ಪ್ರತ್ಯೇಕ ರಸ್ತೆ ಅಪಘಾತಗಳು: ಐವರು ಸಾವು, ಓರ್ವನ ಕಾಲು ಮುರಿತ

ಪ್ರತ್ಯೇಕ ರಸ್ತೆ ಅಪಘಾತಗಳು: ಐವರು ಸಾವು, ಓರ್ವನ ಕಾಲು ಮುರಿತ

ತುಮಕೂರು, ಮಾರ್ಚ್​ 20: ಕೆಎಸ್ಆರ್​ಟಿಸಿ ಬಸ್ ಡಿಕ್ಕಿ ಹೊಡೆದು ಬೈಕ್​ನಲ್ಲಿ ತೆರಳುತ್ತಿದ್ದ ಇಬ್ಬರು ಸಾವರರು ಸಾವನ್ನಪ್ಪಿರುವಂತಹ (death) ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಬರಗೂರು ದಾಸರಹಳ್ಳಿ ಮಧ್ಯೆ ನಡೆದಿದೆ. ಬರಗೂರು ನಿವಾಸಿ ನರಸಿಂಹಮೂರ್ತಿ (26) ಮತ್ತು ಎಲ್ಪೆನಹಳ್ಳಿ ನಿವಾಸಿ ನವೀನ್ (26) ಮೃತ‌ರು. ಸ್ಥಳಕ್ಕೆ ಪಟ್ಟನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ನಡೆದಿದ್ದೇನು?

ನರಸಿಂಹಮೂರ್ತಿ ಮತ್ತು ನವೀನ್​ ಇಬ್ಬರು ಬೈಕ್​​ನಲ್ಲಿ ತೆರಳುತ್ತಿದ್ದರು. ಈ ವೇಳೆ ಪಾವಗಡದಿಂದ ತುಮಕೂರಿನತ್ತ ಬರುತಿದ್ದ ಬಸ್​ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಬೈಕ್​ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. KSRTC ಬಸ್ ಡಿಕ್ಕಿ ರಭಸಕ್ಕೆ ಬೈಕ್​ನಲ್ಲಿ ತೆರಳುತ್ತಿದ್ದ ಇಬ್ಬರು ಸಾವನ್ನಪ್ಪಿದ್ದಾರೆ.

ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಸಾವು

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಬೆಟ್ಟಕೋಟೆ‌ ಗ್ರಾಮದಲ್ಲಿ ಕಾರೊಂದು ಡಿವೈಡರ್​ಗೆ ಡಿಕ್ಕಿ ಹೊಡೆದು ಬಳಿಕ ಬೈಕ್​ಗೆ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ವೆಂಕಟೇಗೌಡ(45) ಮೃತ ವ್ಯಕ್ತಿ.

ಇದನ್ನೂ ಓದಿ: ಕೋತಿ ಕಿತಾಪತಿಗೆ ಹೆಜ್ಜೇನು ದಾಳಿ: ಜೀವ ಬಿಟ್ಟ ಕಾರು ಶೋರೂಂ ಮೇಲ್ವಿಚಾರಕ!

ಆಕಾಶ್ ಕಾಲೇಜಿನ ಮೆಡಿಕಲ್ ವಿದ್ಯಾರ್ಥಿ ಆನಂದ್​ಗೆ ಸೇರಿದ ಕಾರು. ಅತಿವೇಗ ಹಾಗೂ ಅಜಾಗರೂಕತೆಯ ಡ್ರೈವಿಂಗ್​ನಿಂದ ಅಪಘಾತ ಸಂಭವಿಸಿರುವ ಆರೋಪ ಕೇಳಿಬಂದಿದೆ. ಇನ್ನು ಸ್ಥಳಕ್ಕೆ ದೇವನಹಳ್ಳಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ರಸ್ತೆ ಬದಿ ನಿಂತಿದ್ದ ಟಿಪ್ಪರ್​ಗೆ ಕ್ಯಾಂಟರ್ ಡಿಕ್ಕಿ: ಇಬ್ಬರು ಸಾವು

ಕೊಪ್ಪಳ ಜಿಲ್ಲೆಯ ಕುಷ್ಟಗಿ ಹೊರವಲಯದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ರಸ್ತೆ ಬದಿ ನಿಂತಿದ್ದ ಟಿಪ್ಪರ್​​​ಗೆ ಕ್ಯಾಂಟರ್ ಡಿಕ್ಕಿ ಹೊಡೆದು ಇಬ್ಬರು ಸಾವನ್ನಪ್ಪಿದ್ದಾರೆ. ಜಿಲ್ಲೆ ಯಲಬುರ್ಗಾ ತಾಲೂಕಿನ ಕಟಿಗೆಹಳ್ಳಿ ಗ್ರಾಮದ ಹುಚ್ಚಪ್ಪ ಹಾಗೂ ಗೋವಿಂದ್ ಮೃತರು.

ಕ್ಯಾಂಟರ್ ಸೊಲ್ಲಾಪುರದಿಂದ ಹೊಸಪೇಟೆ ಕಡೆ ಹೊರಟಿತ್ತು. ಈ ವೇಳೆ ರಸ್ತೆ ಪಕ್ಕದಲ್ಲಿ ನಿಂತಿದ್ದ ಟಿಪ್ಪರ್​ಗೆ ಡಿಕ್ಕಿ ಹೊಡೆದಿದೆ. ಅಪಘಾತದಿಂದಾಗಿ ಕ್ಯಾಂಟರ್​ನಲ್ಲಿದ್ದ ಡಿಸೇಲ್ ಸೋರಿಕೆಯಾಗಿ ರಸ್ತೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಬುಲೆರೋ ವಾಹನ ಡಿಕ್ಕಿ: ಗ್ರಾ. ಪಂ ಮಾಜಿ ಅಧ್ಯಕ್ಷನ ಕಾಲು ಮುರಿತ

ಬೈಕ್​ಗೆ ಬುಲೆರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷನ ಕಾಲು ಮುರಿದಿರುವಂತಹ ಘಟನೆ ರಾಯಚೂರು ತಾಲ್ಲೂಕಿನ ಕಲ್ಮಲಾ ಬಳಿ ನಡೆದಿದೆ. ಮುರಾಂಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಪ್ಪರ ಕಾಲು ಮುರಿದಿದೆ.

ಇದನ್ನೂ ಓದಿ: ಹುಳಿಯಾರು ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಅನುಮಾನಸ್ಪದ ಸಾವು: ಕೇಸ್​​ ತನಿಖೆ ಹೊಣೆ ಸಿಐಡಿಗೆ

ಬೈಕ್​ನಲ್ಲಿದ್ದ ಮೂವರಿಗೆ ಗಾಯಗಳಾಗಿದ್ದು, ಆಂಬ್ಯುಲೆನ್ಸ್ ಕರೆಸಿ ಗಾಯಗೊಂಡವರನ್ನು ಸ್ಥಳೀಯರು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮುಂದಕ್ಕೆ ಹೋಗುತ್ತಾ ‘ಪೆದ್ದಿ’ ಸಿನಿಮಾ? ಉತ್ತರಕ್ಕೆ ಕಾದಿರುವ ರಾಮ್ ಚರಣ್ ಫ್ಯಾನ್ಸ್

‘ಮೆಗಾ ಪವರ್ ಸ್ಟಾರ್’ ರಾಮ್ ಚರಣ್ ಮತ್ತು ‘ಉಪ್ಪೇನ’ ಖ್ಯಾತಿಯ ನಿರ್ದೇಶಕ ಬುಚ್ಚಿ ಬಾಬು ಸನಾ ಕಾಂಬಿನೇಶನ್‌ನ ಬಹುನಿರೀಕ್ಷಿತ ‘ಪೆದ್ದಿ’ (Peddi) ಸಿನಿಮಾ ಬಗ್ಗೆ ಕಳೆದ ಕೆಲವು ದಿನಗಳಿಂದ ವದಂತಿಗಳು ಹರಿದಾಡುತ್ತಿವೆ. ಈ ಪ್ಯಾನ್ ಇಂಡಿಯಾ ಚಿತ್ರವು ನಿಗದಿತ ಸಮಯಕ್ಕೆ ಬಿಡುಗಡೆಯಾಗುವುದಿಲ್ಲ ಎಂಬ ಗಾಳಿಸುದ್ದಿಯಿಂದ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಆದರೆ ಶೀಘ್ರದಲ್ಲೇ ಈ ಬಗ್ಗೆ ಚಿತ್ರತಂಡದಿಂದ ಸ್ಪಷ್ಟನೆ ಸಿಗುವ ನಿರೀಕ್ಷೆ ಇದೆ. ಅದಕ್ಕಾಗಿ ರಾಮ್ ಚರಣ್ (Ram Charan) ಫ್ಯಾನ್ಸ್ ಕಾದಿದ್ದಾರೆ.

