Daily Devotional: ಶುಭಕಾರ್ಯಗಳಲ್ಲಿ ದಂಪತಿಗಳು ಹೇಗೆ ಕೂರಬೇಕು ಗೊತ್ತಾ?

ಶುಭಕಾರ್ಯಗಳಲ್ಲಿ ದಂಪತಿಗಳು ಹೇಗೆ ಕೂರಬೇಕು ಎಂದು ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಹೋಮ, ಯಜ್ಞ, ವಿವಾಹ, ಗೃಹ ಪ್ರವೇಶ, ದೇವರ ಪೂಜೆ, ಮತ್ತು ಜ್ಯೋತಿಷಿ ಭೇಟಿಯಂತಹ ಧಾರ್ಮಿಕ ಮತ್ತು ಶುಭ ಕಾರ್ಯಗಳಲ್ಲಿ ಪತ್ನಿಯು ಪತಿಯ ಬಲಭಾಗದಲ್ಲಿ ಕುಳಿತುಕೊಳ್ಳುವುದು ಸಂಪ್ರದಾಯ. ಹೀಗೆ ಕುಳಿತರೆ ಕಾರ್ಯಗಳು ಪರಿಪೂರ್ಣ ಫಲ ನೀಡುತ್ತವೆ ಎಂದು ಹೇಳಲಾಗುತ್ತದೆ.

ಇದಕ್ಕೆ ವ್ಯತಿರಿಕ್ತವಾಗಿ, ಸೇವಾ ಕಾರ್ಯಗಳು, ಅನುದಾನ ನೀಡುವುದು, ಧರ್ಮ ಕೆಲಸಗಳು, ಹಾಗೆಯೇ ಮನೆಯಲ್ಲಿ ಮಲಗುವಾಗ, ಗುರು ಹಿರಿಯರಿಗೆ ನಮಸ್ಕರಿಸುವಾಗ, ಮತ್ತು ಪ್ರಯಾಣಿಸುವಾಗ (ರೈಲು, ಬಸ್ಸು, ಕಾರು) ಪತ್ನಿಯು ಪತಿಯ ಎಡಭಾಗದಲ್ಲಿ ಇರಬೇಕು. ಈ ನಿಯಮಗಳನ್ನು ಅನುಸರಿಸುವುದರಿಂದ ಕಾರ್ಯಗಳು ಯಶಸ್ವಿಯಾಗುತ್ತವೆ ಮತ್ತು ಅದರ ಸಂಪೂರ್ಣ ಫಲ ದೊರೆಯುತ್ತದೆ ಎಂಬುದು ಶಾಸ್ತ್ರಗಳ ನಂಬಿಕೆಯಾಗಿದೆ ಎಂದು ಗುರೂಜಿ ವಿವರಿಸಿದ್ದಾರೆ

 

 

 

Source link

ಮೇ 25ರ ಬಳಿಕ ರಾಜ್ಯ ಬಿಜೆಪಿಯಲ್ಲಿ ಮಹಾ ಬದಲಾವಣೆ? ವಿಜಯೇಂದ್ರ ಪಟ್ಟ ಭದ್ರ; ಕೋರ್ ಕಮಿಟಿ ಪುನಾರಚನೆ ಸಾಧ್ಯತೆ! – Kannada News | Karnataka BJP Leadership Overhaul After May 25: BY Vijayendra Likely to Continue; Core Committee Reshuffle Soon

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪಟ್ಟ ಭದ್ರ?Image Credit source: tv9

ಬೆಂಗಳೂರು, ಮೇ 20: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಪ್ರತಿಪಕ್ಷ ಬಿಜೆಪಿಯ (BJP) ಆಂತರಿಕ ವಿದ್ಯಮಾನಗಳಿಗೆ ಸಂಬಂಧಿಸಿದಂತೆ, ಮೇ 25 ರ ನಂತರ ಮಹತ್ವದ ಬೆಳವಣಿಗೆಗಳಾಗುವ ಸಾಧ್ಯತೆ ಇದೆ. ಪಕ್ಷದ ರಾಷ್ಟ್ರೀಯ ನಾಯಕರು ಸಾಲು ಸಾಲಾಗಿ ರಾಜ್ಯಕ್ಕೆ ಭೇಟಿ ನೀಡುತ್ತಿರುವುದರಿಂದ, ಬಹುದಿನಗಳಿಂದ ಚರ್ಚೆಯಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಗೊಂದಲಗಳಿಗೆ ಶೀಘ್ರದಲ್ಲೇ ತೆರೆಬೀಳುವ ನಿರೀಕ್ಷೆ ಇದೆ. ಹೈಕಮಾಂಡ್ ಮೂಲಗಳ ಪ್ರಕಾರ ಪ್ರಸ್ತುತ ರಾಜ್ಯಾಧ್ಯಕ್ಷರಾಗಿರುವ ಬಿವೈ ವಿಜಯೇಂದ್ರ (BY Vijayendra) ಅವರನ್ನೇ ಈ ಸ್ಥಾನದಲ್ಲಿ ಮುಂದುವರಿಸುವ ಸಾಧ್ಯತೆಗಳು ಹೆಚ್ಚಾಗಿವೆ.

ಮುಖ್ಯಾಂಶಗಳು

  • ಬೆಂಗಳೂರಿಗೆ ರಾಷ್ಟ್ರೀಯ ನಾಯಕರ ದಂಡು.
  • ಮೇ 23 ರಂದು ಪಕ್ಷದ ರಾಷ್ಟ್ರೀಯ ನಾಯಕ ನಿತಿನ್ ನಬಿನ್ ಬೆಂಗಳೂರಿಗೆ.
  • ಮೇ 24 ರಂದು ಕೋರ್ ಕಮಿಟಿ ಸೇರಿದಂತೆ ಪ್ರಮುಖ ಸಭೆಗಳ ಆಯೋಜನೆ. ಮೇ 25 ರಂದು ಕೇಂದ್ರ ಸಚಿವ ಭೂಪೇಂದ್ರ ಯಾದವ್ ಬೆಂಗಳೂರಿಗೆ ಭೇಟಿ.

ವಿಜಯೇಂದ್ರಗೆ ಬಲ ತುಂಬಿದ ಅಮಿತ್ ಶಾ ಹೇಳಿಕೆ

ಇತ್ತೀಚೆಗೆ ಚಿತ್ರದುರ್ಗದಲ್ಲಿ ನಡೆದ ಬಿಎಸ್ ಯಡಿಯೂರಪ್ಪ ಅವರ 50 ವರ್ಷಗಳ ಸಾರ್ವಜನಿಕ ಜೀವನದ ‘ಅಭಿಮಾನೋತ್ಸವ’ ಕಾರ್ಯಕ್ರಮದಲ್ಲಿ ಇಡೀ ರಾಜ್ಯದ ಮಠಾಧಿಪತಿಗಳು ಒಂದೇ ವೇದಿಕೆಗೆ ಬರಲು ಬಿಎಸ್​ವೈ ಅವರೇ ಕಾರಣ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ಲಾಘಿಸಿದ್ದರು. ಇದು ಪರೋಕ್ಷವಾಗಿ ವಿಜಯೇಂದ್ರ ಅವರಿಗೆ ನೈತಿಕವಾಗಿ ದೊಡ್ಡ ಶಕ್ತಿ ತುಂಬಿದೆ ಎನ್ನಲಾಗಿದೆ.

ಕೋರ್ ಕಮಿಟಿ ಪುನಾರಚನೆ ಭೀತಿ

ರಾಜ್ಯ ಬಿಜೆಪಿಯ ನಿರ್ಣಾಯಕ ಸಮಿತಿಯಾದ ಕೋರ್ ಕಮಿಟಿ ಶೀಘ್ರದಲ್ಲೇ ಪುನಾರಚನೆಗೊಳ್ಳಲಿದ್ದು, ಹಾಲಿ ಇರುವ ಇಬ್ಬರು ಪ್ರಮುಖ ಸದಸ್ಯರನ್ನು ಕೈಬಿಟ್ಟು ಹೊಸ ಮುಖಗಳಿಗೆ ಮನ್ನಣೆ ನೀಡುವ ಸಾಧ್ಯತೆ ಇದೆ.

ಸಂಘ ಪರಿವಾರದ ಸಾಫ್ಟ್ ಕಾರ್ನರ್ – ಕೋರ್ ಕಮಿಟಿ ರೇಸ್

ಚಿತ್ರದುರ್ಗದ ಸಮಾವೇಶವು ಕೇವಲ ಬಿಎಸ್​ವೈ ಅಭಿಮಾನೋತ್ಸವ ಎಂದು ವಿಜಯೇಂದ್ರ ಸ್ಪಷ್ಟಪಡಿಸುತ್ತಿದ್ದರೂ, ಇದು ಪರೋಕ್ಷವಾಗಿ ಯಡಿಯೂರಪ್ಪ ಅವರ ಭಾರಿ ಶಕ್ತಿ ಪ್ರದರ್ಶನ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಈ ಅಭೂತಪೂರ್ವ ಯಶಸ್ಸಿನ ಬಳಿಕ ವಿಜಯೇಂದ್ರ ಅವರನ್ನೇ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಲು ಹೈಕಮಾಂಡ್ ಜೊತೆಗೆ ಸಂಘ ಪರಿವಾರದಲ್ಲೂ (RSS) ಸಾಫ್ಟ್ ಕಾರ್ನರ್ ಮೂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ಅದ್ಧೂರಿ ಬಿಎಸ್​ವೈ ಅಭಿಮಾನೋತ್ಸವ: ಯಡಿಯೂರಪ್ಪರ 50 ವರ್ಷಗಳ ರಾಜಕೀಯ ಪಯಣ ಕೊಂಡಾಡಿದ ಅಮಿತ್​ ಶಾ

