24 ಫೋರ್, 2 ಭರ್ಜರಿ ಸಿಕ್ಸ್​: ಸಿಡಿಲಬ್ಬರದ ಸೆಂಚುರಿ ಸಿಡಿಸಿದ ಜೋರ್ಡನ್ ಕಾಕ್ಸ್​ – Kannada News | RCB’s Jordan Cox hits 73 ball century

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಆಟಗಾರ ಜೋರ್ಡನ್ ಕಾಕ್ಸ್ ಕೌಂಟಿ ಕ್ರಿಕೆಟ್​​ನಲ್ಲಿ ಸಿಡಿಲಬ್ಬರದ ಶತಕ ಸಿಡಿಸಿದ್ದಾರೆ. ಇಂಗ್ಲೆಂಡ್​ನ ಲೀಸೆಸ್ಟರ್​ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಕೌಂಟಿ ಚಾಂಪಿಯನ್​​ಶಿಪ್​ನ 33ನೇ ಪಂದ್ಯದಲ್ಲಿ ಲೀಸೆಸ್ಟರ್‌ಶೈರ್ vs ಎಸೆಕ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್​ನಲ್ಲಿ ಟಾಸ್ ಗೆದ್ದ ಲೀಸೆಸ್ಟರ್‌ಶೈರ್ ತಂಡದ ನಾಯಕ ಬೆನ್ ಗ್ರೀನ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಎಸೆಕ್ಸ್ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ಡೀನ್ ಎಲ್ಗರ್ (3) ಹಾಗೂ ಪೌಲ್ ವಾಲ್ಟರ್ (2) ಬೇಗನೆ ವಿಕೆಟ್ ಒಪ್ಪಿಸಿದ್ದರು. ಈ ಹಂತದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜೋರ್ಡನ್ ಕಾಕ್ಸ್​ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.

ಕ್ರೀಸ್​ಗೆ ಆಗಮಿಸುತ್ತಿದ್ದಂತೆ ಆಕ್ರಮಣಕಾರಿ ಬ್ಯಾಟಿಂಗ್​ಗೆ ಒತ್ತು ನೀಡಿದ ಕಾಕ್ಸ್​ ಶತಕ ಪೂರೈಸಿದ್ದು ಕೇವಲ 73 ಎಸೆತಗಳಲ್ಲಿ ಎಂಬುದು ವಿಶೇಷ. ಅಂದರೆ ಟೆಸ್ಟ್ ಪಂದ್ಯದಲ್ಲಿ ಸ್ಫೋಟಕ ಸೆಂಚುರಿ ಸಿಡಿಸಿ ಮಿಂಚಿದ್ದಾರೆ.

ಶತಕದ ಬಳಿಕ ಎಚ್ಚರಿಕೆಯ ಆಟಕ್ಕೆ ಒತ್ತು ನೀಡಿದ ಜೋರ್ಡನ್ಸ್ ಕಾಕ್ಸ್ 177 ಎಸೆತಗಳನ್ನು ಎದುರಿಸಿ 24 ಫೋರ್ ಹಾಗೂ 2 ಸಿಕ್ಸ್ ಸಿಡಿಸಿದ್ದಾರೆ. ಈ ಮೂಲಕ ಮೊದಲ ದಿನದಾಟದ ಅಂತ್ಯಕ್ಕೆ ಕಾಕ್ಸ್ 177 ಎಸೆತಗಳಲ್ಲಿ ಅಜೇಯ 184 ರನ್ ಬಾರಿಸಿದ್ದಾರೆ.

ಜೋರ್ಡನ್ ಕಾಕ್ಸ್ ಅವರ ಈ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನೊಂದಿಗೆ ಎಸೆಕ್ಸ್ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 342 ರನ್​ ಕಲೆಹಾಕಿದೆ.

ಆರ್​ಸಿಬಿ ತಂಡದ ಆಟಗಾರ:

2026ರ ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಜೋರ್ಡನ್ ಕಾಕ್ಸ್ ಅವರನ್ನು ₹75 ಲಕ್ಷಕ್ಕೆ ಖರೀದಿಸಿತ್ತು. ಅದರಂತೆ ಈ ಬಾರಿ ಆರ್​ಸಿಬಿ ತಂಡದಲ್ಲಿ ಕಾಣಿಸಿಕೊಂಡಿದ್ದ ಕಾಕ್ಸ್​ಗೆ ಒಂದೇ ಒಂದು ಮ್ಯಾಚ್​ನಲ್ಲಿ ಬ್ಯಾಟ್ ಬೀಸಲು ಅವಕಾಶ ಸಿಕ್ಕಿರಲಿಲ್ಲ. ಇದಾಗ್ಯೂ ಸಬ್‌ಸ್ಟಿಟ್ಯೂಟ್ ಫೀಲ್ಡರ್ ಆಗಿ ತಂಡಕ್ಕೆ ನೆರವಾಗಿದ್ದರು.

ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಎಂಟ್ರಿ:

ನ್ಯೂಝಿಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯಕ್ಕೆ ಜೋರ್ಡನ್ ಕಾಕ್ಸ್ ಅವರನ್ನು ಆಯ್ಕೆ ಮಾಡಲಾಗಿದೆ. ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್​ ಅವರನ್ನು ಈ ಪಂದ್ಯದಿಂದ ಕೈ ಬಿಡಲಾಗಿರುವ ಕಾರಣ, ಕಾಕ್ಸ್​ ಅವರಿಗೆ ಚಾನ್ಸ್ ಸಿಕ್ಕಿದೆ. ಇದೀಗ ಎರಡು ಟೆಸ್ಟ್ ಪಂದ್ಯಕ್ಕೂ ಮುನ್ನ ಸಿಡಿಲಬ್ಬರದ ಸೆಂಚುರಿ ಸಿಡಿಸುವ ಮೂಲಕ ಜೋರ್ಡನ್ ಕಾಕ್ಸ್ ಎಲ್ಲರ ಗಮನ ಸೆಳೆದಿದ್ದಾರೆ.

 

Source link

ಆಹಾರ ನಿಗಮದ ಗೋದಾಮುಗಳಿಗೆ ಲೋಕಾಯುಕ್ತ ಶಾಕ್! ಬಡವರ ಅಕ್ಕಿ ಲೂಟಿ ಮಾಡಿದ ಅಧಿಕಾರಿಗಳ ಕಳ್ಳಾಟ ಬಯಲು – Kannada News | Lokayukta Raid in Bengaluru: Massive Ration Rice Scam Unearthed at 27 Food Warehouses

ಆಹಾರ ನಿಗಮದ ಗೋದಾಮುಗಳಿಗೆ ಲೋಕಾಯುಕ್ತ ಶಾಕ್!Image Credit source: Deccan herald

ಬೆಂಗಳೂರು, ಜೂನ್ 13: ನಗರದಲ್ಲಿ (Bengaluru) ಪಡಿತರ ಅಕ್ಕಿ ಮತ್ತು ಆಹಾರ ಧಾನ್ಯಗಳ ವಿತರಣೆಯಲ್ಲಿ ನಡೆಯುತ್ತಿದ್ದ ಭಾರಿ ಅಕ್ರಮ ಹಾಗೂ ಕಳ್ಳಾಟವನ್ನು ಲೋಕಾಯುಕ್ತ ಪೊಲೀಸರು ಪತ್ತೆಹಚ್ಚಿದ್ದಾರೆ. ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಹಾಗೂ ಉಪಲೋಕಾಯುಕ್ತರಾದ ಕೆ.ಎನ್. ಫಣೀಂದ್ರ ಮತ್ತು ಬಿ. ವೀರಪ್ಪ ಅವರ ನೇತೃತ್ವದಲ್ಲಿ ಬೆಂಗಳೂರಿನ 22 ಹಾಗೂ ಬೆಂಗಳೂರು ಗ್ರಾಮಾಂತರದ 5 ಸೇರಿದಂತೆ ಒಟ್ಟು 27 ಕಡೆಗಳಲ್ಲಿ ಏಕಕಾಲಕ್ಕೆ ಆಹಾರ ಸರಬರಾಜು ನಿಗಮದ ಗೋದಾಮುಗಳ ಮೇಲೆ ಶುಕ್ರವಾರ ಭಾರಿ ದಾಳಿ ನಡೆಸಲಾಗಿದೆ.

ಮುಖ್ಯಾಂಶಗಳು

  • ಬೆಂಗಳೂರಿನ 27 ಆಹಾರ ಗೋದಾಮುಗಳ ಮೇಲೆ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ಭಾರಿ ದಾಳಿ ನಡೆಸಿದ್ದಾರೆ.
  • ಸಾವಿರಾರು ಮೂಟೆ ಪಡಿತರ ಅಕ್ಕಿ ನಾಪತ್ತೆಯಾಗಿದ್ದು, ಅಧಿಕಾರಿಗಳ ಭಾರಿ ಕಳ್ಳಾಟ ಬಯಲಾಗಿದೆ.
  • ಗೋದಾಮುಗಳಲ್ಲಿ ಹಮಾಲಿ ಕಾರ್ಮಿಕರಿಗೆ ಜೀವ ವಿಮೆ ಮತ್ತು ಇಎಸ್‌ಐ ನೀಡದೆ ವಂಚಿಸಲಾಗಿದೆ.

