ನವದೆಹಲಿ, ಮಾರ್ಚ್ 25: ದೆಹಲಿಯ ಕರೋಲ್ ಬಾಗ್ ಪ್ರದೇಶದಲ್ಲಿ ಮಂಗಳವಾರ ತಡ ರಾತ್ರಿ ಡಬಲ್ ಡೆಕ್ಕರ್ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಇಬ್ಬರು ಸಾವನ್ನಪ್ಪಿ, 23 ಜನರು ಗಾಯಗೊಂಡಿದ್ದಾರೆ. ರಾಜಸ್ಥಾನದಿಂದ ಬರುತ್ತಿದ್ದ ಬಸ್, ಝಂಡೆವಾಲನ್ ದೇವಸ್ಥಾನದ ಬಳಿ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಪಲ್ಟಿಯಾಗಿದೆ. ಬಸ್ಸಿನಲ್ಲಿ ಸುಮಾರು 25 ಪ್ರಯಾಣಿಕರಿದ್ದರು. ದೃಶ್ಯಗಳಲ್ಲಿ ಬಸ್ ತೀವ್ರವಾಗಿ ಹಾನಿಗೊಳಗಾಗಿದ್ದು, ಹಾನಿಗೊಳಗಾದ ಸೀಟುಗಳು ಮತ್ತು ಚಕ್ರಗಳು ವಾಹನದ ಬಳಿ ಬಿದ್ದಿರುವುದು ಕಾಣಬಹುದು.
ಕಿರುತೆರೆ ನಟಿ ಅಮೂಲ್ಯ ಗೌಡ ಅವರು ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಅದೇ ರೀತಿ ಅಮೃತಾ ರಾಮಮೂರ್ತಿ (Amrutha Ramamoorthi) ಕೂಡ ಸಾಕಷ್ಟು ಹೆಸರು ಮಾಡಿದ್ದಾರೆ. ಇಬ್ಬರಿಗೂ ದೊಡ್ಡ ಫ್ಯಾನ್ ಬೇಸ್ ಇದೆ. ಈಗ ಇಬ್ಬರೂ ಒಂದೇ ಧಾರಾವಾಹಿ ಮೂಲಕ ಬರಲು ರೆಡಿ ಆಗಿದ್ದಾರೆ ಎಂಬುದು ವಿಶೇಷ. ಉದಯ ಟಿವಿಯಲ್ಲಿ ಪ್ರಸಾರ ಆಗಲಿರುವ ಸೀರಿಯಲ್ನ ಭಾಗವಾಗಿ ಅಮೂಲ್ಯ ಗೌಡ ಹಾಗೂ ಅಮೃತಾ ರಾಮಮೂರ್ತಿ ಕಾಣಿಸಿಕೊಳ್ಳಲಿದ್ದಾರೆ. ಇದು ಅಭಿಮಾನಿಗಳ ಪಾಲಿಗೆ ಖುಷಿಯ ವಿಷಯ.
ಅಮೂಲ್ಯ ಗೌಡ ಕನ್ನಡ ಕಿರುತೆರೆ ಲೋಕದಲ್ಲಿ ಸಕ್ರಿಯ ಆಗಿರೋ ಉದಯೋನ್ಮುಖ ನಟಿಯರಲ್ಲಿ ಒಬ್ಬರು. ಅಮೃತಾ ಕೂಡ ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಉದಯದಲ್ಲಿ ಪ್ರಸಾರ ಆಗಲಿರುವ ‘ಮಹಾಲಕ್ಷ್ಮೀ ಮದುವೆ’ ಧಾರಾವಾಹಿಯಲ್ಲಿ ನಟಿಸಲಿದ್ದಾರೆ. ಇದು ಅಭಿಮಾನಿಗಳಿಗೆ ಖುಷಿ ನೀಡಿದೆ. ಶೀಘ್ರವೇ ಧಾರಾವಾಹಿ ಬಗ್ಗೆ ಮತ್ತಷ್ಟು ಅಪ್ಡೇಟ್ ಸಿಗಲಿದೆ.
ಅಮೂಲ್ಯ ಗೌಡ ಅವರು ಕಿರುತೆರೆ ಲೋಕಕ್ಕೆ ಬಂದು 12 ವರ್ಷಗಳೇ ಕಳೆದಿವೆ! ಅಮೂಲ್ಯ ಗೌಡ ಅವರು ಮೊದಲು ನಟಿಸಿದ್ದು ಸ್ವಾತಿ ಮುತ್ತು ಧಾರಾವಾಹಿಯಲ್ಲಿ. ‘ಸ್ಟಾರ್ ಸುವರ್ಣದಲ್ಲಿ’ ಧಾರಾವಾಹಿ ಪ್ರಸಾರ ಕಂಡಿತು. ಈ ಧಾರಾವಾಹಿಯಲ್ಲಿ ಪಾರು ಹೆಸರಿನ ಪಾತ್ರ ಮಾಡಿದರು. ಅವರಿಗೆ ಭರ್ಜರಿ ಜನಪ್ರಿಯತೆ ತಂದುಕೊಟ್ಟ ಸೀರಿಯಲ್ ಎಂದರೆ ‘ಕಮಲಿ’. ಈ ಸೀರಿಯಲ್ 2018ರಿಂದ 2022ರವರೆಗೆ ಪ್ರಸಾರ ಆಯಿತು. ‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲಿ ಅಮೂಲ್ಯ ಮಿಂಚಿದರು.
