ಹೊಟ್ಟೆಪಾಡಿಗೆ ದುಡಿಯಲು ಬಂದವನ ದಾರುಣ ಅಂತ್ಯ: ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದ ನಾಲ್ವರ ಪೈಕಿ ಓರ್ವ ಸಾವು

ಹೊಟ್ಟೆಪಾಡಿಗೆ ದುಡಿಯಲು ಬಂದವನ ದಾರುಣ ಅಂತ್ಯ: ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದ ನಾಲ್ವರ ಪೈಕಿ ಓರ್ವ ಸಾವು

ಹುಬ್ಬಳ್ಳಿ, ಮಾರ್ಚ್​​ 19: ಕೆಲಸ ಮಾಡಿ ಮಲಗಿದ್ದ ನಾಲ್ವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ ಪ್ರಕರಣ ಸಂಬಂಧ ಚಿಕಿತ್ಸೆ ಫಲಿಸದೆ ಓರ್ವ ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ರಾಮನಗರ ಮೂಲದ ಕಾರ್ಮಿಕ ಅಮ್ಜದ್ ಪಾಷಾ(26) ಮೃತ ದುರ್ದೈವಿಯಾಗಿದ್ದು, ಕಳೆದ 3 ದಿನಗಳಿಂದ ಕಿಮ್ಸ್​ನಲ್ಲಿ ಅಮ್ಜದ್​​ಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಉಳಿದ ಮೂವರಾದ ಜಾಫರ್, ಜಬಿ, ಹೈದರ್​​ಗೆ ಚಿಕಿತ್ಸೆ ಮುಂದುವರಿದ್ದು, ಮಾ.17ರಂದು ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿನ ನಿರ್ಮಾಣ ಹಂತದ ಕಟ್ಟಡದಲ್ಲಿ ಆಕ್ಸಿಜನ್ ಸಮಸ್ಯೆಯಿಂದ ಮಲಗಿದ್ದಲ್ಲೇ ಕಾರ್ಮಿಕರು ಅಸ್ವಸ್ಥರಾಗಿದ್ದರು. ಘಟನೆ ಬೆಳಕಿಗೆ ಬಂದ ತಕ್ಷಣವೇ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಜಮಾಲಸಾಬ್ ಪಾಳ್ಯಾ ನಿವಾಸಿಗಳಾದ ಅಮ್ಜದ್ ಪಾಶಾ, ಹೈದರ್, ಜಬಿ, ಜಾಫರ್ ಎಂಬ ನಾಲ್ವರು ಕಾರ್ಮಿಕರು ದೊಡ್ಡ ದೊಡ್ಡ ಅಂಗಡಿಗಳ LED ವಾಲ್ ಸೇರಿದಂತೆ ಇನ್ನಿತರ ಕೆಲಸ ಮಾಡುತ್ತಿದ್ದರು. ಹುಬ್ಬಳ್ಳಿ ನಗರದ ದೇಶಪಾಂಡೆ ನಗರದಲ್ಲಿ ಡ್ರೈಪ್ರೂಟ್ಸ್ ಅಂಗಡಿಯೊಂದು ಆರಂಭವಾಗುತ್ತಿದ್ದು, ಆ ಆಂಗಡಿಯ ಇಂಟಿರಿಯರ್ ವರ್ಕ್ ಮತ್ತು LED ಕೆಲಸ ಮಾಡಲು ಲಾರಿ ಚಾಲಕ ಅಲಿಂ ಸೇರಿ ಐವರು ಹತ್ತು ದಿನದ ಹಿಂದೆ ಬಂದಿದ್ದರು. ಮಾರ್ಚ್ 16ರಂದು ರೋಜಾ ಇದ್ದ ನಾಲ್ವರು ರಾತ್ರಿ ಊಟ ಮಾಡಿ, ನಿರ್ಮಾಣ ಹಂತದ ಕಟ್ಟಡದಲ್ಲಿ ಮಲಗಿದ್ದರು. ಅಂಗಡಿಯ ಶೆಟರ್ ಹಾಕಿಕೊಂಡು ಒಳಗಡೆ ನಾಲ್ವರು ಕಾರ್ಮಿಕರು ಮಲಗಿದ್ದರೆ, ಲಾರಿ ಚಾಲಕ ಅಲೀಂ ಹೊರಗಡೆ ಇದ್ದ ತನ್ನ ಲಾರಿಯಲ್ಲಿ ಮಲಗಿದ್ದ. ಆದ್ರೆ ಮಾರ್ಚ್ 17ರಂದು ಮುಂಜಾನೆ ಒಂಭತ್ತು ಗಂಟೆಯಾದರೂ ಇವರು ಎದ್ದು ಹೊರಗೆ ಬಾರದ ಇದ್ದಾಗ ಲಾರಿ ಚಾಲಕ ಅಲೀಂ, ಶೆಟರ್ ಓಪನ್ ಮಾಡಿ ನಿರ್ಮಾಣ ಹಂತದ ಅಂಗಡಿಯೊಳಗೆ ಹೋಗಿದ್ದಾನೆ. ಆಗ ನಾಲ್ವರು ಪ್ರಜ್ಞೆ ಇಲ್ಲದೇ ಬಿದ್ದಿಕಂಡಿದೆ. ಬಾಯಲ್ಲಿ ಬುರುಗು ಬರುತ್ತಿದ್ದ ಹಿನ್ನೆಲೆ ಕೂಡಲೇ ಸ್ಥಳೀಯರಿಗೆ ಮತ್ತು ಅಂಗಡಿ ಮಾಲೀಕರಿಗೆ ಆತ ಮಾಹಿತಿ ನೀಡಿದ್ದಾನೆ. ಸ್ಥಳೀಯರು ಆಂಬುಲೆನ್ಸ್ ಕರೆಯಿಸಿ ನಾಲ್ವರನ್ನು ಹುಬ್ಬಳ್ಳಿ ಕಿಮ್ಸ್ ಗೆ ದಾಖಲು ಮಾಡಿದ್ದರು. ಆದ್ರೆ ಮೂರು ದಿನಗಳ ಸಾವು ಬದುಕಿನ ಹೋರಾಟ ನಡೆಸಿದ ಅಮ್ಜದ್ ಪಾಷಾ ಇಂದು ಹುಬ್ಬಳ್ಳಿ ಕಿಮ್ಸ್​​ನಲ್ಲಿ ಮೃತಪಟ್ಟಿದ್ದಾನೆ.

ಇದನ್ನೂ ಓದಿ: ಕಿಮ್ಸ್​​ ಸಿಬ್ಬಂದಿ ನಿರ್ಲಕ್ಷ್ಯ ಆರೋಪ; ಸಕಾಲಕ್ಕೆ ಚಿಕಿತ್ಸೆ ಸಿಗದೆ ಗಂಭೀರ ಗಾಯಗೊಂಡಿದ್ದ ಯುವಕ ಸಾವು

