ಮದುವೆಯಾಗಿ ಒಂದುವರೆ ವರ್ಷಕ್ಕೆ ವಿವಾಹಿತೆ ಸಾವು: ಅಳಿಯನೇ ಕೊಲೆಗೈದದ್ದು ಎಂದ ಮಹಿಳೆ ಪೋಷಕರು

ಮದುವೆಯಾಗಿ ಒಂದುವರೆ ವರ್ಷಕ್ಕೆ ವಿವಾಹಿತೆ ಸಾವು: ಅಳಿಯನೇ ಕೊಲೆಗೈದದ್ದು ಎಂದ ಮಹಿಳೆ ಪೋಷಕರು

ಬೆಂಗಳೂರು, ಮಾರ್ಚ್​​ 15: ಅವರದ್ದು ಕರ್ನಾಟಕದ ಗಡಿ ಭಾಗ. ಪಾವಗಡ ಮೂಲದ ಯುವತಿಗೆ ಅದೇ ಊರಿನ ಯುವಕನೊಂದಿಗೆ ಮದುವೆ ಮಾಡಿದ್ದರು. ಇನ್ನೇನು ಚೆನ್ನಾಗಿ ಇರ್ತಾರೆ ಎನ್ನುವಷ್ಟರಲ್ಲೇ ವಿವಾಹಿತ ಮಹಿಳೆ ಹೆಣವಾಗಿದ್ದಾಳೆ (death). ವರಿಸಿದವನೇ ಕೊಂದಿದ್ದಾನೆ ಎನ್ನವು ಆರೋಪ ಕೇಳಿಬರ್ತಿದೆ. ಯಲಹಂಕ ನ್ಯೂಟೌನ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದದ್ದೇನು?

ಬೆಂಗಳೂರಿನ ಯಲಹಂಕ ನ್ಯೂಟೌನ್​​​ನ ಬೃಂದಾವನ ಲೇಔಟ್​​ನಲ್ಲಿ ವಾಸವಿದ್ದ 24 ವರ್ಷದ ಶೃತಿ ಇಂದು ಹೆಣವಾಗಿ ಬಿದ್ದಿದ್ದಾಳೆ. ಕಳೆದ 2024ರ ಡಿಸೆಂಬರ್‌ನಲ್ಲಿ ಪವನ್ ಕಲ್ಯಾಣ್ ಎಂಬಾತನ ಜೊತೆ ಶೃತಿ ವಿವಾಹವಾಗಿತ್ತು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಸಂಸಾರದಲ್ಲಿ ಬಿರುಗಾಳಿ ಎದ್ದಿತ್ತು. ಆರೋಪಿ ಪವನ್ ಕಲ್ಯಾಣ್ ಮತ್ತು ಆತನ ಕುಟುಂಬದವರು ವರದಕ್ಷಿಣೆಗಾಗಿ ಶೃತಿಗೆ ನಿರಂತರವಾಗಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂಬ ಆರೋಪಿಸಲಾಗಿತ್ತು. ಈ ವಿಚಾರಕ್ಕೆ ಜಗಳವೂ ಆಗಿದೆ. ಈ ಹಿಂದೆ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯ್ತಿ ಮಾಡಲಾಗಿತ್ತು. ಆದರೂ ಕಿರುಕುಳ ನಿಂತಿರಲಿಲ್ಲ. ಇದೀಗ ನೇಣು ಬಿಗಿದ ಸ್ಥಿತಿಯಲ್ಲಿ ಶೃತಿಯ ಶವ ಪತ್ತೆಯಾಗಿದೆ.

ಅಳಿಯನ ವಿರುದ್ಧ ಶೃತಿ ಪೋಷಕರು ಆಕ್ರೋಶ

ಇದು ಆತ್ಮಹತ್ಯೆಯಲ್ಲ, ಪತಿಯೇ ಕುತ್ತಿಗೆ ಬಿಗಿದು ಕೊಲೆ ಮಾಡಿ, ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ನೇಣು ಹಾಕಿದ್ದಾನೆ ಅನ್ನೊದು ಶೃತಿ ಪೋಷಕರ ಆಕ್ರೋಶ. ಸದ್ಯ ಯಲಹಂಕ ನ್ಯೂಟೌನ್ ಪೊಲೀಸರು ಮೃತಳ ಕುಟುಂಬ ನೀಡಿದ ದೂರಿನ ಅನ್ವಯ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಸದ್ಯ ಪತಿ ಪವನ್ ಕಲ್ಯಾಣ್‌ನನ್ನು ಬಂಧಿಸಿದ್ದಾರೆ.‌

ಇದೆಲ್ಲಾ ನಡೆದ ಬಳಿಕ ಇಂದು ಆಸ್ಪತ್ರೆಯ ಮುಂಭಾಗದಲ್ಲಿ ಶೃತಿ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು. ರಸ್ತೆಯ ಮೇಲೆ ಬಿದ್ದು ಹೊರಳಾಡುತ್ತಾ, “ನಮ್ಮ ಮಗಳನ್ನು ಕೊಂದವರಿಗೆ ಶಿಕ್ಷೆಯಾಗಲಿ, ನಮಗೆ ನ್ಯಾಯ ಬೇಕು” ಎಂದು ಗೋಳಾಡಿದ್ದಾರೆ. ಹೆತ್ತವರ ಆಕ್ರಂದನ ಎಂತವರಿಗೂ ಕಣ್ಣೀರು ತರಿಸುತ್ತದೆ. ಸದ್ಯ ಪೊಲೀಸರು ತನಿಖೆ ಮುಂದುವರೆಸಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಇನ್ನಷ್ಟು ಸ್ಪಷ್ಟವಾಗಲಿದೆ. ಆದರೆ ವರದಕ್ಷಿಣೆ ಎಂಬ ಪಿಡುಗಿಗೆ ಮತ್ತೊಂದು ಜೀವವನ್ನು ಬಲಿ ಪಡೆದಿರುವುದು ಮಾತ್ರ ದುರದೃಷ್ಟಕರ.‌‌‌

ಇದನ್ನೂ ಓದಿ: ವೈಯರ್‌ನಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ ಆತ್ಮಹತ್ಯೆ ಎಂದು ನಾಟಕವಾಡಿದ್ದ ಪ್ರಿಯಕರ!