ಇನ್ನು, ಅಮೃತಾ ಅವರು ‘ಕುಲವಧು’, ಮಿಸ್ಟರ್ ಆಂಡ್ ಮಿಸಸ್ ರಂಗೇಗೌಡ ಮೊದಲಾದ ಸೀರಿಯಲ್ನಲ್ಲಿ ನಟಿಸಿದರು. ಕೆಲ ಸಮಯ ‘ಆಸೆ’ ಧಾರಾವಾಹಿಯಲ್ಲಿ ರೋಹಿಣಿ ಹೆಸರಿನ ಪಾತ್ರ ಮಾಡಿದರು. ಇದು ನೆಗೆಟಿವ್ ಶೇಡ್ ಹೊಂದಿದ್ದ ಪಾತ್ರ ಆಗಿತ್ತು. ಅವರ ವೃತ್ತಿ ಜೀವನಕ್ಕೆ ಈ ಧಾರಾವಾಹಿ ಸಾಕಷ್ಟು ಮೈಲೇಜ್ ನೀಡಿತು ಎಂದರೂ ತಪ್ಪಾಗಲಾರದು. ಈಗ ಅವರು ಉದಯ ಟಿವಿ ಮೂಲಕ ಕಂಬ್ಯಾಕ್ ಮಾಡೋಕೆ ರೆಡಿ ಆಗಿದ್ದಾರೆ.
ಬೆಂಗಳೂರು, ಮಾರ್ಚ್ 25: ಮಂಗಳವಾರ ಸುರಿದ ಮಳೆಯಿಂದಾಗಿ (Weather Forecast) ಹಲವೆಡೆ ಅವಾಂತಗಳು ಸೃಷ್ಟಿಯಾಗಿವೆ. ಜೋರಾದ ಗಾಳಿಗೆ ಮನೆ ಮೇಲಿನ ಸೂರು ಸಹ ಹಾರಿ ಹೋಗಿದ್ದು, ಜನರು ಕಂಗಾಲಾಗಿದ್ದಾರೆ. ಇಂದೂ ಸಹ ರಾಜ್ಯದೆಲ್ಲೆಡೆ ಗುಡುಗು ಸಹಿತ ಮಳೆಯಿರಲಿದ್ದು, ಹವಾಮಾನ ಇಲಾಖೆ 20ಕ್ಕೂ ಹೆಚ್ಚು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಸೂಚಿಸಿದೆ.
ಜೋರು ಗಾಳಿ ಮಳೆಗೆ ಗದಗದಲ್ಲಿ ಅವಾಂತರ
ಗದಗ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಭಾರಿ ಗಾಳಿ, ಗುಡುಗು ಸಹಿತ ಮಳೆಯ ಅಬ್ಬರದಿಂದ ಹಲವು ಕಡೆ ಅವಾಂತರಗಳು ಸಂಭವಿಸಿವೆ. ವಿಶೇಷವಾಗಿ ಮುಂಡರಗಿ ತಾಲೂಕಿನ ದಿಂಡೂರ ತಾಂಡಾದಲ್ಲಿ ಗಾಳಿಯ ತೀವ್ರತೆಗೆ ನಾಲ್ಕಕ್ಕೂ ಹೆಚ್ಚು ಮನೆಗಳ ಮೇಲಿನ ತಗಡಿನ ಶೀಟ್ಗಳು ಹಾರಿ ಹೋಗಿ ನಿವಾಸಿಗಳಿಗೆ ಭಾರೀ ತೊಂದರೆ ಉಂಟಾಗಿದೆ. ಶೀಟ್ಗಳು ಹಾರಿದ ಪರಿಣಾಮ ಶಿವಪ್ಪ ಲಮಾಣಿ ಕಾಲಿಗೆ ಗಾಯಗೊಂಡಿದ್ದು, ಸೋಮವ್ವ ಲಮಾಣಿ ಅವರ ಕೈ ಮುರಿದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಗ್ರಾಮಸ್ಥರು ಪರದಾಡಿದ ಘಟನೆ ನಡೆದಿದೆ.
ಇದಲ್ಲದೆ ಭಾರಿ ಮಳೆ ಮತ್ತು ಗಾಳಿಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡು ಗ್ರಾಮಸ್ಥರು ಕತ್ತಲಿನಲ್ಲಿ ಕಂಗಾಲಾಗಿದ್ದಾರೆ. ಬಿರುಗಾಳಿಯಿಂದ ಹಲವು ದೊಡ್ಡ ಮರಗಳು ಧರೆಗೆ ಉರುಳಿದ್ದು, ಮನೆಗಳ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ಸೇರಿದಂತೆ ವಾಹನಗಳು ಹಾನಿಗೊಳಗಾಗಿವೆ. ಇನ್ನೂ ಗಾಳಿ ಮತ್ತು ಮಳೆ ಮುಂದುವರಿದಿರುವುದರಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.
ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಬೀದರ್, ಕಲಬುರ್ಗಿ, ಬಾಗಲಕೋಟೆ, ವಿಜಯಪುರ, ಯಾದಗಿರಿ,ರಾಯಚೂರು, ಕೊಪ್ಪಳ, ಗದಗ, ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಬಳ್ಳಾರಿ, ಹಾವೇರಿ, ವಿಜಯನಗರ, ಉಡುಪಿ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಮೈಸೂರು, ಕೊಡಗು, ಹಾಸನ, ತುಮಕೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯಿದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ. ಇನ್ನುಳಿದ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನವದೆಹಲಿ, ಮಾರ್ಚ್ 25: ಒಂದಲ್ಲಾ ಎರಡಲ್ಲ ಹದಿಮೂರು ವರ್ಷಗಳ ಹೋರಾಟ ಅಂತ್ಯಗೊಂಡಿದೆ. 13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾ ಕೊನೆಯುಸಿರೆಳೆದಿದ್ದಾರೆ. ನಿಷ್ಕ್ರಿಯ ದಯಾಮರಣ(Passive Euthanasia)ಕ್ಕೆ ಅನುಮತಿ ಪಡೆದ ಭಾರತದಲ್ಲಿ ಮೊದಲ ವ್ಯಕ್ತಿ ಹರೀಶ್ ರಾಣಾ ಏಮ್ಸ್ ಆಸ್ಪತ್ರೆಯಲ್ಲಿ ಉಸಿರು ಚೆಲ್ಲಿದ್ದಾರೆ. ರಾಣಾ (31) ಅವರನ್ನು ಮಾರ್ಚ್ 14 ರಂದು ಗಾಜಿಯಾಬಾದ್ನಲ್ಲಿರುವ ತಮ್ಮ ಮನೆಯಿಂದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (AIIMS) ಡಾ.ಬಿ.ಆರ್. ಅಂಬೇಡ್ಕರ್ ಇನ್ಸ್ಟಿಟ್ಯೂಟ್ ರೋಟರಿ ಕ್ಯಾನ್ಸರ್ ಆಸ್ಪತ್ರೆ ಸ್ಥಳಾಂತರಿಸಲಾಗಿತ್ತು, ಅವರು 2013 ರಿಂದ ಕೋಮಾದಲ್ಲಿದ್ದರು.
