ಕಾಂಗ್ರೆಸ್​​ನಲ್ಲಿ ಮುಂದುವರಿದ ಡಿನ್ನರ್ ಮೀಟಿಂಗ್: ಅನಾರೋಗ್ಯದ ನಡುವೆಯೂ ಸಿಎಂ ಭಾಗಿ – Kannada News | Minister Satish Jarkiholi hosts dinner meeting In His House at Belagavi, here Is menu

ಬೆಳಗಾವಿ, (ಡಿಸೆಂಬರ್ 18): ಕರ್ನಾಟಕ ಕಾಂಗ್ರೆಸ್​​​ನಲ್ಲಿನ (Karnataka Congress) ಬಣ ರಾಜಕೀಯ ಬ್ರೇಕ್ ಫಾಸ್ಟ್​​ನಿಂದ ಡಿನ್ನರ್ ವರೆಗೂ (dinner meeting) ಬಂದು ನಿಂತಿದೆ. ಹೌದು.. ಸಿಎಂ ಕುರ್ಚಿಗಾಗಿ ಸಿಎಂ -ಡಿಸಿಎಂ ನಡುವೆ ಮುಸುಕಿನ ಗುದ್ದಾಟ ನಡೆದಿದ್ದು, ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ (Siddaramaiah) ಬಣದ ಡಿನ್ನರ್ ಪಾಲಿಟಿಕ್ಸ್​​ ಮುಂದುವರೆದಿದೆ. ಬೆಳಗಾವಿ ಅಧಿವೇಶದ ಸಂದರ್ಭದಲ್ಲೂ ಸಹ ಜಿದ್ದಿಗೆ ಬಿದ್ದವರಂತೆ ಉಭಯ ನಾಯಕರ ಬಣದಿಂದ ಒಬ್ಬರಾದ ಮೇಲೆ ಒಬ್ಬರಿಂದ ಡಿನ್ನರ್ ಮೀಟಿಂಗ್ ಆಯೋಜನೆಗೊಳ್ಳುತ್ತಿವೆ. ಇದಕ್ಕೆ ಪೂರಕವೆಂಬಂತೆ ಇಂದು (ಡಿಸೆಂಬರ್ 18) ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ತಮ್ಮ ಬೆಳಗಾವಿ ನಿವಾಸದಲ್ಲಿ ಸಿಎಂ ಸೇರಿದಂತೆ ಇತರೆ ತಮ್ಮ ಬಣದ ನಾಯಕರಿಗೆ ಔತಣಕೂಟ ಏರ್ಪಡಿಸಲಾಗಿದ್ದು, ಬೆಳಗಾವಿಯ ಕುವೆಂಪು ನಗರದಲ್ಲಿರುವ ಸತೀಶ್ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಜತೆಗೆ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ, ಜಮೀರ್ ಅಹ್ಮದ್ ಖಾನ್, ಎಂ.ಸಿ‌.ಸುಧಾಕರ್ ಆಗಮಿಸಿ ಡಿನ್ನರ್​​ನಲ್ಲಿ ಭಾಗಿಯಾಗಿದ್ದಾರೆ. ಇನ್ನು ಡಿನ್ನರ್​​ಗೆ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಲಾಗಿದೆ. ಅದರಲ್ಲೂ ಉತ್ತರ ಕರ್ನಾಟಕದ ಶೈಲಿ ಊಟ ಸಹ ಒಳಗೊಂಡಿದೆ.

ಅನಾರೋಗ್ಯದ ನಡುವೆ ಸಿಎಂ, ಆಪ್ತನ ಔತಣಕೂಟಕ್ಕೆ ಆಗಮಿಸಿದ್ದಾರೆ. ಆದ್ರೆ, ಸಿದ್ದರಾಮಯ್ಯನವರಿಗೆ ಹೊಟ್ಟೆ ಸರಿ ಇಲ್ಲದಿದ್ದರಿಂದ ಅವರು ನಾನ್​ ವೆಜ್​ ಊಟ ಮಾಡುತ್ತಾರೋ ಇಲ್ವೋ ಗೊತ್ತಿಲ್ಲ. ಸದ್ಯಕ್ಕಂತೂ  ಈ ಡಿನ್ನರ್ ಮೀಟಿಂಗ್​​ನಲ್ಲಿ ಭಾಗಿಯಾಗಿದ್ದು, ಆಪ್ತ ಸಚಿವರಿಗೆ ಕಂಪನಿ ಕೊಡುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs SA: ಕೊನೆಯ ಟಿ20 ಪಂದ್ಯಕ್ಕೆ ಮಳೆ ಅಡ್ಡಿ? ಹೇಗಿರಲಿದೆ ಭಾರತದ ಪ್ಲೇಯಿಂಗ್ 11? – Kannada News | India vs SA 5th T20: Ahmedabad Decider, Preview, Pitch and Playing XI

ಭಾರತ ಮತ್ತು ದಕ್ಷಿಣ ಆಫ್ರಿಕಾ (India vs South Africa) ನಡುವಿನ ಟಿ20 ಸರಣಿಯ ಐದನೇ ಮತ್ತು ಅಂತಿಮ ಪಂದ್ಯವು ಡಿಸೆಂಬರ್ 19, ಶುಕ್ರವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ನಡೆಯಲಿದೆ. ಪಂದ್ಯವು ಭಾರತೀಯ ಕಾಲಮಾನ ಸಂಜೆ 7:00 ಗಂಟೆಗೆ ಪ್ರಾರಂಭವಾಗಲಿದೆ. ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪ್ರಸ್ತುತ ಸರಣಿಯ 4ನೇ ಪಂದ್ಯವು ಭಾರೀ ಮಂಜಿನಿಂದಾಗಿ ರದ್ದಾಗಿತ್ತು. ಈ ಟಿ20 ಸರಣಿಯಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ 2-1 ಮುನ್ನಡೆ ಸಾಧಿಸಿದೆ. ಇದೀಗ ಅಹಮದಾಬಾದ್ ಟಿ20ಯನ್ನೂ ಗೆದ್ದರೆ, ಸೂರ್ಯ ಪಡೆ ಸರಣಿಯನ್ನು 3-1 ಅಂತರದಿಂದ ವಶಪಡಿಸಿಕೊಳ್ಳಲಿದೆ. ಇತ್ತ ದಕ್ಷಿಣ ಆಫ್ರಿಕಾ ಈ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು 2-2 ಅಂತರದಲ್ಲಿ ಕೊನೆಗೊಳಿಸಲು ಯತ್ನಿಸಲಿದೆ.

