Weekly Love Horoscope: ವಾರದ ಪ್ರೇಮ ಭವಿಷ್ಯ; ಏ. 19-25ರವರೆಗಿನ ಈ ವಾರ ನಿಮ್ಮ ಪ್ರೇಮ ಜೀವನ ಹೇಗಿರಲಿದೆ? – Kannada News | Weekly Love Horoscope April 19 25: Zodiac Predictions and Relationship Insights

ಏಪ್ರಿಲ್ 19ರಿಂದ ಏಪ್ರಿಲ್ 25ರವರೆಗಿನ ಮೂರನೇ ವಾರ ವಿಶೇಷವಾಗಿ ಇರಲಿದೆ. ನಿಮಗೆ ಅದೃಷ್ಟವು ಯಾವ ಸಂದರ್ಭದಲ್ಲಿ ಯಾರಿಂದಲೂ ಬರಬಹುದು. ನಿಮಗೆ ಅದರ ಬಗ್ಗೆ ನಂಬಿಕೆ ಇರಬೇಕು. ಸಂಬಂಧವಿಲ್ಲದಂತೆ ಕುಳಿತರೆ ಆಸೆಯು ಆಸೆಯಾಗಿಯೇ ಉಳಿಯುತ್ತದೆ.

​​ಮೇಷ:

​ಈ ವಾರ ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಮೂಡಬಹುದು. ಮಾತಿನ ಮೇಲೆ ನಿಗಾ ಇರಲಿ. ಪ್ರೇಮಿಗಳಿಗೆ ಮನೆಯಲ್ಲಿ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ. ತಾಳ್ಮೆಯಿಂದ ವರ್ತಿಸಿದರೆ ಸಂಬಂಧ ಗಟ್ಟಿಯಾಗುತ್ತದೆ.

​ವೃಷಭ:

ಪ್ರೇಮ ಜೀವನದಲ್ಲಿ ಮಧುರವಾದ ಕ್ಷಣಗಳನ್ನು ಕಳೆಯುವಿರಿ. ಹಳೆಯ ಗೆಳೆಯ ಅಥವಾ ಗೆಳತಿಯಿಂದ ಪ್ರೇಮ ನಿವೇದನೆಯಾಗುವ ಸಂಭವವಿದೆ. ದಾಂಪತ್ಯದಲ್ಲಿ ಪರಸ್ಪರ ಗೌರವ ಹೆಚ್ಚಾಗಲಿದ್ದು, ದೂರದ ಪ್ರಯಾಣದ ಯೋಜನೆ ರೂಪಿಸುವಿರಿ.

​ಮಿಥುನ:

​ಮಿಥುನ ರಾಶಿಯವರಿಗೆ ಈ ವಾರ ಮಿಶ್ರಫಲ. ಸಂಗಾತಿಯ ಬೇಡಿಕೆಗಳನ್ನು ಈಡೇರಿಸಲು ಹಣ ವ್ಯಯವಾಗಬಹುದು. ಅನಗತ್ಯ ಸಂಶಯಗಳು ಪ್ರೀತಿಯಲ್ಲಿ ಬಿರುಕು ತರಬಹುದು, ಆದ್ದರಿಂದ ಮುಕ್ತವಾಗಿ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ.

​ಕರ್ಕಾಟಕ:

ಪ್ರೀತಿಪಾತ್ರರ ಜೊತೆಗೆ ಹೆಚ್ಚು ಸಮಯ ಕಳೆಯಲು ಅವಕಾಶ ಸಿಗಲಿದೆ. ಪ್ರೇಮ ವಿವಾಹಕ್ಕೆ ಮನೆಯವರ ಒಪ್ಪಿಗೆ ಸಿಗುವ ಸೂಚನೆ ಇದೆ. ಒಂಟಿಯಾಗಿರುವವರಿಗೆ ಹೊಸ ವ್ಯಕ್ತಿಯ ಪರಿಚಯವಾಗಿ ಮನಸ್ಸು ಉಲ್ಲಸಿತಗೊಳ್ಳಲಿದೆ.

​ಸಿಂಹ:

​ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಪ್ರೇಮ ವಿಚಾರದಲ್ಲಿ ಈ ವಾರ ಸ್ವಲ್ಪ ಎಚ್ಚರಿಕೆ ಅಗತ್ಯ. ಮೂರನೇ ವ್ಯಕ್ತಿಯ ಹಸ್ತಕ್ಷೇಪದಿಂದ ಪ್ರೇಮ ಸಂಬಂಧದಲ್ಲಿ ಗೊಂದಲ ಉಂಟಾಗಬಹುದು. ನಂಬಿಕೆಯೇ ನಿಮ್ಮ ಶಕ್ತಿಯಾಗಲಿ.

​ಕನ್ಯಾ:

ಈ ವಾರ ನಿಮ್ಮ ಆಕರ್ಷಕ ವ್ಯಕ್ತಿತ್ವದಿಂದ ಸಂಗಾತಿಯನ್ನು ಸೆಳೆಯುವಿರಿ. ಪ್ರೇಮ ಸಂಬಂಧದಲ್ಲಿ ಹೊಸ ಚೈತನ್ಯ ಮೂಡಲಿದೆ. ಉಡುಗೊರೆಗಳ ವಿನಿಮಯದಿಂದ ಪ್ರೀತಿ ಗಾಢವಾಗುತ್ತದೆ. ಅವಿವಾಹಿತರಿಗೆ ವಿವಾಹ ಯೋಗ ಕೂಡಿಬರುವ ಸಾಧ್ಯತೆ ಇದೆ.

​ತುಲಾ:

​ಕೆಲಸದ ಒತ್ತಡದ ನಡುವೆಯೂ ಸಂಗಾತಿಗಾಗಿ ಸಮಯ ಮೀಸಲಿಡುವಿರಿ. ಪ್ರೇಮಿಗಳ ನಡುವೆ ಇದ್ದ ಸಣ್ಣಪುಟ್ಟ ಮುನಿಸುಗಳು ದೂರವಾಗುತ್ತವೆ. ಪ್ರೀತಿಯಲ್ಲಿ ಪ್ರಾಮಾಣಿಕತೆ ಇರಲಿ. ವಾರದ ಕೊನೆಯಲ್ಲಿ ಶುಭ ವಾರ್ತೆ ಕೇಳುವಿರಿ.

​ವೃಶ್ಚಿಕ:

ಭಾವನಾತ್ಮಕವಾಗಿ ಈ ವಾರ ಸ್ವಲ್ಪ ಏರುಪೇರಾಗಬಹುದು. ಸಂಗಾತಿಯ ಮೇಲೆ ಅನಗತ್ಯ ಕೋಪ ಮಾಡಿಕೊಳ್ಳಬೇಡಿ. ಪ್ರೇಮ ಜೀವನದಲ್ಲಿ ಸಮಾಧಾನದಿಂದ ನಡೆದುಕೊಂಡರೆ ನೆಮ್ಮದಿ ಸಿಗಲಿದೆ. ಹಠಮಾರಿ ಸ್ವಭಾವವನ್ನು ಬಿಡುವುದು ಒಳ್ಳೆಯದು.

​ಧನು:

​ಪ್ರೇಮ ಸಂಬಂಧದಲ್ಲಿ ಹೊಸ ತಿರುವು ಸಿಗಲಿದೆ. ಸಂಗಾತಿಯ ಬೆಂಬಲದಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವುದು. ಒಂಟಿಯಾಗಿರುವವರಿಗೆ ಮನಸ್ಸಿಗೆ ಒಪ್ಪುವ ಸಂಗಾತಿ ಸಿಗುವ ಕಾಲವಿದು. ಒಟ್ಟಾರೆಯಾಗಿ ಪ್ರೇಮ ವಿಚಾರದಲ್ಲಿ ಅದೃಷ್ಟದ ವಾರ.

​ಮಕರ:

ಸಂಗಾತಿಯೊಂದಿಗೆ ಹಳೆಯ ನೆನಪುಗಳನ್ನು ಹಂಚಿಕೊಳ್ಳುವಿರಿ. ಪ್ರೇಮ ಜೀವನ ಸುಖಮಯವಾಗಿರಲಿದೆ. ಆದರೆ ಅತಿಯಾದ ಕೆಲಸದ ಒತ್ತಡ ಪ್ರೀತಿಯ ಮೇಲೆ ಪ್ರಭಾವ ಬೀರದಂತೆ ನೋಡಿಕೊಳ್ಳಿ. ಪರಸ್ಪರ ಅರ್ಥ ಮಾಡಿಕೊಳ್ಳುವಿಕೆ ಬಹಳ ಮುಖ್ಯ.

​ಕುಂಭ:

​ಅನಿರೀಕ್ಷಿತವಾಗಿ ಪ್ರೇಮ ನಿವೇದನೆ ಮಾಡುವ ಅವಕಾಶ ಸಿಗಬಹುದು. ಪ್ರೇಮ ಜೀವನದಲ್ಲಿ ಉತ್ಸಾಹವಿರುತ್ತದೆ. ದಾಂಪತ್ಯ ಜೀವನದಲ್ಲಿ ಮಧುರತೆ ಹೆಚ್ಚಾಗಲಿದೆ. ಸಣ್ಣಪುಟ್ಟ ಪ್ರವಾಸಗಳು ಮನಸ್ಸಿಗೆ ಸಂತೋಷ ನೀಡುತ್ತವೆ.

​ಮೀನ:

ಈ ವಾರ ನಿಮ್ಮ ಪ್ರೇಮ ಜೀವನ ಬಹಳ ರೊಮ್ಯಾಂಟಿಕ್ ಆಗಿರುತ್ತದೆ. ಅನ್ಯರು ಮಾಡುವ ಗಾಸಿಪ್ ಗೆ ಬೆಲೆ ಕೊಡಬೇಕೆಂದಿಲ್ಲ. ಸಂಗಾತಿಯಿಂದ ವಿಶೇಷ ಬೆಂಬಲ ಸಿಗಲಿದೆ. ನಿಮ್ಮ ಮನದಾಸೆಯನ್ನು ಮುಕ್ತವಾಗಿ ಹಂಚಿಕೊಳ್ಳಲು ಇದು ಸೂಕ್ತ ಸಮಯ. ಸಂಬಂಧದಲ್ಲಿ ಗಾಢವಾದ ಪ್ರೀತಿ ಮೂಡಲಿದೆ.