ಮತ್ತೊಂದೆಡೆ, ಪುನಾರಚನೆಗೊಳ್ಳಲಿರುವ ಕೋರ್ ಕಮಿಟಿ ಸೇರಲು ಬಿಜೆಪಿಯ ಹಿರಿಯ ನಾಯಕರು ಭಾರಿ ಕಸರತ್ತು ನಡೆಸುತ್ತಿದ್ದಾರೆ. ಸಂಸದ ಜಗದೀಶ್ ಶೆಟ್ಟರ್, ಕೇಂದ್ರ ಸಚಿವರಾದ ವಿ. ಸೋಮಣ್ಣ ಹಾಗೂ ಶೋಭಾ ಕರಂದ್ಲಾಜೆ ಅವರು ಸಮಿತಿಯ ಸದಸ್ಯರಾಗಲು ತೀವ್ರ ಉತ್ಸುಕತೆ ಹೊಂದಿದ್ದಾರೆ. ಇದರೊಂದಿಗೆ ಶಾಸಕ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನೀಲ್ ಕುಮಾರ್ ಅವರ ಹೆಸರೂ ಸಹ ಮುಂಚೂಣಿಯಲ್ಲಿದೆ. ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನು ಕೇವಲ ಎರಡು ವರ್ಷ ಬಾಕಿ ಇರುವ ಹಿನ್ನೆಲೆಯಲ್ಲಿ, ರಾಜ್ಯ ಬಿಜೆಪಿಯಲ್ಲಿ ಹೈಕಮಾಂಡ್ ತೆಗೆದುಕೊಳ್ಳಲಿರುವ ಈ ನಿರ್ಧಾರಗಳು ತೀವ್ರ ಕುತೂಹಲ ಕೆರಳಿಸಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿನ ಭವಿಷ್ಯ: ಇಂದು ಈ ರಾಶಿಯವರು ಅಪಘಾತದಲ್ಲಿ ಸಿಲುಕುವ ಸಾಧ್ಯತೆ – Kannada News | Horoscope May 20 Wednesday 2026; Dina Rashi Bhavishya Today, Checkout the details here

ಮೇಷ ರಾಶಿ:

ಬಂಧುಗಳ ಸಹಾಯದಿಂದ ಈ ಯೋಜನೆಗಳನ್ನು ಪ್ರಾರಂಭಿಸುವಿರಿ. ವಿವಾಹಕ್ಕೆ ಸಂಬಂಧಿಸದಂತೆ ಖರೀದಿಗಳು ಆಗಲಿವೆ. ಪ್ರೇಮ ಸಂಬಂಧ ಕಟ್ಟುವ ಉತ್ತಮ ಸಮಯ. ಪ್ರೀತಿಯ ಶಕ್ತಿ ನಿಮ್ಮನ್ನು ಭಾವುಕಗೊಳಿಸುತ್ತದೆ. ಕಾರ್ಯಕ್ಷೇತ್ರದಲ್ಲಿ ವಿರೋಧಿಗಳಿಂದ ಸಹಕಾರ ಸಿಗಲಿದೆ. ಸ್ನೇಹಿತರ ಕೆಲವು ವರ್ತನೆಗಳು ನಿಮಗೆ ಇಷ್ಟವಾಗದೇ ಇರಬಹುದು. ಸಮಯದ ನಿರೀಕ್ಷೆಯಲ್ಲಿ ಇರಿ. ನಿಮ್ಮ ರಹಸ್ಯವು ಬೆಳಕಿಗೆ ಬರಬಬಹುದು ಎಂಬ ಭೀತಿಯು ಇರಲಿದೆ. ಇಂದಿನ ಕೆಲವು ಸಮಯವನ್ನು ಮನೆಯವರಿಗೆ ಮೀಸಲಿಡಿ.

ವೃಷಭ ರಾಶಿ:

ಖರೀದಿಯಲ್ಲಿ ಹಣದ ಜಾಗರೂಕತೆ ವಹಿಸುವುದು ಅಗತ್ಯ. ಕುಟುಂಬದೊಂದಿಗೆ ಸಮಯ ಕಳೆದರೆ ಆತ್ಮತೃಪ್ತಿ ಲಭಿಸುತ್ತದೆ. ನಿಮ್ಮ ಸ್ನೇಹಿತರು ನಿಮಗೆ ಸಮಯಕೊಡಲಾರರು. ಕೆಲಸದ ನಿಟ್ಟಿನಲ್ಲಿ ಹೊಸ ಯೋಜನೆಗಳು ಆರಂಭವಾಗುತ್ತವೆ. ಪ್ರಪಂಚಜ್ಞಾನದ ಅಗತ್ಯತೆ ಹೆಚ್ಚಿವಿರುವಂತೆ ತೋರುತ್ತದೆ. ಮುನ್ನುಗ್ಗಲು ನಿಮಗೆ ಸ್ಥೈರ್ಯ ಸಾಲದು. ವಾಹನ ಚಾಲನೆಯಲ್ಲಿ ಉತ್ಸಾಹ ಹೆಚ್ಚಿರುವುದು. ಕಳೆದುಕೊಂಡಿದ್ದನ್ನು ಪಡೆಯುವ ಛಲವು ಬರಬಹುದು.

ಮಿಥುನ ರಾಶಿ:

ಇಂದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಕ್ರಿಯವಾಗಿ ಭಾಗಿ. ಯೋಜನೆಗಳ ಬಗ್ಗೆ ಹಿರಿಯರೊಂದಿಗೆ ಚರ್ಚಿಸಿ. ಸುಳ್ಳನ್ನು ಸತ್ಯದಂತೆ ಹೇಳುವಿರಿ. ಏಕಪಕ್ಷದ ಪ್ರೇಮದಿಂದ ಎಚ್ಚರಿಕೆ ಅಗತ್ಯ. ಹೊಸ ಯೋಜನೆ ಆರಂಭಕ್ಕೆ ಉತ್ತಮ ದಿನ. ಕೆಲಸದಲ್ಲಿ ಹೆಚ್ಚು ಸಡಿಲತೆ ಇಟ್ಟುಕೊಳ್ಳಿ. ಕುಟುಂಬದೊಂದಿಗೆ ಹೊರಗಿನ ಪ್ರವಾಸ ಯೋಜನೆ ರೂಪಿಸುವಿರಿ. ಕಾನೂನಾತ್ಮಕ ವಿಚಾರಕ್ಕೆ ಮಾತ್ರ ನಿಮ್ಮ ಬೆಂಬಲವು ಇರಲಿ. ಸಂಗಾತಿಯ ಜೊತೆ ಒಡನಾಟವು ಹೆಚ್ಚಿರಲಿದೆ. ತಂದೆಯ ಶ್ರಮವನ್ನು ಕಂಡು ಮಕ್ಕಳಿಗೆ ನೋವಾಗಬಹುದು.

ಕರ್ಕಾಟಕ ರಾಶಿ:

ಸಾಮಾಜಿಕ ವ್ಯವಸ್ಥೆಗೆ ಹೊಂದಿಕೊಳ್ಳಬೇಕು. ನಿಮ್ಮನ್ನು ಆರೋಗ್ಯವಂತರನ್ನಾಗಿ ಸಂಗಾತಿ ಮಾಡುವಳು. ಇಂದು ನೀವು ದೈವಕ್ಕಿಂತ ಪುರುಷಪ್ರಯತ್ನವೇ ಹೆಚ್ಚು ಪ್ರಭಾವೀ ಎಂದು ಅನ್ನಿಸಬಹುದು. ಹಣದ ಅವಶ್ಯಕತೆ ನಿಮಗೆ ಹಣದ ಮೌಲ್ಯ ತಿಳಿಸುತ್ತದೆ. ಮನಸ್ಸು ಹಾಗೂ ಮಾತುಗಳಲ್ಲಿ ಸ್ಥಿರತೆ ಇರಲಿ. ಸಂಗಾತಿಯ ಕಡೆಯಿಂದ ನಿಮಗೆ ಅಚ್ಚರಿ ಇರುವುದು. ಏನನ್ನಾದರೂ ಸಾಧಿಸಬೇಕು ಎಂಬ ಹಂಬಲವು ಹುಟ್ಟಿಕೊಂಡೀತು. ಕೋಪಕ್ಕೆ ಮಿತಿ‌ ಇರಲಿ. ಇನ್ನೊಬ್ಬರ ಜೊತೆ ಸಂಬಂಧವನ್ನು ಬಯಸಿ, ಬೆಳೆಸುವಿರಿ.

ಸಿಂಹ ರಾಶಿ:

ಏನೇ ಆದರೂ ನಿಮ್ಮ ಆಲೋಚನೆಗಳನ್ನು ಸಕಾರಾತ್ಮಕವಾಗಿ ಇರಲಿ. ಸಂತೋಷವನ್ನು ಹಂಚಿಕೊಳ್ಳುವಿರಿ. ಹಣದ ವ್ಯವಹಾರ ಒಳ್ಳೆಯ ದಿನ. ಸಂಗಾತಿಯೊಂದಿಗೆ ಗೌಪ್ಯ ವಿಷಯ ಹಂಚಿಕೆ ವೇಳೆ ಎಚ್ಚರಿಕೆ ಇರಲಿ. ಪ್ರೇಮವು ಸತ್ಯವೆಂದು ತಿಳಿದುಕೊಳ್ಳಿ. ಮಕ್ಕಳಿಂದ ನೀವು ದೂರಾಗುವ ಸಾಧ್ಯತೆ ಇದೆ. ಭೂ ವ್ಯವಹಾರದಲ್ಲಿ ಮನಸ್ತಾಪ ಬರಬಹುದು. ಯಾವುದೇ ನಿಬಂಧನೆಗಳನ್ನು ಇಟ್ಟುಕೊಳ್ಳದೇ ಒಪ್ಪಿಕೊಳ್ಳಿ. ನಿಮ್ಮ ಸಮಯ ಬಂದಾಗ ಅದನ್ನು ಚರ್ಚಿಸಲು ಅವಕಾಶ ಬರುವುದು. ಇಂದು ವ್ಯಾಪಾರ ವಿಷಯಗಳಲ್ಲಿ ನೀವು ಅನುಭವಿಗಳ ಸಲಹೆಯನ್ನು ತೆಗೆದುಕೊಳ್ಳುವಿರಿ.

