Gold Rates 11 Aug: ಚಿನ್ನದ ಬೆಲೆ 290 ರೂ, ಬೆಳ್ಳಿ ಬೆಲೆ 10 ರೂ ಏರಿಕೆ – Kannada News | Gold Price Today on 11th August 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಆಗಸ್ಟ್ 11: ನಿನ್ನೆ ತುಸು ಇಳಿಕೆಯಾಗಿದ್ದ ಚಿನ್ನದ ಬೆಲೆ (Gold Price) ಮತ್ತೆ ಏರಿಕೆಯ ಹಾದಿಗೆ ಮರಳಿದೆ. ಇಂದು ಮಂಗಳವಾರ ಒಂದೇ ದಿನ ಒಂದು ಗ್ರಾಮ್​ಗೆ 290 ರೂಗಳಷ್ಟು ಏರಿದೆ. ಕಳೆದ ವಾರ 765 ರೂ ಏರಿದ್ದ ಬಂಗಾರದ ದರ ಈ ವಾರವೂ ಅದೇ ಟ್ರೆಂಡ್ ಮುಂದುವರಿಸುವಂತೆ ತೋರುತ್ತಿದೆ. ಬೆಳ್ಳಿ ಬೆಲೆಯೂ ಇವತ್ತು ಭರ್ಜರಿ ಏರಿಕೆ ಕಂಡಿದೆ. ಒಂದು ಗ್ರಾಮ್​ಗೆ 10 ರೂ ಹೆಚ್ಚಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,42,200 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,55,130 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,42,200 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 25,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 26,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಆಗಸ್ಟ್ 11ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,513 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,220 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,635 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 255 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,513 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,220 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 255 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,220 ರೂ
  • ಚೆನ್ನೈ: 14,220 ರೂ
  • ಮುಂಬೈ: 14,220 ರೂ
  • ದೆಹಲಿ: 14,235 ರೂ
  • ಕೋಲ್ಕತಾ: 14,220 ರೂ
  • ಕೇರಳ: 14,220 ರೂ
  • ಅಹ್ಮದಾಬಾದ್: 14,225 ರೂ
  • ಜೈಪುರ್: 14,235 ರೂ
  • ಲಕ್ನೋ: 14,235 ರೂ
  • ಭುವನೇಶ್ವರ್: 14,220 ರೂ

ಇದನ್ನೂ ಓದಿ: ‘ಈ ದಿನ ಬರುತ್ತೆಂದು ಭಾವಿಸಿರಲಿಲ್ಲ’- ಸೌರಶಕ್ತಿ ಕ್ಷೇತ್ರದಲ್ಲಿ ಭಾರತದ ಹವಾ ಕಂಡು ಬೆಚ್ಚಿಬಿದ್ದ ಚೀನೀಯರು

ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಭಾರತ: 15,513 ರುಪಾಯಿ
  • ಮಲೇಷ್ಯಾ: 583 ರಿಂಗಿಟ್ (13,588 ರುಪಾಯಿ)
  • ದುಬೈ: 523.25 ಡಿರಾಮ್ (13,591 ರುಪಾಯಿ)
  • ಅಮೆರಿಕ: 142.50 ಡಾಲರ್ (13,595 ರುಪಾಯಿ)
  • ಸಿಂಗಾಪುರ: 188.90 ಸಿಂಗಾಪುರ್ ಡಾಲರ್ (14,078 ರುಪಾಯಿ)
  • ಕತಾರ್: 524 ಕತಾರಿ ರಿಯಾಲ್ (13,715 ರೂ)
  • ಸೌದಿ ಅರೇಬಿಯಾ: 540 ಸೌದಿ ರಿಯಾಲ್ (13,720 ರುಪಾಯಿ)
  • ಓಮನ್: 55.55 ಒಮಾನಿ ರಿಯಾಲ್ (13,765 ರುಪಾಯಿ)
  • ಕುವೇತ್: 43.57 ಕುವೇತಿ ದಿನಾರ್ (13,535 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 255 ರೂ
  • ಚೆನ್ನೈ: 265 ರೂ
  • ಮುಂಬೈ: 255 ರೂ
  • ದೆಹಲಿ: 255 ರೂ
  • ಕೋಲ್ಕತಾ: 255 ರೂ
  • ಕೇರಳ: 265 ರೂ
  • ಅಹ್ಮದಾಬಾದ್: 255 ರೂ
  • ಜೈಪುರ್: 255 ರೂ
  • ಲಕ್ನೋ: 255 ರೂ
  • ಭುವನೇಶ್ವರ್: 265 ರೂ
  • ಪುಣೆ: 255

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ವಿಶ್ವಕಪ್​ನ​ ನೇರ ಆಯ್ಕೆಯಿಂದ ಔಟ್: ವಿಂಡೀಸ್ ಮುಂದಿದೆ 2 ಹಾದಿಗಳು! – Kannada News | West Indies to Play 2027 ODI World Cup Qualifiers

ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾ ಜಂಟಿ ಆತಿಥ್ಯದಲ್ಲಿ ನಡೆಯಲಿರುವ 2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಟೂರ್ನಿಗೆ ನೇರವಾಗಿ ಅರ್ಹತೆ ಪಡೆಯುವಲ್ಲಿ ವೆಸ್ಟ್ ಇಂಡೀಸ್​ ತಂಡ ಮತ್ತೊಮ್ಮೆ ವಿಫಲವಾಗಿದೆ. ಇತ್ತೀಚೆಗೆ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ್ ತಂಡವು ಐರ್ಲೆಂಡ್ ವಿರುದ್ಧ ಜಯಭೇರಿ ಬಾರಿಸುತ್ತಿದ್ದಂತೆ, ವೆಸ್ಟ್ ಇಂಡೀಸ್ ತಂಡದ ನೇರ ಅರ್ಹತೆಯ ಎಲ್ಲ ಅವಕಾಶಗಳೂ ಅಧಿಕೃತವಾಗಿ ಮುಚ್ಚಿಹೋಗಿವೆ. ಇದರೊಂದಿಗೆ ಕೆರಿಬಿಯನ್ ಪಡೆ ಸತತ ಮೂರನೇ ಬಾರಿಗೆ ವಿಶ್ವಕಪ್‌ಗಾಗಿ ಅರ್ಹತಾ ಸುತ್ತಿನ ಕಠಿಣ ಹಾದಿ ಹಿಡಿಯುವುದು ಅನಿವಾರ್ಯವಾಗಿದೆ.

ವೆಸ್ಟ್ ಇಂಡೀಸ್ ಔಟ್!

ಐಸಿಸಿ ನಿಯಮಾವಳಿಗಳ ಪ್ರಕಾರ, ಸೆಪ್ಟೆಂಬರ್ 30, 2026ರ ಕಟ್-ಆಫ್ ಅವಧಿಯೊಳಗೆ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಅಗ್ರ 8ರ ಒಳಗಿರುವ ತಂಡಗಳು ಮಾತ್ರ ನೇರ ಅರ್ಹತೆ ಪಡೆಯುತ್ತವೆ. ಸದ್ಯ 10ನೇ ಸ್ಥಾನದಲ್ಲಿರುವ ವೆಸ್ಟ್ ಇಂಡೀಸ್, ಬರುವ ಸೆಪ್ಟೆಂಬರ್‌ನಲ್ಲಿ ಭಾರತದ ವಿರುದ್ಧ ನಡೆಯಲಿರುವ ಮುಂದಿನ ಎರಡೂ ಏಕದಿನ ಪಂದ್ಯಗಳನ್ನು ಗೆದ್ದರೂ ಸಹ ಅಗ್ರ 8ರೊಳಗೆ ಬರಲು ಅಗತ್ಯವಿರುವ ರೇಟಿಂಗ್ ಪಾಯಿಂಟ್‌ಗಳನ್ನು ಗಳಿಸಲು ಸಾಧ್ಯವಿಲ್ಲ. ಹೀಗಾಗಿ, ಅವರು ಅಧಿಕೃತವಾಗಿ ರೇಸ್‌ನಿಂದ ಹೊರಬಿದ್ದಿದ್ದಾರೆ.

ಬದಲಾದ ನಿಯಮ, ಕಠಿಣ ಸವಾಲು:

2027ರ ವಿಶ್ವಕಪ್ ಒಟ್ಟು 14 ತಂಡಗಳ ನಡುವೆ ನಡೆಯಲಿದ್ದು, ಈಗಾಗಲೇ ಆತಿಥೇಯರಾದ ಸೌತ್ ಆಫ್ರಿಕಾ ಮತ್ತು ಝಿಂಬಾಬ್ವೆ ಸೇರಿದಂತೆ ಒಟ್ಟು 10 ತಂಡಗಳು ಸ್ಥಾನ ಭದ್ರಪಡಿಸಿಕೊಂಡಿವೆ. ಉಳಿದ ಕೇವಲ 4 ಸ್ಥಾನಗಳಿಗಾಗಿ 2027ರ ಫೆಬ್ರವರಿ 22 ರಿಂದ ಮಾರ್ಚ್ 23 ರವರೆಗೆ ಬಲಿಷ್ಠ 10 ತಂಡಗಳ ನಡುವೆ ‘ಗ್ಲೋಬಲ್ ಕ್ವಾಲಿಫೈಯರ್’ (ಅರ್ಹತಾ ಸುತ್ತು) ಟೂರ್ನಿ ನಡೆಯಲಿದೆ.