– ಲೋಹಿತ ಹೆಬ್ಬಾರ್

Source link

ಬೆಂಗಳೂರು: ಕುಡಿದವನಿಗೆ ಟೆಸ್ಟ್ ಡ್ರೈವ್​ಗೆ ಕಾರು ನೀಡಿದ ಶೋರೂಂ ಸಿಬ್ಬಂದಿ, ನಾಲ್ಕು ವಾಹನಗಳು ಜಖಂ, ಓರ್ವನ ಕಾಲು ಮುರಿತ! – Kannada News | Bengaluru Mahindra Showroom Test Drive Blunder: Drunk Driver Crashes into 4 Vehicles, Injures Pedestrian in Mahadevapura

ಕುಡಿದವನಿಗೆ ಟೆಸ್ಟ್ ಡ್ರೈವ್​ಗೆ ಕಾರು ನೀಡಿದ ಶೋರೂಂ ಸಿಬ್ಬಂದಿ, ನಾಲ್ಕು ವಾಹನಗಳು ಜಖಂImage Credit source: tv9

ಬೆಂಗಳೂರು, ಏಪ್ರಿಲ್ 17: ಶೋರೂಂ ಸಿಬ್ಬಂದಿಯ ಬೇಜವಾಬ್ದಾರಿಯಿಂದಾಗಿ ಟೆಸ್ಟ್ ಡ್ರೈವ್ ವೇಳೆ ಸರಣಿ ಅಪಘಾತ ಸಂಭವಿಸಿರುವ ಘಟನೆ ಬೆಂಗಳೂರಿನ (Bangalore) ಮಹದೇವಪುರದಲ್ಲಿ ನಡೆದಿದೆ. ಮದ್ಯಪಾನ ಮಾಡಿ ಬಂದಿದ್ದ ವ್ಯಕ್ತಿಗೆ ಕಾರು ಚಲಾಯಿಸಲು ನೀಡಿದ್ದೇ ಈ ಅನಾಹುತಕ್ಕೆ ಕಾರಣವಾಗಿದ್ದು, ಸದ್ಯ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಬೆಂಗಳೂರಿನ ಮಹದೇವಪುರದ ವಿಜ್ಞೇಶ್ವರ ನಗರದಲ್ಲಿ ಘಟನೆ ಸಂಭವಿಸಿದೆ. ಕುಡಿದು ಬಂದು ಟೆಸ್ಟ್ ಡ್ರೈವ್​ಗೆ (Test Drive) ಕಾರು ಕೊಂಡುಹೋದ ವ್ಯಕ್ತಿ ನಾಲ್ಕು ವಾಹನಗಳಿಗೆ ಗುದ್ದಿಸಿ ಹಾನಿ ಮಾಡಿದ್ದಾನೆ.

ಮದ್ಯಪಾನಿಯ ಟೆಸ್ಟ್ ಡ್ರೈವ್ ಘಟನೆಯ ವಿವರ

ಮಹದೇವಪುರದ ವಿಜ್ಞೇಶ್ವರ ನಗರದಲ್ಲಿರುವ ಮಹೀಂದ್ರಾ ಕಾರು ಶೋರೂಂಗೆ ಏಪ್ರಿಲ್ 12ರಂದು ಅಭಿಲಾಷ್ ಎಂಬಾತ ಕಾರು ಖರೀದಿಸುವ ಉದ್ದೇಶದಿಂದ ತೆರಳಿದ್ದ. ಆದರೆ, ಆತ ಮದ್ಯ ಸೇವಿಸಿರುವುದು ತಿಳಿದಿದ್ದರೂ ಶೋರೂಂ ಸಿಬ್ಬಂದಿ ಆತನಿಗೆ ಟೆಸ್ಟ್ ಡ್ರೈವ್ ಮಾಡಲು ಕಾರನ್ನು ನೀಡಿದ್ದಾರೆ. ಕಾರು ಹತ್ತಿದ ಅಭಿಲಾಷ್ ಮದ್ಯದ ಅಮಲಿನಲ್ಲಿ ಮನಸೋ ಇಚ್ಛೆ ವಾಹನ ಚಲಾಯಿಸಿದ್ದಾನೆ. ಈ ವೇಳೆ ರಸ್ತೆಯಲ್ಲಿದ್ದ ನಾಲ್ಕು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ.

ಸರಣಿ ಅಪಘಾತದ ವಿಡಿಯೋ ಇಲ್ಲಿದೆ ನೋಡಿ

ಅಭಿಲಾಷ್ ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದ ರಭಸಕ್ಕೆ ರಮೇಶ್ ಎಂಬುವವರ ಕಾಲು ಮುರಿದಿದ್ದು, ಅವರು ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ಬಳಿಕ ಆಕ್ರೋಶಗೊಂಡ ಸ್ಥಳೀಯರು ಆರೋಪಿ ಅಭಿಲಾಷ್‌ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಗಾಯಗೊಂಡಿರುವ ಅಭಿಲಾಷ್ ಕೂಡ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಇದನ್ನೂ ಓದಿ: ಮಂತ್ರಾಲಯದ ಬಳಿ ಭೀಕರ ರಸ್ತೆ ಅಪಘಾತ: ರಾಯರ ದರ್ಶನಕ್ಕೆ ತೆರಳುತ್ತಿದ್ದ ಚಿಕ್ಕಮಗಳೂರಿನ 8 ಮಂದಿ ಭಕ್ತರು ಸಾವು

ಮಹದೇವಪುರ ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಜಾಗರೂಕ ಚಾಲನೆ ಹಾಗೂ ಸಾರ್ವಜನಿಕರ ಪ್ರಾಣಕ್ಕೆ ಅಪಾಯ ತಂದೊಡ್ಡಿದ ಹಿನ್ನೆಲೆಯಲ್ಲಿ ಬಿಎನ್ಎಸ್ (BNS) ಸೆಕ್ಷನ್ 125(a), 281 ಹಾಗೂ ಐಎಂವಿ ಆಕ್ಟ್ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಮದ್ಯಪಾನ ಮಾಡಿದ ವ್ಯಕ್ತಿಗೆ ಟೆಸ್ಟ್ ಡ್ರೈವ್ ಮಾಡಲು ಅವಕಾಶ ನೀಡಿದ ಶೋರೂಂ ಸಿಬ್ಬಂದಿಯ ನಡೆ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟಿಸಿಎಸ್ ಮತಾಂತರ ಪ್ರಕರಣ: ತಾನು ಗರ್ಭಿಣಿ ಎಂದು ನ್ಯಾಯಾಲಯದ ಮೊರೆ ಹೋದ ಆರೋಪಿ ನಿದಾ ಖಾನ್ – Kannada News | TCS Conversion Case: Nida Khan’s Pregnancy Plea for Anticipatory Bail

ನಾಸಿಕ್, ಏಪ್ರಿಲ್ 17: ನಾಸಿಕ್‌ನ ಟಿಸಿಎಸ್ (TCS) ಶಾಖೆಯಲ್ಲಿ ಬಯಲಾಗಿರುವ ಮತಾಂತರ ಮತ್ತು ಲೈಂಗಿಕ ಕಿರುಕುಳದ ಭೀಕರ ಹಗರಣವು ಈಗ ಹೊಸ ತಿರುವು ಪಡೆದುಕೊಂಡಿದೆ. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ನಿದಾ ಖಾನ್ ಬಂಧನದಿಂದ ತಪ್ಪಿಸಿಕೊಳ್ಳಲು ಗರ್ಭಿಣಿ(Pregnant) ಎಂಬ ಅಸ್ತ್ರವನ್ನು ಬಳಸುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ನಾಸಿಕ್ ಟಿಸಿಎಸ್ ಕಚೇರಿಯಲ್ಲಿ 2022 ರಿಂದ 2026ರ ಅವಧಿಯಲ್ಲಿ ನಡೆದಿದೆ ಎನ್ನಲಾದ ವ್ಯವಸ್ಥಿತ ಮತಾಂತರ ಸಂಚು ಮತ್ತು ಲೈಂಗಿಕ ದೌರ್ಜನ್ಯದ ಪ್ರಕರಣ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಪ್ರಕರಣದ ಪ್ರಮುಖ ಆರೋಪಿ ನಿದಾ ಖಾನ್ ಸದ್ಯ ತಲೆಮರೆಸಿಕೊಂಡಿದ್ದು, ಮುಂಬೈನಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿರುವ ನಿದಾ ಖಾನ್, ಈಗ ನಾಸಿಕ್‌ನ ಸ್ಥಳೀಯ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು (Anticipatory Bail) ಕೋರಿ ಅರ್ಜಿ ಸಲ್ಲಿಸಿದ್ದಾರೆ. ವಿಶೇಷವೆಂದರೆ, ತಾವು ಗರ್ಭಿಣಿಯಾಗಿದ್ದು, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇನೆ ಎಂಬ ವೈದ್ಯಕೀಯ ಕಾರಣವನ್ನು ಮುಂದಿಟ್ಟುಕೊಂಡು ಬಂಧನದಿಂದ ವಿನಾಯಿತಿ ಪಡೆಯಲು ಅವರು ಪ್ರಯತ್ನಿಸುತ್ತಿದ್ದಾರೆ. ಆದರೆ, ವಿಶೇಷ ತನಿಖಾ ತಂಡ (SIT) ಈ ಹೇಳಿಕೆಗಳ ಸತ್ಯಾಸತ್ಯತೆಯನ್ನು ಅಧಿಕೃತ ವೈದ್ಯಕೀಯ ತಪಾಸಣೆಯ ಮೂಲಕ ಪರಿಶೀಲಿಸಲು ಮುಂದಾಗಿದೆ.

