ಜಸ್​ಪ್ರೀತ್ ಬುಮ್ರಾ ಭಾರತ ತಂಡದಿಂದ 18 ತಿಂಗಳುಗಳ ಕಾಲ ಹೊರಗೆ!

ಜಸ್​ಪ್ರೀತ್ ಬುಮ್ರಾ ಭಾರತ ತಂಡದಿಂದ 18 ತಿಂಗಳುಗಳ ಕಾಲ ಹೊರಗೆ!

ಟೀಮ್ ಇಂಡಿಯಾ ವೇಗಿ ಜಸ್​ಪ್ರೀತ್ ಬುಮ್ರಾ (Jasprit Bumrah)  ಟಿ20 ಕ್ರಿಕೆಟ್​ನಿಂದ 18 ತಿಂಗಳುಗಳ ಕಾಲ ಬ್ರೇಕ್ ತೆಗೆದುಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಮುಂಬರುವ ಏಕದಿನ ವಿಶ್ವಕಪ್​ಗಾಗಿ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದು ಈ ಮೂಲಕ ತಮ್ಮ ಕೆಲಸದ ಹೊರೆಯನ್ನು ಸರಿದೂಗಿಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಭಾರತ ತಂಡದ ದ್ವಿಪಕ್ಷೀಯ ಟಿ20 ಸರಣಿಗಳಿಂದ ಹೊರಗುಳಿಯಲಿದ್ದಾರೆ.

ಏಕದಿನ ಮತ್ತು ಟೆಸ್ಟ್ ಗಮನ:

ಜಸ್​ಪ್ರೀತ್ ಬುಮ್ರಾ 2024ರ ಟಿ20 ವಿಶ್ವಕಪ್​ ಬಳಿಕ ಸತತ ಟಿ20 ಪಂದ್ಯಗಳನ್ನಾಡಿದ್ದಾರೆ. ಇದಕ್ಕೆ ಮುಖ್ಯ ಕಾರಣ 2026ರ ಟಿ20 ವಿಶ್ವಕಪ್. ಇದೀಗ ಈ ವಿಶ್ವಕಪ್​ನಲ್ಲಿ ಭಾರತ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅಲ್ಲದೆ ಟೀಮ್ ಇಂಡಿಯಾದ ಮುಂದಿನ ಗುರಿ 2027ರ ಏಕದಿನ ವಿಶ್ವಕಪ್.

ಸೌತ್ ಆಫ್ರಿಕಾ, ನಮೀಬಿಯಾ ಹಾಗೂ ಝಿಂಬಾಬ್ವೆ ಜಂಟಿಯಾಗಿ ಆಯೋಜಿಸಲಿರುವ 2027ರ ಏಕದಿನ ವಿಶ್ವಕಪ್‌ಗೆ ಸಿದ್ಧರಾಗಲು ಅವರು ಟೆಸ್ಟ್ ಮತ್ತು ಏಕದಿನ ಪಂದ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲು ಜಸ್​ಪ್ರೀತ್ ಬುಮ್ರಾ ನಿರ್ಧರಿಸಿದ್ದಾರೆ.

ಒಲಿಂಪಿಕ್ಸ್​ನಲ್ಲಿ ಕಣಕ್ಕೆ:

ಪ್ರಸ್ತುತ ಮಾಹಿತಿ ಪ್ರಕಾರ, ಜಸ್​ಪ್ರೀತ್ ಬುಮ್ರಾ ಮುಂದಿನ 18 ತಿಂಗಳುಗಳ ಕಾಲ ಭಾರತದ ಪರ ದ್ವಿಪಕ್ಷೀಯ ಟಿ20 ಸರಣಿಗಳನ್ನು ಆಡುವುದಿಲ್ಲ. ಆದಾಗ್ಯೂ, 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಆಡುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮುಂಬರುವ ಒಲಿಂಪಿಕ್ಸ್​ ತಂಡದಲ್ಲಿ ಬುಮ್ರಾ ಅವರನ್ನು ಎದುರು ನೋಡಬಹುದು.

ನಿವೃತ್ತಿಯಿಲ್ಲ:

ಭಾರತ ಟಿ20 ತಂಡದಿಂದ 18 ತಿಂಗಳುಗಳ ಕಾಲ ಹೊರಗುಳಿದರೂ ಜಸ್​ಪ್ರೀತ್ ಬುಮ್ರಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸುತ್ತಿಲ್ಲ. ಬದಲಿಗೆ ಕೇವಲ ತಮ್ಮ ಫಿಟ್‌ನೆಸ್ ಕಾಪಾಡಿಕೊಳ್ಳಲು ಈ ವಿರಾಮ ಪಡೆಯುತ್ತಿದ್ದಾರೆ ಎಂದು ಸ್ಪಷ್ಟಪಡಿಸಲಾಗಿದೆ.

ಐಪಿಎಲ್​ ಕಥೆಯೇನು?

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಹೊರಗುಳಿದರೂ ಜಸ್​ಪ್ರೀತ್ ಬುಮ್ರಾ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಮುಂಬೈ ಇಂಡಿಯನ್ಸ್ ತಂಡದಲ್ಲಿರುವ ಬುಮ್ರಾ ಈ ಬಾರಿಯ ಐಪಿಎಲ್​ ಟೂರ್ನಿಯಲ್ಲೂ ಕಣಕ್ಕಿಳಿಯಲಿದ್ದಾರೆ.

ಇದನ್ನೂ ಓದಿ: ಭಾರತ ತಂಡ ಸೂರ್ಯಕುಮಾರ್, ಜಯ್ ಶಾ ಅವರ ಕುಟುಂಬ ಸ್ವತ್ತಲ್ಲ!

ಅಂದರೆ ಬುಮ್ರಾ ಬ್ರೇಕ್ ತೆಗೆದುಕೊಳ್ಳುತ್ತಿರುವುದು ಭಾರತ ತಂಡದ ಟಿ20 ಸರಣಿಗಳಿಂದ ಮಾತ್ರ. ಅಲ್ಲದೆ 2027ರ ಏಕದಿನ ವಿಶ್ವಕಪ್ ಹಾಗೂ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಬಳಿಕ ಅವರು ಮತ್ತೆ ಭಾರತ ಟಿ20 ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 

 

