ಒಳ್ಳೆ ಹುಡ್ಗ ಪ್ರಥಮ್ (Olle Hudga Pratham) ಅವರು ಬೆಂಗಳೂರು ಬಿಟ್ಟಿದ್ದಾರೆ. ಅವರೀಗ ಬೆಂಗಳೂರಿನಲ್ಲಿಲ್ಲ, ಇದಕ್ಕೆ ಕಾರಣ ಒಬ್ಬ ನಟ ಎಂದೆಲ್ಲ ಸುದ್ದಿಗಳು ಹರಡಿದ್ದವು. ಇದೀಗ ಪ್ರಥಮ್ ಅವರು ಟಿವಿ9 ಮೂಲಕ ಅದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ತಾವು ಬೆಂಗಳೂರು ಬಿಟ್ಟಿದ್ದೇಕೆ ಎಂಬುದನ್ನು ವಿವರಿಸಿದ್ದಾರೆ. ತಮಗೆ ಬೆಂಗಳೂರು ಸಾಕಷ್ಟು ಕೊಟ್ಟಿದೆ, ಆದರೆ ಬೆಂಗಳೂರು ಬಿಟ್ಟು ಹೋಗಲೇ ಬೇಕಾದ ಸ್ಥಿತಿ ಒದಗಿತ್ತು ಎಂದು ಪ್ರಥಮ್ ಹೇಳಿಕೊಂಡಿದ್ದಾರೆ. ಪ್ರಥಮ್ ಹೇಳಿದ್ದೇನು? ವಿಡಿಯೋ ನೋಡಿ…
ಬೆಂಗಳೂರು, ಮಾರ್ಚ್ 27: ಬೈ ಎಲೆಕ್ಷನ್ಗಳಿಗೆ ಸಂಬಂಧಿಸಿದಂತೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಪ್ರಚಾರದ ಬಗ್ಗೆ ವಿಜಯೇಂದ್ರ ಅವರು ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಬಾಗಲಕೋಟೆ ಮತ್ತು ದಾವಣಗೆರೆಗಳಲ್ಲಿ ಜೆಡಿಎಸ್ ಮುಖಂಡರು ಭಾಗವಹಿಸಿದ್ದರು. ತಾವು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ಕುಮಾರಸ್ವಾಮಿ ಅವರು ಪ್ರಚಾರಕ್ಕಾಗಿ ಸಮಯ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ವಿಜಯೇಂದ್ರ ದೃಢಪಡಿಸಿದ್ದಾರೆ. ಇದರಿಂದ ಬೈ ಎಲೆಕ್ಷನ್ಗಳಲ್ಲಿ ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಜೆಡಿಎಸ್ ನಾಯಕರ ಬೆಂಬಲ ಮತ್ತು ಸಹಭಾಗಿತ್ವ ಖಚಿತವಾಗಿದೆ.
ನವದೆಹಲಿ, ಮಾರ್ಚ್ 27: ಇರಾನ್ ಯುದ್ಧದ ಪರಿಣಾಮ ಇಂಧನ ಬಿಕ್ಕಟ್ಟು ಉದ್ಭವವಾಗಿದೆ. ಕಚ್ಛಾ ತೈಲ, ಎಲ್ಪಿಜಿ, ಎಲ್ಎನ್ಜಿಗಳ (LNG – Liquefied Natural Gas) ಪೂರೈಕೆ ವ್ಯತ್ಯಯಗೊಂಡಿದೆ. ಈ ಸಂದರ್ಭದಲ್ಲಿ ಭಾರತಕ್ಕೆ ರಷ್ಯಾ ಆಪದ್ಬಾಂಧವ ಎನಿಸಿದೆ. ರಷ್ಯಾದಿಂದ ಕಚ್ಛಾ ತೈಲದ ಖರೀದಿಯನ್ನು ಭಾರತ ಪುನಾರಂಭಿಸಿದೆ. ಇದೇ ವೇಳೆ ಎಲ್ಎನ್ಜಿಯನ್ನೂ ರಷ್ಯಾದಿಂದ ಪಡೆಯಲು ಭಾರತ ಯೋಜಿಸಿದೆ. ಅಮೆರಿಕದ ಅನುಮತಿ ಪಡೆದೇ ಭಾರತವು ರಷ್ಯಾದಿಂದ ತೈಲ ಖರೀದಿ ಮಾಡುತ್ತಿದೆ. ಈಗ ಎಲ್ಎನ್ಜಿ ಖರೀದಿಗೂ ಅಮೆರಿಕದ ಅನುಮತಿ ಸಿಗುವ ನಿರೀಕ್ಷೆ ಇದೆ.
ರಷ್ಯಾದಿಂದ ಎಲ್ಎನ್ಜಿ ಸಿಕ್ಕರೆ ಭಾರತದ ಇಂಧನ ಬಿಕ್ಕಟ್ಟಿನ ಸಮಸ್ಯೆಗೆ ಒಂದು ಮಟ್ಟಕ್ಕೆ ಪರಿಹಾರ ಸಿಗಬಹುದು. ಉಕ್ರೇನ್ ಯುದ್ಧ ಶುರುವಾದಾಗಿನಿಂದ ರಷ್ಯಾದಿಂದ ಭಾರತಕ್ಕೆ ಎಲ್ಎನ್ಜಿ ಪೂರೈಕೆ ನಿಂತಿತ್ತು. ಕೇವಲ ಕಚ್ಛಾ ತೈಲದ ಪೂರೈಕೆ ಮಾತ್ರವೇ ನಡೆಯುತ್ತಿದ್ದುದು. ಈಗ ಭಾರತಕ್ಕೆ ರಷ್ಯಾದ ಎಲ್ಎನ್ಜಿ ಪೂರೈಕೆ ಪುನಾರಂಭಗೊಳ್ಳುವುದು ಬಹುತೇಕ ಖಚಿತವಾಗಿದೆ. ಭಾರತವು ಎಲ್ಎನ್ಜಿ ಪಡೆಯಲು ಒಪ್ಪಿಕೊಂಡಿದ್ದೇ ಆದಲ್ಲಿ ಕೆಲವೇ ವಾರಗಳಲ್ಲಿ ವ್ಯವಸ್ಥೆ ಪೂರ್ಣವಾಗುವ ನಿರೀಕ್ಷೆ ಇದೆ.
