ಬಾಗಲಕೋಟೆ ಅಭ್ಯರ್ಥಿಗೆ ಬೆಂಬಲ ಘೋಷಿಸಿದ ಯತ್ನಾಳ್: ದಾವಣಗೆರೆ ಬಿಜೆಪಿ ಅಭ್ಯರ್ಥಿ ಬಗ್ಗೆ ಹೊಸ ಬಾಂಬ್

ಬಾಗಲಕೋಟೆ ಅಭ್ಯರ್ಥಿಗೆ ಬೆಂಬಲ ಘೋಷಿಸಿದ ಯತ್ನಾಳ್: ದಾವಣಗೆರೆ ಬಿಜೆಪಿ ಅಭ್ಯರ್ಥಿ ಬಗ್ಗೆ ಹೊಸ ಬಾಂಬ್

ವಿಜಯಪುರ, ಮಾರ್ಚ್​​ 19: ದಾವಣಗೆರೆ ಹಾಗೂ ಬಾಗಲಕೋಟೆ ಉಪ ಚುನಾವಣೆಗೆ ಈಗಾಗಲೇ ಮುಹೂರ್ತ ಫಿಕ್ಸ್ ಆಗಿದೆ. ಎರಡು ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನ ಘೋಷಣೆ ಮಾಡಲಾಗಿದೆ. ಬಾಗಕೋಟೆಗೆ ವೀರಣ್ಣ ಚರಂತಿಮಠ ಹಾಗೂ ದಾವಣಗೆರೆಗೆ ಶ್ರೀನಿವಾಸ ಹೆಸರು ಫೈನಲ್ ಆಗಿದೆ. ಈ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (basanagouda patil yatnal)​​ ಮಾತನಾಡಿದ್ದು, ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠಗೆ ನಾನು ಬೆಂಬಲ ನೀಡುತ್ತೇನೆ ಎಂದಿದ್ದಾರೆ. ಜೊತೆಗೆ ದಾವಣಗೆರೆಯಲ್ಲಿ ಕೊನೆಕ್ಷಣದಲ್ಲಿ ಏನಾದರೂ ಆಗಬಹುದು, ಶಾಮನೂರು ಕುಟುಂಬಕ್ಕೆ ‌ಬಿಜೆಪಿ ಟಿಕೆಟ್ ಕೊಟ್ಟರು ಅಚ್ಚರಿಯಿಲ್ಲ ಎಂದು ಹೊಸ ಬಾಂಬ್​​ ಸಿಡಿಸಿದ್ದಾರೆ.

ವೀರಣ್ಣ ಚರಂತಿಮಠಗೆ ಬೆಂಬಲಿಸುವೆ ಎಂದ ಯತ್ನಾಳ್

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಚರಂತಿಮಠಗೆ ಬೆಂಬಲಿಸುವೆ. ಚರಂತಿಮಠ ಹಾಗೂ ನಮ್ಮದು ಹಳೆಯ ಸಂಬಂಧ. ನನ್ನ ಕಷ್ಟ ಕಾಲದಲ್ಲಿ ಸಹಾಯ ಮಾಡಿದ್ದಾರೆ. ಅವರಿಗೆ ಈ ಹಿಂದೆ ಬಿಜೆಪಿ ಟಿಕೆಟ್ ಕೊಡಿಸಿದ್ದೇ ನಾನು. ಆಗ ವೀರಣ್ಣ ಚರಂತಿಮಠಗೆ ಟಿಕೆಟ್ ಕೊಡುವ ಮನಸ್ಸು ಯಡಿಯೂರಪ್ಪಗೆ ಇರಲಿಲ್ಲ. ಅನಂತಕುಮಾರ ನಾನು ಹಾಗೂ ಇತರರು ಸೇರಿ ಚರಂತಿಮಠ ಅವರಿಗೆ ಟಿಕೆಟ್ ಕೊಡಿಸಿದ್ದೇವು. ಆಗ ಜಗದೀಶ್ ಶೆಟ್ಟರ್ ಎಲೆಕ್ಷನ್ ಕಮೀಟಿ ಚೇರ್ಮನ್ ಆಗಿದ್ದರು. ಶೆಟ್ಟರ್ ಜೊತೆಗೆ ಜಗಳ ಮಾಡಿ ಚರಂತಿಮಠಗೆ ಟಿಕೆಟ್ ಕೊಡಿಸಿದ್ದೇವೆ ಎಂದಿದ್ದಾರೆ.

ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ಧ ಯತ್ನಾಳ್​ ವಾಗ್ದಾಳಿ

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಯಡಿಯೂರಪ್ಪ ವಾಗ್ದಾಳಿ ಮಾಡಿದ ಯತ್ನಾಳ್​​, ಬಿಜೆಪಿ ಮಹಾನ್ ನಾಯಕರು ಎಲ್ಲೆಲ್ಲಿ ಹೊಂದಾಣಿಕೆ ಇದೆ ಎಂದು ನೋಡಬೇಕು. ಅಪ್ಪ-ಮಕ್ಕಳು ಯಾರನ್ನು ಕೊಲ್ಲಬೇಕೆಂದುಕೊಳ್ಳುತ್ತಾರೋ ನೋಡಬೇಕು. ಅವರದ್ದು ಶಾಮನೂರು ಜೊತೆ ಹೊಂದಾಣಿಕೆ ಇದೆ ಹಾಗಾಗಿ ಬಿಜೆಪಿ ಪರ ಕೆಲಸ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ. ಯಡಿಯೂರಪ್ಪ ಹಾಗೂ ಮಕ್ಕಳು ಸರಿಯಾಗಿ ಕೆಲಸ ಮಾಡುತ್ತಾರೋ ಇಲ್ವೋ ಎಂದು ಗೊತ್ತಿಲ್ಲ. ಇನ್ನು ಶಾಮನೂರು ಕುಟುಂಬಕ್ಕೆ ಕಾಂಗ್ರೆಸ್ ಟಿಕೆಟ್ ಸಿಗುತ್ತೋ ಇಲ್ವೋ ಅದೂ ಸಹ ಗೊತ್ತಿಲ್ಲ. ಶಾಮನೂರು, ಯಡಿಯೂರಪ್ಪ ಕುಟುಂಬಗಳು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಒಂದು ವೇಳೆ ದಾವಣಗೆರೆಯಲ್ಲಿ ಕಾಂಗ್ರೆಸ್ ಟಿಕೆಟ್ ಮುಸ್ಲಿಂಮರಿಗೆ ಕೊಟ್ಟರೆ, ಶಾಮನೂರು ಮಲ್ಲಿಕಾರ್ಜುನ ಮಗನಿಗೆ ಬಿಜೆಪಿ ಟಿಕೆಟ್ ಕೊಟ್ಟರೂ ಆಶ್ಚರ್ಯವಿಲ್ಲ. ನೂರಕ್ಕೆ ನೂರರಷ್ಟು ಮಾಹಿತಿ ನನಗಿದೆ ಎಂದು ಯತ್ನಾಳ್​ ಬಾಂಬ್ ಸಿಡಿಸಿದ್ದಾರೆ.

ಯತ್ನಾಳ್​ ಬಿಜೆಪಿಗೆ ಏಕೆ ಬೇಕೆಂದು ಕೆಲವರು ಪೋಸ್ಟ್ ಮಾಡುತ್ತಾರೆ. ಇದೆಲ್ಲಾ ಕೆಲಸವನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನಕಲಿ ಫೇಸ್ ಬುಕ್ ಮೂಲಕ ಮಾಡಿಸುತ್ತಾನೆ. ಬಿ.ಎಲ್ ಸಂತೋಷ್​, ಪ್ರಲ್ಹಾದ್​ ಜೋಶಿ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಹಾಕಿಸುತ್ತಾನೆ. ಇದಕ್ಕಾಗಿ ಪ್ರತಿ ತಿಂಗಳು 50 ಲಕ್ಷ ರೂ ಖರ್ಚು ಮಾಡುತ್ತಾನೆಂದು ವಾಗ್ದಾಳಿ ಮಾಡಿದರು. ತಾಯಿಗೆ ದ್ರೋಹ ಬಗೆಯಲ್ಲಾ ಎಂದು ನಿಮ್ಮಪ್ಪ ಭಾಷಣ ಮಾಡುತ್ತಿದ್ದ. ಅದನ್ನೇ ನೋಡಿ ಕನ್ನಡಿ ಮುಂದೆ ನಿಂತು ಭಾಷಣ ಕಲಿತಿದ್ದೀಯಾ, ನಿನಗೆ ಹಣ ತಿನ್ನೋದು ಮಾತ್ರ ಗೊತ್ತಿದೆ ಎಂದು ವಿಜಯೇಂದ್ರ ವಿರುದ್ದ ಕಿಡಿಕಾರಿದರು. ಈಗ ಉಪ ಚುನಾವಣೆಯಲ್ಲಿ ನೀನು ಬಾಗಲಕೋಟೆ, ದಾವಣಗೆರಯಲ್ಲಿ ಸರಿಯಾಗಿ ಕೆಲಸ ಮಾಡಬೇಕು. ಇಲ್ಲವಾದರೆ ಶಾಮನೂರು ಜೊತೆ ಹೋಗಬೇಕಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಉಪಚುನಾವಣೆ ಪ್ರಚಾರಕ್ಕೆ ಉಚ್ಛಾಟಿತ ಶಾಸಕ? ಬಾಗಲಕೋಟೆ ಬಿಜೆಪಿ ಅಭ್ಯರ್ಥಿಯ ಸ್ಫೋಟಕ ಹೇಳಿಕೆ