ಕನ್ಯಾ ರಾಶಿ:

ನಿಮ್ಮ ಹಾಸ್ಯದ ಸ್ವಭಾವವು ಮನೆಯಲ್ಲಿ ಸಂತೋಷದ ವಾತಾವರಣವನ್ನು ಇರಿಸುತ್ತದೆ. ಹಣದ ಲಾಭಕ್ಕಾಗಿ ಹಿರಿಯರ ಆಶೀರ್ವಾದದಿಂದ ಶುಭ ಫಲ. ಪೋಷಕರ ಆರೋಗ್ಯದತ್ತ ಗಮನ ಅಗತ್ಯ. ಪ್ರೀತಿಯಲ್ಲಿ ಸಹನಶೀಲತೆ ಅಗತ್ಯ. ಬಾಕಿಯ ವಿಷಯಗಳ ತೀರ್ಮಾನಕ್ಕೆ ಒಳ್ಳೆಯ ಸಮಯ. ಸಮಯವನ್ನು ಸದುಪಯೋಗಪಡಿಸಿಕೊಳ್ಳುವುದು ಮುಖ್ಯ. ಲೆಕ್ಕಶೋಧಕರು ಇಂದು ಒತ್ತಡದಲ್ಲಿ ಇರುವರು. ಸಾಮಾಜಿಕವಾಗಿ ಗುರುತಿಸಿಕೊಳ್ಳಲು ಇಷ್ಟಪಡಲಾರಿರಿ.

ತುಲಾ ರಾಶಿ:

ಹೂಡಿಕೆಯಲ್ಲಿ ಆದ ಲಾಭವನ್ನು ಅಸೂಯೆ ಪಡುವವರ ಜೊತೆ ಗೊತ್ತಿಲ್ಲದೇ ಹಂಚಿಕೊಳ್ಳುವಿರಿ. ಸ್ನೇಹಿತರ ಮೂಲಕ ಹೊಸ ಸಂಪರ್ಕಗಳು ದೊರೆಯಲಿವೆ. ಪ್ರೇಮ ಸಂಬಂಧದ ಗೊಂದಲಗಳು ತೀರಬಹುದು. ಹೊಸ ಉದ್ಯಮದ ಪ್ರಾರಂಭಕ್ಕೆ ಇದು ಉತ್ತಮ ದಿನ. ಒಮ್ಮೆ ನಂಬಿಕೆಯನ್ನು ಇಟ್ಟುಕೊಂಡ ಅನಂತರ ಅನುಮಾನ ಬೇಡ. ನೀವು ಇಂದು ಆಸ್ತಿಯನ್ನು ಖರೀದಿಸಲು ಪ್ರಯತ್ನಿಸುತ್ತಿದ್ದು ನೀವು ಅದನ್ನು ಸುಲಭವಾಗಿ ಸಾಧಿಸುವಿರಿ. ಕೆಟ್ಟ ಸ್ವಪ್ನದ ಚಿಂತೆಯಲ್ಲಿಯೇ ಇರುವಿರಿ.

ವೃಶ್ಚಿಕ ರಾಶಿ:

ನಿಮ್ಮವರಿಂದ ಹೆಚ್ಚಿನದನ್ನು ನಿರೀಕ್ಷಿಸದಿರುವುದು ಒಳ್ಳೆಯದು. ಯಾವುದನ್ನೂ ಅಳುಕಿನಿಂದ ಮಾಡಲಾರಿರಿ. ಪ್ರೀತಿಯ ಮಹತ್ವವನ್ನು ನೀವು ಹೊಸದಾಗಿ ಅರಿಯುವಿರಿ. ಉತ್ತಮ ಯೋಜನೆಗಳ ಮೂಲಕ ಯಶಸ್ಸು ಗಳಿಸಬಹುದು. ವ್ಯವಹಾರ ಅಭಿವೃದ್ಧಿಗಾಗಿ ಹೊಸ ಯೋಜನೆಯನ್ನು ಪ್ರಯೋಗಕ್ಕೆ ತರುವಿರಿ. ನಿಮಗೆ ಇಷ್ಟವಾದವರ ಬಗ್ಗೆ ನಿಮಗೆ ಅನುಕಂಪ ಬರಬಹುದು. ಆರ್ಥಿಕ ವಿಚಾರವನ್ನು ಬಹಿರಂಗಪಡಿಸುವುದು ಬೇಡ. ದಾಂಪತ್ಯದಲ್ಲಿ ನಡೆಯುತ್ತಿದ್ದ ವಿವಾದವು ಪೂರ್ಣಗೊಂಡು ಹೊಂದಿಕೊಳ್ಳುವಿರಿ.

ಧನು ರಾಶಿ:

ಆರ್ಥಿಕತೆಯ ದುರ್ಬಲದಿಂದಾಗಿ ದುರ್ಮಾರ್ಗವನ್ನು ಅನುಸರಿಸುವ ಯೋಚನೆ ಬರಲಿದೆ. ಹಾಗಾಗಿ ನಿಮ್ಮ ಆಲೋಚನೆಗಳು ಅನ್ಯ ಮಾರ್ಗದ ಕಡೆ ಹರಿಬಿಡದೇ ಸಕಾರಾತ್ಮಕವಾಗಿ ಇರಲಿ. ಹಣ ಮರಳಿ ಸಿಗುವ ಸಾಧ್ಯತೆ ಇದೆ. ಕಾರ್ಯಕ್ಷೇತ್ರದ ಕೆಲಸಗಳು ಮುಂದಿನ ದಿನಗಳಲ್ಲಿ ಫಲ ನೀಡಲಿವೆ. ಬಹುಕಾಲದ ನಿರೀಕ್ಷೆಯ ವಿಷಯದಲ್ಲಿ ಸಣ್ಣ ಕಂಡುಬರಬಹುದು. ನಿಮ್ಮ ಮನೆಯ ಕಾರ್ಯವು ಹಲವು ದಿನಗಳಿಂದ ನಿಂತಿದ್ದು ಮತ್ತೆ ಆರಂಭಿಸುವಿರಿ. ವೈಯಕ್ತಿಕ ಕಾರ್ಯದಲ್ಲಿ ಗಮನವು ಕಡಿಮೆ ಇರುವುದು.

ಮಕರ ರಾಶಿ :

ನಿಮ್ಮ ಜೀವನದ ಪ್ರತಿಯೊಂದು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ನೀವು ಪ್ರಯತ್ನಿಸುತ್ತೀರಿ. ನಿಮ್ಮ ಕೋಪವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಮಕ್ಕಳಿಂದ ಹಣಕಾಸು ಲಾಭ ಸಾಧ್ಯ. ಮನೆಯಲ್ಲಿ ಖರ್ಚು ಅಥವಾ ಇತರೆ ವಿಚಾರದಿಂದ ಗಲಾಟೆ ಉಂಟಾಗಬಹುದು. ಇಂದು ನಿಮ್ಮ ಬಳಿ ಹಣವು ಬಂದು ಸೇರಿದರೂ ಮರುಪಾವತಿಗೆ ಮನಸ್ಸಾಗದು. ಬಂಧುಗಳಿಂದಾದ ನೋವನ್ನು ನೀವು ಹೇಳಿಕೊಳ್ಳಲಾರಿರಿ. ಅನವಶ್ಯಕ ಸಂಪರ್ಕವನ್ನು ಕಡಿದುಕೊಳ್ಳಲು ಇಚ್ಛಿಸುವಿರಿ.

ಕುಂಭ ರಾಶಿ :

ನಿಮ್ಮ ಕಾರ್ಯಗಳು ಎಷ್ಟೇ ಶ್ರಮಿಸಿದರೂ ಅಪರಿಪೂರ್ಣವಾತ್ತದೆ ಎಂಬ ಭರವಸೆಯಿದ್ದರೆ ಅದನ್ನು ಬಿಟ್ಟುಬಿಡಿ‌. ಆಕರ್ಷಕ ವ್ಯಕ್ತಿತ್ವ ಇತರರ ಗಮನ ಸೆಳೆಯುತ್ತದೆ. ಸಾಲವಿದ್ದರೆ ಅದನ್ನು ತಿರುಗಿಸಿ ಮುಕ್ತಗೊಳ್ಳುವ ಅವಕಾಶವಿದೆ. ಮನೆಯವರೊಂದಿಗೆ ಕೆಲಸಗಳಲ್ಲಿ ನಿರತರಾಗುವ ದಿನ. ಪ್ರೇಮ ಜೀವನದಲ್ಲಿ ಹೊಸ ತಿರುವು ಮೂಡಲಿದೆ. ಕೆಲಸದ ಒತ್ತಡದಿಂದ ದೂರವಿದ್ದು ಸಂಬಂಧಗಳಿಗೆ ಹೆಚ್ಚು ಸಮಯ ನೀಡಲಾಗುವುದು. ದುಷ್ಕೃತ್ಯಕ್ಕೆ ಪ್ರೇರಣೆ ಸಿಗಬಹುದು. ಅಶುಭ ಸೂಚನೆಗಳನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಯದಲ್ಲಿ ಪ್ರವೃತ್ತರಾಗಿ.

ಮೀನ ರಾಶಿ :

ಮನೆಯಲ್ಲಿ ಶಿಸ್ತಿನ ವಾತಾವರಣವು ಸಂತೋಷವನ್ನು ತರುವುದು. ದೀರ್ಘಕಾಲದ ಖಾಯಿಲೆಯು ಇಂದು ಸ್ವಲ್ಪ ಕಡಿಮೆಯಾಗಲಿದೆ. ಇಂದು ನಿಮ್ಮ ಮನಸ್ಸು ಶಾಂತವಾಗಿದ್ದು ಶ್ರೇಷ್ಠ ಚಿಂತನೆಗೆ ಇದು ಸೂಕ್ತ ಸಮಯವಾಗಿದೆ. ಹಣಕಾಸಿನ ವಿಷಯದಲ್ಲಿ ನಿರೀಕ್ಷಿಸದ ಲಾಭ ಸಾಧ್ಯವಿದೆ. ಬಹಳ ಹುಡುಕಾಟದ ಅನಂತರದ ಉತ್ತಮ‌ ವಿವಾಹ ಸಂಬಂಧವು ಬರುವುದು. ಕರ್ತವ್ಯದ ವಿಚಾರದಲ್ಲಿ ನಿಮ್ಮ ಆಲಸ್ಯವೋ ಬೇಜವಾಬ್ದಾರಿಯೋ ಒಳ್ಳೆಯದಲ್ಲ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಅಧಿಕ ಜ್ಯೇಷ್ಠ, ಸೌರ ಮಾಸ : ವೃಷಭ, ಮಹಾನಕ್ಷತ್ರ : ಕೃತ್ತಿಕಾ, ವಾರ : ಬುಧ, ಪಕ್ಷ : ಶುಕ್ಲ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಆರ್ದ್ರಾ / ಪುನರ್ವಸು, ಯೋಗ : ಧೃತಿ, ಕರಣ : ಬವ, ಸೂರ್ಯೋದಯ – 05 – 57 am, ಸೂರ್ಯಾಸ್ತ – 06 – 44 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:21 – 13:57, ಯಮಗಂಡ ಕಾಲ 07:33 – 09:09, ಗುಳಿಕ ಕಾಲ 10:45 – 12:21

-ಲೋಹಿತ ಹೆಬ್ಬಾರ್-8762924271 (what’s app only)

Source link

ವೈಭವ್ ಸೂರ್ಯವಂಶಿ ಆರ್ಭಟಕ್ಕೆ ತತ್ತರಿಸಿದ ಲಕ್ನೋ ಸೂಪರ್ ಜೈಂಟ್ಸ್ – Kannada News | IPL 2026: Rajasthan Royals vs Lucknow Super Giants Match Highlights

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 64ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ಯುವ ದಾಂಡಿಗ ವೈಭವ್ ಸೂರ್ಯವಂಶಿ. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ಪರ ಮಿಚೆಲ್ ಮಾರ್ಚ್ (96) ಅಬ್ಬರಿಸಿದರು. ಈ ಅಬ್ಬರದೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ 20 ಓವರ್​ಗಳಲ್ಲಿ ಬರೋಬ್ಬರಿ 220 ರನ್ ಕಲೆಹಾಕಿತು.

