರ್ಡೊ ಅವರು ಅತ್ಯುತ್ತಮ ನಟ ವಿಭಾಗದಲ್ಲಿಯೂ ನಾಮಿನೇಟ್ ಆಗಿದ್ದು, ಮತ್ತೊಂದು ಆಸ್ಕರ್ ಅವರಿಗೆ ಲಭಿಸುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸತತ 3 ದಿನ ರಜೆ: ಪ್ರಯಾಣಿಕರಿಗಾಗಿ KSRTC ಜತೆ BMTC ಬಸ್ಸುಗಳ ಸಂಚಾರ – Kannada News | BMTC special buses operate With KSRTC From Jan 23 From Bengaluru For handle Long Holiday rush

ಬೆಂಗಳೂರು, (ಜನವರಿ 22): ಸಾಲು ಸಾಲು ರಜೆ (Long Holiday) ಇದ್ರೆ ಸಾಕು ಬೆಂಗಳೂರಿನ (Bengaluru) ಜನ ತಮ್ಮ ತಮ್ಮ ಊರುಗಳತ್ತ ಮುಖ ಮಾಡುತ್ತಾರೆ. ಇನ್ನು ಕೆಲವರು ಟ್ರಿಪ್​ಗೆ ತೆರಳುತ್ತಾರೆ. ಈಗ ಜನವರಿ ಅಂತ್ಯದಲ್ಲಿ ಸತತ ಮೂರು ದಿನ ರಜೆ ಬಂದಿರುವ ಹಿನ್ನೆಲೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿರುವ ಜನ ಊರುಗಳತ್ತ ತೆರಳುವ ಸಾಧ್ಯತೆಗಳಿದ್ದು, ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಲಿದೆ. ಈ ಹಿನ್ನಲೆಯಲ್ಲಿ ಮುಂಜಾಗ್ರತಾವಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್​​ಆರ್​​​ಟಿಸಿ ಬಸ್ ಜೊತೆಗೆ ಹೆಚ್ಚುವರಿಯಾಗಿ ಬಿಎಂಟಿಸಿ ಬಸ್​​ಗಳ (KSRTC And BMTC Buses) ವ್ಯವಸ್ಥೆ ಮಾಡಲಾಗಿದೆ.

ಸತತ ಮೂರು ದಿನ ರಜೆ

ಜನವರಿ 24 ನಾಲ್ಕನೇ ಶನಿವಾರ, ಜನವರಿ 25 ಭಾನುವಾರ, ಇನ್ನು ಜನವರಿ 26 ಸೋಮವಾರ ಗಣರಾಜ್ಯೋತ್ಸವ ಸಾರ್ವತ್ರಿಕ ರಜೆ. ಹೀಗೆ ಈ ತಿಂಗಳಾಂತ್ಯದಲ್ಲಿ ಸತತ ಮೂರು ದಿನ ರಜೆ ಬಂದಿದೆ.  ಹೀಗಾಗಿ ಜನರು ಬೇರೆ ಬೇರೆ ಊರುಗಳತ್ತ ತೆರಳುವ ಸಾಧ್ಯತೆಗಳಿದ್ದು, ಈ ವೇಳೆ ಜನ ದಟ್ಟಣೆಯಾಗುವ ಸಾಧ್ಯತೆಗಳಿವೆ.ಇದರಿಂದ ಪ್ರಯಾಣಿಕರಿಗೆ ತೊಂದರೆ ಆಗದಂತೆ ಹೆಚ್ಚುವರಿ ಬಸ್ ನಿಯೋಜನೆ ಮಾಡಲಾಗಿದ್ದು, ಈ ಬಸ್​​ಗಳು ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಂಚರಿಸಲಿವೆ.

KSRTC ಬಸ್ ಜೊತೆಗೆ ಬಿಎಂಟಿಸಿ ಬಸ್​​ ಸಂಚಾರ

ನಾಳೆ (ಜನವರಿ 23) ಶುಕ್ರವಾರ ಕೆಲಸ ಮುಗಿಸಿಕೊಂಡು ಸಂಜೆಯಿಂದಲೇ ಹಲವರು ಊರಿಗೆ ತೆರಳುವವರಿದ್ದಾರೆ. ಆದ್ದರಿಂದ ನಾಳೆಯಿಂದಲೇ (ಜನವರಿ 23) KSRTC ಬಸ್ ಜೊತೆಗೆ ಬಿಎಂಟಿಸಿ ಬಸ್​​ಗಳು ಸಹ ಸಂಚರಿಸಲಿವೆ. ನಾಳೆ 265 BMTC ಬಸ್ ಹಾಗೂ ಜನವರಿ 24ರಂದು‌ 500ಕ್ಕೂ BMTC ಹೆಚ್ಚು ಬಸ್ಗಳು ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಂಚರಿಸಲಿವೆ.

2026ರ ವರ್ಷದಲ್ಲಿ ಹೆಚ್ಚಿನ ರಜೆಗಳು ವಾರಾಂತ್ಯಕ್ಕೆ ಹೊಂದಿಕೊಂಡು ಬಂದಿದೆ. ಅಂದರೆ, ಒಂದು ದಿನ ರಜೆ ಹಾಕಿದರೆ, ಮೂರು ಅಥವಾ ನಾಲ್ಕು ದಿನಗಳ ಸರಣಿ ರಜೆಯ ಮಜಾವನ್ನು ಜನರು ಸವಿಯಬಹುದಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

1997ರ ಪ್ರಕರಣ ಭೇದಿಸಿದ ಮಂಗಳೂರು ಪೊಲೀಸ್: 29 ವರ್ಷ ಬಳಿಕ ಸಿಕ್ಕಿಬಿದ್ದ ದಂಡುಪಾಳ್ಯ ಗ್ಯಾಂಗ್​​ ಸದಸ್ಯ – Kannada News | Mangaluru Police Arrest Dandupalya Gang’s member After 29 Years in 1997 Double Murder

ಮಂಗಳೂರು, ಜನವರಿ 22: ಕೊಲೆ, ಅತ್ಯಾಚಾರ ಮತ್ತು ದರೋಡೆಗಳಿಗೆ ಕುಖ್ಯಾತವಾಗಿದ್ದ ದಂಡುಪಾಳ್ಯ ಗ್ಯಾಂಗ್​​​ನ (Dandupalya Gang) ಓರ್ವ ಆರೋಪಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ (Arrest). ಮಂಗಳೂರಿನ ಉರ್ವ ಪೊಲೀಸರು ಕಾರ್ಯಾಚರಣೆ ನಡೆಸಿ ಸುಮಾರು 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಚಿಕ್ಕ ಹನುಮ ಅಲಿಯಾಸ್​ ಚಿಕ್ಕ ಹನುಮಂತಪ್ಪನನ್ನು ಬಂಧಿಸಿದ್ದಾರೆ. ಬಂಧಿತನ ವಿರುದ್ಧ ಈವರೆಗೆ ರಾಜ್ಯದಲ್ಲಿ ಸುಮಾರು 13 ಕೊಲೆ, ದರೋಡೆ ಪ್ರಕರಣಗಳು ದಾಖಲಾಗಿವೆ.