ಇನ್ನು ನಿರ್ಮಾಣ ಹಂತದ ಕಟ್ಟಡವಾಗಿದ್ದರಿಂದ ಒಳಗಡೆ ಇಂಟೀರಿಯರ್ ವರ್ಕ್ ಮಾಡಲು ಅನೇಕ ಕೆಮಿಕಲ್​​ಗಳನ್ನು ಇಡಲಾಗಿದ್ದು, ಅವುಗಳ ವಾಸನೆ ಕೂಡಾ ಹೆಚ್ಚಾಗಿತ್ತು.ಕಟ್ಟಡದಲ್ಲಿ ಇತ್ತ ನಾಲ್ವರು ಕಾರ್ಮಿಕರು ಮಲಗಿದ್ದರೆ, ಗ್ಲಾಸ್ ವರ್ಕ್ ಮಾಡುವ ಬೇರೆ ಕಾರ್ಮಿಕರು ಜನರೇಟರ್ ಆನ್ ಮಾಡಿಕೊಂಡು ರಾತ್ರಿ ಕೆಲಸ ಮಾಡ್ತಿದ್ದರಂತೆ. ಕೆಲಸ ಮುಗಿದ ಬಳಿಕ ಜನರೇಟರ್ ಬಂದ್​​ ಮಾಡದೇ ಅವರು ತೆರೆಳಿದ್ದ ಪರಿಣಾಮ ಕಟ್ಟಡದ ಒಳಗೆ ಕಾರ್ಬನ್ ಡೈ ಆ್ಯಕ್ಸೈಡ್ ಹೆಚ್ಚಾಗಿದೆ. ಹೊರಗಿನಿಂದಲೂ ಗಾಳಿ ಬಾರದೇ ಇದ್ದಿದ್ದರಿಂದ ಆಮ್ಲಜನಕ ಸಮಸ್ಯೆಯಾಗಿ ಕಾರ್ಮಿಕರಿಗೆ ಉಸಿರುಗಟ್ಟಿದೆ ಎನ್ನಲಾಗಿದೆ. ಉಳಿದ ಮೂವರು ಕೂಡ ಸಾವು ಬದುಕಿನ ಹೋರಾಟ ನಡೆಸುತ್ತಿದ್ದು, ತುರ್ತು ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಹುಬ್ಬಳ್ಳಿ ಸಬ್ ಅರ್ಬನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ರಾಜ್ಯದ ಕಾರಾಗೃಹಗಳಲ್ಲಿ ಡ್ರಗ್ಸ್​ ಪರೀಕ್ಷೆ: ಡ್ರಗ್ಸ್​ ಸೇವನೆಯಲ್ಲಿ ಮಹಿಳಾ ಕೈದಿಗಳೇ ಹೆಚ್ಚು

ಬೆಂಗಳೂರು, ಮಾರ್ಚ್​ 19: ರಾಜ್ಯಾದ್ಯಂತ ಎಲ್ಲಾ ಜೈಲುಗಳಲ್ಲಿ ಕೈದಿಗಳನ್ನು ಮಾದಕ ವಸ್ತು ಪರೀಕ್ಷೆಗೆ (Drug Test) ಒಳಪಡಿಸಲಾಗುತ್ತಿದೆ. ಆ ಮೂಲಕ ರಾಜ್ಯದ ಜೈಲುಗಳಲ್ಲಿ ಮಾದಕ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ತಡೆಯುವ ನಿಟ್ಟಿನಲ್ಲಿ ಕಾರಾಗೃಹ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ಹೀಗಾಗಿ ರಾಜ್ಯದ ಎಲ್ಲಾ ಜೈಲುಗಳಲ್ಲಿ ಅಧಿಕಾರಿಗಳು ಪರೀಕ್ಷೆ ಮಾಡಿಸುತ್ತಿದ್ದು, ಮಹಿಳಾ ಕೈದಿಗಳೇ ಹೆಚ್ಚಾಗಿ ಡ್ರಗ್ಸ್​ ಸೇವನೆ ಮಾಡಿರೋದು ಪತ್ತೆ ಆಗಿದೆ.

ಮಹಿಳಾ ಕೈದಿಗಳೇ ಹೆಚ್ಚು ಪಾಸಿಟಿವ್

ಡ್ರಗ್ಸ್ ಪರೀಕ್ಷೆ ವೇಳೆ ಮಹಿಳಾ ಕೈದಿಗಳೇ ಹೆಚ್ಚು ಪಾಸಿಟಿವ್​​ ಎಂಬ ವಿಚಾರ ಬೆಳಕಿಗೆ ಬಂದಿದೆ. ಸದ್ಯ ಪಾಸಿಟಿವ್ ಬಂದವರನ್ನ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ ನಿಮಾನ್ಸ್​ಗೆ ಸ್ಯಾಂಪಲ್ ರವಾನಿಸಲಾಗಿದ್ದು, ವರದಿ ಬಂದ ನಂತರ ವ್ಯಸನದ ಮಟ್ಟ ಎಷ್ಟಿದೆ ಎಂದು ತಿಳಿಯಲಿದೆ. ಆ ಪ್ರಕಾರ ಚಿಕಿತ್ಸೆ ನೀಡಲಾಗುವುದು. ಡ್ರಗ್ ಪರೀಕ್ಷೆಯಲ್ಲಿ ಹೆಚ್ಚಾಗಿ ವಿಚಾರಣಾಧೀನ ಕೈದಿಗಳಲ್ಲಿ ಮಾದಕ ವ್ಯಸನ ಹೆಚ್ಚಾಗಿದ್ದು, ಪಾಸಿಟಿವ್ ಬಂದಿದೆ. ಸಜಾ ಕೈದಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ವ್ಯಸನ ಕಂಡು ಬಂದಿಲ್ಲ.

ಯೂರಿನ್ ಬದಲಿಗೆ ನೀರು ಮಿಶ್ರಣ: ಮಹಿಳಾ ಕೈದಿಗಳ ಕಳ್ಳಾಟ

ಇನ್ನು ಯೂರಿನ್ ಸ್ಯಾಂಪಲ್ ಶೇಖರಣೆ ವೇಳೆ ಮಹಿಳಾ ಕೈದಿಗಳು ಕಳ್ಳಾಟವಾಡಿದ್ದಾರೆ. ಯೂರಿನ್ ಬದಲಿಗೆ ಖೈದಿಗಳು ನೀರು ಮಿಶ್ರಣ ಮಾಡಿ ಕೊಟ್ಟಿರುವುದು ಬಯಲಾಗಿದೆ. ಈ  ಬಗ್ಗೆ ಮಹಿಳಾ ಕೈದಿಗಳನ್ನ ಕೇಳಿದ್ದಕ್ಕೆ ನಾವು ಏಕೆ ಕೊಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಬಳಿಕ ಒತ್ತಾಯ ಮಾಡಿದಾಗ ಯೂರಿನ್ ಜೊತೆ ನೀರು ಮಿಶ್ರಣ ಮಾಡಿ ಕೊಟ್ಟಿದ್ದಾರೆ. ಹೀಗಾಗಿ ನಿರ್ದಿಷ್ಟ ಪಾಸಿಟಿವ್ ಸಂಖ್ಯೆ ಇನ್ನು ಪತ್ತೆಯಾಗಿಲ್ಲ. ಸದ್ಯ ಜೈಲಿನ ವೈದ್ಯರು ಶೇಕಡಾ 10 ರಷ್ಟು ಮಾತ್ರ ಪರೀಕ್ಷೆ ಮಾಡುತ್ತಿದ್ದಾರೆ. ಹಂತ ಹಂತವಾಗಿ ಮುಂದೆ ಎಲ್ಲರಿಗೂ ಪರೀಕ್ಷೆ ಮಾಡಲು ತಯಾರಿ ನಡೆಸಿದ್ದಾರೆ.

ಇದನ್ನೂ ಓದಿ: ಜೈಲುಗಳಲ್ಲಿ ಡ್ರಗ್ಸ್ ನೆಟ್​ವರ್ಕ್​ ಬ್ರೇಕ್ ಹಾಕಲು ಡಿಜಿಪಿ ಪ್ಲಾನ್; ರಾಜ್ಯದ ಎಲ್ಲಾ ಜೈಲುಗಳ ಕೈದಿಗಳಿಗೆ ಡ್ರಗ್ಸ್ ಟೆಸ್ಟ್!

ಅಧಿಕಾರಿಗಳು ಜೈಲಿನ ವೈದ್ಯರಿಗೆ ಡ್ರಗ್ಸ್​ ಟೆಸ್ಟ್​ ಕಿಟ್ ಕೊಟ್ಟು ಕೈದಿಗಳಿಗೆ ಟೆಸ್ಟ್​ ನಡೆಸಿದ್ದಾರೆ.​ ಸದ್ಯ ಒಟ್ಟು ಐದು ಮಾದರಿಯ ಮಾದಕ ವಸ್ತುಗಳ ಪರೀಕ್ಷೆ ಮಾಡಲಾಗುತ್ತಿದೆ. ಎಂಡಿಎಂಎ, ಗಾಂಜಾ, ಹೆರಾಯಿನ್, ಕೊಕೇನ್ ಸೇರಿದಂತೆ ಒಟ್ಟು ಐದು ಮಾದರಿಯ ಡ್ರಗ್ ಸೇವನೆ ಪರೀಕ್ಷೆ ಮಾಡಲಾಗುತ್ತಿದೆ. ಹೆಚ್ಚಾಗಿ ಬೆಂಗಳೂರು, ಮೈಸೂರು ಜೈಲಿನಲ್ಲಿ ಎಲ್ಲಾ ಮಾದರಿಯ ಡ್ರಗ್ ಪರೀಕ್ಷೆ ನಡೆದಿದ್ದು, ಉಳಿದ ಜೈಲುಗಳಲ್ಲಿ ವೈದ್ಯರು ಗಾಂಜಾ ಸೇವನೆ ಪರೀಕ್ಷೆ ಮಾತ್ರ ಮಾಡುತ್ತಿದ್ದಾರೆ.

