Vastu Guidance: ದೇವರ ಮುಂದೆ ದೀಪ ಹಚ್ಚುವಾಗ ಈ ತಪ್ಪು ಮಾಡಲೇಬೇಡಿ; ವಾಸ್ತು ಸಲಹೆ ಇಲ್ಲಿದೆ

Vastu Guidance: ದೇವರ ಮುಂದೆ ದೀಪ ಹಚ್ಚುವಾಗ ಈ ತಪ್ಪು ಮಾಡಲೇಬೇಡಿ; ವಾಸ್ತು ಸಲಹೆ ಇಲ್ಲಿದೆ

ಪ್ರತಿ ಮನೆಯಲ್ಲೂ ದಿನದ ಆರಂಭ ದೇವರ ಮುಂದೆ ದೀಪ ಹಚ್ಚುವ ಮೂಲಕವೇ ಪ್ರಾರಂಭವಾಗುತ್ತದೆ. ದೀಪವು ಕೇವಲ ಕತ್ತಲೆಯನ್ನು ಹೋಗಲಾಡಿಸುವ ಸಾಧನವಲ್ಲ; ಅದು ಜ್ಞಾನ, ಸಮೃದ್ಧಿ ಮತ್ತು ಸಕಾರಾತ್ಮಕತೆಯ ಸಂಕೇತ. ದೀಪವಿಲ್ಲದ ಪೂಜೆಯು ಅಪೂರ್ಣವೆಂದು ಶಾಸ್ತ್ರಗಳು ಹೇಳುತ್ತವೆ, ಏಕೆಂದರೆ ದೀಪದ ಜ್ವಾಲೆಯು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ದಹಿಸಿ, ದೈವಿಕ ಕಂಪನಗಳನ್ನು ಆಕರ್ಷಿಸುತ್ತದೆ. ಆದರೆ, ಈ ದೀಪವನ್ನು ಹಚ್ಚುವಾಗ ನಾವು ಪಾಲಿಸುವ ಸಣ್ಣಪುಟ್ಟ ನಿಯಮಗಳು ನಮ್ಮ ಪೂಜೆಯ ಫಲವನ್ನು ನಿರ್ಧರಿಸುತ್ತವೆ ಎಂಬುದು ಅನೇಕರಿಗೆ ತಿಳಿದಿಲ್ಲ.

ದೀಪವನ್ನು ಹಚ್ಚುವಾಗ ಈ ನಿಯಮ ಅನುಸರಿಸಿ:

ದೀಪವನ್ನು ಹಚ್ಚುವಾಗ ಬಳಸುವ ದ್ರವ್ಯ ಮತ್ತು ಅದರ ಸ್ಥಾನಕ್ಕೆ ವಿಶೇಷ ಮಹತ್ವವಿದೆ. ನೀವು ಹಸುವಿನ ತುಪ್ಪವನ್ನು ಬಳಸಿ ದೀಪ ಹಚ್ಚುವುದಾದರೆ, ಅದನ್ನು ದೇವರ ವಿಗ್ರಹ ಅಥವಾ ಫೋಟೋದ ಎಡಭಾಗದಲ್ಲಿ ಇಡುವುದು ಅತ್ಯಂತ ಶುಭ ಎಂದು ಪರಿಗಣಿಸಲಾಗುತ್ತದೆ. ತುಪ್ಪದ ದೀಪಕ್ಕೆ ಬಿಳಿ ಹತ್ತಿಯ ಬತ್ತಿಯನ್ನು ಬಳಸುವುದು ಶ್ರೇಷ್ಠ. ಅದೇ ರೀತಿ, ಸಾಸಿವೆ ಅಥವಾ ಎಳ್ಳೆಣ್ಣೆಯನ್ನು ಬಳಸುವಾಗ ದೀಪವನ್ನು ದೇವರ ಬಲಭಾಗದಲ್ಲಿ ಇರಿಸಬೇಕು. ಎಣ್ಣೆಯ ದೀಪಕ್ಕೆ ಕೆಂಪು ದಾರ ಅಥವಾ ಪವಿತ್ರ ದಾರದಿಂದ ಮಾಡಿದ ಬತ್ತಿಯನ್ನು ಬಳಸುವುದು ವಿಶೇಷ ಫಲವನ್ನು ನೀಡುತ್ತದೆ. ದೀಪ ಹಚ್ಚುವ ಮೊದಲು ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುವುದು ಭಕ್ತಿಯ ಮೊದಲ ಮೆಟ್ಟಿಲಾಗಿದೆ.

ಸರಿಯಾದ ದಿಕ್ಕು:

ವಾಸ್ತು ಶಾಸ್ತ್ರದ ಪ್ರಕಾರ, ದೀಪದ ಜ್ವಾಲೆಯು ಮುಖ ಮಾಡಿರುವ ದಿಕ್ಕು ಮನೆಯ ಅಭಿವೃದ್ಧಿಯ ಮೇಲೆ ಪ್ರಭಾವ ಬೀರುತ್ತದೆ. ದೀಪ ಹಚ್ಚಲು ಉತ್ತರ ಅಥವಾ ಈಶಾನ್ಯ ದಿಕ್ಕುಗಳು ಅತ್ಯಂತ ಪ್ರಶಸ್ತವಾದವುಗಳಾಗಿವೆ. ದೀಪದ ಬತ್ತಿಯು ಯಾವಾಗಲೂ ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿರಬೇಕು; ಪೂರ್ವಕ್ಕೆ ಮುಖ ಮಾಡಿದ್ದರೆ ಆರೋಗ್ಯ ವೃದ್ಧಿಯಾಗುತ್ತದೆ ಮತ್ತು ಉತ್ತರಕ್ಕೆ ಮುಖ ಮಾಡಿದ್ದರೆ ಸಂಪತ್ತು ಲಭಿಸುತ್ತದೆ. ದಕ್ಷಿಣ ಅಥವಾ ಪಶ್ಚಿಮ ದಿಕ್ಕಿಗೆ ಬತ್ತಿಯನ್ನು ಇಡುವುದನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು, ಏಕೆಂದರೆ ಇದು ಅಶುಭ ಫಲಗಳನ್ನು ನೀಡಬಹುದು ಎಂದು ನಂಬಲಾಗಿದೆ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಪೂಜೆಯ ಸಮಯದಲ್ಲಿ ಈ ತಪ್ಪು ಮಾಡಲೇಬೇಡಿ:

ಪೂಜೆಯ ಸಮಯದಲ್ಲಿ ನಾವು ಮಾಡುವ ಕೆಲವು ಸಾಮಾನ್ಯ ತಪ್ಪುಗಳು ಪೂಜೆಯ ಪವಿತ್ರತೆಯನ್ನು ಕಡಿಮೆ ಮಾಡಬಹುದು. ದೇವರ ವಿಗ್ರಹದ ಅತಿ ಹತ್ತಿರ ಅಥವಾ ನೇರವಾಗಿ ಮುಂದೆ ದೀಪವನ್ನು ಇಡಬಾರದು. ದೀಪವು ಸ್ವಚ್ಛವಾಗಿರಬೇಕು ಮತ್ತು ಅದರಲ್ಲಿ ಯಾವುದೇ ರೀತಿಯ ಕೊಳಕು ಇರಬಾರದು. ಮುಖ್ಯವಾಗಿ, ಪೂಜೆ ನಡೆಯುತ್ತಿರುವಾಗಲೇ ದೀಪ ಆರಿ ಹೋಗದಂತೆ ಸಾಕಷ್ಟು ಪ್ರಮಾಣದ ತುಪ್ಪ ಅಥವಾ ಎಣ್ಣೆಯನ್ನು ಹಾಕಿರಬೇಕು. ಮುರಿದ ಹಣತೆ ಅಥವಾ ಸುಟ್ಟು ಕಪ್ಪಾದ ದೀಪಗಳನ್ನು ಬಳಸುವುದರಿಂದ ಮನೆಯಲ್ಲಿ ನಕಾರಾತ್ಮಕತೆ ಹೆಚ್ಚಾಗುತ್ತದೆ. ಆದ್ದರಿಂದ, ಭಕ್ತಿ ಮತ್ತು ಸರಿಯಾದ ನಿಯಮಗಳ ಪಾಲನೆಯೊಂದಿಗೆ ದೀಪ ಬೆಳಗಿದಾಗ ಮಾತ್ರ ಮನೆಯಲ್ಲಿ ಸುಖ, ಶಾಂತಿ ನೆಲೆಸಲು ಸಾಧ್ಯ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸುಬ್ರಹ್ಮಣ್ಯಕ್ಕೆ ಹೋಗುವ ಭಕ್ತರ ಗಮನಕ್ಕೆ: ಬೆಂಗಳೂರು – ಮಂಗಳೂರು ರೈಲು ಸಂಚಾರದಲ್ಲಿ ಮಹತ್ವದ ಬದಲಾವಣೆ