ಈ ಬಾರಿ ಐಸಿಸಿ ಹೊಸ ನಿಯಮವನ್ನು ಜಾರಿಗೆ ತಂದಿದ್ದು, ಕ್ವಾಲಿಫೈಯರ್ ಟೂರ್ನಿಯಲ್ಲಿ ವಿಜೇತರಾಗುವ ಏಕೈಕ ತಂಡ ಮಾತ್ರ ನೇರವಾಗಿ ವಿಶ್ವಕಪ್‌ನ ಪ್ರಮುಖ 12 ತಂಡಗಳ ಹಂತಕ್ಕೆ ಪ್ರವೇಶಿಸಲಿದೆ. ಇನ್ನುಳಿದ 2, 3 ಮತ್ತು 4ನೇ ಸ್ಥಾನ ಪಡೆಯುವ ತಂಡಗಳು ವಿಶ್ವಕಪ್‌ನ ಆರಂಭದಲ್ಲಿ ‘ಸೂಪರ್ ಸೀರೀಸ್’ ಎಂಬ ತ್ರಿಕೋನ ಸರಣಿಯನ್ನು ಆಡಬೇಕಾಗುತ್ತದೆ. ಅದರಲ್ಲಿ ಅಗ್ರಸ್ಥಾನ ಪಡೆಯುವ ಒಂದು ತಂಡಕ್ಕೆ ಮಾತ್ರ ವಿಶ್ವಕಪ್‌ನ ಕೊನೆಯ ಟಿಕೆಟ್ ಸಿಗಲಿದೆ.

ಸತತ ಮೂರನೇ ಬಾರಿ ಮುಖಭಂಗ:

ವೆಸ್ಟ್ ಇಂಡೀಸ್ ತಂಡವು ಅರ್ಹತಾ ಸುತ್ತನ್ನಾಡುತ್ತಿರುವುದು ಇದು ಸತತ ಮೂರನೇ ಬಾರಿಯಾಗಿದೆ. 2019ರ ವಿಶ್ವಕಪ್‌ಗೆ ಕ್ವಾಲಿಫೈಯರ್ ಮೂಲಕ ಅರ್ಹತೆ ಪಡೆದಿದ್ದ ಕೆರಿಬಿಯನ್ ಪಡೆ, 2023ರ ಝಿಂಬಾಬ್ವೆ ಕ್ವಾಲಿಫೈಯರ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿ ಇತಿಹಾಸದಲ್ಲೇ ಮೊದಲ ಬಾರಿಗೆ ಏಕದಿನ ವಿಶ್ವಕಪ್‌ಗೆ ಅರ್ಹತೆ ಪಡೆಯದೆ ಹೊರಬಿದ್ದಿತ್ತು. ಆ ಕರಾಳ ಇತಿಹಾಸ ಮರುಕಳಿಸದಂತೆ ನೋಡಿಕೊಳ್ಳಬೇಕಾದ ಭಾರಿ ಜವಾಬ್ದಾರಿ ಈಗ ವಿಂಡೀಸ್ ಪಡೆ ಮೇಲಿದೆ.

ವಿಂಡೀಸ್ ಮುಂದಿರುವ ಹಾದಿಗಳಾವುವು?

ಮೊದಲ ಹಾದಿ: ಫೆಬ್ರವರಿ 22 ರಿಂದ ಮಾರ್ಚ್ 23, 2027 ರವರೆಗೆ ನಡೆಯಲಿರುವ 10 ತಂಡಗಳ ಗ್ಲೋಬಲ್ ಕ್ವಾಲಿಫೈಯರ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ಮೊದಲ ಸ್ಥಾನ (ವಿಜೇತರಾಗಿ) ಪಡೆಯಬೇಕು. ಒಂದು ವೇಳೆ ಕ್ವಾಲಿಫೈಯರ್ ಗೆದ್ದರೆ, ವೆಸ್ಟ್ ಇಂಡೀಸ್ ಯಾವುದೇ ಹೆಚ್ಚುವರಿ ಆತಂಕವಿಲ್ಲದೆ ನೇರವಾಗಿ ವಿಶ್ವಕಪ್‌ನ ಪ್ರಧಾನ ಸುತ್ತಿಗೆ (12 ತಂಡಗಳ ಗುಂಪು ಹಂತ) ಅರ್ಹತೆ ಪಡೆಯುತ್ತದೆ.

ಎರಡನೇ ಹಾದಿ: ಒಂದು ವೇಳೆ ವೆಸ್ಟ್ ಇಂಡೀಸ್ ತಂಡ ಕ್ವಾಲಿಫೈಯರ್ ಟೂರ್ನಿಯನ್ನು ಗೆಲ್ಲಲು ವಿಫಲವಾಗಿ, 2ನೇ, 3ನೇ ಅಥವಾ 4ನೇ ಸ್ಥಾನ ಪಡೆದರೆ, ಅವರಿಗೆ ಐಸಿಸಿ ಹೊಸ ನಿಯಮದ ಪ್ರಕಾರ ಮತ್ತೊಂದು ಕಠಿಣ ಅವಕಾಶ ಸಿಗಲಿದೆ.  ಈ ಮೂರು ತಂಡಗಳು ವಿಶ್ವಕಪ್‌ನ ಆರಂಭಿಕ ಹಂತದಲ್ಲಿ “ಸೂಪರ್ ಸೀರೀಸ್” ಎಂಬ ವಿಶೇಷ ತ್ರಿಕೋನ ಸರಣಿಯನ್ನು ಆಡಬೇಕಾಗುತ್ತದೆ.  ಈ ಮೂರು ತಂಡಗಳಲ್ಲಿ ಯಾರು ಅಗ್ರಸ್ಥಾನ ಪಡೆಯುತ್ತಾರೋ ಅವರಿಗೆ ಮಾತ್ರ ವಿಶ್ವಕಪ್‌ನ ಮುಖ್ಯ ಟೂರ್ನಿಗೆ ಪ್ರವೇಶಿಸಲು ಕೊನೆಯ ಅವಕಾಶ ಸಿಗಲಿದೆ.

ಇದನ್ನೂ ಓದಿ: IPL 2027: ಹಾರ್ದಿಕ್ ಪಾಂಡ್ಯ ಖರೀದಿಗೆ ಐದು ಫ್ರಾಂಚೈಸಿಗಳ ಬಿಗ್ ಪ್ಲ್ಯಾನ್!

ಒಟ್ಟಾರೆಯಾಗಿ ಹೇಳುವುದಾದರೆ, ಎರಡು ಬಾರಿಯ ವಿಶ್ವ ಚಾಂಪಿಯನ್ಸ್ ವೆಸ್ಟ್ ಇಂಡೀಸ್ ತಂಡಕ್ಕೆ ಇದು ಮತ್ತೊಂದು ಅಗ್ನಿಪರೀಕ್ಷೆಯ ಕಾಲ. 2023ರ ಏಕದಿನ ವಿಶ್ವಕಪ್‌ಗೆ ಅರ್ಹತೆ ಪಡೆಯದೆ ಇತಿಹಾಸದಲ್ಲೇ ಮೊದಲ ಬಾರಿಗೆ ದೊಡ್ಡ ಆಘಾತ ಅನುಭವಿಸಿದ್ದ ಕೆರಿಬಿಯನ್ ಪಡೆ, ಈಗ 2027ರ ಟೂರ್ನಿಗೂ ನೇರ ಅರ್ಹತೆ ತಪ್ಪಿಸಿಕೊಂಡು ಅದೇ ಕಠಿಣ ಹಾದಿಗೆ ಮರಳಿದೆ.

Source link

Aati Amavasya: ನಾಳೆ ಆಟಿ ಅಮಾವಾಸ್ಯೆ; ಕರಾವಳಿಯ ‘ಪಾಲೆದ ಕಷಾಯ’ದ ಮಹತ್ವ ಹಾಗೂ ತಯಾರಿಕೆಯ ವಿವರ ಇಲ್ಲಿದೆ – Kannada News | Aati amavasya tulunadus paleda kashaya tradition and monsoon health benefits

ಕರಾವಳಿ ಭಾಗದ ವಿಶಿಷ್ಟ ಸಂಸ್ಕೃತಿ, ಆಚರಣೆ ಹಾಗೂ ಪರಂಪರೆಯಲ್ಲಿ ‘ಆಟಿ ಅಮಾವಾಸ್ಯೆ‘ಗೆ ಅತ್ಯಂತ ವಿಶೇಷ ಸ್ಥಾನವಿದೆ. ಈ ಬಾರಿ ಆಗಸ್ಟ್ 12ರ ಬುಧವಾರದಂದು ಆಚರಿಸಲಾಗುತ್ತಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಸೇರಿದಂತೆ ತುಳುನಾಡಿನ ವಿವಿಧ ಭಾಗಗಳಲ್ಲಿ ಈ ದಿನಕ್ಕೆ ಸಂಬಂಧಿಸಿದ ಸಾಂಪ್ರದಾಯಿಕ ಸಂಪ್ರದಾಯಗಳು ಸಂಭ್ರಮದಿಂದ ನೆರವೇರಿಸಲಾಗುತ್ತದೆ.

