RCB vs SRH: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಸಿಸಲು ಬರುವವರಿಗೆ ಹೊಸ ರೂಲ್ಸ್! ಅಭಿಮಾನಿಗಳೇ ಈ ವಿಚಾರ ತಿಳಿದಿರಿ

RCB vs SRH: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಸಿಸಲು ಬರುವವರಿಗೆ ಹೊಸ ರೂಲ್ಸ್! ಅಭಿಮಾನಿಗಳೇ ಈ ವಿಚಾರ ತಿಳಿದಿರಿ

ಬೆಂಗಳೂರು, ಮಾರ್ಚ್ 26: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಮುಂಬರುವ ಐಪಿಎಲ್ ಪಂದ್ಯಗಳಿಗೆ ಭದ್ರತೆ ಮತ್ತು ಪ್ರವೇಶ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಪೊಲೀಸ್ ಅಧಿಕಾರಿಗಳು, ಪಿಡಬ್ಲ್ಯುಡಿ, ವೈದ್ಯಕೀಯ ಸೇವೆಗಳು, ಅಗ್ನಿಶಾಮಕ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಈ ಹೊಸ ವ್ಯವಸ್ಥೆಗಳ ಕುರಿತು ಪೂರ್ವಭಾವಿ ತರಬೇತಿ ನೀಡಲಾಗುತ್ತಿದೆ. ಭದ್ರತಾ ದೃಷ್ಟಿಯಿಂದ, ಹಿಂದಿನಂತೆ ಕ್ವೀನ್ಸ್ ರೋಡ್ ಬದಲು ಕಬ್ಬನ್ ರೋಡ್ ಮತ್ತು ಲಿಂಕ್ ರೋಡ್ ಮೂಲಕ ಗರಿಷ್ಠ ಸಂಖ್ಯೆಯ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಗೇಟ್‌ಗಳನ್ನು ವಿಸ್ತರಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, ಸಾರ್ವಜನಿಕರು ಮೆಟ್ರೋ (ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ, ಎಂ.ಜಿ. ರೋಡ್ ನಿಲ್ದಾಣ) ಬಳಸುವಂತೆ ಮನವಿ ಮಾಡಿದ್ದಾರೆ. ಟಿಕೆಟ್‌ಗಳ ಜೊತೆಗೆ ಕ್ಯೂಆರ್ ಕೋಡ್ ಮತ್ತು ಮೆಟ್ರೋ ಟಿಕೆಟ್‌ಗಳನ್ನು ನೀಡಲಾಗುತ್ತಿದೆ. ಅಲ್ಲದೆ, ಪಾರ್ಕಿಂಗ್ ಸ್ಲಾಟ್‌ಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಿ, ಅಲ್ಲಿಂದ ಶಟಲ್ ಬಸ್‌ಗಳ ಮೂಲಕ ಕ್ರೀಡಾಂಗಣಕ್ಕೆ ತಲುಪುವ ವ್ಯವಸ್ಥೆ ಮಾಡಲಾಗಿದೆ. ಎಲ್ಲ ಪ್ರೇಕ್ಷಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಪೊಲೀಸರು ವಿನಂತಿ ಮಾಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Ram Navami 2026: ಅದ್ದೂರಿ ರಾಮ ನವಮಿ ಆಚರಣೆಗೆ ಸಜ್ಜಾಗಿದೆ ಅಯೋಧ್ಯೆಯ ರಾಮ ಮಂದಿರ

ಅಯೋಧ್ಯೆ, ಮಾರ್ಚ್ 26: ಅಯೋಧ್ಯೆಯಲ್ಲಿ ರಾಮ ನವಮಿ (Ram Navami) ಹಿನ್ನೆಲೆಯಲ್ಲಿ ಶ್ರೀ ರಾಮ ಮಂದಿರದಲ್ಲಿ ರಾಮ ಲಲ್ಲಾನಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ನವರಾತ್ರಿಯ ಮೊದಲ ದಿನದಿಂದ ಇಂದಿನವರೆಗೆ ಹಲವು ಆಚರಣೆಗಳನ್ನು ನಡೆಸಲಾಯಿತು. ಭಾರತ ಮತ್ತು ವಿದೇಶಗಳಾದ್ಯಂತ ಭಕ್ತರು ಶ್ರೀರಾಮನ ಪವಿತ್ರ ಜನ್ಮಭೂಮಿಯಲ್ಲಿ ರಾಮ ನವಮಿಗೆ ಆಗಮಿಸಿದ್ದಾರೆ. ಅಲಂಕೃತವಾದ ರಾಮನನ್ನು ಕಣ್ತುಂಬಿಕೊಳ್ಳಲು ಭಕ್ತರು ಸಾಲುಗಟ್ಟಿ ನಿಂತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತೈಲ ಅವಲಂಬನೆ ತಗ್ಗಿಸಲು ಚೀನಾ ಸೂಪರ್ ಐಡಿಯಾ; 55 ಲಕ್ಷ ಕೋಟಿ ರೂ ವೆಚ್ಚದಲ್ಲಿ ಸೂಪರ್​ಗ್ರಿಡ್

ನವದೆಹಲಿ, ಮಾರ್ಚ್ 26: ತಂತ್ರಜ್ಞಾನ ಮತ್ತು ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ಧಿಯಲ್ಲಿ ಚೀನಾ (China) ಬಹಳ ವೇಗವಾಗಿ ಸಾಗುತ್ತಿದೆ. ಇಡೀ ಜಗತ್ತು ತೈಲ ಬಿಕ್ಕಟ್ಟಿನಲ್ಲಿ ತಲೆ ಮೇಲೆ ಕೈಹೊತ್ತು ಕೂತರೆ, ಚೀನಾ ಸದ್ದಿಲ್ಲದೆ ಮಹಾ ಕ್ರಾಂತಿಯಲ್ಲಿ ತೊಡಗಿದೆ. ಭಾರತವು ಎಲ್​ಪಿಜಿ ಬಿಕ್ಕಟ್ಟಿನಲ್ಲಿ ಪಿಎನ್​ಜಿ ಇನ್​ಫ್​ರಾಸ್ಟ್ರಕ್ಚರ್ ಅನ್ನು ಸಮರೋಪಾದಿಯಲ್ಲಿ ಅಭಿವೃದ್ಧಿಪಡಿಸಲು ಮುಂದಾಗಿರುವಂತೆ, ಚೀನಾ ಬಹಳ ಹಿಂದೆಯೇ ತೈಲ ಅವಲಂಬನೆ ತಗ್ಗಿಸಲು ಸೂಪರ್ ಐಡಿಯಾ ಹಾಕಿತ್ತು. ಇದೀಗ ಅದು ಕಾರ್ಯಗತಗೊಳ್ಳುತ್ತಿದೆ. ಇದು ಚೀನಾದ್ಯಂತ ಎಲೆಕ್ಟ್ರಿಕ್ ಹೈವೇ ನಿರ್ಮಿಸುವ ಭಾರೀ ಯೋಜನೆ.