ಮಂಗಳೂರು, ಮಾರ್ಚ್ 19: ನೈಋತ್ಯ ರೈಲ್ವೆಯಲ್ಲಿ ಭಾರೀ ಬದಲಾವಣೆಯನ್ನು ಇಲಾಖೆ ತಂದಿದೆ. ತುರ್ತು ಹಳಿ ನಿರ್ವಹಣಾ ಕಾರ್ಯ ನಿಗದಿಯಾಗಿರುವುದರಿಂದ, ಮಂಗಳೂರು ಮತ್ತು ಸುಬ್ರಹ್ಮಣ್ಯ ನಡುವೆ ಕಾರ್ಯನಿರ್ವಹಿಸುವ ಪ್ರಯಾಣಿಕ ರೈಲು ಸೇವೆಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿದೆ. ಮಂಗಳೂರು ಸೆಂಟ್ರಲ್ ಮತ್ತು ಸುಬ್ರಹ್ಮಣ್ಯ ಮಾರ್ಗವಾಗಿ ಸಂಚಾರಿಸುವ ಪ್ಯಾಸೆಂಜರ್ ರೈಲುಗಳನ್ನು ಒಟ್ಟು 35 ದಿನಗಳವರೆಗೆ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ರೈಲು ಸಂಖ್ಯೆ 56629 (ಮಂಗಳೂರು – ಸುಬ್ರಹ್ಮಣ್ಯ ರಸ್ತೆ ಪ್ಯಾಸೆಂಜರ್) ಮತ್ತು ರೈಲು ಸಂಖ್ಯೆ 56630 (ಸುಬ್ರಹ್ಮಣ್ಯ ರಸ್ತೆ – ಮಂಗಳೂರು ಪ್ಯಾಸೆಂಜರ್) ಮಾರ್ಚ್ 23 ರಿಂದ ಏಪ್ರಿಲ್ 14 ರವರೆಗೆ ಮತ್ತು ಮತ್ತೆ ಜೂನ್ 10 ರಿಂದ ಜೂನ್ 21 ರವರೆಗೆ ರದ್ದು ಮಾಡಲಾಗಿದೆ.

ಏಪ್ರಿಲ್ ತಿಂಗಳಲ್ಲಿ ಹಲವಾರು ಎಕ್ಸ್‌ಪ್ರೆಸ್ ರೈಲುಗಳ ಸಮಯದಲ್ಲೂ ಬದಲಾವಣೆಗಳನ್ನು ಮಾಡಲಾಗಿದೆ. ಯಶವಂತಪುರ – ಕಾರವಾರ (16515), ಯಶವಂತಪುರ – ಮಂಗಳೂರು (16575), ಮತ್ತು ಯಶವಂತಪುರ – ಮಂಗಳೂರು (16539) ಎಕ್ಸ್‌ಪ್ರೆಸ್ ರೈಲುಗಳು ಸುಮಾರು 20 ನಿಮಿಷಗಳ ಕಾಲ ವಿಳಂಬವಾಗುತ್ತವೆ. ಮಂಗಳೂರು – ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು (56229) ಏಪ್ರಿಲ್ 21 ರಿಂದ ಜೂನ್ 9 ರವರೆಗೆ 55 ನಿಮಿಷಗಳ ಕಾಲ ವಿಳಂಬವಾಗಲಿದೆ ಎಂದು ಇಲಾಖೆ ಹೇಳಿದೆ.

ಯುಗಾದಿ ಮತ್ತು ರಂಜಾನ್‌ಗೆ ವಿಶೇಷ ರೈಲುಗಳು:

ಯಶವಂತಪುರ – ಮಡಗಾಂವ್ ವಿಶೇಷ ಎಕ್ಸ್‌ಪ್ರೆಸ್ ಮಾರ್ಚ್ 20 ರಂದು ಬೆಳಿಗ್ಗೆ 11:50 ಕ್ಕೆ ಯಶವಂತಪುರದಿಂದ ಹೊರಟು ಶನಿವಾರ ಬೆಳಿಗ್ಗೆ 6:45 ಕ್ಕೆ ಮಡಗಾಂವ್ ತಲುಪಲಿದೆ. ಹಿಂದಿರುಗುವ ರೈಲು ಮಾರ್ಚ್ 22 ರಂದು ಬೆಳಿಗ್ಗೆ 11 ಗಂಟೆಗೆ ಮಡಗಾಂವ್‌ನಿಂದ ಹೊರಟು ಸೋಮವಾರ ಬೆಳಿಗ್ಗೆ 5:20 ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ.ಈ ರೈಲಿಗೆ ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕ ಪುತ್ತೂರು, ಬಂಟ್ವಾಳ, ಸುರತ್ಕಲ್, ಮೂಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು, ಭಟ್ಕಳ, ಮುರುಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರಸ್ತೆ, ಅಂಕೋಲಾ ಮತ್ತು ಕಾರವಾರದಲ್ಲಿ ನಿಲುಗಡೆ ಇರುತ್ತದೆ.

ಇದನ್ನೂ ಓದಿ: ಯುಗಾದಿ, ರಂಜಾನ್ ರಜೆಗೆ ಊರಿಗೆ ಹೋದವರಿಗೆ ಬೆಂಗಳೂರಿಗೆ ವಾಪಸ್ ಬರಲು ವಿಶೇಷ ರೈಲುಗಳು: ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ದಕ್ಷಿಣ ಮಧ್ಯ ರೈಲ್ವೆಯಲ್ಲಿ ರದ್ದತಿ:

ಕರ್ನೂಲ್ – ಕಾಚೆಗುಡ ಮತ್ತು ರಾಯಚೂರು – ಕಾಚೆಗುಡ ಮಾರ್ಗಗಳಲ್ಲಿ ಮಾರ್ಚ್ ಮಧ್ಯದಿಂದ ಏಪ್ರಿಲ್ 1 ರವರೆಗೆ ರೈಲು ಮಾರ್ಗಗಳ ದುರಸ್ಥಿ ಇರುವ ಕಾರಣ, ಹಲವಾರು ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಸಲಹಾ ಸಮಿತಿಯ ಮಾಜಿ ಸದಸ್ಯ ಡಾ. ಬಾಬುರಾವ್ ಹೇಳಿದ್ದಾರೆ. ಕರ್ನೂಲ್ ನಗರ – ಕಾಚೆಗುಡ (17436) ಮತ್ತು ಕಾಚೆಗುಡ – ಕರ್ನೂಲ್ ನಗರ (17435) ಮಾರ್ಚ್ 12 ರಿಂದ ಏಪ್ರಿಲ್ 1 ರವರೆಗೆ ರದ್ದಾಗಿವೆ.ಕಾಚೇಗೌಡ – ರಾಯಚೂರು (67787, 17693) ಮತ್ತು ರಾಯಚೂರು – ಕಾಚೇಗೌಡ (67788, 17694) ಮಾರ್ಚ್ 11 ರಿಂದ ಮಾರ್ಚ್ 31 ರವರೆಗೆ ರದ್ದುಗೊಳಿಸಲಾಗಿದೆ. ಗದ್ವಾಲ್ – ರಾಯಚೂರು (67784) ಮತ್ತು ರಾಯಚೂರು – ಗದ್ವಾಲ್ (67783) ಮಾರ್ಚ್ 11 ರಿಂದ ಮಾರ್ಚ್ 31 ರವರೆಗೆ ರದ್ದಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

