ಕೊನೆಗೂ ಸಿಕ್ತು ‘ರಿಚರ್ಡ್ ಆಂಟೊನಿ’ ಸಿನಿಮಾ ಅಪ್​​ಡೇಟ್, ಶೂಟಿಂಗ್ ಯಾವಾಗ ಶುರು? – Kannada News | Pramod Shetty said Rakshit Shetty will start Richard Antony movie shoot soon

ಕನ್ನಡದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ‘ರಿಚರ್ಡ್ ಆಂಟೊನಿ’ ಸಹ ಒಂದು. ರಕ್ಷಿತ್ ಶೆಟ್ಟಿ (Rakshit Shetty) ಅವರು ನಿರ್ದೇಶಿಸಲಿರುವ ‘ರಿಚರ್ಡ್ ಆಂಟೊನಿ’ ಸಿನಿಮಾ ಘೋಷಣೆಯಾಗಿ ವರ್ಷಗಳು ಕಳೆದಿವೆ. ಆದರೆ ಸಿನಿಮಾದ ಯಾವುದೇ ಅಪ್​​​ಡೇಟ್ ಹೊರಬಿದ್ದಿಲ್ಲ. ಕಳೆದ ನಾಲ್ಕೈದು ವರ್ಷಗಳಿಂದ ‘ರಿಚರ್ಡ್ ಆಂಟೊನಿ’ ಸಿನಿಮಾದ ಕತೆ ಮತ್ತು ಚಿತ್ರಕತೆ ಹೆಣೆಯುವಲ್ಲಿ ರಕ್ಷಿತ್ ಶೆಟ್ಟಿ ಬ್ಯುಸಿ ಆಗಿದ್ದಾರೆ. ಸಿನಿಮಾದ ಕತೆಯಲ್ಲಿ ಬ್ಯುಸಿ ಆಗಿರುವ ಕಾರಣಕ್ಕೆ ರಕ್ಷಿತ್ ಶೆಟ್ಟಿ ಹೊರಗೆಲ್ಲೂ ಕಾಣಿಸಿಕೊಳ್ಳುತ್ತಿಲ್ಲ ಎನ್ನಲಾಗುತ್ತಿದೆ. ಆದರೆ ಇದೀಗ ಕೊನೆಗೂ ಸಿನಿಮಾದ ಬಗ್ಗೆ ದೊಡ್ಡ ಅಪ್​ಡೇಟ್ ಒಂದು ದೊರೆತಿದೆ.

ಶೆಟ್ಟಿ ಗ್ಯಾಂಗ್​​ನಲ್ಲಿ ಒಬ್ಬರಾಗಿರುವ ಪ್ರಮೋದ್ ಶೆಟ್ಟಿ ಇತ್ತೀಚೆಗೆ ತಮ್ಮ ನಟನೆಯ ‘ಶೇಷ’ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ‘ರಿಚರ್ಡ್ ಆಂಟೊನಿ’ ಸಿನಿಮಾದ ಬಗ್ಗೆ ಮಾತನಾಡಿದರು. ‘ರಿಚರ್ಡ್ ಅಂಟೊನಿ’ ಸಿನಿಮಾದ ಚಿತ್ರಕತೆ ರೆಡಿ ಆಗುತ್ತಿದೆ. ನಾವು ಶೀಘ್ರವೇ ಪ್ರೀ ಪ್ರೊಡಕ್ಷನ್ ಕಾರ್ಯಗಳಲ್ಲಿ ತೊಡಗಿಕೊಳ್ಳಲಿದ್ದೇವೆ. ಇನ್ನು ಎರಡು ಮೂರು ತಿಂಗಳಲ್ಲಿ ಸಿನಿಮಾದ ಚಿತ್ರೀಕರಣ ಸಹ ಪ್ರಾರಂಭ ಆಗಲಿದೆ’ ಎಂದಿದ್ದಾರೆ ಪ್ರಮೋದ್ ಶೆಟ್ಟಿ. ಮಾತ್ರವಲ್ಲದೆ, ‘ರಿಚರ್ಡ್ ಆಂಟೊನಿ’ ಸಿನಿಮಾನಲ್ಲಿ ತಾವು ಸಹ ರಕ್ಷಿತ್ ಶೆಟ್ಟಿ ಜೊತೆಗೆ ನಟಿಸುತ್ತಿರುವುದಾಗಿಯೂ ಹೇಳಿದ್ದಾರೆ.

ಇದನ್ನೂ ಓದಿ:ನೇಮೋತ್ಸವದಲ್ಲಿ ಭಕ್ತಿಯಿಂದ ಪಾಲ್ಗೊಂಡ ನಟ ರಕ್ಷಿತ್ ಶೆಟ್ಟಿ

ಶೆಟ್ಟಿ ಗ್ಯಾಂಗ್​​ನ ಎಲ್ಲ ಸದಸ್ಯರು ಒಟ್ಟಿಗೆ ಒಂದೇ ಸಿನಿಮಾನಲ್ಲಿ ನಟಿಸುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪ್ರಮೋದ್ ಶೆಟ್ಟಿ, ‘ರಾಜ್‌ ಬಿ ಶೆಟ್ಟಿ ಅವರದ್ದು ಪ್ರತಿ ತಿಂಗಳು ಒಂದೊಂದು ಸಿನಿಮಾ ಬಿಡುಗಡೆ ಆಗ್ತಿದೆ. ಮಲಯಾಳಂ ಚಿತ್ರರಂಗದಲ್ಲೂ ಬ್ಯುಸಿ ಆಗಿದ್ದಾನೆ. ರಿಷಬ್‌ಗೆ ತೆಲುಗು ಚಿತ್ರರಂಗದಲ್ಲಿ ಆಫರ್‌ ಇರುವುದರಿಂದ ಅಲ್ಲಿ ಬ್ಯುಸಿ ಇದ್ದಾನೆ. ರಕ್ಷಿತ್‌, ಕತೆ ಬರೆದುಕೊಂಡು ಕೂತಿದ್ದ, ಇನ್ನೇನು ಮೂರು ತಿಂಗಳಲ್ಲಿ ಶೂಟಿಂಗ್‌ ಶುರು ಮಾಡ್ತಾನೆ. ಎಲ್ಲರೂ ವೈಯಕ್ತಿಕವಾಗಿ ಬ್ಯುಸಿಯಿದ್ದಾರೆ. ಪುರುಸೊತ್ತಿದ್ದಾಗ ಸಿಗ್ತೀವಿ. ಎಲ್ಲಾ ಸಿನಿಮಾ ಕೂಡ ಒಟ್ಟಿಗೆ ಮಾಡ್ತಾ ಇದ್ರೆ ಜನಕ್ಕೆ ಬೋರ್‌ ಆಗುತ್ತೆ’ ಎಂದಿದ್ದಾರೆ.

‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದ ಬಳಿಕ ರಕ್ಷಿತ್ ಶೆಟ್ಟಿ ಕಾಣೆಯಾಗಿದ್ದಾರೆ. ‘ರಿಚರ್ಡ್ ಆಂಟೊನಿ’ ಸಿನಿಮಾವನ್ನು ಅವರು ಘೋಷಿಸಿ ವರ್ಷಗಳೇ ಕಳೆದಿವೆ. ಸಿನಿಮಾದ ಘೋಷಣೆ ಆದಾಗ ಹೊಂಬಾಳೆ ಫಿಲಮ್ಸ್ ನಿರ್ಮಾಣ ಮಾಡುವುದಾಗಿ ಹೇಳಿತ್ತು. ಆದರೆ ಚಿತ್ರಕತೆ ತಡವಾದ ಕಾರಣದಿಂದಾಗಿ ಎಲ್ಲವೂ ಅದಲು-ಬದಲಾಗಿದೆ ಎನ್ನಲಾಗುತ್ತಿದೆ. ಇನ್ನು ‘ರಿಚರ್ಡ್ ಆಂಟೊನಿ’ ಸಿನಿಮಾ, ರಕ್ಷಿತ್ ಶೆಟ್ಟಿ ಅವರೇ ನಿರ್ದೇಶಿಸಿದ್ದ ‘ಉಳಿದವರು ಕಂಡಂತೆ’ ಸಿನಿಮಾದ ಪ್ರೀಕ್ವೆಲ್ ಆಗಿದೆ. ‘ಉಳಿದವರು ಕಂಡಂತೆ’ ಸಿನಿಮಾದ ರಿಚ್ಚಿ ಅಲಿಯಾಸ್ ರಿಚರ್ಡ್ ಆಂಟೊನಿ ಪಾತ್ರದ ಕತೆಯನ್ನು ‘ರಿಚರ್ಡ್ ಆಂಟೊನಿ’ ಸಿನಿಮಾ ಒಳಗೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಟಿವಿ9ನಿಂದ ಮಾಜಿ ಸಿಎಂ ಯಡಿಯೂರಪ್ಪನವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ – Kannada News | Former CM BS Yediyurappa Receives TV9 Lifetime Achievement Award 2026 at Nava Nakshatra Sanmana

ಬೆಂಗಳೂರು, ಫೆಬ್ರವರಿ 14: ಟಿವಿ9 ನವ ನಕ್ಷತ್ರ ಪ್ರಶಸ್ತಿ 2026 (Nava Nakshatra Award 2026) ಸಮಾರಂಭದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಜೀವಮಾನ ಶ್ರೇಷ್ಠ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ವೇಳೆ ತಮ್ಮ 55 ವರ್ಷಗಳ ಸಾರ್ವಜನಿಕ ಜೀವನವನ್ನು ಸ್ಮರಿಸಿದ ಯಡಿಯೂರಪ್ಪ, ಈ ಗೌರವವನ್ನು ಕರ್ನಾಟಕದ ಜನತೆಗೆ, ಅದರಲ್ಲೂ ವಿಶೇಷವಾಗಿ ರೈತರಿಗೆ ಸಮರ್ಪಿಸಿದರು. ಅಧಿಕಾರವಿರಲಿ, ಇಲ್ಲದಿರಲಿ, ರೈತರು ಮತ್ತು ಶೋಷಿತರ ಪರವಾಗಿ ದುಡಿಯುವ ತಮ್ಮ ಸಂಕಲ್ಪವನ್ನು ಅವರು ಪುನರುಚ್ಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿ.ಎಸ್. ಯಡಿಯೂರಪ್ಪ, ಟಿವಿ9 ತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು. ತಮ್ಮ 55 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಸಾಧನೆ ಮಾಡಿರುವುದಕ್ಕೆ ನಾಡಿನ ಜನರ ಹಾಗೂ ರೈತರ ಪ್ರೀತಿ, ಅಭಿಮಾನ ಮತ್ತು ಆಶೀರ್ವಾದವೇ ಕಾರಣ ಎಂದರು. ಜೀವನದ ಸಿಂಹಾವಲೋಕನ ಮಾಡಿಕೊಂಡಾಗ ತಮ್ಮ ಶ್ರಮ ಜೀವನದ ಬಗ್ಗೆ ತೃಪ್ತಿ ಮೂಡಿದೆ ಎಂದರು. ಆರ್‌ಎಸ್‌ಎಸ್ ಸ್ವಯಂಸೇವಕನಾಗಿ, ಜನಸಂಘ ಕಾರ್ಯಕರ್ತನಾಗಿ, ಪುರಸಭಾ ಸದಸ್ಯನಾಗಿ, ರಾಜ್ಯದ ಮುಖ್ಯಮಂತ್ರಿಯಾಗುವವರೆಗೆ ಜನಬೆಂಬಲವೇ ತಮ್ಮ ಶ್ರೀರಕ್ಷೆಯಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಪ್ರತಿ ವರ್ಷದಂತೆ ಈ ಬಾರಿಯೂ ಟಿವಿ9 ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 9 ಸಾಧಕರನ್ನು ಸನ್ಮಾನಿಸಿದೆ. ಟಿವಿ9 ನೆಟ್‌ವರ್ಕ್ ಎಂಡಿ ಮತ್ತು ಸಿಇಒ ಬರುಣ್ ದಾಸ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮವನ್ನು ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಮತ್ತು ಸಭಾಧ್ಯಕ್ಷ ಯು.ಟಿ. ಖಾದರ್ ಉದ್ಘಾಟಿಸಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs PAK Probable Playing XI: ಪಾಕ್ ವಿರುದ್ಧದ ಪಂದ್ಯಕ್ಕೆ ಭಾರತ ತಂಡದಲ್ಲಿ 3 ಬದಲಾವಣೆ ಖಚಿತ – Kannada News | IND vs PAK Probable Playing XI ICC Men T20 World Cup 2026 India vs Pakistan Today 27th T20 match predicted playing 11 details with name in Kannada

2026 ರ ಟಿ20 ವಿಶ್ವಕಪ್‌ನಲ್ಲಿ (T20 World Cup 2026) ಪಾಕಿಸ್ತಾನ ವಿರುದ್ಧದ ನಿರ್ಣಾಯಕ ಹಣಾಹಣಿಗೆ ಭಾರತ ತಂಡ (India vs Pakistan) ಸಿದ್ಧವಾಗಿದೆ. ಈ ಪಂದ್ಯ ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಈ ಮೈದಾನದ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವಾಗಲಿದೆ. ಹೀಗಾಗಿ ಟೀಂ ಇಂಡಿಯಾದ ಪ್ಲೇಯಿಂಗ್​ 11 ನಲ್ಲಿ ಬದಲಾವಣೆಯಾಗುವುದು ಖಚಿತ. ಇದಕ್ಕೆ ಪೂರಕವಾಗಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲೂ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಭಾರತ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಏನೆಲ್ಲ ಬದಲಾವಣೆಯಾಗಲಿದೆ? ಯಾರಿಗೆ ಆಡುವ ಅವಕಾಶ ಸಿಗುತ್ತದೆ ಮತ್ತು ಯಾರು ಈ ಪಂದ್ಯದಿಂದ ಹೊರಗುಳಿಯಬಹುದು ಎಂಬುದರ ಸುಳಿವು ನೀಡಿದ್ದಾರೆ.

