ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್, ಪ್ರಕಾಶ್ ರಾಜ್ ಆಕ್ಷೇಪಕ್ಕೆ ಆಯೋಗ ಉತ್ತರ – Kannada News | Prakash Raj name deleted from Voter list election commission gave clarification

ಚುನಾವಣಾ ಆಯೋಗವು (Election Commission) ಮತದಾರರ ಪಟ್ಟಿಯನ್ನು ಪರಿಷ್ಕರಿಸಲು ಕರ್ನಾಟಕದಲ್ಲಿ ಎಸ್​​ಐಆರ್ ಪ್ರಕ್ರಿಯೆಯನ್ನು ನಡೆಸುತ್ತಿದೆ. ರಾಜ್ಯದಾದ್ಯಂತ ಪ್ರಕ್ರಿಯೆ ಜಾರಿಯಲ್ಲಿದ್ದು, ಅಕ್ರಮ, ಗೊಂದಲಭರಿತ ಮತದಾರರ ಹೆಸರನ್ನು ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ. ಬೆಂಗಳೂರಿನಲ್ಲಿ ಸುಮಾರು 65 ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಡಿಲೀಟ್ ಆಗಿದೆ. ನಟ ಪ್ರಕಾಶ್ ರಾಜ್ (Prakash Raj) ನಿನ್ನೆ (ಆಗಸ್ಟ್ 11) ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ತಮ್ಮ ಹೆಸರನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ ಎಂದು ಆಕ್ಷೇಪಿಸಿದ್ದರು.

‘ನಾನು ಹುಟ್ಟಿ ಬೆಳೆದ, ಶಿಕ್ಷಣ ಪಡೆದ ಮತ್ತು ಈ ಹಿಂದೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಕ್ಷೇತ್ರದಲ್ಲಿಯೇ ನನ್ನ ಹೆಸರು ಹೇಗೆ ಡಿಲೀಟ್ ಆಗಲು ಸಾಧ್ಯ?” ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನು ಅವರು “ಒಂದು ಜೋಕ್” ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೆ, ತಮ್ಮ ಮತದಾನದ ಹಕ್ಕನ್ನು ಮರಳಿ ಪಡೆಯಲು ಅಗತ್ಯವಿರುವ ಎಲ್ಲಾ ಕಾನೂನು ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದ್ದರು. ಜೊತೆಗೆ ಆಯೋಗದ ಕ್ರಮದ ಬಗ್ಗೆ ಆಕ್ಷೇಪವನ್ನೂ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೆ ಇದೀಗ ಚುನಾವಣಾ ಆಯೋಗದ ಅಧಿಕಾರಿಗಳು ಪ್ರಕಾಶ್ ರಾಜ್ ಆಕ್ಷೇಪಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಚುನಾವಣಾ ಅಧಿಕಾರಿ, ‘ಪ್ರಕಾಶ್ ರಾಜ್ ಅವರು ಶಾಂತಿನಗರದ ಮತದಾರರಾಗಿದ್ದರು. ಆದರೆ ಮನೆ-ಮನೆ ಪರಿಶೀಲನೆ ವೇಳೆ, ಪ್ರಕಾಶ್ ರಾಜ್ ಅವರು ತಮ್ಮ ನಿವಾಸವಾದ ನಂಬರ್ 266, ಗಾರ್ಡನ್ ಅಪಾರ್ಟ್​​ನಿಂದ ಬೇರೆಡೆ ಸ್ಥಳಾಂತರವಾಗಿರುವುದು ಗೊತ್ತಾಗಿದೆ. ಬಿಎಲ್​​ಓ ಸ್ಥಳೀಯವಾಗಿ ವಿಚಾರಿಸಿದಾಗ, ಪ್ರಕಾಶ್ ರಾಜ್ ಅವರು ಕಳೆದ ನಾಲ್ಕು ವರ್ಷಗಳಿಂದ ಅಲ್ಲಿಲ್ಲ, ಬದಲಿಗೆ ಬಾಡಿಗೆದಾರರು ವಾಸಿಸುತ್ತಿದ್ದಾರೆ ಎಂಬುದು ತಿಳಿದು ಬಂದಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಮಲಯಾಳಂ ಸಿನಿಮಾನಲ್ಲಿ ನಟಿಸಲಿರುವ ರುಕ್ಮಿಣಿ, ನಾಯಕ ಯಾರು?

ಬಿಎಲ್​ಓ ನೀಡಿರುವ ಮಾಹಿತಿಯ ಅನ್ವಯ ಸ್ಥಳ ಪರಿಶೀಲನೆ ಮಾಡಲಾಯ್ತು. ಪ್ರಕಾಶ್ ರಾಜ್ ಅವರು ನಿಗದಿತ ವಿಳಾಸದಲ್ಲಿ ಸಾಕಷ್ಟು ಸಮಯದಿಂದ ಇಲ್ಲದೇ ಇರುವ ಕಾರಣಕ್ಕೆ ಅವರನ್ನು ಶಾಶ್ವತ ಸ್ಥಳಾಂತರ ಪಟ್ಟಿಗೆ (ಎಎಸ್​​ಡಿಡಿಓ) ಸೇರಿಸಲಾಗಿದೆ ಎಂದಿದ್ದಾರೆ. ಅಲ್ಲದೆ, ಈ ವಿಷಯವಾಗಿ ತಾವು ದೂರವಾಣಿ ಮೂಲಕ ಪ್ರಕಾಶ್ ರಾಜ್ ಅವರೊಟ್ಟಿಗೆ ಮಾತನಾಡಿದ್ದು, ಅವರು ಶಾಂತಿನಗರದಲ್ಲೇ ಬೇರೆ ಸ್ಥಳದಲ್ಲಿ ವಾಸವಿರುವುದಾಗಿ ಹೇಳಿದ್ದಾರೆ. ಹಾಗಿದ್ದರೆ ಅವರು ಸ್ಥಳೀಯ ಬಿಎಲ್​​ಓ ಅವರನ್ನು ಸಂಪರ್ಕಿಸಿ ಫಾರ್ಮ್ 6 ಅನ್ನು ಸಲ್ಲಿಸಿದಲ್ಲಿ ಅವರ ಹೆಸರು ಶಾಂತಿನಗರದಲ್ಲೇ ಮತದಾರರ ಪಟ್ಟಿಗೆ ಸೇರಲಿದೆ ಎಂದಿದ್ದಾರೆ.

ಮತದಾರರ ಪಟ್ಟಿಯಿಂದ ತಮ್ಮ ಹೆಸರು ಡಿಲೀಟ್ ಆಗಿದ್ದರ ಬಗ್ಗೆ ವಿಡಿಯೋ ಹಂಚಿಕೊಂಡಿದ್ದ ಪ್ರಕಾಶ್ ರಾಜ್, ‘ತಮಗೆ ಮತ ಹಾಕದವರಿಗೆ ಮತ ಹಾಕುವ ಹಕ್ಕಿನಿಂದಲೇ ವಂಚಿತರನ್ನಾಗಿ ಮಾಡಲಾಗುತ್ತಿದೆ’ ಎಂದು ಆರೋಪಿಸಿದ್ದರು. ಆದರೆ ಈಗ ಚುನಾವಣಾಧಿಕಾರಿಗಳು ಸ್ಪಷ್ಟನೆ ನೀಡುವ ಮೂಲಕ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಾವೇರಿ ವಿವಾದ: ಸುಪ್ರೀಂ ಕೋರ್ಟ್​​ಗೆ ತಮಿಳುನಾಡು ಅರ್ಜಿ ಸಂಬಂಧ ಕರ್ನಾಟಕದಿಂದ ಪ್ರತ್ಯುತ್ತರ ಸಲ್ಲಿಕೆ – Kannada News | Cauvery Dispute: Karnataka Files Counter Affidavit in SC; Cites El Niño Deficit & Demands Pro Rata Formula

