ರಜನೀಕಾಂತ್ ಸಿನಿಮಾನಲ್ಲಿ ಶಾರುಖ್ ಖಾನ್ ಪಾತ್ರ ಏನು?

ರಜನೀಕಾಂತ್ ಸಿನಿಮಾನಲ್ಲಿ ಶಾರುಖ್ ಖಾನ್ ಪಾತ್ರ ಏನು?

ರಜನೀಕಾಂತ್ (Rajinikanth) ನಟನೆಯ ‘ಜೈಲರ್ 2’ ಚಿತ್ರೀಕರಣ ಚಾಲ್ತಿಯಲ್ಲಿದೆ. 2023 ರಲ್ಲಿ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆಗಿದೆ. ಇದೀಗ ಅದೇ ಸಿನಿಮಾದ ಮುಂದಿನ ಭಾಗ ಚಿತ್ರೀಕರಣ ಚಾಲ್ತಿಯಲ್ಲಿದ್ದು, ‘ಜೈಲರ್’ ಸಿನಿಮಾನಲ್ಲಿ ರಜನೀಕಾಂತ್ ಜೊತೆಗೆ ನಟಿಸಿದ್ದ ಕೆಲ ಅತಿಥಿ ನಟರುಗಳು ಈ ಸಿನಿಮಾನಲ್ಲಿಯೂ ನಟಿಸಲಿದ್ದಾರೆ. ಜೊತೆಗೆ ಹೆಚ್ಚುವರಿ ಸೇರ್ಪಡೆಯೆಂದರೆ ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಅವರು ಸಹ ‘ಜೈಲರ್ 2’ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಶಾರುಖ್ ಖಾನ್, ರಜನೀಕಾಂತ್ ಜೊತೆ ನಟಿಸುವ ಸುದ್ದಿ ಈ ಹಿಂದೆಯೇ ಖಾತ್ರಿ ಆಗಿತ್ತು. ಇದೀಗ ಶಾರುಖ್ ಪಾತ್ರ ಎಂಥಹದ್ದು ಎಂಬ ಮಾಹಿತಿ ಲೀಕ್ ಆಗಿದೆ.

‘ಜೈಲರ್ 2’ ಸಿನಿಮಾನಲ್ಲಿ ಶಾರುಖ್ ಖಾನ್ ತುಸು ಅಪರೂಪವಾದ ಪಾತ್ರದಲ್ಲಿ ನಟಿಸಿದ್ದಾರೆ. ಶಾರುಖ್ ಖಾನ್ ಅವರು ‘ಜೈಲರ್ 2’ ಸಿನಿಮಾನಲ್ಲಿ ಪೊಲೀಸ್ ಪಾತ್ರದಲ್ಲಿ ನಟಿಸಿದ್ದಾರೆ. ಅಸಲಿಗೆ ಶಾರುಖ್ ಖಾನ್ ಪೊಲೀಸ್ ಪಾತ್ರದಲ್ಲಿ ನಟಿಸಿರುವುದು ಬಹಳ ಅಪರೂಪ. ಶಾರುಖ್ ಖಾನ್ ಅವರು ಮಿಲಿಟರಿ ಅಧಿಕಾರಿ, ರಾ ಏಜೆಂಟ್ ಪಾತ್ರಗಳಲ್ಲಿ ಸಾಕಷ್ಟು ನಟಿಸಿದ್ದಾರೆ ಆದರೆ ಪೊಲೀಸ್ ಪಾತ್ರದಲ್ಲಿ ನಟಿಸಿರುವುದು ಬಹಳ ಕಡಿಮೆ. ಇತ್ತೀಚೆಗೆ ಸೂಪರ್ ಹಿಟ್ ಆದ ‘ಜವಾನ್’ ಸಿನಿಮಾನಲ್ಲಿ ಜೈಲರ್ ಪಾತ್ರದಲ್ಲಿ ನಟಿಸಿದ್ದರು ಶಾರುಖ್, ಅದಕ್ಕೆ ಮುಂಚೆ ‘ಒನ್ ಟು ಕ ಫೋರ್’ ಸಿನಿಮಾನಲ್ಲಿ ಪೊಲೀಸ್ ಇಲಾಖೆಯ ಸ್ಪೆಷಲ್ ಫೋರ್ಸ್ ಸದಸ್ಯನ ಪಾತ್ರದಲ್ಲಿ ನಟಿಸಿದ್ದರು. ಈ ಎರಡು ಸಿನಿಮಾಗಳ ಹೊರತಾಗಿ ಪೊಲೀಸ್ ಪಾತ್ರದಲ್ಲಿ ಶಾರುಖ್ ಖಾನ್ ನಟಿಸಿದ್ದಿಲ್ಲ.

ಆದರೆ ಇದೀಗ ಶಾರುಖ್ ಖಾನ್, ‘ಜೈಲರ್ 2’ ಸಿನಿಮಾನಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ‘ಜೈಲರ್’ ಸಿನಿಮಾನಲ್ಲಿ ರಜನೀಕಾಂತ್ ಸಹ ಜೈಲಿನ ನಿವೃತ್ತ ನಿರೀಕ್ಷಣಾಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಬಹುಷಃ ಶಾರುಖ್ ಖಾನ್ ಅವರ ಪಾತ್ರ, ರಜನೀಕಾಂತ್ ಅವರ ಹಳೆಯ ಗೆಳೆಯನ ಪಾತ್ರದಲ್ಲಿ ನಟಿಸಲಿರುವ ಸಾಧ್ಯತೆ ಇದೆ. ಶಾರುಖ್ ಖಾನ್ ಅವರಿಗೆ ಸಖತ್ ಮಾಸ್ ಆದ ಪಾತ್ರವನ್ನೇ ನಿರ್ದೇಶಕ ನೆಲ್ಸನ್ ನೀಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:47 ವರ್ಷಗಳ ಬಳಿಕ ಒಂದಾದ ಕಮಲ್-ರಜನೀಕಾಂತ್: ಆದರೆ ನಾಯಕ ಯಾರು?

ಶಾರುಖ್ ಖಾನ್ ಅತಿಥಿ ಪಾತ್ರಗಳಲ್ಲಿ ನಟಿಸುವುದು ಕಡಿಮೆ. ಅದರಲ್ಲೂ ದಕ್ಷಿಣದ ಸಿನಿಮಾಗಳಲ್ಲಿ ಬಹಳ ಅಪರೂಪಕ್ಕೆ ಅವರು ಅತಿಥಿ ಪಾತ್ರಗಳಲ್ಲಿ ನಟಿಸುತ್ತಾರೆ. ದಶಕಗಳ ಹಿಂದೆ ಕಮಲ್ ಹಾಸನ್ ನಿರ್ದೇಶನದ ‘ಹೇ ರಾಮ್’ ಸಿನಿಮಾದ ಅತಿಥಿ ಪಾತ್ರದಲ್ಲಿ ಅವರು ನಟಿಸಿದ್ದರು. ಅದಾದ ಬಳಿಕ ಈಗ ರಜನೀಕಾಂತ್ ಅವರ ಜೊತೆಗೆ ನಟಿಸುತ್ತಿದ್ದಾರೆ. ಅಂದಹಾಗೆ ರಜನೀಕಾಂತ್ ಅವರು ಶಾರುಖ್ ಖಾನ್ ನಟನೆಯ ‘ರಾ ಒನ್’ ಸಿನಿಮಾನಲ್ಲಿ ರೋಬೊ ಪಾತ್ರದಲ್ಲಿ ನಟಿಸಿದ್ದರು. ಇದೀಗ ಹಲವು ವರ್ಷಗಳ ಬಳಿಕ ರಜನೀಕಾಂತ್ ಋಣ ತೀರಿಸಿದ್ದಾರೆ ಶಾರುಖ್ ಖಾನ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

No Smoking Day 2026: ಧೂಮಪಾನ ತ್ಯಜಿಸಿ, ಆರೋಗ್ಯಕರ ಜೀವನವನ್ನು ನಡೆಸಿ

ಧೂಮಪಾನ (Smoking) ಆರೋಗ್ಯಕ್ಕೆ ಹಾನಿಕಾರಕ ಎಂದು ಗೊತ್ತಿದ್ದರೂ, ಲಕ್ಷಾಂತರ ಮಂದಿ ಈ ಚಟಕ್ಕೆ ಬಲಿಯಾಗಿ ತಮ್ಮ ಜೀವನವನ್ನೇ ಹಾಳುಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಅದೆಷ್ಟೋ ಮಂದಿ ನಿರಂತರ ಸ್ಮೋಕಿಂಗ್‌ ಮಾಡಿ ಶ್ವಾಸಕೋಶದ ಕಾಯಿಲೆ, ಹೃದ್ರೋಗ, ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೆ ತುತ್ತಾಗಿ ಸುಂದರ ಜೀವನವನ್ನೇ ಹಾಳುಮಾಡಿಕೊಂಡಿದ್ದಾರೆ. ಧೂಮಪಾನದ ಈ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು, ಧೂಮಪಾನವನ್ನು ತ್ಯಜಿಸಲು ಜನರನ್ನು ಪ್ರೇರೇಪಿಸಲು ಪ್ರತಿವರ್ಷ ಮಾರ್ಚ್‌ ತಿಂಗಳ ಎರಡನೇ ಬುಧವಾರದಂದು ಧೂಮಪಾನ ನಿಷೇಧ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಆಚರಣೆ ಹೇಗೆ ಪ್ರಾರಂಭವಾಯಿತು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯೋಣ ಬನ್ನಿ.