ಪಿಚ್ ಯಾರಿಗೆ ಸಹಕಾರಿ?

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಯ ಐದನೇ ಮತ್ತು ಕೊನೆಯ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಟಾಸ್ ಗೆದ್ದವರು ಮೊದಲು ಬ್ಯಾಟಿಂಗ್ ಆಯ್ದುಕೊಳ್ಳಬಹುದು. ಏಕೆಂದರೆ ಈ ಮೈದಾನದಲ್ಲಿ ಇದುವರೆಗೆ ನಡೆದಿರುವ 10 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆರು ಪಂದ್ಯಗಳನ್ನು ಮೊದಲು ಬ್ಯಾಟ್ ಮಾಡಿದ ತಂಡವನ್ನು ಮತ್ತು ನಾಲ್ಕು ಪಂದ್ಯಗಳನ್ನು ಗುರಿ ಬೆನ್ನಟ್ಟುವ ತಂಡಗಳು ಗೆದ್ದಿವೆ. ಇಲ್ಲಿ ಟಿ20ಐಗಳಲ್ಲಿ ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 160 ರನ್‌ಗಳು ಎಂಬುದು ಗಮನಿಸಬೇಕಾದ ಸಂಗತಿ.

ಹವಾಮಾನ ಹೇಗಿರಲಿದೆ?

ಅಹಮದಾಬಾದ್‌ನಲ್ಲಿ ನಡೆಯಲಿರುವ ಐದನೇ ಟಿ20ಪಂದ್ಯಕ್ಕೆ ಮಳೆಯ ಆತಂಕವಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ. ಅಹಮದಾಬಾದ್‌ನಲ್ಲಿ ಮಂಜು ಕವಿದಿರುವ ಸಾಧ್ಯತೆ ಇಲ್ಲ ಮತ್ತು ಆಕಾಶವು ಸಂಪೂರ್ಣವಾಗಿ ಸ್ಪಷ್ಟವಾಗಿರುತ್ತದೆ. ಪಂದ್ಯದ ಸಮಯದಲ್ಲಿ ತಾಪಮಾನವು 15 ರಿಂದ 30 ಡಿಗ್ರಿ ಸೆಲ್ಸಿಯಸ್ ನಡುವೆ ಇರುವ ನಿರೀಕ್ಷೆಯಿದೆ, ಇದರಿಂದಾಗಿ ಪೂರ್ಣ 40 ಓವರ್‌ಗಳನ್ನು ಯಾವುದೇ ಅಡೆತಡೆಯಿಲ್ಲದೆ ಆಡುವ ಸಾಧ್ಯತೆಯಿದೆ.

ಪ್ಲೇಯಿಂಗ್ 11 ಹೇಗಿರಲದೆ?

ಸಾಮಾನ್ಯವಾಗಿ ಯಾವುದೇ ಆಯ್ಕೆ ಮಂಡಳಿಯೂ ತನ್ನ ಗೆಲುವಿನ ಸಂಯೋಜನೆಯನ್ನು ಬಯಸಲು ನೋಡುವುದಿಲ್ಲ. ಆದಗ್ಯೂ ಟೀಂ ಇಂಡಿಯಾದ ಉಪನಾಯಕ ಶುಭ್​ಮನ್ ಗಿಲ್, 4ನೇ ಟಿ20 ಪಂದ್ಯಕ್ಕೂ ಮುನ್ನ ಅಭ್ಯಾಸದ ಸಮಯದಲ್ಲಿ ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಅವರನ್ನು ಟಿ20 ಸರಣಿಯನ್ನು ಹೊರಗಿಡಲಾಗಿದೆ ಎಂಬ ಮಾಹಿತಿ ಇತ್ತು. ಆದರೆ 4ನೇ ಪಂದ್ಯ ನಡೆಯದ ಕಾರಣ, ಗಿಲ್ ಲಭ್ಯತೆಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಒಂದು ವೇಳೆ ಗಿಲ್ ಗಾಯಗೊಂಡಿರುವುದು ನಿಜವಾದರೆ ಅವರ ಬದಲಿಗೆ ಸಂಜು ಸ್ಯಾಮ್ಸನ್​ಗೆ ಅವಕಾಶ ಸಿಗಬಹುದು.

IND vs SA: ದಟ್ಟ ಮಂಜಿನಿಂದ 4ನೇ ಟಿ20 ಪಂದ್ಯ ರದ್ದು; ಸರಣಿಯಲ್ಲಿ ಭಾರತದ ಮೇಲುಗೈ

ಸಂಭಾವ್ಯ ಪ್ಲೇಯಿಂಗ್ 11

ಭಾರತ ತಂಡ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್

ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಐಡೆನ್ ಮಾರ್ಕ್ರಮ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಡೆವಾಲ್ಡ್ ಬ್ರೆಯಿಸ್, ಡೇವಿಡ್ ಮಿಲ್ಲರ್, ಡೊನೊವನ್ ಫೆರೇರಾ, ಮಾರ್ಕೊ ಯಾನ್ಸೆನ್, ಕೇಶವ್ ಮಹಾರಾಜ್, ಒಟ್ನಿಯಲ್ ಬಾರ್ಟ್‌ಮನ್, ಲುಂಗಿ ಎನ್‌ಗಿಡಿ, ಅನ್ರಿಚ್ ನೋಕಿಯಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಘು ಬಳಿಕ ಕಾವ್ಯಾಗೂ ಗೊತ್ತಾಗಿದೆ ಬಿಗ್ ಬಾಸ್ ಸೀಕ್ರೆಟ್ ರೂಮ್ ರಹಸ್ಯ – Kannada News | Kavya Shaiva talks about Bigg Boss Kannada Season 12 secret room Rakshitha Shetty and Dhruvanth