ಸುಪ್ರೀಂ ಕೋರ್ಟ್​​ಗೆ ತಮಿಳುನಾಡು ಅರ್ಜಿ ಸಂಬಂಧ ಕರ್ನಾಟಕದಿಂದ ಪ್ರತ್ಯುತ್ತರ ಸಲ್ಲಿಕೆ

Image Credit source: PTI

ನವದೆಹಲಿ, ಆಗಸ್ಟ್​​ 12: ಕಾವೇರಿ ನೀರು ಹರಿಸುವಂತೆ ಸೂಚಿಸಲು ಕೋರಿ ಸುಪ್ರೀಂ ಕೋರ್ಟ್​​ಗೆ ತಮಿಳುನಾಡು ಅರ್ಜಿ ಸಂಬಂಧ ನಾಳೆ ವಿಚಾರಣೆ ಹಿನ್ನೆಲೆ ಅರ್ಜಿಗೆ ಕರ್ನಾಟಕದ ವಕೀಲರ ತಂಡದಿಂದ ಪ್ರತ್ಯುತ್ತರ ಸಲ್ಲಿಕೆ ಮಾಡಲಾಗಿದೆ. ಈ ವರ್ಷ ಎಲ್ ನಿನೋ ಪರಿಣಾಮದಿಂದಾಗಿ ಸಂಕಷ್ಟ ಎದುರಾಗಿದ್ದು, ಕರ್ನಾಟಕದ 4 ಡ್ಯಾಂಗಳ ಒಳಹರಿವಿನಲ್ಲಿ ಶೇಕಡಾ 65.76ರಷ್ಟು ಕೊರತೆ ಉಂಟಾಗಿದೆ. ಹೀಗಿದ್ದರೂ CWMA ಶಿಫಾರಸುಗಳಿಗಿಂತ ಹೆಚ್ಚಿನ ನೀರನ್ನು ಬಿಳಿಗುಂಡ್ಲು ಬಳಿ ಬಿಡುಗಡೆ ಮಾಡಲಾಗಿದೆ. ವಯನಾಡು ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾದ ಕಾರಣ ಜುಲೈ 29ರಿಂದ ಆಗಸ್ಟ್ 10ರವರೆಗೆ ಜಲಾಶಯಗಳಿಂದ ಹೆಚ್ಚುವರಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿರುವ ಬಗ್ಗೆ ಮಾಹಿತಿ ನೀಡಲಾಗಿದೆ.

‘86,797 ಕ್ಯೂಸೆಕ್ ನೀರು ತಮಿಳುನಾಡು ತಲುಪಿದೆ’

ಜಲಾಶಯಗಳಿಂದ ಒಟ್ಟು 1,64,080 ಕ್ಯೂಸೆಕ್ ನೀರು ಹರಿದಿದ್ದು, ಬಿಳಿಗುಂಡ್ಲು ಮೂಲಕ 86,797 ಕ್ಯೂಸೆಕ್ ನೀರು ತಮಿಳುನಾಡು ತಲುಪಿದೆ. ತಮಿಳುನಾಡು ಶೇ.26.954 TMC ಸಂಕಷ್ಟದ ಕೊರತೆಯನ್ನು ಲೆಕ್ಕಹಾಕಿದೆ. ಬಿಳಿಗುಂಡ್ಲುವಿನಲ್ಲಿರುವ CWRC ಗೇಜ್‌ ಸ್ಟೇಷನ್ ನೀರಿನ ಹರಿವನ್ನ ದಾಖಲಿಸಿದೆ. ಗೇಜ್‌ ಸ್ಟೇಷನ್ ಗಂಟೆಗೊಮ್ಮೆ ನೀರಿನ ಹರಿವನ್ನು ದಾಖಲಿಸುತ್ತಿದ್ದು, ನೀರಿನ ಹರಿವನ್ನು ದಾಖಲಿಸಲು ಪ್ರತ್ಯೇಕ ಮೇಲ್ವಿಚಾರಣೆಯ ಅಗತ್ಯವಿಲ್ಲ. ಸಂಕಷ್ಟದ ವರ್ಷದಲ್ಲಿ ಪ್ರೊ-ರೇಟಾ ಪರಿಗಣಿಸದಿದ್ದರೆ ನ್ಯಾಯಸಮ್ಮತವಾಗಲ್ಲ ಎಂದು ಸುಪ್ರೀಂಕೋರ್ಟ್​ನಲ್ಲಿ ಹಿರಿಯ ವಕೀಲ ಮೋಹನ್ ವಿ.ಕಾತರಕಿ ಪ್ರತಿಕ್ರಿಯೆ ಸಲ್ಲಿಕೆ ಮಾಡಿದ್ದಾರೆ.

ಇದನ್ನೂ ಓದಿ: ಕಾವೇರಿ ನೀರು ವಿವಾದ: CWRC ಶಿಫಾರಸ್ಸು ಎತ್ತಿಹಿಡಿದ CWMA, ಕರ್ನಾಟಕಕ್ಕೆ ಮತ್ತೆ ಬರೆ

’16 ಟಿಎಂಸಿ ನೀರು ಬಿಡೋದು ಕಷ್ಟ’

ಇನ್ನು ತಮಿಳುನಾಡಿಗೆ ನೀರು ಬಿಡುವುದಕ್ಕೆ CWMA ಆದೇಶ ವಿಚಾರ ಸಂಬಂಧ ಪ್ರತಿಕ್ರಿಯಿಸಿರುವ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ, ಮೂರುವರೆ ಸಾವಿರ ಕ್ಯೂಸೆಕ್ ಬಿಡಲು ಏನು ಸಮಸ್ಯೆ ಇರಲಿಲ್ಲ. ಆದರೆ 16 ಟಿಎಂಸಿ ನೀರು ಬಿಡೋದು ಕಷ್ಟ. ಎಸಿಎಸ್, ನಮ್ಮ ವಕೀಲರು ಸಮರ್ಥವಾಗಿ ವಾದ ಮಾಡಿದ್ದರೂ ನಮಗೆ ಅನ್ಯಾಯ ಆಗಿದೆ. ವಿಚಾರವಾಗಿ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿದ್ದೇನೆ. ಮುಂದಿನ ತೀರ್ಮಾನ ಶೀಘ್ರದಲ್ಲೇ ತಿಳಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

ಮಾತುಕತೆಯಾದರೆ ಒಳ್ಳೆಯದು: ಹೆಚ್​​ಡಿಕೆ

ಜಲ ವಿವಾದ ಸಂಬಂಧ ತಮಿಳುನಾಡು ಸರ್ಕಾರದ ಜೊತೆ ಮಾತುಕತೆಯಾದರೆ ಒಳ್ಳೆಯದು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ನೀರಿನ ವಿಚಾರದಲ್ಲಿ ತಮಿಳುನಾಡು ರಾಜಕೀಯ ಮಾಡುತ್ತಿದೆ. ಕಾವೇರಿ ನೀರು ಬಿಡುವ ವಿಚಾರದಲ್ಲಿ ತಮಿಳುನಾಡಿಗೆ ಹೋಲಿಸಿದರೆ ರಾಜ್ಯ ಸರ್ಕಾರ ಯಾವುದೇ ತಯಾರಿ ಮಾಡಿಲ್ಲ. ಈ ವರ್ಷ ಮಳೆಯ ಕೊರತೆ ಇರುವ ಬಗ್ಗೆ ಮುಂಚೆ ಮಾಹಿತಿ ಇತ್ತು. ಮೇ ತಿಂಗಳಲ್ಲಿ CWMA, CWRC ಮೇಲೆ ತಮಿಳುನಾಡು ಒತ್ತಡ ಹಾಕಿ ತಮಿಳುನಾಡು ನೀರು ಪಡೆದಿದೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಟಾಟಾ ಸನ್ಸ್ ಛೇರ್ಮನ್ ಎನ್ ಚಂದ್ರಶೇಖರನ್ ರಾಜೀನಾಮೆ; ಅವರು ಕೆಳಗಿಳಿಯಲು ಏನು ಕಾರಣ? – Kannada News | Tata Sons Chairman N Chandrasekaran resigns, to continue till his current term ends on 2027 February