ಆಷಾಢ ಮಾಸದ ಅಮಾವಾಸ್ಯೆಗೆ ವಿಶೇಷ ಮಹತ್ವ:

ಆಷಾಢ ಮಾಸದ ಅಮಾವಾಸ್ಯೆಯನ್ನೇ ತುಳುನಾಡಿನಲ್ಲಿ ‘ಆಟಿ ಅಮಾವಾಸ್ಯೆ’ ಎಂದು ಕರೆಯಲಾಗುತ್ತದೆ. ಇದೇ ಅಮಾವಾಸ್ಯೆಯನ್ನು ಕರ್ನಾಟಕದ ಕೆಲ ಭಾಗಗಳಲ್ಲಿ ‘ಭೀಮನ ಅಮಾವಾಸ್ಯೆ’ ಅಥವಾ ‘ಆಷಾಢ ಅಮಾವಾಸ್ಯೆ’ ಎಂಬ ಹೆಸರಿನಿಂದ ಆಚರಿಸಲಾಗುತ್ತದೆ. ತುಳುನಾಡಿನ ಜನಜೀವನದಲ್ಲಿ ಆಟಿ ತಿಂಗಳಿಗೆ ಅತ್ಯಂತ ವಿಶೇಷ ಸ್ಥಾನವಿದ್ದು, ಈ ಅವಧಿಯಲ್ಲಿ ಪ್ರಕೃತಿ, ಆರೋಗ್ಯ ಮತ್ತು ಸಾಂಪ್ರದಾಯಿಕ ಜೀವನಶೈಲಿಗೆ ಸಂಬಂಧಿಸಿದ ಹಲವು ಆಚರಣೆಗಳು ಕಂಡುಬರುತ್ತವೆ. ಅವುಗಳಲ್ಲಿ ಆಟಿ ಅಮಾವಾಸ್ಯೆಯ ಆಚರಣೆಯು ಕರಾವಳಿಗರ ಜೀವನದ ಅತ್ಯಂತ ಪ್ರಮುಖ ಭಾಗವಾಗಿದೆ.

‘ಪಾಲೆದ ಕಷಾಯ’ ಸೇವನೆಯ ಸಾಂಪ್ರದಾಯಿಕ ನಂಬಿಕೆ:

ಆಟಿ ಅಮಾವಾಸ್ಯೆಯ ದಿನದ ಪ್ರಮುಖ ಆಚರಣೆಗಳಲ್ಲಿ ‘ಪಾಲೆದ ಕಷಾಯ’ ಸೇವನೆಯು ಅತ್ಯಂತ ವಿಶೇಷವಾದದ್ದು. ಸಾಮಾನ್ಯವಾಗಿ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಪಾಳೆ ಮರದ (ಹಾಲೆ ಮರ ಅಥವಾ ಸರ್ಪಪರ್ಣೀ ಮರ) ತೊಗಟೆಯಿಂದ ತಯಾರಿಸಿದ ಕಷಾಯವನ್ನು ಸೇವಿಸುವ ಸಂಪ್ರದಾಯವನ್ನು ಕರಾವಳಿ ಜನರು ಇಂದಿಗೂ ಅತ್ಯಂತ ಶ್ರದ್ಧೆಯಿಂದ ಮುಂದುವರಿಸಿಕೊಂಡು ಬರುತ್ತಿದ್ದಾರೆ. ತುಳುನಾಡಿನ ಸಾಂಪ್ರದಾಯಿಕ ನಂಬಿಕೆಯ ಪ್ರಕಾರ, ಆಟಿ ಅಮಾವಾಸ್ಯೆಯಂದು ಪಾಳೆ ಮರದಲ್ಲಿ 108 ಗಿಡಮೂಲಿಕೆಗಳ ಔಷಧೀಯ ಗುಣಗಳು ಸೇರಿರುತ್ತವೆ ಎನ್ನಲಾಗುತ್ತದೆ. ಇದೇ ಕಾರಣಕ್ಕೆ ಈ ಪವಿತ್ರ ದಿನದಂದು ತಯಾರಿಸುವ ಕಷಾಯಕ್ಕೆ ವಿಶೇಷ ಧಾರ್ಮಿಕ ಮತ್ತು ಆರೋಗ್ಯಕರ ಮಹತ್ವ ನೀಡಲಾಗುತ್ತದೆ.

ಕಷಾಯ ತಯಾರಿಸುವ ವಿಧಾನ ಮತ್ತು ಮೆಂತ್ಯ ಗಂಜಿ:

ಬ್ರಾಹ್ಮಿ ಮುಹೂರ್ತದಲ್ಲಿ ಪಾಲೆ ಮರದ ಕೆತ್ತೆಯನ್ನು (ತೊಗಟೆ) ತಂದು, ಚೆನ್ನಾಗಿ ತೊಳೆದು ಅದರ ಹೊರಕವಚವನ್ನು ಕೆರೆದು ತೆಗೆಯಲಾಗುತ್ತದೆ. ನಂತರ ಅದನ್ನು ಕಲ್ಲಿನಲ್ಲಿ ಜಜ್ಜಿ ರಸವನ್ನು (ಹಾಲು) ಹೊರತೆಗೆಯಲಾಗುತ್ತದೆ. ಈ ರಸಕ್ಕೆ ಕರಿಮೆಣಸು, ಬೆಳ್ಳುಳ್ಳಿ ಮತ್ತು ಓಮ್ ಕಾಳುಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ ಕಷಾಯ ಸಿದ್ಧಪಡಿಸಲಾಗುತ್ತದೆ. ಅತ್ಯಂತ ಕಹಿಯಾಗಿರುವ ಈ ಆಟಿಯ ಕಷಾಯವನ್ನು ಬೆಳಗಿನ ಜಾವ ಖಾಲಿ ಹೊಟ್ಟೆಯಲ್ಲಿ ಸೇವಿಸಲಾಗುತ್ತದೆ. ಇದರ ಜೊತೆಗೆ, ಈ ದಿನ ದೇಹಕ್ಕೆ ತಂಪು ನೀಡಲು ಮೆಂತ್ಯ ಗಂಜಿಯನ್ನು ತಯಾರಿಸಿ ಸೇವಿಸುವುದು ತುಳುನಾಡಿನ ಮತ್ತೊಂದು ಸಾಂಪ್ರದಾಯಿಕ ಪದ್ಧತಿಯಾಗಿದೆ.

ಆರೋಗ್ಯದ ದೃಷ್ಟಿಯಿಂದ ಕಷಾಯದ ಪ್ರಯೋಜನಗಳು:

ಹಿರಿಯರು ಪಾರಂಪರಿಕವಾಗಿ ಪಾಲೆದ ಕಷಾಯವನ್ನು ದೇಹಕ್ಕೆ ಅತ್ಯಂತ ಆರೋಗ್ಯಕರವೆಂದು ಪರಿಗಣಿಸಿಕೊಂಡು ಬಂದಿದ್ದಾರೆ. ವಿಶೇಷವಾಗಿ ಮಳೆಗಾಲದಲ್ಲಿ ಎದುರಾಗುವ ವಿವಿಧ ಆರೋಗ್ಯ ಸಮಸ್ಯೆಗಳು ಮತ್ತು ರೋಗರುಜಿನಗಳಿಂದ ದೇಹವನ್ನು ರಕ್ಷಿಸಿಕೊಳ್ಳಲು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದನ್ನು ಔಷಧೀಯ ಪದ್ಧತಿಯ ಭಾಗವಾಗಿ ಸೇವಿಸಲಾಗುತ್ತದೆ. ಆದರೆ ಯಾವುದೇ ಔಷಧೀಯ ಸಸ್ಯ ಅಥವಾ ಕಷಾಯವನ್ನು ಸೇವಿಸುವಾಗ ಮರದ ಸರಿಯಾದ ಗುರುತು, ತಯಾರಿಸುವ ವಿಧಾನ ಹಾಗೂ ಸೂಕ್ತ ಪ್ರಮಾಣದ ಬಗ್ಗೆ ತಿಳಿದಿರುವುದು ಅತ್ಯಗತ್ಯ. ಯಾವುದೇ ಆರೋಗ್ಯ ಸಮಸ್ಯೆಗಳಿರುವವರು ತಜ್ಞರ ಸಲಹೆ ಪಡೆದು ಸೇವಿಸುವುದು ಸೂಕ್ತ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಹೊಟ್ಟೆಕಿಚ್ಚಿನ ಸುಮಾರ್ ಕೋಳಿ’! ಜೆಪಿ ಭವನದ ಗೋಡೆ, ಗೇಟ್​ಗೆ ಪೋಸ್ಟರ್ ಅಂಟಿಸಿ ಹೆಚ್​ಡಿಕೆ ವಿರುದ್ಧ ಕಾಂಗ್ರೆಸ್ ವ್ಯಂಗ್ಯ – Kannada News | Congress Targets HD Kumaraswamy With ‘Jealous Chicken’ Posters at JDS Bhavan in Bengaluru

ಬೆಂಗಳೂರು, ಆಗಸ್ಟ್ 11: ಬಿಡದಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸಿ ಜೆಡಿಎಸ್ ಪಕ್ಷವು ಪಾದಯಾತ್ರೆ ನಡೆಸುತ್ತಿರುವ ಸಂದರ್ಭದಲ್ಲಿ, ಬೆಂಗಳೂರು ಕೇಂದ್ರ ಯುವ ಕಾಂಗ್ರೆಸ್ ಘಟಕವು ಜೆಡಿಎಸ್ ಭವನದ (ಜೆಪಿ ಭವನ) ಗೋಡೆ ಮತ್ತು ಗೇಟ್‌ಗಳಿಗೆ ಪೋಸ್ಟರ್‌ಗಳನ್ನು ಅಂಟಿಸುವ ಮೂಲಕ ಪ್ರತಿ ಅಭಿಯಾನ ನಡೆಸಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಗುರಿಯಾಗಿಸಿಕೊಂಡು, ‘‘ಹೊಟ್ಟೆ ಕಿಚ್ಚಿನ ಸುಮಾರ್ ಕೋಳಿ’’ ಎಂದು ಲೇವಡಿ ಮಾಡುವ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಅಲ್ಲದೆ, ವಕ್ಕಲಿಗರು ಯಾರೇ ಅಧಿಕಾರ ಹಿಡಿದರೂ ಈ ಕೋಳಿಗೆ ಹೊಟ್ಟೆ ಕಿಚ್ಚು ಎಂಬ ಬರಹಗಳೊಂದಿಗೆ ಎಚ್.ಡಿ. ಕುಮಾರಸ್ವಾಮಿ ಅವರ ಫೋಟೋವನ್ನು ಜೋಡಿಸಲಾಗಿದೆ. ಜೆಡಿಎಸ್ ಪಾದಯಾತ್ರೆಯನ್ನು ಬೇನಾಮಿ ಆಸ್ತಿಯನ್ನು ರಕ್ಷಿಸುವ ಯಾತ್ರೆ ಎಂದು ಕಾಂಗ್ರೆಸ್ ಯುವ ಘಟಕ ಟೀಕಿಸಿದೆ.

