ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಬೆನ್ನಲ್ಲೇ ಸರ್ಕಾರದಿಂದ ಮಹತ್ವದ ಹೆಜ್ಜೆ: ಕುತೂಹಲ ಕೆರಳಿಸಿದ ನಡೆ – Kannada News | Gold Treasure Found In lakkundi: excavation begin In the Village from january 16th

ಗದಗ, (ಜನವರಿ 15): ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಜನವರಿ 10ರಂದು ನಿಧಿ (lakkundi Gold Treasure) ಪತ್ತೆಯಾದ ಬೆನ್ನಲ್ಲೇ ಇದೀಗ ಉತ್ಖನನ ನಡೆಸಲು ಪುರಾತತ್ವ ಇಲಾಖೆ ಮುಂದಾಗಿದೆ. ಹೌದು.. ನಾಳೆಯಿಂದ ಅಂದರೆ ಜನವರಿ 16ರಿಂದ ಲಕ್ಕುಂಡಿ ಗ್ರಾಮದಲ್ಲಿ ಉತ್ಖನನ ಕಾರ್ಯ ಶುರುವಾಗಲಿದ್ದು, ಮೊದಲಿಗೆ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಬಳಿ ಪುರಾತತ್ವ ಇಲಾಖೆ ಹಾಗೂ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಒಟ್ಟು 48 ಸಿಬ್ಬಂದಿಯಿಂದ ಉತ್ಖನನ ನಡೆಯಲಿದೆ. ಹೀಗಾಗಿ ಇದಕ್ಕೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಸಹ ಮಾಡಿಕೊಳ್ಳಲಾಗಿದೆ. ಇನ್ನು ಇಡೀ ಗ್ರಾಮವನ್ನೇ ಸ್ಥಳಾಂತರ ಮಾಡುವ ಬಗ್ಗೆಯೂ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದೆ ಎಂದು ಸ್ವತಃ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್​​​​ಕೆ ಪಾಟೀಲ್ ಮಾಹಿತಿ ಹಂಚಿಕೊಂಡಿದ್ದಾರೆ.

ಇಡೀ ಗ್ರಾಮ ಸ್ಥಳಾಂತರಕ್ಕೆ ಚಿಂತನೆ

ಜನವರಿ 10ರಂದು ರಿತ್ತಿ ಕುಟುಂಬ ಮನೆಯ ಪಾಯ ಮುಚ್ಚುವ ವೇಳೆ ಚಿನ್ನದನಿಧಿ ಪತ್ತೆಯಾಗಿತ್ತು. ಕುಟುಂಬ ಕೂಡಾ ಪ್ರಾಮಾಣಿಕವಾಗಿ ಸರ್ಕಾರಕ್ಕೆ ಚಿನ್ನವನ್ನು ಹಸ್ತಾಂತರ ಮಾಡಿದೆ. ಇದರ ಬೆನ್ನಲ್ಲೇ ನಾಳೆಯಿಂದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಬಳಿ ಉತ್ಖನನಕ್ಕೆ‌ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ. ಇನ್ನು ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ 101 ದೇವಸ್ಥಾನಗಳಿವೆ. ಹೀಗಾಗಿ ದೇವಸ್ಥಾನದ ಅಡಿಯಲ್ಲಿ ಸಾಕಷ್ಟು ಪ್ರಮಾಣದ ನಿಧಿಯಿದೆ ಎನ್ನಲಾಗುತ್ತಿದೆ. ಹೀಗಾಗಿ ಲಕ್ಕುಂಡಿ ಗ್ರಾಮವನ್ನು ಸ್ಥಳಾಂತರ ‌ಮಾಡಬೇಕು. ಆಗ ಮಾತ್ರ ಲಕ್ಕುಂಡಿ ಗ್ರಾಮದಲ್ಲಿ ನಿಧಿ ರಹಸ್ಯ ಬಯಲಾಗುತ್ತದೆ. ಇದರಿಂದ ಗ್ರಾಮವನ್ನ ಸ್ಥಳಾಂತರ ಮಾಡುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ ಎಂದು ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಎಚ್​​​ಕೆ ಪಾಟೀಲ್ ಹೇಳಿದ್ದಾರೆ.

ಇದನ್ನೂ ಓದಿ: ಲಕ್ಕುಂಡಿ ಸಿಕ್ಕ ನಿಧಿಗೆ ಇದೆ 300 ವರ್ಷಗಳ ಇತಿಹಾಸ, ಗ್ರಾಮಸ್ಥರಲ್ಲಿ ಶುರುವಾಯ್ತು ಹೊಸ ಆತಂಕ

ಗ್ರಾಮದಲ್ಲಿರುವ ಒಂದೊಂದು ದೇವಸ್ಥಾನಕ್ಕೆ ‌ಸೇರಿದ ಆವರಣಗಳಿವೆ. ಹೀಗಾಗಿ ಇಡೀ ಗ್ರಾಮವನ್ನು ಸ್ಥಳಾಂತರ ‌ಮಾಡಿದ್ರೆ ಅಪಾರ ಸಂಪತ್ತು ಸಿಗುತ್ತೇ ಅಂತಾರೆ ಲಕ್ಕುಂಡಿ ಗ್ರಾಮಸ್ಥರು.  ಇನ್ನು ಲಕ್ಕುಂಡಿ ಗ್ರಾಮದಲ್ಲಿ ಈ‌ ಹಿಂದೆ ಸಹ ಸಾಕಷ್ಟು ‌ಚಿನ್ನದ ನಿಧಿಪತ್ತೆಯಾಗಿತ್ತು. ಆ ಸಮಯದಲ್ಲಿ ನಿಧಿಯನ್ನು ಇಟ್ಟುಕೊಂಡು‌‌‌ ಕುಟುಂಬಗಳು ಸರ್ವನಾಶವಾಗಿವೆ. ಗ್ರಾಮದಲ್ಲಿ ‌ಸಿಕ್ಕ ನಿಧಿ ಉಪಯೋಗಿಸಿದ‌ ಕುಟುಂಬಗಳು ಸರ್ವನಾಶವಾಗಿವೆ ಎನ್ನುವುದು ಗ್ರಾಮದ ಕೆಲ ಜನರ ಅಭಿಪ್ರಾಯವಾಗಿದೆ. ಇನ್ನೊಂದೆಡೆ ಗ್ರಾಮದಲ್ಲಿ ನಿಧಿಗಳ್ಳರ ಹಾವಳಿಗೆ ಜನ ಆತಂಕಗೊಂಡಿದ್ದು, ಯಾವಾಗ ಏನೇನು ಆಗುತ್ತೆ ಎನ್ನುವ ಭಯದಲ್ಲಿ ದಿನ ಕಳೆಯುತ್ತಿದ್ದಾರೆ.