ಮೂರು ದಿನಗಳ ಹಿಂದೆ, ಮಾರ್ಚ್ 11 ರಂದು, ಸುಪ್ರೀಂ ಕೋರ್ಟ್ ಒಂದು ಮಹತ್ವದ ತೀರ್ಪಿನಲ್ಲಿ, ಹರೀಶ್ ರಾಣಾಗೆ ನಿಷ್ಕ್ರಿಯ ದಯಾಮರಣಕ್ಕೆ ಅನುಮತಿ ನೀಡಿತ್ತು. ರಾಣಾ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಬಿ.ಟೆಕ್ ವಿದ್ಯಾರ್ಥಿಯಾಗಿದ್ದರು. 2013 ರಲ್ಲಿ, ಅವರು ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಬಿದ್ದು ತಲೆಗೆ ತೀವ್ರ ಗಾಯಗಳಾಗಿದ್ದವು. ಅಂದಿನಿಂದ ಅವರು ಕೋಮಾದಲ್ಲಿದ್ದರು, ಆಮ್ಲಜನಕದ ಬೆಂಬಲದೊಂದಿಗೆ ಉಸಿರಾಡುತ್ತಿದ್ದರು.
ನಿಷ್ಕ್ರಿಯ ದಯಾಮರಣ ಎಂದರೆ ವೈದ್ಯಕೀಯ ಬೆಂಬಲವನ್ನು ನಿಲ್ಲಿಸುವುದು ಅಥವಾ ಮಾರಕ ಕಾಯಿಲೆಯಿಂದ ಬಳಲುತ್ತಿರುವ ರೋಗಿಯನ್ನು ಜೀವಂತವಾಗಿಡುವ ಜೀವ ಬೆಂಬಲ ವ್ಯವಸ್ಥೆಗಳನ್ನು ತೆಗೆದುಹಾಕುವುದು, ಅವರು ನೈಸರ್ಗಿಕವಾಗಿ ಸಾಯಲು ಅನುವು ಮಾಡಿಕೊಡುತ್ತದೆ. ನಿಷ್ಕ್ರಿಯ ದಯಾಮರಣವು ವರ್ಷಗಳ ಸರಿಪಡಿಸಲಾಗದ ಯಾತನೆಯಿಂದ ಹರೀಶ್ ಅವರನ್ನು ಮುಕ್ತಗೊಳಿಸುತ್ತದೆ ಎಂದು ಅವರ ತಂದೆ ಹೇಳಿದ್ದರು.
ಮಾರ್ಚ್ 11 ರ ತನ್ನ ತೀರ್ಪಿನಲ್ಲಿ, ಸುಪ್ರೀಂ ಕೋರ್ಟ್ ದೇಶದಲ್ಲಿ ಮೊದಲ ಬಾರಿಗೆ ಒಬ್ಬ ವ್ಯಕ್ತಿಗೆ ನಿಷ್ಕ್ರಿಯ ದಯಾಮರಣಕ್ಕೆ ಅವಕಾಶ ನೀಡಿತ್ತು. ಈ ವಿಷಯದ ಕುರಿತು ತೀರ್ಪು ನೀಡುತ್ತಾ, ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರ ಪೀಠವು ಕೇಂದ್ರ ಸರ್ಕಾರವನ್ನು ನಿಷ್ಕ್ರಿಯ ದಯಾಮರಣ ಕುರಿತು ಸಮಗ್ರ ಕಾನೂನನ್ನು ಜಾರಿಗೆ ತರುವ ಬಗ್ಗೆ ಪರಿಗಣಿಸುವಂತೆ ಕೇಳಿತ್ತು.
2024ರಲ್ಲಿ ಮೊದಲ ಬಾರಿಗೆ ದೆಹಲಿ ಹೈಕೋರ್ಟ್ನ ಮೊರೆ ಹೋಗಿದ್ದ ಕುಟುಂಬವು, ರಾಣಾ ಅವರ ಜೀವ ರಕ್ಷಕ ಚಿಕಿತ್ಸೆಯನ್ನು ಹಿಂಪಡೆಯಲು ಅನುಮತಿ ಕೋರಿತ್ತು. ಹೈಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿತ್ತು. ತರುವಾಯ ಕುಟುಂಬವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ವಿಸ್ತೃತ ವೈದ್ಯಕೀಯ ವರದಿಗಳನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್, ಮಾರ್ಚ್ 11ರಂದು ದಯಾಮರಣಕ್ಕೆ ಸಮ್ಮತಿಸಿ ತೀರ್ಪು ನೀಡಿತ್ತು.
