Viral: ಸಾವಿನ ಮನೆಯಲ್ಲೂ ಸಂಭ್ರಮ; ಭಾರಿ ಸೌಂಡ್ ಮಾಡುತ್ತಿದೆ ‘ಡ್ಯಾನ್ಸಿಂಗ್ ಅಂಡರ್‌ಟೇಕರ್ಸ್’ ಟ್ರೆಂಡ್! – Kannada News | Peru’s Dancing Undertakers: Celebrating Life with Unique Funeral Trends and Joyful Farewell

ಸಾವಿನ ಮನೆಯಲ್ಲೂ ಸಂಭ್ರಮImage Credit source: Twitter

ಸಾಮಾನ್ಯವಾಗಿ ಸಾವು ಎಂದರೆ ಅಲ್ಲಿ ಕಣ್ಣೀರು, ದುಃಖ ಮತ್ತು ಮೌನ ಮನೆಮಾಡಿರುತ್ತದೆ. ಆದರೆ ದಕ್ಷಿಣ ಅಮೆರಿಕಾದ ದೇಶವಾದ ಪೆರು (Peru) ನಲ್ಲಿ ಈಗ ಅಂತ್ಯಸಂಸ್ಕಾರದ ಹಳೆಯ ಪದ್ಧತಿಯನ್ನೇ ಬದಲಾಯಿಸುವಂತಹ ಹೊಸದೊಂದು ವಿಶಿಷ್ಟ ಟ್ರೆಂಡ್ ವೇಗವಾಗಿ ಹರಡುತ್ತಿದೆ. ಅಲ್ಲಿ ಸಾಂಪ್ರದಾಯಿಕ ಶೋಕಾಚರಣೆಯ ಬದಲಾಗಿ, ಮೃತರ ಅಂತಿಮಯಾತ್ರೆಯನ್ನು ಹಬ್ಬದಂತೆ ಸಂಭ್ರಮಿಸುವ “ಡ್ಯಾನ್ಸಿಂಗ್ ಅಂಡರ್‌ಟೇಕರ್ಸ್” (los portadores bailarines – ನೃತ್ಯ ಮಾಡುವ ಶವವಾಹಕರು) ಪರಿಕಲ್ಪನೆ ಜನಪ್ರಿಯವಾಗುತ್ತಿದೆ. ಈ ಹೊಸ ಆಚರಣೆಯ ಕುರಿತಾದ ಕೆಲವು ಪ್ರಮುಖ ಮತ್ತು ಆಸಕ್ತಿದಾಯಕ ಅಂಶಗಳು ಇಲ್ಲಿವೆ

ಕಣ್ಣೀರಿನ ಬದಲು ನೃತ್ಯದ ವಿದಾಯ:

ಈ ಪದ್ಧತಿಯಲ್ಲಿ ವಿಶೇಷವಾಗಿ ತರಬೇತಿ ಪಡೆದ ಯುವಕರ ತಂಡವೊಂದು ಶವಪೆಟ್ಟಿಗೆಯನ್ನು ಹೆಗಲ ಮೇಲೆ ಹೊತ್ತು, ಜೋರಾದ ಸಂಗೀತಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ನೃತ್ಯ ಮಾಡುತ್ತದೆ. ಮೃತರ ಕುಟುಂಬಸ್ಥರು ಕಣ್ಣೀರು ಹಾಕುವ ಬದಲು ಅವರ ನೆನಪುಗಳನ್ನು ನಗುತ್ತಾ ಸಂಭ್ರಮಿಸಬೇಕು ಎಂಬುದು ಇದರ ಹಿಂದಿನ ಆಶಯ.

ಆಫ್ರಿಕಾದ ಘಾನಾ ಶೈಲಿಯ ಪ್ರೇರಣೆ:

ಕೆಲವು ವರ್ಷಗಳ ಹಿಂದೆ ಆಫ್ರಿಕಾದ ಘಾನಾ ದೇಶದ “ಡ್ಯಾನ್ಸಿಂಗ್ ಪಾಲ್‌ಬಿಯರರ್ಸ್” ವೀಡಿಯೋಗಳು ಜಾಗತಿಕವಾಗಿ ವೈರಲ್ ಆಗಿದ್ದವು. ಅದೇ ಶೈಲಿಯನ್ನು ಈಗ ಪೆರು ದೇಶದ ಸಂಸ್ಕೃತಿಗೆ ತಕ್ಕಂತೆ ಅಳವಡಿಸಿಕೊಳ್ಳಲಾಗಿದೆ.

ಮೃತರ ನೆಚ್ಚಿನ ಹಾಡುಗಳಿಗೆ ಸ್ಟೆಪ್ಸ್:

ಅಂತ್ಯಸಂಸ್ಕಾರದ ಸಮಯದಲ್ಲಿ ಮೃತಪಟ್ಟ ವ್ಯಕ್ತಿಗೆ ಇಷ್ಟವಾದ ಜನಪ್ರಿಯ ಗೀತೆಗಳನ್ನು ಹಾಕಲಾಗುತ್ತದೆ. ಶವಪೆಟ್ಟಿಗೆಯನ್ನು ಹೊತ್ತ ತಂಡವು ಅತ್ಯಂತ ಜಾಗರೂಕತೆಯಿಂದ ಮತ್ತು ಲಯಬದ್ಧವಾಗಿ ನೃತ್ಯ ಮಾಡುತ್ತಾ ಸ್ಮಶಾನದತ್ತ ಸಾಗುತ್ತದೆ.

ಇದನ್ನೂ ಓದಿ: ಹೈದರಾಬಾದ್​​ನಲ್ಲಿ ಇರುವಂತೆ ಬೆಂಗಳೂರು ರಸ್ತೆಗಳು ಯಾಕಿಲ್ಲ? ಕೆನಡಾ ವ್ಯಕ್ತಿಯ ವಿಡಿಯೋ ವೈರಲ್

ಬದಲಾಗುತ್ತಿರುವ ಜನರ ಮನಸ್ಥಿತಿ:

“ನಮ್ಮ ಪ್ರೀತಿಪಾತ್ರರು ಜಗತ್ತನ್ನು ಬಿಟ್ಟು ಹೋಗುವಾಗ ದುಃಖದ ವಾತಾವರಣ ಇರಬಾರದು, ಬದಲಿಗೆ ಅವರು ಬದುಕಿದ ಜೀವನವನ್ನು ನಾವು ಆಚರಿಸಬೇಕು” ಎಂದು ಪೆರುವಿನ ಅನೇಕ ಕುಟುಂಬಗಳು ಈ ಹೊಸ ಆಲೋಚನೆಯನ್ನು ಮುಕ್ತವಾಗಿ ಸ್ವೀಕರಿಸುತ್ತಿದ್ದಾರೆ.