Source link

Video: ಕಾರು ಓಡಿಸುವಾಗ ವ್ಯಕ್ತಿಗೆ ಹೃದಯಾಘಾತ, ಸಿಪಿಆರ್ ನೀಡಿ ಜೀವ ಉಳಿಸಿದ ಟ್ರಾಫಿಕ್ ಪೊಲೀಸ್

ಹೈದರಾಬಾದ್, ಮಾರ್ಚ್​ 11: ಕಾರು ಓಡಿಸುವಾಗ ವ್ಯಕ್ತಿಯೊಬ್ಬರಿಗೆ ಹಠಾತ್ ಹೃದಯಾಘಾತವಾಗಿದ್ದು, ಅಲ್ಲೇ ಇದ್ದ ಟ್ರಾಫಿಕ್ ಪೊಲೀಸ್ ಕೂಡಲೇ ಸಿಪಿಆರ್ ನೀಡಿ ಪ್ರಾಣ ಉಳಿಸಿರುವ ಘಟನೆ ಹೈದರಾಬಾದ್​ನ ಸಿಕಂದರಾಬಾದಿನಲ್ಲಿ ನಡೆದಿದೆ. ಸಂಗೀತ್ ಕ್ರಾಸ್‌ರೋಡ್ಸ್‌ನಲ್ಲಿರುವ ಇಸ್ಕಾನ್ ದೇವಾಲಯದ ಬಳಿ, ವೃದ್ಧರೊಬ್ಬರಿಗೆ ಕಾರು ಚಾಲನೆ ಮಾಡುವಾಗ ಎದೆನೋವು ಕಾಣಿಸಿಕೊಂಡಿತ್ತು.ಇದರಿಂದಾಗಿ ಕಾರು ನಿಯಂತ್ರಣ ತಪ್ಪಿ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಸ್ಥಳದಲ್ಲಿದ್ದ ಸಂಚಾರಿ ಕಾನ್‌ಸ್ಟೆಬಲ್ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು, ತಕ್ಷಣವೇ ಕಾರಿನ ಬಾಗಿಲುಗಳನ್ನು ತೆರೆದು ಪ್ರಜ್ಞೆ ತಪ್ಪಿದ ವೃದ್ಧನನ್ನು ಆಸ್ಪತ್ರೆಗೆ ಸಾಗಿಸುವ ಮೊದಲು ಸಿಪಿಆರ್ ನೀಡುವ ಮೂಲಕ ಜೀವ ಉಳಿಸಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಲಕ್ಕುಂಡಿಯಲ್ಲಿ ಸಿಕ್ಕ ಚಿನ್ನದ ನಿಧಿ ಯಾರ ಕಾಲದ್ದು ಗೊತ್ತಾ? ಇದರ ಬೆಲೆ ಕೇಳಿದ್ರೆ ಶಾಕ್​​​ ಆಗುವುದು ಗ್ಯಾರಂಟಿ!

ಗದಗ, ಮಾ.11: ಲಕ್ಕುಂಡಿಯಲ್ಲಿ (Lakkundi Gold Treasure) ಈ ವರ್ಷದ (2026) ಜನವರಿ 10ರಂದು ಪತ್ತೆಯಾಗಿದ್ದ ಚಿನ್ನದ ನಿಧಿಯ ಕುರಿತು ಕುತೂಹಲಕಾರಿ ವಿಷಯಗಳು ಹೊರಬಂದಿವೆ. ರಿತ್ತಿ ಕುಟುಂಬದ ಮನೆಯ ಪಾಯ ತೋಡುವಾಗ ಸಿಕ್ಕಿದ್ದ ಈ ಆಭರಣಗಳು ಕೇವಲ ಬಂಗಾರವಲ್ಲ, ಅವು ಇತಿಹಾಸದ ಅಮೂಲ್ಯ ದಾಖಲೆಗಳಾಗಿವೆ. ಗದಗ ಜಿಲ್ಲಾಡಳಿತ ಭವನದಲ್ಲಿ ಡಿಸಿ ನೇತೃತ್ವದಲ್ಲಿ ನಡೆದ ಪರಿಶೀಲನೆಯಲ್ಲಿ ಪುರಾತತ್ವ ಶಾಸ್ತ್ರಜ್ಞರ ಸಮಿತಿ ಈ ಕೆಲವೊಂದು ಅಚ್ಚರಿಯ ವಿಚಾರಗಳನ್ನು ತಿಳಿಸಿದೆ. ಈ ಆಭರಣಗಳು ಯಾವ ಕಾಲದ್ದೂ, ಯಾರಿಗೆ ಸೇರಬೇಕಿರುವುದು, ಹಾಗೂ ಇದರ ಮೌಲ್ಯಗಳು ಎಷ್ಟು ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ.

ಈ ಆಭರಣಗಳು ಸುಮಾರು 500 ರಿಂದ 600 ವರ್ಷಗಳಷ್ಟು ಹಳೆಯವು. ಇವು ಕಲ್ಯಾಣ ಚಾಲುಕ್ಯರು ಮತ್ತು ವಿಜಯನಗರ ಅರಸರ ಕಾಲದ ಕಲೆ ಮತ್ತು ಸಂಸ್ಕೃತಿಯನ್ನು ಸಾರಿ ಹೇಳುತ್ತಿವೆ. ಇವು ಸಾಮಾನ್ಯ ಮಹಿಳೆಯರು ಧರಿಸುವ ಒಡವೆಗಳಲ್ಲ, ಬದಲಿಗೆ ಹೆಣ್ಣು ದೇವರಿಗೆ ಅಥವಾ ಉತ್ಸವ ಮೂರ್ತಿಗಳಿಗೆ ಅಲಂಕರಿಸುವ ಅಪರೂಪದ ಆಭರಣಗಳಾಗಿವೆ. ಇದರಲ್ಲಿ ಹೆಣ್ಣು ದೇವರ ಮೂರ್ತಿಯೂ ಪತ್ತೆಯಾಗಿದೆ.ಚಿನ್ನದ ಜೊತೆಗೆ ಈ ಆಭರಣಗಳಲ್ಲಿ ಅತ್ಯಂತ ಅಪರೂಪದ ನೀಲಮಣಿ, ಸ್ಪಟಿಕ, ಹವಳ ಸೇರಿದಂತೆ ರತ್ನಗಳನ್ನು ಬಳಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿನ ಬನಶಂಕರಿ ದೇವಸ್ಥಾನಕ್ಕೂ ತಟ್ಟಿದ ಯುದ್ಧದ ಬಿಸಿ: ಭಕ್ತರ ಗಮನಕ್ಕೆ ಇಂದಿನಿಂದ ಈ ಸೇವೆ ಸ್ಥಗಿತ

ಕೇವಲ ಚಿನ್ನದ ತೂಕದ (465 ಗ್ರಾಂ) ಲೆಕ್ಕಾಚಾರ ಹಾಕಿದರೆ ಇಂದಿನ ಮಾರುಕಟ್ಟೆ ದರದಲ್ಲಿ ಸುಮಾರು 35-40 ಲಕ್ಷ ರೂ. ಆಗಬಹುದು. ಆದರೆ ಇವುಗಳ ‘ಆ್ಯಂಟಿಕ್’ (ಪ್ರಾಚೀನ) ಮೌಲ್ಯ ಅಂದಾಜು 8 ಕೋಟಿ ರೂಪಾಯಿ! ಅಂದರೆ ಈಗಿನ ದರಕ್ಕಿಂತ ಹತ್ತು ಪಟ್ಟು ಹೆಚ್ಚು. ಸಮಿತಿ ಚೇರ್ಮನ್ ಎಂ.ಎಸ್. ಕೃಷ್ಣಮೂರ್ತಿ ನೇತೃತ್ವದಲ್ಲಿ ಕಲಾ ಇತಿಹಾಸಗಾರರಾದ ರಾಘವೇಂದ್ರ ಕುಲಕರ್ಣಿ, ಪ್ರೊ. ಚೂಡಾಮಣಿ ನಂದಗೋಪಾಲ, ಶಾಸನ ತಜ್ಞ ಹನುಮಾಪಕ್ಷಿ ಗೋಗಿ, ರತ್ನಶಾಸ್ತ್ರಜ್ಞ ಪ್ರಭು ಕಮ್ಮಾರ ಮತ್ತು ಡಾ. ಶೇಜೇಶ್ವರ ಅವರ ತಂಡ ನಾಲ್ಕೈದು ಗಂಟೆಗಳ ಕಾಲ ಒಂದೊಂದು ಆಭರಣವನ್ನು ಸೂಕ್ಷ್ಮವಾಗಿ ಪರಿಶೀಲಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

“ಯಾವ ಪುರುಷಾರ್ಥಕ್ಕೆ ನಿಗಮದ ಅಧ್ಯಕ್ಷರ ನೇಮಕ ಮಾಡಿದ್ರಿ?”: ಸಚಿವ ತಂಗಡಗಿ ವಿರುದ್ಧ ಗುಡುಗಿದ ಶಾಸಕ ಸುನೀಲ್ ಕುಮಾರ್

