ದಿನ ಭವಿಷ್ಯ: ಇಂದು ಈ ರಾಶಿಯವರೇ ತಮ್ಮ ಕಾರ್ಯವನ್ನು ಹಾಳುಮಾಡಿಕೊಳ್ಳುವರು

ದಿನ ಭವಿಷ್ಯ: ಇಂದು ಈ ರಾಶಿಯವರೇ ತಮ್ಮ ಕಾರ್ಯವನ್ನು ಹಾಳುಮಾಡಿಕೊಳ್ಳುವರು

ಯುಗಾದಿ ಹೊಸ ವರ್ಷದ ಆರಂಭ. ಹೊಸ ಹರ್ಷಕ್ಕೂ ಆರಂಭ. ಹಳೆಯ ನೋವನ್ನು ಮರೆತು ಹೊಸ ಹರ್ಷಕ್ಕೆ ಸಿದ್ಧರಾಗಿ. ವರ್ಷವಿಡೀ ಸಂತೋಷವಿರಲಿ.

ಮೇಷ ರಾಶಿ:

ನಿಮ್ಮ ಬಂಧುಗಳ ಆರೋಗ್ಯದ ಆರೈಕೆಯನ್ನು ನೀವು ಮಾಡಬೇಕಾದೀತು. ನಿಕಟವರ್ತಿಗಳ ಮಾತನ್ನು ನಗಣ್ಯ ಮಾಡುವಿರಿ. ಅದೃಷ್ಟ ಇದ್ದರೂ ನಿಮ್ಮನ್ನು ನಂಬಿಯೇ ಕೆಲಸ ಮಾಡಿ. ಅವಾಚ್ಯ ಮಾತುಗಳಿಂದ ನಿಮ್ಮನ್ನು ಯಾರಾದರೂ ನಿಂದಿಸಬಹುದು.‌ ಗೊತ್ತಿಲ್ಲದೇ ನಿಮ್ಮದಲ್ಲದ ವಸ್ತುವನ್ನು ತೆಗೆದುಕೊಳ್ಳುವಿರಿ. ಸಮಸ್ಯೆಯ ಕುರಿತೇ ಹೆಚ್ಚು ಆಲೋಚನೆಯಲ್ಲಿ ಮಗ್ನರಾಗುವುದು ಬೇಡ. ಯಾವುದೇ ಜವಾಬ್ದಾರಿಯನ್ನು ದೂರದಿಂದಲೇ ತಳ್ಳಿಹಾಕುವಿರಿ. ಸುಬ್ರಹ್ಮಣ್ಯನ ಉಪಾಸನೆಯು ಸಂತಸಪ್ರದವಾಗಲಿದೆ.

ವೃಷಭ ರಾಶಿ:

ನೀವು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದರೆ ಸಮಯ ಹಾಗೂ ಸ್ಥಳಗಳೂ ಮುಖ್ಯ. ನಿಮ್ಮ ಕಠಿಣ ಪರಿಶ್ರಮದ ಪೂರ್ಣ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ. ಗುರಿಯ ಬಗ್ಗೆ ಇರುವ ದೃಢತೆಯು ಸಡಿಲವಾದೀತು. ಇಂದು ಏನಾದರೂ ಆಗುತ್ತದೆ ಎಂಬ ಅಪಾಯವು ಇರಲಿದೆ. ಬಂಧುಗಳ ಮನೆಯಲ್ಲಿ ನೀವು ಇಂದು ಅನಿರೀಕ್ಷಿತವಾಗಿ ಭೋಜನ ಮಾಡುವಿರಿ. ನಿಂದಕರ ಬಗ್ಗೆ ನಿಮ್ಮ ಮಾತುಗಳು ಇರದು.

ಮಿಥುನ ರಾಶಿ:

ನಿಮ್ಮನ್ನು ಸಂತೋಷಪಡಿಸಿದವರಿಗೆ ಕೃತಜ್ಞತೆಯನ್ನು ತಿಳಿಸಿ. ಮಕ್ಕಳ ಕುರಿತು ನಿಮಗೆ ಅಭಿಮಾನ ಹೆಚ್ಚಾಗುವುದು. ಪ್ರಯಾಣವು ಹಿತವಾಗದೇ ಇರುವುದು. ನಿಮಗೆ ಬೇಕಾದುದನ್ನು ಕೇಳಿ ಪಡೆಯುವಿರಿ. ವೃತ್ತಿಯ ಸ್ಥಳದಲ್ಲಿ ನಿಮ್ಮನ್ನು ಗುರುತಿಸುವರು. ದ್ವೇಷಕ್ಕೆ ಸರಿಯಾದ ಕಾರಣವಿರಲಿ. ಮಕ್ಕಳ ಕಾಳಜಿಯು ಅತಿಯಾಗುವುದು. ನಿಮ್ಮ ಬಳಿ ಇರುವುದನ್ನು ಜೋಪಾನ‌ಮಾಡಿಕೊಳ್ಳುವುದು ಸೂಕ್ತ. ಮಹಾವಿಷ್ಣುವಿನ ಉಪಾಸನೆಯು ನಿಮ್ಮ ಈ‌ ದಿನವನ್ನು ಸಾರ್ಥಕ ಮಾಡಿಸೀತು.

ಕರ್ಕಾಟಕ ರಾಶಿ:

ಸಾಮಾಜಿಕ ಕಾರ್ಯಗಳಲ್ಲಿ ನಿಮಗೆ ಗೌರವ ಹೆಚ್ಚಾಗುವುದು. ಸ್ನೇಹಿತರ ಸಹಾಯದಿಂದ ವ್ಯವಹಾರ ಬೆಳೆಯುತ್ತದೆ. ಬೇರೆಯವರ ವಿಷಯದಲ್ಲಿ ಮೂಗು ತೂರಿಸುವುದು ಬೇಡ. ನಿಮ್ಮ ಶ್ರಮಕ್ಕೆ ಯೋಗ್ಯ ವರಮಾನ ಇಲ್ಲ ಎನಿಸಬಹುದು. ಕಾನೂನಿನ ಚೌಕಟ್ಟಿನಲ್ಲಿ ನಿಮ್ಮ ನಡೆವಳಿಕೆ ಇರಲಿ. ಕಾರಣಾಂತರಗಳಿಂದ ನಿಮ್ಮ ಜೀವನದ ಮಾರ್ಗವು ಬದಲಾಗುವುದು. ನಿಮಗೆ ಇಂದು ವಾದದಲ್ಲಿ ಸೋಲಾಗಬಹುದು, ಮುಗ್ಗರಿಸಿ ಬೀಳುವುದು ಬೇಡ.

ಸಿಂಹ ರಾಶಿ:

ಯಾವುದೇ ಸಮಸ್ಯೆಯಲ್ಲಿ ಮುಳುಗಿದ್ದರೆ, ಇಂದು ಅದಕ್ಕೆ ಪರಿಹಾರ ಸಿಗುವ ಸಾಧ್ಯತೆಯಿದೆ. ಉದ್ಯೋಗದಲ್ಲಿ ಪ್ರಗತಿಯಿಂದ ಲಾಭ ಸಿಗುವುದು. ಕುಟುಂಬ ಜೀವನವನ್ನು ಬಹಳ ಆನಂದಿಸುವಿರಿ. ಪ್ರಭಾವೀ ಜನರು ನಿಮ್ಮನ್ನು ಅಸ್ತ್ರವನ್ನಾಗಿ ಮಾಡಿಕೊಂಡು ಕಾರ್ಯವನ್ನು ಸಾಧಿಸಿಕೊಳ್ಳುವರು. ರಕ್ಷಣೆಯ ಸ್ಥಾನದಲ್ಲಿ ಇರುವವರಿಗೆ ಭಯವಿರುವುದು. ಸಂಕಟವನ್ನು ಪರಿಹರಿಸಿಕೊಳ್ಳುವ ಮಾರ್ಗವು ವಿಳಂಬವಾಗಿ ಸಿಗುವುದು.

ಕನ್ಯಾ ರಾಶಿ:

ನಿಮ್ಮ ಕೋಪವನ್ನು ಒಂದಿಷ್ಟು ಸಮಯದಲ್ಲಾದರೂ ನಿಯಂತ್ರಣದಲ್ಲಿಡಿ. ಕೆಲಸದಲ್ಲಿ ನಿಮಗೆ ಬೆಂಬಲ ಸಿಗುತ್ತದೆ. ಅನಗತ್ಯವಾಗಿ ಓಡಾಡುವುದರಿಂದ ಮನಸ್ಸು ತೊಂದರೆಗೊಳಗಾಗಬಹುದು. ಪ್ರಯಾಣವು ಅವಸರವಸರವಾಗಿ ಇರುವುದು. ಹೂಡಿಕೆಯನ್ನು ಮಾಡುವುದು ನಿಮಗೆ ಅನಿವಾರ್ಯವಾಗಬಹುದು. ನೌಕರರಿಗೆ ಕೆಲಸವನ್ನು ಹೇಳುವ ರೀತಿಯಲ್ಲಿ ಹೇಳಿ, ಮಾಡಿಸಿಕೊಳ್ಳಿ. ಮಾತಿನಿಂದ ಅಳೆದ ನಿಮ್ಮ ಮಾಪನವು ಸರಿಯಾಗದೇ ಇರುವುದು.