ಮದುವೆ ಮಾಡಿಕೊಂಡಿರುವವರು ಒಟ್ಟಿಗೆ ಬದುಕಿ, ಇಲ್ಲವಾದರೆ ಬೇರೆಯಾಗಿ ಬದುಕಿ. ಇಲ್ಲಿ ಮುಖ್ಯವಾಗಿರುವುದು ಬದುಕುವುದೇ ವಿನಃ ಕೊಲ್ಲುವುದಲ್ಲ. ಜೊತೆಗೆ ಸಾಯುವುದು ಅಲ್ಲ. ಸದ್ಯ ಶೃತಿ ಕೇಸ್​​ನಲ್ಲಿ ಪತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದು ತನಿಖೆ ಮುಂದುವರೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕ್ರಿಕೆಟರ್ ಆಗಬೇಕಿದ್ದ ‘ಧುರಂಧರ್’ ನಿರ್ದೇಶಕ ಆದಿತ್ಯ ಸಿನಿಮಾ ರಂಗಕ್ಕೆ ಬಂದಿದ್ದು ಹೇಗೆ?

ಧುರಂಧರ್’ (Dhurandhar) ಬಾಕ್ಸ್ ಆಫೀಸ್ ಅನ್ನು ಧೂಳಿಪಟ ಮಾಡಿದ ಸಿನಿಮಾ. 2025ರಲ್ಲಿ ಬಿಡುಗಡೆ ಆದ ಈ ಸಿನಿಮಾ ನಿರ್ದೇಶಿಸಿದ್ದು ಆದಿತ್ಯ ಧರ್. ‘ಧುರಂಧರ್’ ಅಂಥಹಾ ಬ್ಲಾಕ್ ಬಸ್ಟರ್ ಸಿನಿಮಾ ನಿರ್ದೇಶಿಸುವುದಕ್ಕೆ ಮುಂಚೆ ಆದಿತ್ಯ ನಿರ್ದೇಶಿಸಿದ್ದು ಕೇವಲ ಒಂದೇ ಒಂದು ಸಿನಿಮಾ, ಅದೂ ಸಹ ಬ್ಲಾಕ್ ಬಸ್ಟರ್ ಆಗಿತ್ತು. ಅದುವೇ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’. ಆದರೆ ಎರಡು ಸೂಪರ್ ಹಿಟ್ ಸಿನಿಮಾ ನೀಡಿ, ಇದೀಗ ‘ಧುರಂಧರ್ 2’ ಮೂಲಕ ಮತ್ತೊಂದು ಬ್ಲಾಕ್ ಬಸ್ಟರ್ ಸಿನಿಮಾ ನೀಡಲು ಸಜ್ಜಾಗಿರುವ ಆದಿತ್ಯ ಧರ್, ಚಿತ್ರರಂಗಕ್ಕೆ ಬಂದಿದ್ದೇ ಆಕಸ್ಮಿಕ. ಅಸಲಿಗೆ ಅವರ ಕನಸು ಕ್ರಿಕೆಟರ್ ಆಗಬೇಕು ಎಂದಾಗಿತ್ತು.

ಆದಿತ್ಯ ಧರ್, ಮೂಲತಃ ಕಶ್ಮೀರಿ ಪಂಡಿತ್. ಎಳವೆಯಲ್ಲಿ ಡಿಸ್ಲೆಕ್ಸಿಯಾದಿಂದ ಬಳಲುತ್ತಿದ್ದ ಆದಿತ್ಯಗೆ ವಿದ್ಯೆ ಸುಲಭವಾಗಿ ತಲೆಗೆ ಹತ್ತುತ್ತಿರಲಿಲ್ಲ. ಆದರೆ ಬಳಿಕ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡ ಆದಿತ್ಯ, ಕ್ರಿಕೆಟರ್ ಆಗಬೇಕೆಂಬ ಕನಸು ಕಂಡಿದ್ದರು. ಆದಿತ್ಯ ಅವರು ಕ್ರಿಕೆಟ್ ಕೋಚಿಂಗ್ ಸಹ ಪಡೆದುಕೊಂಡಿದ್ದರು. ಭಾರತದ ಪರವಾಗಿ ಕ್ರಿಕೆಟ್ ಆಡಬೇಕು ಎಂಬ ಕನಸು ಹೊತ್ತು ಅಂಡರ್ 19ಗೆ ಟ್ರಯಲ್ಸ್ ಸಹ ನೀಡಿದ್ದರು. ಆದರೆ ಅವರೇ ಹೇಳಿಕೊಂಡಿರುವ ಪ್ರಕಾರ, ಕೆಲ ರಾಜಕೀಯದ ಕಾರಣಕ್ಕೆ ಅವರಿಗೆ ಭಾರತದ ಅಂಡರ್ 19 ತಂಡದಲ್ಲಿ ಸ್ಥಾನ ಸಿಗಲಿಲ್ಲವಂತೆ. ಅದೇ ಬೇಸರದಲ್ಲಿ ಅವರು ಕ್ರಿಕೆಟಿನಿಂದಲೇ ದೂರಾಗಿಬಿಟ್ಟರು.

ಆದರೆ ಆದಿತ್ಯ ಅವರ ಜೀವನ ಬದಲಾಗಿದ್ದು 1993 ರಲ್ಲಿ ಬಿಡುಗಡೆ ಆದ ‘ಗರ್ದಿಶ್’ ಸಿನಿಮಾ ಮೂಲಕ. ಜಾಕಿ ಶ್ರಾಫ್ ನಟಿಸಿ ಪ್ರಿಯದರ್ಶನ್ ನಿರ್ದೇಶನ ಮಾಡಿದ್ದ ‘ಗರ್ದಿಶ್’ ಸಿನಿಮಾ ನೋಡಿ ಬಹಳ ಪ್ರಭಾವಕ್ಕೆ ಒಳಗಾದ ಆದಿತ್ಯ ಧರ್, ತಾನು ಆದರೆ ಸಿನಿಮಾ ನಿರ್ದೇಶಕನೇ ಆಗಬೇಕು, ಎಂದು ನಿರ್ಣಯಿಸಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಿರ್ದೇಶಕ ಪ್ರಿಯದರ್ಶನ್ ಅವರ ಬಳಿ ಸಹಾಯಕ ನಿರದೇಶಕನಾಗಿ ಸೇರಿಕೊಂಡರು. ಆರಂಭದಲ್ಲಿ ಕೆಲವು ಕತೆಗಳನ್ನು ಸಹ ಬರೆದರು ಆದರೆ ಅಲ್ಲಿಯೂ ಅವರು ಕೆಲವು ಅನ್ಯಾಯಗಳನ್ನು ಎದುರಿಸಬೇಕಾಯ್ತು. ನಿರ್ದೇಶಕ ಪ್ರಿಯದರ್ಶನ್ ಹೇಳಿರುವಂತೆ ಆರಂಭದಲ್ಲಿ ಅವರ ಕತೆಗಳನ್ನು ಬೇರೆಯವರು ಕದ್ದು ಬಿಟ್ಟರಂತೆ. ಅವರು ಮಾಡಿದ ಕೆಲಸಕ್ಕೆ ಅವರಿಗೆ ಗುರುತು ಸಹ ನೀಡುತ್ತಿರಲಿಲ್ಲವಂತೆ.