ಎನ್. ಚಂದ್ರಶೇಖರನ್Image Credit source: PTI

ನವದೆಹಲಿ, ಆಗಸ್ಟ್ 12: ಟಾಟಾ ಸಮೂಹದ ಪ್ರಮುಖ ಹೋಲ್ಡಿಂಗ್ ಕಂಪನಿಯಾದ ಟಾಟಾ ಸನ್ಸ್‌ನ ಅಧ್ಯಕ್ಷ ಎನ್. ಚಂದ್ರಶೇಖರನ್ (N Chandrasekaran) ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಆದರೆ, ಅವರು ತಮ್ಮ ಪ್ರಸ್ತುತ ಅವಧಿ ಮುಗಿಯುವ ಫೆಬ್ರವರಿ 2027 ರವರೆಗೆ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ ನಾಲ್ಕು ದಶಕಗಳಿಂದ ಟಾಟಾ ಗ್ರೂಪ್​ನಲ್ಲಿ ಇರುವ, ಮತ್ತು ಕಳೆದ 9 ವರ್ಷದಿಂದ ಟಾಟಾ ಸನ್ಸ್ ಛೇರ್ಮನ್ ಆಗಿರುವ ಅವರು ಹಲವು ದಾಖಲೆ, ಮೈಲಿಗಲ್ಲು, ಗೌರವಗಳನ್ನು ಗಿಟ್ಟಿಸಿದ್ದಾರೆ. ಟಾಟಾ ಮನೆತನಕ್ಕೆ ಸೇರದ ವ್ಯಕ್ತಿಯೊಬ್ಬರು ಟಾಟಾ ಸನ್ಸ್ (Tata Sons) ಛೇರ್ಮನ್ ಆಗಿದ್ದು ಅವರೇ ಮೊದಲು. ಟಾಟಾ ಗ್ರೂಪ್​ನಲ್ಲಿ ಒಂದು ವಿಶೇಷ ಅಧ್ಯಾಯ ಮುಕ್ತಾಯಗೊಳ್ಳುತ್ತಿದೆ.

ಎನ್ ಚಂದ್ರಶೇಖರನ್ ರಾಜೀನಾಮೆಗೆ ಕಾರಣವೇನು?

ಟಾಟಾ ಸನ್ಸ್ ಮತ್ತು ಟಾಟಾ ಟ್ರಸ್ಟ್ಸ್ ನಡುವಿನ ಆಡಳಿತಾತ್ಮಕ ಭಿನ್ನಾಭಿಪ್ರಾಯಗಳು ಈ ನಿರ್ಧಾರಕ್ಕೆ ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ. ಟಾಟಾ ಟ್ರಸ್ಟ್ಸ್ ಅಧ್ಯಕ್ಷರಾದ ನೋಯೆಲ್ ಟಾಟಾ ಅವರೊಂದಿಗಿನ ಕೆಲ ಭಿನ್ನಾಭಿಪ್ರಾಯಗಳು ಚಂದ್ರಶೇಖರನ್ ಅವರನ್ನು ರಾಜೀನಾಮೆ ನಿರ್ಧಾರಕ್ಕೆ ನೂಕಿರಬಹುದು ಎನ್ನಲಾಗಿದೆ.

ಇದನ್ನೂ ಓದಿ: ಕೆಲಸ ಬಿಟ್ಟ ಆರು ಮಂದಿಯ ಹುಚ್ಚುತನದಲ್ಲಿ ಆರಂಭವಾಗಿತ್ತು ಎಚ್​ಸಿಎಲ್; ಕಾರು ಮಾರಿ ಕಟ್ಟಿದ ಕಂಪನಿಯ ಕಥೆ ಇದು…

ವರದಿಯ ಪ್ರಕಾರ, ಕಳೆದ ಫೆಬ್ರವರಿಯಲ್ಲೇ ಚಂದ್ರಶೇಖರನ್ ಅವರ ಅಧಿಕಾರಾವಧಿಯನ್ನು ವಿಸ್ತರಿಸುವ ನಿರ್ಧಾರವನ್ನು ಟಾಟಾ ಸನ್ಸ್ ಮುಂದೂಡಿತ್ತು. ಚಂದ್ರಶೇಖರನ್ ಅವರನ್ನು ಮುಂದುವರಿಸಲು ನೋಯೆಲ್ ಟಾಟಾ ಕೆಲ ಆಕ್ಷೇಪಣೆಗಳನ್ನು ಹೊಂದಿದ್ದರು. ಕೆಲ ಷರತ್ತುಗಳನ್ನೂ ಮುಂದಿಟ್ಟಿದ್ದರು. ಟಾಟಾ ಸನ್ಸ್ ಕಂಪನಿಯನ್ನು ಪಬ್ಲಿಕ್ ಲಿಸ್ಟೆಡ್ ಕಂಪನಿಯಾಗಿ ಮಾಡಬಾರದು ಎಂಬುದು ಒಂದು ಷರತ್ತು. ಇದಕ್ಕೆ ಸಮ್ಮತಿಸಲು ಚಂದ್ರಶೇಖರನ್ ಸಿದ್ಧರಿರಲಿಲ್ಲ. ಹೀಗಾಗಿ, ಅವರನ್ನು ಟಾಟಾ ಸನ್ಸ್ ಛೇರ್ಮನ್ ಆಗಿ ಮುಂದುವರಿಸಲು ನೋಯಲ್ ಟಾಟಾ ಒಪ್ಪಿರಲಿಲ್ಲ.

ನೋಯೆಲ್ ಟಾಟಾ ಅವರು ಟಾಟಾ ಟ್ರಸ್ಟ್ಸ್​ನ ಛೇರ್ಮನ್ ಆಗಿದ್ದಾರೆ. ಟಾಟಾ ಗ್ರೂಪ್ ಅಡಿಯಲ್ಲಿರುವ ಮೂವತ್ತಕ್ಕೂ ಹೆಚ್ಚು ಕಂಪನಿಗಳನ್ನು ಟಾಟಾ ಸನ್ಸ್ ನಿಯಂತ್ರಿಸುತ್ತದೆ. ಈ ಟಾಟಾ ಸನ್ಸ್​ನಲ್ಲಿ ಶೇ. 66 ಪಾಲು ಹೊಂದಿರುವುದು ಟಾಟಾ ಟ್ರಸ್ಟ್ಸ್. ಹೀಗಾಗಿ, ನೋಯಲ್ ಟಾಟಾ ಅವರು ಟಾಟಾ ಸನ್ಸ್​ನ ಮ್ಯಾನೇಜ್ಮೆಂಟ್ ವಿಚಾರದಲ್ಲಿ ಪ್ರಮುಖ ಪಾತ್ರಧಾರಿಯಾಗಿರುತ್ತಾರೆ.

ಇದನ್ನೂ ಓದಿ: ಪಿಪಿಎಫ್​ನಲ್ಲಿ ತಿಂಗಳಿಗೆ 5,000 ರೂ ಹೂಡಿಕೆ ಮಾಡಿದರೆ ಮೆಚ್ಯೂರಿಟಿಗೆ ಎಷ್ಟು ಸಿಗುತ್ತದೆ? ಕೋಟಿ ರೂ ಕಾರ್ಪಸ್ ನಿರ್ಮಿಸಲು ಎಷ್ಟು ವರ್ಷ ಬೇಕು?

ಟಾಟಾ ಗ್ರೂಪ್​ನಲ್ಲಿ ಎನ್. ಚಂದ್ರಶೇಖರನ್ ಅವರ ಸುದೀರ್ಘ ಪಯಣ

  • 1987: ಟಾಟಾ ಸಮೂಹದೊಂದಿಗೆ ವೃತ್ತಿ ಜೀವನ ಆರಂಭ.
  • 2009: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ನ ಸಿಇಒ ಆಗಿ ನೇಮಕ.
  • 2017: ಟಾಟಾ ಸನ್ಸ್‌ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.

ಟಿಸಿಎಸ್ (TCS), ಟಾಟಾ ಮೋಟಾರ್ಸ್ ಮತ್ತು ಏರ್ ಇಂಡಿಯಾ ಸೇರಿದಂತೆ ಸಮೂಹದ 30 ಕ್ಕೂ ಹೆಚ್ಚು ಕಂಪನಿಗಳು ಟಾಟಾ ಸನ್ಸ್ ನಿಯಂತ್ರಣದಲ್ಲಿವೆ. ಈಗ ಹೊಸ ಹೊಸ ಯೋಜನೆಗಳನ್ನು ಟಾಟಾ ಗ್ರೂಪ್ ಕೈಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ಕಂಪನಿಗೆ ನಾಯಕತ್ವ ಬಹಳ ಅಗತ್ಯ ಇದೆ. ಸಂಸ್ಥೆಗೆ ಹೊಸ ಛೇರ್ಮನ್ ಅನ್ನು ಬೇಗ ನೇಮಕ ಮಾಡಿ ಎಂದು ಚಂದ್ರಶೇಖರನ್ ಮನವಿ ಮಾಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮಕ್ಕಳ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಸ್ಟಿಯಾನೊ ರೊನಾಲ್ಡೊ! – Kannada News | Cristiano Ronaldo marries long time partner Georgina Rodríguez

ಫುಟ್‌ಬಾಲ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ, ತಮ್ಮ ದೀರ್ಘಕಾಲದ ಗೆಳತಿ ಜಾರ್ಜಿನಾ ರೋಡ್ರಿಗಸ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪೋರ್ಚುಗಲ್‌ನ ಲಿಸ್ಬನ್ ಬಳಿಯ ಐಷಾರಾಮಿ ಕರಾವಳಿ ಪಟ್ಟಣವಾದ ಕ್ಯಾಸ್ಕೈಸ್‌ನಲ್ಲಿ ಆಗಸ್ಟ್ 11, 2026ರ ಮಂಗಳವಾರದಂದು ಇವರ ವಿವಾಹ ಮಹೋತ್ಸವ ಅತ್ಯಂತ ಸರಳವಾಗಿ ನೆರವೇರಿದೆ.