ಬೆಂಗಳೂರು, ಮಾ.11:ಕರ್ನಾಟಕ ಬಜೆಟ್ ಅಧಿವೇಶನದಲ್ಲಿ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆದಿದೆ. ಶಾಸಕ ಸುನೀಲ್ ಕುಮಾರ್ ಅವರು ಸಚಿವ ತಂಗಡಗಿ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನಿಗಮದ ಅಧ್ಯಕ್ಷರ ನೇಮಕ ಮತ್ತು ಅನುದಾನ ಹಂಚಿಕೆಯಲ್ಲಿನ ಅವ್ಯವಸ್ಥೆಗಳನ್ನು ಎತ್ತಿ ತೋರಿಸಿದ್ದಾರೆ. ನಿಗಮವನ್ನು ಜನವರಿ 2024ರಲ್ಲಿ ನೋಂದಾಯಿಸಲಾಗಿದೆ ಎಂದು ಸರ್ಕಾರ ಹೇಳುತ್ತಿದ್ದರೂ, ಅಧ್ಯಕ್ಷರ ನೇಮಕವು ಅದಕ್ಕೂ ಎಂಟು ತಿಂಗಳ ಮುಂಚೆಯೇ ನಡೆದಿರುವುದು ವಿರೋಧ ಪಕ್ಷದ ನಾಯಕರ ಪ್ರಮುಖ ಪ್ರಶ್ನೆಯಾಗಿದೆ. “ಯಾವ ಪುರುಷಾರ್ಥಕ್ಕೆ ನಿಗಮದ ಅಧ್ಯಕ್ಷರ ನೇಮಕ ಮಾಡಿದ್ರಿ?” ಎಂದು ಸುನೀಲ್ ಅವರು ಪ್ರಶ್ನಿಸಿದರು. ನಿಗಮದ ಬಗ್ಗೆ ಆಸಕ್ತಿ ಇದ್ದಿದ್ದರೆ, ನೋಂದಣಿ ಪ್ರಕ್ರಿಯೆಯನ್ನು ಮೊದಲೇ ಪೂರ್ಣಗೊಳಿಸಿ ಆರ್ಥಿಕ ನೆರವು ನೀಡಬಹುದಿತ್ತು ಎಂದು ಅವರು ವಾದಿಸಿದರು. ಸುನೀಲ್ ಅವರು ತಮ್ಮ ಪ್ರಶ್ನೆಯನ್ನು ವಿಸ್ತರಿಸುತ್ತಾ, ದೇವರಾಜ್ ಅರಸು ನಿಗಮಕ್ಕೆ ಈ ವರ್ಷ ನಿಗದಿಪಡಿಸಿದ ಅನುದಾನದಲ್ಲಿ ಎಷ್ಟು ಹಣವನ್ನು ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ವರ್ಗಾಯಿಸಲಾಗುವುದು ಅಥವಾ 2025-26ನೇ ಸಾಲಿನಲ್ಲಿ ಕೋಶದಲ್ಲಿದ್ದ 10 ಕೋಟಿ ರೂಪಾಯಿ ಸೇರಿದಂತೆ ಎಷ್ಟು ಹೆಚ್ಚುವರಿ ಅನುದಾನವನ್ನು ಈ ನಿಗಮಕ್ಕೆ ನಿಗದಿಪಡಿಸಲಾಗುವುದು ಎಂದು ಸ್ಪಷ್ಟಪಡಿಸುವಂತೆ ಒತ್ತಾಯಿಸಿದರು. ನಿಗಮದ ನಿಯಮಾವಳಿಗಳು ಮತ್ತು ಅನುದಾನವನ್ನು ಯಾವ ಉದ್ದೇಶಗಳಿಗಾಗಿ ಬಳಸಬಹುದು ಎಂಬುದರ ಕುರಿತು ಸ್ಪಷ್ಟನೆ ನೀಡುವಂತೆ ಅವರು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಾರಾಯಣ ಗುರು ನಿಗಮವನ್ನು ನೇಮಕ ಮಾಡಿದ್ದರೂ, ಅದರ ಕಾರ್ಯರೂಪಗಳನ್ನು ಅಂತಿಮಗೊಳಿಸದ ಕಾರಣ ಅದು ನಿಷ್ಕ್ರಿಯವಾಗಿತ್ತು ಎಂದು ತಿಳಿಸಿದರು. ಜನವರಿ 2024ರಲ್ಲಿ ನಿಗಮವನ್ನು ನೋಂದಾಯಿಸಲಾಗಿದ್ದು, ಈಗ ಅದರ ಕಾರ್ಯರೂಪಗಳನ್ನು ಸಿದ್ಧಪಡಿಸಲಾಗುತ್ತಿದೆ. ನೇರ ಸಾಲ, ಗಂಗಾ ಕಲ್ಯಾಣ, ಸಾವಲಂಬಿ ಸಾರಥಿ ಯೋಜನೆಗಳಂತೆ, ಈ ನಿಗಮದ ಅಡಿಯಲ್ಲಿಯೂ ಫಲಾನುಭವಿಗಳಿಗೆ ನೇರವಾಗಿ ಪ್ರಯೋಜನಗಳನ್ನು ತಲುಪಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಅವರು ವಿವರಿಸಿದರು. ಪ್ರಸ್ತುತ 10 ಕೋಟಿ ರೂಪಾಯಿ ಅನುದಾನ ಲಭ್ಯವಿದ್ದು, ಹೆಚ್ಚುವರಿ ಅನುದಾನದ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಬಜೆಟ್ ಹಂಚಿಕೆಗಳು ಅಂತಿಮಗೊಂಡ ನಂತರ ಈ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಆದರೆ, ಸುನೀಲ್ ಅವರು ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದರು. ನಾರಾಯಣ ಗುರು ಅಭಿವೃದ್ಧಿ ನಿಗಮವು ರಾಜ್ಯಾದ್ಯಂತ ವ್ಯಾಪ್ತಿ ಹೊಂದಿದ್ದು, 10-12 ಜಿಲ್ಲೆಗಳಲ್ಲಿ ಬಹುಸಂಖ್ಯಾತ ಸಮುದಾಯವನ್ನು ಪ್ರತಿನಿಧಿಸುತ್ತದೆ. ಆದ್ದರಿಂದ, ಕನಿಷ್ಠ 50 ರಿಂದ 100 ಕೋಟಿ ರೂಪಾಯಿಗಳ ಅನುದಾನ ಅಗತ್ಯವಿದೆ ಎಂದು ಅವರು ವಾದಿಸಿದರು. ಕೇವಲ 10 ಕೋಟಿ ರೂಪಾಯಿಗಳಿಂದ ನಿಗಮ ಹೇಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯ ಎಂದು ಪ್ರಶ್ನಿಸಿದರು. ನಿಗಮ ಪ್ರಾರಂಭವಾಗುವ ಮೊದಲೇ ಅಧ್ಯಕ್ಷರ ನೇಮಕ ಮಾಡಿ, ಕೇವಲ 10 ಕೋಟಿ ರೂ. ಅನುದಾನ ನೀಡಿ ಎಲ್ಲವನ್ನು ಹಂಚಿಕೆ ಮಾಡುವುದು ಸರಿಯಲ್ಲ ಎಂದು ಸುನೀಲ್ ಅಸಮಾಧಾನ ವ್ಯಕ್ತಪಡಿಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊಲೆ ಆರೋಪಿಯನ್ನು 68 ಬಾರಿ ಮಾರಕಾಸ್ತ್ರಗಳಿಂದ ಕೊಚ್ಚಿದ ಪುಂಡರು: ವ್ಯಕ್ತಿ ಬದುಕಿದ್ದೇ ಪವಾಡ!