ಇದನ್ನೂ ಓದಿ:‘ಧುರಂಧರ್ 2’ ಚಿತ್ರಕ್ಕೆ ಶಾಕ್; ಬ್ಯಾನ್ ಆಗುತ್ತಾ ಆದಿತ್ಯ ಧಾರ್ ನಿರ್ಮಾಣ ಸಂಸ್ಥೆ?

ಆದರೆ ಪ್ರಿಯದರ್ಶನ್ ಅವರ ಬಳಿ ಮಾಡಿದ ಕೆಲಸದಿಂದ ಅವರಿಗೆ ಗುರುತು ಸಿಕ್ಕಿತು. ಪ್ರಿಯದರ್ಶನ್ ಅವರ ಸಿನಿಮಾಗಳಿಗೆ ಸಂಭಾಷಣೆಗಳನ್ನು ಬರೆದರು. ಪ್ರಿಯದರ್ಶನ್ ಅವರೇ ಸಂದರ್ಶನದಲ್ಲಿ ಹೇಳಿರುವಂತೆ ಆದಿತ್ಯ ಬಹಳ ಒಳ್ಳೆಯ ಬರಹಗಾರ ಆಗಿದ್ದರು, ನನ್ನ ಸಿನಿಮಾಗಳಿಗೆ ಒಳ್ಳೆಯ ಸಂಭಾಷಣೆಗಳನ್ನು ಬರೆದುಕೊಡುತ್ತಿದ್ದರು ಎಂದಿದ್ದಾರೆ.

ಆದಿತ್ಯ ಧರ್ ಅವರು ಮೊದಲು ನಿರ್ದೇಶಕನಾಗಲು ಬೆಂಬಲ ನೀಡಿದ್ದು ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್. ಆದಿತ್ಯ ಧರ್ ‘ರಾತ್ ಬಾಕಿ’ ಹೆಸರಿನ ಸಿನಿಮಾ ನಿರ್ದೇಶಿಸಲು ಮುಂದಾಗಿದ್ದರು. ಅದಕ್ಕೆ ನಿರ್ಮಾಪಕ ಆಗಿದ್ದು ಕರಣ್ ಜೋಹರ್. ಸಿನಿಮಾನಲ್ಲಿ ಕತ್ರಿನಾ ಕೈಫ್ ನಾಯಕಿ, ಪಾಕಿಸ್ತಾನಿ ನಟ ಫಹಾದ್ ಖಾನ್ ನಾಯಕ. ಆದರೆ ಅದೇ ಸಮಯದಲ್ಲಿ ಉರಿ ದಾಳಿ ನಡೆಯಿತು. ಪಾಕಿಸ್ತಾನಿ ನಟರನ್ನು ಕೈಬಿಡಬೇಕೆಂಬ ಒತ್ತಾಯ ಕರಣ್ ಮೇಲೆ ಬಂತು. ಇದೇ ಆದಿತ್ಯ ನಿರ್ದೇಶಿಸಬೇಖಿದ್ದ ‘ರಾತ್ ಬಾಕಿ’ ಸಿನಿಮಾ ನಿಂತೇ ಹೋಯ್ತು.

ಆದರೆ ಇದರಿಂದ ಎದೆಗುಂದದೆ ಸ್ಪೂರ್ತಿಯನ್ನೇ ಪಡೆದ ಆದಿತ್ಯ ಧರ್, ‘ಉರಿ’ ದಾಳಿ ಹಾಗೂ ಅದರ ಬಳಿಕ ಭಾರತೀಯ ಸೇನೆ ಮಾಡಿದ ಸರ್ಜಿಕಲ್ ಸ್ಟ್ರೈಕ್ ಅನ್ನೇ ವಸ್ತುವಾಗಿ ಇರಿಸಿಕೊಂಡು ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾ ಮಾಡಿದರು. ‘ಉರಿ’ ಸಿನಿಮಾಕ್ಕೆ ವಿಕ್ಕಿ ಕೌಶಲ್ ಅನ್ನು ನಾಯಕನಾಗಿ ಆಯ್ಕೆ ಮಾಡಿಕೊಂಡಾಗಲೂ ಆದಿತ್ಯ ಅವರನ್ನು ಟೀಕಿಸಿದವರೇ ಹೆಚ್ಚು. ಏಕೆಂದರೆ ಆಗ ವಿಕ್ಕಿ ಕೌಶಲ್ ಕಮರ್ಶಿಯಲ್ ನಾಯಕ ಎನಿಸಿಕೊಂಡಿರಲಿಲ್ಲ. ಆದರೆ ಆದಿತ್ಯಗೆ ವಿಕ್ಕಿ ಮೇಲೆ ನಂಬಿಕೆ ಇಟ್ಟು ಪಾತ್ರ ಕೊಟ್ಟರು, ಆ ಪಾತ್ರಕ್ಕೆ ವಿಕ್ಕಿ ಜೀವ ತುಂಬಿದರು. ನಂತರದ್ದು ಇತಿಹಾಸ.

‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು. ಆದರೆ ಅದಾದ ಬಳಿಕ ಕೆಲವು ಸಿನಿಮಾಗಳಿಗೆ ಕತೆ ಬರೆದು ಸಿನಿಮಾ ಸಹ ನಿರ್ಮಾಣ ಮಾಡಿದ ಆದಿತ್ಯ, ಆರು ವರ್ಷಗಳ ಬಳಿಕ ‘ಧುರಂಧರ್’ ಸಿನಿಮಾ ಮಾಡಿದರು. ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು. ಇದೀಗ ಅದೇ ಸಿನಿಮಾದ ಸೀಕ್ವೆಲ್ ‘ಧುರಂಧರ್ 2’ ಬಿಡುಗಡೆಗೆ ರೆಡಿಯಾಗಿದೆ. ಸಿನಿಮಾ ಇದೇ ಮಾರ್ಚ್ 19ರಂದು ಬಿಡುಗಡೆ ಆಗಲಿದ್ದು, ಬಾಕ್ಸ್ ಆಫೀಸ್ ಚಿಂದಿ ಆಗುವುದು ಪಕ್ಕಾ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Video: ಕೊಲ್ಲಂನಲ್ಲಿ ಗ್ಯಾಂಗ್‌ಸ್ಟರ್ ಅಲುವಾ ಅತುಲ್ ಬರ್ಬರ ಹತ್ಯೆ

ಕೊಲ್ಲಂ, ಮಾರ್ಚ್​ 15: ಕೇರಳದ ಕೊಲ್ಲಂ ಜಿಲ್ಲೆಯ ಕರುಣಗಪ್ಪಲ್ಲಿ ಪ್ರದೇಶದಲ್ಲಿ ಹಾಡಹಗಲೇ ಗ್ಯಾಂಗ್​ಸ್ಟರ್ ಅಲುವಾ ಅತುಲ್​​ನಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಈ ಪ್ರದೇಶದಲ್ಲಿ ಗ್ಯಾಂಗ್ ವಾರ್ ನಡೆಯುವ ಸಾಧ್ಯತೆಯ ಬಗ್ಗೆ ಹೊಸ ಕಳವಳ ವ್ಯಕ್ತವಾಗಿದೆ.2025 ರಲ್ಲಿ ನಡೆದ ಗ್ಯಾಂಗ್ ಲೀಡರ್ ಜಿಮ್ ಸಂತೋಷ್ ಹತ್ಯೆಯಲ್ಲಿ ಪ್ರಮುಖ ಆರೋಪಿಯಾಗಿದ್ದ ಅಲುವಾ ಅತುಲ್ ಇತ್ತೀಚೆಗೆ ಜಾಮೀನು ಪಡೆದಿದ್ದ.ಅತುಲ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಐದು ಜನರ ಗುಂಪು ಉದ್ದೇಶಪೂರ್ವಕವಾಗಿ ಆತನ ವಾಹನಕ್ಕೆ ತಮ್ಮ ವಾಹನ ಡಿಕ್ಕಿ ಹೊಡೆಸಿ, ಅಪಘಾತ ಮಾಡಿದಿ, ಬಳಿಕ ಕಾರನ್ನು ಸುತ್ತುವರೆದು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಮದುವೆ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ: ಸಹೋದರರಿಂದಲೇ ಹಲ್ಲೆಗೊಳಗಾಗಿದ್ದ ವ್ಯಕ್ತಿ ಸಾವು

ಗದಗ, ಮಾರ್ಚ್​​ 15: ಮನೆ ಮಗಳ ಮದುವೆ ಅಂದ್ರೆ ದೊಡ್ಡಪ್ಪ-ಚಿಕ್ಕಪ್ಪಂದಿರ ಸಮೇತ ಕುಟುಂಬಸ್ಥರೆಲ್ಲ ಸಂಭ್ರಮಿಸ್ತಾರೆ. ಪ್ರತಿಯೊಂದು ಕೆಲಸವನ್ನು ಖುದ್ದಾಗಿ ತಾವೇ ನಿಂತು ನಿಭಾಯಿಸುತ್ತಾರೆ. ಮನೆ ಮಗಳು ಹೋದ ಮನೆಯಲ್ಲಿಯೂ ಚೆನ್ನಾಗಿರಬೇಕೆಂಬ ಕಾರಣಕ್ಕೆ ಯಾವ ತ್ಯಾಗಕ್ಕೂ ಸಿದ್ಧರಿರುತ್ತಾರೆ. ಆದರೆ ಗದಗದಲ್ಲಿ ಇವೆಲ್ಲದಕ್ಕೂ ತದ್ವಿರುದ್ಧ ಎಂಬ ಘಟನೆಯೊಂದು ನಡೆದಿದೆ. ಮಗಳ ಮದುವೆ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಸಹೋದರರಿಂದಲೇ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಪ್ರಾಣ ಬಿಟ್ಟಿದ್ದಾರೆ.

ಹೌದು, ಗಿರೀಶಪ್ಪ ಆಲೂರು(47) ಮೃತ ದುರ್ದೈವಿ. ಮಗಳ ಮದುವೆ ವಿಚಾರವಾಗಿ ಫೆ.27ರಂದು ಸಹೋದರರಿಂದಲೇ ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಇವರು ಚಿಕಿತ್ಸೆ ಫಲಿಸದೆ ಗದಗದ ಜಿಮ್ಸ್​​ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ. ಗಿರೀಶಪ್ಪ ಮತ್ತು ಲಕ್ಷ್ಮೀ ದಂಪತಿಯ ಮಗಳಾದ ಪವಿತ್ರಾಳನ್ನು ಇತ್ತೀಚೆಗಷ್ಟೇ ಸಂಬಂಧದಲ್ಲಿಯೇ ಹುಡುಗನ ನೋಡಿ ಮದುವೆ ಮಾಡಿಕೊಡಲಾಗಿತ್ತು. ಆದರೆ ಈ ಮದುವೆಗೆ ಗಿರೀಶಪ್ಪ ಸಹೋದರರು ವಿರೋಧ ವ್ಯಕ್ತಪಡಿಸಿದ್ದರು. ಆ ಬಳಿಕ ತಮ್ಮನ ಮನೆಯಲ್ಲಿದ್ದ ತಂದೆ ತಾಯಿ ಆಶೀರ್ವಾದ ಪಡೆದು ಬಾರಮ್ಮ ಎಂದು ಗಿರೀಶಪ್ಪ ಮಗಳನ್ನು ಕಳುಹಿಸಿದ್ದ. ಮದುವೆ ವಿಷಯವಾಗಿ ನಮ್ಮನ್ನ ಕೇಳದವರು ಈಗ ಯಾಕೆ ಬಂದಿದ್ದು ಎಂದು ಈ ವೇಳೆ ಸಹೋದರರಾದ ಈರಣ್ಣ ಮತ್ತು ಶಿವಕುಮಾರ್ ಗಲಾಟೆ ತೆಗೆದಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ರೋಗಿಗಳ ರಕ್ಷಣೆಗೆ ಇರುವ ಆ್ಯಂಬುಲೆನ್ಸ್​ನಲ್ಲಿ ಜನರ ಸಾಗಾಟ! ಕುರಿಗಳಂತೆ ಜನ ತುಂಬಿ ಕರೆದೊಯ್ಯುತ್ತಿರುವ ವಿಡಿಯೋ ವೈರಲ್