ಒಟ್ಟಿನಲ್ಲಿ ನಿಧಿ ಸಿಕ್ಕ ಬೆನ್ನಲ್ಲೇ ಲಕ್ಕುಂಡಿ ಗ್ರಾಮದಲ್ಲಿ ನಾನಾ ರೀತಿಯ ಮಾತುಗಳು, ಚರ್ಚೆಗಳು ನಡೆದಿದ್ದು, ಜನರಲ್ಲಿ ಆತಂಕ ಮನೆ ಮಾಡಿದಂತೂ ಸತ್ಯ. ಇನ್ನೊಂದೆಡೆ ಉತ್ಖನನ ವೇಳೆ ಏನೆಲ್ಲಾ ಸಿಗಬಹುದು ಎನ್ನುವ ಕಾತರದಲ್ಲಿ ಜನ ಇದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬ್ಯಾಟ್ಸ್‌ಮನ್ ಕುತ್ತಿಗೆಗೆ ಬಡಿದ ಚೆಂಡು! ಕೂದಲೆಳೆ ಅಂತರದಲ್ಲಿ ತಪ್ಪಿದ ಅವಘಡ – Kannada News | BBL 2025 26: Harry Dixon’s Shocking Injury Scare – Renegades Star Narrowly Avoids Catastrophe

2025-26 ರ ಬಿಗ್ ಬ್ಯಾಷ್ ಲೀಗ್​ನಲ್ಲಿ ಮಹಾ ಗಂಡಾಂತರವೊಂದು ಕೂದಲೆಳೆ ಅಂತರದಿಂದ ತಪ್ಪಿಹೋಗಿದೆ. ಮೆಲ್ಬೋರ್ನ್ ರೆನೆಗೇಡ್ಸ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಹ್ಯಾರಿ ಡಿಕ್ಸನ್ ಪ್ರಾಣಾಪಾಯದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ವಾಸ್ತವವಾಗಗಿ ಜನವರಿ 15 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಪರ್ತ್ ಸ್ಕಾರ್ಚರ್ಸ್ ಮತ್ತು ಮೆಲ್ಬೋರ್ನ್ ರೆನೆಗೇಡ್ಸ್ ತಂಡದ ನಡುವೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪರ್ತ್ ಸ್ಕಾರ್ಚರ್ಸ್ ತಂಡವು ಫಿನ್ ಅಲೆನ್ ಅವರ ಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 219 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು.

ಈ ಗುರಿ ಬೆನ್ನಟ್ಟಿದ ಮೆಲ್ಬೋರ್ನ್ ರೆನೆಗೇಡ್ಸ್ ತಂಡದ ಪರ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹ್ಯಾರಿ ಡಿಕ್ಸನ್ ಇನ್ನಿಂಗ್ಸ್​ನ 7ನೇ ಓವರ್​ನಲ್ಲಿ ಗಂಭೀರ ಗಾಯಕ್ಕೆ ತುತ್ತಾದರು. ಪರ್ತ್ ಪರ ಏಳನೇ ಓವರ್ ಬೌಲಿಂಗ್ ಮಾಡುತ್ತಿದ್ದ ಮಹ್ಲಿ ಬಿಯರ್ಡ್‌ಮನ್ ಕೊನೆಯ ಎಸೆತವನ್ನು ಶಾರ್ಟ್ ಬಾಲ್ ಎಸೆದರು. ಇತ್ತ ಸ್ಟ್ರೈಕ್​ನಲ್ಲಿದ್ದ ಡಿಕ್ಸನ್ ಚೆಂಡನ್ನು ಎಳೆಯಲು ಯತ್ನಿಸಿದರು. ಆದರೆ ಬ್ಯಾಟಿಗೆ ತಾಗದ ಚೆಂಡು ಡಿಕ್ಸನ್ ಅವರ ಭುಜ ಮತ್ತು ಕುತ್ತಿಗೆಯ ನಡುವೆ ಬಡಿಯಿತು. ಚೆಂಡು ಬಲವಾಗಿ ಬಿದ್ದ ಕಾರಣದಿಂದಾಗಿ ಡಿಕ್ಸನ್ ತೀವ್ರ ನೋವಿನಿಂದ ನರಳಲಾರಂಭಿಸಿದರು. ತಕ್ಷಣವೇ ಮೈದಾನಕ್ಕೆ ಬಂದ ಫಿಸಿಯೋ ಅವರನ್ನು ಪರೀಕ್ಷಿಸಿ ಮೈದಾನದಿಂದ ಹೊರಗೆ ಕರೆದುಕೊಂಡು ಹೋದರು. ಡಿಕ್ಸನ್ ತಮ್ಮ ಕುತ್ತಿಗೆಯನ್ನು ಸ್ವಲ್ಪ ಬಲಕ್ಕೆ ತಿರುಗಿಸದಿದ್ದರೆ, ಚೆಂಡು ನೇರವಾಗಿ ಅವರ ಗಂಟಲಿಗೆ ಬೀಳುತ್ತಿತ್ತು. ಇದರಿಂದ ಡಿಕ್ಸನ್ ಅವರ ಪ್ರಾಣಕ್ಕೆ ಕುತ್ತು ಬರುತ್ತಿತ್ತು. ಆದರೆ ಅದೃಷ್ಟವಶಾತ್ ಡಿಕ್ಸನ್ ಮಹಾ ಅವಘಡದಿಂದ ಸ್ವಲ್ಪದರಲ್ಲೇ ಪಾರಾದರು.

ಆದಾಗ್ಯೂ 220 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಮೆಲ್ಬೋರ್ನ್ ರೆನೆಗೇಡ್ಸ್ ನಿಗದಿತ ಓವರ್‌ಗಳಲ್ಲಿ 169 ರನ್‌ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ, ಪರ್ತ್ ಸ್ಕಾರ್ಚರ್ಸ್ 50 ರನ್‌ಗಳಿಂದ ಆರಾಮದಾಯಕ ಗೆಲುವು ಸಾಧಿಸಿ ಪ್ಲೇಆಫ್‌ನತ್ತ ಹೆಜ್ಜೆ ಹಾಕಿತು. ರೆನೆಗೇಡ್ಸ್ ತಂಡದ ಪರ ಟಿಮ್ ಸೀಫರ್ಟ್ (66) ಮತ್ತು ಜೇಕ್ ಫ್ರೇಸರ್-ಮೆಕ್‌ಗುರ್ಕ್ (42) ಕಠಿಣ ಹೋರಾಟ ನಡೆಸಿದರಾದರೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Jallikattu: ತಮಿಳುನಾಡಿನ ಮಧುರೈನಲ್ಲಿ ಜಲ್ಲಿಕಟ್ಟು ಆರಂಭ; 1 ಸಾವಿರಕ್ಕೂ ಹೆಚ್ಚು ಹೋರಿಗಳು ಭಾಗಿ – Kannada News | Jallikattu organised in Tamil Nadu Madurai’s Avaniyapuram on the occassion of Pongal

ಮಧುರೈ, ಜನವರಿ 15: ತಮಿಳುನಾಡಿನ ಮಧುರೈನ ಜಲ್ಲಿಕಟ್ಟು ಋತುವಿಗೆ ಅವನಿಯಪುರಂ ವೇದಿಕೆ ಸಜ್ಜಾಗಿದೆ. ಪೊಂಗಲ್ (Pongal) ಹಬ್ಬದ ಭಾಗವಾಗಿ ನಡೆಯುವ ತಮಿಳುನಾಡಿನ ಸಾಂಪ್ರದಾಯಿಕ ಹೋರಿ ಓಟದ ಸ್ಪರ್ಧೆಯಾದ ಜಲ್ಲಿಕಟ್ಟು ಇಂದು ಮಧುರೈನಲ್ಲಿ ಪ್ರಾರಂಭವಾಯಿತು. ಅವನಿಯಪುರಂ ಜಲ್ಲಿಕಟ್ಟಿನಲ್ಲಿ ಇಂದು ಸುಮಾರು 550 ಜನರು ಭಾಗವಹಿಸಿದ್ದರು. ಎರಡನೇ ಮತ್ತು ಮೂರನೇ ಕಾರ್ಯಕ್ರಮಗಳು ಮಧುರೈನ ಅಲಂಗನಲ್ಲೂರು ಮತ್ತು ಪಳಮೇಡುವಿನಲ್ಲಿ ನಡೆಯಲಿವೆ. ಒಟ್ಟು 1 ಸಾವಿರ ಹೋರಿಗಳು ಭಾಗವಹಿಸಲಿವೆ.

