ವಡಗೇರ, ಮಾ.14: ತನ್ನ ಪಾಡಿಗೆ ತಾನು ಜಮೀನಿನಲ್ಲಿ ಮನೆ ಮಾಡಿಕೊಂಡು ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದ ವೃದ್ಧನೊಬ್ಬನನ್ನು ದುಷ್ಕರ್ಮಿಗಳು ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಯಾದಗಿರಿಯ ವಡಗೇರ ತಾಲೂಕಿನ ಗೋನಾಳ ಗ್ರಾಮದಲ್ಲಿ ನಡೆದಿದೆ. 76 ವರ್ಷದ ಹಂಪಣ್ಣ ಸಜ್ಜನ ಕೊಲೆಯಾದ ದುರ್ದೈವಿ. ಹಂಪಣ್ಣ ಸಜ್ಜನ ಅವರಿಗೆ ಮೂವರು ಗಂಡು ಮಕ್ಕಳಿದ್ದು, 15 ವರ್ಷಗಳ ಹಿಂದೆಯೇ ಆಸ್ತಿ ಹಂಚಿಕೆ ಮಾಡಿ ತನಗಾಗಿ 12 ಎಕರೆ ಜಮೀನು ಉಳಿಸಿಕೊಂಡಿದ್ದರು. 12 ವರ್ಷಗಳ ಹಿಂದೆ ಪತ್ನಿ ನಿಧನರಾದ ಬಳಿಕ, ಮಕ್ಕಳು ಗ್ರಾಮದಲ್ಲಿದ್ದರೂ ಹಂಪಣ್ಣ ಜಮೀನಿನಲ್ಲಿ ಪುಟ್ಟ ಮನೆ ನಿರ್ಮಿಸಿಕೊಂಡು ಒಬ್ಬಂಟಿಯಾಗಿ ವಾಸವಿದ್ದರು.
ನಿನ್ನೆ ರಾತ್ರಿ ಯಾರೋ ದುಷ್ಕರ್ಮಿಗಳು ಹಂಪಣ್ಣ ಮಲಗಿದ್ದಾಗ ಕಲ್ಲಿನಿಂದ ತಲೆ ಜಜ್ಜಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಇಂದು ಮುಂಜಾನೆ ಗ್ರಾಮಕ್ಕೆ ಹಾಲು ಪಡೆಯಲು ವೃದ್ಧ ಬಾರದಿದ್ದಾಗ ಅನುಮಾನಗೊಂಡು ಜಮೀನಿಗೆ ಹೋಗಿ ನೋಡಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ದೌಡಾಯಿಸಿದ ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್ ಹಾಗೂ ವಡಗೇರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಪ್ರಾಥಮಿಕ ತನಿಖೆಯ ವೇಳೆ, ಹಂಪಣ್ಣ ಅವರು ಪರ ಸ್ತ್ರೀಯರ ಜೊತೆ ಅನೈತಿಕ ಸಂಬಂಧ ಹೊಂದಿದ್ದರು ಎಂಬ ಮಾಹಿತಿ ಗ್ರಾಮಸ್ಥರಿಂದ ಲಭ್ಯವಾಗಿದೆ. ಇದೇ ಕಾರಣಕ್ಕೆ ದ್ವೇಷ ಸಾಧಿಸಿ ಕೊಲೆ ಮಾಡಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಯಾದಗಿರಿ ಸರ್ಕಲ್ ಇನ್ಸ್ಪೆಕ್ಟರ್ ನೇತೃತ್ವದ ತಂಡ ಆರೋಪಿಗಳ ಪತ್ತೆಗೆ ಬಲೆ ಬೀಸಿದೆ.
ಈ ಬಾರಿಯ ಟಿ20 ವಿಶ್ವಕಪ್ ತಂಡದಲ್ಲಿ ಜಿತೇಶ್ ಶರ್ಮಾ ಕಾಣಿಸಿಕೊಂಡಿರಲಿಲ್ಲ. ನ್ಯೂಝಿಲೆಂಡ್ ವಿರುದ್ಧದ ಟಿ20 ಸರಣಿಗೂ ಮುನ್ನ ಭಾರತ ತಂಡದ ಭಾಗವಾಗಿದ್ದ ಜಿತೇಶ್ ಅವರನ್ನು ಏಕಾಏಕಿ ತಂಡದಿಂದ ಕೈ ಬಿಡಲಾಗಿತ್ತು. ಹೀಗೆ ತಂಡದಿಂದ ಕೈ ಬಿಟ್ಟಿದ್ದರ ಬಗ್ಗೆ ಯುವ ವಿಕೆಟ್ ಕೀಪರ್ ಬ್ಯಾಟರ್ ಮನಬಿಚ್ಚಿ ಮಾತನಾಡಿದ್ದಾರೆ.