ಧೂಮಪಾನ ನಿಷೇಧ ದಿನದ ಇತಿಹಾಸವೇನು?

ಧೂಮಪಾನದಿಂದ ಉಂಟಾಗುವ ಆರೋಗ್ಯ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಧೂಮಪಾನ ತ್ಯಜಿಸುವುದನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಅಭಿಯಾನವಾಗಿ 1984 ರಲ್ಲಿ ಐರ್ಲೆಂಡ್‌ನಲ್ಲಿ ಮೊದಲ ಬಾರಿಗೆ ನೋ ಸ್ಮೋಕಿಂಗ್ ದಿನವನ್ನು ಆಚರಿಸಲಾಯಿತು. ಮೂಲತಃ ಮಾರ್ಚ್‌ನಲ್ಲಿ ಮೊದಲ ಬುಧವಾರದಂದು ಅಂದರೆ ಆಶ್‌ ವೆಡ್‌ನೆಸ್‌ ಡೇ ಯಂದು ಆಚರಿಸಲಾಗುತ್ತಿತ್ತು, ನಂತರ ಈ ದಿನವನ್ನು ಮಾರ್ಚ್‌  ಎರಡನೇ ಬುಧವಾರದಂದು ಆಚರಿಸಲಾಯಿತು. ನಂತರ ಈ ಜಾಗೃತಿ ದಿನ ವಿಶ್ವಾದ್ಯಂತ ಮನ್ನಣೆ ಗಳಿಸಿತು.  ಇಂದು ಈ ದಿನವನ್ನು ಭಾರತ ಸೇರಿದಂತೆ ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ ಆಚರಿಸಲಾಗುತ್ತದೆ.

ಇದನ್ನೂ ಓದಿ: ಮಹಿಳಾ ದಿನದ ಆಚರಣೆ ಆರಂಭವಾದದ್ದು ಹೇಗೆ ಗೊತ್ತಾ?

ಧೂಮಪಾನ ನಿಷೇಧ ದಿನದ ಮಹತ್ವವೇನು?

  • ಧೂಮಪಾನದ ಹಾನಿಕಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಜನರು ಸಮಯಕ್ಕೆ ಸರಿಯಾಗಿ ಧೂಮಪಾನವನ್ನು ತ್ಯಜಿಸಲು ಪ್ರೋತ್ಸಾಹಿಸಲು ಈ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ.
  • ಈ ದಿನ ಜಗತ್ತನ್ನು ಧೂಮಪಾನ ಮುಕ್ತಗೊಳಿಸಲು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಅನೇಕ ಕಡೆ ವಿಚಾರ ಸಂಕಿರಣಗಳು ಮತ್ತು ಕಾರ್ಯಾಗಾರಗಳನ್ನು ಸಹ ಆಯೋಜಿಸಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನನಗೆ ವಿಚ್ಛೆದನ ಬಗ್ಗೆ ನಂಬಿಕೆ ಇಲ್ಲ, ಮದುವೆಗೂ ಮೊದಲು ನೂರು ಬಾರಿ ಯೋಚಿಸುವೆ’; ತ್ರಿಷಾ

ನಟಿ ತ್ರಿಷಾ ಕೃಷ್ಣನ್ (Trisha) ಅವರು ಇನ್ನೂ ಅವಿವಾಹಿತೆ. ದಳಪತಿ ವಿಜಯ್ ಜೊತೆ ಅವರು ಕಾಣಿಸಿಕೊಳ್ಳುತ್ತಿರುವುದರಿಂದ ಇಬ್ಬರ ಮಧ್ಯೆ ಸಂಬಂಧ ಕಲ್ಪಿಸಲಾಗುತ್ತಿದೆ. ಇದು ಎಷ್ಟರ ಮಟ್ಟಿಗೆ ಸತ್ಯ ಎಂಬ ಪ್ರಶ್ನೆಗೆ ವಿಜಯ್ ಅಥವಾ ತ್ರಿಷಾ ಅವರೇ ಸ್ಪಷ್ಟನೆ ಕೊಡಬೇಕಿದೆ. ಈ ಮಧ್ಯೆ ವಿಜಯ್ ಅವರಿಗೆ ವಿಚ್ಛೇದನ ಕೊಡಲು ಪತ್ನಿ ಸಂಗೀತಾ ರೆಡಿ ಆಗಿದ್ದಾರೆ. ಹೀಗಿರುವಾಗ, ತ್ರಿಷಾ ಅವರ ಹಳೆಯ ಹೇಳಿಕೆ ವೈರಲ್ ಆಗಿದೆ.

ವಿಜಯ್ ವಿರುದ್ಧ ಸಂಗೀತ ಗಂಭೀರ ಆರೋಪ ಮಾಡಿದ್ದಾರೆ. ಪತಿ ವಿಜಯ್​​ಗೆ ಅಕ್ರಮ ಸಂಬಂಧ ಇದೆ ಎಂದು ಅವರು ಆರೋಪಿಸಿದ್ದಾರೆ. ವಿಜಯ್ ಅಕ್ರಮ ಸಂಬಂಧ ಹೊಂದಿರೋದು ತ್ರಿಷಾ ಜೊತೆ ಎಂದು ಎಲ್ಲರೂ ಕಲ್ಪಿಸಿಕೊಳ್ಳುತ್ತಿದ್ದಾರೆ. ಈ ಮಧ್ಯೆ ತ್ರಿಷಾ ಅವರು ಈ ಮೊದಲು ವಿವಾಹದ ಬಗ್ಗೆ ಮಾತನಾಡಿದ್ದರು.
ತ್ರಿಷಾಗೆ ಈ ಮೊದಲು ನಿಶ್ಚಿತಾರ್ಥ ಆಗಿತ್ತು. ಅದನ್ನು ಅವರು ಮುರಿದುಕೊಂಡರು. ಇದಕ್ಕೆ ಕಾರಣವನ್ನೂ ಅವರು ನೀಡಿದ್ದರು. ತ್ರಿಷಾಗೆ ಆ ವ್ಯಕ್ತಿ ಸಾಕಷ್ಟು ಷರತ್ತುಗಳನ್ನು ಹಾಕುತ್ತಿದ್ದರಂತೆ. ಈ ಕಾರಣದಿಂದ ಅವರು ಸಂಬಂಧ ಮುಂದುವರಿಸಲೇ ಇಲ್ಲ.

‘ನಾನು ವಿಚ್ಛೇದನದಲ್ಲಿ ನಂಬಿಕೆ ಇಟ್ಟಿಲ್ಲ. ಹೀಗಾಗಿ, ನಾನು ಜೀವನ ಮಾಡಬೇಕಾದ ವ್ಯಕ್ತಿ ಇವರೇ ಎಂದು ಫೀಲ್ ಆಗಬೇಕು. ನಾನು ಮದುವೆಯಾದ ಬಳಿಕ ವಿಚ್ಛೇದನ ಪಡೆಯಲು ಬಯಸುವುದಿಲ್ಲ. ಅದೂ ನಾನಿಷ್ಟ ಪಟ್ಟ ವ್ಯಕ್ತಿಯಿಂದ ದೂರ ಆಗಲ್ಲ’ ಎಂದು ಅವರು ಹೇಳಿದರು.

‘ನನಗೆ ವಿಚ್ಛೇದನದಲ್ಲಿ ನಂಬಿಕೆ ಇಲ್ಲ. ಮದುವೆಗೂ ಮುನ್ನ 100 ಬಾರಿ ಯೋಚಿಸುತ್ತೇನೆ. ಬೇರೆಯವರಿಗೆ ನೋವುಂಟು ಮಾಡಲು ಅಥವಾ ಅತೃಪ್ತ ಜೀವನ ನಡೆಸಲು ನಾನು ಬಯಸುವುದಿಲ್ಲ’ ತ್ರಿಷಾ ಈ ಮೊದಲು ಹೇಳಿದ್ದರು.