ನಾಸಿಕ್ ಪೊಲೀಸರು ರಚಿಸಿರುವ ಎಸ್‌ಐಟಿ ಈಗಾಗಲೇ ಎಂಟು ಮಹಿಳಾ ಉದ್ಯೋಗಿಗಳು ನೀಡಿದ ದೂರುಗಳ ಆಧಾರದ ಮೇಲೆ ತನಿಖೆ ನಡೆಸುತ್ತಿದೆ. ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ, ಅನುಚಿತ ಸ್ಪರ್ಶ, ಮತ್ತು ವೈಯಕ್ತಿಕ ಜೀವನದ ಬಗ್ಗೆ ಹೀಯಾಳಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹಿಂದೂ ಉದ್ಯೋಗಿಗಳನ್ನು ನಮಾಜ್ ಮಾಡಲು ಒತ್ತಾಯಿಸುವುದು ಮತ್ತು ಅವರ ಧರ್ಮವನ್ನು ಅವಮಾನಿಸುವ ಕೃತ್ಯಗಳು ಇಲ್ಲಿ ನಿರಂತರವಾಗಿ ನಡೆಯುತ್ತಿದ್ದವು.

ಮತ್ತಷ್ಟು ಓದಿ: ಐಟಿ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ, ಮತಾಂತರಕ್ಕೆ ಯತ್ನ, ನಾಸಿಕ್​ನ ಟಿಸಿಎಸ್ ಕಚೇರಿಗೆ ಬೀಗ

ಡ್ಯಾನಿಶ್ ಶೇಖ್, ತೌಸಿಫ್ ಅತ್ತರ್ ಸೇರಿದಂತೆ ಆರು ಪುರುಷರು ಮತ್ತು ದೂರುಗಳನ್ನು ನಿರ್ಲಕ್ಷಿಸಿದ ಹೆಚ್‌ಆರ್ ಮುಖ್ಯಸ್ಥೆ ಅಶ್ವಿನಿ ಚೈನಾನಿ ಅವರನ್ನು ಈಗಾಗಲೇ ಅಮಾನತುಗೊಳಿಸಿ ಬಂಧಿಸಲಾಗಿದೆ.

ಈ ಪ್ರಕರಣವು ಟಾಟಾ ಸಮೂಹದ ಪ್ರತಿಷ್ಠೆಗೆ ಧಕ್ಕೆ ತಂದಿರುವ ಹಿನ್ನೆಲೆಯಲ್ಲಿ, ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರು ಮೌನ ಮುರಿದಿದ್ದಾರೆ. ಈ ಆರೋಪಗಳನ್ನು ಅತ್ಯಂತ ಗಂಭೀರ ಮತ್ತು ದುಃಖಕರ ಎಂದು ಬಣ್ಣಿಸಿರುವ ಅವರು, ಟಿಸಿಎಸ್ ಸಿಒಒ ಆರತಿ ಸುಬ್ರಮಣಿಯನ್ ಅವರ ನೇತೃತ್ವದಲ್ಲಿ ಆಂತರಿಕ ತನಿಖೆ ನಡೆಸಲಾಗುತ್ತಿದೆ ಎಂದು ಘೋಷಿಸಿದ್ದಾರೆ.

ತಮ್ಮ ಉದ್ಯೋಗಿಗಳ ಸುರಕ್ಷತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಟಿಸಿಎಸ್ ಹೇಳಿದೆ. ಮತಾಂತರ ಮತ್ತು ಕಿರುಕುಳದ ಬಗ್ಗೆ ನಮಗೆ ಮಾಹಿತಿ ಬಂದ ತಕ್ಷಣವೇ ನಾವು ತ್ವರಿತ ಕ್ರಮ ಕೈಗೊಂಡಿದ್ದೇವೆ. ಪೊಲೀಸ್ ತನಿಖೆಗೆ ನಮ್ಮ ಸಂಪೂರ್ಣ ಸಹಕಾರವಿದೆ, ಎಂದು ಕಂಪನಿ ವಕ್ತಾರರು ತಿಳಿಸಿದ್ದಾರೆ.

ನಿದಾ ಖಾನ್ ಅವರ ಜಾಮೀನು ಅರ್ಜಿಯ ಮೇಲೆ ನ್ಯಾಯಾಲಯ ಯಾವ ತೀರ್ಪು ನೀಡಲಿದೆ? ಆಕೆ ನಿಜವಾಗಿಯೂ ಗರ್ಭಿಣಿಯೇ ಅಥವಾ ಬಂಧನದಿಂದ ತಪ್ಪಿಸಿಕೊಳ್ಳಲು ಮಾಡುತ್ತಿರುವ ತಂತ್ರವೇ? ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ. ಎಸ್‌ಐಟಿ ತಂಡವು ಆಕೆಯನ್ನು ಕಸ್ಟಡಿಗೆ ಪಡೆಯಲು ಮುಂದಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕುದುರೆ ಏರಿ ಬಂದ ವಧು, ನಡೆದಿದ್ದು ಕನ್ಯಾದಾನವಲ್ಲ, ವರ್ದಾನ, ಕಣ್ಣೀರಿಡುತ್ತಾ ಅತ್ತೆ ಮನೆಗೆ ಹೋದ ವರ, ಇದೇನಿದು ವಿಚಿತ್ರ ವಿವಾಹ! – Kannada News | Unusual Indian Wedding: Bride Rides Horseback, Groom Cries and Moves to In Laws

ಸುರ್ಗುಜಾ , ಏಪ್ರಿಲ್ 17: ಸಾಮಾನ್ಯವಾಗಿ ಮದುವೆ(Marriage) ಅಂದಮೇಲೆ ವರ ಕುದುರೆ ಏರಿ ಬರುತ್ತಾನೆ, ಮದುವೆಯ ನಂತರ ವಧು ಕಣ್ಣೀರಿಡುತ್ತಾ ತನ್ನ ತಂದೆ-ತಾಯಿಯನ್ನು ಬಿಟ್ಟು ಗಂಡನ ಮನೆಗೆ ಹೋಗುತ್ತಾಳೆ. ಆದರೆ ಸುಲ್ಪಾಗಾ ಗ್ರಾಮದಲ್ಲಿ ನಡೆದ ಈ ಮದುವೆಯಲ್ಲಿ ಎಲ್ಲವೂ ಉಲ್ಟಾ, ಇಲ್ಲಿ ವಧುವೇ ದಿಬ್ಬಣದೊಂದಿಗೆ ವರನ ಮನೆಗೆ ಬಂದಿದ್ದಾಳೆ, ಮದುವೆಯ ನಂತರ ವರನೇ ಅಳುತ್ತಾ ತನ್ನ ಅತ್ತೆಯ ಮನೆಗೆ (ವಧುವಿನ ಮನೆಗೆ) ಪ್ರವೇಶ ಮಾಡಿದ್ದಾನೆ.

ಅಳಿಯನಲ್ಲ, ಮಗ ಬೇಕು: ತಂದೆಯ ಛಲ
ವಧು ದೇವಮುನಿ ಎಕ್ಕಾ ಅವರ ತಂದೆ ಮೋಹನ್ ಎಕ್ಕಾ ಅವರು ವೃತ್ತಿಯಲ್ಲಿ ಒಬ್ಬ ಸಾಮಾನ್ಯ ರೈತ. ಅವರಿಗೆ ನಾಲ್ಕು ಜನ ಹೆಣ್ಣು ಮಕ್ಕಳು, ಆದರೆ ಮಗನಿಲ್ಲ. ನನ್ನ ಕಾಲಾನಂತರ ನನ್ನ ಹೆಣ್ಣು ಮಕ್ಕಳ ಗತಿಯೇನು? ನನ್ನ ಕೃಷಿಯನ್ನು ಯಾರು ನೋಡಿಕೊಳ್ಳುತ್ತಾರೆ?” ಎಂಬ ಚಿಂತೆ ಅವರನ್ನು ಕಾಡುತ್ತಿತ್ತು. ಆಗ ಅವರು ಒಂದು ದಿಟ್ಟ ನಿರ್ಧಾರ ಮಾಡಿದರು. ತನ್ನ ಅಳಿಯನನ್ನು ಅಳಿಯನಂತೆ ನೋಡುವ ಬದಲು, ಮಗನಂತೆ ಮನೆಗೆ ಬರಮಾಡಿಕೊಳ್ಳಲು ನಿರ್ಧರಿಸಿದರು.

ವರ ಬಿಲಾಸಸ್ ಬರ್ವಾ ಅವರ ಕುಟುಂಬ ಕೂಡ ಈ ಮಾತಿಗೆ ಒಪ್ಪಿಗೆ ನೀಡಿತು. ಸಂಪ್ರದಾಯದ ಹಾದಿಯನ್ನೇ ಬದಲಿಸಿದ ಈ ವಿವಾಹಕ್ಕೆ ‘ಮಾಸಿ’ ಪದ್ಧತಿಯಂತೆ ಮದುವೆ ನಡೆಯಿತು.

‘ಕನ್ಯಾದಾನ’ ಇಲ್ಲ, ಇಲ್ಲಿ ನಡೆದದ್ದು ವರ್ದಾನ
ಈ ಮದುವೆಯ ಅತ್ಯಂತ ಸುಂದರ ಕ್ಷಣವೆಂದರೆ ಇಲ್ಲಿ ಕನ್ಯಾದಾನ ನಡೆಯಲಿಲ್ಲ. ಬದಲಾಗಿ, ವರನ ಪೋಷಕರು ತಮ್ಮ ಮಗನನ್ನು ವಧುವಿನ ಕುಟುಂಬಕ್ಕೆ ಹಸ್ತಾಂತರಿಸುವ ವರ್ದಾನ ಸಮಾರಂಭ ನಡೆಯಿತು. ಅಂದರೆ, ಮಗನನ್ನು ವಧುವಿನ ಮನೆಗೆ ದಾನವಾಗಿ ನೀಡಲಾಯಿತು.

