ತೆಲಂಗಾಣ, ಮಾರ್ಚ್ 11: ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿ ಮೂವರು ಕಬ್ಬಿಣದ ಸ್ಟ್ಯಾಂಡ್ ಹಿಡಿದು ಬರುತ್ತಿದ್ದರು. ಆ ಸ್ಟ್ಯಾಂಡ್ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಏಕಾಏಕಿ ಇಬ್ಬರ ಮೇಲೆ ವಿದ್ಯುತ್ ಪ್ರವಹಿಸಿದೆ. ಕೂಡಲೇ ಇಬ್ಬರೂ ಸಾವನ್ನಪ್ಪಿದ್ದಾರೆ. ಈ ಘಟನೆ ತೆಲಂಗಾಣದ ಮದರಿಪೇಟೆಯಲ್ಲಿ ನಡೆದಿದೆ. ಈ ಘಟನೆ ಬಳಿಕ ಸ್ಟ್ಯಾಂಡ್ಗೆ ಅಂಟಿಕೊಂಡಿದ್ದ ದೇಹಗಳನ್ನು ಅದರಿಂದ ಬಿಡಿಸಲು ಹರಸಾಹಸ ಪಡಬೇಕಾಯಿತು. ಯಾವುದೇ ಕಾರಣಕ್ಕೂ ಕಬ್ಬಿಣದ ಏಣಿ ಅಥವಾ ಇತರೆ ವಸ್ತುಗಳನ್ನು ರಸ್ತೆಯಲ್ಲಿ ತೆಗೆದುಕೊಂಡು ಹೋಗುವಾಗ ಎಷ್ಟು ಎಚ್ಚರಿಕೆಯಿಂದಿದ್ದರೂ ಸಾಲದು.
ಬೆಂಗಳೂರು, ಮಾರ್ಚ್ 11:ಗ್ರೇಟರ್ ಬೆಂಗಳೂರು ಪ್ರಾಧಿಕಾರದ(GBA) ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ ಆಸ್ತಿ ತೆರಿಗೆಗಳ ಸಂಗ್ರಹ ವಿಚಾರಕ್ಕೆ ಸಂಬಂಧಿಸಿ ರಾಜ್ಯ ಹಣಕಾಸು ಆಯೋಗ (SFC) ವಿಶೇಷ ಪರಿಹಾರವನ್ನು ಸೂಚಿಸಿದೆ. ಆಸ್ತಿ ತೆರಿಗೆ ಪಾವತಿಗೆ EMI ಯೋಜನೆ ಜೊತೆಗೆ ರಿಯಾಯಿತಿ ನೀಡುವಂತೆ ಶೀಫಾರಸು ಮಾಡಿದೆ. ಐದನೇ ರಾಜ್ಯ ಹಣಕಾಸು ಆಯೋಗದ ವರದಿ ಪ್ರಕಾರ, ಈ ಕ್ರಮದಿಂದ ಆಸ್ತಿ ತೆರಿಗೆ ಸಂಗ್ರಹಣೆಯ ಕಾರ್ಯಕ್ಷಮತೆ ಹೆಚ್ಚಬಹುದು. ಪ್ರತಿ ವರ್ಷ ಒಮ್ಮೆಲೇ ದೊಡ್ಡ ಮೊತ್ತವನ್ನು ಪಾವತಿಸುವುದು ಕೆಲವರಿಗೆ ಕಷ್ಟವಾಗಬಹುದು. ಅದನ್ನು ತಿಂಗಳ ಕಂತುಗಳಾಗಿ (EMI) ಪಾವತಿಸುವ ವ್ಯವಸ್ಥೆ ಮಾಡಿದರೆ ಪಾವತಿ ಸುಲಭವಾಗುತ್ತದೆ ಮತ್ತು ಜನರ ಮೇಲೆ ಇರುವ ಒತ್ತಡವೂ ಕಡಿಮೆಯಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇದರ ಜೊತೆಗೆ ಆಸ್ತಿ ತೆರಿಗೆಯನ್ನು ಸಮಯಕ್ಕೆ ಸರಿಯಾಗಿ ಪಾವತಿಸುವವರಿಗೆ ರಿಯಾಯಿತಿ ನೀಡುವಂತೆ ಕೂಡ ಆಯೋಗ ಶಿಫಾರಸು ಮಾಡಿದೆ. ಹಿಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ನೀಡುತ್ತಿದ್ದಂತೆ ಶೇಕಡಾ 5ರಷ್ಟು ರಿಯಾಯಿತಿ ನೀಡುವ ಕ್ರಮವನ್ನು ಮುಂದುವರಿಸಲು ಸಲಹೆ ನೀಡಲಾಗಿದೆ. ಇದರಿಂದ ಜನರು ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿಸಲು ಉತ್ತೇಜನ ದೊರೆಯುತ್ತದೆ ಎಂದು ಆಯೋಗ ಹೇಳಿದೆ.
ಕಳೆದ ವರ್ಷದ ಸೆಪ್ಟೆಂಬರ್ ವೇಳೆಗೆ, BBMP ಸುಮಾರು 2.75 ಲಕ್ಷ ಡಿಫಾಲ್ಟರ್ಗಳನ್ನು ಗುರುತಿಸಿತ್ತು. ಇವರಿಂದ ಸುಮಾರು 786 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿದಿತ್ತು. ಇದಕ್ಕೂ ಮೊದಲು, ಬಾಕಿ ತೆರಿಗೆ ವಸೂಲಿಗಾಗಿ ಜಾರಿಗೊಳಿಸಿದ್ದ ಒನ್ ಟೈಂ ಸೆಟಲ್ಮೆಂಟ್ ಯೋಜನೆ ಮೂಲಕ BBMP ಸುಮಾರು 1,200 ಕೋಟಿ ಬಾಕಿ ತೆರಿಗೆಯನ್ನು ಸಂಗ್ರಹಿಸಿತ್ತು. ಈ ಯೋಜನೆಯಲ್ಲಿ ಬಾಕಿ ತೆರಿಗೆಯ ಮೇಲಿನ ಬಡ್ಡಿಯನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗಿದ್ದು, ದಂಡದಲ್ಲಿ 50 ಶೇಕಡಾ ಕಡಿತ ನೀಡಲಾಗಿತ್ತು.