ಶಾಂತಿನಗರದ ಆಹಾರ ಇಲಾಖೆ ಗೋಡೌನ್

ಶಾಂತಿನಗರದ ಗೋದಾಮಿನಲ್ಲಿ ಪರಿಶೀಲನೆ ನಡೆಸಿದಾಗ ದಾಖಲೆಗಳಿಗೂ ಅಲ್ಲಿನ ದಾಸ್ತಾನಿಗೂ ಭಾರಿ ವ್ಯತ್ಯಾಸ ಕಂಡುಬಂದಿದೆ. ಇಲ್ಲಿ 50 ಕೆಜಿಯ ಸುಮಾರು 1,130 ಅಕ್ಕಿ ಮೂಟೆಗಳಿಗೂ ನೀಡಿರುವ ಲೆಕ್ಕಕ್ಕೂ ಸಂಬಂಧವೇ ಇಲ್ಲ. ಈ ಬಗ್ಗೆ ಸ್ಥಳದಲ್ಲಿದ್ದ ಅಧಿಕಾರಿಯನ್ನು ಕೇಳಿದರೆ ಅವರ ಬಳಿ ಉತ್ತರವೂ ಇಲ್ಲ. ಅಷ್ಟೇ ಅಲ್ಲದೆ, ಗೋದಾಮಿನಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದ 5 ಜನ ಹಮಾಲಿ ಕಾರ್ಮಿಕರಿಗೆ ಯಾವುದೇ ಜೀವ ವಿಮೆ ಸೌಲಭ್ಯ ಕಲ್ಪಿಸಿಲ್ಲ ಎಂಬುದು ಬೆಳಕಿಗೆ ಬಂದಿದೆ. ಈ ಮೂಲಕ ಕಾರ್ಮಿಕ ಇಲಾಖೆಯ ಅಧಿಕಾರಿಗಳು ತಮ್ಮ ಕರ್ತವ್ಯಲೋಪ ಎಸಗಿರುವುದು ಸ್ಪಷ್ಟವಾಗಿದೆ.

ಬೊಬ್ಬನಹಳ್ಳಿ ಸಗಟು ಮಳಿಗೆ

ಬೆಂಗಳೂರು ದಕ್ಷಿಣದ ಬೊಬ್ಬನಹಳ್ಳಿ ಗೋದಾಮಿನ ಮೇಲೆ ಲೋಕಾಯುಕ್ತ ದಾಳಿ ಮಾಡಿದ ವೇಳೆ ಉಸ್ತುವಾರಿ ಅಧಿಕಾರಿ ಅಚ್ಯುತ್ ಯಾವುದೇ ಮಾಹಿತಿ ನೀಡದೆ ಅನಧಿಕೃತವಾಗಿ ಗೈರುಹಾಜರಾಗಿದ್ದರು. ಸ್ಥಳದಲ್ಲಿದ್ದ ಮತ್ತೊಬ್ಬ ಸಿಬ್ಬಂದಿ ಶಿವಲಿಂಗಯ್ಯ ಸ್ವೀಕರಿಸಿದ ಅಕ್ಕಿ ಮೂಟೆಗಳ ಬಗ್ಗೆ ಸರಿಯಾದ ಮಾಹಿತಿ ನೀಡುವಲ್ಲಿ ವಿಫಲರಾಗಿದ್ದಾರೆ. ಇದೇ ವೇಳೆಗೆ ನಿಯಮಬಾಹಿರವಾಗಿ ಲಾರಿಯೊಂದಕ್ಕೆ 25 ಟನ್ ಅಕ್ಕಿ ಮೂಟೆಗಳನ್ನು ಲೋಡ್ ಮಾಡುತ್ತಿರುವುದು ಪತ್ತೆಯಾಗಿದೆ. ಇಲ್ಲಿ ಕೆಲಸ ಮಾಡುವ 10 ಜನ ಹಮಾಲಿ ಕಾರ್ಮಿಕರಿಗೂ ಯಾವುದೇ ಜೀವ ವಿಮೆಯ ರಕ್ಷಣೆ ಇರಲಿಲ್ಲ.

ಬಸವನಗುಡಿ ಗೋಡೌನ್

ಬಸವನಗುಡಿ ಗೋದಾಮಿನಲ್ಲಿ ಅಧಿಕಾರಿಗಳು ನೀಡಿದ ಲಿಖಿತ ಲೆಕ್ಕಕ್ಕಿಂತ ಅತ್ಯಂತ ಕಡಿಮೆ ಪ್ರಮಾಣದ ಅಕ್ಕಿ ಮೂಟೆಗಳು ಇರುವುದು ಪತ್ತೆಯಾಗಿದೆ. ದಾಳಿಯ ವೇಳೆ ಅಧಿಕಾರಿಗಳ ಬಳಿ ಇದ್ದ ನಗದಿಗೆ ಸಂಬಂಧಿಸಿದಂತೆ ಯಾವುದೇ ಸರಿಯಾದ ದಾಖಲೆ ಅಥವಾ ಸಮಜಾಯಿಷಿ ನೀಡಿಲ್ಲ. ಇದರೊಂದಿಗೆ ಗೋದಾಮಿನ ಹಮಾಲಿ ಕಾರ್ಮಿಕರಿಗೆ ಕನಿಷ್ಠ ಅಗತ್ಯಗಳಾದ ಜೀವ ವಿಮೆ, ಇ.ಎಸ್.ಐ (ESI) ಹಾಗೂ ಪಿ.ಎಫ್ (PF) ಸೌಲಭ್ಯಗಳನ್ನು ನೀಡದೆ ವಂಚಿಸಿರುವುದು ಕಂಡುಬಂದಿದೆ.

ಹನುಮಂತನಗರ ಗೋಡೌನ್

ಹನುಮಂತನಗರದ ಗೋದಾಮಿನಲ್ಲಿ ಲೋಕಾಯುಕ್ತ ಅಧಿಕಾರಿಗಳು ರಿಜಿಸ್ಟರ್ ಹಾಗೂ ದಾಸ್ತಾನು ಪರಿಶೀಲಿಸಿದಾಗ ದೊಡ್ಡ ಮಟ್ಟದ ವಂಚನೆ ಬೆಳಕಿಗೆ ಬಂದಿದೆ. ಸರ್ಕಾರಿ ದಾಖಲೆಗಳಲ್ಲಿ ಎಷ್ಟು ಪ್ರಮಾಣದ ಅಕ್ಕಿ ಹಾಗೂ ರಾಗಿ ಇದೆ ಎಂದು ಉಲ್ಲೇಖಿಸಲಾಗಿತ್ತೋ ಅಸಲಿಗೆ ಗೋದಾಮಿನಲ್ಲಿ ಅಷ್ಟು ಮೂಟೆಗಳು ಇರಲೇ ಇಲ್ಲ ಎಂಬುದು ಲೋಕಾಯುಕ್ತ ಅಧಿಕಾರಿಗಳ ಕಣ್ಣಿಗೆ ಬಿದ್ದಿದೆ. ಹೀಗಾಗಿ ಗೋಡೌನ್​ನಲ್ಲಿ ಪಡಿತರ ಧಾನ್ಯಗಳು ದುರಪಯೋಗಗೊಂದಡಿರುವುದು ದೃಢಪಟ್ಟಿದೆ. ಇದರ ಜೊತೆಗೆ ಇಲ್ಲಿ ಕೆಲಸ ಮಾಡುವ ನಾಲ್ಕು ಜನ ಹಮಾಲಿ ಕಾರ್ಮಿಕರಿಗೂ ಜೀವ ವಿಮೆ, ಇ.ಎಸ್.ಐ ಹಾಗೂ ಪಿ.ಎಫ್ ಸೌಲಭ್ಯಗಳನ್ನು ಒದಗಿಸದೆ ಶೋಷಣೆ ಮಾಡಲಾಗುತ್ತಿತ್ತು ಎಂಬುದು ದಾಳಿ ವೇಳೆ ತಿಳಿದುಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೋ ಚಾನ್ಸ್.. ಯಾವ ಕಾರಣಕ್ಕೂ ನಿಮಗೆ ಸಿಂಧೂ ನದಿ ನೀರು ಬಿಡಲ್ಲ: ರಾಜನಾಥ್ ಸಿಂಗ್ ಖಡಕ್ ಎಚ್ಚರಿಕೆ – Kannada News | India’s Stance: Rajnath Singh Links Indus Water Treaty to Pakistan’s Terrorism and NDA Achievements

ಹೈದರಾಬಾದ್, ಜೂ.13: ಭಯೋತ್ಪಾದನೆಗೆ ನಿರಂತರ ಬೆಂಬಲ ನೀಡುತ್ತಿರುವ ನೆರೆರಾಷ್ಟ್ರ ಪಾಕಿಸ್ತಾನದ ವಿರುದ್ಧ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಭಯೋತ್ಪಾದನೆಯನ್ನು ಪ್ರಾಯೋಜಿಸುವವರಿಗೆ ಸಿಂಧೂ ನದಿಯ ನೀರನ್ನು ತಲುಪಲು ಎನ್‌ಡಿಎ (NDA) ಸರ್ಕಾರ ಎಂದಿಗೂ ಬಿಡುವುದಿಲ್ಲ” ಎಂದು ಅವರು ಶುಕ್ರವಾರ (ಜೂ.12) ಖಡಕ್ ಆಗಿ ಹೇಳಿದ್ದಾರೆ. ತೆಲಂಗಾಣ ಬಿಜೆಪಿಯು ಹೈದರಾಬಾದ್‌ನಲ್ಲಿ ಆಯೋಜಿಸಿದ್ದ Intellectuals Meet ಉದ್ದೇಶಿಸಿ ಮಾತನಾಡಿದ ಅವರು, ಶಾಂತಿ ಮತ್ತು ಸೌಹಾರ್ದತೆಯ ಭಾಷೆಯನ್ನು ಅರ್ಥಮಾಡಿಕೊಳ್ಳದವರಿಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದು ಭಾರತಕ್ಕೆ ಚೆನ್ನಾಗಿ ಗೊತ್ತು ಎಂಬುದನ್ನು ‘ಆಪರೇಷನ್ ಸಿಂಧೂರ್’ (Operation Sindoor) ಮೂಲಕ ಜಗತ್ತಿಗೆ ತೋರಿಸಿಕೊಟ್ಟಿದ್ದೇವೆ ಎಂದರು.