ಜಲ್ಲಿಕಟ್ಟು ಸ್ಪರ್ಧಿಗಳು ವಿಶೇಷವಾಗಿ ಸಿದ್ಧಪಡಿಸಲಾದ ಹೋರಿಗಳನ್ನು ಪಳಗಿಸಲು ಪ್ರಯತ್ನಿಸುತ್ತಾರೆ. ಇದರಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಸ್ಪರ್ಧಿ ಹೆಚ್ಚಿನ ಸಂಖ್ಯೆಯ ಹೋರಿಗಳನ್ನು ಪಳಗಿಸುವಲ್ಲಿ ಯಶಸ್ವಿಯಾಗುತ್ತಾರೆ. ಅತ್ಯುತ್ತಮ ಪ್ರದರ್ಶನ ನೀಡುವ ಹೋರಿಯನ್ನು ಸಹ ಆಯ್ಕೆ ಮಾಡಲಾಗುತ್ತದೆ. ಅವನಿಯಪುರಂ ಸರ್ಕಾರಿ ಶಾಲೆಯಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುವ 15 ಹಾಸಿಗೆಗಳ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಭಾಗವಹಿಸುವವರು ಮತ್ತು ಪ್ರೇಕ್ಷಕರಿಗೆ ತಕ್ಷಣದ ವೈದ್ಯಕೀಯ ನೆರವು ನೀಡಲು 100 ವೈದ್ಯರ ತಂಡ ಮತ್ತು 12 ಆಂಬ್ಯುಲೆನ್ಸ್‌ಗಳು ಸಿದ್ಧವಾಗಿವೆ. ಕಾರ್ಯಕ್ರಮಗಳಿಗೆ ಮುಂಚಿತವಾಗಿ, ಹೋರಿಗಳನ್ನು ಸಹ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗಿಲ್ಲಿ ನಟ Vs ಅಶ್ವಿನಿ ಗೌಡ: ಜಾತಿ, ಭಾಷೆ ಆಯಾಮ ಪಡೆದ ಬೆಂಬಲಿಗರ ಚರ್ಚೆ – Kannada News | Bigg Boss Kannada 12 Finale Ashwini Gowda and Gilli Nata fans war in Social Media

‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋ ಫಿನಾಲೆ (Bigg Boss Kannada Finale) ಜನವರಿ 17 ಮತ್ತು 18ರಂದು ನಡೆಯಲಿದೆ. ಈ ರಿಯಾಲಿಟಿ ಶೋನಲ್ಲಿ ಯಾರು ವಿನ್ ಆಗುತ್ತಾರೆ ಎಂಬುದನ್ನು ನೋಡಲು ಅಭಿಮಾನಿಗಳು ಕಾದಿದ್ದಾರೆ. ಎಲ್ಲರಿಗೂ ಕುತೂಹಲ ಇದೆ. ಗಿಲ್ಲಿ ನಟ (Gilli Nata) ಅವರೇ ಗೆಲ್ಲುತ್ತಾರೆ ಎಂಬುದು ಬಹುತೇಕ ವೀಕ್ಷಕರ ಅಭಿಪ್ರಾಯ ಆಗಿದೆ. ಅವರಿಗೆ ಅಶ್ವಿನಿ ಗೌಡ (Ashwini Gowda) ಕೂಡ ಪೈಪೋಟಿ ನೀಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬೆಂಬಲಿಗರು ಸಿಕ್ಕಾಪಟ್ಟೆ ಪ್ರಚಾರ ಮಾಡುತ್ತಿದ್ದಾರೆ. ಪ್ರಚಾರದ ಭರದಲ್ಲಿ ಜಾತಿ ಮತ್ತು ಭಾಷೆಯ ವಿಷಯವನ್ನು ಎಳೆದು ತರಲಾಗುತ್ತಿದೆ.

ಅಶ್ವಿನಿ ಗೌಡ ಅವರು ಕನ್ನಡಪರ ಹೋರಾಟಗಾರ್ತಿ. ಅವರು ನಟಿ ಕೂಡ ಹೌದು. ‘ಬಿಗ್ ಬಾಸ್ ಕನ್ನಡ ಸೀನಸ್ 12’ ಶೋಗೆ ಬಂದ ಬಳಿಕ ಅಶ್ವಿನಿ ಗೌಡ ಅವರ ಖ್ಯಾತಿ ಹೆಚ್ಚಾಗಿದೆ. ಅಶ್ವಿನಿ ಪರವಾಗಿ ಕನ್ನಡ ಪರ ಹೋರಾಟಗಾರರು ಪ್ರಚಾರ ಮಾಡಿ ವೋಟ್ ಕೇಳುತ್ತಿದ್ದಾರೆ. ಈ ವಿಚಾರದಲ್ಲಿ ಕನ್ನಡ ಭಾಷೆಯ ವಿಷಯವನ್ನು ಮುಂದಿಟ್ಟುಕೊಂಡು ಅಶ್ವಿನಿಗೆ ಜನರ ವೋಟ್ ಕೇಳಿದ್ದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.

‘ಕೇವಲ ಅಶ್ವಿನಿ ಮಾತ್ರವೇ ಕನ್ನಡಿಗರೇನಲ್ಲ. ಬಿಗ್ ಬಾಸ್ ಮನೆಯಲ್ಲಿ ಇರುವವರು ಎಲ್ಲರೂ ಕನ್ನಡಿಗರು. ಹಾಗಾಗಿ ಕೇವಲ ಕನ್ನಡದ ವಿಷಯವನ್ನು ಮುಂದಿಟ್ಟುಕೊಂಡು ಯಾಕೆ ವೋಟ್ ಕೇಳುತ್ತಿದ್ದೀರಿ’ ಎಂದು ಕೆಲವು ನೆಟ್ಟಿಗರು ಪ್ರಶ್ನಿಸಿದ್ದಾರೆ. ಅಲ್ಲದೇ, ಅಶ್ವಿನಿ ಗೌಡ ಅವರಿಗೆ ಸರಿಯಾಗಿ ಕನ್ನಡ ಬರೆಯಲು ಬರುವುದಿಲ್ಲ ಹಾಗೂ ಮಾತಿನ ನಡುವೆ ಅವರು ಹೆಚ್ಚು ಇಂಗ್ಲಿಷ್ ಬಳಸುತ್ತಾರೆ ಎಂಬ ಟೀಕೆ ಕೂಡ ಇದೆ. ಅದಕ್ಕೆ ಕನ್ನಡ ಪರ ಹೋರಾಟಗಾರರು ಉತ್ತರ ನೀಡಿದ್ದಾರೆ.