ಎಲ್ಎನ್ಜಿ ಒಂದು ನೈಸರ್ಗಿಕ ಅನಿಲ. ಎಲ್ಪಿಜಿ ಒಂದು ಪೆಟ್ರೋಲಿಯಂ ಗ್ಯಾಸ್. ಎರಡೂ ಕೂಡ ಧ್ರವರೂಪಕ್ಕೆ ಇಳಿಸಲಾಗಿರುವ ಅನಿಲಗಳೇ ಆಗಿವೆ. ಹಾಗೆಯೇ ಎರಡೂ ಕೂಡ ಬೇರೆ ಬೇರೆ ಗುಣ ಇರುವ ಗ್ಯಾಸ್ ಆಗಿವೆ.
ತೈಲ ಸಂಸ್ಕರಣೆ ಪ್ರಕ್ರಿಯೆ ವೇಳೆ ಬರುವ ಪ್ರೊಪೇನ್, ಬುಟೇನ್ ಇತ್ಯಾದಿ ಅನಿಲಗಳು ಪೆಟ್ರೋಲಿಯಂ ಗ್ಯಾಸ್ ಎನಿಸುತ್ತವೆ. ಇದು ಗಾಳಿಗಿಂತ ಭಾರದ್ದಾಗಿರುತ್ತದೆ. ಈ ಪ್ರೊಪೇನ್, ಬುಟೇನ್ ಅನ್ನು ಧ್ರವ ರೂಪಕ್ಕೆ ಇಳಿಸಿ ಸಾಗಿಸಲಾಗುತ್ತದೆ.
ಎಲ್ಎನ್ಜಿಯಲ್ಲಿ ನೈಸರ್ಗಿಕ ಅನಿಲವಾದ ಮೀಥೇನ್ ಇರುತ್ತದೆ. ಕ್ರಯೋಜೆನಿಕ್ ವಿಧಾನದಲ್ಲಿ ಮೈನಸ್ 162 ಡಿಗ್ರಿ ಸೆಲ್ಷಿಸ್ ಶೀತದಲ್ಲಿ ಇದನ್ನು ಧ್ರವರೂಪಕ್ಕೆ ತರಲಾಗುತ್ತದೆ. ಈ ಅನಿಲವನ್ನು ಹಡಗುಗಳಲ್ಲಿ ಸಾಗಿಸಲೆಂದೇ ಧ್ರವರೂಪಕ್ಕೆ ತರಲಾಗುವುದು. ಅದಕ್ಕೆ ಇದನ್ನು ಲಿಕ್ವಿಫೈಡ್ ನ್ಯಾಚುರಲ್ ಗ್ಯಾಸ್ ಎನ್ನುವುದು.
ಪಿಎನ್ಜಿ ಮತ್ತು ಎಲ್ಎನ್ಜಿ ಎರಡೂ ಕೂಡ ಮೀಥೇನ್ಯುಕ್ತ ನೈಸರ್ಗಿಕ ಅನಿಲಗಳೇ. ಒಂದೇ ವ್ಯತ್ಯಾಸ ಎಂದರೆ ಮೀಥೇನ್ ಅನ್ನು ಧ್ರವರೂಪಕ್ಕೆ ತಂದರೆ ಅದು ಎಲ್ಎನ್ಜಿ ಆಗುತ್ತದೆ. ಈ ಎಲ್ಎನ್ಜಿಯನ್ನು ಬಳಸಬೇಕಾದರೆ ಅದನ್ನು ಮತ್ತೆ ಗ್ಯಾಸ್ ರೂಪಕ್ಕೆ ತರಬೇಕು. ಈ ಗ್ಯಾಸ್ ಅನ್ನು ಪೈಪ್ಗಳ ಮೂಲಕ ಸರಬರಾಜು ಮಾಡಿದರೆ ಅದು ಪಿಎನ್ಜಿ ಎನಿಸುತ್ತದೆ.
ಒಡಿಶಾ, ಮಾ.27: ಇತ್ತೀಚಿನ ದಿನಗಳಲ್ಲಿ ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷದ ಸುದ್ದಿಗಳೇ ಹೆಚ್ಚಾಗಿ ಕೇಳಿಬರುತ್ತಿವೆ. ಆದರೆ, ಇದರ ನಡುವೆ ಮನುಷ್ಯ ಮತ್ತು ಆನೆಯ ನಡುವಿನ ಅಚ್ಚರಿಯ ಬಾಂಧವ್ಯವನ್ನು ಸಾರುವ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಯುವಕನೊಬ್ಬನ ನೃತ್ಯವನ್ನು ಕಂಡ ಕಾಡಾನೆಯೊಂದು, ಅಷ್ಟೇ ಪ್ರೀತಿಯಿಂದ ಪ್ರತಿಕ್ರಿಯಿಸಿ ತಾನೂ ಹೆಜ್ಜೆ ಹಾಕಿರುವ ಮನಮೋಹಕ ದೃಶ್ಯವಿದು. ಒಡಿಶಾದ ಕಿಯೋಂಜರ್ ಜಿಲ್ಲೆಯ ಚಂಪುಆ ಎಂಬಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ರಸ್ತೆಯ ಪಕ್ಕದಲ್ಲಿ ನಿಂತಿದ್ದ ಒಂಟಿ ಸಲಗವೊಂದರ ಮುಂದೆ ಯುವಕನೊಬ್ಬ ಆನಂದದಿಂದ ನೃತ್ಯ ಮಾಡಲು ಶುರು ಮಾಡುತ್ತಾನೆ. ಆನೆಯನ್ನು ‘ರಾಜು’ ಎಂದು ಪ್ರೀತಿಯಿಂದ ಕರೆಯುತ್ತಾ, ಕೈಮುಗಿದು ನಮಸ್ಕರಿಸಿ ಕುಣಿಯುತ್ತಾನೆ. ಆರಂಭದಲ್ಲಿ ಯುವಕನನ್ನು ಶಾಂತವಾಗಿ ಗಮನಿಸುತ್ತಿದ್ದ ಆನೆ, ಕೆಲವೇ ಕ್ಷಣಗಳಲ್ಲಿ ಆತನ ನೃತ್ಯದ ತಾಳಕ್ಕೆ ತಕ್ಕಂತೆ ತನ್ನ ತಲೆ ಮತ್ತು ದೇಹವನ್ನು ಆಡಿಸುತ್ತಾ ‘ಡ್ಯಾನ್ಸ್’ ಮಾಡಿದೆ. ಈ ಅಪರೂಪದ ಜುಗಲ್ಬಂದಿಯನ್ನು ಕಂಡ ಸ್ಥಳೀಯರು ಅಚ್ಚರಿಗೊಂಡಿದ್ದಾರೆ. ಯಾವುದೇ ಹಿಂಸೆ ಅಥವಾ ಭಯವಿಲ್ಲದೆ ಆನೆಯು ಅತ್ಯಂತ ಶಾಂತವಾಗಿ ಮತ್ತು ಖುಷಿಯಿಂದ ಪ್ರತಿಕ್ರಿಯಿಸಿದ್ದು ನೋಡುಗರ ಮನ ಗೆದ್ದಿದೆ.”