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋನಲ್ಲಿ ರಕ್ಷಿತಾ ಶೆಟ್ಟಿ (Rakshitha Shetty) ಮತ್ತು ಧ್ರುವಂತ್ ಅವರನ್ನು ಸೀಕ್ರೆಟ್ ರೂಮ್​​ನಲ್ಲಿ ಇಡಲಾಗಿದೆ. ಕಳೆದ ವಾರ ಅವರಿಬ್ಬರು ಎಲಿಮಿನೇಟ್ ಆಗಿದ್ದಾರೆ ಎಂದು ತೋರಿಸಲಾಯಿತು. ಆದರೆ ಅವರು ಸೀಕ್ರೆಟ್ ರೂಮ್​​ಗೆ ತೆರಳಿರುವ ವಿಷಯವನ್ನು ಬಿಗ್ ಬಾಸ್ ಮನೆಯೊಳಗಿನ ಸದಸ್ಯರಿಗೆ ತಿಳಿಸಿಲ್ಲ. ಆದರೂ ಕೂಡ ಆ ರಹಸ್ಯ ಲೀಕ್ ಆಗಿದೆ. ಅದಕ್ಕೆ ಕಾರಣ ಇದೆ. ಎಲ್ಲ ಸಂಗತಿಗಳನ್ನು ಸೂಕ್ಷ್ಮವಾಗಿ ಗಮನಿಸುವ ಮೂಲಕ ರಘು ಮತ್ತು ಕಾವ್ಯ ಶೈವ (Kavya Shaiva) ಅವರು ಸೀಕ್ರೆಟ್ ರೂಮ್ ರಹಸ್ಯವನ್ನು ಕಂಡುಹಿಡಿದಿದ್ದಾರೆ.

ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಅವರನ್ನು ಸೀಕ್ರೆಟ್ ರೂಮ್​​ನಲ್ಲಿ ಯಾಕೆ ಇರಿಸಿರಬಹುದು ಎಂಬುದನ್ನು ಕಾವ್ಯ ಶೈವ ಅವರು ಊಹಿಸಿದ್ದಾರೆ. ‘ಅವರಿಬ್ಬರನ್ನು ಸೀಕ್ರೆಟ್ ರೂಮ್​​ನಲ್ಲಿ ಇಡಲಾಗಿದೆ. ನಮ್ಮ ಆಟವನ್ನು ನೋಡಿ ಅವರು ಹೇಗೆ ಎಕ್ಸ್​ಪ್ರೆಸ್ ಮಾಡುತ್ತಾರೆ ಎಂಬುದನ್ನು ತೋರಿಸಲಾಗುತ್ತದೆ’ ಎಂದು ಕಾವ್ಯ ಅವರು ಹೇಳಿದ್ದಾರೆ. ಅಸಲಿಗೆ ಹಾಗೆಯೇ ಆಗುತ್ತಿದೆ.

ಇನ್ನೊಂದು ಸಂಗತಿಯನ್ನು ಕಾವ್ಯ ಶೈವ ಅವರು ಸರಿಯಾಗಿ ಊಹಿಸಿದ್ದಾರೆ. ‘ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಅವರು ಸರಿಯಾಗಿ ಪರಸ್ಪರ ಮಾತನಾಡುತ್ತಿರಲಿಲ್ಲ. ಈಗ ಅವರಿಬ್ಬರನ್ನು ಒಂದೇ ರೂಮ್​​ನಲ್ಲಿ ಇರಿಸಿದಾಗ ಅವರು ಏನು ಮಾತನಾಡಿಕೊಳ್ಳುತ್ತಾರೆ ಎಂಬುದನ್ನು ತೋರಿಸಲಾಗುತ್ತದೆ’ ಎಂದಿದ್ದಾರೆ ಕಾವ್ಯ ಶೈವ. ಅವರ ಊಹೆ ಬಹುತೇಕ ನಿಜವಾಗಿದೆ.

ರಕ್ಷಿತಾ ಶೆಟ್ಟಿ ಹಾಗೂ ಧ್ರುವಂತ್ ಅವರು ಸೀಕ್ರೆಟ್​​ ರೂಮ್​​ನಲ್ಲಿ ಕುಳಿತು ಎಲ್ಲರ ಆಟವನ್ನು ನೋಡುತ್ತಿದ್ದಾರೆ. ಆಟದ ಹಲವು ವಿಷಯಗಳನ್ನು ನಿರ್ಧರಿಸಲು ಅವರಿಗೆ ಬಿಗ್ ಬಾಸ್ ಕೆಲವು ಅಧಿಕಾರಗಳನ್ನು ನೀಡಿದ್ದಾರೆ. ಅದರಂತೆಯೇ ಆಟ ನಡೆಯುತ್ತಿದೆ. ಅವರಿಬ್ಬರು ವಾಪಸ್ ಬಿಗ್ ಬಾಸ್ ಮನೆಯ ಒಳಗೆ ಎಂಟ್ರಿ ನೀಡಲಿದ್ದಾರೆ. ಆಗ ಆಟಕ್ಕೆ ಟ್ವಿಸ್ಟ್ ಸಿಗಲಿದೆ. ಆದರೆ ಅದಕ್ಕೂ ಮುನ್ನ ಸೀಕ್ರೆಟ್ ರೂಮ್ ರಹಸ್ಯ ಕೆಲವರಿಗೆ ಗೊತ್ತಾಗಿದೆ.