‘ಕನ್ನಡದ ಪರ ಹೋರಾಟ ಮಾಡಲು ಕನ್ನಡ ಭಾಷೆಯ ಬಗ್ಗೆ ಸಂಪೂರ್ಣ ಜ್ಞಾನ ಇರಲೇಬೇಕು ಅಂತೇನೂ ಇಲ್ಲ. ಅದೇ ರೀತಿ, ಚೆನ್ನಾಗಿ ಕನ್ನಡ ಬಲ್ಲವರು ಎಷ್ಟು ಜನರು ಕನ್ನಡಪರ ಹೋರಾಟದಲ್ಲಿ ಭಾಗವಹಿಸಿ ಜೈಲಿಗೆ ಹೋಗಿದ್ದಾರೆ? ಎಷ್ಟು ಜನರ ಮೇಲೆ ಕೇಸ್ ಇದೆ’ ಎಂದು ಕನ್ನಡ ಪರ ಹೋರಾಟಗಾರರು ಪ್ರಶ್ನಿಸಿದ್ದಾರೆ. ಈ ಚರ್ಚೆಯ ನಡುವೆ ಜಾತಿಯ ವಿಷಯ ಕೂಡ ನುಸುಳಿದು.

ಇದನ್ನೂ ಓದಿ: ಬಿಗ್ ಬಾಸ್ ಫಿನಾಲೆ: ಅಶ್ವಿನಿ ಗೌಡ ಪರವಾಗಿ ಸುದೀಪ್ ಮನೆಗೆ ಕರವೇ ನಾರಾಯಣ ಗೌಡ ಹೋಗಿದ್ದು ನಿಜವೇ?

‘ಗಿಲ್ಲಿ ಉತ್ತಮ ಕಲಾವಿದ. ಹಾಗೇ ಕುರುಬ ಎಂಬ ಕಾರಣಕ್ಕೆ ಕುರುಬ ಸಮುದಾಯದ ಜನರೆಲ್ಲಾ ವೋಟ್ ಮಾಡಿ ಅನ್ನೋದು ಗಿಲ್ಲಿಯ ಪ್ರತಿಭೆಗೆ ಮಾಡಿದ ಅವಮಾನ. ನೈಜ ಪ್ರತಿಭೆ. ಈಗ ಜಾತಿ ಪ್ರತಿಭೆ’ ಎಂಬ ಕಮೆಂಟ್ ಕೂಡ ಬಂದಿದೆ. ಬಿಗ್ ಬಾಸ್ ಫಿನಾಲೆ ಹತ್ತಿರ ಆದಾಗಿನಿಂದ ಈ ರೀತಿಯ ಚರ್ಚೆಗಳು ಶುರುವಾಗಿವೆ. ಈ ಮೊದಲು ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಸಿದ್ದರು. ಇಂದು ಕನ್ನಡಪರ ಹೋರಾಟಗಾರರಿಂದ ಅಶ್ವಿನಿ ಗೌಡ ಅವರಿಗೆ ಸಿಗುತ್ತಿರುವ ಬೆಂಬಲ ಅಂದು ರೂಪೇಶ್ ರಾಜಣ್ಣ ಅವರಿಗೆ ಸಿಕ್ಕಿರಲಿಲ್ಲ ಎಂಬ ಟೀಕೆ ಸಹ ಎದುರಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಭಾರತದೊಳಗೆ ಅಕ್ರಮವಾಗಿ ಪ್ರವೇಶಿಸಿದ ಪಾಕಿಸ್ತಾನದ ಬೋಟ್; 9 ಪಾಕ್ ಸಿಬ್ಬಂದಿ ವಶಕ್ಕೆ – Kannada News | Pakistan boat with 9 crew captured in Arabian Sea by Indian Coast Guard

ನವದೆಹಲಿ, ಜನವರಿ 15: ಭಾರತೀಯ ಜಲಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಿದ್ದಕ್ಕಾಗಿ ಕರಾವಳಿ ಕಾವಲು ಪಡೆ 9 ಸಿಬ್ಬಂದಿಯೊಂದಿಗೆ ಪಾಕಿಸ್ತಾನಿ ಮೀನುಗಾರಿಕಾ ಹಡಗನ್ನು ವಶಪಡಿಸಿಕೊಂಡಿದೆ. ಅರೇಬಿಯನ್ ಸಮುದ್ರದಲ್ಲಿ ಪಾಕಿಸ್ತಾನಿ (Pakistan) ಬೋಟ್ ಅನ್ನು ತಡೆಯಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಅಲ್-ಮದೀನಾ ಎಂದು ಗುರುತಿಸಲಾದ ಮೀನುಗಾರಿಕಾ ಹಡಗನ್ನು ವಶಪಡಿಸಿಕೊಳ್ಳುವ ಸಮಯದಲ್ಲಿ ಅದು 9 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿತ್ತು. ಭಾರತದ ಹಿರಿಯ ಕರಾವಳಿ ಕಾವಲು ಪಡೆ ಅಧಿಕಾರಿಗಳ ಪ್ರಕಾರ, ಈ ಹಡಗನ್ನು ಮೊದಲು ಜನವರಿ 14ರಂದು ಅಂತಾರಾಷ್ಟ್ರೀಯ ಸಮುದ್ರ ಗಡಿ ರೇಖೆ (IMBL) ಬಳಿ ಪತ್ತೆ ಮಾಡಲಾಯಿತು. ಹಡಗನ್ನು ನಿಲ್ಲಿಸಲು ಸೂಚಿಸಿದಾಗ, ಆ ಬೋಟ್ ಪಾಕಿಸ್ತಾನಿ ನೀರಿನ ಕಡೆಗೆ ಪಲಾಯನ ಮಾಡಲು ಪ್ರಯತ್ನಿಸಿತು. ಆಗ ಅಧಿಕಾರಿಗಳು ತ್ವರಿತ ಕಾರ್ಯಾಚರಣೆ ನಡೆಸಿ ಆ ಹಡಗನ್ನು ವಶಪಡಿಸಿಕೊಂಡರು. ಅಲ್-ಮದೀನಾ ಹಡಗನ್ನು ಗುಜರಾತ್‌ನ ಪೋರಬಂದರು ಬಂದರಿಗೆ ಎಳೆದುಕೊಂಡು ಹೋಗಲಾಗುತ್ತಿದೆ. ಅಲ್ಲಿಗೆ ಹೋದ ನಂತರ, ವಿವಿಧ ಭದ್ರತಾ ಮತ್ತು ಗುಪ್ತಚರ ಸಂಸ್ಥೆಗಳು ಸಿಬ್ಬಂದಿಯ ಜಂಟಿ ವಿಚಾರಣೆಯ ಭಾಗವಾಗಿ ಅದನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಲಾಗುತ್ತದೆ.