ವರದಿ: ವಿಕಾಸ್​ ಟಿವಿ9 ಕ್ರೈಂ 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಜಗದ್ಗುರು ಶಿವಾನಂದ ಮಠ ಕಟ್ಟಿದ್ದ ಶಿಕ್ಷಕ ಕಮ್ ಸ್ವಾಮೀಜಿ ಆತ್ಮಹತ್ಯೆ, ಕಾರಣ ನಿಗೂಢ

ರಾಯಚೂರು, (ಮಾರ್ಚ್ 19): ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವಾಗಲೇ, ಜೀವನದಲ್ಲಿ ವೈರಾಗ್ಯ ಕಂಡು ದೀಕ್ಷೆ ಪಡೆದು ಜಗದ್ಗುರು ಶಿವಾನಂದ ಮಠ ಕಟ್ಟಿದ್ದ ಸ್ವಾಮೀಜಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಚೂರು (Raichur) ಜಿಲ್ಲೆಯ ಸಿಂಧನೂರು ತಾಲೂಕಿನ ಬಸ್ಸಾಪುರ (ಇಜೆ) ಗ್ರಾಮದಲ್ಲಿ ನಡೆದಿದೆ. ದೇವೇಂದ್ರಪ್ಪ (58) ಎಂಬವರೇ ಮಠದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡವರು. ಇವರು ಮುಳ್ಳೂರು (ಇಜೆ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವಾಗಲೇ ದೀಕ್ಷೆ ಪಡೆದು ಜಗದ್ಗುರು ಶಿವಾನಂದ ಮಠ ಕಟ್ಟಿ ಮಠದಲ್ಲಿ ಪುರಾಣ, ಪ್ರವಚನ ಮಾಡುತ್ತಿದ್ದರು. ಆದ್ರೆ, ಇದೀಗ ಬಸ್ಸಾಪುರ ಮಠದ ಭಜನಾ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೂಲತಃ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಗುಳಗುಳಿ ಗ್ರಾಮದವರಾದ ದೇವೇಂದ್ರಪ್ಪ, ಕಳೆದ ಎರಡು ದಶಕಗಳಿಂದ ಸಿಂಧನೂರಿನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಈ ನಡುವೆ ವೈರಾಗ್ಯ ಜೀವನದತ್ತ ಮುಖ ಮಾಡಿ, ಬಸಾಪುರ ಗ್ರಾಮದಲ್ಲಿ ಶಿವಾನಂದ ಜಗದ್ಗುರು ನಾಮಧಾರಿ ಮಠವನ್ನು ಸ್ಥಾಪಿಸಿ, ಸ್ವಾಮೀಜಿಯಾಗಿ ಗುರುತಿಸಿಕೊಂಡಿದ್ದರು. ಖಾವಿ ವಸ್ತ್ರ ಧರಿಸಿ ಜನರಿಗೆ ಧಾರ್ಮಿಕ ಪ್ರವಚನ ನೀಡುತ್ತಿದ್ದರು. ಆದರೆ, ಏಕಾಏಕಿ ಮಠದಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವುದು ಗ್ರಾಮಸ್ಥರು ಹಾಗೂ ಭಕ್ತರು ಆಘಾತಗೊಳ್ಳುವಂತೆ ಮಾಡಿದೆ.

ಇದನ್ನೂ ಓದಿ: ಹೊಟ್ಟೆಪಾಡಿಗೆ ದುಡಿಯಲು ಬಂದವನ ದಾರುಣ ಅಂತ್ಯ: ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದ ನಾಲ್ವರ ಪೈಕಿ ಓರ್ವ ಸಾವು

ಇತ್ತೀಚೆಗೆ ಅಪಘಾತವಾಗಿದ್ದ ಹಿನ್ನೆಲೆಯಲ್ಲಿ ಮಾನಸಿಕವಾಗಿ ನೊಂದಿದ್ದರು. ಅಲ್ಲದೇ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.  ಆದ್ರೆ, ಆತ್ಮಹತ್ಯೆಗೆ  ನಿಖರ ಕಾರಣ ತಿಳಿದುಬಂದಿಲ್ಲ. ಹೀಗಾಗಿ ಹಲವು ಅನುಮಾನಗಳು ವ್ಯಕ್ತವಾಗಿವೆ.

ಘಟನಾ ಸ್ಥಳಕ್ಕೆ ತುರುವಿಹಾಳ ಠಾಣೆ ಪಿಎಸ್ಐ ಸುಜಾತ ಭೇಟಿ ನೀಡಿ ಪರಿಶೀಲನೆ ನಡೆಸಿದರು.  ಬಳಿಕ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.  ಇನ್ನು ಗ್ರಾಮದ ರಮೇಶ್ ನೀಡಿದ ದೂರಿನ ಮೇರೆಗೆ ತುರುವಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಸರ್ಸೆ ಸೆರಗು’ ಹಾಡು ವಿವಾದ: ರಾಷ್ಟ್ರೀಯ ಮಹಿಳಾ ಆಯೋಗದಿಂದ ಪ್ರೇಮ್​​ಗೆ ನೊಟೀಸ್

ಪ್ರೇಮ್ (Prem) ನಿರ್ದೇಶಿಸಿ ಧ್ರುವ ಸರ್ಜಾ ನಟಿಸಿರುವ ‘ಕೆಡಿ’ ಸಿನಿಮಾದ ‘ಸರ್ಸೆ ಸೆರಗ’ ಹಾಡು ಇತ್ತೀಚೆಗಷ್ಟೆ ಬಿಡುಗಡೆ ಆಗಿ ಭಾರಿ ವಿವಾದಕ್ಕೆ ಕಾರಣವಾಗಿದೆ. ಹಾಡಿನ ಸಾಹಿತ್ಯದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ವಿಶೇಷವಾಗಿ ಹಾಡಿನ ಹಿಂದಿ ಆವೃತ್ತಿ ‘ಸರ್ಕೆ ಚುನರಿಯಾ ತೇರಿ ಸರ್ಕೆ’ ಹಾಡಿನ ಬಗ್ಗೆಯಂತೂ ತೀವ್ರ ಟೀಕೆ ವ್ಯಕ್ತವಾಗಿದ್ದು, ಈಗಾಗಲೇ ಸಿಬಿಎಫ್​​ಸಿ, ಸೈಬರ್ ಪೊಲೀಸರಿಗೆ ದೂರು ಸಹ ದಾಖಲಾಗಿದೆ. ಲೋಕಸಭೆಯಲ್ಲಿ ಸಹ ಹಾಡಿನ ಬಗ್ಗೆ ಚರ್ಚೆ ನಡೆದಿದೆ. ಇದೀಗ ಹಾಡಿನ ಕುರಿತಾಗಿ ನಿರ್ದೇಶಕ ಪ್ರೇಮ್ ಸೇರಿದಂತೆ ಹಲವರಿಗೆ ರಾಷ್ಟ್ರೀಯ ಮಹಿಳಾ ಆಯೋಗ ನೊಟೀಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ರಾಷ್ಟ್ರೀಯ ಮಹಿಳಾ ಆಯೋಗವು ಎನ್​​ಸಿಡಬ್ಲು ಕಾಯ್ದೆ 1990 ರ ಅಡಿಯಲ್ಲಿ ತನಗೆ ನೀಡಲಾದ ಅಧಿಕಾರವನ್ನು ಬಳಸಿ, ಮಾಧ್ಯಮ ವರದಿಗಳ ಆಧಾರದ ಮೇಲೆ ಈ ವಿಷಯದಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಹಾಡಿನ ದೃಶ್ಯಗಳು ಮತ್ತು ಸಾಹಿತ್ಯವು ಸಮಾಜದ ಮೇಲೆ ಕೆಟ್ಟ ಪ್ರಭಾವ ಬೀರುವಂತಿದೆ ಎಂಬ ಆಕ್ಷೇಪಣೆಗಳು ಕೇಳಿಬಂದಿರುವುದನ್ನು ಆಯೋಗವು ಗಂಭೀರವಾಗಿ ಪರಿಗಣಿಸಿದೆ.