ಏನಿದು ಎಲೆಕ್ಟ್ರಿಕ್ ಹೈವೇ?

ಚೀನಾದ ಹೆಚ್ಚಿನ ನಗರಗಳು ಮತ್ತು ಜನಸಂಖ್ಯೆ ಇರುವುದು ಪೂರ್ವ ಭಾಗದಲ್ಲಿ. ನೈಸರ್ಗಿಕ ಸಂಪನ್ಮೂಲಗಳು ಹೆಚ್ಚು ಇರುವುದು ಪಶ್ಚಿಮ ಭಾಗಗಳಲ್ಲಿ. ಬಹುತೇಕ ಉದ್ಯಮಗಳೆಲ್ಲಾ ನೆಲಸಿರುವುದು ಪೂರ್ವ ಭಾಗದ ನಗರಗಳಲ್ಲಿ. ಇಲ್ಲಿ ಸಿಕ್ಕಾಪಟ್ಟೆ ವಿದ್ಯುತ್ ಬೇಕು. ಇದನ್ನು ಪೂರೈಸಲು ಚೀನಾ ನಾನಾ ಮಾರ್ಗೋಪಾಯಗಳನ್ನು ಹೊಂದಿದೆ. ಕಲ್ಲಿದ್ದಲು ಘಟಕ, ಜಲವಿದ್ಯುತ್, ವಾಯುಶಕ್ತಿ, ಸೌರಶಕ್ತಿ ಹೀಗೆ ವಿವಿಧ ರೀತಿಯಲ್ಲಿ ವಿದ್ಯುತ್ ಉತ್ಪಾದನೆ ಮಾಡುತ್ತದೆ.

ಇದನ್ನೂ ಓದಿ: 2026-27ರಲ್ಲಿ ಭಾರತದ ಜಿಡಿಪಿ ಶೇ. 7.1ರಷ್ಟು ವೃದ್ಧಿ: ಎಸ್ ಅಂಡ್ ಪಿ ಗ್ಲೋಬಲ್ ಏಜೆನ್ಸಿ ಅಂದಾಜು

ವಿವಿಧ ಭಾಗಗಳಲ್ಲಿ ಉತ್ಪಾದನೆಯಾಗುವ ವಿದ್ಯುತ್ ಅನ್ನು, ಅದರ ಅಗತ್ಯ ಇರುವ ಪ್ರದೇಶಗಳಿಗೆ ಸಾಗಿಸಲು ಚೀನಾ ಇಡೀ ದೇಶಾದ್ಯಂತ ಅಲ್ಟ್ರಾ ಹೈವೋಲ್ಟೇಜ್ ಟ್ರಾನ್ಸ್​ಮಿಶನ್ ನೆಟ್ವರ್ಕ್ ನಿರ್ಮಿಸುತ್ತಿದೆ. ಈ ಜಾಲದಲ್ಲಿ ಬಹಳ ಸಮರ್ಪಕವಾಗಿ ವಿದ್ಯುತ್ ಅನ್ನು ಸಾಗಿಸಬಹುದು. ಬಹಳ ಸರಳ ಪರಿಕಲ್ಪನೆ. ಆದರೆ, ಅನುಷ್ಠಾನಗೊಳಿಸುವುದು ಸವಾಲಿನ ಕೆಲಸ.

ವರದಿಗಳ ಪ್ರಕಾರ, ಈ ಮಹಾ ಎಲೆಕ್ಟ್ರಿಕ್ ಹೈವೇ ಅಥವಾ ಸೂಪರ್ ಗ್ರಿಡ್ ಯೋಜನೆ ಜಾರಿಗೆ 574 ಬಿಲಿಯನ್ ಡಾಲರ್ ವ್ಯಯವಾಗುತ್ತದೆ. ಅಂದರೆ ಸುಮಾರು 55 ಲಕ್ಷ ಕೋಟಿ ರೂನಷ್ಟು ವೆಚ್ಚವಾಗುವ ಬೃಹತ್ ಯೋಜನೆ. ಪಾಕಿಸ್ತಾನದ ಒಟ್ಟೂ ಜಿಡಿಪಿಗಿಂತಲೂ ಅಧಿಕವಾದುದು. ಚೀನಾ ಈಗಾಗಲೇ ಈ ಯೋಜನೆಯನ್ನು ನಿರ್ಮಿಸಲು ತೊಡಗಿದೆ.

ಇದನ್ನೂ ಓದಿ: ಭಾರತದಲ್ಲಿ ಪಿಎನ್​ಜಿ ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ಧಿಗೆ ನಾಂದಿ ಹಾಡುತ್ತಿದೆ ಎಲ್​ಪಿಜಿ ಬಿಕ್ಕಟ್ಟು

ದೇಶಾದ್ಯಂತ ಅಲ್ಟ್ರಾ ಹೈವೋಲ್ಟೇಜ್ ಟ್ರಾನ್ಸ್​ಮಿಶನ್ ಕಾರಿಡಾರ್​ಗಳನ್ನು ನಿರ್ಮಿಸಲಾಗುತ್ತದೆ. ಸೌರಶಕ್ತಿ, ವಾಯುಶಕ್ತಿ ಇತ್ಯಾದಿ ನವೀಕರಣ ಇಂಧನವನ್ನು ಈ ಕಾರಿಡಾರ್ ಮೂಲಕ ಬೇರೆಡೆ ಸಾಗಿಸಲು ಸಾಧ್ಯವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಭಯೋತ್ಪಾದಕರ ನಂಟು ಆರೋಪ: ಬಳ್ಳಾರಿಯ ಯುವಕ ಸೇರಿ ದೇಶಾದ್ಯಂತ 12 ಮಂದಿ ಬಂಧನ

ಬಳ್ಳಾರಿ, ಮಾರ್ಚ್​​ 26: ಮೂಲಭೂತವಾದದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಹಾಗೂ ಭಯೋತ್ಪಾದಕರ ನಂಟು ಶಂಕೆ ಹಿನ್ನೆಲೆ ಬಳ್ಳಾರಿ ಮೂಲದ ಓರ್ವ ಯುವಕ ಸೇರಿದಂತೆ ದೇಶದ ವಿವಿಧ ರಾಜ್ಯದ 12 ಮಂದಿಯನ್ನು ಆಂಧ್ರ ಪ್ರದೇಶದ ವಿಜಯವಾಡ ಪೊಲೀಸರು ಬಂಧಿಸಿದ್ದಾರೆ. ಬಳ್ಳಾರಿ ನಗರದ ಅಬ್ದುಲ್ ಸಲಾಮ್ (36) ರಾಜ್ಯದಲ್ಲಿ ಅರೆಸ್ಟ್​​ ಆಗಿರುವ ಆರೋಪಿ. ಕರ್ನಾಟಕ ಸೇರಿದಂತೆ ಆಂಧ್ರ, ಬಿಹಾರ, ಮಹಾರಾಷ್ಟ್ರ ಒಳಗೊಂಡು ವಿವಿಧ ರಾಜ್ಯಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

