ಉತ್ತರ ಪ್ರದೇಶ, ಮಾರ್ಚ್ 28: ಜೆವಾರ್ನಲ್ಲಿ ನಿರ್ಮಾಣಗೊಂಡಿರುವ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನರೇಂದ್ರ ಮೋದಿ ಉದ್ಘಾಟಿಸಿದರು. ಸುಮಾರು 11,200 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ವಿಮಾನ ನಿಲ್ದಾಣವು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡಿದೆ. ಈ ಯೋಜನೆ ಉತ್ತರ ಪ್ರದೇಶದ ಮೂಲಸೌಕರ್ಯ ಅಭಿವೃದ್ಧಿಗೆ ಮಹತ್ವದ ಮೈಲುಗಲ್ಲಾಗಲಿದೆ. ಈ ವಿಮಾನ ನಿಲ್ದಾಣ ಉದ್ಘಾಟನೆಯೊಂದಿಗೆ ಉತ್ತರ ಪ್ರದೇಶ ದೇಶದಲ್ಲೇ 5 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ಮೊದಲ ರಾಜ್ಯವಾಗಿದೆ. ಹೊಸ ಏರ್ಪೋರ್ಟ್ನಿಂದ ಪ್ರಯಾಣಿಕರಿಗೆ ಸುಧಾರಿತ ಸೇವೆಗಳು ಲಭ್ಯವಾಗಲಿದ್ದು, ಉದ್ಯೋಗಾವಕಾಶಗಳು ಹೆಚ್ಚಾಗುವ ನಿರೀಕ್ಷೆಯಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಚಿಕ್ಕಮಗಳೂರು, ಮಾ.28: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಹವಾಮಾನ ದಿಢೀರ್ ಬದಲಾಗಿದ್ದು, ಬಿರುಗಾಳಿ ಸಹಿತ ಭಾರೀ ಮಳೆ ಸುರಿಯುತ್ತಿದೆ. ಚಿಕ್ಕಮಗಳೂರು ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ನಗರದಾದ್ಯಂತ ಬಿರುಗಾಳಿಯೊಂದಿಗೆ ಮಳೆ ಸುರಿಯುತ್ತಿದ್ದು, ತಾಲೂಕಿನ ಗ್ರಾಮೀಣ ಭಾಗಗಳಲ್ಲೂ ಮಳೆಯ ಆರ್ಭಟ ಜೋರಾಗಿದೆ. ಆಲ್ದೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕಾಫಿ ತೋಟಗಳಿಗೆ ಇದು ಆಸರೆಯಾದರೂ ಬಿರುಗಾಳಿಯ ಭೀತಿ ಆವರಿಸಿದೆ. ಮೂಡಿಗೆರೆಯಲ್ಲಿ ಮಳೆಯ ಅಬ್ಬರ ತೀವ್ರವಾಗಿದ್ದು, ರಸ್ತೆಗಳು ನದಿಯಂತಾಗಿವೆ. ಚರಂಡಿಗಳು ತುಂಬಿ ಹರಿಯುತ್ತಿದ್ದು, ವಾಹನ ಸವಾರರು ಸಂಚರಿಸಲು ಪರದಾಡುವಂತಾಗಿದೆ. ಧಾರಾಕಾರ ಮಳೆಯಿಂದಾಗಿ ರಸ್ತೆಗಳಲ್ಲಿ ಮಳೆ ನೀರು ಹರಿಯುತ್ತಿದ್ದು, ಮಾರುಕಟ್ಟೆಗೆ ಬಂದಿದ್ದ ಸಾರ್ವಜನಿಕರು ಮತ್ತು ವಾಹನ ಸವಾರರು ಹೈರಾಣಾಗಿದ್ದಾರೆ. ಮಲೆನಾಡು ಭಾಗದ ಹಲವೆಡೆ ಮರಗಳು ಉರುಳುವ ಭೀತಿ ಎದುರಾಗಿದ್ದು, ಜನರಲ್ಲಿ ಆತಂಕ ಮನೆಮಾಡಿದೆ.