ಯಾವುದೇ ಅದ್ದೂರಿ ಸಾರ್ವಜನಿಕ ಪ್ರದರ್ಶನಕ್ಕೆ ಅವಕಾಶ ನೀಡದ ರೊನಾಲ್ಡೊ, ಕೇವಲ ತಮ್ಮ ಐದು ಮಕ್ಕಳು ಮತ್ತು ಆಪ್ತ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಅತ್ಯಂತ ಸರಳವಾಗಿ ಮದುವೆಯಾಗಿದ್ದಾರೆ. ಮದುವೆಯ ನಂತರ ಇವರಿಬ್ಬರೂ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿವಾಹದ ಉಂಗುರಗಳ ಚಿತ್ರವನ್ನು ಹಂಚಿಕೊಂಡು, “C❤️G” ಎಂಬ ಸರಳ ಶೀರ್ಷಿಕೆಯೊಂದಿಗೆ ಈ ಸಂತಸದ ಸುದ್ದಿಯನ್ನು ಜಗತ್ತಿಗೆ ಖಚಿತಪಡಿಸಿದ್ದಾರೆ.

ವಿಶೇಷ ದಿನಾಂಕ:

ಜಾರ್ಜಿನಾ ರೋಡ್ರಿಗಸ್ ಅವರು ಆಗಸ್ಟ್ 11, 2025 ರಂದು ತಮ್ಮ ನಿಶ್ಚಿತಾರ್ಥವನ್ನು ಅಧಿಕೃತವಾಗಿ ಘೋಷಿಸಿದ್ದರು. ನಿಖರವಾಗಿ ಒಂದು ವರ್ಷದ ನಂತರ, ಅಂದರೆ ಆಗಸ್ಟ್ 11, 2026 ರಂದು ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ತಮ್ಮ ಪ್ರೀತಿಯನ್ನು ದಾಂಪತ್ಯ ಬಂಧನವಾಗಿ ಪರಿವರ್ತಿಸಿಕೊಂಡಿದ್ದಾರೆ.

ಮಕ್ಕಳೇ ಅತಿಥಿಗಳು:

ಈ ಮದುವೆಯಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಐದು ಮಕ್ಕಳಾದ ಕ್ರಿಸ್ಟಿಯಾನೊ ಜೂನಿಯರ್ (16), ಅವಳಿ ಮಕ್ಕಳಾದ ಇವಾ ಮಾರಿಯಾ ಮತ್ತು ಮಾಟಿಯೊ (9), ಅಲಾನಾ ಮಾರ್ಟಿನಾ (8) ಮತ್ತು ಬೆಲ್ಲಾ ಎಸ್ಮೆರಾಲ್ಡಾ (4) ಪ್ರಮುಖ ಅತಿಥಿಗಳಾಗಿ ಕಾಣಿಸಿಕೊಂಡಿದ್ದು ವಿಶೇಷ.

ಅಪೂರ್ವ ವಿವಾಹದ ಉಂಗುರ:

ನಿಶ್ಚಿತಾರ್ಥದ ಸುಂದರ ಕ್ಷಣದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಜಾರ್ಜಿನಾ ರೊಡ್ರಿಗಸ್ ಅವರಿಗೆ ತೊಡಿಸಿದ ವಜ್ರದ ಉಂಗುರ ಎಲ್ಲರ ಗಮನ ಸೆಳೆದಿದೆ. ಅವರ ಕೈಯನ್ನು ಅಲಂಕರಿಸಿದ ಈ ಅತ್ಯಮೂಲ್ಯ ಉಂಗುರದ ಮೌಲ್ಯ ಸುಮಾರು 5 ಮಿಲಿಯನ್ ಡಾಲರ್, ಅಂದರೆ ಭಾರತೀಯ ಕರೆನ್ಸಿಯಲ್ಲಿ ಅಂದಾಜು 41 ಕೋಟಿ ರೂಪಾಯಿಗಳಿಗಿಂತಲೂ ಅಧಿಕ ಎಂದು ಅಂದಾಜಿಸಲಾಗಿದೆ.

ಸುಳ್ಳು ಸುದ್ದಿಗಳಿಗೆ ಬ್ರೇಕ್:

ಮದುವೆಗೆ ಮುನ್ನ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದ ಎಲ್ಲಾ ಸುಳ್ಳು ಸುದ್ದಿಗಳಿಗೆ ಈ ಸರಳ ವಿವಾಹವು ತೆರೆ ಎಳೆದಿದೆ. ಕಳೆದ ಕೆಲವು ದಿನಗಳಿಂದ ಎಐ (AI) ಸೃಷ್ಟಿಸಿದ ನಕಲಿ ಫೋಟೋಗಳು ಮತ್ತು ವದಂತಿಗಳು ಜೋರಾಗಿದ್ದವು. ರೊನಾಲ್ಡೊ ಮಡೈರಾದ ಫಂಚಲ್ ಕ್ಯಾಥೆಡ್ರಲ್‌ನಲ್ಲಿ $12 ಮಿಲಿಯನ್ ವೆಚ್ಚದಲ್ಲಿ ಭಾರಿ ಮದುವೆ ಮಾಡಿಕೊಳ್ಳಲಿದ್ದಾರೆ ಎಂದು ವರದಿಯಾಗಿತ್ತು.

ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ರಿಎಂಟ್ರಿಗೆ ಒಪ್ಪಿಗೆ, ಷರತ್ತಿಗೆ ನೋ ಎಂದ ಗುಜರಾತ್ ಟೈಟಾನ್ಸ್!

ಇದನ್ನು ನಂಬಿ ಆಗಸ್ಟ್ 8 ರಂದು ನೂರಾರು ಅಭಿಮಾನಿಗಳು ಚರ್ಚ್ ಬಳಿ ಜಮಾಯಿಸಿದ್ದರು. ಆದರೆ ಅಲ್ಲಿ ಬೇರೆ ದಂಪತಿಗಳ ಮದುವೆ ನಡೆಯುತ್ತಿತ್ತು. ಅಷ್ಟೇ ಅಲ್ಲದೆ ರೊನಾಲ್ಡೊ-ಜಾರ್ಜಿಯಾ ಮದುವೆಗೆ ಲಿಯೋನೆಲ್ ಮೆಸ್ಸಿ ಮತ್ತು ಕೈಲಿಯನ್ ಎಂಬಾಪೆ ಅತಿಥಿಗಳಾಗಿ ಬರಲಿದ್ದಾರೆ ಎಂಬ ಸುದ್ದಿಗಳೂ ಹರಿದಾಡಿದ್ದವು. ಇದೀಗ ಸರಳ ವಿವಾಹದೊಂದಿಗೆ ಈ ಎಲ್ಲಾ ಸುಳ್ಳು ಸುದ್ದಿಗಳಿಗೆ ರೊನಾಲ್ಡೊ ಬ್ರೇಕ್ ಹಾಕಿದ್ದಾರೆ.