ಬೆಂಗಳೂರು, ಮಾರ್ಚ್​​ 11: ವ್ಯಕ್ತಿಯೋರ್ವನ ಮೇಲೆ ಹಾಡು ಹಗಲೇ ನಡು ರಸ್ತೆಯಲ್ಲಿ  ಯುವಕರು ಮಾರಕಾಸ್ತ್ರಗಳಿಂದ ದಾಳಿ ನಡೆಸಿರುವ ಆಘಾತಕಾರಿ ಘಟನೆ ಬೆಂಗಳೂರಿನ ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯ ಅಗ್ರಹಾರ ದಾಸರಹಳ್ಳಿಯಲ್ಲಿ ನಡೆದಿದೆ. ಮಾರ್ಚ್​​ 9ರಂದೇ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಪೊಲೀಸರ ಭಯವೇ ಇಲ್ಲದಂತೆ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಸಂತೋಷ್​​ ಎಂಬಾತನ ಮೇಲೆ ಡೆಡ್ಲಿ ಅಟ್ಯಾಕ್​​ ನಡೆದಿದ್ದು, ಒಂದೆರಡಲ್ಲ ಬರೋಬ್ಬರಿ 68 ಬಾರಿ ಮಾರಕಾಸ್ತ್ರಗಳಿಂದ ದಾಳಿ ನಡೆದಿದೆ. ದಾಳಿ ನಡೆಸಿರೋದು ಶರತ್​​ ಮತ್ತು ಗ್ಯಾಂಗ್​​ ಎಂಬುದು ಗೊತ್ತಾಗಿದ್ದು, ಅಟ್ಯಾಕ್​​ ಬಳಿಕ ಅರೋಪಿಗಳು ಡ್ಯಾನ್ಸ್​​ ಮಾಡಿ ವಿಕೃತಿ ಕೂಡ ಮೆರೆದಿದ್ದಾರೆ.

ಇನ್ನು ಹಲ್ಲೆಗೊಳಗಾದ ಸಂತೋಷ್​​​ ಮೇಲೆ ಕೊಲೆ ಆರೋಪವಿತ್ತು. ಕಾರು ಓಡಿಸುವ ವಿಚಾರಕ್ಕೆ ಸ್ನೇಹಿತ ಮೋಹನ್​​ ಎಂಬಾತನ ಜೊತೆಗೆ ಸಂತೋಷ್​​ ಬೆಂಗಳೂರಿನಲ್ಲಿ ಗಲಾಟೆ ಮಾಡಿಕೊಂಡಿದ್ದ. ಬಳಿಕ ಮಂಡ್ಯದಲ್ಲಿ ಕುಡಿದು ಕೊಳ್ಳೇಗಾಲಕ್ಕೆ ಹೋಗಿದ್ದ ವೇಳೆ ಮೋಹನ್​​ ಮೇಲೆ ದಾಳಿ ಮಾಡಿದ್ದ ಸಂತೋಷ್​​ ಆತನನ್ನು ಕೊಲೆ ಮಾಡಿದ್ದ. 2024ರಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಮೋಹನನ್ನು ಕಾರಿನಲ್ಲಿ ಕೂರಿಸಿ ಭಯಗೊಂಡ ಸಂತೋಷ್​​ ಪರಾರಿಯಾಗಿದ್ದ. ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊದಲಿಗೆ ಈ ಬಗ್ಗೆ UDR ಆಗಿತ್ತು. ನಂತರ ತನಿಖೆ ವೇಳೆ ಇದು ಕೊಲೆ ಎಂದು ಗೊತ್ತಾಗಿ ಪ್ರಕರಣ ದಾಖಲಿಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಕೊಲೆ ಕೇಸ್​​ನಲ್ಲಿ ಜೈಲು ಸೇರಿದ್ದ  ಸಂತೋಷ್ 4 ತಿಂಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಹೊರ ಬಂದಿದ್ದ. ಹೀಗಾಗಿ ಹಳೇ ದ್ವೇಷದ ಹಿನ್ನೆಲೆ ಈತನಿಂದ ಕೊಲೆಯಾಗಿದ್ದ ಮೋಹನ್​​ನ​​ ಸಹೋದರ ಶರತ್ ತಂಡಕಟ್ಟಿಕೊಂಡು ಬಂದು ಸಂತೋಷ್​​ ಮೇಲೆ ಅಟ್ಯಾಕ್​​ ಮಾಡಿದ್ದಾನೆ ಎನ್ನಲಾಗಿದೆ.​​

ಇದನ್ನೂ ಓದಿ: ಮೆಸೇಜ್ ಮಾಡಿ ಲಾಡ್ಜ್​ಗೆ ಕರೀತಿದ್ಲು; ಸ್ನಾನಕ್ಕೆ ಕಳಿಸಿ ಹಣ ದೋಚುತ್ತಿದ್ಲು! ಹನಿಟ್ರ್ಯಾಪ್ ಮಾಡುತ್ತಿದ್ದ ಕತರ್ನಾಕ್ ಲೇಡಿ ಅರೆಸ್ಟ್

ಸಂತೋಷ್​​ ಬದುಕುಳಿದಿದ್ದೇ ಪವಾಡ

ಹಳೇ ದ್ವೇಷದ ಹಿನ್ನಲೆ ಶರತ್ ಆ್ಯಂಡ್​​ ಗ್ಯಾಂಗ್ ಸಂತೋಷ್​​ ಮೇಲೆ ಮನಸೋ ಇಚ್ಛೆ ದಾಳಿಮಾಡಿದೆ. ಬರೋಬ್ಬರಿ 68 ಬಾರಿ ಮಚ್ಚಿನಿಂದ ಅಟ್ಯಾಕ್ ಮಾಡಿ, ಅಟ್ಟಹಾಸ ಮೆರೆದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರೂ ಸಂತೋಷ್​​ ಬದುಕಿರೋದು ಪವಾಡ ಎಂಬಂತಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ನ್ಯೂಝಿಲೆಂಡ್ ಟಿ20 ತಂಡದಿಂದ 8 ಆಟಗಾರರು ಔಟ್!

ಟಿ20 ವಿಶ್ವಕಪ್ ಫೈನಲ್ ಸೋಲಿನ ಬಳಿಕ ನ್ಯೂಝಿಲೆಂಡ್ ತಂಡ ಟಿ20 ಸರಣಿಗಾಗಿ ಸಜ್ಜಾಗಿದೆ. ಸೌತ್ ಆಫ್ರಿಕಾ ವಿರುದ್ಧದ ಸರಣಿಗಾಗಿ ನ್ಯೂಝಿಲೆಂಡ್ ತಂಡವನ್ನು ಪ್ರಕಟಿಸಲಾಗಿದ್ದು, ಈ ತಂಡದಲ್ಲಿ ಪ್ರಮುಖ ಆಟಗಾರರು ಕಾಣಿಸಿಕೊಂಡಿಲ್ಲ ಎಂಬುದು ವಿಶೇಷ. ಅಂದರೆ ವಿಶ್ವಕಪ್​ನಲ್ಲಿ ಕಣಕ್ಕಿಳಿದಿದ್ದ 8 ಆಟಗಾರರು ಈ ಸರಣಿಯಿಂದ ಹೊರಗುಳಿದಿದ್ದಾರೆ.

ಇನ್ನು ನಾಯಕ ಮಿಚೆಲ್ ಸ್ಯಾಂಟ್ನರ್ ಮೂರು ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿಯಲಿದ್ದಾರೆ. ಇನ್ನುಳಿದ ಎರಡು ಮ್ಯಾಚ್​ಗಳಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಟಾಮ್ ಲ್ಯಾಥಮ್ ತಂಡವನ್ನು ಮುನ್ನಡೆಸಲಿದ್ದಾರೆ. ಹಾಗೆಯೇ ಮೂವರು ಹೊಸ ಆಟಗಾರರಿಗೆ ಅವಕಾಶ ನೀಡಲಾಗಿದೆ. ಅದರಂತೆ ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ನ್ಯೂಝಿಲೆಂಡ್ ತಂಡ ಈ ಕೆಳಗಿನಂತಿದೆ…

ನ್ಯೂಝಿಲೆಂಡ್ ಟಿ20 ತಂಡ:

ಅಲಭ್ಯರಾಗಿರುವ ಆಟಗಾರರು:

  • ಫಿನ್ ಅಲೆನ್
  • ರಚಿನ್ ರವೀಂದ್ರ
  • ಗ್ಲೆನ್ ಫಿಲಿಪ್ಸ್
  • ಡೇರಿಲ್ ಮಿಚೆಲ್
  • ಮಾರ್ಕ್ ಚಾಪ್ಮನ್
  • ಟಿಮ್ ಸೈಫರ್ಟ್
  • ಜೇಕಬ್ ಡಫಿ
  • ಮ್ಯಾಟ್ ಹೆನ್ರಿ.