ರಾಜ್ಯ ಹಣಕಾಸು ಆಯೋಗದ ಪ್ರಕಾರ, ತೆರಿಗೆ ವ್ಯಾಪ್ತಿಗೆ ಇನ್ನೂ ಸೇರಿಸದಿರುವ ಆಸ್ತಿಗಳನ್ನು ಈ ವ್ಯಾಪ್ತಿಗೆ ತಂದರೆ ವರ್ಷಕ್ಕೆ ಸುಮಾರು 1,000 ಕೋಟಿ ಹೆಚ್ಚುವರಿ ಆದಾಯ ದೊರೆಯುವ ಸಾಧ್ಯತೆ ಇದೆ. ಇದಕ್ಕಾಗಿ GIS ಆಧಾರಿತ ಇ-ಖಾತಾ ವ್ಯವಸ್ಥೆಯನ್ನು ಆಸ್ತಿ ತೆರಿಗೆ ವ್ಯವಸ್ಥೆಯೊಂದಿಗೆ ಏಕೀಕರಿಸುವ ಕೆಲಸ ನಡೆಯುತ್ತಿದೆ. ಸುಮಾರು ಐದು ಲಕ್ಷಕ್ಕೂ ಹೆಚ್ಚು ಆಸ್ತಿಗಳು ಇನ್ನೂ ತೆರಿಗೆ ವ್ಯಾಪ್ತಿಗೆ ಸೇರಿಸದೇ ಉಳಿದಿವೆಎಂದು ವರದಿ ತಿಳಿಸಿದೆ. ಅಲ್ಲದೆ ಹೊಸ ವಿದ್ಯುತ್ ಸಂಪರ್ಕಗಳ ಮಾಹಿತಿಯನ್ನು ಗಮನದಲ್ಲಿಟ್ಟುಕೊಂಡು BESCOM ಡೇಟಾವನ್ನು ಆಸ್ತಿ ತೆರಿಗೆ ದಾಖಲೆಗಳೊಂದಿಗೆ ಹೋಲಿಕೆ ಮಾಡುವ ವ್ಯವಸ್ಥೆ ಸ್ಥಾಪಿಸುವಂತೆ ಆಯೋಗ ಶಿಫಾರಸು ಮಾಡಿದೆ. ಇದಕ್ಕಾಗಿ GBAಯ ಕಟ್ಟಡ ಪರವಾನಗಿ (Building Licence) ಮಾಹಿತಿಯನ್ನು ಬಳಸುವಂತೆ ಸೂಚಿಸಲಾಗಿದೆ ಎಂದಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಬೆಂಗಳೂರು, ಮಾರ್ಚ್ 11: ಬೆಂಗಳೂರು (Bengaluru) ಅಂದ್ರೇನೆ ದುಬಾರಿ ಅನ್ನೋದು ಅನೇಕರ ಅಭಿಪ್ರಾಯ. ಇಲ್ಲಿ ಬಾಡಿಗೆ ಮನೆಯಿಂದ ತಿಂಗಳ ಖರ್ಚು ವೆಚ್ಚವನ್ನು ತೂಗಿಸಿಕೊಳ್ಳುವಷ್ಟರಲ್ಲಿ ಕೈ ಖಾಲಿಯಾಗಿರುತ್ತದೆ. ಇದೀಗ ಬೆಂಗಳೂರಿನ ಮಹಿಳೆಗೂ ಇಂತಹದ್ದೇ ಅನುಭವವಾಗಿದೆ. ಮಹಿಳೆಯೊಬ್ಬರು ಪಿಜಿಯಿಂದ 2ಬಿಹೆಚ್ಗೆ ಅಪಾರ್ಟ್ಮೆಂಟ್ಗೆ ಸ್ಥಳಾಂತರಗೊಳ್ಳುವಾಗ 62,150 ರೂ ಖರ್ಚು ಮಾಡಿದೆ. ಈ ವೆಚ್ಚಗಳ ಬಗ್ಗೆ ನಿಮಗೆ ಯಾರು ಕೂಡ ಎಚ್ಚರಿಕೆ ಕೊಡಲ್ಲ ಎಂದು ಹೇಳಿದ್ದಾರೆ. ಈ ಮಹಿಳೆ ಹಂಚಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಶಾಕ್ ಆಗಿದ್ದಾರೆ.
krishnankuttyy ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಈ ವಿಡಿಯೋದಲ್ಲಿ ಕೃಷ್ಣನಂದಿನಿ, ರೂಮ್ಮೇಟ್ನೊಂದಿಗೆ 2 ಬಿಹೆಚ್ಕೆ ಫ್ಲಾಟ್ಗೆ ಸ್ಥಳಾಂತರಗೊಳ್ಳುವಾಗ ಮಾಡಿದ ಖರ್ಚುಗಳನ್ನು ವಿವರಿಸಿದ್ದಾರೆ. ಬೆಂಗಳೂರಿನ ಬಾಡಿಗೆ ದುಬಾರಿ ಎಂದು ಎಲ್ಲರೂ ಹೇಳುತ್ತಾರೆ, ಆದರೆ ನೀವು ಪಿಜಿಯಿಂದ ಬೆಂಗಳೂರಿನ ಫ್ಲಾಟ್ಗೆ ಬದಲಾಯಿಸಿದಾಗ ನೀವು ನಿಜವಾಗಿಯೂ ಎಷ್ಟು ಹಣವನ್ನು ಖರ್ಚು ಮಾಡುತ್ತೀರಿ ಎಂದು ಯಾರೂ ನಿಮಗೆ ಹೇಳುವುದಿಲ್ಲ. ನಾನು ಇಲ್ಲಿ ಗುಪ್ತ ವೆಚ್ಚಗಳ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ
ಫ್ಲಾಟ್ಗೆ 60,000 ರೂ ಠೇವಣಿ ಅಗತ್ಯವಿದ್ದ ಕಾರಣ, ನಾನು ಮತ್ತೆ ನನ್ನ ರೂಮ್ಮೇಟ್ ಮೊತ್ತವನ್ನು ಹಂಚಿಕೊಂಡೆವು. ಒಬ್ಬರು ತಲಾ 30,000 ರೂ ಪಾವತಿಸಬೇಕಾಯಿತು. 12,000 ರೂ ಬ್ರೋಕರೇಜ್ ಶುಲ್ಕಗಳು ವಿಧಿಸಲಾಯಿತು. ಒಬ್ಬರಿಗೆ ಮೊದಲ ತಿಂಗಳ ಬಾಡಿಗೆ 10,500 ರೂ ಆಗಿದ್ದು, ಫ್ಲಾಟ್ನಲ್ಲಿ ಉಪಕರಣಗಳು ಇಲ್ಲದ ಕಾರಣ, ಇಬ್ಬರೂ ಸೇರಿ ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ವಾಟರ್ ಪ್ಯೂರಿಫೈಯರ್ ಸೇರಿದಂತೆ ಅಗತ್ಯ ವಸ್ತುಗಳನ್ನು ಪಡೆದುಕೊಂಡೆವು. ಇದೆಲ್ಲಕ್ಕೂ ತಿಂಗಳಿಗೆ 2,500 ರೂ ವೆಚ್ಚವಾಗುತ್ತದೆ ಎಂದು ವಿವರಿಸಿದ್ದಾರೆ.