‘ನನ್ನ ಸುತ್ತಲಿರೋ ಅನೇಕರು ತಪ್ಪು ಕಾರಣಗಳಿಗಾಗಿ ಮದುವೆಯಾಗುತ್ತಿದ್ದಾರೆ ಎಂದು ನನಗೆ ಅನಿಸುತ್ತದೆ. ಅವರು ತುಂಬಾ ಅತೃಪ್ತರು. ನಾನು ಅಂತಹ ದಾಂಪತ್ಯದಲ್ಲಿರಲು ಬಯಸುವುದಿಲ್ಲ. ನಾನು ಪ್ರೀತಿಯಲ್ಲಿ ಬೀಳಲು ಬಯಸುತ್ತೇನೆ. ನಾನು ಅದರ ಬಗ್ಗೆ ತುಂಬಾ ನಿರ್ದಿಷ್ಟವಾಗಿದ್ದೇನೆ. ಹೀಗಾಗಿ, ಮದುವೆಗೂ ಮೊದಲು ನಾನು ಯೋಚಿಸುತ್ತೇನೆ’ ಎನ್ನುತ್ತಾರೆ ತ್ರಿಷಾ.

ಇದನ್ನೂ ಓದಿ: ತ್ರಿಷಾಗೆ ನಡೆದಿತ್ತು ನಿಶ್ಚಿತಾರ್ಥ; ಹುಡುಗ ಯಾರು? ಬೇಡ ಎಂದಿದ್ದು ಏಕೆ?

‘ಈ ಕಾರಣದಿಂದ ನನ್ನ ಮದುವೆ ರದ್ದಾಯಿತು. ನಟನೆ ತೊರೆಯುವಂತೆ ಆತ ಹೇಳಿದೆ. ಹೀಗಾಗಿ, ನಾನು ಆತನನ್ನೇ ಬಿಟ್ಟೆ. ನಾನು ಪ್ರೆಗ್ನೆಂಟ್ ಆಗಿದ್ದಾಗ ಮಾತ್ರ ನಟನೆಯಿಂದ ಬ್ರೇಕ್ ಪಡೆಯಬೇಕು ಎಂದುಕೊಂಡಿದ್ದೇನೆ. ನನ್ನ ಕೊನೆ ಉಸಿರು ಇರೋವರೆಗೂ ನಟಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅರ್ಚಕನ ಸಾವು ಕೇಸ್‌ಗೆ ಬಿಗ್ ಟ್ವಿಸ್ಟ್; ತನ್ನ ಕಾಮದಾಟಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪ್ರಿಯಕರನ ಜೊತೆಗೂಡಿ ಮುಗಿಸಿದ ಪತ್ನಿ!

ಮಂಡ್ಯ, ಮಾ.11: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪತ್ನಿಯೇ ಪ್ರಿಯಕರ ಮತ್ತು ಆತನ ಸ್ನೇಹಿತರ ಮೂಲಕ ಕೊಲೆ ಮಾಡಿಸಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮರಳಗಾಲದಲ್ಲಿ ಬೆಳಕಿಗೆ ಬಂದಿದೆ. ಅರ್ಚಕ ಸಿದ್ದಲಿಂಗಪ್ಪ (46) ಹತ್ಯೆಯಾದ ದುರ್ದೈವಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಶಾಲಿನಿ, ಪ್ರಿಯಕರ ಹರೀಶ್ ಮತ್ತು ಆತನ ಇಬ್ಬರು ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ. ಮಾ.6ರಂದು ಸಿಡಿಎಸ್ ನಾಲೆಯಲ್ಲಿ ಸಿದ್ದಲಿಂಗಪ್ಪ ಶವವಾಗಿ ಪತ್ತೆಯಾಗಿದ್ದರು. ಚಪ್ಪಲಿ ಸಿಕ್ಕ ಸ್ಥಳದಲ್ಲಿ ರಕ್ತದ ಕಲೆ ಇದ್ದ ಹಿನ್ನೆಲೆ ಪೊಲೀಸರಿಗೆ ಅನುಮಾನ ಮೂಡಿ ತನಿಖೆಯನ್ನು ಚುರುಕುಗೊಳಿಸಿದಾಗ ಪೊಲೀಸರಿಗೆ ಈ ಸತ್ಯ ಗೊತ್ತಾಗಿದೆ.

ಮರಳಗಾಲ ಗ್ರಾಮದ ಅರ್ಚಕ ಸಿದ್ದಲಿಂಗಪ್ಪ ಅವರ ಪತ್ನಿ ಶಾಲಿನಿ, ಇಬ್ಬರು ಮಕ್ಕಳಿದ್ದರು, ಸುಖದ ಜೀವನ ನಡೆಸುತ್ತಿರುವಾಗ, ಅದೇ ಗ್ರಾಮದ ಹರೀಶ್ ಎಂಬಾತನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಒಂದೂವರೆ ವರ್ಷದ ಹಿಂದೆ ಸಿದ್ದಲಿಂಗಪ್ಪನಿಗೆ ಈ ವಿಷಯ ತಿಳಿದು ಪತ್ನಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು. ಆಗ ಪತ್ನಿಗೆ ಬುದ್ಧಿಮಾತು ಹೇಳಿ ಸರಿದಾರಿಗೆ ತರಲು ಪ್ರಯತ್ನಿಸಿದ್ದರು. ಆದರೆ ಪತ್ನಿ ಶಾಲಿನಿ ಮಾತ್ರ ತನ್ನ ಕಾಮದಾಟಕ್ಕೆ ಗಂಡ ಅಡ್ಡಿಯಾಗುತ್ತಿದ್ದಾನೆ ಎಂದು ಆತನನ್ನು ಮುಗಿಸಲು ಸ್ಕೆಚ್ ಹಾಕಿದ್ದಳು.

ಮಾರ್ಚ್ 6ರಂದು ಸಿದ್ದಲಿಂಗಪ್ಪ ಪೂಜೆಗಾಗಿ ಪಕ್ಕದ ಊರಿಗೆ ತೆರಳಿದ್ದಾಗ, ಶಾಲಿನಿ ತನ್ನ ಪ್ರಿಯಕರ ಹರೀಶ್‌ಗೆ ಮೆಸೇಜ್ ಮಾಡಿ ಪತಿಯ ಹೊರಗಡೆ ಹೋಗಿರುವ ಬಗ್ಗೆ ಮಾಹಿತಿ ನೀಡಿದ್ದಳು.ಸಿದ್ದಲಿಂಗಪ್ಪ ಪೂಜೆ ಮುಗಿಸಿ ಬೈಕ್‌ನಲ್ಲಿ ಮರಳಗಾಲದ ನಾಲೆ ಏರಿ ಮೇಲೆ ಬರುತ್ತಿದ್ದಾಗ, ಹರೀಶ್ ಮತ್ತು ಆತನ ಸ್ನೇಹಿತರಾದ ಸಂತೋಷ್ ಹಾಗೂ ಗಣೇಶ್ ಅಡ್ಡಗಟ್ಟಿದ್ದಾರೆ. ಸಿದ್ದಲಿಂಗಪ್ಪ ಅವರ ತಲೆಗೆ ದೊಣ್ಣೆಯಿಂದ ಬಲವಾಗಿ ಹೊಡೆದು ಹತ್ಯೆ ಮಾಡಿದ ಆರೋಪಿಗಳು, ಸಾಕ್ಷ್ಯ ನಾಶಪಡಿಸಲು ಮೃತದೇಹ ಮತ್ತು ಬೈಕ್ ಅನ್ನು ಸಿಡಿಎಸ್ (CDS) ನಾಲೆಗೆ ಬಿಸಾಡಿ ಎಸ್ಕೇಪ್ ಆಗಿದ್ದರು.

ಇದನ್ನೂ ಓದಿ: ಗ್ರಾಹಕರ ಗಮನಕ್ಕೆ… ಬೆಂಗಳೂರಿನಲ್ಲಿ ಇನ್ಮುಂದೆ ಸಿಗಲ್ಲ ವಡೆ, ಬಜ್ಜಿ, ಪಕೋಡ: ಸ್ನ್ಯಾಕ್ಸ್ ತಿಂಡಿಗೂ ಕೋಕ್

ನಾಲೆ ದಡದಲ್ಲಿ ಸಿದ್ದಲಿಂಗಪ್ಪನ ಚಪ್ಪಲಿ ಮತ್ತು ಬಟ್ಟೆ ಪತ್ತೆಯಾದಾಗ ರಕ್ತದ ಕಲೆಗಳು ಕಂಡುಬಂದಿದ್ದವು. ಇದು ಕೇವಲ ಅಪಘಾತವಲ್ಲ, ಹತ್ಯೆ ಎಂಬ ಸಂಶಯಗೊಂಡ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ತನಿಖೆ ತೀವ್ರಗೊಳಿಸಿದಾಗ ಶಾಲಿನಿಯ ಅಕ್ರಮ ಸಂಬಂಧದ ವಿಷಯ ಬಯಲಾಗಿದೆ. ಈ ಬಗ್ಗೆ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳು ಕೃತ್ಯ ಒಪ್ಪಿಕೊಂಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತ ತಂಡದೊಂದಿಗಿನ ‘ಅಂತರ’ ಬೆಳೀತಾ ಹೋಗ್ತಿದೆ!