ಒಂದು ಸಣ್ಣ ಇತಿಹಾಸ:

ಈ ರೀತಿಯ ಆಚರಣೆಗಳು ಕೇವಲ ಇತ್ತೀಚಿನ ಟ್ರೆಂಡ್ ಅಷ್ಟೇ ಅಲ್ಲ, ಜಗತ್ತಿನ ಕೆಲವು ಪುರಾತನ ಬುಡಕಟ್ಟು ಸಂಸ್ಕೃತಿಗಳಲ್ಲಿ ‘ಸಾವು’ ಎನ್ನುವುದನ್ನು ಮುಂದಿನ ಲೋಕದ ಹೊಸ ಪ್ರಯಾಣದ ಆರಂಭ ಎಂದು ನಂಬಿ ಸಂಭ್ರಮಿಸುವ ಪದ್ಧತಿ ಮೊದಲಿನಿಂದಲೂ ಇತ್ತು. ಈಗ ಅದು ಆಧುನಿಕ ರೂಪ ಪಡೆದುಕೊಂಡಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಧೋನಿ ಕಾರಣ CSK ತಂಡಕ್ಕೆ ಕೋಚ್ ಆಗಲು ಹಿಂದೇಟು! – Kannada News | CSK Coach Crisis: The Dhoni Dilemma

ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಸೀಸನ್ ಮುಕ್ತಾಯದ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ (CSK) ಫ್ರಾಂಚೈಸಿಯಲ್ಲಿ ಭಾರಿ ಬದಲಾವಣೆಯಾಗುವ ಮುನ್ಸೂಚನೆ ಸಿಕ್ಕಿದೆ. ಈ ಬದಲಾವಣೆಯೊಂದಿಗೆ ಸಿಎಸ್​ಕೆ ತಂಡದ ಕೋಚ್ ಕೂಡ ಬದಲಾಗಲಿದ್ದಾರೆ. ಅಂದರೆ ಪ್ರಸ್ತುತ ಕೋಚ್ ಸ್ಟೀಫನ್ ಫ್ಲೆಮಿಂಗ್ ಬದಲಿಗೆ ಹೊಸ ತರಬೇತುದಾರರನ್ನು ಆಯ್ಕೆ ಮಾಡಲು ಸಿಎಸ್​ಕೆ ಮ್ಯಾನೇಜ್ಮೆಂಟ್ ನಿರ್ಧರಿಸಿದೆ.  ಆದರೆ, ತಂಡಕ್ಕೆ ಹೊಸ ಮುಖ್ಯ ಕೋಚ್ ಅನ್ನು ನೇಮಕ ಮಾಡುವ ಸಿಎಸ್​ಕೆ ಮ್ಯಾನೇಜ್‌ಮೆಂಟ್ ಪ್ರಯತ್ನಕ್ಕೆ “ಧೋನಿಯ ಉಪಸ್ಥಿತಿಯೇ” ದೊಡ್ಡ ಸವಾಲಾಗಿ ಪರಿಣಮಿಸಿದೆ.

ಕೋಚ್ ಹುದ್ದೆ ಅಲಂಕರಿಸಲು ದಿಗ್ಗಜರ ಹಿಂಜರಿಕೆ!

ವರದಿಗಳ ಪ್ರಕಾರ, ಸಿಎಸ್‌ಕೆ ಮ್ಯಾನೇಜ್‌ಮೆಂಟ್ ರಾಹುಲ್ ದ್ರಾವಿಡ್ ಸೇರಿದಂತೆ ಭಾರತದ ಪ್ರಮುಖ ಹಿರಿಯ ಕೋಚ್‌ಗಳನ್ನು ಸಂಪರ್ಕಿಸಿದೆ. ಆದರೆ, ಯಾವುದೇ ಹೈ-ಪ್ರೊಫೈಲ್ ಕೋಚ್ ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಿದ್ಧರಿಲ್ಲ ಎನ್ನಲಾಗುತ್ತಿದೆ. ಇದಕ್ಕೆ ಮುಖ್ಯ ಕಾರಣಗಳು ಇಲ್ಲಿವೆ:

  • ನಿರ್ಧಾರಗಳ ಸ್ವತಂತ್ರ ಕೊರತೆಯ ಭೀತಿ: ಸಿಎಸ್‌ಕೆ ತಂಡದಲ್ಲಿ ಎಂ.ಎಸ್. ಧೋನಿ ಅವರ ಪ್ರಭಾವ ಅಪಾರವಾಗಿದೆ. ಹೊಸದಾಗಿ ಬರುವ ಕೋಚ್‌ಗಳಿಗೆ ತಮಗೆ ಬೇಕಾದಂತೆ ತಂಡವನ್ನು ಪುನರ್ರಚಿಸಲು ಅಥವಾ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಧೋನಿಯವರ ಇರುವಿಕೆ ಅಡ್ಡಿಯಾಗಬಹುದು ಎಂಬ ಆತಂಕ ಕೋಚ್‌ಗಳಲ್ಲಿದೆ.
  • ಧೋನಿ ಭವಿಷ್ಯದ ಅನಿಶ್ಚಿತತೆ: ಧೋನಿ ಮುಂದಿನ ಸೀಸನ್‌ನಲ್ಲಿ ಆಟಗಾರನಾಗಿ ಮುಂದುವರಿಯುತ್ತಾರಾ ಅಥವಾ ಮೆಂಟರ್ ಆಗಿ ಮ್ಯಾನೇಜ್‌ಮೆಂಟ್ ಸೇರುತ್ತಾರಾ ಎಂಬುದು ಇನ್ನೂ ಅಧಿಕೃತವಾಗಿಲ್ಲ. ಈ ಗೊಂದಲ ಬಗೆಹರಿಯದ ಹೊರತು ತಂಡದ ದೀರ್ಘಕಾಲದ ತಂತ್ರಗಳನ್ನು ರೂಪಿಸುವುದು ಕೋಚ್‌ಗಳಿಗೆ ಕಷ್ಟ ಸಾಧ್ಯ.

ಅಶ್ವಿನ್ ನೀಡಿದ ಹೊಸ ಟ್ವಿಸ್ಟ್!

ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಕೋಚ್ ಆಯ್ಕೆಯೇ ದೊಡ್ಡ ಸಮಸ್ಯೆಯಾಗಿರುವುದನ್ನು ಮನಗಂಡಿರುವ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ಸೋಷಿಯಲ್ ಮೀಡಿಯಾ ಮೂಲಕ ಆಸಕ್ತಿದಾಯಕ ಸಲಹೆಯೊಂದನ್ನು ನೀಡಿದ್ದಾರೆ.

“ಸಿಎಸ್‌ಕೆ ತಂಡ ಹೊಸ ಕೋಚ್‌ಗಾಗಿ ಹೊರಗೆ ಹುಡುಕುವ ಅಗತ್ಯವಿಲ್ಲ. ಎಂ.ಎಸ್. ಧೋನಿ ಅವರೇ ನೇರವಾಗಿ ತಂಡದ ಮುಂದಿನ ಮುಖ್ಯ ಕೋಚ್ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇದು ನಿಜವಾದಲ್ಲಿ ಸಿಎಸ್‌ಕೆಯ ಕೋಚಿಂಗ್ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ಸಿಕ್ಕಂತಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: 1 ಗೆಲುವು, 2 ತಂಡಗಳ ಜಯ: ಹೀಗಿದೆ ಪಂಜಾಬ್ ಕಿಂಗ್ಸ್​ ಪ್ಲೇಆಫ್ ಲೆಕ್ಕಾಚಾರ

ಮುಂದಿನ ಹಾದಿ ಏನು?

ಇಂಡಿಯನ್ ಪ್ರೀಮಿಯರ್ ಲೀಗ್ 2027 ರಲ್ಲಿ ಮಿನಿ ಹರಾಜು ನಡೆಯಲಿದೆ. ಪ್ರಸ್ತುತ ತಂಡದಲ್ಲಿರುವ ಕೆಲ ಆಟಗಾರರು ಕೈ ಬಿಟ್ಟು ಬಲಿಷ್ಠ ಪಡೆಯನ್ನು ರೂಪಿಸಬೇಕಾದ ಅನಿವಾರ್ಯತೆ ಚೆನ್ನೈ ಸೂಪರ್ ಕಿಂಗ್ಸ್​ ಫ್ರಾಂಚೈಸಿ ಮುಂದಿದೆ. ಅದಕ್ಕೂ ಮುನ್ನ ಸಿಎಸ್​ಕೆ ಹೊಸ ಕೋಚ್ ಅನ್ನು ನೇಮಕ ಮಾಡಬೇಕಿದೆ.