ಗಲಾಟೆ ವಿಕೋಪಕ್ಕೆ ಹೋಗಿ ಆರೋಪಿಗಳು ಗಿರೀಶಪ್ಪ ಮತ್ತು ಅವರ ಪತ್ನಿ ಲಕ್ಷ್ಮೀ ಅವರ ಮೇಲೆ ಹಲ್ಲೆ ನಡೆಸಿದ್ದರು. ಗಿರೀಶಪ್ಪ ಮೇಲೆ ಬಾರುಕೋಲು, ದೊಣ್ಣೆಗಳಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಹೊಡೆತ ಏಟಿಗೆ ತಲೆ, ಕೈ, ಎದೆ, ಹೊಟ್ಟೆ ಸೇರಿ ಮೈತುಂಬ ಬಾಸುಂಡೆ ಬಂದಿತ್ತು. ಶಿವಕುಮಾರ್ ಆಲೂರು, ರತ್ನವ್ವ ಆಲೂರು, ಈರಣ್ಣ ಆಲೂರು ಮತ್ತು ಗೀತಾ ಆಲೂರು ಹಲ್ಲೆ ನಡೆಸಿರುವ ಆರೋಪಿಗಳು ಎನ್ನಲಾಗಿದ್ದು, ಘಟನೆಯಲ್ಲಿ ಗಿರೀಶಪ್ಪ ಗಂಭೀರವಾಗಿ ಗಾಯಗೊಂಡಿದ್ದರು. ಸರ್ಕಾರಿ ಕೆಲಸ ಇರುವ ಹುಡುಗನಿಗೇ ಮಗಳನ್ನ ಕೊಟ್ಟು ಮದ್ವೆ ಮಾಡು‌ ಎಂದು ಶಿವಕುಮಾರ್ ತಿಳಿಸಿದ್ದರೂ, ಸರ್ಕಾರಿ ಕೆಲಸದ ಹುಡುಗನಾದ್ರೆ ನಮ್ಮನ್ನ ನೋಡಲು‌ಬರೋದಿಲ್ಲ ಎಂದು ಗಿರೀಶಪ್ಪ ವಾದಿಸಿದ್ದರು.  ಕೊನೆಗೆ ತನ್ನಾಸೆಯಂತೆ ಸಂಬಂಧಿಕರಲ್ಲೇ ಮಗಳನ್ನ ಕೊಟ್ಟು  ಮದುವೆ ಮಾಡಿದ್ದರು.  ಆದರೆ ಅಂತಿಮವಾಗಿ ಅಣ್ಣ ಮಾತು ಕೇಳಲಿಲ್ಲ ಎಂಬ ಸಹೋದರ ಸಿಟ್ಟಿಗೆ  ಗಿರೀಶಪ್ಪ ಅವರ ಪ್ರಾಣ ಪಕ್ಷಿಯೇ ಈಗ ಹಾರಿಹೋಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಒಂಟಿ ದಂತದ ಕಾಡಾನೆ ಹಾವಳಿಗೆ ಕಾಡಂಚಿನ ಗ್ರಾಮಸ್ಥರು ಹೈರಾಣು: ಒಂದೇ ಏಟಿಗೆ ಕಬ್ಬಿಣದ ಗೇಟ್ ಛಿದ್ರ

ಚಾಮರಾಜನಗರ, ಮಾರ್ಚ್​​ 15: ಒಂಟಿ ದಂತದ ಆನೆ ಹಾವಳಿಗೆ ಕಾಡಂಚಿನ ಗ್ರಾಮಸ್ಥರು ಹೈರಾಣಾಗಿದ್ದಾರೆ. ಒಂಟಿ ಸಲಗನ ಏಟಿಗೆ ಕಬ್ಬಿಣದ ಗೇಟ್ ಛಿದ್ರವಾದ ಘಟನೆ ಚಾಮರಾಜನಗರದ ಗಡಿಗ್ರಾಮ ತಮಿಳುನಾಡಿನ ಅರಳವಾಡಿಯಲ್ಲಿ ನಡೆದಿದೆ. ವಾಹನವೊಂದು ಬರುತ್ತಿದ್ದನ್ನು ಕಂಡ ಒಂಟಿದಂತದ ಕಾಡಾನೆ ಸಲೀಸಾಗಿ ಗೇಟ್ ಮುರಿದು ತೋಟಕ್ಕೆ ನುಗ್ಗಿ ಬೆಳೆ ಮೇಯ್ದಿದೆ. ಕಾಡಾನೆ ಗೇಟ್ ಮುರಿದು ಒಳನುಗ್ಗುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆ ಆಗಿದೆ. ಸದ್ಯ ಕರ್ನಾಟಕ ಮತ್ತು ತಮಿಳುನಾಡಿನ ಜನರಿಗೆ ಕಾಡಾನೆ ತಲೆನೋವಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಒಡಿಶಾ ಶಾಸಕರ ಖರೀದಿಗೆ ಬಂದ್ರು ಈ ಅಪರಿಚಿತ ವ್ಯಕ್ತಿಗಳು! ಇಬ್ಬರು ಪೊಲೀಸ್ ವಶಕ್ಕೆ