ಟೀಮ್ ಇಂಡಿಯಾ ಬ್ಯಾಕ್ ಟು ಬ್ಯಾಕ್ ಟಿ20 ವಿಶ್ವಕಪ್ ಗೆದ್ದುಕೊಂಡಿದೆ. 2024 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಭಾರತ ತಂಡವು ಇದೀಗ 2026 ರಲ್ಲೂ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿದೆ. ಈ ಮೂಲಕ ಸತತವಾಗಿ ಟಿ20 ವಿಶ್ವಕಪ್​ ಗೆದ್ದ ಮೊದಲ ತಂಡ ಎನಿಸಿಕೊಂಡಿದೆ. ಈ ಅಮೋಘ ಸಾಧನೆಯನ್ನು ಇಂಗ್ಲೆಂಡ್​ನ ಮಾಜಿ ವೇಗಿ ಸ್ಟುವರ್ಟ್ ಬ್ರಾಡ್ ವಿಶ್ಲೇಷಿಸಿದ್ದು, ಈ ವೇಳೆ ನೀಡಿದ ಹೇಳಿಕೆಗಳು ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.

ಭಾರತ ತಂಡ ಮತ್ತು ಪ್ರಪಂಚದ ಉಳಿದ ಭಾಗಗಳ ತಂಡಗಳ ನಡುವಿನ ಅಂತರವು ದೊಡ್ಡದಾಗುತ್ತಲೇ ಇದೆ. ಈ ಮೂಲಕ ಟೀಮ್ ಇಂಡಿಯಾ ವಿಶ್ವ ಕ್ರಿಕೆಟ್​ನಲ್ಲಿ ಛಾಪು ಹೊತ್ತಿದ್ದಾರೆ. ಈ ಅಂತರ ಬೆಳೆಯುತ್ತಾ ಹೋಗುತ್ತಿರಲು ಸ್ಟುವರ್ಟ್ ಬ್ರಾಡ್ ಕೆಲ ಕಾರಣಗಳನ್ನು ಮುಂದಿಟ್ಟಿದ್ದಾರೆ.

  • ತಂಡದ ಆಳ: ಭಾರತದ ಬೆಂಚ್ ಸ್ಟ್ರೆಂತ್ ಎಷ್ಟು ಪ್ರಬಲವಾಗಿದೆಯೆಂದರೆ, ಭಾರತದ ಯಾವುದೇ ಆಟಗಾರ ವಿಶ್ವದ ಇತರ ಯಾವುದೇ ತಂಡದಲ್ಲಿ ನೇರವಾಗಿ ಸ್ಥಾನ ಪಡೆಯಬಲ್ಲರು ಎಂದು ಸ್ಟುವರ್ಟ್ ಬ್ರಾಡ್ ಅಭಿಪ್ರಾಯಪಟ್ಟಿದ್ದಾರೆ.
  • ಐಪಿಎಲ್ ಪ್ರಭಾವ: ಯುವ ಆಟಗಾರರು ಪದಾರ್ಪಣೆ ಮಾಡುವ ಮೊದಲೇ ವಿಶ್ವದ ಶ್ರೇಷ್ಠ ಆಟಗಾರರ ವಿರುದ್ಧ ಆಡಿ ಒತ್ತಡವನ್ನು ನಿಭಾಯಿಸುವುದನ್ನು ಕಲಿಯುತ್ತಿದ್ದಾರೆ. ಇದು ಭಾರತ ಮತ್ತು ಉಳಿದ ದೇಶಗಳ ನಡುವಿನ ವ್ಯತ್ಯಾಸವನ್ನು ಹೆಚ್ಚಿಸುತ್ತಿದೆ.
  • ಜಸ್​ಪ್ರೀತ್ ಬುಮ್ರಾ: ಜಸ್​ಪ್ರೀತ್ ಬುಮ್ರಾ ಅವರಂತಹ ಬೌಲರ್‌ಗಳು ಕ್ರಿಕೆಟ್ ಇತಿಹಾಸದಲ್ಲೇ ಶ್ರೇಷ್ಠರು ಎಂದು ಬಣ್ಣಿಸಿದ ಬ್ರಾಡ್, ಭಾರತದ ಬೌಲಿಂಗ್ ವಿಭಾಗವು ಈಗ ಅಭೇದ್ಯವಾಗಿದೆ ಎಂದಿದ್ದಾರೆ.

ಇನ್ನು ಟೀಮ್ ಇಂಡಿಯಾ ಬಲಿಷ್ಠವಾಗಲು ಐಪಿಎಲ್ ಪ್ರಮುಖ ಕಾರಣ ಎಂದಿರುವ ಸ್ಟುವರ್ಟ್ ಬ್ರಾಡ್, ಒಂದೆರಡು ಪಂದ್ಯಗಳಲ್ಲಿ ಸರಿಯಾಗಿ ಆಡದಿದ್ದರೆ ನಿಮ್ಮ ಮೇಲೆ ಪ್ರಶ್ನೆಗಳು ಏಳುತ್ತವೆ. ಹೀಗಾಗಿ ನೀವು ಅಂತರಾಷ್ಟ್ರೀಯ ಕ್ರಿಕೆಟ್ ಆಡುವ ಮೊದಲೇ ಅಂತರಾಷ್ಟ್ರೀಯ ಮಟ್ಟದ ಒತ್ತಡಕ್ಕೆ ಒಗ್ಗಿಕೊಂಡಿರುತ್ತೀರಿ. ಇದಕ್ಕೆಲ್ಲಾ ಮುಖ್ಯ ಕಾರಣ ಐಪಿಎಲ್ ಎಂದು ಭಾವಿಸುತ್ತೇನೆ.

ಬೃಹತ್ ಪ್ರೇಕ್ಷಕರ ಮುಂದೆ ಮತ್ತು ಹೆಚ್ಚಿನ ನಿರೀಕ್ಷೆಗಳ ನಡುವೆ ಆಡುವ ಈ ಅನುಭವವು ಭಾರತೀಯ ಆಟಗಾರರಿಗೆ ದೊಡ್ಡ ಬಲವಾಗಿದೆ. ಈ ಎಲ್ಲಾ ಅನುಭವಗಳೊಂದಿಗೆ ಯುವ ಆಟಗಾರರು ಟೀಮ್ ಇಂಡಿಯಾಗೆ ಪಾದರ್ಪಣೆ ಮಾಡುತ್ತಿದ್ದಾರೆ. ಇದುವೇ ಇತರೆ ತಂಡಗಳಿಂದ ಟೀಮ್ ಇಂಡಿಯಾವನ್ನು ಭಿನ್ನವಾಗಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಷ್ಟೇ ಅಲ್ಲದೆ ಟಿ20 ವಿಶ್ವಕಪ್ ಗೆದ್ದ ಭಾರತ ತಂಡವನ್ನೇ ನೋಡಿ, ಆ ತಂಡದಲ್ಲಿ ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್, ಮತ್ತು ರಿಷಭ್ ಪಂತ್ ಅವರಂತಹ ಶ್ರೇಷ್ಠ ಆಟಗಾರರು ಇಲ್ಲ. ಇದು ಟೀಮ್ ಇಂಡಿಯಾದ ಸ್ಟ್ರೆಂತ್ ಅನ್ನು ಎತ್ತಿ ತೋರಿಸುತ್ತದೆ.

ಯಶಸ್ವಿ ಜೈಸ್ವಾಲ್ ಟೆಸ್ಟ್ ಮತ್ತು ಟಿ20 ಎರಡರಲ್ಲೂ ಅದ್ಭುತ ದಾಖಲೆ ಹೊಂದಿದ್ದರೂ ಸಹ ಅವರಿಗೆ ಭಾರತದ ಈ ತಂಡದಲ್ಲಿ ಸ್ಥಾನ ಸಿಗುತ್ತಿಲ್ಲ ಎನ್ನುವುದು ಭಾರತದ ಪ್ರತಿಭೆಯ ಅಗಾಧತೆಗೆ ಸಾಕ್ಷಿ ಎಂದು ಸ್ಟುವರ್ಟ್ ಬ್ರಾಡ್ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಅನುಭವಿ ಆಟಗಾರನಾಗಿ ಭಾರತ ತಂಡದಲ್ಲಿರುವ ಹಾರ್ದಿಕ್ ಪಾಂಡ್ಯ “ಅತ್ಯಂತ ಅಪಾಯಕಾರಿ ಆಟಗಾರ” ಎಂದು ಬಣ್ಣಿಸಿದ್ದಾರೆ. ಪಾಂಡ್ಯ ಅವರಲ್ಲಿರುವ  ಆತ್ಮವಿಶ್ವಾಸ ಮತ್ತು ಅತಿ ಸುಲಭವಾಗಿ ಸಿಕ್ಸರ್ ಹೊಡೆಯುವ ಸಾಮರ್ಥ್ಯವು ಯಾವುದೇ ತಂಡಕ್ಕೆ ಕಂಟಕವಾಗಬಲ್ಲದು ಎಂದು ಹೇಳಿದ್ದಾರೆ.

