ಎಲ್​ಪಿಜಿ ಕೊರತೆ: ರಿಲಯನ್ಸ್‌ನಿಂದ ಜಾಮ್‌ನಗರದಲ್ಲಿ ಅನಿಲ ಉತ್ಪಾದನೆ ಹೆಚ್ಚಳದ ಬಗ್ಗೆ ಘೋಷಣೆ

ಎಲ್​ಪಿಜಿ ಕೊರತೆ: ರಿಲಯನ್ಸ್‌ನಿಂದ ಜಾಮ್‌ನಗರದಲ್ಲಿ ಅನಿಲ ಉತ್ಪಾದನೆ ಹೆಚ್ಚಳದ ಬಗ್ಗೆ ಘೋಷಣೆ

ಮುಂಬೈ, ಮಾರ್ಚ್ 11: ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಣಾಮವಾಗಿ ಕರ್ನಾಟಕ ಸೇರಿ ಭಾರತದ ಹಲವೆಡೆ ಎಲ್​​ಪಿಜಿ ಸಿಲಿಂಡರ್​​ಗಳ ಅಭಾವ ತಲೆದೋರಿದೆ. ಈ ಹೊತ್ತಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮಹತ್ತರವಾದ ಘೋಷಣೆ ಮಾಡಿದ್ದು, ಜಾಮ್ ನಗರದಲ್ಲಿನ ಸಂಸ್ಕರಣಾಗಾರ ಹಾಗೂ ಪೆಟ್ರೋಕೆಮಿಕಲ್ಸ್ ಸಮುಚ್ಚಯದಿಂದ ಎಲ್​​ಪಿಜಿ ಉತ್ಪಾದನೆಯನ್ನು ಸ್ವಯಂಪ್ರೇರಿತವಾಗಿ ಗರಿಷ್ಠ ಪ್ರಮಾಣದಲ್ಲಿ ಹೆಚ್ಚಿಸುವುದಕ್ಕೆ ನಿರ್ಧಾರ ಕೈಗೊಂಡಿರೋದಾಗಿ ತಿಳಿಸಿದೆ. ಜಾಮ್ ನಗರದಲ್ಲಿ ಇರುವ ಈ ಘಟಕ ವಿಶ್ವದಲ್ಲಿಯೇ ಅತಿದೊಡ್ಡ ಸಂಯೋಜಿತ ಸಂಸ್ಕರಣೆ ಹಬ್ ಎಂಬ ದಾಖಲೆಗೆ ಪಾತ್ರವಾಗಿದೆ ಎಂದು ಕಂಪನಿಯ ಹೇಳಿದ್ದು,  KG- D6 ಬ್ಲಾಕ್​​ನಲ್ಲಿ ಉತ್ಪಾದನೆ ಆದ ಅನಿಲವನ್ನು ಆದ್ಯತೆ ವಲಯಗಳಿಗೆ ಪೂರೈಕೆಮಾಡಲಾಗುವುದು. ರಾಷ್ಟ್ರೀಯ ಇಂಧನ ಆದ್ಯತೆಗಳು ಹಾಗೂ ಸರ್ಕಾರಿ ಮಾರ್ಗದರ್ಶನದ ಅನ್ವಯ ಆದ್ಯತಾ ವಲಯಗಳಿಗೆ ಪೂರೈಕೆ ಬೆಂಬಲ ನೀಡುವುದಕ್ಕಾಗಿ ಈ ಮಹತ್ವದ ಘೋಷಣೆ ಮಾಡಿರೋದಾಗಿ ಕಂಪನಿ ತಿಳಿಸಿದೆ.

ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ವಿಪರೀತದ ಏರಿಳಿತ ಕಾಣುತ್ತಿರುವ ಸಂದರ್ಭದಲ್ಲಿ, ಭಾರತೀಯ ಕುಟುಂಬಗಳಿಗೆ ಅಗತ್ಯವಾದ ಇಂಧನವನ್ನು ಅಡೆತಡೆಯೇ ಇಲ್ಲದೆ ಪೂರೈಕೆ ಮಾಡುತ್ತೇವೆ ಎಂದು ಈ ಮೂಲಕ ಖಾತ್ರಿ ಪಡಿಸುತ್ತೇವೆ. ಇದೀಗ ರಾಷ್ಟ್ರೀಯ ಆದ್ಯತೆಯಾಗಿದೆ ಎಂದು ಮುಕೇಶ್ ಅಂಬಾನಿ ನೇತೃತ್ವದ ಕಂಪನಿ ತಿಳಿಸಿದೆ. ಹಗಲು-ರಾತ್ರಿ ನಮ್ಮ ತಂಡ ಸಂಸ್ಕರಣಾಗಾರದಿಂದ ಗರಿಷ್ಠ ಪ್ರಮಾಣದ ಉತ್ಪಾದನೆಗಾಗಿ ಶ್ರಮಿಸುತ್ತಿದೆ. ಮತ್ತು ಎಲ್​​ಪಿಜಿ ಉತ್ಪಾದನೆ ವಿಸ್ತರಣೆಗೆ ಪ್ರಯತ್ನಿಸುತ್ತಿದೆ. ಈ ಶ್ರಮದ ಹಿಂದಿನ ಉದ್ದೇಶ ಏನೆಂದರೆ, ದೇಶೀಯ ಮಾರುಕಟ್ಟೆಗೆ ಸ್ಥಿರವಾದ ಹಾಗೂ ವಿಶ್ವಾಸಾರ್ಹ ಅನಿಲ ಪೂರೈಕೆ ಮಾಡುವುದಾಗಿದೆ.

ಇದನ್ನೂ ಓದಿ: ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ರಾಜೀನಾಮೆ; ರಾಹುಲ್ ಭಾಟಿಯಾ ಹಂಗಾಮಿ ಮುಖ್ಯಸ್ಥ

ರಿಲಯನ್ಸ್​​ಗೆ ಕೋಟ್ಯಂತರ ಭಾರತೀಯ ಕುಟುಂಬಗಳ ಯೋಗಕ್ಷೇಮ ಹಾಗೂ ಭಾರತೀಯ ಇಂಧನ ಭದ್ರತೆ ಯಾವಾಗಲೂ ಮೊದಲು. ನಾವು ಭಾರತ ಸರ್ಕಾರದ ಜೊತೆಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ. ಮತ್ತು ರಾಷ್ಟ್ರೀಯ ಮಾರ್ಗದರ್ಶಿ ಸೂತ್ರಗಳಿಗೆ ಮತ್ತು ವಿತರಣೆ ಆದ್ಯತೆಗಳಿಗೆ ಸಂಪೂರ್ಣ ಬದ್ಧರಾಗಿದ್ದೇವೆ. ಇಂಧನ ಪೂರೈಕೆ ಯಾವ ವಲಯಕ್ಕೆ ಹಾಗೂ ಸಮುದಾಯಕ್ಕೆ ಬಹಳ ಅಗತ್ಯ ಆಗಿರುತ್ತದೋ ಅವರಿಗೆ ತಲುಪಿಸುವುದನ್ನು ಖಾತ್ರಿ ಪಡಿಸುತ್ತೇವೆ ಎಂದು ಕಂಪನಿ ಹೇಳಿದೆ. ನಾವು ದೇಶದೊಂದಿಗೆ ದೃಢವಾಗಿ ನಿಲ್ಲುತ್ತೇವೆ ಮತ್ತು ಭಾರತದ ಇಂಧನ ಭದ್ರತೆಗೆ ಹಾಗೂ ದೇಶಕ್ಕೆ ಬೇಕಾದ ಅಗತ್ಯ ಇಂಧನ ಪೂರೈಕೆ ವಿಶ್ವಾಸಾರ್ಹತೆ ಉಳಿಯುವುದಕ್ಕೆ ಏನೆಲ್ಲ ಮಾಡುವುದಕ್ಕೆ ಸಾಧ್ಯವೋ ಆ ಎಲ್ಲವನ್ನೂ ಮಾಡುವುದಕ್ಕೆ ಬದ್ಧರಾಗಿದ್ದೇವೆ ಎಂದು ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಸ್ಕೂಟಿಯಲ್ಲಿ ಹೋಗುತ್ತಿದ್ದ ಯುವತಿಯ ಬೀಳಿಸಿ ಸರ ಕದ್ದ ಕಳ್ಳ, ಓಡಿಹೋಗಲು ಗಾಡಿಯಲ್ಲಿ ಪೆಟ್ರೋಲ್ ಇಲ್ಲದೆ ಸಿಕ್ಕಾಕ್ಕೊಂಡ