ಮತ್ತಷ್ಟು ಓದಿ: ಮದುವೆ ಮಂಟಪಕ್ಕೇ ನುಗ್ಗಿ ಮಾಜಿ ಪ್ರಿಯಕರನಿಗೆ ಶಾಕ್​​ಕೊಟ್ಟ ಯುವತಿ: ಫುಲ್​​ ಹೈಡ್ರಾಮಾ

ವಿವಾಹದ ವಿಧಿವಿಧಾನ ಮುಗಿದು ಬಿಲಾಸಸ್ ತನ್ನ ಮನೆಯನ್ನು ಬಿಟ್ಟು ಹೆಂಡತಿಯ ಮನೆಗೆ ಹೊರಡುವಾಗ, ಸಾಮಾನ್ಯವಾಗಿ ಹೆಣ್ಣು ಮಕ್ಕಳು ಪಡುವ ನೋವು ಆತನ ಕಣ್ಣಾಲಿಗಳಲ್ಲಿ ಕಂಡಿತು. ಇಡೀ ಗ್ರಾಮಸ್ಥರು ವರನ ಕಣ್ಣೀರು ಕಂಡು ಭಾವುಕರಾದರು.

ವರದಕ್ಷಿಣೆ ಮುಕ್ತ, ಸರಳ ವಿವಾಹ
ಈ ವಿವಾಹದಲ್ಲಿ ವರದಕ್ಷಿಣೆಯ ಹಾವಳಿ ಇರಲಿಲ್ಲ. ವಧುವಿನ ಕಡೆಯವರೇ ಮೆರವಣಿಗೆಯನ್ನು ವರನ ಮನೆಗೆ ಕರೆತಂದಿದ್ದರು. ಮದುವೆಯಲ್ಲಿ ಭಾಗವಹಿಸಿದ್ದ ಅತಿಥಿಗಳು, ಒಬ್ಬ ಹುಡುಗಿ ಮೆರವಣಿಗೆ ತಂದಿರುವುದನ್ನು ನಾವೇ ಮೊದಲ ಬಾರಿ ನೋಡುತ್ತಿರುವುದು ಎಂದು ಅಚ್ಚರಿ ವ್ಯಕ್ತಪಡಿಸಿದರು. ವರನ ಕಡೆಯವರು ಕೂಡ ಈ ಹೊಸ ಬದಲಾವಣೆಯನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಿದರು.

ಸಮಾಜಕ್ಕೆ ಹೊಸ ದಿಕ್ಸೂಚಿ
ಗ್ರಾಮಸ್ಥರಾದ ಸಾಧು ರಾಮ್ ಮತ್ತು ಮಹೇಶ್ ತಿರ್ಕಿ ಹೇಳುವಂತೆ, ಈ ಮದುವೆಯು ಕೇವಲ ಒಂದು ಕುಟುಂಬದ ನಿರ್ಧಾರವಲ್ಲ, ಇದು ಇಡೀ ಸಮಾಜಕ್ಕೆ ಒಂದು ಪಾಠ. ಗಂಡು ಮಕ್ಕಳಿಲ್ಲದ ತಂದೆ-ತಾಯಿಯರಿಗೆ ಈ ಮದುವೆ ಒಂದು ಭರವಸೆ ನೀಡಿದೆ. ಹೆಣ್ಣು ಮಕ್ಕಳು ಕೂಡ ಹೆತ್ತವರನ್ನು ಮಗನಂತೆ ಸಾಕಿ ಸಲಹಬಲ್ಲರು ಎಂಬ ಸತ್ಯ ಇಲ್ಲಿ ಸಾಬೀತಾಗಿದೆ.

ಪ್ರೀತಿ ಮತ್ತು ಸಮಾನತೆ ಇದ್ದರೆ ಸಂಪ್ರದಾಯಗಳು ಕೂಡ ಬದಲಾಗಬಲ್ಲವು ಎಂಬುದಕ್ಕೆ ಸುಲ್ಪಾಗಾ ಗ್ರಾಮದ ಈ ವಿವಾಹವೇ ಸಾಕ್ಷಿ. ಇಂದು ಆ ರೈತ ಮೋಹನ್ ಎಕ್ಕಾ ಅವರಿಗೆ ಅಳಿಯ ಸಿಕ್ಕಿಲ್ಲ, ಬದಲಿಗೆ ಅವರ ಕೃಷಿ ಮತ್ತು ಕುಟುಂಬವನ್ನು ಕಾಪಾಡಲು ಒಬ್ಬ ಮಗ ಸಿಕ್ಕಿದ್ದಾನೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Daily Devotional: ಜೀವನದಲ್ಲಿ ಹಾಸ್ಯದ ಮಹತ್ವ ಮತ್ತು ಅದರ ಮಿತಿ ಬಗ್ಗೆ ಇಲ್ಲಿ ತಿಳಿದುಕೊಳ್ಳಿ – Kannada News | The Etiquette of Laughter: Guidelines for Appropriate Humour in Daily Life

ಜೀವನದಲ್ಲಿ ಹಾಸ್ಯದ ಮಹತ್ವ ಮತ್ತು ಅದರ ಮಿತಿಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಗುರೂಜಿಯವರು ಹೇಳುವಂತೆ, ಜೀವನದಲ್ಲಿ ಸುಖ ದುಃಖ, ನಗು ಅಳು ಸಹಜ. ಆಸೆ ಆಕಾಂಕ್ಷೆಗಳು, ಭಾವನಾತ್ಮಕ ಸ್ಪಂದನೆಗಳು ಜೀವನದ ಭಾಗಗಳಾಗಿವೆ. ಹಾಸ್ಯವು ಜೀವನದ ಅತಿದೊಡ್ಡ ಮದ್ದು ಮತ್ತು ಅವಿಭಾಜ್ಯ ಅಂಗವಾಗಿದೆ. ನಗುವಿನಿಂದ ಮನುಷ್ಯನ ಜೀವನದಲ್ಲಿ ಖುಷಿ ಹೆಚ್ಚುತ್ತದೆ. ಹಾಸ್ಯವಿಲ್ಲದ ಬದುಕು ನಿರರ್ಥಕ ಎನಿಸಬಹುದು. ಹಾಸ್ಯವು ಮಾನಸಿಕವಾಗಿ, ದೈಹಿಕವಾಗಿ ಶಕ್ತಿ ತುಂಬುತ್ತದೆ ಮತ್ತು ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಮಾನಸಿಕ ಒತ್ತಡ ನಿವಾರಣೆ, ಸಾಲದ ಸಂಕಷ್ಟ, ಕುಟುಂಬದ ಅಗಲಿಕೆ, ಅನಾರೋಗ್ಯ ಪೀಡಿತರಾಗಿರುವಿಕೆ, ಉದ್ಯೋಗದಲ್ಲಿನ ಕಿರುಕುಳ ಅಥವಾ ಆತ್ಮವಿಶ್ವಾಸ ಕುಗ್ಗಿದಂತಹ ಕಷ್ಟಕರ ಸಂದರ್ಭಗಳಲ್ಲಿ ಹಾಸ್ಯವು ನಮ್ಮನ್ನು ಬಲಪಡಿಸುತ್ತದೆ. ಇದು ಕಷ್ಟಗಳನ್ನು ಎದುರಿಸಲು ಶಕ್ತಿಯನ್ನು ತುಂಬುತ್ತದೆ ಮತ್ತು ಮುಖದ ಅಂದಕ್ಕೆ ಕಾರಣವಾಗುತ್ತದೆ.

ಆದರೆ, ಹಾಸ್ಯವು ಎಂದಿಗೂ ಅಪಹಾಸ್ಯವಾಗಿ ಬದಲಾಗಬಾರದು. ಕೆಲವೊಂದು ಸಂದರ್ಭಗಳಲ್ಲಿ ಹಾಸ್ಯವನ್ನು ಮಾಡಬಾರದು ಎಂಬುದನ್ನು ಅರಿಯುವುದು ಅತ್ಯಗತ್ಯ. ಮೊದಲನೆಯದಾಗಿ, ದೇವಾಲಯಗಳಲ್ಲಿ ಹಾಸ್ಯ ಮಾಡಬಾರದು. ದೇವಾಲಯಕ್ಕೆ ಹೋದಾಗ ಮೌನವಾಗಿ, ಭಗವಂತನ ಬಗ್ಗೆ ಗಮನಹರಿಸಬೇಕು. ಯಾವುದೇ ವಿಷಯದ ಕುರಿತು ದೇವಸ್ಥಾನದಲ್ಲಿ ಹಾಸ್ಯದಿಂದ ಮಾತಾಡುವುದು ಶಾಸ್ತ್ರಗಳ ಪ್ರಕಾರ ಸರಿಯಲ್ಲ.