ರಾಮನಗರ, ಮಾರ್ಚ್​ 15: ಒಡಿಶಾದಲ್ಲಿ ನಡೆಯಲಿರುವ ರಾಜ್ಯಸಭಾ ಚುನಾವಣೆಯ ಹಿನ್ನೆಲೆ ಅಡ್ಡಮತದಾನ ಭೀತಿ ನಡುವೆ ರಾಮನಗರ (Ramnagar) ಜಿಲ್ಲೆಯ ಬಿಡದಿ ಬಳಿಯ ರೆಸಾರ್ಟ್‌ನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಒಡಿಶಾ ಕಾಂಗ್ರೆಸ್ ಶಾಸಕರನ್ನು ಸುರಕ್ಷಿತವಾಗಿ ಇರಿಸಲು ಪಕ್ಷದ ನಾಯಕರು ಬೆಂಗಳೂರಿಗೆ ಕರೆತರಿದ್ದು, ಬಿಡದಿ ಸಮೀಪದ ವಂಡರ್ ಲಾ ರೆಸಾರ್ಟ್‌ನಲ್ಲಿ ವಾಸ್ತವ್ಯ ಕಲ್ಪಿಸಲಾಗಿದೆ. ಇದೇ ವೇಳೆ ಶಾಸಕರನ್ನು ಖರೀದಿಸಲು ಅಪರಿಚಿತ ವ್ಯಕ್ತಿಗಳು ರೆಸಾರ್ಟ್‌ಗೆ ಬಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಹಿಡಿದಿಟ್ಟಿರುವ ವ್ಯಕ್ತಿಗಳ ಬಳಿ ಕೆಲವು ಬ್ಲಾಂಕ್ ಚೆಕ್‌ಗಳು ಪತ್ತೆ

ಬೆಳಗ್ಗೆ ವೇಳೆ ನಾಲ್ವರು ವ್ಯಕ್ತಿಗಳು ರೆಸಾರ್ಟ್‌ಗೆ ಬಂದು ಒಡಿಶಾದ ಒಬ್ಬ ಕಾಂಗ್ರೆಸ್ ಶಾಸಕರನ್ನು ಭೇಟಿಯಾಗಿದ್ದಾರೆ ಎನ್ನಲಾಗುತ್ತಿದೆ. ಈ ವಿಷಯ ತಿಳಿದ ಕಾಂಗ್ರೆಸ್ ಮುಖಂಡರು ತಕ್ಷಣ ಕ್ರಮ ಕೈಗೊಂಡು ಇಬ್ಬರನ್ನು ಹಿಡಿದು ಇಟ್ಟಿದ್ದಾರೆ. ಇನ್ನಿಬ್ಬರು ವ್ಯಕ್ತಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಹಿಡಿದಿಟ್ಟಿರುವ ವ್ಯಕ್ತಿಗಳ ಬಳಿ ಕೆಲವು ಬ್ಲಾಂಕ್ ಚೆಕ್‌ಗಳು ಪತ್ತೆಯಾಗಿದ್ದು, ಅವುಗಳಲ್ಲಿ ಬಿರೇಂದ್ರ ಪ್ರಸಾದ್ ಎಂಬುವವರ ಹೆಸರಿರುವ ಚೆಕ್ ಕೂಡ ಸೇರಿದೆ ಎಂದು ಮೂಲಗಳು ತಿಳಿಸಿವೆ. ಆರೋಪಿಗಳಾಗಿ ಬಿರೇಂದ್ರ ಪ್ರಸಾದ್, ಅಜಿತ್ ಕುಮಾರ್ ಸಾಹು ಮತ್ತು ಸುಮಾಚಲ್ ಮಹಾಕೂದ ಎಂಬ ಹೆಸರುಗಳು ಕೇಳಿಬಂದಿವೆ.

ಘಟನೆಯ ಮಾಹಿತಿ ತಿಳಿದು ಬಿಡದಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಒಡಿಶಾದಲ್ಲಿ ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಸಂಬಂಧಿಸಿದಂತೆ ಕುದುರೆ ವ್ಯಾಪಾರದ ಆರೋಪ ಕೇಳಿಬಂದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಅಡ್ಡಬಂದ ಕಾರು ತಪ್ಪಿಸಲು ಹೋಗಿ ಮರಕ್ಕೆ ಗುದ್ದಿದ ಬಸ್​​: ಆಸ್ಪತ್ರೆ ಮುಂದೆಯೇ ಅಪಘಾತ!

ಬೆಳಗಾವಿ, ಮಾರ್ಚ್​​ 15: ಅಡ್ಡಬಂದ ಕಾರು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಸರ್ಕಾರಿ ಬಸ್ ಮರಕ್ಕೆ ಡಿಕ್ಕಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ನಡೆದಿದೆ. ಅಪಘಾತದಲ್ಲಿ ಬಸ್​ನಲ್ಲಿದ್ದ 11 ಪ್ರಯಾಣಿಕರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಕಾರು ಚಾಲಕನ ನಿರ್ಲಕ್ಷ್ಯದಿಂದಾಗಿ ಸರ್ಕಾರಿ ಆಸ್ಪತ್ರೆಯ ಮುಂಭಾಗವೇ ಬಸ್​​ ಅಪಘಾತಕ್ಕೀಡಾಗಿದ್ದು, ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

NZ vs SA: ಎರಡಂಕಿ ಮೊತ್ತಕ್ಕೆ ನ್ಯೂಝಿಲೆಂಡ್ ಆಲೌಟ್!

ಟಿ20 ವಿಶ್ವಕಪ್​ನ ರನ್ನರ್ ಅಪ್ ನ್ಯೂಝಿಲೆಂಡ್ ತಂಡ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದೆ. ಮೌಂಟ್ ಮೌಂಗನುಯಿನ ಬೇ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಕಿವೀಸ್ ಪಡೆಗೆ ಆರಂಭಿಕ ಆಘಾತ ನೀಡುವಲ್ಲಿ ಸೌತ್ ಆಫ್ರಿಕಾ ಬೌಲರ್​ಗಳು ಯಶಸ್ವಿಯಾಗಿದ್ದರು.