ಏನಿದು ಪ್ರಕರಣ?

1997 ಅಕ್ಟೋಬರ್​​ 11ರಂದು ಉರ್ವ ಮಾರಿಗುಡಿ ಕ್ರಾಸ್ ಬಳಿಯ ಅನ್ವರ್ ಮಹಲ್ ಎಂಬ ಮನೆಗೆ ನುಗ್ಗಿದ್ದ ದಂಡುಪಾಳ್ಯ ಗ್ಯಾಂಗ್​​, ಮನೆಯಲ್ಲಿದ್ದ ಲೂವಿಸ್ ಡಿಮೆಲ್ಲೋ(80), ರಂಜಿತ್ ವೇಗಸ್(19)ರನ್ನು ಕೊಲೆ ಮಾಡಿತ್ತು. ಬಳಿಕ ಚಿನ್ನಾಭರಣಗಳ್ನು ದೊಚಿಕೊಂಡು ಪರಾರಿಯಾಗಿದ್ದರು. ಚಿಕ್ಕ ಹನುಮಂತಪ್ಪ ಸೇರಿದಂತೆ ಎಂಟು ಸದಸ್ಯರಿಂದ ಕೃತ್ಯ ಎಸಗಲಾಗಿತ್ತು.

ಇದನ್ನೂ ಓದಿ: ದಂಡುಪಾಳ್ಯ ಸಿನಿಮಾ ರೀತಿಯಲ್ಲಿ ಅಧಿಕಾರಿ ಪ್ರತಿಮಾ ಹತ್ಯೆ: ಇಬ್ಬರು ಹಂತಕರ ಸ್ಫೋಟಕ ಅಂಶ ಬೆಳಕಿಗೆ

ಪ್ರಕರಣದ ವಿಚಾರಣೆ ಮುಕ್ತಾಯಗೊಂಡು ಆಪಾದಿತರು ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿತ್ತು. ಆದರೆ ಆರೋಪಿ ಚಿಕ್ಕ ಹನುಮ ಹೆಸರು ಬದಲಿಸಿಕೊಂಡು ನಾಪತ್ತೆಯಾಗಿದ್ದ. ಚಿಕ್ಕ ಹನುಮ ಅಲಿಯಾಸ್​​ ಚಿಕ್ಕ ಹನುಮಂತಪ್ಪ, ಕೆ.ಕೃಷ್ಣಪ್ಪ ಅಲಿಯಾಸ್​ ಕೃಷ್ಣ ಎಂದು ಹೆಸರು ಬದಲಿಸಿಕೊಂಡಿದ್ದ.

ಇದನ್ನೂ ಓದಿ: ಕರ್ನಾಟಕದ ಪ್ರತಿಷ್ಠಿತ ಮಠದ ಸ್ವಾಮೀಜಿಗೆ ಬ್ಲ್ಯಾಕ್​ಮೇಲ್, ಲಕ್ಷಾಂತರ ರೂ. ವಸೂಲಿ: ಚಿಕ್ಕಮಗಳೂರಿನ ಮಹಿಳೆಯ ಬಂಧನ

ಚಿಕ್ಕ ಹನುಮನ ವಿರುದ್ದ 2010ರಲ್ಲಿ‌ ಮಂಗಳೂರಿನ JMFC 2ನೇ ನ್ಯಾಯಾಲಯ ಎಲ್​​​ಪಿಸಿ ವಾರೆಂಟ್ ಹೊರಡಿಸಿತ್ತು. 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಆಂಧ್ರಪ್ರದೇಶ ರಾಜ್ಯದ ಅನ್ನಮಯ್ಯ ಜಿಲ್ಲೆಯ ಮದನಪಳ್ಳೆ ಎಂಬಲ್ಲಿ ಬಂಧಿಸಲಾಗಿದೆ. ಸದ್ಯ ಆರೋಪಿಯ ಪತ್ತೆ ಕಾರ್ಯ ನಡೆಸಿದ ಉರ್ವ ಪೊಲೀಸ್ ತಂಡಕ್ಕೆ ಪೊಲೀಸ್ ಕಮೀಷನರ್ ಪ್ರಶಂಸೆ ವ್ಯಕ್ತಪಡಿಸಿದ್ದು, ಹೆಚ್ಚಿನ ಬಹುಮಾನಕ್ಕಾಗಿ ರಾಜ್ಯದ ಡಿಜಿ ಮತ್ತು ಐಜಿಪಿಗೆ ಶಿಫಾರಸ್ಸು ಮಾಡಿದ್ದಾರೆ.

ನ್ಯಾಯಾಲಯದಲ್ಲೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ 5ನೇ ಹೆಚ್ಚುವರಿ ಕೋರ್ಟ್​ನಲ್ಲೇ ವ್ಯಕ್ತಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಕಾವು ಮಣಿಯಡ್ಕ ನಿವಾಸಿ ರವಿ(35) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ತಕ್ಷಣ ರವಿಗೆ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿನಿಂದ ಮಂಗಳೂರು ಆಸ್ಪತ್ರೆಗೆ ರವಿ ಶಿಫ್ಟ್ ಮಾಡಲಾಗಿದೆ.​

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Chanakya Niti: ಜೀವನದಲ್ಲಿ ಸದಾ ಸಂತೋಷವಾಗಿರಲು ಚಾಣಕ್ಯರ ಈ ಸರಳ ಸೂತ್ರವನ್ನು ಪಾಲಿಸಿ – Kannada News | Chanakya Niti: Follow this simple formula of Chanakya to always be happy in life

ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ನೀತಿಶಾಸ್ತ್ರದಲ್ಲಿ ರಾಜಕೀಯಕ್ಕೆ ಸಂಬಂಧಿಸಿದ ವಿಷಯಗಳು ಮಾತ್ರವಲ್ಲ ನಮ್ಮ ಜೀವನಕ್ಕೆ ಬೇಕಾಗಿರುವಂತಹ ಹಲವಾರು ವಿಚಾರಗಳನ್ನು ತಿಳಿಸಿಕೊಟ್ಟಿದ್ದಾರೆ.  ಅವರ ಈ ತತ್ವ, ಮಾರ್ಗದರ್ಶನಗಳನ್ನು ಸರಿಯಾಗಿ ಅನುಸರಿಸಿದರೆ, ಒಬ್ಬ ವ್ಯಕ್ತಿ ಯಶಸ್ವಿ, ಸಂತೋಷ ಮತ್ತು ಸಮೃದ್ಧ ಜೀವನವನ್ನು ನಡೆಸಬಹುದು. ಇದೇ ರೀತಿ ನೀವು ಸಹ ಶಾಂತಿ ಮತ್ತು ಸಂತೋಷದಾಯಕ ಜೀವನವನ್ನು ನಡೆಸಲು ಬಯಸುವಿರಾ? ಹಾಗಿದ್ರೆ ಈ ಸರಳ ಸೂತ್ರಗಳನ್ನು ಪಾಲಿಸಿ. ಇದರಿಂದ ಖಂಡಿತವಾಗಿಯೂ ನಿಮ್ಮ ಜೀವನದಲ್ಲಿ ಸಂತೋಷ ನೆಲೆಸುತ್ತದೆ.

ಜೀವನದಲ್ಲಿ ಸಂತೋಷ ನೆಲೆಸಲು ಈ ಸೂತ್ರಗಳನ್ನು ಅನುಸರಿಸಿ:

ಸಕಾರಾತ್ಮಕ ಚಿಂತನೆಯನ್ನು ಇಟ್ಟುಕೊಳ್ಳಿ: ನೀವು ಸಂತೋಷವಾಗಿರಲು ಬಯಸಿದರೆ, ಸಕಾರಾತ್ಮಕ ಮನಸ್ಥಿತಿಯನ್ನು ಬೆಳೆಸಿಕೊಳ್ಳುವುದು ಬಹಳ ಮುಖ್ಯ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ನೀವು ಎಷ್ಟೇ ಸವಾಲುಗಳನ್ನು ಎದುರಿಸಿದರೂ, ಪ್ರತಿಯೊಂದು ಸನ್ನಿವೇಶದ ಸಕಾರಾತ್ಮಕ ಬದಿಯನ್ನು ನೋಡಲು ಪ್ರಯತ್ನಿಸಿ. ನಕಾರಾತ್ಮಕ ಚಿಂತನೆಯು ನಿಮ್ಮ ಒತ್ತಡ ಮತ್ತು ಅತೃಪ್ತಿಯನ್ನು ಮಾತ್ರ ಹೆಚ್ಚಿಸುತ್ತದೆ ಆದರೆ ಸಕಾರಾತ್ಮಕ ಚಿಂತನೆಯು ಪ್ರತಿಯೊಂದು ಸನ್ನಿವೇಶದಲ್ಲಿಯೂ ಪರಿಹಾರ ಮತ್ತು ತೃಪ್ತಿಯ ಮಾರ್ಗವನ್ನು ತೋರಿಸುತ್ತದೆ.ಹಾಗಾಗಿ ಯಾವಾಗಲೂ ಪಾಸಿಟಿವ್‌ ಆಗಿರಿ.

ನಿಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳಬೇಡಿ: ನಾವು ನಮ್ಮ ಜೀವನವನ್ನು ಇತರರೊಂದಿಗೆ ಹೋಲಿಸಿಕೊಳ್ಳುವ ತಪ್ಪನ್ನು ಮಾಡುತ್ತೇವೆ. ಚಾಣಕ್ಯರ ಪ್ರಕಾರ, ಈ ಸಣ್ಣ ಅಭ್ಯಾಸವು ವ್ಯಕ್ತಿಯ ಎಲ್ಲಾ ಸಂತೋಷವನ್ನು ಕಸಿದುಕೊಳ್ಳಬಹುದು. ಹಾಗಾಗಿ ಯಾವುದೇ ಕಾರಣಕ್ಕೂ ನಿಮ್ಮ ಜೀವನವನ್ನು ಇತರರೊಂದಿಗೆ ಹೋಲಿಕೆ ಮಾಡಬೇಡಿ. ನೀವು ನಿಮ್ಮನ್ನು ಇತರರೊಂದಿಗೆ ಹೋಲಿಸುವುದನ್ನು ನಿಲ್ಲಿಸಿದಾಗ, ನಿಮ್ಮ ಮನಸ್ಸು ಹಗುರವಾಗುತ್ತದೆ ಮತ್ತು ನೀವು ಸಂತೋಷವಾಗಿರಲು ಪ್ರಾರಂಭಿಸುತ್ತೀರಿ.

ಸರಳ ಮತ್ತು ಸಮತೋಲಿತ ಜೀವನವನ್ನು ನಡೆಸಿ:

ಭೌತಿಕ ವಸ್ತುಗಳಲ್ಲಿ ಸಂತೋಷವನ್ನು ಕಂಡುಕೊಳ್ಳುವುದು ಎಂದಿಗೂ ಸರಿಯಲ್ಲ ಅಂತಹ ವಿಷಯಗಳು ನಿಮಗೆ ಕೇವಲ ತಾತ್ಕಾಲಿಕ ಸಂತೋಷವನ್ನು ತರಬಹುದು. ಆದರೆ ಸರಳ ಮತ್ತು ಸಮತೋಲಿತ ಜೀವನವು ನಿಮಗೆ ನಿಜವಾದ ಸಂತೋಷವನ್ನು ತರಬಹುದು. ನೀವು ಅತಿಯಾದ ಆಸೆಗಳನ್ನು ಮತ್ತು ದುರಾಸೆಯನ್ನು ಹೊಂದಿದಾಗ, ನೀವು ಮಾನಸಿಕವಾಗಿ ಅಶಾಂತರಾಗುತ್ತೀರಿ. ಇದರಿಂದ ನಿಮಗೆ ಸಂತೋಷವಾಗಿರಲು ಸಾಧ್ಯವಾಗುವುದಿಲ್ಲ. ಅದೇ  ನಿಮ್ಮಲ್ಲಿರುವದರಲ್ಲಿ ನೀವು ತೃಪ್ತರಾಗಲು ಕಲಿತಾಗ ನೀವು ಸಂತೋಷವಾಗಿರುತ್ತೀರಿ ಎಂದು ಚಾಣಕ್ಯ ಹೇಳುತ್ತಾರೆ.