ಅಂದರೆ, ಧೋನಿ ತಮ್ಮ ನಿವೃತ್ತಿ ಅಥವಾ ಭವಿಷ್ಯದ ನಡೆ ಕುರಿತು ನೀಡುವ ಅಂತಿಮ ನಿರ್ಧಾರದ ಮೇಲೆಯೇ ಸಿಎಸ್‌ಕೆಯ ಮುಂದಿನ ಭವಿಷ್ಯ ಮತ್ತು ಹೊಸ ಕೋಚ್ ನೇಮಕಾತಿ ಪ್ರಕ್ರಿಯೆ ಅವಲಂಬಿತವಾಗಿದೆ. ಹೀಗಾಗಿಯೇ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಕೂಡ ಮಹೇಂದ್ರ ಸಿಂಗ್ ಧೋನಿಯ ಮುಂದಿನ ನಿರ್ಧಾರವನ್ನು ಎದುರು ನೋಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

Source link

ತನಿಷಾ ಕುಪ್ಪಂಡ ಜೊತೆ ಅಸಭ್ಯವಾಗಿ ವರ್ತಿಸಿದ ಫೋಟೋಗ್ರಾಫರ್; ನಟಿಯ ನೇರ ಕ್ಲಾಸ್ – Kannada News | Tanisha Kuppanda Slams Photographer for Inappropriate Behavior: A Bold Warning

‘ಕನ್ನಡ ಬಿಗ್ ಬಾಸ್ ಸೀಸನ್ 10’ರ ಖ್ಯಾತ ಸ್ಪರ್ಧಿ ಹಾಗೂ ನಟಿ ತನಿಷಾ ಕುಪ್ಪಂಡ ಅವರು (Tanisha Kuppanda ) ತಮ್ಮ ಜೊತೆ ಅಸಭ್ಯವಾಗಿ ನಡೆದುಕೊಂಡವರ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇತ್ತೀಚಿನ ದಿನಗಳಲ್ಲಿ ಚಿತ್ರರಂಗದ ನಟಿಯರನ್ನು ಟಾರ್ಗೆಟ್ ಮಾಡುತ್ತಿರುವ ಕಿಡಿಗೇಡಿಗಳಿಗೆ ತಮ್ಮದೇ ಶೈಲಿಯಲ್ಲಿ ಖಡಕ್ ವಾರ್ನಿಂಗ್ ನೀಡಿರುವ ತನಿಷಾ, ಯಾರೂ ಕೂಡ ನನ್ನ ತಾಳ್ಮೆಯನ್ನು ಪರೀಕ್ಷಿಸಲು ಬರಬೇಡಿ ಎಂದು ಗುಡುಗಿದ್ದಾರೆ.

ಇತ್ತೀಚೆಗಷ್ಟೇ ನಟಿ ರುಕ್ಮಿಣಿ ವಸಂತ್ ಅವರ ಹೆಸರಿನಲ್ಲಿ ನಕಲಿ ಬಿಕಿನಿ ವಿಡಿಯೋಗಳನ್ನು ಸೃಷ್ಟಿಸಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿತ್ತು. ಇದಕ್ಕೆ ರುಕ್ಮಿಣಿ ಎಚ್ಚರಿಕೆ ನೀಡಿದ್ದರು. ಈ ಘಟನೆಯ ಬೆನ್ನಲ್ಲೇ ತನಿಷಾ ಕುಪ್ಪಂಡ ಮಾಡಿರುವ ಇನ್‌ಸ್ಟಾಗ್ರಾಮ್ ಪೋಸ್ಟ್ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇಂಟರ್ನೆಟ್ ಲೋಕದಲ್ಲಿ ಸೆಲೆಬ್ರಿಟಿಗಳ, ಅದರಲ್ಲೂ ಮುಖ್ಯವಾಗಿ ಮಹಿಳಾ ನಟಿಯರ ತೇಜೋವಧೆ ಮಾಡುತ್ತಿರುವ ವ್ಯಕ್ತಿ ವಿರುದ್ಧ ತನಿಷಾ ತೀವ್ರವಾಗಿ ಗರಂ ಆಗಿದ್ದಾರೆ.

ತಮ್ಮ ಸ್ಟೇಟಸ್‌ನಲ್ಲಿ ಬರೆದುಕೊಂಡಿರುವ ತನಿಷಾ, ‘ಕೆಲವು ಕೆಟ್ಟ ಫೋಟೋಗ್ರಾಫರ್​​ಗಳು ಬಂದು ಕಲಾವಿದರ ಬಳಿ ನಾನ್​ಸೆನ್ಸ್​ ಮಾತನಾಡುತ್ತಾರೆ. ಫೋಟೋಶೂಟ್ ಮಾಡುವ ಯೋಗ್ಯತೆ ಇಲ್ಲ ಅಂದರೆ ಕೇಳಬಾರದು. ನಿಮ್ಮಂತ 3ರ್​​ಡ್​ ಕ್ಲಾಸ್ ಫೋಟೋಗ್ರಾಫರ್​​ಗಳಿಂದ ಬೇರೆ ಛಾಯಾಗ್ರಹಕರಿಗೆ ಅವಮಾನ’ ಎಂದು ತನಿಷಾ ಹೇಳಿದ್ದಾರೆ. ಅನಿಲ್ ಕುಮಾರ್ ಎಂಬ ಛಾಯಾಗ್ರಾಹಕ ಫೋಟೋಗ್ರಾಫಿ ಹೆಸರಲ್ಲಿ ಡೇಟ್​​ಗೆ ಕರೆದಿದ್ದಾರೆ.

ಇದನ್ನೂ ಓದಿ:  ‘ಇದು ನನ್ನ ಕರಿಯರ್​​ಗೆ ಟ್ವಿಸ್ಟ್ ಕೊಟ್ಟ ಸಿನಿಮಾ’; ‘ಶೇರ್’ ಚಿತ್ರ ಹಾಡಿ ಹೊಗಳಿದ ತನಿಷಾ

ಬಿಗ್ ಬಾಸ್ ಮನೆಯಲ್ಲೂ ತಮ್ಮ ನೇರ ನಡೆ ಹಾಗೂ ಬೋಲ್ಡ್ ಸ್ವಭಾವದಿಂದಲೇ ಗುರುತಿಸಿಕೊಂಡಿದ್ದ ತನಿಷಾ, ಈಗ ಸೋಶಿಯಲ್ ಮೀಡಿಯಾ ಕಿರುಕುಳದ ವಿರುದ್ಧವೂ ಧ್ವನಿ ಎತ್ತಿರುವುದಕ್ಕೆ ಅಭಿಮಾನಿಗಳಿಂದ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಈ ಜಾಲಕ್ಕೆ ಬ್ರೇಕ್ ಬೀಳಲೇಬೇಕು ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಕಿಡಿಗೇಡಿಗಳಿಗೆ ತನಿಷಾ ನೀಡಿರುವ ಈ ಖಡಕ್ ಸಂದೇಶ ಸದ್ಯ ಗಾಂಧಿನಗರದ ವಲಯದಲ್ಲಿ ಭಾರಿ ವೈರಲ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪರೀಕ್ಷೆ ಮುಗಿದ ಹತ್ತೇ ನಿಮಿಷದಲ್ಲಿ ಫಲಿತಾಂಶ ಪ್ರಕಟ! ವಿದ್ಯಾರ್ಥಿಗಳ ವಾಟ್ಸಪ್‌ಗೇ ಬಂತು ರಿಸಲ್ಟ್ – Kannada News | VTU Exam Results in 10 Minutes: Visvesvaraya Technological University Creates History