ಭಾರತ ತಂಡದಿಂದ, ಅದರಲ್ಲೂ ಟಿ20 ವಿಶ್ವಕಪ್ನಿಂದ ನನ್ನನ್ನು ಕೈ ಬಿಟ್ಟಿದ್ದರ ಬಗ್ಗೆ ನನಗೆ ಯಾವುದೇ ವಿಷಾದವಿಲ್ಲ. ಏಕೆಂದರೆ ನನ್ನ ತಂದೆಗೆ ವಿಶ್ವಕಪ್ಗಿಂತ ಹೆಚ್ಚಾಗಿ ನನ್ನ ಅಗತ್ಯವಿತ್ತು ಎಂದು ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಜಿತೇಶ್ ಶರ್ಮಾ, ಫೆಬ್ರವರಿ 1 ರಂದು ನನ್ನ ತಂದೆ ತೀರಿಕೊಂಡಿದ್ದಾರೆ. ನಾನು ತಂಡಕ್ಕೆ ಆಯ್ಕೆಯಾಗದ ಕಾರಣ, ನನಗೆ ತಂದೆಯ ಕೊನೆಯ ದಿನಗಳಲ್ಲಿ ಅವರ ಜೊತೆ ಇರಲು ಸಾಧ್ಯವಾಯಿತು. “ನನ್ನ ತಂದೆಗೆ ವಿಶ್ವಕಪ್ಗಿಂತ ಹೆಚ್ಚಾಗಿ ನನ್ನ ಅಗತ್ಯವಿತ್ತು” ಎಂದು ಅವರು ಭಾವನಾತ್ಮಕವಾಗಿ ಹೇಳಿದ್ದಾರೆ.
ಆರಂಭದಲ್ಲಿ ತಂಡದಿಂದ ಹೊರಬಿದ್ದಾಗ ಬೇಸರವಾಗಿದ್ದರೂ, ತಂದೆಯ ಸಾವಿನ ನಂತರ ಆ ನೋವು ಮಾಯವಾಯಿತು. ಏಕೆಂದರೆ ಒಬ್ಬ ಮಗನಾಗಿ ಅವರ ಕೊನೆಯ ಕ್ಷಣಗಳಲ್ಲಿ ಅವರ ಜೊತೆಗಿದ್ದುದು ನನಗೆ ತೃಪ್ತಿ ತಂದಿದೆ. ಹಾಗಾಗಿ ವಿಶ್ವಕಪ್ ತಪ್ಪಿದ್ದಕ್ಕೆ ನನಗೆ ಈಗ ಯಾವುದೇ ವಿಷಾದವಿಲ್ಲ ಎಂದು ಜಿತೇಶ್ ಶರ್ಮಾ ಹೇಳಿದ್ದಾರೆ.
ಜಿತೇಶ್ ಶರ್ಮಾ ಅವರ ತಂದೆ ಮೋಹನ್ ಶರ್ಮಾ ಅವರು ಸುದೀರ್ಘ ಕಾಯಿಲೆಯಿಂದ ಬಳಲುತ್ತಿದ್ದರು. ಅಲ್ಲದೆ ಕಳೆದ ತಿಂಗಳು ಒಂದನೇ ತಾರೀಖಿನಂದು ನಿಧನರಾಗಿದ್ದರು. ಆ ಸಮಯದಲ್ಲಿ ಟಿ20 ವಿಶ್ವಕಪ್ಗೆ ಭಾರತ ತಂಡದ ಆಯ್ಕೆ ನಡೆಯುತ್ತಿತ್ತು. ಜಿತೇಶ್ ಅವರು ತಂಡದಲ್ಲಿ ಸ್ಥಾನ ಪಡೆಯದಿದ್ದಾಗ ಆರಂಭದಲ್ಲಿ ನಿರಾಸೆಗೊಂಡಿದ್ದರು.
ಆದರೆ, ತಂದೆಯ ಆರೋಗ್ಯ ಕ್ಷೀಣಿಸುತ್ತಿದ್ದ ಕಾರಣ, ಅವರು ತಂಡದಲ್ಲಿಲ್ಲದ ಕಾರಣದಿಂದಲೇ ತಮ್ಮ ತಂದೆಯ ಕೊನೆಯ 7 ದಿನಗಳ ಕಾಲ ಅವರ ಜೊತೆಗಿರಲು ಸಾಧ್ಯವಾಯಿತು ಎಂದು ಜಿತೇಶ್ ಶರ್ಮಾ ತೃಪ್ತಿ ವ್ಯಕ್ತಪಡಿಸಿದ್ದಾರೆ.
ಇನ್ನು ತಂದೆಯ ನಿಧನದ ನಂತರ, ಮನೆಯ ಹಿರಿಯ ಮಗನಾಗಿ ತಮ್ಮ ತಾಯಿ ಮತ್ತು ತಮ್ಮನ ಜವಾಬ್ದಾರಿಯನ್ನು ಹೊತ್ತುಕೊಂಡಿರುವುದಾಗಿ ಜಿತೇಶ್ ಶರ್ಮಾ ತಿಳಿಸಿದ್ದಾರೆ. ಕ್ರಿಕೆಟ್ ಜೀವನದ ಏರಿಳಿತಗಳಿಗಿಂತ ಕುಟುಂಬದ ಸಾಮೀಪ್ಯ ದೊಡ್ಡದು ಎಂಬುದು ಅವರ ನಿಲುವು. ಇದೀಗ ಸಂಪೂರ್ಣ ಕುಟುಂಬದ ಜವಾಬ್ದಾರಿ ನನ್ನ ಮೇಲಿದೆ. ಹೀಗಾಗಿ ಅವರೊಂದಿಗೆ ನಾನು ಸಮಯ ಕಳೆಯಬೇಕಿದೆ ಎಂದು ತಿಳಿಸಿದರು.
ಇದೀಗ ಆರ್ಸಿಬಿ ಕ್ಯಾಂಪ್ ಸೇರಿರುವ ಜಿತೇಶ್ ಶರ್ಮಾ ಮುಂಬರುವ ಐಪಿಎಲ್ಗಾಗಿ ಸಿದ್ಧತೆಗಳನ್ನು ಆರಂಭಿಸಿದ್ದಾರೆ. ಈ ಮೂಲಕ ಐಪಿಎಲ್ 2026 ರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಚಾಂಪಿಯನ್ ಪಟ್ಟ ಉಳಿಸಿಕೊಡುವ ಭರವಸೆ ನೀಡಿದ್ದಾರೆ.