ಎರಡನೆಯದಾಗಿ, ಯಾರಾದರೂ ನಿಧನರಾದಾಗ ಅಥವಾ ದೈವಾದೀನರಾದಾಗ ಅವರ ವಿಚಾರವಾಗಿ ಹಾಸ್ಯ ಮಾಡಬಾರದು. ದುಃಖದ ಸ್ಥಿತಿಯಲ್ಲಿರುವವರ ಮನೆಯಲ್ಲಿ ಅಥವಾ ಸಾವಿನ ಸಂದರ್ಭದಲ್ಲಿ ಹಾಸ್ಯ ಮಾಡುವುದು ಅಷ್ಟು ಶುಭವಲ್ಲ. ಮೂರನೆಯದಾಗಿ, ಪ್ರಾರ್ಥನಾ ಮಂದಿರಗಳು, ಧ್ಯಾನ ಕೇಂದ್ರಗಳು (ಮೆಡಿಟೇಶನ್ ಸೆಂಟರ್‌ಗಳು) ಅಥವಾ ಪ್ರವಚನ ನಡೆಯುವ ಸ್ಥಳಗಳಲ್ಲಿ ಹಾಸ್ಯ ಮಾಡಬಾರದು. ಅಂತಹ ಸಂದರ್ಭಗಳಲ್ಲಿ ನಾವು ಪ್ರಾರ್ಥನೆಗೆ ಕುಳಿತಿರುವಾಗ ಅಥವಾ ಜಪ ಮಾಡುತ್ತಿರುವಾಗ ಗಂಭೀರವಾದ ವಾತಾವರಣವನ್ನು ಕಾಪಾಡಿಕೊಳ್ಳಬೇಕು.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ನಾಲ್ಕನೆಯದಾಗಿ, ಹಿರಿಯರ ಬಗ್ಗೆ, ನಿಮ್ಮ ಮೇಲಾಧಿಕಾರಿಗಳ ಬಗ್ಗೆ ಅಥವಾ ನಿಮ್ಮ ನಿವೃತ್ತ ಸಹೋದ್ಯೋಗಿಗಳ ಬಗ್ಗೆ ಹಾಸ್ಯದಿಂದ ಮಾತನಾಡಲು ಅವರ ಅನುಮತಿ ಪಡೆಯುವುದು ಸೂಕ್ತ. ಧರ್ಮ ಚಿಂತಕರು, ದೈವಾಂಶ ಸಂಭೂತರು, ಸನ್ಯಾಸಿ ವರ್ಗಗಳು, ಮಠಾಧೀಶರು ಮತ್ತು ಸಾಧಕರ ಬಗ್ಗೆ ಮಾತನಾಡುವಾಗ ಹಾಸ್ಯವನ್ನು ಅತಿಯಾಗಿ ಬಳಸುವುದು ಒಳ್ಳೆಯದಲ್ಲ. ಇಂತಹ ವ್ಯಕ್ತಿಗಳ ಬಗ್ಗೆ ಗೌರವದಿಂದ ವರ್ತಿಸಬೇಕು.

ಐದನೆಯದಾಗಿ, ಸ್ತ್ರೀಯರ ಬಗ್ಗೆ ಅವರ ಮುಂದೆಯೇ ಹಾಸ್ಯ ಮಾಡುವುದು ಶುಭಕರವಲ್ಲ. ಆರನೆಯದಾಗಿ, ತೊದಲು ಮಾತಾಡುವವರು, ಕಿವುಡರು, ಅಂಗವಿಕಲರು ಅಥವಾ ಕುರುಡರ ಬಗ್ಗೆ ಹಾಸ್ಯ ಮಾಡುವುದು, ಅಥವಾ ಅವರ ಬಗ್ಗೆ ಕೆಲವು ಹಾಸ್ಯ ವಿಷಯಗಳನ್ನು ಮಾತಾಡುವುದು ಅಷ್ಟು ಶುಭವಲ್ಲ. ಹಾಸ್ಯವು ಬಹಳ ಪವಿತ್ರವಾದ ಮತ್ತು ವಿಶೇಷವಾದ ಜೀವನದ ಅಂಗವಾಗಿದ್ದರೂ, ಅದಕ್ಕೆ ಒಂದು ಇತಿಮಿತಿ ಇರಬೇಕು. “ಅತಿ ಸರ್ವತ್ರ ವರ್ಜಯೇತ್” ಎಂಬಂತೆ, ಯಾವುದೇ ವಿಷಯದಲ್ಲಿ ಅತಿರೇಕ ಸಲ್ಲದು. ಹಾಸ್ಯಕ್ಕೆ ಒಂದು ಜಾಗ ಮತ್ತು ಒಳ್ಳೆಯ ವಾತಾವರಣವನ್ನು ಸೃಷ್ಟಿಸುವ ಶಕ್ತಿಯಿದೆ. ಆದರೆ, ಅದು ಕೆಲವರಿಗೆ ಅಪಹಾಸ್ಯವಾಗಬಾರದು ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:18 am, Fri, 17 April 26

Source link

ಯಾಣದ ಕಪ್ಪು ಶಿಲೆಗಳಿಗೆ ಈಗ ‘ರಾಷ್ಟ್ರೀಯ ಪಾರಂಪರಿಕ’ ಕಿರೀಟ: ಜಿಎಸ್‌ಐನಿಂದ ಐತಿಹಾಸಿಕ ಘೋಷಣೆ! – Kannada News | Yana Caves Declared National Geo heritage Site by GSI in Uttar Kannada

ಉತ್ತರ ಕನ್ನಡ, ಏಪ್ರಿಲ್ 17: ಜಿಲ್ಲೆಯ ಗೋಕರ್ಣ (Gokarna) ಸಮೀಪದ ಯಾಣ ಗುಹೆಗಳನ್ನು ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್‌ಐ) ರಾಷ್ಟ್ರೀಯ ಮಹತ್ವದ ಭೂ-ಪಾರಂಪರಿಕ ತಾಣವಾಗಿ ಘೋಷಿಸಿದೆ. ಏಪ್ರಿಲ್ 13 ರಂದು ಹೊರಡಿಸಿದ ಪತ್ರದಲ್ಲಿ ಈ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಲಾಗಿದ್ದು, ಜಿಎಸ್‌ಐಯ 176ನೇ ಸ್ಥಾಪನಾ ದಿನಾಚರಣೆಯ ಅಂಗವಾಗಿ ಈ ಘೋಷಣೆ ಮಾಡಲಾಗಿದೆ.

ಪತ್ರದಲ್ಲೇನಿದೆ?

ಯಾಣಲ್ಲಿನ ಗಮನಾರ್ಹ ಶಿಲಾ ದ್ರವ್ಯರಾಶಿಗಳು 2,700 ಮಿಲಿಯನ್ ವರ್ಷಗಳ ಹಿಂದೆ ರೂಪುಗೊಂಡಿವೆ. ಅವು ಪೂರ್ವ-ಕೇಂಬ್ರಿಯನ್ ಡೊಲೊಮಿಟಿಕ್ ಸುಣ್ಣದ ಕಲ್ಲುಗಳಿಂದ ಕೂಡಿವೆ. ಲಕ್ಷಾಂತರ ವರ್ಷಗಳಿಂದ ತೀವ್ರವಾದ ಉಷ್ಣವಲಯದ ಹವಾಮಾನ, ರಾಸಾಯನಿಕ ಕರಗುವಿಕೆಯೊಂದಿಗೆ ವಿಶಿಷ್ಟವಾದ ಕಾರ್ಸ್ಟ್ ವೈಶಿಷ್ಟ್ಯಗಳ ಬೆಳವಣಿಗೆಗೆ ಕಾರಣವಾಗಿದೆ. ಯಾಣ ಪ್ರದೇಶವು 61 ವಿಭಿನ್ನ ಕಾರ್ಸ್ಟ್‌ಗಳನ್ನು ಹೊಂದಿದ್ದು, ಭೈರವೇಶ್ವರ ಶಿಖರ ಮತ್ತು ಮೋಹಿನಿ ಶಿಖರಗಳು ಅತ್ಯಂತ ಪ್ರಬಲವಾದ ಶಿಖರಗಳಾಗಿವೆ. ಈ ಪ್ರಸಿದ್ಧ ಜೋಡಿ ಬೃಹತ್ ಕಪ್ಪು ಏಕಶಿಲೆಗಳು ಜನಪ್ರಿಯ ಪೌರಾಣಿಕ ನಿರೂಪಣೆಗಳೊಂದಿಗೆ ಸಂಬಂಧ ಹೊಂದಿವೆ ಮತ್ತು ತೀರ್ಥಯಾತ್ರೆಗೆ ಹೆಸರುವಾಸಿಯಾಗಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ.

ಸಲಹಾ ವಿಜ್ಞಾನಿ ಎಂ.ಡಿ. ಸುಭಾಷ್ ಚಂದ್ರನ್ ಹೇಳಿದ್ದೇನು?

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನ ಕೇಂದ್ರದ ಸಲಹಾ ವಿಜ್ಞಾನಿ ಎಂ.ಡಿ. ಸುಭಾಷ್ ಚಂದ್ರನ್, ಇದು ಶ್ಲಾಘನೀಯ ಹೆಜ್ಜೆ ಎಂದು ಹೇಳಿದ್ದಾರೆ. ಅಷ್ಟೆ ಅಲ್ಲದೆ ಇದು ಭೂವೈಜ್ಞಾನಿಕ ಸ್ಮಾರಕವನ್ನು ಹೊಂದಿರುವ ಉತ್ತಮ ಅರಣ್ಯವಾಗಿದ್ದು, ಅಘನಾಶಿನಿ ನದಿಗೆ ಶಾಶ್ವತ ನೀರಿನ ಮೂಲವಾಗಿದೆ. ಸುಣ್ಣ ಸಮೃದ್ಧವಾದ ಡಾಲಮೈಟ್ ಇರುವುದರಿಂದ, ಇಲ್ಲಿನ ಜಲ ಸಂಪನ್ಮೂಲಗಳು ದೀರ್ಘಕಾಲಿಕವಾಗಿವೆ. ಯಾಣ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಗೆ ಹೆಚ್ಚಿನ ರಕ್ಷಣೆ ನೀಡುವುದು ಒಳ್ಳೆಯ ಕೆಲಸವಾಗಿದೆ. ಯಾಣ ನದಿಯ ಜೀವವೈವಿಧ್ಯತೆಯ ರಕ್ಷಣೆಗಾಗಿ ಬಫರ್ ವಲಯವನ್ನು ಸಹ ಪರಿಗಣಿಸಬೇಕು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ ಗೋಕರ್ಣ ಸಮೀಪದ 44 ರೆಸಾರ್ಟ್​​ಗಳ ತೆರವಿಗೆ ಆದೇಶ! ಕಾರಣ ಇಲ್ಲಿದೆ

ಭೂ ಪರಂಪರೆಯ ಭೂ ಸಂರಕ್ಷಣೆಗೆ ಜಿಎಸ್‌ಐ ನೋಡಲ್ ಏಜೆನ್ಸಿಯಾಗಿದ್ದು, ಇದನ್ನು ಸಾಮಾನ್ಯವಾಗಿ ಭೂ-ಪರಂಪರೆ ತಾಣಗಳು ಎಂದು ಕರೆಯಲಾಗುತ್ತದೆ. ಇದು ಗಮನಾರ್ಹವಾದ ವೈಜ್ಞಾನಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸೌಂದರ್ಯದ ಮೌಲ್ಯದ ಭೌಗೋಳಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಭೂವೈಜ್ಞಾನಿಕ ಸಂಪತ್ತನ್ನು ಭೂ-ಪರಂಪರೆ ತಾಣಗಳಾಗಿ ಗುರುತಿಸುವುದನ್ನು ಒಳಗೊಂಡಿರುತ್ತದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:59 am, Fri, 17 April 26