ಇದನ್ನೂ ಓದಿ: ಹೊಸ ಗರ್ಲ್​​ ಫ್ರೆಂಡ್ ಎಂಟ್ರಿ… ಜೀವಕ್ಕೆ ಜೀವದಂತಿದ್ದ ಅಣ್ಣನೇ ದೂರ..!

5 ಪಂದ್ಯಗಳ ಸರಣಿ:

ನ್ಯೂಝಿಲೆಂಡ್ ಮತ್ತು ಸೌತ್ ಆಫ್ರಿಕಾ ನಡುವೆ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ನ್ಯೂಝಿಲೆಂಡ್​ನಲ್ಲಿ ನಡೆಯಲಿರುವ ಈ ಸರಣಿಯು ಮಾರ್ಚ್ 15 ರಿಂದ ಶುರುವಾಗಲಿದೆ. ಇನ್ನು ಈ ಸರಣಿಯ ಕೊನೆಯ ಮ್ಯಾಚ್ ಮಾರ್ಚ್ 25 ರಂದು ನಡೆಯಲಿದೆ.

ಪಂದ್ಯ ದಿನಾಂಕ ಸ್ಥಳ ಸಮಯ (ಸ್ಥಳೀಯ)
1ನೇ ಟಿ20 ಭಾನುವಾರ, ಮಾರ್ಚ್ 15 ಬೇ ಓವಲ್, ಮೌಂಟ್ ಮೌಂಗನುಯಿ ಸಂಜೆ 7:15
2ನೇ ಟಿ20 ಮಂಗಳವಾರ, 17 ಮಾರ್ಚ್ ಸೆಡ್ಡನ್ ಪಾರ್ಕ್, ಹ್ಯಾಮಿಲ್ಟನ್ ಸಂಜೆ 7:15
3ನೇ ಟಿ20ಐ ಶುಕ್ರವಾರ, ಮಾರ್ಚ್ 20 ಈಡನ್ ಪಾರ್ಕ್, ಆಕ್ಲೆಂಡ್ ಸಂಜೆ 7:15
4ನೇ ಟಿ20ಐ ಭಾನುವಾರ, ಮಾರ್ಚ್ 22 ಸ್ಕೈ ಕ್ರೀಡಾಂಗಣ, ವೆಲ್ಲಿಂಗ್ಟನ್ ಸಂಜೆ 7:15
5ನೇ ಟಿ20ಐ ಬುಧವಾರ, ಮಾರ್ಚ್ 25 ಹ್ಯಾಗ್ಲಿ ಓವಲ್, ಕ್ರೈಸ್ಟ್‌ಚರ್ಚ್ ಸಂಜೆ 7:15

 

 

Source link

ಬಜೆಟ್‌ನಲ್ಲಿ ಕಾಲೇಜು ಚುನಾವಣೆ ಘೋಷಣೆ ಮಾಡಿದ್ದೇ ತಡ ಮಂಗಳೂರು ಕಾಲೇಜು ವಿದ್ಯಾರ್ಥಿಗಳ ನಡುವೆ ಬಿಗ್​​ ಫೈಟ್

ಮಂಗಳೂರು, ಮಾ.11: ಈ ಹಿಂದೆ ಕಾಲೇಜು ಚುನಾವಣೆ ಎಂದು ಹೇಳಿಕೊಂಡು ವಿದ್ಯಾರ್ಥಿಗಳ ನಡುವೆ ದೊಡ್ಡ ಜಗಳಗಳು ನಡೆಯುತ್ತಿತ್ತು. ಇದೀಗ ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದ್ಯಾರ್ಥಿ ಸಂಘದ ಚುನಾವಣೆ ಘೋಷಣೆ ಮಾಡಿದ್ದು ಅಷ್ಟೇ, ಇನ್ನು ಅದು ಅಧಿಕೃತವಾಗಿ ಜಾರಿಗೆ ಬಂದಿಲ್ಲ. ಅಷ್ಟರಲ್ಲೇ ಮಂಗಳೂರಿನ ಪ್ರತಿಷ್ಠಿತ ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ರಾಜಕೀಯ ಕಿಚ್ಚು ಭುಗಿಲೆದ್ದಿದೆ. ಕಾಂಗ್ರೆಸ್ ಬೆಂಬಲಿತ NSUI ಮತ್ತು ಬಿಜೆಪಿ ಬೆಂಬಲಿತ ABVP ಕಾರ್ಯಕರ್ತರ ನಡುವಿನ ಜಿದ್ದಾಜಿದ್ದಿನಿಂದ ಕಾಲೇಜು ಆವರಣ ರಣರಂಗವಾಗಿ ಮಾರ್ಪಟ್ಟಿದೆ.

ಬಜೆಟ್‌ನಲ್ಲಿ ಚುನಾವಣೆ ಮತ್ತು ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್ ಘೋಷಣೆಯನ್ನು ಸ್ವಾಗತಿಸಿ NSUI ಕಾರ್ಯಕರ್ತರು ಕಾಲೇಜು ಕ್ಯಾಂಪಸ್ ಒಳಗೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಅಷ್ಟಕ್ಕೇ ನಿಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪರವಾಗಿ ಜಯಘೋಷಗಳನ್ನು ಕೂಗಿದ್ದಾರೆ. ಇದು ಶೈಕ್ಷಣಿಕ ಕೇಂದ್ರದಲ್ಲಿ ರಾಜಕೀಯ ಅಟ್ಟಹಾಸ ಎಂದು ABVP ಆಕ್ರೋಶ ವ್ಯಕ್ತಪಡಿಸಿದೆ.

ಶೈಕ್ಷಣಿಕ ಚಟುವಟಿಕೆಗೆ ಅಡ್ಡಿಪಡಿಸಿ ಕಾಲೇಜನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ಎಬಿವಿಪಿ ವಿದ್ಯಾರ್ಥಿಗಳು ಕಾಲೇಜಿನ ಮುಂಭಾಗ ರಸ್ತೆ ತಡೆ ನಡೆಸಿದರು. ರಾಜಕೀಯ ಘೋಷಣೆ ಕೂಗಲು ಅವಕಾಶ ನೀಡಿದ ಪ್ರಾಂಶುಪಾಲ ಗಣಪತಿ ಗೌಡ ಅವರ ವಿರುದ್ಧ ಧಿಕ್ಕಾರ ಕೂಗಲಾಯಿತು. ವಿದ್ಯಾರ್ಥಿಗಳ ವಾಗ್ವಾದಕ್ಕೆ ಪ್ರಾಂಶುಪಾಲರು ತತ್ತರಿಸಿ ಹೋದರು.

ಇದನ್ನೂ ಓದಿ: ಲಕ್ಕುಂಡಿಯಲ್ಲಿ ಸಿಕ್ಕ ಚಿನ್ನದ ನಿಧಿ ಯಾರ ಕಾಲದ್ದು ಗೊತ್ತಾ? ಇದರ ಬೆಲೆ ಕೇಳಿದ್ರೆ ಶಾಕ್​​​ ಆಗುವುದು ಗ್ಯಾರಂಟಿ!