‘ಪೆದ್ದಿ’ ಸಿನಿಮಾದ ಕೆಲಸಗಳು ಬಾಕಿ ಇರುವುದರಿಂದ ಸಿನಿಮಾ ಬಿಡುಗಡೆ ಮುಂದೂಡಿಕೆಯಾಗಲಿದೆ ಎಂಬ ವದಂತಿಗಳು ಚಿತ್ರರಂಗದಲ್ಲಿ ಕೇಳಿಬರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಚರ್ಚೆಗಳು ನಡೆದು ರಾಮ್ ಚರಣ್ ಅವರ ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿ ಆಗಿದೆ. ಆದರೆ, ಚಿತ್ರತಂಡದ ಆಪ್ತ ಮೂಲಗಳ ಪ್ರಕಾರ, ಈ ವದಂತಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಈ ಹಿಂದೆ ಯೋಜಿಸಿದಂತೆಯೇ ಏಪ್ರಿಲ್ 30ರಂದು ಚಿತ್ರವು ವಿಶ್ವಾದ್ಯಂತ ತೆರೆಕಾಣಲಿದೆ.

ರಾಮ್ ಚರಣ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸ್ಪಷ್ಟನೆ ಸಿಗಲಿದೆ. ಕೇಳಿಬಂದಿರುವ ವದಂತಿಗಳಿಗೆ ಖಡಕ್ ಉತ್ತರ ನೀಡಲು ಚಿತ್ರತಂಡ ಸಜ್ಜಾಗಿದೆ. ಈ ವಾರ, ಅಂದರೆ ಮಾರ್ಚ್ 27ರಂದು ರಾಮ್ ಚರಣ್ ಅವರ ಜನ್ಮದಿನದ ಪ್ರಯುಕ್ತ ಚಿತ್ರದ ಗ್ಲಿಂಪ್ಸ್ ಬಿಡುಗಡೆ ಆಗಲಿದೆ. ಈ ವಿಡಿಯೋ ಮೂಲಕ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಮರುಖಚಿತಪಡಿಸಲಿದೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಒಮ್ಮೆ ಈ ಸಿನಿಮಾದ ಬಿಡುಗಡೆ ದಿನಾಂಕವನ್ನು ಮಾರ್ಚ್ 27ರಿಂದ ಏಪ್ರಿಲ್ 30ಕ್ಕೆ ಮುಂದೂಡಲಾಗಿತ್ತು. ಹಾಗಾಗಿ ಮತ್ತೊಮ್ಮೆ ದಿನಾಂಕ ಬದಲಾಯಿಸುವ ಉದ್ದೇಶ ಚಿತ್ರತಂಡಕ್ಕಿಲ್ಲ. ಸಿನಿಮಾ ತಂಡವು ಹಗಲಿರುಳು ಶ್ರಮಿಸುತ್ತಿದ್ದು, ನಿಗದಿತ ಸಮಯಕ್ಕೆ ಚಿತ್ರವನ್ನು ಥಿಯೇಟರ್‌ಗೆ ತರಲು ಸಿದ್ಧತೆ ನಡೆಸುತ್ತಿದೆ. ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಸಂಗೀತ ನೀಡುತ್ತಿದ್ದು, ಈಗಾಗಲೇ ಬಿಡುಗಡೆಯಾಗಿರುವ ಎರಡು ಹಾಡುಗಳು ಸೂಪರ್ ಹಿಟ್ ಆಗಿವೆ. ವೃದ್ಧಿ ಸಿನಿಮಾಸ್ ಸಂಸ್ಥೆ ಈ ಬೃಹತ್ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.

ಇದನ್ನೂ ಓದಿ: ಚಿಕ್ಕಪ್ಪನಿಗಾಗಿ ‘ಪೆದ್ದಿ’ ಸಿನಿಮಾ ಬಿಡುಗಡೆ ಮುಂದೂಡಿದರೇ ರಾಮ್ ಚರಣ್?

‘ಪೆದ್ದಿ’ ಚಿತ್ರದಲ್ಲಿ ಬಾಲಿವುಡ್ ಸುಂದರಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ವಿಶೇಷವೆಂದರೆ, ಕನ್ನಡದ ‘ಹ್ಯಾಟ್ರಿಕ್ ಹೀರೋ’ ಶಿವರಾಜ್‌ಕುಮಾರ್ ಅವರು ಈ ಚಿತ್ರದಲ್ಲಿ ಅತ್ಯಂತ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿರುವುದು ಕನ್ನಡಿಗರಲ್ಲಿ ಕುತೂಹಲ ಮೂಡಿಸಿದೆ. ಇವರ ಜೊತೆಗೆ ದಿವ್ಯೇಂದು ಶರ್ಮಾ, ಜಗಪತಿ ಬಾಬು ಮತ್ತು ಬೋಮನ್ ಇರಾನಿ ಕೂಡ ತಾರಾಗಣದಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಟ್ರಂಪ್​ಗೆ ಮುಖಭಂಗ; ಅಮೆರಿಕದ ಯುದ್ಧವಿಮಾನಕ್ಕೆ ನೋ ಎಂಟ್ರಿ ಎಂದ ಶ್ರೀಲಂಕಾ

ಕೊಲಂಬೊ, ಮಾರ್ಚ್ 20: ಶ್ರೀಲಂಕಾ ಮಾರ್ಚ್ ಆರಂಭದಲ್ಲಿ ದ್ವೀಪ ರಾಷ್ಟ್ರದ ಮಟ್ಟಾಲಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕ (United States) ತನ್ನ 2 ಯುದ್ಧ ವಿಮಾನಗಳನ್ನು ಇಳಿಸಲು ಅನುಮತಿ ನಿರಾಕರಿಸಿದೆ. ಈ ಬಗ್ಗೆ ಶ್ರೀಲಂಕಾದ ಅಧ್ಯಕ್ಷ ಅನುರ ಕುಮಾರ ದಿಸಾನಾಯಕ ಶ್ರೀಲಂಕಾದ ಸಂಸತ್ತಿನಲ್ಲಿ ತಿಳಿಸಿದ್ದಾರೆ. ಜಿಬೌಟಿಯಲ್ಲಿ ಬೀಡುಬಿಟ್ಟಿದ್ದ ಅಮೆರಿಕದ ಯುದ್ಧವಿಮಾನಗಳು ಮಾರ್ಚ್‌ನಲ್ಲಿ 2 ಬಾರಿ ಇಳಿಯಲು ಅನುಮತಿ ಕೋರಿದ್ದವು. ಆದರೆ ಎರಡೂ ಮನವಿಗಳನ್ನು ತಿರಸ್ಕರಿಸಲಾಯಿತು.

“ಹಲವು ಒತ್ತಡಗಳ ಹೊರತಾಗಿಯೂ ನಾವು ನಮ್ಮ ತಟಸ್ಥತೆಯನ್ನು ಕಾಪಾಡಿಕೊಳ್ಳಲು ಬಯಸುತ್ತೇವೆ. ನಾವು ಯಾವುದಕ್ಕೂ ಮಣಿಯುವುದಿಲ್ಲ. ಮಧ್ಯಪ್ರಾಚ್ಯ ಯುದ್ಧವು ಸವಾಲುಗಳನ್ನು ಒಡ್ಡುತ್ತದೆ. ಆದರೆ ಈ ವಿಷಯದಲ್ಲಿ ತಟಸ್ಥವಾಗಿರಲು ನಾವು ಸಾಧ್ಯವಿರುವ ಎಲ್ಲ ಪ್ರಯತ್ನವನ್ನೂ ಮಾಡುತ್ತೇವೆ” ಎಂದು ಶ್ರೀಲಂಕಾದ ಅಧ್ಯಕ್ಷ ಹೇಳಿದ್ದಾರೆ.