ಸಂತೋಷ ಎಂಬುದು ಸಾಂಕ್ರಾಮಿಕ” ಎಂಬುದಕ್ಕೆ ಈ ವೀಡಿಯೊ ಸಾಕ್ಷಿಯಾಗಿದೆ. “ಪ್ರೀತಿ ನೀಡಿದರೆ ಪ್ರಾಣಿಗಳೂ ಸ್ಪಂದಿಸುತ್ತವೆ” ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಈ ವೀಡಿಯೊ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದ್ದು, ಇಂದಿನ ಒತ್ತಡದ ಬದುಕಿನಲ್ಲಿ ಒಂದು ರೀತಿಯ ನೆಮ್ಮದಿ ನೀಡುವ ದೃಶ್ಯವಾಗಿದೆ.
2026 ರ ಐಪಿಎಲ್ (IPL 2026) ಆರಂಭಕ್ಕೂ ಮುನ್ನ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ್ದ ಆರ್ಸಿಬಿ (RCB) ಇದೀಗ ಎಲ್ಲವನ್ನು ಇತ್ಯರ್ಥ ಮಾಡಿಕೊಂಡು, ಹೊಸ ಆವೃತ್ತಿಯಲ್ಲಿ ಕಣಕ್ಕಿಳಿಯಲು ಮುಂದಾಗಿದೆ. ಇದರ ಜೊತೆಗೆ ಆರ್ಸಿಬಿ ತವರಿನಲ್ಲಿ ತನ್ನ ಪಂದ್ಯಗಳನ್ನು ಆಡುತ್ತಿರುವುದು ಅಭಿಮಾನಿಗಳ ಸಂತಸವನ್ನು ಇಮ್ಮಡಿಗೊಳಿಸಿದೆ. ತವರಿನಲ್ಲಿ ಅಭಿಮಾನಿಗಳ ಮುಂದೆ 19ನೇ ಆವೃತ್ತಿಯನ್ನು ಗೆಲುವಿನೊಂದಿಗೆ ಆರಂಭಿಸಲು ನೋಡುತ್ತಿರುವ ಆರ್ಸಿಬಿಗೆ, ಸನ್ರೈಸರ್ಸ್ ಹೈದರಾಬಾದ್ ಎದುರಾಗುತ್ತಿದೆ. ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ಹೊಂದಿರವ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಬೇಕೆಂದರೆ ಆರ್ಸಿಬಿ ತನ್ನ ಬಲಿಷ್ಠ ಪ್ಲೇಯಿಂಗ್ 11 ಕಟ್ಟಿಕೊಂಡು ಸಾಂಘಿಕ ಪ್ರದರ್ಶನ ನೀಡಬೇಕಿದೆ. ಆದರೆ ಅದಕ್ಕೂ ಮುನ್ನ ತವರು ಮೈದಾನದಲ್ಲಿ ಆರ್ಸಿಬಿ ದಾಖಲೆ ಹೇಗಿದೆ ಎಂಬುದನ್ನು ನೋಡೋಣ..
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ತವರು ಮೈದಾನದಲ್ಲಿ ಅಂದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದುವರೆಗೆ 96 ಪಂದ್ಯಗಳನ್ನು ಅಡಿದೆ. ಇದರಲ್ಲಿ 45 ಪಂದ್ಯಗಳನ್ನು ಗೆದ್ದಿರುವ ಆರ್ಸಿಬಿ, 46 ಪಂದ್ಯಗಳಲ್ಲಿ ಸೋಲು ಕಂಡಿದೆ. ಒಂದು ಪಂದ್ಯ ಡ್ರಾದಲ್ಲಿ ಕೊನೆಗೊಂಡರೆ, ಉಳಿದ 4 ಪಂದ್ಯಗಳು ಫಲಿತಾಂಶವಿಲ್ಲದೆ ಅಂತ್ಯಗೊಂಡಿವೆ.
ಈ ಮೈದಾನದಲ್ಲಿ ಆರ್ಸಿಬಿಯ ಅತ್ಯಧಿಕ ಸ್ಕೋರ್ ಎಷ್ಟು ಎಂಬುದನ್ನು ನೋಡುವುದಾದರೆ.. 2013 ರ ಐಪಿಎಲ್ನಲ್ಲಿ ಪುಣೆ ವಾರಿಯರ್ಸ್ ವಿರುದ್ಧ 5 ವಿಕೆಟ್ಗಳ ನಷ್ಟಕ್ಕೆ 263 ರನ್ ಕಲೆಹಾಕಿತ್ತು.