ಶೇಷಾದ್ರಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ತಡರಾತ್ರಿ 10 ರಿಂದ 11 ಗಂಟೆ ಸುಮಾರಿಗೆ ಈ ಪೋಸ್ಟರ್ ಅಭಿಯಾನವನ್ನು ನಡೆಸಲಾಗಿದೆ. ಘಟನೆ ನಡೆದಿದ್ದರೂ, ಈವರೆಗೂ ಯಾವುದೇ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿಲ್ಲ. ಈ ಘಟನೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Mohan Bhagwat: ಆಗಸ್ಟ್ 29ರಂದು ಅಮೆರಿಕದಲ್ಲಿ RSS ಮುಖ್ಯಸ್ಥ ಮೋಹನ್ ಭಾಗವತ್ ಭಾಷಣ – Kannada News | RSS Chief Mohan Bhagwat’s US Visit: To Address Mega Indian American Event in New York

ನವದೆಹಲಿ, ಆಗಸ್ಟ್ 11: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ನೂರು ವರ್ಷದ ಜಾಗತಿಕ ಸಂಪರ್ಕ ಅಭಿಯಾನದ ಭಾಗವಾಗಿ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಈ ತಿಂಗಳ ಕೊನೆಯಲ್ಲಿ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಪ್ರವಾಸದ ಪ್ರಮುಖ ಕಾರ್ಯಕ್ರಮವಾಗಿ ಆಗಸ್ಟ್ 29 ರಂದು ನ್ಯೂಯಾರ್ಕ್‌ನ ಪ್ರತಿಷ್ಠಿತ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಅವರು ಭಾಷಣ ಮಾಡಲಿದ್ದಾರೆ.’ಅಮೆರಿಕನ್ ಹಿಂದೂಸ್ ಫಾರ್ ಎಂಗೇಜ್‌ಮೆಂಟ್ ಅಂಡ್ ಡೈಲಾಗ್’ (AHEAD) ಫೋರಂ ಮತ್ತು ನೂರಾರು ಹಿಂದೂ ಸಾಂಸ್ಕೃತಿಕ, ಧಾರ್ಮಿಕ ಸಂಸ್ಥೆಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

‘ಯುನಿವರ್ಸಲ್ ಒನ್ನೆಸ್ ಸೆಲೆಬ್ರೇಷನ್ಸ್’ ಮತ್ತು ರಕ್ಷಾಬಂಧನದ ಸಂದೇಶ

ಆಗಸ್ಟ್ 29 ರಂದು ನಡೆಯಲಿರುವ ಈ ಬೃಹತ್ ಸಮಾವೇಶಕ್ಕೆ ‘ಯುನಿವರ್ಸಲ್ ಒನ್ನೆಸ್ ಸೆಲೆಬ್ರೇಷನ್ಸ್’ಎಂದು ಹೆಸರಿಸಲಾಗಿದೆ. ಹಿಂದೂ ಹಬ್ಬವಾದ ರಕ್ಷಾಬಂಧನದ ಸಂದರ್ಭದಲ್ಲೇ ಈ ಕಾರ್ಯಕ್ರಮ ಆಯೋಜನೆಗೊಂಡಿರುವುದು ವಿಶೇಷವಾಗಿದೆ. ಈ ಸಮಾವೇಶವು ಪ್ರಮುಖವಾಗಿ ವಸುಧೈವ ಕುಟುಂಬಕಂ, ಅಂದರೆ “ಇಡೀ ಜಗತ್ತೇ ಒಂದು ಕುಟುಂಬ” ಎಂಬ ಭಾರತೀಯ ಸನಾತನ ತತ್ವದ ಆಧಾರದ ಮೇಲೆ ಜಾಗತಿಕ ಸಾಮರಸ್ಯ, ನಾಗರಿಕ ಜವಾಬ್ದಾರಿ ಮತ್ತು ಪರಸ್ಪರ ಗೌರವದ ಸಂದೇಶವನ್ನು ಸಾರಲಾಗುತ್ತದೆ. ಸಹೋದರ-ಸಹೋದರಿಯರ ಬಾಂಧವ್ಯದ ಹಬ್ಬವಾದ ರಕ್ಷಾಬಂಧನವನ್ನು ಇಡೀ ಜಗತ್ತು, ಮಾನವೀಯತೆ ಮತ್ತು ಪ್ರಕೃತಿಯ ನಡುವಿನ ಜವಾಬ್ದಾರಿಯ ಸಂಕೇತವಾಗಿ ಇಲ್ಲಿ ಪ್ರಸ್ತುತಪಡಿಸಲಾಗುತ್ತಿದೆ.

ಮ್ಯಾಡಿಸನ್ ಸ್ಕ್ವೇರ್‌ನಲ್ಲಿ 5 ಸಾವಿರಕ್ಕೂ ಅಧಿಕ ಭಾರತೀಯರ ಜಮಾವಣೆ

ಮೋಹನ್ ಭಾಗವತ್ ಅವರ ಈ ಅಪರೂಪದ ಅಮೆರಿಕ ಸಾರ್ವಜನಿಕ ಭಾಷಣವನ್ನು ಕೇಳಲು ಅಮೆರಿಕದ ವಿವಿಧ ರಾಜ್ಯಗಳಿಂದ 5,000ಕ್ಕೂ ಹೆಚ್ಚು ಪ್ರಮುಖ ಭಾರತೀಯ ಮೂಲದ ಅಮೆರಿಕನ್ನರು ಭಾಗವಹಿಸುವ ನಿರೀಕ್ಷೆಯಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಭಾಷಾ, ಪ್ರಾದೇಶಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯ ಉದ್ಯಮಿಗಳು, ವೈದ್ಯರು, ಶಿಕ್ಷಣ ತಜ್ಞರು, ಯುವ ಮುಖಂಡರು ಮತ್ತು ಧಾರ್ಮಿಕ ಮುಖಂಡರು ಪಾಲ್ಗೊಳ್ಳಲಿದ್ದಾರೆ.

ನ್ಯೂಯಾರ್ಕ್‌ನಲ್ಲಿ ಕನಿಷ್ಠ ಎರಡು ಖಾಸಗಿ ಕಾರ್ಯಕ್ರಮಗಳಲ್ಲೂ ಭಾಗವಹಿಸಲಿರುವ ಮೋಹನ್ ಭಾಗವತ್ ಅವರು, ಅಮೆರಿಕದ ಪ್ರವಾಸ ಮುಗಿದ ನಂತರ ಕೆನಡಾಕ್ಕೂ ಭೇಟಿ ನೀಡುವ ಸಾಧ್ಯತೆಯಿದೆ. ಆರ್‌ಎಸ್‌ಎಸ್ ಜಗತ್ತಿನಾದ್ಯಂತ ತನ್ನ ಒಡನಾಟವನ್ನು ವೃದ್ಧಿಸಿಕೊಳ್ಳಲು ಹಮ್ಮಿಕೊಂಡಿರುವ ಶತಮಾನೋತ್ಸವದ ಜಾಗತಿಕ ಕಾರ್ಯತಂತ್ರದ ಭಾಗವಾಗಿ ಈ ವಿದೇಶಿ ಪ್ರವಾಸಗಳು ಅತ್ಯಂತ ಮಹತ್ವ ಪಡೆದುಕೊಂಡಿವೆ.

ಇನ್ನಷ್ಟು  ರಾಷ್ಟ್ರೀಯ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Dam Water Level: ಪ್ರಮುಖ ಜಲಾಶಯಗಳ ನೀರಿನ ಮಟ್ಟದಲ್ಲಿ ಏರಿಕೆ, ಇಲ್ಲಿದೆ ವಿವರ – Kannada News | Karnataka Reservoir Water Levels on August 11: KRS, Kabini, Hemavathi, Almatti Water Storage Update

ಕಬಿನಿ ಡ್ಯಾಂ (ಸಂಗ್ರಹ ಚಿತ್ರ)Image Credit source: tv9

ಬೆಂಗಳೂರು, ಆಗಸ್ಟ್ 11: ಕರ್ನಾಟಕದ ಪ್ರಮುಖ ಜಲಾಶಯಗಳಿಗೆ ಒಳಹರಿವು ಮುಂದುವರಿದಿದ್ದು, ಕೆಆರ್‌ಎಸ್, ಕಬಿನಿ, ಹೇಮಾವತಿ, ಆಲಮಟ್ಟಿ ಹಾಗೂ ಬಸವಸಾಗರ ಜಲಾಶಯಗಳಲ್ಲಿ ಉತ್ತಮ ಪ್ರಮಾಣದ ನೀರು (Dam Water Level) ಸಂಗ್ರಹವಾಗಿದೆ. ಕೆಆರ್‌ಎಸ್‌ನಲ್ಲಿ ಇಂದಿನ ನೀರಿನ ಮಟ್ಟ 109.08 ಅಡಿಯಷ್ಟಿದ್ದು, ಕಬಿನಿ ಜಲಾಶಯವೂ ಗರಿಷ್ಠ ಮಟ್ಟದ ಸಮೀಪದಲ್ಲಿದೆ.