ಇದನ್ನೂ ಓದಿ: ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ: ಕಂಗಾಲಾದ ಧ್ರುವಂತ್

ಅವರಿಬ್ಬರು ಎಲಿನೇಟ್ ಆಗಿದ್ದಾರೆ ಎಂದು ತೋರಿಸಿದ ದಿನವೇ ರಘು ಅವರಿಗೆ ಅನುಮಾನ ಬಂದಿತ್ತು. ‘ಇನ್ನೂ ಸೌಂಡ್ ಬಂದಿಲ್ಲ. ಏನೋ ಟ್ವಿಸ್ಟ್ ಇದೆ. ಪ್ರತಿ ಬಾರಿ ಈ ಸಮಯಕ್ಕೆ ತಕ್ಷಣ ಸೌಂಡ್ ಬರುತ್ತದೆ. ಬ್ಯಾಕ್ ಸ್ಟೇಜ್ ಇಂದ ಹೋಗಿ ಮಾತನಾಡಿಸುತ್ತಾರೆ. ಅವರ ವಿಟಿ ಹಾಕುತ್ತಾರೆ. ಜನರೆಲ್ಲ ಕೂಗಾಡುತ್ತಾರೆ. ಆದರೆ ಇವತ್ತು ಸ್ವಲ್ಪವೂ ಸೌಂಡ್ ಬಂದಿಲ್ಲ’ ಎಂದು ರಘು ಅವರು ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!

ವಿಶಾಖಪಟ್ಟಣಂ, ಡಿಸೆಂಬರ್ 18: ವಿಶಾಖಪಟ್ಟಣಂ ಜಿಲ್ಲೆಯ ಯಾರಡಾ ಬೀಚ್‌ನಲ್ಲಿ ಮೀನುಗಾರರಿಗೆ ದೊಡ್ಡ ಶಾಕ್ ಕಾದಿತ್ತು. ಇಲ್ಲಿ ಬೃಹತ್ ತಿಮಿಂಗಿಲವೊಂದು ತೀರಕ್ಕೆ ಬಂದು ಸಾವನ್ನಪ್ಪಿದೆ. ಸುಮಾರು 15 ಅಡಿ ಉದ್ದದ ತಿಮಿಂಗಿಲವು ಉಸಿರುಗಟ್ಟಿಸುತ್ತಿರುವುದನ್ನು ಕಂಡು ಮೀನುಗಾರರು ಅದನ್ನು ಸಮುದ್ರಕ್ಕೆ ಬಿಡಲು ಪ್ರಯತ್ನಿಸಿದರು. ಆದರೂ ಯಾವುದೇ ಪ್ರಯೋಜನವಾಗಲಿಲ್ಲ. ಆ ತಿಮಿಂಗಿಲವು ದಡದಲ್ಲಿಯೇ ಸತ್ತುಹೋಯಿತು. ಅದು ಗಾಯಗೊಂಡಿರಬಹುದು ಅಥವಾ ಬಲೆಯಲ್ಲಿ ಸಿಲುಕಿ ಸತ್ತಿರಬಹುದು ಎಂದು ಶಂಕಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಗುದ್ದಿದ ರಭಸಕ್ಕೆ ಕಾರು ಪಲ್ಟಿ – Kannada News | Belagavi: DK Shivakumar PS car involved in accident; biker dies, car overturns on impact

ಬೆಳಗಾವಿ, ಡಿಸೆಂಬರ್ 18: ಡಿಸಿಎಂ ಡಿಕೆ ಶಿವಕುಮಾರ್​ ಆಪ್ತ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ಕಾರು ಡಿಕ್ಕಿಯಾಗಿ ಬೈಕ್​ ಸವಾರ ಸಾವನ್ನಪ್ಪಿರುವಂತಹ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿಯ ಹೊರವಲಯದಲ್ಲಿ ನಡೆದಿದೆ. ಮಂಜುನಾಥ್ ಬೈರ್ನಟ್ಟಿ(30) ಸಾವನ್ನಪ್ಪಿರುವ ಬೈಕ್​ ಸವಾರ. ಮೃತ ಮಂಜುನಾಥ್ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಒಡೆತನದ ಹರ್ಷಾ ಸಕ್ಕರೆ ಕಾರ್ಖಾನೆಗೆ ಕೆಲಸಕ್ಕೆ ಹೊರಟ್ಟಿದ್ದರು. ಅತ್ತ ರಾಜೇಂದ್ರ ಪ್ರಸಾದ್ ಕಾರು ಯಲ್ಲಮ್ಮನ ದರ್ಶನ ಪಡೆದು ವಾಪಸಾಗುವಾಗ ಅಪಘಾತ ಸಂಭವಿಸಿದೆ. ಕಾರು ಗುದ್ದಿದ ರಭಸಕ್ಕೆ ಮಂಜುನಾಥ್ ತಲೆಗೆ ಪೆಟ್ಟು ಬಿದ್ದು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ರಾಜೇಂದ್ರ ಪ್ರಸಾದ್ ಹಾಗೂ ಕಾರು ಚಾಲಕನಿಗೂ ಗಾಯಗಳಾಗಿದ್ದು, ಧಾರವಾಡ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.​ ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಕರಾವಳಿಗರು ಬೆಂಕಿ ಹಚ್ಚೋರು ಎಂದ ಸಚಿವ ಭೈರತಿ ಸುರೇಶ್ ವಿರುದ್ಧ ಭುಗಿಲೆದ್ದ ಆಕ್ರೋಶ – Kannada News | Karavali MLAs Angry On Minister Byrathi Suresh for controversy statement On coastal during hate speech bill