ಹಾಗೆಯೇ ಮೊದಲೇ ಹೇಳಿದಂತೆ ಜಸ್​ಪ್ರೀತ್ ಬುಮ್ರಾ ಟೀಮ್ ಇಂಡಿಯಾ ಪಾಲಿನ ಗೇಮ್ ಚೇಂಜರ್. ಅವರಂತಹ ಬೌಲರ್‌ ತಂಡದಲ್ಲಿರುವುದು ಟೀಮ್ ಇಂಡಿಯಾದ ಬಲವನ್ನು ಮತ್ತಷ್ಟು ಹೆಚ್ಚಿಸಿದೆ.

ಇದನ್ನೂ ಓದಿ: ಹೊಸ ಗರ್ಲ್​​ ಫ್ರೆಂಡ್ ಎಂಟ್ರಿ… ಜೀವಕ್ಕೆ ಜೀವದಂತಿದ್ದ ಅಣ್ಣನೇ ದೂರ..!

ಈ ಕಾರಣಗಳಿಂದಾಗಿ ಭಾರತ ಮತ್ತು ಪ್ರಪಂಚದ ಇತರ ದೇಶಗಳ ನಡುವಿನ ಅಂತರವು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಅದನ್ನು ತಡೆಯುವುದು ಇತರ ತಂಡಗಳಿಗೆ ಕಷ್ಟವಾಗಬಹುದು ಎಂಬುದು ಸ್ಟುವರ್ಟ್ ಬ್ರಾಡ್ ಅಭಿಪ್ರಾಯಪಟ್ಟಿದ್ದಾರೆ.

 

Source link

ಅಲ್ಲು ಅರ್ಜುನ್ ಫ್ಯಾನ್ಸ್ ರೆಡಿ ಆಗಿ; ಬರ್ತ್​ಡೇಗೆ ಸಿಗಲಿದೆ ದೊಡ್ಡ ಗಿಫ್ಟ್

ಅಲ್ಲು ಅರ್ಜುನ್ (Allu Arjun ) ಅವರ ಜನ್ಮದಿನಕ್ಕೆ ಕೌಂಟ್​​ಡೌನ್ ಶುರುವಾಗಿದೆ. ಏಪ್ರಿಲ್ 8ರಂದು ಅವರು 43ನೇ ವಯಸ್ಸಿಗೆ ಕಾಲಿಡಲಿದ್ದಾರೆ. ಸೆಲೆಬ್ರಿಟಿಗಳ ಬರ್ತ್​​ಡೇ ಎಂದರೆ ಅಭಿಮಾನಿಗಳಿಗೆ ಸಾಮಾನ್ಯವಾಗಿ ವಿಶೇಷ ಗಿಫ್ಟ್ ಸಿಗುತ್ತದೆ. ಅದೇ ರೀತಿ, ಈ ವರ್ಷ ಅಲ್ಲು ಬರ್ತ್​​ಡೇ ದಿನ ಹೊಸ ಅನೌನ್ಸ್​​ಮೆಂಟ್ ಮಾಡಲು ತಂಡ ರೆಡಿ ಆಗಿದೆ ಎಂದು ವರದಿ ಆಗಿದೆ. ಇದನ್ನು ಕೇಳಿ ಫ್ಯಾನ್ಸ್ ಕುಣಿದು ಕುಪ್ಪಳಿಸುತ್ತಿದ್ದಾರೆ.

ಅಲ್ಲು ಅರ್ಜುನ್ ಅವರು ಅಟ್ಲಿ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ AA22XA6 ಎಂದು ಟೈಟಲ್ ಕೊಡಲಾಗಿದೆ. ಈ ಸಿನಿಮಾಗೆ ದೀಪಿಕಾ ಪಡುಕೋಣೆ ನಾಯಕಿ. ಈ ಸಿನಿಮಾದ ಶೂಟ್ ಭರದಿ ಸಾಗುತ್ತಿದ್ದು, 2027ರಲ್ಲಿ ರಿಲೀಸ್ ಆಗುವ ನಿರೀಕ್ಷೆ ಇದೆ. ಈ ಸಿನಿಮಾಗೆ ಯಾವ ಟೈಟಲ್ ಇಡಲಾಗುತ್ತದೆ ಎಂಬ ಕುತೂಹಲ ಇದೆ. ಅದರ ಅನಾವರಣಕ್ಕೆ ದಿನಾಂಕ ನಿಗದಿ ಆಗಿದೆ.

ಕೆಲವು ವರದಿಗಳ ಪ್ರಕಾರ, ಅಲ್ಲು ಅರ್ಜುನ್ ಬರ್ತ್​​ಡೇ ಪ್ರಯುಕ್ತ ಅಂದರೆ, ಏಪ್ರಿಲ್ 8ರಂದು ಟೈಟಲ್ ಅನಾವರಣಗೊಳ್ಳಲಿದೆ. ಒಂದು ಸಣ್ಣ ಟೀಸರ್ ಅಥವಾ ಗ್ಲಿಂಪ್ಸ್ ಮೂಲಕ ಟೈಟಲ್ ಅನಾವರಣ ಮಾಡುವ ಪ್ಲ್ಯಾನ್ ಅಲ್ಲಿ ತಂಡ ಇದೆ. ಈ ವಿಷಯ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

AA22XA6 ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದಲ್ಲಿ ದೊಡ್ಡ ಮಟ್ಟದಲ್ಲಿ ವಿಎಫ್​​ಎಕ್ಸ್ ಬಳಸಲು ತಂಡ ಪ್ಲ್ಯಾನ್ ರೂಪಿಸಿದೆ. ಈ ಚಿತ್ರ ಸಿನಿಮ್ಯಾಟಿಕ್ ವರ್ಲ್ಡ್​​ನ ಪ್ರೇಕ್ಷಕರ ಎದುರು ತೆರೆದಿಡಲಿದೆ ಎಂದು ತಂಡ ಹೇಳಿದೆ. ಇನ್ನು, ಟೈಟಲ್ ಟೀಸರ್ ಪ್ರೇಕ್ಷಕರನ್ನು ಹಾಗೂ ಸಿನಿಮಾ ಪ್ರಿಯರನ್ನು ಅಚ್ಚರಿ ಪಡುವ ರೀತಿಯಲ್ಲಿ ಇರಲಿದೆ ಎಂದು ತಂಡ ಹೇಳಿರೋದಾಗಿ ವರದಿ ಆಗಿದೆ.

ಇದನ್ನೂ ಓದಿ: ಪಟಾಕಿ ಸ್ಫೋಟದಲ್ಲಿ ಎಲ್ಲವನ್ನೂ ಕಳೆದುಕೊಂಡ ಯುವತಿ ಬೆಂಬಲಕ್ಕೆ ನಿಂತ ಅಲ್ಲು ಅರ್ಜುನ್  

ಅಲ್ಲು ಅರ್ಜುನ್ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು, ‘ಪುಷ್ಪ 2’ ಚಿತ್ರದಲ್ಲಿ. ಈ ಸಿನಿಮಾ ಸೂಪರ್ ಹಿಟ್ ಆಯಿತು. ಆ ಬಳಿಕ ಅವರು ದೊಡ್ಡ ಪ್ರಾಜೆಕ್ಟ್​​ಗಳ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್-ದೀಪಿಕಾ ಪಡುಕೋಣೆ ಜೊತೆ ಮೃಣಾಲ್ ಠಾಕೂರ್, ರಶ್ಮಿಕಾ ಮಂದಣ್ಣ, ಜಾನ್ವಿ ಕಪೂರ್ ಮೊದಲಾದವರು ನಟಿಸುತ್ತಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗ್ರಾಹಕರ ಗಮನಕ್ಕೆ… ಬೆಂಗಳೂರಿನಲ್ಲಿ ಇನ್ಮುಂದೆ ಸಿಗಲ್ಲ ವಡೆ, ಬಜ್ಜಿ, ಪಕೋಡ: ಸ್ನ್ಯಾಕ್ಸ್ ತಿಂಡಿಗೂ ಕೋಕ್

ಬೆಂಗಳೂರು, ಮಾ.11: ರಾಜಧಾನಿಯಲ್ಲಿ ಎಲ್‌ಪಿಜಿ (LPG) ಸಿಲಿಂಡರ್ ಹಾಹಾಕಾರ ಮಿತಿಮೀರಿದೆ. ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ, ಹೋಟೆಲ್ ಮಾಲೀಕರು ಗ್ಯಾಸ್ ಹೆಚ್ಚು ಬಳಕೆಯಾಗುವ ಆಹಾರ ಪದಾರ್ಥಗಳನ್ನು ತಯಾರಿಸದಿರಲು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.ಅತಿ ಹೆಚ್ಚು ಗ್ಯಾಸ್ ವ್ಯಯವಾಗುವ ಉದ್ದಿನ ವಡೆ, ಬಜ್ಜಿ, ಪಕೋಡ, ಪೂರಿ ಮತ್ತು ಗೋಬಿ ಮಂಚೂರಿಯನ್ ನಂತಹ ಸ್ನ್ಯಾಕ್ಸ್ ತಿಂಡಿಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