ಇದನ್ನೂ ಓದಿ: ಇರಾನ್​ಗೆ ಮತ್ತೊಂದು ಹೊಡೆತ; ಅಮೆರಿಕ- ಇಸ್ರೇಲ್ ದಾಳಿಯಲ್ಲಿ ಐಆರ್‌ಜಿಸಿ ವಕ್ತಾರ ಅಲಿ ನೈನಿ ಹತ್ಯೆ

ಅಮೆರಿಕದ ವಿಮಾನವು ತಲಾ 8 ಹಡಗು ವಿರೋಧಿ ಕ್ಷಿಪಣಿಗಳನ್ನು ಹೊಂದಿರುವ 2 ಯುದ್ಧವಿಮಾನಗಳನ್ನು ತರಲು ಪ್ರಯತ್ನಿಸಿದೆ. ದಕ್ಷಿಣ ಮತ್ತು ಮಧ್ಯ ಏಷ್ಯಾದ ಅಮೆರಿಕದ ವಿಶೇಷ ರಾಯಭಾರಿ ಸೆರ್ಗಿಯೊ ಗೋರ್ ಅವರೊಂದಿಗಿನ ಅನುರ ಕುಮಾರ ದಿಸಾನಾಯಕೆ ಅವರ ಸಭೆಯ ನಂತರ ಈ ಘೋಷಣೆ ಮಾಡಲಾಯಿತು. ಪ್ರಮುಖ ಸಮುದ್ರ ಮಾರ್ಗಗಳನ್ನು ರಕ್ಷಿಸುವುದು, ಬಂದರು ಭದ್ರತೆಯನ್ನು ಬಲಪಡಿಸುವುದು, ವ್ಯಾಪಾರ ಸಹಕಾರವನ್ನು ಹೆಚ್ಚಿಸುವುದು ಮತ್ತು ಮುಕ್ತ ಇಂಡೋ-ಪೆಸಿಫಿಕ್ ಅನ್ನು ಮುನ್ನಡೆಸುವುದರ ಮೇಲೆ ಈ ಚರ್ಚೆಗಳು ಕೇಂದ್ರೀಕೃತವಾಗಿತ್ತು.

ಇದನ್ನೂ ಓದಿ: ನೀವಾಗೇ ಅಮೆರಿಕ ಬಿಟ್ಟು ಹೋಗಿ; ಫ್ಲೈಟ್ ಟಿಕೆಟ್ ಕೊಡ್ತೀವಿ, ಎರಡೂವರೆ ಲಕ್ಷ ರೂ ಹಣ ಕೊಡ್ತೀವಿ: ವಲಸಿಗ ಭಾರತೀಯರಿಗೆ ಅಮೆರಿಕ ಆಫರ್

ಮಾರ್ಚ್ 4 ಮತ್ತು 8ರಂದು ಕೆಂಪು ಸಮುದ್ರ ಮತ್ತು ಅಡೆನ್ ಕೊಲ್ಲಿಯ ನಡುವಿನ ನಿರ್ಣಾಯಕ ಸಮುದ್ರ ದ್ವಾರವಾದ ಜಿಬೌಟಿಯಲ್ಲಿ ಅಮೆರಿಕದ ಯುದ್ಧವಿಮಾನಗಳನ್ನು ಇಳಿಸಲು ಮನವಿ ಮಾಡಲಾಗಿತ್ತು. ಆದರೆ, ಇವೆರಡನ್ನೂ ನಿರಾಕರಿಸಲಾಯಿತು. ಅಮೆರಿಕಾದ ಮಿಲಿಟರಿ ವಿಮಾನಗಳಿಗೆ ಆತಿಥ್ಯ ವಹಿಸದಿರುವ ಶ್ರೀಲಂಕಾದ ನಿರ್ಧಾರವು ಮಿಲಿಟರಿ ಕಾರ್ಯಾಚರಣೆಗಳಲ್ಲಿ ಸಿಲುಕಿಕೊಳ್ಳುವ ಅಥವಾ ಅಮೆರಿಕದ ಕೆಂಗಣ್ಣಿಗೆ ತುತ್ತಾಗುವ ಅಪಾಯವನ್ನು ಪ್ರತಿಬಿಂಬಿಸುತ್ತದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಆಫೀಸ್ ಕಾರ್ಡ್ ಬಳಕೆ, ಪ್ಯಾನ್ ಕಡ್ಡಾಯ, ಅಡ್ರೆಸ್ ಪ್ರೂಫ್ ಇತ್ಯಾದಿ ಗಮನಿಸಬೇಕಾದ ಹೊಸ ಕ್ರೆಡಿಟ್ ಕಾರ್ಡ್ ನಿಯಮಗಳು

ನವದೆಹಲಿ, ಮಾರ್ಚ್ 20: ಹೊಸ ಆದಾಯ ತೆರಿಗೆ ಕಾಯ್ದೆ (New Income Tax Rules) ಮುಂಬರುವ ಹಣಕಾಸು ವರ್ಷದಿಂದ ಜಾರಿಗೆ ಬರಲಿದೆ. ಏಪ್ರಿಲ್ 1ರಿಂದ ಬರುವ ಈ ಕಾಯ್ದೆಯಿಂದಾಗಿ ಕ್ರೆಡಿಟ್ ಕಾರ್ಡ್ ಕ್ಷೇತ್ರದಲ್ಲಿ ಕೆಲ ನಿಯಮಗಳ ಬದಲಾವಣೆ ಆಗಲಿದೆ. ಕಾರ್ಡ್ ಸ್ವೈಪ್ ಮೂಲಕ ಅಧಿಕ ಮೌಲ್ಯದ ವಹಿವಾಟುಗಳಿಗೆ (High value transactions) ಮಾಡುವ ಪಾವತಿ ಮೇಲೆ ಆದಾಯ ತೆರಿಗೆ ಇಲಾಖೆ ಗಮನ ಹರಿಸುವುದರಿಂದ ಹಿಡಿದು, ತೆರಿಗೆ ಅನ್ವಯ ಆಗುವವರೆಗೂ ಕೆಲ ಹೊಸ ನಿಯಮಗಳು ಜಾರಿಗೆ ಬರಲಿವೆ. ತೆರಿಗೆ ವಂಚನೆ ತಪ್ಪಿಸಲು ಮತ್ತು ಕ್ರೆಡಿಟ್ ಕಾರ್ಡ್ ಬಳಕೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಅನುವು ಮಾಡಿಕೊಡುವಂತಹ ಕೆಲ ನಿಯಮಗಳು ಇದರಲ್ಲಿ ಒಳಗೊಂಡಿರುತ್ತವೆ.

ಅಧಿಕ ಮೌಲ್ಯದ ವಹಿವಾಟುಗಳ ಮೇಲೆ ಕಣ್ಣು

ಕ್ರೆಡಿಟ್ ಕಾರ್ಡ್ ಮೂಲಕ ಅಧಿಕ ಮೊತ್ತದ ಪಾವತಿ ಮಾಡಿದರೆ ಅದು ಆದಾಯ ಇಲಾಖೆ ಗಮನಕ್ಕೆ ಹೋಗುತ್ತದೆ. ಒಂದು ವರ್ಷದಲ್ಲಿ 10 ಲಕ್ಷ ರೂಗಿಂತ ಹೆಚ್ಚಿನ ಮೊತ್ತವನ್ನು ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡಿದ್ದರೆ, ಅದರ ವಿವರವನ್ನು ಬ್ಯಾಂಕ್ ಅಥವಾ ಕ್ರೆಡಿಟ್ ಕಾರ್ಡ್ ಸಂಸ್ಥೆ ಆದಾಯ ತೆರಿಗೆ ಇಲಾಖೆಗೆ ಕೊಡಬಹುದು.

ಇದನ್ನೂ ಓದಿ: ಚಿನ್ನದ ಬೆಲೆ ಸತತವಾಗಿ ಇಳಿಯುತ್ತಿರುವುದು ಯಾಕೆ? ಮತ್ತೆ ಯಾವಾಗ ಏರಿಕೆಯಾಗುತ್ತೆ?