ಆದಿತ್ಯ ಬಿರ್ಲಾ ಸಮೂಹ ಸುಮಾರು 16,706 ಕೋಟಿ ರೂಪಾಯಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರ್ಯಾಂಚೈಸಿಯನ್ನು ಖರೀದಿ ಮಾಡಿದೆ. ಇವರ ಜೊತೆ ಬ್ಲ್ಯಾಕ್ಸ್ಟೋನ್ ಇಕ್ವಿಟಿ ಫರ್ಮ್, ಅಮೆರಿಕದ ಹೂಡಿಕೆದಾರ ಡೇವಿಡ್ ಬ್ಲಿಟ್ಝರ್ ಒಡೆತನದ ಬೋಲ್ಟ್ ವೆಂಚರ್ಸ್ ಮತ್ತು ಟೈಮ್ಸ್ ಆಫ್ ಇಂಡಿಯಾ ಮಾಧ್ಯಮ ಸಮೂಹ ಕೂಡ ಖರೀದಿಯಲ್ಲಿ ಕೈ ಜೋಡಿಸಿದೆ. ಈಗ ಆರ್ಸಿಬಿ ಹೆಸರು ಬದಲಾವಣೆ ಸಾಧ್ಯತೆ ಬಲವಾಗಿ ಕಾಣಿಸುತ್ತಿದೆ. ಮಾರ್ಚ್ 28ರಂದು ಆರ್ಸಿಬಿ ಈ ಸೀಸನ್ನ ಮೊದಲ ಪಂದ್ಯ ಆಡಲಿದೆ. ಅದಕ್ಕೂ ಮೊದಲು ಮಾರಾಟ ವಹಿವಾಟು ನಡೆದಿದೆ.
ಆರ್ಸಿಬಿ ಒಡೆತನವು ಈ ಮೊದಲು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (ಯುಎಸ್ಎಲ್) ಬಳಿ ಇತ್ತು. ಈ ಕಂಪನಿಯು ಲಂಡನ್ ಮೂಲದ ಯುಕೆ–ಡಿಯಾಜಿಯೊದ ಅಂಗಸಂಸ್ಥೆಯಾಗಿದೆ. ಯುಎಸ್ಎಲ್ ಮದ್ಯ ತಯಾರಿಕಾ ಕಂಪನಿ. ಹೀಗಾಗಿ, ತಮ್ಮ ವಿಸ್ಕಿ ಬ್ರ್ಯಾಂಡ್ ರಾಯಲ್ ಚಾಲೆಂಜ್ ಅಥವಾ ಆರ್ಸಿ ಪ್ರಮೋಷನ್ ಮಾಡುವ ಉದ್ದೇಶದಿಂದ ರಾಯಲ್ ಚಾಲೆಂಜರ್ಸ್ ಎಂದು ತಂಡಕ್ಕೆ ಹೆಸರನ್ನು ಇಟ್ಟಿದ್ದರು ವಿಜಯ್ ಮಲ್ಯ. ಈಗ ಐಪಿಎಲ್ ತಂಡ ಬೇರೆಯವರ ತೆಕ್ಕೆಗೆ ಹೋಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂಬ ಹೆಸರೇ ಇದ್ದರೆ ಈಗಲೂ ರಾಯಲ್ ಚಾಲೆಂಜ್ ಬ್ರ್ಯಾಂಡ್ ಪ್ರಮೋಷನ್ ಮಾಡಿದಂತೆ ಆಗುತ್ತದೆ. ಈ ಕಾರಣದಿಂದ ಆದಿತ್ಯ ಬಿರ್ಲಾ ಗ್ರೂಪ್ ಹೆಸರು ಬದಲಾವಣೆ ಮಾಡುವ ನಿರ್ಧಾರಕ್ಕೆ ಬರಬಹುದು. ಈ ಮೊದಲು ಸಾಕಷ್ಟು ಐಪಿಎಲ್ ತಂಡಗಳ ಹೆಸರು ಬದಲಾದ ಉದಾಹರಣೆ ಇದೆ. ಸದ್ಯ ಆರ್ಸಿಬಿಯ ಪುರುಷ ಹಾಗೂ ಮಹಿಳಾ ತಂಡ ಎರಡನ್ನೂ ಆದಿತ್ಯ ಬಿರ್ಲಾ ಖರೀದಿ ಮಾಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂಬುದು ಈಗ ಕೇವಲ ಹೆಸರಾಗಿ ಉಳಿದುಕೊಂಡಿಲ್ಲ, ಅದೊಂದು ಭಾವನೆ ಆಗಿದೆ. ಅದರಲ್ಲೂ ಆರ್ಸಿಬಿ ಎಂಬ ಶಬ್ದಕ್ಕೆ ತೂಕ ಹೆಚ್ಚು. ಮುಂದಿನ ದಿನಗಳಲ್ಲಿ ಆರ್ಸಿಬಿ ಎಂಬ ಶಾರ್ಟ್ಫಾರ್ಮ್ ಬರುವಂತೆ ಆದಿತ್ಯ ಬಿರ್ಲಾ ಗ್ರೂಪ್ ಹೆಸರನ್ನು ಬದಲಿಸುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.
ಈ ಮೊದಲು ಡಿಯಾಜಿಯೊ ತನ್ನ ಹೇಳಿಕೆಯಲ್ಲಿ ಆರ್ಸಿಬಿ ಮಾರಾಟ ವಿಷಯವನ್ನು ಉಲ್ಲೇಖ ಮಾಡಿತ್ತು. ತಮ್ಮ ಕಂಪನಿಗೂ, ಕ್ರಿಕೆಟ್ ಕ್ಷೇತ್ರಕ್ಕೂ ಯಾವುದೇ ಸಂಬಂಧ ಇಲ್ಲದ ಕಾರಣ ಮಾರ್ಚ್ 31ರೊಳಗೆ ತಂಡವನ್ನು ಮಾರುವುದಾಗಿ ಡಿಯಾಜಿಯೊ ಕಳೆದ ನವೆಂಬರ್ನಲ್ಲಿ ಹೇಳಿತ್ತು.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.