ನಾಲ್ವರು ಸ್ಪಿನ್ನರ್​ಗಳಿಗೆ ಅವಕಾಶ

ಸೂರ್ಯಕುಮಾರ್ ಹೇಳಿರುವುದನ್ನು ಗಮನಿಸಿದರೆ, ಭಾರತ ತಂಡದಲ್ಲಿ ನಾಲ್ವರು ಸ್ಪಿನ್ನರ್‌ಗಳು ಆಡುವುದನ್ನು ಕಾಣಬಹುದು. ಇತ್ತ ಪಾಕಿಸ್ತಾನ ಕೂಡ ಕಳೆದೆರಡು ಪಂದ್ಯಗಳಲ್ಲಿ ನಾಲ್ವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಿತ್ತು. ಮೇಲೆ ಹೇಳಿದಂತೆ ಕೊಲಂಬೊ ಪಿಚ್ ಸ್ಪಿನ್ನರ್‌ಗಳಿಗೆ ನೆರವು ನೀಡುವುದರಿಂದ ಅದರ ಲಾಭ ಪಡೆಯಲು ಟೀಂ ಇಂಡಿಯಾ ನಾಲ್ವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಬಹುದು. ಇದರಲ್ಲಿ ಇಬ್ಬರು ಸ್ಪಿನ್ ಆಲ್‌ರೌಂಡರ್​ಗಳಿದ್ದರೆ, ಇನ್ನಿಬ್ಬರು ಪೂರ್ಣ ಪ್ರಮಾಣದ ಸ್ಪಿನ್ನರ್‌ಗಳು ಇರಲಿದ್ದಾರೆ. ಆ ಪ್ರಕಾರ ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್ ಹಾಗೂ ವರುಣ್ ಚಕ್ರವರ್ತಿ ಪಾಕ್ ವಿರುದ್ಧ ಆಡಬಹುದು.

ಅಭಿಷೇಕ್ ಶರ್ಮಾ ಆಗಮನ

ಬ್ಯಾಟಿಂಗ್‌ ವಿಭಾಗದ ವಿಚಾರಕ್ಕೆ ಬರುವುದಾದರೆ, ಅಭಿಷೇಕ್ ಶರ್ಮಾ ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ ಕಳೆದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ತಂಡದಲ್ಲಿ ಆಡುವ ಅವಕಾಶ ಪಡೆದಿದ್ದರು. ಆದರೀಗ ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ಅಭಿಷೇಕ್ ಗುಣಮುಖರಾಗಿದ್ದು, ಅವರು ತಂಡದಲ್ಲಿ ಆಡಲಿದ್ದಾರೆ. ನಾಯಕ ಸೂರ್ಯಕುಮಾರ್ ಕೂಡ ಪತ್ರಿಕಾಗೋಷ್ಠಿಯಲ್ಲಿ ಇದನ್ನು ಖಚಿತಪಡಿಸಿದ್ದಾರೆ. ಆ ಪ್ರಕಾರ, ಅಭಿಷೇಕ್ ಶರ್ಮಾ ಹಾಗೂ ಇಶಾನ್ ಕಿಶನ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ.

ರಿಂಕು, ಅರ್ಷದೀಪ್ ಔಟ್

ಮೂರನೇ ಕ್ರಮಾಂಕದಲ್ಲಿ ಎಂದಿನಂತೆ ತಿಲಕ್ ವರ್ಮಾ ಬ್ಯಾಟ್ ಬೀಸಿದರೆ, ನಾಯಕ ಸೂರ್ಯಕುಮಾರ್ ಯಾದವ್ 4ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ 5ನೇ ಕ್ರಮಾಂಕದಲ್ಲಿ ಬರಲಿದ್ದು, ಮತ್ತೊಬ್ಬ ಆಲ್‌ರೌಂಡರ್ ಶಿವಂ ದುಬೆ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಇನ್ನು ಕಳೆದೆರಡು ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುವಲ್ಲಿ ವಿಫಲರಾಗಿರುವ ರಿಂಕು ಸಿಂಗ್ ಈ ಪಂದ್ಯದಿಂದ ಹೊರಗುಳಿಯಬಹುದು. ಅವರ ಸ್ಥಾನದಲ್ಲಿ ವಾಷಿಂಗ್ಟನ್ ಸುಂದರ್ ಆಡಲಿದ್ದಾರೆ. ಹಾಗೆಯೇ ವೇಗಿ ಅರ್ಷದೀಪ್ ಸಿಂಗ್ ಬದಲಿಗೆ ಕುಲ್ದೀಪ್ ಯಾದವ್ ಆಡುವ ಸಾಧ್ಯತೆಗಳಿವೆ.

IND vs PAK: ಭಾರತ- ಪಾಕ್ ಕದನಕ್ಕೆ ಕೆಲವೇ ಗಂಟೆಗಳು ಬಾಕಿ; ಪಂದ್ಯವನ್ನು ಉಚಿತವಾಗಿ ವೀಕ್ಷಿಸುವುದು ಹೇಗೆ?

ಭಾರತದ ಸಂಭಾವ್ಯ ಪ್ಲೇಯಿಂಗ್ 11: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs PAK: ಭಾರತ- ಪಾಕ್ ಕದನಕ್ಕೆ ಕೆಲವೇ ಗಂಟೆಗಳು ಬಾಕಿ; ಪಂದ್ಯವನ್ನು ಉಚಿತವಾಗಿ ವೀಕ್ಷಿಸುವುದು ಹೇಗೆ? – Kannada News | India vs Pakistan T20 World Cup 2026: Live Stream, Date, Time, Venue and Squads

2026 ರ ಟಿ20 ವಿಶ್ವಕಪ್‌ನಲ್ಲಿ (T20 World Cup 2026) ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಪಂದ್ಯವನ್ನು ವೀಕ್ಷಿಸಲು ಕೋಟ್ಯಾಂತರ ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ . ಇಲ್ಲಿಯವರೆಗೆ, ಎರಡೂ ತಂಡಗಳು 2026 ರ ಟಿ20 ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿವೆ. ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡವು ಯುಎಸ್ಎ ಮತ್ತು ನಮೀಬಿಯಾ ವಿರುದ್ಧದ ಪಂದ್ಯಗಳನ್ನು ಸುಲಭವಾಗಿ ಗೆದ್ದಿದ್ದರೆ, ಇತ್ತ ಪಾಕಿಸ್ತಾನ ಕೂಡ ನೆದರ್ಲ್ಯಾಂಡ್ಸ್ ಮತ್ತು ಯುಎಸ್ಎ ತಂಡಗಳನ್ನು ಸೋಲಿಸಿದೆ. ಇದೀಗ ಉಭಯ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಹೈವೋಲ್ಟೇಜ್ ಕದನ ಯಾವಾಗ ಮತ್ತು ಯಾವ ಸಮಯದಲ್ಲಿ ಪ್ರಾರಂಭವಾಗುತ್ತದೆ, ಎಲ್ಲಿ ನೇರ ಪ್ರಸಾರವಾಗುತ್ತದೆ ಮತ್ತು ಯಾವ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಅದನ್ನು ನೇರಪ್ರಸಾರ ವೀಕ್ಷಿಸಬಹುದು ಎಂಬಿತ್ಯಾದಿ ವಿವರಗಳು ಇಲ್ಲಿವೆ.