ಭಾರತೀಯ ನ್ಯಾಯ ಸಂಹಿತೆ ಪ್ರಕಾರ ಸಾರ್ವಜನಿಕ ನೈತಿಕತೆಗೆ ಧಕ್ಕೆ. ಅಂತರ್ಜಾಲದಲ್ಲಿ ಆಕ್ಷೇಪಾರ್ಹ ವಿಷಯಗಳ ಪ್ರಸಾರ. ಪೋಕ್ಸೋ (POCSO) ಕಾಯ್ದೆಯಡಿ ಲೈಂಗಿಕ ಪ್ರಚೋದನೆ ಮತ್ತು ಆಕ್ಷೇಪಾರ್ಹ ದೃಶ್ಯಗಳಿಗೆ ಸಂಬಂಧಿಸಿದ ನಿಯಮಗಳನ್ನು ಹಾಡು ಉಲ್ಲಂಘನೆ ಮಾಡುತ್ತಿರುವುದನ್ನು ಗಮನಿಸಿ ಸಿನಿಮಾಕ್ಕೆ ಸಂಬಂಧಿಸಿದವರಿಗೆ ನೊಟೀಸ್ ಅನ್ನು ಆಯೋಗವು ಜಾರಿ ಮಾಡಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಡಿನಲ್ಲಿ ಕಾಣಿಸಿಕೊಂಡಿರುವ ನಟಿ ನೋರಾ ಫತೇಹಿ, ನಟ ಸಂಜಯ್ ದತ್, ಹಿಂದಿ ಆವೃತ್ತಿಯ ಹಾಡು ಬರೆದಿರುವ ಗೀತರಚನೆಕಾರ ರಕೀಬ್ ಆಲಂ, ಸಿನಿಮಾದ ನಿರ್ಮಾಪಕ ವೆಂಕಟ್ ಕೆ ನಾರಾಯಣ ಮತ್ತು ನಿರ್ದೇಶಕ ಪ್ರೇಮ್ ಅಲಿಯಾಸ್ ಕಿರಣ್ ಕುಮಾರ್. ಅವರುಗಳಿಗೆ ನೊಟೀಸ್ ಜಾರಿ ಮಾಡಲಾಗಿದ್ದು, ಎಲ್ಲರೂ ಮಾರ್ಚ್ 24 ರಂದು ಮಧ್ಯಾಹ್ನ 12:30ಕ್ಕೆ ಆಯೋಗದ ಮುಂದೆ ಸೂಕ್ತ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಿದೆ. ಒಂದೊಮ್ಮೆ ಗೈರಾದರೆ ಸೂಕ್ತ ಕ್ರಮದ ಎಚ್ಚರಿಕೆಯನ್ನು ಸಹ ಆಯೋಗ ನೀಡಿದೆ.

ಇದನ್ನೂ ಓದಿ:ಪ್ರೇಮ್​​ಗೆ ಆ ದಿನವೇ ಎಚ್ಚರಿಕೆ ನೀಡಿದ್ದೆ: ಅಶ್ಲೀಲ ಹಾಡಿನ ವಿವಾದಕ್ಕೆ ನೋರಾ ಫತೇಹಿ ತಿರುಗೇಟು

ಹಾಡಿನ ಸಾಹಿತ್ಯ ಬಗ್ಗೆ ಆಕ್ಷೇಪಗಳು ವ್ಯಕ್ತವಾದ ಬೆನ್ನಲ್ಲೆ ನಿನ್ನೆ (ಮಾರ್ಚ್ 18) ನಿರ್ದೇಶಕ ಮತ್ತು ಹಾಡಿಗೆ ಸಾಹಿತ್ಯ ಬರೆದಿರುವ ಪ್ರೇಮ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ತಾವು ಎಣ್ಣೆ ಬಾಟಲಿ ಮತ್ತು ಉಪ್ಪಿನಕಾಯಿಯನ್ನು ಗಮನದಲ್ಲಿರಿಸಿಕೊಂಡು ಆ ಹಾಡನ್ನು ಬರೆದಿದ್ದು, ಆದರೆ ಜನ ಅದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದಿದ್ದರು. ಆದರೆ ಹಾಡಿನ ಸಾಹಿತ್ಯದಿಂದ ಬೇಸರವಾಗಿದ್ದರೆ ಕ್ಷಮೆ ಕೋರುವುದಾಗಿ ಹೇಳಿದ ಪ್ರೇಮ್, ಮತ್ತೆ ಹಾಡನ್ನು ರೀ ರೈಟ್ ಮಾಡಿ ಮತ್ತೆ ಹಾಡನ್ನು ಬಿಡುಗಡೆ ಮಾಡುವುದಾಗಿಯೂ ಸಹ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಜಿಮ್ ಪ್ರಾರಂಭಿಸಿ ಮಧ್ಯದಲ್ಲಿಯೇ ಬಿಟ್ಟಿದ್ದೀರಾ? ಇದರಿಂದ ಆರೋಗ್ಯಕ್ಕೆ ಹಾನಿಯಾಗುತ್ತಾ ತಿಳಿದುಕೊಳ್ಳಿ

ಇತ್ತೀಚಿನ ದಿನಗಳಲ್ಲಿ ಫಿಟ್ ಆಗಿರಲು ಜಿಮ್‌ಗೆ (Gym) ಹೋಗುವುದು ಸಾಮಾನ್ಯ. ಜಿಮ್ ಹೋಗುವ ಅಭ್ಯಾಸ ದೇಹವನ್ನು ಬಲಪಡಿಸುವುದರ ಜೊತೆಗೆ ಮಾನಸಿಕವಾಗಿಯೂ ಬಲಿಷ್ಠರನ್ನಾಗಿಸುತ್ತದೆ. ಈ ರೀತಿ ವ್ಯಾಯಾಮದಿಂದ ಸ್ನಾಯುಗಳು ಬಲವಾಗುತ್ತವೆ, ಸ್ಟಾಮಿನಾ ಹೆಚ್ಚುತ್ತದೆ. ಇದರೊಂದಿಗೆ ತೂಕ ಕೂಡ ನಿಯಂತ್ರಣದಲ್ಲಿರುತ್ತದೆ, ಹೃದಯ ಆರೋಗ್ಯಕರವಾಗಿರುತ್ತದೆ ಮತ್ತು ಜೀವನಶೈಲಿಗೆ ಸಂಬಂಧಿಸಿದ ಅನೇಕ ರೋಗಗಳ ಅಪಾಯ ಕಡಿಮೆಯಾಗುತ್ತದೆ. ಪ್ರತಿದಿನ ನಿಗದಿತ ಸಮಯದಲ್ಲಿ ವ್ಯಾಯಾಮ ಮಾಡುವುದರಿಂದ ದಿನಚರಿಯೂ ಚುರುಕಾಗಿರುತ್ತದೆ. ಜಿಮ್‌ನಲ್ಲಿ ವಿಭಿನ್ನ ರೀತಿಯ ವ್ಯಾಯಾಮಗಳನ್ನು ಮಾಡುವುದರಿಂದ ದೇಹದ ಪ್ರತಿಯೊಂದು ಭಾಗಕ್ಕೂ ಪ್ರಯೋಜನವಾಗುತ್ತದೆ, ಇದರಿಂದ ಒಟ್ಟಾರೆ ಫಿಟ್‌ನೆಸ್ ಚೆನ್ನಾಗಿರುತ್ತದೆ. ಆದರೆ ಅನೇಕರು ಪ್ರಾರಂಭದಲ್ಲಿ ಜಿಮ್ ಗೆ ಹೋಗುವುದಕ್ಕೆ ಬಹಳ ಉತ್ಸಾಹ ತೋರಿಸುತ್ತಾರೆ. ಆರಂಭದಲ್ಲಿ ನಿಯಮಿತವಾಗಿ ವ್ಯಾಯಾಮವನ್ನು ಕೂಡ ಮಾಡುತ್ತಾರೆ. ಅದೇ ರೀತಿ ಆಹಾರಕ್ರಮಗಳನ್ನು ಕೂಡ ಅನುಸರಿಸುತ್ತಾರೆ. ಬಳಿಕ ಸಮಯದ ಕೊರತೆ, ಸೋಮಾರಿತನದಿಂದ ಜಿಮ್ ಅನ್ನು ಮಧ್ಯದಲ್ಲೇ ಬಿಡುತ್ತಾರೆ. ಆದರೆ ಒಮ್ಮೆ ಜಿಮ್ ಪ್ರಾರಂಭಿಸಿ ಮಧ್ಯದಲ್ಲಿ ಬಿಡುವುದರಿಂದ ದೇಹಕ್ಕೆ ಯಾವ ರೀತಿಯ ತೊಂದರೆಯಾಗುತ್ತದೆ, ನಿಜವಾಗಿಯೂ ಈ ರೀತಿ ಮಾಡುವುದು ಆರೋಗ್ಯಕ್ಕೆ ಹಾನಿಕಾರಕವೇ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಜಿಮ್ ಪ್ರಾರಂಭಿಸಿ ಮಧ್ಯದಲ್ಲಿ ಬಿಡುವುದರಿಂದಾಗುವ ಹಾನಿ?