ವೆನ್ನಪ್ಪುವಾ, ಮಾರ್ಚ್​ 11: ಬೈಕ್​​ನಲ್ಲಿ ಹೋಗುತ್ತಿದ್ದ ಯುವತಿಯನ್ನು ಅಡ್ಡಗಟ್ಟಿ ಕಳ್ಳನೊಬ್ಬ ಆಕೆಯ ಕತ್ತಿನಲ್ಲಿದ್ದ ಚಿನ್ನದ ಸರ ದೋಚಿರುವ ಘಟನೆ ಶ್ರೀಲಂಕಾದಲ್ಲಿ ನಡೆದಿದೆ. ವೆನ್ನಪ್ಪುವಾದ ಥಂಬರವಿಲಾ ಪ್ರದೇಶದಲ್ಲಿ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ಘಟನೆಯನ್ನು ಸೆರೆಹಿಡಿದಿದೆ.ಆರೋಪಿಯು ಬೈಕ್​ನಲ್ಲಿ ಬಂದು ಸ್ಕೂಟಿಯಲ್ಲಿ ಹೋಗುತ್ತಿದ್ದ ಯುವತಿಯನ್ನು ಅಡ್ಡಗಟ್ಟಿ ಆಕೆಯನ್ನು ಬೀಳಿಸಿ ಸರ ಕದ್ದು ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಬೈಕ್​​ನಲ್ಲಿ ಪೆಟ್ರೋಲ್ ಇಲ್ಲದ ಕಾರಣ ಸಾರ್ವಜನಿಕರ ಕೈಗೆ ಸಿಕ್ಕಿ ಒದೆ ತಿಂದಿದ್ದಾನೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಆಸೆ’ ಧಾರಾವಾಹಿಯಲ್ಲಿ ಭಾವನೆಗಳ ಪಯಣ; ಸೂರ್ಯ ಪಾತ್ರಧಾರಿ ನಿನಾದ್ ಏನಂತಾರೆ?

ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ ‘ಆಸೆ’ ಧಾರಾವಾಹಿಗೆ (Serial) ದೊಡ್ಡ ವೀಕ್ಷಕರ ಬಳಗ ಇದೆ. ವೀಕ್ಷಕರಿಗೆ ಹೆಚ್ಚು ಇಷ್ಟ ಆಗಿದ್ದು, ಈ ಸೀರಿಯಲ್​ನ ನಿನಾದ್ ಹರಿತ್ಸ ಮಾಡುತ್ತಿರುವ ಸೂರ್ಯ ಪಾತ್ರ. ಅವರ ಸ್ಮೈಲ್, ಸ್ಟೈಲ್, ಡೈಲಾಗ್ ಎಲ್ಲರಿಗೂ ಇಷ್ಟ ಆಗಿದೆ. ಒಂದು ಸೀರಿಯಲ್ 800 ಪ್ರಸಾರ ಕಾಣುತ್ತದೆ ಎಂದರೆ ಅದು ಸಣ್ಣ ವಿಷಯ ಅಲ್ಲವೇ ಅಲ್ಲ. ನಿನಾದ್ ಅವರು ಈ ಜರ್ನಿಯನ್ನು ನೆನೆದಿದ್ದಾರೆ.

‘ಆಸೆ’ ಧಾರಾವಾಹಿಯಲ್ಲಿ ಹಲವು ಭಾವನೆಗಳನ್ನು ಬೆರೆಸಲಾಗಿದೆ. ಇಲ್ಲಿ ಮಧ್ಯಮ ವರ್ಗದವರ ಒದ್ದಾಟ ಇದೆ, ಅಪ್ಪ-ಮಗನ ಬಾಂಧವ್ಯ, ಅರೇಂಜ್ ಮ್ಯಾರೇಜ್ ಬಳಿಕ ಎದುರಾಗಬಹುದಾದ ತೊಂದರೆ, ಅಮ್ಮ-ಮಗನ ಮುನಿಸು, ಹೀಗೆ ಹಲವು ವಿಷಯಗಳನ್ನು ಹೇಳುವ ಪ್ರಯತ್ನ ಆಗುತ್ತಿದೆ. ಸೂರ್ಯ ಅವರು ತಮ್ಮ ನಟನೆಯ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರು ಧಾರಾವಾಹಿ ಬಗ್ಗೆ ಮಾತನಾಡಿದ್ದಾರೆ.

‘ಆಸೆ ರಿಮೇಕ್ ಧಾರಾವಾಹಿ. ಇದು ಮರಾಠಿ, ಗುಜರಾತಿ ಸೇರಿದಂತೆ ಅನೇಕ ಭಾಷೆಗಳಲ್ಲಿ ಪ್ರಸಾರ ಆಗುತ್ತಿದೆ. ಆದರೆ, ಕನ್ನಡದಲ್ಲಿ ನನ್ನ ಪಾತ್ರವನ್ನು ವಿಶೇಷವಾಗಿ ಡಿಸೈನ್ ಮಾಡಲಾಗಿದೆ. ಇದಕ್ಕೆ ನಮ್ಮ ನಿರ್ದೇಶಕರು ಕಾರಣ. ಮೃಗಶಿರ ಶ್ರೀಕಾಂತ್ ಅವರ ಬರವಣಿಗೆ ಧಾರಾವಾಹಿಗೆ ಮತ್ತೊಂದು ಬಲ. ಅವರಿಲ್ಲ ಎಂದರೆ, ಸೂರ್ಯ ಇಲ್ಲ. ಇವರಿಂದ ಸೂರ್ಯ ಪಾತ್ರ ಉದಯಿಸಿದೆ’ ಎಂದಿದ್ದಾರೆ ಅವರು.

‘ಮಂಡ್ಯ ರಮೇಶ್ ಜೊತೆ ನಟಿಸೋ ಅವಕಾಶ ನನಗೆ ಸಿಕ್ಕಿದೆ. ಅವರು ನಮ್ಮ ಜೊತೆ ಗೆಳೆಯರಂತೆ ವರ್ತಿಸುತ್ತಾರೆ. ಜೋಕ್ ಮಾಡಿಕೊಂಡು ಇರ್ತಾರೆ. ಅವರ ಜೊತೆ ಒಳ್ಳೆಯ ಬಾಂಡ್ ಇದೆ. ಅವರು ಅಂತ ಅಲ್ಲ, ಧಾರಾವಾಹಿಯ ಎಲ್ಲಾ ಕಲಾವಿದರ ಜೊತೆ ಒಳ್ಳೆಯ ಬಾಂಡ್ ಇದೆ. ನಾವು ಖುಷಿಯಿಂದ ಕೆಲಸ ಮಾಡುತ್ತಿದ್ದೇವೆ’ ಎಂದು ಸೂರ್ಯ ಹೇಳಿದ್ದಾರೆ.

‘ನನ್ನದು ಮಧ್ಯಮ ವರ್ಗ. ನನ್ನ ಜೀವನದಲ್ಲಿ ಏನೋ ನಡೆದಿರುತ್ತದೆ. ನಂತರ ಅದೇ ದೃಶ್ಯವನ್ನು ಧಾರಾವಾಹಿಯಲ್ಲೂ ನೀಡುತ್ತಾರೆ. ನನಗೆ ನಿಜಕ್ಕೂ ಅಚ್ಚರಿ ಎನಿಸಿ ಬಿಡುತ್ತದೆ. ಧಾರಾವಾಹಿ ಜನರಿಗೆ ಹತ್ತಿರವಾಗಲು ಇದೇ ಕಾರಣ. ಸ್ಟೋರಿ ರೈಟರ್​​ಗೆ ಎಲ್ಲ ಕೊಡುಗೆ ಕೊಡುತ್ತೇನೆ’ ಎನ್ನುತ್ತಾರೆ ಅವರು.