ಕುಮಾರಸ್ವಾಮಿಯನ್ನು ಸೋಲಿಸಲು ಪ್ರಯತ್ನ ಮಾಡಿದರು, ಸೋಮಣ್ಣರನ್ನು ಸೋಲಿಸಲು ಪ್ರಯತ್ನ ಮಾಡಿದ್ದರು. ಕೊಪ್ಪಳದಲ್ಲಿ ಡೀಲಿಂಗ್, ಶಿಖಾರಿಪುರದಲ್ಲಿ ಡೀಲಿಂಗ್, ಕಲಬುರಗಿಯಲ್ಲೂ ಸೋಲಲು ಹೊಂದಾಣಿಕೆ ಮಾಡಿಕೊಂಡರು. ರಾಯಚೂರು, ಬಳ್ಳಾರಿ, ಕೊಪ್ಫಳದಲ್ಲೂ ಹೊಂದಾಣಿಕೆ ಮಾಡಿದರು. ಇದೆಲ್ಲಾ ಮುಂದೆ ನಡೆಯಲ್ಲ. ಯಡಿಯೂರಪ್ಪ ಇದ್ದರೆ ಲಿಂಗಾಯತ ಇರುತ್ತಾರೆ, ಇಲ್ಲದಿದ್ದರೆ ಇಡಿ ಕರ್ನಾಟಕ ಬಿಜೆಪಿ ಮುಳುಗುತ್ತದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿಗಳು ಹೇಳುವುದನ್ನು ನಂಬಿ ಪಿಎಂ
ಮೋದಿ, ಅಮೀತ್ ಶಾ, ಬಿಜೆಪಿ ಹೈಕಮಾಂಡ್ ಕಣ್ಣು ಮುಚ್ಚಬಾರದು ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ವಿವಾಹ ವದಂತಿಗೆ ಸ್ಪಷ್ಟನೆ ಕೊಟ್ಟ ಅನುಷ್ಕಾ ಶೆಟ್ಟಿ

ಇತ್ತೀಚೆಗೆ ಸ್ಟಾರ್ ನಾಯಕಿ ಅನುಷ್ಕಾ ಶೆಟ್ಟಿ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಬಹುನಿರೀಕ್ಷಿತ ‘ಘಾಟಿ’ ಬಾಕ್ಸ್ ಆಫೀಸ್‌ನಲ್ಲಿ ಹೀನಾಯವಾಗಿ ಸೋತಿತು. ಅನುಷ್ಕಾ ತಂಡದಿಂದ ಅವರ ಮುಂದಿನ ಯೋಜನೆಯ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಸಿನಿಮಾ ಹೊರತಾಗಿ ಸ್ವೀಟಿ ಅವರ ಮದುವೆಯ ವದಂತಿಗಳಿಗಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಹಿಂದೆ ಅವರ ಮದುವೆಯ ಬಗ್ಗೆ ಅನೇಕ ವದಂತಿಗಳು ಬಂದಿವೆ. ಉದ್ಯಮಿ, ಹೀರೋದಿಂದ ಅವರ ವಿವಾಹದ ವದಂತಿಗಳು ಇದ್ದವು. ಆದರೆ ಅದರಲ್ಲಿ ಯಾವುದೇ ಸತ್ಯವಿಲ್ಲ ಎಂದು ಸ್ಪಷ್ಟವಾಗಿದೆ.

ಈಗ, ಅನುಷ್ಕಾ ಉದ್ಯಮಿಯನ್ನು ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಹುಟ್ಟಿಕೊಂಡಿವೆ. ಅನುಷ್ಕಾ ಹಿಂದೆ ಅಂತಹ ವದಂತಿಗಳಿಗೆ ಹೆಚ್ಚು ಪ್ರತಿಕ್ರಿಯಿಸಲಿಲ್ಲ. ಆದರೆ ಈಗ ಅವರು ತುಂಬಾ ಗಂಭೀರವಾಗಿದ್ದಾರೆ. ಅವರ ತಂಡವು ಅನುಷ್ಕಾ ಅವರ ಮದುವೆಯ ಸುದ್ದಿಯನ್ನು ನಿರಾಕರಿಸುವ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ.

‘ಯಾರದ್ದೋ ಜೀವನ. ನಿಜವೋ ಅಲ್ಲವೋ ಎಂದು ಪರಿಶೀಲಿಸುವ ಮೊದಲು ಸುದ್ದಿಯನ್ನಾಗಿ ಮಾಡುವುದಿಲ್ಲ. ಊಹಾಪೋಹ ಮಾಡುವುದು, ಭವಿಷ್ಯ ನುಡಿಯುವುದು ಮತ್ತು ಅನಧಿಕೃತ ಮಾಹಿತಿಯನ್ನು ಪದೇ ಪದೇ ಪ್ರಕಟಿಸುವುದು ಸರಿಯಲ್ಲ. ಅವರ ವಯಸ್ಸಿಗೆ ಅನಗತ್ಯ ಗಮನ ನೀಡುವುದು ಮತ್ತು ಪ್ರತಿ ಪೋಸ್ಟ್‌ನಲ್ಲಿ ’44’ ಸಂಖ್ಯೆಯನ್ನು ಯಾವುದೋ ವಿವಾದಾತ್ಮಕ ವಿಷಯದಂತೆ ಹೈಲೈಟ್ ಮಾಡುವುದು ಸರಿಯಲ್ಲ’ ಎಂದು ಅನುಷ್ಕಾ ತಂಡ ಹೇಳಿದೆ.

‘ನಟಿಯರಿಗೆ ವಯಸ್ಸು ಇಷ್ಟು ದೊಡ್ಡ ಸಮಸ್ಯೆಯಾಗಿದ್ದರೆ, ನಾಯಕರಿಗೆ ಏಕೆ ಅಷ್ಟು ಗಮನ ಕೊಡಲ್ಲ? ಮಹಿಳೆಯರಿಗೆ ಅದು ಏಕೆ ಭಿನ್ನವಾಗಿದೆ? ಅನುಷ್ಕಾ ಶೆಟ್ಟಿ ತಮ್ಮ ವೃತ್ತಿಜೀವನವನ್ನು ಪ್ರತಿಭೆ ಮತ್ತು ಘನತೆಯಿಂದ ನಿರ್ಮಿಸಿಕೊಂಡಿದ್ದಾರೆ. ಅವರು ಎಂದಿಗೂ ಪಿಆರ್ ಸ್ಟಂಟ್‌ಗಳನ್ನು ಅವಲಂಬಿಸಿಲ್ಲ’ ಎಂದು ಹೇಳಲಾಗಿದೆ.