“ಕಳೆದ ವರ್ಷ ನಡೆದ ಭೀಕರ ಪಹಲ್ಗಾಮ್ ಉಗ್ರರ ದಾಳಿಯ ನಂತರ, ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಅಮಾನತುಗೊಳಿಸುವ ಮೂಲಕ ನಾವು ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದೇವೆ. ಯಾರ ಕಣ್ಣೀರು ಒಣಗಿ ಹೋಗಿದೆಯೋ, ಅವರು ನಮ್ಮಿಂದ ನೀರನ್ನು ನಿರೀಕ್ಷಿಸಬಾರದು. ಮಾನವೀಯತೆಯ ಶತ್ರುಗಳಿಗೆ ಮತ್ತು ಭಯೋತ್ಪಾದಕರ ಪೋಷಕರಿಗೆ ಸಿಂಧೂ ನೀರನ್ನು ಕೊಡುವುದಿಲ್ಲ” ಎಂದು ಸಿಂಗ್ ಪುನರುಚ್ಚರಿಸಿದ್ದಾರೆ. ಪಹಲ್ಗಾಮ್ ದಾಳಿಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ “ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ” ಎಂಬ ಐತಿಹಾಸಿಕ ಘೋಷಣೆಯನ್ನು ರಾಜನಾಥ್ ಸಿಂಗ್ ಅವರ ಈ ಹೇಳಿಕೆಯನ್ನು ನೆನಪಿಸಿದೆ.

ಭಾರತ ಮತ್ತು ಪಾಕಿಸ್ತಾನ ನಡುವೆ 1960 ರ ಸೆಪ್ಟೆಂಬರ್ 19 ರಂದು ಸಿಂಧೂ ನದಿ ವ್ಯವಸ್ಥೆಯ ಬಳಕೆಯ ಕುರಿತು ಈ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಆದರೆ, ಗಡಿಯಾಚೆಗಿನ ಭಯೋತ್ಪಾದನೆಗೆ ಪಾಕಿಸ್ತಾನ ನೀಡುತ್ತಿರುವ ಬೆಂಬಲವನ್ನು ಸಂಪೂರ್ಣವಾಗಿ ನಿಲ್ಲಿಸುವವರೆಗೆ, ಅಂತರರಾಷ್ಟ್ರೀಯ ಕಾನೂನಿನಡಿಯಲ್ಲಿ ತನ್ನ ಸಾರ್ವಭೌಮ ಹಕ್ಕನ್ನು ಚಲಾಯಿಸಿರುವ ಭಾರತವು ಈ ಒಪ್ಪಂದವನ್ನು ಸದ್ಯಕ್ಕೆ ತಡೆಹಿಡಿದಿದೆ. ಕಳೆದ 12 ವರ್ಷಗಳ ಅವಧಿಯಲ್ಲಿ ಎನ್‌ಡಿಎ ಸರ್ಕಾರ ಸಾಧಿಸಿರುವ ಪ್ರಮುಖ ಮೈಲಿಗಲ್ಲುಗಳನ್ನು ರಕ್ಷಣಾ ಸಚಿವರು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು.

ಕಾಂಗ್ರೆಸ್ ಒಮ್ಮೆ ಆರ್ಟಿಕಲ್ 370 ಅನ್ನು ಯಾರೂ ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿತ್ತು. ಆದರೆ ನಮ್ಮ ಸರ್ಕಾರ ಅದನ್ನು ಅತ್ಯಂತ ಸಲೀಸಾಗಿ ರದ್ದುಗೊಳಿಸಿದ್ದನ್ನು ನೀವು ನೋಡಿದ್ದೀರಿ. ಇನ್ನು ನಕ್ಸಲ್ ಮುಕ್ತ ಭಾರತ ಮಾಡುವ ಬಗ್ಗೆ ದೇಶವನ್ನು ಬಹುತೇಕ ನಕ್ಸಲ್ ಮುಕ್ತಗೊಳಿಸುವತ್ತ ಸರ್ಕಾರ ಗಣನೀಯ ಪ್ರಗತಿ ಸಾಧಿಸಿದೆ. ದೇಶಾದ್ಯಂತ ಜಿಎಸ್‌ಟಿ ಜಾರಿ, ಮನೆ ಮನೆಗೆ ವಿದ್ಯುದ್ದೀಕರಣ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ತಂದಿರುವ ಸುಧಾರಣೆ ಇನ್ನು ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ಅಮರನಾಥ ಯಾತ್ರೆ ಭದ್ರತೆ ಪರಿಶೀಲನೆ; ಯಾತ್ರಾರ್ಥಿಗಳಿಗೆ ಹೆಚ್ಚಿನ ರಕ್ಷಣೆ ನೀಡಲು ಅಮಿತ್ ಶಾ ಆದೇಶ

ಒಂದು ಕಾಲದಲ್ಲಿ ಭಯೋತ್ಪಾದನೆಗೆ ಹೆಸರಾಗಿದ್ದ ಕಾಶ್ಮೀರದಲ್ಲಿ ಇಂದು ಪ್ರವಾಸೋದ್ಯಮ, ಹೂಡಿಕೆ ಮತ್ತು ಉದ್ಯೋಗಾವಕಾಶಗಳು ಗಣನೀಯವಾಗಿ ಹೆಚ್ಚುತ್ತಿವೆ ಎಂದು ಹೇಳಿದ್ದಾರೆ. ಇಂದು ಶ್ರೀನಗರದ ಲಾಲ್ ಚೌಕ್‌ನಲ್ಲಿ ನಮ್ಮ ಹೆಮ್ಮೆಯ ತ್ರಿವರ್ಣ ಧ್ವಜ ಹಾರಾಡುತ್ತಿದೆ. ಅಲ್ಲಿ ಮೊದಲ ಬಾರಿಗೆ ಕೃಷ್ಣ ಜನ್ಮಾಷ್ಟಮಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ, ಮೊಹರಂ ಮೆರವಣಿಗೆಗಳು ಶಾಂತಿಯುತವಾಗಿ ನಡೆಯುತ್ತಿವೆ ಮತ್ತು ದಶಕಗಳಿಂದ ಮುಚ್ಚಲ್ಪಟ್ಟಿದ್ದ ಸಿನಿಮಾ ಹಾಲ್‌ಗಳು ಈಗ ಮತ್ತೆ ಬಾಗಿಲು ತೆರೆಯುತ್ತಿವೆ ಎಂದು ಕಾಶ್ಮೀರದ ಬದಲಾದ ಸುಂದರ ಚಿತ್ರಣವನ್ನು ರಾಜನಾಥ್ ಸಿಂಗ್ ಬಿಚ್ಚಿಟ್ಟರು.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಮ್ ಚರಣ್ ಬಾಡಿಗಾರ್ಡ್ ಕೆವಿನ್ ಭರ್ಜರಿ ಕಸರತ್ತು; ವಿಡಿಯೋ ವೈರಲ್ – Kannada News | Ram Charan Bodyguard Kevin Kunta workout video goes viral On Social Media

ಟಾಲಿವುಡ್ ಮೆಗಾಸ್ಟಾರ್ ರಾಮ್ ಚರಣ್ ಎಲ್ಲೇ ಹೋದರೂ ಅವರ ನೆರಳಿನಂತೆ ರಕ್ಷಣೆ ನೀಡುವ ಬಾಡಿಗಾರ್ಡ್ ಕೆವಿನ್ ಕುಂಟ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ತಮ್ಮ ಕಟ್ಟುಮಸ್ತಾದ ದೇಹದಿಂದಲೇ ಗಮನ ಸೆಳೆಯುತ್ತಾ ಇದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಕೆವಿನ್ ಕುಂಟ ಅವರು ತಮ್ಮ ತರಬೇತುದಾರರ ಸಮ್ಮುಖದಲ್ಲಿ ತೀವ್ರ ಹಂತದ ಬಾಕ್ಸಿಂಗ್ ಪ್ರ್ಯಾಕ್ಟೀಸ್ ಮಾಡುತ್ತಿದ್ದಾರೆ. ಪಂಚ್ ಪ್ಯಾಡ್‌ಗಳಿಗೆ ಅವರು ಸತತವಾಗಿ ಆಕ್ರಮಣಕಾರಿ ಪಂಚ್‌ಗಳನ್ನು ನೀಡುತ್ತಾ ತಮ್ಮ ವೇಗ ಮತ್ತು ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಎಕ್ಸಸೈಸ್ ಮಾಡುವ ಮೂಲಕ ತಮ್ಮ ಅದ್ಭುತ ಫಿಟ್‌ನೆಸ್ ಸಾಮರ್ಥ್ಯವನ್ನು ತೋರ್ಪಡಿಸಿದ್ದಾರೆ.

ವಿಡಿಯೋದ ಕೊನೆಯ ಭಾಗದಲ್ಲಿ ಕೆವಿನ್ ಅವರು ಜಿಮ್‌ನ ಮೇಲ್ಭಾಗದಲ್ಲಿರುವ ಮಂಕಿ ಬಾರ್ಸ್ ಸಹಾಯದಿಂದ ಅತ್ಯಂತ ಸುಲಭವಾಗಿ ಒಂದು ಬದಿಯಿಂದ ಮತ್ತೊಂದು ಬದಿಗೆ ಚಲಿಸುವ ಸಾಹಸ ಮಾಡಿದ್ದಾರೆ. ಅವರ ಈ ಸಿಕ್ಸ್ ಪ್ಯಾಕ್ ಬಾಡಿ ಮತ್ತು ಕಠಿಣ ಪರಿಶ್ರಮಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

BSNL Recruitment 2026: ಲಿಖಿತ ಪರೀಕ್ಷೆಯಿಲ್ಲದೆ ಸಿಗಲಿದೆ ತಿಂಗಳಿಗೆ 2.25 ಲಕ್ಷ ರೂ. ಸಂಬಳದ ಉದ್ಯೋಗ! ಅರ್ಜಿ ಸಲ್ಲಿಸುವುದು ಹೇಗೆ? – Kannada News | BSNL General Manager Recruitment 2026: 15 Posts, 2.25 Lakh rs Salary, No Exam! Apply Now

ಕೇಂದ್ರ ಸರ್ಕಾರಿ ಸ್ವಾಮ್ಯದ ಪ್ರಮುಖ ದೂರಸಂಪರ್ಕ ಸಂಸ್ಥೆಯಾದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL), ದೇಶಾದ್ಯಂತ ಇರುವ ತನ್ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ಜನರಲ್ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ವಿಶೇಷ ನೇಮಕಾತಿ ಪ್ರಕಟಣೆಯಡಿ ಒಟ್ಟು 15 ಜನರಲ್ ಮ್ಯಾನೇಜರ್ (ಹಣಕಾಸು ಮತ್ತು ಖಾತೆಗಳು) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಉನ್ನತ ಮಟ್ಟದ ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದೆ.