ಪರೀಕ್ಷೆ ಮುಗಿದ ಹತ್ತೇ ನಿಮಿಷದಲ್ಲಿ ಫಲಿತಾಂಶ ಪ್ರಕಟ

ಬೆಳಗಾವಿ, ಮೇ 23: ದೇಶದ ಇಂಜಿನಿಯರಿಂಗ್ ಶಿಕ್ಷಣ ರಂಗದಲ್ಲಿ ಹಿಂದೆಂದೂ ಕೇಳರಿಯದ ಅಪರೂಪದ ಮತ್ತು ಐತಿಹಾಸಿಕ ದಾಖಲೆಯೊಂದಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ಸಾಕ್ಷಿಯಾಗಿದೆ. ರಾಜ್ಯದ 200ಕ್ಕೂ ಹೆಚ್ಚು ಇಂಜಿನಿಯರಿಂಗ್ ಕಾಲೇಜುಗಳನ್ನು ಒಳಗೊಂಡಿರುವ ವಿಟಿಯು, ಬಿಇ ಹಾಗೂ ಬಿ.ಟೆಕ್ ಅಂತಿಮ ಸೆಮಿಸ್ಟರ್ ಪರೀಕ್ಷೆ ಮುಗಿದ ಕೇವಲ ಹತ್ತೇ ನಿಮಿಷಗಳಲ್ಲಿ ಫಲಿತಾಂಶ ಪ್ರಕಟಿಸಿ ಇತಿಹಾಸ ನಿರ್ಮಿಸಿದೆ.

ಮುಖ್ಯಾಂಶಗಳು

  • ವಿಟಿಯು ಪರೀಕ್ಷೆ ಮುಗಿದ ಕೇವಲ ಹತ್ತೇ ನಿಮಿಷದಲ್ಲಿ ಫಲಿತಾಂಶ ಪ್ರಕಟಿಸಿದೆ.
  • ಅತ್ಯಾಧುನಿಕ ಡಿಜಿಟಲ್ ಸಾಫ್ಟ್‌ವೇರ್ ಬಳಸಿ ಆಟೋಮ್ಯಾಟಿಕ್ ಆಗಿ ಮೌಲ್ಯಮಾಪನ ಮಾಡಲಾಗಿದೆ.
  • ಇಂಜಿನಿಯರಿಂಗ್ ಅಂತಿಮ ವರ್ಷದ ಫಲಿತಾಂಶವನ್ನು ವಿದ್ಯಾರ್ಥಿಗಳ ವಾಟ್ಸಪ್‌ಗೆ ಕಳುಹಿಸಲಾಗಿದೆ.

ವಾಟ್ಸಪ್‌ಗೇ ಬಂತು ರಿಸಲ್ಟ್

ಶುಕ್ರವಾರ ಸಂಜೆ 5:30ಕ್ಕೆ ಬಿಇ ಮತ್ತು ಬಿ.ಟೆಕ್ ಅಂತಿಮ ಸೆಮಿಸ್ಟರ್ ಪರೀಕ್ಷೆಗಳು ಮುಕ್ತಾಯಗೊಂಡಿದ್ದವು. ಸರಿಯಾಗಿ 10 ನಿಮಿಷಗಳ ಬಳಿಕ, ಅಂದರೆ ಸಂಜೆ 5:40ರ ವೇಳೆಗೆ ವಿಶ್ವವಿದ್ಯಾಲಯವು ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ ಬಾರಿ ಕ್ರಾಂತಿಕಾರಿ ಡಿಜಿಟಲ್ ತಂತ್ರಜ್ಞಾನದ ನೆರವೇರಿಕೆಯಿಂದ ಫಲಿತಾಂಶದ ವಿವರಗಳನ್ನು ನೇರವಾಗಿ ವಿದ್ಯಾರ್ಥಿಗಳ ಮೊಬೈಲ್‌ನ ವಾಟ್ಸಪ್ ಸಂಖ್ಯೆಗೆ ರವಾನಿಸಲಾಗಿದೆ. ಈ ಬಾರಿ ಒಟ್ಟು 56,192 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಶೇಕಡಾ 99.98 ರಷ್ಟು ಅಭೂತಪೂರ್ವ ತೇರ್ಗಡೆ ದಾಖಲಾಗಿದೆ.

ಸಾಫ್ಟ್‌ವೇರ್ ಮೂಲಕ ಆಟೋಮ್ಯಾಟಿಕ್ ಮೌಲ್ಯಮಾಪನ

ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ವಿಟಿಯು ಅತ್ಯಾಧುನಿಕ ಡಿಜಿಟಲ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಉತ್ತರ ಪತ್ರಿಕೆಯನ್ನು ವಿಶ್ವವಿದ್ಯಾಲಯದ ವಿಶೇಷ ಸಾಫ್ಟ್‌ವೇರ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದಂತೆ, ತಂತ್ರಜ್ಞಾನದ ಸಹಾಯದಿಂದ ಅದು ತಾನಾಗಿಯೇ ವ್ಯಾಲ್ಯೂವೇಷನ್ ಮಾಡಿ ನಿಖರ ಫಲಿತಾಂಶವನ್ನು ಸಿದ್ಧಪಡಿಸಿದೆ. ಥಿಯರಿ ಪರೀಕ್ಷೆಗಳು ಮೇ 19ಕ್ಕೇ ಮುಗಿದು ಫಲಿತಾಂಶ ಸಿದ್ಧವಾಗಿತ್ತು. ಶುಕ್ರವಾರ ನಡೆದ ಕೊನೆಯ ಇಂಟರ್ನ್‌ಶಿಪ್ ಪ್ರಾಯೋಗಿಕ ಪರೀಕ್ಷೆಯ ಅಂಕಗಳು ಸರ್ವರ್‌ಗೆ ಅಪ್‌ಲೋಡ್ ಆಗುತ್ತಿದ್ದಂತೆ ಕೇವಲ 10 ನಿಮಿಷದಲ್ಲಿ ಅಂತಿಮ ರಿಸಲ್ಟ್ ಹೊರಬಿದ್ದಿದೆ.

ಇದನ್ನೂ ಓದಿ ಪುಷ್ಪ ಸಿನಿಮಾ ಶೈಲಿಯಲ್ಲಿ ಅಕ್ರಮ ಸ್ಪಿರಿಟ್ ಸಾಗಾಟ: 35 ಲಕ್ಷ ಮೌಲ್ಯದ ಟ್ಯಾಂಕರ್ ಜಪ್ತಿ, ಓರ್ವನ ಬಂಧನ!