ಇದನ್ನೂ ಓದಿ: ಭಯವನ್ನು ತೆಗೆದುಹಾಕಿದರೆ ಮಾತ್ರ ಜೀವನದಲ್ಲಿ ಜಯಿಸಲು ಸಾಧ್ಯ

ಉತ್ತಮ ಸ್ನೇಹಿತ, ಸಂಗಾತಿಯನ್ನು ಆರಿಸಿ: ಆಚಾರ್ಯ ಚಾಣಕ್ಯರ ಪ್ರಕಾರ, ನಿಮ್ಮ ಸ್ನೇಹಿತರು ಮತ್ತು ಸಂಗಾತಿ ನಿಮ್ಮ ಜೀವನದ ಮೇಲೆ ಮಾತ್ರವಲ್ಲದೆ ನಿಮ್ಮ ಮನಸ್ಥಿತಿಯ ಮೇಲೂ ಆಳವಾದ ಪರಿಣಾಮ ಬೀರುತ್ತಾರೆ. ಆದ್ದರಿಂದ ಉತ್ತಮ ವ್ಯಕ್ತಿಯನ್ನು ಸಂಗಾತಿಯನ್ನಾಗಿ ಆಯ್ಕೆ ಮಾಡಿ, ಉತ್ತಮ ವ್ಯಕ್ತಿಗಳ ಸ್ನೇಹ ಬೆಳೆಸಿ. ಜೀವನದಲ್ಲಿ ಸಂತೋಷವಾಗಿರಲು, ನೀವು ಸಕಾರಾತ್ಮಕ ಮತ್ತು ಪ್ರೇರಣಾದಾಯಕ ಜನರೊಂದಿಗೆ ನೀವು ಇರಬೇಕು. ಅದೇ ನಕಾರಾತ್ಮಕ ಜನರು ಮತ್ತು ಇತರರನ್ನು ನಿರಂತರವಾಗಿ ಟೀಕಿಸುವವರು ನಿಮ್ಮ ಸಂತೋಷವನ್ನೇ ಕಸಿದುಕೊಳ್ಳುತ್ತಾರೆ.

ನಿಮ್ಮ ಸಮಯವನ್ನು ಬುದ್ಧಿವಂತಿಕೆಯಿಂದ ಬಳಸಿ: ಚಾಣಕ್ಯರ ಪ್ರಕಾರ, ಸಮಯಕ್ಕಿಂತ ದೊಡ್ಡ ಸಂಪತ್ತು ಇನ್ನೊಂದಿಲ್ಲ. ಸಮಯವನ್ನು ಬುದ್ಧಿವಂತಿಕೆಯಿಂದ ಹೇಗೆ ಬಳಸಬೇಕೆಂದು ತಿಳಿದಿರುವವರು ಜೀವನದಲ್ಲಿ ಯಾವಾಗಲೂ ಸಂತೋಷವಾಗಿರುತ್ತಾರೆ  ಮತ್ತು ಜೀವನದಲ್ಲಿ ಯಶಸ್ವಿಯಾಗುತ್ತಾರೆ. ಹಾಗಾಗಿ ನೀವು ನಿಮ್ಮ ಜೀವನದ ಪ್ರತಿ ಕ್ಷಣವನ್ನೂ ಸಹ ಒಳ್ಳೆಯ ಕಾರ್ಯಗಳು ಮತ್ತು ಸಕಾರಾತ್ಮಕ ಆಲೋಚನೆಗಳಿಗೆ ಮೀಸಲಿಡಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಚಿನ್ನಸ್ವಾಮಿಯಲ್ಲಿ ಪಂದ್ಯಗಳನ್ನಾಡಲು ಒಪ್ಪಿಗೆ ಸೂಚಿಸಿದ ಆರ್​ಸಿಬಿ ಫ್ರಾಂಚೈಸಿ..! ಆದರೆ? – Kannada News | Breaking! RCB to Play All IPL 2026 Home Matches at Bengaluru’s Chinnaswamy Stadium

19ನೇ ಆವೃತ್ತಿಯ ಐಪಿಎಲ್‌ (IPL 2026) ಆರಂಭಕ್ಕೆ ದಿನಗಳ ಏಣಿಕೆ ಶುರುವಾಗಿದೆ ಹೊಸ ಸೀಸನ್ ಮಾರ್ಚ್ 26 ರಂದು ಪ್ರಾರಂಭವಾಗಲಿದೆ. ಆದರೆ ಅದಕ್ಕೂ ಮೊದಲು ಅಭಿಮಾನಿಗಳ ಮನದಲ್ಲಿ ಮೂಡಿರುವ ಪ್ರಮುಖ ಪ್ರಶ್ನೆಯೆಂದರೆ, ಹಾಲಿ ಚಾಂಪಿಯನ್ ಆರ್​ಸಿಬಿ (RCB) ತನ್ನ ತವರು ಪಂದ್ಯಗಳನ್ನು ಬೆಂಗಳೂರಿನಲ್ಲಿ ಆಡುತ್ತದೆಯೇ? ಎಂಬುದು. ಏಕೆಂದರೆ ಪಂದ್ಯಾವಳ ಸನಿಹವಾಗುತ್ತಾ ಬಂದರೂ ಆರ್​ಸಿಬಿ ಫ್ರಾಂಚೈಸಿ ಮಾತ್ರ ತನ್ನ ತವರು ನೆಲವನ್ನು ಇದುವರೆಗೂ ಖಚಿತಪಡಿಸಿರಲಿಲ್ಲ. ಆದರೀಗ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದು ಸಿಕ್ಕಿದ್ದು, ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ತವರು ಪಂದ್ಯಗಳನ್ನು ಆಡಿಸಲು ಆರ್​ಸಿಬಿ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದೆ. ಇದರರ್ಥ ಆರ್​ಸಿಬಿ ತಂಡ ತನ್ನ ತವರು ಪಂದ್ಯಗಳನ್ನು ಬೆಂಗಳೂರಿನಲ್ಲೇ ಆಡಲಿದೆ. ಅಂದರೆ ಕಿಂಗ್ ಕೊಹ್ಲಿ ಬೆಂಗಳೂರಿನಲ್ಲಿ ಬ್ಯಾಟ್ ಬೀಸುವುದನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದು.