ಮುಖಾಮುಖಿ ದಾಖಲೆ

ಟಿ20 ವಿಶ್ವಕಪ್ ಇತಿಹಾಸದಲ್ಲಿ ಉಭಯ ತಂಡಗಳು ಮುಖಾಮುಖಿಯಾಗುತ್ತಿರುವುದು ಇದು 9ನೇ ಬಾರಿ. ಇದರಲ್ಲಿ ಭಾರತ ತಂಡ 7 ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ಒಟ್ಟಾರೆ ಟಿ20 ಪಂದ್ಯಗಳಲ್ಲಿ ಭಾರತ 13 ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ3 ಪಂದ್ಯಗಳನ್ನು ಗೆದ್ದುಕೊಂಡಿದೆ. ಕಳೆದ 5 ಟಿ20 ಪಂದ್ಯಗಳಲ್ಲಿ ಭಾರತ, ಪಾಕಿಸ್ತಾನವನ್ನು ಏಕಪಕ್ಷೀಯವಾಗಿ ಸೋಲಿಸಿದೆ. 2022 ರಿಂದ ಪಾಕಿಸ್ತಾನ, ಭಾರತದ ವಿರುದ್ಧ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ. ಸೆಪ್ಟೆಂಬರ್ 27, 2025 ರಂದು ನಡೆದ ಏಷ್ಯಾಕಪ್ ಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತ, ಪಾಕಿಸ್ತಾನವನ್ನು ಸೋಲಿಸಿ ಚಾಂಪಿಯನ್‌ ಪಟ್ಟಕ್ಕೇರಿತ್ತು.

ಲೈವ್ ಸ್ಟ್ರೀಮಿಂಗ್ ವಿವರ

ಭಾರತ ಹಾಗೂ ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯ ಯಾವಾಗ ನಡೆಯಲಿದೆ?

ಭಾರತ ಹಾಗೂ ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯ ಫೆಬ್ರವರಿ 15 ರಂದು ನಡೆಯಲಿದೆ.

ಭಾರತ ಹಾಗೂ ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯ ಎಲ್ಲಿ ನಡೆಯಲಿದೆ?

ಭಾರತ ಹಾಗೂ ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯ ಕೊಲಂಬೊದ ಆರ್​. ಪ್ರೇಮದಾಸ ಮೈದಾನದಲ್ಲಿ ನಡೆಯಲಿದೆ.

ಭಾರತ ಹಾಗೂ ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯ ಎಷ್ಟು ಗಂಟೆಗೆ ಆರಂಭವಾಗಲಿದೆ?

ಭಾರತ ಹಾಗೂ ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯಸಂಜೆ 7 ಗಂಟೆಗೆ ಆರಂಭವಾಗಲಿದೆ.

ಭಾರತ ಹಾಗೂ ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?

ಟಿ20 ವಿಶ್ವಕಪ್‌ನ ಎಲ್ಲಾ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ಟಿವಿಯಲ್ಲಿ ಲಭ್ಯವಿರುತ್ತವೆ. ನೀವು ಜಿಯೋಹಾಟ್‌ಸ್ಟಾರ್ ಅಪ್ಲಿಕೇಶನ್ ಮೂಲಕ ಮೊಬೈಲ್/ಲ್ಯಾಪ್‌ಟಾಪ್ ಮತ್ತು ಟಿವಿಯಲ್ಲಿ ಲೈವ್ ಪಂದ್ಯಗಳನ್ನು ವೀಕ್ಷಿಸಬಹುದು.

IND vs PAK: ಪ್ರೇಮದಾಸ ಮೈದಾನದಲ್ಲಿ ಭಾರತ- ಪಾಕ್ ದಾಖಲೆ ಹೇಗಿದೆ?

ಉಭಯ ತಂಡಗಳು

ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.

ಪಾಕಿಸ್ತಾನ ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಬಾಬರ್ ಆಝಮ್, ಫಹೀಮ್ ಅಶ್ರಫ್, ಫಖರ್ ಜಮಾನ್, ಖವಾಜಾ ನಫಯ್, ಮೊಹಮ್ಮದ್ ನವಾಜ್, ಮೊಹಮ್ಮದ್ ಸಲ್ಮಾನ್ ಮಿರ್ಜಾ, ನಸೀಮ್ ಶಾ, ಸಾಹಿಬ್ಜಾದಾ ಫರ್ಹಾನ್, ಸೈಮ್ ಅಯೂಬ್, ಶಾಹೀನ್ ಶಾ ಅಫ್ರಿದಿ, ಶಾದಾಬ್ ಖಾನ್, ಉಸ್ಮಾನ್ ಖಾನ್, ಉಸ್ಮಾನ್ ತಾರಿಕ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮತ್ತೆ ಬಂತು ಬೆದರಿಕೆ: ರಣ್ವೀರ್ ಸಿಂಗ್-ದೀಪಿಕಾಗೆ ಭದ್ರತೆ ಹೆಚ್ಚಳ – Kannada News | Fresh threat to Ranveer Singh, security tightened

ಬಾಲಿವುಡ್ (Bollywood)​​ ಮೇಲೆ ಭೂಗತ ಜಗತ್ತಿನ ಕಣ್ಣು ಬಿದ್ದಿದೆ. ಕೆಲ ದಶಕಗಳ ಹಿಂದೆ ದಾವೂದ್, ಚೋಟಾ ಶಕೀಲ್ ಇನ್ನೂ ಕೆಲ ಪಾತಕಿಗಳ ಸಮಯದಲ್ಲಿ ಬಾಲಿವುಡ್​​ ಅಕ್ಷರಷಃ ನಡುಗಿತ್ತು. ಅದಾದ ಬಳಿಕ ಕಳೆದ ಒಂದೆರಡು ದಶಕದಿಂದ ಭೂಗತ ಜಗತ್ತಿನ ಉಪಟಳ ಇಲ್ಲದೆ ಆರಾಮವಾಗಿತ್ತು ಆದರೆ ಇದೀಗ ಮತ್ತೆ ಬಾಲಿವುಡ್ ಮೇಲೆ ಭೂಗತ ಜಗತ್ತಿನ ಕಣ್ಣು ಬಿದ್ದಿದೆ. ಸಲ್ಮಾನ್ ಖಾನ್, ಕಪಿಲ್ ಶರ್ಮಾ ಇನ್ನೂ ಹಲವಾರು ಸೆಲೆಬ್ರಿಟಿಗಳಿಗೆ ಈಗಾಗಲೇ ಬೆದರಿಕೆ ಹಾಕಲಾಗಿದೆ. ಇದೀಗ ರೋಹಿತ್ ಶೆಟ್ಟಿ ಮತ್ತು ರಣ್ವೀರ್ ಸಿಂಗ್ ಅವರಿಗೂ ಬೆದರಿಕೆ ಹಾಕಲಾಗಿದೆ.