ಸಲಾಮ್ ಕುರಿತ ಖಚಿತ ಮಾಹಿತಿ ಆಧರಿಸಿ ಬಳ್ಳಾರಿಗೆ ಬಂದಿದ್ದ ಆಂಧ್ರ ಪ್ರದೇಶ ಪೊಲೀಸರು, ಕೌಲ್ ಬಜಾರ್ ಪೊಲೀಸ್ ಠಾಣೆಯ ಸಿಬ್ಬಂದಿ ನೆರವಿನೊಂದಿಗೆ ಸಲಾಮ್ ಬಂಧಿಸಿದ್ದಾರೆ. ಪಂಚನಾಮೆ ಬಳಿಕ ನ್ಯಾಯಾಲಯಕ್ಕೆ ಆತನನ್ನು ಹಾಜರುಪಡಿಸಿ ಹೆಚ್ಚಿನ ವಿಚಾರಣೆ ಅಗತ್ಯವಿರುವ ಹಿನ್ನೆಲೆ ಆಂಧ್ರ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಉಗ್ರವಾದ ಹರಡುವುದು ಮತ್ತು ಭಯೋತ್ಪದನಾ ಸಂಘಟನೆಗಳ ನಂಟು ಹೊಂದಿರುವವರ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಪೊಲೀಸರು, ಈ ಬಗ್ಗೆ ಮಾರ್ಚ್ 23ರಂದು ವಿಜಯವಾಡ ಟೌನ್ ಠಾಣೆಯಲ್ಲಿ FIR ದಾಖಲಿಸಿ ತನಿಖೆ ಆರಂಭಿಸಿದ್ದರು.

ಇದನ್ನೂ ಓದಿ: ಆಂಧ್ರದ ಮಾರ್ಕಪುರಂನಲ್ಲಿ ಹೊತ್ತಿ ಉರಿದ ಬಸ್; 10 ಜನ ಸಜೀವದಹನ

ಸರ್ಚ್ ವಾರೆಂಟ್ ಪಡೆದು ಕಾರ್ಯಾಚರಣೆಗಿಳಿದಿದ್ದ ಖಾಕಿ ಟೀಂ, ವಿಜಯವಾಡದ ವಿಂಚ್‌ಪೇಟ್​​ನಲ್ಲಿ ಪ್ರಮುಖ ಅರೋಪಿ ಮೊಹಮ್ಮದ್ ರೆಹಮತುಲ್ಲಾ ಷರೀಫ್ (23) ಎಂಬಾತನನ್ನು ಬಂಧಿಸಿದ್ದರು. ಈ ವೇಳೆ ಸಾಮಾಜಿಕ ಮಾಧ್ಯಮಗಳ ಮೂಲಕ ಸಿದ್ದಾಂತ ಮತ್ತು ಮೂಲಭೂತವಾದಿ ಐಎಸ್‌ಐಎಸ್ ಸಂಘಟನೆಗಳ ವಿಚಾರಧಾರೆ ಪ್ರಚಾರ ನಿರತರ ಬಗ್ಗೆ ಆತ ನೀಡಿದ್ದ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿ 12 ಮಂದಿಯನ್ನು ಬಂಧಿಸಲಾಗಿದೆ.

ತನಿಖೆಯಲ್ಲಿ ತಿಳಿದುಬಂದಂತೆ, ಅಲ್ ಮಾಲಿಕ್ ಇಸ್ಲಾಮಿಕ್ ಯೂತ್ ಎಂಬ ಗುಂಪನ್ನು ರಚಿಸಿ ಯುವಕರನ್ನ ಜಿಹಾದ್‌ಗೆ ಪ್ರೇರೇಪಿಸುವುದಕ್ಕೂ ಪ್ರಯತ್ನಿಸುತ್ತಿದ್ದರು. ಸಾಮಾಜಿಕ ಜಾಲತಾಣಗಳ ಮೂಲಕ ಅತಿರೇಕದ ವಿಷಯಗಳನ್ನು ಹಂಚಿಕೊಂಡು ತಮ್ಮ ಜಾಲವನ್ನು ವಿಸ್ತರಿಸಿದ್ದರು. ಈ ಗುಂಪು ಬಿಹಾರ, ದೆಹಲಿ, ಪಶ್ಚಿಮ ಬಂಗಾಳ, ರಾಜಸ್ಥಾನ, ಕರ್ನಾಟಕ ಮತ್ತು ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವಿವಿಧ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಿ ಕಾರ್ಯಚಟುವಟಿಕೆ ನಡೆಸುತ್ತಿತ್ತು ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

 

 

 

Source link

‘ಕೆಡಿ’ ಸಿನಿಮಾನಲ್ಲಿ ಕಿಚ್ಚ ಸುದೀಪ್: ಕಾಲ ಭೈವರವ ಅವತಾರ ರಿವೀಲ್

ಧ್ರುವ ಸರ್ಜಾ (Dhruva Sarja) ನಟನೆಯ ‘ಕೆಡಿ’ ಸಿನಿಮಾದ ಹಾಡು ಇತ್ತೀಚೆಗೆ ಭಾರಿ ವಿವಾದ ಸೃಷ್ಟಿಸಿತು. ಲೋಕಸಭೆಯಲ್ಲಿ ಸಹ ಈ ಬಗ್ಗೆ ಚರ್ಚೆಗಳು ನಡೆದವು. ಸಿನಿಮಾದ ಹಾಡನ್ನು ಸಹ ಹಿಂಪಡೆಯಲಾಯ್ತು. ಇದು ಸಿನಿಮಾಕ್ಕೆ ದೊಡ್ಡ ಹಿನ್ನಡೆ ಎಂಬ ಚರ್ಚೆಗಳು ನಡೆದವು. ಇದೀಗ ‘ಕೆಡಿ’ ಸಿನಿಮಾದಿಂದ ಹೊಸ ಅಪ್​​ಡೇಟ್ ಹೊರಬಿದ್ದಿದೆ. ‘ಕೆಡಿ’ ಸಿನಿಮಾನಲ್ಲಿ ಕಿಚ್ಚ ಸುದೀಪ್ ನಟಿಸಿದ್ದು, ಇದೀಗ ಅವರ ಪೋಸ್ಟರ್ ಒಂದನ್ನು ಹೊರಬಿಡಲಾಗಿದೆ.