 

Source link

ಹೊಂಬಾಳೆ ಅನ್​​ಫಾಲೋ ಮಾಡಿದ ರಿಷಬ್; ತಮ್ಮದೇ ಬ್ಯಾನರ್​ ಅಲ್ಲಿ ‘ಚಾಪ್ಟರ್ 2’ ಘೋಷಣೆ

ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ (Kantara: Chapter 1) ಸಿನಿಮಾ ಮೂಲಕ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದಾರೆ. ಈ ಸಿನಿಮಾ ನಿರ್ದೇಶನ ಮಾಡುವುದರ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ಈಗ ಅವರು ತಮ್ಮದೇ ಬ್ಯಾನರ್ ಅಲ್ಲಿ ‘ಚಾಪ್ಟರ್ 2’ ಎಂದು ಘೋಷಣೆ ಮಾಡಿದ್ದಾರೆ. ಇದು ನಿಜಕ್ಕೂ ‘ಕಾಂತಾರ ಚಾಪ್ಟರ್ 2’ನಾ? ಅಥವಾ ಬೇರೆ ಚಿತ್ರವೇ ಎಂಬ ಪ್ರಶ್ನೆ ಮೂಡಿದೆ. ಹೀಗಿರುವಾಗಲೇ ರಿಷಬ್ ಅವರ ಒಂದು ನಿರ್ಧಾರ ಅಚ್ಚರಿ ಮೂಡಿಸಿದೆ. ಇನ್ಸ್ಟಾದಲ್ಲಿ ಹೊಂಬಾಳೆ ಫಿಲ್ಮ್ಸ್​​ ಅನ್ನು ರಿಷಬ್ ಅನ್​​ಫಾಲೋ ಮಾಡಿದ್ದಾರೆ.

ರಿಷಬ್ ಶೆಟ್ಟಿ ಅವರು ಸಾಕಷ್ಟು ಜನಪ್ರಿಯತೆ ಪಡದಿದ್ದು ‘ಕಾಂತಾರ’ ಸಿನಿಮಾ ಮೂಲಕ. ಈ ಚಿತ್ರ ಸೂಪರ್ ಡೂಪರ್ ಹಿಟ್ ಆಯಿತು. ಆ ಬಳಿಕ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮಾಡಿದರು. ಈ ಚಿತ್ರಕ್ಕೆ ಎರಡನೇ ಚಾಪ್ಟರ್ ಬರಬೇಕಿತ್ತು. ಆ ಬಗ್ಗೆ ಚಾಪ್ಟರ್ 1 ಅಂತ್ಯದಲ್ಲಿ ಘೋಷಣೆ ಆಗಿತ್ತು. ಹೀಗಿರುವಾಗಲೇ ರಿಷಬ್ ಅವರು ಯುಗಾದಿಗೆ ‘ಚಾಪ್ಟರ್ 2’ ಎಂದು ರಿಷಬ್ ಘೋಷಣೆ ಮಾಡಿದ್ದಾರೆ.

ರಿಷಬ್ ‘ಚಾಪ್ಟರ್ 2’ ಘೋಷಣೆ ಮಾಡಿದರೆ ಖುಷಿ ಆಗೋದು ಸಹಜ. ಆದರೆ, ರಿಷಬ್ ಪೋಸ್ಟ್ ಚರ್ಚೆ ಹುಟ್ಟುಹಾಕಿದೆ. ‘ಕಾಂತಾರ’ ಸರಣಿಯನ್ನು ನಿರ್ಮಾಣ ಮಾಡಿರೋದು ಹೊಂಬಾಳೆ ಫಿಲ್ಮ್ಸ್. ಆದರೆ, ‘ಚಾಪ್ಟರ್ 2’ ಅನೌನ್ಸ್ ಮಾಡಿರೋದು ಅವರದ್ದೇ ಬ್ಯಾನರ್ ಅಡಿಯಲ್ಲಿ.

ಇದನ್ನೂ ಓದಿ: ‘ಅಧ್ಯಾಯ ಎರಡು’: ‘ಕಾಂತಾರ: ಚಾಪ್ಟರ್ 2’ ಆರಂಭಿಸಿದರೇ ರಿಷಬ್ ಶೆಟ್ಟಿ?

ರಿಷಬ್ ಪೋಸ್ಟರ್​ ಅಲ್ಲಿ ಎಲ್ಲಿಯೂ ಇದು ‘ಕಾಂತಾರ: ಚಾಪ್ಟರ್ 2’ ಎಂದು ಅನೌನ್ಸ್ ಮಾಡಿಲ್ಲ. ಹೀಗಾಗಿ ವಿವಿಧ ಚರ್ಚೆ ನಡೆದಿದೆ. ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ’ ಚಿತ್ರಕ್ಕೆ ಎರಡನೇ ಚಾಪ್ಟರ್ ಇದಾಗಿರಬಹುದು ಎಂದು ಅನೇಕರು ಊಹಿಸಿದ್ದಾರೆ. ಇನ್ನೂ ಕೆಲವರು ‘ಕಾಂತಾರ: ಚಾಪ್ಟರ್ 2’ ಎನ್ನುತ್ತಿದ್ದಾರೆ.
ಇವುಗಳ ಮಧ್ಯೆ ರಿಷಬ್ ಅವರು ಇನ್​​ಸ್ಟಾದಲ್ಲಿ ‘ಕಾಂತಾರ’ ಹಾಗೂ ‘ಹೊಂಬಾಳೆ ಫಿಲ್ಮ್ಸ್’ ಖಾತೆಯನ್ನು ಅನ್​​​ಫಾಲೋ ಮಾಡಿದ್ದಾರೆ. ಇದು ಚರ್ಚೆಗೆ ಕಾರಣ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

International Day of Happiness 2026: ಬದುಕಿನಲ್ಲಿ ಸದಾ ಸಂತೋಷದಿಂದಿರಲು ಏನು ಮಾಡಬೇಕು?

ಇಂದು ಬಹುತೇಕ ಹೆಚ್ಚಿನ ಜನರ ಬಳಿ ಒಂದೊಳ್ಳೆ ಉದ್ಯೋಗವಿದೆ, ಮನೆ, ಕಾರು, ಇತ್ಯಾದಿ ಎಲ್ಲಾ ಸೌಕರ್ಯಗಳೂ ಇವೆ. ಆದರೆ ಒತ್ತಡದ ಬದುಕಿನಿಂದಾಗಿ ಅವರ ಬಳಿ ಸಂತೋಷ (Happiness) ಅನ್ನೋದೇ ಇಲ್ಲ. ಇಂದಿನ ಈ ಒತ್ತಡದ ಬದುಕಿನಲ್ಲಿ ಹೆಚ್ಚಿನ ಜನರು ಈ  ಸಂತೋಷಕ್ಕಾಗಿ ಹಾತೊರೆಯುತ್ತಿದ್ದಾರೆ. ಸಂತೋಷವು ಮಾನವನ ಜೀವನದ  ಮೂಲಭೂತ ಗುರಿಯಾಗಿದ್ದು, ಟೆನ್ಶನ್‌ ಎಲ್ಲಾ ಪಕ್ಕಕ್ಕಿಟ್ಟು ಖುಷಿಯಾಗಿರಲು ಜನರನ್ನು ಪ್ರೇರೇಪಿಸಲು ಹಾಗೂ ಸಂತೋಷವಾಗಿರುವುದರಿಂದ ಲಭಿಸುವ ಲಾಭಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಮಾರ್ಚ್‌ 20 ರಂದು ಅಂತಾರಾಷ್ಟ್ರೀಯ ಸಂತೋಷದ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.