ಒಂದು ಲಕ್ಷ ರೂಗಿಂತ ಹೆಚ್ಚಿನ ಮೊತ್ತದ ಕ್ಯಾಷ್ ಪಾವತಿಯಾದಾಗಲೂ ಬ್ಯಾಂಕುಗಳು ಅದನ್ನು ಐಟಿ ಇಲಾಖೆಯ ಗಮನಕ್ಕೆ ತರುತ್ತದೆ. ಹಿಂದೆಯೂ ಇಂಥ ನಿಯಮ ಇತ್ತಾದರೂ ಈಗ ಈ ನಿಯಮವನ್ನು ಬಿಗಿಗೊಳಿಸಲಾಗಿದೆ, ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತದೆ.

ಪ್ಯಾನ್​ಗೆ ಅಡ್ರೆಸ್ ಪ್ರೂಫ್ ಆಗಿ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್

ಪ್ಯಾನ್ ಕಾರ್ಡ್ ಮಾಡಿಸಲು ಆಧಾರ್ ಜೊತೆಗೆ ಬೇರೆ ಕೆಲ ದಾಖಲೆಗಳನ್ನು ಕೊಡಬೇಕು. ಅಡ್ರೆಸ್ ಪ್ರೂಫ್ ದಾಖಲೆಯಾಗಿ ಇತ್ತೀಚಿನ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ಅನ್ನು ಕೊಡಲು ಅನುಮತಿಸಲಾಗಿದೆ.

ಕ್ರೆಡಿಟ್ ಕಾರ್ಡ್ ಮೂಲಕ ಆದಾಯ ತೆರಿಗೆ ಪಾವತಿ

ಆದಾಯ ತೆರಿಗೆ ಪಾವತಿಯನ್ನು ಕ್ರೆಡಿಟ್ ಕಾರ್ಡ್ ಮೂಲಕ ಮಾಡಲು ಅನುಮತಿಸಲಾಗಿದೆ. ಸದ್ಯ ನೆಟ್ ಬ್ಯಾಂಕಿಂಗ್ ಮತ್ತು ಡೆಬಿಟ್ ಕಾರ್ಡ್ ಮೂಲಕ ತೆರಿಗೆ ಪಾವತಿಗೆ ಅವಕಾಶ ಇತ್ತು. ಏಪ್ರಿಲ್ 1ರಿಂದ ಕ್ರೆಡಿಟ್ ಕಾರ್ಡ್ ಮೂಲಕವೂ ಪಾವತಿ ಮಾಡಬಹುದು.

ಇದನ್ನೂ ಓದಿ: ಇಂಧನ ದತ್ತಾಂಶವನ್ನು ರಾಷ್ಟ್ರೀಯ ಭದ್ರತಾ ವಿಚಾರವೆಂದು ವರ್ಗೀಕರಿಸಿದ ಸರ್ಕಾರ; ತೈಲ, ಅನಿಲ ಕ್ಷೇತ್ರದ ಸಂಸ್ಥೆಗಳಿಗೆ ಹೊಸ ಜವಾಬ್ದಾರಿ

ಕಂಪನಿ ಕ್ರೆಡಿಟ್ ಕಾರ್ಡ್ ಅನ್ನು ವೈಯಕ್ತಿಕ ಉದ್ದೇಶಕ್ಕೆ ಬಳಸಿದರೆ ಟ್ಯಾಕ್ಸ್

ಕೆಲ ಕಂಪನಿಗಳು ಉದ್ಯೋಗಿಗಳಿಗೆ ಅಧಿಕೃತ ಕೆಲಸಗಳಿಗೆ ಬಳಕೆ ಮಾಡಲು ಕ್ರೆಡಿಟ್ ಕಾರ್ಡ್ ನೀಡುತ್ತವೆ. ಇದನ್ನು ವೈಯಕ್ತಿಕ ವೆಚ್ಚಕ್ಕೆ ಬಳಸಿದರೆ ಅದಕ್ಕೆ ಟ್ಯಾಕ್ಸ್ ಹಾಕಲಾಗುತ್ತದೆ. ಇಂಥ ಆಫೀಸ್ ಕ್ರೆಡಿಟ್ ಕಾರ್ಡ್​ಗಳನ್ನು ಬ್ಯುಸಿನೆಸ್ ಟ್ರಾವಲ್, ಕ್ಲಯಂಟ್ ಮೀಟಿಂಗ್ ಇತ್ಯಾದಿ ಕಂಪನಿ ಸಂಬಂಧಿಸಿದ ವೆಚ್ಚಗಳಿಗೆ ಮಾತ್ರ ಉಪಯೋಗಿಸಬೇಕು.

ಕ್ರೆಡಿಟ್ ಕಾರ್ಡ್​ಗೆ ಅರ್ಜಿ ಸಲ್ಲಿಸುವಾಗ ಪ್ಯಾನ್ ಕಡ್ಡಾಯ

ಕ್ರೆಡಿಟ್ ಕಾರ್ಡ್​ಗೆ ಅರ್ಜಿ ಸಲ್ಲಿಸುವಾಗ ಪ್ಯಾನ್ ಅನ್ನು ನೀಡುವುದು ಕಡ್ಡಾಯ ಎನ್ನುವ ನಿಯಮ ಮಾಡಲಾಗುತ್ತಿದೆ. ನೀವು ಪ್ಯಾನ್ ನೀಡದಿದ್ದರೆ ಕ್ರೆಡಿಟ್ ಕಾರ್ಡ್ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಿರ್ಮಾಪಕರಿಗೆ ನಿರಾಳ ತಂದ ಸುಪ್ರೀಂ ಕೋರ್ಟ್ ತೀರ್ಪು: ಪ್ರಕರಣ ಏನು?

ಚಲನಚಿತ್ರ (Movie) ನಿರ್ಮಾಣ ಅತ್ಯಂತ ಏರಿಳಿತ ಇರುವ ವ್ಯವಹಾರ. ಸಿನಿಮಾ ನಿರ್ಮಾಣ ಎನ್ನುವುದು ಅಲುಗಿನ ಮೇಲಿನ ನಡುಗೆ, ಅಲ್ಲಿ ಲಾಭ ಆಗುವುದಕ್ಕಿಂತಲೂ ನಷ್ಟ ಆಗುವ ಸಾಧ್ಯತೆಗಳು ಬಹಳ ಹೆಚ್ಚು. ಸಿನಿಮಾಗಳ ಗೆಲುವಿನ ಸರಾಸರಿ ಸಹ ಬಹಳ ಕಡಿಮೆ. ವರ್ಷಕ್ಕೆ ಚಿತ್ರರಂಗವೊಂದರಲ್ಲಿ 1000 ಸಿನಿಮಾಗಳು ಬಿಡುಗಡೆ ಆದರೆ ಗೆಲ್ಲುವುದು ಬೆರಳೆಣಿಕೆಯಷ್ಟು ಮಾತ್ರ. ಸಿನಿಮಾ ಗೆದ್ದರೆ ನಟ, ನಿರ್ದೇಶಕರ ಗೆಲುವಾಗುತ್ತದೆ, ಆದರೆ ಸೋತರೆ ನಷ್ಟ ನಿರ್ಮಾಪಕನಿಗೆ ಮಾತ್ರ. ನಿರ್ಮಾಪಕರು, ಫೈನ್ಯಾನ್ಶಿಯರ್​ಗಳು, ವಿತರಕರು, ಚಿತ್ರಮಂದಿರ ಮಾಲೀಕರು ಹೀಗೆ ಹಲವರೊಟ್ಟಿಗೆ ಹಣಕಾಸಿನ ವ್ಯವಹಾರ ಇಟ್ಟುಕೊಂಡಿರುತ್ತಾರೆ. ಸಿನಿಮಾ ಸೋತರೆ ಎಲ್ಲರೂ ಮುಗಿಬೀಳುತ್ತಾರೆ. ಕೇಸುಗಳು ಸಹ ಹಾಕುವುದು ಸಾಮಾನ್ಯ. ಆದರೆ ಇದೀಗ ಅಂಥಹುದೇ ಒಂದು ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ನಿರ್ಮಾಪಕರಿಗೆ ಸಣ್ಣ ನಿರಾಳತೆ ಒದಗಿಸಿದೆ.