Source link

ನಿಮ್ಮ ದಿನವನ್ನು ಧನಾತ್ಮಕವಾಗಿ ಆರಂಭಿಸಲು ಈ ಸಲಹೆಗಳನ್ನು ಪಾಲಿಸಿ – Kannada News | How to start the day positively? Here are some tips

ನಾವು ಬೆಳಗ್ಗೆ ನಮ್ಮ ದಿನವನ್ನು ಪ್ರಾರಂಭಿಸುವ ವಿಧಾನವು ನಮ್ಮ ಇಡೀ ದಿನದ ದಿಕ್ಕನ್ನು ನಿರ್ಧರಿಸುತ್ತದೆ. ಹಾಗಾಗಿ ದಿನವನ್ನು ಧನಾತ್ಮಕ ರೀತಿಯಲ್ಲಿ ಪ್ರಾರಂಭಿಸುವುದು  ತುಂಬಾನೇ ಮುಖ್ಯ. ದಿನವನ್ನು ಸರಿಯಾಗಿ ಮತ್ತು ಧನಾತ್ಮಕವಾಗಿ ಪ್ರಾರಂಭಿಸಿದರೆ ಕೆಲಸಗಳೂ ಸರಿಯಾದ ಸಮಯಕ್ಕೆ ಪೂರ್ಣಗೊಳ್ಳುತ್ತವೆ, ಯಶಸ್ಸಿನ ಮೆಟ್ಟಿಲನ್ನು ಕೂಡ ಸುಲಭವಾಗಿ ಏರಬಹುದು. ಇದಕ್ಕಾಗಿ ಬೆಳಗಿನ ದಿನಚರಿಯಲ್ಲಿ (Morning Routine) ಈ ಕೆಲವು ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ. ಈ ಸಣ್ಣ ಅಭ್ಯಾಸಗಳು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುವುದು ಮಾತ್ರವಲ್ಲ, ನಿಮ್ಮ ಜೀವನವನ್ನೇ ಬದಲಿಸುತ್ತದೆ. ಹಾಗಿದ್ರೆ ಬೆಳಗಿನ ದಿನಚರಿಯಲ್ಲಿ ಪಾಲಿಸಬೇಕಾದ ಆ ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ದಿನವನ್ನು ಸರಿಯಾಗಿ ಮತ್ತು ಸಕಾರಾತ್ಮಕವಾಗಿ ಪ್ರಾರಂಭಿಸುವುದು ಹೇಗೆ?

ಬೆಳಗ್ಗೆ ಬೇಗ ಎದ್ದೇಳಿ: ನಿಮ್ಮ ದಿನವನ್ನು ಸಕಾರಾತ್ಮಕವಾಗಿ ಪ್ರಾರಂಭಿಸಲು ಬೆಳಗ್ಗೆ ಬೇಗನೆ ಏಳುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಬೆಳಗ್ಗೆ ಬೇಗನೆ ಏಳುವುದರಿಂದ ದಿನವನ್ನು ಶಾಂತವಾಗಿ ಮತ್ತು ಆತುರವಿಲ್ಲದೆ ಪ್ರಾರಂಭಿಸಬಹುದು. ಕ್ರಮೇಣ ನಿಮ್ಮ ಜಡತ್ವವೂ ದೂರವಾಗುತ್ತದೆ.

ಸಾಮಾಜಿಕ ಜಾಲತಾಣ ಮತ್ತು ಫೋನ್‌ಗಳಿಂದ ದೂರವಿರಿ: ಫೋನ್ ಬಳಸುವ ಬದಲು, ಪ್ರತಿದಿನ ನಿಮ್ಮೊಂದಿಗೆ  ನೀವು ಸ್ವಲ್ಪ ಸಮಯ ಕಳೆಯಿರಿ. ಅಲ್ಲದೆ, ಸಾಮಾಜಿಕ ಮಾಧ್ಯಮದಿಂದ ದೂರವಿರಲು ಪ್ರಯತ್ನಿಸಿ, ಏಕೆಂದರೆ ಸಾಮಾಜಿಕ ಮಾಧ್ಯಮದ ಪೋಸ್ಟ್ ನಿಮ್ಮ ಮನಸ್ಥಿತಿಯನ್ನು ಯಾವಾಗ, ಹೇಗೆ ಹಾಳು ಮಾಡುತ್ತದೆ ಎಂದು ನಿಮಗೆ ತಿಳಿದಿರುವುದಿಲ್ಲ. ಆದ್ದರಿಂದ, ಬೆಳಿಗ್ಗೆ ಎದ್ದ ನಂತರ ಫೋನ್‌ ನೋಡುತ್ತಾ ಸಮಯ ಕಳೆಯಬೇಡಿ. ಬದಲಿಗೆ ಧ್ಯಾನ ಮಾಡಿ, ವಾಕಿಂಗ್‌ ಮಾಡುತ್ತಾ ನಿಮ್ಮೊಂದಿಗೆ ನೀವು ಸಮಯ ಕಳೆಯಿರಿ. ಇದರಿಂದ ನಿಮ್ಮ ಸಂಪೂರ್ಣ ದಿನ ಸಕಾರಾತ್ಮಕವಾಗಿರುತ್ತದೆ.

ಧ್ಯಾನ ಮಾಡಿ: ದಿನವನ್ನು ಸಕಾರಾತ್ಮಕವಾಗಿ ಆರಂಭಿಸಲು  ಧ್ಯಾನ ಅಥವಾ ಪ್ರಾಣಾಯಾಮವನ್ನು ಅಭ್ಯಾಸ ಮಾಡಿ. ಇದು ಮನಸ್ಸನ್ನು ಶಾಂತಗೊಳಿಸುತ್ತದೆ, ಗಮನವನ್ನು ಸುಧಾರಿಸುತ್ತದೆ ಮತ್ತು ನಕಾರಾತ್ಮಕ ಆಲೋಚನೆಗಳನ್ನು ಕಡಿಮೆ ಮಾಡುತ್ತದೆ. ಕೇವಲ 10-15 ನಿಮಿಷಗಳ ಧ್ಯಾನವು ನಿಮ್ಮ ಇಡೀ ದಿನದ ಮನಸ್ಥಿತಿಯನ್ನು ಬದಲಾಯಿಸಬಹುದು.

ವ್ಯಾಯಾಮ ಅಥವಾ ಯೋಗ ಮಾಡಿ: ಬೆಳಗಿನ ದಿನಚರಿಯಲ್ಲಿ ಲಘು ವ್ಯಾಯಾಮ, ಯೋಗ ಅಥವಾ ವಾಕಿಂಗ್‌ ಅಭ್ಯಾಸ ಮಾಡಿ.  ಇದು ದೇಹವನ್ನು ಸಕ್ರಿಯವಾಗಿರಿಸುತ್ತದೆ, ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಆಲಸ್ಯವನ್ನು ನಿವಾರಿಸುತ್ತದೆ. ಮತ್ತು ನಿಮ್ಮನ್ನು ಇಡೀ ದಿನ ಚೈತನ್ಯಶೀಲರನ್ನಾಗಿರಿಸುತ್ತದೆ.

ಆರೋಗ್ಯಕರ ಉಪಹಾರ ಸೇವಿಸಿ: ಇಡೀ ದಿನ ಸಕಾರಾತ್ಮಕವಾಗಿರಲು, ಆಕ್ಟಿವ್‌ ಆಗಿರಲು ಆರೋಗ್ಯಕ ಉಪಹಾರ ಸೇವನೆ ಮಾಡುವುದು ಸಹ ಮುಖ್ಯ. ಹಾಗಾಗಿ ಮನಸ್ಸು ಮತ್ತು ದೇಹ ಎರಡಕ್ಕೂ ಸರಿಯಾದ ಶಕ್ತಿಯನ್ನು ಒದಗಿಸುವ ಆರೋಗ್ಯಕರ ಮತ್ತು ಪೌಷ್ಟಿಕ ಉಪಹಾರವನ್ನು ಸೇವನೆ ಮಾಡಿ.

ಇದನ್ನೂ ಓದಿ: ನಿತ್ಯವೂ ಒಂದು ಬಾಳೆಹಣ್ಣು ಸೇವನೆ ಮಾಡಿದರೆ ಏನಾಗುತ್ತದೆ ಗೊತ್ತಾ?

ದಿನದ ಯೋಜನೆಗಳನ್ನು ಬರೆದಿಡಿ: ನಿಮ್ಮ ದಿನವನ್ನು ಯೋಜಿಸಲು ಬೆಳಿಗ್ಗೆ ಅತ್ಯುತ್ತಮ ಸಮಯ. ಯಶಸ್ವಿ ಜನರು ತಮ್ಮ ದೈನಂದಿನ ಕೆಲಸಗಳನ್ನು ಬರೆದಿಟ್ಟುಕೊಳ್ಳುತ್ತಾರೆ, ಅವುಗಳಿಗೆ ಆದ್ಯತೆ ನೀಡುತ್ತಾರೆ ಮತ್ತು ತಮ್ಮ ಗುರಿಗಳನ್ನು ಸ್ಪಷ್ಟವಾಗಿ ಇಟ್ಟುಕೊಳ್ಳುತ್ತಾರೆ. ಇದು ಅವರ ಕೆಲಸದ ಮೇಲೆ ಗಮನಹರಿಸಲು ಸಹಾಯ ಮಾಡುತ್ತದೆ. ಅದೇ ರೀತಿ ನೀವು ಸಹ ಮಾಡಿ ಮುಗಿಸಬೇಕಾದ ಕೆಲಸಗಳ ಪಟ್ಟಿಯನ್ನು ಬರೆದಿಡಿ.