ಕಲಾವಿದ ಪಾತ್ರವನ್ನು ಮನಸ್ಸಿಗೆ ತೆಗೆದುಕೊಳ್ಳದೆ, ಕೇವಲ ನಟನೆಗೆ ಸೀಮಿತ ಮಾಡಿಕೊಳ್ಳಬೇಕು ಎಂಬುದು ನಿನಾದ್ ಅವರ ಟಿಪ್ಸ್. ಅದನ್ನು ಮನಸ್ಸಿಗೆ ತೆಗೆದುಕೊಂಡರೆ ಅದು ವೈಯಕ್ತಿಕ ಜೀವನದ ಮೇಲೆ ಪ್ರಭಾವ ಬೀರುತ್ತದೆ, ಇದರಿಂದ ವೈಯಕ್ತಿಕ ಜೀವನಕ್ಕೆ ತೊಂದರೆ ಆಗುತ್ತದೆ ಎಂದು ಅವರು ಬಲವಾಗಿ ನಂಬಿದ್ದಾರೆ.

ಧಾರಾವಾಹಿ ಹಾಗೂ ಸಿನಿಮಾ ಶೂಟ್​​​ನಲ್ಲಿ ಸಾಕಷ್ಟು ವ್ಯತ್ಯಾಸ ಇರುತ್ತದೆ. ಸಿನಿಮಾಗಳಲ್ಲಿ ಒಂದು ನಿಗದಿತ ಸಮಯದಲ್ಲಿ ಶೂಟ್ ಮಾಡಲಾಗುತ್ತದೆ. ಆದರೆ, ಧಾರಾವಾಹಿಯಲ್ಲಿ ಹಾಗಾಗೋದಿಲ್ಲ. ನಿನಾದ್​​ಗೂ ಅದೇ ರೀತಿಯ ತೊಂದರೆ ಎದುರಾಗುತ್ತಿದೆ. ವೈಯಕ್ತಿಕವಾಗಿ ಏನಾದರೂ ಪ್ಲ್ಯಾನ್ ಮಾಡಿಕೊಂಡಾಗಲೇ ಶೂಟಿಂಗ್ ಇರುತ್ತದೆ. ಆದರೂ ಕೆಲಸವನ್ನು ಇಷ್ಟಪಟ್ಟು ಮಾಡುತ್ತಿರುವುದರಿಂದ, ಅವರು ಕಷ್ಟಪಟ್ಟಾದರೂ ವೈಯಕ್ತಿಕ ಜೀವನ ಹಾಗೂ ವೃತ್ತಿ ಜೀವನವನ್ನು ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿದ್ದಾರೆ.

ಇದನ್ನೂ ಓದಿ: ‘ಕರ್ಣ ಧಾರಾವಾಹಿಯಿಂದ ಹೊರ ನಡೆದ ನಾಗಾಭರಣ; ಅಭಿಜಿತ್ ಆಗಮನ

ಇತ್ತೀಚೆಗೆ ಬಂದ ‘ಮಾರಿಗಲ್ಲು ವೆಬ್’ ವೆಬ್ ಸರಣಿಯಲ್ಲಿ ನಿನಾದ್ ನಟಿಸಿದ್ದಾರೆ. ಒಂದು ಬದಲಾವಣೆ ಇರಲಿ ಎಂಬ ಕಾರಣಕ್ಕೆ ಅವರು ಇದರ ಭಾಗ ಆಗಿದ್ದರು. ಈಗ ಅವರು ಸಿನಿಮಾ ಮಾಡುವ ಆಸಕ್ತಿ ತೋರಿಸುತ್ತಿದ್ದಾರೆ. ವೃತ್ತಿ ಜೀವನಕ್ಕೆ ಬೆಂಬವಾಗಿ ನಿಂತ ಪತ್ನಿ ರಮ್ಯಾಗೂ ಅವರು ಧನ್ಯವಾದ ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಭಾರತ ತಂಡ ಸೂರ್ಯಕುಮಾರ್, ಜಯ್ ಶಾ ಅವರ ಕುಟುಂಬ ಸ್ವತ್ತಲ್ಲ!

ಟಿ20 ವಿಶ್ವಕಪ್ ಗೆದ್ದ ಬಳಿಕ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಗೌತಮ್ ಗಂಭೀರ್ ಹಾಗೂ ಐಸಿಸಿ ಅಧ್ಯಕ್ಷ ಜಯ್ ಶಾ ಟ್ರೋಫಿಯನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿದಕ್ಕೆ ಭಾರತದ ಮಾಜಿ ಕ್ರಿಕೆಟಿಗ ಕೀರ್ತಿ ಆಝಾದ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನ್ಯೂಝಿಲೆಂಡ್​ ವಿರುದ್ಧದ ಗೆಲುವಿನ ಐಸಿಸಿ ಅಧ್ಯಕ್ಷ ಜಯ್​ ಶಾ, ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ಕೋಚ್ ಗೌತಮ್ ಗಂಭೀರ್ ಟ್ರೋಫಿಯೊಂದಿಗೆ ಅಹಮದಾಬಾದ್‌ನ ಹನುಮಾನ್ ಟೆಕ್ರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ಈ ನಡೆಗೆ ಆಕ್ರೋಶ ಹೊರಹಾಕಿರುವ ಕೀರ್ತಿ ಆಝಾದ್, ಭಾರತ ತಂಡ ಎಂಬುದು ಸೂರ್ಯ ಕುಮಾರ್, ಜಯ್ ಶಾ ಅವರ ಕುಟುಂಬ ಸ್ವತ್ತಲ್ಲ. ಅವರಿಗೆ ಇಷ್ಟ ಬಂದಂತೆ ನಡೆದುಕೊಳ್ಳಲು. ಟೀಮ್ ಇಂಡಿಯಾ ಇಡೀ ಭಾರತವನ್ನು ಪ್ರತಿನಿಧಿಸುತ್ತದೆ. ಕೇವಲ ಒಂದು ಧರ್ಮವನ್ನಲ್ಲ ಎಂದು ಕಿಡಿಕಾರಿದ್ದಾರೆ.

1983 ರಲ್ಲಿ ಕಪಿಲ್ ದೇವ್ ನೇತೃತ್ವದಲ್ಲಿ ನಾವು ವಿಶ್ವಕಪ್ ಗೆದ್ದಾಗ, ನಮ್ಮ ತಂಡದಲ್ಲಿ ಹಿಂದೂ, ಮುಸ್ಲಿಂ, ಸಿಖ್ ಮತ್ತು ಕ್ರಿಶ್ಚಿಯನ್ ಆಟಗಾರರು ಇದ್ದರು. ನಾವು ಟ್ರೋಫಿಯನ್ನು ನಮ್ಮ ಧಾರ್ಮಿಕ ಜನ್ಮಸ್ಥಳವಾದ ನಮ್ಮ ಮಾತೃಭೂಮಿ  ಹಿಂದೂಸ್ತಾನ್‌ಗೆ ತಂದಿದ್ದೆವು.

ಇದೀಗ ಏಕೆ ಟ್ರೋಫಿಯನ್ನು ದೇವಸ್ಥಾನಕ್ಕೆ ಎತ್ತಕೊಂಡು ಹೋಗಿದ್ದಾರೆ? ಅದೇ ಯಾಕೆ ಮಸೀದಿಗೆ ಅಥವಾ ಚರ್ಚ್​ ಇಲ್ಲಾ ಗುರುದ್ವಾರಗೆ ತೆಗೆದುಕೊಂಡು ಹೋಗಿಲ್ಲ. ಈ ತಂಡ ಭಾರತವನ್ನು ಪ್ರತಿನಿಧಿಸುತ್ತದೆ. ಇದರ ಬದಲಾಗಿ ಸೂರ್ಯ ಕುಮಾರ್ ಯಾದವ್ ಅಥವಾ ಜಯ್ ಶಾ ಅವರ ಕುಟುಂಬವಲ್ಲ!

ಇದೇ ವಿಶ್ವಕಪ್ ತಂಡದಲ್ಲಿದ್ದ ಮೊಹಮ್ಮದ್ ಸಿರಾಜ್ ಟ್ರೋಫಿಯನ್ನು ಮಸೀದಿಗೆ ಎತ್ತುಕೊಂಡು ಹೋಗಿಲ್ಲ. ಅದರಲ್ಲೂ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ, ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಪಡೆದ ಸಂಜು ಸ್ಯಾಮ್ಸನ್​​ ಚರ್ಚ್​ಗೆ ತೆಗೆದುಕೊಂಡು ಹೋಗಲಿಲ್ಲ.