ಇದನ್ನೂ ಓದಿ: ಪಾಕಿಸ್ತಾನ, ಬಾಂಗ್ಲಾ ಸೇರಿ 75 ದೇಶಗಳ ಜನರಿಗೆ ಇಲ್ಲ ಅಮೆರಿಕದ ವಲಸೆ ವೀಸಾ; ಇಲ್ಲಿದೆ ಪಟ್ಟಿ

ಕಳೆದ ವರ್ಷ ಡಿಸೆಂಬರ್‌ನಲ್ಲಿಯೂ ಭಾರತದ ವಿಶೇಷ ಆರ್ಥಿಕ ವಲಯ (EEZ) ಒಳಗೆ ಪಾಕಿಸ್ತಾನಿ ಮೀನುಗಾರಿಕಾ ದೋಣಿಯನ್ನು ಭಾರತೀಯ ಕರಾವಳಿ ಕಾವಲು ಪಡೆ ವಶಪಡಿಸಿಕೊಂಡಿತ್ತು. ಅದರಲ್ಲಿದ್ದ ಎಲ್ಲಾ 11 ಸಿಬ್ಬಂದಿಯನ್ನು ಬಂಧಿಸಲಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಚಿವ ದಿನೇಶ್‌ ಗುಂಡೂರಾವ್‌ ಕಾರ್ಯಕ್ರಮದಲ್ಲಿ ಅಗ್ನಿ: ಸಂಕ್ರಾಂತಿ ಸಂಭ್ರಮದಲ್ಲಿ ಬೆಂಕಿ – Kannada News | Sankranti Mishap in Chickpet: Firecracker Spark Ignites Banner during Dinesh Gundu Rao Welcome

ಬೆಂಗಳೂರು, ಜನವರಿ 15: ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಸ್ವಾಗತ ವೇಳೆ ಸಿಡಿಸಿದ ಪಟಾಕಿಯ ಕಿಡಿ ತಗುಲಿ ಅಳವಡಿಸಿದ್ದ ಬ್ಯಾನರ್‌ ಹೊತ್ತಿ ಉರಿದಿರುವಂತಹ (Fire Breaks Out) ಘಟನೆ ನಗರದ ಚಿಕ್ಕಪೇಟೆಯಲ್ಲಿ ನಡೆದಿದೆ. ಸ್ಥಳೀಯ ನಿವಾಸಿಗಳು ಕೂಡಲೇ ಬೆಂಕಿ ನಂದಿಸಿದ್ದು, ಅದೃಷ್ಟಶಾತ್​​ ಯಾವುದೇ ಅನಾಹುತ ಸಂಭವಿಸಿಲ್ಲ.

ನಡೆದದ್ದೇನು?

ಸಂಕ್ರಾಂತಿ ಹಬ್ಬದ ಹಿನ್ನೆಲೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಸಚಿವ ದಿನೇಶ್ ಗುಂಡೂರಾವ್​ ಆಗಮಿಸಿದ್ದರು. ಸ್ಥಳೀಯರು ಪಟಾಕಿ ಹಚ್ಚುವ ಮೂಲಕ ಸ್ವಾಗತ ಕೋರಿದ್ದಾರೆ. ಈ ವೇಳೆ ಪಟಾಕಿ ಕಿಡಿಯಿಂದ ಬ್ಯಾನರ್​​ಗೆ ಬೆಂಕಿ ತಗುಲಿ ಹೊತ್ತಿ ಉರಿದಿದೆ. ಸದ್ಯ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಬೆಂಕಿ ನಂದಿಸಿದ್ದಾರೆ. ಕೆಆರ್​​ ಮಾರ್ಕೆಟ್ ಪೊಲೀಸರು ಪರಿಶೀಲನೆ ಮಾಡಿದ್ದಾರೆ.

ಕಾರ್ಯಕ್ರಮದ ಆಯೋಜಕ ರಾಘವ್​ ಹೇಳಿದ್ದಿಷ್ಟು 

ಇನ್ನು ಘಟನೆ ಬಗ್ಗೆ ಕಾರ್ಯಕ್ರಮದ ಆಯೋಜಕ ರಾಘವ್​ ಪ್ರತಿಕ್ರಿಯಿಸಿದ್ದು, ಕಾಶಿ ವಿಶ್ವನಾಥ ದೇವಸ್ಥಾನದ ರಸ್ತೆ ಉದ್ಘಾಟನೆ ಮತ್ತು ಸಂಕ್ರಾಂತಿ ಹಬ್ಬ ಹಿನ್ನೆಲೆ ಅದ್ಧೂರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಇಂದು ಸಂಜೆ 6.30ರ ಸುಮಾರಿಗೆ ಸಚಿವ ದಿನೇಶ್ ಗುಂಡೂರಾವ್ ಸಾಹೇಬರು ಬಂದಿದ್ದರು. ಅವರು ಬಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಹೋದರು. ಎಲ್ಲಾ ಸರಿಯಾಗಿ ನಡೆದಿದೆ. ಘಟನೆ ವೇಳೆ ಅಂತಹದ್ದೇನು ಆಗಿಲ್ಲ. ಈಗ ಎಲ್ಲವೂ ಸರಿ ಹೋಗಿದೆ ಎಂದು ಹೇಳಿದ್ದಾರೆ.

ಸ್ಕ್ರಾಪ್​ ಗೋಡೌನ್​ನಲ್ಲಿ ಅಗ್ನಿ ಅವಘಡ

ಬೆಂಗಳೂರಿನ ಬೇಗೂರಿನ ಅಕ್ಷಯನಗರದ ಸ್ಕ್ರಾಪ್​ ಗೋಡೌನ್​ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಹಳೆಯ ಪ್ಲಾಸ್ಟಿಕ್​ ವಸ್ತುಗಳು ಧಗ ಧಗನೇ ಹೊತ್ತಿ ಉರಿದಿದ್ದು, ನಾಲ್ಕು ಅಗ್ನಿಶಾಮಕದಳ ವಾಹನಗಳಿಂದ ಬೆಂಕಿ ನಂದಿಸಲಾಗಿದೆ. ಆಗಸದೆತ್ತರಕ್ಕೆ ಬೆಂಕಿಯ ಕೆನ್ನಾಲಿಗೆ ಹರಡಿತ್ತು.

ಇದನ್ನೂ ಓದಿ: ಬೆಂಗಳೂರು: ಅಕ್ಷಯನಗರ ಸ್ಕ್ರಾಪ್​ ಗೋಡೌನ್​ನಲ್ಲಿ ಭಾರಿ ಅಗ್ನಿ ಅವಘಡ

ತಡರಾತ್ರಿ 3.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಸ್ಥಳೀಯ ನಿವಾಸಿಗಳು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಸಿಲಿಂಡರ್ ಬ್ಲಾಸ್ಟ್​ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳದಲ್ಲಿ ಸಿಲಿಂಡರ್​ಗಳು ಪತ್ತೆ ಆಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕೆಲ ದಿನಗಳ ಹಿಂದೆ ಇಲ್ಲಿ ನೆಲೆಸಿದ್ದ ಶಂಕಿತ ಬಾಂಗ್ಲಾ ವಲಸಿಗರ ತೆರವು ಮಾಡಲಾಗಿತ್ತು. ಆದರೆ ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಸದ್ಯ ಬೇಗೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

U19 ವಿಶ್ವಕಪ್​ನಲ್ಲಿ ಗೆಲುವಿನ ಶುಭಾರಂಭ ಮಾಡಿದ ಯಂಗ್ ಇಂಡಿಯಾ – Kannada News | India U19 Dominates USA in World Cup Opener: Kundu (42*) & Patel (5 16) Shine