ಸುದೀಪ್ ಅವರು ‘ಕೆಡಿ’ ಸಿನಿಮಾದ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಸುದೀಪ್ ಪಾತ್ರದ ಹೆಸರು ‘ಕಾಲಭೈರವ’. ‘ಕಾಲ ಭೈರವ’ನ ಪೋಸ್ಟರ್ ಅನ್ನು ಇದೀಗ ಚಿತ್ರತಂಡ ಬಿಡುಗಡೆ ಆಗಿದೆ. ವಾರಣಾಸಿಯ ಹಿನ್ನೆಲೆಯಲ್ಲಿ ಸುದೀಪ್ ಅವರು ರುದ್ರಾಕ್ಷಿ ಮಾಲೆ ಹಿಡಿದು ಸ್ಟೈಲ್ ಆಗಿ ನಿಂತಿರುವ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಹಂಚಿಕೊಂಡಿದೆ. ‘ಕಾಲ ಭೈವರ’ ಈ ಹೆಸರೇ ಭಯ ಹುಟ್ಟಿಸುತ್ತದೆ’ ಎಂಬ ಟ್ಯಾಗ್ ಲೈನ್ ಅನ್ನು ಸಹ ನೀಡಲಾಗಿದೆ.

ಪ್ರೇಮ್ ಅವರ ‘ದಿ ವಿಲನ್’ ಸಿನಿಮಾನಲ್ಲಿ ಸುದೀಪ್ ನಟಿಸಿದ್ದರು. ಇದೀಗ ‘ಕೆಡಿ’ ಸಿನಿಮಾದ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಧ್ರುವ ಸರ್ಜಾ ನಟನೆಯ ಸಿನಿಮಾನಲ್ಲಿ ಮೊದಲ ಬಾರಿಗೆ ಕಿಚ್ಚ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ‘ಕೆಡಿ’ ಸಿನಿಮಾನಲ್ಲಿ ಹಲವು ಸ್ಟಾರ್ ನಟ, ನಟಿಯರು ಇದ್ದಾರೆ. ಇದೀಗ ಆ ತಂಡಕ್ಕೆ ಸುದೀಪ್ ಸಹ ಸೇರಿಕೊಂಡಿದ್ದಾರೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ, ರಮೇಶ್ ಅರವಿಂದ್, ಅಭಿಜಿತ್, ರವಿಚಂದ್ರನ್ ಇನ್ನೂ ಹಲವರು ಸಿನಿಮಾದ ವಿಶೇಷ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ:ಸಾಗರದ ಮಾರಿಕಾಂಬಾ ಜಾತ್ರೆಗೆ ತಾರೆಯರ ಮೆರುಗು; ಧ್ರುವ ಸರ್ಜಾ, ರಚಿತಾ ರಾಮ್ ಭೇಟಿ

ಸುದೀಪ್ ಅವರು ತಮ್ಮ ಆಪ್ತರ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸುತ್ತಲೇ ಬಂದಿದ್ದಾರೆ. ಹೊಸಬರ ಸಿನಿಮಾಗಳಲ್ಲಿಯೂ ಸುದೀಪ್ ಅವರು ಕೆಲಸ ಮಾಡಿದ್ದಾರೆ. ಈ ಹಿಂದೆ ಆರ್ ಚಂದ್ರು ನಿರ್ದೇಶನ ಮಾಡಿದ್ದ ‘ಕಬ್ಜ’ ಸಿನಿಮಾನಲ್ಲಿಯೂ ಸುದೀಪ್ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಆ ಪಾತ್ರ ಮುಖ್ಯವಾದ ಪಾತ್ರವಾಗಿತ್ತು. ಈಗ ‘ಕೆಡಿ’ ಸಿನಿಮಾನಲ್ಲಿಯೂ ಸಹ ಸುದೀಪ್ ಕಾಣಿಸಿಕೊಂಡಿದ್ದಾರೆ.

ಧ್ರುವ ಸರ್ಜಾ ನಾಯಕನಾಗಿ ನಟಿಸಿರುವ ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದ್ದು, ಸಿನಿಮಾ ನಿರ್ದೇಶನ ಮಾಡಿರುವುದು ಪ್ರೇಮ್. ಸಿನಿಮಾ ಏಪ್ರಿಲ್ 30ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಿಜೆಪಿ ಚಪ್ಪಲಿ ವಿವಾದ; ದೇವಿಯನ್ನು 101 ಲೀಟರ್ ಹಾಲು, 25 ಲೀಟರ್ ಮೊಸರು, ತುಪ್ಪದಿಂದ ಕಾಂಗ್ರೆಸ್‌ ಶುದ್ಧೀಕರಣ

ದಾವಣಗೆರೆ, ಮಾ,26: ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಆವರಣಕ್ಕೆ ಬಿಜೆಪಿ ಮುಖಂಡರು ಚಪ್ಪಲಿ ಧರಿಸಿ ಪ್ರವೇಶಿಸಿದ್ದಾರೆ ಎಂಬ ವಿಚಾರ ಈಗ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ದೇವಸ್ಥಾನ ಅಪವಿತ್ರಗೊಂಡಿದೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರು ದೇವಿಗೆ ವಿಶೇಷ ಹಾಲಿನ ಅಭಿಷೇಕ ಮಾಡುವ ಮೂಲಕ ‘ಶುದ್ಧೀಕರಣ’ ನಡೆಸಿದ್ದಾರೆ. ಮಾರ್ಚ್ 24ರಂದು ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸುವ ಕೊನೆಯ ದಿನದಂದು ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಸೇರಿದಂತೆ ಪ್ರಮುಖ ಬಿಜೆಪಿ ನಾಯಕರು ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ದೇವಸ್ಥಾನದ ಪಾದಗಟ್ಟೆ ಮುಂದಿನ ಅಂಗಳಕ್ಕೆ ಚಪ್ಪಲಿ ಧರಿಸಿಯೇ ಪ್ರವೇಶ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಘಟನೆಯಿಂದ ದೇವಸ್ಥಾನ ಅಪವಿತ್ರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡರು, ಇಂದು 101 ಲೀಟರ್ ಹಾಲು, 25 ಲೀಟರ್ ಮೊಸರು, ತುಪ್ಪ ಹಾಗೂ ಜೇನುತುಪ್ಪದಿಂದ ದುರ್ಗಾಂಬಿಕಾ ದೇವಿಗೆ ಮಹಾಭಿಷೇಕ ಮಾಡಿದರು. ಅಲ್ಲದೆ ದೇವಿಯ ಉತ್ಸವ ಮೂರ್ತಿಯನ್ನು ಹೊತ್ತು ದೇವಸ್ಥಾನ ಪ್ರದಕ್ಷಿಣೆ ಹಾಕುವ ಮೂಲಕ ಭಕ್ತಿ ಸಮರ್ಪಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಬಿ.ಜಿ. ಅಜಯಕುಮಾರ್, “ಅಭಿಮಾನಿಗಳು ನಾಯಕರನ್ನು ಹೆಗಲ ಮೇಲೆ ಹೊತ್ತುಕೊಂಡು ಹೋದ ಸಂಭ್ರಮದಲ್ಲಿ ನೇರವಾಗಿ ಪ್ರಾಂಗಣಕ್ಕೆ ಪ್ರವೇಶಿಸಿದ್ದಾರೆ. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ, ನಾವು ಗರ್ಭಗುಡಿಗೆ ಚಪ್ಪಲಿ ಒಯ್ದಿಲ್ಲ. ಅವಸರದಲ್ಲಿ ನಡೆದ ತಪ್ಪನ್ನು ರಾಜಕೀಯ ಮಾಡುವುದು ಬೇಡ” ಎಂದು ಮನವಿ ಮಾಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆರ್​​ಸಿಬಿ ಹೆಸರು ಬದಲಾವಣೆ ವಿಷಯ; ಅಭಿಮಾನಿಗಳಿಗೆ ಗುಡ್​ನ್ಯೂಸ್ ಕೊಟ್ಟ ಅನನ್ಯಾ ಬಿರ್ಲಾ