ಜನವರಿ 21 ರಂದು ಅಂದರೆ ನಿನ್ನೆಯಷ್ಟೇ ಕೆಎಸ್​ಸಿಎ ಆಡಳಿತ ಮಂಡಳಿ ಪತ್ರಿಕಾಗೋಷ್ಠಿ ನಡೆಸಿ, ಚಿನ್ನಸ್ವಾಮಿ ಕ್ರೀಡಾಂಗಣದ ದುರಸ್ತಿ ಕಾರ್ಯ ಭಾಗಶಃ ಮುಗಿದಿದ್ದು, ಪಂದ್ಯಗಳ ಆತಿಥ್ಯಕ್ಕೆ ಸಜ್ಜಾಗುತ್ತಿದೆ. ಇತ್ತ ಸರ್ಕಾರ ಕೂಡ ಚಿನ್ನಸ್ವಾಮಿಯಲ್ಲಿ ಐಪಿಎಲ್ ಹಾಗೂ ಅಂತರರಾಷ್ಟ್ರೀಯ ಪಂದ್ಯಗಳನ್ನು ನಡೆಸಲು ಅನುಮತಿ ನೀಡಿದೆ. ಹೀಗಾಗಿ ನಾವು ಐಪಿಎಲ್ ಪಂದ್ಯಗಳನ್ನು ಬೆಂಗಳೂರಿನಲ್ಲೇ ಆಡಬೇಕೆಂದು ನಾವು ಆರ್​ಸಿಬಿ ಮ್ಯಾನೇಜ್​ಮೆಂಟ್​ಗೆ ಮನವಿ ಮಾಡಿದ್ದೇವೆ. ಆದರೆ ಇದುವರೆಗೂ ಫ್ರಾಂಚೈಸಿಯಿಂದ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ ಎಂದಿತ್ತು.

ಪಂದ್ಯ ನಡೆಸಲು ಉತ್ಸುಕರಾಗಿದ್ದೇವೆ

ಇದೀಗ ಕೆಎಸ್​ಸಿಎಯ ಸುದ್ದಿಗೋಷ್ಠಿ ನಡೆದ ಒಂದು ದಿನದ ಬಳಿಕ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಆರ್​ಸಿಬಿ ಆಡಳಿತ ಮಂಡಳಿ, ‘ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯಗಳನ್ನು ನಡೆಸಲು ಅನುಮತಿ ನೀಡಿದ ಕರ್ನಾಟಕ ಸರ್ಕಾರದ ನಡೆಯನ್ನು ಸ್ವಾಗತಿಸುತ್ತೇವೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಮ್ಮ ಅಭಿಮಾನಿಗಳ ನಡುವೆ ಪಂದ್ಯ ನಡೆಸಲು ಉತ್ಸುಕರಾಗಿದ್ದೇವೆ. ಆದರೆ ಚಿನ್ನಸ್ವಾಮಿ ಮೈದಾನದಲ್ಲಿ ಮತ್ತಷ್ಟು ಸಮಸ್ಯೆಗಳನ್ನು ಸರಿಪಡಿಸಬೇಕಿದೆ. ಪ್ರೇಕ್ಷಕರ ಭದ್ರತಾ ದ್ರೃಷ್ಟಿಯಿಂದ ಕೆಲವನ್ನು ಸರಿಪಡಿಸಬೇಕಿದೆ. ಅಭಿಮಾನಿಗಳ ಸುರಕ್ಷತೆಗೆ ಸಾಧ್ಯವಿರುವ ಎಲ್ಲಾ ರೀತಿಯ ಭದ್ರತಾ ಕ್ರಮ ತೆಗೆದುಕೊಳ್ಳಬೇಕು. ಆರ್​ಸಿಬಿ ಪಾಲಿಗೆ ಅಭಿಮಾನಿಗಳೇ ಆತ್ಮ ಮತ್ತು ಹೃದಯ. ಚಿನ್ನಸ್ವಾಮಿಯಲ್ಲಿ ಪಂದ್ಯ ಆಯೋಜಿಸಲು KSCA ಯತ್ನ ಶ್ಲಾಘನೀಯ ಎಂದಿದೆ.

IPL 2026: ‘ಐಪಿಎಲ್​ಗೆ ಚಿನ್ನಸ್ವಾಮಿ ರೆಡಿ ಇದ್ರು ಆರ್​ಸಿಬಿ ಮನಸ್ಸು ಮಾಡ್ತಿಲ್ಲ’; ವೆಂಕಟೇಶ್ ಪ್ರಸಾದ್

ವೆಂಕಟೇಶ್ ಪ್ರಸಾದ್ ಹೇಳಿದ್ದಿದು

ಇನ್ನು ನಿನ್ನೆಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ವೆಂಕಟೇಶ್ ಪ್ರಸಾದ್, ‘ಬೆಂಗಳೂರಿನಲ್ಲಿ ಮತ್ತೆ ಐಪಿಎಲ್​ ಪಂದ್ಯ ಆಡಿಸಲು ಸಿದ್ಧರಿದ್ದೇವೆ. ಆದ್ರೆ ಆರ್​ಸಿಬಿ ಮ್ಯಾನೇಜ್​ಮೆಂಟ್​ ಅಷ್ಟು ಒಲವು ತೋರಿಸುತ್ತಿಲ್ಲ. ಹೀಗಾಗಿ ಇಲ್ಲಿನ ಕ್ರಿಕೆಟ್ ಅಭಿಮಾನಿಗಳಿಗಾಗಿ ನೀವೂ ಇಲ್ಲಿ ಆಡಬೇಕು ಎಂದು ಆರ್​ಸಿಬಿ ಮ್ಯಾನೇಜ್​ಮೆಂಟ್ ಬಳಿ ಮನವಿ ಮಾಡುತ್ತಿದ್ದೇವೆ. ಅಲ್ಲದೆ ನಿಮಗೆ ಏನೇ ಸಂಶಯಗಳಿದ್ರು ಸರ್ಕಾರದ ಜೊತೆ ಮಾತನಾಡಿ ಎಂಬ ಸಲಹೆಯನ್ನು ನೀಡಿದ್ದೇವೆ. ಚಿನ್ನಸ್ವಾಮಿ ಮೈದಾನದಲ್ಲಿ ಆರ್​ಸಿಬಿ ತನ್ನ ಪಂದ್ಯಗಳನ್ನು ಆಡಬೇಕು ಅನ್ನೋದು ನಮ್ಮ ಆಶಯ ಎಂದಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಗ್​​ಬಾಸ್ ವಿನ್ನರ್ ಗಿಲ್ಲಿಗೆ ಸಿದ್ದರಾಮಯ್ಯ ಕೇಳಿದ ಪ್ರಶ್ನೆಗಳೇನು: ವಿಡಿಯೋ ನೋಡಿ – Kannada News | CM Siddaramaiah talks with Bigg Boss Winner Gilli here is the video