Source link

ಸೈನ್ಯಕ್ಕೆ ಸೇರಿದ ಬಾಲಿವುಡ್ ನಟನ ಪುತ್ರಿ, ಭೇಷ್ ಎಂದ ನೆಟ್ಟಿಗರು – Kannada News | Bollywood actor, BJP MP Ravi Kishan daughter joins Indian Army

ಸಿನಿಮಾ (Cinema) ನಟರ ಮಕ್ಕಳು ನಟರೇ ಆಗುತ್ತಾರೆ, ರಾಜಕಾರಣಿಗಳ ಮಕ್ಕಳು ವಿದೇಶಗಳಲ್ಲಿ ಓದಿ, ರಾಜಕಾರಣಿಗಳೇ ಆಗುತ್ತಾರೆ. ಉದ್ಯಮಿಗಳು, ರಾಜಕಾರಣಿಗಳು, ಸೆಲೆಬ್ರಿಟಿಗಳ ಮಕ್ಕಳು ದೇಶ ಕಾಯುವ ಕೆಲಸಕ್ಕೆ ಸೇರುವುದಿಲ್ಲ, ಬಡವರ ಮಕ್ಕಳಷ್ಟೆ ದೇಶಸೇವೆಗೆ ನಿಲ್ಲುತ್ತಾರೆ ಎಂಬ ಮಾತಿತ್ತು. ಆದರೆ ಅದನ್ನೀಗ ಸುಳ್ಳು ಮಾಡಿದ್ದಾರೆ ಇಶಿತಾ ಶುಕ್ಲಾ. ಇತ್ತೀಚೆಗಷ್ಟೆ ಸೈನ್ಯಕ್ಕೆ ಸೇರಿರುವ ಇಶಿತಾ ಶುಕ್ಲಾ ಬಾಲಿವುಡ್​​ ಮಾತ್ರವಲ್ಲದೆ ದಕ್ಷಿಣದ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಜನಪ್ರಿಯ ನಟನ ಪುತ್ರಿ, ಮಾತ್ರವಲ್ಲದೆ ಜನಪ್ರಿಯ ನಟ ಬಿಜೆಪಿಯ ಸಂಸದ ಸಹ.

ನಟ, ಬಿಜೆಪಿ ಸಂಸದ ರವಿ ಕಿಶನ್ ಅವರ ಪುತ್ರಿ ಇಶಿತಾ ಶುಕ್ಲಾ ಸುಲಭವಾಗಿ ಚಿತ್ರರಂಗಕ್ಕೆ ಕಾಲಿಟ್ಟು ನಟಿಯಾಗುವ ಅಪ್ಪನ ನೆರಳಲ್ಲೇ ಸಾಗಿ ರಾಜಕಾರಣಿ ಆಗುವ ಅವಕಾಶ ಇದ್ದರೂ ಅವೆರಡನ್ನೂ ತೊರೆದು ಸೈನ್ಯಕ್ಕೆ ಸೇರಿದ್ದಾರೆ. ಇಶಿತಾ ದೆಹಲಿ ವಿಶ್ವವಿದ್ಯಾನಿಲಯದ ಅಂಗಸಂಸ್ಥೆಯಾದ ರಾಜ್‌ಧಾನಿ ಕಾಲೇಜಿನ ಪದವೀಧರರಾಗಿದ್ದಾರೆ. ಪದವಿ ಕಲಿಯುವಾಗಲೇ ಇಶಿತಾ, ದೆಹಲಿ ನಿರ್ದೇಶನಾಲಯದ 7 ಗರ್ಲ್ಸ್ ಬೆಟಾಲಿಯನ್‌ನ ಕೆಡೆಟ್ ಆಗಿದ್ದರು. ಇಶಿತಾ 2022 ರಲ್ಲಿ ಪ್ರಧಾನಿ ಮೋದಿ ಅವರ ಎನ್‌ಸಿಸಿ (NCC) ರ್ಯಾಲಿಯಲ್ಲಿ ಭಾಗವಹಿಸಿದ್ದರು ಮತ್ತು 1500 ಕೆಡೆಟ್‌ಗಳಲ್ಲಿ ಆಯ್ಕೆಯಾಗಿ ಅರ್ಹತಾ ಪ್ರಶಸ್ತಿಯನ್ನು ಪಡೆದಿದ್ದರು. 21 ನೇ ವಯಸ್ಸಿನಲ್ಲಿ, ಅವರು ಸೈನ್ಯಕ್ಕೆ ಅರ್ಜಿ ಸಲ್ಲಿಸಿ, 2023 ರಲ್ಲಿ ಭಾರತೀಯ ರಕ್ಷಣಾ ಪಡೆಗಳಲ್ಲಿ ಹೊಸದಾಗಿ ಸ್ಥಾಪಿಸಲಾದ ‘ಅಗ್ನಿವೀರ್’ ನೇಮಕಾತಿ ಯೋಜನೆಯಡಿ ‘ಮಹಿಳಾ ಅಗ್ನಿವೀರ’ರಾಗಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ:‘ಅಬ್ಬಬ್ಬ ಅಂಥ ಸಿನಿಮಾ ನೋಡಿರಲಿಲ್ಲ’ ಕನ್ನಡ ಚಿತ್ರದ ಬಗ್ಗೆ ತೆಲುಗು ನಟ ಮಾತು

ರವಿ ಕಿಶನ್ ಹಾಗೂ ಅವರ ಪತ್ನಿ ಪ್ರೀತಿ ಶುಕ್ಲಾ ಅವರ ನಾಲ್ವರು ಮಕ್ಕಳಲ್ಲಿ ಒಬ್ಬರಾಗಿದ್ದಾರೆ ಇಶಿತಾ. ಇಶಿತಾ ಅವರಿಗೆ ವೃತ್ತಿಪರ ಛಾಯಾಗ್ರಹಣದಲ್ಲೂ ಆಸಕ್ತಿಯಿದೆ. ಅವರು ಅಖಿಲ ಭಾರತ ಶೂಟಿಂಗ್ ಸ್ಪರ್ಧೆಯಲ್ಲಿ ಸ್ಪರ್ಧಿಸುವ ಮೂಲಕ ಸ್ನೈಪರ್ ಶೂಟರ್ ಆಗಿಯೂ ಹೆಸರು ಗಳಿಸಿದ್ದಾರೆ. ಇಶಿತಾ ಅವರ ಈ ಸಾಧನೆಗೆ ತೀವ್ರ ಪ್ರಶಂಸೆ ವ್ಯಕ್ತವಾಗಿದೆ. ಖುದ್ದು ಎನ್​​ಸಿಸಿ ಕೆಡೆಟ್ ಆಗಿದ್ದ ನಟ ಆರ್ ಮಾಧವನ್ ಇಶಿತಾರ ಸಾಧನೆಯನ್ನು ಕೊಂಡಾಡಿದ್ದಾರೆ.

ಇಶಿತಾರ ತಂದೆ ರವಿಕಿಶನ್ ಖ್ಯಾತ ನಟ. ಭೋಜ್​​ಪುರಿ ಚಿತ್ರರಂಗದ ಸ್ಟಾರ್ ಆಗಿರುವ ರವಿಕಿಶನ್, ಹಲವಾರು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಲಾಪತಾ ಲೇಡೀಸ್ ಸಿನಿಮಾನಲ್ಲಿ ಅವರ ಪೊಲೀಸ್ ಪಾತ್ರ ಭಾರಿ ಜನಪ್ರಿಯತೆ ಗಳಿಸಿತ್ತು. ತೆಲುಗಿನಲ್ಲಿ ‘ರೇಸುಗುರ್ರಂ’, ‘ಡಾಕು ಮಹಾರಾಜ್’, ‘ಸೈ ರಾ ನರಸಿಂಹ ರೆಡ್ಡಿ’, ‘ಎನ್​​ಟಿಆರ್’ ಕನ್ನಡದಲ್ಲಿ ‘ರಾಬರ್ಟ್’, ‘ದ್ರೋಣ’, ‘ಶಿವಾರ್ಜುನ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ರವಿಕಿಶನ್ ಅವರು ಬಿಜೆಪಿ ಸಂಸದರು ಸಹ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 12:01 pm, Wed, 12 August 26

Source link

Video: ಮಗಳು ಕಾರ್ ಓಡಿಸುವ ವಿಷ್ಯವನ್ನು ತನ್ನ ಆಪ್ತ ಸ್ನೇಹಿತರಿಗೆ ಹೇಳಿ ಖುಷಿಪಟ್ಟ ತಂದೆ – Kannada News | Father overjoyed watching his daughter drive the car.