ಕೆಆರ್‌ಎಸ್ ಜಲಾಶಯ ನೀರಿನ ಮಟ್ಟ

ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಜಲಾಶಯದ ಗರಿಷ್ಠ ನೀರಿನ ಮಟ್ಟ 124.80 ಅಡಿ. ಇಂದಿನ ನೀರಿನ ಮಟ್ಟ 109.08 ಅಡಿ ಇದ್ದು, ಜಲಾಶಯಕ್ಕೆ 8,357 ಕ್ಯೂಸೆಕ್ ಒಳಹರಿವು ಇದೆ. 2,325 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದ ಗರಿಷ್ಠ ಸಂಗ್ರಹ ಸಾಮರ್ಥ್ಯ 49.452 ಟಿಎಂಸಿ ಆಗಿದ್ದು, ಸದ್ಯ 30.905 ಟಿಎಂಸಿ ನೀರು ಸಂಗ್ರಹವಾಗಿದೆ.

ಕಬಿನಿ ಜಲಾಶಯ ನೀರಿನ ಮಟ್ಟ

ಮೈಸೂರು ಭಾಗದ ಕಬಿನಿ ಜಲಾಶಯದಲ್ಲಿ ನೀರಿನ ಮಟ್ಟ 82.76 ಅಡಿ ತಲುಪಿದೆ. ಇದರ ಗರಿಷ್ಠ ಮಟ್ಟ 84 ಅಡಿಯಾಗಿದ್ದು, ಜಲಾಶಯದಲ್ಲಿ 18.71 ಟಿಎಂಸಿ ನೀರು ಸಂಗ್ರಹವಾಗಿದೆ. ಗರಿಷ್ಠ ಸಂಗ್ರಹ ಸಾಮರ್ಥ್ಯ 19.52 ಟಿಎಂಸಿ. ಜಲಾಶಯಕ್ಕೆ 9,660 ಕ್ಯೂಸೆಕ್ ಒಳಹರಿವು ಇದ್ದು, ನದಿಗೆ 11,583 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಎಡ ಮತ್ತು ಬಲದಂಡೆ ಕಾಲುವೆಗಳಿಗೆ ಸದ್ಯ ನೀರು ಹರಿಸಲಾಗುತ್ತಿಲ್ಲ. ಜಲಾನಯನ ಪ್ರದೇಶದಲ್ಲಿ 5 ಮಿ.ಮೀ. ಮಳೆ ದಾಖಲಾಗಿದೆ.

ಹೇಮಾವತಿ ಜಲಾಶಯ ನೀರಿನ ಮಟ್ಟ

ಹಾಸನ ತಾಲೂಕಿನ ಗೊರೂರು ಸಮೀಪದ ಹೇಮಾವತಿ ಜಲಾಶಯದ ಗರಿಷ್ಠ ಮಟ್ಟ 2922 ಅಡಿ (37 ಟಿಎಂಸಿ). ಇಂದಿನ ನೀರಿನ ಮಟ್ಟ 2915.43 ಅಡಿ, ಜಲಾಶಯದಲ್ಲಿ 31.53 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 3,117 ಕ್ಯೂಸೆಕ್ ಒಳಹರಿವು ಇದ್ದು, 500 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಕಾಲುವೆಗಳಿಗೆ ನೀರು ಬಿಡುಗಡೆ ಮಾಡಲಾಗುತ್ತಿಲ್ಲ.

ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 2921.95 ಅಡಿ (37.055 ಟಿಎಂಸಿ) ನೀರು ಸಂಗ್ರಹವಾಗಿತ್ತು. ಆಗ ಒಳಹರಿವು 7,398 ಕ್ಯೂಸೆಕ್ ಹಾಗೂ ನದಿಗೆ 2,875 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿತ್ತು. ಕಾಲುವೆಗಳಿಗೆ 4,800 ಕ್ಯೂಸೆಕ್ ನೀರು ಹರಿಸಲಾಗಿತ್ತು.

ಆಲಮಟ್ಟಿ ಜಲಾಶಯ ನೀರಿನ ಮಟ್ಟ

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿಯ ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ ಜಲಾಶಯದಲ್ಲೂ ನೀರಿನ ಮಟ್ಟ ಗರಿಷ್ಠ ಮಟ್ಟದ ಸಮೀಪದಲ್ಲಿದೆ. ಆಲಮಟ್ಟಿಯ ಗರಿಷ್ಠ ನೀರಿನ ಮಟ್ಟ 519.60 ಮೀಟರ್ ಆಗಿದ್ದು, ಇಂದಿನ ಮಟ್ಟ 519.46 ಮೀಟರ್. ಜಲಾಶಯಕ್ಕೆ 69,104 ಕ್ಯೂಸೆಕ್ ಒಳಹರಿವು ಇದ್ದು, 61,280 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ಬಸವಸಾಗರದಲ್ಲೂ ಭಾರಿ ಒಳಹರಿವು

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಳಿಯ ಬಸವಸಾಗರ ಜಲಾಶಯದ ಗರಿಷ್ಠ ಮಟ್ಟ 492.25 ಮೀಟರ್. ಇಂದಿನ ನೀರಿನ ಮಟ್ಟ 492.22 ಮೀಟರ್ ದಾಖಲಾಗಿದೆ. ಜಲಾಶಯಕ್ಕೆ ಸುಮಾರು 75 ಸಾವಿರ ಕ್ಯೂಸೆಕ್ ಒಳಹರಿವು ಇದ್ದು, 69 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಹೀಗಾಗಿ ಉತ್ತರ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲೂ ನೀರಿನ ಮಟ್ಟ ಗರಿಷ್ಠ ಮಟ್ಟದ ಸಮೀಪದಲ್ಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಟಾಕ್ಸಿಕ್’ ಚಿತ್ರಕ್ಕೆ ಯಶ್ ಪಡೆದಿದ್ದಾರೆ ಭಾರೀ ಸಂಭಾವನೆ; ಉಳಿದ ಕಲಾವಿದರು ಪಡೆದಿದ್ದೆಷ್ಟು? – Kannada News | Toxic Movie Cast Remuneration: Kiara Advani Yash Rukmini Vasanth and Nayanthara Fee Revealed

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದೆ. ಅದರಲ್ಲೂ ಟ್ರೇಲರ್ ಲಾಂಚ್ ಬಳಿಕ ನಿರೀಕ್ಷೆ ಹೆಚ್ಚಾಗಿದೆ. ಈಗ ಚಿತ್ರದ ತಾರಾಗಣದ ಸಂಭಾವನೆ ವಿವರಗಳು ಹೊರಬಿದ್ದಿವೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಚಿತ್ರವು ಆಗಸ್ಟ್ 26ರಂದು ಅದ್ಧೂರಿಯಾಗಿ ತೆರೆಗೆ ಬರಲಿದೆ. ಚಿತ್ರದಲ್ಲಿ ಯಶ್ ಪಡೆದಿರುವ ಸಂಭಾವನೆ ಮತ್ತು ಇತರ ನಟಿಯರು ಜೇಬಿಗೆ ಇಳಿಸಿಕೊಂಡಿದ್ದರ ಬಗ್ಗೆ ಈಗ ಮಾಧ್ಯಮಗಳಲ್ಲಿ ಭಾರಿ ಚರ್ಚೆ ಆಗಿದೆ.

ಯಶ್ ಸಂಭಾವನೆ ಮತ್ತು ಪಾತ್ರ

ಮಾಧ್ಯಮಗಳ ವರದಿ ಪ್ರಕಾರ ಯಶ್ ಈ ಚಿತ್ರಕ್ಕಾಗಿ 50 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಅವರು ರಾಯ ಮತ್ತು ಟಿಕೆಟ್ ಎಂಬ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟನೆಯ ಜೊತೆಗೆ ಯಶ್ ಈ ಚಿತ್ರಕ್ಕೆ ಸಹ-ಬರಹಗಾರ ಮತ್ತು ಸಹ-ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದಾರೆ. ಈ ಚಿತ್ರದಲ್ಲಿ ತಂದೆ ಮತ್ತು ಮಗನ ನಡುವಿನ ಸೇಡಿನ ಕಥೆ ಪ್ರಮುಖವಾಗಿದೆ. ಯಶ್ ದ್ವಿಪಾತ್ರದಲ್ಲಿ ಮಿಂಚಲಿದ್ದಾರೆ. ಈ ಚಿತ್ರದ ಲಾಭದಲ್ಲಿ ಅವರಿಗೂ ಪಾಲು ಸಿಗಲಿದೆ ಎನ್ನಲಾಗಿದೆ.