ಕಡಿಮೆ ಗ್ಯಾಸ್ ಬಳಸಿ ಹೆಚ್ಚು ಜನರಿಗೆ ಉಣಬಡಿಸಬಹುದಾದ ಚಿತ್ರಾನ್ನ, ಪಲಾವ್, ಬಿಸಿಬೇಳೆ ಬಾತ್ ನಂತಹ ರೈಸ್ ಐಟಂಗಳ ತಯಾರಿಕೆಗೆ ಹೋಟೆಲ್‌ಗಳು ಹೆಚ್ಚಿನ ಒಲವು ತೋರುತ್ತಿವೆ. “ದಯವಿಟ್ಟು ಹೆಚ್ಚು ಆಯಿಲ್ ಬಳಕೆಯಾಗುವ ತಿಂಡಿಗಳನ್ನು ಕೇಳಬೇಡಿ, ರೈಸ್ ಐಟಂಗಳನ್ನು ಆರ್ಡರ್ ಮಾಡಿ ಸಹಕರಿಸಿ” ಎಂದು ಹೋಟೆಲ್ ಮಾಲೀಕರು ಭಕ್ಷಕರಲ್ಲಿ ವಿನಂತಿಸಿಕೊಳ್ಳುತ್ತಿದ್ದಾರೆ.

ವಾಣಿಜ್ಯ ಸಿಲಿಂಡರ್‌ಗಳ ದಾಸ್ತಾನು ಕುಸಿದಿರುವುದರಿಂದ, ಇರುವ ಅಲ್ಪ ಪ್ರಮಾಣದ ಗ್ಯಾಸ್ ಬಳಸಿ ದಿನದ ವ್ಯಾಪಾರ ಮುಗಿಸುವುದು ಹೋಟೆಲ್ ಮಾಲೀಕರಿಗೆ ಸವಾಲಾಗಿದೆ. ಎಣ್ಣೆಯಲ್ಲಿ ಕರೆಯುವ ತಿಂಡಿಗಳಿಗೆ ನಿರಂತರವಾಗಿ ಹೆಚ್ಚಿನ ಉರಿ ಬೇಕಾಗುತ್ತದೆ, ಇದು ಸಿಲಿಂಡರ್ ಶೀಘ್ರವಾಗಿ ಖಾಲಿಯಾಗಲು ಕಾರಣವಾಗುತ್ತದೆ. ಆದ್ದರಿಂದ ಅನಿವಾರ್ಯವಾಗಿ ಸ್ನ್ಯಾಕ್ಸ್ ವಿಭಾಗಕ್ಕೆ ಹೋಟೆಲ್‌ಗಳು ‘ಕೋಕ್’ ನೀಡಿವೆ. ಇದರಿಂದ ಹೋಟೆಲ್‌ಗಳ ಒಟ್ಟಾರೆ ಆದಾಯದಲ್ಲಿ ಶೇ. 30 ರಿಂದ 40 ರಷ್ಟು ಕುಸಿತವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: “ಹೋಟೆಲ್ ಬಂದ್ ಮಾಡಿದ್ರೆ ನಮ್ಮ ಕುಟುಂಬದ ಗತಿ ಏನು?”: ರಾಜ್ಯದ ಹಲವು ಕಡೆ ಗ್ಯಾಸ್ ಸಿಲಿಂಡರ್ ಸಮಸ್ಯೆ

ವಡೆ, ಬಜ್ಜಿ, ಪಕೋಡ ಮತ್ತು ಗೋಬಿಯಂತಹ ಸ್ನ್ಯಾಕ್ಸ್ ಐಟಂಗಳು ಹೋಟೆಲ್‌ಗಳಿಗೆ ಹೆಚ್ಚು ಲಾಭ ತಂದುಕೊಡುವ ಪದಾರ್ಥಗಳು. ಇವುಗಳ ಮಾರಾಟ ನಿಂತರೆ ಲಾಭದ ಪ್ರಮಾಣ ಗಣನೀಯವಾಗಿ ಇಳಿಯುತ್ತದೆ.ಬೆಳಗ್ಗಿನ ಉಪಹಾರಕ್ಕೆ ವಡೆ-ಪೂರಿ ಇಲ್ಲದಿದ್ದರೆ ಅಥವಾ ಸಂಜೆಯ ಸ್ನ್ಯಾಕ್ಸ್‌ಗೆ ಬಜ್ಜಿ-ಬೋಂಡಾ ಸಿಗದಿದ್ದರೆ ಗ್ರಾಹಕರು ಹೋಟೆಲ್‌ಗೆ ಬರುವುದು ಕಡಿಮೆಯಾಗುತ್ತದೆ. ಬರಿ ರೈಸ್ ಐಟಂ ತಿನ್ನಲು ಎಲ್ಲರೂ ಇಷ್ಟಪಡುವುದಿಲ್ಲ.ಸಂಜೆ ವೇಳೆ ಪಾರ್ಸೆಲ್ ಕೊಂಡೊಯ್ಯುವವರಲ್ಲಿ ಹೆಚ್ಚಿನವರು ಸ್ನ್ಯಾಕ್ಸ್ ಮತ್ತು ಎಣ್ಣೆ ತಿಂಡಿಗಳನ್ನೇ ಬಯಸುತ್ತಾರೆ. ಇದು ಸ್ಥಗಿತಗೊಂಡರೆ ಸಂಜೆಯ ವ್ಯಾಪಾರ ಶೇ. 50 ರಷ್ಟು ಕುಸಿಯಬಹುದು ಎಂದು ಹೇಳಲಾಗಿದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊಸ ಗರ್ಲ್​​ ಫ್ರೆಂಡ್ ಎಂಟ್ರಿ… ಜೀವಕ್ಕೆ ಜೀವದಂತಿದ್ದ ಅಣ್ಣನೇ ದೂರ..!

ಭಾರತದ ಸ್ಟಾರ್ ಆಟಗಾರ ಹಾರ್ದಿಕ್ ಪಾಂಡ್ಯ ಮತ್ತು ಅವರ ಅಣ್ಣ ಕೃನಾಲ್ ಪಾಂಡ್ಯ ನಡುವೆ ಬಿರುಕು ಮೂಡಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ಬೆಳವಣಿಗೆಗೆ ಹಾರ್ದಿಕ್ ಅವರ ಹೊಸ ಗರ್ಲ್​ ಫ್ರೆಂಡ್ ಮಾಡೆಲ್ ಮಹಿಕಾ ಶರ್ಮಾ ಕಾರಣ ಎನ್ನಲಾಗುತ್ತಿದೆ. ಭಾರತ ತಂಡವು 2026ರ ಟಿ20 ವಿಶ್ವಕಪ್ ಗೆದ್ದಾಗ ಅಹಮದಾಬಾದ್‌ನಲ್ಲಿ ನಡೆದ ಭರ್ಜರಿ ಸಂಭ್ರಮಾಚರಣೆಯಲ್ಲಿ ಕೃನಾಲ್ ಪಾಂಡ್ಯ ಮತ್ತು ಅವರ ಪತ್ನಿ ಪಂಖುರಿ ಶರ್ಮಾ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ.

ಅತ್ತ ಹಾರ್ದಿಕ್ ಪಾಂಡ್ಯ ಅವರ ಸಾಧನೆಯನ್ನು ಅಭಿನಂದಿಸಿ ಕೃನಾಲ್ ಸಹ ಒಂದೇ ಒಂದು ಸೋಷಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿಲ್ಲ. ಇವೆಲ್ಲವೂ ಇದೀಗ ಅಣ್ಣ-ತಮ್ಮ ದೂರವಾಗಿದ್ದಾರೆ ಎಂಬ ವದಂತಿಗೆ ವದಂತಿಗೆ ಪುಷ್ಟಿ ನೀಡಿದೆ.

ಮಹಿಕಾ ಶರ್ಮಾ ಕಾರಣ?

ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯ ದೂರವಾಗಲು ಮಹಿಕಾ ಶರ್ಮಾ ಕಾರಣ ಎನ್ನಲಾಗುತ್ತಿದೆ. ಮಹಿಕಾ ಹಾರ್ದಿಕ್ ಲೈಫ್​ಗೆ ಎಂಟ್ರಿ ಕೊಟ್ಟ ಬಳಿಕವಷ್ಟೇ ಅಣ್ತಂಮ್ಮದಿರುವ ಎಲ್ಲೂ ಜೊತೆಯಾಗಿ ಕಾಣಿಸಿಕೊಂಡಿಲ್ಲ. ಹೀಗಾಗಿಯೇ ಪಾಂಡ್ಯ ಬ್ರದರ್ಸ್ ದೂರವಾಗಲು ಮಹಿಕಾ ಶರ್ಮಾ ಕಾರಣ ಎನ್ನಲಾಗುತ್ತಿದೆ.