ಚಲನಚಿತ್ರವೊಂದರ ನಿರ್ಮಾಣಕ್ಕಾಗಿ ಹೂಡಿಕೆ ಮಾಡಿದ್ದ ಹಣವನ್ನು ಮರಳಿ ನೀಡಲಿಲ್ಲ ಎಂಬ ಕಾರಣಕ್ಕೆ ಚಿತ್ರ ನಿರ್ಮಾಪಕರೊಬ್ಬರ ವಿರುದ್ಧ ಕ್ರಿಮಿನಲ್ ವಂಚನೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ನಿರ್ಮಾಪಕನ ವಿರುದ್ಧದ ಕ್ರಿಮಿನಲ್ ನಡಾವಳಿಗಳನ್ನು ರದ್ದುಗೊಳಿಸಿದೆ. ಸಿನಿಮಾ ನಿರ್ಮಾಣದ ವ್ಯವಹಾರದ ಸ್ವರೂಪದ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ಅವಲೋಕನ ಮಾಡಿದ್ದು. ಚಿತ್ರವೊಂದು ಬಾಕ್ಸ್ ಆಫೀಸ್‌ನಲ್ಲಿ ವಿಫಲವಾದರೆ ಅಥವಾ ನಷ್ಟ ಅನುಭವಿಸಿದರೆ, ಅದನ್ನು ವಂಚನೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಪ್ರಸನ್ನ ಬಿ ವರಾಳೆ ಅವರ ಪೀಠವು, ‘ಚಲನಚಿತ್ರ ನಿರ್ಮಾಣವು ಮೂಲಭೂತವಾಗಿ ಹೆಚ್ಚಿನ ಅಪಾಯವನ್ನು ಹೊಂದಿರುವ ವ್ಯವಹಾರವಾಗಿದೆ. ಇಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಲಾಭ ಸಿಗುತ್ತದೆ ಎಂಬ ಗ್ಯಾರಂಟಿ ಇರುವುದಿಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಇದನ್ನೂ ಓದಿ:‘ಧುರಂಧರ್ 2’ ಅಬ್ಬರಕ್ಕೂ ಜಗ್ಗಿಲ್ಲ ‘ಉಸ್ತಾದ್ ಭಗತ್ ಸಿಂಗ್’; ಪವನ್ ಸಿನಿಮಾ ಗಳಿಕೆ ಎಷ್ಟು?

ಸಿನಿಮಾ ಸೋತು ಹಣ ಕಳೆದುಕೊಂಡರೆ ಅದನ್ನು ‘ಕ್ರಿಮಿನಲ್ ವಂಚನೆ’ ಎಂದು ಕರೆಯಲಾಗದು. ಹೂಡಿಕೆದಾರರು ಲಾಭದ ನಿರೀಕ್ಷೆಯಲ್ಲಿ ಹಣ ಹಾಕುತ್ತಾರೆ, ಆದರೆ ವ್ಯವಹಾರದಲ್ಲಿ ನಷ್ಟ ಉಂಟಾದಾಗ ಅದು ಕೇವಲ ಸಿವಿಲ್ ವಿವಾದವಾಗುತ್ತದೆಯೇ ಹೊರತು ಕ್ರಿಮಿನಲ್ ಅಪರಾಧವಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ನಿರ್ಮಾಪಕನು ಮೊದಲಿನಿಂದಲೇ ಹೂಡಿಕೆದಾರರಿಗೆ ವಂಚಿಸುವ ಉದ್ದೇಶ ಹೊಂದಿದ್ದನೆಂದು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲದ ಕಾರಣ, ಕೇವಲ ಹಣಕಾಸಿನ ನಷ್ಟದ ಆಧಾರದ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುವುದು ಸರಿಯಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಈ ತೀರ್ಪು ಬಾಲಿವುಡ್ ಮತ್ತು ಇತರ ಚಿತ್ರರಂಗದ ನಿರ್ಮಾಪಕರಿಗೆ ದೊಡ್ಡ ಸಮಾಧಾನ ತಂದಿದೆ. ಸಿನಿಮಾ ವಿತರಣೆ ಅಥವಾ ಹೂಡಿಕೆಯಲ್ಲಿ ನಷ್ಟ ಉಂಟಾದಾಗ ನಿರ್ಮಾಪಕರನ್ನು ಗುರಿಯಾಗಿಸಿ ದಾಖಲಿಸಲಾಗುವ ಅನಗತ್ಯ ಕ್ರಿಮಿನಲ್ ಪ್ರಕರಣಗಳಿಗೆ ಇದು ತಡೆ ಒಡ್ಡುವ ಸಾಧ್ಯತೆಯಿದೆ. ಸಿನಿಮಾ ಉದ್ಯಮದಲ್ಲಿ ಹಣಕಾಸಿನ ವಹಿವಾಟುಗಳು ಹೆಚ್ಚಾಗಿರುವುದರಿಂದ, ಈ ತೀರ್ಪು ಸಿವಿಲ್ ಒಪ್ಪಂದಗಳು ಮತ್ತು ಕ್ರಿಮಿನಲ್ ಹೊಣೆಗಾರಿಕೆಗಳ ನಡುವಿನ ವ್ಯತ್ಯಾಸವನ್ನು ಮತ್ತೊಮ್ಮೆ ಎತ್ತಿ ಹಿಡಿದಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ತಂದೆಯಿಂದಲೇ ಹಸುಗೂಸಿನ ಕೊಲೆ: ಭೀಮರಾಯನ ಕ್ರೂರತೆ ಬಿಚ್ಚಿಟ್ಟ ಸಂಬಂಧಿಕರು

ಬೆಳಗಾವಿ, ಮಾರ್ಚ್​ 20: ಹೆಣ್ಣುಮಗು ಎನ್ನುವ ಕಾರಣಕ್ಕೆ 15 ದಿನದ ಹಿಂದೆ ಜನಸಿದ್ದ ಹಸುಗೂಸಿಗೆ ವಿಷವುಣಿಸಿ ಕೊಲೆ ಮಾಡಿದ್ದ ತಂದೆಯನ್ನು ಇದೀಗ ಪೊಲೀಸರು. ಭೀಮರಾಯ ಬಂಧಿತ ಆರೋಪಿ. ಘಟನೆ ಬೆಳಗಾವಿ ಜಿಲ್ಲೆಯಲ್ಲಿ ಸಾಕಷ್ಟು ಆತಂಕ ಮತ್ತು ಚರ್ಚೆಗೆ ಗ್ರಾಸವಾಗಿತ್ತು. ಇನ್ನು ಘಟನೆ ಬಗ್ಗೆ ಭೀಮರಾಯನ ಸಂಬಂಧಿಕರು ಪ್ರತಿಕ್ರಿಯಿಸಿದ್ದು, ಆತನ ಕ್ರೂರತೆ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಸದ್ಯ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ರೌಡಿ ಶೀಟರ್ ಜೊತೆ ದೋಸ್ತಿ: ಡಾಗ್ ಸತೀಶ್​​ಗೆ ಸಂಕಷ್ಟ

ಡಾಗ್ ಸತೀಶ್ (Dog Satish) ಅಲಿಯಾಸ್ ಕ್ಯಾಡಬಾಮ್ ಸತೀಶ್ ಅವರು ಬಿಗ್​​ಬಾಸ್ ಗೆ ಹೋಗಿ ಬಂದ ಬಳಿಕ ಹೆಚ್ಚು ಜನಪ್ರಿಯರಾಗಿದ್ದಾರೆ. ಇನ್​​ಸ್ಟಾಗ್ರಾಂನಲ್ಲಿಯೂ ಸಖತ್ ಜನಪ್ರಿಯತೆ ಪಡೆದಿರುವ ಸತೀಶ್ ಅವರು ಪಾರ್ಟಿಗಳ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಇದೀಗ ಅಂಥಹುದೇ ವಿಡಿಯೋ ಒಂದು ಸತೀಶ್ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇತ್ತೀಚೆಗೆ ಸತೀಶ್ ಅವರ ವಿಡಿಯೋ ಒಂದನ್ನು ಫೇಸ್​​ಬುಕ್​​ನಲ್ಲಿ ಹಂಚಿಕೊಂಡಿದ್ದರು. ಆರ್​​ಟಿ ನಗರದಲ್ಲಿ ನಡೆದ ಪಾರ್ಟಿಯ ವಿಡಿಯೋ ಇದಾಗಿತ್ತು. ವಿಡಿಯೋನಲ್ಲಿ ಸತೀಶ್ ಅವರು ರೌಡಿ ಶೀಟರ್ ಪಿ ಮೂರ್ತಿ ಜೊತೆಗೆ ಕಾಣಿಸಿಕೊಂಡಿದ್ದರು. ಇದೀಗ ವಿಡಿಯೋ ಸತೀಶ್ ಅವರ ಸಂಕಷ್ಟಕ್ಕೆ ಕಾರಣವಾಗಿದೆ. ವಿಡಿಯೋ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸತೀಶ್ ಅವರನ್ನು ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ. ಇದೀಗ ಸತೀಶ್ ಅವರು ವಿಡಿಯೋ ಡಿಲೀಟ್ ಮಾಡಿದ್ದಾರೆ. ಪ್ರಕರಣದ ಬಗ್ಗೆ ವಿಡಿಯೋನಲ್ಲಿದೆ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಿಸಿಸಿಐ ಮೇಲೆ ವರ್ಣ ತಾರತಮ್ಯ ಆರೋಪ; ಕಾಮೆಂಟ್ರಿಗೆ ಶಿವರಾಮಕೃಷ್ಣನ್ ವಿದಾಯ