ಈ ಕಠಿಣ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ವೈಭವ್ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ ಸ್ಫೋಟಕ ಆರಂಭ ಒದಗಿಸಿದ್ದರು. ಇಬ್ಬರು ಯುವ ದಾಂಡಿಗರ ಅಬ್ಬರದೊಂದಿಗೆ ಆರ್​ಆರ್ ಪಡೆ ಪವರ್​ಪ್ಲೇನಲ್ಲಿ 71 ರನ್ ಕಲೆಹಾಕಿತು.

ಈ ಹಂತದಲ್ಲಿ ಯಶಸ್ವಿ ಜೈಸ್ವಾಲ್ (43) ಔಟಾದರು. ಜೈಸ್ವಾಲ್ ನಿರ್ಗಮನದ ಬೆನ್ನಲ್ಲೇ ವೈಭವ್ ಸೂರ್ಯವಂಶಿ ಆರ್ಭಟ ಶುರು ಮಾಡಿದರು. ಯುವ ದಾಂಡಿಗನ ಈ ಆರ್ಭಟಕ್ಕೆ ಲಕ್ನೋ ಸೂಪರ್ ಜೈಂಟ್ಸ್ ಬೌಲರ್​ಗಳ ಲಯ ತಪ್ಪಿದರು. ಇದರ ಸಂಪೂರ್ಣ ಲಾಭ ಪಡೆದ ವೈಭವ್ ಮೈದಾನದ ಮೂಲೆ ಮೂಲೆಗೆ ಸಿಕ್ಸ್​-ಫೋರ್​ಗಳ ಸುರಿಮಳೆಗೈದರು.

ಈ ಮೂಲಕ ವೈಭವ್ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಸ್ಫೋಟಕ ಹಾಫ್ ಸೆಂಚುರಿ ಬಳಿಕ ಕೂಡ ಸಿಡಿಲಬ್ಬರ ಮುಂದುವರೆಸಿದ ವೈಭವ್ ಲಕ್ನೋ ಸೂಪರ್ ಜೈಂಟ್ಸ್ ಬೌಲರ್​ಗಳನ್ನು ಮನಸೋ ಇಚ್ಚೆ ದಂಡಿಸಿದರು. ಪರಿಣಾಮ 38 ಎಸೆತಗಳಲ್ಲಿ 10 ಭರ್ಜರಿ ಸಿಕ್ಸರ್ ಹಾಗೂ 7 ಫೋರ್​ಗಳು ಮೂಡಿಬಂದವು.

ಈ ಹಂತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡುವ ಮೂಲಕ  ಕೇವಲ 7 ರನ್​ಗಳಿಂದ ವೈಭವ್ ಸೂರ್ಯವಂಶಿ (93) ಶತಕ ವಂಚಿತರಾದರು. ಆದರೆ ಅಷ್ಟರಲ್ಲಾಗಲೇ ರಾಜಸ್ಥಾನ್ ರಾಯಲ್ಸ್ ತಂಡದ ಸ್ಕೋರ್ 14 ಓವರ್​ಗಳಲ್ಲಿ 180 ಕ್ಕೆ ಬಂದು ನಿಂತಿತ್ತು.

ವೈಭವ್ ಸೂರ್ಯವಂಶಿ ಔಟಾದ ಬಳಿಕ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಧ್ರುವ್ ಜುರೆಲ್ 38 ಎಸೆತಗಳಲ್ಲಿ ಅಜೇಯ 53 ರನ್ ಬಾರಿಸಿದರು. ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡವು 19.1 ಓವರ್​ಗಳಲ್ಲಿ 225 ರನ್ ಬಾರಿಸಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಈ ಗೆಲುವಿನೊಂದಿಗೆ ರಾಜಸ್ಥಾನ್ ರಾಯಲ್ಸ್ ತಂಡದ ಪ್ಲೇಆಫ್ ಹಾದಿ ಮತ್ತಷ್ಟು ಸುಲಭವಾಗಿದೆ. ಅಂದರೆ ಮುಂದಿನ ಪಂದ್ಯದಲ್ಲಿ ಆರ್​ಆರ್​ ಪಡೆ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿದರೆ 16 ಅಂಕಗಳೊಂದಿಗೆ ನೇರವಾಗಿ ಪ್ಲೇಆಫ್​ಗೇರಲಿದೆ.

ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ಯಶಸ್ವಿ ಜೈಸ್ವಾಲ್ (ನಾಯಕ), ಲುವಾನ್-ಡ್ರೆ ಪ್ರಿಟೋರಿಯಸ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಡೊನೊವನ್ ಫೆರೇರಾ, ಶುಭಂ ದುಬೆ, ದಸುನ್ ಶಾನಕ, ಜೋಫ್ರಾ ಆರ್ಚರ್, ಸುಶಾಂತ್ ಮಿಶ್ರಾ, ಸಂದೀಪ್ ಶರ್ಮಾ, ಬ್ರಿಜೇಶ್ ಶರ್ಮಾ, ಯಶ್ ರಾಜ್ ಪುಂಜಾ.

ಇದನ್ನೂ ಓದಿ: “ದೇಹ ದಣಿದರೂ ನಾವು ಬಿಡಲ್ಲ”- ಧೋನಿ ಬಗ್ಗೆ ರೈನಾ ಮಾತು

ಲಕ್ನೋ ಸೂಪರ್ ಜೈಂಟ್ಸ್ (ಪ್ಲೇಯಿಂಗ್ XI): ಮಿಚೆಲ್ ಮಾರ್ಷ್, ಜೋಶ್ ಇಂಗ್ಲಿಸ್, ನಿಕೋಲಸ್ ಪೂರನ್, ರಿಷಭ್ ಪಂತ್ (ನಾಯಕ), ಆಯುಷ್ ಬದೋನಿ, ಅಬ್ದುಲ್ ಸಮದ್, ಶಹಬಾಝ್ ಅಹ್ಮದ್, ಮೊಹ್ಸಿನ್ ಖಾನ್, ಮಯಾಂಕ್ ಯಾದವ್, ಆಕಾಶ್ ಮಹಾರಾಜ್ ಸಿಂಗ್, ಪ್ರಿನ್ಸ್ ಯಾದವ್.

Source link

ಭಾರತೀಯ ವಿಜ್ಞಾನಕ್ಕೆ ಹೆಮ್ಮೆಯ ಕ್ಷಣ; ಡಾ. ಸೌಮ್ಯ ಸ್ವಾಮಿನಾಥನ್​ಗೆ ಲಂಡನ್​​ನ ರಾಯಲ್ ಸೊಸೈಟಿಯ ಫೆಲೋಶಿಪ್ – Kannada News | Indian scientist Dr Soumya Swaminathan Elected as Fellow of the Royal Society

ನವದೆಹಲಿ, ಮೇ 19: ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ಮುಖ್ಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ ಜಗತ್ತಿನ ಅತ್ಯಂತ ಪ್ರತಿಷ್ಠಿತ ವೈಜ್ಞಾನಿಕ ಗೌರವಗಳಲ್ಲಿ ಒಂದಾದ ರಾಯಲ್ ಸೊಸೈಟಿಯ (FRS) ಫೆಲೋ ಆಗಿ ಆಯ್ಕೆಯಾಗಿದ್ದಾರೆ. ಪ್ರಸಿದ್ಧ ಕೃಷಿ ವಿಜ್ಞಾನಿ ಮತ್ತು ಭಾರತ ರತ್ನ ಪ್ರಶಸ್ತಿ ಪುರಸ್ಕೃತರಾದ ಪ್ರೊ. ಎಂ.ಎಸ್. ಸ್ವಾಮಿನಾಥನ್ ಕೂಡ ಅದೇ ಸಮೂಹದಲ್ಲಿ FRS ಆಗಿ ಆಯ್ಕೆಯಾಗಿದ್ದರು. ಈ ಮೂಲಕ ಅವರಿಬ್ಬರೂ ಲಂಡನ್ ರಾಯಲ್ ಸೊಸೈಟಿಯ ಫೆಲೋಶಿಪ್ ಪಡೆದ ಭಾರತದ ಮೊದಲ ತಂದೆ-ಮಗಳು ಎನಿಸಿಕೊಂಡಿದ್ದಾರೆ.