ಈ ಟ್ರೋಫಿಯು 1.4 ಬಿಲಿಯನ್ ಭಾರತೀಯರಿಗೆ ಸೇರಿದೆ. ಇದು ಒಂದು ಧರ್ಮದ ವಿಜಯೋತ್ಸವವಲ್ಲ! ಎಂದು ಕೀರ್ತಿ ಆಝಾದ್ ಆಕ್ರೋಶವನ್ನು ಹೊರಹಾಕಿದ್ದಾರೆ. ಇದೀಗ ಕೀರ್ತಿ ಆಝಾದ್ ಅವರ ಈ ಅಭಿಪ್ರಾಯಕ್ಕೆ ಪರ-ವಿರೋಧ ವ್ಯಕ್ತವಾಗುತ್ತಿದೆ.

Source link

ವೇತನ‌ ಸಿಗದೆ ಪೊಲೀಸ್ ಸಿಬ್ಬಂದಿ ಪರದಾಟ: ಸಂಬಳ ನೀಡಲೂ ಸರ್ಕಾರದ ಬಳಿ ಇಲ್ವಾ ಹಣ?

ಹುಬ್ಬಳ್ಳಿ, ಮಾರ್ಚ್​​ 11: ಕಳೆದ ಫೆಬ್ರವರಿ ತಿಂಗಳ ವೇತನ ಇನ್ನೂ ಪಾವತಿ ಆಗದ ಹಿನ್ನೆಲೆ ಪೊಲೀಸ್ ಸಿಬ್ಬಂದಿ ಪರದಾಟ ನಡೆಸಬೇಕಾದ ಪ್ರಸಂಗ ಉದ್ಭವಿಸಿದೆ. ತಿಂಗಳ ಆರಂಭದಲ್ಲಿಯೇ ಜಮೆ ಆಗುತ್ತಿದ್ದ ವೇತನ‌ ಇಲ್ಲಿಯವರೆಗೂ ಜಮೆ ಆಗಿಲ್ಲ. ಹೀಗಾಗಿ ಸಾವಿರಾರು ಮಂದಿ ಪೊಲೀಸ್​​ ಸಿಬ್ಬಂದಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಬಳ ವಿಳಂಬದಿಂದ ಮನೆ ಬಾಡಿಗೆ, ಬ್ಯಾಂಕ್ ಸಾಲದ ಕಂತುಗಳು, ಮಕ್ಕಳ ಶಿಕ್ಷಣ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ಮತ್ತು ಎಸ್‌ಪಿ ವ್ಯಾಪ್ತಿಯಲ್ಲಿರುವ 3,200 ಸಿಬ್ಬಂದಿಗೂ ಇನ್ನೂ ವೇತನ ಬಂದಿಲ್ಲ ಎನ್ನಲಾಗಿದೆ.

ಬಿ.ವೈ. ವಿಜಯೇಂದ್ರ ಕಿಡಿ

ವಿಜಯೇಂದ್ರ ಪೋಸ್ಟ್​​

ಪೊಲೀಸ್​​ ಸಿಬ್ಬಂದಿಗೆ ಸರ್ಕಾರ ಇನ್ನೂ ವೇತನ ಪಾವತಿಸದಿರುವ ವಿಚಾರವಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿ ಕಾರಿದ್ದಾರೆ. ಈ ಬಗ್ಗೆ ಎಕ್ಸ್​​ ಪೋಸ್ಟ್​​ ಮಾಡಿರುವ ಅವರು, ಈ ಬಾರಿ 4.48 ಲಕ್ಷ ಕೋಟಿ ರೂ ಗಾತ್ರದ ಅತಿ ದೊಡ್ಡ ಬಜೆಟ್ ಮಂಡಿಸಿ ರಾಜ್ಯದ ಆರ್ಥಿಕತೆ ಸದೃಢವಾಗಿದೆ ಎನ್ನುವ ಮರೀಚಿಕೆಯಲ್ಲಿ ವಿಹರಿಸುತ್ತಿದ್ದೀರಿ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಆದರೆ ಬಜೆಟ್ ಪುಸ್ತಕದಲ್ಲಿ ನೀವು ಬರೆದುಕೊಂಡ ಅಂಕಿ-ಸಂಖ್ಯೆಗಳ ಆಚೆಗೆ, ವಾಸ್ತವ ಜಗತ್ತಿನ ಕಟುಸತ್ಯವನ್ನು ಮಾಧ್ಯಮ ವರದಿ ಬಯಲು ಮಾಡಿದೆ. ರಾಜ್ಯದ ಕಾನೂನು ಸುವ್ಯವಸ್ಥೆ ಕಾಯುವ ಪೊಲೀಸ್ ಸಿಬ್ಬಂದಿಗಳಿಗೆ ಹಿಂದಿನ ತಿಂಗಳ ವೇತನ ನೀಡಲು ನಿಮ್ಮ ಕಾಂಗ್ರೆಸ್​​ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದರೆ ನಿಮ್ಮ ಬಜೆಟ್ ಎಷ್ಟು ಅವಾಸ್ತವಿಕವಾಗಿದೆ ಎಂದು ಬೇರೆ ಹೇಳಬೇಕೇ? ಪೊಲೀಸ್ ಸಿಬ್ಬಂದಿಗೆ ವೇತನ ನೀಡಲು ನಿಮ್ಮ ಸರ್ಕಾರದ ಬಳಿ ಹಣವಿಲ್ಲ, ಆದರೂ ನಿಮ್ಮ ಒಣ ಪ್ರತಿಷ್ಠೆಯ ಮಾತುಗಳಿಗೆ ಬರವಿಲ್ಲದಿರುವುದು ನಾಚಿಕೆಗೇಡಿನ ಸಂಗತಿಯಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಆಸ್ತಿ ತೆರಿಗೆ ಪಾವತಿಗೂ EMI?; ಜಿಬಿಎಯಿಂದ ಬೆಂಗಳೂರಿಗರಿಗೆ ಸಿಗುತ್ತಾ ಗುಡ್​​ ನ್ಯೂಸ್​?

ಹುಬ್ಬಳ್ಳಿ-ಧಾರವಾಡ, ಬಳ್ಳಾರಿ, ವಿಜಯನಗರ, ಕಲಬುರ್ಗಿ, ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಸಾವಿರಾರು ಪೊಲೀಸರು ಸಂಬಳವಿಲ್ಲದೆ ಕಂಗಾಲಾಗಿದ್ದಾರೆ. ಸುಳ್ಳು ಪ್ರಚಾರಕ್ಕೆ ಕೋಟಿ ಕೋಟಿ ಸುರಿಯುವ ಈ ಕಾಂಗ್ರೆಸ್ ಸರ್ಕಾರಕ್ಕೆ, ಹಗಲಿರುಳು ಶ್ರಮಿಸುವ ನಮ್ಮ ರಕ್ಷಕರಿಗೆ ವೇತನ ನೀಡಲು ಹಣವಿಲ್ಲ. ಇದು ಕೇವಲ ತಾಂತ್ರಿಕ ವಿಳಂಬವಲ್ಲ, ರಾಜ್ಯದ ಆರ್ಥಿಕ ದಿವಾಳಿತನದ ಮತ್ತೊಂದು ಸಾಕ್ಷಿ. ಒಂದು ಕಡೆ ದಾಖಲೆ ಮೊತ್ತದ ಬಜೆಟ್ ಘೋಷಣೆ, ಮತ್ತೊಂದು ಕಡೆ ಸಂಬಳಕ್ಕಾಗಿ ಪೊಲೀಸರ ಪರದಾಟ . ಈ ವೈರುಧ್ಯವೇ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ. ಬಜೆಟ್ ನಲ್ಲಿ ಅಂಕಿ-ಅಂಶಗಳ ಮೂಲಕ ಜನರನ್ನು ಮರಳು ಮಾಡುವ ನಿಮ್ಮ ಅನಗತ್ಯ, ಅವಾಸ್ತವಿಕ ಸರ್ಕಸ್ ಬಯಲಾಗಿದೆ. ಕಾಗದದ ಮೇಲಿನ ಘೋಷಿತ ಅಂಕಿ-ಅಂಶಗಳಿಗಿಂತ, ಜನರ ಸ್ವಾಭಿಮಾನದ ಬದುಕು ಮುಖ್ಯ. ನಿಮ್ಮ ವೈಫಲ್ಯಗಳಿಗೆ ಕಾರಣ ಏನೇ ಇರಲಿ, ಈ ಕೂಡಲೇ ರಾಜ್ಯದ ಪೊಲೀಸ್ ಸಿಬ್ಬಂದಿಯ ಬಾಕಿ ವೇತನ ಬಿಡುಗಡೆ ಮಾಡಿ ಎಂದು ವಿಜಯೇಂದ್ರ ಒತ್ತಾಯಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