ಹಾಗೆಯೇ 2008 ರ ಐಪಿಎಲ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 82 ರನ್ಗಳಿಗೆ ಆಲೌಟ್ ಆಗಿದ್ದು ತಂಡದ ಅತ್ಯಂತ ಕಡಿಮೆ ಮೊತ್ತವಾಗಿದೆ.
ಈ ಮೈದಾನದಲ್ಲಿ ಅಜೇಯ 175 ರನ್ಗಳ ಇನ್ನಿಂಗ್ಸ್ ಆಡಿರುವ ಕ್ರಿಸ್ ಗೇಲ್ ಅತ್ಯಧಿಕ ವೈಯಕ್ತಿಕ ಮೊತ್ತ ಕಲೆಹಾಕಿದ ದಾಖಲೆ ಮಾಡಿದ್ದಾರೆ.
2017 ರ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 9 ರನ್ಗಳಿಗೆ 4 ವಿಕೆಟ್ ಉರುಳಿಸಿದ್ದ ಸ್ಯಾಮ್ಯುಯೆಲ್ ಬದ್ರಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನದ ದಾಖಲೆ ಹೊಂದಿದ್ದಾರೆ.
40.03 ರ ಸರಾಸರಿಯಲ್ಲಿ 3202 ರನ್ ಕಲೆಹಾಕಿರುವ ವಿರಾಟ್ ಕೊಹ್ಲಿ ಈ ಮೈದಾನದಲ್ಲಿ ಅತಿ ಹೆಚ್ಚು ರನ್ ಕಲೆಹಾಕಿರುವ ದಾಖಲೆ ಮಾಡಿದ್ದಾರೆ.
ಹಾಗೆಯೇ 41 ಕ್ಯಾಚ್ಗಳನ್ನು ಹಿಡಿಯುವ ಮೂಲಕ ಅತಿ ಹೆಚ್ಚು ಕ್ಯಾಚ್ ಹಿಡಿದ ದಾಖಲೆಯಲ್ಲೂ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಈ ಮೈದಾನದಲ್ಲಿ ಆಡಿರುವ 43 ಪಂದ್ಯಗಳಲ್ಲಿ 54 ವಿಕೆಟ್ ಪಡೆದಿರುವ ಯುಜ್ವೇಂದ್ರ ಚಾಹಲ್ ಅತ್ಯಧಿಕ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
2016 ರ ಐಪಿಎಲ್ನಲ್ಲಿ ಗುಜರಾತ್ ಲಯನ್ಸ್ ವಿರುದ್ಧ ವಿರಾಟ್ ಕೊಹ್ಲಿ ಹಾಗೂ ಅಬಿ ಡಿವಿಲಿಯರ್ಸ್ 229 ರನ್ಗಳ ಜೊತೆಯಾಟವನ್ನಾಡಿರುವುದು ಇದುವರೆಗಿನ ದಾಖಲೆಯಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ತುಮಕೂರು, ಮಾರ್ಚ್ 27: ಅರಣ್ಯ ಇಲಾಖೆ ನೇಮಕಾತಿ ಹೆಸರಲ್ಲಿ ನಕಲಿ ತರಬೇತಿ ಕೇಂದ್ರ ನಡೆಸುತ್ತಿದ್ದ ಜಾಲವೊಂದು ತುಮಕೂರಿನಲ್ಲಿ ಪತ್ತೆಯಾಗಿದೆ. ಬೆಳಗಾವಿ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳ 15 ಯುವಕರ ಕರೆತಂದಿದ್ದ ತಂಡ, ಇವರನ್ನು ಮೈಸೂರು ವಿಭಾಗದ ಅರಣ್ಯ ಇಲಾಖೆಯ ವಿವಿಧ ಹಂತಗಳ ಸೇವೆಗೆ ನೇಮಕಾತಿ ಪ್ರಕ್ರಿಯೆಯಲ್ಲಿ ಕೆಲಸದ ಆದೇಶ ಸಿಕ್ಕಿರುವ ರೀತಿ ನಂಬಿಸಿತ್ತು. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿಯವರ ಲೆಟರ್ ಹೆಡ್, ಅರಣ್ಯ ಇಲಾಖೆಯ ಲೋಗೊ ಸೇರಿದಂತೆ ಪ್ರಧಾನ ಕಾರ್ಯದರ್ಶಿ ಸಹಿ ಹಾಗೂ ಸೀಲ್ನ ನಕಲು ಮಾಡಿದ್ದ ಖದೀಮರು, ನೇಮಕಾತಿ ಆದೇಶ ಪತ್ರಗಳನ್ನು ಯುವಕರಿಗೆ ವಾಟ್ಸ್ ಆ್ಯಪ್ ಮುಖಾಂತರ ಕಳುಹಿಸಿದ್ದರು ಎಂಬುದು ಬಯಲಾಗಿದೆ.