ಬೆಳಗಾವಿ (ಡಿಸೆಂಬರ್ .18): ಕರಾವಳಿ ಭಾಗದ ಬಿಜೆಪಿ ಶಾಸಕರ ವಿರುದ್ಧ ‘ಬೆಂಕಿ ಹಚ್ಚುವವರು’ ಎಂದು ಸಚಿವ ಬೈರತಿ ಸುರೇಶ್ (Byarathi Suresh) ಅವರು ಹೇಳಿರುವುದು ಸದನದಲ್ಲಿ ಕಿಚ್ಚನ್ನು ಹೊತ್ತಿಸಿದೆ. ಸುವರ್ಣಸೌಧದ ವಿಧಾನಸಭೆಯಲ್ಲಿಂದು ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ(ಪ್ರತಿಬಂಧಕ) ವಿಧೇಯಕಕ್ಕೆ (Hate Speech Bill) ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದು, ಭಾವಿಗಿಳಿದು ಪ್ರತಿಭಟನೆ ನಡೆಸಿದರು. ಹೀಗೆ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಜೋರಾಗಿ ಮಾತಿನ ಸಮರ ನಡೆಯುತ್ತಿರುವಾಗಲೇ ಸಚಿವ ಭೈರತಿ ಸುರೇಶ್ ಅವರು ಎದ್ದು ನಿಂತು ನೀವು ಕರಾವಳಿಯವರು ಬೆಂಕಿ ಹಚ್ಚುವವರು ಎಂದು ಹೇಳಿದರು. ಇದು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಭಾರೀ ವಾಕ್ಸಮರಕ್ಕೆ ಕಾರಣವಾಯಿತು. ಕರಾವಳಿ ಭಾಗದ ಬಿಜೆಪಿ ಶಾಸಕರು ಸಚಿವರ ವಿರುದ್ಧ ತಿರುಗಿಬಿದ್ದು, ಕ್ಷಮೆಯಾಚನೆಗೆ ಪಟ್ಟು ಹಿಡಿದರು.

ಸಚಿವ ಸುರೇಶ್ ಕ್ಷಮೆಗೆ ಬಿಗಿಪಟ್ಟು

ಸದನದಲ್ಲಿ ಚರ್ಚೆಯ ವೇಳೆ ಸಚಿವ ಭೈರತಿ ಸುರೇಶ್ ಅವರು ಬಿಜೆಪಿ ಶಾಸಕರನ್ನು ಉದ್ದೇಶಿಸಿ, ‘ನೀವು ಕರಾವಳಿಯವರು ಬೆಂಕಿ ಹಚ್ಚುವವರು’ ಎಂದು ನೀಡಿದ ಹೇಳಿಕೆ ನೀಡಿದ್ದೇ ತಡ ಸದನದಲ್ಲಿ ಕಿಚ್ಚು ಹಚ್ಚಿತು. ಸಚಿವರ ಮಾತಿನಿಂದ ಕೆರಳಿದ ಬಿಜೆಪಿ ಶಾಸಕರಾದ ಸುನಿಲ್ ಕುಮಾರ್, ವೇದವ್ಯಾಸ ಕಾಮತ್ ಮತ್ತು ಚನ್ನಬಸಪ್ಪ ಅವರು ಸಚಿವರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಕರಾವಳಿ ಸಂಸ್ಕೃತಿಗೆ ನೀವು ಅಪಮಾನ ಮಾಡಿದ್ದೀರಿ, ಕೂಡಲೇ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: BPL ಕಾರ್ಡ್​​ದಾರರಿಗೆ ಶೀಘ್ರವೇ ಗುಡ್​​ನ್ಯೂಸ್​?: ಆದಾಯ ಮಿತಿ ಪರಿಷ್ಕರಣೆಗೆ ಚಿಂತನೆ

ಸ್ಪೀಕರ್ ಖಾದರ್ ವಿರುದ್ಧ ಆಕ್ರೋಶ

ಈ ಸಂದರ್ಭದಲ್ಲಿ ಕಾರಾವಳಿ ಭಾಗದ ಶಾಸಕರೂ ಆಗಿರುವ ಸ್ಫೀಕರ್ ಯುಟಿ ಖಾದರ್ ಸೈಲೆಂಟ್ ಆಗಿರುವುದಕ್ಕೆ ಬಿಜೆಪಿ ಶಾಸಕ ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಸಭಾಧ್ಯಕ್ಷ ಯು.ಟಿ. ಖಾದರ್ ಅವರನ್ನೇ ಪ್ರಶ್ನಿಸಿ, ‘ನೀವೂ ಕರಾವಳಿಯವರಲ್ಲವೇ? ಸಚಿವರು ಇಡೀ ಕರಾವಳಿಗೆ ಬೆಂಕಿ ಹಚ್ಚುವವರು ಎಂದು ಹಣೆಪಟ್ಟಿ ಕಟ್ಟುತ್ತಿದ್ದರೂ ನೀವು ಸುಮ್ಮನೆ ಕುಳಿತಿದ್ದೀರಲ್ಲಾ? ಪೀಠದಿಂದ ಹೊರಗೆ ಬನ್ನಿ’ ಎಂದರು. ಆಗ ಸ್ಪೀಕರ್ ಯುಟಿ ಖಾದರ್ ಅವರು ವಿವಾದಾತ್ಮಕ ಮಾತನ್ನು ಕಡತದಿಂದ ತೆಗೆದುಹಾಕುವುದಾಗಿ ಹೇಳಿದರೂ ಬಿಜೆಪಿ ಶಾಸಕರು ಸಮಾಧಾನಗೊಳ್ಳದೆ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

ಗದ್ದಲದ ನಡುವೆ ಬಿಲ್ ಪಾಸ್

ಬಿಜೆಪಿ ಶಾಸಕರ ಪ್ರತಿಭಟನೆ ಮತ್ತು ಗದ್ದಲದ ನಡುವೆಯೇ ಸಭಾಧ್ಯಕ್ಷರು ‘ದ್ವೇಷ ಭಾಷಣ ತಡೆ ವಿಧೇಯಕ’ವನ್ನು  ಅಂಗೀಕರಿಸಿದರು. ಈ ಕ್ರಮದಿಂದ ತೀವ್ರ ಆಕ್ರೋಶಗೊಂಡ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸದನದಲ್ಲೇ ವಿಧೇಯಕದ ಪ್ರತಿಯನ್ನು ಹರಿದು ಹಾಕಿದರು. ‘ಇದು ದ್ವೇಷ ಭಾಷಣ ವಿರೋಧಿ ಬಿಲ್ ಅಲ್ಲ, ಬದಲಿಗೆ ವಿರೋಧ ಪಕ್ಷಗಳ ಧ್ವನಿ ಅಡಗಿಸುವ ಬಿಲ್’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿಕಾರಿದರು.