ಈ ಹುದ್ದೆಗಳಿಗೆ ಇರಬೇಕಾದ ಶೈಕ್ಷಣಿಕ ಅರ್ಹತೆಗಳು:

ಬಿಎಸ್‌ಎನ್‌ಎಲ್‌ನ ಹಣಕಾಸು ಮತ್ತು ಲೆಕ್ಕಪತ್ರ ವಿಭಾಗದಲ್ಲಿ ಜನರಲ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿತ ಇಲಾಖೆಯಲ್ಲಿ ಉನ್ನತ ಶಿಕ್ಷಣ ಪಡೆದಿರಬೇಕು. ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ ಚಾರ್ಟರ್ಡ್ ಅಕೌಂಟೆಂಟ್ (CA), ಕಾಸ್ಟ್ ಅಂಡ್ ಮ್ಯಾನೇಜ್ಮೆಂಟ್ ಅಕೌಂಟೆಂಟ್ (CMA), MBA (ಹಣಕಾಸು) ಅಥವಾ ಮ್ಯಾನೇಜ್ಮೆಂಟ್‌ನಲ್ಲಿ ಪಿಜಿ ಡಿಪ್ಲೊಮಾ (ಹಣಕಾಸು) ಕೋರ್ಸ್‌ನಲ್ಲಿ ಉತ್ತೀರ್ಣರಾಗಿರಬೇಕು. ಇದರೊಂದಿಗೆ, ಅಧಿಕೃತ ಅಧಿಸೂಚನೆಯಲ್ಲಿ ಸೂಚಿಸಿರುವಂತೆ ಸಂಬಂಧಿತ ಹಣಕಾಸು ವಲಯದಲ್ಲಿ ಸೂಕ್ತ ಕಾರ್ಯಾನುಭವ ಹೊಂದಿರುವವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

ವಯೋಮಿತಿ ಮತ್ತು ಅರ್ಜಿ ಶುಲ್ಕದ ವಿವರಗಳು:

ಈ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ವೇಳೆಗೆ ಅಭ್ಯರ್ಥಿಗಳ ವಯಸ್ಸು 50 ವರ್ಷಗಳನ್ನು ಮೀರಬಾರದು. ಇನ್ನು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ಸಾಮಾನ್ಯ ಅಭ್ಯರ್ಥಿಯು ರೂ. 1000 ಅರ್ಜಿ ಶುಲ್ಕವನ್ನು ಆನ್‌ಲೈನ್ ಬ್ಯಾಂಕಿಂಗ್ ಅಥವಾ ಕಾರ್ಡ್‌ಗಳ ಮೂಲಕ ಕಡ್ಡಾಯವಾಗಿ ಪಾವತಿಸಬೇಕಾಗುತ್ತದೆ.

ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ ನೇರ ಆಯ್ಕೆ ಪ್ರಕ್ರಿಯೆ:

ಈ ಉದ್ಯೋಗ ನೇಮಕಾತಿಯ ಅತ್ಯಂತ ಪ್ರಮುಖ ಆಕರ್ಷಣೆಯೆಂದರೆ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಲಿಖಿತ ಪರೀಕ್ಷೆ ಇರುವುದಿಲ್ಲ. ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಗಳು ಮತ್ತು ಅವರ ಶೈಕ್ಷಣಿಕ/ಕಾರ್ಯಾನುಭವದ ಆಧಾರದ ಮೇಲೆ ಮೊದಲಿಗೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ತದನಂತರ ಶಾರ್ಟ್‌ಲಿಸ್ಟ್ ಆದ ಅರ್ಹ ಅಭ್ಯರ್ಥಿಗಳಿಗೆ ಗುಂಪು ಚರ್ಚೆ (Group Discussion), ವಿಷಯ ಪ್ರಸ್ತುತಿ (Presentation) ಮತ್ತು ಅಂತಿಮವಾಗಿ ವೈಯಕ್ತಿಕ ಸಂದರ್ಶನದ (Interview) ಮೂಲಕ ಅರ್ಹರನ್ನು ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ: 16 ಸರ್ಕಾರಿ ಉದ್ಯೋಗ ತಿರಸ್ಕರಿಸಿ IPS ಆದ ಯುವತಿ; ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ತೃಪ್ತಿ ಭಟ್ ಯಶೋಗಾಥೆ

ಆಕರ್ಷಕ ವೇತನ ಶ್ರೇಣಿ ಮತ್ತು ವಾರ್ಷಿಕ ಭತ್ಯೆ:

ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬಿಎಸ್‌ಎನ್‌ಎಲ್ ಸಂಸ್ಥೆಯು ಅತ್ಯಂತ ಆಕರ್ಷಕ ವೇತನ ಪ್ಯಾಕೇಜ್ ಅನ್ನು ನೀಡಲಿದೆ. ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಆರಂಭದಲ್ಲೇ ತಿಂಗಳಿಗೆ ರೂ. 2,25,000 ಸ್ಥಿರ ವೇತನ ಸಿಗಲಿದೆ. ಇದರೊಂದಿಗೆ, ಪ್ರತಿ ವರ್ಷ ಅಭ್ಯರ್ಥಿಯ ಕಾರ್ಯಕ್ಷಮತೆಯ ಆಧಾರದ ಮೇಲೆ ಅವರ ಮೂಲ ವೇತನದಲ್ಲಿ ಶೇ. 5 ರಷ್ಟು ವಾರ್ಷಿಕ ಹೆಚ್ಚಳ (Annual Increment) ಇರಲಿದೆ ಎಂದು ಬಿಎಸ್‌ಎನ್‌ಎಲ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಅರ್ಜಿ ಸಲ್ಲಿಸುವ ವಿಧಾನ ಮತ್ತು ಕೊನೆಯ ದಿನಾಂಕ:

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಬಿಎಸ್‌ಎನ್‌ಎಲ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್ ನಲ್ಲಿ ಅರ್ಜಿಗಳನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು, ಜೂನ್ 24ರ ಬೆಳಿಗ್ಗೆ 10:00 ಗಂಟೆಯೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ಅವಕಾಶವಿರುತ್ತದೆ. ಕೊನೆಯ ಕ್ಷಣದ ಸರ್ವರ್ ಸಮಸ್ಯೆ ತಪ್ಪಿಸಲು ಅರ್ಹ ಅಭ್ಯರ್ಥಿಗಳು ಗಡುವಿಗಿಂತ ಮುಂಚಿತವಾಗಿಯೇ ಅರ್ಜಿ ಸಲ್ಲಿಸುವುದು ಸೂಕ್ತವಾಗಿದೆ.

ಬಿಎಸ್ಎನ್ಎಲ್ ನಲ್ಲಿ ಜನರಲ್ ಮ್ಯಾನೇಜರ್ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಈ ಲಿಂಕ್​ ಮೇಲೆ ಕ್ಲಿಕ್​ ಮಾಡಿ

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಹೊಸ ನಿಯಮಗಳ ಹೈಡ್ರಾಮಾ! ಒಂದೇ ದಿನ 3 ರೆಡ್ ಕಾರ್ಡ್​..! – Kannada News | Fifa World Cup 2026: 3 Red Cards on Day 1 as New Rules Hit Hard

ಫಿಫಾ ವಿಶ್ವಕಪ್​ನ 23ನೇ ಸೀಸನ್​ಗೆ ಅದ್ಧೂರಿ ಚಾಲನೆ ದೊರೆತಿದೆ. ಮೆಕ್ಸಿಕೋದ ಪ್ರತಿಷ್ಠಿತ ಎಸ್ಟಾಡಿಯೋ ಅಝಟೆಕಾ ಕ್ರೀಡಾಂಗಣದಲ್ಲಿ ನಡೆದ ಮೆಕ್ಸಿಕೋ ಮತ್ತು ಸೌತ್ ಆಫ್ರಿಕಾ ನಡುವಿನ ಉದ್ಘಾಟನಾ ಪಂದ್ಯವು ಇದೀಗ ಇತಿಹಾಸ ಪುಟ ಸೇರಿದೆ. ಆದರೆ ಇದು ಆಟದಿಂದಲ್ಲ. ಬದಲಾಗಿ ರೆಡ್​ ಕಾರ್ಡ್​ನಿಂದಾಗಿ..!

ಇತಿಹಾಸ ಬರೆದ ಉದ್ಘಾಟನಾ ಪಂದ್ಯ!

ಟೂರ್ನಿಯ ಮೊದಲ ಪಂದ್ಯದಲ್ಲಿ ಆತಿಥೇಯ ಮೆಕ್ಸಿಕೋ ತಂಡವು ಸೌತ್ ಆಫ್ರಿಕಾವನ್ನು 2-0 ಗೋಲುಗಳಿಂದ ಮಣಿಸಿತು. ಆದರೆ, ಎಸ್ಟಾಡಿಯೋ ಅಝಟೆಕಾ ಕ್ರೀಡಾಂಗಣದಲ್ಲಿ ನಡೆದ ಈ ಹಣಾಹಣಿ ಫುಟ್‌ಬಾಲ್ ಇತಿಹಾಸದಲ್ಲಿ ಅತ್ಯಂತ ವಿವಾದಾತ್ಮಕ ಹಾಗೂ ಕಠಿಣ ಪಂದ್ಯವಾಗಿ ದಾಖಲಾಗಿದೆ. ಇದಕ್ಕೆ ಮುಖ್ಯ ಕಾರಣ ಮೂವರು ಆಟಗಾರರು ರೆಡ್ ಕಾರ್ಡ್ ಪಡೆದಿರುವುದು.