ಸಾಮಾನ್ಯವಾಗಿ ಜಿಮ್ ಅನ್ನು ಮಧ್ಯದಲ್ಲಿ ಬಿಡುವುದರಿಂದ ದೇಹಕ್ಕೆ ಸಿಗುತ್ತಿದ್ದ ಪ್ರಯೋಜನಗಳು ನಿಧಾನವಾಗಿ ಕಡಿಮೆಯಾಗುತ್ತವೆ. ದೇಹದ ಫಿಟ್‌ನೆಸ್ ಮಟ್ಟ ಕುಸಿಯಬಹುದು ಮತ್ತು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ವೈದ್ಯರು ಹೇಳುವ ಪ್ರಕಾರ, ಜಿಮ್ ಪ್ರಾರಂಭಿಸಿ ಅದನ್ನು ಮಧ್ಯದಲ್ಲಿ ಬಿಡುವುದರಿಂದ ದೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀಳಬಹುದು. ವ್ಯಕ್ತಿ ನಿಯಮಿತವಾಗಿ ವ್ಯಾಯಾಮ ಮಾಡಿದಾಗ ದೇಹವು ಅದಕ್ಕೆ ಹೊಂದಿಕೊಳ್ಳುತ್ತದೆ. ಆದರೆ ಅಚಾನಕ್ ಜಿಮ್ ಬಿಡುವುದರಿಂದ ಈ ಸಮತೋಲನಕ್ಕೆ ಅಡಿಯಾಗುತ್ತದೆ. ಅಷ್ಟೇಅಲ್ಲ ಸ್ನಾಯುಗಳ ಬಲ ನಿಧಾನವಾಗಿ ಕಡಿಮೆಯಾಗುತ್ತದೆ ಮತ್ತು ಸಹನಶಕ್ತಿಯೂ ಕುಗ್ಗುತ್ತದೆ.

ಇದನ್ನೂ ಓದಿ: Fitness Tips: ಜಿಮ್‌ಗೆ ಹೋಗದೆ ಫಿಟ್ ಆಗಿರುವುದು ಹೇಗೆ?

ಈ ರೀತಿಯಾಗುವುದನ್ನು ತಡೆಯಲು ಏನು ಮಾಡಬೇಕು?

ಜಿಮ್‌ಗೆ ಹೋಗಲು ಇಷ್ಟವಿಲ್ಲದವರು ಅಥವಾ ಯಾವುದೋ ಕಾರಣದಿಂದ ಅದನ್ನು ಬಿಟ್ಟಿದ್ದರೆ ಒಂದೇ ಬಾರಿಗೆ ನೀವು ಮಾಡುತ್ತಿದ್ದ ಚಟುವಟಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಡಿ. ದೈನಂದಿನ ದಿನಚರಿಯಲ್ಲಿ ಲಘು ವ್ಯಾಯಾಮ, ಯೋಗ ಅಥವಾ ಮನೆಯಲ್ಲಿಯೇ ವಾಕಿಂಗ್ ಮಾಡಿ. ಇದರಿಂದ ದೇಹ ಸದಾ ಚುರುಕಾಗಿರಲು ಸಹಾಯವಾಗುತ್ತದೆ. ಮಾತ್ರವಲ್ಲ, ಸಮತೋಲಿತ ಆಹಾರವನ್ನು ಸೇವನೆ ಮಾಡುವುದು ಬಹಳ ಮುಖ್ಯ. ಸಮಯದ ಕೊರತೆಯಿದ್ದರೆ, ಸ್ವಲ್ಪವಾದರೂ ವ್ಯಾಯಾಮ ಮಾಡುವುದನ್ನು ಮರೆಯಬೇಡಿ. ಎಲ್ಲಕ್ಕಿಂತ ಮುಖ್ಯವಾದುದು ಎಂದರೆ ದೇಹವನ್ನು ಅಚಾನಕ್ ಚಟುವಟಿಕೆಗಳಿಂದ ದೂರವಿಡಬಾರದು. ಯಾವುದಾದರೂ ರೂಪದಲ್ಲಿ ಫಿಟ್‌ನೆಸ್ ಅನ್ನು ನಿರಂತರವಾಗಿ ಮುಂದುವರಿಸುವುದು ಆರೋಗ್ಯಕರ ಜೀವನಕ್ಕೆ ಅತ್ಯಂತ ಅಗತ್ಯವಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸರಿಯಾಗೇ ಮಾಡುತ್ತಿದೆ; ಮೋದಿ ಸರ್ಕಾರವನ್ನು ಸಮರ್ಥಿಸಿಕೊಂಡ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ!

ನವದೆಹಲಿ, ಮಾರ್ಚ್ 19: ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಇಂದು ಪಶ್ಚಿಮ ಏಷ್ಯಾದ ಸಂಘರ್ಷದ ಬಗ್ಗೆ ಕೇಂದ್ರ ಸರ್ಕಾರದ ಮೌನದ ಮತ್ತು ತಟಸ್ಥ ನಿಲುವನ್ನು ಬೆಂಬಲಿಸಿದ್ದಾರೆ. ಒಂದೆಡೆ ಕಾಂಗ್ರೆಸ್ ನಾಯಕರು ಪ್ರಧಾನಿ ಮೋದಿಯ (PM Modi) ವಿರುದ್ಧ ಆರೋಪಗಳನ್ನು ಮಾಡುತ್ತಲೇ ಇದ್ದರೆ ಇನ್ನೊಂದೆಡೆ ಅದೇ ಪಕ್ಷದ ಸಂಸದ ಮನೀಶ್ ತಿವಾರಿ ಬಿಜೆಪಿ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದಾರೆ! ಭಾರತವು ಇತಿಹಾಸದಿಂದಲೂ ಇಸ್ರೇಲ್ ಮತ್ತು ಇರಾನ್ ಪ್ರದೇಶದಲ್ಲಿ ಸೀಮಿತ ಪಾತ್ರವನ್ನು ವಹಿಸಿದೆ. ಅದು ನಮ್ಮ ಯುದ್ಧವಲ್ಲ ಹೀಗಾಗಿ ಅದರಲ್ಲಿ ನಾವು ಮೂಗು ತೂರಿಸುವ ಅಗತ್ಯವಿಲ್ಲ. ಕೇಂದ್ರ ಸರ್ಕಾರ ಸರಿಯಾಗಿಯೇ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.