ಮುಖ್ಯಾಂಶಗಳು:

  • ಭಾರತದ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್​ಗೆ ರಾಯಲ್ ಸೊಸೈಟಿ ಫೆಲೋಶಿಪ್
  • ಅವರ ತಂದೆ ಎಂ.ಎಸ್. ಸ್ವಾಮಿನಾಥನ್​ಗೂ ಲಭಿಸಿತ್ತು ಈ ಗೌರವ
  • ಲಂಡನ್‌ನ ರಾಯಲ್ ಸೊಸೈಟಿ ವಿಶ್ವದ ಅತ್ಯಂತ ಹಳೆಯ ವಿಜ್ಞಾನ ಅಕಾಡೆಮಿಗಳಲ್ಲೊಂದು

ರಾಯಲ್ ಸೊಸೈಟಿಯ 365 ವರ್ಷಗಳ ಇತಿಹಾಸದಲ್ಲಿ ಫೆಲೋಶಿಪ್ ಪಡೆದ ಎರಡನೇ ಭಾರತೀಯ ಮಹಿಳಾ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್. ಮೊದಲನೆಯವರು 2019ರಲ್ಲಿ ಆಯ್ಕೆಯಾದ ಪ್ರಸಿದ್ಧ ಲಸಿಕೆಶಾಸ್ತ್ರಜ್ಞರಾದ ಪ್ರೊ. ಗಗನ್‌ದೀಪ್ ಕಾಂಗ್.

ಸೌಮ್ಯ ಸ್ವಾಮಿನಾಥನ್ ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮುನ್ನ, ಅವರು 2015 ರಿಂದ 2017 ರವರೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ಮಹಾನಿರ್ದೇಶಕರಾಗಿ ಮತ್ತು ಭಾರತ ಸರ್ಕಾರದ ಆರೋಗ್ಯ ಸಂಶೋಧನಾ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ: ಯೇಸು ಕ್ರಿಸ್ತನ ಅಂತ್ಯಕ್ರಿಯೆಗೆ ಬಳಸಿದ್ದ ಬಟ್ಟೆಗೆ ಭಾರತದ ನಂಟು; ವಿಜ್ಞಾನಿಗಳ ಸಂಶೋಧನೆ ಹೇಳೋದೇನು?

1660 ರಲ್ಲಿ ಸ್ಥಾಪನೆಯಾದ ರಾಯಲ್ ಸೊಸೈಟಿಯು ವಿಶ್ವದ ಅತ್ಯಂತ ಹಳೆಯ ಮತ್ತು ಅತ್ಯಂತ ಗೌರವಾನ್ವಿತ ವೈಜ್ಞಾನಿಕ ಅಕಾಡೆಮಿಗಳಲ್ಲಿ ಒಂದಾಗಿದೆ. ತಮ್ಮ ಕ್ಷೇತ್ರಗಳಿಗೆ ಅಸಾಧಾರಣ ಕೊಡುಗೆಗಳನ್ನು ನೀಡಿದ ವಿಜ್ಞಾನಿಗಳಿಗೆ ಫೆಲೋಶಿಪ್ ನೀಡಲಾಗುತ್ತದೆ.

ಸೌಮ್ಯ ಸ್ವಾಮಿನಾಥನ್ ಯಾರು?:

ಡಾ. ಸೌಮ್ಯ ಸ್ವಾಮಿನಾಥನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದ ಭಾರತದ ಮಕ್ಕಳ ತಜ್ಞೆ ಮತ್ತು ಕ್ಲಿನಿಕಲ್ ವಿಜ್ಞಾನಿಯಾಗಿದ್ದಾರೆ. ಅವರು ವಿಶ್ವ ಆರೋಗ್ಯ ಸಂಸ್ಥೆ (WHO) ಯಲ್ಲಿ ವಹಿಸಿದ್ದ ಪ್ರಮುಖ ನಾಯಕತ್ವದ ಜವಾಬ್ದಾರಿಗಾಗಿ ಜಾಗತಿಕವಾಗಿ ಚಿರಪರಿಚಿತರಾಗಿದ್ದಾರೆ. ಸೌಮ್ಯ ಸ್ವಾಮಿನಾಥನ್ ಅವರ ತಂದೆ, ಭಾರತದ ಹಸಿರು ಕ್ರಾಂತಿಯ ಪಿತಾಮಹ ಹಾಗೂ ಭಾರತ ರತ್ನ ಪುರಸ್ಕೃತರಾದ ಪ್ರೊ. ಎಂ. ಎಸ್. ಸ್ವಾಮಿನಾಥನ್ ಅವರೂ ಸಹ ಹಿಂದೆ ರಾಯಲ್ ಸೊಸೈಟಿಯ ಫೆಲೋ (FRS) ಆಗಿ ಆಯ್ಕೆಯಾಗಿದ್ದರು. ಈಗ ಅವರ ಪುತ್ರಿಯೂ ಅದೇ ಪ್ರತಿಷ್ಠಿತ ಗೌರವವನ್ನು ಪಡೆದುಕೊಳ್ಳುವ ಮೂಲಕ ಈ ವಿಜ್ಞಾನಿ ಕುಟುಂಬವು ದೇಶಕ್ಕೆ ಕೀರ್ತಿ ತಂದಿದೆ.

ಇದನ್ನೂ ಓದಿ: ವಿಜ್ಞಾನಿಗಳು ರೈತರ ಹೊಲಗಳನ್ನೇ ಪ್ರಯೋಗಾಲಯವಾಗಿ ಪರಿವರ್ತಿಸಬೇಕು; ಕೊಯಮತ್ತೂರಿನಲ್ಲಿ ಪ್ರಧಾನಿ ಮೋದಿ ಕರೆ

ಏನಿದು ರಾಯಲ್ ಸೊಸೈಟಿ?:

ಲಂಡನ್‌ನಲ್ಲಿರುವ ರಾಯಲ್ ಸೊಸೈಟಿಯು ವಿಶ್ವದ ಅತ್ಯಂತ ಹಳೆಯ ಮತ್ತು ಅತ್ಯುನ್ನತ ವಿಜ್ಞಾನ ಅಕಾಡೆಮಿಗಳಲ್ಲಿ ಒಂದಾಗಿದೆ. ವಿಜ್ಞಾನ, ವೈದ್ಯಕೀಯ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಜಾಗತಿಕವಾಗಿ ಅಸಾಧಾರಣ ಕೊಡುಗೆ ನೀಡಿದ ವಿಜ್ಞಾನಿಗಳಿಗೆ ಮಾತ್ರ ಇದರ ಸದಸ್ಯತ್ವವನ್ನು (Fellowship) ನೀಡಲಾಗುತ್ತದೆ. ಸರ್ ಐಸಾಕ್ ನ್ಯೂಟನ್, ಆಲ್ಬರ್ಟ್ ಐನ್‌ಸ್ಟೈನ್ ಮತ್ತು ಚಾರ್ಲ್ಸ್ ಡಾರ್ವಿನ್ ಅವರಂತಹ ವಿಶ್ವವಿಖ್ಯಾತ ವಿಜ್ಞಾನಿಗಳು ಇದರ ಸದಸ್ಯರಾಗಿದ್ದರು ಎಂಬುದು ಇದರ ಮಹತ್ವವನ್ನು ಸಾರುತ್ತದೆ.

ಡಾ. ಸೌಮ್ಯ ಸ್ವಾಮಿನಾಥನ್ ಅವರು ಕಳೆದ ಮೂರು ದಶಕಗಳಲ್ಲಿ ಕ್ಷಯರೋಗ (TB) ಮತ್ತು ಎಚ್‌ಐವಿ (HIV) ಕುರಿತು ನಡೆಸಿರುವ ಅದ್ಭುತ ವೈದ್ಯಕೀಯ ಸಂಶೋಧನೆಗಳು ಹಾಗೂ ಕೋವಿಡ್-19 ಜಾಗತಿಕ ಸಾಂಕ್ರಾಮಿಕದ ಸಮಯದಲ್ಲಿ ಜಾಗತಿಕ ಆರೋಗ್ಯ ನೀತಿಗಳನ್ನು ರೂಪಿಸುವಲ್ಲಿ ಅವರು ವಹಿಸಿದ ಅತ್ಯುನ್ನತ ನಾಯಕತ್ವವನ್ನು ಗುರುತಿಸಿ ಈ ಫೆಲೋಶಿಪ್ ನೀಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಟ ಜೂ ಎನ್​ಟಿಆರ್ ಸಿಎಂ ಆಗಲಿದ್ದಾರೆ: ಶಾಸಕ ಹೇಳಿಕೆ – Kannada News | Jr NTR will became CM in future said a Andhra Pradesh MLC

ತಮಿಳುನಾಡಿನಲ್ಲಿ ಸ್ಟಾರ್ ನಟ ವಿಜಯ್ (Vijay) ಚುನಾವಣೆ ಗೆದ್ದು ಸಿಎಂ ಆದ ಬೆನ್ನಲ್ಲೆ, ನೆರೆಯ ಆಂಧ್ರ ಪ್ರದೇಶದಲ್ಲಿ ರಾಜಕೀಯ ಚರ್ಚೆಗಳು ಗರಿ ಗೆದರಿವೆ. ಅದರಲ್ಲೂ ನಟ ಜೂ ಎನ್​​ಟಿಆರ್ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಕೇಳಿ ಬರುತ್ತಿದ್ದು, ವಿಜಯ್ ರೀತಿಯೇ ಜೂ ಎನ್​ಟಿಆರ್ ಸಹ ಸಿಎಂ ಆಗಲಿದ್ದಾರೆ ಎಂದು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದರ ನಡುವೆ ಶಾಸಕರೊಬ್ಬರು ಜೂ ಎನ್​​ಟಿಆರ್ ಬಗ್ಗೆ ಮಾತನಾಡಿ, ಜೂ ಎನ್​​​​ಟಿಆರ್ ಭವಿಷ್ಯದ ಆಂಧ್ರ ಪ್ರದೇಶದ ಸಿಎಂ ಎಂದಿದ್ದಾರೆ.

ವೈಎಸ್​​ರಾ ಪಕ್ಷದ ಮುಖಂಡ ಮತ್ತು ಎಂಎಲ್​​ಸಿ ದುವ್ವಾಡ ಶ್ರೀನಿವಾಸ್ ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಜೂ ಎನ್​​ಟಿಆರ್ ಬಗ್ಗೆ ಮಾತನಾಡಿದ್ದು, ಜೂ ಎನ್​​ಟಿಆರ್​ ಅವರು ಭವಿಷ್ಯದಲ್ಲಿ ಆಂಧ್ರ ಪ್ರದೇಶದ ಸಿಎಂ ಆಗಲಿದ್ದಾರೆ ಎಂದಿದ್ದಾರೆ. ‘ಜೂ ಎನ್‌ಟಿಆರ್‌ಗೆ ಅಪಾರ ಜನಬೆಂಬಲ ಇದೆ. ಅವರ ಮಾತನಾಡುವ ಶೈಲಿ, ಯೋಚನಾ ಲಹರಿ, ಜನರೊಟ್ಟಿಗೆ ಬೆರೆಯುವ ರೀತಿ ಹಾಗೂ ಕುಟುಂಬ ಹಿನ್ನೆಲೆ ಗಮನಿಸಿದರೆ ಅವರು ರಾಜಕೀಯಕ್ಕೆ ಬರುವುದು ಖಾತ್ರಿ. ತೆಲುಗು ಜನರಲ್ಲಿ ಎನ್‌ಟಿಆರ್‌ ಮೇಲೆ ವಿಶೇಷ ಪ್ರೀತಿ ಇದೆ. ಭವಿಷ್ಯದಲ್ಲಿ ಅವರು ರಾಜಕೀಯಕ್ಕೆ ಬಂದರೆ ಸಿಎಂ ಆಗುತ್ತಾರೆ’ ಎಂದಿದ್ದಾರೆ.