ತುಮಕೂರು ತಾಲೂಕಿನ ವಡ್ಡರಹಳ್ಳಿಯ ಪ್ರಭಾವಿ ವ್ಯಕ್ತಿ ವಾಲೆ ಚಂದ್ರರವರ ಪುತ್ರನ ತೋಟದ ಮನೆಯನ್ನು ಬಾಡಿಗೆ ಪಡೆದ ಗ್ಯಾಂಗ್ ಈ ರೀತಿಯ ಕೃತ್ಯ ಎಸಗಿದ್ದು, ಆರಂಭದಲ್ಲೇ ವಿಚಾರ ಬೆಳಕಿಗೆ ಬಂದಿದೆ. ತಿಂಗಳಿಗೆ 30 ಸಾವಿರ ಬಾಡಿಗೆಯಂತೆ ಮಾತನಾಡಿದ್ದ ಕೆಲವೇ ದಿನದಲ್ಲಿ ತೋಟದ ಮನೆಯಲ್ಲಿ ನಾನಾ ಬದಲಾವಣೆಯಾಗಿದ್ದವು. ಗೋಡೆಗಳಿಗೆ ಬಳಿದ ಬಣ್ಣ, ಬೋರ್ಡ್, ಅಪರಿಚಿತ 15 ಯುವಕರ ವಾಸ ಅನುಮಾನ ಮೂಡಿಸಿದ್ದ ಕಾರಣ, ತೋಟದ ಮಾಲೀಕ ಹಾಗೂ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಸ್ಥಳ ಪರಿಶೀಲನೆಗೆ ಬಂದ ಅರಣ್ಯ ಅಧಿಕಾರಿಗಳೇ ಇವರ ಸೆಟ್ ಅಪ್ ಕಂಡು ಒಂದು ಕ್ಷಣ ದಂಗಾಗಿದ್ದಾರೆ. ವ್ಯವಸ್ಥಿತವಾಗಿ 15 ಯುವಕರ ಯಾಮಾರಿಸಿ ಹಣ ಪಡೆದ ಜೊತೆಗೆ ಇಲಾಖೆ ಹೆಸರು ಬಳಸಿಕೊಂಡು ತರಬೇತಿ ನೆಪದಲ್ಲಿ ಕರೆತಂದು ವಂಚಿಸಿರೋದು ಈ ವೇಳೆ ಗೊತ್ತಾಗಿದೆ. ಕೂಡಲೇ ಈ ಬಗ್ಗೆ ಪೊಲೀಸರಿಗೆ ಅರಣ್ಯ ಇಲಾಖೆ ಮಾಹಿತಿ ನೀಡಿದೆ.
ಇನ್ನು ಈ ವಂಚನೆ ಜಾಲದಲ್ಲಿ ತುಮಕೂರಿನ ನಮಸ್ತೆ ಕೆಫೆಯ ಪವನ್, ನೆಲಮಂಗಲದ ಕಿರಣ್ ಹಾಗೂ ವಿನಯ್ ಎಂಬ ಮೂವರ ಹೆಸರು ಕೇಳಿ ಬಂದಿದೆ. ಸದ್ಯ ಘಟನೆ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರೆ, ತರಬೇತಿಗೆಂದು ಬಂದಿದ್ದ ಯುವಕರು ಮೋಸ ಹೊದ ಬಗ್ಗೆ ತಿಳಿದು ಕಂಗಾಲಾಗಿ ಊರಿನತ್ತ ತೆರಳಿದ್ದಾರೆ. ಆದರೇ ಹೀಗೆ ವ್ಯವಸ್ಥಿತವಾಗಿ ಹಾಗೂ ಅಕ್ರಮವಾಗಿ ತರಬೇತಿ ಕೇಂದ್ರ ನಡೆಸುತಿದ್ದವರ ಹಿಂದೆ ಇರೋದ್ಯಾರು? ಯುವಕರು ವಂಚಕರ ಬಲೆಗೆ ಬಿದ್ದಿರೋದು ಹೇಗೆ? ಈ ರೀತಿಯ ಹಲವು ಪ್ರಶ್ನೆಗಳು ಮೂಡಿದ್ದು, ಪ್ರಕರಣದ ಮತ್ತಷ್ಟು ಮಾಹಿತಿ ಪೊಲೀಸರ ತನಿಖೆ ನಂತರವಷ್ಟೇ ತಿಳಿದು ಬರಬೇಕಿದೆ.
ಬೆಂಗಳೂರು/ದಾವಣಗೆರೆ, ಮಾರ್ಚ್ 27): ದಾವಣಗೆರೆ ಉಪ ಚುನಾವಣೆಯಲ್ಲಿ (Davanagere South By Election) ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸಾದಿಕ್ ಪೈಲ್ವಾನ್, ಕಾಂಗ್ರೆಸ್ ಹಿರಿಯ ನಾಯಕರ ಸಂಧಾನದ ಬಳಿಕ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಸಕ್ಸಸ್ ಆಗಿದ್ದು, ಯಾವುದೇ ಷರತ್ತುಗಳಿಲ್ಲದೆ ಪಕ್ಷದ ಅಧಿಕೃತ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಪೈಲ್ವಾನ್ ಘೋಷಿಸಿದ್ದಾರೆ.
ಸಾಧಿಕ್ ಪೈಲ್ವಾನ್ ಅವರು ರಿಜ್ವಾನ್ ಅರ್ಷದ್ ಹಾಗೂ ಸಲೀಂ ಅಹಮ್ಮದ್ ನೇತೃತ್ವದಲ್ಲಿ ಸಿಎಂ ಭೇಟಿ ಮಾಡಿ ಚರ್ಚಿಸಿದ್ದು, ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ನಂತರ ನೇರವಾಗಿ ಡಿಕೆ ಶಿವಕುಮಾರ್ ಜೊತೆ ಕೆಪಿಸಿಸಿ ಕಚೇರಿ ತೆರಳಿ ಸುದ್ದಿಗೋಷ್ಠಿಯಲ್ಲಿ ಬಂಡಾಯ ಸ್ಪರ್ಧೆಯಿಂದ ನಾನು ನಿವೃತ್ತಿ ಆಗಿದ್ದೇನೆ ಎಂದು ಘೋಷಣೆ ಮಾಡಿದರು. ಈ ಮೂಲಕ ಕಾಂಗ್ರೆಸ್ಗೆ ಕಂಟಕವಾಗಿದ್ದ ಬಂಡಾಯ ಶಮನವಾದಂತಾಗಿದೆ. ಹಾಗಾದ್ರೆ, ಪೈಲ್ವಾನ್ ಏನೆಲ್ಲಾ ಹೇಳಿದ್ದಾರೆ ಎನ್ನುವುದನ್ನು ಕೇಳಿ.