‘ಶ್ರೀ ಗಂಧದ ಗುಡಿ’ ಧಾರಾವಾಹಿಯಿಂದ ಸಂಜನಾ ಬುರ್ಲಿ ಅವರು ಹೊರ ಬಂದಿದ್ದಾರೆ. ಅವರು ಧಾರಾವಾಹಿಯನ್ನು ಬಿಟ್ಟಿದ್ದು ಏಕೆ ಎಂಬ ಪ್ರಶ್ನೆ ಅನೇಕರಿಗೆ ಮೂಡಿತ್ತು. ಸ್ವತಃ ಅವರೇ ಸ್ಪಷ್ಟನೆ ನೀಡಿದ್ದಾರೆ. ‘ನಾನು ವಿವಾಹ ಆಗುತ್ತಿರುವ ಕಾರಣದಿಂದ ಧಾರಾವಾಹಿಯಿಂದ ಹೊರ ಬಂದಿದ್ದೇನೆ’ ಎಂದು ಅವರು ಹೇಳಿದ್ದಾರೆ. ಹೊಸ ಪಾತ್ರಧಾರಿ, ಸ್ನೇಹಾ ಮಂಜುನಾಥ್ಗೂ ಪ್ರೀತಿ ತೋರಿಸುವಂತೆ ಅವರು ಕೋರಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.
ಕೋಲ್ಕತ್ತಾ, ಮಾರ್ಚ್ 14: ಭಾರತೀಯ ಚುನಾವಣಾ ಆಯೋಗವು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ( Assembly Election) ದಿನಾಂಕವನ್ನು ಮಾರ್ಚ್ 16ರಂದು ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ. ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಬಗ್ಗೆ ಚರ್ಚೆ ನಡೆಯುತ್ತಿರುವ ಈ ಸಮಯದಲ್ಲಿ, ಮಾರ್ಚ್ 14 ರಂದು ಕೋಲ್ಕತ್ತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿಯ ‘ಪರಿವರ್ತನ್ ಯಾತ್ರೆ’ಯ ಸಮಾರೋಪ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಇದಾದ ಎರಡು ದಿನಗಳ ನಂತರ, ಅಂದರೆ ಮಾರ್ಚ್ 16 ರಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.
ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಎರಡು ಹಂತಗಳಲ್ಲಿ ನಡೆಯುವ ಸಾಧ್ಯತೆಯಿದೆ. ಮೊದಲ ಹಂತವು ಎರಡನೇ ವಾರದ ಕೊನೆಯಲ್ಲಿ ಅಥವಾ ಏಪ್ರಿಲ್ ಮೂರನೇ ವಾರದಲ್ಲಿ ನಡೆಯಬಹುದು. ಬಂಗಾಳವನ್ನು ಹೊರತುಪಡಿಸಿ, ಆಯೋಗವು ಇತರ ನಾಲ್ಕು ರಾಜ್ಯಗಳಾದ ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೇರಿಗಳಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಅದೇ ದಿನ ಘೋಷಿಸಬಹುದು.
ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಜೊತೆಗೆ, ಬಿಜೆಪಿ, ಸಿಪಿಐ(ಎಂ) ಮತ್ತು ಕಾಂಗ್ರೆಸ್ ಸೇರಿದಂತೆ ಹೆಚ್ಚಿನ ರಾಜಕೀಯ ಪಕ್ಷಗಳು, ಎರಡು ದಿನಗಳ ರಾಜ್ಯ ಭೇಟಿಯ ಸಂದರ್ಭದಲ್ಲಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ನೇತೃತ್ವದ ಇಸಿಐನ ಪೂರ್ಣ ಪೀಠವನ್ನು ಒಂದು ಹಂತದಲ್ಲಿ ಅಥವಾ ಗರಿಷ್ಠ ಎರಡು ಹಂತಗಳಲ್ಲಿ ಚುನಾವಣೆ ನಡೆಸುವಂತೆ ಒತ್ತಾಯಿಸಿವೆ.
ಪಶ್ಚಿಮ ಬಂಗಾಳದಲ್ಲಿ ಎರಡು ಹಂತಗಳಲ್ಲಿ ವಿಧಾನಸಭಾ ಚುನಾವಣೆಗಳನ್ನು ನಡೆಸುವುದರಿಂದ ಚುನಾವಣೆಗೆ ಸಂಬಂಧಿಸಿದ ಹಿಂಸಾಚಾರವನ್ನು ತಡೆಯಲು ಸಹಾಯವಾಗುತ್ತದೆ, ಏಕೆಂದರೆ ದುಷ್ಕರ್ಮಿಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆರಳಿ ಗೊಂದಲ ಸೃಷ್ಟಿಸಲು ಸಮಯ ಪಡೆಯುವುದಿಲ್ಲ.
ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ಈ ಅಂಶವನ್ನು ಸಹ ಪರಿಗಣಿಸಲಾಗುವುದು ಎಂದು ರಾಷ್ಟ್ರೀಯ ಚುನಾವಣಾ ಸಮಿತಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಲ್ಲಿಯವರೆಗೆ, ಈ 60 ಲಕ್ಷ ಮತದಾರರಲ್ಲಿ ಕೇವಲ 10 ಲಕ್ಷ ಪ್ರಕರಣಗಳನ್ನು ಮಾತ್ರ ರಾಜ್ಯದಲ್ಲಿ ನ್ಯಾಯಾಂಗ ಅಧಿಕಾರಿಗಳು ವಿಲೇವಾರಿ ಮಾಡಿದ್ದಾರೆ. ವಿಲೇವಾರಿಯಾದ 10 ಲಕ್ಷ ಪ್ರಕರಣಗಳಲ್ಲಿ, ಸುಮಾರು 3.5 ರಿಂದ 4 ಲಕ್ಷ ಮತದಾರರ ಮತದಾನದ ಹಕ್ಕನ್ನು ತಿರಸ್ಕರಿಸಲಾಗಿದೆ ಎಂದು ತಿಳಿದುಬಂದಿದೆ.
ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿ (ಡಬ್ಲ್ಯೂಬಿಸಿಇಒ) ಮನೋಜ್ ಅಗರ್ವಾಲ್ ಅವರ ಕಚೇರಿಯ ಅಧಿಕಾರಿಗಳ ಒಂದು ವಿಭಾಗವು, ಉಳಿದ 50 ಲಕ್ಷ ಮತದಾರರ ದಾಖಲೆಗಳು ಮತ್ತು ಇತರ ವಿವರಗಳನ್ನು ಸುಮಾರು 800 ನ್ಯಾಯಾಂಗ ಅಧಿಕಾರಿಗಳು 20 ರಿಂದ 25 ದಿನಗಳ ಸೀಮಿತ ಸಮಯದೊಳಗೆ, ಅಂದರೆ ಮೊದಲ ಹಂತದ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನಾಂಕದವರೆಗೆ ಕೂಲಂಕಷವಾಗಿ ಪರಿಶೀಲಿಸಿದ ನಂತರ ಅವರ ಪ್ರಕರಣಗಳನ್ನು ತೆರವುಗೊಳಿಸುವುದು ಕಷ್ಟಕರ ಎಂದು ಭಾವಿಸಿದ್ದಾರೆ.
ನ್ಯಾಯಾಂಗ ಅಧಿಕಾರಿಗಳಿಂದ ಮತದಾನದ ಹಕ್ಕು ತಿರಸ್ಕರಿಸಲ್ಪಟ್ಟ ಜನರು ಮುಂದಿನ ದಿನಗಳಲ್ಲಿ ಪೂರಕ ಪಟ್ಟಿಯಿಂದ ತಮ್ಮ ಹೆಸರುಗಳನ್ನು ಅಳಿಸುವುದನ್ನು ಪ್ರಶ್ನಿಸಿ ನ್ಯಾಯಮಂಡಳಿಯ ಮೆಟ್ಟಿಲೇರಿದರೆ ಈ ಪ್ರಕ್ರಿಯೆಯು ಮತ್ತಷ್ಟು ಅಪಾಯಕ್ಕೆ ಸಿಲುಕಬಹುದು.
ಬೆಂಗಳೂರು, ಮಾರ್ಚ್ 14: ಈ ನಡುವೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ವಾಯು ಗುಣಮಟ್ಟ (Bengaluru Air Quality) ಕುಸಿತ ಕಂಡಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ನಗರಗಳ ಗಾಳಿಯ ಕಳಪೆ ಗುಣಮಟ್ಟ, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಬೆಂಗಳೂರು, ಕಲಬುರ್ಗಿ, ಬಳ್ಳಾರಿ ಸೇರಿದಂತೆ ಹಲವೆಡೆ ಇಂದು ವಾಯು ಗುಣಮಟ್ಟ 150 ದಾಟಿದೆ. ರಾಜ್ಯದೆಲ್ಲೆಡೆ ಬಿಸಿಲಿನ ಬೇಗೆ ಹೆಚ್ಚಾಗಿದ್ದು ಈ ತಿಂಗಳು ಪೂರ್ತಿ ಇದೇ ವಾತಾವರಣ ಇರಲಿದೆ.
ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 155ಕ್ಕೆ ತಲುಪಿದೆ. ಕೆಲ ದಿನಗಳಿಂದ ಉಡುಪಿ, ಮಂಗಳೂರು ಸೇರಿದಂತೆ ಹಲವು ಜಿಲ್ಲೆಗಳ ಏರ್ ಕ್ವಾಲಿಟಿ ತೀರಾ ಕಳಪೆ ಮಟ್ಟಕ್ಕೆ ಇಳಿದಿತ್ತು. ಆದರೆ ಇಂದು ಅದೇ ಉಡುಪಿ, ಮಂಗಳೂರು ಸೇರಿದಂತೆ ಹಲವೆಡೆಯ ವಾಯು ಗುಣಮಟ್ಟ 150ಕ್ಕಿಂತ ಹೆಚ್ಚಾಗಿದೆ. ಆದರೆ ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.
ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)
ದಳಪತಿ ವಿಜಯ್ ಅವರು (Thalapathy Vijay) ಜೇಸನ್ ಸಂಜಯ್ ಅವರು ಈ ವರ್ಷ ಸಿನಿಮಾ ನಿರ್ದೇಶಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿ ಮಕ್ಕಳು, ಹೀರೋ ಆಗುವ ಪ್ರಯತ್ನ ಮಾಡುತ್ತಾರೆ. ಆದರೆ, ವಿಜಯ್ ಪುತ್ರ ಬೇರೆಯದೇ ರೀತಿಯ ಪ್ಲ್ಯಾನ್ ಹೊಂದಿದ್ದಾರೆ. ಅವರು ತಮ್ಮ ಜೊತೆ ತಂದೆ ಹೆಸರು ಸೇರಿಸಿಕೊಳ್ಳಲು ನಿರಾಕರಿಸಿದ್ದಾರೆ. ಬದಲಿಗೆ ತಾಯಿ ಹೆಸರನ್ನು ಸೇರಿಸಿಕೊಳ್ಳುವ ಪ್ಲ್ಯಾನ್ ಅಲ್ಲಿದ್ದಾರೆ.