ತಾರಾಗಣದ ಭಾರಿ ಸಂಭಾವನೆ

ಚಿತ್ರದಲ್ಲಿ ಅಭಿನಯಿಸಿರುವ ನಟಿಯರಿಗೂ ದೊಡ್ಡ ಮಟ್ಟದ ಸಂಭಾವನೆ ನೀಡಲಾಗಿದೆ. ನಾಯಕಿ ಕಿಯಾರಾ ಅಡ್ವಾಣಿ 15 ಕೋಟಿ ರೂಪಾಯಿ ಪಡೆದಿದ್ದಾರೆ. ನಯನತಾರಾ ಅವರಿಗೆ 12 ರಿಂದ 18 ಕೋಟಿ ರೂಪಾಯಿ ನೀಡಲಾಗಿದೆ ಎಂದು ವರದಿಯಾಗಿದೆ. ‘ಕಾಂತಾರ 1’ ಯಶಸ್ಸಿನ ನಂತರ ರುಕ್ಮಿಣಿ ವಸಂತ್ 3 ರಿಂದ 5 ಕೋಟಿ ಪಡೆದಿದ್ದಾರೆ. ಹುಮಾ ಖುರೇಷಿ ಹಾಗೂ ತಾರಾ ಸುತಾರಿಯಾ ತಲಾ 2 ರಿಂದ 3 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ‘ಯಶ್ ಈಗಾಗಲೇ ರಾಜ್ಯ, ದೇಶ ಗೆದ್ದಾಗಿದೆ, ವಿಶ್ವವನ್ನೂ ಗೆಲ್ತಾರೆ’; ಟಾಕ್ಸಿಕ್ ಬಗ್ಗೆ ಅಜಯ್ ರಾವ್ ಮಾತು

ಆಗಸ್ಟ್ 26ಕ್ಕೆ ಸಿನಿಮಾ ಬಿಡುಗಡೆ

ಈ ಸಂಭಾವನೆಯ ವಿವರಗಳ ಬಗ್ಗೆ ಚಿತ್ರತಂಡದಿಂದ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಮೊದಲು ಈ ಸಿನಿಮಾ ಮಾರ್ಚ್ 19 ರಂದು ಬಿಡುಗಡೆಯಾಗಬೇಕಿತ್ತು. ನಂತರ ಜೂನ್ 4 ಕ್ಕೆ ಮುಂದೂಡಲಾಗಿತ್ತು. ಈಗ ಜಾಗತಿಕವಾಗಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಆಗಸ್ಟ್ 26ರ ದಿನಾಂಕವನ್ನು ನಿಗದಿಪಡಿಸಲಾಗಿದೆ. ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

ಡಿಸ್ಕ್ಲೇಮರ್: ಈ ಲೇಖನದಲ್ಲಿರುವ ಮಾಹಿತಿಯು ಸಾರ್ವಜನಿಕವಾಗಿ ಲಭ್ಯವಿರುವ ಮೂಲಗಳು ಮತ್ತು ಮೂರನೇ ವ್ಯಕ್ತಿಗಳ ಹೇಳಿಕೆಗಳನ್ನು ಆಧರಿಸಿದ್ದು, ಕೇವಲ ಮಾಹಿತಿ ಮತ್ತು ಮನರಂಜನೆಯ ಉದ್ದೇಶಕ್ಕಾಗಿ ಮಾತ್ರ ನೀಡಲಾಗಿದೆ. ಇದರಲ್ಲಿ ಹೇಳಲಾದ ವಿವರಗಳನ್ನು ಸಂಬಂಧಪಟ್ಟವರು ಅಧಿಕೃತಪಡಿಸಿಲ್ಲ. ಈ ಲೇಖನವು ಯಾವುದೇ ವ್ಯಕ್ತಿಯ ಖಾಸಗಿತನವನ್ನು ಉಲ್ಲಂಘಿಸುವ ಅಥವಾ ಸತ್ಯವನ್ನು ತಿರಚುವ ಉದ್ದೇಶವನ್ನು ಹೊಂದಿಲ್ಲ. ಯಾವುದೇ ಮಾಹಿತಿಯನ್ನು ಸಂಪೂರ್ಣವಾಗಿ ನಂಬುವ ಮೊದಲು ಸ್ವತಂತ್ರವಾಗಿ ಪರಿಶೀಲಿಸಲು ಓದುಗರಿಗೆ ಸಲಹೆ ನೀಡಲಾಗುತ್ತದೆ. ಈ ವಿಷಯದಲ್ಲಿನ ಯಾವುದೇ ದೋಷಗಳು ಅಥವಾ ಅಪೂರ್ಣತೆಗಳಿಗೆ ‘ಟಿವಿ9 ಕನ್ನಡ’ ಜವಾಬ್ದಾರಿಯಲ್ಲ.

ಪ್ರಶ್ನೆ:  ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಅವರ ಪಾತ್ರದ ಹೆಸರೇನು?
ಉತ್ತರ: ರಾಯ ಹಾಗೂ ಟಿಕೆಟ್

ಪ್ರಶ್ನೆ: ಟಾಕ್ಸಿಕ್ ರಿಲೀಸ್ ದಿನಾಂಕ ಏನು?
ಉತ್ತರ: ಆಗಸ್ಟ್ 26

ಪ್ರಶ್ನೆ: ಟಾಕ್ಸಿಕ್ ಚಿತ್ರದ ನಿರ್ದೇಶಕರು ಯಾರು?
ಉತ್ತರ: ಗೀತು ಮೋಹನ್​ ದಾಸ್

Source link

IPL 2027: ಹಾರ್ದಿಕ್ ಪಾಂಡ್ಯ ಖರೀದಿಗೆ ಐದು ಫ್ರಾಂಚೈಸಿಗಳ ಬಿಗ್ ಪ್ಲ್ಯಾನ್! – Kannada News | Hardik Pandya Trade Rumours Heat Up Ahead of IPL 2027

ಇಂಡಿಯನ್ ಪ್ರೀಮಿಯರ್ ಲೀಗ್ (IPL) 2027ರ ಮೆಗಾ ಹರಾಜಿಗೂ ಮುನ್ನ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಮುಂಬೈ ಇಂಡಿಯನ್ಸ್ (MI) ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬರುವ ಸೀಸನ್‌ಗಾಗಿ ಬೇರೆ ತಂಡಕ್ಕೆ ಟ್ರೇಡ್ ಮಾಡಲು ತೆರೆಮರೆಯ ಕಸರತ್ತುಗಳು ನಡೆದಿವೆ ಎಂದು ‘ಕ್ರಿಕ್‌ಬಜ್’ ವರದಿ ಮಾಡಿದೆ. ಕಳೆದ ಸೀಸನ್‌ನಲ್ಲಿ ಮುಂಬೈ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ.

ಹಾರ್ದಿಕ್ ಪಾಂಡ್ಯ ಅವರನ್ನು ತಮ್ಮ ತಂಡಕ್ಕೆ ಸೆಳೆದುಕೊಳ್ಳಲು ಯಾವೆಲ್ಲಾ ಫ್ರಾಂಚೈಸಿಗಳು ಏನೇನು ಪ್ಲ್ಯಾನ್ ಮಾಡಿಕೊಂಡಿವೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ:

ಡೆಲ್ಲಿ ಕ್ಯಾಪಿಟಲ್ಸ್ (DC): ಹಾರ್ದಿಕ್-ಅಕ್ಷರ್ ಅದಲು-ಬದಲು?

ಡೆಲ್ಲಿ ಕ್ಯಾಪಿಟಲ್ಸ್ ತಂಡ ಹಾರ್ದಿಕ್ ಪಾಂಡ್ಯ ಮೇಲೆ ಕಣ್ಣಿಟ್ಟಿದೆ. ಇದಕ್ಕಾಗಿ ಸ್ಟಾರ್ ಆಲ್-ರೌಂಡರ್ ಅಕ್ಷರ್ ಪಟೇಲ್ ಅವರನ್ನು ಮುಂಬೈಗೆ ನೀಡಿ, ಪ್ರತಿಯಾಗಿ ಹಾರ್ದಿಕ್ ಅವರನ್ನು ಪಡೆಯುವ ‘ಸ್ವಾಪ್’ ಆಫರ್ ನೀಡಲು ಮುಂದಾಗಿದೆ. ಮುಂಬೈ ಇಂಡಿಯನ್ಸ್ ತಂಡಕ್ಕೆ ಒಬ್ಬ ಗುಣಮಟ್ಟದ ಸ್ಪಿನ್ ಆಲ್-ರೌಂಡರ್ ಅಗತ್ಯವಿರುವುದರಿಂದ ಈ ಡೀಲ್ ಕುತೂಹಲ ಮೂಡಿಸಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ (KKR): ಸ್ಟಾರ್ ಆಟಗಾರರನ್ನು ಬಿಡಲ್ಲ!

ಹಾರ್ದಿಕ್ ಅವರನ್ನು ತಂಡಕ್ಕೆ ತರಲು ಕೆಕೆಆರ್ ತೀವ್ರ ಆಸಕ್ತಿ ತೋರಿಸಿದೆ. ಆದರೆ, ಪ್ರತಿಯಾಗಿ ತನ್ನ ತಂಡದ ಯಾವುದೇ ಪ್ರಮುಖ ಭಾರತೀಯ ಆಟಗಾರನನ್ನು ಬಿಟ್ಟುಕೊಡಲು ಸಿದ್ಧವಿಲ್ಲ. ಆಸ್ಟ್ರೇಲಿಯಾದ ಕ್ಯಾಮರೋನ್ ಗ್ರೀನ್ ಅವರನ್ನು ಮುಂಬೈಗೆ ನೀಡಿ ಹಾರ್ದಿಕ್ ಅವರನ್ನು ಪಡೆಯುವ ಆಲೋಚನೆ ಇದೆಯಾದರೂ, ಗ್ರೀನ್ ಅವರ ಆ್ಯಶಸ್ ಸರಣಿಯ ಲಭ್ಯತೆಯ ಮೇಲೆಯೇ ಇದು ನಿರ್ಧಾರವಾಗಲಿದೆ.

ರಾಜಸ್ಥಾನ್ ರಾಯಲ್ಸ್ (RR) ಯಶಸ್ವಿ ಪ್ಲ್ಯಾನ್:

ರಾಜಸ್ಥಾನ್ ರಾಯಲ್ಸ್ ತಂಡ ಹಾರ್ದಿಕ್ ಪಾಂಡ್ಯ ಬದಲಿಗೆ ಆರಂಭಿಕ ದಾಂಡಿಗ ಯಶಸ್ವಿ ಜೈಸ್ವಾಲ್ ಅವರನ್ನು ಟ್ರೇಡ್ ಮಾಡಿಕೊಳ್ಳಲು ಆಸಕ್ತಿ ತೋರಿಸಿದೆ ಎಂದು ವರದಿಯಾಗಿದೆ.