ತ್ವರಿತವಾಗಿ ಮತ್ತು ಅತ್ಯಂತ ಯಶಸ್ವಿಯಾಗಿ ಫಲಿತಾಂಶ ಪ್ರಕಟಿಸಲು ಹಗಲಿರುಳು ಶ್ರಮಿಸಿದ ವಿಶ್ವವಿದ್ಯಾಲಯದ ಎಲ್ಲಾ ಸಿಬ್ಬಂದಿ ವರ್ಗಕ್ಕೆ ಕುಲಪತಿ (ವಿಸಿ) ಪ್ರೊ. ಎಸ್. ವಿದ್ಯಾಶಂಕರ್ ಹಾಗೂ ಕುಲಸಚಿವರಾದ ಯು.ಜೆ. ಉಜ್ವಲ್ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಉದ್ಯೋಗ ಮತ್ತು ಉನ್ನತ ಶಿಕ್ಷಣಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ವಿಟಿಯುನ ಈ ಮಾದರಿಯ ವಿದ್ಯಾರ್ಥಿ ಸ್ನೇಹಿ ವ್ಯವಸ್ಥೆ ಭಾರಿ ಸಂತಸ ತಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Guru Sanchara 2026: ಗುರು ಸಂಚಾರ ಸಿಂಹ ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ? – Kannada News | Leo Horoscope 2026: Dr. Basavaraj Gurujis Insights on Guru Transit

ಜ್ಯೋತಿಷ್ಯದಲ್ಲಿ ಗುರು ಗ್ರಹದ ಸಂಚಾರವು ಅತ್ಯಂತ ಮಹತ್ವದ್ದಾಗಿದೆ. ಈ ವರ್ಷ ಗುರುವು ಜೂನ್‌ನಲ್ಲಿ ಸ್ಥಾನ ಬದಲಾಯಿಸುತ್ತಿದ್ದು, ಸಿಂಹ ರಾಶಿಯವರಿಗೆ ಗುರು ಸಂಚಾರ ಹೇಗಿರಲಿದೆ ಎಂಬುದನ್ನು ಡಾ. ಬಸವರಾಜ್ ಗುರೂಜಿ ವಿವರಿಸಿದ್ದಾರೆ. 2026ರ ಗುರು ಸಂಚಾರವು ಸಿಂಹ ರಾಶಿಯವರಿಗೆ ನಿರ್ದಿಷ್ಟ ಫಲಗಳನ್ನು ತರಲಿದೆ. ರಾಶ್ಯಾಧಿಪತಿ ರವಿಯಾಗಿರುವ ಈ ರಾಶಿಯವರಿಗೆ ಗುರುವು 12ನೇ ಮನೆಗೆ ಪ್ರವೇಶಿಸುತ್ತಾನೆ. ಇದು ಹೆಚ್ಚಿದ ಖರ್ಚುಗಳನ್ನು ಸೂಚಿಸುತ್ತದೆ. ಆಧ್ಯಾತ್ಮಿಕ ಒಲವು ಮತ್ತು ವಿದೇಶ ಪ್ರಯಾಣದ ಯೋಗ ಇರುತ್ತದೆ. ಕುಟುಂಬದಲ್ಲಿ ಸಣ್ಣ ಪುಟ್ಟ ಕಲಹಗಳ ಸಾಧ್ಯತೆಯಿದ್ದು, ವ್ಯಾಪಾರಸ್ಥರು ಅತಿಯಾದ ಹೂಡಿಕೆಯಿಂದ ದೂರವಿರಬೇಕು.

ರಾಜಕೀಯ ವ್ಯಕ್ತಿಗಳು ಮತ್ತು ಉನ್ನತ ಸ್ಥಾನದಲ್ಲಿರುವವರು ತಮ್ಮ ಸ್ಥಾನಕ್ಕೆ ಕಂಟಕ ಎದುರಿಸುವ ಸಾಧ್ಯತೆಗಳಿರುವುದರಿಂದ ಎಚ್ಚರಿಕೆ ವಹಿಸಬೇಕು. ಆಸ್ತಿ ವಿಭಜನೆ ವಿಚಾರದಲ್ಲಿ ಜಾಗ್ರತೆ ಅಗತ್ಯ. ವೈವಾಹಿಕ ಜೀವನದಲ್ಲಿ ಸಾಮರಸ್ಯಕ್ಕಾಗಿ ಹೊಂದಾಣಿಕೆ ಮುಖ್ಯ. ಸರ್ಕಾರಿ ನೌಕರರು ಮಾತನಾಡುವಾಗ ಎಚ್ಚರದಿಂದ ಇರಬೇಕು. ಮೌನಂ ಕಲಹಂ ನಾಸ್ತಿ ಎಂಬ ತತ್ವವನ್ನು ಅನುಸರಿಸುವುದು ಉತ್ತಮ. ಬಾಕಿ ಇರುವ ವ್ಯವಹಾರಗಳನ್ನು ಪೂರ್ಣಗೊಳಿಸುವುದು ಸೂಕ್ತ. ಮಕ್ಕಳೊಂದಿಗೆ ವಿರೋಧಗಳುಂಟಾಗುವ ಸಾಧ್ಯತೆಗಳಿದ್ದರೂ, ವಿವಾಹ ವಿಷಯಗಳಲ್ಲಿ ಶುಭಫಲವಿರುತ್ತದೆ. ಗುರು ಬಲವಿಲ್ಲದಿದ್ದರೂ, ಇತರ ಗ್ರಹಗಳ ಬಲದಿಂದ ಕಾರ್ಯಗಳು ಸಾಗುತ್ತವೆ. ದತ್ತಾತ್ರೇಯ ಜಪ, ನಿಂಬೆಹಣ್ಣು ಅರ್ಪಣೆ ಮತ್ತು ಹಿರಿಯರಿಗೆ ಗೌರವ ನೀಡುವುದು ಶುಭ ಫಲಗಳನ್ನು ತರುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Video: ಚೀನಾದ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ, 80ಕ್ಕೂ ಅಧಿಕ ಮಂದಿ ಸಾವು – Kannada News | Deadly Coal Mine Explosion in China Leaves Dozens Dead, Rescue Efforts Ongoing

ಬೀಜಿಂಗ್, ಮೇ 23: ಚೀನಾದ ಶಾಂಕ್ಸಿ ಪ್ರಾಂತ್ಯದ ಲಿಯುಶೆನ್ಯು ಕಲ್ಲಿದ್ದಲು ಗಣಿಯಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ 82 ಜನರು ಸಾವನ್ನಪ್ಪಿದ್ದಾರೆ ಎಂದು ಶನಿವಾರ ರಾಜ್ಯ ಮಾಧ್ಯಮಗಳು ವರದಿ ಮಾಡಿವೆ. ಅಪಘಾತದ ಸಮಯದಲ್ಲಿ ಸುಮಾರು 247 ಕಾರ್ಮಿಕರು ನೆಲದಡಿಯಲ್ಲಿದ್ದು, ಶನಿವಾರ ಮುಂಜಾನೆಯ ಹೊತ್ತಿಗೆ 201 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

ಗಣಿಯ ಆಳದಲ್ಲಿ ಸಿಲುಕಿರುವ ಉಳಿದವರಿಗಾಗಿ ಶೋಧ ಕಾರ್ಯ ತೀವ್ರಗೊಂಡಿದೆ. ಘಟನೆ ಬೆನ್ನಲ್ಲೇ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು, ಗಾಯಾಳುಗಳ ಚಿಕಿತ್ಸೆ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಯಾವುದೇ ಪ್ರಯತ್ನವನ್ನು ಬಿಡಬೇಡಿ ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಜೊತೆಗೆ, ಅಪಘಾತದ ಸಮಗ್ರ ತನಿಖೆ ನಡೆಸಿ ಜವಾಬ್ದಾರಿಯುತರನ್ನು ಹೊಣೆಗಾರರನ್ನಾಗಿ ಮಾಡಲು ಸೂಚಿಸಿದ್ದು, ಗಣಿ ಕಂಪನಿಯ ಪ್ರಮುಖ ಕಾರ್ಯನಿರ್ವಾಹಕರನ್ನು ಈಗಾಗಲೇ ಬಂಧಿಸಲಾಗಿದೆ.