ಇದನ್ನೂ ಓದಿ: ಅನುಷ್ಕಾ ಶೆಟ್ಟಿಗೆ ಕನ್ನಡದ ಮೇಲೆ ಇದೆ ವಿಶೇಷ ಪ್ರೀತಿ; ಇಲ್ಲಿದೆ ಉದಾಹರಣೆ

‘ಅನುಷ್ಕಾ ತಮ್ಮ ವೈಯಕ್ತಿಕ ಜೀವನವನ್ನು ಖಾಸಗಿಯಾಗಿಡಲು ಬಯಸುತ್ತಾರೆ. ಅಂತಹ ಮಹಿಳೆಯನ್ನು ಈ ರೀತಿ ಗುರಿಯಾಗಿಸಿಕೊಳ್ಳುವುದು ಅನ್ಯಾಯ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಏನಾಗುತ್ತಿದೆ ಎಂದು ಎಲ್ಲರಿಗೂ ಹೇಳಲು ಬಯಸುವುದಿಲ್ಲ. ಪ್ರತಿಯೊಬ್ಬರೂ ಆ ನಿರ್ಧಾರವನ್ನು ಗೌರವಿಸಬೇಕು. ಮದುವೆ ವೈಯಕ್ತಿಕ ವಿಷಯ. ಇದು ಬ್ರೇಕಿಂಗ್ ನ್ಯೂಸ್ ಅಲ್ಲ. ಇದು ಟ್ರೆಂಡ್ ಅಲ್ಲ. ಜವಾಬ್ದಾರಿಯುತವಾಗಿರಿ. ಗಡಿಗಳನ್ನು ಗೌರವಿಸಿ. ಪ್ರಕಟಿಸುವ ಮೊದಲು, ಅದು ನಿಜವೋ ಸುಳ್ಳೋ ಎಂದು ಖಚಿತಪಡಿಸಿಕೊಳ್ಳಿ. ನಾಯಕಿಯರೊಂದಿಗೆ ನಾಯಕಿಯರನ್ನು ಸಮಾನವಾಗಿ ಗೌರವಿಸಿ’ ಎಂದು ಅನುಷ್ಕಾ ತಂಡ ಬಲವಾದ ಎಚ್ಚರಿಕೆ ನೀಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

Source link

Video: ಸೊಸೆ ಕೈ ಮುರಿದಿದೆ ಕಷ್ಟವಾಗುತ್ತೆಂದು ರೊಟ್ಟಿ ಲಟ್ಟಿಸಿಕೊಟ್ಟ ಮಾವ

ಈ ವಿಡಿಯೋ ನೋಡಿದಾಗ ಮಾವ-ಸೊಸೆ ಹೀಗಿರಬೇಕೆಂದು ಹೇಳುವುದು ಪಕ್ಕಾ, ಸೊಸೆಯ ಕೈ ಮುರಿದಿದೆ ಕಷ್ಟವಾಗುತ್ತೆಂದು ಮಾವ ಆಕೆಗೆ ರೊಟ್ಟಿ ಒರೆದುಕೊಟ್ಟಿರುವ ವಿಡಿಯೋ ವೈರಲ್ ಆಗಿದೆ. ಮಾವ ಮಾಡಿಕೊಟ್ಟರೆ ಮತ್ತೊಂದೆಡೆ ಸೊಸೆ ಅದನ್ನು ಕಾವಲಿ ಮೇಲೆ ಬೇಯಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಮಾವನಿಗೆ ನಿಲ್ಲಲಾಗದಷ್ಟು ವಯಸ್ಸಾಗಿದ್ದರೂ ಕೂಡ ಸೊಸೆ ಮೇಲಿನ ಕಾಳಜಿಯಿಂದ ಊಟಕ್ಕೆ ಸಹಾಯ ಮಾಡಿದ್ದಾರೆ.ಈ ವಿಡಿಯೋ ನೋಡಿದ ನಂತರ, ವೀಡಿಯೊವನ್ನು ಯಾರು ಚಿತ್ರೀಕರಿಸುತ್ತಿದ್ದಾರೆ ಮತ್ತು ಅವರು ರೊಟ್ಟಿಗೆ ಏಕೆ ಸಹಾಯ ಮಾಡುತ್ತಿಲ್ಲ ಎಂಬ ಪ್ರಶ್ನೆಗಳನ್ನು ಜನರು ಎತ್ತಿದ್ದಾರೆ. ಅದೇನೆ ಆಗಲಿ ಎಲ್ಲಾ ಮನೆಯಲ್ಲೂ ಮಾವ-ಸೊಸೆ ಇದೇ ರೀತಿ ಇದ್ದರೆ ಮನೆಯಲ್ಲಿ ಸುಖ, ಶಾಂತಿ ನೆಲೆಸಿರುತ್ತದೆ ಎಂದು ಜನರು ಕಮೆಂಟ್ ಮಾಡಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ದಾವಣಗೆರೆ ಬೈ ಎಲೆಕ್ಷನ್: ಬಿಎಸ್​​ವೈ ಬಣಕ್ಕೆ ತೀವ್ರ ಮುಖಭಂಗ, ಮೇಲುಗೈ ಸಾಧಿಸಿದ ಮಾಜಿ ಎಂಪಿ

ದಾವಣಗೆರೆ, (ಮಾರ್ಚ್ 19): ಕರ್ನಾಟಕದ ಎರಡು ವಿಧಾನಸಭಾ ಉಪಚುನಾವಣೆಗೆ (Davanagere By Election ) ಬಿಜೆಪಿಯ ಕೇಂದ್ರೀಯ ಆಯ್ಕೆ ಸಮಿತಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಯುಗಾದಿಯ ದಿನದಂದು, ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ದಾವಣಗೆರೆಯಲ್ಲಿ ಅಚ್ಚರಿಯ ಅಭ್ಯರ್ಥಿಯ ಘೋಷಣೆ ಮಾಡಲಾಗಿದೆ. ದಾವಣಗೆರೆ ದಕ್ಷಿಣದಿಂದ ಶ್ರೀನಿವಾಸ ಟಿ ದಾಸಕರಿಯಪ್ಪ (Srinivas Dasakariyappa) ಅವರಿಗೆ ಟಿಕೆಟ್ ನೀಡಲಾಗಿದೆ. ಈ ಮೂಲಕ ದಾವಣಗೆರೆ ರೆಬೆಲ್ ಬಣದ ಅಭ್ಯರ್ಥಿಗೆ ಮಣೆ ಹಾಕಿದ್ದು, ರಾಜ್ಯ ಬಿಜೆಪಿ ಘಟಕಕ್ಕೆ ಕೇಂದ್ರದ ನಾಯಕರು ಅಚ್ಚರಿಯನ್ನು ಮೂಡಿಸಿದ್ದಾರೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ವಿರೋಧಿ ಬಣದ ನಾಯಕನಿಗೆ ಟಿಕೆಟ್ ನೀಡಿರುವುದು ಭಾರೀ ಸಂಚಲನಕ್ಕೆ ಕಾರಣವಾಗಿದೆ. ಇನ್ನು ತಮ್ಮದೇ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಬಿಎಸ್​​ವೈ ಬಣದ ನಾಯಕ ಎಂಪಿ ರೇಣುಕಾಚಾರ್ಯಗೆ ಮುಖಂಭಂಗವಾಗಿದೆ.

ಬಿಜೆಪಿ ಬಿಗ್ ಸರ್ಪ್ರೈಸ್

ಬಾಗಲಕೋಟೆಯಲ್ಲಿ ಅಭ್ಯರ್ಥಿ ಆಯ್ಕೆಯ ವಿಚಾರದಲ್ಲಿ ಬಿಜೆಪಿಯಲ್ಲಿ ಅಷ್ಟೊಂದು ಗೊಂದಲವಿರಲಿಲ್ಲ. ಲಿಂಗಾಯತ ಸಮುದಾಯದ ಚರಂತಿಮಠ ಅವರಿಗೆ ಟಿಕೆಟ್ ಬಹುತೇಕ ಕನ್ಫರ್ಮ್ ಆಗಿತ್ತು. ಆದರೆ, ದಾವಣಗೆರೆಗೆ ಬಿಜೆಪಿಯ ಎರಡು ಬಣಗಳ ಪೈಪೋಟಿ ಜೋರಾಗಿತ್ತು ಮತ್ತು ಐವರು ಹೆಸರು ಕೇಳಿ ಬರುತ್ತಿತ್ತು.ಬಿಜಿ ಅಜಯ್ ಕುಮಾರ್, ರಾಜನಹಳ್ಳಿ ಶಿವಕುಮಾರ್, ಶ್ರೀನಿವಾಸ ದಾಸ ಕರಿಯಪ್ಪ, ದೇವರಮನೆ ಶಿವಕುಮಾರ್ ಮತ್ತು ಯಶ್ವಂತ್ ರಾವ್ ಜಾಧವ್ ಹೆಸರು ಕೇಳಿ ಬರುತ್ತಿತ್ತು. ಈ ಪೈಕಿ, ಯುವ ನಾಯಕ ಅಜಯ್ ಕುಮಾರ್ ಅವರಿಗೆ ಬಹುತೇಕ ಟಿಕೆಟ್ ಕನ್ಫರ್ಮ್ ಎಂದು ಹೇಳಲಾಗುತ್ತಿತ್ತು. ಆದ್ರೆ, ಕೊನೆ ಕ್ಷಣದಲ್ಲಿ ಹೈಕಮಾಂಡ್, ಈ ಕ್ಷೇತ್ರದಲ್ಲಿ ಪ್ರಬಲವಾಗಿರುವ ಲಿಂಗಾಯತ ಅಥವಾ ಮರಾಠ ಸಮುದಾಯದ ನಾಯಕರಿಗೆ ಟಿಕೆಟ್ ನೀಡುವ ಪದ್ಧತಿಯನ್ನು ಬದಿಗೊತ್ತಿ, ಇದೇ ಮೊದಲ ಬಾರಿಗೆ ಪರಿಶಿಷ್ಟ ಪಂಗಡದ (ST) ನಾಯಕ ಶ್ರೀನಿವಾಸ್ ಟಿ ದಾಸಕರಿಯಪ್ಪ ಅವರಿಗೆ ಟಿಕೆಟ್ ನೀಡಿದೆ. ಇದರೊಂದಿಗೆ ಅತಿ ಹೆಚ್ಚು ಕುತೂಹಲ ಕೆರಳಿಸಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಬಿಗ್ ಸರ್ಪ್ರೈಸ್ ನೀಡಿದೆ.