ಸಂತೋಷದ ದಿನದ ಇತಿಹಾಸವೇನು?

ಸಂತೋಷದ ದಿನವನ್ನು ಭೂತಾನ್ ಆರಂಭಿಸಿತು. ಭೂತಾನ್ ತನ್ನ ಆರ್ಥಿಕ ಬೆಳವಣಿಗೆಯ ಮೇಲೆ ಮಾತ್ರ ಗಮನಹರಿಸದೆ, 1970 ರಿಂದ ಒಟ್ಟು ರಾಷ್ಟ್ರೀಯ ಸಂತೋಷಕ್ಕೂ ಆದ್ಯತೆ ನೀಡಿತು. ಸಂತೋಷದ ಸಮಾಜದಲ್ಲಿ ಮಾನಸಿಕ, ದೈಹಿಕ ಮತ್ತು ಸಾಮಾಜಿಕ ಯೋಗಕ್ಷೇಮವು ಪ್ರಮುಖ ಪಾತ್ರ ವಹಿಸುತ್ತದೆ  ಎಂದು ನಂಬಿದ್ದ ಭೂತಾನ್‌ ಸಂತೋಷದ ದಿನವನ್ನು ಆಚರಿಸಲು ಪ್ರಾರಂಭಿಸಿತು. ನಂತರ  ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಜುಲೈ 12, 2012 ರಂದು ತನ್ನ ನಿರ್ಣಯ 66/281 ರಲ್ಲಿ ಮಾರ್ಚ್ 20 ಅನ್ನು ಅಂತರರಾಷ್ಟ್ರೀಯ ಸಂತೋಷ ದಿನವೆಂದು ಘೋಷಿಸಿತು. ಅಂದಿನಿಂದ ಇದು ಪ್ರಪಂಚದಾದ್ಯಂತದ ಜನರ ಜೀವನದಲ್ಲಿ ಸಂತೋಷದ ಮಹತ್ವವನ್ನು ತಿಳಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂತೋಷದ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ಅಂತಾರಾಷ್ಟ್ರೀಯ ಸಂತೋಷದ ದಿನದ ಮಹತ್ವವೇನು?

  • ಈ ದಿನದ ಉದ್ದೇಶವು ಪ್ರಪಂಚದಾದ್ಯಂತ ಸಂತೋಷದ ಮಹತ್ವವನ್ನು ಉತ್ತೇಜಿಸುವುದು ಮತ್ತು ಮಾನಸಿಕ ಮತ್ತು ದೈಹಿಕ ಆರೋಗ್ಯದ ಮಹತ್ವವನ್ನು ಜನರಿಗೆ ಅರ್ಥಮಾಡಿಸುವುದು.
  • ಈ ದಿನವನ್ನು ಆಚರಿಸುವ ಉದ್ದೇಶವು ಪ್ರಪಂಚದಾದ್ಯಂತ ಸಂತೋಷವನ್ನು ಹರಡುವುದು ಮತ್ತು ಜನರು ಸಕಾರಾತ್ಮಕ ಜೀವನವನ್ನು ನಡೆಸಲು ಪ್ರೋತ್ಸಾಹಿಸುವುದು.
  • ಸಂತೋಷವು ಕೇವಲ ಬಾಹ್ಯ ವಿಷಯಗಳ ಮೇಲೆ ಅವಲಂಬಿತವಾಗಿಲ್ಲ, ಬದಲಾಗಿ ನಮ್ಮ ಮಾನಸಿಕ ಯೋಗಕ್ಷೇಮ, ಇತರರೊಂದಿಗಿನ ಸಂಬಂಧಗಳು ಮತ್ತು ಜೀವನದ ಸಣ್ಣ ಸಂತೋಷಗಳ ಮೇಲೂ ಅವಲಂಬಿತವಾಗಿದೆ ಎಂಬುದನ್ನು ಈ ದಿನ ನೆನಪಿಸುತ್ತದೆ.

ಇದನ್ನೂ ಓದಿ: ರಾಷ್ಟ್ರೀಯ ಲಸಿಕೆ ದಿನವನ್ನು ಆಚರಿಸುವು ಹಿಂದಿನ ಉದ್ದೇಶವೇನು ತಿಳಿಯಿರಿ

ಸಂತೋಷವಾಗಿರಲು ಏನು ಮಾಡಬೇಕು?

  • ನಗು ಮತ್ತು ಮುಗುಳ್ನಗೆ ಸ್ವಾಭಾವಿಕವಾಗಿ ಸಂತೋಷವನ್ನು ತರುತ್ತದೆ. ಆದ್ದರಿಂದ, ನಿಮ್ಮ ಮುಖದಲ್ಲಿ ನಗುವನ್ನು ಇಟ್ಟುಕೊಳ್ಳಿ.
  • ನಿಯಮಿತ ವ್ಯಾಯಾಮ, ಸಮತೋಲಿತ ಆಹಾರ ಮತ್ತು ಸಾಕಷ್ಟು ನಿದ್ರೆ ನಿಮ್ಮನ್ನು ಒಳಗಿನಿಂದ ಸಂತೋಷಪಡಿಸುತ್ತದೆ.
  • ನಕಾರಾತ್ಮಕ ಆಲೋಚನೆಗಳನ್ನು ತಪ್ಪಿಸಿ, ತನ್ನ ಸುತ್ತಲಿನ ಜನರೊಂದಿಗೆ ಸಕಾರಾತ್ಮಕ ರೀತಿಯಲ್ಲಿ ಬದುಕಿ, ಸಕಾರಾತ್ಮಕತೆ ನಿಮಗೆ ಸಂತೋಷವನ್ನು ನೀಡುತ್ತದೆ.
  • ನಿಮ್ಮಲ್ಲಿರುವದರಲ್ಲಿ ಕೃತಜ್ಞರಾಗಿರಿ ಮತ್ತು ಸಂತೋಷವಾಗಿರಿ.
  • ಭವಿಷ್ಯದ ಬಗ್ಗೆ ಚಿಂತಿಸುವ ಬದಲು ಅಥವಾ ಹಿಂದಿನ ತಪ್ಪುಗಳ ಬಗ್ಗೆ ಯೋಚಿಸುವ ಬದಲು, ವರ್ತಮಾನದಲ್ಲಿ ಬದುಕಿ, ಜೀವನವನ್ನು ಆನಂದಿಸಿ.
  • ನಿಮ್ಮೊಂದಿಗೆ ನೀವು ಸಮಯ ಕಳೆಯುವ ಅಭ್ಯಾಸವನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಣ ಕೊಡಲಿಲ್ಲ ಎಂದು ಗರ್ಭಿಣಿ ಪತ್ನಿಯನ್ನೇ ಕತ್ತು ಹಿಸುಕಿ ಕೊಂದ ಪತಿ