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada) ಗೆದ್ದಿರುವ ಗಿಲ್ಲಿ ನಟ ಇಂದು (ಜನವರಿ 22) ಸಿಎಂ ಸಿದ್ದರಾಮಯ್ಯ ಅವರ ಭೇಟಿ ಆಗಿದ್ದರು. ಈ ವೇಳೆ ಸಿದ್ದರಾಮಯ್ಯ ಅವರೇ ಗಿಲ್ಲಿಗೆ ಹಾರ ಹಾಕಿದ್ದಲ್ಲದೆ ಆಶೀರ್ವಾದ ಸಹ ಮಾಡಿ, ಒಳ್ಳೆಯದಾಗಲಿ ಎಂದು ಹರಿಸಿದರು. ಗಿಲ್ಲಿ ನಟ, ಸಿದ್ದರಾಮಯ್ಯ ಅವರ ಭೇಟಿ ಆದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಕೆಲ ಸಮಯ, ಗಿಲ್ಲಿ ನಟನ ಜೊತೆಗೆ ಮಾತುಕತೆ ಆಡಿದರು. ಗಿಲ್ಲಿ ಬಗ್ಗೆ ಅವರ ಕುಟುಂಬದ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಿ ಉತ್ತರ ಸಹ ಪಡೆದರು. ಅಲ್ಲೇ ಇದ್ದ ಸಚಿವ ಭೈರತಿ ಸುರೇಶ್ ಅವರು ಗಿಲ್ಲಿ ಬಗ್ಗೆ ಹೇಳಿದ ಮಾತಿಗೆ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ನಕ್ಕರು. ಗಿಲ್ಲಿ ಮತ್ತು ಸಿದ್ದರಾಮಯ್ಯ ಅವರ ಮಾತುಕತೆಯ ವಿಡಿಯೋ ಇಲ್ಲಿದೆ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

WPL 2026: ಗುಜರಾತ್ ವಿರುದ್ಧ ಟಾಸ್ ಗೆದ್ದ ಯುಪಿ; ಪ್ಲೇಯಿಂಗ್ 11 ಹೀಗಿದೆ – Kannada News | WPL 2026: UP Warriorz vs Gujarat Giants Match 14 – Playoff Battle, Playing XI Out!

ಮಹಿಳಾ ಪ್ರೀಮಿಯರ್ ಲೀಗ್ (Women’s Premier League) 2026 ರ 14 ನೇ ಪಂದ್ಯ ಗುಜರಾತ್ ಜೈಂಟ್ಸ್ ಮತ್ತು ಯುಪಿ ವಾರಿಯರ್ಸ್ (Gujarat Giants vs UP Warriorz 3. Women’s Premier League) ನಡುವೆ ವಡೋದರಾದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ, ಯುಪಿ ತನ್ನ ಗೆಲುವಿನ ಓಟವನ್ನು ಮುಂದುವರಿಸಲು ಪ್ರಯತ್ನಿಸುತ್ತಿದ್ದರೆ, ಗುಜರಾತ್ ತನ್ನ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಮುಂದಿನ ಸುತ್ತಿಗೆ ಅರ್ಹತೆ ಪಡೆಯಲು ಉಳಿದಿರುವ ಪಂದ್ಯಗಳು ಎರಡೂ ತಂಡಗಳಿಗೆ ಬಹುಮುಖ್ಯವಾಗಿರುವ ಕಾರಣ, ಎರಡೂ ತಂಡಗಳಿಂದ ಜಿದ್ದಾಜಿದ್ದಿನ ಹೋರಾಟವನ್ನು ನಿರೀಕ್ಷಿಸಲಾಗಿದೆ. ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಪಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಗುಜರಾತ್ ತಂಡ ಮೊದಲು ಬ್ಯಾಟಿಂಗ್‌ ಮಾಡಲಿದೆ. ಟಾಸ್ ಜೊತೆಗೆ ಎರಡೂ ತಂಡಗಳ ಪ್ಲೇಯಿಂಗ್ 11 ಕೂಡ ಖಚಿತವಾಗಿದೆ.

ಟಾಸ್ ಗೆದ್ದ ಯುಪಿ ವಾರಿಯರ್ಸ್

ಟಾಸ್ ಗೆದ್ದ ಯುಪಿ ವಾರಿಯರ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಆ ಬಳಿಕ ಮಾತನಾಡಿದ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಆಡುವ 11 ರ ಬಳಗದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ ಎಂದರು. ಅಂದರೆ ಕಳೆದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ತಂಡವೇ ಇಂದು ಸಹ ಆಡಲಿದೆ. ಇತ್ತ ಗುಜರಾತ್ ತಂಡದಲ್ಲಿ ಒಂದು ಬದಲಾವಣೆಯನ್ನು ಮಾಡಲಾಗಿದ್ದು, ಜಾರ್ಜಿಯಾ ವೇರ್‌ಹ್ಯಾಮ್ ಬದಲಿಗೆ ಡ್ಯಾನಿ ವ್ಯಾಟ್-ಹಾಡ್ಜ್ ಅವರನ್ನು ಆಯ್ಕೆ ಮಾಡಲಾಗಿದೆ.