ಇದನ್ನೂ ಓದಿ: ದಾವಣಗೆರೆ ಬೈ ಎಲೆಕ್ಷನ್: ಇಬ್ಬರ ಜಗಳದಲ್ಲಿ 3ನೇ ವ್ಯಕ್ತಿಗೆ ಟಿಕೆಟ್, ಬಿಜೆಪಿಯಲ್ಲಿ ಸಂಚಲನ

ಬಿಎಸ್​​ವೈ ವಿರೋಧಿ ಬಣದ ಮೇಲುಗೈ

ರಾಜ್ಯ ಎಸ್‌ಟಿ ಮೋರ್ಚಾ ಉಪಾಧ್ಯಕ್ಷರಾಗಿರುವ ಶ್ರೀನಿವಾಸ್ ಕಳೆದ ಹಲವು ಚುನಾವಣೆಗಳಲ್ಲಿ ಟಿಕೆಟ್ ಸಿಗದೆ ಅಸಮಾಧಾನಗೊಂಡಿದ್ದರು. ಈ ಬಾರಿ ಪಕ್ಷೇತರರಾಗಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಇದನ್ನು ಮನಗಂಡ ಹೈಕಮಾಂಡ್ ಬಂಡಾಯ ತಡೆಯಲು ಅವರಿಗೆ ಮನ್ನಣೆ ನೀಡಿದೆ. ಮುಖ್ಯವಾಗಿ ಮಾಜಿ ಸಿಎಂ ಬಿಎಸ್​​ ಯಡಿಯೂರಪ್ಪ ವಿರೋಧಿ ಬಣದ ಮಾಜಿ ಸಂಸದ ಸಿದ್ದೇಶ್ವರ್ ತಂಡದಲ್ಲಿ ಗುರುತಿಸಿಕೊಂಡಿದ್ದರು.

ಯುವ ನಾಯಕ ಅಜಯ್ ಕುಮಾರ್ ಅವರಿಗೆ ಟಿಕೆಟ್ ನೀಡಬೇಕೆಂದು ಬಿಎಸ್​​​ವೈ ಬಣದ ರೇಣುಕಾಚಾರ್ಯ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರಿಗೆ ಮನವಿ ಮಾಡಿದ್ದರು. ಹೀಗಾಗಿ ಎಷ್ಟೇ ಆಗಲಿ ಯಡಿಯೂರಪ್ಪ ಸಿನೀಯರ್ ಲೀಡರ್. ಇದರಿಂದ ಹೈಕಮಾಂಡ್, ಅಜಯ್ ಕುಮಾರ್ ಅವರಿಗೆ ಮಣೆ ಹಾಕುತ್ತೆ ಎಂದು ಹೇಳಲಾಗಿತ್ತು. ಆದ್ರೆ, ಕೊನೆ ಕ್ಷಣದಲ್ಲಿ ಬಿಎಸ್​ವೈ ವಿರೋಧಿ ಸಿದ್ದೇಶ್ವರ್ ಬಣದ ನಾಯಕನಿಗೆ ಹೈಕಮಾಂಡ್ ಮಣೆ ಹಾಕಿರುವುದು ಅಚ್ಚರಿಕೆ ಕಾರಣವಾಗಿದೆ.

ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಂಸದ ಜಿಎಂ ಸಿದ್ದೇಶ್ವರ್ ನೇತೃತ್ವದ ಬಣ ಯರಿಯೂರಪ್ಪನವರ ವಿರೋಧಿ ಬಣವಾಗಿತ್ತು. ವಿಜಯೇಂದ್ರ ನಡೆಸುವ ಕಾರ್ಯಚಟುವಟಿಗಳಿಂದ ಸಿದ್ದೇಶ್ವರ್- ಯತ್ನಾಳ್ ಬಣ ಹಾಜರಾಗುತ್ತಿರಲಿಲ್ಲ. ಸಾಲದಕ್ಕೆ ಸಿದ್ದೇಶ್ವರ್ ಆಗಲಿ ಯತ್ನಾಳ್ ಬಹಿರಂಗವಾಗಿಯೇ ಯಡಿಯೂರಪ್ಪ ಕುಟುಂಬದ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಇದೀಗ ದಾವಣಗೆರೆ ಕ್ಷೇತ್ರದ ಟಿಕೆಟ್ ವಿಚಾರದಲ್ಲೂ ಸಹ ಬಿಎಸ್​​ವೈ ಆಪ್ತ ರೇಣುಕಾಚಾರ್ಯ ತನ್ನ ಬಣ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದರು. ಸಾಲದಕ್ಕೆ ದೆಹಲಿಗೆ ತೆರಳಿ ನಾಯಕರನ್ನು ಭೇಟಿ ಮಾಡಿ ಬಂದಿದ್ದರು. ಆದ್ರೆ, ಅಂತಿಮವಾಗಿ ಹೈಕಮಾಂಡ್ ಸಿದ್ದೇಶ್ವರ ಬಣದಲ್ಲಿ ಗುರುತಿಸಿಕೊಂಡಿದ್ದ ಶ್ರೀನಿವಾಸ್ ಅವರಿಗೆ ಟಿಕೆಟ್ ನೀಡಿದೆ. ಹೀಗಾಗಿ ಬಿಎಸ್​ಐ ಬಣದ ಕ್ಯಾಪ್ಟರ್ ಎಂಪಿ ರೇಣುಕಾಚಾರ್ಯ ಲೆಕ್ಕಾಚಾರವೆಲ್ಲ ತಲೆಕೆಳಗಾಗಿವೆ.

2024ರ ಲೋಕಸಭೆ ಚುನಾವಣೆ ವೇಳೆ ಜಿ.ಎಂ.ಸಿದ್ದೇಶ್ವರ್ ವಿರುದ್ಧ ಯಡಿಯೂರಪ್ಪ, ವಿಜಯೇಂದ್ರ ಆಪ್ತ ವಲಯದಲ್ಲಿರುವ ರೇಣುಕಾಚಾರ್ಯ ಗುಂಪುಕಟ್ಟಿಕೊಂಡು ಓಡಾಡಿದ್ದರು. ಇದು ಸಿದ್ದೇಶ್ವರ್ ಪತ್ನಿ ಸೋಲಿಗೆ ಕಾರಣವಾಯ್ತು. ಹೀಗಾಗಿ ಸಿದ್ದೇಶ್ವರ್ ಕಣ್ಣುಕೆಂಪಾಗಿಸಿದ್ದು, ಅಂದಿನಿಂದ ಸಿದ್ದೇಶ್ವರ್ ಬಿಎಸ್​ವೈ ಕುಟುಂಬ ಹಾಗೂ ರೇಣುಕಾಚಾರ್ಯ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸುತ್ತಲೇ ಬಂದಿದ್ದಾರೆ. ಅಲ್ಲದೇ ಬಿಎಸ್​ವೈ ವಿರೋಧಿ ಬಣ ಕಟ್ಟಿ ತೊಡೆತಟ್ಟಿದ್ದಾರೆ. ಇದೀಗ ರೇಣುಕಾಚಾರ್ಯ ತಮ್ಮ ಆಪ್ತ ಬಿ.ಜಿ.ಅಜಯ್ ಕುಮಾರ್​​ಗೆ ಟಿಕೆಟ್ ತಪ್ಪಿಸುವ ಮೂಲಕ ಸಿದ್ದೇಶ್ವ ರ್ ದಾವಣಗೆರೆ ಬಿಜೆಪಿ ಘಟಕ ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ.