ತುಲಾ ರಾಶಿ:

ಅಂದುಕೊಂಡಿದ್ದನ್ನು ಸಾಧಿಸಲು ಸರಿಯಾದ ಮಾರ್ಗವು ಕಂಡುಕೊಳ್ಳುವ ಅನಿವಾರ್ಯತೆ ಸೃಷ್ಟಿ. ದೇವರ ಮೇಲೆ ನಂಬಿಕೆ ಇಟ್ಟ ಕಾರಣ ನಿಮ್ಮ ಮನೋರಥವು ಪೂರ್ತಿಯಾಗಿದ್ದು ನಿಮಗೆ ಅತಿಶಯ ಸಂತೋಷವಾಗಲಿದೆ. ನಿಮ್ಮ ಘನತೆಗೆ ಯಾರಿಂದಲಾದರೂ ಧಕ್ಕೆ ಬರುವುದು. ಸಮಯಪಾಲನೆಗೆ ಎಲ್ಲರೂ ಪ್ರಶಂಸಿಸುವರು. ನೀವು ಕಾರ್ಯಕ್ಕೆ ಸಂಬಂಧಪಟ್ಟಂತೆ ನಿಮ್ಮದೇ ಆದ ಚೌಕಟ್ಟನ್ನು ರಚಿಸಿಕೊಳ್ಳುವುದು ಕ್ಷೇಮ.‌ ಇಲ್ಲವಾದರೆ ಎಲ್ಲವೂ ನಿಮ್ಮ ಬುಡಕ್ಕೇ ಬರುವುದು.

ವೃಶ್ಚಿಕ ರಾಶಿ:

ಉತ್ಸಾಹದಿಂದ ಇರಲು ನಿಮಗೆ ದಾರಿ ಕಡಿಮೆ‌ ಇರಬಹುದು. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳಿಸುವಿರಿ. ನಿಮ್ಮ ವೃತ್ತಿಜೀವನದಲ್ಲಿ ಹೊಸತನ್ನು ಸಾಧಿಸಲು ಅವಕಾಶ ಸಿಗುತ್ತದೆ. ಯಾವುದೋ ಗುಂಗಿನಲ್ಲಿ ಇಂದಿನ ಕೆಲಸವನ್ನೆಲ್ಲ ಹಾಳುಮಾಡಿಕೊಳ್ಳುವಿರಿ. ಪರೀಕ್ಷೆಗೆ ಬೇಕಾದ ಸಿದ್ಧತೆಯನ್ನು ನಡೆಸಿ. ಸ್ವಾರ್ಥದಿಂದ ನಿಮಗೇ ತೊಂದರೆಯಾಗುವುದು ಎಂದು ಮನವರಿಕೆ ಆಗುವುದು.

ಧನು ರಾಶಿ:

ಸೃಜನಶೀಲ ಪ್ರಯತ್ನಗಳು ಫಲ ನೀಡುತ್ತವೆ. ಮಾತಿನ ಪ್ರಭಾವದಿಂದ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ. ಆಒ್ತರು ಬಟ್ಟೆ ಇತ್ಯಾದಿಗಳನ್ನು ಉಡುಗೊರೆಯಾಗಿ ಪಡೆಯುವಿರಿ. ಆಮದು ವ್ಯವಹಾರವನ್ನು ಇಂದು ಕಡಿಮೆ ಮಾಡಿಕೊಳ್ಳುವಿರಿ. ವಿದೇಶದಲ್ಲಿ ಜೀವನಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಪ್ರವಚನಕಾರರಿಗೆ ಉತ್ತಮ ಅವಕಾಶಗಳು ಲಭ್ಯವಿರಲಿದೆ. ನಿಮ್ಮ ದೌರ್ಬಲ್ಯಗಳನ್ನು ಎಲ್ಲರೆದುರು ಪ್ರಕಟಪಡಿಸುವುದು ಬೇಡ.

ಮಕರ ರಾಶಿ:

ಇಂದು ನೀವು ಮಾತಿನಿಂದ ಮಂತ್ರ ಮುಗ್ಧರನ್ನಾಗಿ ಮಾಡುವಿರಿ. ಆರ್ಥಿಕ ಲಾಭದಿಂದ ನೀವು ಸಂತೋಷ ಇರುವುದು ನಿಮ್ಮ ಮುಖದಲ್ಲಿ ಕಾಣಿಸುವುದು. ನಿಮ್ಮನ್ನು ಬಲವಾದ ಕಾರಣದಿಂದ ಒಪ್ಪಿಕೊಳ್ಳಬಹುದು. ಹಳೆಯ ವಾಹನವನ್ನು ನೀವು ಖರೀದಿಸುವಿರಿ. ವಿದ್ಯಾರ್ಥಿಗಳು ಓದಿನ ಸಮಯವನ್ನು ಬದಲಿಸಿಕೊಳ್ಳುವುದು ಸೂಕ್ತ. ಉದ್ಯಮಕ್ಕೆ ಪ್ರಭಾವಿಗಳ ಕೃಪಾಕಟಾಕ್ಷ ಬೇಕು. ಅಪರಿಚಿತ ಜನರ ಭೇಟಿಯಿಂದ ಭವಿಷ್ಯಕ್ಕೆ ಅನೇಕ ಲಾಭವು ಆಗಲಿದೆ. ಅನಪೇಕ್ಷಿತ ಮಾತುಗಳನ್ನು ಹೆಚ್ಚಾಗ ಆಡುವಿರಿ.

ಕುಂಭ ರಾಶಿ:

ನಿಮ್ಮ ನೆಮ್ಮದಿಗೆ ಸಂಗಾತಿಯು ಭಂಗವನ್ನು ಉಂಟುಮಾಡಬಹುದು. ನಿಮಗೆ ಗೊತ್ತೇ ಅಗದಂತೆ ವಂಚನೆಯಲ್ಲಿ ಸಿಕ್ಕಿಬೀಳುವಿರಿ. ಅರೋಗ್ಯದ ಸುಧಾರಣೆಗೆ ವೈದ್ಯರ ಸಲಹೆ ಅವಶ್ಯಕ. ಎಲ್ಲರ ಮೇಲೂ ವಿನಾ ಕಾರಣ ಕೋಪ‌ ಮಾಡಿಕೊಳ್ಳುವಿರಿ. ಪರರ ವಸ್ತುವನ್ನು ಬಳಸಿ, ಸರಿಯಾಗಿ ಹಿಂದಿರುಗಿಸಿ. ಮನಸ್ಸು ಚಂಚಲದಿಂದ ಯಾರ ಮಾತನ್ನೂ ಕೇಳುವ ಮನಃಸ್ಥಿತಿಯಲ್ಲಿ ಇರಲಾರಿರಿ. ನೆಚ್ಚಿನ ವ್ಯಕ್ತಿಗಳ ಬಗ್ಗೆ ಪ್ರೀತಿ ಅಧಿಕವಾಗಬಹುದು.

ಮೀನ ರಾಶಿ:

ಇಂದು ಸಂಬಂಧಗಳಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಕಾಣುವಿರಿ. ಕೆಲವು ಪ್ರಮುಖ ಕೆಲಸಗಳು ಪೂರ್ಣಗೊಳ್ಳುವ ನಿರೀಕ್ಷೆಯಲ್ಲಿದ್ದವರಿಗೆ ಯಶಸ್ಸು ಸಿಗುವ ಸಾಧ್ಯತೆಯಿದೆ. ನಿಮ್ಮ ಆರೋಗ್ಯದ ಸ್ಥಿತಿಯನ್ನು ಬಹಳ ಗಂಭೀರವಾಗಿ ನೋಡಿಕೊಳ್ಳಬೇಕು. ನಿಮ್ಮ ಜೊತೆಗಿರುವವರೇ ನಿಮ್ಮ ವಸ್ತುವನ್ನು ಅಪಹರಿಸುವರು. ವಸ್ತುವು ಕಳ್ಳರಿಂದ ಅಪಹರಣ ಆಗುತಗತದೆವೆಂಬ ಭಯವು ಇರುವುದು. ಇನ್ನೊಬ್ಬರ ಬಳಿ‌ ಇರುವ ನಿಮ್ಮ‌ ವಸ್ತುವನ್ನು ಬಹಳ‌ ಪ್ರಯತ್ನದಿಂದ ಪಡೆಯುವಿರಿ. ಬಂಧುಗಳಿಗಾಗಿ ಸಾಲ ಮಾಡುವ ಹಾಗೆ ಅಸದ ಆಗಬಹುದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ಚೈತ್ರ, ಸೌರ ಮಾಸ : ಮೀನ, ಮಹಾನಕ್ಷತ್ರ : ಪೂರ್ವಾಭಾದ್ರ, ವಾರ : ಗುರು, ಪಕ್ಷ : ಶುಕ್ಲ, ತಿಥಿ : ಪ್ರತಿಪತ್ ನಿತ್ಯನಕ್ಷತ್ರ : ಉತ್ತರಾಭಾದ್ರ, ಯೋಗ : ಶುಭ, ಕರಣ : ಕಿಂಸ್ತುಘ್ನ, ಸೂರ್ಯೋದಯ – 06 – 30 am, ಸೂರ್ಯಾಸ್ತ – 06 – 33 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 14:03 – 15:33, ಯಮಗಂಡ ಕಾಲ 06:30 – 08:01, ಗುಳಿಕ ಕಾಲ 09:31 – 11:02

-ಲೋಹಿತ ಹೆಬ್ಬಾರ್-8762924271 (what’s app only)

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 19ರ ದಿನಭವಿಷ್ಯ

ಈ ದಿನ ಕಾತ್ಯಾಯಿನಿ ದೇವಿಯ ಸ್ಮರಣೆ ಮಾಡಿ. ಮನಸ್ಸಿನ ಗೊಂದಲ, ತಳಮಳಗಳ ನಿವಾರಣೆಗೆ ಕಾತ್ಯಾಯಿನಿ ದೇವಿಯ ಮಂತ್ರ ಜಪಿಸಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಹೊಂದಾಣಿಕೆಗೆ ಅವಕಾಶ ಇರುವಂಥದ್ದನ್ನು ನಿಮ್ಮ ಮಾತಿನ ಕಾರಣದಿಂದ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಆದ್ದರಿಂದ ಈ ದಿನ ಸಮಯ ಸಿಕ್ಕಲ್ಲಿ ಹತ್ತು ನಿಮಿಷಗಳ ಕಾಲ ಧ್ಯಾನ ಮಾಡಿ. ಯಾವುದೇ ಮುಖ್ಯ ಕೆಲಸದ ಮೇಲೆ ಮನೆಯಿಂದ ಹೊರಗೆ ಹೊರಡುವ ಮುನ್ನ ಕಾತ್ಯಾಯಿನಿ ದೇವಿಯನ್ನು ಮನಸ್ಸಿನಲ್ಲಿ ಸ್ಮರಣೆ ಮಾಡುವುದು ಒಳ್ಳೆಯದು.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ನಿಮ್ಮ ಮನಸ್ಸಿಗೆ ವಿರುದ್ಧವಾಗಿ ನಡೆದುಕೊಳ್ಳಬೇಕಾಗಲಿದೆ. ಯಾವ ಕೆಲಸವನ್ನು ಮಾಡಬಾರದು, ಯಾವ ವ್ಯಕ್ತಿಯ ಜತೆಗೆ ಮಾತನಾಡಬಾರದು ಎಂದುಕೊಂಡಿರುತ್ತೀರೋ ಅದೇ ಕೆಲಸವನ್ನು ಮಾಡುತ್ತೀರಿ ಹಾಗೂ ನೀವಾಗಿಯೇ ಆ ವ್ಯಕ್ತಿಯ ಜತೆಗೆ ಮಾತನಾಡುತ್ತೀರಿ. ಹಾಗಂತ ನೀವು ಮಾನಸಿಕವಾಗಿ ದುರ್ಬಲರಾದಿರಿ ಅಂತಲ್ಲ. ಯಾವುದೇ ಮನಸ್ಸಿನ ಕಹಿಯನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ನಿಮಗೆ ಇಷ್ಟ ಇರುವುದಿಲ್ಲ ಎಂದರ್ಥ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಮನಸ್ತಾಪಗಳು- ಅಭಿಪ್ರಾಯ ಭೇದಗಳು ನಿವಾರಣೆ ಆಗಲಿವೆ. ತಂದೆ- ತಾಯಿಯ ಆರೋಗ್ಯ ವಿಚಾರ ಒಂದಿಷ್ಟು ಚಿಂತೆಗೆ ಕಾರಣ ಆಗಬಹುದು. ಆದರೆ ಅದಕ್ಕೆ ಸೂಕ್ತ ಪರಿಹಾರೋಪಾಯಗಳು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಈ ದಿನ ಮಿಶ್ರ ಫಲಿತಾಂಶ ದೊರೆಯಲಿದೆ. ಕೆಲವು ಬೆಳವಣಿಗೆಗಳು ನಿಮಗೆ ಪೂರಕವಾಗಿಯೂ ಮತ್ತೆ ಕೆಲವು ಬಾಧಕವಾಗಿಯೂ ಪರಿಣಮಿಸಬಹುದು.

ಲೇಖನ- ಸ್ವಾತಿ ಎನ್.ಕೆ.

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 19ರ ದಿನಭವಿಷ್ಯ

ದುರ್ಗಾ ಸಪ್ತಶತಿ ಶ್ರವಣವನ್ನು ಮಾಡಿ. ಆಸ್ತಿ ಖರೀದಿ ಮೊದಲಾದ ವಿಚಾರಗಳಲ್ಲಿ ಕಾಡುತ್ತಿರುವ ಅಡೆತಡೆ ನಿವಾರಣೆಗೆ ದುರ್ಗಾ ದೇವಿಯನ್ನು ಪ್ರಾರ್ಥಿಸಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಉದ್ಯೋಗ ಸ್ಥಳದಲ್ಲಿ ನಿಮ್ಮ ಕೈ ಮೇಲಾಗುತ್ತದೆ. ಯಾರು ನಿಮ್ಮ ಸಾಮರ್ಥ್ಯ, ಶಕ್ತಿ ಹಾಗೂ ಪ್ರಭಾವದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾ ಬಂದಿರುತ್ತಾರೋ ಅಂಥವರೇ ಬೆರಗಾಗುವಂಥ ಸಾಧನೆಗಳು ನಿಮ್ಮಿಂದ ಆಗಲಿದೆ. ಇತರರು ತಮ್ಮಿಂದ ಸಾಧ್ಯವೇ ಇಲ್ಲ ಎಂದು ಕೈ ಚೆಲ್ಲಿ, ಅಸಹಾಯಕರಾದ ಸಂದರ್ಭದಲ್ಲಿ ನೀವು ಅದನ್ನು ಯಶಸ್ವಿಯಾಗಿ ಮಾಡಲಿದ್ದೀರಿ. ಈ ದಿನ ನಿಮಗೆ ದೈವಾನುಗ್ರಹ ಸಹ ಇರಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಈಗಾಗಲೇ ಹೊಸ ಉದ್ಯಮವನ್ನೋ ಅಥವಾ ವ್ಯವಹಾರವನ್ನು ಆರಂಭಿಸಿದ್ದೀರಿ, ಅದು ನಿರೀಕ್ಷಿತ ಮಟ್ಟಕ್ಕೆ ಲಾಭ ತಂದುಕೊಡುತ್ತಿಲ್ಲ ಎಂದಾದಲ್ಲಿ ಈ ದಿನ ಅದು ಲಾಭದಾಯಕವಾಗಿ ಮಾಡುವುದಕ್ಕೆ ಬೇಕಾದ ಮಾರ್ಗೋಪಾಯಗಳು ದೊರೆಯುತ್ತವೆ. ಆದ್ದರಿಂದ ಒಟ್ಟಾರೆ ಈ ದಿನ ನಿಮ್ಮ ಪಾಲಿಗೆ ಉತ್ತಮವಾಗಿರುತ್ತದೆ. ಆದ್ದರಿಂದ ಅವಕಾಶಗಳನ್ನು ಎಷ್ಟು ಚೆನ್ನಾಗಿ ಬಳಸಿಕೊಳ್ಳಲಿದ್ದೀರಿ ಎಂಬುದು ಮುಖ್ಯವಾಗುತ್ತದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಕೃತಕ ಗರ್ಭಧಾರಣೆ ವಿಧಾನದ ಮೂಲಕ ಸಂತಾನ ಅಪೇಕ್ಷಿತರಿಗೆ ಬಹಳ ಒತ್ತಡದ ದಿನ ಇದಾಗಿರುತ್ತದೆ. ದಂಪತಿ ಮಧ್ಯೆ ಯಾವುದೋ ಮೂರನೇ ವ್ಯಕ್ತಿಯ ಕಾರಣಕ್ಕೆ ವಿಪರೀತ ಮಾತಿಗೆ ಮಾತು ಬೆಳೆಯುವಂಥ ಸಾಧ್ಯತೆ ಇದೆ. ಈ ಹಿಂದೆ ಯಾವಾಗಲೋ ಆಡಿದ ಮಾತಿನ ರೆಕಾರ್ಡಿಂಗ್ ಮುಂದಿಟ್ಟುಕೊಂಡು ಜೋರು ಜಗಳಗಳಾಗಬಹುದು. ಮುಖ್ಯವಾಗಿ ನಿಮಗೆ ಗೊತ್ತಿಲ್ಲದ ಸನ್ನಿವೇಶವನ್ನು ಊಹಿಸಿಕೊಂಡು, ನೀನು ಹೇಗೆ ನನಗೆ ಗೊತ್ತಿಲ್ಲವಾ ಎಂಬ ರೀತಿಯ ಮಾತುಗಳನ್ನು ಆಡಬೇಡಿ.

ಲೇಖನ- ಸ್ವಾತಿ ಎನ್.ಕೆ.