ಚೀನಾದ ಒಟ್ಟು ರಾಷ್ಟ್ರೀಯ ಉತ್ಪಾದನೆಯ ಮೂರನೇ ಒಂದು ಭಾಗದಷ್ಟು (1.3 ಬಿಲಿಯನ್ ಟನ್) ಕಲ್ಲಿದ್ದಲನ್ನು ಉತ್ಪಾದಿಸುವ ಅತ್ಯಂತ ಪ್ರಮುಖ ಶಾಂಕ್ಸಿ ಪ್ರಾಂತ್ಯದಲ್ಲಿ ಈ ದುರಂತ ಸಂಭವಿಸಿದ್ದು, ಸ್ಫೋಟದ ನಿಖರ ಕಾರಣಕ್ಕಾಗಿ ತನಿಖೆ ಮುಂದುವರಿದಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರುಕ್ಮಿಣಿ ವಸಂತ್ ಬಿಕಿನಿ ವಿಡಿಯೋಗೆ ಸಿಕ್ತು ಸ್ಪಷ್ಟನೆ; ಗರಂ ಆದ ನಟಿ – Kannada News | Rukmini Vasanth Deepfake: Actress Clarifies Fake Videos, Warns Legal Action

‘ಸಪ್ತ ಸಾಗರದಾಚೆ ಎಲ್ಲೋ’, ‘ಕಾಂತಾರ’ ಚಿತ್ರದ ಮೂಲಕ ಕನ್ನಡಿಗರ ಮನೆಮಾತಾಗಿರುವ ನಟಿ ರುಕ್ಮಿಣಿ ವಸಂತ್ (Rukmini Vasanth) ಇತ್ತೀಚೆಗೆ ಸುದ್ದಿ ಆಗಿದ್ದರು. ಅವರ ಬಿಕಿನಿ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿದ್ದವು. ಇದರ ಹಿಂದಿನ ಸತ್ಯಾಂಶ ಕೊನೆಗೂ ಹೊರಬಿದ್ದಿದೆ. ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದ ಈ ವೈರಲ್ ದೃಶ್ಯಗಳ ಬಗ್ಗೆ ಸ್ವತಃ ನಟಿ ರುಕ್ಮಿಣಿ ವಸಂತ್ ಸ್ಪಷ್ಟನೆ ನೀಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪ್ರಕಟಣೆಯಲ್ಲಿ ಅವರು, ‘ಇಂಟರ್ನೆಟ್‌ನಲ್ಲಿ ಹರಿದಾಡುತ್ತಿರುವ ಆಕ್ಷೇಪಾರ್ಹ ವಿಡಿಯೋ ಮತ್ತು ಫೋಟೋಗಳು ಸಂಪೂರ್ಣವಾಗಿ ನಕಲಿ ಮತ್ತು ಸೃಷ್ಟಿಸಲ್ಪಟ್ಟವುಗಳಾಗಿವೆ’ ಎಂದು ಆಕ್ರೋಶ ಹೊರಹಾಕಿದ್ದಾರೆ. ‘ಇದು ಕೃತಕ ಬುದ್ಧಿಮತ್ತೆ ಹಾಗೂ ಡೀಪ್‌ಫೇಕ್ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ನನ್ನ ಮುಖವನ್ನು ಬೇರೊಬ್ಬರ ದೇಹಕ್ಕೆ ಜೋಡಿಸಿ ಸೃಷ್ಟಿಸಿರುವ ಪಿತೂರಿಯಾಗಿದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕಾನೂನು ಹೋರಾಟದ ಎಚ್ಚರಿಕೆ:

ಇಂತಹ ಕೃತ್ಯಗಳು ಒಬ್ಬ ವ್ಯಕ್ತಿಯ ಘನತೆಗೆ ಧಕ್ಕೆ ತರುತ್ತವೆ ಎಂದು ಬೇಸರ ವ್ಯಕ್ತಪಡಿಸಿರುವ ರುಕ್ಮಿಣಿ, ಸುಳ್ಳು ಫೋಟೋಗಳನ್ನು ಸೃಷ್ಟಿಸುವ ಕಿಡಿಗೇಡಿಗಳ ವಿರುದ್ಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡುವುದಾಗಿ ಹಾಗೂ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಅಲ್ಲದೆ ಅಭಿಮಾನಿಗಳು ಮತ್ತು ಸಾರ್ವಜನಿಕರು ಇಂತಹ ಯಾವುದೇ ನಕಲಿ ವಿಡಿಯೋಗಳನ್ನು ನಂಬಬಾರದು ಮತ್ತು ಅದನ್ನು ಶೇರ್ ಮಾಡಬಾರದು ಎಂದು ವಿನಂತಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬಿಕಿನಿಯಲ್ಲಿ ರುಕ್ಮಿಣಿ ವಸಂತ್? ವೈರಲ್ ಫೋಟೋ, ವಿಡಿಯೋದಿಂದ ಫ್ಯಾನ್ಸ್ ಮನದಲ್ಲಿ ನೂರು ಪ್ರಶ್ನೆ

ಆರಂಭದಿಂದಲೂ ಗ್ಲಾಮರ್ ಶೋಗಿಂತ ಅಭಿನಯಕ್ಕೆ ಹೆಚ್ಚು ಆದ್ಯತೆ ನೀಡಿ, ಸಾಂಪ್ರದಾಯಿಕ ಉಡುಗೆ ಮೂಲಕವೇ ಗುರುತಿಸಿಕೊಂಡಿದ್ದ ರುಕ್ಮಿಣಿ ಅವರ ಈ ಬೋಲ್ಡ್ ಅವತಾರ ಕಂಡು ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ಅನುಮಾನ ಮೂಡಿತ್ತು. ಈಗ ನಟಿಯ ಅಧಿಕೃತ ಸ್ಪಷ್ಟನೆಯಿಂದಾಗಿ ಇಂಟರ್ನೆಟ್‌ನಲ್ಲಿದ್ದ ಗೊಂದಲಗಳಿಗೆ ತೆರೆ ಬಿದ್ದಂತಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

51 ಸಾವಿರ ಯುವಕರಿಗೆ ಉದ್ಯೋಗ ಪತ್ರ ನೀಡಿ, ತಾವು 5 ರಾಷ್ಟ್ರಗಳಿಗೆ ಪ್ರವಾಸ ಹೋಗಿದ್ದೇಕೆ ಎಂದು ವಿವರಿಸಿದ ಪ್ರಧಾನಿ ಮೋದಿ – Kannada News | Modi Gives 51K Job Letters, Defends Foreign Trips: Global Deals Boost Youth Employment

ನವದೆಹಲಿ, ಮೇ 23: ಪ್ರಧಾನಿ ನರೇಂದ್ರ ಮೋದಿ(Narendra Modi)ಅವರು ದೇಶದ 51,000 ಕ್ಕೂ ಹೆಚ್ಚು ಯುವಕರಿಗೆ ರೈಲ್ವೆ, ಬ್ಯಾಂಕಿಂಗ್, ರಕ್ಷಣೆ, ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳ ಸರ್ಕಾರಿ ನೇಮಕಾತಿ ಪತ್ರಗಳನ್ನು ವರ್ಚುವಲ್ ಮೂಲಕ ವಿತರಿಸಿದ್ದಾರೆ. ಇದೇ ಸಂದರ್ಭದಲ್ಲಿ ಅವರು ತಮ್ಮ ಇತ್ತೀಚಿನ ಐದು ದೇಶಗಳ ಪ್ರವಾಸದ ಮಹತ್ವವನ್ನು ವಿವರಿಸುವ ಮೂಲಕ ರಾಜಕೀಯ ವಿರೋಧಿಗಳಿಗೆ ತಕ್ಕ ಉತ್ತರ ನೀಡಿದ್ದಾರೆ.