ಎಸಿಟಿ ಬ್ರಾಡ್ಬ್ಯಾಂಡ್ ಸಂಪರ್ಕಕ್ಕೆ ತಿಂಗಳಿಗೆ ಸುಮಾರು 930 ರೂ ವೆಚ್ಚವಾಗುತ್ತದೆ. ಇದಕ್ಕಾಗಿ ಮೂರು ತಿಂಗಳಿಗೆ ಸುಮಾರು 2,700 ರೂ ಮುಂಗಡ ಪಾವತಿ ಮಾಡಿದೆವು. ಸಿಲಿಂಡರ್ ಮತ್ತು ಸ್ಟೌವ್ ಸೇರಿದಂತೆ 4200 ರೂ ರೂ ತಗುಲಿತು. ದಿನಸಿ ಸಾಮಾನುಗಳಿಗಾಗಿ ತಲಾ 4,500 ರೂ ಖರ್ಚು ಮಾಡಿದ್ದೇವೆ. ಮೊದಲ ಎರಡು ದಿನಗಳಲ್ಲಿ ನಾವು ಮೂಲ ದಿನಸಿಗಾಗಿ 10 ಅಥವಾ 12 ಬಾರಿ ಜೆಪ್ಟೊದಲ್ಲಿ ಆರ್ಡರ್ ಮಾಡಿದ್ದೇವೆ. ಆದರೆ ನಾವು ಏನನ್ನಾದರೂ ಖರೀದಿಸಿದಾಗಲೆಲ್ಲಾ ಇನ್ನೇನನ್ನು ಕಳೆದುಕೊಂಡಿದ್ದೇವೆ ಎಂದು ನಮಗೆ ಅರಿವಾಯಿತು. ಇನ್ನು ಉಳಿದಂತೆ ಒಂದು ಹಾಸಿಗೆಗೆ 1,900 ರೂ ಮತ್ತು 4,800 ಗೆ ಆನ್ಲೈನ್ನಲ್ಲಿ ಖರೀದಿಸಿದ ಹಾಸಿಗೆ ಸೇರಿವೆ. ಎಲ್ಲವನ್ನು ಸೇರಿಸಿದಾಗ ಒಟ್ಟು 62,150 ರೂ ಖರ್ಚಾಯಿತು ಎಂದು ಹೇಳಿರುವುದನ್ನು ನೀವು ನೋಡಬಹುದು.
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ನಿಮ್ಮ ಖರ್ಚು ವೆಚ್ಚಗಳು ನಿಖರವಾಗಿದೆ. ಆದರೆ, ನೀವು ಬೇರೆಡೆಗೆ ಶಿಫ್ಟ್ ಆಗುವಾಗ ನಿಮ್ಮನ್ನು ನಿಜವಾಗಿಯೂ ಈ ಗುಪ್ತ ವೆಚ್ಚಗಳು ಅಚ್ಚರಿ ಪಡಿಸುತ್ತದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಕಳೆದ ವರ್ಷ ನಾನು ನನ್ನ ಫ್ಲಾಟ್ಗೆ ಸ್ಥಳಾಂತರಗೊಂಡಾಗ ಬಹುತೇಕ ಅಷ್ಟೇ ಹಣವನ್ನು ಖರ್ಚು ಮಾಡಿದ್ದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಹೊಸ ಮನೆಗೆ ಶಿಫ್ಟ್ ಆಗುವುದು ಸುಲಭದ ಮಾತಲ್ಲ. ಕೈಯಲ್ಲಿ ಅಷ್ಟೇ ದುಡ್ಡು ಇಟ್ಟುಕೊಳ್ಳೋದು ಸೇಫ್ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪಾಕಿಸ್ತಾನದ ಅತ್ಯಂತ ಶ್ರೀಮಂತ ಯೂಟ್ಯೂಬರ್ ಮತ್ತು ಐಷಾರಾಮಿ ಜೀವನಶೈಲಿಗೆ ಹೆಸರುವಾಸಿಯಾದ ರಜಬ್ ಬಟ್ ಪ್ರಸ್ತುತ ತಮ್ಮ ಖಾಸಗಿ ಜೀವನದ ಬಗ್ಗೆ ಸುದ್ದಿಯಲ್ಲಿದ್ದಾರೆ. ಪಾಡ್ಕ್ಯಾಸ್ಟ್ನಲ್ಲಿ, ಅವರು ತಮ್ಮ ಪತ್ನಿ ಎಮಾನ್ ಫಾತಿಮಾ ಅವರಿಗೆ ವಿಚ್ಛೇದನ ನೀಡುತ್ತಿರುವುದಾಗಿ ಘೋಷಿಸುವ ಮೂಲಕ ಎಲ್ಲರಿಗೂ ಆಘಾತ ನೀಡಿದರು. ಅದರ ನಂತರ, ರಜಬ್ ತಮ್ಮ ಪತ್ನಿಗೆ ಕಾನೂನು ನೋಟಿಸ್ ಅನ್ನು ಸಹ ಕಳುಹಿಸಿದ್ದಾರೆ. ವಿಚ್ಛೇದನದ ನೋಟಿಸ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಎಮನ್ ಈ ಬಗ್ಗೆ ಎಲ್ಲರಿಗೂ ತಿಳಿಸಿದ್ದಾರೆ.
ಮದುವೆ ಆಗಿ ಕೇವಲ ಒಂದೂವರೆ ವರ್ಷಗಳ ನಂತರ ರಜಬ್ ತಮ್ಮ ಪತ್ನಿಯಿಂದ ಬೇರ್ಪಡಲು ನಿರ್ಧರಿಸಿದ್ದಾರೆ. ಪಾಡ್ಕ್ಯಾಸ್ಟ್ನಲ್ಲಿ ತಾವು ಇನ್ನು ಮುಂದೆ ನಕಲಿ ಸಂಬಂಧವನ್ನು ಹೊಂದಲು ಇಷ್ಟಪಡುವುದಿಲ್ಲ ಎಂದು ರಜಬ್ ಹೇಳಿದ್ದಾರೆ. ಇದು ಮಾತ್ರವಲ್ಲದೆ, ಅವರು ತಮ್ಮ ಪತ್ನಿ ಮತ್ತು ಅತ್ತೆ ಮಾವಂದಿರ ವಿರುದ್ಧವೂ ಅನೇಕ ಆರೋಪಗಳನ್ನು ಮಾಡಿದ್ದಾರೆ.
‘ಈ ಮದುವೆಯಲ್ಲಿ ನನಗೆ ಯಾವುದೇ ಗೌರವವಿರಲಿಲ್ಲ. ನನ್ನ ಹೆಂಡತಿ ನನ್ನ ತಾಯಿಯನ್ನು ಅವಮಾನಿಸಿದಳು. ಆಕೆಯ ಕುಟುಂಬ ಸದಸ್ಯರು ನನ್ನ ತಂದೆಯ ಸ್ಥಿತಿಯನ್ನು ಪ್ರಶ್ನಿಸಿದರು. ಈಗ ನನ್ನ ಹೆತ್ತವರಿಂದ ನನಗೆ ಇನ್ನು ಅಗೌರವ ಸಹಿಸಲು ಸಾಧ್ಯವಿಲ್ಲ. ಆದ್ದರಿಂದ ನಾನು ಈ ಸಂಬಂಧಕ್ಕೆ ಮತ್ತೊಂದು ಅವಕಾಶ ನೀಡುವುದಿಲ್ಲ’ ಎಂದಿದ್ದಾರೆ ರಜಬ್.
‘ನಾನು ಮದುವೆಯಾಗಿ ಒಂದೂವರೆ ವರ್ಷವಾಗಿದೆ. ಆದರೆ ನನ್ನ ಹೆಂಡತಿ ನನ್ನೊಂದಿಗೆ ಕೇವಲ ಒಂದೂವರೆ ತಿಂಗಳು ಇದ್ದಳು’ ಎಂದು ರಜಬ್ ಪಾಡ್ಕ್ಯಾಸ್ಟ್ನಲ್ಲಿ ಆರೋಪಿಸಿದ್ದಾರೆ.