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 19ರ ದಿನಭವಿಷ್ಯ

ನಿಮ್ಮ ಮನೆಯಲ್ಲಿ ಇರುವಂಥ ಈಶ್ವರ ವಿಗ್ರಹ ಅಥವಾ ಚಿತ್ರಪಟಕ್ಕೆ ಸಕ್ಕರೆ ಅಥವಾ ಹಣ್ಣನ್ನು ನೈವೇದ್ಯ ಮಾಡಿ ಪ್ರಸಾದವಾಗಿ ಸ್ವೀಕರಿಸಿ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಮುಂದೆ ನಡೆಯುವ ಸಂಗತಿಗಳ ಬಗ್ಗೆ ಸುಳಿವು ದೊರೆಯಲಿದೆ. ನಿಮ್ಮ ಮಾತು ಬಹಳ ಪ್ರಭಾವಿ ಆಗಿರುತ್ತದೆ. ಹಲವರು ಅದರಿಂದ ಸಹಾಯ ಪಡೆಯುವ ಅವಕಾಶಗಳಿವೆ. ರಾಜಕೀಯ ಕ್ಷೇತ್ರದಲ್ಲಿ ಇರುವಂಥವರಾದರೆ ನಿಮ್ಮ ಬೆಂಬಲಿಗರು, ಅನುಯಾಯಿಗಳು ಹಲವು ರೀತಿಯಲ್ಲಿ ಅನುಕೂಲ ಮಾಡಿಕೊಡಲಿದ್ದೀರಿ. ಅದು ಉತ್ತಮ ಹುದ್ದೆಗಳನ್ನು ಕೊಡಿಸುವುದಕ್ಕೆ ಇರಬಹುದು ಅಥವಾ ಯಾವುದಾದರೂ ಕಾಂಟ್ರಾಕ್ಟ್ ಗಳನ್ನು ಕೊಡಿಸುವುದೇ ಇರಬಹುದು.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ದೊಡ್ಡ ಮಟ್ಟದಲ್ಲಿ ಅನಿರೀಕ್ಷಿತವಾಗಿ ಸಹಾಯ ದೊರೆಯಲಿದೆ. ನಿಮ್ಮ ಒಳಿತಿಗಾಗಿ ಸ್ನೇಹಿತರು, ಸಂಬಂಧಿಗಳು ಬಹಳ ಸಹಾಯ ಮಾಡಲಿದ್ದಾರೆ. ಭವಿಷ್ಯದಲ್ಲಿ ಅತಿ ದೊಡ್ಡ ಬದಲಾವಣೆ ತರುವಂಥ ನಿರ್ಧಾರವನ್ನು ತೆಗೆದುಕೊಳ್ಳಲು ನಿಮ್ಮಲ್ಲಿ ಆತ್ಮವಿಶ್ವಾಸ ಮೂಡಲಿದೆ. ಗುರು ಸಮಾನರಾದವರು ನಿಮಗೆ ನೀಡುವಂಥ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ. ಈ ಹಿಂದೆ ನೀವು ಕೆಲಸ ಮಾಡಿದ್ದ ಸ್ಥಳದಿಂದ ಮತ್ತೆ ಕರೆ ಬರುವಂಥ ಸಾಧ್ಯತೆಗಳಿವೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಇತರರಿಗೆ ನೀವು ಶಿಫಾರಸು ಮಾಡುವ ಮೂಲಕವಾಗಿ ಸಹಾಯ ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರು ತುಂಬ ದೊಡ್ಡ ಪ್ರಮಾಣದ ಕೃಷಿ ಜಮೀನನ್ನು ಗುತ್ತಿಗೆಗೆ ಪಡೆಯುವ ಅಥವಾ ಖರೀದಿ ಮಾಡುವ ಯೋಗ ಇದೆ. ಶಿಸ್ತನ್ನು ಅನುಸರಿಸುವುದರಿಂದ ಆಗುವ ಪ್ರಯೋಜನಗಳು ಹಲವು ಇವೆ. ಆದ್ದರಿಂದ ಯಾವುದೇ ಕೆಲಸವನ್ನು ಆಮೇಲೆ ಮಾಡಿದರಾಯಿತು ಎಂದು ಆಲೋಚನೆ ಮಾಡದೆ, ತಕ್ಷಣವೇ ಮಾಡಿ.

ಲೇಖನ- ಸ್ವಾತಿ ಎನ್.ಕೆ.

Source link

ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಜಾರಿಬಿದ್ದ ಯುವಕ ಬದುಕುಳಿದಿದ್ದು ಹೇಗೆ?

ನವದೆಹಲಿ, ಮಾರ್ಚ್ 18: ರೈಲ್ವೆ ಅಧಿಕಾರಿಗಳು ಪ್ರಯಾಣಿಕರಿಗೆ ಚಲಿಸುವ ರೈಲನ್ನು ಹತ್ತಲು ಅಥವಾ ಇಳಿಯಲು ಪ್ರಯತ್ನಿಸಬೇಡಿ ಎಂದು ಎಚ್ಚರಿಸುತ್ತಲೇ ಇರುತ್ತಾರೆ. ಆ ರೀತಿ ಮಾಡುವುದರಿಂದ ಜೀವಕ್ಕೇ ಅಪಾಯವಾಗಬಹುದು. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಆಘಾತಕಾರಿ ವೀಡಿಯೊವೊಂದು ವೈರಲ್ (Viral Video) ಆಗುತ್ತಿದೆ. ಅದರಲ್ಲಿ, ಚಲಿಸುವ ರೈಲನ್ನು ಹತ್ತಲು ವ್ಯಕ್ತಿಯೊಬ್ಬ ಪ್ರಯತ್ನಿಸಿ ಕಾಲು ಜಾರಿ ಬೀಳುತ್ತಾನೆ. ತಕ್ಷಣ ಅಲ್ಲಿದ್ದ ಮಹಿಳಾ ಕಾನ್‌ಸ್ಟೆಬಲ್ ಆತನನ್ನು ಮೇಲೆತ್ತಿ ಪ್ರಾಣ ಉಳಿಸಿದ್ದಾರೆ. ಇದರಿಂದ ಆತ ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾಗಿದ್ದಾನೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ

Source link

Dhurandhar 2 Review: ಒಂದು ಸೇಡಿನ ಕಥೆ; ‘ಧುರಂಧರ್ 2’ ಸಿನಿಮಾ ವಿಮರ್ಶೆ

‘ಧುರಂಧರ್’ ಸಿನಿಮಾ ಡಿಸೆಂಬರ್ 5ರಂದು ರಿಲೀಸ್ ಆಗಿ ಯಶಸ್ಸು ಕಂಡಿತ್ತು. ಇದಾದ ಕೇವಲ ಮೂರೇ ತಿಂಗಳಿಗೆ ‘ಧುರಂಧರ್ 2’ ರಿಲೀಸ್ ಆಗಿದೆ. ಈ ಸಿನಿಮಾದ ರನ್​​ಟೈಮ್ 3 ಗಂಟೆ 49 ನಿಮಿಷ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಆ ನಿರೀಕ್ಷೆಗಳನ್ನು ಸಿನಿಮಾ ತಲುಪಿತೇ? ಆ ಬಗ್ಗೆ ಇಲ್ಲಿದೆ ವಿವರ.

‘ಧುರಂಧರ್’ ಸಿನಿಮಾ ಕ್ಲೈಮ್ಯಾಕ್ಸ್​​​ನಲ್ಲಿ ಹಮ್ಜಾ ಅಲಿ ಮಜಾರಿ, ರೆಹ್ಮಾನ್ ಡಕಾಯಿತ್​​ನ ಹತ್ಯೆ ಮಾಡುತ್ತಾನೆ. ಆ ಬಳಿಕ ನಡೆಯುವ ಕಥೆಯೇ ‘ಧುರಂಧರ್ 2’. ಸಿನಿಮಾದ ಹೆಸರೇ ‘ಧುರಂಧರ್: ದಿ ರಿವೇಂಜ್’. ಹೀಗಾಗಿ, ಸಿನಿಮಾ ಉದ್ದಕ್ಕೂ ಸೇಡಿನ ಕಥೆ ಸಾಗುತ್ತದೆ. ರಕ್ತದೋಕುಳಿ ಹರಿಯುತ್ತದೆ. ಉರುಳುವ ತಲೆಗಳಿಗೆ ಲೆಕ್ಕ ಇಲ್ಲ. ಹಾಗಾದಾರೆ ಈ ಸೇಡಿನ ಹಿಂದಿನ ಕಾರಣವೇನು? ಜಸ್ಕಿರತ್ ಸಿಂಗ್, ಹಮ್ಜಾ ಆಗಿದ್ದೇಕೆ? ಅದನ್ನು ಸಿನಿಮಾದಲ್ಲೇ ನೋಡಬೇಕು.

‘ಧುರಂಧರ್’ ಸಿನಿಮಾದಲ್ಲಿ ಜಸ್ಕಿರತ್ ಸಿಂಗ್ ರಂಗಿ ಹೇಗೆ ಹಮ್ಜಾ ಆದ ಎಂಬುದನ್ನು ತೋರಿಸಿಲ್ಲ. ಆದರೆ, ಈ ಸಿನಿಮಾದಲ್ಲಿ ಜಸ್ಕಿರತ್ ಹಿನ್ನೆಲೆಯನ್ನು ವಿವರವಾಗಿ ಹೇಳಲಾಗಿದೆ. ಇದಕ್ಕಾಗಿ ನಿರ್ದೇಶಕರು ಆರಂಭದ ಅರ್ಧ ಗಂಟೆಯನ್ನು ಮೀಸಲಿಟ್ಟಿದ್ದಾರೆ. ಈ ಚಿತ್ರ ಪ್ರೀಕ್ವೆಲ್​​ನಿಂದ ಆರಂಭ ಆಗಿ, ಸೀಕ್ವೆಲ್​​ಗೆ ಸಾಗುತ್ತದೆ. ರಣವೀರ್ ಸಿಂಗ್ ಅವರು ಚಿತ್ರದುದ್ದಕ್ಕೂ ಕಾಣಿಸಿಕೊಂಡಿದ್ದಾರೆ. ಅವರದ್ದು ಒನ್ ಮ್ಯಾನ್ ಶೋ ಎಂದರೂ ತಪ್ಪಾಗಲಿಕ್ಕಿಲ್ಲ.

‘ಧುರಂಧರ್ 2’ ಸಿನಿಮಾದಲ್ಲಿ ಕೆಲವು ಟ್ವಿಸ್ಟ್​​ಗಳಿವೆ. ಆ ತಿರುವುಗಳನ್ನು ನೀವು ಊಹಿಸಲಿಕ್ಕೂ ಸಾಧ್ಯವಿಲ್ಲ. ಈ ಕಾರಣಕ್ಕೆ ‘ಧುರಂಧರ್ 2’ ಸಿನಿಮಾ ಹೆಚ್ಚು ಮನರಂಜನೆ ಕೊಡುತ್ತದೆ. ರಣವೀರ್ ಸಿಂಗ್ ಅವರು ರಕ್ತದೋಕುಳಿಯಲ್ಲಿ ಮಿಂದೆದ್ದಿದ್ದಾರೆ. ಅವರು ಭರ್ಜರಿ ಆ್ಯಕ್ಷನ್ ಮೆರೆದಿದ್ದಾರೆ. ಒಮ್ಮೆ ಹಮ್ಜಾ ಆಗಿ, ಮತ್ತೊಮ್ಮೆ ಜಸ್ಕಿರತ್ ಆಗಿ ಅವರು ಇಷ್ಟ ಆಗುತ್ತಾರೆ. ಆ್ಯಕ್ಷನ್ ದೃಶ್ಯಗಳನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ.