ಉಭಯ ತಂಡಗಳು

ಯುಪಿ ವಾರಿಯರ್ಸ್: ಮೆಗ್ ಲ್ಯಾನಿಂಗ್ (ನಾಯಕಿ), ಕಿರಣ್ ನವಗಿರೆ, ಫೋಬೆ ಲಿಚ್‌ಫೀಲ್ಡ್, ಹರ್ಲೀನ್ ಡಿಯೋಲ್, ಕ್ಲೋಯ್ ಟ್ರಯಾನ್, ಶ್ವೇತಾ ಸೆಹ್ರಾವತ್ (ವಿಕೆಟ್ ಕೀಪರ್), ಸೋಫಿ ಎಕ್ಲೆಸ್ಟೋನ್, ದೀಪ್ತಿ ಶರ್ಮಾ, ಆಶಾ ಶೋಭನಾ, ಶಿಖಾ ಪಾಂಡೆ, ಕ್ರಾಂತಿ ಗೌಡ್.

ಗುಜರಾತ್ ಜೈಂಟ್ಸ್: ಬೆತ್ ಮೂನಿ (ವಿಕೆಟ್ ಕೀಪರ್), ಸೋಫಿ ಡಿವೈನ್, ಅನುಷ್ಕಾ ಶರ್ಮಾ, ಡ್ಯಾನಿ ವ್ಯಾಟ್-ಹಾಡ್ಜ್, ಕನಿಕಾ ಅಹುಜಾ, ಆಶ್ಲೀ ಗಾರ್ಡ್ನರ್ (ನಾಯಕಿ), ಕಾಶ್ವಿ ಗೌತಮ್, ಭಾರತಿ ಫುಲ್ಮಾಲಿ, ತನುಜಾ ಕನ್ವರ್, ರೇಣುಕಾ ಸಿಂಗ್ ಠಾಕೂರ್, ಹ್ಯಾಪಿ ಕುಮಾರಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:28 pm, Thu, 22 January 26

Source link

ಕರ್ನಾಟಕದ ಕಾರ್ಖಾನೆಗೆ ಒಡಿಶಾ ಕಂಪನಿ ಹೆಸರು: ಸಿಡಿದೆದ್ದ ಮಂಗಳೂರಿಗರು – Kannada News | Mangalore Chemical and Fertilizers: Name Change Row Ignites Public Protest

ಮಂಗಳೂರು, ಜನವರಿ 22: ಎಂಸಿಎಫ್​​ ಅಂದರೆ Mangaluru chemical and Fertilizer. ಮಂಗಳೂರಿನ (Mangaluru) ಪಣಂಬೂರಿನಲ್ಲಿ ಕಳೆದ 55 ವರ್ಷದಿಂದ ಇದೇ ಹೆಸರಿನಲ್ಲಿ ‌ಕಾರ್ಖಾನೆ‌ ಕಾರ್ಯ ನಿರ್ವಹಿಸುತ್ತಿತ್ತು. ಆದರೆ ಇದೀಗ ಕಾರ್ಖಾನೆಯ ಹೆಸರು ಬದಲಾವಣೆ ಆಗಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಹೆಸರು ಬದಲಾವಣೆ ಮಾಡದಂತೆ ಆಡಳಿತ ಮಂಡಳಿಗೆ ಹೇಳಿದರೂ ಖ್ಯಾರೆ ಅನ್ನುತ್ತಿಲ್ಲ. ಹೀಗಾಗಿ ಜನ ಪ್ರತಿನಿಧಿಗಳು, ಸಾರ್ವಜನಿಕರು ಹೋರಾಟಕ್ಕೆ ಮುಂದಾಗಿದ್ದಾರೆ.

ಏನಿದು ವಿವಾದ?

ಎಂಸಿಎಫ್ ಕಾರ್ಖಾನೆ 1971ರಲ್ಲಿ ಮಂಗಳೂರಿನಲ್ಲಿ ಆರಂಭವಾಗಿದೆ. ಕೆಮಿಕಲ್ಸ್ ಮತ್ತು ರಸಗೊಬ್ಬರ ಉತ್ಪಾದನೆ ಮಾಡುವ ಈ ಕಾರ್ಖಾನೆಗೆ 55 ವರ್ಷಗಳೇ ಕಳೆದಿವೆ. ಇದರಲ್ಲಿ 15 ವರ್ಷ ಸರ್ಕಾರಿ, 35 ವರ್ಷ ಖಾಸಗಿ ಒಡೆತನದಲ್ಲಿದ್ದರೂ Manglore chemical & Fertilizer ಎಂಬ ಹೆಸರು ಮಾತ್ರ ಬದಲಾಗಿರಲಿಲ್ಲ. ಆದರೆ ಕಳೆದ ಆರು ತಿಂಗಳುಗಳಿಂದ 55 ವರ್ಷದಿಂದ ಇದ್ದ ಕಾರ್ಖಾನೆಯ ಹೆಸರಿಗೆ ಇದೀಗ ತಿಲಾಂಜಲಿ ಇಡಲಾಗಿದೆ.

ಇದನ್ನೂ ಓದಿ: ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕುಸಿತ: ಉಡುಪಿ-ಮಂಗಳೂರಿನ ಈ ಎಲ್ಲ ಕಾಲೇಜುಗಳು ಕ್ಲೋಸ್​​

ಕಂಪನಿಯ ಹೆಚ್ಚಿನ ಷೇರು ಪಡೆದ ಒಡಿಶಾ ಮೂಲದ ಪ್ಯಾರಾದೀಪ್ ಪಾಸ್ಫೇಟ್ ಕಂಪನಿ ಅರ್ಧ ಶತಮಾನದ ಹೆಸರನ್ನು ಅಳಿಸಿ ‘ಪ್ಯಾರಾದೀಪ್ ಪಾಸ್ಫೇಟ್ ಕಂಪನಿ’ ಎಂದು ಹೆಸರು ಬದಲಾವಣೆ ಮಾಡಿದೆ. ಆ ಮೂಲಕ ಮಂಗಳೂರಿಗರ ಕೆಂಗಣ್ಣಿಗೆ ಕಾರಣವಾಗಿದೆ. ಮಂಗಳೂರಿನ ಮಣ್ಣು, ಗಾಳಿ, ನೀರು, ಹಣ ಎಲ್ಲವೂ ಬೇಕು ಆದರೆ ಹೆಸರು ಮಾತ್ರ ಇಲ್ಲಿಯದ್ದು ಬೇಡ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಡಿತ ಸಾಧಿಸುತ್ತಿದ್ದಂತೆಯೇ ಮೂಲ ಹೆಸರಗೇ ಕೈಹಾಕಿದ ಕಂಪನಿ