ವಾಷಿಂಗ್ಟನ್, ಮಾರ್ಚ್ 25: ಪಶ್ಚಿಮ ಏಷ್ಯಾದಲ್ಲಿ ಯುದ್ಧ ಉಲ್ಬಣಗೊಳ್ಳುತ್ತಿದ್ದರೂ, ಡೊನಾಲ್ಡ್ ಟ್ರಂಪ್(Donald Trump) ಮಾತ್ರ ತಾವೇ ಯುದ್ಧ ಗೆದ್ದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಇರಾನಿನ ನೌಕಾಪಡೆ, ವಾಯುಪಡೆ ಸಂಪೂರ್ಣವಾಗಿ ನಾಶವಾಗಿದೆ ಎಂದರು. ಗೃಹ ಭದ್ರತಾ ಕಾರ್ಯದರ್ಶಿಯ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಟ್ರಂಪ್, ನಾವು ಈಗ ಮಾತುಕತೆ ನಡೆಸುತ್ತಿದ್ದೇವೆ ಇರಾನ್ ಒಪ್ಪಂದ ಮಾಡಿಕೊಳ್ಳಲು ಸಿದ್ಧವಿದೆ.
ಅವರ ನೌಕಾಪಡೆ ಹೋಗಿದೆ, ಅವರ ವಾಯುಪಡೆ ಹೋಗಿದೆ, ಅವರ ಸಂವಹನ ಹೋಗಿದೆ ಅವರ ಶಕ್ತಿ ಬಹುತೇಕ ಕುಸಿದಿದೆ ಎಂದು ಟ್ರಂಪ್ ಹೇಳಿದ್ದಾರೆ. ಇರಾನ್ ಜತೆಗಿನ ಶಾಂತಿ ಮಾತುಕತೆಗಳು ಯಶಸ್ವಿಯಾಗುತ್ತೆ ಎನ್ನುವ ನಂಬಿಕೆ ಇದೆ, ನಾವು ಯುದ್ಧ ಕೊನೆಗೊಳಿಸುತ್ತೇವೆ, ಆದರೆ ಖಚಿತವಾಗಿ ಹೇಳಲು ಸಾಧ್ಯವಿಲ್ಲ.
ಇರಾನ್ ಒಪ್ಪಂದಕ್ಕೆ ಉತ್ಸುಕವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇರಾನ್ ಸ್ವತಃ ಮಾತುಕತೆಗಳನ್ನು ಪ್ರಾರಂಭಿಸಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಇದಕ್ಕೂ ಮೊದಲು, ಮುಂದಿನ ಐದು ದಿನಗಳವರೆಗೆ ಇರಾನಿನ ವಿದ್ಯುತ್ ಸ್ಥಾವರಗಳ ಮೇಲಿನ ದಾಳಿಗೆ ಅವರು ನಿಷೇಧ ಹೇರಿದ್ದಾರೆ. ಈ ಸಮಯದಲ್ಲಿ ಒಪ್ಪಂದಕ್ಕೆ ಬರಬಹುದು ಎನ್ನಲಾಗಿದೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಸಂಪೂರ್ಣವಾಗಿ ಕೊನೆಗೊಳಿಸಲು ಮಾತುಕತೆ ನಡೆಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದರೆ, ಮಾತುಕತೆ ಕುರಿತು ಟ್ರಂಪ್ ಅವರ ಹೇಳಿಕೆಯನ್ನು ಇರಾನ್ ವಿದೇಶಾಂಗ ಸಚಿವಾಲಯ ತಿರಸ್ಕರಿಸಿದೆ.
ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲಿ ದಾಳಿಗಳು ಮುಂದುವರೆದಿದ್ದು, ದಕ್ಷಿಣ ಟೆಹ್ರಾನ್ನಲ್ಲಿ ನಡೆದ ಒಂದು ದಾಳಿಯಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ ಮತ್ತು 28 ಜನರು ಗಾಯಗೊಂಡಿದ್ದಾರೆ. ಇರಾನ್ ವಾಯು ಪ್ರದೇಶದ ಮೇಲೆ ಅಮೆರಿಕದ ಪಡೆಗಳು ನಿಯಂತ್ರಣ ಹೊಂದಿವೆ.
ನಮ್ಮ ವಿಮಾನಗಳು ಟೆಹ್ರಾನ್ ಮೇಲೆ ಹಾರುತ್ತಿವೆ.ಆದರೆ ಈ ಬಗ್ಗೆ ಅವರಿಗೆ ಏನೂ ಮಾಡಲು ಸಾಧ್ಯವಿಲ್ಲ. ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಲು ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇರಾನ್ ಈ ಷರತ್ತಿಗೆ ಒಪ್ಪಿಕೊಂಡಿದೆ.
ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಧರ್ಮ ಮತ್ತು ಅಧರ್ಮ ಯಾವುದಕ್ಕೆ ಹೆಚ್ಚು ಪ್ರಾಶಸ್ತ್ಯ ಎಂದು ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಇಂದು ಅನೇಕರಲ್ಲಿ ಧರ್ಮ ಮತ್ತು ಅಧರ್ಮಗಳಲ್ಲಿ ಯಾವುದಕ್ಕೆ ಹೆಚ್ಚು ಪ್ರಾಶಸ್ತ್ಯ ಎಂಬ ಪ್ರಶ್ನೆ ಕಾಡುತ್ತದೆ. ಶಾರ್ಟ್ಕಟ್ಗಳ ಮೂಲಕ ಯಶಸ್ಸು ಸಾಧಿಸುವ ಅಧರ್ಮದ ಮಾರ್ಗಗಳು ತಾತ್ಕಾಲಿಕವಾಗಿ ಜಯವನ್ನು ತಂದುಕೊಟ್ಟಂತೆ ಕಂಡರೂ, ಧರ್ಮದ ಹಾದಿಯಲ್ಲಿನ ಕಷ್ಟಗಳು ಸಹಜವಾಗಿ ಕಾಣುತ್ತವೆ. ಸನಾತನ ಧರ್ಮದ ಇತಿಹಾಸವು ಶ್ರೀರಾಮಚಂದ್ರ, ಸತ್ಯ ಹರಿಶ್ಚಂದ್ರ ಮತ್ತು ಧರ್ಮರಾಯರಂತಹ ಮಹನೀಯರು ಧರ್ಮ ಮಾರ್ಗದಲ್ಲಿ ಅನುಭವಿಸಿದ ಕಷ್ಟಗಳನ್ನು ನೆನಪಿಸುತ್ತದೆ. ಆದರೂ, ಅಂತಿಮವಾಗಿ ಧರ್ಮಕ್ಕೇ ಜಯ ಎಂಬುದನ್ನು ಅವರ ಜೀವನ ಚರಿತ್ರೆಗಳು ಸಾಬೀತುಪಡಿಸುತ್ತವೆ. ಅಂತಿಮ ಜಯ ಧರ್ಮಕ್ಕೇ ಎಂದು ಡಾ.ಬಸವರಾಜ ಗುರೂಜಿ ಹೇಳಿದ್ದಾರೆ.
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್ 25, ಬುಧವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಶುಕ್ಲ ಪಕ್ಷ, ಸಪ್ತಮಿ ತಿಥಿ, ಮೃಗಶಿರಾ ನಕ್ಷತ್ರ, ಸೌಭಾಗ್ಯ ಯೋಗ, ವಣಿಕ ಕರಣಗಳನ್ನು ಒಳಗೊಂಡಿದೆ. ಇಂದು ರವಿ ಮೀನ ರಾಶಿಯಲ್ಲಿ, ಚಂದ್ರ ಮಿಥುನ ರಾಶಿಯಲ್ಲಿ ಸಂಚರಿಸಲಿದ್ದಾರೆ. ಸಂತಾನ ಸಪ್ತಮಿ, ಸೂರ್ಯ ದವನಾರ್ಪಣೆ, ಹಾಗೂ ನವಿಲೆ ಆಂಜನೇಯ ಸ್ವಾಮಿ, ಕಿಕ್ಕೇರಿ ಮಹಾಲಕ್ಷ್ಮಿ, ಸೂರತ್ಕಲ್ ಮಹಮ್ಮಾಯಿ ರಥೋತ್ಸವಗಳ ಪರ್ವ ದಿನವಾಗಿದೆ ಎಂದು ಬಸವರಜ ಗುರೂಜಿ ಹೇಳಿದ್ದಾರೆ.
ಬೆಂಗಳೂರು, ಮಾರ್ಚ್ 25: ಮಾರ್ಚ್ 28ಕ್ಕೆ ಐಪಿಎಲ್ (IPL 2026) ಆರಂಭವಾಗಲಿದ್ದು, ಬೆಂಗಳೂರಿನ (Bangalore) ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಹಾಗೂ ಎಸ್ಆರ್ಎಚ್ ಮಧ್ಯೆ ಮ್ಯಾಚ್ ನಡೆಯಲಿದೆ. ಪಂದ್ಯಕ್ಕೆ ನಗರ ಪೊಲೀಸರು ಭಾರೀ ಭದ್ರತೆ ಒದಗಿಸುತ್ತಿದ್ದು, ಸಂಚಾರ ಸಮಸ್ಯೆ ನಿರ್ವಹಣೆಗೂ ಕ್ರಮ ಕೈಗೊಂಡಿದ್ದಾರೆ. ಬೆಂಗಳೂರು ಸಂಚಾರ ಪೊಲೀಸರು ಟ್ರಾಫಿಕ್ ಅಡ್ವೈಸರಿ ಪ್ರಕಟಿಸಿದ್ದು, ಅಭಿಮಾನಿಗಳ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕಾಗಿ ಹಲವು ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಹೇರಲಾಗಿದೆ.
ಕಳೆದ ವರ್ಷದ ಕಾಲ್ತುಳಿತ ಘಟನೆ ಮರುಕಳಿಸದಂತೆ ಈ ಬಾರಿ ಬಿಗಿ ಭದ್ರತೆ, ಎಐ ಕ್ಯಾಮರಾ ಕಣ್ಗಾವಲು, ಹೆಚ್ಚಿನ ಪ್ರವೇಶ ದ್ವಾರಗಳು ಹಾಗೂ ವಿಶೇಷ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಯಾವ ರಸ್ತೆಗಳಲ್ಲಿ ಸಂಚಾರ ಬಂದ್?