ಜೂ ಎನ್​​ಟಿಆರ್ ಅವರಿಗೆ ರಾಜಕೀಯ ಹೊಸದಲ್ಲ. ಈ ಹಿಂದೆ ಅವರು ಆಂಧ್ರದ ಪ್ರಸ್ತುತ ಆಡಳಿತ ಪಕ್ಷ ಟಿಡಿಪಿಯ ರಾಜ್ಯ ಯುವ ಮುಖಂಡರಾಗಿ ಜವಬ್ದಾರಿ ನಿರ್ವಹಿಸಿದ್ದಾರೆ. ಅವಿಭಜಿತ ಆಂಧ್ರದ ಪರ್ಯಟನೆ ನಡೆಸಿ ರಾಜಕೀಯ ಪ್ರಚಾರ ಸಹ ಮಾಡಿದ್ದಾರೆ. ಆದರೆ ಕಳೆದೆರಡು ಚುನಾವಣೆಗಳಲ್ಲಿ ಅವರನ್ನು ಪಕ್ಷವು ಉದ್ದೇಶಪೂರ್ವಕವಾಗಿ ಮೂಲೆಗುಂಪು ಮಾಡಿದೆ. ಪ್ರಸ್ತುತ ಅವರು ಮತ್ತು ಅವರ ಸಹೋದರ ಕಲ್ಯಾಣ್ ರಾಮ್, ಟಿಡಿಪಿ ಪಕ್ಷದಿಂದ ದೂರವೇ ಉಳಿದಿದ್ದಾರೆ.

ಇದನ್ನೂ ಓದಿ:‘ಪೆದ್ದಿ’ಯ ಪ್ರೀ ರಿಲೀಸ್ ಇವೆಂಟ್ ಸಿನಿಮಾದಷ್ಟೆ ಅದ್ಧೂರಿ, 150 ಕೋಟಿ ಮೌಲ್ಯದ ಸೆಟಪ್

ನಾಳೆ (ಮೇ 20) ಜೂ ಎನ್​​ಟಿಆರ್ ಹುಟ್ಟುಹಬ್ಬವಿದ್ದು, ಹಲವು ಸಾಮಾಜಿಕ ಕಾರ್ಯಗಳನ್ನು ಅವರು ತಮ್ಮ ಅಭಿಮಾನಿ ಸಂಘದ ನೆರವಿನಿಂದ ಮಾಡಲಿದ್ದು, ಆ ಮೂಲಕ ಜನರಿಗೆ ಹತ್ತಿರವಾಗುವ ಕಾರ್ಯ ಮಾಡುತ್ತಿದ್ದಾರೆ. ಭವಿಷ್ಯದಲ್ಲಿ ವಿಜಯ್ ರೀತಿಯೇ ಸ್ವಂತ ಪಕ್ಷ ಕಟ್ಟಿ ಜೂ ಎನ್​​ಟಿಆರ್ ಸಹ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಈಗಿನಿಂದಲೇ ಕೇಳಿ ಬರುತ್ತಿವೆ.

ಜೂ ಎನ್​​ಟಿಆರ್ ಪ್ರಸ್ತುತ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಹೊಸ ಸಿನಿಮಾನಲ್ಲಿ ನಟಿಸಲಿದ್ದಾರೆ. ಅದರ ಬಳಿಕ ಯಶ್ ರಾಜ್ ಫಿಲಮ್ಸ್​ ನಿರ್ಮಾಣದ ಹಿಂದಿ ಸಿನಿಮಾ ಒಂದರಲ್ಲಿ ಸಹ ಜೂ ಎನ್​​ಟಿಆರ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಶಿವಮೊಗ್ಗದ ಒಂದೇ ಕುಟುಂಬದ ನಾಲ್ವರು ನಿಗೂಢ ನಾಪತ್ತೆ, ತಿಂಗಳಾದರೂ ಸಿಗದ ಸುಳಿವು – Kannada News | Four members of family missing from month In Shivamogga, case Book

ಶಿವಮೊಗ್ಗ, (ಮೇ 19): ಒಂದೇ ಕುಟುಂಬದ (Family) ನಾಲ್ವರು ನಾಪತ್ತೆಯಾಗಿರುವ(Missing) ಘಟನೆ ಶಿವಮೊಗ್ಗದಲ್ಲಿ (Shivamogga) ನಡೆದಿದೆ. ಶಿವಮೊಗ್ಗದ ಬುದ್ಧನಗರ ನಿವಾಸಿಗಳಾದ ಮೊಹಮ್ಮದ್ ಇಕ್ಬಾಲ್ (62), ನಸ್ರತ್ ಬಾನು (54), ಮೊಹಮ್ಮದ್ ಫಾಜಿಲ್ (35), ಮೊಹಮ್ಮದ್ ಆದಿಲ್ (32) ಎನ್ನುವರು ಕಳೆದ ಒಂದು ತಿಂಗಳಿನಿಂದ ಏಪ್ರಿಲ್ 15ರಿಂದ ನಾಪತ್ತೆಯಾಗಿದ್ದಾರೆ. ಇವತ್ತು ಬರುತ್ತಾರೆ, ನಾಳೆ ಬರುತ್ತಾರೆ ಎಂದು ಸಂಬಂಧಿಕರು ಕಾದು ಕುಳಿತ್ತಿದ್ದರು. ಆದರೆ, ತಿಂಗಳು ಕಳೆದರೂ ಸಹ ಬಾರದಿದ್ದರಿಂದ ಆತಂಕಗೊಂಡ ಸಂಬಂಧಿಕರು ಶಿವಮೊಗ್ಗ ದೊಡ್ಡಪೇಟೆ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್​​ ದಾಖಲಿಸಿದ್ದಾರೆ.

ಮುಖ್ಯಾಂಶ

  • ಶಿವಮೊಗ್ಗದ ಬುದ್ಧನಗರದ ಒಂದೇ ಕುಟುಂಬದ ನಾಲ್ವರು ನಾಪತ್ತೆ
  • ಮೊಹಮ್ಮದ್ ಇಕ್ಬಾಲ್(62), ನಸ್ರತ್ ಬಾನು(54) ಫಾಜಿಲ್(35), ಆದಿಲ್(32) ನಾಪತ್ತೆ.
  • ಏಪ್ರಿಲ್ 15ರಿಂದ ನಾಪತ್ತೆಯಾಗಿರುವ ಕುಟುಂಬಸ್ಥರು
  • ಶಿವಮೊಗ್ಗ ದೊಡ್ಡಪೇಟೆ ಠಾಣೆಯಲ್ಲಿ ಕೇಸ್​​ ದಾಖಲು

ಶಿವಮೊಗ್ಗದ ಬುದ್ಧನಗರದಲ್ಲಿ ನೆಲೆಸಿದ್ದ ಒಂದೇ ಕುಟುಂಬದ ಮೋಹಮ್ಮದ್ ಇಕ್ಬಾಲ್, ನಸ್ರತ್ ಬಾನು, ಮೋಹಮ್ಮದ್ ಫಾಜಿಲ್, ಮೊಹಮ್ಮದ್ ಆದಿಲ್ ಕಳೆದ ಒಂದು ತಿಂಗಳಿನಿಂದ (ಏಪ್ರಿಲ್ 15ರಿಂದ) ಕಾಣೆಯಾಗಿದ್ದಾರೆ. ಎಲ್ಲಿ ಹೋಗಿದ್ದಾರೆ? ಏನೋ ಎನ್ನುವುದೇ ನಿಗೂಢವಾಗಿದೆ. ಸಂಬಂಧಿಕರು ಸಹ ಎಲ್ಲ ಕಡೆ ಹುಡುಕಿದರೂ ಸಹ ಪತ್ತೆಯಾಗಿಲ್ಲ. ಹುಡುಕಿ ಹುಡುಕಿ ಸಾಕಾದ ಬಳಿಕ ಅಂತಿಮವಾಗಿ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದ ದಾಖಲಿಸಿಕೊಂಡಿರುವ ಪೊಲೀಸರು ಸಹ ಶೋಧ ಕಾರ್ಯ ನಡೆಸಿದ್ದಾರೆ.

ಇದನ್ನೂ ಓದಿ: ಅಮ್ಮ-ಅಪ್ಪ ಸ್ವಾರಿ, ನಿಮ್ಮ ಕಣ್ಮುಂದೆ ಸಾಯೋಕೆ ಆಗಲ್ಲ: ಪತ್ರ ಬರೆದಿಟ್ಟು ಸಹೋದರಿಯರು ನಾಪತ್ತೆ

ನಾಪತ್ತೆಯಾದವರ ಸಂಪೂರ್ಣ ವಿವರ

ಮೊದಲನೆಯದಾಗಿ, 62 ವರ್ಷದ ಮೋಹಮ್ಮದ್ ಇಕ್ಬಾಲ್ ಅವರು 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು ಮತ್ತು ಬಿಳಿ ಮೈಬಣ್ಣ ಹೊಂದಿದ್ದಾರೆ. ಇವರೊಂದಿಗೆ 54 ವರ್ಷದ ನಸ್ರತ್ ಬಾನು ಅವರು ನಾಪತ್ತೆಯಾಗಿದ್ದು, ಇವರು 5.2 ಅಡಿ ಎತ್ತರ, ದಪ್ಪ ಮೈಕಟ್ಟು, ಗೋಧಿ ಮೈಬಣ್ಣ ಹಾಗೂ ಸೀಳು ತುಟಿಯ ಗುರುತನ್ನು ಹೊಂದಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.