ಮಕ್ಕಳು (children) ಚೆನ್ನಾಗಿ ಓದಿ ಒಂದೊಳ್ಳೆ ಭವಿಷ್ಯ ಕಟ್ಟಿಕೊಳ್ಳಲಿ ಎಂದು ಹೆತ್ತವರು ಬಯಸುತ್ತಾರೆ. ಇನ್ನು, ಮಕ್ಕಳ ಸಣ್ಣ ಪುಟ್ಟ ಖುಷಿಯಲ್ಲಿ ಹಾಗೂ ಯಶಸ್ಸಿನಲ್ಲಿ ತಮ್ಮ ಖುಷಿಯನ್ನು ಹೆತ್ತವರು ಕಾಣುತ್ತಾರೆ. ಇದೀಗ ಮಗಳು ಕಾರು ಡ್ರೈವಿಂಗ್ ಮಾಡೋದನ್ನು ನೋಡಿದ ತಂದೆಯೂ (father) ಖುಷಿಯಲ್ಲಿ ತೇಲಿ ಹೋಗಿದ್ದಾನೆ. ತನ್ನ ಸ್ನೇಹಿತರಿಗೆ ಫೋನ್ ಮಾಡಿ ಈ ವಿಷ್ಯವನ್ನು ತಿಳಿಸುವ ವಿಡಿಯೋ ಸದ್ಯ ವೈರಲ್ ಆಗಿದೆ. ಈ ಕ್ಲಿಪ್‌ ನೋಡಿದ ನೆಟ್ಟಿಗರು ತಂದೆಯ ಖುಷಿಯನ್ನು ಕಣ್ತುಂಬಿಸಿಕೊಂಡಿದ್ದಾರೆ.

ಪಲ್ಲವಿ ಮಂಜುನಾಥ್ (Pallavimanjunath) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ವ್ಯಕ್ತಿಯೊಬ್ಬ ತನ್ನ ಸ್ನೇಹಿತರಿಗೆ ಕಾಲ್ ಮಾಡಿ ನನ್ನ ಮಗಳು ಇನೋವಾ ಕಾರು ಓಡಿಸುತ್ತಿದ್ದಾಳೆ, ಇಲ್ಲಿ ನೋಡು ನನ್ನ ಮನೆಯವರನ್ನೆಲ್ಲಾ ಕಾರಿನಲ್ಲಿ ಕೂರಿಸಿಕೊಂಡಿದ್ದಾಳೆ ಎಂದು ಮಗಳ ಬಗ್ಗೆ ಬಹಳ ಹೆಮ್ಮೆಯಿಂದ ಹೇಳುತ್ತಿರುವುದನ್ನು ಕಾಣಬಹುದು.

ವೈರಲ್‌ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮಗಳ ಹುಟ್ಟುಹಬ್ಬಕ್ಕೆ ಟ್ರಕ್ ಒಳಗೆ ಅಲಂಕರಿಸಿ ಸರ್ಪ್ರೈಸ್ ನೀಡಿದ ತಂದೆ

ಈ ವಿಡಿಯೋ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ತಂದೆಗೆ ಹೆಮ್ಮೆ ವಿಷ್ಯ ಎಂದಿದ್ದಾರೆ. ಇನ್ನೊಬ್ಬರು, ನನ್ನ ಮಗಳು ಕೂಡ ಸೂಪರ್ ಆಗಿ ಕಿಯಾ ಸೋನೆಟ್ ಎಸ್ ಯುವಿ ಓಡಿಸುತ್ತಾಳೆ, ಅದೊಂದು ಖುಷಿ ಅಲ್ಲವೇ ಎಂದು ಹೇಳಿದ್ದಾರೆ. ಮತ್ತೊಬ್ಬರು, ಅಪ್ಪ ಅನ್ನೋ ಜೀವಕ್ಕೆ ಮಗಳು ಮುಗಿಲು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಾರ್ದಿಕ್ ಪಾಂಡ್ಯ ರಿಎಂಟ್ರಿಗೆ ಒಪ್ಪಿಗೆ, ಷರತ್ತಿಗೆ ನೋ ಎಂದ ಗುಜರಾತ್ ಟೈಟಾನ್ಸ್! – Kannada News | Hardik Pandya’s GT Return Spoiled by Captaincy Demand

ಐಪಿಎಲ್ 2027ರ ಮೆಗಾ ಹರಾಜಿಗೂ ಮುನ್ನ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರ ‘ಗುಜರಾತ್ ಟೈಟಾನ್ಸ್’ (GT) ವಾಪಸಾತಿ ಆಸೆ ಸದ್ಯಕ್ಕೆ ಕಮರಿಹೋಗಿದೆ. ಹಾರ್ದಿಕ್ ಪಾಂಡ್ಯ ವಿಧಿಸಿದ ಕಠಿಣ ಷರತ್ತೊಂದಕ್ಕೆ ಗುಜರಾತ್ ಫ್ರಾಂಚೈಸಿ ಒಪ್ಪಿಗೆ ನೀಡದ ಕಾರಣ, ಈ ಬಹುದೊಡ್ಡ ಟ್ರೇಡಿಂಗ್ ಡೀಲ್ ಮುರಿದುಬಿದ್ದಿದೆ ಎಂದು ವರದಿಯಾಗಿದೆ.

ಹಾರ್ದಿಕ್ ಪಾಂಡ್ಯ ಐಪಿಎಲ್ 2022 ಮತ್ತು 2023ರ ಎರಡು ಸೀಸನ್‌ಗಳಲ್ಲಿ ಗುಜರಾತ್ ಟೈಟನ್ಸ್ ತಂಡದ ಪರ ನಾಯಕನಾಗಿ ಆಡಿದ್ದರು. 2024ರಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿದ್ದ ಪಾಂಡ್ಯ, ಇದೀಗ ಮತ್ತೆ ಗುಜರಾತ್ ಟೈಟನ್ಸ್ ತಂಡದ ಕದ ತಟ್ಟಿದ್ದಾರೆ. ಆದರೆ, ಪಾಂಡ್ಯ ಇಟ್ಟಿರುವ ನಾಯಕತ್ವದ ಷರತ್ತಿಗೆ ಜಿಟಿ ಫ್ರಾಂಚೈಸಿ ಒಪ್ಪಿಗೆ ನೀಡಿಲ್ಲ.

ಡೀಲ್ ಮುರಿದು ಬೀಳಲು ಕಾರಣವೇನು?

ಕ್ಯಾಪ್ಟನ್ಸಿ ಬೇಡಿಕೆ: ಹಾರ್ದಿಕ್ ಪಾಂಡ್ಯ ತಾವು ಗುಜರಾತ್ ಟೈಟಾನ್ಸ್​ ತಂಡಕ್ಕೆ ಮರಳಬೇಕಾದರೆ ತಮಗೇ ‘ನಾಯಕತ್ವ’ ನೀಡಬೇಕು ಎಂಬ ಷರತ್ತನ್ನು ಮ್ಯಾನೇಜ್‌ಮೆಂಟ್ ಮುಂದೆ ಇಟ್ಟಿದ್ದರು ಎನ್ನಲಾಗಿದೆ.

ಗಿಲ್ ಬೆಂಬಲಕ್ಕೆ ನಿಂತ ಜಿಟಿ: ಭಾರತ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕರಾಗಿರುವ ಶುಭ್‌ಮನ್ ಗಿಲ್ ಸದ್ಯ ಗುಜರಾತ್ ಟೈಟಾನ್ಸ್​ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಫ್ರಾಂಚೈಸಿಯ ದೀರ್ಘಕಾಲದ ಭವಿಷ್ಯದ ದೃಷ್ಟಿಯಿಂದ ಗಿಲ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಲು ಜಿಟಿ ಆಡಳಿತ ಮಂಡಳಿ ಒಪ್ಪಲಿಲ್ಲ.

ಅಂದರೆ ಹಾರ್ದಿಕ್ ಪಾಂಡ್ಯರನ್ನು ಖರೀದಿಸಲು ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ಆಸಕ್ತಿ ತೋರಿದೆ. ಆದರೆ ಅತ್ತ ಪಾಂಡ್ಯ ಮುಂದಿಟ್ಟಿರುವ ನಾಯಕತ್ವದ ಬೇಡಿಕೆಯನ್ನು ತಿರಸ್ಕರಿಸಿದ್ದಾರೆ. ಹೀಗಾಗಿ ಗುಜರಾತ್ ಟೈಟಾನ್ಸ್ ತಂಡಕ್ಕೆ ಪಾಂಡ್ಯ ರಿಎಂಟ್ರಿ ಕೊಡುವ ಡೀಲ್ ಮುರಿದು ಬಿದ್ದಿದೆ ಎಂದು ವರದಿಯಾಗಿದೆ.