5 ದೇಶಗಳ ಪ್ರವಾಸದ ಅಸಲಿ ಉದ್ದೇಶವೇನು?
ನಾನು ಕೇವಲ ಐದು ರಾಷ್ಟ್ರಗಳಿಗೆ ಪ್ರವಾಸ ಕೈಗೊಂಡು ಬಂದಿಲ್ಲ, ಬದಲಿಗೆ ಈ ಅವಧಿಯಲ್ಲಿ ಡಜನ್‌ಗಟ್ಟಲೆ ದೇಶಗಳ ಪ್ರಮುಖ ಜಾಗತಿಕ ಕಂಪನಿಗಳ ನಾಯಕರನ್ನು ಭೇಟಿ ಮಾಡಿ ವಿವರವಾದ ಚರ್ಚೆ ನಡೆಸಿದ್ದೇನೆ ಎಂದು ಪ್ರಧಾನಿ ಹೇಳಿದರು. ಇಂದು ಇಡೀ ಜಗತ್ತು ಭಾರತದ ತಾಂತ್ರಿಕ ಪ್ರಗತಿ ಮತ್ತು ಇಲ್ಲಿನ ಯುವಶಕ್ತಿಯ ಬಗ್ಗೆ ಅಪಾರ ಉತ್ಸಾಹ ಹೊಂದಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಯುವಕರಿಗೆ ದೊಡ್ಡ ಮನ್ನಣೆ ಮತ್ತು ಅವಕಾಶಗಳು ಸಿಗಬೇಕೆಂಬುದೇ ನನ್ನ ವಿದೇಶಿ ಪ್ರವಾಸಗಳ ಮುಖ್ಯ ಉದ್ದೇಶವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಯಾವ ದೇಶದೊಂದಿಗೆ ಎಂತಹ ಒಪ್ಪಂದಗಳು?
ಭಾರತವು ವಿಶ್ವದಲ್ಲೇ ಅತ್ಯಂತ ನಂಬಿಕಸ್ಥ ‘ಸಪ್ಲೈ ಚೈನ್’ ದೇಶವಾಗಿ ಹೊರಹೊಮ್ಮುತ್ತಿದೆ ಎಂದ ಮೋದಿ, ವಿವಿಧ ದೇಶಗಳೊಂದಿಗೆ ಮಾಡಿಕೊಂಡಿರುವ ಪ್ರಮುಖ ಒಪ್ಪಂದಗಳನ್ನು ಪಟ್ಟಿ ಮಾಡಿದರು.

ನೆದರ್‌ಲ್ಯಾಂಡ್ಸ್: ಜಗತ್ತಿನ ಹೆಸರಾಂತ ಸೆಮಿಕಂಡಕ್ಟರ್ ಕಂಪನಿ ‘ASML’ ಭಾರತದ ‘TATA’ ಕಂಪನಿಯೊಂದಿಗೆ ಅತ್ಯಂತ ಅಪರೂಪದ ಒಪ್ಪಂದ ಮಾಡಿಕೊಂಡಿದೆ. ಇದು ದೇಶದಲ್ಲಿ ಲೆಕ್ಕವಿಲ್ಲದಷ್ಟು ಉದ್ಯೋಗಗಳನ್ನು ಸೃಷ್ಟಿಸಲಿದೆ.

ಸ್ವೀಡನ್ ಮತ್ತು ಇಟಲಿ: ಹಸಿರು ಇಂಧನ, ಕೃತಕ ಬುದ್ಧಿಮತ್ತೆ (AI) ಮತ್ತು ಡಿಜಿಟಲ್ ನಾವೀನ್ಯತೆ ಹಾಗೂ ರಕ್ಷಣಾ ಕ್ಷೇತ್ರಗಳಲ್ಲಿ ಮಹತ್ವದ ಪಾಲುದಾರಿಕೆ ಮಾಡಿಕೊಳ್ಳಲಾಗಿದೆ.

ಯುಎಇ ಮತ್ತು ನಾರ್ವೆ: ಹಡಗು ನಿರ್ಮಾಣ, ಸೂಪರ್‌ಕಂಪ್ಯೂಟಿಂಗ್ ಮತ್ತು ಹಸಿರು ತಂತ್ರಜ್ಞಾನದಲ್ಲಿ ಜಂಟಿಯಾಗಿ ಕೆಲಸ ಮಾಡಲು ಒಪ್ಪಂದಗಳಾಗಿವೆ.

ಮತ್ತಷ್ಟು ಓದಿ: ನರೇಂದ್ರ ಮೋದಿಗೆ ನಾರ್ವೆಯ ಅತ್ಯುನ್ನತ ಪ್ರಶಸ್ತಿ ಪ್ರದಾನ; ಭಾರತದ ಪ್ರಧಾನಿಗೆ 32ನೇ ಜಾಗತಿಕ ಗೌರವ

ಅಭಿವೃದ್ಧಿ ಹೊಂದಿದ ಭಾರತಕ್ಕೆ ಯುವಕರೇ ಪಾಲುದಾರರು
ನೇಮಕಾತಿ ಪತ್ರ ಪಡೆದ ಯುವಕರನ್ನು ಅಭಿನಂದಿಸಿದ ಪ್ರಧಾನಿ ಮೋದಿ, ಇಂದು ನೀವೆಲ್ಲರೂ ದೇಶದ ಅಭಿವೃದ್ಧಿ ಪ್ರಯಾಣದಲ್ಲಿ ಅತ್ಯಂತ ಜವಾಬ್ದಾರಿಯುತ ಪಾಲುದಾರರಾಗುತ್ತಿದ್ದೀರಿ. ಮುಂಬರುವ ವರ್ಷಗಳಲ್ಲಿ ‘ವಿಕಸಿತ ಭಾರತ’ದ ಸಂಕಲ್ಪವನ್ನು ಈಡೇರಿಸುವಲ್ಲಿ ನಿಮ್ಮ ಪಾತ್ರ ನಿರ್ಣಾಯಕವಾಗಿದೆ ಎಂದು ಕರೆ ನೀಡಿದರು. ಶುದ್ಧ ಇಂಧನ, ಹಸಿರು ಹೈಡ್ರೋಜನ್ ಮತ್ತು ಸುಸ್ಥಿರ ಉತ್ಪಾದನಾ ವಲಯಗಳು ವೇಗವಾಗಿ ಬೆಳೆಯುತ್ತಿದ್ದು, ಯುವಕರಿಗೆ ಭವಿಷ್ಯದಲ್ಲಿ ಉದ್ಯೋಗಾವಕಾಶಗಳ ಮಹಾಪೂರವೇ ಹರಿದುಬರಲಿದೆ ಎಂದು ಅವರು ಭರವಸೆ ನೀಡಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪುಷ್ಪ ಸಿನಿಮಾ ಶೈಲಿಯಲ್ಲಿ ಅಕ್ರಮ ಸ್ಪಿರಿಟ್ ಸಾಗಾಟ: 35 ಲಕ್ಷ ಮೌಲ್ಯದ ಟ್ಯಾಂಕರ್ ಜಪ್ತಿ, ಓರ್ವನ ಬಂಧನ! – Kannada News | Pushpa Style Spirit Smuggling Busted in Belagavi: Spirit Worth 35 Lakh Seized