ಯುನೈಟೆಡ್‌ ಸ್ಪಿರಿಟ್ಸ್‌ ಲಿಮಿಟೆಡ್‌ ಆರ್​​​ಸಿಬಿ (RCB) ತಂಡವನ್ನು ಆದಿತ್ಯ ಬಿರ್ಲಾ ಗ್ರೂಪ್​​​ಗೆ ಮಾರಾಟ ಮಾಡಿದೆ. 16,706 ಕೋಟಿ ರೂಪಾಯಿಗೆ ಈ ಡೀಲ್ ಪೂರ್ಣಗೊಂಡಿದೆ. ಟೈಮ್ಸ್ ಆಫ್ ಇಂಡಿಯಾ ಸೇರಿ ಕೆಲವು ಕಂಪನಿಗಳು ಆದಿತ್ಯಾ ಬಿರ್ಲಾಗೆ ಬೆಂಬಲ ನೀಡಿವೆ. ಈ ಮಧ್ಯೆ ಆರ್​​​ಸಿಬಿ ಹೆಸರು ಬದಲಾವಣೆ ಆಗುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿತ್ತು. ಈ ವದಂತಿ ಬಗ್ಗೆ ಅನನ್ಯಾ ಬಿರ್ಲಾ ಸ್ಪಷ್ಟನೆ ಕೊಟ್ಟಿದ್ದಾರೆ. ಈ ವಿಷಯಗಳಿಗೆ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ರಾಯಲ್ ಚಾಲೆಂಜ್ ವಿಸ್ಕಿ ಬ್ರ್ಯಾಂಡ್ ಪ್ರಚಾರ ಮಾಡುವ ಉದ್ದೇಶದಿಂದ ವಿಜಯ್ ಮಲ್ಯ ಅವರು ರಾಯಲ್ ಚಾಲೆಂಜ್ ಹೆಸರನ್ನು ಆಯ್ಕೆ ಮಾಡಿಕೊಂಡಿದ್ದರು. ಮಲ್ಯ ಬೆಂಗಳೂರಿನವರು. ಹೀಗಾಗಿ, ತಂಡದಲ್ಲಿ ಬೆಂಗಳೂರು ಬರುವಂತ ನೋಡಿಕೊಂಡರು. ಎಲ್ಲವನ್ನೂ ಸೇರಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಹೆಸರು ಇಟ್ಟರು. ಈ ಹೆಸರು ಈಗ ಅಭಿಮಾನಿಗಳ ಜೊತೆ ಭಾವನಾತ್ಮಕವಾಗಿ ಕನೆಕ್ಟ್ ಆಗಿದೆ. ಹೀಗಾಗಿ, ಹೆಸರು ಬದಲಿಸಿದಂತೆ ಕೋರಿಕೊಳ್ಳಲಾಗುತ್ತಿತ್ತು. ಇದಕ್ಕೆ ಅನನ್ಯಾ ಪಾಸಿಟಿವ್ ಆಗಿ ಪ್ರತಿಕ್ರಿಯಿಸಿದ್ದಾರೆ.

ಈ ಮೊದಲು ಆರ್​​ಸಿಬಿ ಹೆಸರು ಇಂಗ್ಲಿಷ್​ ಅಲ್ಲಿ ‘Royal Challengers Bangalore’ ಎಂದಿತ್ತು. ನಂತರ Bangalore ಅನ್ನು Bengaluru ಎಂದು ಬದಲಿಸಲಾಯಿತು. ಈ ಮೂಲಕ ಕನ್ನಡಿಗರ ಭಾವನೆಗೆ ಬೆಲೆ ಕೊಡಲಾಗಿತ್ತು. ಈಗ ಹೊಸ ಮಾಲೀಕರು ತಂಡ ಬದಲಿಸುತ್ತಾರೆ ಎಂದು ಹೇಳಲಾಗುತ್ತಾ ಬರಲಾಯಿತು. ಆದರೆ, ಆ ರೀತಿ ಇಲ್ಲ ಎಂಬುದು ಅನನ್ಯಾ ಸ್ಪಷ್ಟನೆ. ‘ಆರ್​​​ಸಿಬಿ ಹೆಸರು ಬದಲಾಗುವುದಿಲ್ಲ’ ಎಂದು ಇನ್​​ಸ್ಟಾ ಸ್ಟೇಟಸ್​​​ನಲ್ಲಿ ಹಂಚಿಕೊಳ್ಳಲಾದ ಪೋಸ್ಟ್​ ಅನ್ನು ಅನನ್ಯಾ ಶೇರ್ ಮಾಡಿಕೊಂಡಿದ್ದಾರೆ. ಈ ಮೂಲಕ ಅಭಿಮಾನಿಗಳ ಆತಂಕವನ್ನು ದೂರ ಮಾಡಿದ್ದಾರೆ.

ಇದನ್ನೂ ಓದಿ: ​​RCB ಮಾರಾಟದ ಬೆನ್ನಲ್ಲೇ ಮಹತ್ವದ ಕೋರಿಕೆ ಇಟ್ಟ ವಿಜಯ್ ಮಲ್ಯ

ಇಷ್ಟು ದಿನಗಳ ಕಾಲ ಹೈದರಾಬಾದ್ ತಂಡ ಮಾಲೀಕರಾದ ಕಾವ್ಯಾ ಮಾರನ್ ಅವರು ಸಾಕಷ್ಟು ಮಿಂಚುತ್ತಿದ್ದಾರೆ. ಅವರಿಗೆ ಕಾಂಪಿಟೇಷನ್ ಕೊಡೋಕೆ ಅನನ್ಯಾ ಬಂದಿದ್ದಾರೆ ಎಂಬ ಮಾತು ಕೂಡ ಕೇಳಿ ಬಂದಿದೆ. ಹೀಗಾಗಿ, ಆರ್​​ಸಿಬಿ ಪಂದ್ಯಗಳಲ್ಲಿ ಇವರು ಹೈಲೈಟ್ ಆಗಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ನಾವು ಫ್ರೆಂಡ್ಸ್; ಭಾರತ ಸೇರಿದಂತೆ 5 ದೇಶಗಳಿಗೆ ಹಾರ್ಮುಜ್ ಪ್ರವೇಶಕ್ಕೆ ಇರಾನ್ ಅನುಮತಿ