ಮುಂಬೈ ಇಂಡಿಯನ್ಸ್‌ನಲ್ಲಿ ಭವಿಷ್ಯ ಅನಿಶ್ಚಿತ!

2026ರ ಐಪಿಎಲ್ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವು 9ನೇ ಸ್ಥಾನಕ್ಕೆ ಕುಸಿದ ಹಿನ್ನೆಲೆಯಲ್ಲಿ, ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದ ಮೇಲೆ ಭಾರಿ ಟೀಕೆಗಳು ವ್ಯಕ್ತವಾಗಿದ್ದವು. ಹೀಗಾಗಿ ಮುಂಬೈ ತಂಡ ಕೂಡ ಮುಂಬರುವ ಸೀಸನ್‌ಗೆ ಹಾರ್ದಿಕ್ ಅವರನ್ನು ನಾಯಕನಾಗಿ ಮುಂದುವರಿಸಲು ಆಸಕ್ತಿ ಹೊಂದಿಲ್ಲ ಎನ್ನಲಾಗುತ್ತಿದ್ದು, ಇದು ಪಾಂಡ್ಯ ಬೇರೆ ತಂಡದ ಹುಡುಕಾಟ ನಡೆಸಲು ಕಾರಣ ಎನ್ನಲಾಗಿದೆ.

ಇದನ್ನೂ ಓದಿ: 9, 8, 7… ಟೀಮ್ ಇಂಡಿಯಾದ WTC ಫೈನಲ್ ಲೆಕ್ಕಾಚಾರ ಹೀಗಿದೆ

ಸದ್ಯ ಗುಜರಾತ್ ಟೈಟಾನ್ಸ್​ ಬಾಗಿಲು ಮುಚ್ಚಿರುವುದರಿಂದ, ಕೊಲ್ಕತ್ತಾ ನೈಟ್ ರೈಡರ್ಸ್ (KKR) ಅಥವಾ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಗಳು ಈ ಸ್ಟಾರ್ ಆಲ್ ರೌಂಡರ್ ಅನ್ನು ಖರೀದಿಸಲು ಆಸಕ್ತಿ ತೋರುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.

Published On – 12:11 pm, Wed, 12 August 26

Source link

ಕೋಲ್ಕತ್ತಾ-ಚೆನ್ನೈ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ: ರನ್‌ವೇ 25ರಲ್ಲಿ ತುರ್ತು ಭೂಸ್ಪರ್ಶ – Kannada News | Chennai Airport Emergency: IndiGo 6E 723 Engine Failure, Pilot Safely Lands 224 Pax

ಚೆನ್ನೈ, ಆ.12: ಕೋಲ್ಕತ್ತಾದಿಂದ ಚೆನ್ನೈಗೆ ಆಗಮಿಸುತ್ತಿದ್ದ ಇಂಡಿಗೋ ವಿಮಾನವೊಂದರ ಎಡಭಾಗದ ಎಂಜಿನ್ ದಿಢೀರ್ ವಿಫಲಗೊಂಡ ಕಾರಣ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರಿ ಆತಂಕ ಎದುರಾಗಿತ್ತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಅಧಿಕಾರಿಗಳು ತಕ್ಷಣವೇ ‘ಫುಲ್ ಎಮರ್ಜೆನ್ಸಿ’ (Full Emergency) ಘೋಷಿಸಿದ್ದು, ಪೈಲಟ್ ಸಮಯಪ್ರಜ್ಞೆಯಿಂದ 224 ಪ್ರಯಾಣಿಕರಿದ್ದ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.

ಕೋಲ್ಕತ್ತಾದಿಂದ ಚೆನ್ನೈಗೆ ಹೊರಟಿದ್ದ ಇಂಡಿಗೋ 6E-723 ವಿಮಾನದಲ್ಲಿ ಈ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ನಿಯಮಿತ ವೇಳಾಪಟ್ಟಿಯಂತೆ ರಾತ್ರಿ 11:30ಕ್ಕೆ ತಲುಪಬೇಕಿದ್ದ ವಿಮಾನ, ಲ್ಯಾಂಡಿಂಗ್‌ಗೆ ಸಿದ್ಧವಾಗುತ್ತಿದ್ದಾಗ ಎಡಭಾಗದ ಎಂಜಿನ್ ಸಕ್ರಿಯವಾಗಿಲ್ಲದಿರುವುದು ಪೈಲಟ್ ಗಮನಕ್ಕೆ ಬಂದಿದೆ.

ಪೈಲಟ್ ತಕ್ಷಣವೇ ಏರ್ ಟ್ರಾಫಿಕ್ ಕಂಟ್ರೋಲ್ (ATC)ಗೆ ಎಚ್ಚರಿಕೆ ನೀಡಿದ್ದು, ವಿಮಾನ ನಿಲ್ದಾಣದ ಪ್ರಾಧಿಕಾರವು ರಾತ್ರಿ 11:29 ಕ್ಕೆ ವಿಮಾನ ನಿಲ್ದಾಣದಲ್ಲಿ ‘ಫುಲ್ ಎಮರ್ಜೆನ್ಸಿ’ ಜಾರಿಗೆ ತಂದಿತು. ಅಗ್ನಿಶಾಮಕ ವಾಹನಗಳು, ಆಂಬುಲೆನ್ಸ್ ಹಾಗೂ ವೈದ್ಯಕೀಯ ತಂಡಗಳನ್ನು ರನ್‌ವೇ ಬದಿಯಲ್ಲಿ ತಕ್ಷಣವೇ ನಿಯೋಜಿಸಿ, ಸುರಕ್ಷಿತ ಲ್ಯಾಂಡಿಂಗ್‌ಗೆ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಯಿತು.

ಇದನ್ನೂ ಓದಿ: ಮಾಜಿ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಆತ್ಮಕಥೆ ಬಿಡುಗಡೆ: ಯುವಜನತೆಗೆ ಪ್ರೇರಣೆ ಎಂದ ಪ್ರಧಾನಿ ಮೋದಿ

ಪವಾಡಸದೃಶ ಸುರಕ್ಷಿತ ಭೂಸ್ಪರ್ಶ:

ರಾತ್ರಿ 11:37 ರ ಸುಮಾರಿಗೆ ಪೈಲಟ್ ವಿಮಾನವನ್ನು ಚೆನ್ನೈ ವಿಮಾನ ನಿಲ್ದಾಣದ ರನ್‌ವೇ 25 ರಲ್ಲಿ ಅತ್ಯಂತ ಸುರಕ್ಷಿತವಾಗಿ ಇಳಿಸುವಲ್ಲಿ ಯಶಸ್ವಿಯಾದರು. ವಿಮಾನದಲ್ಲಿದ್ದ ಎಲ್ಲಾ 224 ಪ್ರಯಾಣಿಕರು ಹಾಗೂ ಸಿಬ್ಬಂದಿ ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿ ಹೊರಬಂದಿದ್ದಾರೆ. ಅಪಾಯ ತಪಾಸಣೆಯ ನಂತರ ರಾತ್ರಿ 11:47 ಕ್ಕೆ ತುರ್ತು ಪರಿಸ್ಥಿತಿಯನ್ನು ಅಧಿಕೃತವಾಗಿ ಹಿಂಪಡೆಯಲಾಗಿದ್ದು, ವಿಮಾನ ನಿಲ್ದಾಣದ ಎಲ್ಲಾ ವಿಮಾನ ಸಂಚಾರ ಕಾರ್ಯಾಚರಣೆಗಳು ಸಾಮಾನ್ಯ ಸ್ಥಿತಿಗೆ ಮರಳಿವೆ ಎಂದು ಚೆನ್ನೈ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.