IPL 2026: ರಂಗು ರಂಗಿನ ಕ್ರಿಕೆಟ್ ಟೂರ್ನಿ ಐಪಿಎಲ್ಗೆ ಇಂದು (ಮಾ.28) ಚಾಲನೆ ದೊರೆಯಲಿದೆ. ಹತ್ತು ತಂಡಗಳ ನಡುವಣ ಈ ಕದನಕ್ಕಾಗಿ ಎಲ್ಲಾ ತಂಡಗಳು ಈಗಾಗಲೇ ಸಜ್ಜಾಗಿದೆ. ಇನ್ನು ಈ ಸೀಸನ್ಗಾಗಿ ಪ್ರತಿ ತಂಡಗಳು ಈ ಬಾರಿ ಬ್ಯಾಟಿಂಗ್ ಲೈನಪ್ ಅನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ. ಅದರಲ್ಲೂ 10 ತಂಡಗಳು ಬಲಿಷ್ಠ ಓಪನಿಂಗ್ ಜೋಡಿಯನ್ನು ಕಣಕ್ಕಿಳಿಸುತ್ತಿದ್ದು, ಯಾವ ತಂಡದ ಪರ ಯಾರು ಇನಿಂಗ್ಸ್ ಆರಂಭಿಸಲಿದ್ದಾರೆ ಎಂದು ನೋಡುವುದಾದರೆ…
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಆರ್ಸಿಬಿ ಪರ ಈ ಬಾರಿ ಕೂಡ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಇನಿಂಗ್ಸ್ ಆರಂಭಿಸಲಿದ್ದಾರೆ. ಕಳೆದ ಸೀಸನ್ನಲ್ಲಿ ಈ ಜೋಡಿಯು ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿರುವ ಕಾರಣ ಈ ಜೋಡಿಯನ್ನು ಬದಲಿಸುವ ಸಾಧ್ಯತೆಯಿಲ್ಲ.
ಚೆನ್ನೈ ಸೂಪರ್ ಕಿಂಗ್ಸ್: ಸಿಎಸ್ಕೆ ಪರ ಈ ಬಾರಿ ಸಂಜು ಸ್ಯಾಮ್ಸನ್ ಇನಿಂಗ್ಸ್ ಆರಂಭಿಸುವುದು ಖಚಿತ. ಇನ್ನು ಸಂಜು ಜೊತೆ ರುತುರಾಜ್ ಗಾಯಕ್ವಾಡ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸಲು ಚೆನ್ನೈ ಸೂಪರ್ ಕಿಂಗ್ಸ್ ಪ್ಲ್ಯಾನ್ ರೂಪಿಸಿದೆ.
ಲಕ್ನೋ ಸೂಪರ್ ಜೈಂಟ್ಸ್: ಎಲ್ಎಸ್ಜಿ ಪರ ಕಳೆದ ಸೀಸನ್ನಲ್ಲಿ ಮಿಚೆಲ್ ಮಾರ್ಷ್ ಹಾಗೂ ಐಡೆನ್ ಮಾರ್ಕ್ರಾಮ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಹೀಗಾಗಿ ಇದೇ ಜೋಡಿಯನ್ನೇ ಈ ಬಾರಿ ಕೂಡ ಆರಂಭಿಕರಾಗಿ ಕಣಕ್ಕಿಳಿಸಲಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್: ಕನ್ನಡಿಗ ಕೆಎಲ್ ರಾಹುಲ್ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಪರ ಇನಿಂಗ್ಸ್ ಆರಂಭಿಸಲಿದ್ದಾರೆ. ಕೆಎಲ್ಆರ್ಗೆ ಜೋಡಿಯಾಗಿ ಶ್ರೀಲಂಕಾದ ಸ್ಫೋಟಕ ದಾಂಡಿಗ ಪಾತುಮ್ ನಿಸ್ಸಂಕಾ ಆರಂಭಿಕನ ಸ್ಥಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕೊಲ್ಕತ್ತಾ ನೈಟ್ ರೈಡರ್ಸ್: ಕೆಕೆಆರ್ ಪರ ನ್ಯೂಝಿಲೆಂಡ್ ತಂಡದ ದಾಂಡಿಗ ಫಿನ್ ಅಲೆನ್ ಆರಂಭಿಕನಾಗಿ ಕಣಕ್ಕಿಳಿಯುವುದು ಖಚಿತ. ಅಲೆನ್ ಜೊತೆ ಮತ್ತೊಂದು ತುದಿಯಲ್ಲಿ ಅಜಿಂಕ್ಯ ರಹಾನೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಸನ್ರೈಸರ್ಸ್ ಹೈದರಾಬಾದ್: ಎಸ್ಆರ್ಹೆಚ್ ಪರ ಈ ಬಾರಿ ಕೂಡ ಸ್ಫೋಟಕ ದಾಂಡಿಗರಾದ ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ ಇನಿಂಗ್ಸ್ ಆರಂಭಿಸಲಿದ್ದಾರೆ.