ದಳಪತಿ ವಿಜಯ್ ಅವರು ನಟಿಯ ಜೊತೆಗೆ ಅಫೇರ್ ಹೊಂದಿದ್ದಾರೆ ಎಂದು ಅವರ ಪತ್ನಿ ಆರೋಪಿಸಿದರು. ಈ ಆರೋಪದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು. ಅದು ತ್ರಿಷಾ ಇರಬಹುದು ಎಂದು ಎಲ್ಲರೂ ಊಹಿಸುತ್ತಿದ್ದಾರೆ. ಈ ಚರ್ಚೆಯ ಮಧ್ಯೆ ದಳಪತಿ ವಿಜಯ್ ಅವರನ್ನು ಇನ್ಸ್ಟಾಗ್ರಾಮ್ ಅಲ್ಲಿ ಜೇಸನ್ ಅನ್ಫಾಲೋ ಮಾಡಿದ್ದಾರೆ. ಈಗ ಅವರು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.
‘ಸಿಗ್ಮಾ’ ಹೆಸರಿನ ಸಿನಿಮಾನ ಜೇಸನ್ ನಿರ್ದೇಶನ ಮಾಡುತ್ತಿದ್ದಾರೆ. ಪ್ರತಿ ಸಿನಿಮಾ ರಿಲೀಸ್ ಆಗುವಾಗ ನಿರ್ದೇಶಕನ ಹೆಸರನ್ನು ದೊಡ್ಡದಾಗಿ ಹಾಕಲಾಗುತ್ತದೆ. ಈ ಮೊದಲು ಜೇಸನ್ ಅವರು ‘ಜೇಸನ್ ಸಂಜಯ್ ವಿ’ ಎಂದು ಇಟ್ಟುಕೊಳ್ಳಲು ನಿರ್ಧರಿಸಿದ್ದರು. ಆದರೆ, ಸದ್ಯದ ಬೆಳವಣಿಗೆಯಿಂದ ಅವರಿಗೆ ಬೇಸರ ಆಗಿದೆ. ಹೀಹಾಗಿ, ವಿ ಬದಲು ಎಸ್ (ತಾಯಿ ಸಂಗೀತಾ) ಸೇರಿಸಿಕೊಳ್ಳಲು ಅವರು ನಿರ್ಧರಿಸಿದ್ದಾರೆ. ಸದ್ಯ ಈ ವಿಷಯ ಇನ್ನೂ ಅಧಿಕೃತ ಆಗಿಲ್ಲ. ಸಿನಿಮಾ ರಿಲೀಸ್ ಸಂದರ್ಭದಲ್ಲಿ ಈ ವಿಷಯ ತಿಳಿಯಲಿದೆ.
ವಿಜಯ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದಾರೆ. ಅವರು ಈಗ ರಾಜಕೀಯಕ್ಕೆ ಕಾಲಿಡುತ್ತಿದ್ದಾರೆ. ಸಂಗೀತಾ ಹಾಗೂ ವಿಜಯ್ 1999ರಲ್ಲಿ ವಿವಾಹ ಆದರು. ಈ ದಂಪತಿಗೆ ಜೇಸನ್ ಹಾಗೂ ದಿವ್ಯಾ ಸಾಶಾ ಹೆಸರಿನ ಮಕ್ಕಳಿದ್ದಾರೆ. ಸಂಜಯ್ ನಿರ್ದೇಶನ ಮಾಡುತ್ತಿರುವ ಸಿನಿಮಾ ಆ್ಯಕ್ಷನ್ ಅಡ್ವೆಂಚರ್ ಕಾಮಿಡಿ ಶೈಲಿಯಲ್ಲಿ ಮೂಡಿಬರುತ್ತಿದೆ. ಲೈಕಾ ಪ್ರೊಡಕ್ಷನ್ ಇದನ್ನು ನಿರ್ಮಿಸುತ್ತಿದೆ. ಥಮನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಸಂದೀಪ್ ಕಿಶನ್ ಪ್ರಮುಖ ಪಾತ್ರದಲ್ಲಿ ಇದ್ದಾರೆ.
ಉಜ್ಜಯಿನಿ, ಮಾರ್ಚ್ 14: ಯುವಕನೊಬ್ಬನಿಗೆ ಪಕ್ಕದ ಮನೆಯ ವಿವಾಹಿತ ಮಹಿಳೆ ಮೇಲೆ ಕಣ್ಣು ಬಿದ್ದಿತ್ತು, ಆಕೆಯ ಒಳ ಉಡುಪುಗಳನ್ನು ಕದಿಯುತ್ತಿದ್ದ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ. ಈ ಘಟನೆಯು ಸಿಸಿಟವಿಯಲ್ಲಿ ಸೆರೆಯಾಗಿದ್ದು, ಈ ವಿಚಿತ್ರ ಪ್ರಕರಣವು ಪ್ರದೇಶದ ನಿವಾಸಿಗಳನ್ನು ಆಘಾತಕ್ಕೀಡು ಮಾಡಿದೆ. ಚಿಮನ್ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮನೆಯ ಹೊರಗೆ ಒಣಗಲು ಇಟ್ಟಿದ್ದ ಮಹಿಳೆಯ ಒಳ ಉಡುಪುಗಳು ಕಾಣೆಯಾಗುತ್ತಿವೆ ಎಂದು ಕುಟುಂಬವೊಂದು ದೂರು(Complaint) ನೀಡಿತ್ತು.