ಸದ್ಯ ಕರಾವಳಿ ಭಾಗದ ಬಿಜೆಪಿ ಶಾಸಕರು ಆಕ್ರೋಶಗೊಂಡಿದ್ದು, ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಸಚಿವ ಭೈರತಿ ಸುರೇಶ್ ವಿರುದ್ಧ ಕಿಡಿಕಾರಿದ್ದಾರೆ. ಇದನ್ನು ಬಿಜೆಪಿ ಅಸ್ತ್ರವನ್ನಾಗಿ ಮಾಡಿಕೊಂಡು ಕರಾವಳಿ ಭಾಗದ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸುವ ಸಾಧ್ಯತೆಗಳಿವೆ. ಹೀಗಾಗಿ ಇದು ಮುಂದೆ ಯಾವ ಹಂತಕ್ಕೆ ಹೋಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು – Kannada News | Yogaraj Bhat speech in Landlord Kannada movie song release event

ದುನಿಯಾ ವಿಜಯ್, ರಚಿತಾ ರಾಮ್ ನಟನೆಯ ‘ಲ್ಯಾಂಡ್ ಲಾರ್ಡ್’ (Landlord) ಸಿನಿಮಾದ ‘ನಿಂಗವ್ವ ನಿಂಗವ್ವ..’ ಹಾಡು ರಿಲೀಸ್ ಆಗಿದೆ. ಈ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಪ್ರೇಮ್, ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ತರುಣ್ ಸುಧೀರ್, ಸೋನಲ್ ಮೊಂತೆರೋ ಭಾಗಿ ಆಗಿದ್ದರು. ಅಜನೀಶ್ ಲೋಕನಾಥ್ ಅವರು ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಯೋಗರಾಜ್ ಭಟ್ (Yogaraj Bhat) ಅವರು ಸಾಹಿತ್ಯ ಬರೆದಿದ್ದಾರೆ. ವಿಜಯ್ ಪ್ರಕಾಶ್ ಕಂಠದಲ್ಲಿ ಹಾಡು ಮೂಡಿಬಂದಿದೆ. ಸಾಂಗ್ ರಿಲೀಸ್ ವೇಳೆ ಯೋಗರಾಜ್ ಭಟ್ ಅವರು ನೇರವಾಗಿ ಮಾತನಾಡಿದರು. ‘ನಾನು ಪಕ್ಕಾ ಲೋಫರ್. ಆದ್ರೆ ವಿಜಿ ನನ್ನ ಅಪ್ಪ ಇದ್ದಂಗೆ’ ಎಂದು ಅವರು ಹೇಳಿದರು. ಅವರು ಯಾಕೆ ಈ ರೀತಿ ಮಾತನಾಡಿದರು ಎಂಬುದಕ್ಕೆ ಈ ವಿಡಿಯೋದಲ್ಲಿ ಉತ್ತರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಟಿ ಶಿಲ್ಪಾ ಶೆಟ್ಟಿ ಮುಂಬೈ ನಿವಾಸದ ಮೇಲೆ ಐಟಿ ದಾಳಿ: 60 ಕೋಟಿ ರೂ. ವಂಚನೆ ಕೇಸ್ – Kannada News | After Bastian pub now IT Raid on Shilpa Shetty Mumbai home in Rs 60 Cr fraud case

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಅವರ ಕುಟುಂಬದ ಮೇಲೆ ಹಲವಾರು ಕೇಸ್​​ಗಳು ಇವೆ. ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಈಗಾಗಲೇ ಅನೇಕ ಪ್ರಕರಣಗಳಲ್ಲಿ ತನಿಖೆ ಎದುರಿಸುತ್ತಿದ್ದಾರೆ. ಈಗ ಶಿಲ್ಪಾ ಶೆಟ್ಟಿ ಅವರಿಗೆ ಇನ್ನೊಂದು ಸಂಕಷ್ಟ ಎದುರಾಗಿದೆ. ಅವರ ಮುಂಬೈ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಗುರುವಾರ (ಡಿಸೆಂಬರ್ 18) ಈ ಘಟನೆ ನಡೆದಿದೆ. ಅದಕ್ಕೂ ಒಂದು ದಿನ ಮುನ್ನ, ಅಂದರೆ ಡಿ.17ರಂದು ಬೆಂಗಳೂರಿನಲ್ಲಿ ಕೂಡ ಶಿಲ್ಪಾ ಶೆಟ್ಟಿ ಅವರಿಗೆ ಸಂಬಂಧಿಸಿದ ಜಾಗಗಳಲ್ಲಿ ಐಟಿ ಅಧಿಕಾರಿಗಳು ದಾಳಿ (IT Raid) ಮಾಡಿದ್ದರು.