ಈ ಪಂದ್ಯದಲ್ಲಿ ರೆಫರಿಯಾಗಿ ಕಾಣಿಸಿಕೊಂಡ ಬ್ರೆಝಿಲ್​ನ ವಿಲ್ಟನ್ ಪೆರೇರಾ ಸಂಪಾಯೊ ಅವರು ದ್ವಿತೀಯಾರ್ಧದಲ್ಲಿ ಒಟ್ಟು 3 ನೇರ ರೆಡ್ ಕಾರ್ಡ್‌ಗಳನ್ನು ಪ್ರದರ್ಶಿಸಿ ಇತಿಹಾಸ ನಿರ್ಮಿಸಿದರು.  ಅಂದರೆ ವಿಶ್ವಕಪ್ ಇತಿಹಾಸದಲ್ಲಿ ಉದ್ಘಾಟನಾ ಪಂದ್ಯವೊಂದರಲ್ಲೇ ಮೂವರು ಆಟಗಾರರು ಮೈದಾನದಿಂದ ಹೊರಹಾಕಲ್ಪಟ್ಟಿರುವುದು ಇದೇ ಮೊದಲು.

ಕಟ್ಟುನಿಟ್ಟಾದ ಫಿಫಾ ನಿಯಮಗಳ ಪ್ರಭಾವ!

ಈ ಬಾರಿಯ ಫಿಫಾ ವಿಶ್ವಕಪ್​ನಲ್ಲಿ ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿದೆ. ಅಂತಾರಾಷ್ಟ್ರೀಯ ಫುಟ್‌ಬಾಲ್ ಅಸೋಸಿಯೇಷನ್ ಮಂಡಳಿ (IFAB) ಜಾರಿಗೆ ತಂದಿರುವ ಹೊಸ ಶಿಸ್ತಿನ ನಿಯಮಗಳೇ 3 ರೆಡ್ ಕಾರ್ಡ್ ಸಿಗಲು ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

  • ಬಾಯಿ ಮುಚ್ಚಿಕೊಂಡರೆ ರೆಡ್ ಕಾರ್ಡ್: ಮೈದಾನದಲ್ಲಿ ಆಟಗಾರರು ಗಲಾಟೆ ಅಥವಾ ವಾಗ್ವಾದದ ಸಮಯದಲ್ಲಿ ಎದುರಾಳಿ ಅಥವಾ ರೆಫರಿಯನ್ನು ನಿಂದಿಸುವುದನ್ನು ಬಚ್ಚಿಡಲು ತಮ್ಮ ಬಾಯಿಯನ್ನು ಕೈ ಅಥವಾ ಜೆರ್ಸಿಯಿಂದ ಮುಚ್ಚಿಕೊಂಡರೆ ನೇರವಾಗಿ ರೆಡ್ ಕಾರ್ಡ್ ನೀಡುವ ನಿಯಮ ತರಲಾಗಿದೆ.
  • ಪ್ರತಿಭಟನೆಗೆ ಶಿಕ್ಷೆ: ತೀರ್ಪುಗಾರರ ನಿರ್ಧಾರವನ್ನು ಪ್ರತಿಭಟಿಸಿ ಅಶಿಸ್ತು ತೋರಿದರೆ ಅಥವಾ ಮೈದಾನ ಬಿಟ್ಟು ಹೊರನಡೆದರೆ ಕಠಿಣ ಕಾರ್ಡ್ ಶಿಕ್ಷೆ ಕಾಯಂ ಆಗಿದೆ.

ರೆಡ್ ಕಾರ್ಡ್ ಪಡೆದ ಆಟಗಾರರು ಯಾರು?

  • ಸ್ಪೆಫೆಲೊ ‘ಯಾಯಾ’ ಸಿಥೋಲ್ (ಸೌತ್ ಆಫ್ರಿಕಾ): ಮೆಕ್ಸಿಕೋ ತಂಡದ ಆಟಗಾರ ಬ್ರಿಯಾನ್ ಗುಟಿಯೆರೆಸ್​ಗೆ ಗೋಲು ಗಳಿಸಲು ಉತ್ತಮ ಅವಕಾಶವಿತ್ತು. ಈ ವೇಳೆ ಸಿಥೋಲ್ ಅವರು ನಿಯಮಬಾಹಿರವಾಗಿ ಅತ್ಯಂತ ಅಪಾಯಕಾರಿ ಟ್ಯಾಕಲ್ ಮಾಡಿ ಬೀಳಿಸಿದರು. ಈ ಅಪಾಯಕಾರಿ ಟ್ಯಾಕಲ್ ಕಾರಣ ಮ್ಯಾಚ್ ರೆಫರಿ ತಕ್ಷಣವೇ ಸ್ಪೆಫೆಲೊ ‘ಯಾಯಾ’ ಸಿಥೋಲ್​ಗೆ ನೇರ ರೆಡ್ ಕಾರ್ಡ್ ನೀಡಿದ್ದಾರೆ.
  •  ಥೆಂಬಾ ಝ್ವಾನೆ (ಸೌತ್ ಆಫ್ರಿಕಾ): ಮೆಕ್ಸಿಕೋ ತಂಡದ ರಾಬರ್ಟೊ ಅಲ್ವಾರಾಡೊ ಅವರೊಂದಿಗೆ ನಡೆದ ಗಲಾಟೆಯ ಸಂದರ್ಭದಲ್ಲಿ, ಝ್ವಾನೆ ಅವರು ಅಶಿಸ್ತಿನ ವರ್ತನೆ ತೋರಿದ್ದರು. ವಿಡಿಯೋ ಅಸಿಸ್ಟೆಂಟ್ ರೆಫರಿ (VAR) ಮರುಪರಿಶೀಲನೆಯ ನಂತರ, ಅವರು ಎದುರಾಳಿಯ ಮುಖಕ್ಕೆ ಹೊಡೆದಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ರೆಫರಿ ಥೆಂಬಾ ಝ್ವಾನೆಗೆ ನೇರ ರೆಡ್ ಕಾರ್ಡ್ ನೀಡಿದ್ದಾರೆ.
  • ಸೆಸಾರ್ ಮಾಂಟೆಸ್ (ಮೆಕ್ಸಿಕೋ): ಪಂದ್ಯ ಮುಗಿಯಲು ಕೇವಲ ಕೆಲವು ನಿಮಿಷಗಳು ಬಾಕಿ ಇರುವಾಗ ಮೆಕ್ಸಿಕೋದ ಡಿಫೆಂಡರ್ ಸೆಸಾರ್ ಮಾಂಟೆಸ್ ಸೌತ್ ಆಫ್ರಿಕಾ ಆಟಗಾರನನ್ನು ಕೆಳಗೆ ಉರುಳಿಸಿದ್ದರು. ಈ ಆಕ್ರಮಣಕಾರಿ ಆಟಕ್ಕೆ  ಸೆಸಾರ್ ಮಾಂಟೆಸ್​ಗೆ ರೆಡ್ ಕಾರ್ಡ್ ನೀಡಲಾಗಿದೆ.

ರೆಡ್ ಕಾರ್ಡ್ ಪಡೆದರೆ ಏನು ಸಮಸ್ಯೆ?

ರೆಡ್ ಕಾರ್ಡ್ ಪಡೆದ ಆಟಗಾರ ತಕ್ಷಣವೇ ಮೈದಾನವನ್ನು ಬಿಟ್ಟು ಹೊರಹೋಗಬೇಕು. ಅವರು ಪಂದ್ಯದ ಉಳಿದ ಅವಧಿಯಲ್ಲಿ ಮೈದಾನದಲ್ಲಿ ಆಡುವಂತಿಲ್ಲ ಮತ್ತು ಸಬ್‌ಸ್ಟಿಟ್ಯೂಟ್ ಬೆಂಚ್‌ನಲ್ಲಿಯೂ ಕುಳಿತುಕೊಳ್ಳುವಂತಿಲ್ಲ.

ಹಾಗೆಯೇ ರೆಡ್ ಕಾರ್ಡ್ ಪಡೆದ ಆಟಗಾರನ ಬದಲಿಗೆ ಸಬ್ಸ್​ಟಿಟ್ಯೂಟ್ ಆಗಿ ಮತ್ತೊಬ್ಬ ಆಟಗಾರನನ್ನು ಮೈದಾನಕ್ಕೆ ಇಳಿಸಲು ಅವಕಾಶವಿರುವುದಿಲ್ಲ. ಇದರಿಂದಾಗಿ ಆ ತಂಡವು ಉಳಿದ ಪಂದ್ಯವನ್ನು ಕೇವಲ 10 ಆಟಗಾರರೊಂದಿಗೆ ಆಡಬೇಕಾಗುತ್ತದೆ. ಇದು ತಂಡದ ಮೇಲೆ ಭಾರಿ ಒತ್ತಡವನ್ನು ಉಂಟುಮಾಡುವುದಲ್ಲದೆ, ಸೋಲಿನ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಇನ್ನು ರೆಡ್ ಕಾರ್ಡ್ ಪಡೆದ ಆಟಗಾರನಿಗೆ ಕೇವಲ ಆ ಪಂದ್ಯ ಮಾತ್ರವಲ್ಲದೆ, ಅವರ ತಂಡ ಆಡುವ ಮುಂದಿನ ಕನಿಷ್ಠ ಒಂದು ಪಂದ್ಯದಲ್ಲಿ ಆಡದಂತೆ ನಿಷೇಧ ಹೇರಲಾಗುತ್ತದೆ. ತಪ್ಪು ತುಂಬಾ ಗಂಭೀರವಾಗಿದ್ದರೆ (ಉದಾಹರಣೆಗೆ ಮೈದಾನದಲ್ಲಿ ಹೊಡೆದಾಟ ನಡೆಸಿದ್ದರೆ), ಫಿಫಾ ಶಿಸ್ತು ಸಮಿತಿಯು ಈ ನಿಷೇಧವನ್ನು 3 ಪಂದ್ಯಗಳವರೆಗೆ ವಿಸ್ತರಿಸಬಹುದು.

ಇದನ್ನೂ ಓದಿ: ಬರೋಬ್ಬರಿ 27 ಪಂದ್ಯಗಳು… ಟೀಮ್ ಇಂಡಿಯಾದ ವಿಶ್ವಕಪ್​ ಸಿದ್ಧತೆ ಶುರು!