ಹಾರ್ದಿಕ್ ಪಾಂಡ್ಯ ಅವರು ಮಾಜಿ ಪತ್ನಿ ನತಾಶಾ ಅವರಿಂದ ದೂರಾದ ನಂತರ, ಮಾಡೆಲ್ ಮತ್ತು ನಟಿ ಮಹಿಕಾ ಶರ್ಮಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. 2025ರ ಅಕ್ಟೋಬರ್‌ನಲ್ಲಿ ಹಾರ್ದಿಕ್ ಈ ಸಂಬಂಧವನ್ನು ಅಧಿಕೃತಗೊಳಿಸಿದ್ದರು.

ವಿಶ್ವಕಪ್ ಪಂದ್ಯಗಳ ಸಮಯದಲ್ಲಿ ಮಹಿಕಾ ಮೈದಾನದಲ್ಲಿ ಹಾರ್ದಿಕ್ ಅವರಿಗೆ ಬೆಂಬಲವಾಗಿ ನಿಂತಿದ್ದರು.
ಕುಟುಂಬದ ಆಪ್ತ ಮೂಲಗಳ ಪ್ರಕಾರ, ಹಾರ್ದಿಕ್ ಅವರ ಈ ಹೊಸ ಜೀವನದ ಆಯ್ಕೆಯು ಕುಟುಂಬದ ಸದಸ್ಯರಲ್ಲಿ, ವಿಶೇಷವಾಗಿ ಕೃನಾಲ್ ಮತ್ತು ಪಂಖುರಿ ಅವರಲ್ಲಿ ಅಸಮಾಧಾನ ಮೂಡಿಸಿರುವ ಸಾಧ್ಯತೆಯಿದೆ.

ಅತ್ತ ಹಾರ್ದಿಕ್ ಅವರ ಮಾಜಿ ಪತ್ನಿ ನತಾಶಾ ಸ್ಟಾಂಕೋವಿಚ್ ಮತ್ತು ಅವರ ಮಗ ಅಗಸ್ತ್ಯ ಅವರೊಂದಿಗೆ ಕೃನಾಲ್ ದಂಪತಿ ಈಗಲೂ ಆತ್ಮೀಯವಾಗಿದ್ದಾರೆ. ಇದು ಹಾರ್ದಿಕ್ ಮತ್ತು ಕೃನಾಲ್ ನಡುವೆ ಅಂತರ ಉಂಟುಮಾಡಿರಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: IPL 2026: RCB ತಂಡದ ಮೊದಲ ಎದುರಾಳಿ ಫಿಕ್ಸ್​?

ಇದಾಗ್ಯೂ ಅಣ್ಣನ ನಡುವಿನ ಸಂಬಂಧದ ಬಗ್ಗೆ ಹಾರ್ದಿಕ್ ಇದುವರೆಗೆ ಯಾವುದೇ ನೇರ ಪ್ರತಿಕ್ರಿಯೆ ನೀಡಿಲ್ಲ. ಆದರೆ ಪ್ರಸ್ತುತ ಸನ್ನಿವೇಶಗಳನ್ನು ಗಮನಿಸಿದರೆ ಪಾಂಡ್ಯ ಬ್ರದರ್ಸ್ ದೂರವಾಗಿರುವುದು ಖಚಿತ. ಏಕೆಂದರೆ ಜೀವದಂತಿದ್ದ ತಮ್ಮ ಎರಡನೇ ಬಾರಿ ಟಿ20 ವಿಶ್ವಕಪ್ ಗೆದ್ದರೂ ಕೃನಾಲ್ ಪಾಂಡ್ಯ ಸೋಷಿಯಲ್ ಮೀಡಿಯಾ ಮೂಲಕ ಒಂದೇ ಒಂದು ಪೋಸ್ಟ್ ಹಂಚಿಕೊಂಡಿಲ್ಲ ಎಂಬುದೇ ಇದಕ್ಕೆ ಸಾಕ್ಷಿ.

 

 

Source link

‘ಕಮ್ ಅರ್ಲಿ-ಗೋ ಅರ್ಲಿ’ ಮಹಿಳಾ ಸರ್ಕಾರಿ ನೌಕರರಿಗಾಗಿ ಹೊಸ ಯೋಜನೆ ಜಾರಿಗೊಳಿಸಿದ ಸರ್ಕಾರ

ಮುಂಬೈ, ಮಾರ್ಚ್​ 11: ಅಂತಾರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ಮಹಾರಾಷ್ಟ್ರ(Maharashtra) ಸರ್ಕಾರ ಮಹಿಳೆಯರಿಗಾಗಿ ಹೊಸ ಯೋಜನೆಯೊಂದನ್ನು ಜಾರಿಗೊಳಿಸಿದೆ. ಅದಕ್ಕೆ ಕಮ್ ಅರ್ಲಿ ಗೋ ಅರ್ಲಿ ಎಂದು ನಾಮಕರಣ ಮಾಡಿದೆ. ಮಹಾರಾಷ್ಟ್ರ ವಿಧಾನ ಪರಿಷತ್ತಿನಲ್ಲಿ ಮಹಿಳಾ ಸಬಲೀಕರಣದ ಕುರಿತು ಮಹತ್ವದ ಚರ್ಚೆ ನಡೆಯಿತು. ಈ ಚರ್ಚೆಗೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್, ಮುಂಬೈ ಮಹಾನಗರ ಪ್ರದೇಶದಲ್ಲಿ (MMR) ಕೆಲಸ ಮಾಡುತ್ತಿರುವ ಮಹಿಳಾ ಸರ್ಕಾರಿ ಉದ್ಯೋಗಿಗಳಿಗಾಗಿ ಕಮ್ ಅರ್ಲಿ, ಗೋ ಅರ್ಲಿ ಯೋಜನೆಯನ್ನು ಘೋಷಿಸಿದ್ದಾರೆ.

ಮುಂಬೈನ ಸ್ಥಳೀಯ ರೈಲುಗಳು ಮತ್ತು ರಸ್ತೆಗಳಲ್ಲಿ ಜನದಟ್ಟಣೆಯ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಕ್ರಮ ಕೈಗೊಂಡಿದೆ.ಕಮ್ ಅರ್ಲಿ-ಗೋ ಅರ್ಲಿ ಉಪಕ್ರಮದಡಿಯಲ್ಲಿ, ಮಹಿಳಾ ಉದ್ಯೋಗಿಗಳು ಬೆಳಗ್ಗೆ 9.15 ರಿಂದ 9.45 ರ ನಡುವೆ ಕಚೇರಿಗೆ ಬೇಗನೆ ತಲುಪಲು ಮತ್ತು ಸಂಜೆ ಮನೆಗೆ ಮುಂಚಿತವಾಗಿಯೇ ಹಿಂದಿರುಗಲು ಸಾಧ್ಯವಾಗುತ್ತದೆ. ಅವರಿಗೆ ದಿನಕ್ಕೆ ಸುಮಾರು 30 ನಿಮಿಷಗಳ ವಿಶೇಷ ರಿಯಾಯಿತಿ ನೀಡಲಾಗುವುದು.

ಇದು ಅವರ ಪ್ರಯಾಣದ ಒತ್ತಡವನ್ನು ಕಡಿಮೆ ಮಾಡುವುದಲ್ಲದೆ, ಕೆಲಸ ಮತ್ತು ಕುಟುಂಬದ ನಡುವೆ ಉತ್ತಮ ಸಮತೋಲನವನ್ನು ಸಾಧಿಸಲು ಅವರಿಗೆ ಅನುವು ಮಾಡಿಕೊಡುತ್ತದೆ. ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಸದನಕ್ಕೆ ಮಾಹಿತಿ ನೀಡಿದರು. ಜುಲೈ 2015 ರಿಂದ ಫೆಬ್ರವರಿ 2026 ರವರೆಗೆ ನಡೆಸಲಾದ ಆಪರೇಷನ್ ಮುಸ್ಕಾನ್‌ನ 14 ಹಂತಗಳಲ್ಲಿ, 42,594 ಮಕ್ಕಳು ಸುರಕ್ಷಿತವಾಗಿದ್ದಾರೆ ಎಂದು ಕಂಡುಬಂದಿದೆ.

ಮತ್ತಷ್ಟು ಓದಿ: Women’s Day 2025: ಮಹಿಳಾ ದಿನದ ಆಚರಣೆ ಆರಂಭವಾದದ್ದು ಹೇಗೆ ಗೊತ್ತಾ?

ಹೆಚ್ಚುವರಿಯಾಗಿ, ಆಪರೇಷನ್ ಸರ್ಚ್ ಮೂಲಕ 5,066 ಮಹಿಳೆಯರು ಮತ್ತು 2,771 ಮಕ್ಕಳನ್ನು ಅವರ ಕುಟುಂಬಗಳೊಂದಿಗೆ ಮತ್ತೆ ಸೇರಿಸಲಾಗಿದೆ. ಪ್ರಸ್ತುತ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾಣೆಯಾದ ಕೋಶಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು 51 ಭರೋಸಾ ಕೋಶಗಳು ಮಹಿಳೆಯರ ದೂರುಗಳನ್ನು ಸಕ್ರಿಯವಾಗಿ ಪರಿಹರಿಸುತ್ತಿವೆ.