ಇರಾನ್, ಇಸ್ರೇಲ್ ಮತ್ತು ಯುಎಸ್ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆಯ ಕುರಿತು ಮಾತನಾಡಿದ ಅವರು, ಬಿಕ್ಕಟ್ಟಿನ ಪ್ರಮಾಣ ಮತ್ತು ಸಂಕೀರ್ಣತೆಯನ್ನು ಗಮನಿಸಿದರೆ ಭಾರತದ ಎಚ್ಚರಿಕೆಯ ರಾಜತಾಂತ್ರಿಕ ವಿಧಾನವು ಸೂಕ್ತವಾಗಿದೆ ಎಂದು ಹೇಳಿದ್ದಾರೆ. “ಇಸ್ರೇಲ್ ಮತ್ತು ಇರಾನ್ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವೆ ಏನಾಗುತ್ತಿದೆ ಎಂಬುದನ್ನು ಎಲ್ಲರೂ ಗಮನಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ನಾವು ಒಂದು ದೇಶದ ಪರವಾಗಿ ನಿಲ್ಲುವುದು ಸೂಕ್ತವಲ್ಲ. ಅದು ನಮ್ಮ ಯುದ್ಧವಲ್ಲ. ನಾವು ಯಾವಾಗಲೂ ಗ್ರೇಟರ್ ಮಧ್ಯಪ್ರಾಚ್ಯದಲ್ಲಿ ಸ್ವಲ್ಪಮಟ್ಟಿಗೆ ಸೀಮಿತ ವಹಿವಾಟವನ್ನು ಮತ್ತು ಪಾತ್ರವನ್ನು ಹೊಂದಿದ್ದೇವೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಯುದ್ಧದ ನಡುವೆಯೂ ಅರ್ಮೇನಿಯಾ ಮೂಲಕ ಇರಾನ್​ನಿಂದ 550 ಭಾರತೀಯರ ಸ್ಥಳಾಂತರ

ಇಂತಹ ಸಂದರ್ಭದಲ್ಲಿ ಭಾರತವು ಜಾಗರೂಕತೆಯಿಂದ ವರ್ತಿಸುವ ಮೂಲಕ ಸರಿಯಾದದ್ದನ್ನೇ ಮಾಡುತ್ತಿದೆ. ನಾವು ಜಾಗರೂಕರಾಗಿದ್ದುಕೊಂಡು ಸರಿಯಾದದ್ದನ್ನು ಮಾಡುತ್ತಿದ್ದೇವೆ ಎಂದು ನಾನು ಭಾವಿಸುತ್ತೇನೆ. ಬಿಕ್ಕಟ್ಟಿನ ಆರಂಭದಿಂದಲೂ ಭಾರತವು ಮಾತುಕತೆ ಮತ್ತು ರಾಜತಾಂತ್ರಿಕತೆಗೆ ನಿರಂತರವಾಗಿ ಕರೆ ನೀಡಿದೆ. ಫೆಬ್ರವರಿ 28ರಂದು ಯುಎಸ್ ಮತ್ತು ಇಸ್ರೇಲ್ ಇರಾನ್ ಒಳಗೆ ಜಂಟಿಯಾಗಿ ದಾಳಿಗಳನ್ನು ನಡೆಸಿ, ಹಲವಾರು ಸ್ಥಳಗಳನ್ನು ನಾಶ ಮಾಡಿದ ನಂತರ ಸಂಘರ್ಷ ಪ್ರಾರಂಭವಾಯಿತು. ಇದಕ್ಕೆ ಪ್ರತಿಯಾಗಿ ಇರಾನ್ ತನ್ನದೇ ಆದ ದಾಳಿಯೊಂದಿಗೆ ಸೇಡಿನ ದಾಳಿ ನಡೆಸಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಪ್ರಜ್ವಲ್​​ ವಿಡಿಯೋ ವೈರಲ್​​ ಹಿಂದೆ ಜೆಡಿಎಸ್​​ನವರದ್ದೂ ಕೈವಾಡ: ಚಾರ್ಜ್​​ಶೀಟ್​​ನಲ್ಲಿ ಸ್ಫೋಟಕ ಮಾಹಿತಿ ರಿವೀಲ್​​

ಹಾಸನ, ಮಾರ್ಚ್​​ 19: ಮಾಜಿ ಸಂಸದ ಪ್ರಜ್ವಲ್​ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಕೇಸ್​ ಸಂಬಂಧ SIT ಸಲ್ಲಿಕೆ ಮಾಡಿರುವ ದೋಷಾರೋಪ ಪಟ್ಟಿ ಜೆಡಿಎಸ್ ವಲಯದಲ್ಲಿಯೇ ತಲ್ಲಣ ಮೂಡಿಸಿದೆ. ಪೆನ್​ಡ್ರೈವ್​ ಹಂಚಿದ ಕೇಸ್​ನ ಆರೋಪಿಗಳ ಪಟ್ಟಿಯಲ್ಲಿ ಬಿಜೆಪಿ, ಕಾಂಗ್ರೆಸ್​​ ಜೊತೆ ಜೆಡಿಎಸ್ ಕಾರ್ಯಕರ್ತರನ್ನೂ ಕೂಡ SIT ಆರೋಪಿಗಳಾಗಿಸಿರೋದು ನಾಯಕರ ಅಚ್ಚರಿಗೆ ಕಾರಣವಾಗಿದೆ. ಚಾರ್ಜ್​ಶೀಟ್​ನಲ್ಲಿ ಶಾಸಕ ಸ್ವರೂಪ್ ಚಿಕ್ಕಪ್ಪ ಹರ್ಷ ಅವರ ಪುತ್ರ ರೇವಂತ್, ರೇವಂತ್ ಸ್ನೇಹಿತ ತೇಜಸ್, ಭವಾನಿ ರೇವಣ್ಣ ಆಪ್ತ ಎನ್​.ಸಿ.ಹರೀಶ್, JDS ಕಾರ್ಯಕರ್ತ ಬೂವನಹಳ್ಳಿ ಮಂಜು ಅಲಿಯಾಸ್ ವಸಂತ್ ಕುಮಾರ್, ಬಾಲಸುಬ್ರಹ್ಮಣ್ಯ, ಜಯಸೂರ್ಯ ಸೇರಿ 7ಕ್ಕೂ ಹೆಚ್ಚು ಜನರ ಹೆಸರಿದೆ.

ಪ್ರಕರಣ ದೇಶಾದ್ಯಂತ ಸದ್ದು ಮಾಡಿದ್ದ ಬೆನ್ನಲ್ಲೇ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರೇ ರಾಜಕೀಯ ಉದ್ದೇಶದಿಂದ ವಿಡಿಯೋ ವೈರಲ್ ಮಾಡಿದ್ದಾರೆ ಎಂದು ಕೆಲ ಜೆಡಿಎಸ್​ ನಾಯಕರು ಗಂಭೀರ ಆರೋಪ ಮಾಡಿದ್ದರು. ಆದರೀಗ ಎಸ್​ಐಟಿ ಅಧಿಕಾರಿಗಳ ತನಿಖೆ ಬಳಿಕ ಸ್ಫೋಟಕ ಮಾಹಿತಿ ಬಯಲಾಗಿದ್ದು, ಜೆಡಿಎಸ್​​ ಕಾರ್ಯಕರ್ತರೂ ಈ ಪ್ರಕರಣದಲ್ಲಿ ಇರೋದಾಗಿ ತನಿಖಾ ವರದಿ ಹೇಳಿದೆ. ಐಟಿ ಆ್ಯಕ್ಟ್​​ 2008ರ ಸೆಕ್ಷನ್ 67ಎ ಅಡಿ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ.