ಮಾರ್ಚ್ 28 ಹಾಗೂ ಏಪ್ರಿಲ್ 5ರಂದು ಕೆಳಗಿನ ರಸ್ತೆಗಳು ಸಂಪೂರ್ಣ ಅಥವಾ ಭಾಗಶಃ ಬಂದ್ ಆಗಲಿವೆ;
ಕ್ವೀನ್ಸ್ ರಸ್ತೆ ಸಂಪೂರ್ಣ ನಿರ್ಬಂಧ
ಬಾಳೆಕುಂದ್ರಿ ರಸ್ತೆ ಮತ್ತು ಸಿಟಿಓ ಜಂಕ್ಷನ್ ಬಂದ್
ಎಂ.ಜಿ ರಸ್ತೆ – ಅನಿಲ್ ಕುಂಬಳೆ ವೃತ್ತದಿಂದ ಜಂಕ್ಷನ್ ವರೆಗೆ ನಿಷೇಧ
ಲಿಂಕ್ ರಸ್ತೆ ಮೂಲಕ ಎಂ.ಜಿ ರಸ್ತೆ ಹಾಗೂ ಕಬ್ಬನ್ ರಸ್ತೆ ಸಂಪರ್ಕ ಬಂದ್
ರಾಜಭವನ ರಸ್ತೆ, ಟಿ. ಚೌಡಯ್ಯ ರಸ್ತೆ, ರೇಸ್ ಕೋರ್ಸ್ ರಸ್ತೆ ನಿಷೇಧ
ಸೆಂಟ್ರಲ್ ಸ್ಟ್ರೀಟ್ ಎರಡೂ ಬದಿಯಲ್ಲಿ ವಾಹನ ನಿಲುಗಡೆ ನಿಷೇಧ
ಲ್ಯಾವೆಲ್ಲೆ ರಸ್ತೆ – ಕ್ವೀನ್ ವೃತ್ತದಿಂದ ವಿಠ್ಠಲ್ ಮಲ್ಯ ರಸ್ತೆವರೆಗೆ ಬಂದ್
ಕಸ್ತೂರಬಾ ರಸ್ತೆ – ಕ್ವೀನ್ಸ್ ವೃತ್ತದಿಂದ ಹಡ್ಸನ್ ವೃತ್ತದವರೆಗೆ ಬಂದ್
ಸೇಂಟ್ ಮಾರ್ಕ್ಸ್ ರಸ್ತೆ – ಕ್ಯಾಶ್ ಫಾರ್ಮಸಿ ಜಂಕ್ಷನ್ನಿಂದ ಅನಿಲ್ ಕುಂಬಳೆ ವೃತ್ತದವರೆಗೆ ನಿಷೇಧ
ಕಬ್ಬನ್ ಪಾರ್ಕ್ ಒಳಗಿನ ಕಿಂಗ್ ರಸ್ತೆ ಹಾಗೂ ಪ್ರೆಸ್ ಕ್ಲಬ್ ಮುಂಭಾಗ ಬಂದ್
ಬಾಲಭವನ್ ಮುಂಭಾಗ ಫೌಂಟೇನ್ ರಸ್ತೆ ಪಾರ್ಕಿಂಗ್ ನಿಷೇಧ
ಪಾರ್ಕಿಂಗ್ ವ್ಯವಸ್ಥೆ ಎಲ್ಲೆಲ್ಲಿ?
ಸೆಂಟ್ ಜೋಸೆಫ್ ಇಂಡಿಯನ್ ಹೈ ಸ್ಕೂಲ್ ಮೈದಾನ
ಸೆಂಟ್ ಜೋಸೆಫ್ ಸ್ಕೂಲ್ ಮೈದಾನ
ಫ್ರೀಡಂ ಪಾರ್ಕ್ MLCP ಪಾರ್ಕಿಂಗ್
ಗರುಡ ಮಾಲ್ ಪಾರ್ಕಿಂಗ್
ಶಿವಾಜಿನಗರ ಬಸ್ ನಿಲ್ದಾಣ (1ನೇ ಮಹಡಿ)
ಈ ಸ್ಥಳಗಳಲ್ಲಿ ಬೆಳಿಗ್ಗೆ 11ರಿಂದ ರಾತ್ರಿ 9ರವರೆಗೆ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ಪ್ರವೇಶ ಮತ್ತು ನಿರ್ಗಮನ ದ್ವಾರಗಳ ವಿವರ
ಪ್ರವೇಶ ದ್ವಾರಗಳು
E1, E2, E3, E18, E19, E22
E11 ರಿಂದ E17 ವರೆಗೆ
ನಿರ್ಗಮನ ದ್ವಾರಗಳು
E5, E8, E9, E9A
ವಿಶೇಷ ಪ್ರವೇಶ
E10 ಗೇಟ್ – ಆಟಗಾರರು, ವಿಐಪಿ ಮತ್ತು ಪ್ರಮುಖರಿಗೆ ಮಾತ್ರ
ಕ್ಯಾಬ್ ಪಿಕ್ಅಪ್ & ಡ್ರಾಪ್ ಪಾಯಿಂಟ್ಗಳು
BRV ಗ್ರೌಂಡ್ (ಗೇಟ್ 6)
ಮಾಣಿಕ್ ಷಾ ಪರೇಡ್ ಗ್ರೌಂಡ್ (ಗೇಟ್ 3)
ಇತರೆ ಮುಖ ಸೂಚನೆಗಳು
ಪ್ರತಿ 3 ನಿಮಿಷಕ್ಕೊಮ್ಮೆ ಮೆಟ್ರೋ ರೈಲು ಸಂಚಾರ
ಪಂದ್ಯ ಆರಂಭಕ್ಕೂ 4 ಗಂಟೆಗಳ ಮುಂಚೆಯೇ ಪ್ರವೇಶ
ಟಿಕೆಟ್ ಹೊಂದಿರುವವರಿಗೆ ಮಾತ್ರ ಪ್ರವೇಶ (ಆನ್ಲೈನ್ ಟಿಕೆಟ್ ಮಾತ್ರ)
500ಕ್ಕೂ ಹೆಚ್ಚು ಸಿಸಿಟಿವಿ ಹಾಗೂ ಎಐ ಕಣ್ಗಾವಲು ವ್ಯವಸ್ಥೆ
9 ಅಂಬ್ಯುಲೆನ್ಸ್ ಮತ್ತು ವೈದ್ಯಕೀಯ ತಂಡ ಸಿದ್ಧ