ಇದೇ ಕುಟುಂಬದ ಯುವಕರಾದ 35 ವರ್ಷದ ಮೋಹಮ್ಮದ್ ಫಾಜಿಲ್ (5.6 ಅಡಿ ಎತ್ತರ, ತೆಳ್ಳನೆ ಮೈಕಟ್ಟು, ಬಿಳಿ ಮೈಬಣ್ಣ ಹಾಗೂ ಎದೆಯ ಭಾಗದಲ್ಲಿ ಚರ್ಮಗಂಟು ಇರುವಿಕೆ) ಮತ್ತು 32 ವರ್ಷದ ಮೊಹಮ್ಮದ್ ಆದಿಲ್ (5.4 ಅಡಿ ಎತ್ತರ, ದಪ್ಪ ಮೈಕಟ್ಟು ಹಾಗೂ ಎಣ್ಣೆಗೆಂಪು ಮೈಬಣ್ಣ) ಇಬ್ಬರೂ ಸಹ ಅದೇ ದಿನದಿಂದ ಕಾಣೆಯಾಗಿದ್ದಾರೆ.

ಈ ನಾಲ್ಕೂ ಜನ ಕಾಣೆಯಾದವರ ಬಗ್ಗೆ ಸಾರ್ವಜನಿಕರಿಗೆ ಯಾವುದೇ ರೀತಿಯ ಸುಳಿವು ಅಥವಾ ಮಾಹಿತಿ ಲಭ್ಯ ಆದಲ್ಲಿ ತಕ್ಷಣವೇ ದೊಡ್ಡಪೇಟೆ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆಗಳಾದ 08182-261414, 9972426144, 9480803345 ಅಥವಾ 6264571710 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆಯು ಪ್ರಕಟಣೆ ಹೊರಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಒಂದು ತಿಂಗಳು ತಪ್ಪದೆ ಒಣದ್ರಾಕ್ಷಿಯನ್ನು ಹಾಲಿನಲ್ಲಿ ನೆನೆಸಿ ತಿಂದ್ರೆ ದೇಹದಲ್ಲಿ ಏನೆಲ್ಲಾ ಆಗುತ್ತೆ ಗೊತ್ತಾ? – Kannada News | Raisin Milk Benefits For Skin, Hair, And Digestion: Ayurvedic Morning Drink

ಅಡುಗೆ ಮನೆಯಲ್ಲಿ ಸುಲಭವಾಗಿ ದೊರೆಯುವ ಡ್ರೈ ಫ್ರೂಟ್ಸ್‌ಗಳಲ್ಲಿ ಒಣದ್ರಾಕ್ಷಿ (Raisin) ಪ್ರಮುಖ ಸ್ಥಾನ ಪಡೆದುಕೊಳ್ಳುತ್ತದೆ. ಸಾಮಾನ್ಯವಾಗಿ ಪಾಯಸ, ಹಲ್ವಾ ಮತ್ತು ಸಿಹಿ ಪದಾರ್ಥಗಳಲ್ಲಿ ಬಳಸುವ ಒಣದ್ರಾಕ್ಷಿಯನ್ನು ಇತ್ತೀಚಿನ ದಿನಗಳಲ್ಲಿ ಹಲವರು ನೀರಿನಲ್ಲಿ ನೆನೆಸಿ ಬೆಳಿಗ್ಗೆ ಸೇವಿಸುವ ಅಭ್ಯಾಸ ಮಾಡಿಕೊಂಡಿದ್ದಾರೆ. ಆದರೆ ಆರೋಗ್ಯ ತಜ್ಞರ ಪ್ರಕಾರ, ಒಣದ್ರಾಕ್ಷಿಯನ್ನು ಹಾಲಿನಲ್ಲಿ ನೆನೆಸಿ ಸೇವಿಸಿದರೆ ದೇಹಕ್ಕೆ ಇನ್ನಷ್ಟು ಪ್ರಯೋಜನಗಳು ದೊರೆಯುತ್ತವೆ. ಹೌದು, ಹಾಲು (Milk) ಮತ್ತು ಒಣದ್ರಾಕ್ಷಿಯ ಸಂಯೋಜನೆ ದೇಹಕ್ಕೆ ಕ್ಯಾಲ್ಸಿಯಂ, ಪ್ರೋಟೀನ್, ಐರನ್ ಹಾಗೂ ಫೈಬರ್‌ಗಳನ್ನು ಸಮೃದ್ಧವಾಗಿ ಒದಗಿಸುತ್ತದೆ. ಇದರಿಂದ ಎಲುಬುಗಳು ಬಲವಾಗುವುದರ ಜೊತೆಗೆ ದೇಹದ ಶಕ್ತಿ ಕೂಡ ಹೆಚ್ಚುತ್ತದೆ. ಹಾಗಾದರೆ ಈ ಅಭ್ಯಾಸದಿಂದ ಯಾವ ರೀತಿಯ ಪ್ರಯೋಜನಗಳು ಸಿಗುತ್ತವೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ರಕ್ತಹೀನತೆ ಮತ್ತು ರಕ್ತದೊತ್ತಡ ನಿಯಂತ್ರಣಕ್ಕೆ ಸಹಕಾರಿ;

ಒಣದ್ರಾಕ್ಷಿಯಲ್ಲಿ ಐರನ್ ಮತ್ತು ಪೊಟ್ಯಾಸಿಯಂ ಪ್ರಮಾಣ ಹೆಚ್ಚು ಇರುತ್ತದೆ. ಹಾಲಿನಲ್ಲಿ ರಾತ್ರಿ ಪೂರ್ತಿ ನೆನೆಸಿದಾಗ ಅದರ ಪೋಷಕಾಂಶಗಳನ್ನು ದೇಹ ಸುಲಭವಾಗಿ ಜೀರ್ಣಿಸಿಕೊಳ್ಳುತ್ತದೆ. ಪ್ರತಿದಿನ ಬೆಳಗ್ಗೆ ಇದನ್ನು ಸೇವಿಸಿದರೆ ರಕ್ತಹೀನತೆ ಕಡಿಮೆಯಾಗಲು ಸಹಾಯವಾಗುತ್ತದೆ. ಜೊತೆಗೆ ಪೊಟ್ಯಾಸಿಯಂ ರಕ್ತದೊತ್ತಡ ನಿಯಂತ್ರಣದಲ್ಲಿರಲು ನೆರವಾಗುತ್ತದೆ.

ಜೀರ್ಣಕ್ರಿಯೆ ಸುಧಾರಿಸುತ್ತದೆ;

ಒಣದ್ರಾಕ್ಷಿಯಲ್ಲಿ ಇರುವ ಡೈಟರಿ ಫೈಬರ್ ಮಲಬದ್ಧತೆ ಸಮಸ್ಯೆಯನ್ನು ಕಡಿಮೆ ಮಾಡಲು ಸಹಕಾರಿ. ಹಾಲಿನಲ್ಲಿ ನೆನೆಸಿದ ನಂತರ ಇದು ಮೃದುವಾಗುವುದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಹೊಟ್ಟೆಯ ಒಳಗಿನ ಉತ್ತಮ ಬ್ಯಾಕ್ಟೀರಿಯಾ ಬೆಳವಣಿಗೆಗೆ ಸಹಾಯವಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ: ಹಾಲು ಆರೋಗ್ಯಕ್ಕೆ ಒಳ್ಳೆಯದು ಆದ್ರೆ ಎಲ್ಲರಿಗೂ ಅಲ್ಲ! ಹಾಗಿದ್ರೆ ಯಾರು ಕುಡಿಯಬಾರದು?

ಹೃದಯ ಮತ್ತು ಚರ್ಮದ ಆರೋಗ್ಯಕ್ಕೂ ಒಳ್ಳೆಯದು;

ಒಣದ್ರಾಕ್ಷಿಯಲ್ಲಿರುವ ಆಂಟಿ ಆಕ್ಸಿಡೆಂಟ್ಸ್ ಮತ್ತು ಆರೋಗ್ಯಕರ ಕೊಬ್ಬುಗಳು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಇದರಿಂದ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ. ಜೊತೆಗೆ ಚರ್ಮ ಒಣಗುವುದು, ಮೊಡವೆ ಮತ್ತು ಕಲೆಗಳಂತಹ ಸಮಸ್ಯೆಗಳನ್ನು ಕಡಿಮೆ ಮಾಡಿ ಮುಖದ ಕಾಂತಿಯನ್ನೂ ಹೆಚ್ಚಿಸುತ್ತದೆ.

ತೂಕ ಇಳಿಕೆಗೆ ಸಹ ಉಪಯುಕ್ತ;

ಹೆಚ್ಚಿನ ಫೈಬರ್ ಇರುವುದರಿಂದ ಈ ಮಿಶ್ರಣ ಹೊಟ್ಟೆ ತುಂಬಿದ ಅನುಭವವನ್ನು ಹೆಚ್ಚು ಸಮಯ ನೀಡುತ್ತದೆ. ಇದರಿಂದ ಅತಿಯಾಗಿ ತಿನ್ನುವ ಅಭ್ಯಾಸ ಕಡಿಮೆಯಾಗಬಹುದು. ಹೀಗಾಗಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರಿಗೆ ಇದು ಸಹಕಾರಿಯಾಗಿದೆ.