ಮತ್ತೊಂದೆಡೆ, ಎಮಾನ್ ಸಾಮಾಜಿಕ ಮಾಧ್ಯಮದಲ್ಲಿ ವಿಚ್ಛೇದನ ನೋಟಿಸ್ ಅನ್ನು ಹಂಚಿಕೊಳ್ಳುವ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ‘ಈ ಸಂಬಂಧವನ್ನು ಉಳಿಸಲು ನಾನು ಮೌನವಾಗಿದ್ದೆ. ಆದರೂ, ಪಾಡ್ಕ್ಯಾಸ್ಟ್ನಲ್ಲಿ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಲಾಯಿತು ಮತ್ತು ನಂತರ ಈ ಕಾನೂನು ನೋಟಿಸ್ ಕಳುಹಿಸಲಾಗಿದೆ. ನಾನು ಕೇಳಲು ಬಯಸುವುದು ನನ್ನ ಮತ್ತು ನನ್ನ ಮಗನಿಗೆ ಏನು ತಪ್ಪಾಗಿದೆ? ನನಗೆ ಹೇಳಲು ಬಹಳಷ್ಟು ಇದೆ. ಆದರೆ ರಂಜಾನ್ ತಿಂಗಳ ಪಾವಿತ್ರ್ಯವನ್ನು ಪರಿಗಣಿಸಿ, ನಾನು ಇನ್ನೂ ಮೌನವಾಗಿದ್ದೇನೆ’ ಎಂದು ಅವರು ಹೇಳಿದರು.
ರಜಬ್ ಮತ್ತು ಇಮಾನ್ 2024 ರಲ್ಲಿ ವಿವಾಹವಾದರು. ಅವರ ವಿವಾಹವು ಪಾಕಿಸ್ತಾನದ ಅತ್ಯಂತ ಅದ್ಧೂರಿ ವಿವಾಹಗಳಲ್ಲಿ ಒಂದಾಗಿತ್ತು. ಈ ವಿವಾಹದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.
ಟಿ20 ವಿಶ್ವಕಪ್ನಲ್ಲಿ ಅತ್ಯಂತ ಹೀನಾಯ ಪ್ರದರ್ಶನ ನೀಡಿದ್ದ ಪಾಕಿಸ್ತಾನ್ ತಂಡವು ಇದೀಗ ಬಾಂಗ್ಲಾದೇಶ್ ವಿರುದ್ಧದ ಏಕದಿನ ಸರಣಿಗಾಗಿ ಸಜ್ಜಾಗಿದೆ. ಮೂರು ಪಂದ್ಯಗಳ ಈ ಏಕದಿನ ಸರಣಿಗೆ ಆಯ್ಕೆ ಮಾಡಲಾದ ತಂಡದಲ್ಲಿ ಬಾಬರ್ ಆಝಂಗೆ ಸ್ಥಾನ ನೀಡಲಾಗಿಲ್ಲ ಎಂಬುದು ವಿಶೇಷ. ಟಿ20 ವಿಶ್ವಕಪ್ನಲ್ಲಿನ ಕಳಪೆ ಪ್ರದರ್ಶನದ ಹಿನ್ನಲೆಯಲ್ಲಿ ಬಾಬರ್ನನ್ನು ಕೈ ಬಿಡಲಾಗಿದೆ ಎನ್ನಲಾಗಿತ್ತು. ಆದರೆ ಈ ವರದಿಯನ್ನು ಪಾಕ್ ತಂಡದ ನೂತನ ನಾಯಕ ಶಾಹೀನ್ ಶಾ ಅಫ್ರಿದಿ ಅಲ್ಲೆಗೆಳೆದಿದ್ದಾರೆ.
ಪಾಕಿಸ್ತಾನ್ ಏಕದಿನ ತಂಡದಿಂದ ಬಾಬರ್ ಆಝಂ ಅವರನ್ನು ಕೈ ಬಿಟ್ಟಿಲ್ಲ. ಬದಲಾಗಿ 2027ರ ಏಕದಿನ ವಿಶ್ವಕಪ್ಗೂ ಮುನ್ನ ಯುವ ಆಟಗಾರರಿಗೆ ಅವಕಾಶ ನೀಡಲು ಅವರನ್ನು ಹೊರಗಿಡಲಾಗಿದೆ ಎಂದು ಶಾಹೀನ್ ಶಾ ಅಫ್ರಿದಿ ಹೇಳಿದ್ದಾರೆ.
ಅಂದರೆ ಬಾಬರ್ ಆಝಂ ಯಾವಾಗ ಬೇಕಿದ್ದರೂ ತಂಡಕ್ಕೆ ಮರಳಬಹುದು. ಸದ್ಯ ಅವರಿಗೆ ವಿಶ್ರಾಂತಿ ನೀಡಲಾಗಿದೆ ಅಷ್ಟೇ ಎಂದು ಶಾಹೀನ್ ಶಾ ಅಫ್ರಿದಿ ಸ್ಪಷ್ಟನೆ ನೀಡಿದ್ದಾರೆ.
ಆದರೆ ಅತ್ತ ಪಾಕ್ ತಂಡದ ಕೋಚ್ ಮೈಕ್ ಹೆಸ್ಸನ್ ಅವರು ಬಾಬರ್ ಆಝಂ ಅವರ ಬ್ಯಾಟಿಂಗ್ ಹಾಗೂ ಸ್ಟ್ರೈಕ್ ರೇಟ್ನಿಂದ ಸಂತುಷ್ಟರಾಗಿಲ್ಲ. ಹೀಗಾಗಿಯೇ ಟಿ20 ವಿಶ್ವಕಪ್ನ ಕೊನೆಯ ಪಂದ್ಯಗಳ ವೇಳೆ ಬಾಬರ್ನನ್ನು ಪ್ಲೇಯಿಂಗ್ ಇಲೆವೆನ್ನಿಂದ ಹೊರಗಿಡಲಾಗಿತ್ತು. ಇದೀಗ ಬಾಂಗ್ಲಾದೇಶ್ ವಿರುದ್ಧದ ಏಕದಿನ ಸರಣಿಯಿಂದಲೂ ಅವರನ್ನು ಕೈ ಬಿಡಲಾಗಿದೆ.
ಇತ್ತ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ನ ಈ ನಡೆಯ ವಿರುದ್ಧ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗಿದೆ. ಏಕೆಂದರೆ ಬಾಬರ್ ಆಝಂ ಏಕದಿನ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಅವರು ಟಿ20 ಕ್ರಿಕೆಟ್ನಲ್ಲಿ ಮಾತ್ರ ಕಳಪೆ ಪ್ರದರ್ಶನ ನೀಡಿದ್ದಾರೆ. ಹೀಗಾಗಿಯೇ ಟಿ20 ಕ್ರಿಕೆಟ್ಗೆ ಬಾಬರ್ ಸೂಕ್ತ ಆಟಗಾರನಲ್ಲ ಎಂಬ ಅಭಿಪ್ರಾಯಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ.
ಆದರೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಟಿ20 ಕ್ರಿಕೆಟ್ನಲ್ಲಿನ ಪ್ರದರ್ಶನವನ್ನು ಪರಿಗಣನೆಗೆ ತೆಗೆದುಕೊಂಡು ಬಾಬರ್ ಆಝಂ ಅವರನ್ನು ಏಕದಿನ ತಂಡದಿಂದ ಕೈ ಬಿಟ್ಟಿದ್ದಾರೆ. ಹೀಗಾಗಿಯೇ ಇದೀಗ ಪಾಕ್ ತಂಡದ ನೂತನ ನಾಯಕ ಶಾಹೀನ್ ಶಾ ಅಫ್ರಿದಿ ಬಾಬರ್ ಆಝಂ ಅವರನ್ನು ತಂಡದಿಂದ ಕೈ ಬಿಟ್ಟಿಲ್ಲ ಎಂಬ ಹೇಳಿಕೆಯ ಮೂಲಕ ಸಮಜಾಯಿಷಿ ನೀಡಿದ್ದಾರೆ.
ಮಾಗಡಿ, ಮಾ.11: ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ್ದರಿಂದ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರೊಂದು ಪಲ್ಟಿಯಾಗಿದ್ದು, ನಾಲ್ವರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕಿನ ಜುಟ್ಟನಹಳ್ಳಿ ಗ್ರಾಮದ ಬಳಿ ನಡೆದಿದೆ. ಕುಣಿಗಲ್ ಮೂಲದ ರಾಮು ಎಂಬ ಕ್ಯಾಂಟರ್ ಚಾಲಕ ಕುಡಿದ ಅಮಲಿನಲ್ಲಿ ಅತಿ ವೇಗವಾಗಿ ವಾಹನ ಚಾಲನೆ ಮಾಡುತ್ತಿದ್ದ. ನಿಯಂತ್ರಣ ತಪ್ಪಿದ ಕ್ಯಾಂಟರ್ ಎದುರಿಗೆ ಹೋಗುತ್ತಿದ್ದ ಕಾರು ಹಾಗೂ ಮತ್ತೇರಡು ವಾಹನಗಳಿಗೆ ಸರಣಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರೊಂದು ರಸ್ತೆಯಲ್ಲೇ ಪಲ್ಟಿಯಾಗಿದ್ದು, ಅದರಲ್ಲಿದ್ದ ನಾಲ್ವರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.ಅಪಘಾತದ ನಂತರವೂ ದರ್ಪ ತೋರಿದ ಚಾಲಕ ರಾಮು ಮೇಲೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೊಚ್ಚಿಗೆದ್ದ ಗ್ರಾಮಸ್ಥರು ಚಾಲಕನನ್ನು ಹಿಡಿದು ಸ್ಥಳದಲ್ಲೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಮಾಗಡಿ ಪೊಲೀಸರು, ಪರಿಸ್ಥಿತಿಯನ್ನು ನಿಯಂತ್ರಿಸಿ ಚಾಲಕ ರಾಮುವನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಲಕನ ವೈದ್ಯಕೀಯ ತಪಾಸಣೆ ನಡೆಸಲಾಗಿದೆ.
ಕಂಗನಾ ರನೌತ್ (Kangana Ranaut), ಬಾಲಿವುಡ್ನ ಪ್ರತಿಭಾವಂತ ನಟಿ. ನಟನೆಗೆ ನಾಲ್ಕು ರಾಷ್ಟ್ರಪ್ರಶಸ್ತಿ ಗೆದ್ದಿರುವ ನಟಿ ಕಂಗನಾ ರನೌತ್. ಅತಿ ಹೆಚ್ಚು ರಾಷ್ಟ್ರಪ್ರಶಸ್ತಿ ಪಡೆದ ಭಾರತೀಯ ನಟಿಯರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಐದು ಪ್ರಶಸ್ತಿಗಳನ್ನು ಪಡೆದಿರುವ ಶಬಾನಾ ಆಜ್ಮಿ ಮೊದಲ ಸ್ಥಾನದಲ್ಲಿದ್ದಾರೆ. ಸಂಸದೆಯೂ ಆಗಿರುವ ನಟಿ ಕಂಗನಾ ರನೌತ್, ಕಳೆದ ಕೆಲವಾರು ವರ್ಷಗಳಿಂದಲೂ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಮಾತ್ರವೇ ನಟಿಸುತ್ತಿದ್ದಾರೆ. ಅದರಲ್ಲೂ ಐತಿಹಾಸಿಕ, ಸಾಮಾಜಿಕ ಕತೆಯುಳ್ಳ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಕಂಗನಾ ಹೊಸದೊಂದು ಸಿನಿಮಾನಲ್ಲಿ ನಟಿಸಲಿದ್ದು, ಈ ಸಿನಿಮಾ ಮುಂಬೈನಲ್ಲಿ ನಡೆದ ಧಾರುಣ ಘಟನೆಯೊಂದರಿಂದ ಸ್ಪೂರ್ತಿ ಪಡೆದಿದೆ.
2008 ರ ಮುಂಬೈ ದಾಳಿಯ ಬಗೆಗಿನ ಕತೆಯನ್ನು ಹೊಂದಿರುವ ಸಿನಿಮಾನಲ್ಲಿ ಕಂಗನಾ ರನೌತ್ ನಟಿಸಲಿದ್ದಾರೆ. ಆ ಕರಾಳ ದಿನದಂದು ದುರುಳ ಭಯೋತ್ಪಾದಕರು ರೈಲ್ವೆ ನಿಲ್ದಾಣ, ರೆಸ್ಟೊರೆಂಟ್, ಐಶಾರಾಮಿ ಹೋಟೆಲ್ಗಳ ಜೊತೆಗೆ ಆಸ್ಪತ್ರೆಯೊಂದರ ಮೇಲೂ ಸಹ ದಾಳಿ ಮಾಡಿದ್ದರು. ಆಸ್ಪತ್ರೆಯಲ್ಲಿ ಗುಂಡಿನ ಸುರಿಮಳೆಯನ್ನೇ ಸುರಿಸಿದ್ದರು. ಆಸ್ಪತ್ರೆಯ ಮೇಲಿನ ದಾಳಿಯ ಘಟನೆಯನ್ನು ಆಧರಿಸಿ ಇದೀಗ ಸಿನಿಮಾ ಒಂದನ್ನು ನಿರ್ಮಿಸಲಾಗುತ್ತಿದ್ದು, ಸಿನಿಮಾನಲ್ಲಿ ಕಂಗನಾ ರನೌತ್ ನಾಯಕಿಯಾಗಿ ನಟಿಸಲಿದ್ದಾರೆ.