ಗುಜರಾತ್ ಟೈಟಾನ್ಸ್: ಜಿಟಿ ತಂಡದ ಪರ ಶುಭ್ಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಇನಿಂಗ್ಸ್ ಆರಂಭಿಸಲಿದ್ದಾರೆ. ಕಳೆದ ಎರಡು ಸೀಸನ್ಗಳಲ್ಲಿ ಈ ಇಬ್ಬರು ದಾಂಡಿಗರು ಗುಜರಾತ್ ಟೈಟಾನ್ಸ್ ತಂಡಕ್ಕೆ ಉತ್ತಮ ಆರಂಭ ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಈ ಜೋಡಿಯನ್ನು ಬದಲಿಸುವ ಸಾಧ್ಯತೆಯಿಲ್ಲ.
ರಾಜಸ್ಥಾನ್ ರಾಯಲ್ಸ್: ಆರ್ಆರ್ ಪರ ಈ ಬಾರಿ ಕೂಡ ಇಬ್ಬರು ಯುವ ಎಡಗೈ ದಾಂಡಿಗರು ಇನಿಂಗ್ಸ್ ಆರಂಭಿಸಲಿದ್ದಾರೆ. ಇಲ್ಲಿ ಆರಂಭಿಕರಾಗಿ ಕಾಣಿಸಿಕೊಳ್ಳಲಿರುವುದು ಯಂಗ್ ಸೆನ್ಸೇಷನ್ ಯಶಸ್ವಿ ಜೈಸ್ವಾಲ್ ಹಾಗೂ ಬಾಸ್ ಬೇಬಿ ಖ್ಯಾತಿಯ ವೈಭವ್ ಸೂರ್ಯವಂಶಿ.
ಮುಂಬೈ ಇಂಡಿಯನ್ಸ್: ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಹಾಗೂ ಸೌತ್ ಆಫ್ರಿಕಾದ ಎಡಗೈ ದಾಂಡಿಗ ಕ್ವಿಂಟನ್ ಡಿಕಾಕ್ ಮುಂಬೈ ಇಂಡಿಯನ್ಸ್ ಪರ ಇನಿಂಗ್ಸ್ ಆರಂಭಿಸಲಿದ್ದಾರೆ.
ಪಂಜಾಬ್ ಕಿಂಗ್ಸ್: ಕಳೆದ ಸೀಸನ್ನಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಪ್ರಿಯಾಂಶ್ ಆರ್ಯ ಹಾಗೂ ಪ್ರಭ್ಸಿಮ್ರಾನ್ ಸಿಂಗ್ ಅತ್ಯುತ್ತಮ ಆರಂಭ ಒದಗಿಸಿದ್ದರು. ಹೀಗಾಗಿ ಈ ಬಾರಿ ಕೂಡ ಪ್ರಭ್ಸಿಮ್ರಾನ್ ಹಾಗೂ ಪ್ರಿಯಾಂಶ್ ಪಂಜಾಬ್ ಪರ ಇನಿಂಗ್ಸ್ ಆರಂಭಿಸುವುದನ್ನು ಎದುರು ನೋಡಬಹುದು.
ಬಾಗಲಕೋಟೆ, ಮಾ.28: ನಗರದ ಜಿಲ್ಲಾಸ್ಪತ್ರೆಗೆ ಗರ್ಭಿಣಿಯನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಮತ್ತು ಇನ್ನೋವಾ ಕಾರಿನ ನಡುವೆ ಭೀಕರ ಡಿಕ್ಕಿ ಸಂಭವಿಸಿ, ಆಂಬುಲೆನ್ಸ್ ರಸ್ತೆಯಲ್ಲೇ ಪಲ್ಟಿಯಾದ ಘಟನೆ ಬಾಗಲಕೋಟೆಯ ಬಸ್ ನಿಲ್ದಾಣದ ಸರ್ಕಲ್ ಬಳಿ ನಡೆದಿದೆ. ಜಿಲ್ಲಾಸ್ಪತ್ರೆಯ ಕಡೆಗೆ ವೇಗವಾಗಿ ಹೊರಟಿದ್ದ ಆಂಬುಲೆನ್ಸ್ ಮತ್ತು ಕಾಳಿದಾಸ ವೃತ್ತದ ಕಡೆಗೆ ಚಲಿಸುತ್ತಿದ್ದ ಇನ್ನೋವಾ ಕಾರಿನ ನಡುವೆ ಈ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಆಂಬುಲೆನ್ಸ್ ವಾಹನವು ರಸ್ತೆಯ ಮಧ್ಯದಲ್ಲೇ ಪಲ್ಟಿಯಾಗಿದೆ. ಈ ದೃಶ್ಯವು ಹತ್ತಿರದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಪಘಾತ ಸಂಭವಿಸುತ್ತಿದ್ದಂತೆಯೇ ಸ್ಥಳದಲ್ಲಿದ್ದ ಸ್ಥಳೀಯ ಯುವಕರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಪಲ್ಟಿಯಾದ ಆಂಬುಲೆನ್ಸ್ನಲ್ಲಿದ್ದ ಗರ್ಭಿಣಿ ಮಹಿಳೆಯನ್ನು ಅತ್ಯಂತ ಜಾಗರೂಕತೆಯಿಂದ ಹೊರತೆಗೆದು ರಕ್ಷಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ವಾಹನದಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಘಾತದ ತೀವ್ರತೆಗೆ ಎಲ್ಲರೂ ಗಾಬರಿಗೊಂಡಿದ್ದರು. ಘಟನಾ ಸ್ಥಳಕ್ಕೆ ಬಾಗಲಕೋಟೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನವನಗರ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ಬೆಂಗಳೂರು, ಮಾರ್ಚ್ 28: ಬೆಂಗಳೂರಿನ ನಂದಿನಿ ಲೇಔಟ್ನಲ್ಲಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ಗಳನ್ನು ಹೊತ್ತ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಅಪಘಾತದಲ್ಲಿ ಲಾರಿ ಚಾಲಕನಿಗೆ ಗಾಯಗಳಾಗಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿಯಲ್ಲಿದ್ದ ಇತರ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ನಂತರ, ಗ್ಯಾಸ್ ಸಿಲಿಂಡರ್ಗಳಿಂದ ಅನಿಲ ಸೋರಿಕೆ ಆಗದಂತೆ ತುರ್ತು ಕ್ರಮಗಳನ್ನು ಕೈಗೊಳ್ಳಲಾಯಿತು. ಸಿಬ್ಬಂದಿಯ ಸಮಯೋಚಿತ ಕಾರ್ಯಾಚರಣೆಯಿಂದ ದೊಡ್ಡ ಅನಾಹುತ ತಪ್ಪಿದೆ.
ಲಾರಿ ಪಲ್ಟಿಯಾದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಘಟನೆ ಕುರಿತು ರಾಜಾಜಿನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಿಸಿಟಿವಿ ಕ್ಯಾಮರಾದಲ್ಲಿ ಈ ಅಪಘಾತದ ದೃಶ್ಯಗಳು ದಾಖಲಾಗಿದ್ದು, ಫೂಟೇಜ್ಗಳನ್ನು ಪರಿಶೀಲಿಸಲಾಗುತ್ತಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಬೆಂಗಳೂರು, ಮಾರ್ಚ್ 28: ಐಪಿಎಲ್ ಮ್ಯಾಚ್ಗಳ ಟಿಕೆಟ್ (IPL Ticket)ವಿಚಾರವಾಗಿ ಸದನದಲ್ಲಿ ನಡೆದ ಚರ್ಚೆಯು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಶಾಸಕರು ತಮಗೆ ಐಪಿಎಲ್ ಟಿಕೆಟ್ಗಳನ್ನು ನೀಡಬೇಕೆಂದುದಕ್ಕೆ ಸ್ಪಂದಿಸಿರುವ ಕೆಎಸ್ಸಿಎ, ತಥಾಸ್ತು ಎಂದಿದೆ. ಸದನದಲ್ಲಿ ಚರ್ಚೆಯಾಗಿ ಕೇವಲ 24 ಗಂಟೆಗಳಲ್ಲಿಯೇ ಈ ರೀತಿಯ ಸ್ಪಂದನೆ ದೊರೆತಿರುವುದೂ ವಿವಾದವೆದ್ದಿದೆ. ಆದರೆ ಈ ಎಲ್ಲಾ ಜಟಾಪಟಿ ನಡುವೆ ಎಮ್ಎಲ್ಎ ಸುರೇಶ್ ಕುಮಾರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟಿಕೆಟ್ಗಳನ್ನು ನಿರಾಕರಿಸಿದ್ದಾರೆ.