ಪಂದ್ಯ ದಿನ ಹೆಚ್ಚಿನ ಜನಸಂದಣಿ ಇರುವುದರಿಂದ ಸಾರ್ವಜನಿಕರು ಸಾಧ್ಯವಾದಷ್ಟು ಮೆಟ್ರೋ ಬಳಸಬೇಕು. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಟ್ರಾಫಿಕ್ ಸಮಸ್ಯೆ ತಪ್ಪಿಸಲು ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
‘ಧುರಂಧರ್ 2’ ಸಿನಿಮಾ (Dhurandhar 2 Movie) ಬಾಕ್ಸ್ ಆಫೀಸ್ನಲ್ಲಿ ಊಹೆಗೂ ಮೀರಿ ಕಲೆಕ್ಷನ್ ಮಾಡುತ್ತಿದೆ. ಸಿನಿಮಾದ ಒಟ್ಟಾರೆ ಕಲೆಕ್ಷನ್ ವಿಶ್ವಮಟ್ಟದಲ್ಲಿ ಬರೋಬ್ಬರಿ 900 ಕೋಟಿ ರೂಪಾಯಿ ಆಗಿದೆ. ಅದು ಕೂಡ ಕೇವಲ ಆರು ದಿನಗಳಲ್ಲಿ. ಈ ಸಿನಿಮಾ ಅರಬ್ ರಾಷ್ಟ್ರಗಳಲ್ಲಿ ಬ್ಯಾನ್ ಆಗಿದೆ. ಆದಾಗ್ಯೂ ಸಿನಿಮಾದ ಗಳಿಕೆಗೆ ಯಾವುದೇ ತೊಂದರೆ ಆಗಿಲ್ಲ. ಆದರೆ, ಒಂದು ವಿಷಯದಲ್ಲಿ ‘ಧುರಂಧರ್ 2’ ಸೋತು ಹೋಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹಾಗಾದರೆ ಅದು ಯಾವ ವಿಷಯದಲ್ಲಿ? ಆ ಬಗ್ಗೆ ಇಲ್ಲಿದೆ ವಿವರ.
‘ಧುರಂಧರ್ 2’ ಸಿನಿಮಾನ ಆದಿತ್ಯಧಾರ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾಗೆ ರಣವೀರ್ ಸಿಂಗ್ ಹೀರೋ. ಸಾರಾ ಅರ್ಜುನ್ ಚಿತ್ರದ ನಾಯಕಿ. ‘ಧುರಂಧರ್’ ಸಿನಿಮಾ ರಿಲೀಸ್ಗೂ ಮೊದಲೇ ಸಾಕಷ್ಟು ನೆಗೆಟಿವ್ ಪಡೆದುಕೊಂಡಿತು. ಆದರೆ, ಸಿನಿಮಾ ಗೆಲ್ಲುವಲ್ಲಿ ಯಶಸ್ವಿ ಆಯಿತು. ಮೊದಲ ಭಾಗದ ಕಲೆಕ್ಷನ್ 1300 ಕೋಟಿ ರೂಪಾಯಿ. ಈಗ ಚಿತ್ರದ ಸೀಕ್ವೆಲ್ ಆರೇ ದಿನಕ್ಕೆ 900 ಕೋಟಿ ರೂಪಾಯಿ ತಲುಪಿದೆ. ಇನ್ನು ಕೆಲವೇ ದಿನಗಳಲ್ಲಿ ಮೊದಲ ಭಾಗದ ಕಲೆಕ್ಷನ್ ಹಿಂದಿಕ್ಕಲಿದೆ.
‘ಧುರಂಧರ್ 2’ ಸಿನಿಮಾದ ಭಾರತದ ಗ್ರಾಸ್ ಕಲೆಕ್ಷನ್ 600 ಕೋಟಿ ರೂಪಾಯಿ ದಾಟಿದೆ. ಹಿಂದಿ ಚಿತ್ರವೊಂದು ಈ ಮಟ್ಟದಲ್ಲಿ ಗಳಿಕೆ ಮಾಡುತ್ತಿರುವುದು ಇದೇ ಮೊದಲು. ಇದು ಚಿತ್ರತಂಡದ ಖುಷಿ ಹೆಚ್ಚಿಸಿದೆ. ಸತತ ಸೋಲುಗಳಿಂದ ಕಂಗಾಲಾಗಿದ್ದ ಬಾಲಿವುಡ್ಗೆ ಈ ಸಿನಿಮಾ ಮೂಲಕ ಒಂದು ದೊಡ್ಡ ಚೇತರಿಕೆ ಸಿಕ್ಕಿದೆ.
ಆದರೆ, ‘ಧುರಂಧರ್ 2’ ಸಿನಿಮಾ ಒಂದು ವಿಷಯದಲ್ಲಿ ಸೋತಿದೆ. ಅದು ಯಾವ ವಿಷಯ ಅನ್ನುತ್ತೀರಾ? ಸ್ಥಳೀಯ ಭಾಷೆಗಳಲ್ಲಿ ಈ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣುತ್ತಿಲ್ಲ. ಹೌದು, ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಗೆ ಡಬ್ ಆದ ವರ್ಷನ್ಗಳು ಪ್ರಭಾವ ಬೀರಲು ವಿಫಲವಾಗಿವೆ. ಕನ್ನಡ ವರ್ಷನ್ ರಿಲೀಸ್ ನಾನಾಕಾರಣದಿಂದ ಮುಂದಕ್ಕೆ ಹೋಗಿತ್ತು. ಇತ್ತೀಚೆಗಷ್ಟೇ ಸಿನಿಮಾ ರಿಲೀಸ್ ಆಗಿದೆ. ಇದು ಕೂಡ ಹೆಚ್ಚು ಜನರನ್ನು ತಲುಪದೆ ಇರಲು ಕಾರಣ ಆಗಿರಬಹುದು ಎಂದು ಊಹಿಸಲಾಗಿದೆ.