ಪೊಲೀಸರ ಪ್ರಕಾರ, ಧಂಚ ಭವನ ಪ್ರದೇಶದಲ್ಲಿ ವಾಸಿಸುವ ಕುಟುಂಬ ದೂರು ಕೊಟ್ಟಿದೆ. ತಮ್ಮ ಮನೆಯ ಹೊರಗೆ ಒಗೆದು ಹಗ್ಗದಲ್ಲಿ ನೇತುಹಾಕಿದ ಬಟ್ಟೆಗಳನ್ನು ರಾತ್ರಿ ಹೊತ್ತು ಕದಿಯುತ್ತಿದ್ದಾರೆ ಎಂದು ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಈ ಘಟನೆ ಬಗ್ಗೆ ಅನುಮಾನಗೊಂಡ ಕುಟುಂಬವು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿತು ಮತ್ತು ನಂತರ ಅದನ್ನು ಪೊಲೀಸರಿಗೆ ಹಸ್ತಾಂತರಿಸಿತು.
ಆ ವಿಡಿಯೋದಲ್ಲಿ ತಡರಾತ್ರಿಯಲ್ಲಿ ಯುವಕನೊಬ್ಬ ಮನೆ ಬಳಿ ಸಮೀಪಿಸುತ್ತಿರುವುದನ್ನು ತೋರಿಸಲಾಗಿದೆ. ಯಾರೂ ನೋಡುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸುತ್ತಲೂ ನೋಡಿದ ನಂತರ, ಅವನು ಮಹಿಳೆಯ ಒಳ ಉಡುಪುಗಳನ್ನು ಬಟ್ಟೆಯ ಹಗ್ಗದಿಂದ ತೆಗೆದು ಬೇಗನೆ ತೆಗೆದುಕೊಂಡು ಅಲ್ಲಿಂದ ಪರಾರಿಯಾಗುತ್ತಿದ್ದ.
ಸಿಸಿಟಿವಿ ಸಾಕ್ಷ್ಯಗಳ ಆಧಾರದ ಮೇಲೆ, ಪೊಲೀಸರು ಅದೇ ಪ್ರದೇಶದಲ್ಲಿ ವಾಸಿಸುವ ಮತ್ತು ದೂರುದಾರರ ಪಕ್ಕದ ಮನೆಯವರಾದ 25 ವರ್ಷದ ಅಂಕಿತ್ ಮಾಳವೀಯ ಎಂದು ಗುರುತಿಸಲಾಗಿದ್ದು, ಆತನನ್ನು ಬಂಧಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ, ಆರೋಪಿಯು ವಿವಾಹಿತ ಮಹಿಳೆಯ ಮೇಲೆ ಪ್ರೀತಿ ಹೊಂದಿದ್ದ ಎಂದು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಆ ಗೀಳಿನಿಂದ ಒಳ ಉಡುಪುಗಳನ್ನು ಕದ್ದಿದ್ದಾಗಿ ಅವನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆಯ ಸಮಯದಲ್ಲಿ ಆರೋಪಿಯು ಮಹಿಳೆಯ ಹೆಸರನ್ನು ತನ್ನ ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿರುವುದು ಪೊಲೀಸರಿಗೆ ಕಂಡುಬಂದಿದೆ. ಪ್ರಸ್ತುತ ಆತನನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಈ ಘಟನೆಯು ನೆರೆಹೊರೆಯ ನಿವಾಸಿಗಳಲ್ಲಿ ಆಶ್ಚರ್ಯ ಮತ್ತು ಕಳವಳವನ್ನು ಹುಟ್ಟುಹಾಕಿದ್ದು, ವಸತಿ ಪ್ರದೇಶಗಳಲ್ಲಿ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ವರದಿ ಮಾಡುವಂತೆ ಪೊಲೀಸರು ಜನರ ಬಳಿ ಮನವಿ ಮಾಡಿದ್ದಾರೆ.
2026ರ ಟಿ20 ವಿಶ್ವಕಪ್ ಫೈನಲ್ನಲ್ಲಿ ನ್ಯೂಝಿಲೆಂಡ್ ವಿರುದ್ಧ ಭಾರತ ಭರ್ಜರಿ ಜಯ ಸಾಧಿಸಿದ ನಂತರ, ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಆಟಗಾರರ ವೈಯಕ್ತಿಕ ಮೈಲಿಗಲ್ಲುಗಳ (ಶತಕ, ಅರ್ಧಶತಕ) ಕುರಿತು ಕಟುವಾದ ಮಾತುಗಳನ್ನಾಡಿದ್ದರು. ಭಾರತೀಯ ಕ್ರಿಕೆಟ್ನಲ್ಲಿ ಬಹಳ ಕಾಲದಿಂದ ನಾವು ವೈಯಕ್ತಿಕ ಮೈಲಿಗಲ್ಲುಗಳ ಬಗ್ಗೆಯೇ ಮಾತನಾಡುತ್ತಿದ್ದೇವೆ. ಇನ್ಮುಂದೆ ವೈಯಕ್ತಿಕ ದಾಖಲೆಗಳಿಗಾಗಿ ಆಡುವುದನ್ನು ನಿಲ್ಲಿಸಿ, ಟ್ರೋಫಿ ಗೆಲುವುದನ್ನು ಆಚರಿಸಬೇಕೆಂದು ಎಂದು ಗಂಭೀರ್ ಹೇಳಿಕೆ ನೀಡಿದ್ದರು.