ಲಕ್ನೋ ಸೂಪರ್ ಜೈಂಟ್ಸ್ (LSG) ಸ್ವಾಪ್ ಡೀಲ್:

ಲಕ್ನೋ ಸೂಪರ್ ಜೈಂಟ್ಸ್ ತಂಡ ನಿಕೋಲಸ್ ಪೂರನ್ ಅವರನ್ನು ನೀಡಿ ಹಾರ್ದಿಕ್ ಪಾಂಡ್ಯರನ್ನು ಖರೀದಿಸಲು ಆಸಕ್ತಿ ಹೊಂದಿದೆ. ಆದರೆ ಈ ಸ್ವಾಪ್ ಡೀಲ್​ ಮಾತುಕತೆ ಸದ್ಯ ಆರಂಭಿಕ ಹಂತದಲ್ಲೇ ಇದೆ.

ಚೆನ್ನೈ ಸೂಪರ್ ಕಿಂಗ್ಸ್ (CSK), ಸದ್ಯಕ್ಕಿಲ್ಲ ಆಸಕ್ತಿ!

ಸಿಎಸ್‌ಕೆ ಸಿಇಒ ಕಾಸಿ ವಿಶ್ವನಾಥನ್ ಅವರ ಪ್ರಕಾರ, ಹಾರ್ದಿಕ್ ಪಾಂಡ್ಯ ಟ್ರೇಡಿಂಗ್ ಬಗ್ಗೆ ತಂಡ ಸದ್ಯಕ್ಕೆ ಯೋಚಿಸುತ್ತಿಲ್ಲ. ಸಿಎಸ್‌ಕೆ ಸದ್ಯ ತನ್ನ ಹೊಸ ವಿದೇಶಿ ಮುಖ್ಯ ಕೋಚ್ ಮತ್ತು ನಾಯಕತ್ವದ ರಚನೆಯನ್ನು ಅಂತಿಮಗೊಳಿಸುವತ್ತ ಗಮನ ಹರಿಸಿದೆ. ಇದಾಗ್ಯೂ ಹಾರ್ದಿಕ್ ಪಾಂಡ್ಯರನ್ನು ಟ್ರೇಡ್ ಮಾಡಲ್ಲ ಎಂದು ಸಿಎಸ್​ಕೆ ಎಲ್ಲೂ ಕೂಡ ಕೇಳಿಕೊಂಡಿಲ್ಲ ಎಂಬುದು ಉಲ್ಲೇಖಾರ್ಹ.

ಒಟ್ಟಾರೆಯಾಗಿ ಹೇಳುವುದಾದರೆ, ಐಪಿಎಲ್ ಇತಿಹಾಸದಲ್ಲೇ ಹಾರ್ದಿಕ್ ಪಾಂಡ್ಯ ಅವರ ಈ ಸಂಭಾವ್ಯ ಟ್ರೇಡಿಂಗ್ ಭಾರಿ ಕುತೂಹಲ ಮೂಡಿಸಿದೆ. ಈ ಹೈಪ್ ನಡುವೆ ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ಪಾಂಡ್ಯ ಯಾವ ತಂಡದ ಪರ ಕಣಕ್ಕಿಳಿಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Source link

Bhimana Amavasya 2026: ನಾಳೆ ಭೀಮನ ಅಮಾವಾಸ್ಯೆಯಂದೇ ಸೂರ್ಯಗ್ರಹಣ; ಈ ದಿನ ವ್ರತ, ಪೂಜೆ ಮಾಡಬಹುದೇ? – Kannada News | Bhimana Amavasya 2026: Pooja During Solar Eclipse? Know If Sutaka Applies

ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ವಿಶೇಷ ಮಹತ್ವ ಹೊಂದಿರುವ ಭೀಮನ ಅಮಾವಾಸ್ಯೆ ನಾಳೆ (ಆಗಸ್ಟ್​​ 12) ಆಚರಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಆಕಾಶದಲ್ಲಿ ಸೂರ್ಯಗ್ರಹಣವೂ ಸಂಭವಿಸಲಿದೆ ಎಂಬ ಕಾರಣಕ್ಕೆ ಈ ಬಾರಿಯ ಭೀಮನ ಅಮಾವಾಸ್ಯೆ ವಿಶೇಷ ಗಮನ ಸೆಳೆಯುತ್ತಿದೆ. ಅಮಾವಾಸ್ಯೆ ಮತ್ತು ಗ್ರಹಣದ ಈ ಸಂಯೋಗವನ್ನು ಧಾರ್ಮಿಕ ಹಾಗೂ ಖಗೋಳಶಾಸ್ತ್ರೀಯ ದೃಷ್ಟಿಯಿಂದ ಕುತೂಹಲಕಾರಿ ವಿದ್ಯಮಾನವೆಂದು ಪರಿಗಣಿಸಲಾಗುತ್ತಿದೆ. ಆದ್ದರಿಂದ ಸಾಕಷ್ಟು ಮಹಿಳೆಯರಿಗೆ ಈ ದಿನ ವ್ರತ ಹಾಗೂ ಪೂಜೆ ಮಾಡಬಹುದೇ? ಎಂಬ ಗೊಂದಲವಿದೆ. ಉತ್ತರವನ್ನು ಇಲ್ಲಿ ತಿಳಿದುಕೊಳ್ಳಿ.

ಭೀಮನ ಅಮಾವಾಸ್ಯೆ ಎಂದರೇನು?

ಆಷಾಢ ಮಾಸದ ಅಮಾವಾಸ್ಯೆಯನ್ನು ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಗಗಳಲ್ಲಿ ಭೀಮನ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ವಿಶೇಷವಾಗಿ ವಿವಾಹಿತ ಮಹಿಳೆಯರು ಪತಿಯ ದೀರ್ಘಾಯುಷ್ಯ, ಆರೋಗ್ಯ ಮತ್ತು ಕುಟುಂಬದ ಸುಖ-ಸಮೃದ್ಧಿಗಾಗಿ ಈ ದಿನ ವಿಶೇಷ ಪೂಜೆ ಹಾಗೂ ವ್ರತಗಳನ್ನು ಆಚರಿಸುತ್ತಾರೆ. ಕೆಲವೆಡೆ ಅವಿವಾಹಿತ ಮಹಿಳೆಯರೂ ಉತ್ತಮ ವೈವಾಹಿಕ ಜೀವನಕ್ಕಾಗಿ ಈ ವ್ರತವನ್ನು ಆಚರಿಸುವ ಸಂಪ್ರದಾಯವಿದೆ.

ಸೂರ್ಯಗ್ರಹಣದೊಂದಿಗೆ ವಿಶೇಷ ಸಂಯೋಗ: ಈ ದಿನ ವ್ರತ, ಪೂಜೆ ಮಾಡಬಹುದೇ?

ಅಮಾವಾಸ್ಯೆಯ ದಿನವೇ ಸೂರ್ಯಗ್ರಹಣ ಸಂಭವಿಸುವುದು ಸಾಮಾನ್ಯವಾಗಿ ಖಗೋಳಶಾಸ್ತ್ರೀಯವಾಗಿ ಸಾಧ್ಯವಾಗುವ ವಿದ್ಯಮಾನವಾಗಿದೆ. ಏಕೆಂದರೆ ಸೂರ್ಯಗ್ರಹಣವು ಅಮಾವಾಸ್ಯೆಯ ಸಮಯದಲ್ಲೇ ಸಂಭವಿಸುತ್ತದೆ. ಹೀಗಾಗಿ ಭೀಮನ ಅಮಾವಾಸ್ಯೆಯ ದಿನ ಸೂರ್ಯಗ್ರಹಣವೂ ಸಂಭವಿಸುತ್ತಿರುವುದು ಧಾರ್ಮಿಕವಾಗಿ ವಿಶೇಷ ದಿನವೆಂಬ ಕುತೂಹಲಕ್ಕೆ ಕಾರಣವಾಗಿದೆ. 2026ರ ಆಗಸ್ಟ್ 12ರಂದು ಬರುವ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಹಾಗಾಗಿ ಸೂತಕ ಕಾಲವಿರುವುದಿಲ್ಲ. ಯಾವುದೇ ಭಯವಿಲ್ಲದೆ ಭೀಮನ ಅಮಾವಾಸ್ಯೆ ಅಥವಾ ಜ್ಯೋತಿರ್ಭೀಮೇಶ್ವರ ವ್ರತವನ್ನು ಆಚರಿಸಬಹುದು. ದಾಂಪತ್ಯ ಸೌಹಾರ್ದ, ಕರ್ಮ ವಿಮೋಚನೆ ಮತ್ತು ಸತ್ಕಾರ್ಯಗಳಿಗೆ ಈ ದಿನ ವಿಶೇಷ ಮಹತ್ವ ಹೊಂದಿದೆ.

ಪೂಜೆ, ವ್ರತ ಆಚರಣೆ ಹೇಗಿರುತ್ತದೆ?