13 ವರ್ಷಗಳಿಂದ ಕೋಮಾದಲ್ಲಿರುವ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂಕೋರ್ಟ್​ ಅನುಮತಿ

ನವದೆಹಲಿ, ಮಾರ್ಚ್​ 11: ಕಳೆದ ಹದಿಮೂರು ವರ್ಷಗಳಿಂದ ಕೋಮಾ(Coma)ದಲ್ಲಿರುವ ಹರೀಶ್ ರಾಣಾ ದಯಾಮರಣ( Euthanasia)Supreme Court passive euthanasia verdict, India passive euthanasia ruling, Supreme Court end of life decision, right to die case India, Harish Rana 13 years coma verdict,
ಕ್ಕೆ ಸುಪ್ರೀಂಕೋರ್ಟ್​ ಇಂದು(ಮಾರ್ಚ್​ 11) ಅನುಮತಿ ನೀಡಿದೆ. ಚಲಿಸಲು ಅಥವಾ ಮಾತನಾಡಲು ಸಾಧ್ಯವಾಗದೆ ಜೀವಂತ ಶವದಂತಾಗಿದ್ದಾನೆ. ಆತನ ವೃದ್ಧ ಪೋಷಕರು, ಅವರ ಚೇತರಿಕೆಯ ಭರವಸೆಯನ್ನು ತ್ಯಜಿಸಿ, ತಮ್ಮ ಮಗನ ದಯಾಮರಣಕ್ಕೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ನ್ಯಾಯಾಲಯ ಅಂತೂ ಅಸ್ತು ಎಂದಿದೆ.

ಚಂಡೀಗಢ ವಿಶ್ವವಿದ್ಯಾಲಯದಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆಯುತ್ತಿದ್ದ ರಾಣಾ, ಆಗಸ್ಟ್ 20, 2013 ರಂದು ತಮ್ಮ ಪಿಜಿ ವಸತಿಗೃಹದ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಬಿದ್ದು ತಲೆಗೆ ತೀವ್ರ ಗಾಯಗಳಾಗಿ ಸಂಪೂರ್ಣ ಅಂಗವೈಕಲ್ಯಕ್ಕೆ ಒಳಗಾಗಿದ್ದರು. ಅಂದಿನಿಂದ, ಅವರು ಉಸಿರಾಟಕ್ಕಾಗಿ ಟ್ರಾಕಿಯೊಸ್ಟೊಮಿ ಟ್ಯೂಬ್ ಮತ್ತು ಪೋಷಣೆಗಾಗಿ ಗ್ಯಾಸ್ಟ್ರೋಸ್ಟೊಮಿ ಟ್ಯೂಬ್ ಅನ್ನು ಅವಲಂಬಿಸಿದ್ದಾರೆ.

ಹರೀಶ್ ಅವರ ಪೋಷಕರು, ಇತರ ಇಬ್ಬರು ಮಕ್ಕಳನ್ನು ಸಹ ನೋಡಿಕೊಳ್ಳುತ್ತಿದ್ದಾರೆ, ದೆಹಲಿಯಲ್ಲಿರುವ ತಮ್ಮ ಮನೆಯನ್ನು ಮಾರಿ, ಏಮ್ಸ್‌ನಲ್ಲಿ ಅವರ ಹಾಸಿಗೆಯ ಪಕ್ಕದಲ್ಲಿಯೇ ಇರಲು ಗಾಜಿಯಾಬಾದ್‌ಗೆ ಸ್ಥಳಾಂತರಗೊಂಡರು. ವರ್ಷಗಳಲ್ಲಿ, ತಮ್ಮ ಮಗನ ದೀರ್ಘಕಾಲದ ನೋವನ್ನು ಕೊನೆಗೊಳಿಸಲು ಅವರು ದಯಾಮರಣಕ್ಕೆ ಕಾನೂನು ಅನುಮತಿಯನ್ನು ಕೋರಿದ್ದರು.

ಮತ್ತಷ್ಟು ಓದಿ: ಹಾಲಿಗೆ ಆಲ್ಕೋಹಾಲ್ ಬೆರೆಸಿದ ಅಜ್ಜಿ;ಕೋಮಾಗೆ ಜಾರಿದ 4 ತಿಂಗಳ ಮೊಮ್ಮಗು

ಏಮ್ಸ್ ಸಲ್ಲಿಸಿದ ವೈದ್ಯಕೀಯ ಮೌಲ್ಯಮಾಪನದ ಪ್ರಕಾರ, ರಾಣಾ ಅವರ ಸ್ಥಿತಿಯಿಂದ ಚೇತರಿಸಿಕೊಳ್ಳುವ ಸಾಧ್ಯತೆಯಿಲ್ಲ. ವರದಿಯು ಅತ್ಯಂತ ದುಃಖಕರವಾಗಿದೆ ಎಂದು ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಗಮನಿಸಿದ್ದಾರೆ. ಇದು ನಮಗೆ ಕಷ್ಟಕರವಾದ ನಿರ್ಧಾರ, ಆದರೆ ಈ ಹುಡುಗ ಇಷ್ಟೊಂದು ಯಾತನೆಯಲ್ಲಿ ಉಳಿಯಲು ನಾವು ಬಿಡುವುದಿಲ್ಲ, ಇಂದು ನಾವು ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾದ ಸಮಯ ಬಂದಿದೆ ಎಂದರು.

ದಯಾಮರಣವನ್ನು ಮೊದಲು ಸುಪ್ರೀಂ ಕೋರ್ಟ್ 2011 ರ ಅರುಣಾ ಶಾನ್‌ಬಾಗ್ ಪ್ರಕರಣದಲ್ಲಿ ಗುರುತಿಸಿತು ಮತ್ತು ನಂತರ 2018 ರಲ್ಲಿ ಕಾಮನ್ ಕಾಸ್ vs ಯೂನಿಯನ್ ಆಫ್ ಇಂಡಿಯಾ ತೀರ್ಪಿನ ಅಡಿಯಲ್ಲಿ ಕಾನೂನುಬದ್ಧಗೊಳಿಸಲಾಯಿತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

Unibrow Astrology: ಎರಡು ಹುಬ್ಬುಗಳು ಪರಸ್ಪರ ಸಂಧಿಸಿದ್ದರೆ ಅಶುಭವೇ? ಶಾಸ್ತ್ರಗಳು ಹೇಳುವುದೇನು?

ಸಮಾಜದಲ್ಲಿ ದೈಹಿಕ ಲಕ್ಷಣಗಳ ಆಧಾರದ ಮೇಲೆ ವ್ಯಕ್ತಿಯ ಗುಣಲಕ್ಷಣ ಅಥವಾ ಭವಿಷ್ಯವನ್ನು ಅಳೆಯುವ ಸಂಪ್ರದಾಯ ಬಹಳ ಹಳೆಯದು. ತಲೆಯ ಮೇಲಿನ ಸುಳಿ, ಅಂಗೈ ರೇಖೆಗಳಂತೆಯೇ ‘ಜೋಡು ಹುಬ್ಬು’ (Unibrow) ಅಥವಾ ಹುಬ್ಬುಗಳ ರಚನೆಯ ಬಗ್ಗೆಯೂ ವಿಭಿನ್ನ ನಂಬಿಕೆಗಳು ಚಾಲ್ತಿಯಲ್ಲಿವೆ. ಹಿರಿಯರ ಅನುಭವ ಮತ್ತು ಜ್ಯೋತಿಷ್ಯ ಶಾಸ್ತ್ರದ ಹಿನ್ನೆಲೆಯಲ್ಲಿ ಇವುಗಳನ್ನು ನೋಡುವುದಾದರೆ ಕುತೂಹಲಕಾರಿ ವಿಷಯಗಳು ಬೆಳಕಿಗೆ ಬರುತ್ತವೆ.