ಕೆಲ ದಿನಗಳ ಹಿಂದಷ್ಟೆ ನಿರ್ದೇಶಕ, ನಿರ್ಮಾಪಕ ರೋಹಿತ್ ಶೆಟ್ಟಿ ಮನೆ ಮೇಲೆ ಗುಂಡಿನ ದಾಳಿ ಮಾಡಲಾಗಿದೆ. ಅದಾದ ಬಳಿಕ ನಟ ರಣ್ವೀರ್ ಸಿಂಗ್​​ಗೆ ಕೊಲೆ ಬೆದರಿಕೆ ಹಾಕಲಾಗಿತ್ತು. ಅದಾಗಿ ಕೆಲವೇ ದಿನಗಳ ಬಳಿಕ ಮತ್ತೆ ರಣ್ವೀರ್ ಸಿಂಗ್​​ಗೆ ವಾಟ್ಸ್ಪ್​ ಮೂಲಕ ಬೆದರಿಕೆ ಹಾಕಲಾಗಿದ್ದು, ‘ನಿಮ್ಮ ಮ್ಯಾನೇಜರ್, ನಿಮ್ಮ ಎಲ್ಲ ಸಿಬ್ಬಂದಿಯನ್ನೂ ಕೊಲ್ಲುತ್ತೇವೆ’ ಎಂದು ಮಾಫಿಯಾಕ್ಕೆ ಸೇರಿದ ದುರುಳರು ಎಚ್ಚರಿಕೆ ನೀಡಿದ್ದಾರೆ.

ವಾಯ್ಸ್ ಮೆಜೇಜ್​ ಮೂಲಕ ರೋಹಿತ್ ಶೆಟ್ಟಿಗೆ ಬಂದಿರುವ ಎಚ್ಚರಿಕೆಯಲ್ಲಿ ‘ಲೈನ್​​ ಗೆ ಬಂದುಬಿಡು, ಇಲ್ಲದೇ ಹೋದರೆ ಅದರ ಪರಿಣಾಮ ಹೇಗಿರುತ್ತದೆ ಎಂದು ನೀನು ನೋಡಬೇಕಾಗುತ್ತದೆ. ಮಾತಿನಂತೆ ನಡೆದುಕೊಳ್ಳದೇ ಹೋದರೆ ಶಿಕ್ಷೆ ಹೇಗಿರುತ್ತದೆ ಎಂದು ನಿನಗೆ ತೋರಿಸುತ್ತೇವೆ’ ಎಂದು ವಾಯ್ಸ್ ಮೆಸೇಜ್​​ನಲ್ಲಿ ಹೇಳಲಾಗಿದೆ. ಈ ಎಚ್ಚರಿಕೆ ನಿನಗೆ ಮಾತ್ರವಲ್ಲ, ಇಡೀ ಚಿತ್ರರಂಗಕ್ಕೆ ಎಂದು ಸಹ ವಾಯ್ಸ್ ಮೆಸೇಜ್​​ನಲ್ಲಿದೆ. ಇನ್ನು ರಣ್ವೀರ್ ಸಿಂಗ್​​ಗೂ ಸಹ ಹೊಸದಾಗಿ ಎಚ್ಚರಿಕೆ ಬಂದಿದ್ದು ಕೊಲೆ ಮಾಡುವ ಎಚ್ಚರಿಕೆಯನ್ನು ನೀಡಲಾಗಿದೆ.

ಇದನ್ನೂ ಓದಿ:‘ಧುರಂಧರ್’ ಬಳಿಕ ಹಾರರ್ ಸಿನಿಮಾಕ್ಕೆ ಕೈ ಹಾಕಿದ ರಣ್ವೀರ್ ಸಿಂಗ್

ಬೆದರಿಕೆ ಬಂದ ಬೆನ್ನಲ್ಲೆ ರಣ್ವೀರ್ ಸಿಂಗ್ ಮನೆಗೆ ಭದ್ರತೆ ಹೆಚ್ಚಿಸಲಾಗಿದೆ ಮಾತ್ರವಲ್ಲದೆ, ಅವರ ಪತ್ನಿ ದೀಪಿಕಾ ಪಡುಕೋಣೆಗೂ ಸಹ ಭದ್ರತೆಯನ್ನು ಹೆಚ್ಚು ಮಾಡಲಾಗಿದೆ. ರಣ್ವೀರ್ ಸಿಂಗ್​​ ಅವರ ಮ್ಯಾನೇಜರ್​​ಗೆ ಬಂದಿರುವ ವಾಯ್ಸ್ ಮೆಸೇಜ್​​ನಲ್ಲಿ ಒಂದು ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಡಲಾಗಿದೆ. ಹಣ ನೀಡದೇ ಹೋದರೆ ರಣ್ವೀರ್ ಸಿಂಗ್ ಅವರಿಗೆ ‘ಬುದ್ಧಿ’ ಕಲಿಸುವುದಾಗಿ ಹೇಳಲಾಗಿದೆ. ರಣ್ವೀರ್ ಸಿಂಗ್ ಅವರಿಗೆ ಸಂಬಂಧಪಟ್ಟವರನ್ನು ಕೊಲೆ ಮಾಡುವುದಾಗಿ ಸಹ ಹೇಳಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಟಿವಿ9 ನವನಕ್ಷತ್ರ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ ಭಾವುಕ ಮಾತು

ಟಿವಿ9 ನವ ನಕ್ಷತ್ರ ಅವಾರ್ಡ್ 2026 ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚೆಗಷ್ಟೆ ನಡೆಯಿತು. ಹಲವು ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕರು, ಗಣ್ಯರನ್ನು ಗುರುತಿಸಿ ಟಿವಿ9 ನವ ನಕ್ಷತ್ರ ಪ್ರಶಸ್ತಿ ನೀಡಿ ಸನ್ಮಾನ ಮಾಡಿತು. ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೂಲಕ ದೇಶದಾದ್ಯಂತ ಕನ್ನಡ ಸಿನಿಮಾದ ಶಕ್ತಿಯನ್ನು ಸಾರಿದ ರಿಷಬ್ ಶೆಟ್ಟಿ ಅವರಿಗೆ ಸಹ ಟಿವಿ9 ನವನಕ್ಷತ್ರ ಪ್ರಶಸ್ತಿ ನೀಡಿ ಸನ್ಮಾನಿಸಲಾಯ್ತು. ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ ಅವರು ಸಿನಿಮಾದ ಬಗ್ಗೆ, ಟಿವಿ9 ಜೊತೆಗಿನ ಒಡನಾಟದ ಬಗ್ಗೆ ಇನ್ನೂ ಹಲವು ವಿಚಾರಗಳ ಬಗ್ಗೆ ಮಾತನಾಡಿದರು. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಬಜೆಟ್​ ಮಂಡನೆಗೆ ಸಿಎಂ ಸಜ್ಜು: ಪಟ್ಟದ ಪಟ್ಟು ಮತ್ತಷ್ಟು ಗಟ್ಟಿಗೊಳಿಸಿದ ಡಿಕೆಶಿ; ದೂರ ಉಳಿದ ಮಲ್ಲಿಕಾರ್ಜುನ ಖರ್ಗೆ – Kannada News | Karnataka Congress CM Tussle: Siddaramaiah, DK Shivakumar Power Play Intensifies