1976ರಲ್ಲಿ ಎಂಸಿಎಫ್ ಕಂಪನಿ ಅಮೋನಿಯಾ ಮತ್ತು ಯೂರಿಯಾ ಉತ್ಪಾದನೆಯನ್ನು ಆರಂಭಿಸಿತ್ತು. ಆ ಬಳಿಕ ವಿದ್ಯುತ್ ಅಭಾವದಿಂದ ಕಂಪನಿ ನಷ್ಟಕ್ಕೆ ಸಿಲುಕಿತ್ತು. ನಷ್ಟದ ನಡುವೆಯೇ 1991ರಲ್ಲಿ ಆಡಳಿತವನ್ನು ವಿಜಯ ಮಲ್ಯ ನೇತೃತ್ವದ ಯುಬಿ ಕಂಪನಿ ವಹಿಸಿಕೊಂಡಿತ್ತು. ಅಲ್ಲಿಂದ ಮತ್ತೆ ಏಳುಬೀಳುಗಳನ್ನು ಕಂಡ ಕಂಪನಿ 2015 ರಿಂದ ಉತ್ತಮ ಲಾಭದೊಂದಿಗೆ ಪ್ಯಾರಾದೀಪ್ ಕಂಪನಿ ಷೇರುಗಳನ್ನು ಪಡೆದುಕೊಂಡಿದೆ. ಆದರೆ ಪ್ಯಾರಾದೀಪ್ ಕಂಪನಿ ಹಿಡಿತ ಸಾಧಿಸುತ್ತಿದ್ದಂತೆಯೇ ಮೂಲ ಹೆಸರನ್ನೇ ಬದಲಾವಣೆ ಮಾಡಿದೆ.

ಕಂಪನಿ 35 ವರ್ಷ ಷೇರು ಒಡೆತನದಲ್ಲಿದ್ದರೂ ಹೊಸ ಬಂಡವಾಳವನ್ನು ಕಂಪನಿ ಮಾಡಿಲ್ಲ. ಎಂಸಿಎಫ್ ತನ್ನ ಸ್ವಂತ ಆದಾಯ ಮತ್ತು ಬ್ಯಾಂಕ್ ಸಹಕಾರದೊಂದಿಗೆ ಅಭಿವೃದ್ಧಿ ಹೊಂದಿದೆ. ಶೇಕಡಾ 90 ಉದ್ಯೋಗಗಳು ಸ್ಥಳೀಯರಿಗೆ ಮತ್ತು ರಾಜ್ಯದ ಯುವ ಜನತೆಗೆ ಮೀಸಲಾಗಿದ್ದರೂ ಇದೀಗ ಅರ್ಧದಷ್ಟು ಉದ್ಯೋಗವನ್ನು ಕಡಿತಗೊಳಿಸಲಾಗಿದೆ. ಈ ಅನ್ಯಾಯದ ವಿರುದ್ಧ ಎಂಸಿಎಫ್ ಕಂಪನಿಯ ಮಾಜಿ ಉದ್ಯೋಗಿಗಳು ಸಿಡಿದೆದ್ದಿದ್ದಾರೆ‌‌.

ಎಂಸಿಎಫ್ ಹೆಸರು ಮಂಗಳೂರಿನ ಜೊತೆ ಐತಿಹಾಸಿಕ ಸಂಬಂಧವನ್ನು ಹೊಂದಿದೆ. ಇಲ್ಲಿನ ನೆಲದ ಅಸ್ಮಿತೆಯ ಗುರುತಾಗಿದೆ. ಮಂಗಳೂರಿನ ಜೊತೆಗೆ 55 ದಶಕಗಳ ಅನ್ಯೋನ್ಯ ಸಂಬಂಧ ಇಟ್ಟುಕೊಂಡಿದ್ದ ಕಂಪನಿ ಈಗ ಹೆಸರು ವಿಲೀನದ ಜೊತೆಗೆ ಅವಿನಾಭಾವ ಸಂಬಂಧ ಇತಿಹಾಸದ ಪುಟ ಸೇರಿದೆ. ಇದರ ವಿರುದ್ಧ ಹೋರಾಟಕ್ಕೆ ಜನಪ್ರತಿನಿಧಿಗಳು ಸಹ ಪಕ್ಷಾತೀತವಾಗಿ ಮುಂದಾಗಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ದೇವಾಲಯಗಳ ಆದಾಯದಲ್ಲಿ ಭಾರೀ ಏರಿಕೆ: ದಕ್ಷಿಣ ಕನ್ನಡದ ಈ ದೇಗುಲ ಫಸ್ಟ್​

ಹೆಸರು ಬದಲಾವಣೆಯ ವಿರುದ್ದ ಆಕ್ರೋಶ ವ್ಯಕ್ತವಾಗಿರುವುದು ಕಂಪನಿಯ ಗಮನಕ್ಕೂ ಬಂದಿದೆ. ಹೀಗಾಗಿ ಮುಂದೆ Manglore chemical & Fertilizer ಹೆಸರನ್ನು ಸಹ ಹಾಕುವುದಾಗಿ ಹೇಳಿದೆ. ಮುಂದೆ ಈ ರೀತಿಯ ಕಂಪನಿಗಳ ಹೆಸರು ಬದಲಾವಣೆ ಮಾಡದಂತೆ ಪ್ರತ್ಯೇಕ ಮಸೂದೆ ತರುವ ಬಗ್ಗೆಯೂ ಪ್ರಯತ್ನಿಸುವುದಾಗಿ ಜನಪ್ರತಿನಿಧಿಗಳು ಹೇಳಿದ್ದಾರೆ. ನಾಮಫಲಕದಲ್ಲಿ ತಕ್ಷಣ ಹೆಸರನ್ನು ಬದಲಾಯಿಸಬೇಕೆಂದು ಆಗ್ರಹಗಳು ಜೋರಾಗಿದೆ. ಒಟ್ಟಿನಲ್ಲಿ ಹೆಸರು ಬದಲಾವಣೆಯ ವಿರೋಧ ಮಂಗಳೂರಿನಲ್ಲಿ ಆಕ್ರೋಶದ ಕಿಚ್ಚನ್ನು ಎಬ್ಬಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version