ಗೌತಮ್ ಗಂಭೀರ್ ಅವರ ಈ ಹೇಳಿಕೆಯು ಟೀಮ್ ಇಂಡಿಯಾದ ದಿಗ್ಗಜರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ನೀಡಿದ ಎಚ್ಚರಿಕೆ ಎಂದು ಇಂಗ್ಲೆಂಡ್ನ ಮಾಜಿ ವೇಗಿ ಸ್ಟೀವ್ ಹಾರ್ಮಿಸನ್ ಅಭಿಪ್ರಾಯಪಟ್ಟಿದ್ದಾರೆ.
ರೋಹಿತ್ ಮತ್ತು ಕೊಹ್ಲಿ ಭಾರತೀಯ ಕ್ರಿಕೆಟ್ನ ದಿಗ್ಗಜರು. ಅತಿ ಹೆಚ್ಚು ಶತಕ ಮತ್ತು ದಾಖಲೆಗಳನ್ನು ಹೊಂದಿರುವವರು ಅವರೇ. ಆದ್ದರಿಂದ ಗಂಭೀರ್ ಅವರ ಮಾತುಗಳು ನೇರವಾಗಿ ಇವರಿಬ್ಬರಿಗೇ ಅನ್ವಯಿಸುತ್ತವೆ ಎಂದು ಹಾರ್ಮಿಸನ್ ಹೇಳಿದ್ದಾರೆ.
ಇಲ್ಲಿ ಒಂದು ಗೆಲುವಿನ ಬಳಿಕ ಇಂತಹ ಹೇಳಿಕೆ ನೀಡಬೇಕಾದ ಅವಶ್ಯಕತೆ ಇರಲಿಲ್ಲ. ಅದರಲ್ಲೂ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಆಟಗಾರರು ದಾಖಲೆಗಳಿಗಾಗಿ ಆಡಿಲ್ಲ ಎಂಬುದು ಗಂಭೀರ್ಗೆ ಗೊತ್ತಿತ್ತು. ಇದಾಗ್ಯೂ ಅವರು ಇನ್ಮುಂದೆ ದಾಖಲೆಗಳಿಗಾಗಿ ಆಡುವುದನ್ನು ನಿಲ್ಲಿಸಬೇಕೆಂದು ಹೇಳಿರುವುದು ಯಾರಿಗೆ? ಎಂಬ ಪ್ರಶ್ನೆ ಮೂಡುತ್ತದೆ.
ಈ ಪ್ರಶ್ನೆಗೆ ಉತ್ತರ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ. ಈ ಇಬ್ಬರನ್ನು ಗುರಿಯಾಗಿಸಿ ಗಂಭೀರ್ ಪರೋಕ್ಷ ಟಾಂಗ್ ನೀಡಿದ್ದಾರೆ. ಏಕೆಂದರೆ ರೋಹಿತ್ ಹಾಗೂ ಕೊಹ್ಲಿ ಹೆಸರಿನಲ್ಲಿ ಹಲವು ದಾಖಲೆಗಳಿವೆ. ಇದೀಗ ಅವರು ತಂಡದಲ್ಲಿಲ್ಲ. ಮುಂದೆ ಏಕದಿನ ಸರಣಿ ವೇಳೆ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಅದಕ್ಕೂ ಮುನ್ನ ಇಬ್ಬರಿಗೆ ದಾಖಲೆಗಳನ್ನು ಬದಿಗಿರಿಸಿ ಟ್ರೋಫಿ ಗೆಲ್ಲಲು ನೋಡಬೇಕು ಎಂದು ಗೌತಮ್ ಗಂಭೀರ್ ಪರೋಕ್ಷ ಎಚ್ಚರಿಕೆ ರವಾನಿಸಿದ್ದಾರೆ ಎಂದು ಸ್ಟೀವ್ ಹಾರ್ಮಿಸನ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಮುಂದಿನ ಏಕದಿನ ಸರಣಿಗಳಿಗೆ ಈ ಇಬ್ಬರು ಹಿರಿಯ ಆಟಗಾರರು ಮರಳಿದಾಗ ಗೌತಮ್ ಗಂಭೀರ್ ಅವರ ಈ ಕಠಿಣ ನಿಲುವು ತಂಡದ ಒಳಗಿನ ವಾತಾವರಣದ ಮೇಲೆ ಹೇಗೆ ಪ್ರಭಾವ ಬೀರಬಹುದು ಎಂದು ಸಹ ಹಾರ್ಮಿಸನ್ ಆಶಂಕೆ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಾಗಿ, ಗಂಭೀರ್ ಅವರು “ತಂಡ ಮೊದಲು, ವೈಯಕ್ತಿಕ ದಾಖಲೆ ಆಮೇಲೆ” ಎಂಬ ಹೊಸ ಸಂಸ್ಕೃತಿಯನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದ್ದು, ಇದರ ನಡುವೆ ಅವರು ನೀಡಿದ ಹೇಳಿಕೆಯು ನೇರವಾಗಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರನ್ನು ಗುರಿಯಾಗಿಸಿದೆ. ಗಂಭೀರ್ ಅವರ ನಡೆಯು ಉತ್ತಮವಾಗಿದ್ದರೂ ಇಂತಹ ಹೇಳಿಕೆಗಳು ತಂಡದ ಡ್ರೆಸ್ಸಿಂಗ್ ರೂಮ್ನ ವಾತಾವರಣದ ಮೇಲೆ ಪರಿಣಾಮ ಬೀರಬಹುದು ಎಂದು ಸ್ಟೀವ್ ಹಾರ್ಮಿಸನ್ ಅಭಿಪ್ರಾಯಪಟ್ಟಿದ್ದಾರೆ.