ಸಿನಿಮಾನಲ್ಲಿ ಕಂಗನಾ ರನೌತ್ ನರ್ಸ್ ಪಾತ್ರದಲ್ಲಿ ನಟಿಸಲಿದ್ದಾರೆ. ಅದೇ ಸಿನಿಂಆನಲ್ಲಿ ಮರಾಠಿಯ ಖ್ಯಾತ ನಟಿ ಗಿರಿಜಾ ಓಕ್ ಸಹ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ಸಿನಿಮಾವನ್ನು ಮನೋಜ್ ತಪಾಡಿಯಾ ನಿರ್ದೇಶನ ಮಾಡಲಿದ್ದು, ಇದು ಅವರ ಮೊದಲ ನಿರ್ದೇಶನದ ಸಿನಿಮಾ ಆಗಿರಲಿದೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಪ್ರಸ್ತುತ ಚಾಲ್ತಿಯಲ್ಲಿದ್ದು, ಸಿನಿಮಾದ ಸಂಪೂರ್ಣ ಚಿತ್ರೀಕರಣ ಸೆಟ್ನಲ್ಲಿಯೇ ನಡೆಯಲಿದೆ. ಸಿನಿಮಾದ ಚಿತ್ರೀಕರಣ ಬೇಗನೇ ಮುಗಿಸಿ ಇದೇ ವರ್ಷದಲ್ಲಿ ಬಿಡುಗಡೆ ಮಾಡುವ ಆಲೋಚನೆ ಚಿತ್ರತಂಡಕ್ಕೆ ಇದೆ. ಸಿನಿಮಾಕ್ಕೆ ‘ಭಾರತ ಭಾಗ್ಯ ವಿಧಾತ’ ಎಂದು ಹೆಸರಿಡಲಾಗಿದೆ.
ಕಂಗನಾ ರನೌತ್, ಸಂಸದೆ ಆದ ಬಳಿಕ ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಮಾಡಿದ್ದಾರೆ. ಸಂಸದೆ ಆಗುವ ಮುಂಚೆ ‘ಎಮರ್ಜೆನ್ಸಿ’ ಸಿನಿಮಾನಲ್ಲಿ ನಟಿಸಿ, ತಾವೇ ನಿರ್ದೇಶನವನ್ನೂ ಮಾಡಿದ್ದರು. ಆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಫೇಲ್ ಆಯ್ತು. ಇದೀಗ ಅವರು ತಮಿಳು ಮತ್ತು ಹಿಂದಿಯಲ್ಲಿ ಏಕಕಾಲದಲ್ಲಿ ನಿರ್ಮಾಣಗೊಳ್ಳುತ್ತಿರುವ ಥ್ರಿಲ್ಲರ್ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಅದರ ಹೊರತಾಗಿ ‘ಭಾರತ ಭಾಗ್ಯ ವಿಧಾತ’ ಸಿನಿಮಾನಲ್ಲಿಯೂ ನಟಿಸಲಿದ್ದಾರೆ.
ಚಾಮರಾಜನಗರ, ಮಾರ್ಚ್ 11: ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು ಭಕ್ತರಲ್ಲಿ ಆತಂಕ ಹೆಚ್ಚಿಸಿದೆ. ಬೆಟ್ಟದ ಆನೆ ತಲೆದಿಂಬದ ಬಳಿ ಚಿರತೆ ಓಡಾಟ ಕಂಡುಬಂದಿದ್ದು, ರಸ್ತೆಯ ಇಳಿಜಾರಿನ ತಿರುವಿನಲ್ಲಿ ತಡೆಗೋಡೆ ಪಕ್ಕದಲ್ಲಿ ಚಿರತೆ ಕುಳಿತಿರುವ ದೃಶ್ಯ ವಾಹನದಲ್ಲಿ ತೆರಳುತ್ತಿದ್ದವರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಶಿವರಾತ್ರಿ ಜಾತ್ರೆ ವೇಳೆ ಪಾದಯಾತ್ರಿಕನನ್ನು ಚಿರತೆ ಕೊಂದು ತಿಂದಿತ್ತು. ಈಗ ಮತ್ತೆ ಅದೇ ಸ್ಥಳದಲ್ಲಿ ಚಿರತೆ ಕಾಣಿಸಿಕೊಂಡಿದೆ.
ಅಪಾಯಕಾರಿ ಗಡಿಯಲ್ಲಿ ನಿಂತು ಶತ್ರುಗಳ ಹುಟ್ಟಡಗಿಸಿ, ನಮ್ಮನ್ನು ರಕ್ಷಣೆ ಮಾಡುವುದರಿಂದ ಹಿಡಿದು, ಯಾರು ಏನೇ ಅಪಾಯದಲ್ಲಿದ್ದರೂ ಅವರನ್ನು ಕಾಪಾಡಲು ಕೂಡ ಸೈನಿಕ(Soldier)ರು ಸದಾ ಸಿದ್ಧರಿರುತ್ತಾರೆ. ಇತ್ತೀಚೆಗೆ ಮಥುರಾದಿಂದ ದೆಹಲಿಗೆ ಪ್ರಯಾಣಿಸುವಾಗ ಒತ್ತಡದ ಪರಿಸ್ಥಿತಿಯಲ್ಲಿ ಸಿಲುಕಿದ ರೂಪ್ ಎಂಬ ಇನ್ಸ್ಟಾಗ್ರಾಮ್ ಬಳಕೆದಾರರು ಮಾಡಿದ ವೀಡಿಯೊ ಮತ್ತೊಂದು ಉದಾಹರಣೆಯಾಗಿದೆ.
ಆಕೆಯ ಫೋನ್ ಬ್ಯಾಟರಿ ಡೆಡ್ ಆಗಿತ್ತು. ಪೋಷಕರು ಕಾಯುತ್ತಿದ್ದರು ಆದರೆ ಅವರೆಲ್ಲಿದ್ದಾರೆ ಎಂದು ಹುಡುಕಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ, ಆಗ ಸೈನಿಕರೊಬ್ಬರು ತಮ್ಮಲ್ಲಿರುವ ಪವರ್ ಬ್ಯಾಂಕ್ ಕೊಟ್ಟು ಮೊಬೈಲ್ ಚಾರ್ಜ್ ಮಾಡಲು ಸಹಾಯ ಮಾಡಿದರಲ್ಲದೆ, ಅವರು ಪೋಷಕರ ಬಳಿ ಸೇರುವಂತೆ ಮಾಡಿದ್ದಾರೆ ಎಂದು ಆಕೆ ಬರೆದುಕೊಂಡಿದ್ದಾರೆ.
ಮಥುರಾ ಜಂಕ್ಷನ್ನಲ್ಲಿ, ಹೋಳಿ ಮುಗಿದ ನಂತರ ಬ್ರಜ್ನಿಂದ ಹಿಂತಿರುಗುವಾಗ, ದೆಹಲಿಗೆ ಹೋಗುವ ತಮ್ಮ ರೈಲು ರಾತ್ರಿ 8.45 ಕ್ಕೆ ಇತ್ತು.ನನ್ನ ಫೋನ್ನಲ್ಲಿ ಶೇಕಡಾ ಎರಡರಷ್ಟು ಚಾರ್ಜ್ ಇತ್ತು, ನನ್ನ ಪವರ್ ಬ್ಯಾಂಕ್ ನೀರಿನಲ್ಲಿ ಬಿದ್ದಿತ್ತು. ತನ್ನ ಲೈವ್ ಲೊಕೇಷನ್ ಪೋಷಕರಿಗೆ ಕಳುಹಿಸಲು ನನಗೆ ಕೇವಲ 5 ನಿಮಿಷಗಳ ಚಾರ್ಜಿಂಗ್ ಬೇಕಾಯಿತು ಎಂದು ರೂಪ್ ಹೇಳಿದ್ದಾರೆ.