ಇಂದಿನಿಂದ ಆರಂಭವಾಗಿರುವ 19 ವರ್ಷದೊಳಗಿನವರ ಏಕದಿನ ವಿಶ್ವಕಪ್​ನಲ್ಲಿ ( U19 World Cup 2026) ಭಾರತ ಯುವ ತಂಡ ಗೆಲುವಿನ ಶುಭಾರಂಭ ಮಾಡಿದೆ. ಮಳೆ ಪೀಡಿತ ಈ ಪಂದ್ಯದಲ್ಲಿ ಟೀಂ ಇಂಡಿಯಾ, ಅಮೆರಿಕವನ್ನು (India vs USA) 6 ವಿಕೆಟ್‌ಗಳಿಂದ ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಅಮೆರಿಕ, ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿ 35.2 ಓವರ್‌ಗಳಲ್ಲಿ ಕೇವಲ 107 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಟೀಂ ಇಂಡಿಯಾ 4 ವಿಕೆಟ್‌ಗಳನ್ನು ಕಳೆದುಕೊಂಡು ಜಯದ ನಗೆ ಬೀರಿತು. ಭಾರತದ ಇನ್ನಿಂಗ್ಸ್ ಆರಂಭವಾದ ಬಳಿಕ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದರಿಂದ ಭಾರತ ತಂಡಕ್ಕೆ 96 ರನ್‌ಗಳ ಗುರಿಯನ್ನು ನೀಡಲಾಯಿತು. ಭಾರತದ ಪರ ಅಭಿಗ್ಯಾನ್ ಕುಂಡು ಅಜೇಯ 42 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಅಭಿಗ್ಯಾನ್ ಕುಂಡು ಅದ್ಭುತ ಬ್ಯಾಟಿಂಗ್

ಅಭಿಗ್ಯಾನ್ ಕುಂಡು ಕ್ರೀಸ್‌ಗೆ ಬಂದಾಗ, ಟೀಂ ಇಂಡಿಯಾ 25 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ವೈಭವ್ ಸೂರ್ಯವಂಶಿ, ವೇದಾಂತ್ ತ್ರಿವೇದಿ ಮತ್ತು ಆಯುಷ್ ಮ್ಹಾತ್ರೆ ಪೆವಿಲಿಯನ್‌ ಸೇರಿಕೊಂಡಿದ್ದರು. ನಂತರ ಕುಂಡು, ವಿಹಾನ್ ಮಲ್ಹೋತ್ರಾ ಮತ್ತು ಕನಿಷ್ಕ್ ಚೌಹಾಣ್ ಅವರೊಂದಿಗೆ ನಿರ್ಣಾಯಕ ಪಾಲುದಾರಿಕೆಯನ್ನು ರೂಪಿಸಿ 17.2 ಓವರ್‌ಗಳಲ್ಲಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಅಭಿಗ್ಯಾನ್ ಕುಂಡು ಅಜೇಯ 42 ರನ್‌ಗಳೊಂದಿಗೆ ಗರಿಷ್ಠ ಸ್ಕೋರರ್ ಎನಿಸಿಕೊಂಡರು.

ಹೆನಿಲ್ ಪಟೇಲ್ ಮಾರಕ ದಾಳಿ

ಅಭಿಗ್ಯಾನ್ ಕುಂಡು ಅವರಿಗಿಂತ ಮೊದಲು, ವೇಗದ ಬೌಲರ್ ಹೆನಿಲ್ ಪಟೇಲ್ ತಂಡದ ಗೆಲುವಿನ ರೂವಾರಿಯಾಗಿದ್ದರು. ಈ ಬಲಗೈ ವೇಗಿ 7 ಓವರ್‌ಗಳಲ್ಲಿ ಕೇವಲ 16 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಅಮೆರಿಕದ ಬ್ಯಾಟಿಂಗ್ ಬೆನ್ನೇಲುಬು ಮುರಿದರು. ಈ ಪಂದ್ಯದಲ್ಲಿ 5 ವಿಕೆಟ್​ಗಳ ಗೊಂಚಲು ಪಡೆದ ಹೆನಿಲ್ ಪಟೇಲ್, ಬರೋಬ್ಬರಿ 8 ವರ್ಷಗಳ ಬಳಿಕ ಭಾರತೀಯ ಬೌಲರ್​ವೊಬ್ಬ ಅಂಡರ್-19 ವಿಶ್ವಕಪ್‌ನಲ್ಲಿ ಈ ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾದರು.

U19 World Cup: ಮೊದಲ ಪಂದ್ಯದಲ್ಲೇ 16 ರನ್​ಗೆ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್

ಭಾರತ vs ಬಾಂಗ್ಲಾದೇಶ

ಮೊದಲೇ ನಿರೀಕ್ಷಿಸಿದ್ದಂತೆ ಟೀಂ ಇಂಡಿಯಾ ಈ ಪಂದ್ಯವನ್ನು ಗೆದ್ದುಕೊಂಡಿತ್ತಾದರೂ, ವೈಭವ್ ಸೂರ್ಯವಂಶಿ ಮತ್ತು ಆಯುಷ್ ಮ್ಹಾತ್ರೆ ವಿಕೆಟ್ ಕಳೆದುಕೊಂಡ ರೀತಿ ಅತ್ಯಂತ ನಿರಾಶಾದಾಯಕವಾಗಿತ್ತು. ಈ ಇಬ್ಬರೂ ಆಟಗಾರರು ಅಮೆರಿಕದಂತಹ ಅನಾನುಭವಿ ತಂಡದ ವಿರುದ್ಧ ರನ್ ಗಳಿಸಲು ವಿಫಲರಾದರು. ವೇದಾಂತ್ ತ್ರಿವೇದಿ 10 ಎಸೆತಗಳಲ್ಲಿ ಕೇವಲ 2 ರನ್ ಗಳಿಸಿದ್ದು ಕೂಡ ಕಳವಳಕ್ಕೆ ಕಾರಣವಾಗಿದೆ. ಮುಂದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಅಗ್ರ ಕ್ರಮಾಂಕವು ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ಮುಂದಿನ ಪಂದ್ಯ ಜನವರಿ 17 ರಂದು ಬುಲವಾಯೊದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೀನಿಯರ್​​ನನ್ನೇ ಕೊಂದ ಜೂನಿಯರ್: ಎಸ್​ಎಸ್​​ಎಲ್​​ಸಿ ವಿದ್ಯಾರ್ಥಿ ಹತ್ಯೆಗೆ ಕಾರಣವೇನು? – Kannada News | Dharwad SP talks about 9th Class Student Murder 10th Standard student at Dharwad

ಧಾರವಾಡ, (ಜನವರಿ 15): ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಅಪ್ರಾಪ್ತ ಬಾಲಕನನ್ನು ಕೊಲೆ ಮಾಡಲಾಗಿದೆ. ಧಾರವಾಡ (Dharwad) ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿ ನಿನ್ನೆ (ಜನವರಿ 14) ಸಂಜೆ ಈ ಘಟನೆ ನಡೆದಿದ್ದು, ಅಚ್ಚರಿ ಅಂದರೆ 9ನೇ ತರಗತಿ ವಿದ್ಯಾರ್ಥಿಯೇ ತನಗಿಂತ ಒಂದು ವರ್ಷ ಸಿನಿಯರ್ ಎಸ್​​ಎಸ್​​ಎಲ್​ಸಿ ವಿದ್ಯಾರ್ಥಿಯನ್ನು ಕೊಲೆ ಮಾಡಿದ್ದಾನೆ. ನಿಂಗರಾಜ್ ಅವಾರಿ(16) ಕೊಲೆಯಾದ ಬಾಲಕ.