ಟಿಕೆಟ್ ಬೇಡವೆಂದು ಫೆಸ್ಬುಕ್ ಪೋಸ್ಟ್ ಹಂಚಿಕೊಂಡ ಶಾಸಕ
ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಮತ್ತು ವಿಪಕ್ಷ ನಾಯಕ ಅಶೋಕ್ ಐಪಿಎಲ್ ಟಿಕೆಟ್ಗಾಗಿ ಅಧಿವೇಶನದಲ್ಲಿ ಧ್ವನಿ ಎತ್ತಿದ ಬೆನ್ನಲ್ಲೇ ಕೆಎಸ್ಸಿಎ ಉದ್ಘಾಟನಾ ಪಂದ್ಯಕ್ಕೆ ಶಾಸಕರಿಗೆ 2+1 ಒಟ್ಟು 3 ಟಿಕೆಟ್ ನೀಡಲು ಕೆಎಸ್ಸಿಎ ಒಪ್ಪಿಕೊಂಡಿದೆ. ಸದ್ಯ ಒಬ್ಬ ಶಾಸಕರಿಗೆ ಎರಡು ಟಿಕೆಟ್ ನೀಡಲು ಒಪ್ಪಿರುವ ಕೆಎಸ್ಸಿಎ, ಮುಂದಿನ ಐಪಿಎಲ್ ಪಂದ್ಯಕ್ಕೆ 5 ಟಿಕೆಟ್ ನೀಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದೆ. ಇದೆಲ್ಲದರ ನಡುವೆ ವಿಜಯೇಂದ್ರ ಟಿಕೆಟ್ ನಿರಾಕರಿಸಿದ್ದಲ್ಲದೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್ ಕೂಡ ತಮ್ಮ ಸಾಮಾಜಿಕ ಜಾಲತಾನದ ಪೋಸ್ಟ್ ಮೂಲಕ ತಾನು ಟಿಕೆಟ್ ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶಾಸಕರು ಐಪಿಎಲ್ ಟಿಕೆಟ್ ಸ್ವೀಕರಿಸುವುದನ್ನು ಖಂಡಿಸಿರುವ ಸುರೇಶ್ ಕುಮಾರ್ , ಮಾಧ್ಯಮಗಳಲ್ಲಿ ಸುದ್ದಿಯಾಗಿರುವಂತೆ ಪ್ರತಿಯೊಬ್ಬ ಶಾಸಕರಿಗೆ ಎರಡು ಟಿಕೆಟ್ ಹಾಗೂ ಮುಂದಿನ ದಿನಗಳಲ್ಲಿ ಐದು ಟಿಕೆಟ್ ನೀಡುವ ವಿಷಯಕ್ಕೆ ತಮ್ಮ ಸ್ಪಷ್ಟ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಸರಿಯಾದ ನಿರ್ಧಾರವಲ್ಲ ಎಂದ ಶಾಸಕ, ವಿಧಾನಸಭೆಯಲ್ಲಿ ಚರ್ಚೆ ನಡೆದ 24 ಗಂಟೆಗಳಲ್ಲಿ ಸರ್ಕಾರ ತಕ್ಷಣ ಘೋಷಣೆ ಮಾಡಿರುವುದು ಆಶ್ಚರ್ಯಕರ. ಜನಪ್ರತಿನಿಧಿಗಳ ವಿಷಯ ಬಂದಾಗ ಮಾತ್ರ ಕಾರ್ಯ ಕೈಗೊಳ್ಳುವುದರಿಂದ ಸಾರ್ವಜನಿಕ ನಂಬಿಕೆಗೆ ಹೊಣೆ ಬರುತ್ತದೆ. ಆ ಟಿಕೆಟ್ ಅಥವಾ ಪಾಸ್ಗಳನ್ನು ನಾನು ಸವಿನಯವಾಗಿ ನಿರಾಕರಿಸುತ್ತೇನೆ. ವಿಐಪಿ ಸಂಸ್ಕೃತಿ ಮುಂದುವರಿದಂತೆ ರಾಜಕಾರಣಿಗಳು ಜನರ ದೃಷ್ಟಿಯಲ್ಲಿ ಇನ್ನಷ್ಟು ಕನಿಷ್ಠರಾಗುತ್ತಾರೆ ಎಂದು ಬರೆದುಕೊಂಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಮಾವ ಹಾಗೂ ನಿರ್ಮಾಪಕ ವಶು ಭಗ್ನಾನಿ ಇತ್ತೀಚೆಗೆ ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಸಿನಿಮಾ ನಿರ್ಮಾಣ ಮಾಡಿ ಅವರು ಸಾಕಷ್ಟು ಕೈ ಸುಟ್ಟುಕೊಂಡಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಅವರ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಫ್ಲಾಪ್ ಆಗಿವೆ. ಈ ಕಾರಣಕ್ಕೆ ಹಣ ಸಂಪಾದನೆಗೆ ವಶು ಅವರು ರಿಯಲ್ ಎಸ್ಟೇಟ್ ಮೇಲೆ ಗಮನ ಹರಿಸಿದ್ದಾರೆ. ಅವರು ಈಗ ಖ್ಯಾತ ಕ್ರಿಕೆಟರ್ಗೆ ಅಪಾರ್ಟ್ಮೆಂಟ್ ಮಾರಾಟ ಮಾಡಿದ್ದಾರೆ.