ಆದ್ರೆ ಉಪಚುನಾವಣೆ ಫಲಿತಾಂಶ ಏನಾಗಲಿದೆ ಎನ್ನುವುದು ಕಾದುನೋಡಬೇಕಿದೆ.

Source link

ಈ ಫಂಡ್​ನಲ್ಲಿ 10,000 ರೂ ಎಸ್​ಐಪಿ; 21 ವರ್ಷದಲ್ಲಿ ಬರೋಬ್ಬರಿ 2 ಕೋಟಿ ರೂ ರಿಟರ್ನ್ಸ್

ಸದ್ಯ ಷೇರು ಮಾರುಕಟ್ಟೆ ಕಳೆದ ಒಂದು ವರ್ಷದಿಂದ ಅಲ್ಪ ಹಿನ್ನಡೆಯಲ್ಲಿದೆ. ಆದರೆ, ದೀರ್ಘಾವಧಿಯಲ್ಲಿ ಮಾರುಕಟ್ಟೆ ಬೆಳವಣಿಗೆ ಉತ್ತಮವಾಗಿರುತ್ತದೆ. ಅಂತೆಯೇ, ಮ್ಯೂಚುವಲ್ ಫಂಡ್​ಗಳೂ ಕೂಡ ದೀರ್ಘಾವಧಿಯಲ್ಲಿ ಸ್ಥಿರವಾಗಿ ರಿಟರ್ನ್ಸ್ ತರಬಲ್ಲುವು. ಕೆನರಾ ರೊಬೇಕೊ ಲಾರ್ಜ್ ಅಂಡ್ ಮಿಡ್​ಕ್ಯಾಪ್ ಫಂಡ್ (Canara Robeco Large and Mid Cap Fund) ಇದಕ್ಕೆ ಉತ್ತಮ ಉದಾಹರಣೆ. ಈ ಫಂಡ್ ಆರಂಭವಾಗಿ 21 ವರ್ಷ ಪೂರ್ಣವಾಗಿದೆ. 2005ರ ಮಾರ್ಚ್ 11ರಂದು ಶುರುವಾದ ಈ ಸ್ಕೀಮ್​ನಲ್ಲಿ ಈಗ ಇರುವ ಒಟ್ಟು ಹೂಡಿಕೆ ಹತ್ತಿರಹತ್ತಿರ 25,000 ಕೋಟಿ ರೂ. ಅತಿಹೆಚ್ಚು ಹೂಡಿಕೆದಾರರನ್ನು ಆಕರ್ಷಿಸಿದ ಫಂಡ್​ಗಳಲ್ಲಿ ಇದೂ ಒಂದು.

ಕೆನರಾ ರೊಬೆಕೋ ಲಾರ್ಜ್ ಅಂಡ್ ಮಿಡ್ ಕ್ಯಾಪ್ ಫಂಡ್ ಈ 21 ವರ್ಷದಲ್ಲಿ ಶೇ 16.46 ಸಿಎಜಿಆರ್​ನಲ್ಲಿ ಲಾಭ ತಂದಿದೆ. ಇದೇ ವೇಳೆ, ಈ ವಿಭಾಗದಲ್ಲಿ ಬೆಂಚ್​ಮಾರ್ಕ್ ಎನಿಸಿರುವ ನಿಫ್ಟಿ ಲಾರ್ಜ್​ಮಿಡ್​ಕ್ಯಾಪ್ 250 ಟಿಆರ್​ಐಗೆ ಹೋಲಿಸಿದರೆ ತುಸು ಕಡಿಮೆ ರಿಟರ್ನ್ಸ್ ತಂದಿದೆ. ಆದರೆ, ಬಿಎಸ್​ಇ ಸೆನ್ಸೆಕ್ಸ್ ಟಿಆರ್​ಐ ಬೆಂಚ್​ಮಾರ್ಕ್ ಶೇ. 14.04 ರಿಟರ್ಸ್ ಕೊಟ್ಟಿದೆ. ಇದಕ್ಕೆ ಹೋಲಿಸಿದರೆ ಕೆನರಾ ರೊಬೆಕೊದ ಈ ಫಂಡ್ ಸಾಧನೆ ಉತ್ತಮವಾಗಿದೆ.

ಇದನ್ನೂ ಓದಿ: ಶೂನ್ಯದಿಂದ ಆಸ್ತಿ ಸಂಪಾದನೆ ಮಾಡುವುದು ಹೇಗೆ? ಇಲ್ಲಿದೆ ತಿಳಿದಿರಬೇಕಾದ ಸಂಗತಿಗಳು

21 ವರ್ಷದಿಂದ 10,000 ರೂ ಎಸ್​ಐಪಿ ಮಾಡಿದರೆ?

2005ರಲ್ಲಿ ಕೆನರಾ ರೊಬೆಕೊ ಲಾರ್ಜ್ ಮಿಡ್ ಕ್ಯಾಪ್ ಫಂಡ್ ಆರಂಭವಾದಾಗ ಅದರಲ್ಲಿ ನೀವು ಹೂಡಿಕೆ ಮಾಡಿದ್ದರೆ ಅದು 21 ವರ್ಷದ ಸುದೀರ್ಘ ಹೂಡಿಕೆಯಾಗಿರುತ್ತಿತ್ತು. ಒಂದು ವೇಳೆ ಅಂದು ನೀವು 10,000 ರೂ ಅನ್ನು ಲಂಪ್ಸಮ್ ಆಗಿ ಹೂಡಿಕೆ ಮಾಡಿದ್ದರೆ ಇವತ್ತು ಅದರ ಮೌಲ್ಯ ಎರಡೂವರೆ ಲಕ್ಷ ರೂ ಆಸುಪಾಸಿನಷ್ಟು ಇರುತ್ತಿತ್ತು.

ಒಂದು ವೇಳೆ ನೀವು 10,000 ರೂಗಳ ಮಾಸಿಕ ಎಸ್​ಐಪಿ ಆರಂಭಿಸಿದ್ದರೆ, ಇವತ್ತು ನೀವು ಪಾವತಿಸಿದ ಹಣ ಸುಮಾರು 25 ಲಕ್ಷ ರೂನಷ್ಟಿರುತ್ತಿತ್ತು. ಆ ಹೂಡಿಕೆ ಮೌಲ್ಯ ಬಹುತೇಕ 2 ಕೋಟಿ ರೂ ಸಮೀಪ ಇರುತ್ತಿತ್ತು. ಇದು ಈ ಫಂಡ್ ಈವರೆಗೆ ಕೊಟ್ಟಿರುವ ಸರಾಸರಿ ರಿಟರ್ನ್ಸ್ ಆಧಾರದ ಮೇಲೆ ಮಾಡಿರುವ ಲೆಕ್ಕಾಚಾರ.

ಇದನ್ನೂ ಓದಿ: ಹೂಡಿಕೆಗೆ ಯಾವ ರೀತಿಯ ಮ್ಯೂಚುವಲ್ ಫಂಡ್​ಗಳನ್ನು ಆಯ್ದುಕೊಳ್ಳಬೇಕು? ಗಮನಿಸಬೇಕಾದ ಅಂಶಗಳಿವು

ಹಣದ ಕಾಂಪೌಂಡಿಂಗ್ ಎಫೆಕ್ಟ್

ನೀವು ಕೆನರಾ ರೊಬೆಕೊ ಲಾರ್ಜ್ ಅಂಡ್ ಮಿಡ್ ಕ್ಯಾಪ್ ಫಂಡ್​ನಲ್ಲಿ ಈ 21 ವರ್ಷ ಕಾಲ ಮಾಡಿಕೊಂಡು ಬಂದಿರುವ 10,000 ರೂಗಳ ಎಸ್​ಐಪಿಯನ್ನು ಇನ್ನೂ 4 ವರ್ಷ ಮುಂದುವರಿಸಿದ್ದೇ ಆದಲ್ಲಿ ಎರಡು ಕೋಟಿ ರೂ ಹಣ ಡಬಲ್ ಆಗಿ 4 ಕೋಟಿ ರೂ ದಾಟುತ್ತದೆ. ನಿಮ್ಮ ಹೂಡಿಕೆ ದೀರ್ಘಾವಧಿಯಾದಷ್ಟೂ ನಿಮಗೆ ಪ್ರತಿಫಲ ಭರ್ಜರಿಯಾಗಿಯೇ ಇರುತ್ತದೆ ಎನ್ನುವುದಕ್ಕೆ ಒಂದು ಉದಾಹರಣೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದಲ್ಲಿ ಹೇಗಿದೆ ‘ಧುರಂಧರ್ 2’ ಹವಾ? ಗಳಿಕೆ ಎಷ್ಟು?

ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್ 2’ ಸಿನಿಮಾ ಇಂದು (ಮಾರ್ಚ್ 19) ಬಿಡುಗಡೆ ಆಗಿದೆ. ‘ಧುರಂಧರ್ 2’ ಸಿನಿಮಾ ಭಾರತದಾದ್ಯಂತ ಭಾರಿ ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ. ಕರ್ನಾಟಕದಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗಿದೆ. ಅದರಲ್ಲೂ ನಿನ್ನೆಯೇ (ಮಾರ್ಚ್ 18) ಪೇಯ್ಡ್ ಪ್ರೀಮಿಯರ್ ಶೋಗಳು ಸಹ ಪ್ರದರ್ಶನಗೊಂಡಿದ್ದು, ದುಬಾರಿ ಬೆಲೆಗೆ ಟಿಕೆಟ್​​ಗಳನ್ನು ಸಹ ಮಾರಾಟ ಮಾಡಲಾಗಿತ್ತು. ಹಾಗಿದ್ದರೂ ಸಹ ಬಹುತೇಕ ಶೋಗಳು ಹೌಸ್​​ಫುಲ್ ಆಗಿದ್ದು, ಬೆಂಗಳೂರಿನಲ್ಲಿ ಭರ್ಜರಿ ಕಲೆಕ್ಷನ್ ಅನ್ನೇ ಸಿನಿಮಾ ಮಾಡಿದೆ.

ಕರ್ನಾಟಕದಲ್ಲಿ ‘ಧುರಂಧರ್ 2’ ಸಿನಿಮಾಕ್ಕೆ ಭರ್ಜರಿ ಪ್ರತಿಕ್ರಿಯೆ ದೊರೆತಿದ್ದು, ನಿನ್ನೆ ಸಂಜೆಯ ಪೇಯ್ಡ್ ಪ್ರೀಮಿಯರ್ ನೋಡಿದವರು ಹಾಗೂ ಇಂದು ಬೆಳಿಗ್ಗೆ ಶೋ ನೋಡಿದವರು ಧನಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಸಿನಿಮಾ ವೀಕ್ಷಿಸಿದ ಕೆಲವರಂತೂ ‘ಧುರಂಧರ್’ ಪಾರ್ಟ್ 1 ಗಿಂತಲೂ ‘ಧುರಂಧರ್ 2’ ಸಿನಿಮಾ ಇನ್ನೂ ಚೆನ್ನಾಗಿದೆ ಎಂಬ ಅಭಿಪ್ರಾಯವನ್ನು ಸಹ ವ್ಯಕ್ತಪಡಿಸಿದ್ದಾರೆ. ‘ಧುರಂಧರ್ 2’ ಬಗ್ಗೆ ಒಳ್ಳೆಯ ಟ್ವಿಟ್ಟರ್ ವಿಮರ್ಶೆಗಳು ಸಹ ವ್ಯಕ್ತವಾಗಿವೆ.

ಬೆಂಗಳೂರು ಒಂದರಲ್ಲೇ ನಿನ್ನೆ ಅಂದರೆ ಮಾರ್ಚ್ 18ರಂದು ಸುಮಾರು 150 ಪೇಯ್ಡ್ ಪ್ರೀಮಿಯರ್ ಶೋಗಳನ್ನು ಪ್ರದರ್ಶಿಸಲಾಗಿದೆ. ಬೆಂಗಳೂರು ಮಾತ್ರವೇ ಅಲ್ಲದೆ ರಾಜ್ಯದ ಇನ್ನೂ ಕೆಲವು ಪ್ರಮುಖ ನಗರಗಳಲ್ಲಿ ಸಹ ಪೇಯ್ಡ್ ಪ್ರೀಮಿಯರ್ ಶೋಗಳು ಪ್ರದರ್ಶನಗೊಂಡಿದ್ದು, ನಿನ್ನೆಯ ಪೇಯ್ಡ್ ಪ್ರೀಮಿಯರ್ ಶೋಗಳಿಂದಲೇ ಸುಮಾರು 6 ಕೋಟಿ ರೂಪಾಯಿ ಹಣವನ್ನು ‘ಧುರಂಧರ್ 2’ ಸಿನಿಮಾ ಕಲೆಕ್ಷನ್ ಮಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ;ಮತ್ತೆ ಬಂತು ಬೆದರಿಕೆ: ರಣ್ವೀರ್ ಸಿಂಗ್-ದೀಪಿಕಾಗೆ ಭದ್ರತೆ ಹೆಚ್ಚಳ

ನಿನ್ನೆ ‘ಧುರಂಧರ್ 2’ ಸಿನಿಮಾದ ಕನ್ನಡ ಶೋಗಳನ್ನು ಸಹ ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅವು ರದ್ದಾದವು. ಹಾಗಿದ್ದರೂ ಸಹ ‘ಧುರಂಧರ್ 2’ ಸಿನಿಮಾ ಬೆಂಗಳೂರಿನಲ್ಲಿ ಭರ್ಜರಿ ಗಳಿಕೆಯನ್ನೇ ಮಾಡಿದೆ. ಇನ್ನು ದೇಶದಾದ್ಯಂತ ಕೇವಲ ಪೇಯ್ಡ್ ಪ್ರೀಮಿಯರ್​​​ಗಳಿಂದಲೇ ಸುಮಾರು 50 ರಿಂದ 60 ಕೋಟಿಗೂ ಹೆಚ್ಚು ಮೊತ್ತವನ್ನು ‘ಧುರಂಧರ್ 2’ ಸಿನಿಮಾ ಗಳಿಕೆ ಮಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

‘ಧುರಂಧರ್ 2’ ರಣ್ವೀರ್ ಸಿಂಗ್ ನಟನೆಯ ಸಿನಿಮಾ ಆಗಿದ್ದು, ಸಿನಿಮಾನಲ್ಲಿ ಅಕ್ಷಯ್ ಖನ್ನಾ, ಸಂಜಯ್ ದತ್, ಆರ್ ಮಾಧವನ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಆದಿತ್ಯ ಧರ್. ‘ಧುರಂಧರ್ 2’ ಸಿನಿಮಾ ಹಲವು ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದು ಹಾಕಲಿದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕೊನೆಗೂ ರಿಲೀಸ್ ಆಗ್ತಿದೆ ಸೂರ್ಯ ಸಿನಿಮಾ; ಈಗಾದ್ರೂ ಸಿಗುತ್ತಾ ಗೆಲುವು?

ತಮಿಳು ನಟ ಸೂರ್ಯ (Suriya) ಅವರು ಇತ್ತೀಚೆಗೆ ದೊಡ್ಡ ಗೆಲುವು ಕಂಡಿಲ್ಲ. ಅವರ ನಟನೆಯ ‘ಕರುಪ್ಪು’ ಚಿತ್ರ ಹಲವು ಸಮಯದಿಂದ ಮುಂದಕ್ಕೆ ಹೋಗುತ್ತಲೇ ಇತ್ತು. ಕೊನೆಗೂ ಅದಕ್ಕೆ ಬಿಡುಗಡೆ ಭಾಗ್ಯ ಸಿಕ್ಕಿದೆ. ‘ಕರುಪ್ಪು’ ಸಿನಿಮಾ ಮೇ 15ರಂದು ತೆರೆಗೆ ಬರುತ್ತಿದೆ. ಈಗ ಹೊಸ ಪೋಸ್ಟರ್ ಹಂಚಿಕೊಂಡು ಸಿನಿಮಾ ರಿಲೀಸ್ ದಿನಾಂಕವನ್ನು ರಿವೀಲ್ ಮಾಡಲಾಗಿದೆ. ಇದು ಅವರ ಅಭಿಮಾನಿಗಳ ಖುಷಿಗೆ ಕಾರಣ ಆಗಿದೆ.