ಇನ್ನು, ಈ ಚಿತ್ರದ ಮತ್ತೊಂದು ಹೈಲೈಟ್ ಎಂದರೆ ಅರ್ಜುನ್ ರಾಂಪಾಲ್. ಅವರು ಐಸಿಸ್ ಮೇಜರ್ ಇಕ್ಬಾಲ್ ಆಗಿ ಕಾಣಿಸಿಕೊಂಡಿದ್ದಾರೆ. ಇವರ ಪಾತ್ರಕ್ಕೂ ಸಾಕಷ್ಟು ತೂಕ ಇದೆ. ಎಸ್ಪಿ ಚೌದ್ರಿ ಅಸ್ಲಾಮ್ ಪಾತ್ರದಲ್ಲಿ ಸಂಜಯ್ ದತ್ ನಟಿಸಿದ್ದಾರೆ. ಸಿನಿಮಾದಲ್ಲಿ ಅವರ ಪಾತ್ರದ ಬಳಕೆ ಸರಿಯಾಗಿ ಆಗಿಲ್ಲ. ಆರ್​. ಮಾಧವನ್ ಅವರು ಅಜಯ್ ಸನ್ಯಾಲ್ ಆಗಿ ಕಾಣಿಸಿಕೊಂಡಿದ್ದಾರೆ. ಸಾರಾ ಅರ್ಜುನ್, ರಾಕೇಶ್ ಬೇಡಿ ಮೊದಲಾದವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಶಾಶ್ವತ್ ಸಚ್​​ದೇವ್ ಹಿನ್ನಲೆ ಸಂಗೀತ ಚಿತ್ರದ ತೂಕವನ್ನು ಹೆಚ್ಚಿಸಿದೆ. ಹಿನ್ನೆಲೆಯಲ್ಲಿ ಬರುವ ಹಾಡುಗಳು ಕೂಡ ಮನಸ್ಸಿನಲ್ಲಿ ಉಳಿಯುತ್ತವೆ. ವಿಕಾಶ್ ಛಾಯಾಗ್ರಹಣ ಸಿನಿಮಾವನ್ನು ಮತ್ತಷ್ಟು ಅಂದಗೊಳಿಸಿದೆ.

ನಿರ್ದೇಶಕ ಆದಿತ್ಯ ಧಾರ್ ಶ್ರಮವನ್ನು ಮೆಚ್ಚಲೇಬೇಕು. ಒಂದು ಅದ್ಭುತ ಚಿತ್ರವನ್ನು ಪ್ರೇಕ್ಷಕರ ಎದುರು ಇಟ್ಟಿದ್ದಾರೆ. ಈ ಚಿತ್ರವನ್ನು ‘ಧುರಂಧರ್​’ಗಿಂತ ಮತ್ತಷ್ಟು ರಾ ಆಗಿ ಕಟ್ಟಿಕೊಟ್ಟಿದ್ದಾರೆ. ಅವರ ಕಡೆಯಿಂದ ಒಂದೊಳ್ಳೆಯ ಸ್ಪೈ ಸಿನಿಮಾ ಸಿಕ್ಕಿದೆ. ಹಲವು ನೈಜ ಘಟನೆಗಳನ್ನು ಕಾಲ್ಪನಿಕ ಕಥೆಯಲ್ಲಿ ಹೊಸೆದಿದ್ದಾರೆ. ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ, ನೋಟ್​ ಬ್ಯಾನ್, ಸರ್ಜಿಕಲ್ ಸ್ಟ್ರೈಕ್ ಸಂದರ್ಭದಲ್ಲಿ ಮೋದಿ ಮಾತನಾಡಿದ ನೈಜ ವಿಡಿಯೋ ತೋರಿಸಿದ್ದಾರೆ ಆದಿತ್ಯ ಧಾರ್. ನೋಟ್ ಬ್ಯಾನ್ ಹಿಂದಿನ ಕಾರಣವನ್ನೂ ಕಥೆಗೆ ಲಿಂಕ್ ಕೊಟ್ಟಿದ್ದಾರೆ. ಈ ರೀತಿಯ ಹಲವು ಘಟನೆಗಳನ್ನು ತೋರಿಸಲಾಗಿದೆ. ಆದರೆ, ಇದರಲ್ಲಿ ಯಾವುದು ನೈಜ ಘಟನೆ? ಯಾವುದು ಕಾಲ್ಪನಿಕ ಎಂಬ ಗೊಂದಲಕ್ಕೆ ಉತ್ತರ ಸಿಗೋದಿಲ್ಲ.

ಸಿನಿಮಾದ ಅವಧಿ ಬರೋಬ್ಬರಿ 3 ಗಂಟೆ ಹಾಗೂ 49 ನಿಮಿಷ. ಪ್ರತಿ ವಿಷಯವನ್ನು ವಿವರವಾಗಿ ಹೇಳುವ ಪ್ರಯತ್ನವನ್ನು ಮಾಡಿದ್ದಾರೆ. ಇದು ಕೆಲವು ಕಡೆಗಳಲ್ಲಿ ಪ್ರೇಕ್ಷಕನ ತಾಳ್ಮೆ ಪರೀಕ್ಷೆ ಮಾಡುತ್ತದೆ. ಪ್ರೀ ಕ್ಲೈಮ್ಯಾಕ್ಸ್​​ನಲ್ಲಿ ಬರೋ ಫೈಟ್​ ಬಹುದೀರ್ಘ ಎನಿಸುತ್ತದೆ. ಬಡೆ ಸಾಬ್ ಪಾತ್ರದ ಸುತ್ತಲಿನ ಸಸ್ಪೆನ್ಸ್ ಸಂಪೂರ್ಣವಾಗಿ ಟೊಳ್ಳೆನಿಸುತ್ತದೆ. ಅಕ್ಷಯ್ ಖನ್ನಾ ಮೊದಲ ಭಾಗದಲ್ಲಿ ಶೋ ಸ್ಟೀಲರ್ ಆಗಿದ್ದರು. ಆದರೆ, ಈ ಸಿನಿಮಾದಲ್ಲಿ ಅವರು ಪೋಸ್ಟರ್​​ಗೆ ಮಾತ್ರ ಸೀಮಿತ ಆಗಿದ್ದಾರೆ ಎಂಬುದು ಬೇಸರದ ವಿಷಯ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಲ್ಲಿಕಾರ್ಜುನ ಮುತ್ಯಾಗೆ ತಾತ್ಕಾಲಿಕ ರಿಲೀಫ್‌: ಬೀಸೋ ದೊಣ್ಣೆಯಿಂದ ಬಚಾವ್

ಯಾದಗಿರಿ, ಮಾರ್ಚ್ 18): ಜಿಲ್ಲೆಯ ಮಹಲ್ ರೋಜಾ ಮಠದ ಮಲ್ಲಿಕಾರ್ಜುನ ಮುತ್ಯಾ (Mallikarjun Mutya)  ವಿರುದ್ಧದ ಪೋಕ್ಸೊ ಪ್ರಕರಣದಲ್ಲಿ ನಡೆಯುತ್ತಿದ್ದ ತನಿಖೆಗೆ ತಡೆ ನೀಡಿ ಹೈಕೋರ್ಟ್‌ನ ಕಲಬುರಗಿ ವಿಭಾಗೀಯ ಪೀಠ ಆದೇಶ ಹೊರಡಿಸಿದೆ. ಪ್ರಕರಣದಲ್ಲಿ ವಿಚಾರಣೆಗೆ ತಡೆ ನೀಡುವಂತೆ ಮುತ್ಯಾ‌ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿರುವ ಕಲಬುರಗಿ ಹೈಕೋರ್ಟ್ ಪೀಠ (Kalaburagi High Court Bench) ಇಂದು (ಮಾರ್ಚ್ 18) ಮಧ್ಯಂತರ ತಡೆ ನೀಡಿದೆ. ಇದರಿಂದ ಸ್ವಯಂ ಘೋಷಿತ ದೇವಮಾನವನಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.

ಬಾಲಕಿ ಜತೆ ಅನುಚಿತವಾಗಿ ವರ್ತನೆ ಆರೋಪದಲ್ಲಿ ಕಳೆದ ಫೆಬ್ರವರಿ 25 ರಂದು ಶಹಾಪುರ ಸಿಡಿಪಿಒ ನೀಡಿದ ದೂರಿನ ಮೇರೆಗೆ ಗೋಗಿ ಪೊಲೀಸ್ ಠಾಣೆಯಲ್ಲಿ ಮುತ್ಯಾ ವಿರುದ್ಧ ಕೇಸ್ ದಾಖಲಾಗಿದ್ದು, ಶಹಾಪುರ ಸಿಪಿಐ ಶರಣಗೌಡ ನ್ಯಾಮಣ್ಣನವರ ಪ್ರಕರಣದ ತನಿಖೆ ನಡೆಸುತ್ತಿದ್ದರು. ಈಗಾಗಲೇ ಮೊದಲ ಹಂತದ ವಿಚಾರಣೆ ನಡೆಸಿದ್ದು, ಮುತ್ಯಾಗೆ ಸೇರಿದ ನಾಲ್ಕು ಮೊಬೈಲ್ ಫೋನ್​ಗಳನ್ನು ಸಹ ತನಿಖಾಧಿಕಾರಿ ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರೆಸಿದ್ದರು. ಆದ್ರೆ, ಇದೀಗ ಕೋರ್ಟ್​, ತನಿಖೆಗೆ ಮಧ್ಯಂತರ ತಡೆ ನೀಡಿದ್ದು, ಮುತ್ಯಾಗೆ ಕೊಂಚ ನಿರಾಳರಾಗಿದ್ದಾರೆ.