ಭೀಮನ ಅಮಾವಾಸ್ಯೆಯಂದು ಮಹಿಳೆಯರು ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ, ಮನೆಯ ದೇವರ ಕೋಣೆಯಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಕೆಲವರು ಉಪವಾಸ ಅಥವಾ ವ್ರತ ಆಚರಿಸಿ, ದೀಪ ಬೆಳಗಿಸಿ ದೇವರ ಆರಾಧನೆ ಮಾಡುತ್ತಾರೆ. ಪತಿಯ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುವುದು ಈ ಆಚರಣೆಯ ಪ್ರಮುಖ ಭಾಗವಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Gautam Adani: ಅಮೆರಿಕ ಕೋರ್ಟ್‌ನಿಂದ ಎಲ್ಲಾ ಆರೋಪ ವಜಾ; ಸತ್ಯಕ್ಕೆ ಸಿಕ್ಕ ಜಯ ಎಂದ ಗೌತಮ್ ಅದಾನಿ! – Kannada News | Faith In Truth Unwavering: Gautam Adani Welcomes US Court Dismissing Charges

ನವದೆಹಲಿ, ಆಗಸ್ಟ್ 11: ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಹಾಗೂ ಸಾಗರ್ ಅದಾನಿ ಅವರ ಮೇಲಿದ್ದ ಎಲ್ಲಾ ಕ್ರಿಮಿನಲ್ ಮತ್ತು ವಂಚನೆ ಆರೋಪಗಳನ್ನು ಅಮೆರಿಕದ ನ್ಯಾಯಾಲಯವು ಅಧಿಕೃತವಾಗಿ ವಜಾಗೊಳಿಸಿದೆ. ಈ ಮಹತ್ವದ ತೀರ್ಪನ್ನು ಗೌತಮ್ ಅದಾನಿ ಅವರು ಅತ್ಯಂತ ವಿನಮ್ರತೆಯಿಂದ ಸ್ವಾಗತಿಸಿದ್ದು, ಸತ್ಯ ಮತ್ತು ಕಾನೂನಿನ ಮೇಲಿನ ತಮ್ಮ ನಂಬಿಕೆ ಮತ್ತಷ್ಟು ಗಟ್ಟಿಯಾಗಿದೆ ಎಂದು ಹೇಳಿದ್ದಾರೆ. ಅಮೆರಿಕದ ನ್ಯೂಯಾರ್ಕ್‌ನ ಈಸ್ಟರ್ನ್ ಡಿಸ್ಟ್ರಿಕ್ಟ್ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶರಾದ ನಿಕೋಲಸ್ ಗರಾಫಿಸ್, ಫೆಡರಲ್ ಪ್ರಾಸಿಕ್ಯೂಟರ್‌ಗಳು ಸಲ್ಲಿಕೆ ಮಾಡಿದ್ದ ಮನವಿಯನ್ನು ಪುರಸ್ಕರಿಸಿ ಈ ಮಹತ್ವದ ಆದೇಶ ಹೊರಡಿಸಿದ್ದಾರೆ.

‘ಸತ್ಯದ ಮೇಲಿನ ನಂಬಿಕೆ ಎಂದಿಗೂ ಅಲುಗಾಡಲಿಲ್ಲ’ ಎಂದ ಅದಾನಿ:

ನ್ಯಾಯಾಲಯದ ಈ ಆದೇಶ ಹೊರಬೀಳುತ್ತಿದ್ದಂತೆಯೇ ಸಾಮಾಜಿಕ ಜಾಲತಾಣ ‘X’ (ಟ್ವಿಟರ್) ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಗೌತಮ್ ಅದಾನಿ, “ಅಮೆರಿಕ ನ್ಯಾಯಾಲಯದ ತೀರ್ಪನ್ನು ನಾನು ವಿನಮ್ರತೆಯಿಂದ ಸ್ವಾಗತಿಸುತ್ತೇನೆ. ಈ ಇಡೀ ಸವಾಲಿನ ಅವಧಿಯಲ್ಲಿ, ಸತ್ಯ, ನಿಷ್ಪಕ್ಷಪಾತ ಮತ್ತು ಕಾನೂನಿನ ಆಡಳಿತದ ಮೇಲಿನ ನಮ್ಮ ನಂಬಿಕೆ ಎಂದಿಗೂ ಅಲುಗಾಡಲಿಲ್ಲ” ಎಂದು ಬರೆದುಕೊಂಡಿದ್ದಾರೆ.

ಮುಂದುವರಿದು, “ನಮ್ಮ ಮೇಲೆ, ವ್ಯವಸ್ಥೆಯ ಮೇಲೆ ಮತ್ತು ಭಾರತದ ನ್ಯಾಯ ಒದಗಿಸುವ ಸಾಮರ್ಥ್ಯದ ಮೇಲೆ ನಂಬಿಕೆ ಕಳೆದುಕೊಳ್ಳದ ಪ್ರತಿಯೊಬ್ಬರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ದೇಶದ ನಿರ್ಮಾಣ, ಮೌಲ್ಯವರ್ಧನೆ ಮತ್ತು ಸ್ವಾರ್ಥ ಮೀರಿದ ಸಾಮಾಜಿಕ ಸೇವೆಗಾಗಿ ನಮ್ಮ ಬದ್ಧತೆ ಎಂದಿನಂತೆ ಮುಂದುವರಿಯಲಿದೆ. ಜೈ ಹಿಂದ್” ಎಂದು ಭಾವುಕರಾಗಿ ಟ್ವೀಟ್ ಮಾಡಿದ್ದಾರೆ.

ಪ್ರಕರಣ ಕೈಬಿಡಲು ಅಮೆರಿಕದ ನ್ಯಾಯಾಂಗ ಇಲಾಖೆ ನೀಡಿದ ಕಾರಣವೇನು?

ಭಾರತದಲ್ಲಿ ಸೌರಶಕ್ತಿ ಗುತ್ತಿಗೆ ಪಡೆಯಲು ಲಂಚದ ಆಮಿಷ ಒಡ್ಡಿದ ಹಾಗೂ ಅಮೆರಿಕದ ಹೂಡಿಕೆದಾರರನ್ನು ಹಾದಿ ತಪ್ಪಿಸಿದ ಆರೋಪಗಳನ್ನು ಈ ಹಿಂದೆ ಅದಾನಿ ಮತ್ತು ಇತರರ ಮೇಲೆ ಹೊರಿಸಲಾಗಿತ್ತು. ಆದರೆ, ಜುಲೈ ತಿಂಗಳಿನಲ್ಲಿಯೇ ಅಮೆರಿಕದ ನ್ಯಾಯಾಂಗ ಇಲಾಖೆ (DOJ) ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿ, ಈ ಕ್ರಿಮಿನಲ್ ಪ್ರಕರಣವನ್ನು ದಾಖಲಿಸುವುದೇ ತಪ್ಪು ಎಂದು ಸ್ಪಷ್ಟಪಡಿಸಿತ್ತು.

ಈ ಪ್ರಕರಣವು ಸಂಪೂರ್ಣವಾಗಿ ಭಾರತಕ್ಕೆ ಸಂಬಂಧಿಸಿದ್ದಾಗಿದೆ. ಭಾರತೀಯರು ಇನ್ನೊಬ್ಬ ಭಾರತೀಯನಿಗೆ ಲಂಚ ನೀಡಿ, ಭಾರತದ ಜನರಿಗೆ ವಿದ್ಯುತ್ ಪೂರೈಸಲು ಭಾರತದಲ್ಲೇ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಆರೋಪ ಇದಾಗಿತ್ತು. ಇದಕ್ಕೆ ಅಮೆರಿಕ ಜಾಗತಿಕ ಪೊಲೀಸನಂತೆ ವರ್ತಿಸುವುದು ರಾಜತಾಂತ್ರಿಕ ಕಲಹಕ್ಕೆ ಕಾರಣವಾಗಬಹುದು.

ಅದಾನಿ ಅವರ ಮೇಲಿನ ಸೆಕ್ಯೂರಿಟಿಸ್ ವಂಚನೆ ಆರೋಪಗಳಿಗೆ ಬಲವಾದ ಕಾನೂನು ಆಧಾರಗಳೇ ಇರಲಿಲ್ಲ. ಅದಾನಿ ಗ್ರೂಪ್ ಅಮೆರಿಕದಲ್ಲಿ ಹೂಡಿಕೆ ಮಾಡಲು ಮುಂದಾಗಿರುವ ಕಾರಣಕ್ಕೆ ಈ ಪ್ರಕರಣ ವಜಾ ಮಾಡಲಾಗುತ್ತಿದೆ ಎಂಬ ಮಾಧ್ಯಮಗಳ ವರದಿಯನ್ನು ಇಲಾಖೆ ಸ್ಪಷ್ಟವಾಗಿ ತಳ್ಳಿಹಾಕಿದೆ. ಹೂಡಿಕೆಯ ವಿಷಯಕ್ಕೂ, ಈ ಕಾನೂನು ನಿರ್ಧಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪ್ರಿನ್ಸಿಪಲ್ ಅಸೋಸಿಯೇಟ್ ಡೆಪ್ಯುಟಿ ಅಟಾರ್ನಿ ಜನರಲ್ ಆರ್. ಟ್ರೆಂಟ್ ಮೆಕ್ಕಾಟರ್ ಸ್ಪಷ್ಟಪಡಿಸಿದ್ದಾರೆ. ಅಂತಿಮವಾಗಿ, ನ್ಯಾಯಾಧೀಶರು ಪ್ರಾಸಿಕ್ಯೂಷನ್ ಮಂಡಿಸಿದ ವಾದವನ್ನು ಒಪ್ಪಿಕೊಂಡು, ಅದಾನಿ ಗ್ರೂಪ್ ಮುಖ್ಯಸ್ಥರ ಮೇಲಿದ್ದ ಎಲ್ಲಾ ಕಾನೂನು ಚಾರ್ಜ್‌ಗಳನ್ನು ಮುಕ್ತಗೊಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:13 am, Tue, 11 August 26

Source link

Exit mobile version