ಸಕಾರಾತ್ಮಕ ಚಿಂತನೆ ಮತ್ತು ಕಲಿಕೆ: ಬೆಳಗ್ಗೆ ಎದ್ದ ತಕ್ಷಣ ಮೊಬೈಲ್‌ ನೋಡುವ ಬದಲು ಸ್ಪೂರ್ತಿದಾಯಕ ಪುಸ್ತಕಗಳನ್ನು ಓದುವುದು, ಪಾಡ್‌ಕ್ಯಾಸ್ಟ್‌ಗಳನ್ನು ಕೇಳುವುದು ಅಥವಾ ತಮ್ಮ ಗುರಿಗಳ ಬಗ್ಗೆ ಯೋಚಿಸುವುದು ಮತ್ತು ಯೋಜಿಸುವುದರಲ್ಲಿ ಸ್ವಲ್ಪ ಸಮಯ ಕಳೆಯಿರಿ. ಇದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಸಕಾರಾತ್ಮಕ ಮನಸ್ಥಿತಿಯನ್ನು ಕಾಪಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:59 am, Fri, 17 April 26

Source link

ಈ ಬಾರಿಯ ಬೇಸಿಗೆ ಸುಲಭವಿಲ್ಲ! ಕುಡಿಯುವ ನೀರಿಗೆ ಎದುರಾಗಲಿದೆ ಹಾಹಾಕಾರ, 26 ಜಿಲ್ಲೆಗಳ ಸ್ಥಿತಿ ಶೋಚನೀಯ – Kannada News | Karnataka Faces Major Drinking Water Crisis: CM Siddaramaiah Warns DCs of Action Over Water Shortage in 26 Districts

ಬೆಂಗಳೂರು, ಏಪ್ರಿಲ್ 17: ಕರ್ನಾಟಕದಲ್ಲಿ ಈ ವರ್ಷ ಮುಂಗಾರು ಮಳೆ (Monsoon Rain) ಕ್ಷೀಣಿಸುವ ಮುನ್ಸೂಚನೆ ದೊರೆತಿದೆ. ಈ ಹಿನ್ನೆಲೆಯಲ್ಲಿ 26 ಜಿಲ್ಲೆಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಸೃಷ್ಟಿಯಾಗುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಕಳವಳ ವ್ಯಕ್ತಪಡಿಸಿದ್ದಾರೆ. ಗುರುವಾರ ವಿಧಾನಸೌಧದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಒಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಅವರು, ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಡಿಸಿಗಳೇ ಜವಾಬ್ದಾರರು: ಸಿಎಂ ಎಚ್ಚರಿಕೆ

ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾದರೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನೇ ನೇರ ಹೊಣೆ ಮಾಡಲಾಗುವುದು ಎಂದು ಸಿಎಂ ಎಚ್ಚರಿಕೆ ನೀಡಿದ್ದಾರೆ. ಮಳೆ ಕೊರತೆಯಿಂದಾಗಿ ರಾಜ್ಯದ 213 ತಾಲ್ಲೂಕುಗಳು ಮತ್ತು 2,410 ಗ್ರಾಮ ಪಂಚಾಯತ್‌ಗಳಲ್ಲಿ ನೀರಿನ ಸಮಸ್ಯೆ ಉಂಟಾಗಬಹುದು ಎಂದು ಗುರುತಿಸಲಾಗಿದೆ. ಸದ್ಯ 114 ತಾಲ್ಲೂಕುಗಳಲ್ಲಿ ಈಗಾಗಲೇ ನೀರಿನ ಅತೀ ಹೆಚ್ಚಿನ ಸಮಸ್ಯೆ ಕಂಡುಬಂದಿದ್ದು, 137 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.

ಹಣದ ಕೊರತೆಯಿಲ್ಲ, ಕುಡಿಯುವ ನೀರಿಗೆ ಆದ್ಯತೆ ನೀಡಿ: ಸಿಎಂ ಸೂಚನೆ

ಕುಡಿಯುವ ನೀರು ನಿರ್ವಹಣೆಗೆ ಜಿಲ್ಲಾಧಿಕಾರಿಗಳ ಪಿಡಿ (PD) ಖಾತೆಯಲ್ಲಿ ಒಟ್ಟು 419.5 ಕೋಟಿ ರೂಪಾಯಿ ಹಣ ಲಭ್ಯವಿದ್ದು, ಅನುದಾನದ ಕೊರತೆಯಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ಕೃಷಿಗಿಂತ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು. ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸಲು ಆದ್ಯತೆ ನೀಡಿ, ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಟ್ಯಾಂಕರ್ ಬಳಸುವಂತೆ ಸೂಚಿಸಿದ್ದಾರೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಏಪ್ರಿಲ್‌ನಿಂದ ಜೂನ್‌ವರೆಗೆ ಅತೀ ಹೆಚ್ಚು ಶಾಖದ ಅಲೆ (Heatwave) ಇರುವುದರಿಂದ ಸಾರ್ವಜನಿಕರಿಗೆ ನೆರಳು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಇದನ್ನೂ ಓದಿ: ಬಿಸಿಲ ಝಳದಿಂದ ತತ್ತರಿಸಿದ ಜನತೆ: ಇನ್ನೂ 3 ದಿನ ಉಷ್ಣ ಅಲೆ, ಬೆಂಗಳೂರಿಗೂ ತಟ್ಟಲಿದೆ ತಾಪಮಾನ ಏರಿಕೆ ಬಿಸಿ

ಪ್ರಸ್ತುತ, ರಾಜ್ಯದ 14 ಪ್ರಮುಖ ಜಲಾಶಯಗಳಲ್ಲಿ 321.93 ಟಿಎಂಸಿ ಅಡಿ ನೀರು ಲಭ್ಯವಿದೆ. ಇದು ಒಟ್ಟು ಸಾಮರ್ಥ್ಯದ ಸುಮಾರು ಶೇ 36 ಆಗಿದೆ. ಸಾರ್ವಜನಿಕ ದೂರುಗಳಿಗೆ ತ್ವರಿತವಾಗಿ ಸ್ಪಂದಿಸುವುದು, ತಾಲ್ಲೂಕು ಮತ್ತು ವಾರ್ಡ್ ಮಟ್ಟದಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸುವುದು ಮತ್ತು 24X7 ವಿದ್ಯುತ್ ಪೂರೈಕೆಯೊಂದಿಗೆ ಆರ್‌ಒ ಘಟಕಗಳ ನಿರಂತರ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳುವುದು ಸೇರಿದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಿಎಂ ನಿರ್ದೇಶನ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು-ಪುಣೆಗೆ ಬರುತ್ತಿದೆ ‘ವಂದೇ ಭಾರತ್ ಸ್ಲೀಪರ್’: 18 ಗಂಟೆಯ ಪ್ರಯಾಣ ಇನ್ಮುಂದೆ ಕೇವಲ 13 ಗಂಟೆ! – Kannada News | Vande Bharat Sleeper: Bengaluru to Pune in 13 Hours, Route and Schedule

ಬೆಂಗಳೂರು, ಏ.17: ಬೆಂಗಳೂರು ಹಾಗೂ ಪುಣೆ ನಡುವಿನ ವಂದೇ ಭಾರತ್​​ ಎಕ್ಸ್​​ಪ್ರಸ್ ರೈಲು ಓಡಾಟದ ಕನಸು ಇಂದು ಪೂರ್ಣಗೊಂಡಿದೆ. ಬೆಂಗಳೂರು ಮತ್ತು ಪುಣೆ ನಡುವಿನ ಸಂಪರ್ಕ ಇನ್ಮುಂದೆ ಮತ್ತಷ್ಟು ವೇಗವಾಗಲಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಏಪ್ರಿಲ್ 5, 2026 ರಂದು ಮಾರ್ಗದಲ್ಲಿ ಸಂಚಾರಕ್ಕೆ ಅಧಿಕೃತವಾಗಿ ಅನುಮೋದನೆ ನೀಡಿದ್ದು, ಇದು ದೇಶದ ಎರಡನೇ ವಂದೇ ಭಾರತ್ ಸ್ಲೀಪರ್ ಸೇವೆಯಾಗಲಿದೆ.

ಪ್ರಸ್ತುತ ಬೆಂಗಳೂರು ಮತ್ತು ಪುಣೆ ನಡುವೆ ಸಂಚರಿಸುವ ಉದ್ಯನ್ ಎಕ್ಸ್‌ಪ್ರೆಸ್ 18 ಗಂಟೆ ಹಾಗೂ ಕೊಯಮತ್ತೂರು ಎಕ್ಸ್‌ಪ್ರೆಸ್ ಸುಮಾರು 19 ಗಂಟೆ ಸಮಯ ತೆಗೆದುಕೊಳ್ಳುತ್ತವೆ. ಆದರೆ, ಹೊಸ ವಂದೇ ಭಾರತ್ ಸ್ಲೀಪರ್ ರೈಲು ಈ ಸಮಯವನ್ನು 13 ಗಂಟೆಗೆ ಇಳಿಸಲಿದೆ. ಇದು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ನಿಂದ ಹೊರಟು ಪುಣೆ, ಸೊಲ್ಲಾಪುರ ಮತ್ತು ವಾಡಿ ಮೂಲಕ ಬೆಂಗಳೂರು ತಲುಪಲಿದೆ. ದೌಂಡ್-ವಾಡಿ ಮತ್ತು ವಾಡಿ-ಗುಂತಕಲ್ ನಡುವಿನ ರೈಲ್ವೆ ಹಳಿಗಳನ್ನು ಗಂಟೆಗೆ 130 ಕಿ.ಮೀ ವೇಗದಲ್ಲಿ ಚಲಿಸಲು ಅನುವಾಗುವಂತೆ ಮೇಲ್ದರ್ಜೆಗೇರಿಸಲಾಗಿದೆ. ಇದರಿಂದಾಗಿ ರೈಲು ಅತಿ ವೇಗವಾಗಿ ಗುರಿ ತಲುಪಲು ಸಾಧ್ಯವಾಗಲಿದೆ.