ಬೆಂಗಳೂರಿನಲ್ಲಿ ಶಿಲ್ಪಾ ಶೆಟ್ಟಿ ಅವರು ‘ಬಾಸ್ಟಿಯನ್ ಗಾರ್ಡನ್ ಸಿಟಿ’ ಪಬ್ ಹೊಂದಿದ್ದಾರೆ. ಇದು ಬೆಂಗಳೂರಿನ ಅತಿ ದುಬಾರಿ ಪಬ್​​ಗಳಲ್ಲಿ ಒಂದಾಗಿದೆ. ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿ ಈ ಪಬ್ ಇದೆ. ಪಬ್ ಮಾತ್ರವಲ್ಲದೇ ಇನ್ನೂ ಹಲವು ಕಡೆಗಳಲ್ಲಿ ದಾಳಿ ಮಾಡಿ ಕೆಲವು ದಾಖಲೆಗಳನ್ನು ಪರಿಶೀಲಿಸಲಾಗಿದೆ. ಇದರಿಂದಾಗಿ ಶಿಲ್ಪಾ ಶೆಟ್ಟಿ ಅವರಿಗೆ ಸಂಕಷ್ಟ ಶುರುವಾಗಿದೆ.

ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ರಾಜ್ ಕುಂದ್ರಾ ಮೇಲೆ 60 ಕೋಟಿ ರೂಪಾಯಿ ವಂಚನೆ ಆರೋಪ ಕೇಳಿಬಂದಿದೆ. ಮುಂಬೈ ಮೂಲದ ಉದ್ಯಮಿ ದೀಪಕ್ ಕೊಠಾರಿ ಅವರು ಈ ಆರೋಪ ಮಾಡಿದ್ದಾರೆ. ಸ್ಟಾರ್ ದಂಪತಿಯಿಂದ ತಮಗೆ ವಂಚನೆ ಆಗಿದೆ ಎಂದು ದೀಪಕ್ ಕೊಠಾರಿ ದೂರು ನೀಡಿದ್ದಾರೆ. ದೂರು ದಾಖಲಾದ ಬೆನ್ನಲ್ಲೇ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಪಬ್ ಮೇಲೆ ದಾಳಿ:
ಬುಧವಾರ ಬೆಳಗ್ಗೆ 6 ಗಂಟೆ ಸುಮಾರಿಗೆ 5 ಕಾರಿನಲ್ಲಿ ಹತ್ತಕ್ಕೂ ಹೆಚ್ಚು ಐಟಿ ಅಧಿಕಾರಿಗಳು ಸೆಂಟ್ ಮಾರ್ಕ್ಸ್ ರಸ್ತೆಯ ಬ್ಯಾಸ್ಟಿಯನ್ ಪಬ್ ಮೇಲೆ ದಾಳಿ ಮಾಡಿದ್ದರು. ದಾಳಿ ವೇಳೆ ರೆಸ್ಟೋರೆಂಟ್ ಸಹಜವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಟ್ಟರು. ಆದರೆ ಆಡಳಿತ ವಿಭಾಗ ಮತ್ತು ಅಕೌಂಟ್ಸ್ ವಿಭಾಗದಲ್ಲಿ ಐಟಿ ಅಧಿಕಾರಿಗಳು ಜಾಲಾಡಿದರು. ಇಷ್ಟು ವರ್ಷಗಳಿಂದ ಕಟ್ಟಿದ ತೆರಿಗೆ ಎಷ್ಟು ಎಂಬುದನ್ನು ಪರಿಶೀಲಿಸಲಾಯಿತು. ತೆರಿಗೆ ಇಲಾಖೆಗೆ ನೀಡಿರುವ ದಾಖಲಾತಿಗಳಿಗೂ ಕೌಂಟರ್​ನಲ್ಲಿ ಇದುವರೆಗೆ ಆಗಿರುವ ವ್ಯಾಪಾರಕ್ಕೂ ಹೋಲಿಕೆ ಮಾಡಲಾಗಿದೆ. ಹೂಡಿಕೆ, ಲಾಭ ಮತ್ತು ತೆರಿಗೆ ಈ ಮೂರು ವಿಚಾರಗಳ ಬಗ್ಗೆ ತನಿಖೆ ನಡೆಸಿದ್ದಾರೆ.

ಇದನ್ನೂ ಓದಿ: ಶಿಲ್ಪಾ ಶೆಟ್ಟಿ ವಿರುದ್ಧ ಬೆಂಗಳೂರು ಪೊಲೀಸರ ಎಫ್​​ಐಆರ್: ನಡೆದಿದ್ದೇನು?

ಶಿಲ್ಪಾ ಶೆಟ್ಟಿ ಅವರ ಪಬ್​ನಲ್ಲಿ ಕೆಲವು ದಿನಗಳ ಹಿಂದೆ ಉದ್ಯಮಿ ಸತ್ಯನಾಯ್ಡು ಮತ್ತು ಇತರರ ನಡುವೆ ಒಂದು ಗಲಾಟೆ ಆಗಿತ್ತು. ಆ ಬಳಿಕ ಪಬ್ ಅವಧಿ ಮೀರಿ, ಅಂದರೆ 1.30ರ ತನಕ ಒಪನ್ ಇತ್ತು. ಈ ಎರಡೂ ವಿಚಾರಕ್ಕೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕೇಸ್ ಕೂಡ ದಾಖಲಾಗಿತ್ತು. ಕಳೆದ 10 ದಿನಗಳ ಅಂತರದಲ್ಲಿ ಈ ಪಬ್ ಮೇಲೆ ಒಂದು ಕೇಸ್ ಹಾಗೂ ಐಟಿ ದಾಳಿ ನಡೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಗುವನ್ನು ಕಸದ ಬುಟ್ಟಿಗೆ ಹಾಕಿ, ನಾನು ಹಾಲು ಕುಡಿಸೋದಿಲ್ಲ; ಒಂದೇಸಮನೆ ಹಠ ಹಿಡಿದ ಬಾಣಂತಿ – Kannada News | I Wont feed baby throw it to dustbin woman refuses to accept Newborn Baby in Hospital know why