ಬೆಂಗಳೂರು, ಮಾ.27: ನಗರದ ಜಯಮಹಲ್ ಬಡಾವಣೆಯ ರಸ್ತೆಬದಿಗಳಲ್ಲಿರುವ ವಿದ್ಯುತ್ ಕಂಬಗಳು ಮತ್ತು ಟ್ರಾನ್ಸ್ಫಾರ್ಮರ್ಗಳ ಮೇಲೆ ‘ಉಚಿತ ಆನ್ಲೈನ್ ಬೈಬಲ್ ಕೋರ್ಸ್’ ಎಂಬ ಪೋಸ್ಟರ್ಗಳನ್ನು ಅಂಟಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಸ್ಥಳೀಯ ವ್ಯಕ್ತಿಯೊಬ್ಬರು ವಿಡಿಯೋ ಮಾಡುವ ಮೂಲಕ ತಮ್ಮ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಜಯಮಹಲ್ ಎಕ್ಸ್ಟೆನ್ಷನ್ನ 1ನೇ ಮುಖ್ಯರಸ್ತೆಯ ಸುತ್ತಮುತ್ತಲಿನ ಸಾರ್ವಜನಿಕ ಆಸ್ತಿಗಳ ಮೇಲೆ ಸಾಲು ಸಾಲಾಗಿ ಧಾರ್ಮಿಕ ಪ್ರಚಾರದ ಪೋಸ್ಟರ್ಗಳನ್ನು ಅಂಟಿಸಲಾಗಿದೆ. ಇವುಗಳಲ್ಲಿ ಕ್ಯೂಆರ್ ಕೋಡ್ (QR Code) ಮತ್ತು ಸಂಪರ್ಕ ಸಂಖ್ಯೆಗಳನ್ನು ನೀಡಲಾಗಿದೆ. ವಿಡಿಯೋ ಮಾಡಿರುವ ವ್ಯಕ್ತಿ, “ಸಾರ್ವಜನಿಕ ಜಾಗಗಳಲ್ಲಿ ಇಂತಹ ಧಾರ್ಮಿಕ ಪ್ರಚಾರ ಮಾಡುವುದು ತಪ್ಪು. ಇದು ಯಾವುದೇ ಧರ್ಮವಿರಲಿ, ಪ್ರಚಾರವನ್ನ ದೇವಸ್ಥಾನ, ಚರ್ಚ್ ಅಥವಾ ಮಸೀದಿಗಳ ಒಳಗೆ ಮಾಡಿಕೊಳ್ಳಲಿ. ಬೀದಿ ಬದಿಗಳಲ್ಲಿ ಇಂತಹ ಪೋಸ್ಟರ್ಗಳನ್ನು ಹಾಕುವುದರಿಂದ ಕೋಮು ಸೌಹಾರ್ದತೆಗೆ ಧಕ್ಕೆಯಾಗುವ ಸಾಧ್ಯತೆ ಇದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ಕನ್ನಡಿಗ ದೇವರಾಜ್ ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಧರ್ಮ ಎಂಬುದು ಮನೆಯ ಒಳಗಿರಲಿ, ಅದನ್ನು ಬೀದಿಗೆ ತಂದು ಪ್ರಚಾರ ಮಾಡುವುದು ಸರಿಯಲ್ಲ. ಈ ರೀತಿ ಎಲ್ಲೆಂದರಲ್ಲಿ ಪೋಸ್ಟರ್ ಅಂಟಿಸುವುದರಿಂದ ನಗರದ ಅಂದವೂ ಹಾಳಾಗುತ್ತದೆ ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.ಱಸಷದ
ವಿಜಯಪುರ, (ಮಾರ್ಚ್ 27): ಪುಟ್ಟ ಪುಟ್ಟ ಮೂರು ಮಕ್ಕಳೊಂದಿಗೆ ತಾಯಿ (Mother) ಆತ್ಮಹತ್ಯೆ ಮಾಡಿಕೊಂಡಿರುವ ಘನಘೋರ ಘಟನೆ ವಿಜಯಪುರ (Vijayapura) ಜಿಲ್ಲೆಯ ಇಂಡಿ ತಾಲೂಕಿನ ಮಿರಗಿ ಗ್ರಾಮದಲ್ಲಿ ನಡೆದಿದೆ. ಗುರುವಾರ ಸಂಜೆ ರಾಜಶ್ರೀ ಶಂಕ್ರಪ್ಪ ಹಳ್ಳೂರ (28) ಎನ್ನುವ ಮಹಿಳೆ ತನ್ನ ಮೂವರು ಅಪ್ರಾಪ್ತ ಮಕ್ಕಳಾದ ಅನುಶ್ರೀ (6), ತನು (3) ಮತ್ತು ಸಂತೋಷನನ್ನು (1) ಬಾವಿಗೆ ತಳ್ಳಿ ಬಳಿಕ ತಾನೂ ಸಹ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಖಾಸಗಿ ಬಸ್ ಚಾಲಕನಾಗಿರುವ ಪತಿ ಶಂಕರಪ್ಪ ಕೆಲಸಕ್ಕೆ ಹೋಗಿದ್ದಾಗ ಪತ್ನಿ ರಾಜಶ್ರೀ ತನ್ನ ಮೂವರು ಮಕ್ಕಳೊಂದಿಗೆ ಸಾವಿನ ಮನೆ ಸೇರಿದ್ದಾಳೆ. ಆದ್ರೆ, ಘಟನೆ ಕಾರಣ ಮಾತ್ರ ನಿಗೂಢವಾಗಿದೆ.