ಇದನ್ನೂ ಓದಿ: ಪೋಕ್ಸೋ ಪ್ರಕರಣ: ಮಲ್ಲಿಕಾರ್ಜು ಮುತ್ಯಾಗೆ ಬಿಗ್ ಶಾಕ್ ಕೊಟ್ಟ ಕೋರ್ಟ್

ಜಾಮೀನು ನಿರಾಕರಿಸಿದ್ದ ಕೋರ್ಟ್

ಅಪ್ರಾಪ್ತ ಬಾಲಕಿಯೊಂದಿಗೆಅನುಚಿತ ವರ್ತನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಲಿಕಾರ್ಜುನ ಮುತ್ಯಾ (Mallikarjun Mutya) ನಿರೀಕ್ಷಣಾ ಜಾಮೀನು ಅರ್ಜಿ (Bail Plea) ವಜಾಗೊಂಡಿದೆ. ತಮ್ಮ ವಿರುದ್ಧದ ಫೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಲ್ ರೋಜಾ ಮಠದ ಮಲ್ಲಿಕಾರ್ಜುನ ಮುತ್ಯಾ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಈ ಅರ್ಜಿ ವಿಚಾರಣೆ ನಡೆಸಿದ್ದ ಯಾದಗಿರಿ (Yadagir ) ಜಿಲ್ಲಾ ಪ್ರಧಾನ, ವಿಶೇಷ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮರಳುಸಿದ್ದರಾಧ್ಯ ಅವರು ಮಾರ್ಚ್ 09 ವಜಾ ಮಾಡಿ ಆದೇಶ ಹೊರಡಿಸಿದ್ದರು. ಇದರಿಂದ ಮುತ್ಯಾಗೆ ಬಂಧನ ಭೀತಿ ಎದುರಾಗಿತ್ತು.

ಏನಿದು ಪ್ರಕರಣ?

ಮಲ್ಲಿಕಾರ್ಜುನ ಮುತ್ಯಾ ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿರುವ ವಿಡಿಯೋ ರಾಜ್ಯಾದ್ಯಂತ ಭಾರೀ ವೈರಲ್ ಆಗಿತ್ತು. ಇದರ ಬೆನ್ನಲ್ಲಿಯೇ ರಾಜ್ಯ ಮಕ್ಕಳ ರಕ್ಷಣಾ ಆಯೋಗವು ಯಾದಗಿರಿ ಜಿಲ್ಲಾಧಿಕಾರಿ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ಇದರ ಬೆನ್ನಲ್ಲೇ ಡಿಸಿ ಸೂಚನೆ ಮೇರೆಗೆ  ಫೆಬ್ರವರಿ 25ರಂದು ಶಹಾಪುರ ತಾಲೂಕಿನ ಗೋಗಿ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೇ ಮುತ್ಯಾ ನಾಪತ್ತೆಯಾಗಿದ್ದ. ಇನ್ನೊಂದೆಡೆ ಅವರ ಭಕ್ತರು ಹಾಗೂ ಕೋಲಿ ಸಮಾಜ ಪ್ರತಿಭಟನೆ ನಡೆಸಿದ್ದು, ಮುತ್ಯಾ ವಿರುದ್ಧದ ಫೋಕ್ಸೋ ಪ್ರಕರಣ ರದ್ದುಗೊಳಿಸಬೇಕೆಂದು ಆಗ್ರಹಿಸಿದ್ದರು.

ಕರ್ನಾಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

3D ತಂತ್ರಜ್ಙಾನದಲ್ಲಿ ಬರಲಿದೆ ‘ಕೊರಗಜ್ಜ’ ಚಿತ್ರ: ಜೊತೆಗೆ ಮತ್ತೊಂದು ಸಾಹಸ

ಸುಧೀರ್ ಅತ್ತಾವರ್ ನಿರ್ದೇಶನ ಮಾಡಿರುವ ‘ಕೊರಗಜ್ಜ’ (Koragajja) ಸಿನಿಮಾ ಚಿತ್ರೀಕರಣದ ಆರಂಭದಿಂದಲೂ ಒಂದಲ್ಲ ಒಂದು ಕಾರಣಕ್ಕೆ ಸುದ್ದಿ ಮಾಡುತ್ತಲೇ ಇದೆ. ಸಿನಿಮಾ ಈಗಾಗಲೇ ಬಿಡುಗಡೆ ಆಗಬೇಕಿತ್ತು ಆದರೆ ಇದೀಗ ಮತ್ತೊಮ್ಮೆ ಸಿನಿಮಾದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಈ ಬಾರಿ ಕೆಲವು ವಿಶೇಷ ಕಾರಣಗಳಿಗೆ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ. ಸಿನಿಮಾ ತಂಡದಿಂದ ಹೊರಬಿದ್ದಿರುವ ಹೊಸ ಅಪ್​​ಡೇಟ್ ಎಂದರೆ ‘ಕೊರಗಜ್ಜ’ ಸಿನಿಮಾ ಇದೀಗ 3ಡಿ ತಂತ್ರಜ್ಙಾನದೊಂದಿಗೆ ಬಿಡುಗಡೆ ಆಗಲಿದೆ.

ಸಾಮಾನ್ಯವಾಗಿ ಚಿತ್ರೀಕರಣದ ವೇಳೆಯಲ್ಲೇ 3ಡಿ ಶೂಟಿಂಗ್ ಮಾಡುವುದು ಸಂಪ್ರದಾಯ. ಆದರೆ ‘ಕೊರಗಜ್ಜ’ ಸಿನಿಮಾವನ್ನು 2ಡಿ ತಂತ್ರಜ್ಞಾನದಲ್ಲಿ ಶೂಟಿಂಗ್ ಮಾಡಲಾಗಿದೆ. ಆದರೆ ಈಗ ಅದನ್ನು 3ಡಿಗೆ ಬದಲಾಯಿಸಲಾಗುತ್ತಿದೆ. 2ಡಿ ಯಲ್ಲಿ ಶೂಟಿಂಗ್ ಮಾಡಿ ಮತ್ತೆ 3ಡಿ ಗೆ ಕನ್ವರ್ಟ್ ಮಾಡುವುದು ಹೆಚ್ಚು ದುಬಾರಿ. ಆದರೆ ಕೆಲವರ ಸಲಹೆ ಮೇರೆಗೆ ಸಿನಿಮಾವನ್ನು 3ಡಿಗೆ ಬದಲಾಯಿಸಲಾಗಿದೆ. ಪ್ರೇಕ್ಷಕರಿಗೆ ಒಳ್ಳೆಯ ಅನುಭವ ನೀಡಲು, ಸಿನಿಮಾವನ್ನು ಬೇರೆ ಬೇರೆ ಭಾಷೆಯರಿಗೆ ತಲುಪುವಂತೆ ಮಾಡಲು 3ಡಿ ತಂತ್ರಜ್ಞಾನದಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ.

2ಡಿಯಲ್ಲಿ ಚಿತ್ರೀಕರಣಗೊಂಡ ಸಿನಿಮಾವನ್ನು ದುಬಾರಿ ವೆಚ್ಚದಲ್ಲಿ 3ಡಿ ತಂತ್ರಜ್ಞಾನಕ್ಕೆ ಬದಲಾವಣೆ ಮಾಡಲಾಗುತ್ತಿದ್ದು, ಸುಮಾರು 40 ಮಂದಿ ತಂತ್ರಜ್ಞರ ತಂಡ ಈ ಕಾರ್ಯದಲ್ಲಿ ತೊಡಗಿದೆ ಎಂದು ನಿರ್ದೇಶಕ ಸುಧೀರ್ ಅತ್ತಾವರ ತಿಳಿಸಿದ್ದಾರೆ.

ಇದನ್ನೂ ಓದಿ:‘ಕೊರಗಜ್ಜ’ ಸಿನಿಮಾ ತಂಡದ ವಿರುದ್ಧ ಕೊಡಗಿನ ದೈವಾರಾಧಕರು ಮತ್ತು ನರ್ತಕರು ರೊಚ್ಚಿಗೆದ್ದಿದ್ದೇಕೆ?

ಇದರ ಜೊತೆಗೆ ‘ಕೊರಗಜ್ಜ’ ಸಿನಿಮಾದ ಚಿತ್ರೀಕರಣವನ್ನು ನೀರಿನ ಅಡಿಯಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ನಟಿ ಶ್ರುತಿ ಹಾಗೂ ಇನ್ನೂ ಕೆಲವು ಕಲಾವಿದರು ಈ ಅಂಡರ್​​ವಾಟರ್ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಕೇರಳದ ತಿರುವನಂತಪುರಂ ನಲ್ಲಿ ಖ್ಯಾತ ಮಲಯಾಳಂ ನಟ ಮೋಹನ್ ಲಾಲ್ ರವರ ಒಡೆತನ ದಲ್ಲಿದ್ದ “ವಿಸ್ಮಯ” ಸ್ಟುಡಿಯೋದಲ್ಲಿ ಅಂಡರ್ ವಾಟರ್ ನ ವಿಶೇಷ ಸೆಟ್ ನಿರ್ಮಿಸಿ ನಟಿ ಶ್ರತಿ ಅಭಿನಯಿಸಿದ ಭಾಗಗಳನ್ನು ನೀರಿನ ಅಡಿಯಲ್ಲಿ ಖ್ಯಾತ ಮಲಯಾಳಂ ಸಿನೆಮಾಟೋಗ್ರಾಫರ್ ಮನೋಜ್ ಪಿಳ್ಳೈ ನಾಲ್ಕು ಕ್ಯಾಮರಗಳಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ.