ಇದನ್ನೂ ಓದಿ:  ಪ್ರಜ್ವಲ್ ರೇವಣ್ಣ ಪ್ರಕರಣ; ಪ್ರೀತಂ ಗೌಡ, ಶ್ರೇಯಸ್ ಪಟೇಲ್ ಆಪ್ತರಿಗೆ ಬಿಗ್ ರಿಲೀಫ್

ಇನ್ನು ಚಾರ್ಜ್​​​ಶೀಟ್​​ನಲ್ಲಿ ಜೆಡಿಎಸ್​​ ಕಾರ್ಯಕರ್ತರ ಹೆಸರು ಉಲ್ಲೇಖ ವಿಚಾರ ಸಂಬಂಧ ಟಿವಿ9ಗೆ ದೂರುದಾರ ಮತ್ತು ವಕೀಲ ಪೂರ್ಣಚಂದ್ರ ಪ್ರತಿಕ್ರಿಯಿಸಿದ್ದಾರೆ. ಆರೋಪಿಗಳು ಯಾವ ಪಕ್ಷದವರು ಎಂಬುದು ನಮಗೆ ಮುಖ್ಯವಲ್ಲ. ಚಾರ್ಜ್​​ಶೀಟ್​​ ಪ್ರತಿ ಇನ್ನೂ ನನ್ನ ಕೈಗೆ ಸಿಕ್ಕಿಲ್ಲ. ದಾಖಲೆ ನೋಡಿದ ಬಳಿಕ ಯಾರ ಮೇಲೆ ಏನು ಆರೋಪ‌ಮಾಡಲಾಗಿದೆ ಎಂದು ಮಾತನಾಡುತ್ತೇನೆ. ಆದರೆ ಪ್ರಕರಣ ಸಂಬಂಧ ತಪ್ಪಿತಸ್ಥರಿಗೆ ಶಿಕ್ಕೆ ಆಗೋವರೆಗೂ ನಾನು ಸುಮ್ಮನಿರಲ್ಲ. ನಾನು ಯಾರಮೇಲೆ‌ ದೂರು ಕೊಟ್ಟಿದ್ದೆ? ಅವರ ಹಿಂದೆ ಇರೋದು ಯಾರು? ಅವರನ್ನು ಯಾಕೆ‌ ವಿಚಾರಣೆಯನ್ನೇ ಮಾಡಲಿಲ್ಲ? ಎಂಬ ಷಡ್ಯಂತ್ರ ಬಯಲಾಗಬೇಕು. ಪ್ರಕರಣದ ನಿಜ ಆರೋಪಿಗಳು ಹೊರ ಬರಬೇಕಾದರೆ ಮತ್ತಷ್ಟು ತನಿಖೆ ಆಗಲೇ‌ಬೇಕು. ಜೆಡಿಎಸ್ ನಾಯಕರ ಬಾಯಿ ಮುಚ್ಚಿಸುವ ಸಲುವಾಗಿ ಕೆಲ‌ ಜೆಡಿಎಸ್ ಕಾರ್ಯಕರ್ತರ ಹೆಸರನ್ನು ಆರೋಪಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆಯಾ ಎನ್ನುವ ಅನುಮಾನ ಈಗ ನಮ್ಮನ್ನು ಕಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಯುಗಾದಿ ಹಬ್ಬದಂದೇ ದಿನೇಶ್ ಕಾರ್ತಿಕ್ ಮನೆಗೆ ಪುಟ್ಟ ದೇವತೆಯ ಆಗಮನ

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾರ್ಗದರ್ಶಕ ಮತ್ತು ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ (Dinesh Karthik) ಮನೆಗೆ ಯುಗಾದಿ ಹಬ್ಬದಂದೇ ಪುಟ್ಟ ದೇವತೆಯ ಆಗಮನವಾಗಿದೆ. ದಿನೇಶ್ ಕಾರ್ತಿಕ್ ಅವರ ಮಡದಿ ದೀಪಿಕಾ ಪಳ್ಳಿಕಲ್ (Deepika Pallikal) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಚಾರವನ್ನು ಸ್ವತಃ ದಿನೇಶ್ ಕಾರ್ತಿಕ್ ಅವರೇ ತಮ್ಮ ಇನ್ಸ್​ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಮಗಳ ಹೆಸರನ್ನು ಬಹಿರಂಗಪಡಿಸಿರುವ ಕಾರ್ತಿಕ್, ಪುಟ್ಟ ಕಂದಮ್ಮನಿಗೆ ‘ರಾಹ’ (Raaha) ಎಂದು ಹೆಸರಿಟ್ಟಿರುವುದಾಗಿ ತಿಳಿಸಿದ್ದಾರೆ.

ಮೇಲೆ ಹೇಳಿದಂತೆ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾರ್ಗದರ್ಶಕ ಮತ್ತು ಬ್ಯಾಟಿಂಗ್ ಕೋಚ್ ಆಗಿರುವ ದಿನೇಶ್ ಕಾರ್ತಿಕ್, ಕೆಲವು ದಿನಗಳ ಹಿಂದೆ ತಂಡದೊಂದಿಗೆ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಆರ್​ಸಿಬಿ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಫೋಟೋಗಳಲ್ಲಿ ದಿನೇಶ್ ಕಾರ್ತಿಕ್ ಯುವ ಆಟಗಾರರಿಗೆ ಬ್ಯಾಟಿಂಗ್ ಟಿಪ್ಸ್ ನೀಡುತ್ತಿರುವುದನ್ನು ಕಾಣಬಹುದು. ಅಂದರೆ ಮಗುವಿನ ನಿರೀಕ್ಷೆಯ ನಡುವೆಯೂ ತಮ್ಮ ಕರ್ತವ್ಯ ಮರೆಯದ ಕಾರ್ತಿಕ್, ಆರ್​ಸಿಬಿಯ ಅಭ್ಯಾಸ ಶಿಬಿರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಮಗಳ ಆಗಮನದಿಂದಾಗಿ ಕಾರ್ತಿಕ್, ಕುಟುಂಬದೊಂದಿಗೆ ಇದ್ದು, ಆ ನಂತರ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಎರಡನೇ ಬಾರಿಗೆ ತಂದೆಯಾದ ಡಿಕೆ

ಎಲ್ಲರಿಗೂ ತಿಳಿದಿರುವಂತೆ ಇದು ದಿನೇಶ್ ಕಾರ್ತಿಕ್ ಅವರ ಎರಡನೇ ಮದುವೆ. ಮೊದಲ ಮಡದಿ ದಿನೇಶ್ ಕಾರ್ತಿಕ್​​ಗೆ ವಿಚ್ಛೇದನ ನೀಡಿ, ಟೀಂ ಇಂಡಿಯಾದ ಮಾಜಿ ಆಟಗಾರ ಮುರುಳಿ ವಿಜಯ್ ಅವರನ್ನು ಮದುವೆಯಾಗಿದ್ದರು. ಅದಾದ ಬಳಿಕ ದಿನೇಶ್ ಕಾರ್ತಿಕ್ ಭಾರತದ ಹೆಸರಾಂತ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಅವರನ್ನು ಪ್ರೀತಿಸಿ 2013 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಂತರ ಈ ಜೋಡಿ 2015 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿತ್ತು. ಆಗಸ್ಟ್ 18 ರಂದು ಕ್ರಿಶ್ಚಿಯನ್ ವಿಧಿಗಳ ಪ್ರಕಾರ ಮತ್ತು ಆಗಸ್ಟ್ 20 ರಂದು ಹಿಂದೂ ಸಂಪ್ರದಾಯಗಳ ಪ್ರಕಾರ ಮದುವೆ ನೆರವೇರಿತ್ತು. 2021 ರಲ್ಲಿ, ದಂಪತಿಗೆ ಜಿಯಾನ್ ಮತ್ತು ಕಬೀರ್ ಎಂಬ ಅವಳಿ ಗಂಡು ಮಕ್ಕಳು ಜನಿಸಿದ್ದರು. ಈಗ, ಮಗಳ ಆಗಮನವು ಕುಟುಂಬದ ಸಂತೋಷವನ್ನು ಇಮ್ಮಡಿಗೊಳಿಸಿದೆ.