ಡಿಕೆ ಶಿವಕುಮಾರ್​, ಮಲ್ಲಿಕಾರ್ಜನ್​ ಖರ್ಗೆ, ಸಿದ್ದರಾಮಯ್ಯ

ಬೆಂಗಳೂರು, ಫೆಬ್ರವರಿ 14: ಪ್ರಸ್ತುತ ರಾಜಕೀಯ ವಿದ್ಯಮಾನ ನೋಡುತ್ತಿದ್ದರೆ ಕಾಂಗ್ರೆಸ್​ನಲ್ಲಿ (Congress) ಪಟ್ಟದಪಗಡೆಯಾಟ ರೋಚಕಘಟ್ಟಕ್ಕೆ ತಲುಪಿದಂತೆ ಕಾಣಿಸುತ್ತಿದೆ. ಸಿಎಂ ಸಿದ್ರಾಮಯ್ಯ (Siddaramaiah) 17ನೇ ಬಾರಿ ಬಜೆಟ್​ಗೆ ಸಿದ್ಧತೆ ಮಾಡುವ ಮೂಲಕ ಮತ್ತೊಂದು ದಾಖಲೆ ಸೃಷ್ಟಿಸಲು ಸಜ್ಜಾಗಿದ್ದರೆ, ಡಿಸಿಎಂ ಡಿಕೆ ಶಿವಕುಮಾರ್​ ತಮ್ಮದೇ ಆದ ರೀತಿಯಲ್ಲಿ ತಂತ್ರಗಾರಿಕೆ ನಡೆಸ್ತಿದ್ದಾರೆ. ಮೊನ್ನೆ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಿ ಏನು ಹೇಳ್ಬೇಕೋ ಎಲ್ಲಾ ಹೇಳಿದ್ದೀನಿ ಅನ್ನೋ ಮೂಲಕ ಪಿಕ್ಚರ್ ಅಭಿ ಬಾಕಿ ಹೈ ಅನ್ನೋ ಮೆಸೇಜ್ ಕೊಟ್ಟಿದ್ದಾರೆ.

‘ನನಗೆ ಅಜ್ಜಯ್ಯನ ಆಶೀರ್ವಾದ ಇದೆ’ ಎಂದು ಡಿಕೆ ಶಿವಕುಮಾರ್​​ ಟ್ವೀಟ್

ಕಾಂಗ್ರೆಸ್​​ನಲ್ಲಿ ಡಿಕೆ ಶಿವಕುಮಾರ್​​ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತೆ ಅಂತಾ ನಂಬಿಕೆ ಇಟ್ಕೊಂಡಿರೋ ರಾಜಕಾರಣಿ. ಈ ನಡುವೆ ಮತ್ತೊಂದು ಸಂದೇಶ ಕೊಟ್ಟಿರುವ ಡಿಕೆ ಶಿವಕುಮಾರ್​​ ಬೇಡುವಾಗ ಭಿಕ್ಷುಕನಾಗು, ಕೊಡುವಾಗ ದಾನಿಯಾಗೋ ಅನ್ನೋ ಮೂಲಕ ಮಾರ್ಮಿಕವಾಗಿ ನುಡಿದಿದ್ದಾರೆ.

ಹೈಕಮಾಂಡ್​ ಹೇಳಿದ್ದೇ ಫೈನಲ್: ಸಿಎಂ 

ಶ್ರಮಕ್ಕೆ ತಕ್ಕ ಫಲ ಸಿಗುತ್ತೆ ಅನ್ನೋ ಡಿಕೆ ಶಿವಕುಮಾರ್​ ಟ್ವೀಟ್​ಗೆ ರಿಯಾಕ್ಟ್​ ಮಾಡಿದ ಸಿಎಂ ಸಿದ್ದರಾಮಯ್ಯ, ಹೈಕಮಾಂಡ್​​ನವರು ಏನಾದ್ರೂ ಟ್ವೀಟ್ ಮಾಡಿದ್ದಾರಾ? ಇಲ್ವಲ್ಲಾ? ಅಂದಿದ್ದಾರೆ. ಕುರ್ಚಿ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ಹೈಕಮಾಂಡ್​ ಹೇಳಿದ್ದೇ ಫೈನಲ್ ಎಂದಿದ್ದಾರೆ.

ಇದನ್ನೂ ಓದಿ: ಕೇಂದ್ರ ಸರ್ಕಾರ ನೀಡಿದ 1,323 ಕೋಟಿ 96 ಲಕ್ಷ ರೂ. ಹಣವನ್ನು ಕಾಂಗ್ರೆಸ್​​​ ಸರ್ಕಾರ ದುರ್ಬಳಕೆ ಮಾಡಿದೆ: ಬಿ.ವೈ. ವಿಜಯೇಂದ್ರ ಆರೋಪ

ನಿನ್ನೆಯಷ್ಟೇ ಬೆಂಗಳೂರಲ್ಲಿ ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನದಲ್ಲಿ ಸಿಎಂ, ಡಿಸಿಎಂ ಅಕ್ಕ, ಪಕ್ಕದಲ್ಲಿ ಕುಳಿತಿದ್ರೂ, ಮಾತಿರಲಿಲ್ಲ, ಕಥೆ ಇರಲಿಲ್ಲ. ಇವತ್ತು ಹಾವೇರಿ ಸಮಾವೇಶದಲ್ಲಿ ಸಿಎಂ ಭಾಷಣ ಆರಂಭಿಸ್ತಿದ್ದಂತೆಯೇ ಡಿಕೆ ಶಿವಕುಮಾರ್​ ನಿರ್ಗಮಿಸಿರೋದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದೇ ಹೊತ್ತಿನಲ್ಲೇ ಮುಂದಿನ ಸಿಎಂ ಘೋಷಣೆಗಳು ಮಾತ್ರ ನಿಲ್ಲಲ್ಲ. ಹಾವೇರಿಯಲ್ಲಿ ಕಾಂಗ್ರೆಸ್​ ಸಮಾವೇಶದಲ್ಲಿ ಸಿಎಂ ಬೆಂಬಲಿಗರು 5 ವರ್ಷ ಸಿದ್ದರಾಮಯ್ಯ ಸಿಎಂ ಅಂತಾ ಘೋಷಣೆ ಕೂಗಿದರೆ, ಮತ್ತೊಂದ್ಕಡೆ ಸಮಾವೇಶಕ್ಕೆ ಡಿಕೆ ಶಿವಕುಮಾರ್​ ಆಗಮಿಸ್ತಿದ್ದಂತೆಯೇ ಡಿಕೆ ಡಿಕೆ ಎಂದು ಫ್ಯಾನ್ಸ್ ಘೋಷಣೆ ಕೂಗಿದರು.

ಕುರ್ಚಿ ಕಿತ್ತಾಟ: ದೂರ ಉಳಿದ ಮಲ್ಲಿಕಾರ್ಜುನ ಖರ್ಗೆ

ಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿನಲ್ಲಿ ಇದ್ರೂ ಕೂಡ, ಸಮಾವೇಶದಿಂದ ದೂರ ಉಳಿದಿದ್ದಾರೆ. ಹಾವೇರಿ ಸಮಾವೇಶದಲ್ಲಿ ಭಾಗಿಯಾಗದೇ ಇರೋದು ಚರ್ಚೆಗೆ ಗ್ರಾಸವಾಗಿದೆ. ಇಷ್ಟೇ ಅಲ್ಲ ಹೈಕಮಾಂಡ್ ಯಾಕೆ ಮೌನವಹಿಸಿದೆ ಅನ್ನೋದು ಯಕ್ಷ ಪ್ರಶ್ನೆ ಆಗಿದೆ. ಮೊನ್ನೆಯಷ್ಟೇ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮುಂದೆ ಡಿಕೆ ಶಿವಕುಮಾರ್​ ಚರ್ಚೆ ಮಾಡಿದ ಮಾಹಿತಿಯಿಂದ, ಫೆಬ್ರವರಿ 17ರ ನಂತರ ಗೇಮ್ ಪ್ಲ್ಯಾನ್ ಚೇಂಜ್ ಆಗುತ್ತಾ, ಫೆಬ್ರವರಿ 17ರ ಬಳಿ ಇಬ್ಬರಿಗೂ ಹೈಕಮಾಂಡ್ ಬುಲಾವ್ ಬರುತ್ತಾ ಅನ್ನೋ ಪ್ರಶ್ನೆಗಳು ಶುರುವಾಗಿವೆ.