ಟೆಹ್ರಾನ್, ಮಾರ್ಚ್ 26: ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷದ ಮಧ್ಯೆ ಇರಾನ್ ಭಾರತಕ್ಕೆ ಗುಡ್ ನ್ಯೂಸ್ ನೀಡಿದೆ. ಇಂಧನ ಹಡಗುಗಳ ಸಾಗಾಟಕ್ಕೆ ನಿರ್ಣಾಯಕವಾಗಿರುವ ಹಾರ್ಮುಜ್ ಜಲಸಂಧಿಯೊಳಗೆ (Strait of Hormuz) ಪ್ರವೇಶಿಸಲು ಭಾರತಕ್ಕೆ ಅನುಮತಿ ನೀಡಲಾಗಿದೆ. ವಿಶ್ವದ ತೈಲದ ಐದನೇ ಒಂದು ಭಾಗದಷ್ಟು ಹಡಗುಗಳ ಸಂಚಾರಕ್ಕೆ ಪ್ರಮುಖ ಮಾರ್ಗವಾಗಿರುವ ಪರ್ಷಿಯನ್ ಕೊಲ್ಲಿಯ ಕಿರಿದಾದ ಜಲಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಕಳೆದ ತಿಂಗಳು ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್ ಇರಾನ್ ವಿರುದ್ಧ ಯುದ್ಧವನ್ನು ಪ್ರಾರಂಭಿಸಿದಾಗಿನಿಂದ ಇರಾನ್ ಬಂದ್ ಮಾಡಿತ್ತು.

ಇದೀಗ ಭಾರತ ಸೇರಿದಂತೆ ಇರಾನ್​ನ 5 ಸ್ನೇಹಿತ ರಾಷ್ಟ್ರಗಳಿಗೆ ಹಾರ್ಮುಜ್ ಜಲಸಂಧಿಯನ್ನು ಪ್ರವೇಶಿಸಲು ಅನುಮತಿ ನೀಡಲಾಗಿದೆ. ಈ ಬಗ್ಗೆ ಇರಾನಿನ ರಾಜ್ಯ ಟಿವಿಯೊಂದಿಗೆ ಮಾತನಾಡಿದ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ, “ಹಲವು ಹಡಗುಗಳ ಮಾಲೀಕರು ಅಥವಾ ಈ ಹಡಗುಗಳನ್ನು ಹೊಂದಿರುವ ದೇಶಗಳು ನಮ್ಮನ್ನು ಸಂಪರ್ಕಿಸಿ ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸಲು ಅನುಮತಿ ಪಡೆದಿದ್ದವು. ಅವರಿಗೆ ನಾವು ಸುರಕ್ಷಿತ ಮಾರ್ಗವನ್ನು ಒದಗಿಸಿದ್ದೇವೆ. ನಾವು ಸ್ನೇಹಪರ ರಾಷ್ಟ್ರಗಳೆಂದು ಪರಿಗಣಿಸುವ ಕೆಲವು ದೇಶಗಳಿಗೆ ಈ ಜಲಮಾರ್ಗವನ್ನು ಬಳಸಲು ಅನುಮತಿ ನೀಡಲಾಗಿದೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಅಮೆರಿಕದ ಎಫ್-18 ಯುದ್ಧವಿಮಾನವನ್ನು ಹೊಡೆದುರುಳಿಸಿದ ವಿಡಿಯೋ ಬಿಡುಗಡೆ ಮಾಡಿದ ಇರಾನ್

“ಚೀನಾ, ರಷ್ಯಾ, ಪಾಕಿಸ್ತಾನ, ಇರಾಕ್ ಮತ್ತು ಭಾರತದ ಎರಡು ಹಡಗುಗಳು ಕೆಲವು ರಾತ್ರಿಗಳ ಹಿಂದೆ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋದವು. ಇನ್ನೂ ಕೆಲವು ದೇಶಗಳು ಕೂಡ ನಮ್ಮೊಂದಿಗೆ ಮಾತನಾಡಿ, ನಮ್ಮೊಂದಿಗೆ ಸಮನ್ವಯ ಸಾಧಿಸಿವೆ. ನಮ್ಮ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ದೇಶಗಳಿಗೆ ಈ ಜಲಮಾರ್ಗ ಬಳಸಲು ಯಾವುದೇ ಅಡ್ಡಿಪಡಿಸುವುದಿಲ್ಲ. ಆದರೆ, ಶತ್ರು ದೇಶಗಳಿಗೆ ಹಾರ್ಮುಜ್ ಜಲಸಂಧಿಯೊಳಗೆ ಪ್ರವೇಶಿಸಲು ಅನುಮತಿ ನೀಡುವುದಿಲ್ಲ” ಎಂದು ಅವರು ಹೇಳಿದ್ದಾರೆ.

ಪ್ರಸ್ತುತ ಬಿಕ್ಕಟ್ಟಿನಲ್ಲಿ ಪಾತ್ರವಹಿಸುವ ಅಮೆರಿಕ, ಇಸ್ರೇಲ್ ಮತ್ತು ಕೆಲವು ಗಲ್ಫ್ ರಾಷ್ಟ್ರಗಳ ಹಡಗುಗಳಿಗೆ ಹಾರ್ಮುಜ್ ಜಲಸಂಧಿಯ ಮೂಲಕ ಸಾಗಲು ಅನುಮತಿ ನೀಡಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಇರಾನ್ ನನ್ನನ್ನು ಸುಪ್ರೀಂ ಲೀಡರ್ ಆಗಿ ಮಾಡಲು ಬಯಸಿತ್ತು, ನಾನೇ ಒಪ್ಪಲಿಲ್ಲ; ಟ್ರಂಪ್ ಹೊಸ ವರಸೆ

ಗಮನಿಸಬೇಕಾದ ವಿಷಯವೆಂದರೆ ಈ ವಾರದ ಆರಂಭದಲ್ಲಿ ಇರಾನ್ ಪಾಕಿಸ್ತಾನಕ್ಕೆ ಹೋಗುವ ಕಂಟೇನರ್ ಹಡಗನ್ನು ಹಾರ್ಮುಜ್ ಜಲಸಂಧಿಯನ್ನು ದಾಟದಂತೆ ತಡೆದಿತ್ತು. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಪ್ರಕಾರ, ಯುನೈಟೆಡ್ ಅರಬ್ ಎಮಿರೇಟ್ಸ್‌ನ ಶಾರ್ಜಾದಿಂದ ಕರಾಚಿ ಕಡೆಗೆ ಪ್ರಯಾಣಿಸುತ್ತಿದ್ದ SELEN ಎಂಬ ಹಡಗು ಸಾಗಾಟಕ್ಕೆ ಅನುಮತಿ ಪಡೆಯದ ಕಾರಣದಿಂದ ಹಾರ್ಮುಜ್ ಜಲಮಾರ್ಗದ ಪ್ರವೇಶದ್ವಾರದಲ್ಲಿ ವಾಪಾಸ್ ತೆರಳಬೇಕಾಯಿತು.