ಇನ್ನು ಈ ಪ್ರಕರಣ ಸಂಬಂಧ ಧಾರವಾಡ ಎಸ್ಪಿ ಗುಂಜನ್ ಆರ್ಯ್ ಪ್ರತಿಕ್ರಿಯಿಸಿದ್ದು, ಕುಂದಗೋಳ ಪಟ್ಟಣದ ಸೊಸೈಟಿ ಜಾಗದಲ್ಲಿ ನಿನ್ನೆ ಸಂಜೆ ಕೊಲೆಯಾಗಿದ್ದು, ಇನ್ನೋರ್ವ ಬಾಲಕನ ಮೇಲೆ ಹಲ್ಲೆಯಾಗಿದೆ. ಜನವರಿ 13 ರಂದು ಗಲಾಟೆ ಮಾಡಿಕೊಂಡಿದ್ದರು. ಹಳೆ ದ್ವೇಷದ ಹಿನ್ನೆಲೆಯಲ್ಲಿ ಮೂವರು ಅಪ್ರಾಪ್ತ ಬಾಲಕರು ಕೊಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಆರೋಪಿ ಬಾಲಕರ ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದು, ಸೋಶಿಯಲ್ ಮೀಡಿಯಾ ರೀಲ್ಸ್ ಗಳನ್ನು ಕೂಡಾ ಪರಿಶೀಲನೆ ಮಾಡುತ್ತಿದ್ದೇವೆ.ಕೊಲೆ ಮಾಡಿದ ಪ್ರಮುಖ ಆರೋಪಿ ಮತ್ತು ಕೊಲೆಯಾದ ಬಾಲಕ ಒಂದೇ ಶಾಲೆಯಲ್ಲಿ ಓದುತ್ತಿದ್ದರು. ಒಂಬತ್ತನೇ ತರಗತಿ ವಿದ್ಯಾರ್ಥಿ ಎ 1 ಆರೋಪಿಯಾಗಿದ್ದಾನೆ. ಆತ ತನ್ನದೇ ಶಾಲೆಯಲ್ಲಿ ಓದುತ್ತಿದ್ದ ಎಸ್ ಎಸ್ ಎಲ್ ಸಿ ಹುಡುಗನ ಕೊಲೆ ತನ್ನ ಸ್ನೇಹಿತರ ಜೊತೆ ಸೇರಿ ಕೊಲೆ ಮಾಡಿದ್ದಾನೆ ಎಂದು ಮಾಹಿತಿ ನೀಡಿದರು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Source link

Pune Elections: ಮುಂಬೈ ಜೊತೆ ಪುಣೆಯಲ್ಲೂ ಬಿಜೆಪಿಯದ್ದೇ ದರ್ಬಾರ್; ಎಕ್ಸಿಟ್ ಪೋಲ್​ನಲ್ಲಿ ಏನಿದೆ? – Kannada News | Pune PMC Election exit poll predicted bjp clear majority in municipal corporation

ಪುಣೆ, ಜನವರಿ 15: ಈಗಾಗಲೇ ಮಹಾರಾಷ್ಟ್ರದ (Maharashtra) ಪುರಸಭೆ ಚುನಾವಣೆಯ ಮತದಾನ ಮುಗಿದಿದೆ. ಈಗ ಮತಗಟ್ಟೆ ಸಮೀಕ್ಷೆಗಳು (Exit Polls Results) ಬರಲು ಪ್ರಾರಂಭಿಸಿವೆ. ಜನಮತ ಎಕ್ಸಿಟ್ ಪೋಲ್ ಪ್ರಕಾರ, ಪುಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಸ್ಪಷ್ಟ ಬಹುಮತವನ್ನು ಪಡೆಯಲಿದೆ. ಪುಣೆಯಲ್ಲಿ ಬಿಜೆಪಿ 93 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ, ಶಿವಸೇನೆ 6 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಒಟ್ಟು 7 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ರಾಷ್ಟ್ರೀಯವಾದಿ ಅಜಿತ್ ಪವಾರ್ ಗುಂಪು ಮತ್ತು ರಾಷ್ಟ್ರೀಯವಾದಿ ಶರದ್ ಪವಾರ್ ಗುಂಪು ಕೂಡ ಪುಣೆಯಲ್ಲಿ ದೊಡ್ಡ ಹಿನ್ನಡೆಯನ್ನು ಅನುಭವಿಸಿವೆ. ಈ ಮೂಲಕ ಪುಣೆಯಲ್ಲೂ ಬಿಜೆಪಿ ಭಾರೀ ಗೆಲುವು ಕಾಣುವ ನಿರೀಕ್ಷೆಯಿದೆ.

ಕಳೆದ ಬಾರಿ ಪುಣೆ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ಬಿಜೆಪಿ 97 ಸ್ಥಾನಗಳನ್ನು ಪಡೆದಿತ್ತು. ಪುಣೆ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ಬಿಜೆಪಿ ಸ್ಪಷ್ಟ ಬಹುಮತವನ್ನು ಗಳಿಸಿತ್ತು. ಎಕ್ಸಿಟ್ ಪೋಲ್ ಪ್ರಕಾರ, ಈ ಬಾರಿಯೂ ಬಿಜೆಪಿ ಪುಣೆಯಲ್ಲಿ ತನ್ನ ಅಧಿಕಾರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಲಿದೆ. ಈ ಬಾರಿ ಪುಣೆಯಲ್ಲಿ ಬಿಜೆಪಿ ಸುಮಾರು 93 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಶಿವಸೇನಾ ಶಿಂಧೆ ಬಣ 6 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಶಿವಸೇನಾ ಠಾಕ್ರೆ ಬಣ 7 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಜನಮತ ಎಕ್ಸಿಟ್ ಪೋಲ್ ಪ್ರಕಾರ, ರಾಷ್ಟ್ರೀಯವಾದಿ ಅಜಿತ್ ಪವಾರ್ ಬಣ ಪುಣೆಯಲ್ಲಿ 43 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ರಾಷ್ಟ್ರೀಯವಾದಿ ಶರದ್ ಪವಾರ್ ಬಣ 8 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ.

ಇದನ್ನೂ ಓದಿ: ಮುಂಬೈನಲ್ಲಿ ಉದ್ಧವ್ ಠಾಕ್ರೆಯ 25 ವರ್ಷಗಳ ಅಧಿಕಾರ ಅಂತ್ಯ, ಬಿಜೆಪಿಗೆ ಬಹುಮತ; ಮತಗಟ್ಟೆ ಸಮೀಕ್ಷೆ ಭವಿಷ್ಯ

ರಾಜ್ಯದ 29 ಪುರಸಭೆ ಚುನಾವಣೆಗಳಿಗೆ ಇಂದು ಮತದಾನ ನಡೆದಿದೆ. ಮುಂಬೈ, ಪುಣೆಯಲ್ಲಿ ಮಾತ್ರವಲ್ಲದೆ ಪಿಂಪ್ರಿ ಚಿಂಚ್‌ವಾಡ್‌ನಲ್ಲಿಯೂ ಬಿಜೆಪಿ ಗೆಲ್ಲುವ ನಿರೀಕ್ಷೆಯಿದೆ. ಪೋಲ್ ಆಫ್ ಪೋಲ್ಸ್‌ನ ನಿರ್ಗಮನ ಸಮೀಕ್ಷೆಯ ಪ್ರಕಾರ, ಪಿಂಪ್ರಿ ಚಿಂಚ್‌ವಾಡ್‌ನಲ್ಲಿ ಬಿಜೆಪಿ 64 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಶಿವಸೇನಾ ಶಿಂಧೆ ಗುಂಪು 9, ಎನ್‌ಸಿಪಿ 51, ಶರದ್ ಪವಾರ್ ಗುಂಪು 2 ಮತ್ತು ಕಾಂಗ್ರೆಸ್ ಮತ್ತು ಎಂಎನ್‌ಎಸ್ ತಲಾ 1 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘45’ ಸಿನಿಮಾ ಒಟಿಟಿ ರಿಲೀಸ್: ಜೀ5 ಮೂಲಕ ಜನವರಿ 23ರಿಂದ ಪ್ರಸಾರ ಶುರು – Kannada News | Shivarajkumar starrer 45 Kannada movie OTT Release on Zee 5 from this date