RCB: ವಿವಾದದ ನಡುವೆ ಗುಟ್ಟಾಗಿ ಸಪ್ತಪದಿ ತುಳಿದ ಆರ್‌ಸಿಬಿ ವೇಗಿ ಯಶ್ ದಯಾಳ್

ಆರ್​ಸಿಬಿಗೆ ಕಪ್ ಗೆಲ್ಲಿಸಿಕೊಟ್ಟ ಕಾರ್ತಿಕ್

ದೀಪಿಕಾ ಪಳ್ಳಿಕಲ್ ವೈಯಕ್ತಿಕ ಜೀವನದಲ್ಲಿ ಮಾತ್ರವಲ್ಲದೆ ಕಾರ್ತಿಕ್ ಅವರ ಕ್ರಿಕೆಟ್ ವೃತ್ತಿಜೀವನದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಕಾರ್ತಿಕ್ ಅವರ ಕ್ರಿಕೆಟ್ ವೃತ್ತಿಜೀವನ ಯಾವಾಗಲೂ ಸುದ್ದಿಯಲ್ಲಿದೆ. ಐಪಿಎಲ್‌ನಲ್ಲಿ ಆರ್‌ಸಿಬಿ ಪರ ವರ್ಷಗಳ ಕಾಲ ಆಡಿದ್ದ ಕಾರ್ತಿಕ್ ಫಿನಿಷರ್ ಆಗಿ ಹೆಸರುವಾಸಿಯಾಗಿದ್ದರು. ನಿವೃತ್ತಿಯ ನಂತರ ಇದೇ ಆರ್​ಸಿಬಿ ತಂಡದ ಕೋಚಿಂಗ್ ಸಿಬ್ಬಂದಿಯಾಗಿ ಸೇರಿಕೊಂಡಿದ್ದ ಕಾರ್ತಿಕ್ 2025 ರ ಐಪಿಎಲ್​ನಲ್ಲಿ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಉಳಿದಂತೆ ಕಾರ್ತಿಕ್ ಟೀಮ್ ಇಂಡಿಯಾ ಪರ 26 ಟೆಸ್ಟ್, 94 ಏಕದಿನ ಮತ್ತು 60 ಟಿ20 ಪಂದ್ಯಗಳನ್ನು ಆಡಿದ್ದು, 3,463 ರನ್ ಗಳಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Ugadi Bhavishya 2026: ಯುಗಾದಿ ವರ್ಷ ಭವಿಷ್ಯ; ಈ ವರ್ಷ ಮೀನ ರಾಶಿಯವರಿಗೆ ಹೇಗಿರಲಿದೆ?

2026ರ ಯುಗಾದಿ ಭವಿಷ್ಯದ ಪ್ರಕಾರ, ಮೀನ ರಾಶಿಯವರಿಗೆ ವ್ಯಾಪಾರ ಕ್ಷೇತ್ರದಲ್ಲಿ ಯಶಸ್ಸು ದೊರೆಯಲಿದೆ ಎಂದು ಜ್ಯೋತಿಷಿ ಕೆ ವೆಂಕಟೇಶ್ ಶರ್ಮಾ ಭವಿಷ್ಯ ನುಡಿದಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅನುಭವಿಸಿದ ತೊಂದರೆಗಳು ಕಡಿಮೆಯಾಗಿ ಸ್ಥಿರ ಆದಾಯವನ್ನು ಕಾಣುವ ಸಾಧ್ಯತೆ ಇದೆ. ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷ ನೆಲೆಸಲಿದೆ. ಆದಾಗ್ಯೂ, ಆರೋಗ್ಯದ ಬಗ್ಗೆ ಗಮನ ಹರಿಸಬೇಕಿದ್ದು, ನಿದ್ರಾಹೀನತೆ ಮತ್ತು ಒತ್ತಡವು ಕಾಡಬಹುದು. ಉತ್ತಮ ನಿದ್ರೆ ಮತ್ತು ಮಾನಸಿಕ ನೆಮ್ಮದಿಗಾಗಿ ಹೆಚ್ಚು ಗಮನ ನೀಡಬೇಕು.

ಗ್ರಹಗಳ ಸ್ಥಾನವನ್ನು ಅವಲೋಕಿಸಿದಾಗ, ಶನಿ ಗ್ರಹದ ದುಷ್ಪರಿಣಾಮಗಳಿರುವುದರಿಂದ ಆಂಜನೇಯನ ಮೊರೆ ಹೋಗುವುದು ಸೂಕ್ತ. ಕುಜ ದೋಷಕ್ಕೆ ಸುಬ್ರಹ್ಮಣ್ಯೇಶ್ವರನ ಆರಾಧನೆ ಮಾಡುವುದು ಪರಿಹಾರ ನೀಡುತ್ತದೆ. ರವಿ ಗ್ರಹವು ಸ್ವಲ್ಪ ವ್ಯಾಧಿಗಳನ್ನು ತಂದರೂ, ಶುಕ್ರನು ಲಕ್ಷ್ಮಿಕರನಾಗಿರುತ್ತಾನೆ. ಗುರು ಸ್ನೇಹ ನಾಶ, ಬುಧ ಅತಿನಷ್ಟ ಮತ್ತು ರಾಹು ಶತ್ರು ಭಯವನ್ನು ಸೂಚಿಸುತ್ತದೆ. ಈ ಎಲ್ಲಾ ಗ್ರಹ ದೋಷಗಳಿಗೆ ನಿರ್ದಿಷ್ಟ ಪರಿಹಾರ ಕ್ರಮಗಳನ್ನು ಅನುಸರಿಸುವ ಮೂಲಕ ಉತ್ತಮ ಫಲಗಳನ್ನು ಪಡೆಯಬಹುದು.

ಇದನ್ನೂ ಓದಿ: ಯುಗಾದಿ ಬಳಿಕ 1 ವರ್ಷ ಈ ರಾಶಿಗೆ ಸಾಕಷ್ಟು ಅದೃಷ್ಟ ಕೂಡಿಬರಲಿದೆ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ಹುದ್ದೆ ಖಾಲಿ ಇಲ್ಲ ಎಂಬ ವೇಣುಗೋಪಾಲ್​​ ಹೇಳಿಕೆಗೆ ಡಿಸಿಎಂ ಡಿ.ಕೆ. ಶಿವಕುಮಾರ್​ ಉತ್ತರ ನೋಡಿ

ಬೆಂಗಳೂರು, ಮಾರ್ಚ್​​ 19: ಕರ್ನಾಟಕದಲ್ಲಿ ಪ್ರಭಾವಿ ಸಿಎಂ ಇದ್ದಾರೆ, ಸಿಎಂ ಹುದ್ದೆ ಖಾಲಿ ಇಲ್ಲ ಎಂಬ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿಕೆಗೆ ಡಿಸಿಎಂ ಡಿ.ಕೆ. ಶಿವಕುಮಾರ್​​ ಪ್ರತಿಕ್ರಿಯಿಸಿದ್ದಾರೆ. ಅವರ ಹೇಳಿಕೆಯನ್ನು ನಾನು ಗಮನಿಸಿದ್ದು, ಪಕ್ಷ ಮತ್ತು ಶಾಸಕರು ತೀರ್ಮಾನಿಸೋದಾಗಿಯೂ ಅವರು ತಿಳಿಸಿರೋದಾಗಿ ಡಿಕೆಶಿ ಹೇಳಿದ್ದಾರೆ. ಕೆಲ ಶಾಸಕರಿಂದ ಸಚಿವ ಸ್ಥಾನದ ಬೇಡಿಕೆ ವಿಚಾರವಾಗಿಯೂ ಮಾತನಾಡಿದ ಅವರು, ಮಂತ್ರಿ ಆಗಬೇಕು ಎಂದು ಆಸೆ ಪಡುವುದರಲ್ಲಿ ತಪ್ಪಿಲ್ಲ. ಸಂಪುಟ ಪುನಾರಚನೆ ಬಗ್ಗೆ ಸಿಎಂ ಹೇಳಿದ್ದಕ್ಕೆ ಕೆಲವರು ಆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಂಪುಟ ಪುನಾರಚನೆಯೋ ಅಥವಾ ಅಧಿಕಾರ ಹಸ್ತಾಂತರವೋ ಎಂಬ ಬಗ್ಗೆ ಕಾಲ ನಿರ್ಣಯ ಮಾಡಲಿದೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version