ಈ ವಿಶೇಷ ಶೈಲಿಯ ಚಿತ್ರೀಕರಣಕ್ಕಾಗಿ ಶ್ರತಿ ಸುಮಾರು 15ದಿನಗಳ ತಯಾರಿ ಪಡೆದಿದ್ದಾಗಿ ಹೇಳಿದೆ ಚಿತ್ರತಂಡ. ಶೂಟಿಂಗ್ ವೇಳೆ ಮಾರ್ಗದರ್ಶನಕ್ಕಾಗಿ ಸ್ಕ್ಯೂಬಾ ಡೈವರ್ಸ್ ಗಳನ್ನು ನಿಯೋಜಿಸಲಾಗಿತ್ತು. ಅಲ್ಲದೆ ಆಂಬ್ಯಲೆನ್ಸ್ ಮತ್ತು ವೈದ್ಯರ ತಂಡ ಕೂಡಾ ಸ್ಥಳದಲ್ಲಿ ಮೊಕ್ಕಾಂ ಹೂಡಿತ್ತು. ಹಾರ್ನೆಸ್ ನಲ್ಲಿ ಸುಮಾರು 30ಅಡಿ ಎತ್ತರದಿಂದ ನೀರಿಗೆ ಜಿಗಿದು ಮತ್ತೆ ಹಾರಿ ಹೊರಬರುವ ಮೈ ನವಿರೇಳಿಸುವ ಅಪಾಯಕಾರಿ ಸ್ಟಂಟ್ ನಲ್ಲಿ ನಟಿ ಶ್ರತಿ ಸ್ವತಃ ಅಭಿನಯಿಸಿ ಎಲ್ಲರನ್ನು ದಂಗು ಬಡಿಸಿದರು.ಇದಲ್ಲದೆ ನೀರಿನೊಳಗೆ 22 ಸೆಕೆಂಡ್ ಗಳ ಕಾಲ ಯಾವುದೇ ಆಮ್ಲಜನಕದ ಸಹಾಯವಿಲ್ಲದೆ ಶ್ರತಿ ಅಭಿನಯಿಸಿ ಎಲ್ಲರನ್ನು ದಂಗುಬಡಿಸಿದರು ಎಂದು ಚಿತ್ರತಂಡ ಹೇಳಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IPL: ಐಪಿಎಲ್​ನಲ್ಲಿ ಅತಿ ಹೆಚ್ಚು ನಾಯಕರನ್ನು ಕಂಡ ತಂಡಗಳು ಯಾವ್ಯಾವು ಗೊತ್ತಾ?

ಮಾರ್ಚ್ 28 ರಂದು 2026 ರ ಐಪಿಎಲ್ (IPL 2026) ಆರಂಭವಾಗಲಿದ್ದು, 19 ನೇ ಸೀಸನ್ ಆರಂಭವಾಗುವ ಮುನ್ನ ಸನ್‌ರೈಸರ್ಸ್ ಹೈದರಾಬಾದ್ (SRH) ತನ್ನ ಹೊಸ ನಾಯಕನನ್ನು ಘೋಷಿಸಿದೆ. ಪ್ಯಾಟ್ ಕಮ್ಮಿನ್ಸ್ ಅನುಪಸ್ಥಿತಿಯಲ್ಲಿ ಇಶಾನ್ ಕಿಶನ್ (Ishan Kishan) ಅವರನ್ನು ನಾಯಕನನ್ನಾಗಿ ನೇಮಿಸಲಾಗಿದೆ. ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಚುಕ್ಕಾಣಿ ಹಿಡಿದ 11 ನೇ ನಾಯಕ ಇಶಾನ್ ಕಿಶನ್. ಕೆಲವು ಫ್ರಾಂಚೈಸಿಗಳು ನಾಯಕರನ್ನು ಬದಲಿಸುವುದನ್ನೇ ಕಾಯಕ ಮಾಡಿಕೊಂಡಿವೆ. ಪ್ರತಿ ಸೀಸನ್​ಗೂ ಒಬ್ಬೊಬ್ಬರನ್ನು ನಾಯಕನಾಗಿ ನೇಮಿಸಿದ ನಿದರ್ಶನಗಳು ಇವೆ. ಹಾಗಿದ್ದರೆ, 10 ಐಪಿಎಲ್ ಫ್ರಾಂಚೈಸಿಗಳಲ್ಲಿ ಯಾವ ಫ್ರಾಂಚೈಸಿ ತನ್ನ ತಂಡದ ನಾಯಕರನ್ನು ಅಧಿಕ ಬಾರಿ ಬದಲಿಸಿದೆ ಎಂಬುದನ್ನು ನೋಡುವುದಾದರೆ..

ಮೊದಲ ಸ್ಥಾನದಲ್ಲಿ ಪಂಜಾಬ್ ಕಿಂಗ್ಸ್

ಪಂಜಾಬ್ ಕಿಂಗ್ಸ್ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ನಾಯಕರನ್ನು ಬದಲಿಸಿದ ಫ್ರಾಂಚೈಸಿಯಾಗಿದೆ. ಪಂಜಾಬ್ ಕಿಂಗ್ಸ್ ಇದುವರೆಗೆ 17 ನಾಯಕರನ್ನು ನೇಮಿಸಿದೆ. ಯುವರಾಜ್ ಸಿಂಗ್, ಸಂಗಕ್ಕಾರ, ಜಯವರ್ಧನೆ, ಗಿಲ್‌ಕ್ರಿಸ್ಟ್, ಡೇವಿಡ್ ಹಸ್ಸಿ, ಜಾರ್ಜ್ ಬೈಲಿ, ವೀರೇಂದ್ರ ಸೆಹ್ವಾಗ್, ಡೇವಿಡ್ ಮಿಲ್ಲರ್, ಮುರಳಿ ವಿಜಯ್, ಗ್ಲೆನ್ ಮ್ಯಾಕ್ಸ್‌ವೆಲ್, ಆರ್ ಅಶ್ವಿನ್, ಕೆಎಲ್ ರಾಹುಲ್, ಮಾಯಾಂಕ್ ಅಗರ್ವಾಲ್, ಶಿಖರ್ ಧವನ್, ಸ್ಯಾಮ್ ಕರನ್, ಜೀತೇಶ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ಪಂಜಾಬ್ ತಂಡದ ನಾಯಕತ್ವ ವಹಿಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ಕೂಡ ಹಿಂದೆ ಬಿದ್ದಿಲ್ಲ

ಐಪಿಎಲ್‌ನಲ್ಲಿ ಅತಿ ಹೆಚ್ಚು ನಾಯಕರನ್ನು ಬದಲಿಸಿದ ಎರಡನೇ ತಂಡ ಡೆಲ್ಲಿ ಕ್ಯಾಪಿಟಲ್ಸ್, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ದಿನೇಶ್ ಕಾರ್ತಿಕ್, ಜೇಮ್ಸ್ ಹೋಪ್ಸ್, ಜಯವರ್ಧನೆ, ವಾರ್ನರ್, ಕೆವಿನ್ ಪೀಟರ್ಸನ್, ಜೆಪಿ ಡುಮಿನಿ, ಜಹೀರ್ ಖಾನ್, ಕರುಣ್ ನಾಯರ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಡು ಪ್ಲೆಸಿಸ್ ಮತ್ತು ಅಕ್ಷರ್ ಪಟೇಲ್ ಈ ತಂಡವನ್ನು ನಾಯಕರಾಗಿ ಮುನ್ನಡೆಸಿದ್ದಾರೆ.

11 ನಾಯಕರನ್ನು ಬದಲಿಸಿದ ಎಸ್​ಆರ್​ಹೆಚ್

ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್‌ನಲ್ಲಿ 11 ನಾಯಕರನ್ನು ಬದಲಿಸಿದೆ. ಇವರಲ್ಲಿ ಸಂಗಕ್ಕಾರ, ಕ್ಯಾಮರೂನ್ ವೈಟ್, ಶಿಖರ್ ಧವನ್, ಡ್ಯಾರೆನ್ ಸ್ಯಾಮಿ, ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್, ಭುವನೇಶ್ವರ್ ಕುಮಾರ್, ಮನೀಶ್ ಪಾಂಡೆ, ಮಾರ್ಕ್ರಾಮ್, ಕಮ್ಮಿನ್ಸ್ ಮತ್ತು ಇಶಾನ್ ಕಿಶನ್ ಸೇರಿದ್ದಾರೆ.

ಉಳಿದ ಫ್ರಾಂಚೈಸಿಗಳ ಪಟ್ಟಿ

ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ತಲಾ ಒಂಬತ್ತು ನಾಯಕರನ್ನು ನೇಮಿಸಿವೆ. ಆರ್‌ಸಿಬಿ ರಾಹುಲ್ ದ್ರಾವಿಡ್, ಕೆವಿನ್ ಪೀಟರ್ಸನ್, ಅನಿಲ್ ಕುಂಬ್ಳೆ, ಡೇನಿಯಲ್ ವೆಟ್ಟೋರಿ, ವಿರಾಟ್ ಕೊಹ್ಲಿ, ಶೇನ್ ವ್ಯಾಟ್ಸನ್, ಡು ಪ್ಲೆಸಿಸ್, ರಜತ್ ಪಟಿದಾರ್ ಮತ್ತು ಜಿತೇಶ್ ಶರ್ಮಾ ಅವರನ್ನು ನಾಯಕರನ್ನಾಗಿ ನೇಮಿಸಿದೆ. ಮುಂಬೈ ಇಂಡಿಯನ್ಸ್ ಸಚಿನ್ ತೆಂಡೂಲ್ಕರ್, ಹರ್ಭಜನ್ ಸಿಂಗ್, ಶಾನ್ ಪೊಲಾಕ್, ಡ್ವೇನ್ ಬ್ರಾವೋ, ರಿಕಿ ಪಾಂಟಿಂಗ್, ರೋಹಿತ್ ಶರ್ಮಾ, ಕೀರನ್ ಪೊಲಾರ್ಡ್, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಅವರನ್ನು ನಾಯಕರನ್ನಾಗಿ ನೇಮಿಸಿದೆ.