ವಿವಾಹ ಮತ್ತು ಜೀವನದ ಬಗೆಗಿನ ನಂಬಿಕೆಗಳು:

ಜೋಡು ಹುಬ್ಬು ಹೊಂದಿರುವವರ ಬಗ್ಗೆ ಜನರಲ್ಲಿ ಭಿನ್ನಾಭಿಪ್ರಾಯಗಳಿವೆ. ಕೆಲವು ಹಿರಿಯರ ಪ್ರಕಾರ, ಎರಡು ಹುಬ್ಬುಗಳು ಒಂದಕ್ಕೊಂದು ಅಂಟಿಕೊಂಡಿರುವವರು ಜೀವನದಲ್ಲಿ ಎರಡು ಮದುವೆಯಾಗುವ ಸಾಧ್ಯತೆ ಇರುತ್ತದೆ ಎನ್ನಲಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಇನ್ನು ಕೆಲವರು ಅಂತಹ ವ್ಯಕ್ತಿಗಳಿಗೆ ದಾಂಪತ್ಯ ಸುಖ ಅಷ್ಟಾಗಿ ಇರುವುದಿಲ್ಲ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸುತ್ತಾರೆ. ಆದರೆ ಇವೆಲ್ಲವೂ ಕೇವಲ ನಂಬಿಕೆಗಳಾಗಿದ್ದು, ವೈಜ್ಞಾನಿಕವಾಗಿ ಸಾಬೀತಾಗಿಲ್ಲ.

ಜ್ಯೋತಿಷ್ಯ ಶಾಸ್ತ್ರದ ವಿಶ್ಲೇಷಣೆ:

ಸಮುದ್ರಿಕಾ ಶಾಸ್ತ್ರ ಅಥವಾ ಜ್ಯೋತಿಷ್ಯದ ಪ್ರಕಾರ, ಹುಬ್ಬುಗಳು ವ್ಯಕ್ತಿಯ ಶ್ರಮಜೀವಿ ಗುಣವನ್ನು ಸೂಚಿಸುತ್ತವೆ. ಆದರೆ ಇದರ ಪರಿಣಾಮ ಸ್ತ್ರೀ ಮತ್ತು ಪುರುಷರ ಮೇಲೆ ಬೇರೆ ಬೇರೆಯಾಗಿರುತ್ತದೆ ಎಂದು ಹೇಳಲಾಗುತ್ತದೆ:

ಮಹಿಳೆಯರ ಮೇಲೆ ಪ್ರಭಾವ:

ಧಾರ್ಮಿಕ ಮತ್ತು ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಜೋಡು ಹುಬ್ಬು ಹೊಂದಿರುವ ಮಹಿಳೆಯರು ಅತ್ಯಂತ ಅದೃಷ್ಟವಂತರು. ಇವರು ಕಾಲಿಟ್ಟ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ತಮ್ಮ ಅತ್ತೆ-ಮಾವ ಮತ್ತು ಪತಿಗೆ ಅದೃಷ್ಟ ತರುವ ಇವರು, ಕುಟುಂಬದ ಅಭಿವೃದ್ಧಿಗೆ ಕಾರಣರಾಗುತ್ತಾರೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಈ ಒಂದು ವಸ್ತುವನ್ನು ಎಂದಿಗೂ ಯಾರಿಗೂ ಉಡುಗೊರೆಯಾಗಿ ನೀಡಬೇಡಿ; ಅಪಾಯ ತಪ್ಪಿದ್ದಲ್ಲ!

ಪುರುಷರ ಮೇಲೆ ಪ್ರಭಾವ:

ಪುರುಷರ ವಿಷಯಕ್ಕೆ ಬಂದರೆ ಈ ನಂಬಿಕೆಗಳು ಸ್ವಲ್ಪ ಭಿನ್ನವಾಗಿವೆ. ಹತ್ತಿರವಾಗಿರುವ ಅಥವಾ ಜೋಡು ಹುಬ್ಬು ಹೊಂದಿರುವ ಪುರುಷರು ಜೀವನದಲ್ಲಿ ಅತಿಯಾದ ಸಂಘರ್ಷ ಎದುರಿಸಬೇಕಾಗಬಹುದು ಎಂಬ ನಂಬಿಕೆಯಿದೆ. ಎಷ್ಟೇ ಶ್ರಮವಹಿಸಿದರೂ ಸಣ್ಣ ಪುಟ್ಟ ವಿಷಯಗಳಿಗೂ ಅಡೆತಡೆಗಳು ಎದುರಾಗುವುದು ಮತ್ತು ನಿರೀಕ್ಷಿತ ಫಲ ಸಿಗದಿರುವುದು ಇವರನ್ನು ಕಾಡಬಹುದು ಎನ್ನಲಾಗುತ್ತದೆ.

ಆಧ್ಯಾತ್ಮಿಕ ಮತ್ತು ಜಾಗತಿಕ ನಂಬಿಕೆಗಳು:

ಹುಬ್ಬುಗಳನ್ನು ಕೇವಲ ದೈಹಿಕ ಭಾಗವಾಗಿ ನೋಡದೆ, ಅವುಗಳನ್ನು ಆಧ್ಯಾತ್ಮಿಕ ಶಕ್ತಿಯ ಸಂಕೇತವೆಂದೂ ಪರಿಗಣಿಸಲಾಗುತ್ತದೆ. ಕೆಲವು ವಿದೇಶಿ ಸಂಸ್ಕೃತಿಗಳಲ್ಲಿ, ಜೋಡು ಹುಬ್ಬು ಹೊಂದಿರುವ ಪುರುಷರು ವಿಶೇಷವಾದ ಮಾಂತ್ರಿಕ ಅಥವಾ ಅದೀಂದ್ರಿಯ ಶಕ್ತಿಗಳನ್ನು ಹೊಂದಿರುತ್ತಾರೆ ಎಂದು ನಂಬಲಾಗುತ್ತದೆ. ಇನ್ನು ತೆಳ್ಳಗಿನ ಅಥವಾ ವಿರಳವಾದ ಹುಬ್ಬುಗಳನ್ನು ಹೊಂದಿರುವವರು ದೈಹಿಕವಾಗಿ ಸ್ವಲ್ಪ ದುರ್ಬಲರಾಗಿರುತ್ತಾರೆ ಮತ್ತು ಆರೋಗ್ಯ ಸಮಸ್ಯೆಗಳಿಗೆ ಬೇಗ ತುತ್ತಾಗುತ್ತಾರೆ ಎಂಬ ನಂಬಿಕೆಯೂ ಅಸ್ತಿತ್ವದಲ್ಲಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊಸ ಉದ್ಯಮಕ್ಕೆ ಕೈ ಹಾಕಿದ ಅಲ್ಲು ಅರ್ಜುನ್, ಮಹೇಶ್ ಬಾಬುಗೆ ಠಕ್ಕರ್

ಅಲ್ಲು ಅರ್ಜುನ್ (Allu Arjun) ಸ್ಟಾರ್ ಪ್ಯಾನ್ ಇಂಡಿಯಾ ನಟ. ಅಲ್ಲು ಕುಟುಂಬ ಹಲವು ದಶಗಳಿಂದಲೂ ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವುದು ಮಾತ್ರವೇ ಅಲ್ಲದೆ ಚಿತ್ರರಂಗಕ್ಕೆ ಸಂಬಂಧಿಸಿದ ಹಲವು ಉದ್ಯಮಗಳಲ್ಲಿ ತೊಡಗಿಸಿಕೊಂಡಿದೆ. ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ತೆಲುಗು ಚಿತ್ರರಂಗದ ಯಶಸ್ವಿ ನಿರ್ಮಾಪಕ ಮತ್ತು ವಿತರಕ. ನಿರ್ಮಾಣ ಸಂಸ್ಥೆ, ಒಟಿಟಿ, ಸ್ಟುಡಿಯೋಗಳನ್ನು ಅಲ್ಲು ಕುಟುಂಬ ಹೊಂದಿದೆ. ಇದೀಗ ಹೊಸ ಉದ್ಯಮಕ್ಕೆ ಅಲ್ಲು ಅರ್ಜುನ್ ಕೈ ಹಾಕಿದ್ದಾರೆ.