ಪಶ್ಚಿಮ ಬಂಗಾಳ, ಮಾರ್ಚ್​ 20: ಕೇಳಿದಷ್ಟು ಹಣ ಕೊಡಲಿಲ್ಲ ಎಂದು ಪತಿಯೊಬ್ಬ ಗರ್ಭಿಣಿ(Pregnant) ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಉತ್ತರ 24ಪರಗಣ ಜಿಲ್ಲೆಯಲ್ಲಿ ನಡೆದಿದೆ. ಪೂಜಾ ಮಂಡಲ್ ಎಂಬುವವರು ಸಂಜೆ ಗರುಲಿಯಾದ ಲೆನಿನ್ ನಗರ ಪ್ರದೇಶದಲ್ಲಿರುವ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ, ಆಕೆಯ ದೇಹವನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿ ಹಾಸಿಗೆಯ ಕೆಳಗೆ ಮರೆಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆಕೆಯ ಪತಿ ರಿಷಿ ಹರಿಚಂದ್, ಅವರ ತಾಯಿ ಮತ್ತು ಮತ್ತೊಬ್ಬ ಕುಟುಂಬ ಸದಸ್ಯ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಮೃತ ಹಿಳೆಯ ಕುಟುಂಬ ಸಲ್ಲಿಸಿದ ದೂರಿನ ಪ್ರಕಾರ, ಪೂಜಾ ತನ್ನ ಪತಿಯ ಹಣದ ಬೇಡಿಕೆಗಳನ್ನು ಪೂರೈಸಲು ನಿರಾಕರಿಸಿದ ಕಾರಣ ಆಕೆಯನ್ನು ಕೊಲ್ಲಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಹರಿಚಂದ್ ಆಕೆಯ ಕುತ್ತಿಗೆಯನ್ನು ಬಟ್ಟೆ ಬಳಸಿ ಕತ್ತು ಹಿಸುಕಿ ಕೊಲೆ ಮಾಡಿ, ಶವವನ್ನು ಮರೆಮಾಚುವ ಮೂಲಕ ಅಪರಾಧವೆಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಪೂಜಾ ಮತ್ತು ಹರಿಚಂದ್ ಮದುವೆಯಾಗಿ ಸುಮಾರು ಎರಡು ವರ್ಷಗಳಾಗಿವೆ. ಮದುವೆಯಾದಾಗಿನಿಂದ ಆಕೆಯ ಪತಿ ಮತ್ತು ಅತ್ತೆ-ಮಾವರಿಂದ ಹಣದ ವಿಚಾರದಲ್ಲಿ ಪದೇ ಪದೇ ಕಿರುಕುಳ ಅನುಭವಿಸುತ್ತಿದ್ದರು ಎಂದು ಆಕೆಯ ಕುಟುಂಬ ಆರೋಪಿಸಲಾಗಿದೆ. ಆಕೆಯ ಗರ್ಭಿಣಿಯಾಗಿದ್ದರೂ, ಕಿರುಕುಳ ಮುಂದುವರೆದಿದೆ ಎಂದು ಅವರು ಹೇಳಿದರು. ಬುಧವಾರ ಬೆಳಗ್ಗೆ, ಆಕೆ ಹಣ ನೀಡಲು ನಿರಾಕರಿಸಿದ ನಂತರ ದಂಪತಿ ನಡುವೆ ಜಗಳ ನಡೆದಿದ್ದು, ನಂತರ ಆಕೆಯನ್ನು ಕೊಲ್ಲಲಾಗಿದೆ ಎಂದು ಆರೋಪಿಸಲಾಗಿದೆ.

ಮತ್ತಷ್ಟು ಓದಿ: 7 ತಿಂಗಳ ಗರ್ಭಿಣಿ ಹತ್ಯೆ ಪ್ರಕರಣ: ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು

ಪೂಜಾ ಅವರ ಕುಟುಂಬವು ಅವರನ್ನು ಸಂಪರ್ಕಿಸಲು ಸಾಧ್ಯವಾಗದಿದ್ದಾಗ, ಅವರು ಮಧ್ಯಾಹ್ನದ ನಂತರ ಅವರ ಅತ್ತೆಯ ಮನೆಗೆ ಹೋಗಿದ್ದಾರೆ. ಅವರು ಸಿಗಲಿಲ್ಲ, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು, ನಂತರ ಅವರು ಹಾಸಿಗೆಯ ಕೆಳಗೆ ಶವವನ್ನು ವಶಪಡಿಸಿಕೊಂಡಿದ್ದಾರೆ.

ಅವರು ನಮ್ಮ ಒಪ್ಪಿಗೆಯಿಲ್ಲದೆ ಪರಸ್ಪರ ಮದುವೆಯಾದರು. ನಮ್ಮ ಕುಟುಂಬದ ಯಾರೂ ಅವರನ್ನು ಸ್ವೀಕರಿಸಲಿಲ್ಲ. ನಂತರ ಅವಳು ಗರ್ಭಿಣಿಯಾಗಿದ್ದಾಳೆಂದು ನಮಗೆ ತಿಳಿಯಿತು. ಆ ನಂತರ ನಾವು ಇಬ್ಬರನ್ನು ಒಪ್ಪಿಕೊಂಡೆವು ಎಂದು ಮಾವ ಗೌತಮ್ ಬಿಸ್ವಾಸ್ ತಿಳಿಸಿದ್ದಾರೆ. ಆಕೆಯ ಪತಿ ಯಾವುದೇ ಕೆಲಸ ಮಾಡುವುದಿಲ್ಲ. ಆದ್ದರಿಂದ ಅವನು ಆಗಾಗ ಹಣಕ್ಕೆ ಬೇಡಿಕೆ ಇಟ್ಟಿದ್ದ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೊಮ್ಮನಹಳ್ಳಿಯಲ್ಲಿ ಉಚಿತ ಕೋಳಿ ವಿತರಣೆ ಮಾಡಿದ ಕಾಂಗ್ರೆಸ್​​​ ನಾಯಕ : ಜನರ ಸಾಗರ!

ಬೆಂಗಳೂರು, ಮಾ.20: ಯುಗಾದಿ ಮತ್ತು ರಂಜಾನ್ ಹಬ್ಬಗಳ ಸಂಭ್ರಮದ ನಡುವೆ ಬೆಂಗಳೂರಿನ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಮಂಗಮ್ಮನಪಾಳ್ಯದಲ್ಲಿ ವಿಶಿಷ್ಟ ಕಾರ್ಯಕ್ರಮವೊಂದು ಗಮನ ಸೆಳೆದಿದೆ. ಉಚಿತವಾಗಿ ಕೋಳಿ ಪಡೆಯಲು ಸಾವಿರಾರು ಜನರು ಕಿಲೋಮೀಟರ್ ಉದ್ದದ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಕಂಡುಬಂದಿವೆ. ಯುಗಾದಿ ಹಬ್ಬದ ಮರುದಿನದ ‘ಹೊಸತೊಡಕು’ ಮತ್ತು ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಬಡವರಿಗೆ ಹಾಗೂ ಸಾರ್ವಜನಿಕರಿಗೆ ಸುಮಾರು 3,000 ಕೋಳಿಗಳನ್ನು ಉಚಿತವಾಗಿ ವಿತರಿಸಲಾಯಿತು. ಹೆಚ್.ಎಸ್.ಆರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಘವೇಂದ್ರ ಅವರ ನೇತೃತ್ವದಲ್ಲಿ ಈ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ 7 ಗಂಟೆಯಿಂದಲೇ ಜನ ಮಂಗಮ್ಮನಪಾಳ್ಯಕ್ಕೆ ಲಗ್ಗೆ ಇಟ್ಟಿದ್ದರು. ಕೋಳಿ ಪಡೆಯುವ ಉತ್ಸಾಹದಲ್ಲಿ ಜನರು ರಸ್ತೆಯ ಉದ್ದಕ್ಕೂ ಕಿಲೋಮೀಟರ್ ಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದು, ಮಂಗಮ್ಮನಪಾಳ್ಯದ ರಸ್ತೆಗಳು ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದವು. ಇಂದು ಹೊಸತೊಡಕು ಆಚರಣೆ ಇರುವುದರಿಂದ ಮಾಂಸಕ್ಕೆ ಭಾರಿ ಬೇಡಿಕೆಯಿದೆ. ಈ ಸಮಯದಲ್ಲಿ ಉಚಿತ ಕೋಳಿ ದೊರೆತಿರುವುದು ಸ್ಥಳೀಯ ಜನರಲ್ಲಿ ಸಂಭ್ರಮ ಮೂಡಿಸಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಂಚಾರ ನಿಯಂತ್ರಕರ ಕೊಠಡಿಗೇ ನುಗ್ಗಿದ BMTC ಬಸ್! ವಿಡಿಯೋ ನೋಡಿ