4 ರೆಡ್ ಕಾರ್ಡ್​!

2022ರ ಇಡೀ ಖತಾರ್ ವಿಶ್ವಕಪ್‌ನ ಒಟ್ಟು 64 ಪಂದ್ಯಗಳಲ್ಲಿ ಕೇವಲ 4 ರೆಡ್ ಕಾರ್ಡ್‌ಗಳನ್ನು ಮಾತ್ರ ನೀಡಲಾಗಿತ್ತು. ಆದರೆ, 2026ರ ವಿಶ್ವಕಪ್‌ನಲ್ಲಿ ಕೇವಲ ಉದ್ಘಾಟನಾ ದಿನವೇ 3 ರೆಡ್ ಕಾರ್ಡ್‌ಗಳು ಹೊರಬಿದ್ದಿರುವುದು ಟೂರ್ನಿಯು ಎಷ್ಟು ಆಕ್ರಮಣಕಾರಿ ಮತ್ತು ಕಟ್ಟುನಿಟ್ಟಾಗಿ ಸಾಗಲಿದೆ ಎಂಬುದಕ್ಕೆ ಮುನ್ಸೂಚನೆಯಾಗಿದೆ.

Source link

ಬೆಂಗಳೂರಿನಲ್ಲಿ ಭೀಕರ ಸರಣಿ ಅಪಘಾತ: ಪ್ರತ್ಯೇಕ ದುರಂತಗಳಲ್ಲಿ ನಾಲ್ವರ ದುರ್ಮರಣ, ಮೂವರಿಗೆ ಗಾಯ – Kannada News | Bengaluru: Four Killed in Three Separate Accidents Across Whitefield and Kengeri; Three Critically Injured

ಅಪಘಾತಕ್ಕೀಡಾಗಿರುವ ಕಾರುImage Credit source: tv9

ಬೆಂಗಳೂರು, ಜೂನ್ 13: ಬೆಂಗಳೂರಿನಲ್ಲಿ (Bengaluru) ಶನಿವಾರ ಪ್ರತ್ಯೇಕವಾಗಿ ಸಂಭವಿಸಿದ ಮೂರು ಭೀಕರ ರಸ್ತೆ ಅಪಘಾತಗಳಲ್ಲಿ ನಾಲ್ಕು ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಮಗಳನ್ನು ಕಾಲೇಜಿಗೆ ಬಿಡಲು ತೆರಳುತ್ತಿದ್ದ ತಾಯಿ ಶಾಲಾ ಬಸ್‌ ಅಡಿ ಸಿಲುಕಿ ಮೃತಪಟ್ಟರೆ, ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಬೈಕ್ ಅಪಘಾತದಲ್ಲಿ ಜೀವ ಕಳೆದುಕೊಂಡಿದ್ದಾರೆ. ಮತ್ತೊಂದು ಘಟನೆಯಲ್ಲಿ ಕಾರು ಅಡ್ಡಾದಿಡ್ಡಿಯಾಗಿ ಚಲಿಸಿ ಪಲ್ಟಿಯಾದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮುಖ್ಯಾಂಶಗಳು

  • ಪ್ರತ್ಯೇಕ ಅಪಘಾತಗಳಲ್ಲಿ ನಾಲ್ವರು ಸಾರ್ವಜನಿಕರ ಸಾವು.
  • ಮಗಳ ಕಣ್ಣೆದುರೇ ಶಾಲಾ ಬಸ್‌ಗೆ ಬಲಿಯಾದ ತಾಯಿ.
  • ಡಿವೈಡರ್‌ಗೆ ಡಿಕ್ಕಿಯಾಗಿ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳ ಸಾವು.

ಮಗಳ ಕಣ್ಣೆದುರೇ ಶಾಲಾ ಬಸ್‌ಗೆ ಬಲಿಯಾದ ತಾಯಿ

ವೈಟ್‌ಫೀಲ್ಡ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ಕರುಳು ಹಿಂಡುವಂಥ ಘಟನೆ ಸಂಭವಿಸಿದೆ. ಕಾಂತಾ ಎಂಬಾಕೆ ಮಗಳು ನೇಹಾಳನ್ನು ದ್ವಿಚಕ್ರ ವಾಹನದಲ್ಲಿ ಕಾಲೇಜಿಗೆ ಕರೆದೊಯ್ಯುತ್ತಿದ್ದರು. ಮಾರತ್‌ಹಳ್ಳಿಯಿಂದ ಸಿದ್ದಾಪುರ ಕಡೆಗೆ ಹೋಗುತ್ತಿದ್ದಾಗ ಹಠಾತ್ತನೆ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದ್ದಾರೆ. ಕಾಂತಾ ಮೇಲೆ ಹಿಂಬದಿಯಿಂದ ಬರುತ್ತಿದ್ದ ಶಾಲಾ ಬಸ್ ಹರಿದಿದೆ. ಘಟನೆಯಲ್ಲಿ ತಾಯಿ ಸ್ಥಳದಲ್ಲೇ ಮೃತಪಟ್ಟಿದ್ದು, ಮಗಳು ನೇಹಾ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ತಾಯಿಯ ಭೀಕರ ಸಾವನ್ನು ಕಣ್ಣಾರೆ ಕಂಡ ಮಗಳು ತೀವ್ರ ಆಘಾತಕ್ಕೆ ಒಳಗಾಗಿದ್ದಾಳೆ.

ಡಿವೈಡರ್‌ಗೆ ಬೈಕ್ ಡಿಕ್ಕಿ: ಕೇರಳ ಮೂಲದ ಇಬ್ಬರು ವಿದ್ಯಾರ್ಥಿಗಳು ಸಾವು

ನಗರದ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಆರ್.ಆರ್. ಡೆಂಟಲ್ ಕಾಲೇಜು ಬಳಿ ಮಧ್ಯರಾತ್ರಿ ಸುಮಾರು 2 ಗಂಟೆಗೆ ಮತ್ತೊಂದು ಭೀಕರ ಅಪಘಾತ ನಡೆದಿದೆ. ಮೈಸೂರು ಕಡೆಯಿಂದ ಬೆಂಗಳೂರಿಗೆ ಬೈಕ್‌ನಲ್ಲಿ ಬರುತ್ತಿದ್ದ ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿಗಳಾದ ಅತುಲ್ ಮತ್ತು ಗೌರಿಶಂಕರ್ ಪ್ರಯಾಣಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್‌ಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ವಿದ್ಯಾರ್ಥಿಗಳು ರಸ್ತೆಗೆ ಎಸೆಯಲ್ಪಟ್ಟು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕೆಂಗೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಡ್ಡಾದಿಡ್ಡಿ ಕಾರು ಚಾಲನೆಗೆ ಓರ್ವ ಬಲಿ, ಮೂವರಿಗೆ ಗಾಯ

ಮೈಸೂರು ರಸ್ತೆಯ ಇಂದ್ರಪ್ರಸ್ಥ ಅಪಾರ್ಟ್‌ಮೆಂಟ್ ಬಳಿ ಅತಿ ವೇಗ ಮತ್ತು ಅಡ್ಡಾದಿಡ್ಡಿ ಚಾಲನೆಗೆ ಮತ್ತೊಂದು ಜೀವ ಬಲಿಯಾಗಿದೆ. ವೇಗವಾಗಿ ಬಂದ ಇಕೋ ಕಾರಿನ ಚಾಲಕ ರಸ್ತೆಯಲ್ಲಿದ್ದ ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ರಸ್ತೆಯಲ್ಲೇ ಪಲ್ಟಿಯಾಗಿದೆ. ಈ ವೇಳೆ ಕಾರಿನಲ್ಲಿದ್ದ ಸುಖದೇವ್ ಎಂಬಾತ ಕಾರಿನಿಂದ ಹೊರಗೆ ಬಿದ್ದಿದ್ದು, ಅದೇ ಕಾರು ಆತನ ಮೇಲೆಯೇ ಉರುಳಿ ಬಿದ್ದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಪಘಾತದಲ್ಲಿ ಎರಡು ಬೈಕ್‌ಗಳಲ್ಲಿದ್ದ ಮೂವರು ಸವಾರರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗೃಹ ಇಲಾಖೆ ಆದೇಶದಿಂದ ಪ್ರಣೀತ್ ಮೊರೆಗೆ ಹೆಚ್ಚಿತು ಸಂಕಷ್ಟ – Kannada News | Praneeth More Controversy: Vulgar Comedy Sparks Outrage, Home Dept Probes

ಖ್ಯಾತ ಸ್ಟ್ಯಾಂಡ್‌ಅಪ್ ಕಮಿಡಿಯನ್ ಪ್ರಣೀತ್ ಮೋರೆ ಅವರ ಕಾರ್ಯಕ್ರಮಗಳು ಈಗ ಭಾರಿ ವಿವಾದಕ್ಕೆ ಸಿಲುಕಿದ್ದು, ಅವರ ಸಂಕಷ್ಟಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಪ್ರಣೀತ್ ಅವರ ಹಾಸ್ಯ ಕಾರ್ಯಕ್ರಮಗಳಲ್ಲಿ ಅಶ್ಲೀಲ ಹಾಗೂ ವಿಕೃತ ವಿಷಯಗಳು ತುಂಬಿರುತ್ತವೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಇದಕ್ಕೆ ಸಂಬಂಧಿಸಿದ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.