ಘಟನೆಯ ವೇಳೆ ರಾಜಶ್ರೀಯ ಪತಿ ಶಂಕ್ರಪ್ಪ ಊರಲ್ಲಿ ಇರಲಿಲ್ಲ. ಖಾಸಗಿ ಬಸ್ ಚಾಲಕನಾಗಿರುವ ಶಂಕ್ರೆಪ್ಪ ಘಟನೆ ಕುರಿತು ಮಾಹಿತಿ ತಿಳಿದ ಬಳಿಕ ತಮ್ಮೂರಿಗೆ ಆಗಮಿಸಿದ್ದ. ಇನ್ನು ರಾಜಶ್ರೀಯ ತವರಿನವರು ಸಹ ಸ್ಥಳಕ್ಕೆ ಆಗಮಿಸಿದ್ದರು. ನಂತರ ಪೊಲೀಸರು ಬಾವಿಯಿಂದ ನಾಲ್ವರ ಮೃತದೇಹಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಇಂಡಿ ತಾಲೂಕು ಆಸ್ಪತ್ರೆಗೆ ರವಾನೆ ಮಾಡಿದ್ದು, ಇಂದು (ಮಾರ್ಚ್ 27) ಬೆಳಿಗ್ಗೆ ಮರಣೋತ್ತರ ಪರೀಕ್ಷೆ ಮಾಡಿ ಶವಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ತಮ್ಮ ಮಕ್ಕಳ ಸಾವಿಗೆ ಪತ್ನಿ ರಾಜಶ್ರೀಯೇ ಕಾರಣವೆಂದು ಪತಿ ಶಂಕ್ರಪ್ಪ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇತ್ತ ರಾಜಶ್ರೀಯ ತವರು ಮನೆಯವರು ಸಹ ಇದು ಆತ್ಮಹತ್ಯೆ ಪ್ರಕರಣವೆಂದು ದೂರು ನೀಡಿದ್ದಾರೆ. ಮೇಲ್ನೋಟಕ್ಕೆ ಆಸ್ತಿ ವಿಚಾರವೇ ಈ ದುರಂತಕ್ಕೆ ಕಾರಣವಾಗಿರಬಹುದು ಎಂಬ ಚರ್ಚೆ ಗ್ರಾಮದಲ್ಲಿ ನಡೆದಿದೆಯಾರೂ ನಿಖರ ಕಾರಣ ತಿಳಿದುಬಂದಿಲ್ಲ. ಹೀಗಾಗಿ ಇಂಡಿ ಗ್ರಾಮೀಣ ಪೊಲೀಸರ ತನಿಖೆಯಿಂದ ಘಟನೆಗೆ ಅಸಲಿ ಕಾರಣ ತಿಳಿದು ಬರಬೇಕಿದೆ.
ಕೋಲಾರ, ಮಾರ್ಚ್ 27: ಕಲಬೆರಕೆ ಹಾಲಿನ (Fake Milk Production) ವಿರುದ್ಧ ಸಮರ ಸಾರಿದ್ದ ಜಿಲ್ಲಾಡಳಿತ ಹಲವು ಹಳ್ಳಿಗಳಲ್ಲಿ ದಾಳಿ ನಡೆಸಿ ಹಾಲು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಸದ್ಯ ವರದಿ ಜಿಲ್ಲಾಡಳಿತ ಕೈ ಸೇರಿದ್ದು, 18 ಕಡೆ ಸಂಗ್ರಹಿಸಿದ್ದ ಹಾಲು ಕಲಬೆರಕೆ ಎನ್ನುವ ಆಘಾತಕಾರಿ ವರದಿ ಬಹಿರಂಗವಾಗಿದೆ. ಸದ್ಯ ಈ ವಿಚಾರ ಕೋಲಾರ ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.
ರಾಜ್ಯದಲ್ಲಿ ಕ್ಷೀರಕಾಂತ್ರಿ ಮೂಲಕ ಬಯಲು ಸೀಮೆಯಲ್ಲಿ ಹಾಲಿನ ಹೊಳೆ ಹರಿಸಿದ ಕೀರ್ತಿ ಕೋಲಾರ ಜಿಲ್ಲೆಯ ಹಾಲು ಉತ್ಪಾದಕರಿಗೆ ಸಲ್ಲುತ್ತದೆ. ಉಪ ಕಸುಬಾಗಿದ್ದ ಹೈನುಗಾರಿಕೆಯನ್ನು ಹೈನೋದ್ಯಮವನ್ನಾಗಿ ಪರಿವರ್ತಿಸುವ ಮೂಲಕ ಜಿಲ್ಲೆಯಲ್ಲಿ ಹಾಲು ಉದ್ಯಮವನ್ನಾಗಿ ಮಾಡಿದ ಕೀರ್ತಿ ಸಹ ಕೋಲಾರ ಜಿಲ್ಲೆಯ ಗೋಪಾಲಕರಿಗೆ ಸಲ್ಲುತ್ತದೆ. ಇಂಥ ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಹಾಲಿಗೆ ವಿಷ ಬೆರೆಸುವ ಕಲಬೆರಕೆ ಪ್ರಕರಣಗಳು ಕೇಳಿ ಬಂದ ಹಿನ್ನೆಲೆ ಫೆಬ್ರವರಿ 5 ರಂದು ಕೋಲಾರ ಜಿಲ್ಲಾಡಳಿತ ಕಲಬೆರಕೆ ಹಾಲಿನ ವಿರುದ್ದ ಸಮರ ಸಾರಿತ್ತು.
ಜಿಲ್ಲೆಯಲ್ಲಿ ಕಲಬೆರಕೆ ಹಾಲು ತಯಾರು ಮಾಡುತ್ತಿದ್ದವರ ಮೇಲೆ ದಾಳಿ ಮಾಡಿ ಸುಮಾರು 48 ಕಡೆಗಳಲ್ಲಿ ಕಲಬೆರಕೆ ಹಾಲಿನ ಮಾದರಿಯನ್ನು ಸಂಗ್ರಹಿಸಿದ್ದರು. ಹೀಗೆ ಸಂಗ್ರಹಿಸಿದ್ದ ಹಾಲಿನ ಮಾದರಿಗಳನ್ನು ಸರ್ಕಾರದ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ಪ್ರಯೋಗಾಲಯ ವರದಿ ಬಂದಿದ್ದು, ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಮಕ್ಕಳು, ವೃದ್ದರು, ಮಹಿಳೆಯರು, ರೋಗಿಗಳು ಹೀಗೆ ಎಲ್ಲರೂ ಕುಡಿಯುವ ಹಾಲಿನಲ್ಲಿ ಕಲಬೆರಕೆ ವಿಷಕಾರಿ ಅಂಶ ಇರುವುದು ಖಚಿವಾಗಿದೆ. 48 ಹಾಲಿನ ಮಾದರಿಗಳ ಪೈಕಿ ಸುಮಾರು 18 ಮಾದರಿಗಳು ಕಳಪೆ ಹಾಗೂ ಕಲಬೆರಕೆ ಹಾಲು ಅನ್ನೋದು ತಿಳಿದು ಬಂದಿದೆ.