ಹಾರ್ಮುಜ್ ಜಲಸಂಧಿ ಏಕೆ ಮುಖ್ಯ?:

ಹಾರ್ಮುಜ್ ಜಲಸಂಧಿಯು ವಿಶ್ವದ ಅತ್ಯಂತ ನಿರ್ಣಾಯಕ ಇಂಧನ ಕಾರಿಡಾರ್‌ಗಳಲ್ಲಿ ಒಂದಾಗಿದೆ. ಇದು ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಕತಾರ್, ಕುವೈತ್, ಇರಾಕ್, ಬಹ್ರೇನ್ ಮತ್ತು ಇರಾನ್‌ನಂತಹ ದೇಶಗಳಿಂದ ಕಚ್ಚಾ ತೈಲ ಮತ್ತು ಎಲ್‌ಎನ್‌ಜಿ ರಫ್ತಿಗೆ ಅನುಕೂಲ ಮಾಡಿಕೊಡುತ್ತದೆ. ಈ ಮಾರ್ಗದ ಮೂಲಕ ಸಂಚರಿಸುವ ಪ್ರಮುಖ ಗ್ರಾಹಕರಲ್ಲಿ ಭಾರತ, ಚೀನಾ, ಜಪಾನ್ ಮತ್ತು ದಕ್ಷಿಣ ಕೊರಿಯಾ ಸೇರಿವೆ. ಭಾರತವು ತನ್ನ ಕಚ್ಚಾ ತೈಲದ ಸುಮಾರು 40 ಪ್ರತಿಶತ ಮತ್ತು ಅದರ ಎಲ್‌ಎನ್‌ಜಿಯ ಶೇ. 54ಕ್ಕಿಂತ ಹೆಚ್ಚು ಈ ಜಲಮಾರ್ಗದ ಮೂಲಕ ಆಮದು ಮಾಡಿಕೊಳ್ಳುತ್ತದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Gold Rates: ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ; ಇಲ್ಲಿದೆ ದರಪಟ್ಟಿ

ಬೆಂಗಳೂರು, ಮಾರ್ಚ್ 26: ಚಿನ್ನದ ಬೆಲೆ ಸತತ ಎರಡನೇ ಬಾರಿ ಹೆಚ್ಚಿದೆ. ನಿನ್ನೆ ಭರ್ಜರಿಯಾಗಿ ಏರಿದ್ದ ಬಂಗಾರದ ದರ (Gold Rates) ಇವತ್ತು ಗುರುವಾರ ಸ್ವಲ್ಪ ಮಟ್ಟಿಗೆ ಹೆಚ್ಚಳ ಕಂಡಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಇದರ ಬೆಲೆಯಲ್ಲಿ ಏರಿಕೆಯಾಗಿದೆ. ಕೆಲವೆಡೆ ಮಾತ್ರ ಬೆಲೆ ತುಸು ತಗ್ಗಿದೆ. ಇನ್ನು, ಬೆಳ್ಳಿ ಬೆಲೆ ಇವತ್ತು ಯಥಾಸ್ಥಿತಿಯಲ್ಲಿದೆ. ನಿನ್ನೆಯ ದರವೇ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,34,650 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,46,890 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,34,650 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 25,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 26,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮಾರ್ಚ್ 26ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,689 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,465 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,017 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,689 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,465 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,465 ರೂ
  • ಚೆನ್ನೈ: 13,670 ರೂ
  • ಮುಂಬೈ: 13,465 ರೂ
  • ದೆಹಲಿ: 13,480 ರೂ
  • ಕೋಲ್ಕತಾ: 13,465 ರೂ
  • ಕೇರಳ: 13,465 ರೂ
  • ಅಹ್ಮದಾಬಾದ್: 13,470 ರೂ
  • ಜೈಪುರ್: 13,480 ರೂ
  • ಲಕ್ನೋ: 13,480 ರೂ
  • ಭುವನೇಶ್ವರ್: 13,465 ರೂ

ಇದನ್ನೂ ಓದಿ: ಪಿಎಂ ಎಸ್​ವೈಎಂ ಸ್ಕೀಮ್; ತಿಂಗಳಿಗೆ ಕೇವಲ 55 ರೂ ಹೂಡಿಕೆ; ಉತ್ತಮ ಮಾಸಿಕ ವರಮಾನ ಸೃಷ್ಟಿ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 558 ರಿಂಗಿಟ್ (13,117 ರುಪಾಯಿ)
  • ದುಬೈ: 510 ಡಿರಾಮ್ (13,032 ರುಪಾಯಿ)
  • ಅಮೆರಿಕ: 142 ಡಾಲರ್ (13,328 ರುಪಾಯಿ)
  • ಸಿಂಗಾಪುರ: 180.90 ಸಿಂಗಾಪುರ್ ಡಾಲರ್ (13,244 ರುಪಾಯಿ)
  • ಕತಾರ್: 506.50 ಕತಾರಿ ರಿಯಾಲ್ (13,037 ರೂ)
  • ಸೌದಿ ಅರೇಬಿಯಾ: 516 ಸೌದಿ ರಿಯಾಲ್ (12,910 ರುಪಾಯಿ)
  • ಓಮನ್: 54 ಒಮಾನಿ ರಿಯಾಲ್ (13,166 ರುಪಾಯಿ)
  • ಕುವೇತ್: 41.75 ಕುವೇತಿ ದಿನಾರ್ (12,779 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 250 ರೂ
  • ಚೆನ್ನೈ: 260 ರೂ
  • ಮುಂಬೈ: 250 ರೂ
  • ದೆಹಲಿ: 250 ರೂ
  • ಕೋಲ್ಕತಾ: 250 ರೂ
  • ಕೇರಳ: 260 ರೂ
  • ಅಹ್ಮದಾಬಾದ್: 250 ರೂ
  • ಜೈಪುರ್: 250 ರೂ
  • ಲಕ್ನೋ: 250 ರೂ
  • ಭುವನೇಶ್ವರ್: 260 ರೂ
  • ಪುಣೆ: 250

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ತುಂಗಭದ್ರಾ ಡ್ಯಾಂ ಬಗ್ಗೆ ಸರ್ಕಾರದಿಂದ ಬಿಗ್ ಅಪ್​ಡೇಟ್: ರೈತರು ಫುಲ್ ಖುಷ್