ಅಲ್ಲು ಅರ್ಜುನ್ ಅವರು ಮಲ್ಟಿಪ್ಲೆಕ್ಸ್ ಒಂದನ್ನು ನಿರ್ಮಿಸಿದ್ದು, ಹೈದರಾಬಾದ್​​ನ ಈ ವರೆಗಿನ ಮಲ್ಟಿಪ್ಲೆಕ್ಸ್​ಗಳಲ್ಲಿಯೇ ಅತ್ಯಂತ ಗುಣಮಟ್ಟದ ಮಲ್ಟಿಪ್ಲೆಕ್ಸ್ ಇದಾಗಲಿದೆ ಎನ್ನಲಾಗುತ್ತಿದೆ. ಹೈದರಾಬಾದ್​ನ ಕೋಕಾಪೇಟೆಯಲ್ಲಿ ಎಎ ಮಲ್ಟಿಪ್ಲೆಕ್ಸ್ ನಿರ್ಮಾಣವಾಗಿದ್ದು, ನಾಳೆ (ಮಾರ್ಚ್ 12) ಇದರ ಉದ್ಘಾಟನಾ ಸಮಾರಂಭ ಆಯೋಜನೆಯಾಗಿದೆ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಖುದ್ದು ಈ ಮಲ್ಟಿಪ್ಲೆಕ್ಸ್ ಅನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಹಿಂದೆ ಏಷಿಯನ್ ಸಿನಿಮಾಸ್ ಜೊತೆಗೆ ಕೈ ಜೋಡಿಸಿ ಎಎಎ ಸಿನಿಮಾಸ್ ಹೆಸರಿನ ಮಲ್ಟಿಪ್ಲೆಕ್ಸ್ ನಿರ್ಮಿಸಿದ್ದರು. ಇದೀಗ ಪ್ರೀಮಿಯಮ್ ಮಲ್ಟಿಪ್ಲೆಕ್ಸ್ ನಿರ್ಮಾಣ ಮಾಡಿದ್ದಾರೆ.

ಅಲ್ಲು ಅರ್ಜುನ್ ಮಾರ್ಕ್ಯೂ ಮಲ್ಟಿಪ್ಲೆಕ್ಸ್​ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಪ್ರೇಕ್ಷಕರಿಗೆ ಅತ್ಯುನ್ನತ ಸಿನಿಮಾ ವೀಕ್ಷಣೆ ಅನುಭವವನ್ನು ನೀಡಲಿದೆ. ಈ ಮಲ್ಟಿಪ್ಲೆಕ್ಸ್​​ನಲ್ಲಿ ನಾಲ್ಕು ಸ್ಕ್ರೀನ್​​ಗಳು ಇರಲಿದ್ದು, ಇವುಗಳಲ್ಲಿ ಮೂರು ಸಾಮಾನ್ಯ ಸ್ಕ್ರೀನ್​​ಗಳಾಗಿದ್ದರೆ ಒಂದು ಮಾತ್ರ ವಿಶೇಷ ಡಾಲ್ಬಿ ಸ್ಕ್ರೀನ್ ಆಗಿರಲಿದೆ. ಡಾಲ್ಬಿ ಸಿನಿಮಾಸ್ ಸ್ಕ್ರೀನ್ ಸಾಕಷ್ಟು ವಿಶೇಷತೆಗಳನ್ನು ಹೊಂದಿರಲಿದೆ. ಡ್ಯುಯಲ್ 4K ಲೇಸರ್ ಪ್ರೊಜೆಕ್ಷನ್, ಡಾಲ್ಬಿ ವಿಷನ್, ಡಾಲ್ಬಿ 3D ಸಾಮರ್ಥ್ಯ ಮತ್ತು ಇಮ್ಮರ್ಸಿವ್ ಡಾಲ್ಬಿ ಅಟ್ಮೋಸ್ ಸರೌಂಡ್ ಸೌಂಡ್ ಅನ್ನು ಹೊಂದಿರಲಿದೆ. ಕಪ್ಪು ಬಣ್ಣವೇ ಪ್ರಧಾನವಾಗಿರುವ ಒಳಾಂಗಣ ವಿನ್ಯಾಸವನ್ನು ಈ ಮಲ್ಟಿಪ್ಲೆಕ್ಸ್ ಹೊಂದಿದ್ದು, ಅತ್ಯುತ್ತಮ ಗುಣಮಟ್ಟದ ಪರದೆಗಳು ಮತ್ತು ಸೌಂಡ್ ಅನ್ನು ಒಳಗೊಂಡಿರಲಿವೆ.

ಇದನ್ನೂ ಓದಿ:ಅಲ್ಲು ಅರ್ಜುನ್ ಫ್ಯಾನ್ಸ್ ರೆಡಿ ಆಗಿ; ಬರ್ತ್​ಡೇಗೆ ಸಿಗಲಿದೆ ದೊಡ್ಡ ಗಿಫ್ಟ್

ಹೈದರಾಬಾದ್​​ನಲ್ಲಿ ಈಗಾಗಲೇ ಮಹೇಶ್ ಬಾಬು ಒಡೆತನದ ಎಎಂಬಿ ಸಿನಿಮಾಸ್ ಮತ್ತು ವಿಜಯ್ ದೇವರಕೊಂಡ ಒಡೆತನದ ಎವಿಡಿ ಸಿನಿಮಾಸ್​​ಗಳು ಇವೆ. ಇದೀಗ ಅಲ್ಲು ಅರ್ಜುನ್ ಸಹ ಮಲ್ಟಿಪ್ಲೆಕ್ಸ್ ಬ್ಯುಸಿನೆಸ್​​ಗೆ ಕೈಹಾಕಿದ್ದು ಈ ಇಬ್ಬರಿಗೂ ಕಠಿಣ ಸ್ಪರ್ಧೆಯನ್ನು ಒಡ್ಡಲಿದ್ದಾರೆ. ಅಲ್ಲು ಅರ್ಜುನ್ ಅವರ ಈ ಹೊಸ ಮಲ್ಟಿಪ್ಲೆಕ್ಸ್​ ಅನ್ನು ನಾಳೆ (ಮಾರ್ಚ್ 12) ಸಿಎಂ ರೇವಂತ್ ರೆಡ್ಡಿ ಉದ್ಘಾಟನೆ ಮಾಡಲಿದ್ದಾರೆ. ಅದರ ಬಳಿಕ ಕೆಲವು ಸಿನಿಮಾಗಳನ್ನು ಪರೀಕ್ಷಾರ್ಥವಾಗಿ ಪ್ರದರ್ಶನ ಮಾಡಲಾಗುವುದಂತೆ ಅದರಲ್ಲಿ ಹಾಲಿವುಡ್​ನ ‘ಎಫ್ 1’ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳನ್ನು ಪರೀಕ್ಷಾರ್ಥ ಪ್ರದರ್ಶಿಸಲಾಗುತ್ತಿದೆ. ಅದಾದ ಬಳಿಕ ಮಾರ್ಚ್ 19ಕ್ಕೆ ಯುಗಾದಿ ಹಬ್ಬದಂದು ಸಾರ್ವಜನಿಕರಿಗೆ ಲೋಕಾರ್ಪಣೆಗೊಳ್ಳಲಿದೆ. ಟಿಕೆಟ್ ಬೆಲೆ 295 ರಿಂದ 500 ರೂಪಾಯಿಗಳ ವರೆಗೆ ಇರಲಿದೆ.