ವೇಳಾಪಟ್ಟಿ ಮತ್ತು ವಿಶೇಷತೆಗಳು:

ಆರಂಭ: ಡಿಸೆಂಬರ್ 2026 ರಿಂದ ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆಯಿದೆ.

ದಿನಗಳು: ವಾರದಲ್ಲಿ 6 ದಿನ ಸಂಚಾರ (ಒಂದು ದಿನ ನಿರ್ವಹಣೆಗಾಗಿ ಮೀಸಲು).

ಸಮಯ: ಎರಡೂ ನಗರಗಳಿಂದ ರಾತ್ರಿ 9 ಗಂಟೆಗೆ ರೈಲು ಹೊರಡಲಿದ್ದು, ರಾತ್ರೋರಾತ್ರಿ ಪ್ರಯಾಣಕ್ಕೆ ಅನುಕೂಲವಾಗಲಿದೆ.

ಬೋಗಿಗಳು: ಒಟ್ಟು 16 ಬೋಗಿಗಳಿದ್ದು, 823 ಪ್ರಯಾಣಿಕರಿಗೆ ಅವಕಾಶವಿದೆ (11 ಎಸಿ 3-ಟೈರ್, 4 ಎಸಿ 2-ಟೈರ್ ಮತ್ತು 1 ಫಸ್ಟ್ ಎಸಿ).

ಅಂದಾಜು ಟಿಕೆಟ್ ದರ (ಊಟದ ವ್ಯವಸ್ಥೆ ಒಳಗೊಂಡಿದೆ):

ಎಸಿ 3-ಟೈರ್: ಸುಮಾರು 2,500 ರೂ.

ಎಸಿ 2-ಟೈರ್: 3,000 ರೂ. ನಿಂದ 3,200 ರೂ.

ಫಸ್ಟ್ ಎಸಿ: 3,600 ರೂ. ನಿಂದ 3,900 ರೂ.

(ಗಮನಿಸಿ: ಕೇವಲ ಕನ್ಫರ್ಮ್ ಆದ ಟಿಕೆಟ್ ಪಡೆಯಲು ಮಾತ್ರ ಅವಕಾಶವಿದ್ದು, ಆರ್‌ಎಸಿ ಅಥವಾ ವೈಟಿಂಗ್ ಲಿಸ್ಟ್ ಸೌಲಭ್ಯ ಇರುವುದಿಲ್ಲ).

ಇದನ್ನೂ ಓದಿ: ಕಲಬುರ್ಗಿ, ಉಡುಪಿಯಲ್ಲಿ ಏರ್ ಕ್ವಾಲಿಟಿ ಪುನಃ ಕಳಪೆ ಮಟ್ಟಕ್ಕೆ!

ಆಧುನಿಕ ಸೌಲಭ್ಯಗಳು:

ರೈಲಿನಲ್ಲಿ ಓದುವ ದೀಪಗಳು (Reading lights), ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳು, ಆರ್ಥೋಪೆಡಿಕ್ ಬರ್ತ್‌ಗಳು ಮತ್ತು ಸಿಸಿಟಿವಿ ಕ್ಯಾಮೆರಾಗಳಿವೆ. ಸುರಕ್ಷತೆಗಾಗಿ ಭಾರತೀಯ ತಂತ್ರಜ್ಞಾನದ ‘ಕವಚ’ (Kavach) ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೈದಾನದಲ್ಲೇ ಕಿತ್ತಾಡಿಕೊಂಡ ಹಾರ್ದಿಕ್-ಬೂಮ್ರಾ – Kannada News | Hardik Pandya vs Jasprit Bumrah Clash Between Mumbai Indians Players On Field

ಮುಂಬೈ ಇಂಡಿಯನ್ಸ್​ ತಂಡ ಸತತ ಸೋಲುತ್ತಿರುವುದು ಒಂದುಕಡೆಯಾದರೆ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬಗ್ಗೆ ತಂಡದವರಿಗೇ ಅಸಮಾಧಾನ ಮೂಡಿರುವುದು ಮತ್ತೊಂದು ಕಡೆ. ಅದ್ಭುತ ಫೀಲ್ಡರ್ ಎನಿಸಿಕೊಂಡಿರೋ ಸೂರ್ಯ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬದಲಿಸಲಾಗಿದೆ. ಈ ಬಗ್ಗೆ ಅವರಿಗೆ ಅಸಮಧಾನ ಇದೆ. ಇನ್ನು, ಬ್ಯಾಟರ್ ಆಗಿ ಅವರಿಂದ ಉತ್ತಮ ಆಟ ಬರುತ್ತಿಲ್ಲ. ಇತ್ತ ಬಾಲರ್​​ಗಳಿಗೆ ಫೀಲ್ಡಿಂಗ್ ಸೆಟ್ ಮಾಡುವ ಅವಕಾಶವನ್ನು ಹಾರ್ದಿಕ್ ನೀಡುತ್ತಿಲ್ಲ. ಈ ಬಗ್ಗೆ ಬೂಮ್ರಾ ಓಪನ್ ಆಗಿಯೇ ಅಸಮಾಧಾನ ಹೊರಹಾಕಿದ್ದಾರೆ.

ಈ ಬಾರಿಯ ಐಪಿಎಲ್​​ನಲ್ಲಿ ಮುಂಬೈ ತಂಡ ಸತತ ನಾಲ್ಕನೇ ಸೋಲನ್ನು ಕಂಡಿದೆ. ಮುಂಬೈ ನೀಡಿದ 196 ರನ್​​ಗಳ ಟಾರ್ಗೆಟ್​​ನ ಪಂಜಾಬ್ ಕೇವಲ 16.3 ಓವರ್​​ಗಳಲ್ಲಿ ತಲುಪಿದೆ. ಈ ಮೂಲಕ ಏಳು ವಿಕೆಟ್​​ಗಳ ಗೆಲುವು ಕಂಡಿದೆ. ಈ ಸೋಲಿನ ಬೆನ್ನಲ್ಲೇ ತಂಡದ ಹುಳುಕು ಎದ್ದು ಕಾಣಿಸುತ್ತಿದೆ. ಬುಮ್ರಾ ಅವರು ಹಾರ್ದಿಕ್ ಬಗ್ಗೆ ಅಸಮಧಾನ ಹೊರಹಾಕುತ್ತಿರುವುದು ಕಾಣಿಸಿದೆ.

ಬೂಮ್ರಾ ತಮ್ಮ ಬಾಲಿಂಗ್​​ಗೆ ಅನುಗುಣವಾಗಿ ಫೀಲ್ಡಿಂಗ್ ಸೆಟ್ ಮಾಡಿದ್ದರು. ಆದರೆ, ಅದನ್ನು ಹಾರ್ದಿಕ್ ಬದಲಿಸಿದರು. ಆರಂಭದಲ್ಲಿ ಬೂಮ್ರಾ ವಾದಕ್ಕೆ ಇಳಿದರು. ಕೊನೆಗೆ ವಾದ ಮಾಡಿ ಪ್ರಯೋಜನ ಇಲ್ಲ ಎಂಬುದು ಅವರಿಗೆ ಗೊತ್ತಾಗಿದೆ. ಬೂಮ್ರಾ ಯಾರ ಮೇಲೂ ಸಿಟ್ಟು ಮಾಡಿಕೊಂಡವರಲ್ಲ. ಕೂಲ್ ಆಗಿ ಬಾಲ್ ಹಾಕುತ್ತಾರೆ. ಆದಾಗ್ಯೂ ಅವರ ಮುಖದಲ್ಲಿ ಅಸಮಾಧಾನ ಇರೋದು ಕಂಡುಬಂತು. ಕೊನೆಗೆ ವಾದ ಮಾಡುವುದನ್ನು ನಿಲ್ಲಿಸಿದರು. ಅಲ್ಲಿಗೆ ಕಿತ್ತಾಟ ಕೊನೆ ಆಯಿತು.

ಪಂದ್ಯ ಸೋತ ಬಳಿಕ ಮಾತನಾಡಿದ ಹಾರ್ದಿಕ್, ‘ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ಸಮಯದಲ್ಲಿ ನಾನು ಹೇಳಲು ಏನೂ ಉಳಿದಿಲ್ಲ. ನಮ್ಮಲ್ಲಿ ಏನು ಕೊರತೆಯಿದೆ ಎಂದು ನೋಡಬೇಕು. ನಾವು ಕುಳಿತು ಆ ಬಗ್ಗೆ ಯೋಚಿಸುತ್ತೇವೆ. ನಾವು ಮುಂದೆ ಏನು ಮಾಡಬಹುದು ಎಂದು ನೋಡುತ್ತೇವೆ’ ಎಂದು ಪಂದ್ಯದ ನಂತರ ಹೇಳಿದರು.

ಇದನ್ನೂ ಓದಿ: ಪಾಂಡ್ಯ ಕ್ಯಾಪ್ಟನ್ಸಿಗೆ ಕೋಕ್? ಸತತ ಸೋಲಿನ ಬಳಿಕ ತಲೆದಂಡದ ಎಚ್ಚರಿಕೆ

ಹಾರ್ದಿಕ್ ಪಾಂಡ್ಯ ವರ್ತನೆ ಬಗ್ಗೆ ತಂಡದಲ್ಲೇ ಅಸಮಾಧಾನ ಇದೆ ಎನ್ನಲಾಗಿದೆ. ಇದು ಹೀಗೆಯೇ ಮುಂದುವರಿದರೆ ಅವರನ್ನು ಕ್ಯಾಪ್ಟನ್ಸಿಯಿಂದ ಕೆಳಕ್ಕೆ ಇಳಿಸಬಹುದು. ಮೇಜರ್ ಆಪರೇಷನ್ ಆಗದೇ ಇದ್ದರೆ ಸೋಲು ಹೀಗೆಯೇ ಮುಂದುವರಿಯಲಿದೆ.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version