2026 ರ ಐಪಿಎಲ್ ಆರಂಭಕ್ಕೆ ಸರಿಯಾಗಿ 8 ದಿನಗಳು ಬಾಕಿ ಉಳಿದಿವೆ. ಈ ಲೀಗ್​ಗಾಗಿ ಬಿಸಿಸಿಐ ಕೂಡ ಸರ್ವ ತಯಾರಿ ಮಾಡಿಕೊಂಡಿದೆ. ಆದರೆ ಇದರ ನಡುವೆ ಬಿಸಿಸಿಐ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ವಿಶ್ವ ಕ್ರಿಕೆಟ್​ನ ದೊಡ್ಡಣ್ಣ ಎನಿಸಿಕೊಂಡಿರುವ ಬಿಸಿಸಿಐ ಮೇಲೆ ವರ್ಣ ತಾರತಮ್ಯದಂತಹ ಗಂಭೀರ ಆರೋಪವನ್ನು ಹೊರಿಸಿರುವ ಟೀಂ ಇಂಡಿಯಾದ ಲೆಜೆಂಡರಿ ಆಟಗಾರರೊಬ್ಬರು ಕಾಮೆಂಟರಿ ಪ್ಯಾನಲ್​ಗೆ ನಿವೃತ್ತಿ ಘೋಷಿಸಿದ್ದಾರೆ. 1983 ರಿಂದ 1987 ರ ನಡುವೆ ಟೀಂ ಇಂಡಿಯಾ ಪರ ಆಡಿದ್ದ ತಮಿಳುನಾಡು ಮೂಲದ ಲಕ್ಷ್ಮಣ್ ಶಿವರಾಮಕೃಷ್ಣನ್ ಇದೀಗ ಬಿಸಿಸಿಐ ವಿರುದ್ಧ ಈ ಗಂಭೀರ ಆರೋಪವನ್ನು ಹೊರಿಸಿದ್ದು, ನಿವೃತ್ತಿ ನಿರ್ಧಾರಕ್ಕೆ ಬಂದಿದ್ದಾರೆ.

ಶಿವರಾಮಕೃಷ್ಣನ್ ಆರೋಪದಲ್ಲಿರುವುದೇನು?

ಕಾಮೆಂಟರಿಗೆ ನಿವೃತ್ತಿ ಘೋಷಿಸಿದ ಬಳಿಕ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಬಿಸಿಸಿಐ ವಿರುದ್ಧ ಗಂಭೀರ ಆರೋಪವನ್ನು ಹೊರಿಸಿ ಬರೆದುಕೊಂಡಿರುವ ಶಿವರಾಮಕೃಷ್ಣನ್, ‘ನಾನು ಬಿಸಿಸಿಐನ ಕಾಮೆಂಟರಿ ಪ್ಯಾನಲ್​ನಿಂದ ನಿವೃತ್ತಿ ಹೊಂದುತ್ತಿದ್ದೇನೆ. ಕಳೆದ 23 ವರ್ಷಗಳ ನನ್ನ ಕಾಮೆಂಟರಿ ವೃತ್ತಿಜೀವನದಲ್ಲಿ ನನ್ನನ್ನು ಎಂದಿಗೂ ಪಂದ್ಯ ಪ್ರಸ್ತುತಿಗಳಿಗೆ ಬಳಸಲಾಗಿಲ್ಲ. ಇನ್ನು ಈ ಕ್ಷೇತ್ರಕ್ಕೆ ನಗಿಂತ ತಡವಾಗಿ ಬಂದವರಿಗೆ ಮತ್ತು ಯುವ ವೀಕ್ಷಕ ವಿವರಣೆಗಾರರಿಗೆ ಪಿಚ್ ವರದಿ ನೀಡುವುದಕ್ಕೆ ಮತ್ತು ಟಾಸ್ ಮತ್ತು ಪಂದ್ಯ ಪ್ರಸ್ತುತಿ ನಡೆಸಿಕೊಡುವುದಕ್ಕೆ ಅವಕಾಶ ನೀಡಲಾಯಿತು. ಆದರೆ ನನಗೆ ಆ ಅವಕಾಶ ಸಿಗಲಿಲ್ಲ. ರವಿಶಾಸ್ತ್ರಿ ಟೀಂ ಇಂಡಿಯಾದ ಕೋಚ್ ಆಗಿದ್ದಾಗಲೂ ಇದು ನಡೆಯುತ್ತಿತ್ತು’ ಎಂದು ಬರೆದುಕೊಂಡಿದ್ದಾರೆ.

ಶಿವರಾಮಕೃಷ್ಣನ್ ಅವರ ಪೋಸ್ಟ್‌ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ಭಾರಿ ವೈರಲ್ ಆಗುತ್ತಿದೆ. ಟೀಂ ಇಂಡಿಯಾ ಅಭಿಮಾನಿಗಳು ಮತ್ತು ಅವರ ಅಭಿಮಾನಿಗಳು ಹಾಗೂ ಕ್ರಿಕೆಟ್ ಪ್ರಿಯರು ಶಿವರಾಮಕೃಷ್ಣನ್ ಅವರ ಈ ಆರೋಪಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಶಿವರಾಮಕೃಷ್ಣನ್ ಅವರ ಪೋಸ್ಟ್​ಗೆ ನೆಟ್ಟಿಗರೊಬ್ಬರು ‘ಬಹುಶಃ ನಿಮ್ಮ ಮೈಬಣ್ಣದ ಕಾರಣದಿಂದಾಗಿ ನಿಮ್ಮನ್ನು ಕಡೆಗಣಿಸಿರಬಹುದು ಎಂದು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಶಿವರಾಮಕೃಷ್ಣನ್ ‘ಖಂಡಿತ’ ಎಂದು ಉತ್ತರಿಸಿರುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಶಿವರಾಮಕೃಷ್ಣನ್ ಅವರ ಈ ಕಾಮೆಂಟ್ ಅವರು ಬಿಸಿಸಿಐ ಮೇಲೆ ವರ್ಣ ತಾರತಮ್ಯದ ಆರೋಪ ಮಾಡುತ್ತಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ.

ತಿರುಗೇಟು ನೀಡಿದ ಆರ್​. ಅಶ್ವಿನ್

ಶಿವರಾಮಕೃಷ್ಣನ್ ಅವರ ನಿವೃತ್ತಿಯ ಪೋಸ್ಟ್​ಗೆ ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ಆರ್. ಅಶ್ವಿನ್, ‘ನೀವು ಐಪಿಎಲ್‌ನಲ್ಲಿಯೂ ಕಾಮೆಂಟ್ ಮಾಡುವುದನ್ನು ಏಕೆ ಬಿಡಬಾರದು?’ ಎಂದು ಕಾಮೆಂಟ್ ಮಾಡಿದ್ದು, ಈ ವಿವಾದಕ್ಕೆ ಮತ್ತೊಂದು ಆಯಾಮ ನೀಡಿದ್ದಾರೆ. ವಾಸ್ತವವಾಗಿ ಇವರಿಬ್ಬರ ನಡುವೆ ವೈಮನಸ್ಸು ಬಹಳ ಹಿಂದಿನಿಂದಲೂ ಇದೆ. ಈ ಹಿಂದೆ ಶಿವರಾಮಕೃಷ್ಣನ್, ಆರ್. ಅಶ್ವಿನ್ ಅವರನ್ನು ಕಳಪೆ ಬೌಲರ್ ಎಂದು ಜರಿದಿದ್ದರು. ಮಾತ್ರವಲ್ಲದೆ, ಭಾರತೀಯ ಪಿಚ್‌ಗಳಲ್ಲಿ ಮೂರ್ಖ ಕೂಡ ವಿಕೆಟ್ ಪಡೆಯಬಹುದು ಎಂದಿದ್ದರು. ಹಾಗೆಯೇ ಅಶ್ವಿನ್ 100ನೇ ಟೆಸ್ಟ್ ಪಂದ್ಯವನ್ನು ಆಡಿದಾಗ ನಾನು ಅವರನ್ನು ಅಭಿನಂದಿಸಲು ಸಾಕಷ್ಟು ಬಾರಿ ಫೋನ್ ಮಾಡಿದ್ದೆ. ಆದರೆ ಅಶ್ವಿನ್ ನನ್ನ ಫೋನ್​ಗೆ ಉತ್ತರಿಸುವ ಬದಲು ಕರೆಯನ್ನು ಕಟ್ ಮಾಡಿದ್ದರು ಎಂತಲೂ ಆರೋಪ ಮಾಡಿದ್ದರು.