ಬೆಂಗಳೂರು, ಮಾರ್ಚ್ 20: ಚಾಲಕನ ನಿರ್ಲಕ್ಷ್ಯದಿಂದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಸೊಂದು ಸಂಚಾರ ನಿಯಂತ್ರಕರ ಕೊಠಡಿಗೇ ನುಗ್ಗಿದ ಘಟನೆ ಪೀಣ್ಯ 2ನೇ ಹಂತದ ಬಿಎಂಟಿಸಿ ಡಿಪೋದಲ್ಲಿ ನಡೆದಿದೆ. ಅದೃಷ್ಟವಶಾತ್, ದೊಡ್ಡ ಅವಘಡ ತಪ್ಪಿದೆ. KA 51 AK 4169 ಸಂಖ್ಯೆಯ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಸನ್ನು ಚಾಲಕ ಹ್ಯಾಂಡ್ ಬ್ರೇಕ್ ಹಾಕದೇ ನಿಲ್ಲಿಸಿ ತೆರಳಿದ ಪರಿಣಾಮ, ಬಸ್ ಸ್ವಯಂಚಾಲಿತವಾಗಿ ಮುಂದೆ ಚಲಿಸಿ ಡಿಪೋ ಒಳಗೆ ನುಗ್ಗಿದೆ. ಈ ವೇಳೆ ಡಿಪೋದ ಸಂಚಾರ ನಿಯಂತ್ರಕರ ಕೊಠಡಿಗೆ ಬಸ್ ಡಿಕ್ಕಿ ಹೊಡೆದಿದೆ.

ಬಸ್ ಗುದ್ದಿದ ಪರಿಣಾಮ ನಾಲ್ಕು ಬೈಕ್‌ಗಳು ಜಖಂ ಆಗಿವೆ. ಅದೃಷ್ಟವಶಾತ್ ಈ ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಯ ಬಳಿಕ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಾಲಕನ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕತಾರ್ ಅನಿಲ ಘಟಕದ ಮೇಲಿನ ಇರಾನ್ ಘಾತಕ ದಾಳಿಯಿಂದ ಭಾರತಕ್ಕೆ ಇನ್ನೆಷ್ಟು ವರ್ಷ ಕಾಡಲಿದೆ ಅನಿಲ ಸಮಸ್ಯೆ

ದೋಹಾ,ಮಾರ್ಚ್ 20: ಕತಾರ್​​ನ ನೈಸರ್ಗಿಕ ಅನಿಲ ಘಟಕದ ಮೇಲೆ ಇರಾನ್(Iran) ನಡೆಸಿದ ಘಾತಕ ದಾಳಿಯಿಂದ ವಿಶ್ವದ ಐದು ಬಲಿಷ್ಠ ರಾಷ್ಟ್ರಗಳಿಗೆ ಮುಂದನ ಐದು ವರ್ಷಗಳವರೆಗೆ ಅನಿಲ ಪೂರೈಕೆಯಲ್ಲಿ ಸಮಸ್ಯೆಯಾಗುವ ಸಾಧ್ಯತೆ ಇದೆ. ಈಗ ಬರುತ್ತಿರುವ ವರದಿಗಳ ಪ್ರಕಾರ, ಕತಾರ್​ನಿಂದ ಭಾರತಕ್ಕೆ ರವಾನೆಯಾಗುತ್ತಿರುವ ಅನಿಲಕ್ಕೂ ಸಮಸ್ಯೆಯಾಗುವ ಸಾಧ್ಯತೆ ಇದೆ. ವಿಶ್ವದ ಶೇ.17ರಷ್ಟು ನೈಸಗರ್ಗಕ ಅನಿಲ ಪೂರೈಕೆಯು ಕತಾರ್​​ನ ಇದೊಂದೇ ಘಟಕದಿಂದ ಆಗುತ್ತದೆ.

ವಿಶ್ವದ ಅತ್ಯಂತ ದೊಡ್ಡ ನೈಸಿರ್ಗಿಕ ಅನಿಲ ಘಟಕ ಇದಾಗಿದೆ, ಇರಾನ್ ದಾಳಿಯಿಂದ ಕತಾರ್​ಗೆ ವಾರ್ಷಿಕ ಸುಮಾರು 20 ಬಿಲಿಯನ್ ಡಾಲರ್​​ನಷ್ಟು ಆದಾಯ ನಷ್ಟವಾಗುವ ಸಾಧ್ಯತೆ ಇದೆ. ಹಾಗೆಯೇ ವಾರ್ಷಿಕವಾಗಿ ಸುಮಾರು 12.8 ಮಿಲಿಯನ್ ಟನ್ ಎಲ್​ಎನ್​ಜಿ ಪೂರೈಕೆಯಲ್ಲಿ ಮುಂದಿನ ಮೂರರಿಂದ ಐದು ವರ್ಷಗಳವರೆಗೆ ವ್ಯತ್ಯಯಾಗಬಹುದು ಎಂದು ಅಂದಾಜಿಸಲಾಗಿದೆ.

ಇದನ್ನು ಕತಾರ್​ನ ಇಂಧನ ಇಲಾಖೆಯೇ ಖಾತ್ರಿಪಡಿಸಿದೆ, ಇದರಿಂದ ಭಾರತ, ಚೀನಾ ಸೇರಿದಂತೆ ಕೆಲವು ಏಷ್ಯಾ ಹಾಗೂ ಐರೋಪ್ಯ ರಾಷ್ಟ್ರಗಳು ಸಮಸ್ಯೆಗೆ ಈಡಾಗಬಹುದು. ಇರಾನ್​ನೊಂದಿಗೆ ಕತಾರ್ ಉತ್ತಮ ಸಂಬಂಧವನ್ನೇ ಹೊಂದಿತ್ತು. ಹೀಗಾಗಿ ಕನಸಲ್ಲಿಯೂ ಕತಾರ್​ನ ಅಂತಹ ಪ್ರಮುಖ ಘಟಕಗಳ ಮೇಲೆ ಇರಾನ್ ದಾಳಿ ಮಾಡಲಿದೆ ಎಂದು ಅಲ್ಲಿನ ಆಡಳಿತ ವ್ಯವಸ್ಥೆ ಅಂದಾಜು ಮಾಡಿರಲಿಲ್ಲ. ಹೀಗಾಗಿ ಮುಸ್ಲಿಂ ರಾಷ್ಟ್ರವೊಂದು ಈ ರೀತಿ ದಾಳಿ ಮಾಡಿದೆ ಎಂದು ಕತಾರ್ ಆಕ್ರೋಶಗೊಂಡಿದೆ. ಆದರೆ ಈ ಕೃತ್ಯವು ವಿಶ್ವದ ಪ್ರಮುಖ ರಾಷ್ಟ್ರಗಳಿಗೆ ದುಃಸ್ವಪ್ನವಾಗಿ ಕಾಡಿದೆ.

ಇಟಲಿ, ಬೆಲ್ಜಿಯಂ, ದಕ್ಷಿಣ ಕೊರಿಯಾ ಹಾಗೂ ಚೀನಾಕ್ಕೆ ಅನಿಲ ಪೂರೈಕೆ ಮಾಡುತ್ತಿದ್ದ ಘಟಕದ ಎರಡು ಟ್ರೇನ್​ಗಳ ಮೇಲೆ ಇರಾನ್ ದಾಳಿ ಮಾಡಿದೆ. ಇದರಿಂದ ಈ ದೇಶಗಳೊಂದಿಗೆ ದೀರ್ಘಾವಧಿಗೆ ಮಾಡಿಕೊಂಡಿದ್ದ ಅನಿಲ ಪೂರೈಕೆ ಒಪ್ಪಂದಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಎಲ್​ಎನ್​ಜಿ ಟ್ರೇನ್ ಎಸ್​4 ಮೇಲೆ ದಾಳಿಯು ಹಾನಿ ಮಾಡಿರುವ ಪರಿಣಾಮದಿಂದ ಇಟಲಿ ಹಾಗೂ ಬೆಲ್ಜಿಯಂಗೆ ಆಗುವ ಅನಿಲ ಪೂರೈಕೆಗಳು ಭಾಹಶಃ ಸ್ಥಗಿತಗೊಂಡಿದೆ.