ಪುಷ್ಪ ಸಿನಿಮಾ ಶೈಲಿಯಲ್ಲಿ ಅಕ್ರಮ ಸ್ಪಿರಿಟ್ ಸಾಗಾಟ

ಬೆಳಗಾವಿ, ಮೇ 23: ಸೂಪರ್ ಹಿಟ್ ‘ಪುಷ್ಪ’ ಸಿನಿಮಾದಲ್ಲಿ ಟ್ಯಾಂಕರ್ ಒಳಗೆ ಹಾಲಿನ ಕೆಳಗೆ ಶ್ರೀಗಂಧದ ತುಂಡುಗಳನ್ನು ಬಚ್ಚಿಟ್ಟು ಸಾಗಿಸುವ ದೃಶ್ಯವನ್ನು ನೀವೆಲ್ಲರೂ ನೋಡಿರುತ್ತೀರಿ. ಅದೇ ಮಾದರಿಯ ಖತರ್ನಾಕ್ ಐಡಿಯಾ ಬಳಸಿ, ಆಯಿಲ್ ಟ್ಯಾಂಕರ್‌ನಲ್ಲಿ ಅಕ್ರಮವಾಗಿ ಸ್ಪಿರಿಟ್ ಸಾಗಿಸುತ್ತಿದ್ದ ಬೃಹತ್ ಜಾಲವನ್ನು ಬೆಳಗಾವಿ (Belagavi) ಜಿಲ್ಲೆಯ ಅಬಕಾರಿ ಅಧಿಕಾರಿಗಳು ಭೇದಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಜಾಂಬೋಟಿ ಗ್ರಾಮದ ಬಳಿ ಅಬಕಾರಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬರೋಬ್ಬರಿ 35 ಲಕ್ಷ ರೂಪಾಯಿ ಮೌಲ್ಯದ 14 ಸಾವಿರ ಲೀಟರ್ ಸ್ಪಿರಿಟ್ ಅನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಈ ಅಕ್ರಮ ದಂಧೆಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿ, ಟ್ಯಾಂಕರ್ ಅನ್ನು ಜಪ್ತಿ ಮಾಡಲಾಗಿದೆ.

ಮುಖ್ಯಾಂಶಗಳು

  • ಬೆಳಗಾವಿಯ ಜಾಂಬೋಟಿಯಲ್ಲಿ 35 ಲಕ್ಷ ಮೌಲ್ಯದ ಸ್ಪಿರಿಟ್ ಜಪ್ತಿ ಮಾಡಲಾಗಿದೆ.
  • ಆಯಿಲ್ ಟ್ಯಾಂಕರ್ ಬಳಸಿ ಪುಷ್ಪ ಸಿನಿಮಾ ಶೈಲಿಯಲ್ಲಿ ಸ್ಪಿರಿಟ್ ಸಾಗಿಸಲಾಗುತ್ತಿತ್ತು.
  • ನೆಲಮಂಗಲದಿಂದ ಗೋವಾಕ್ಕೆ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ.

ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಲು ‘ಪುಷ್ಪ’ ಪ್ಲಾನ್!

ಬಂಧಿತ ಗ್ಯಾಂಗ್ ಅಧಿಕಾರಿಗಳನ್ನು ಡೈವರ್ಟ್ ಮಾಡಲು ಅತ್ಯಂತ ಚಾಣಾಕ್ಷ ತಂತ್ರ ರೂಪಿಸಿತ್ತು. ಟ್ಯಾಂಕರ್‌ನ ಮೂರು ಭಾಗಗಳಲ್ಲಿ ಸಣ್ಣ ಸಣ್ಣ ಪೈಪ್‌ಗಳನ್ನು ಅಳವಡಿಸಿ, ಅದರಲ್ಲಿ ಮಾತ್ರ ಆಯಿಲ್ (ತೈಲ) ತುಂಬಿಸಲಾಗಿತ್ತು. ಅಧಿಕಾರಿಗಳು ತಪಾಸಣೆ ನಡೆಸುವಾಗ ಕೇವಲ ಆ ಪೈಪ್‌ಗಳಲ್ಲಿದ್ದ ಆಯಿಲ್ ತೋರಿಸಿ ಇದು ಆಯಿಲ್ ಟ್ಯಾಂಕರ್ ಎಂದು ನಂಬಿಸಿ ನುಣುಚಿಕೊಳ್ಳುತ್ತಿದ್ದರು. ಆದರೆ, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಖಾನಾಪುರ ಅಬಕಾರಿ ಅಧಿಕಾರಿಗಳಿಗೆ ತಪಾಸಣೆ ವೇಳೆ ತೀವ್ರ ಸಂಶಯ ಮೂಡಿದೆ. ತಕ್ಷಣವೇ ಟ್ಯಾಂಕರ್‌ನಲ್ಲಿದ್ದ ಆಯಿಲ್ ಪೈಪ್‌ಗಳನ್ನು ಹೊರತೆಗೆದು ಆಳವಾಗಿ ಪರಿಶೀಲಿಸಿದಾಗ, ಅದರ ಸುತ್ತಲೂ ಸಾವಿರಾರು ಲೀಟರ್ ಸ್ಪಿರಿಟ್ ತುಂಬಿಟ್ಟಿರುವುದು ಪತ್ತೆಯಾಗಿದ್ದು, ಅಧಿಕಾರಿಗಳೇ ಒಂದು ಕ್ಷಣ ಶಾಕ್ ಆಗಿದ್ದಾರೆ.

ಇದನ್ನೂ ಓದಿ Kalaburgi Accident: ಸೊಸೆ ಗರ್ಭಿಣಿ, ಮಗ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದು ಮೃತನ ತಂದೆ ಗೋಳು!

ನೆಲಮಂಗಲದಿಂದ ಗೋವಾಕ್ಕೆ ಸಾಗಾಟ

ಸಾಮಾನ್ಯವಾಗಿ ಗೋವಾದಿಂದ ಕರ್ನಾಟಕಕ್ಕೆ ಅಕ್ರಮವಾಗಿ ಮದ್ಯ ಸರಬರಾಜಾಗುವ ಪ್ರಕರಣಗಳು ಹೆಚ್ಚಿರುತ್ತವೆ. ಆದರೆ, ಈ ಕತರ್ನಾಕ್ ಗ್ಯಾಂಗ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಿಂದ ಗೋವಾಕ್ಕೆ ಈ ಸ್ಪಿರಿಟ್ ಅನ್ನು ಅಕ್ರಮವಾಗಿ ಸಾಗಿಸುತ್ತಿತ್ತು ಎನ್ನಲಾಗಿದೆ. ಸದ್ಯಕ್ಕೆ ಅಬಕಾರಿ ಇಲಾಖೆಯ ಅಧಿಕಾರಿಗಳು ಇಡೀ ಜಾಲವನ್ನು ಪತ್ತೆ ಹಚ್ಚಿದ್ದು, ಬಂಧಿತ ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಅಕ್ರಮ ದಂಧೆಯ ಹಿಂದೆ ಇನ್ನು ಯಾರ್ಯಾರು ಭಾಗಿಯಾಗಿದ್ದಾರೆ ಮತ್ತು ಇದರ ಅಸಲಿ ಕಿಂಗ್‌ಪಿನ್ ಯಾರು ಎಂಬ ಕುರಿತು ತನಿಖೆ ಮುಂದುವರಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

1 ಗೆಲುವು, 2 ತಂಡಗಳ ಜಯ: ಹೀಗಿದೆ ಪಂಜಾಬ್ ಕಿಂಗ್ಸ್​ ಪ್ಲೇಆಫ್ ಲೆಕ್ಕಾಚಾರ

Source link

Exit mobile version