ಮಹಿಳೆಯರನ್ನು ಕೋಟ್ಯಧಿಪತಿಗಳನ್ನಾಗಿ ಮಾಡುವ ಗುರಿಯೊಂದಿಗೆ ಸರ್ಕಾರವು ಲಡ್ಕಿ ಬೆಹೆನ್ ಯೋಜನೆ, ನಮೋ ಮಹಿಳಾ ಸಾಕ್ಷರತಾ ಮತ್ತು ಅನ್ನಪೂರ್ಣ ದಂತಹ ಯೋಜನೆಗಳನ್ನು ಜಾರಿಗೆ ತಂದಿದೆ. ಸ್ವಸಹಾಯ ಗುಂಪುಗಳ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯನ್ನು ಒದಗಿಸಲು ಉಮೈದ್ ಮಾಲ್ ಮತ್ತು ಆನ್‌ಲೈನ್ ವೇದಿಕೆಗಳನ್ನು ಪ್ರಾರಂಭಿಸಲಾಗಿದೆ.

ರಾಜ್ಯಾದ್ಯಂತ 17,254 ಅಂಗನವಾಡಿ ಕೇಂದ್ರಗಳಲ್ಲಿ ಕುಡಿಯುವ ನೀರಿನ ಸೌಲಭ್ಯಗಳನ್ನು ಒದಗಿಸಲಾಗಿದೆ. ಮಹಿಳೆಯರ ಸುರಕ್ಷತೆಗಾಗಿ ಆಧುನಿಕ ತಂತ್ರಜ್ಞಾನದ ಬಳಕೆಯನ್ನು ವಿಸ್ತರಿಸಲಾಗುತ್ತಿದೆ. ಸೈಬರ್ ಅಪರಾಧವನ್ನು ತಡೆಗಟ್ಟಲು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ಚರ್ಚ್‌ಗೇಟ್ ಮತ್ತು ಬೋರಿವಲಿ ನಿಲ್ದಾಣಗಳಲ್ಲಿ ವ್ಯವಸ್ಥೆಗಳನ್ನು ಸ್ಥಾಪಿಸಲಾಗಿದೆ.

ಮಹಿಳಾ ಉದ್ಯೋಗಿಗಳಿಗೆ 180 ದಿನಗಳ ಹೆರಿಗೆ ರಜೆಯ ಜೊತೆಗೆ, ಅಗತ್ಯವಿದ್ದರೆ ಒಂದು ವರ್ಷದ ಅರ್ಧ ವೇತನ ರಜೆ (ವೈದ್ಯಕೀಯ ಪ್ರಮಾಣಪತ್ರವಿಲ್ಲದೆ) ನೀಡುವ ಅವಕಾಶವನ್ನು ಮಾಡಲಾಗಿದೆ. ಬಾಲ್ಯವಿವಾಹವನ್ನು ತಡೆಗಟ್ಟಲು ಮತ್ತು ಶಾಲೆಯಿಂದ ಹೊರಗುಳಿಯುವ ಹುಡುಗಿಯರ ಸಂಖ್ಯೆಯನ್ನು ಕಡಿಮೆ ಮಾಡಲು ಗ್ರಾಮೀಣ ಪ್ರದೇಶಗಳಲ್ಲಿ “ಆದಿ ಶಕ್ತಿ ಅಭಿಯಾನ”ವನ್ನು ಜಾರಿಗೆ ತರಲಾಗುತ್ತಿದೆ.

ಮಹಿಳೆಯರ ಒಟ್ಟಾರೆ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ಆರೋಗ್ಯ, ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಸ್ವಸಹಾಯ ಗುಂಪುಗಳನ್ನು ಬಲಪಡಿಸುವುದು, ಮಹಿಳಾ ರೈತರು ಮತ್ತು ಕಾರ್ಮಿಕರಿಗಾಗಿ ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಮಹಿಳೆಯರ ಸುರಕ್ಷತೆಗಾಗಿ ಪರಿಣಾಮಕಾರಿ ಕಾನೂನುಗಳನ್ನು ರೂಪಿಸುವುದು ಮತ್ತು ಅವುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದರ ಮೇಲೆ ಕೇಂದ್ರೀಕರಿಸುತ್ತಿದೆ ಎಂದು ಸುನೇತ್ರಾ ಪವಾರ್ ಹೇಳಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಶೇಷಾದ್ರಿಪುರಂ ರೈಲ್ವೆ ಅಂಡರ್‌ಪಾಸ್‌ನಲ್ಲಿ ಕಳಚಿ ಬಿದ್ದ ಬೃಹತ್ ತಗಡಿನ ಶೀಟ್: ತಪ್ಪಿದ ಭಾರೀ ಅನಾಹುತ

ಬೆಂಗಳೂರು, ಮಾ.11: ರಾಜಧಾನಿಯ ಹೃದಯಭಾಗದ ಶೇಷಾದ್ರಿಪುರಂನಿಂದ ಆನಂದರಾವ್ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಅಂಡರ್ ಪಾಸ್‌ನಲ್ಲಿ ಇಂದು ಬೆಳಿಗ್ಗೆ ದೊಡ್ಡ ಮಟ್ಟದ ಅಪಾಯವೊಂದು ತಪ್ಪಿದೆ. ರೈಲ್ವೆ ಬ್ರಿಡ್ಜ್ ಕೆಳಭಾಗಕ್ಕೆ ಅಳವಡಿಸಲಾಗಿದ್ದ ಬೃಹತ್ ತಗಡಿನ ಶೀಟ್ ಸಂಚರಿಸುತ್ತಿದ್ದ ಬಸ್‌ಗೆ ತಗುಲಿ ನಡುರಸ್ತೆಯಲ್ಲೇ ಕಳಚಿಬಿದ್ದಿದೆ. ಅಂಡರ್ ಪಾಸ್‌ನ ಮೇಲ್ಭಾಗದ ಶೀಟ್‌ಗಳನ್ನು ಹಿಡಿದಿಟ್ಟಿದ್ದ ಕಬ್ಬಿಣದ ಕ್ಲಿಪ್‌ಗಳು ತುಕ್ಕು ಹಿಡಿದು ಕಟ್ ಆಗಿದ್ದವು. ಈ ವೇಳೆ ಬಸ್ಸು ಹಾದುಹೋಗುವಾಗ ಶೀಟ್‌ಗೆ ತಗುಲಿದ ಪರಿಣಾಮ, ಭಾರೀ ಗಾತ್ರದ ತಗಡು ರಸ್ತೆಗೆ ಬಿದ್ದಿದೆ. ಸದಾ ವಾಹನ ದಟ್ಟಣೆಯಿಂದ ಕೂಡಿರುವ ಈ ರಸ್ತೆಯಲ್ಲಿ ಶೀಟ್ ಬೀಳುವಾಗ ಯಾವುದೇ ದ್ವಿಚಕ್ರ ವಾಹನ ಅಥವಾ ಪಾದಚಾರಿಗಳು ಅಡಿ ಬಾರದ ಕಾರಣ ದೊಡ್ಡ ಅನಾಹುತವೊಂದು ತಪ್ಪಿದೆ.ಸದ್ಯ ಬಿದ್ದಿರುವ ಶೀಟ್ ಮಾತ್ರವಲ್ಲದೆ, ಪಕ್ಕದಲ್ಲಿರುವ ಇತರ ಹಲವು ತಗಡಿನ ಶೀಟ್‌ಗಳ ಕ್ಲಿಪ್‌ಗಳು ಕೂಡ ತುಕ್ಕು ಹಿಡಿದು ತುಂಡಾಗಿವೆ. ಅವುಗಳು ಕೂಡ ಯಾವುದೇ ಕ್ಷಣದಲ್ಲಿ ಕೆಳಗೆ ಬೀಳುವ ಸಾಧ್ಯತೆ ಇದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ವಿಷಯ ತಿಳಿಯುತ್ತಿದ್ದಂತೆಯೇ ಶೇಷಾದ್ರಿಪುರಂ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ರಸ್ತೆಯಲ್ಲಿದ್ದ ಶೀಟ್ ತೆರವುಗೊಳಿಸಿ ಸಂಚಾರ ಸುಗಮಗೊಳಿಸಲು ಕ್ರಮ ಕೈಗೊಂಡಿದ್ದಾರೆ. ಅಲ್ಲದೆ, ಉಳಿದ ಅಪಾಯಕಾರಿ ಶೀಟ್‌ಗಳ ಬಗ್ಗೆ ರೈಲ್ವೆ ಇಲಾಖೆಗೆ ಮಾಹಿತಿ ರವಾನಿಸಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version