ವಶು ಅವರದ್ದು ಬಾಲಿವುಡ್ನಲ್ಲಿ ದೊಡ್ಡ ಹೆಸರು. ಅವರ ನಿರ್ಮಾಣ ಸಂಸ್ಥೆಯಿಂದ ‘ಕೂಲಿ ನಂಬರ್ 1’, ‘ಪ್ಯಾರ್ ಕಿಯಾ ತೋ ಡರ್ನಾ ಕ್ಯಾ’, ‘ಬಿವಿ ನಂಬರ್ 1’, ‘ಮಿಷನ್ ರಾಣಿಗಂಜ್’ ಮೊದಲಾದ ಚಿತ್ರಗಳನ್ನು ಪ್ರೊಡ್ಯೂಸ್ ಮಾಡಿದ್ದಾರೆ. ಆದರೆ, ಇತ್ತೀಚೆಗೆ ಅವರು ನಿರ್ಮಾಣ ಮಾಡಿದ ಸಿನಿಮಾಗಳು ನೆಲಕಚ್ಚಿವೆ. ಹೀಗಾಗಿ, ಪ್ರಾಪರ್ಟಿ ಸಿದ್ಧಪಡಿಸಿ ಅದನ್ನು ಮಾರುವ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ
ಜಾಕಿ ಭಗ್ನಾನಿ, ವಶು ಭಗ್ನಾನಿ ಹಾಗೂ ಪೂಜಾ ಭಗ್ನಾನಿ ಅವರಿಂದ ಖ್ಯಾತ ಕ್ರಿಕೆಟರ್ ಶುಭ್ಮನ್ ಗಿಲ್ ಅವರು 20.7 ಕೋಟಿ ರೂಪಾಯಿ ಕೊಟ್ಟು ಈ ಅಪಾರ್ಟ್ಮೆಂಟ್ ಖರೀದಿ ಮಾಡಿದ್ದಾರೆ. ಜುಹು ಭಾಗದಲ್ಲಿರೋ ಅಪಾರ್ಟ್ಮೆಟ್ನ 12ನೇ ಅಂತಸ್ತಿನಲ್ಲಿ ಇವರು ಮನೆ ಖರೀದಿ ಮಾಡಿದ್ದಾರೆ. ಇದು 3,369 ಅಡಿ ಇದೆ.
ವಶು ಅವರು ಸಿನಿಮಾ ರಂಗ ತೊರೆಯುತ್ತಾರಾ? ಖಂಡಿತವಾಗಿಯೂ ಇಲ್ಲ. ವಶು ಸಿನಿಮಾಗಳನ್ನು ನಿರ್ಮಾಣ ಮಾಡುವ ಕೆಲಸ ಮುಂದುವರಿಸುತ್ತಿದ್ದಾರೆ. ಕೆಲವು ಸಿನಿಮಾಗಳನ್ನು ನಿರ್ಮಾಣ ಮಾಡುವ ಕೆಲಸವನ್ನು ಇವರು ಮಾಡುತ್ತಿದ್ದಾರೆ.
ವಶು ಭಗ್ನಾನಿ ನಿರ್ಮಾಣದ ‘ಮಿಷನ್ ರಾಣಿಗಂಜ್’ ಸಿನಿಮಾ ಹೀನಾಯವಾಗಿ ಸೋತಿತ್ತು. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದರು. ಈ ಚಿತ್ರದಲ್ಲಿ ನಟಿಸಿದ್ದಕ್ಕೆ ಅಕ್ಷಯ್ಗೆ ಸಂಭಾವನೆ ನೀಡಿರಲಿಲ್ಲ ವಶು. ಈ ಬಗ್ಗೆ ಅಕ್ಷಯ್ ಕುಮಾರ್ ಅವರು ಮಾತನಾಡಿದ್ದರು. ಆದಾಗ ಸಂಭಾವನೆ ಕೊಡಿ ಎಂದಿದ್ದರಂತೆ.
ಮೈಸೂರು, ಮಾರ್ಚ್ 28: ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ಪೊಲೀಸರು 12 ಕೋಟಿ ರೂಪಾಯಿ ಮೌಲ್ಯದ ಡ್ರಗ್ (Drugs) ದಾಸ್ತಾನು ಪತ್ತೆ ಮಾಡಿದ್ದಾರೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದಾಸನಪುರ ಗ್ರಾಮದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.