ವೈರಲ್ ಆಗಿರುವ ವಿಡಿಯೋಗಳಲ್ಲಿ ಕೆಇಎಂ (KEM) ಆಸ್ಪತ್ರೆಯ ಮಹಿಳಾ ವೈದ್ಯರೊಬ್ಬರು ಮೃತದೇಹದ ಖಾಸಗಿ ಭಾಗಗಳ ಬಗ್ಗೆ ನೇರವಾಗಿ ನೀಡಿರುವ ಆಘಾತಕಾರಿ ಹೇಳಿಕೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇದರೊಂದಿಗೆ ಬಿರಿಯಾನಿಯ ಕಥೆಯೂ ಅಷ್ಟೇ ಆಘಾತಕಾರಿಯಾಗಿದ್ದು, ಇವೆಲ್ಲವೂ ಹಾಸ್ಯದ ಹೆಸರಿನಲ್ಲಿ ನಡೆದಿರುವ ವಿಕೃತಿ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಈ ವಿವಾದಾತ್ಮಕ ಹೇಳಿಕೆ ನೀಡಿದ ಮಹಿಳಾ ವೈದ್ಯರ ವಿರುದ್ಧವೂ ಕ್ರಮ ಕೈಗೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ ಎಂದು ವರದಿಯಾಗಿದೆ.

ಈ ಇಡೀ ಬೆಳವಣಿಗೆಯನ್ನು ಮಹಾರಾಷ್ಟ್ರ ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಪ್ರಣೀತ್ ಮೋರೆ ಅವರು ಯೂಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿರುವ ಇತ್ತೀಚಿನ ಎರಡು ವಿಡಿಯೋಗಳು ಮಾತ್ರವಲ್ಲದೆ, ಅವರ ಹಿಂದಿನ ಎಲ್ಲಾ ಹಳೆಯ ವಿಡಿಯೋಗಳ ವಿಷಯವನ್ನು ಸೈಬರ್ ಪೊಲೀಸರು ಸಂಪೂರ್ಣವಾಗಿ ತನಿಖೆ ನಡೆಸಲಿದ್ದಾರೆ ಎಂದು ಗೃಹ ಇಲಾಖೆಯ ರಾಜ್ಯ ಸಚಿವರು ಮಾಹಿತಿ ನೀಡಿದ್ದಾರೆ. ಇದು ಪ್ರಣೀತ್ ಮೋರೆ ಅವರಿಗೆ ದೊಡ್ಡ ಹೊಡೆತ ನೀಡಿದಂತಾಗಿದೆ.

ಮಹಿಳಾ ಆಯೋಗದಿಂದ ನೋಟಿಸ್; ನಿಷೇಧಕ್ಕೆ ಆಗ್ರಹ:

ಈ ವಿವಾದಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಹಿಳಾ ಆಯೋಗವು ಪ್ರಣೀತ್ ಮೋರೆ ಅವರಿಗೆ ನೋಟಿಸ್ ಜಾರಿ ಮಾಡಿದೆ. ಜೊತೆಗೆ ಸೈಬರ್ ಸೆಲ್ ಕೂಡ ಪ್ರತ್ಯೇಕವಾಗಿ ತನಿಖೆ ಆರಂಭಿಸಿದೆ. ಇಂತಹ ವಿಕೃತ ಮತ್ತು ಅಶ್ಲೀಲ ಕಾರ್ಯಕ್ರಮಗಳನ್ನು ಸಮಾಜದಲ್ಲಿ ಸಂಪೂರ್ಣವಾಗಿ ನಿಷೇಧಿಸಬೇಕು ಎಂಬ ಬೇಡಿಕೆಯೂ ಸಾರ್ವಜನಿಕ ವಲಯದಿಂದ ಬಲವಾಗಿ ಕೇಳಿಬರುತ್ತಿದೆ.

ಇದನ್ನೂ ಓದಿ: ಪ್ರಣೀತ್ ಮೋರೆ ಶೋನಲ್ಲಿ ಮತ್ತೊಂದು ಕರ್ಮಕಾಂಡ; ಮೃತದೇಹದ ಖಾಸಗಿ ಅಂಗಗಳ ಬಗ್ಗೆ ಲೇವಡಿ

ಪ್ರಣೀತ್ ಮೋರೆ ಅವರ ಕಾರ್ಯಕ್ರಮಗಳು ಈ ಹಿಂದೆಯೂ ಹಲವು ಬಾರಿ ಅಶ್ಲೀಲ ವಿಷಯಗಳ ಕಾರಣಕ್ಕೆ ವಿವಾದಕ್ಕೀಡಾಗಿದ್ದವು. ಆದರೆ ಈ ಬಾರಿ ಗೃಹ ಇಲಾಖೆಯೇ ನೇರ ತನಿಖೆಗೆ ಆದೇಶಿಸಿರುವುದರಿಂದ ಅವರು ಕಾನೂನು ಕತ್ತರಿ ಸಿಲುಕುವುದು ಬಹುತೇಕ ಖಚಿತವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬರೋಬ್ಬರಿ 27 ಪಂದ್ಯಗಳು… ಟೀಮ್ ಇಂಡಿಯಾದ ವಿಶ್ವಕಪ್​ ಸಿದ್ಧತೆ ಶುರು! – Kannada News | Team India’s Road to 2027 ODI WC Begins

ಟೀಮ್ ಇಂಡಿಯಾದ ಏಕದಿನ ವಿಶ್ವಕಪ್ (ODI World Cup 2027) ತಯಾರಿ ಇಂದಿನಿಂದ (ಜೂನ್ 13) ಶುರುವಾಗಲಿದೆ. ಅಫ್ಘಾನಿಸ್ತಾನ್ ವಿರುದ್ಧದ ಮೂರು ಪಂದ್ಯಗಳ ದ್ವಿಪಕ್ಷೀಯ ಸರಣಿಯೊಂದಿಗೆ ಭಾರತ ತಂಡ ವಿಶ್ವಕಪ್ ಸಿದ್ಧತೆ ಆರಂಭವಾಗುತ್ತಿದ್ದು, ಈ ಸರಣಿಯ ಬಳಿಕ ಟೀಮ್ ಇಂಡಿಯಾ ಒಟ್ಟು 24 ಪಂದ್ಯಗಳನ್ನಾಡಲಿದೆ. ಅಂದರೆ 2027ರ ಏಕದಿನ ವಿಶ್ವಕಪ್​ಗೂ ಮುನ್ನ ಒಟ್ಟು 27 ಒನ್​ಡೇ ಮ್ಯಾಚ್​ಗಳಲ್ಲಿ ಕಣಕ್ಕಿಳಿಯಲಿದೆ.

ಯಾರ ವಿರುದ್ಧ 27 ಪಂದ್ಯಗಳು?

ಭಾರತ ತಂಡವು 2027ರ ಏಕದಿನ ವಿಶ್ವಕಪ್‌ಗೂ ಮುನ್ನ ಒಟ್ಟು 27 ಏಕದಿನ ಪಂದ್ಯಗಳನ್ನು (ODIs) ಆಡಲಿದೆ. ಐಸಿಸಿ (ICC) ಭವಿಷ್ಯದ ಪ್ರವಾಸ ಯೋಜನೆ (FTP) ಹಾಗೂ BCCI ಪ್ರಕಟಿಸಿರುವ ಅಧಿಕೃತ ವೇಳಾಪಟ್ಟಿಯ ಪ್ರಕಾರ ಈ ಪಂದ್ಯಗಳು ನಿಗದಿಯಾಗಿವೆ.

ವಿಶ್ವಕಪ್ ಸಿದ್ಧತೆಯ ಭಾಗವಾಗಿ ಭಾರತ ತಂಡವು ಯಾವೆಲ್ಲಾ ದೇಶಗಳ ವಿರುದ್ಧ ಎಷ್ಟು ಏಕದಿನ ಪಂದ್ಯಗಳನ್ನು ಆಡಲಿದೆ ಎಂಬ ಸಂಪೂರ್ಣ ವಿವರ ಇಲ್ಲಿದೆ:

  • ಅಫ್ಘಾನಿಸ್ತಾನ್: ಜೂನ್ 13 ರಿಂದ ಶುರುವಾಗಲಿರುವ ಅಫ್ಘಾನಿಸ್ತಾನ್ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ 3 ಏಕದಿನ ಪಂದ್ಯಗಳನ್ನಾಡಲಿದೆ.
  • ಇಂಗ್ಲೆಂಡ್: ಜುಲೈ 2026 ರಲ್ಲಿ ಭಾರತ ತಂಡವು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ 3 ಏಕದಿನ ಪಂದ್ಯಗಳನ್ನು ಆಡಲಿದೆ.
  • ವೆಸ್ಟ್ ಇಂಡೀಸ್: ಸೆಪ್ಟೆಂಬರ್-ಅಕ್ಟೋಬರ್ 2026 ರಲ್ಲಿ ವೆಸ್ಟ್ ಇಂಡೀಸ್ ತಂಡ ಭಾರತಕ್ಕೆ ಪ್ರವಾಸ ಬರಲಿದ್ದು, ತವರಿನಲ್ಲಿ 3 ಪಂದ್ಯಗಳು ನಡೆಯಲಿವೆ.
  • ನ್ಯೂಝಿಲೆಂಡ್: ಅಕ್ಟೋಬರ್-ನವೆಂಬರ್ 2026 ರಲ್ಲಿ ನ್ಯೂಝಿಲೆಂಡ್ ಪ್ರವಾಸದಲ್ಲಿ ಭಾರತ ತಂಡವು 5 ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ.
  • ಶ್ರೀಲಂಕಾ: ಡಿಸೆಂಬರ್ 2026 ರಲ್ಲಿ ಶ್ರೀಲಂಕಾ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು, ಭಾರತದಲ್ಲಿ 3 ಪಂದ್ಯಗಳು ನಡೆಯಲಿವೆ.
  • ಝಿಂಬಾಬ್ವೆ: ಜನವರಿ 2027 ರ ಆರಂಭದಲ್ಲಿ ಝಿಂಬಾಬ್ವೆ ವಿರುದ್ಧ ಟೀಮ್ ಇಂಡಿಯಾ 3 ಏಕದಿನ ಪಂದ್ಯಗಳನ್ನಾಡಲಿದೆ.
  • ಏಷ್ಯಾ ಕಪ್: 2027ರ ಮಧ್ಯಭಾಗದಲ್ಲಿ (ವಿಶ್ವಕಪ್‌ಗೂ ಮುನ್ನ) ಏಕದಿನ ಮಾದರಿಯ ಏಷ್ಯಾ ಕಪ್ ಟೂರ್ನಿ ನಡೆಯಲಿದ್ದು, ಭಾರತ ಫೈನಲ್ ತಲುಪಿದರೆ ಕನಿಷ್ಠ 7 ಪಂದ್ಯಗಳನ್ನು ಆಡಲಿದೆ.