ಹಾಸನ, ಮಾ.14: ನಗರದ ರಸ್ತೆಗಳಲ್ಲಿ ಅಮಲಿನಲ್ಲಿ ಆಟೋ ಚಲಾಯಿಸಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದ ಪುಂಡ ಯುವಕರಿಗೆ ಸಾರ್ವಜನಿಕರು ಸರಿಯಾಗಿಯೇ ಪಾಠ ಕಲಿಸಿದ್ದಾರೆ. ಸಿಕ್ಕಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದು ಅಟ್ಟಹಾಸ ಮೆರೆದ ಯುವಕರನ್ನು ಹಿಡಿದು ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಿನ್ನೆ ಸಂಜೆ ನಡೆದಿದೆ. ಹಾಸನ ನಗರದಲ್ಲಿ ನಿನ್ನೆ ಸಂಜೆ ಆಟೋವೊಂದನ್ನು ಅತೀ ವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ ಯುವಕರ ತಂಡ, ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಆತಂಕ ಮೂಡಿಸಿದ್ದಾರೆ. ಈ ಪುಂಡರ ಹುಚ್ಚಾಟದಿಂದಾಗಿ ಮೂರು ಬೈಕ್ಗಳು ಜಖಂಗೊಂಡಿದ್ದು, ನಾಲ್ವರು ಸಾರ್ವಜನಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಯುವಕರು ಗಾಂಜಾ ಅಥವಾ ಇನ್ನಾವುದೇ ಮಾದಕ ದ್ರವ್ಯ ಸೇವಿಸಿ ಆಟೋ ಚಾಲನೆ ಮಾಡುತ್ತಿದ್ದರು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ. ಅವರ ಅಸಹಜ ನಡವಳಿಕೆಯಿಂದ ಜನರು ಬೆಚ್ಚಿಬಿದ್ದಿದ್ದರು. ಯುವಕರ ಪುಂಡಾಟಿಕೆಯಿಂದ ತಾಳ್ಮೆ ಕಳೆದುಕೊಂಡ ಸಾರ್ವಜನಿಕರು, ಆಟೋವನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಬಳಿಕ ಮೂವರು ಯುವಕರಿಗೆ ರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿ (ಗೂಸಾ ನೀಡಿ) ಹಾಸನ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.ಸ್ಥಳಕ್ಕೆ ಆಗಮಿಸಿದ ಹಾಸನ ನಗರ ಠಾಣೆಯ ಪೊಲೀಸರು ಪುಂಡರನ್ನು ವಶಕ್ಕೆ ಪಡೆದಿದ್ದಾರೆ. ಆಟೋವನ್ನು ಜಪ್ತಿ ಮಾಡಲಾಗಿದ್ದು, ಯುವಕರು ಮಾದಕ ದ್ರವ್ಯ ಸೇವಿಸಿದ್ದಾರೆಯೇ ಎಂಬ ಬಗ್ಗೆ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.
ದೆಹಲಿ, ಮಾರ್ಚ್ 14: ದೆಹಲಿಯ ಬೀದಿಯಲ್ಲಿ ಕಸವನ್ನು ಸ್ವಚ್ಛಗೊಳಿಸುವ ಸಮಯದಲ್ಲಿ ಅಸ್ಥಿಪಂಜರ ಪತ್ತೆಯಾಗಿದ್ದು ಆತಂಕ ವ್ಯಕ್ತವಾಗಿದೆ. ನಿತ್ಯ ನೈರ್ಮಲ್ಯ ಅಭಿಯಾನ ನಡೆಸುತ್ತಿದ್ದಾಗ ವೃಕ್ಷಿತ್ ಫೌಂಡೇಶನ್ ಸದಸ್ಯರಿಗೆ ಇದು ಸಿಕ್ಕಿತ್ತು, ಕಸ ಕುಡಿಸುವಾಗ ಕಸದ ರಾಶಿಯೊಳಗೆ ಅಸ್ಥಿಪಂಜರ ಪತ್ತೆಯಾಗಿದೆ. ಅನುಮಾನಾಸ್ಪದ ಅವಶೇಷಗಳು ಕಂಡುಬಂದ ತಕ್ಷಣ ತಂಡವು ಶುಚಿಗೊಳಿಸುವ ಕಾರ್ಯಾಚರಣೆಯನ್ನು ತಕ್ಷಣವೇ ನಿಲ್ಲಿಸಿತು. ಪ್ರದೇಶವನ್ನು ಸುರಕ್ಷಿತಗೊಳಿಸಲಾಯಿತು ಮತ್ತು ಸ್ಥಳೀಯ ಅಧಿಕಾರಿಗಳಿಗೆ ತಿಳಿಸಲಾಯಿತು.ನಂತರ ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ಭೇಟಿ ನೀಡಿ, ಅವಶೇಷಗಳ ಮೂಲವನ್ನು ನಿರ್ಧರಿಸಲು ಪರೀಕ್ಷೆಗಾಗಿ ಸಂಗ್ರಹಿಸಿದ್ದಾರೆ ಎಂದು ವರದಿಯಾಗಿದೆ.