ಅಲ್ಲು ಅರ್ಜುನ್ ಅವರು ಖುದ್ದು ಹಲವು ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದಾರೆ. ಹೈದರಾಬಾದ್​​ನಲ್ಲಿ ಅಲ್ಲು ಅರ್ಜುನ್ ಅವರ ಪಬ್ಬು, ಬಫೆಲೊ ವಿಂಗ್ಸ್ ಹೆಸರಿನ ಐಶಾರಾಮಿ ಸ್ಪೋರ್ಟ್ ರೆಸ್ಟೊರೆಂಟ್​ಗಳು ಸಹ ಇವೆ. ಇವುಗಳ ಜೊತೆಗೆ ನಿರ್ಮಾಣ ಸಂಸ್ಥೆ, ಸ್ಟುಡಿಯೋ, ಒಟಿಟಿಯಲ್ಲಿಯೂ ಅವರ ಪಾಲಿದೆ. ರಿಯಲ್ ಎಸ್ಟೇಟ್ ಮೇಲೂ ಹೂಡಿಕೆ ಮಾಡಿದ್ದಾರೆ. ಇದೀಗ ಮಲ್ಟಿಪ್ಲೆಕ್ಸ್​ ಸಹ ಪ್ರಾರಂಭಿಸಿದ್ದು, ಒಟ್ಟಾರೆ ತಮ್ಮ ಉದ್ಯಮವನ್ನು ವಿಸ್ತರಿಸುತ್ತಾ ಸಾಗುತ್ತಿದ್ದಾರೆ ಅಲ್ಲು ಅರ್ಜುನ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

LPG ಕೊರತೆ: ಬ್ಲ್ಯಾಕ್​​ ಮಾರ್ಕೆಟ್‌ನಲ್ಲಿ ಸಿಲಿಂಡರ್​​ ದರ 4 ಸಾವಿರ ರೂಪಾಯಿಗೆ ಏರಿಕೆ?

ಹುಬ್ಬಳ್ಳಿ, ಮಾರ್ಚ್​​ 11: ಹೋಟೆಲ್ ಉದ್ಯಮವು ತೀವ್ರ LPG ಸಿಲಿಂಡರ್ ಕೊರತೆಯಿಂದ ತತ್ತರಿಸಿದೆ. ವಾಣಿಜ್ಯ ಸಿಲಿಂಡರ್‌ಗಳು ಲಭ್ಯವಿಲ್ಲದೆ ಹೋಟೆಲ್ ಮಾಲೀಕರು ಪರದಾಡುತ್ತಿದ್ದಾರೆ. ಒಂದು ಸಿಲಿಂಡರ್‌ಗೆ 4,000-5,000 ನೀಡಲು ಸಿದ್ಧರಿದ್ದರೂ ಸಿಲಿಂಡರ್‌ಗಳು ಸಿಗುತ್ತಿಲ್ಲ ಎಂದು ಮಾಲೀಕರು ಅಳಲು ತೋಡಿಕೊಂಡಿದ್ದಾರೆ. ಈ ಸಮಸ್ಯೆಯಿಂದಾಗಿ ಹೋಟೆಲ್‌ಗಳು ದೋಸೆ, ಪೂರಿ ಸೇರಿದಂತೆ ಹಲವು ಖಾದ್ಯಗಳ ತಯಾರಿಕೆಯನ್ನು ನಿಲ್ಲಿಸಿವೆ. ಸಿಲಿಂಡರ್ ಕೊರತೆಯು ಕಾರ್ಮಿಕರ ಬದುಕಿನ ಮೇಲೆ ನೇರ ಪರಿಣಾಮ ಬೀರಿದೆ. ಹಲವು ಹೋಟೆಲ್‌ಗಳು ಈಗಾಗಲೇ ಕಾರ್ಮಿಕರ ಸಂಖ್ಯೆಯನ್ನು ಕಡಿತಗೊಳಿಸಿವೆ, ಇನ್ನೂ ಕೆಲವು ಹೋಟೆಲ್‌ಗಳು ಮುಚ್ಚುವ ಭೀತಿಯಲ್ಲಿವೆ. ಇದರಿಂದ ಪ್ರತಿದಿನ ದುಡಿದು ಜೀವನ ಸಾಗಿಸುವ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದು, ತಮ್ಮ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅಕ್ಕ-ತಂಗಿ ಅಂದು, ಇಂದು; ರಶ್ಮಿಕಾ-ಶಿಮನ್ ಕ್ಯೂಟ್ ಫೋಟೋ ವೈರಲ್

ರಶ್ಮಿಕಾ ಮಂದಣ್ಣ (Rashmika Mandanna) ಅವರು ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಅವರ ವಿವಾಹದ ಫೋಟೋಗಳು ವೈರಲ್ ಆಗಿವೆ. ವಿವಾಹ ಪೂರ್ವ ಕಾರ್ಯಕ್ರಮ, ವಿವಾಹ ಶಾಸ್ತ್ರಗಳು ರಾಜಸ್ಥಾನದ ಉದಯಪುರದಲ್ಲಿ ಅದ್ದೂರಿಯಾಗಿ ನಡೆದವು. ಹೀಗಿರುವಾಗಲೇ ರಶ್ಮಿಕಾ ಮಂದಣ್ಣ ಹಾಗೂ ಅವರ ಸಹೋದರಿಯ ಕ್ಯೂಟ್ ಫೋಟೋಗಳು ವೈರಲ್ ಆಗಿವೆ. ಅಂದು ಹೇಗಿದ್ದರು ಹಾಗೂ ಈಗ ಹೇಗಿದ್ದಾರೆ ಎಂಬ ಕೊಲ್ಯಾಜ್ ಗಮನ ಸೆಳೆಯುವ ರೀತಿಯಲ್ಲಿ ಇದೆ.

ರಶ್ಮಿಕಾ ಮಂದಣ್ಣ ಸಹೋದರಿ ಹೆಸರು ಶಿಮನ್. ಇಬ್ಬರ ಮಧ್ಯೆ ಸುಮಾರು 16 ವರ್ಷಗಳ ವಯಸ್ಸಿನ ಅಂತರ ಇದೆ. ರಶ್ಮಿಕಾ ಜನಿಸಿದ್ದು, 1996ರ ಏಪ್ರಿಲ್ 5ರಂದು. ಅವರಿಗೆ ಈ ಏಪ್ರಿಲ್​​ಗೆ 30 ವರ್ಷ ತುಂಬಲಿದೆ. ಶಿಮನ್​​ಗೆ ಈಗಿನ್ನೂ 14 ವರ್ಷ. ಅವಳು ಅಕ್ಕನ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ್ದಾಳೆ.

ಈ ದೊಡ್ಡ ವಯಸ್ಸಿನ ಅಂತರದಿಂದಾಗಿ,ರಶ್ಮಿಕಾಗೆ ಶಿಮನ್‌ ಮಗಳಂತೆ ಭಾಸವಾಗುತ್ತಾಳಂತೆ. ಅವರ ಬಿಡುವಿಲ್ಲದ ವೃತ್ತಿಜೀವನದಿಂದಾಗಿ ಶಿಮನ್ ಬೆಳೆಯುವುದನ್ನು ನೋಡುವ ಅವಕಾಶವನ್ನು ಕಳೆದುಕೊಳ್ಳುತ್ತಿರುವುದಕ್ಕೆ ರಶ್ಮಿಕಾಗೆ ಬೇಸರ ಇದೆ.

ರಶ್ಮಿಕಾ ಅವರು ತಂಗಿಯ ಜೊತೆ ಫೋಟೋ ಹಂಚಿಕೊಂಡಿದ್ದು ಕಡಿಮೆ. ಅವಳ ಖಾಸಗಿತನಕ್ಕೆ ದಕ್ಕೆ ಬರಬಾರದು ಎಂಬ ಕಾರಣಕ್ಕೆ ತಂಗಿ ಜೊತೆ ರಶ್ಮಿಕಾ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರಲಿಲ್ಲ. ಆದರೆ, ಮದುವೆ ಸಂದರ್ಭದಲ್ಲಿ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ರಶ್ಮಿಕಾ ಹಂಚಿಕೊಳ್ಳದೆ ಇರಲು ಸಾಧ್ಯವಾಗಿಲ್ಲ.

ಇದನ್ನೂ ಓದಿ: ಮದುವೆಯ ಹೊಸ ಫೋಟೋ ಶೇರ್ ಮಾಡಿದ ರಶ್ಮಿಕಾ-ವಿಜಯ್; ಸಖತ್ ಕಲರ್​​ಫುಲ್

ಮೊದಲ ಫೋಟೋ 2020ರಲ್ಲಿ ತೆಗೆದಿದ್ದು ಎನ್ನಲಾಗಿದೆ. ಅಂದರೆ, ಆಗ ಶಿಮನ್​​ಗೆ 8 ವರ್ಷ. ಈಗ ಆಕೆಗೆ 14 ವರ್ಷ. ಈ ಎರಡೂ ಫೋಟೋಗಳನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಸದ್ಯ ಸಿನಿಮಾಗಳಿಂದ ಬ್ರೇಕ್ ಪಡೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version