2020ರಲ್ಲಿ ರಿಲೀಸ್ ಆದ ಸೂರ್ಯ ನಟನೆಯ ‘ಸೂರರೈ ಪೊಟ್ರು’ ಸಿನಿಮಾ ಮೆಚ್ಚುಗೆ ಪಡೆಯಿತು. ಇದಾದ ಬಳಿಕ ಅವರ ನಟನೆಯ ಯಾವ ಚಿತ್ರವೂ ಗೆದ್ದಿಲ್ಲ. ಹೀಗಾಗಿ ಅವರಿಗೆ ಒಂದು ದೊಡ್ಡ ಗೆಲುವಿನ ಅವಶ್ಯಕತೆ ಇದೆ. ಇದಕ್ಕಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. ‘ಕರುಪ್ಪು’ ಚಿತ್ರದ ಮೂಲಕ ಅವರಿಗೆ ಗೆಲುವು ಸಿಗುತ್ತದೆಯೇ ಎಂಬುದು ಸದ್ಯದ ಪ್ರಶ್ನೆ.ಈ ಸಿನಿಮಾ 2024ರಲ್ಲೇ ಘೋಷಣೆ ಆಗಿದೆ.

ಕಾಲಿವುಡ್​​ನಲ್ಲಿ ಸೂರ್ಯ ಅವರ ಹೈಪ್ ಕಡಿಮೆ ಆಗಿದೆ ಎಂಬ ಮಾತಿದೆ. ಈಗ ‘ಕರುಪ್ಪು’ ಸಿನಿಮಾ ಮೂಲಕ ಅವರು ಕಂಬ್ಯಾಕ್ ಮಾಡಿದರೆ ಬದಲಾವಣೆ ನಿರೀಕ್ಷಿಸಬಹುದು. ಆರ್​​ಜೆ ಬಾಲಾಜಿ ಅವರು ‘ಕರುಪ್ಪು’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಪ್ರಕಾಶ್ ಬಾಬು ಹಾಗೂ ಎಸ್​​ಆರ್​ ಪ್ರಭು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಶ್ವಿನ್ ರವಿಚಂದ್ರನ್, ರಾಹುಲ್ ರಾಜ್, ಗೋಪಿ ಕೃಷ್ಣನ್ ಮೊದಲಾದವರು ಸಿನಿಮಾಗೆ ಚಿತ್ರಕಥೆ ಬರೆದಿದ್ದಾರೆ. ಸಾಯಿ ಅಭಯಂಕರ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಇದನ್ನೂ ಓದಿ: ಹೊಳಪು ಕಳೆದುಕೊಂಡ ಸೂರ್ಯ? ಕೈಕೊಟ್ಟ ಮತ್ತೊಬ್ಬ ಸ್ಟಾರ್ ನಿರ್ದೇಶಕ

‘ಕರುಪ್ಪು’ ಸಿನಿಮಾ ರಿಲೀಸ್ ಆದ 20 ದಿನದ ಒಳಗೆ ‘ಟಾಕ್ಸಿಕ್’ ಸಿನಿಮಾ ತೆರೆಗೆ ಬರಲಿದೆ. ಹೀಗಾಗಿ, ಸಿನಿಮಾಗೆ ಸಿಕ್ಕ ಅವಧಿ ತುಂಬಾನೇ ಕಡಿಮೆ. ಅಷ್ಟು ಸಮಯದ ಒಳಗೆ ‘ಕರುಪ್ಪು’ ಚಿತ್ರ ಹಣವನ್ನು ಬಾಚಿಕೊಳ್ಳುವ ಅಗತ್ಯವಿದೆ.
ಸೂರ್ಯ ಅವರ ಜೊತೆ ಲೋಕೇಶ್ ಕನಗರಾಜ್ ಸಿನಿಮಾ ಮಾಡಬೇಕಿತ್ತು. ಅದು ಸಾಧ್ಯವಾಗಿಲ್ಲ. ವೆಟ್ರಿಮಾರನ್ ಜೊತೆ ಕೂಡ ಸೂರ್ಯ ಚಿತ್ರ ಮಾಡಬೇಕಿತ್ತು. ಅದು ಕೂಡ ಸಾಧ್ಯವಾಗಿಲ್ಲ. ಈಗ ‘ಕರುಪ್ಪು’ ಸಿನಿಮಾ ವಿಳಂಬ ಆಗಿತ್ತು. ಕೊನೆಗೂ ಚಿತ್ರ ರಿಲೀಸ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Ugadi Bhavishya 2026: ಯುಗಾದಿ ವರ್ಷ ಭವಿಷ್ಯ; ಈ ವರ್ಷ ಕುಂಭ ರಾಶಿಯವರಿಗೆ ಹೇಗಿರಲಿದೆ?

ಜ್ಯೋತಿಷಿ ಕೆ. ವೆಂಕಟೇಶ್ ಶರ್ಮಾ ಅವರು ಯುಗಾದಿ ಭವಿಷ್ಯ 2026 ರ ಕುರಿತು ಕುಂಭ ರಾಶಿಯವರ ಫಲಗಳನ್ನು ವಿವರಿಸಿದ್ದಾರೆ. ಕುಂಭ ರಾಶಿಯವರು ಸಾಡೇ ಸಾತಿಯ ಕೊನೆಯ ಹಂತದಲ್ಲಿದ್ದು, ಇನ್ನೂ ಸುಮಾರು ಎರಡು ವರ್ಷ ನಾಲ್ಕು ತಿಂಗಳುಗಳ ಕಾಲ ಅದರ ಪ್ರಭಾವವಿರುತ್ತದೆ. ಈ ಅವಧಿಯಲ್ಲಿ ಉದ್ಯೋಗ ಮತ್ತು ವ್ಯಾಪಾರದಲ್ಲಿ ಅನಿರೀಕ್ಷಿತ ಹಣಕಾಸಿನ ಲಾಭಗಳು ದೊರೆಯುವ ಸಾಧ್ಯತೆ ಇದೆ. ಕುಟುಂಬ ಮತ್ತು ಸ್ನೇಹಿತರಿಂದ ಉತ್ತಮ ಸಹಾಯ ಲಭ್ಯವಾಗಲಿದೆ. ಆರೋಗ್ಯದ ವಿಚಾರದಲ್ಲಿ ರಕ್ತ ಸಂಬಂಧಿ ಕಾಯಿಲೆಗಳು ಮತ್ತು ಅಪಘಾತಗಳ ಬಗ್ಗೆ ಎಚ್ಚರಿಕೆ ವಹಿಸುವುದು ಮುಖ್ಯ. ಚಾಕು, ರೇಷ್ಮೆ ಕೆಲಸದಂತಹ ತೀಕ್ಷ್ಣ ವಸ್ತುಗಳ ಬಳಕೆಯಲ್ಲಿ ಜಾಗರೂಕರಾಗಿರಿ.

ಅನುಕೂಲಕ್ಕಾಗಿ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವ ಯೋಗವಿದೆ. ರಾಹು ದೋಷ ನಿವಾರಣೆಗೆ ಮಂಗಳವಾರದಂದು ಲಕ್ಷ್ಮೀನೃಸಿಂಹ ಆರಾಧನೆ ಮಾಡಿ. ಶನಿ ಪ್ರಭಾವದಿಂದ ವ್ಯಾಧಿ ಮತ್ತು ಶತ್ರುಭಯ ಎದುರಾಗಬಹುದಾಗಿದ್ದು, ಎಳ್ಳು ದಾನ ಮತ್ತು ಆಂಜನೇಯ ಪ್ರಾರ್ಥನೆ ಮಾಡಬೇಕು. “ಓಂ ಕ್ರಾಂ ಕ್ರೀಂ ಕ್ರೌಂ ಸಃ ಶನಿದೇವಾಯ ನಮಃ” ಅಥವಾ “ಓಂ ಪ್ರಾಂ ಪ್ರೀಂ ಪ್ರೌಂ ಸಃ ಶಂ ಶನಯೇ ನಮಃ” ಮಂತ್ರಗಳನ್ನು ಜಪಿಸುವುದು ಪರಿಹಾರ ತರುತ್ತದೆ. ಬುಧವಾರ, ಶುಕ್ರವಾರ, ಶನಿವಾರಗಳು ಶುಭದಾಯಕ. ನೀಲಿ, ಹಸಿರು, ಹಳದಿ ಶುಭ ವರ್ಣಗಳು. ಪಶ್ಚಿಮ ದಿಕ್ಕು ಮತ್ತು 4, 5, 6, 8 ಶುಭ ಸಂಖ್ಯೆಗಳಾಗಿವೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