ಕಳೆದ ತಿಂಗಳಷ್ಟೇ ದುಬೈನಿಂದ ಮುಂಬೈಗೆ ಹೊರಟಿದ್ದ ಇಂಡಿಗೋ ಅಂತಾರಾಷ್ಟ್ರೀಯ ವಿಮಾನದ ಸರಕು ಸಂಗ್ರಹಣೆ ಕೊಠಡಿಯಲ್ಲಿ (Cargo Hold) ಹೊಗೆ ಕಾಣಿಸಿಕೊಂಡ ಮುನ್ನೆಚ್ಚರಿಕೆ ಸಂದೇಶ ಬಬಂದಿತ್ತು. ಈ ವೇಳೆ ಪೈಲಟ್‌ಗಳು ಗುಜರಾತ್‌ನ ರಾಜ್‌ಕೋಟ್ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿಸಿ ಭಾರಿ ಅನಾಹುತವನ್ನು ತಪ್ಪಿಸಿದ್ದರು.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:07 pm, Wed, 12 August 26

Source link

ರಾಜ್ಯದಲ್ಲಿ ಹೆಚ್ಚುತ್ತಿರುವ ಗಾಂಜಾ ದಂಧೆ: ಬೆಳಗಾವಿ, ಆನೇಕಲ್ ಹಾಗೂ ನಂಜನಗೂಡಿನಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲು – Kannada News | Karnataka Drug Crackdown: Ganja Chocolates in Belagavi and 10kg Seized in Anekal

ರಾಜ್ಯದಲ್ಲಿ ಹೆಚ್ಚುತ್ತಿರುವ ಗಾಂಜಾ ದಂಧೆ

ಬೆಂಗಳೂರು, ಆಗಸ್ಟ್ 12: ರಾಜ್ಯದಲ್ಲಿ ಮಾದಕ ವಸ್ತುಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವ ಸಮೂಹವನ್ನು ಟಾರ್ಗೆಟ್ ಮಾಡಿ ನಡೆಸುತ್ತಿದ್ದ ಗಾಂಜಾ ಜಾಲದ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಇತ್ತೀಚೆಗೆ ಬೆಳಗಾವಿ, ಬೆಂಗಳೂರು ಗ್ರಾಮಾಂತರದ ಆನೇಕಲ್ ಹಾಗೂ ಮೈಸೂರಿನ ನಂಜನಗೂಡಿನಲ್ಲಿ ಗಾಂಜಾಗೆ ಸಂಬಂಧಿಸಿದ ಪ್ರಮುಖ ಪ್ರಕರಣಗಳು ಬೆಳಕಿಗೆ ಬಂದಿವೆ.

ಬೆಳಗಾವಿಯಲ್ಲಿ ಚಾಕಲೇಟ್ ಹೆಸರಿನಲ್ಲಿ ಗಾಂಜಾ ದಂಧೆ

ಬೆಳಗಾವಿ ನಗರದ ಉದ್ಯಮಬಾಗದಲ್ಲಿರುವ ಖಾಸಗಿ ಕಾಲೇಜು ಎದುರು ಸಿಹಿ ಚಾಕಲೇಟ್‌ನಲ್ಲಿ ಗಾಂಜಾ ಬೆರೆಸಿ ಮಾರಾಟ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಭೋಲು ಪ್ರಜಾಪತಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. 5 ಗ್ರಾಂ ಗಾಂಜಾ ಮಿಶ್ರಿತ ಚಾಕಲೇಟ್‌ಗೆ ರೂ. 50ರಂತೆ ಮಾರಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು 7 ಕೆಜಿ ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್‌ಗಳು, ಮೊಬೈಲ್ ಹಾಗೂ ಸ್ಕೂಟಿಯನ್ನು ವಶಪಡಿಸಿಕೊಂಡಿದ್ದಾರೆ. ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆನೇಕಲ್‌ನಲ್ಲಿ ರೌಡಿಶೀಟರ್ ಪವನ್ ಬಂಧನ

ಬೆಂಗಳೂರು ನಗರ ಜಿಲ್ಲೆ ಆನೇಕಲ್ ಪಟ್ಟಣದ ಬ್ಯಾಗಡದೇನಹಳ್ಳಿ ಬಳಿಯ ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆಸಿರುವ ಪೊಲೀಸರು, 10 ಲಕ್ಷ ರೂ. ಮೌಲ್ಯದ 10 ಕೆಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. 2 ಕೊಲೆ ಹಾಗೂ 1 ರಾಬರಿ ಕೇಸ್‌ನಲ್ಲಿ ಭಾಗಿಯಾಗಿರುವ ರೌಡಿಶೀಟರ್ ಪವನ್ ಅಲಿಯಾಸ್ ತಿಕ್ಲ ಪವನ್ (28) ಎಂಬಾತನನ್ನು ಬಂಧಿಸಲಾಗಿದೆ. ಒಡಿಶಾದಿಂದ ಗಾಂಜಾ ತಂದು ಅಲಯನ್ಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ಉಬೇದ್ ಮತ್ತು ಜಾಫರ್ ಜೊತೆ ಸೇiಕೊಂಡು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಈತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಂಜನಗೂಡು ನಂಜುಂಡೇಶ್ವರ ದೇಗುಲದ ಬಳಿ ಗಾಂಜಾ ಸೇವನೆ‘

ಮೈಸೂರು ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ದಾಸೋಹ ಭವನದ ಪಾರ್ಕಿಂಗ್ ಬಳಿ ಯುವಕನೊಬ್ಬ ಗಾಂಜಾ ಸೇವಿಸುತ್ತಿರುವ ಆರೋಪ ಕೇಳಿಬಂದಿದೆ. ಈ ಘಟನೆಯ ಫೋಟೋ ಹಾಗೂ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪವಿತ್ರ ದೇಗುಲದ ಸುತ್ತಮುತ್ತ ಇಂತಹ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವಾಲಯದ ಸುತ್ತಮುತ್ತ ಕಾವಲು ಹೆಚ್ಚಿಸಿ, ಇಂತಹ ಅಕ್ರಮ ಚಟುವಟಿಕೆಗಳಿಗೆ ತಕ್ಷಣವೇ ಕಡಿವಾಣ ಹಾಕುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಸ್ವಾತಂತ್ರೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಭಾರತೀಯ ಕಲಾ ವೈವಿಧ್ಯದ ಅನಾವರಣ – Kannada News | President’s Independence Day Invite: Celebrating India’s Folk Art and Cultural Diversity

ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಗೌರವಾನ್ವಿತ ರಾಷ್ಟ್ರಪತಿಯವರಿಂದ ಗಣ್ಯ ಅತಿಥಿಗಳಿಗೆ ಕಳುಹಿಸಲಾಗಿರುವ ಆಹ್ವಾನ ಪತ್ರಿಕೆಯು ಭಾರತದ ಶ್ರೀಮಂತ ಸಾಂಸ್ಕೃತಿಕ ಮತ್ತು ಕಲಾತ್ಮಕ ವೈವಿಧ್ಯತೆಯನ್ನು ಅನಾವರಣಗೊಳಿಸಿದೆ. ಈ ವರ್ಷದ ಆಹ್ವಾನ ಪತ್ರಿಕೆಯ ವಿನ್ಯಾಸವು ಸಮುದಾಯ, ಸೃಜನಶೀಲತೆ ಮತ್ತು ಸಂರಕ್ಷಣೆ ನಡುವಿನ ಪರಸ್ಪರ ಅವಲಂಬನೆಯನ್ನು ಪ್ರತಿಬಿಂಬಿಸುವಂತಿದ್ದು, ಭಾರತದ ವಿವಿಧ ಪ್ರದೇಶಗಳ ವಿಶಿಷ್ಟ ಕಲಾ ಪರಂಪರೆಗಳಿಗೆ ವಿಶೇಷ ಸ್ಥಾನ ನೀಡಲಾಗಿದೆ. ವಿಶೇಷವಾಗಿ ಛತ್ತೀಸ್‌ಗಢ, ಗೋವಾ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳ ಜೀವಂತ, ವರ್ಣರಂಜಿತ ಹಾಗೂ ವೈವಿಧ್ಯಮಯ ಜನಪದ ಕಲಾ ಪರಂಪರೆಗಳಿಂದ ಈ ವರ್ಷದ ಆಹ್ವಾನ ಪತ್ರಿಕೆ ಮತ್ತು ಔತಣಕೂಟದ ಮುಖ್ಯ ಪರಿಕಲ್ಪನೆಗೆ ಸ್ಫೂರ್ತಿ ಪಡೆಯಲಾಗಿದೆ. ಈ ಮೂಲಕ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದೊಂದಿಗೆ ಭಾರತದ ಸಾಂಸ್ಕೃತಿಕ ಶ್ರೀಮಂತಿಕೆ, ಪರಂಪರೆ ಮತ್ತು ಸೃಜನಶೀಲತೆಯನ್ನೂ ಪ್ರತಿಬಿಂಬಿಸುವ ಪ್ರಯತ್ನ ಮಾಡಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version