ಪರಿಣಾಮ 35 ರನ್​ಗಳಿಸುವಷ್ಟರಲ್ಲಿ ನ್ಯೂಝಿಲೆಂಡ್ ತಂಡವು 5 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಜೇಮ್ಸ್ ನೀಶಮ್ 26 ರನ್ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು. ಆದರೆ ಅತ್ತ ಅದಾಗಲೇ ಪಂದ್ಯದ ಮೇಲೆ ಹಿಡಿತ ಹೊಂದಿದ್ದ ಸೌತ್ ಆಫ್ರಿಕಾ ಬೌಲರ್​ಗಳು ಕೆಳ ಕ್ರಮಾಂಕದ ಬ್ಯಾಟರ್​ಗಳನ್ನು ಬೇಗನೆ ಪೆವಿಲಿಯನ್​ಗಟ್ಟಿದರು.

ಈ ಮೂಲಕ ನ್ಯೂಝಿಲೆಂಡ್ ತಂಡವನ್ನು 14.3 ಓವರ್​ಗಳಲ್ಲಿ 91 ರನ್​ಗಳಿಗೆ ಆಲೌಟ್ ಮಾಡಿದರು. ಸೌತ್ ಆಫ್ರಿಕಾ ನ್ಕೊಬಾನಿ ಮೊಕೊಯೆನಾ 3.3 ಓವರ್​ಗಳಲ್ಲಿ 26 ರನ್ ನೀಡಿ 3 ವಿಕೆಟ್ ಪಡೆದರೆ, ಜೆರಾಲ್ಡ್ ಕೋಟ್ಝಿ 2 ವಿಕೆಟ್ ಕಬಳಿಸಿದರು. ಇನ್ನು ಕೇಶವ್ ಮಹಾರಾಜ್ ಹಾಗೂ ಒರ್ಟ್ನಿಲ್ ಬಾರ್ಟ್​ಮನ್ ತಲಾ ಎರಡು ವಿಕೆಟ್ ಕಬಳಿಸಿ ಉತ್ತಮ ಸಾಥ್ ನೀಡಿದರು.

ಇನ್ನು ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು 16.4 ಓವರ್​ಗಳಲ್ಲಿ 93 ರನ್ ಗಳಿಸುವ ಮೂಲಕ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಪಡೆದುಕೊಂಡಿದೆ.

Source link

ಹಣೆಗೆ ಗುಂಡಿಟ್ಟು ಸಾಯಿಸುತ್ತೇವೆ: ಗಾಯಕ ಬಾದ್​ಶಾಗೆ ಬಿಷ್ಣೋಯ್ ಗ್ಯಾಂಗ್​ನಿಂದ ಬೆದರಿಕೆ

ಖ್ಯಾತ ರ‍್ಯಾಪರ್ ಮತ್ತು ಗಾಯಕ ಬಾದ್‌ಶಾ (Badshah) ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದು ಕಡೆ ಜೈಲಿನಲ್ಲಿರುವ ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಕೊಲೆ ಬೆದರಿಕೆ ಬಂದಿದ್ದರೆ, ಮತ್ತೊಂದೆಡೆ ಕಾನೂನು ಕ್ರಮಗಳ ಅಡಿಯಲ್ಲಿ ಅವರ ಬಂಧನಕ್ಕೆ ಸಿದ್ಧತೆ ನಡೆಯುತ್ತಿದೆ. ಬಾದ್‌ಶಾ ಅವರ ಇತ್ತೀಚಿನ ‘ಟಟೀರಿ’ (Tateeree) ಹಾಡು ಈಗ ಅವರಿಗೆ ದೊಡ್ಡ ಕಂಟಕವಾಗಿ ಪರಿಣಮಿಸಿದೆ. ಈ ಹಾಡಿನಲ್ಲಿ ಹರಿಯಾಣದ ಸಂಸ್ಕೃತಿ ಮತ್ತು ಮಹಿಳೆಯರನ್ನು ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎಂಬ ಆರೋಪದ ಬೆನ್ನಲ್ಲೇ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಅವರಿಗೆ ಪ್ರಾಣ ಬೆದರಿಕೆ (Death Threat) ಬಂದಿದೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಪೋಸ್ಟ್ ಒಂದರಲ್ಲಿ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯ ಎನ್ನಲಾದ ವ್ಯಕ್ತಿಯೊಬ್ಬ ಬಾದ್‌ಶಾಗೆ ಎಚ್ಚರಿಕೆ ನೀಡಿದ್ದಾನೆ. ‘ಗಾಯಕ ಬಾದ್‌ಶಾ, ನೀನು ಹರಿಯಾಣದ ಸಂಸ್ಕೃತಿಯನ್ನು ಹಾಳುಮಾಡಲು ಯತ್ನಿಸಿದೆ. 2024ರಲ್ಲಿ ನಿನ್ನ ಕ್ಲಬ್‌ನಲ್ಲಿ ನಾವು ಕೇವಲ ಟ್ರೈಲರ್ ತೋರಿಸಿದ್ದೆವು. ಆದರೆ ಈ ಬಾರಿ ನೇರವಾಗಿ ನಿನ್ನ ಹಣೆಗೆ ಗುಂಡಿಡುತ್ತೇವೆ’ ಎಂದು ಭಯಾನಕ ಸಂದೇಶ ರವಾನಿಸಲಾಗಿದೆ. ಈ ಪೋಸ್ಟ್ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇನ್ನೊಂದೆಡೆ ಬಾದ್​ಶಾ ಅವರಿಗೆ ಬಂಧನದ ಭೀತಿ ಎದುರಾಗಿದೆ. ಹಾಡಿನ ವಿವಾದಕ್ಕೆ ಸಂಬಂಧಿಸಿದಂತೆ ಹರಿಯಾಣ ರಾಜ್ಯ ಮಹಿಳಾ ಆಯೋಗವು ಕಠಿಣ ನಿಲುವು ತಳೆದಿದೆ. ಮಾರ್ಚ್ 6ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದ್ದರೂ ಬಾದ್‌ಶಾ ಗೈರುಹಾಜರಾಗಿದ್ದರು. ಇದರಿಂದ ಕೆರಳಿದ ಮಹಿಳಾ ಆಯೋಗವು ಬಾದ್‌ಶಾ ಅವರ ಪಾಸ್‌ಪೋರ್ಟ್ ಜಪ್ತಿ ಮಾಡಲು ಪೊಲೀಸರಿಗೆ ಸೂಚಿಸಿದೆ.