ಅಲ್ಲಿರುವ ಅಂಗಡಿ ಮುಂಗಟ್ಟುಗಳ ಬಳಿ ಹೋಗಿ ಚಾರ್ಜ್ ಮಾಡಿಕೊಡಿ ಎಂದು ಕೇಳಿದ್ದರೂ ಯಾರೂ ಅವಕಾಶ ಮಾಡಿಕೊಟ್ಟಿರಲಿಲ್ಲ. ಪ್ಲಾಟ್ಫಾರ್ಮ್ 6 ರ ಪಕ್ಕದಲ್ಲಿ ಮಿಲಿಟರಿ ರೈಲು ನಿಂತಿರುವುದನ್ನು ನೋಡಿ ಏನೋ ನೆಮ್ಮದಿ ಸಿಕ್ಕಂತಾಯಿತು. ಅಲ್ಲಿ ಯೋಧರೊಬ್ಬರ ಬಳಿ ತನ್ನ ಕಷ್ಟ ಹೇಳಿಕೊಂಡಾಗ ಅವರು ಕೂಡಲೇ ಪವರ್ ಬ್ಯಾಂಕ್ ತಂದುಕೊಟ್ಟರು, ಯಾರೂ ಸಹಾಯಕ್ಕೆ ಬಾರದಿದ್ದಾಗ ಅವರು ಬಂದರು ಎಂದು ಹೇಳಿಕೊಂಡಿದ್ದಾರೆ.
ಹಿಂದೂ ಪಂಚಾಂಗದ ಪ್ರಕಾರ, 2026ರ ಯುಗಾದಿ ಹಬ್ಬವನ್ನು ಮಾರ್ಚ್ 19, 2026, ಗುರುವಾರದಂದು ಆಚರಿಸಲಾಗುತ್ತದೆ. ಇದನ್ನು ಹಿಂದೂಗಳ ಪಾಲಿನ ಹೊಸ ವರ್ಷವಾಗಿ ಆಚರಿಸಲಾಗುತ್ತದೆ. ಈ ವರ್ಷ 12 ರಾಶಿಗಳ ಪೈಕಿ ಕೆಲವು ರಾಶಿಗಳಿಗೆ ಸಾಕಷ್ಟು ಶುಭ ಫಲಗಳು ಒದಗಿಬರಲಿದೆ. ಅದರಲ್ಲೂ ಧನುಸ್ಸು ರಾಶಿಯವರಿಗೆ ಸಾಕಷ್ಟು ಶುಭ ಫಲಗಳು ದೊರೆಯಲಿವೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ ಬಸವರಾಜ ಗುರೂಜಿಯವರು ಭವಿಷ್ಯ ನುಡಿದಿದ್ದಾರೆ.
2026ರ ಪರಾಭವನಾಮ ಸಂವತ್ಸರದ ಯುಗಾದಿ ವರ್ಷದ ಧನುಸ್ಸು ರಾಶಿಯ ಸಮಗ್ರ ಫಲಾಫಲಗಳನ್ನು ವಿವರಿಸಿದ್ದಾರೆ. ಮೂಲಾ, ಪೂರ್ವಾಷಾಢ, ಮತ್ತು ಉತ್ತರಾಷಾಢ ನಕ್ಷತ್ರದವರು ಈ ರಾಶಿಗೆ ಸೇರುತ್ತಾರೆ.ಗ್ರಹಗಳ ಸಂಚಾರವನ್ನು ಗಮನಿಸಿದಾಗ, ರಾಶ್ಯಾಧಿಪತಿಯಾದ ಗುರು ಏಳನೇ ಸ್ಥಾನದಿಂದ ಎಂಟನೇ ಸ್ಥಾನಕ್ಕೆ (ದುಸ್ಥಾನ/ಅಷ್ಟಮ ಸ್ಥಾನ) ಸಂಚಾರ ಮಾಡಲಿದೆ. ಶನಿ ಗ್ರಹವು ನಾಲ್ಕನೇ ಮನೆಯಲ್ಲಿಯೇ ಸಂಚಾರ ಮಾಡಲಿದ್ದು, ಇದನ್ನು ಅರ್ಧಾಷ್ಟಮ ಎಂದು ಪರಿಗಣಿಸಲಾಗುತ್ತದೆ. ರಾಹು ಗ್ರಹ ಮೂರನೇ ಮನೆಯಿಂದ ಎರಡನೇ ಮನೆಗೆ ಸಾಗಲಿದ್ದು, ಕೇತು ಒಂಬತ್ತನೇ ಮನೆಯಿಂದ ಎಂಟನೇ ಮನೆಗೆ ಚಲಿಸಲಿದೆ. ಈ ಗ್ರಹಗಳ ಸ್ಥಾನಪಲ್ಲಟದ ಹೊರತಾಗಿಯೂ ಧನುಸ್ಸು ರಾಶಿಯವರು ಭಯಪಡಬೇಕಾದ ಅಗತ್ಯವಿಲ್ಲ ಎಂದು ಗುರೂಜಿ ಸ್ಪಷ್ಟಪಡಿಸಿದ್ದಾರೆ.
2026ರಲ್ಲಿ ಧನುಸ್ಸು ರಾಶಿಯವರಿಗೆ ಆದಾಯ 14 ಪಟ್ಟು ಹೆಚ್ಚಿದ್ದು, ಖರ್ಚು ಕಡಿಮೆಯಿರಲಿದೆ. ಒಟ್ಟಾರೆ ಆರ್ಥಿಕ ಪ್ರಗತಿಯು ಉತ್ತಮವಾಗಿರಲಿದೆ. ಆರೋಗ್ಯದ ವಿಚಾರದಲ್ಲಿ ಯಾವುದೇ ಗಂಭೀರ ಸಮಸ್ಯೆಗಳಿಲ್ಲದಿದ್ದರೂ, ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಆಸ್ಪತ್ರೆಗೆ ಹೋಗುವುದಕ್ಕಿಂತ ವ್ಯಾಯಾಮ ಮತ್ತು ಆಯುರ್ವೇದವನ್ನು ಅವಲಂಬಿಸುವುದು ಉತ್ತಮ ಎಂದು ಸಲಹೆ ನೀಡಲಾಗಿದೆ. ಸುಖ-ದುಃಖಗಳ ಅನುಪಾತವು ಎಂಟು ಸುಖಗಳು ಮತ್ತು ಮೂರು ದುಃಖಗಳನ್ನು ಸೂಚಿಸುತ್ತದೆ.