ಪ್ರಕರಣ ದಾಖಲು
ಸದ್ಯ ಈ ನಿಟ್ಟಿನಲ್ಲಿ ಕೋಲಾರ ಜಿಲ್ಲಾಡಳಿತ ಕಲಬೆರಕೆ ಹಾಲು ತಯಾರು ಮಾಡುತ್ತಿದ್ದ, ಹಾಲು ಸಂಗ್ರಹ ಕೇಂದ್ರಗಳ ಮೇಲೆ FSSAI act 51 ಅಡಿಯಲ್ಲಿ ಪ್ರಕರಣ ದಾಖಲಿಸಲು ಮುಂದಾಗಿದೆ. ಅಲ್ಲದೆ ಅನುಮತಿ ಪಡೆಯದ ಖಾಸಗಿ ಹಾಲು ಸಂಗ್ರಹ ಕೇಂದ್ರಗಳನ್ನು ಮುಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಂದಾಗಿದೆ.
ಇನ್ನು ಕೋಲಾರ ಜಿಲ್ಲೆಯ ಗಡಿಗೆ ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡು ರಾಜ್ಯಗಳು ಹೊಂದಿಕೊಂಡಿವೆ. ಈ ಕಾರಣದಿಂದ ಆಂಧ್ರ ಮತ್ತು ತಮಿಳುನಾಡಿನ ಖಾಸಗಿ ಡೈರಿಗಳಾದ ಕಾಂತರಾಜ ಸರ್ಕಲ್ನಲ್ಲಿರುವ ತಿರುಮಲ ಡೈರಿ, ಲಿಂಗಾಪುರದ ಸಂತೃಷ್ಠಿ ಡೈರಿ, ತಲಗುಂದ ಕ್ರಾಸ್ನಲ್ಲಿನ ಹಟ್ ಸನ್ ಡೈರಿ, ಪೀಲವಾರ ಗ್ರಾಮದ ಬಳಿಯ ದೊಡ್ಲ ಡೈರಿ, ತಿಮ್ಮರಾವುತ್ತನಹಳ್ಳಿ ಗ್ರಾಮದ ಬಳಿಯ ಅಮುಲ್ ಡೈರಿ, ಕೊಂಡಿಹಳ್ಳಿ ಬಳಿಯ ಶ್ರೀಜ ಡೈರಿ, ಗುಮ್ಮಕಲ್ ಗ್ರಾಮದ ಪರಾಗ್ ಮಿಲ್ಕ್ ಡೈರಿಗಳಲ್ಲಿ ಸಂಗ್ರಹಿಸಿದ್ದ ಹಾಲಿನಲ್ಲಿ ಕಲಬೆರಕೆ ಹಾಗೂ ಕಳಪೆ ಗುಣಮಟ್ಟ ಇರುವುದು ಕಂಡು ಬಂದಿದೆ.
ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡ ಹೇಳಿದ್ದಿಷ್ಟು
ಸದ್ಯ ಈ ಎಲ್ಲಾ ಖಾಸಗಿ ಡೈರಿಗಳ ಮೇಲೆ ಪ್ರಕರಣ ದಾಖಲು ಮಾಡಿ ಕ್ರಮಕೈಗೊಳ್ಳಲು ತೀರ್ಮಾನಿಸಲಾಗಿದೆ. ಅಲ್ಲದೆ ಜಿಲ್ಲೆಯ ಸುಮಾರು 29 ಶುದ್ಧ ಕುಡಿಯುವ ನೀರಿನ ಘಟಕಗಳು ಕೂಡ ಅಕ್ರಮವಾಗಿದ್ದು, ಅವುಗಳನ್ನು ಅಮಾನತಿನಲ್ಲಿಡಲು ಜಿಲ್ಲಾಡಳಿತ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಇನ್ನು ಈ ಸಂಬಂಧ ಕೋಲಾರ ಹಾಲು ಒಕ್ಕೂಟ ಜಿಲ್ಲಾಡಳಿತ ಕ್ರಮವನ್ನು ಸ್ವಾಗತಿಸಿದ್ದು ಇನ್ನು ಮುಂದೆ ಕೋಲಾರ ಹಾಲು ಒಕ್ಕೂಟದಿಂದಲೂ ಪ್ರತ್ಯೇಕ ತಂಡ ಮಾಡಿ ಕಲಬೆರಕೆ ಹಾಲು ಪತ್ತೆ ಹಚ್ಚಲು ನಿರ್ಧಾರ ಮಾಡಲಾಗಿದೆ ಎನ್ನುವುದು ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡರ ಮಾತು.
ಒಟ್ಟಾರೆ ಕೋಲಾರ ಜಿಲ್ಲೆಯಲ್ಲಿ ನೀರು ಇಲ್ಲದಿದ್ದರೂ ಸಹ ಹಾಲಿನ ಹೊಳೆ ಹರಿಯುತ್ತಿತ್ತು. ಸದ್ಯ ಹಾಲಿನಲ್ಲೂ ಕಲಬೆರೆಕೆ ಮಾಡಿ ಜಿಲ್ಲೆಯ ಜನರ ಆರೋಗ್ಯದ ಜೊತೆ ಚೆಲ್ಲಾಟವಾಡಲು ಮುಂದಾಗಿದ್ದ ಕಲಬೆರೆಕೆ ಹಾಲು ತಯಾರಿಕಾ ಅಡ್ಡೆಗಳ ಹೆಡಮುರಿ ಕಟ್ಟಿದ್ದು ಮುಂದೆ ಅವುಗಳನ್ನು ಶಾಶ್ವತವಾಗಿ ಜಿಲ್ಲೆಯಿಂದ ಹೊರಹಾಕುವ ಕೆಲಸ ಮಾಡಬೇಕಿದೆ.