ಅಲ್ಲದೇ, ಬಾದ್​ಶಾ ಅವರನ್ನು ಕೂಡಲೇ ಬಂಧಿಸಲು ಹರಿಯಾಣ ಪೊಲೀಸರಿಗೆ ಮಹಿಳಾ ಆಯೋಗವು ನಿರ್ದೇಶನ ನೀಡಿದೆ. ಹರಿಯಾಣದ ಹೆಣ್ಣುಮಕ್ಕಳನ್ನು ಹಾಡಿನ ಮೂಲಕ ಅವಮಾನಿಸಲಾಗಿದೆ ಎಂದು ಆಯೋಗ ಕಿಡಿಕಾರಿದೆ. ಈ ಸಂಬಂಧ ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು, ಬಾದ್‌ಶಾ ಅವರ ಸುತ್ತ ಸಂಕಷ್ಟದ ಸುಳಿ ಸುತ್ತಿಕೊಂಡಿದೆ.

ಇದನ್ನೂ ಓದಿ: ಅಸಭ್ಯ ಸಾಹಿತ್ಯಕ್ಕೆ ವಿರೋಧ: ಕ್ಷಮೆ ಕೇಳಿ ರಾತ್ರೋರಾತ್ರಿ ಸಾಂಗ್ ಡಿಲೀಟ್ ಮಾಡಿದ ಬಾದ್​ಶಾ

‘ಟಟೀರಿ’ ಹಾಡಿನಲ್ಲಿ ಶಾಲಾ ಸಮವಸ್ತ್ರ ಧರಿಸಿದ ಹರಿಯಾಣದ ವಿದ್ಯಾರ್ಥಿನಿಯರು ಆಕ್ಷೇಪಾರ್ಹವಾಗಿ ಡ್ಯಾನ್ಸ್ ಮಾಡಿದ್ದಾರೆ ಹಾಗೂ ಅಸಭ್ಯ ಸನ್ನೆಗಳನ್ನು ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂತು. ಇದು ಹರಿಯಾಣದ ಸಂಸ್ಕೃತಿ ಹಾಗೂ ವಿದ್ಯಾರ್ಥಿನಿಯರ ಘನತೆಗೆ ಧಕ್ಕೆ ತಂದಿದೆ ಎಂದು ಅನೇಕರು ದೂರಿದರು. ಈ ಹಾಡಿನ ಸಾಹಿತ್ಯ ಅಸಭ್ಯವಾಗಿದೆ ಎಂದು ಹಲವರು ದೂರು ನೀಡಿದ್ದರು. ಆ ಬಳಿಕ ಹಾಡನ್ನು ರಿಲೀಟ್ ಮಾಡಿದ ಬಾದ್​ಶಾ ಅವರು ಕ್ಷಮೆ ಕೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ, ತಾನೂ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ಸಂಬಲ್ಪುರ, ಮಾರ್ಚ್​ 15: ಇಬ್ಬರು ಅಪ್ರಾಪ್ತ ಮಕ್ಕಳನ್ನು ಬಾವಿಗೆ ತಳ್ಳಿ ಮಹಿಳೆ ತಾನೂ ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟಮೆ ಒಡಿಶಾದ ಸಂಬಲ್ಪುರದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಜಿಲ್ಲೆಯ ಬಮ್ರಾ ಬ್ಲಾಕ್‌ನ ಮಹುಲಿಪಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ಗಿದಿಹಿ ಗ್ರಾಮದ ನಿವಾಸಿ ಸಂಜು ಮಡ್ಕಿ ಎಂದು ಗುರುತಿಸಲಾಗಿದೆ.

ಮಾಹಿತಿಯ ಪ್ರಕಾರ, ಸಂಜು ಮಡ್ಕಿ ಶುಕ್ರವಾರ ತನ್ನ ಇಬ್ಬರು ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳನ್ನು ಬಾವಿಗೆ ಎಸೆದು ಕೊಂದಿದ್ದಾಳೆ ಎನ್ನಲಾಗಿದೆ. ನಂತರ ಪೊಲೀಸರು ಈ ಅಪರಾಧವನ್ನು ಮಕ್ಕಳ ತಾಯಿಯೇ ಮಾಡಿದ್ದಾರೆ ದೃಢಪಡಿಸಿದ್ದಾರೆ.

ಘಟನೆಯ ನಂತರ, ಮಹಿಳೆ ಗ್ರಾಮದಿಂದ ಪರಾರಿಯಾಗಿದ್ದಾಳೆಂದು ವರದಿಯಾಗಿದೆ, ಇದರಿಂದಾಗಿ ಪೊಲೀಸರು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು. ಮಹಿಳೆಯ ಪತಿ ಮಹುಲಿಪಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ ತನಿಖೆ ಪ್ರಾರಂಭವಾಯಿತು.

ಮತ್ತಷ್ಟು ಓದಿ: ವರದಕ್ಷಿಣೆ ಪಡೆದರೂ ತೀರದ ಧನ ದಾಹ, ಸಾಲದಕ್ಕೆ ಅನುಮಾನ: ಪತಿ ಟಾರ್ಚರ್​​ಗೆ ಪತ್ನಿ ಆತ್ಮಹತ್ಯೆ

ಘಟನೆಯ ಕುರಿತು ಮಾತನಾಡಿದ ಕುಚಿಂಡಾದ ಎಸ್‌ಡಿಪಿಒ ಪ್ರದೀಪ್ ಕುಮಾರ್ ದಾಶ್, ದೂರು ದಾಖಲಾದ ಕೂಡಲೇ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದರು ಎಂದು ಹೇಳಿದರು. ಶನಿವಾರ ಬೆಳಗ್ಗೆ, ಸಂಜು ಮಡ್ಕಿ ಮತ್ತೊಂದು ಹಳ್ಳಿಯ ಒಂದು ನುಲ್ಲಾ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಪೊಲೀಸರು ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಿದ್ದಾರೆ.

ಪೊಲೀಸರು ಸ್ಥಳಕ್ಕೆ ತಲುಪಿ, ಶವವನ್ನು ವಶಪಡಿಸಿಕೊಂಡರು ಮತ್ತು ದುರಂತ ಘಟನೆಗೆ ಕಾರಣವಾದ ನಿಖರವಾದ ಸಂದರ್ಭಗಳನ್ನು ಕಂಡುಹಿಡಿಯಲು ಹೆಚ್ಚಿನ ತನಿಖೆಯನ್ನು ಪ್ರಾರಂಭಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version