ಸಂಬಂಧಗಳ ವಿಷಯದಲ್ಲಿ ಹೆಚ್ಚಿನ ಎಚ್ಚರಿಕೆ ಅಗತ್ಯ. ಗಂಡ-ಹೆಂಡತಿ, ತಂದೆ-ಮಕ್ಕಳು, ಸ್ನೇಹಿತರು ಮತ್ತು ಪಾಲುದಾರಿಕೆ ಸಂಬಂಧಗಳಲ್ಲಿ ಸಡಿಲಿಕೆ ಕಂಡುಬರುವ ಸಾಧ್ಯತೆ ಇದೆ. ಆದಾಗ್ಯೂ, ಈ ವರ್ಷ ಕೀರ್ತಿ ಮತ್ತು ಪ್ರತಿಷ್ಠೆಗಳಿಗೆ ಭಾಜನರಾಗಲಿದ್ದು, ಆಕಸ್ಮಿಕ ಧನಯೋಗ ಪ್ರಾಪ್ತಿಯಾಗಲಿದೆ. ವ್ಯಾಪಾರ ವ್ಯವಹಾರಗಳು ಚೆನ್ನಾಗಿ ನಡೆಯಲಿವೆ. ಪ್ರಯಾಣಗಳು ಲಾಭದಾಯಕವಾಗಿದ್ದು, ಮಕ್ಕಳಿಂದ ಶುಭ ಸುದ್ದಿ ನಿರೀಕ್ಷಿಸಬಹುದು. ಹಳೆಯ ಬಾಕಿಗಳು ವಸೂಲಿಯಾಗಲಿದ್ದು, ಅಧಿಕಾರಿಗಳಿಂದ ಉತ್ತಮ ಸಹಕಾರ ದೊರೆಯಲಿದೆ.
ವಾಹನ ಚಲಾಯಿಸುವಾಗ ಎಚ್ಚರಿಕೆ ವಹಿಸುವುದು ಉತ್ತಮ. ಭೂ ವಿಚಾರಗಳಲ್ಲಿ ಲಾಭ-ನಷ್ಟಗಳು ಸಂಭವಿಸಬಹುದು. ಅತಿಯಾದ ಹಣ ಹರಿದು ಬಂದಾಗ, ಯೋಚಿಸದೆ ಹೂಡಿಕೆ ಮಾಡುವುದು ನಷ್ಟಕ್ಕೆ ಕಾರಣವಾಗಬಹುದು. ಸರ್ಕಾರಿ ನೌಕರರು, ರೈತರು, ವಿದ್ಯಾರ್ಥಿಗಳು (ವಿಶೇಷವಾಗಿ ಮಹಿಳಾ ವಿದ್ಯಾರ್ಥಿನಿಯರು) ಮತ್ತು ಗುತ್ತಿಗೆದಾರರಿಗೆ ಈ ವರ್ಷ ಶುಭಕರವಾಗಿದೆ. ವಿದ್ಯಾರ್ಥಿಗಳು ಸ್ವಾವಲಂಬಿಗಳಾಗಿ ಹೊಸ ವ್ಯಾಪಾರ ಅಥವಾ ಸಂಸ್ಥೆಗಳನ್ನು ಸ್ಥಾಪಿಸಲು ಪ್ರಯತ್ನಿಸಬಹುದು. ವಿದೇಶ ಯೋಗವೂ ಕೂಡಿಬಂದಿದೆ. ಆದಾಗ್ಯೂ, ಮಕ್ಕಳ ಆರೋಗ್ಯ ಮತ್ತು ವಾಹನಕ್ಕೆ ಸಂಬಂಧಿಸಿದ ಸಣ್ಣಪುಟ್ಟ ಕಂಟಕಗಳು ಸ್ವಲ್ಪ ನೋವನ್ನುಂಟು ಮಾಡಬಹುದು.
ಕಾನೂನು ವಿಚಾರಗಳಲ್ಲಿ ಶುಭ ಯೋಗವಿದ್ದು, ವರ್ಷದ ಕಡೆಯ ಭಾಗದಲ್ಲಿ ಕೆಲವರಿಗೆ ಸ್ಥಾನಪಲ್ಲಟ ಅಥವಾ ಮನೆ ಕಟ್ಟುವ ಯೋಗವಿದೆ. ಆದಷ್ಟು ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಉತ್ತಮ. ರಾಜಕೀಯ ವ್ಯಕ್ತಿಗಳಿಗೆ ಈ ವರ್ಷ ಅಷ್ಟು ಶುಭಕರವಾಗಿಲ್ಲ. ಹಣ ವ್ಯಯವಾಗುವ ಸಾಧ್ಯತೆ ಇದೆ. ಪಶ್ಚಾತ್ತಾಪ ಮತ್ತು ನೀರಸ ಮನಃಸ್ಥಿತಿ ಹೆಚ್ಚಾಗುವ ಸಾಧ್ಯತೆಗಳೂ ಇವೆ. ಸಂಬಂಧಗಳಲ್ಲೇ ವಿವಾಹ ಯೋಗ ಕೂಡಿಬರುವ ಸಾಧ್ಯತೆ 2026ರ ಪರಾಭವನಾಮ ಸಂವತ್ಸರದಲ್ಲಿ ಇರಬಹುದು. ಅನುಮಾನಗಳಿಗೆ ಆಸ್ಪದ ನೀಡದೆ, ಬೇರೆಯವರ ಬಗ್ಗೆ ಅತಿಯಾದ ಚರ್ಚೆಗಳಿಂದ ದೂರವಿರಿ. ವರ್ಷದ ಕೊನೆಯ ಭಾಗದಲ್ಲಿ ಬೇಕಾದವರ ಅಗಲಿಕೆ ನೋವನ್ನುಂಟು ಮಾಡಬಹುದು.
ಒಟ್ಟಾರೆಯಾಗಿ ಧನುಸ್ಸು ರಾಶಿಯವರಿಗೆ ಶೇ.65ರಷ್ಟು ಶುಭ ಫಲಗಳು ದೊರೆಯಲಿವೆ. ಗುರುವಾರ ಮತ್ತು ಭಾನುವಾರ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಸೂಕ್ತ ದಿನಗಳಾಗಿವೆ. ಗುಲಾಬಿ ಮತ್ತು ಗೋಧಿ ಬಣ್ಣಗಳನ್ನು ಹೆಚ್ಚಾಗಿ ಬಳಸುವುದು ಉತ್ತಮ. ಅದೃಷ್ಟ ಸಂಖ್ಯೆಗಳು 5 ಮತ್ತು 4 ಆಗಿವೆ. ಪರಿಹಾರಗಳಿಗಾಗಿ, ಗಣೇಶನ ಆರಾಧನೆ, ಸಂಕಷ್ಟ ಚತುರ್ಥಿಯಂದು ಪ್ರಸಾದ ಅರ್ಪಣೆ, ಪ್ರತಿದಿನ “ಓಂ ಗಂ ಗಣಪತಯೇ ನಮಃ” ಮಂತ್ರ ಜಪಿಸುವುದು ಉತ್ತಮ. ದೇವಸ್ಥಾನಗಳಲ್ಲಿ ಅಥವಾ ಭಿಕ್ಷುಕರಿಗೆ ದಾನ ಮಾಡುವುದು ಸಹ ಶುಭಕರ. ಸಂಧ್ಯಾ ಕಾಲದಲ್ಲಿ ಅಥವಾ ಗುರುವಾರದ ಸಂಧ್ಯಾ ಕಾಲದಲ್ಲಿ ವಿಷ್ಣು ಸಹಸ್ರನಾಮ ಜಪಿಸುವುದರಿಂದ ಹೆಚ್ಚಿನ ಶುಭ ಫಲಗಳು ದೊರೆಯಲಿವೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