ಐಪಿಎಲ್ ಇತಿಹಾಸದಲ್ಲಿ ಒಂದೇ ಒಂದು ಸಿಕ್ಸ್ ಹೊಡೆಯದ ಐವರು ಆಟಗಾರರಿವರು

ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಸೌರವ್ ಗಂಗೂಲಿ, ಮೆಕಲಮ್, ಗಂಭೀರ್, ದಿನೇಶ್ ಕಾರ್ತಿಕ್, ಇಯೋನ್ ಮಾರ್ಗನ್, ಶ್ರೇಯಸ್ ಅಯ್ಯರ್, ನಿತೀಶ್ ರಾಣಾ, ಅಜಿಂಕ್ಯ ರಹಾನೆ ಸೇರಿದಂತೆ 8 ಆಟಗಾರರನ್ನು ನಾಯಕರನ್ನಾಗಿ ನೇಮಿಸಿದೆ. ರಾಜಸ್ಥಾನ ರಾಯಲ್ಸ್ ತಂಡವು ಶೇನ್ ವಾರ್ನ್, ಶೇನ್ ವ್ಯಾಟ್ಸನ್, ದ್ರಾವಿಡ್, ಸ್ಟೀವ್ ಸ್ಮಿತ್, ಅಜಿಂಕ್ಯ ರಹಾನೆ, ಸಂಜು ಸ್ಯಾಮ್ಸನ್ ಮತ್ತು ರಿಯಾನ್ ಪರಾಗ್ ಸೇರಿದಂತೆ 7 ಆಟಗಾರರನ್ನು ನಾಯಕರನ್ನಾಗಿ ನೇಮಿಸಿದೆ.

ಚೆನ್ನೈ ಮತ್ತು ಲಕ್ನೋ ತಲಾ 4 ನಾಯಕರನ್ನು ನೇಮಿಸಿವೆ. ಧೋನಿ, ರೈನಾ, ಜಡೇಜಾ ಮತ್ತು ಗೈಕ್ವಾಡ್ ಚೆನ್ನೈ ತಂಡವನ್ನು ಮುನ್ನಡೆಸಿದ್ದಾರೆ. ಕೆಎಲ್ ರಾಹುಲ್, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್ ಮತ್ತು ಪಂತ್ ಲಕ್ನೋ ತಂಡವನ್ನು ನಾಯಕರಾಗಿ ಮುನ್ನಡೆಸಿದ್ದಾರೆ. ಹಾರ್ದಿಕ್ ಪಾಂಡ್ಯ, ರಶೀದ್ ಖಾನ್ ಮತ್ತು ಶುಭಮನ್ ಗಿಲ್ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿ ಕೆಲಸ ಮಾಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಐತಿಹಾಸಿಕ ಮೇಲುಕೋಟೆ ವೈರಮುಡಿ ಉತ್ಸವಕ್ಕೆ ಸ್ಪಾನ್ಸರ್​​: ಖಾಲಿ ಆಯ್ತಾ ಸರ್ಕಾರದ ಖಜಾನೆ?

ಮಂಡ್ಯ, ಮಾರ್ಚ್​​ 18: ವೈರಮುಡಿ ಉತ್ಸವ ಕರ್ನಾಟಕದ ಅತ್ಯಂತ ಭವ್ಯ ಆಚರಣೆಗಳಲ್ಲೊಂದು. ವಜ್ರಖಚಿತ ಕಿರೀಟಧಾರಿಯಾದ ಶ್ರೀ ಚೆಲುವನಾರಾಯಣಸ್ವಾಮಿಯನ್ನು (Cheluvanarayana Swamy) ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಭಕ್ತಿ ಮತ್ತು ಸಂಸ್ಕೃತಿಯ ಸಮ್ಮಿಲನವಾಗುವ ಈ ಉತ್ಸವದಲ್ಲಿ ಈಗ ಹೊಸ ವಿವಾದವೊಂದು ಸೃಷ್ಟಿಯಾಗಿದೆ. ಸರ್ಕಾರದಿಂದ ನಡೆಯುತ್ತಿದ್ದ ಉತ್ಸವ ಇದೀಗ ಖಾಸಗಿ ಪ್ರಾಯೋಜಕತ್ವಕ್ಕೆ ಮೊರೆ ಹೋಗಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಆದರೆ ಇದಕ್ಕೆ ಅಧಿಕಾರಿಗಳು ಕೊಡುತ್ತಿರುವ ಉತ್ತರವೇ ಬೇರೆ.

ಪ್ರಯೋಜಕತ್ವಕ್ಕೆ ಮೊರೆ ಹೋದ ಸರ್ಕಾರ?

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿರುವ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಮೇಲುಕೋಟೆಯಲ್ಲಿ ಮಾರ್ಚ್ 23 ರಿಂದ ಏಪ್ರಿಲ್ 4ರವರೆಗೆ ವೈರಮುಡಿ ಬ್ರಹ್ಮೋತ್ಸವ ನೆರವೇರಲಿದೆ. ಮಾರ್ಚ್ 28ರಂದು ನಡೆಯಲಿರುವ ವೈರಮುಡಿ ಕಿರೀಟಧಾರಣ ಮಹೋತ್ಸವಕ್ಕೆ ರಾಜ್ಯ, ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಪ್ರತಿವರ್ಷ ಅದ್ದೂರಿ ಉತ್ಸವಕ್ಕೆ ಅನುದಾನ ನೀಡುತ್ತ ಬಂದಿದ್ದ ಸರ್ಕಾರ ಈ ಉತ್ಸವಕ್ಕೆ ಹಣ ಬಿಡುಗಡೆ ಮಾಡದೆ‌ ಖಾಸಗಿ ಪ್ರಯೋಜಕತ್ವಕ್ಕೆ ಮುಂದಾದರಾ ಅನ್ನೋ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: 110 ಅಡಿಗೆ ಇಳಿದ ಕೃಷ್ಣರಾಜ ಸಾಗರ ಜಲಾಶಯದ ನೀರಿನ ಮಟ್ಟ; ಕುಡಿಯುವ ನೀರಿಗೆ ಸಮಸ್ಯೆ ಆಗುತ್ತಾ?

ಕಳೆದ ಬಾರಿ ಸರ್ಕಾರ ನೀಡಿದ್ದ 1 ಕೋಟಿ ರೂ ಅನುದಾನದ ಭರವಸೆ ಮೇರೆಗೆ ವಿಜೃಂಭಣೆಯಿಂದ ವೈರಮುಡಿ ಉತ್ಸವ ನೆರವೇರಿತ್ತು. ಅದರಂತೆ ಈ ಬಾರಿ ಕೂಡ ಉತ್ಸವ ನಡೆಸಲು ಸರ್ಕಾರ ಮುಂದಾಗಿದೆ.‌ ಆದರೆ ಉತ್ಸವಕ್ಕೆ ಖಾಸಗಿ ಪ್ರಯೋಜಕತ್ವ ಪಡೆಯುತ್ತಿದ್ದಾರೆ ಅನ್ನೋ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಏಕೆಂದರೆ ಆಹ್ವಾನ ಪತ್ರಿಕೆಯಲ್ಲಿ ಪ್ರಾಯೋಜಕರ ಹೆಸರು ನಮೂದಿಸಿದ್ದು, ಯಾವ ಮಾನದಂಡದ ಮೇಲೆ ಪ್ರಾಯೋಜಕರ ಹೆಸರನ್ನು ನಮೂದಿಸಿದ್ದು, ಅಂತ ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ​ ಹೇಳಿದ್ದಿಷ್ಟು 

ಈ ಆರೋಪಗಳನ್ನ ಮಂಡ್ಯ ಜಿಲ್ಲಾಧಿಕಾರಿಗಳು ತಳ್ಳಿಹಾಕಿದ್ದಾರೆ. ಪ್ರಾಯೋಜಕತ್ವ ಪಡೆಯಲಾಗುತ್ತೆ, ಆದರೆ ಅವರ ಹೆಸರನ್ನ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸುವುದಿಲ್ಲ. ಈ ವೈರಲ್​​ ಆಗಿರುವ ಆಹ್ವಾನ ಪತ್ರಿಕೆ ಅಧಿಕೃತವಲ್ಲ ಎನ್ನುತ್ತಿದ್ದಾರೆ. ಅಷ್ಟೇ ಅಲ್ಲದೆ ಯಾರೋ ದುರುದ್ದೇಶ ಪೂರ್ವಕವಾಗಿ ಆಹ್ವಾನ ಪತ್ರಿಕೆ ವೈರಲ್ ಮಾಡಿದ್ದಾರೆ. ತನಿಖೆ‌ ನಡೆಸಿ ಅಂತವರ ವಿರುದ್ಧ ಕನೂನು ಕ್ರಮ ಜರುಗಿಸುತ್ತೇವೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದ್ದಾರೆ.

ಇದನ್ನೂ ಓದಿ: ಮೇಲುಕೋಟೆ ಚೆಲುವನಾರಾಯಣಸ್ವಾಮಿ ಸನ್ನಿಧಾನದಲ್ಲಿ ಬೆತ್ತಲಾದ ಯುವಕ, ಸಿಬ್ಬಂದಿ ಕೈಗೆ ಸಿಗದೆ ಹುಚ್ಚಾಟ

ಒಟ್ಟಾರೆ ಭಕ್ತಿ ಮತ್ತು ಪರಂಪರೆಯ ಸಂಕೇತವಾಗಬೇಕಿದ್ದ ವೈರಮುಡಿ ಉತ್ಸವ ಈ ಬಾರಿ ಆರಂಭದಲ್ಲೇ ವಿಘ್ನ ಶುರುವಾಗಿದ್ದು, ನಿಜಕ್ಕೂ ಆಹ್ವಾನ ಪತ್ರಿಕೆ ಮುದ್ರಿಸಿರುವ ಉದ್ದೇಶ ಏನು ಅನ್ನೋದು ತನಿಖೆಯಿಂದ ಬಯಲಾಗಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version