ವಿಶೇಷ ಕಥಾಹಂದರ ಇರುವ ‘45’ ಸಿನಿಮಾದಲ್ಲಿ ಶಿವರಾಜ್​​ಕುಮಾರ್, ರಾಜ್ ಬಿ. ಶೆಟ್ಟಿ, ಉಪೇಂದ್ರ ಮುಂತಾದವರು ನಟಿಸಿದ್ದಾರೆ. ಅವರ ಅಭಿಮಾನಿಗಳು ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಿದ್ದಾರೆ. ಈಗ ಈ ಚಿತ್ರ ಒಟಿಟಿಗೆ ಕಾಲಿಡುತ್ತಿದೆ. ಜನವರಿ 23ರಿಂದ ‘ಜೀ5’ ಒಟಿಟಿ (Zee5 OTT) ಮೂಲಕ ಪ್ರಸಾರ ಆಗಲಿದೆ. ಚಿತ್ರಮಂದಿರಗಳಲ್ಲಿ ‘45’ ಸಿನಿಮಾವನ್ನು (45 Movie) ಮಿಸ್ ಮಾಡಿಕೊಂಡವರು ಮನೆಯಲ್ಲೇ ಕುಳಿತು ನೋಡಬಹುದು. ಬೇರೆ ಬೇರೆ ಭಾಷೆಗಳಿಗೂ ಈ ಸಿನಿಮಾ ಡಬ್ ಆಗಿದೆ. ಅರ್ಜುನ್ ಜನ್ಯ ಅವರು ‘45’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

ಅನೌನ್ಸ್ ಆದಾಗಿನಿಂದ ಬಿಡುಗಡೆ ತನಕ ‘45’ ಸಿನಿಮಾ ಒಂದಿಲ್ಲಾ ಒಂದು ಕಾರಣಕ್ಕೆ ಸುದ್ದಿ ಆಗುತ್ತಿತ್ತು. ವಿಭಿನ್ನವಾದ ಕಥೆ ಇದೆ ಎಂಬ ಕಾರಣದಿಂದ ಫ್ಯಾನ್ಸ್ ಈ ಸಿನಿಮಾ ನೋಡಿ ಎಂಜಾಯ್ ಮಾಡಿದರು. ಸಾಮಾನ್ಯ ಮನುಷ್ಯನ ಜೀವನದಲ್ಲಿ ಕೆಲವು ಸವಾಲುಗಳು ಎದುರಾದಾಗ ಏನಾಗುತ್ತದೆ? ನಂಬಿಕೆ ಹಾಗೂ ಭಯದ ನಡುವಿನ ಘರ್ಷಣೆ, ಸತ್ಯ ಹಾಗೂ ಮಿಥ್ಯ, ಒಳ್ಳೆಯದು ಹಾಗೂ ಕೆಟ್ಟದರ ನಡುವಿನ ಯುದ್ಧವನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.

ಉಪೇಂದ್ರ, ಶಿವರಾಜ್​ಕುಮಾರ್, ರಾಜ್ ಬಿ.‌ ಶೆಟ್ಟಿ ಜೊತೆಗೆ ಕೌಸ್ತುಭ ಮಣಿ, ಜಿಶು ಸೇನ್ ಗುಪ್ತಾ ಮುಂತಾದವರ ಕೂಡ ‘45’ ಸಿನಿಮಾದಲ್ಲಿ ನಟಿಸಿದ್ದಾರೆ. ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಅವರು ನಿರ್ದೇಶನ ಮಾಡಿದ ಮೊದಲ ಸಿನಿಮಾ ಇದು ಎಂಬುದು ವಿಶೇಷ. ಎಂ. ರಮೇಶ್ ರೆಡ್ಡಿ ಅವರು ‘ಸೂರಜ್ ಪ್ರೊಡಕ್ಷನ್ಸ್’ ಮೂಲಕ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

ಜೀ5ನಲ್ಲಿ ‘45’ ಸಿನಿಮಾ ಬರುತ್ತಿರುವುದರ ಬಗ್ಗೆ ಶಿವರಾಜ್​ಕುಮಾರ್ ಮಾತಾಡಿದ್ದಾರೆ. ‘ಜೀವನದಲ್ಲಿ ನಾವು ಮಾಡುವ ಆಯ್ಕಗಳು, ನಿರ್ಧಾರಗಳು ಮತ್ತು ಅದರೊಂದಿಗೆ ಬರುವ‌ ಜವಾಬ್ದಾರಿಗಳನ್ನು ಒಟ್ಟಾಗಿ ಹೇಳುವುದಾದರೆ ನಮ್ಮ ಜೀವನವನ್ನು ಬಿಂಬಿಸುವ ಕಥೆ ಇದಾಗಿದೆ. ಜೀ5 ಜೊತೆ ನನ್ನ ಒಡನಾಟ ವಿಶೇಷವಾದದ್ದು. ಹೊಸ ಕಥೆಗಳಿಗೆ ಉತ್ತೇಜನ ನೀಡುವ ಈ ಡಿಜಿಟಲ್ ವೇದಿಕೆಯಲ್ಲಿ ನಮ್ಮ ಸಿನಿಮಾ ಪ್ರಸಾರ ಆಗುತ್ತಿರುವುದು ಸಂತೋಷ ತಂದಿದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ‘45’ ಚಿತ್ರದ ಬಗ್ಗೆ ಅಪಪ್ರಚಾರ ಮಾಡುವವರಿಗೆ ಕಾನೂನು ಕ್ರಮದ ಎಚ್ಚರಿಕೆ

ನಟ ಉಪೇಂದ್ರ ಕೂಡ ಈ ಬಗ್ಗೆ ಹೇಳಿದ್ದಾರೆ. ‘ಈ ಚಿತ್ರವು ತಾತ್ವಿಕ ಮತ್ತು ಧಾರ್ಮಿಕ ಮೌಲ್ಯಗಳನ್ನು ಮನರಂಜನಾತ್ಮಕವಾಗಿ ತೋರಿಸುತ್ತದೆ. ಹೊಸ ರೀತಿಯ ಕಥೆಗಳನ್ನು ಪ್ರೋತ್ಸಾಹಿಸುವ ಜೀ5 ಒಟಿಟಿ ಈ ಸಿನಿಮಾ ಪ್ರಸಾರ ಮಾಡುತ್ತಿರುವುದು ಸಂತಸದ ಸಂಗತಿ. ಈ ಸಿನಿಮಾ ಬರೀ ಮನರಂಜನೆ ಮಾತ್ರವಲ್ಲದೇ ಮೌಲ್ಯಗಳನ್ನು ತಿಳಿಸಿಕೊಡುತ್ತದೆ’ ಎಂದಿದ್ದಾರೆ ಉಪೇಂದ್ರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version