ಆಸ್ಪತ್ರೆ ಬಳಿಯೇ ನಡೀತಿತ್ತು ಚಟುವಟಿಕೆ
ಮೈಸೂರು ಸಿದ್ಧಿಖಿ ಮೊಹಲ್ಲಾ ನಿವಾಸಿ ಮೊಹಮ್ಮದ್ ಇರ್ಫಾನ್ ಮತ್ತು ಹುಣಸೂರಿನ ಮೊಹಮ್ಮದ್ ಇರ್ಫಾನ್ ಆರೋಪಿಗಳಾಗಿದ್ದು, ಇವರ ಜಮೀನಿನಲ್ಲಿ ಸಿಂಥೆಟಿಕ್ ಡ್ರಗ್ ತಯಾರಿಕೆ ಮತ್ತು ಸಂಗ್ರಹಣೆ ನಡೆಸಲಾಗುತ್ತಿದ್ದುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ದಾಸನಪುರ ಗ್ರಾಮದಲ್ಲಿ ಇರುವ ಪಕ್ಕದ ಆಸ್ಪತ್ರೆ ಕಾವಲ್ನಲ್ಲಿ ಇದ್ದ ಒಂಟಿ ಮನೆಯಲ್ಲಿ ಈ ಚಟುವಟಿಕೆ ನಡೆಯುತ್ತಿತ್ತು ಎನ್ನಲಾಗಿದೆ. ಹುಣಸೂರು ಟೌನ್ ರೆಹಮತ್ ಮೊಹಲ್ಲಾ ನಿವಾಸಿಯ ಶೆಡ್ನಲ್ಲಿ ಕಚ್ಚಾ ವಸ್ತುಗಳನ್ನು ಸಂಗ್ರಹಿಸಿಡಲಾಗಿತ್ತು ಎಂದು ತಿಳಿದುಬಂದಿದೆ.
ಪೊಲೀಸರು ಜಪ್ತು ಮಾಡಿದ ವಸ್ತುಗಳು
ಪೊಲೀಸರು 7.35 ಕೆ.ಜಿ ತೂಕದ ಮೆಫೆಡ್ರೋನ್ ಮತ್ತು 41 ಕೆ.ಜಿ ತೂಕದ ಡ್ರಗ್ಸ್ ಪ್ರಿಕರ್ಸರ್ ವಸ್ತುಗಳನ್ನು ವಶಪಡಸಿಕೊಂಡಿದ್ದು, ಒಟ್ಟು 48 ಕೆ.ಜಿ ತೂಕದ ಡ್ರಗ್ಸ್ ಪದಾರ್ಥಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳು ಈ ರೀತಿಯಾಗಿ ಸಿಂಥೆಟಿಕ್ ಡ್ರಗ್ಸ್ ತಯಾರಣೆ ಮತ್ತು ವಿತರಣೆ ಮಾಡುತ್ತಿದ್ದಂತೆ ಪೊಲೀಸರು ವರದಿ ನೀಡಿದ್ದಾರೆ. ಪ್ರಕರಣವನ್ನು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಬೆಂಗಳೂರು: ಕರ್ನಾಟಕ ಸರ್ಕಾರದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶವೊಂದು ಒದಗಿಬಂದಿದೆ. ಕಂದಾಯ ಇಲಾಖೆಯು ಅಧಿಕೃತ ಅಧಿಸೂಚನೆಯ ಮೂಲಕ ಖಾಲಿ ಇರುವ ಉಪ ತಹಶೀಲ್ದಾರ್ ಮತ್ತು ಕಾನೂನು ಬೆರಳಚ್ಚುಗಾರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಹುದ್ದೆಗಳ ವಿವರ ಮತ್ತು ಸಂಬಳ:
ಕಂದಾಯ ಇಲಾಖೆಯಲ್ಲಿ ಒಟ್ಟು 3 ಹುದ್ದೆಗಳು ಖಾಲಿ ಇದ್ದು, ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಈ ಹುದ್ದೆಗಳಿಗೆ ಮಾಸಿಕ ರೂ. 22,000 ರಿಂದ 55,000/- ವರೆಗೆ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ. ವಿಶೇಷವಾಗಿ ಐಎಂಎ (IMA) ಮತ್ತು ಇತರ ಕಂಪನಿ ವಂಚನೆ ಪ್ರಕರಣಗಳ ವಿಶೇಷ ಅಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರದ ಕಚೇರಿಯಲ್ಲಿ ಕೆಲಸ ಮಾಡಲು ಈ ನೇಮಕಾತಿ ನಡೆಯುತ್ತಿದೆ.
ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:
ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ LLB, BE/B.Tech (CSE/IS), ಅಥವಾ PG ಡಿಪ್ಲೊಮಾ ಶಿಕ್ಷಣವನ್ನು ಪೂರ್ಣಗೊಳಿಸಿರಬೇಕು. ಅನುಭವ ಮತ್ತು ಅರ್ಹತೆಗೆ ಅನುಗುಣವಾಗಿ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು. ಇನ್ನು ವಯೋಮಿತಿಯ ವಿಷಯಕ್ಕೆ ಬಂದರೆ, ಅಭ್ಯರ್ಥಿಯ ಗರಿಷ್ಠ ವಯಸ್ಸು 65 ವರ್ಷಗಳು ಮೀರಿರಬಾರದು ಎಂದು ತಿಳಿಸಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ:
ಈ ಹುದ್ದೆಗಳಿಗೆ ಆಸಕ್ತರು ಆಫ್ಲೈನ್ (Offline) ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅದರೊಂದಿಗೆ ಅಗತ್ಯವಿರುವ ಸ್ವಯಂ-ದೃಢೀಕರಿಸಿದ ದಾಖಲೆಗಳನ್ನು (ವಯಸ್ಸಿನ ಪುರಾವೆ, ಶೈಕ್ಷಣಿಕ ದಾಖಲೆಗಳು, ಅನುಭವದ ಪತ್ರ ಇತ್ಯಾದಿ) ಲಗತ್ತಿಸಬೇಕು. ಭರ್ತಿ ಮಾಡಿದ ಅರ್ಜಿಯನ್ನು ಏಪ್ರಿಲ್ 04 ರೊಳಗೆ “ವಿಶೇಷ ಅಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರದ ಕಚೇರಿ (ಐಎಂಎ ಮತ್ತು ಇತರ ಕಂಪನಿ ವಂಚನೆ ಪ್ರಕರಣಗಳು)” ಈ ವಿಳಾಸಕ್ಕೆ ತಲುಪುವಂತೆ ಕಳುಹಿಸಬೇಕು.
ನವದೆಹಲಿ, ಮಾರ್ಚ್ 28: ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ ದೆಹಲಿಗೆ (Delhi) ತೆರಳುತ್ತಿದ್ದ ಇಂಡಿಗೋ ವಿಮಾನವೊಂದು (IndiGo Flight) ಎಂಜಿಜಿನ್ ವೈಫಲ್ಯದ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿದ್ದ ಎಲ್ಲಾ 161 ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದು, ಭಾರಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.
ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ ಘಟನೆಯ ವಿವರ
ಇಂಡಿಗೋ ಸಂಸ್ಥೆಯ ಬೋಯಿಂಗ್ 737 (ವಿಮಾನ ಸಂಖ್ಯೆ 6E 579) ಶನಿವಾರ ಬೆಳಗ್ಗೆ ವಿಶಾಖಪಟ್ಟಣಂನಿಂದ ದೆಹಲಿಗೆ ಪ್ರಯಾಣ ಬೆಳೆಸಿತ್ತು. ವಿಮಾನವು ದೆಹಲಿ ವಿಮಾನ ನಿಲ್ದಾಣವನ್ನು ತಲುಪುವ ಕೆಲವೇ ನಿಮಿಷಗಳ ಮೊದಲು ಎಂಜಿನ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೈಲಟ್ಗಳು ಎಮರ್ಜೆನ್ಸಿ ಲ್ಯಾಂಡಿಂಗ್ಗೆ ಅನುಮತಿ ಕೋರಿದ್ದಾರೆ.
ಬೆಳಗ್ಗೆ 10:39ಕ್ಕೆ ವಿಮಾನ ನಿಲ್ದಾಣದಲ್ಲಿ ‘ಫುಲ್ ಎಮರ್ಜೆನ್ಸಿ’ ಘೋಷಿಸಲಾಯಿತು. ಮುನ್ನೆಚ್ಚರಿಕಾ ಕ್ರಮವಾಗಿ ಅಗ್ನಿಶಾಮಕ ದಳದ ವಾಹನಗಳು ಮತ್ತು ತುರ್ತು ಚಿಕಿತ್ಸಾ ತಂಡಗಳು ರನ್ವೇ ಬಳಿ ಸನ್ನದ್ಧವಾಗಿದ್ದವು. ಅದೃಷ್ಟವಶಾತ್, ಬೆಳಗ್ಗೆ 10:54ಕ್ಕೆ ವಿಮಾನವು ಸುರಕ್ಷಿತವಾಗಿ ಭೂಸ್ಪರ್ಶ ಮಾಡಿತು.
ಟರ್ಕಿ ಸಂಸ್ಥೆಯ ವಿಮಾನ
ಈ ವಿಮಾನವನ್ನು ಇಂಡಿಗೋ ಸಂಸ್ಥೆಯು ಟರ್ಕಿಯ ‘ಕೊರೆಂಡನ್ ಏರ್ಲೈನ್ಸ್’ನಿಂದ ಗುತ್ತಿಗೆ ಆಧಾರದ ಮೇಲೆ ಪಡೆದುಕೊಂಡಿತ್ತು. ಸದ್ಯ ವಿಮಾನವನ್ನು ತಪಾಸಣೆಗೆ ಒಳಪಡಿಸಲಾಗಿದೆ. ಪ್ರಯಾಣಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ ಎಂದು ಇಂಡಿಗೋ ತಿಳಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