“ಸಿಹಿ ಹಂಚಲು ಮಾತ್ರ ಅನುಮತಿ ನೀಡಿದ್ದೆವು, ಘೋಷಣೆ ಕೂಗಿದ್ದು ಗಮನಕ್ಕೆ ಬಂದಿಲ್ಲ” ಎಂಬ ಪ್ರಾಂಶುಪಾಲರ ಹೇಳಿಕೆ ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಘಟನೆ ಸಂಬಂಧ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಿಗೆ (VC) ವರದಿ ನೀಡುವುದಾಗಿ ಪ್ರಾಂಶುಪಾಲರು ಭರವಸೆ ನೀಡಿದ್ದಾರೆ. ವಿದ್ಯಾರ್ಥಿ ಚುನಾವಣೆ ಆರಂಭವಾಗುವ ಮೊದಲೇ ಕ್ಯಾಂಪಸ್‌ನಲ್ಲಿ ಈ ಮಟ್ಟದ ಕಿತ್ತಾಟ ಶುರುವಾಗಿರುವುದು ಪೋಷಕರಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಮೂಡಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಹೋಳಿ ಆಚರಿಸಲು ಮನೆಗೆ ಬಂದಿದ್ದ ಮಗಳು 13ನೇ ಮಹಡಿಯಿಂದ ಹಾರಿ ಆತ್ಮಹತ್ಯೆ

ಗೇಟರ್​ ನೋಯ್ಡಾ, ಮಾರ್ಚ್​ 11: ಹೋಳಿ ಆಚರಣೆಗೆಂದು ಮನೆಗೆ ಬಂದಿದ್ದ ಯುವತಿ ಅಪಾರ್ಟ್​ಮೆಂಟ್​ನ 13ನೇ ಮಹಡಿಯಿಂದ ಹಾರಿ ಪ್ರಾಣ ಬಿಟ್ಟಿರುವ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. 25 ವರ್ಷದ ಎಂಬಿಎ ವಿದ್ಯಾರ್ಥಿನಿ ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಸ್ರಖ್ ಪೊಲೀಸ್ ಠಾಣೆ ಪ್ರದೇಶದ ಗೌರ್ ಸೌಂದರ್ಯಂ ಸೊಸೈಟಿಯಲ್ಲಿ ಈ ಘಟನೆ ನಡೆದಿದ್ದು, ವಸತಿ ಸಮುಚ್ಚಯದ ನಿವಾಸಿಗಳಲ್ಲಿ ಭಯಭೀತಿ ಮೂಡಿಸಿದೆ. ಮೃತ ಯುವತಿಯನ್ನು ಶಿವಿಕಾ ಥಕ್ರಲ್ ಎಂದು ಗುರುತಿಸಲಾಗಿದ್ದು, ಈಕೆ ವಿನಯ್ ಥಕ್ರಲ್ ಅವರ ಪುತ್ರಿಯಾಗಿದ್ದು, ಗೌರ್ ಸೌಂದರ್ಯಂ ಸೊಸೈಟಿಯ ಶರೋನ್ ಟವರ್‌ನಲ್ಲಿ ತನ್ನ ಕುಟುಂಬದೊಂದಿಗೆ ವಾಸವಿದ್ದಳು.

ಮಾರ್ಚ್ 10, 2026 ರಂದು ಯುವತಿಯೊಬ್ಬಳು ಬಹುಮಹಡಿ ಕಟ್ಟಡದಿಂದ ಹಾರಿದ ಬಗ್ಗೆ ಮಾಹಿತಿ ಬಂದಿತ್ತು, ನಂತರ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರಾಥಮಿಕ ವಿಚಾರಣೆಯಲ್ಲಿ, ಶಿವಿಕಾ 13 ನೇ ಮಹಡಿಯಲ್ಲಿರುವ ತನ್ನ ಫ್ಲಾಟ್‌ನ ಬಾಲ್ಕನಿಯಿಂದ ಹಾರಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಶವವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಶಿವಿಕಾ ಪಂಜಾಬ್‌ನ ಮೊಹಾಲಿಯಲ್ಲಿ ಎಂಬಿಎ ಓದುತ್ತಿದ್ದು, ಅಲ್ಲಿಯೇ ಕೆಲಸ ಮಾಡುತ್ತಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರು ಇತ್ತೀಚೆಗೆ ಗ್ರೇಟರ್ ನೋಯ್ಡಾ ವೆಸ್ಟ್‌ನಲ್ಲಿರುವ ತಮ್ಮ ಮನೆಗೆ ಹೋಳಿ ಹಬ್ಬ ಆಚರಿಸಲು ಬಂದಿದ್ದಳು.

ಕುಟುಂಬ ಸದಸ್ಯರ ಪ್ರಕಾರ, ಘಟನೆಯ ಹಿಂದಿನ ಎಲ್ಲವೂ ಸಾಮಾನ್ಯವಾಗಿತ್ತು, ಸೋಮವಾರ ರಾತ್ರಿ, ಎಲ್ಲಾ ಕುಟುಂಬ ಸದಸ್ಯರು ಒಟ್ಟಿಗೆ ಊಟ ಮಾಡಿ ನಂತರ ಮಲಗಲು ತಮ್ಮ ಕೋಣೆಗಳಿಗೆ ಹೋದರು. ರಾತ್ರಿಯಲ್ಲಿ ಯಾವುದೇ ಅಸಾಮಾನ್ಯ ಬೆಳವಣಿಗೆಗಳು ನಡೆದ ಬಗ್ಗೆ ಕುಟುಂಬಕ್ಕೆ ತಿಳಿದಿರಲಿಲ್ಲ ಎಂದು ವರದಿಯಾಗಿದೆ.
ಮಂಗಳವಾರ ಬೆಳಿಗ್ಗೆ, ಶಿವಿಕಾ ಕಟ್ಟಡದಿಂದ ಹಾರಿದ್ದಾರೆಂದು ಸೊಸೈಟಿಯ ಭದ್ರತಾ ಸಿಬ್ಬಂದಿಯಿಂದ ಕುಟುಂಬಕ್ಕೆ ಮಾಹಿತಿ ಸಿಕ್ಕಿತ್ತು.

ಮತ್ತಷ್ಟು ಓದಿ: ಗೆಳೆಯನಿಂದ ಕಿರುಕುಳ, ಆತ್ಮಹತ್ಯೆಗೆ ಪ್ರಚೋದನೆ, ನೇಣು ಬಿಗಿದುಕೊಂಡು ವೈದ್ಯಕೀಯ ವಿದ್ಯಾರ್ಥಿನಿ ಸಾವಿಗೆ ಶರಣು

ಘಟನಾ ಸ್ಥಳದಿಂದ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ, ಪ್ರಕರಣವು ಆತ್ಮಹತ್ಯೆಯಂತೆ ಕಂಡುಬರುತ್ತಿದೆ. ಕುಟುಂಬವು ಪೊಲೀಸರಿಗೆ ಯಾವುದೇ ದೂರು ನೀಡಿಲ್ಲ, ಮತ್ತು ಆತ್ಮಹತ್ಯೆಗೆ ಸಂಬಂಧಿಕರು ಸಹ ಯಾವುದೇ ಸ್ಪಷ್ಟ ಕಾರಣವನ್ನು ಸೂಚಿಸಲು ಸಾಧ್ಯವಾಗಿಲ್ಲ.

ಗ್ರೇಟರ್ ನೋಯ್ಡಾ ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿರುವುದರಿಂದ ಮುಂದಿನ ಕಾನೂನು ಕ್ರಮಗಳು ನಡೆಯುತ್ತಿವೆ, ಇದು ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಸ್ಪಷ್ಟತೆಯನ್ನು ನೀಡುವ ನಿರೀಕ್ಷೆಯಿದೆ.