ಕೊಪ್ಪಳ, ಮಾರ್ಚ್ 26: ತುಂಗಭದ್ರಾ ಜಲಾಶಯದ (Tungabhadra Dam) ಕ್ರೆಸ್ಟ್ ಗೇಟ್ ಸಂಖ್ಯೆ 19 ಕಿತ್ತುಹೋದ ಘಟನೆ ಬಳಿಕ ಎರಡು ವರ್ಷಗಳಿಂದ ನಾಲ್ಕು ಜಿಲ್ಲೆಗಳ ರೈತರು ಎದುರಿಸುತ್ತಿದ್ದ ಸಂಕಷ್ಟಕ್ಕೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಗೇಟ್‌ಗಳ ಬದಲಾವಣೆಯ ಜೊತೆಗೆ ಇದೀಗ ಅವುಗಳನ್ನು ಕಾರ್ಯನಿರ್ವಹಿಸಲು ಅಗತ್ಯವಾದ ಚೈನ್‌ಗಳನ್ನೂ ಬದಲಾಯಿಸಲು ನಿರ್ಧರಿಸಲಾಗಿದೆ. 2024ರ ಆಗಸ್ಟ್ 10ರಂದು ರಾತ್ರಿ ಕ್ರೆಸ್ಟ್ ಗೇಟ್ ಸಂಖ್ಯೆ 19 ಕಿತ್ತುಹೋಗಿದ್ದು, ಇದಕ್ಕೆ ಮೂಲ ಕಾರಣ ಗೇಟ್‌ಗಳ ಅವಧಿ ಮೀರಿದ್ದರೂ ಅವುಗಳನ್ನು ಬದಲಾಯಿಸದಿರುವುದು ಹಾಗೂ ಚೈನ್ ಡಿಲಿಂಕ್ ಆಗಿರುವುದು ಎಂದು ತಜ್ಞರು ತಿಳಿಸಿದ್ದರು. ಈ ಘಟನೆ ನಂತರ ಸರ್ಕಾರ ಎಚ್ಚೆತ್ತುಕೊಂಡು ಸಂಪೂರ್ಣ ಗೇಟ್‌ಗಳ ಬದಲಾವಣೆಗೆ ಮುಂದಾಯಿತು.

ಸುಮಾರು 42 ಕೋಟಿ ರೂ. ವೆಚ್ಚದಲ್ಲಿ 33 ಗೇಟ್‌ಗಳನ್ನು ಬದಲಾಯಿಸುವ ಕಾಮಗಾರಿ ಆರಂಭವಾದರೂ, ಆರಂಭದಲ್ಲಿ ಚೈನ್‌ಗಳನ್ನು ಬದಲಾಯಿಸದೇ ಹಳೆಯ ಚೈನ್‌ಗಳನ್ನೇ ಮುಂದುವರಿಸಲು ನಿರ್ಧರಿಸಲಾಗಿತ್ತು. ಇದಕ್ಕೆ ರೈತರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಸರ್ಕಾರ ತನ್ನ ನಿರ್ಧಾರವನ್ನು ಪರಿಷ್ಕರಿಸಿದೆ.

ತುಂಗಭದ್ರಾ ಡ್ಯಾಂ ಎಲ್ಲ ಗೇಟ್​ಗಳಿಗೆ ಹೊಸ ಚೈನ್

ಇದೀಗ ಎಲ್ಲಾ 33 ಗೇಟ್‌ಗಳಿಗೆ ಹೊಸ ಚೈನ್‌ಗಳನ್ನು ಅಳವಡಿಸಲು ಸುಮಾರು 5.5 ಕೋಟಿ ರೂ. ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು, ಗೇಟ್‌ಗಳ ಜೊತೆಗೆ ಚೈನ್‌ಗಳನ್ನೂ ಬದಲಾಯಿಸಲಾಗುವುದು ಎಂದು ತಿಳಿಸಿದ್ದಾರೆ.

ಇದೀಗ ಕಾಮಗಾರಿ ವೇಗ ಪಡೆದುಕೊಂಡಿದ್ದು, ಈಗಾಗಲೇ 18 ಗೇಟ್‌ಗಳ ಡಿಮೆಟಲಿಂಗ್ ಕಾರ್ಯ ಪೂರ್ಣಗೊಂಡಿದೆ. ಐದು ಹೊಸ ಗೇಟ್‌ಗಳನ್ನು ಅಳವಡಿಸಲಾಗಿದ್ದು, ಉಳಿದ ಗೇಟ್‌ಗಳ ಕಾರ್ಯವೂ ನಿರಂತರವಾಗಿ ಸಾಗುತ್ತಿದೆ. ಗುತ್ತಿಗೆ ಪಡೆದ ಕಂಪನಿಗೆ ಮೇ ಅಂತ್ಯದೊಳಗೆ ಎಲ್ಲ ಗೇಟ್‌ಗಳನ್ನು ಅಳವಡಿಸಲು ಸರ್ಕಾರ ಗಡುವು ನೀಡಿದೆ.

ಸಚಿವ ಬೋಸರಾಜು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿ, ಮೇ ಅಂತ್ಯ ಅಥವಾ ಜೂನ್ ಮೊದಲ ವಾರದೊಳಗೆ ಸಂಪೂರ್ಣ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದೂ ತಿಳಿಸಿದ್ದಾರೆ.

ಇದನ್ನೂ ಓದಿ: ತುಂಗಭದ್ರಾ ಜಲಾಶಯದ ಮೊದಲ ಕ್ರಸ್ಟ್ ಗೇಟ್ ಅಳವಡಿಕೆ ಯಶಸ್ವಿ: ಅದರ ಭಾರ, ಅಗಲ-ಉದ್ದ ಎಷ್ಟು ಗೊತ್ತಾ?

ಇನ್ನೊಂದೆಡೆ, ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ ಎಂಬ ಆತಂಕವೂ ವ್ಯಕ್ತವಾಗುತ್ತಿದೆ. ಗೇಟ್ ಬದಲಾವಣೆ ವಿಳಂಬವಾದರೆ ಮುಂದಿನ ವರ್ಷವೂ ಬೇಸಿಗೆ ಬೆಳೆಗಾಗಿ ನೀರಿನ ಸಮಸ್ಯೆ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ, ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸಮನ್ವಯದಿಂದ ಕೆಲಸ ಮಾಡಿ, ರೈತರ ಸಮಸ್ಯೆ ಶೀಘ್ರದಲ್ಲೇ ಪರಿಹರಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

ಒಟ್ಟಾರೆ, ತುಂಗಭದ್ರಾ ಜಲಾಶಯದ ಗೇಟ್ ಬದಲಾವಣೆ ಕಾರ್ಯ ಈಗ ನಿರ್ಣಾಯಕ ಹಂತ ತಲುಪಿದ್ದು, ಸಮಯಕ್ಕೆ ಸರಿಯಾಗಿ ಪೂರ್ಣಗೊಂಡರೆ ಸಾವಿರಾರು ರೈತರು ನಿರಾಳರಾಗಲಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version