ಶಿವರಾಮಕೃಷ್ಣನ್ ವೃತ್ತಿಜೀವನ

17 ನೇ ವಯಸ್ಸಿನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಎಲ್. ಶಿವರಾಮಕೃಷ್ಣನ್​ಗೆ ಟೀಂ ಇಂಡಿಯಾ ಪರ ದೀರ್ಘ ಕಾಲ ಆಡಲು ಸಾಧ್ಯವಾಗಲಿಲ್ಲ. ಅವರ ಅಲ್ಪ ವೃತ್ತಿಜೀವನದಲ್ಲಿ ಅವರು ಕೇವಲ ಒಂಬತ್ತು ಟೆಸ್ಟ್ ಪಂದ್ಯಗಳು ಮತ್ತು 16 ಏಕದಿನ ಪಂದ್ಯಗಳನ್ನಷ್ಟೇ ಆಡಿದ್ದಾರೆ. ಟೆಸ್ಟ್‌ನಲ್ಲಿ 26 ವಿಕೆಟ್ ಕಬಳಿಸಿರುವ ಎಲ್. ಶಿವರಾಮಕೃಷ್ಣನ್ ಏಕದಿನ ಪಂದ್ಯಗಳಲ್ಲಿ 15 ವಿಕೆಟ್‌ ಪಡೆದಿದ್ದಾರೆ. ಆದಾಗ್ಯೂ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 154 ವಿಕೆಟ್‌ಗಳನ್ನು ಕಬಳಿಸಿರುವ ಅವರು ಐದು ಶತಕಗಳನ್ನು ಬಾರಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಂಪಾದ ನೀರು ನಿಜವಾಗಿಯೂ ಆರೋಗ್ಯಕ್ಕೆ ಒಳ್ಳೆಯದಲ್ಲವೇ? ನಿಜಾಂಶವನ್ನು ತಜ್ಞರಿಂದಲೇ ತಿಳಿದುಕೊಳ್ಳಿ

ಬಿಸಿಲಿನ ಧಗೆಯಿಂದ ಮುಕ್ತಿ ಪಡೆಯಲು ಹೆಚ್ಚಿನವರು ತಂಪಾದ ನೀರು (Cold Water) ಕುಡಿಯುವುದಕ್ಕೆ ಹೆಚ್ಚಿನ ಆಸಕ್ತಿ ತೋರಿಸುತ್ತಾರೆ. ಬಿಸಿಲು ಮತ್ತು ಬೆವರಿನಿಂದ ದಣಿದಿದ್ದವರಿಗೆ ತಣ್ಣೀರು ತಕ್ಷಣ ತಂಪು ಮತ್ತು ಆರಾಮವನ್ನು ನೀಡುತ್ತದೆ. ಹಾಗಾಗಿ ಫ್ರಿಜ್‌ನ ನೀರು ಅಥವಾ ಐಸ್ ಹಾಕಿದ ನೀರು ಬಹುತೇಕ ಮನೆಗಳಲ್ಲಿ ಸಾಮಾನ್ಯವಾಗಿದೆ. ಆದರೆ, ಪ್ರತಿಯೊಂದು ಅಭ್ಯಾಸವೂ ದೇಹದ ಮೇಲೆ ವಿಭಿನ್ನ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂಬುದನ್ನು ಮರೆಯಬಾರದು. ತಣ್ಣೀರು ಕೂಡ ಇದಕ್ಕೆ ಹೊರತಾಗಿಲ್ಲ. ಅದರಲ್ಲಿಯೂ ಕೆಲವರು ಪದೇ ಪದೇ ತಂಪಾಗಿರುವ ನೀರನ್ನು ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ವಿಶೇಷವಾಗಿ ದೇಹ ಹೆಚ್ಚು ಬಿಸಿಯಾಗಿರುವಾಗ ಏಕಾಏಕಿ ತಣ್ಣೀರು ಕುಡಿಯುವುದರಿಂದ ಲಾಭಕ್ಕಿಂತ ಸಮಸ್ಯೆಗಳು ಉಂಟಾಗುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ. ಇದು ಮುಂದೆ ಆರೋಗ್ಯ ಸಮಸ್ಯೆಗಳ ಹೆಚ್ಚಳಕ್ಕೂ ಕಾರಣವಾಗಬಹುದು. ಹಾಗಾದರೆ ತಂಪಾದ ನೀರು ಕುಡಿಯುವುದರಿಂದ ಯಾವ ರೀತಿಯ ಸಮಸ್ಯೆಗಳಾಗುತ್ತವೆ, ಯಾರು ಇದರಿಂದ ದೂರವಿರಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ತಂಪಾದ ನೀರು ಕುಡಿಯುವುದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು:

ತಜ್ಞರ ಪ್ರಕಾರ, ತುಂಬಾ ತಂಪಾದ ನೀರು ಅಥವಾ ತಣ್ಣೀರು ಕುಡಿಯುವುದರಿಂದ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಆಹಾರ ಸರಿಯಾಗಿ ಜೀರ್ಣವಾಗದೆ ಹೊಟ್ಟೆ ಭಾರವಾಗುವುದು ಅಥವಾ ಗ್ಯಾಸ್ಟ್ರಿಕ್ ಸಮಸ್ಯೆಗಳು ಕಂಡುಬರಬಹುದು. ಜೊತೆಗೆ, ತಣ್ಣೀರಿನಿಂದ ಗಂಟಲಿನಲ್ಲಿ ಕೆರೆತ ಅಥವಾ ಶೀತಕ್ಕೆ ಕಾರಣವಾಗಬಹುದು, ಅದರಲ್ಲಿಯೂ ಬೇಸಿಗೆಯಲ್ಲಿ ದೇಹ ಬಿಸಿಯಾಗಿರುವುದರಿಂದ ಒಮ್ಮೆಲೇ ತಣ್ಣೀರು ಕುಡಿದಾಗ ದೇಹದ ತಾಪಮಾನದಲ್ಲಿ ಏಕಾಏಕಿ ಬದಲಾವಣೆಯಾಗುತ್ತದೆ. ಕೆಲವರಿಗೆ ತಲೆನೋವು ಅಥವಾ ಸುಸ್ತು ಕಾಣಿಸಿಕೊಳ್ಳಬಹುದು. ಮಾತ್ರವಲ್ಲ, ಇದು ರಕ್ತ ಸಂಚಾರದ ಮೇಲೂ ಪರಿಣಾಮ ಬೀರುತ್ತದೆ. ನಿರಂತರವಾಗಿ ತಣ್ಣೀರು ಕುಡಿಯುವ ಅಭ್ಯಾಸ ದೇಹದ ಸಹಜ ಪ್ರಕ್ರಿಯೆಗಳನ್ನು ನಿಧಾನಗೊಳಿಸಬಹುದು, ಇದರಿಂದ ದೀರ್ಘಕಾಲದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಬಹುದು.

ಇದನ್ನೂ ಓದಿ: ಉಗುರು ಬೆಚ್ಚಗಿನ ನೀರು ಕುಡಿಯುವ ಅಭ್ಯಾಸ ನಿಮಗಿದ್ಯಾ? ಇದರಿಂದ ದೇಹದಲ್ಲಿ ಎಷ್ಟೆಲ್ಲಾ ಬದಲಾವಣೆಗಳಾಗುತ್ತೆ ಗೊತ್ತಾ?