ಮತ್ತಷ್ಟು ಓದಿ: ಅಮೆರಿಕದ ಎಫ್-35 ಫೈಟರ್ ಜೆಟ್ ಮೇಲೆ ಇರಾನ್ ದಾಳಿ; ಇಲ್ಲಿದೆ ವಿಡಿಯೋ

ಇದು ಸರಿಯಾಗಲು ವರ್ಷಗಳೇ ಬೇಕಾಗಬಹುದು. ಎಸ್​6 ಟ್ರೇನ್​ನಿಂದ ದಕ್ಷಿಣ ಕೊರಿಯಾ ಹಾಗೂ ಚೀನಾಕ್ಕೆ ಅನಿಲ ಪೂರೈಕೆಯಾಗುತ್ತಿತ್ತು. ಒಂದೆಡೆ ಈ ದಾಳಿಯಿಂದ ವಿಶ್ವದ ಇತರೆ ರಾಷ್ಟ್ರಗಳಗೆ ಸಮಸ್ಯೆಯಾಗುವುದರ ಜತೆಗೆ ಕತಾರ್​ನ್ನು 10ರಿಂದ 20 ವರ್ಷಗಳ ಹಿಂದಕ್ಕೆ ಕೊಂಡೊಯ್ದಿದೆ ಎಂದು ಕತಾರ್​​ನ ಇಂಧನ ಸಚಿವ ಅಲ್ ಕಾಬಿ ಹೇಳಿದ್ದಾರೆ. ಇರಾನ್ ದಾಳಿಯಿಂದ ಹಾನಿಯಾಗಿರುವ ಘಟಕದ ಪುನರ್​ನಿರ್ಮಾಣಕ್ಕೆ 26 ಬಿಲಿಯನ್ ಡಾಲರ್ ಬೇಕಾಗಬಹುದು ಎಂದು ಕತಾರ್ ಹೇಳಿದೆ.

ಈ ದಾಳಿಯಿಂದ ಕತಾರ್​ನ ಒಟ್ಟಾರೆ ರಫ್ತಿನಲ್ಲಿ ಶೇ.24ರಷ್ಟು ಕುಸಿತವಾಗಿದೆ. ಘಟಕದ ಮೇಲಿನ ಹಾನಿಯಿಂದ ದೀರ್ಘಾವಧಿಯಲ್ಲಿ ಭಾರತದ ಮೇಲೆ ಪ್ರತಿಕೂಲ ಪರಿಣಾಮವಾಗದಿದ್ದರೂ ಅಲ್ಪಾವಧಿಯಲ್ಲಿ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗಬಹುದು. ಏಕೆಂದರೆ ಭಾರತದ ಒಟ್ಟಾರೆ ಎಲ್​ಎನ್​ಜಿ ಆಮದಿನಲ್ಲಿ ಕತಾರ್​ನ ಭಾಗವು ಶೇ.20ರಷ್ಟಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಬ್ಲೂ ಡ್ರಮ್’ ಕೊಲೆ ಬೆದರಿಕೆ: ಪ್ರಾಣಭಯಕ್ಕೆ ಹೆಂಡತಿಯನ್ನು ಪ್ರೇಮಿಯ ಜೊತೆ ಕಳಿಸಿಕೊಟ್ಟ ಗಂಡ!

ಬುಲಂದ್‌ಶಹರ್, ಮಾ.20 : ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ‘ನೀಲಿ ಡ್ರಮ್’ (Blue Drum) ಎನ್ನುವ ಪದವೊಂದು ಕ್ರೌರ್ಯದ ಸಂಕೇತವಾಗಿ ಪ್ರಚಾರವಾಗುತ್ತಿದೆ. ಕಳೆದ ವರ್ಷ ಮೀರತ್‌ನಲ್ಲಿ ನಡೆದ ಭೀಕರ ಕೊಲೆಯ ನೆನಪು ಮಾಸುವ ಮುನ್ನವೇ, ಅದೇ ಮಾದರಿಯ ಬೆದರಿಕೆಗೆ ಹೆದರಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆಗೇ ಕಳುಹಿಸಿಕೊಟ್ಟಿರುವ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದೆ.

ಉತ್ತರ ಪ್ರದೇಶದ ದೌಲತ್‌ಪುರ ಗ್ರಾಮದ ದಿನಗೂಲಿ ಕಾರ್ಮಿಕ ರಾಜಕುಮಾರ್, ಕಳೆದ ಏಳು ವರ್ಷಗಳಿಂದ ಸಂಸಾರ ನಡೆಸುತ್ತಿದ್ದರು. ಈ ದಂಪತಿಗೆ ಆರು ತಿಂಗಳ ಮಗುವೂ ಇದೆ. ಆದರೆ, ರಾಜಕುಮಾರ್ ಪತ್ನಿ ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾದ ವ್ಯಕ್ತಿಯೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದರು. ಪತ್ನಿಯ ಫೋನ್‌ನಲ್ಲಿ ಪ್ರಿಯಕರನ ಜೊತೆಗಿನ ಆಕ್ಷೇಪಾರ್ಹ ಫೋಟೋಗಳು ಮತ್ತು ಫೇಸ್‌ಬುಕ್‌ನಲ್ಲಿ “ಸಿಮೆಂಟ್ ಮತ್ತು ನೀಲಿ ಡ್ರಮ್” ಎಂಬ ಕ್ಯಾಪ್ಷನ್ ಇರುವ ಪೋಸ್ಟ್ ಕಂಡು ರಾಜಕುಮಾರ್ ಬೆಚ್ಚಿಬಿದ್ದಿದ್ದಾರೆ.

ಕಳೆದ ವರ್ಷ ಮೀರತ್‌ನಲ್ಲಿ ಮುಸ್ಕಾನ್ ಎಂಬಾಕೆ ತನ್ನ ಪ್ರಿಯಕರ ಸಾಹಿಲ್ ಜೊತೆ ಸೇರಿ ಪತಿಯನ್ನು ಕೊಂದು, ಶವವನ್ನು ನೀಲಿ ಡ್ರಮ್‌ಗೆ ಹಾಕಿ ಸಿಮೆಂಟ್‌ನಿಂದ ತುಂಬಿಸಿ ಮುಚ್ಚಿದ್ದಳು. ಈ ಘಟನೆಯನ್ನೇ ಉದಾಹರಣೆಯಾಗಿ ನೀಡಿದ್ದ ರಾಜಕುಮಾರ್ ಪತ್ನಿ, “ನೀನೂ ಅಡ್ಡ ಬಂದರೆ ನಿನ್ನನ್ನು ಮತ್ತು ನಿನ್ನ ಸಹೋದರರನ್ನು ಕೊಂದು ನೀಲಿ ಡ್ರಮ್‌ಗೆ ತುರುಕುತ್ತೇನೆ” ಎಂದು ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದೆ.