 

ಇದನ್ನೂ ಓದಿ: ಯುಗಾದಿ ಬಳಿಕ 1 ವರ್ಷ ಈ ರಾಶಿಗೆ ಸಾಕಷ್ಟು ಅದೃಷ್ಟ ಕೂಡಿಬರಲಿದೆ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಪುಂಡರ ಅಟ್ಟಹಾಸ ನೋಡಿ! ರಂಜಾನ್ ಉಪವಾಸದ ಲಾಂಗ್ ಡ್ರೈವ್ ಹೆಸರಲ್ಲಿ ಬಂದು ಚೆನ್ನೈ ಎಕ್ಸ್​ಪ್ರೆಸ್ ವೇನಲ್ಲಿ ವ್ಹೀಲಿಂಗ್

ದೇವನಹಳ್ಳಿ, ಮಾರ್ಚ್​ 19: ರಂಜಾನ್ ಉಪವಾಸದ ಲಾಂಗ್ ಡ್ರೈವ್ ಹೆಸರಿನಲ್ಲಿ ಬಂದ ಕೆಲ ಯುವಕರು ಚೆನ್ನೈ ಎಕ್ಸ್‌ಪ್ರೆಸ್‌ವೇನಲ್ಲಿ ಡೆಡ್ಲಿ ವ್ಹೀಲಿಂಗ್ ಮಾಡಿ ಅಟ್ಟಹಾಸ ಮೆರೆದ ಘಟನೆ ಬೆಳಕಿಗೆ ಬಂದಿದೆ. ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟುಮಾಡುವ ರೀತಿಯಲ್ಲಿ ಹೆದ್ದಾರಿಯ ಮಧ್ಯೆಯೇ ಗುಂಪು ಗುಂಪಾಗಿ ಬೈಕ್‌ಗಳನ್ನು ನಿಲ್ಲಿಸಿ ವ್ಹೀಲಿಂಗ್ ಮಾಡಿರುವುದು ಆತಂಕಕ್ಕೆ ಕಾರಣವಾಗಿದೆ. ಮುಂಜಾನೆ ಹೊಸಕೋಟೆ ಸಮೀಪದ ಚೆನ್ನೈ ಎಕ್ಸ್‌ಪ್ರೆಸ್‌ವೇನಲ್ಲಿ ಈ ಘಟನೆ ನಡೆದಿದ್ದು, ವಾಹನಗಳ ಸಂಚಾರ ಮಧ್ಯೆಯೇ ಒಂದೇ ರಸ್ತೆಯಲ್ಲಿ ಎರಡೂ ಕಡೆಯಿಂದ ವ್ಹೀಲಿಂಗ್ ನಡೆಸಲಾಗಿದೆ. ಕೆಲವರು ಆಟೋ, ಆರ್‌ಎಕ್ಸ್ ಮತ್ತು ಡಿಯೋ ಬೈಕ್‌ಗಳಲ್ಲಿ ಅಪಾಯಕಾರಿಯಾಗಿ ಸ್ಟಂಟ್ ಮಾಡಿ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಮಾಹಿತಿ ಪಡೆದ ಹೊಸಕೋಟೆ ಸಂಚಾರಿ ಪೊಲೀಸರು ಸ್ಥಳಕ್ಕೆ ಧಾವಿಸಿದ ವೇಳೆ, ಕೆಲವರು ಬೈಕ್‌ಗಳನ್ನು ಬಿಟ್ಟು ಪರಾರಿಯಾಗಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು 7 ಬೈಕ್‌ಗಳು, 2 ಕಾರುಗಳನ್ನು ವಶಕ್ಕೆ ಪಡೆದು, ಐದು ಮಂದಿಯನ್ನು ಬಂಧಿಸಿದ್ದಾರೆ.

ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಪುಂಡರು ಚಿತ್ರೀಕರಿಸಿದ ವಿಡಿಯೋಗಳ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಈ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೌದೆ ಒಲೆಯಲ್ಲಿ ಸಿದ್ಧವಾಗುತ್ತಿದೆ ಬಿಸಿ ಬಿಸಿ ಹೋಳಿಗೆ! ಮಲ್ಲೇಶ್ವರಂನಲ್ಲಿ ಕಿಲೋಮೀಟರ್ ಉದ್ದದ ಕ್ಯೂ

ಬೆಂಗಳೂರು, ಮಾ.19: ಯುಗಾದಿ ಹಬ್ಬದ ಸಂಭ್ರಮದ ನಡುವೆಯೂ ಬೆಂಗಳೂರಿನಲ್ಲಿ ಸಿಲಿಂಡರ್ ಕೊರತೆಯು ಹೋಟೆಲ್ ಮಾಲೀಕರಿಗೆ ಸವಾಲಾಗಿ ಪರಿಣಮಿಸಿದೆ. ಈ ವರ್ಷ, ಅನೇಕ ಹೋಟೆಲ್‌ಗಳು ಸಾಂಪ್ರದಾಯಿಕ ಸೌದೆ ಒಲೆಗಳ ಮೇಲೆ ಅಡುಗೆ ಮಾಡಲು ಮೊರೆ ಹೋಗಿವೆ. ಇದರ ಮಧ್ಯೆಯೂ ಯುಗಾದಿಯ ಪ್ರಮುಖ ಸಿಹಿ ತಿಂಡಿ ಹೋಳಿಗೆಗೆ ಭಾರೀ ಬೇಡಿಕೆ ವ್ಯಕ್ತವಾಗಿದೆ. ಮಲ್ಲೇಶ್ವರಂನಲ್ಲಿರುವ ಪ್ರಸಿದ್ಧ ಹೋಳಿಗೆ ಮನೆ ಮುಂದೆ ಹೋಳಿಗೆ ಖರೀದಿಸಲು ನೂರಾರು ಜನರು ಮುಗಿಬಿದ್ದಿರುವುದು ಕಂಡುಬಂದಿದೆ. ಸುಮಾರು 100 ಮೀಟರ್‌ಗೂ ಅಧಿಕ ಉದ್ದದ ಸರತಿ ಸಾಲು ಹೋಟೆಲ್‌ನಿಂದ ರಸ್ತೆಯುದ್ದಕ್ಕೂ ವಿಸ್ತರಿಸಿದೆ. ಸಿಲಿಂಡರ್ ಇಲ್ಲದ ಕಾರಣ ಹೋಳಿಗೆ ಮನೆ ಮಾಲೀಕರು ಸೌದೆ ಒಲೆಯಲ್ಲಿ ಹೋಳಿಗೆ ತಯಾರಿಸುತ್ತಿದ್ದು, ಗ್ರಾಹಕರಿಗೆ ವಿತರಿಸುತ್ತಿದ್ದಾರೆ. ಪ್ರತಿ ವರ್ಷ 7 ರಿಂದ 8 ಸಾವಿರಕ್ಕೂ ಹೆಚ್ಚು ಹೋಳಿಗೆಗಳು ಮಾರಾಟವಾಗುತ್ತಿದ್ದವು. ಆದರೆ ಈ ವರ್ಷ ಸಿಲಿಂಡರ್ ಕೊರತೆಯಿಂದ ವ್ಯಾಪಾರಕ್ಕೆ ಹಿನ್ನಡೆಯಾಗಿದೆ. ಆದಾಗ್ಯೂ, ಗ್ರಾಹಕರನ್ನು ಕಳೆದುಕೊಳ್ಳಲು ಇಚ್ಛಿಸದ ಮಾಲೀಕರು ಎಲ್ಲಾ ಅಡೆತಡೆಗಳ ನಡುವೆಯೂ ಹೋಳಿಗೆ ನೀಡಲು ಶ್ರಮಿಸುತ್ತಿದ್ದಾರೆ. “ಎಷ್ಟೇ ಸಮಸ್ಯೆಗಳಿದ್ದರೂ ಯುಗಾದಿ ಹಬ್ಬವನ್ನು ಹೋಳಿಗೆಯೊಂದಿಗೆ ಆಚರಿಸಬೇಕು” ಎಂಬುದು ಗ್ರಾಹಕರ ಮಾತಾಗಿತ್ತು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version