ಆದರೆ ಯಾವುದೇ ಆಹಾರವಾಗಲಿ ಅತಿಯಾಗಿ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಆದ್ದರಿಂದ ಮಿತ ಪ್ರಮಾಣದಲ್ಲಿ ಹಾಗೂ ವೈದ್ಯರ ಸಲಹೆಯೊಂದಿಗೆ ಸೇವಿಸುವುದು ಉತ್ತಮ ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಕಂಟ್ರಿ ಮೇಡ್’ ಸಿನಿಮಾನಲ್ಲಿ ಕತೆಯೇ ನಾಯಕ: ವಿಡಿಯೋ

‘ನಮ್ ಏರಿಯಾಲ್ ಒಂದ್ ದಿನ’, ‘ತುಘಲಕ್’, ‘ಹುಲಿರಾಯ’ ಇನ್ನೂ ಕೆಲ ಸಿನಿಮಾಗಳನ್ನು ನಿರ್ದೇಶಿಸಿರುವ ಅರವಿಂದ್ ಕಶ್ಯಪ್ ಇದೀಗ ‘ಕಂಟ್ರಿ ಮೇಡ್ ಭಾಗ 2’ ಹೆಸರಿನ ಸಿನಿಮಾ ನಿರ್ದೇಶಿಸಿದ್ದು, ಇದೊಂದು ಭೂಗತ ಲೋಕದ ಕತೆ ಎನ್ನಲಾಗುತ್ತಿದೆ. ಸಿನಿಮಾದ ಪ್ರಚಾರಕ್ಕಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅರವಿಂದ್ ಕಶ್ಯಪ್, ‘ನಮ್ಮ ಸಿನಿಮಾಕ್ಕೆ ಕತೆಯೇ ನಾಯಕ. ಬೇರೆ ನಾಯಕ ನಾಯಕಿ ಇಲ್ಲ’ ಎಂದು ಹೇಳಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಇಳಯರಾಜಾ ಬಗ್ಗೆ ವ್ಯಂಗ್ಯ: ಕ್ಷಮೆಯಾಚಿಸಿದ ‘ಕರುಪ್ಪು’ ಚಿತ್ರತಂಡ – Kannada News | Karuppu movie team apology to ilaiyaraaja for mocking him

ತಮಿಳು ಸ್ಟಾರ್ ನಟ ಸೂರ್ಯ (Suriya) ನಟಿಸಿ, ಬಾಲಾಜಿ ನಿರ್ದೇಶನ ಮಾಡಿರುವ ‘ಕರುಪ್ಪು’ ಸಿನಿಮಾ ಇತ್ತೀಚೆಗಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದು ಉತ್ತಮ ಪ್ರದರ್ಶನ ಕಾಣುತ್ತಿದ್ದು, ಸಿನಿಮಾ ಈಗಾಗಲೇ 100 ಕೋಟಿ ಗಳಿಕೆಯ ಗಡಿ ದಾಟಿದೆ. ಸಿನಿಮಾ ಆಕ್ಷನ್ ಜೊತೆಗೆ ಕಾಮಿಡಿಯನ್ನೂ ಒಳಗೊಂಡಿದ್ದು, ಸಿನಿಮಾದ ನಿರ್ದೇಶಕ ಬಾಲಾಜಿ, ಸೂರ್ಯ ಅವರ ಕೆಲವು ಹಳೆಯ ಸಿನಿಮಾದ ಸೀನ್​​ಗಳನ್ನು ತಮಾಷೆಯ ರೀತಿಯಲ್ಲಿ ರೀಕ್ರಿಯೇಟ್ ಮಾಡಿದ್ದಾರೆ. ಜೊತೆಗೆ ಸೋಷಿಯಲ್ ಮೀಡಿಯಾ ಟ್ರೆಂಡ್​​ಗಳನ್ನು ಆಧರಿಸಿ ಕೆಲ ಹಾಸ್ಯ ಸಂಭಾಷಣೆಗಳನ್ನು ಸಹ ಬಳಸಿಕೊಂಡಿದ್ದಾರೆ. ಆದರೆ ಈಗ ಅದೇ ‘ಕರುಪ್ಪು’ ತಂಡಕ್ಕೆ ಬಿಸಿ ತುಪ್ಪವಾಗಿದೆ.

ಸಂಗೀತ ಮಾಂತ್ರಿಕ ಇಳಯರಾಜಾ ಅವರು ಹಲವು ಸಿನಿಮಾಗಳ ವಿರುದ್ಧ ಕೃತಿಸ್ವಾಮ್ಯ ಪ್ರಕರಣ ದಾಖಲಿಸಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ತೀವ್ರವಾಗಿ ಚರ್ಚೆ ಆಗಿತ್ತು. ಇದನ್ನೇ ಇರಿಸಿಕೊಂಡು ‘ಕರುಪ್ಪು’ ಸಿನಿಮಾನಲ್ಲಿ ವ್ಯಂಗ್ಯದ ಸಂಭಾಷಣೆ ಒಂದನ್ನು ಇರಿಸಲಾಗಿದ್ದು, ಇಳಯರಾಜ ಅಭಿಮಾನಿಗಳು ಈ ವ್ಯಂಗ್ಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಆಕ್ರೋಶ ಹೊರಹಾಕಿದ್ದರು. ಅಭಿಮಾನಿಗಳ ಆಗ್ರಹಕ್ಕೆ ಮಣಿದಿರುವ ‘ಕರುಪ್ಪು’ ಚಿತ್ರತಂಡವು ಅಧಿಕೃತವಾಗಿ ಕ್ಷಮೆಯಾಚಿಸಿದೆ.

ವಿವಾದ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ಚಿತ್ರತಂಡ ಸಾಮಾಜಿಕ ಮಾಧ್ಯಮಗಳ ಮೂಲಕ ಸುದೀರ್ಘ ಪತ್ರವೊಂದನ್ನು ಹಂಚಿಕೊಂಡು, ‘ನಮ್ಮ ಸಿನಿಮಾದ ಸಂಭಾಷಣೆಯು ಹಿರಿಯ ಸಂಗೀತ ನಿರ್ದೇಶಕರನ್ನು ಅವಮಾನಿಸುವ ಉದ್ದೇಶ ಹೊಂದಿರಲಿಲ್ಲ, ಆದರೂ ಇದರಿಂದ ಯಾರಿಗಾದರೂ ನೋವಾಗಿದ್ದರೆ ನಾವು ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತೇವೆ’ ಎಂದು ಪ್ರಕಟಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಇಳಯರಾಜಾ ಅವರು ತಮ್ಮ ಹಳೆಯ ಹಾಡುಗಳನ್ನು ಅನುಮತಿಯಿಲ್ಲದೆ ಕನ್ಸರ್ಟ್‌ಗಳಲ್ಲಿ ಹಾಗೂ ಸಿನಿಮಾಗಳಲ್ಲಿ ಬಳಸಿಕೊಳ್ಳುವುದರ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಇದನ್ನೇ ಉಲ್ಲೇಖಿಸಿ ‘ಕರುಪ್ಪು’ ಚಿತ್ರದ ದೃಶ್ಯವೊಂದರಲ್ಲಿ ಪಾತ್ರಧಾರಿಗಳು ವ್ಯಂಗ್ಯವಾಗಿ ಸಂಭಾಷಣೆ ನಡೆಸಿದ್ದರು. “ನಾವು ಇಳಯರಾಜಾ ಅವರ ಹಾಡನ್ನು ಸಾರ್ವಜನಿಕವಾಗಿ ಬಳಸಿದರೆ ಅದಕ್ಕೆ ರಾಯಲ್ಟಿ ಅಥವಾ ದಂಡ ಕಟ್ಟಬೇಕಾಗುತ್ತದೆ” ಎಂಬ ಧಾಟಿಯಲ್ಲಿ ಆ ದೃಶ್ಯ ಮೂಡಿಬಂದಿತ್ತು. ಇದು ಇಳಯರಾಜಾ ಅವರ ಕಾನೂನಾತ್ಮಕ ಹಕ್ಕುಗಳ ಹೋರಾಟವನ್ನು ಅಣಕಿಸಿದಂತೆ ಇದೆ ಎಂದು ಅವರ ಬೆಂಬಲಿಗರು ಚಿತ್ರತಂಡದ ವಿರುದ್ಧ ತಿರುಗಿಬಿದ್ದಿದ್ದರು.

ಇದನ್ನೂ ಓದಿ: ‘ಪೆದ್ದಿ’ಯ ಪ್ರೀ ರಿಲೀಸ್ ಇವೆಂಟ್ ಸಿನಿಮಾದಷ್ಟೆ ಅದ್ಧೂರಿ, 150 ಕೋಟಿ ಮೌಲ್ಯದ ಸೆಟಪ್

ತಮ್ಮ ಕ್ಷಮಾಪಣಾ ಪತ್ರದಲ್ಲಿ ‘ಕರುಪ್ಪು’ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರು ಇಳಯರಾಜಾ ಅವರ ಮೇಲಿರುವ ಗೌರವವನ್ನು ವ್ಯಕ್ತಪಡಿಸಿದ್ದಾರೆ. ‘ಇಳಯರಾಜಾ ಅವರು ಭಾರತೀಯ ಚಿತ್ರರಂಗದ ದಂತಕಥೆ. ಅವರ ಸಂಗೀತವನ್ನು ಕೇಳುತ್ತಲೇ ನಾವು ಬೆಳೆದಿದ್ದೇವೆ. ಸಿನಿಮಾದಲ್ಲಿ ಆ ದೃಶ್ಯವನ್ನು ಕೇವಲ ಇಂದಿನ ಪ್ರಚಲಿತ ವಿದ್ಯಮಾನದ ಹಾಸ್ಯಕ್ಕಾಗಿ ಬಳಸಲಾಗಿತ್ತೇ ವಿನಃ, ಅವರ ಸಾಧನೆ ಅಥವಾ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಯಾವುದೇ ಉದ್ದೇಶ ನಮಗಿರಲಿಲ್ಲ. ಅವರ ಮೇಲಿನ ಗೌರವ ನಮಗೆ ಎಂದಿಗೂ ಕಡಿಮೆ ಆಗುವುದಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ. ಮಾತ್ರವಲ್ಲದೆ ಸಿನಿಮಾದಿಂದ ಆ ದೃಶ್ಯವನ್ನು ತೆಗೆಯುವುದಾಗಿಯೂ ಹೇಳಿದ್ದಾರೆ.

‘ಕರುಪ್ಪು’ ಸಿನಿಮಾನಲ್ಲಿ ಸೂರ್ಯ ಮತ್ತು ತ್ರಿಷಾ ನಟಿಸಿದ್ದು, ಸಿನಿಮಾದ ನಿರ್ದೇಶಕ ಬಾಲಾಜಿ ಸಹ ಪ್ರಮುಖವಾದ ಪಾತ್ರವೊಂದರಲ್ಲಿ ನಟಸಿದ್ದಾರೆ. ಸತತ ಸೋಲಿನಿಂದ ಕಂಗೆಟ್ಟಿದ್ದ ಸೂರ್ಯಗೆ ‘ಕರುಪ್ಪು’ ಸಿನಿಮಾ ಮರಳಿ ಜೀವದಾನ ನೀಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version