ತಂಪಾದ ನೀರು ಯಾರಿಗೆ ಒಳ್ಳೆಯದಲ್ಲ?

  • ಜೀರ್ಣಕ್ರಿಯೆ ಸರಿಯಾಗಿ ಆಗದವರು ತಣ್ಣೀರು ಕುಡಿಯಬಾರದು.
  • ಗಂಟಲು ಅಥವಾ ಸೈನಸ್ ಸಮಸ್ಯೆ ಇರುವವರಿಗೆ ಇದು ಹಾನಿಕಾರವಾಗಬಹುದು.
  • ಆಗಾಗ ಶೀತ ಆಗುತ್ತಿದ್ದರೆ ನೀವು ತಂಪಾದ ನೀರಿನಿಂದ ದೂರವಿರುವುದು ಉತ್ತಮ.
  • ಸಣ್ಣ ಮಕ್ಕಳು ಮತ್ತು ವೃದ್ಧರಿಗೆ ತಣ್ಣೀರು ಒಳ್ಳೆಯದಲ್ಲ.
  • ಹೃದಯ ಅಥವಾ ರಕ್ತದ ಒತ್ತಡ (ಬ್ಲಡ್ ಪ್ರೆಶರ್) ಸಮಸ್ಯೆ ಇರುವವರು ವಿಶೇಷ ಜಾಗ್ರತೆ ವಹಿಸಬೇಕು.

ತಣ್ಣೀರು ಕುಡಿಯುವಾಗ ಪಾಲಿಸಬೇಕಾದ ಮುನ್ನೆಚ್ಚರಿಕೆಗಳು:

  • ತುಂಬಾ ಐಸ್ ಅಥವಾ ಅತಿಯಾಗಿ ತಂಪಾಗಿರುವ ನೀರನ್ನು ಕುಡಿಯುವುದು ಒಳ್ಳೆಯದಲ್ಲ.
  • ಬಿಸಿಲಿನಿಂದ ಬಂದ ತಕ್ಷಣವೇ ನೀರು ಕುಡಿಯದೆ, ಕೆಲವು ನಿಮಿಷ ವಿಶ್ರಾಂತಿ ತೆಗೆದುಕೊಳ್ಳಬೇಕು.
  • ದಿನವಿಡೀ ನೀರನ್ನು ಸ್ವಲ್ಪಸ್ವಲ್ಪವೇ ಕುಡಿಯಬೇಕು.
  • ಗಂಟಲು ನೋವು ಅಥವಾ ಇತರ ಸಮಸ್ಯೆಗಳಿದ್ದರೆ ತಣ್ಣೀರು ಕುಡಿಯಬಾರದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಪತ್ರ: 50 ಸಾವಿರ ಸಿಲಿಂಡರ್ ಬೇಡಿಕೆ ಬಗ್ಗೆ ಪ್ರಸ್ತಾಪ

ಬೆಂಗಳೂರು, ಮಾರ್ಚ್​ 20: ದೇಶದಲ್ಲಿ ಸಿಲಿಂಡರ್ (Cylinder) ಅಭಾವದ ಸರಣಿ ಸಮಸ್ಯೆ ಮುಂದುವರೆದಿದೆ. ಇತ್ತ ಕರ್ನಾಟಕದಲ್ಲೂ ಎಲ್​​​ಪಿಜಿಗಾಗಿ ಹೋಟೆಲ್ ಮಾಲೀಕರು ನಿತ್ಯ ಪರದಾಡುತ್ತಿದ್ದಾರೆ. ಒಂದ್ಕಡೆ ಗೃಹಬಳಕೆ ಸಿಲಿಂಡರ್ ಪಡೆಯಲು ಜನರು ಮುಗಿಬಿದ್ದರೆ, ಮತ್ತೊಂದ್ಕಡೆ ವಾಣಿಜ್ಯ ಸಿಲಿಂಡರ್ ಇಲ್ಲದೆ ಹಲವು ಉದ್ಯಮಗಳು ಬಂದ್ ಆಗುತ್ತಿವೆ. ಈ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ (cm Siddaramaiah) ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದಾರೆ.

ಕೇಂದ್ರ ಸಚಿವ ಹರ್ದೀಪ್ ಸಿಂಗ್​ಗೆ ಸಿಎಂ ಪತ್ರ

ಸಿಎಂ ಸಿದ್ದರಾಮಯ್ಯ ಈ ಹಿಂದೆ ಕೇಂದ್ರ ಸರ್ಕಾರಕ್ಕೆ ಪತ್ರವೊಂದನ್ನ ಬರೆದಿದ್ದರು. ಈಗ ಸಿಲಿಂಡರ್ ಸಮಸ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಮತ್ತೊಂದು ಪತ್ರ ಬರೆದಿದ್ದಾರೆ. ಕೇಂದ್ರ ಸಚಿವ ಹರ್ದೀಪ್ ಸಿಂಗ್​ಗೆ ಬರೆದ ಪತ್ರದಲ್ಲಿ ರಾಜ್ಯದ ಸಿಲಿಂಡರ್​ಗಳ ಅಭಾವದ ಬಗ್ಗೆ ಉಲ್ಲೇಖಿಸಿದ್ದಾರೆ. 50 ಸಾವಿರ ಸಿಲಿಂಡರ್​ಗಳು ಬೇಕು. ಭಾರತಕ್ಕೆ ಬಂದಿರುವ ತೈಲ ಹಡಗುಗಳ ತೈಲವನ್ನ ಸಮರ್ಪಕವಾಗಿ ಹಂಚಿಕೆ ಮಾಡುವಂತೆ ಮನವಿ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಟ್ವೀಟ್​

ರೆಸ್ಟೋರೆಂಟ್​ಗಳು, ಹೋಟೆಲ್​ಗಳು, ಅಡುಗೆ ತಯಾರಿಸುವ ಸಂಸ್ಥೆಗಳು ಹಾಗೂ ಪಿಜಿಗಳಲ್ಲಿ ಸಿಲಿಂಡರ್ ಅಭಾವ ಹೆಚ್ಚಾಗಿದೆ. ಹೀಗಾಗಿ 50 ಸಾವಿರ LPG ಸಿಲಿಂಡರ್​ಗಳ ಬೇಡಿಕೆಗೆ ಇದೆ. ನಾವು ದಿನಕ್ಕೆ 1000 ಸಿಲಿಂಡರ್​ಗಳನ್ನು ಮಾತ್ರ ಪೂರೈಸಲು ಸಮರ್ಥರಾಗಿದ್ದೇವೆ. ಈ ಕಾರಣಕ್ಕೆ ಹೋಟೆಲ್, ಪಿಜಿಗಳು ಮುಚ್ಚುವ ಪರಿಸ್ಥಿತಿ ಎದುರಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆ ಎಲ್​ಪಿಜಿ ಸಿಲಿಂಡರ್ ಕೊರತೆ: ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿಗೆ ಸಿಎಂ ಸಿದ್ದರಾಮಯ್ಯ ಪತ್ರ

ವಿದ್ಯಾರ್ಥಿಗಳು, ಐಟಿ ನೌಕರರು, ರೈತರು, ಡೈರಿ ಉತ್ಪಾದಕರು ಸೇರಿದಂತೆ ಅನೇಕ ಜನ ಆತಿಥ್ಯ ವಲಯದ ಮೇಲೆ ಅವಲಂಬಿತರಾಗಿದ್ದಾರೆ. ಇದೇ ರೀತಿ ಎಲ್​ಪಿಜಿ ಇಲ್ಲದೇ ಆಟೋ ರೀಕ್ಷಗಳಿಗೂ ಸಂಕಷ್ಟ ಶುರುವಾಗಿದೆ. ಭಾರತ 2 ಟ್ಯಾಂಕರ್​ಗಳನ್ನ ಸ್ವೀಕರಿಸಿದೆ. ಇದು ಸಮಸ್ಯೆಗಳನ್ನ ನಿವಾರಿಸುತ್ತದೆ. ಹೀಗಾಗಿ ಕರ್ನಾಟಕಕ್ಕೆ ಸಮರ್ಪಕ ಹಂಚಿಕೆ ಮಾಡಿ. ನಮ್ಮ ಲಭ್ಯತೆ ಚಿತಪಡಿಸಿಕೊಳ್ಳಲು ನೀವು ಹಸ್ತಕ್ಷೇಪ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version