 

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

 

 

Source link

Kalashtami 2026: ಇಂದು ಕಾಲಾಷ್ಟಮಿ; ಈ ದಿನದ ವಿಶೇಷತೆ ಮತ್ತು ಮಹತ್ವ ತಿಳಿಯಿರಿ

ಕಾಲಾಷ್ಟಮಿಯು ಕಾಲ ಭೈರವನಿಗೆ ಅರ್ಪಿತವಾದ ಒಂದು ಪ್ರಮುಖ ಹಿಂದೂ ಹಬ್ಬವಾಗಿದೆ. ಇದನ್ನು ಪ್ರತಿ ತಿಂಗಳ ಕೃಷ್ಣ ಪಕ್ಷದ ಎಂಟನೇ ದಿನದಂದು ಆಚರಿಸಲಾಗುತ್ತದೆ. ಈ ತಿಂಗಳಿನಲ್ಲಿ ಮಾರ್ಚ್ 11ರಂದು ಈ ಕಾಲಾಷ್ಟಮಿ ದಿನವನ್ನಾಗಿ ಆಚರಿಸುತ್ತಾರೆ. ಶಿವನ ಉಗ್ರ ರೂಪವಾದ ಕಾಲ ಭೈರವನ ಆರಾಧನೆಗೆ ಈ ದಿನ ವಿಶೇಷ ಮಹತ್ವವನ್ನು ಹೊಂದಿದೆ. ಈ ದಿನದಂದು ಕಾಲ ಭೈರವನನ್ನು ಪೂಜಿಸುವುದರಿಂದ ಭಯ ಮತ್ತು ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಎಂದು ನಂಬಲಾಗಿದೆ. ಈ ದಿನದಂದು ಮಾಡುವ ಉಪವಾಸ ಮತ್ತು ಪೂಜೆಯು ಶನಿ ಮತ್ತು ರಾಹುವಿನ ದುಷ್ಟ ಪ್ರಭಾವಗಳನ್ನು ಕಡಿಮೆ ಮಾಡಲು ಸಹಕಾರಿ ಎಂದು ಪರಿಗಣಿಸಲಾಗಿದೆ.

ಪಂಚಾಂಗದ ಪ್ರಕಾರ ಚೈತ್ರ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಲ್ಲಿ ಉಪವಾಸ ಮಾಡಲಾಗುತ್ತದೆ. ಕಾಲಾಷ್ಟಮಿಯಂದು ಕಾಲಭೈರವ ದೇವರನ್ನು ರಾತ್ರಿಯಲ್ಲಿ ಪೂಜಿಸಲಾಗುತ್ತದೆ. ಈ ರಾತ್ರಿಯ ಶುಭ ಸಮಯ ರಾತ್ರಿ 11:35 ರಿಂದ 12:23 ರವರೆಗೆ. ಈ ದಿನದಂದು ಅಪರೂಪದ ಶಿವವಾಸ ಯೋಗವೂ ಸಂಭವಿಸುತ್ತಿದೆ.

ಕಾಲಭೈರವನನ್ನು ನ್ಯಾಯದ ದೇವರು ಎಂದೂ ಪರಿಗಣಿಸಲಾಗುತ್ತದೆ. ಆದ್ದರಿಂದ, ಅವನನ್ನು ಪೂಜಿಸುವುದರಿಂದ ಭಕ್ತರಿಗೆ ರಕ್ಷಣೆ ಮತ್ತು ಆಶೀರ್ವಾದಗಳು ದೊರೆಯುತ್ತವೆ. ಈ ದಿನದಂದು ಉಪವಾಸ ಮತ್ತು ದಾನ ನೀಡುವುದು ಸಹ ವಿಶೇಷ ಮಹತ್ವವನ್ನು ಹೊಂದಿದೆ. ನಾಳೆ ಕಲಷ್ಟಮಿಯಾಗಿರುವುದರಿಂದ, ನೀವು ಕಾಲಭೈರವನನ್ನು ಪೂಜಿಸಿ ಅವರ ಆಶೀರ್ವಾದವನ್ನು ಪಡೆಯಬಹುದು. ಇಂದು ಕಪ್ಪು ನಾಯಿಗೆ ಆಹಾರ ನೀಡಿ, ಏಕೆಂದರೆ ಹಿಂದೂಗಳು ಕಪ್ಪು ನಾಯಿಯನ್ನು ಭೈರವನ ವಾಹನವೆಂದು ಪರಿಗಣಿಸುತ್ತಾರೆ.

ಇದನ್ನೂ ಓದಿ: ಈ ಒಂದು ವಸ್ತುವನ್ನು ಎಂದಿಗೂ ಯಾರಿಗೂ ಉಡುಗೊರೆಯಾಗಿ ನೀಡಬೇಡಿ; ಅಪಾಯ ತಪ್ಪಿದ್ದಲ್ಲ!

ಮಂತ್ರಗಳನ್ನು ಪಠಿಸುವ ನಿಯಮಗಳು:

ಕಲಷ್ಟಮಿಯಂದು ಪೂಜೆಯ ಸಮಯದಲ್ಲಿ ಮಂತ್ರಗಳನ್ನು ಪಠಿಸುವಾಗ, ದೇಹ ಮತ್ತು ಮನಸ್ಸು ಎರಡೂ ಶುದ್ಧವಾಗಿರಬೇಕು. ಸ್ನಾನ ಮಾಡಿ ಮತ್ತು ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ. ಮಂತ್ರವನ್ನು ಶಾಂತವಾಗಿ ಮತ್ತು ಏಕಾಗ್ರತೆಯಿಂದ ಪಠಿಸಿ. ಮಂತ್ರಗಳನ್ನು ಸರಿಯಾಗಿ ಉಚ್ಚರಿಸುವುದು ಮುಖ್ಯ. ಉಚ್ಚಾರಣೆಯ ಬಗ್ಗೆ ನಿಮಗೆ ಯಾವುದೇ ಸಂದೇಹಗಳಿದ್ದರೆ, ಜ್ಞಾನವುಳ್ಳ ವ್ಯಕ್ತಿಯಿಂದ ಮಾರ್ಗದರ್ಶನ ಪಡೆಯಿರಿ. ನಿಮ್ಮ ಭಕ್ತಿ ಮತ್ತು ಸಮಯವನ್ನು ಅವಲಂಬಿಸಿ, ನೀವು ಮಂತ್ರಗಳನ್ನು ನಿರ್ದಿಷ್ಟ ಸಂಖ್ಯೆಯ ಬಾರಿ ಪಠಿಸಬಹುದು (ಉದಾ. 108 ಬಾರಿ). ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿ ಕುಳಿತುಕೊಳ್ಳುವುದು ಶುಭವೆಂದು ಪರಿಗಣಿಸಲಾಗುತ್ತದೆ. ನೀವು ಹೆಚ್ಚು ಬಾರಿ ಪಠಿಸುತ್ತಿದ್ದರೆ, ನೀವು ರುದ್ರಾಕ್ಷ ಅಥವಾ ತುಳಸಿ ಮಣಿಗಳನ್ನು ಬಳಸಬಹುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಮಿಳಿನ ದಿಗ್ಗಜ ನಟ, ಮಾಜಿ ಸಿಎಂ ಎಂಜಿಆರ್​​ ಬಗ್ಗೆ ತೆಲುಗು ಹಿರಿಯ ನಟನ ಕೀಳು ಹೇಳಿಕೆ