ಇದನ್ನೂ ಓದಿ: ಅಪಾರ್ಟ್​​ಮೆಂಟ್​​ನ 13ನೇ ಮಹಡಿಯಿಂದ ಹಾರಿದ ವ್ಯಕ್ತಿ, ಫ್ಲಾಟ್​ ಒಳಗೆ ತಾಯಿಯ ಮೃತದೇಹ ಪತ್ತೆ

ಜೀವಭಯಕ್ಕೆ ಹೆದರಿದ ರಾಜಕುಮಾರ್ ಪೊಲೀಸರ ಮೊರೆ ಹೋಗಿದ್ದರು. ಮಹಿಳಾ ಮಧ್ಯಸ್ಥಿಕೆ ಕೇಂದ್ರದಲ್ಲಿ ಕೌನ್ಸೆಲಿಂಗ್ ನಡೆಸಿದಾಗ ಪತ್ನಿ ಪ್ರಿಯಕರನ ಜೊತೆಗೇ ಇರುತ್ತೇನೆ ಎಂದು ಹಠ ಹಿಡಿದಿದ್ದಾರೆ. ಕೊನೆಗೆ ರಾಜಕುಮಾರ್ ತನ್ನ ಜೀವ ಉಳಿಸಿಕೊಳ್ಳಲು ಪತ್ನಿಯನ್ನು ಪ್ರಿಯಕರನ ಜೊತೆ ಕಳುಹಿಸಿಕೊಡಲು ಒಪ್ಪಿಕೊಂಡಿದ್ದಾರೆ. “ಆಕೆ ನನಗಾಗಿ ಅಡುಗೆ ಮಾಡುತ್ತಿರಲಿಲ್ಲ, ಮಗುವಿನ ಕೊಳೆತ ಬಟ್ಟೆಗಳನ್ನು ತೊಳೆಯುವ ಬದಲು ಎಸೆಯುತ್ತಿದ್ದಳು” ಎಂದು ರಾಜಕುಮಾರ್ ತಮ್ಮ ಅಳಲು ತೋಡಿಕೊಂಡಿದ್ದಾರೆ.

ರಾಷ್ಟ್ರದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅರ್ಚಕರೇ ಈತನ ಟಾರ್ಗೆಟ್! ಉದ್ಯಮಿ ಸೋಗಿನಲ್ಲಿ ಬಂದು ಮುತ್ತೈದೆಯರ ಒಡವೆ ಎಗರಿಸುತ್ತಿದ್ದ ಖತರ್ನಾಕ್ ಕಳ್ಳ ಅರೆಸ್ಟ್

ಬೆಂಗಳೂರು, ಮಾರ್ಚ್ 20: ದೇವಸ್ಥಾನದ ಅರ್ಚಕರನ್ನೇ ಟಾರ್ಗೆಟ್ ಮಾಡುತ್ತಿದ್ದ ಖತರ್ನಾಕ್ ವಂಚಕ ಕಳ್ಳನನ್ನು ಬೆಂಗಳೂರಿನ (Bangalore) ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಪ್ರವೀಣ್ ಭಟ್ ಎಂದು ಗುರುತಿಸಲಾಗಿದ್ದು, ಅವನಿಂದ ಸುಮಾರು 15 ಲಕ್ಷ ರೂ. ಮೌಲ್ಯದ 116 ಗ್ರಾಂ ಚಿನ್ನ ಹಾಗೂ 409 ಗ್ರಾಂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತ ಶ್ರೀಮಂತ ಉದ್ಯಮಿಯ ಸೋಗಿನಲ್ಲಿ ದೇಗುಲಗಳ ಅರ್ಚಕರ ಜತೆ ಪರಿಚಯ ಮಾಡಿಕೊಂಡು ಮುತ್ತೈದೆಯರು ಬೇಕೆಂದು ಅವರ ಚಿನ್ನಾಭರಣ ಕದಿಯುತ್ತಿದ್ದ.

ಪ್ರವೀಣ್ ಭಟ್ ತನ್ನನ್ನು ಶ್ರೀಮಂತ ಉದ್ಯಮಿ ಎಂದು ಪರಿಚಯಿಸಿಕೊಂಡು, ಮೊದಲಿಗೆ ವಿವಿಧ ಪ್ರದೇಶಗಳ ಪ್ರಸಿದ್ಧ ದೇವಸ್ಥಾನಗಳಿಗೆ ತೆರಳಿ ಅರ್ಚಕರೊಂದಿಗೆ ಸ್ನೇಹ ಬೆಳೆಸುತ್ತಿದ್ದ. ಆಗಾಗ ಪೂಜೆ ಮಾಡಿಸಿ, ದೇವಸ್ಥಾನಕ್ಕೆ ಸಾವಿರಾರು ರೂಪಾಯಿ ದೇಣಿಗೆ ನೀಡುವ ಮೂಲಕ ವಿಶ್ವಾಸ ಗಳಿಸುತ್ತಿದ್ದ. ಬಳಿಕ ತನ್ನ ಹೊಸ ಅಂಗಡಿ ಉದ್ಘಾಟನೆಗಾಗಿ ವಿಶೇಷ ಪೂಜೆ ಮಾಡಬೇಕೆಂದು ಹೇಳಿ, ‘ಮುತ್ತೈದೆಯರು ಬೇಕು’ ಎಂಬ ನೆಪದಲ್ಲಿ ಅರ್ಚಕರ ಮನೆಯವರನ್ನು ಕಳುಹಿಸುವಂತೆ ಕೇಳುತ್ತಿದ್ದ.

ಇದಕ್ಕೆ ಮರುಳಾದ ಕೆಲ ಅರ್ಚಕರು ತಮ್ಮ ಪತ್ನಿಯನ್ನು ಕಳುಹಿಸುತ್ತಿದ್ದರು. ಪೂಜೆಗೆ ಕರೆದುಕೊಂಡು ಹೋಗುವ ನೆಪದಲ್ಲಿ ಮಹಿಳೆಯರನ್ನು ಆಟೋದಲ್ಲಿ ಕರೆದೊಯ್ಯುತ್ತಿದ್ದ ಆರೋಪಿ, ‘ನೀವು ಹೋಗುವ ಜಾಗದಲ್ಲಿ ಒಡವೆಗಳನ್ನು ಹಾಕಿಕೊಳ್ಳಬೇಡಿ, ನನ್ನ ಬಳಿ ಇಡಿ, ನಂತರ ಕೊಡುತ್ತೇನೆ’ ಎಂದು ಹೇಳಿ ಆಭರಣಗಳನ್ನು ಪಡೆದುಕೊಳ್ಳುತ್ತಿದ್ದ. ಬಳಿಕ ಮಧ್ಯದಲ್ಲೇ ಮಹಿಳೆಯರನ್ನು ಬಿಟ್ಟು ಪರಾರಿಯಾಗುತ್ತಿದ್ದ.

ಈ ರೀತಿಯಾಗಿ ಐದುಕ್ಕೂ ಹೆಚ್ಚು ಪ್ರಕರಣಗಳಲ್ಲಿ ಇದೇ ರೀತಿಯಲ್ಲಿ ವಂಚನೆ ನಡೆಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹೆಬ್ಬಾಳ, ರಾಮಮೂರ್ತಿನಗರ, ಸಿಟಿ ಮಾರ್ಕೆಟ್, ರಾಜಾಜಿನಗರ ಹಾಗೂ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಗಳಲ್ಲಿ ಪ್ರವೀಣ್ ವಿರುದ್ಧ ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ: ಕೆಲಸ ಮಾಡ್ತಿದ್ದ ಅಂಗಡಿಗೇ ಕನ್ನ: ಕದ್ದ ಆಭರಣ ಮಾರಿ ಮಹಾಕಾಳೇಶ್ವರನಿಗೆ ಪೂಜೆ ಸಲ್ಲಿಸಿದ್ದವರು ಲಾಕ್!

ಅರ್ಚಕರ ಕುಟುಂಬದವರಿಂದ ಬಂದ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ರಾಜಾಜಿನಗರ ಪೊಲೀಸರು ಆರೋಪಿಯನ್ನು ಬಂಧಿಸಿ, ಚಿನ್ನ-ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಮುಂದಿನ ತನಿಖೆ ಮುಂದುವರಿದಿದೆ.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version