ಈ ಸರಣಿ ಮತ್ತು ಟೂರ್ನಿಗಳ ಮೂಲಕ ಟೀಮ್ ಇಂಡಿಯಾ ಒಟ್ಟು 27 ಏಕದಿನ ಪಂದ್ಯಗಳನ್ನು ಆಡುವ ಮೂಲಕ ಅಕ್ಟೋಬರ್ 2027 ರಲ್ಲಿ ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ಜಂಟಿಯಾಗಿ ನಡೆಯಲಿರುವ ವಿಶ್ವಕಪ್‌ಗೆ ಸಂಪೂರ್ಣವಾಗಿ ಸಜ್ಜಾಗಲಿದೆ.

ಇದನ್ನೂ ಓದಿ: ಯುದ್ಧದ ನಡುವೆ ಫಿಫಾ ವಿಶ್ವಕಪ್​​ಗೆ ಇರಾನ್ ಎಂಟ್ರಿ..!

ಭಾರತ vs ಅಫ್ಘಾನಿಸ್ತಾನ್ ಏಕದಿನ ಸರಣಿ ವೇಳಾಪಟ್ಟಿ:

  • ಮೊದಲ ಏಕದಿನ ಪಂದ್ಯ: ಜೂನ್ 13 – ಧರ್ಮಶಾಲಾ.
  • ಎರಡನೇ ಏಕದಿನ ಪಂದ್ಯ: ಜೂನ್ 17 – ಲಕ್ನೋ.
  • ಮೂರನೇ ಏಕದಿನ ಪಂದ್ಯ: ಜೂನ್ 20 – ಚೆನ್ನೈ.

ಭಾರತ ಏಕದಿನ ತಂಡ

ಶುಭ್​ಮನ್ ಗಿಲ್ (ನಾಯಕ) , ಕೆಎಲ್ ರಾಹುಲ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ , ಯಶಸ್ವಿ ಜೈಸ್ವಾಲ್ , ಇಶಾನ್ ಕಿಶನ್ , ಶ್ರೇಯಸ್ ಅಯ್ಯರ್ , ವಾಷಿಂಗ್ಟನ್ ಸುಂದರ್ , ನಿತೀಶ್ ಕುಮಾರ್ ರೆಡ್ಡಿ , ಹರ್ಷ್ ದುಬೆ , ಕುಲ್ದೀಪ್ ಯಾದವ್ , ಅರ್ಷದೀಪ್ ಸಿಂಗ್ , ಗುರ್ನೂರ್ ಬ್ರಾರ್ , ಪ್ರಸಿದ್ಧ್ ಕೃಷ್ಣ , ಪ್ರಿನ್ಸ್ ಯಾದವ್.

Source link

ಕರ್ನಾಟಕದಲ್ಲಿ ಭಾರೀ ಗಳಿಕೆ ಮಾಡಿದ ಹಾಲಿವುಡ್ ಚಿತ್ರ; ಕನ್ನಡ ಸಿನಿಮಾಗಳಿಗೇ ಇಲ್ಲ ಬೇಡಿಕೆ – Kannada News | Why Kannada Films Fail to Earn While Hollywood Thrives in Karnataka Box Office?

ಈ ವರ್ಷದ ಮೊದಲಾರ್ಧ ಕಳೆಯಲು ಬಾಕಿ ಇರೋದು ಕೆಲವೇ ವಾರ ಮಾತ್ರ. ಈ ಅವಧಿಯಲ್ಲಿ ಸುಮಾರು 100ಕ್ಕೂ ಅಧಿಕ ಕನ್ನಡ ಸಿನಿಮಾಗಳು ರಿಲೀಸ್ ಆಗಿವೆ. ಆದರೆ, ಇದರಲ್ಲಿ ಉತ್ತಮ ಕಲೆಕ್ಷನ್ ಮಾಡಿದ್ದು ಕೆಲವೇ ಸಿನಿಮಾಗಳು ಮಾತ್ರ. ಉತ್ತಮ ಗಳಿಕೆ ಮಾಡಿದ ಹೊರತಾಗಿಯೂ ಗೆದ್ದ ಸಿನಿಮಾಗಳು ತುಂಬಾನೇ ಕಡಿಮೆ ಎಂದು ವರದಿ ಆಗಿದೆ. ವಿಚಿತ್ರ ಎಂದರೆ ಹಾಲಿವುಡ್ ಸಿನಿಮಾಗಳು ಕರ್ನಾಟಕದಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿವೆ. ಆದರೆ, ಕನ್ನಡದ ಸಿನಿಮಾಗಳೇ ಇಲ್ಲಿ ಮಂಕಾಗಿವೆ.

ಇತ್ತೀಚೆಗೆ ರಿಲೀಸ್ ಆದ ಹಾಲಿವುಡ್​ನ ‘ಒಬ್ಸೆಷನ್’ ಸಿನಿಮಾ ಮೆಚ್ಚುಗೆ ಪಡೆದಿದೆ. ಕೇವಲ 7 ಕೋಟಿ ರೂಪಾಯಿ ಬಜೆಟ್​​ನಲ್ಲಿ ಸಿದ್ಧವಾದ ಈ ಸಿನಿಮಾ ವರ್ಡ್​​ವೈಡ್ 2000 ಕೋಟಿ ರೂಪಾಯಿ ಅಷ್ಟು ಗಳಿಕೆ ಮಾಡಿದೆ ಎನ್ನಲಾಗಿದೆ. ಇನ್ನು, ಭಾರತದಲ್ಲಿ ಸಿನಿಮಾದ ಗಳಿಕೆ 50 ಕೋಟಿ ರೂಪಾಯಿ ದಾಟಿದೆ. ಇದು ಚಿತ್ರದ ಹೆಚ್ಚುಗಾರಿಕೆ. ಕರ್ನಾಟಕದಲ್ಲೇ ಈ ಸಿನಿಮಾ 10 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ ಎಂದು ಹೇಳಲಾಗುತ್ತಾ ಇದೆ.

ಹಾಗೆ ನೋಡಿದರೆ ಈ ವರ್ಷ ಕನ್ನಡದ ಸಿನಿಮಾಗಳು 10 ಕೋಟಿ ರೂಪಾಯಿ ಗಳಿಕೆ ಮಾಡಲು ಒದ್ದಾಡಿವೆ. ವಿಕಿಪೀಡಿಯಾ 2026ರನೇ ಸಾಲಿನ ಸಿನಿಮಾಗಳ ಪಟ್ಟಿ ನೀಡಿದೆ. ಇದರಲ್ಲಿ ಈ ವರ್ಷದ ಟಾಪ್ 10 ಸಿನಿಮಾಗಳ ಹೆಸರನ್ನು ಉಲ್ಲೇಖಿಸಿದೆ. ಇದರಲ್ಲಿ ಮೊದಲ ಸ್ಥಾನದಲ್ಲಿ ಕೆಡಿ ಚಿತ್ರ ಇದ್ದು 20 ಕೋಟಿ ರೂಪಾಯಿ ಅಷ್ಟು (ವರ್ಡ್​ ವೈಡ್ ಗ್ರಾಸ್) ಗಳಿಸಿದೆ ಎಂದು ಹೇಳಲಾಗಿದೆ. ಚಿತ್ರದ ಬಜೆಟ್​​ಗೆ ಹೋಲಿಕೆ ಮಾಡಿದರೆ ಸಿನಿಮಾಗೆ ನಷ್ಟ ಆಗಿರುವ ಸಾಧ್ಯತೆ ಹೆಚ್ಚಿದೆ.

ಎರಡನೇ ಸ್ಥಾನದಲ್ಲಿ ‘ಲವ್ ಮಾಕ್ಟೇಲ್ 3’ ಸಿನಿಮಾ ಇದೆ. ಈ ಚಿತ್ರ 14 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎನ್ನಲಾಗಿದೆ. ಮೂರನೇ ಸ್ಥಾನದಲ್ಲಿ ವಿಜಯ್ ಅವರ ‘ಲ್ಯಾಂಡ್​ ಲಾರ್ಡ್’ ಸಿನಿಮಾ ಇದ್ದು, 13 ಕೋಟಿ ರೂಪಾಯಿ ಗಳಿಸಿದೆ. ಇಷ್ಟು ಸಿನಿಮಾಗಳು ಉತ್ತಮ ಕಲೆಕ್ಷನ್ ಮಾಡಿರುವ ಚಿತ್ರಗಳು.

ಇದನ್ನೂ ಓದಿ: 7 ಕೋಟಿ ರೂ. ಸಿನಿಮಾ, ಗಳಿಸಿದ್ದು 1,700 ಕೋಟಿ; ಅಬ್ಬಬ್ಬಾ ಹೊಸ ದಾಖಲೆ

ಮುಂದಿನ ದಿನಗಳಲ್ಲಿ ‘ಒಬ್ಸೆಷನ್’ ಸಿನಿಮಾದ ಕರ್ನಾಟಕದ ಗಳಿಕೆ ಮತ್ತಷ್ಟು ಹೆಚ್ಚಬಹುದು. ಈ ವರ್ಷ ಕನ್ನಡ ಸಿನಿಮಾ ಮಾಡಿದ ಅತಿ ಹೆಚ್ಚು ಗ್ರಾಸ್ ಅನ್ನು ಕೂಡ ಇದು ಹಿಂದಿಕ್ಕಬಹುದು. ಈ ಎಲ್ಲಾ ಬೆಳವಣಿಗೆ ಮಧ್ಯೆ ಕನ್ನಡ ಸಿನಿಮಾಗಳು ಏಕೆ ಹೆಚ್ಚು ಉತ್ತಮ ಕಲೆಕ್ಷನ್ ಮಾಡುತ್ತಿಲ್ಲ ಎನ್ನುವ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version