ಚಿತ್ರರಂಗದಲ್ಲಿ (Movie Industry) ಒಬ್ಬರನ್ನು ಇನ್ನೊಬ್ಬರ ಜೊತೆ ಹೋಲಿಸಿ ನೋಡುವುದು ಸಾಮಾನ್ಯ. ಆದರೆ ಈ ಹೋಲಿಕೆಯ ಸಂದರ್ಭದಲ್ಲಿ ನಟರನ್ನು ತುಚ್ಛೀಕರಿಸಿ ಮಾತನಾಡುವುದು ಇತ್ತೀಚೆಗೆ ಹೆಚ್ಚಾಗುತ್ತಿದೆ. ಇದೀಗ ಪದ್ಮಶ್ರೀ ಪುರಸ್ಕೃತ ತೆಲುಗು ಚಿತ್ರರಂಗದ ಹಿರಿಯ ನಟರೊಬ್ಬರು, ಘನತೆ ಮರೆತು, ತಮಿಳಿನ ಸೂಪರ್ ದಿಗ್ಗಜ ನಟ, ಮಾಜಿ ಸಿಎಂ ಸಹ ಆಗಿದ್ದ ಎಂಜಿಆರ್ ಬಗ್ಗೆ ತೀರ ಕೀಳಾಗಿ ಮಾತನಾಡಿದ್ದಾರೆ. ತೆಲುಗಿನ ಹಿರಿಯ ನಟರೊಬ್ಬರನ್ನು ಹೊಗಳಲೆಂದು ತಮಿಳಿನ ಲಿಜೆಂಡರಿ ನಟರೊಬ್ಬರ ಬಗ್ಗೆ ಕೀಳಾಗಿ ಮಾತನಾಡಿರುವುದರನ್ನು ನೆಟ್ಟಗರು ತೀವ್ರವಾಗಿ ಟೀಕಿಸಿದ್ದಾರೆ.

ಟಾಲಿವುಡ್‌ನ ಹಿರಿಯ ನಟ ‘ನಟಕಿರೀಟಿ’ ಎಂದು ಅಭಿಮಾನಿಗಳಿಂದ ಬಿರುದು ಪಡೆದಿರುವ ರಾಜೇಂದ್ರ ಪ್ರಸಾದ್ ಆಗಾಗ್ಗೆ ತಮ್ಮ ಮಾತುಗಳಿಂದ ವಿವಾದಕ್ಕೆ ಈಡಾಗುತ್ತಲೇ ಇರುತ್ತಾರೆ. ಇದೀಗ ಮತ್ತೊಮ್ಮೆ ತಮ್ಮ ಹೇಳಿಕೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೈದರಾಬಾದ್‌ನಲ್ಲಿ ಇತ್ತೀಚೆಗೆ ನಡೆದ ‘ಕಲಾಪ್ರಪೂರ್ಣ ಕಾಂತಾರಾವ್ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಅವರು ಮಾಡಿದ ಭಾಷಣ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ತಮಿಳು ಸಿನಿಮಾ ಪ್ರೇಮಿಗಳು ರಾಜೇಂದ್ರ ಪ್ರಸಾದ್ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ತೆಲುಗು ಚಿತ್ರರಂಗದ ದಿವಂಗತ ನಟ ಕಾಂತಾರಾವ್ ಅವರ ನಟನಾ ಕೌಶಲ್ಯ ಮತ್ತು ಅವರ ಜನಪದ ಚಿತ್ರಗಳ ವೈಭವವನ್ನು ಕೊಂಡಾಡುವ ಸಂದರ್ಭದಲ್ಲಿ ರಾಜೇಂದ್ರ ಪ್ರಸಾದ್ ಅವರು ಎಂಜಿಆರ್ ಅವರ ಹೆಸರನ್ನು ಎಳೆದು ತಂದಿದ್ದಾರೆ. ಕಾಂತಾರಾವ್ ಅವರ ನಟನೆಯನ್ನು ನೋಡಿ ಎಂಜಿಆರ್ ಭಯಪಡುತ್ತಿದ್ದರು ಮತ್ತು ‘ಕಾಂತಾರಾವ್ ನಟನೆ ನೋಡಿ ಭಯದಿಂದ ಎಂಜಿಆರ್ ಮೂತ್ರ ವಿಸರ್ಜನೆ ಮಾಡಿಕೊಳ್ಳುತ್ತಿದ್ದರು’ ಎಂದು ರಾಜೇಂದ್ರ ಪ್ರಸಾದ್ ಹೇಳಿದ್ದಾರೆ. ‘ಈ ಕಾಂತಾರಾವ್ ಯಾರು? ಭಾರತೀಯ ಸಿನಿಮಾವನ್ನು ಎಲ್ಲಿಗೋ ತೆಗೆದುಕೊಂಡು ಹೋಗುತ್ತಿದ್ದಾನಲ್ಲ’ ಎಂದು ಎಂಜಿಆರ್ ನಡುಗುತ್ತಿದ್ದರು ಎಂದು ಅವರು ಹಗುರವಾಗಿ ಮಾತನಾಡಿದ್ದಾರೆ. ತಮ್ಮ ಭಾಷಣದಲ್ಲಿ ಹಲವು ಬಾರಿ ಅವರು ಎಂಜಿಆರ್ ಬಗ್ಗೆ ಕೀಳಾಗಿ ಮತ್ತು ಏಕವಚನ ಬಳಸಿ ಮಾತನಾಡಿದ್ದಾರೆ.

ಇದನ್ನೂ ಓದಿ:ಕಂಗನಾ ರನೌತ್ ಮುಂದಿನ ಸಿನಿಮಾಕ್ಕೆ ಆ ಕರಾಳ ಘಟನೆ ಸ್ಪೂರ್ತಿ

ರಾಜೇಂದ್ರ ಪ್ರಸಾದ್ ಅವರ ಈ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ತಮಿಳು ಹಾಗೂ ತೆಲುಗು ಅಭಿಮಾನಿಗಳು ಸಹ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಒಬ್ಬ ಸಾಧಕ ನಟನನ್ನು ಹೊಗಳುವ ಭರದಲ್ಲಿ ಕೋಟ್ಯಂತರ ಜನರು ಆರಾಧಿಸುವ ಮತ್ತೊಬ್ಬ ದಿಗ್ಗಜ ನಟ ಹಾಗೂ ಜನನಾಯಕನನ್ನು ಈ ರೀತಿ ಅವಮಾನಿಸುವುದು ಸರಿಯಲ್ಲ’ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಪದ್ಮಶ್ರೀ ಪುರಸ್ಕೃತ ನಟರೊಬ್ಬರು ಸಾರ್ವಜನಿಕ ವೇದಿಕೆಯಲ್ಲಿ ಇಂತಹ ಸಂಸ್ಕಾರಹೀನ ಪದಗಳನ್ನು ಬಳಸುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಅನೇಕರು ಟೀಕಿಸಿದ್ದಾರೆ.

ಈ ಹಿಂದೆ ಕೂಡ ರಾಜೇಂದ್ರ ಪ್ರಸಾದ್ ಅವರು ಹಾಸ್ಯ ನಟರಾದ ಬ್ರಹ್ಮಾನಂದಂ ಮತ್ತು ಅಲಿ ಅವರ ಬಗ್ಗೆ ಸಾರ್ವಜನಿಕವಾಗಿ ಕೀಳಾಗಿ ಮಾತನಾಡಿ ವಿವಾದ ಸೃಷ್ಟಿಸಿದ್ದರು, ಅದರ ಬಳಿಕ ತೆಲುಗು ಸಿನಿಮಾ ಒಂದರಲ್ಲಿ ನಟಿಸಿದ್ದ ಕ್ರಿಕೆಟಿಗ ಡೇವಿಡ್ ವಾರ್ನರ್ ಬಗ್ಗೆಯೂ ಕೀಳಾಗಿ ಮಾತನಾಡಿದ್ದು ಸುದ್ದಿ ಆಗಿತ್ತು. ರಾಜೇಂದ್ರ ಪ್ರಸಾದ್ ಕ್ಷಮೆ ಕೇಳಬೇಕು ಎಂದು ತಮಿಳು ಸಿನಿಮಾ ಪ್ರೇಮಿಗಳು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಿದ್ದು, ರಾಜೇಂದ್ರ ಪ್ರಸಾದ್ ಪ್ರತಿಕ್ರಿಯೆ ಹೇಗಿರುತ್ತದೆ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version