ಇದನ್ನೂ ಓದಿ: ಹಾವೇರಿಯಲ್ಲಿ ಕಾಂಗ್ರೆಸ್ ಸರ್ಕಾರದಿಂದ ಭ್ರಷ್ಟಾಚಾರದ ಸಾಧನೆಯ ಸಮಾವೇಶ; ಬಸವರಾಜ ಬೊಮ್ಮಾಯಿ ವ್ಯಂಗ್ಯ

ಇದನ್ನೇ ಅಸ್ತ್ರ ಮಾಡ್ಕೊಂಡ ಬಿಜೆಪಿ ನಾಯಕರು, ಹೈಕಮಾಂಡ್ ಗೊಂಬೆಯಾಟ ಆಡ್ತಿದೆ ಅಂತಾ ಕಿಡಿಕಾರಿದ್ದಾರೆ.  ‘ಕೈ’ ಮನೆಯಲ್ಲಿನ ಬೆಳವಣಿಗೆ ನೋಡ್ತಿದ್ರೆ ಫೆ.17 ರ ನಂತರ ಕ್ಲೈಮ್ಯಾಕ್ಸ್ ಬಿರುಗಾಳಿ ಬೀಸುತ್ತಾ ಅನ್ನೋ ಕುತೂಹಲ ಎಲ್ಲರಿಗೂ ಕಾಡ್ತಿದೆ.

ವರದಿ: ಬ್ಯೂರೋ ರಿಪೋರ್ಟ್​ ಟಿವಿ9

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಗಂಗಾ ನದಿಯ ಥೀಮ್​ನಲ್ಲಿ ಮಹಾಶಿವರಾತ್ರಿಗೆ ಸಜ್ಜಾಗಿದೆ ಇಶಾ ಫೌಂಡೇಷನ್ – Kannada News | Mahashivratri celebrations at Isha Foundations Isha Yoga Centre is themed around sacred river Ganga watch video

ಬೆಂಗಳೂರು, ಫೆಬ್ರವರಿ 14: ತಮಿಳುನಾಡಿನ ಇಶಾ ಫೌಂಡೇಷನ್​ನಲ್ಲಿ ಸದ್ಗುರು ಜಗ್ಗಿ ವಾಸುದೇವ್ ನೇತೃತ್ವದಲ್ಲಿ ಫೆ. 15ರಂದು 32ನೇ ಮಹಾಶಿವರಾತ್ರಿ (Mahashivaratri 2026) ಆಚರಿಸಲಾಗುತ್ತಿದೆ. ಈ ಬಾರಿ ಪವಿತ್ರ ನದಿಯಾದ ಗಂಗೆಯ ಥೀಮ್​ನಲ್ಲಿ ಶಿವರಾತ್ರಿ ಉತ್ಸವಕ್ಕೆ ಸಕಲ ಸಿದ್ಧತೆಗಳಾಗಿವೆ. ಶಿವರಾತ್ರಿ ಉತ್ಸವವನ್ನು ನಾಳೆ ಇಶಾ ಯೋಗ ಕೇಂದ್ರದಲ್ಲಿ ಅದ್ಧೂರಿಯಾಗಿ ಆಚರಿಸಲಾಗುವುದು. ಇಂದು ರಾತ್ರಿ ಸಂಗೀತ ಕಾರ್ಯಕ್ರಮಗಳು ಇರಲಿವೆ. ನಾಳೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಅನೇಕ ಪ್ರಮುಖ ವ್ಯಕ್ತಿಗಳು ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಸಂಸದೀಯ ವ್ಯವಹಾರಗಳ ಸಚಿವ ಎಲ್. ಮುರುಗನ್ ಮತ್ತು ಇತರ ಗಣ್ಯರು ಕೂಡ ಪಾಲ್ಗೊಳ್ಳಲಿದ್ದಾರೆ. ಮಹಾ ಶಿವರಾತ್ರಿ ಉತ್ಸವವು ಫೆ. 15ರಂದು ಸಂಜೆ 6 ಗಂಟೆಯಿಂದ ಮರುದಿನ ಬೆಳಿಗ್ಗೆ 6 ಗಂಟೆಯವರೆಗೆ ನಡೆಯಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎತ್ತಿನ ಬಂಡಿಯಲ್ಲಿ ದುನಿಯಾ ವಿಜಯ್ ಪುತ್ರಿಯ ಮೆರವಣಿಗೆ: ವಿಡಿಯೋ – Kannada News | Duniya Vijay daughter Rithanya receive love in Anekal watch video

ದುನಿಯಾ ವಿಜಯ್ (Duniya Vijay) ನಟನೆಯ ‘ಲ್ಯಾಂಡ್​​ಲಾರ್ಡ್’ ಸಿನಿಮಾ ಕೆಲ ವಾರಗಳ ಹಿಂದಷ್ಟೆ ಬಿಡುಗಡೆ ಆಗಿತ್ತು. ಜಡೇಶ್ ನಿರ್ದೇಶನ ಮಾಡಿದ್ದ ಈ ಸಿನಿಮಾನಲ್ಲಿ ದುನಿಯಾ ವಿಜಯ್ ಪುತ್ರಿ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಜಮೀನ್ದಾರಿ ಪದ್ಧತಿ, ಜಾತಿ ಪದ್ಧತಿಯ ವಿರುದ್ಧ ಕತೆ ಹೊಂದಿದ್ದ ‘ಲ್ಯಾಂಡ್​ಲಾರ್ಡ್’ ಸಿನಿಮಾ ಬಗ್ಗೆ ಬಹಳ ಮೆಚ್ಚುಗೆಗಳು ವ್ಯಕ್ತವಾಗಿದ್ದವು. ಸ್ವತಃ ಸಿಎಂ ಸಿದ್ದರಾಮಯ್ಯ ಅವರು ‘ಲ್ಯಾಂಡ್​​ಲಾರ್ಡ್’ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಸಿನಿಮಾ ಆನೆಕಲ್​​ನಲ್ಲಿ ಒಳ್ಳೆಯ ಪ್ರದರ್ಶನ ಕಂಡಿದ್ದು, ಆನೆಕಲ್​​ನ ಅಭಿಮಾನಿಗಳು ದುನಿಯಾ ವಿಜಯ್ ಅವರ ಪುತ್ರಿಯನ್ನು ಎತ್ತಿನ ಬಂಡಿಯ ಮೇಲೆ ಮೆರವಣಿಗೆ ಮಾಡಿಸಿದ್ದಾರೆ, ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಆಫ್ರಿಕಾ ವಿರುದ್ಧ ದಿಟ್ಟ ಪ್ರದರ್ಶನ ನೀಡಿದ ಗುರ್ಬಾಝ್​ಗೆ ಸ್ಮರಣೀಯ ಉಡುಗೊರೆ ನೀಡಿದ ಕೊಹ್ಲಿ – Kannada News | Virat Kohli Gifts Bats to Gurbaz: Inspiring Young Talent After T20 World Cup Heroics

ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ವಿಶ್ವ ಕ್ರಿಕೆಟ್​ನ ಕಿಂಗ್ ವಿರಾಟ್ ಕೊಹ್ಲಿ (Virat Kohli) ಪ್ರಸ್ತುತ ಕ್ರಿಕೆಟ್​ನಿಂದ ದೂರ ಉಳಿದಿರಬಹುದು. ಆದರೆ ಯುವ ಆಟಗಾರರನ್ನು ಸದಾ ಬೆನ್ತಟ್ಟುವ ಕೆಲಸವನ್ನು ಕೊಹ್ಲಿ ಎಂದಿಗೂ ಮರೆತಿಲ್ಲ. ಇದೀಗ ನಡೆಯುತ್ತಿರುವ ಟಿ20 ವಿಶ್ವಕಪ್​ನಲ್ಲೂ (T20 World Cup) ದಕ್ಷಿಣ ಆಫ್ರಿಕಾದಂತಹ ಬಲಿಷ್ಠ ತಂಡದ ವಿರುದ್ಧ ಕೆಚ್ಚೆದೆಯ ಪ್ರದರ್ಶನ ನೀಡಿದ ಅಫ್ಘಾನಿಸ್ತಾನದ ರಹಮಾನಲ್ಲಾ ಗುರ್ಬಾಜ್​ಗೆ (Rahmanullah Gurbaz) ವಿರಾಟ್ ಕೊಹ್ಲಿ ಸ್ಮರಣೀಯ ಉಡುಗೊರೆ ನೀಡಿ ಅವರ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ. ವಾಸ್ತವವಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ರಹಮಾನಲ್ಲಾ ಗುರ್ಬಾಜ್‌, ಅಫ್ಘನ್ ತಂಡದ ಗೆಲುವಿಗೆ ಏಕಾಂಗಿ ಹೋರಾಟ ನಡೆಸಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ವಿಫಲರಾಗಿದ್ದರು. ಆದರೆ ಅವರ ಆಟಕ್ಕೆ ಮನಸೋತಿರುವ ಕೊಹ್ಲಿ, ಎರಡು ಬ್ಯಾಟ್​ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಬ್ಯಾಟ್ ಉಡುಗೊರೆ ನೀಡಿದ ಕೊಹ್ಲಿ

ವಿರಾಟ್ ಕೊಹ್ಲಿ ಬ್ಯಾಟ್​ಗಳನ್ನು ಉಡುಗೊರೆಯಾಗಿ ನೀಡಿರುವ ಮಾಹಿತಿಯನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವ ರಹಮಾನಲ್ಲಾ ಗುರ್ಬಾಜ್‌, ‘ಅತ್ಯಂತ ಅದ್ಭುತ ಉಡುಗೊರೆ ನೀಡಿದ ವಿರಾಟ್ ಕೊಹ್ಲಿ ಅವರಿಗೆ ಧನ್ಯವಾದಗಳು. ನೀವು ಕೇವಲ ದಂತಕಥೆಯಲ್ಲ, ನೀವು ಎಲ್ಲಾ ಪೀಳಿಗೆಗೂ ಸ್ಫೂರ್ತಿ’ ಎಂದು ಬರೆದುಕೊಂಡಿದ್ದಾರೆ.

ವಾಸ್ತವವಾಗಿ ವಿರಾಟ್ ಕೊಹ್ಲಿ ಯುವ ಪ್ರತಿಭಾವಂತ ಆಟಗಾರರಿಗೆ ಈ ರೀತಿಯಾಗಿ ಬ್ಯಾಟ್​ಗಳನ್ನು ಉಡುಗೊರೆಯಾಗಿ ನೀಡಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ಅವರು ಆರ್‌ಸಿಬಿ ನಾಯಕ ರಜತ್ ಪಾಟಿದಾರ್‌ನಿಂದ ಹಿಡಿದು ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಮತ್ತು ಭಾರತದ ರಿಂಕು ಸಿಂಗ್‌ ಸೇರಿದಂತೆ ವಿಶ್ವದಾದ್ಯಂತದ ಆಟಗಾರರಿಗೆ ಬ್ಯಾಟ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ನನ್ನ ಪ್ರಕಾರ.. ರೋಹಿತ್, ಕೊಹ್ಲಿ ಏಕದಿನ ವಿಶ್ವಕಪ್ ಆಡುವ ಬಗ್ಗೆ ಮೌನ ಮುರಿದ ಧೋನಿ

ಆಫ್ರಿಕಾ ವಿರುದ್ಧ ಅಬ್ಬರಿಸಿದ್ದ ಗುರ್ಬಾಜ್

ಅಹಮದಾಬಾದ್‌ನಲ್ಲಿ ಫೆಬ್ರವರಿ 11 ರಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ರಹಮಾನಲ್ಲಾ ಗುರ್ಬಾಜ್‌ ಕೇವಲ 42 ಎಸೆತಗಳಲ್ಲಿ 84 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ದಕ್ಷಿಣ ಆಫ್ರಿಕಾ ನೀಡಿದ 187 ರನ್​ಗಳ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನದ ಪರ ಆರಂಭಿಕನಾಗಿ ಕಣಕ್ಕಿಳಿದಿದ್ದ ಗುರ್ಬಾಜ್ ತಮ್ಮ ಇನ್ನಿಂಗ್ಸ್​ನಲ್ಲಿ 4 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್‌ಗಳನ್ನು ಬಾರಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದರು. ಆದರೆ ಎರಡೆರಡು ಸೂಪರ್ ಓವರ್​ಗಳ ಬಳಿಕ ವಿಜೇತರನ್ನು ಪಡೆದ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆಲುವು ಸಾಧಿಸಿತ್ತು. ಆದಾಗ್ಯೂ ಎರಡನೇ ಸೂಪರ್ ಓಬರ್​ನಲ್ಲಿ ದಕ್ಷಿಣ ಆಫ್ರಿಕಾ ನೀಡಿದ 23 ರನ್​ಗಳ ಗುರಿ ಬೆನ್ನಟ್ಟಿದ ಅಫ್ಘನ್ ಪರ ಗುರ್ಬಾಜ್ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿ ತಂಡದ ಗೆಲುವಿಗಾಗಿ ಹೋರಾಡಿದರು. ಆದರೆ ಕೊನೆಯ ಎಸೆತದಲ್ಲಿ ಕ್ಯಾಚ್ ನೀಡುವ ಮೂಲಕ ವಿಕೆಟ್ ಒಪ್ಪಿಸುವುದರೊಂದಿಗೆ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡುವಲ್ಲಿ ವಿಫಲರಾಗಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:00 pm, Sat, 14 February 26

Source link

Exit mobile version