ಗೋರಖ್​ಪುರ, ಡಿಸೆಂಬರ್ 18: ‘ಹೆತ್ತ ತಾಯಿಗೆ ಹೆಗ್ಗಣವೂ ಮುದ್ದು’ ಎಂಬ ಗಾದೆ ಮಾತೊಂದಿದೆ. ತಾಯಿ ಎಂಥದ್ದೇ ಪರಿಸ್ಥಿತಿ ಬಂದರೂ ತಾನು ಹೆತ್ತ ಮಗುವನ್ನು ಬಿಟ್ಟುಕೊಡುವುದಿಲ್ಲ, ಅದಕ್ಕೆ ತೊಂದರೆಯಾದರೆ ಸಹಿಸುವುದೂ ಇಲ್ಲ. ಆದರೆ, ಗೋರಖ್‌ಪುರದ (Gorakhpur) ಜಿಲ್ಲಾ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆಕೆ ಹೆರಿಗೆಯ ನಂತರ ಮಗುವಿಗೆ ಹಾಲುಣಿಸಲು ನಿರಾಕರಿಸಿದಳು. ಇದು ವೈದ್ಯರಿಗೆ ಆಘಾತ ಉಂಟುಮಾಡಿದೆ. ಆಕೆಯ ಮನೆಯವರು, ವೈದ್ಯರು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಆಕೆ ಅದಕ್ಕೆ ಒಪ್ಪಲಿಲ್ಲ.

“ಈ ಮಗು ವಿಶ್ವಾಸದ್ರೋಹಿಯಾದ ನನ್ನ ಗಂಡನ ಮಗು. ಆ ಮಗುವನ್ನು ಬೇಕಿದ್ದರೆ ಕಸದ ಬುಟ್ಟಿಗೆ ಎಸೆಯಿರಿ, ಆದರೆ ನಾನು ಅವನಿಗೆ ಹಾಲುಣಿಸುವುದಿಲ್ಲ ಅಥವಾ ಬೆಳೆಸುವುದೂ ಇಲ್ಲ” ಎಂದು ಆಕೆ ಹೇಳಿದ್ದಾಳೆ.

“ಮಗುವನ್ನು ನೋಡಿಕೊಳ್ಳಬೇಕಾದ ನನ್ನ ಪತಿ ಬೇರೆ ಮಹಿಳೆಯೊಂದಿಗೆ ಓಡಿಹೋದ. ಹಾಗಾದರೆ ನಾನೊಬ್ಬಳೇ ಏಕೆ ಈ ಮಗುವನ್ನು ಬೆಳೆಸಬೇಕು?” ಎಂದು ಆಕೆ ಹತಾಶಳಾಗಿ ಪ್ರಶ್ನಿಸಿದ್ದಾಳೆ. ತನ್ನ ಪತಿ ತನ್ನ ಜೀವನವನ್ನು ಹಾಳು ಮಾಡಿದ್ದರಿಂದ ಆ ಮಗುವನ್ನು ಇಟ್ಟುಕೊಳ್ಳುವುದಿಲ್ಲ ಎಂದು ಆ ಮಹಿಳೆ ಹೇಳಿದ್ದಾಳೆ. “ಆ ಮಗುವನ್ನು ನೀವು ಎಲ್ಲಿ ಬೇಕಾದರೂ ಬಿಡಿ ಅಥವಾ ಕಸಕ್ಕೆ ಬೇಕಾದರೂ ಎಸೆಯಿರಿ” ಎಂದು ಆಕೆ ಹಠ ಹಿಡಿದಿದ್ದಾಳೆ.

ಇದನ್ನೂ ಓದಿ: ಬುರ್ಖಾ ಧರಿಸದೆ ಹೊರಹೋಗಿದ್ದಕ್ಕೆ ಹೆಂಡತಿ, ಮಕ್ಕಳನ್ನು ಕೊಂದೆ; ಶಾಕಿಂಗ್ ವಿಷಯ ಬಿಚ್ಚಿಟ್ಟ ಪಾಪಿ

ಈ ಸುದ್ದಿ ಕೇಳಿದ ಕೂಡಲೇ ಜನರು ಆ ಮಗುವನ್ನು ದತ್ತು ಪಡೆಯಲು ಆಸ್ಪತ್ರೆಗೆ ಬರಲು ಪ್ರಾರಂಭಿಸಿದರು. ಕೊನೆಗೆ ಈ ವಿಷಯ ಎಸ್‌ಐಸಿ ಜೈ ಕುಮಾರ್‌ಗೆ ತಲುಪಿ, ಅವರು ತಕ್ಷಣವೇ ಮಕ್ಕಳ ಸಹಾಯವಾಣಿಗೆ ಇಡೀ ವಿಷಯದ ಬಗ್ಗೆ ಮಾಹಿತಿ ನೀಡಿದರು. ಕೊನೆಗೆ ಆಸ್ಪತ್ರೆಯ ಆಡಳಿತ ಮಂಡಳಿಯೂ ಮಹಿಳೆಯನ್ನು ಮನವೊಲಿಸಲು ಪ್ರಯತ್ನಿಸಿತು. ಸುಮಾರು 48 ಗಂಟೆಗಳ ಪ್ರಯತ್ನದ ನಂತರ ಆ ಮಗುವನ್ನು ತನ್ನ ಜೊತೆ ಇಟ್ಟುಕೊಂಡು, ಬೆಳೆಸಲು ಆಕೆ ಒಪ್ಪಿಕೊಂಡಳು.

ಆ ಮಹಿಳೆಯ ಪತಿ ಚಾಲಕರಾಗಿದ್ದರು. ಅವರು ತಮ್ಮ ಕುಟುಂಬದ ಒಪ್ಪಿಗೆಯೊಂದಿಗೆ ಒಂದು ವರ್ಷದ ಹಿಂದೆ ಮದುವೆಯಾಗಿದ್ದರು. ಅವರ ಕುಟುಂಬವು ಸಂತೋಷದಿಂದಲೇ ಬದುಕುತ್ತಿತ್ತು. ಅವರು ತಮ್ಮ ಕುಟುಂಬದೊಂದಿಗೆ ಬಿಹಾರದ ದರ್ಭಾಂಗದಲ್ಲಿ ವಾಸಿಸುತ್ತಿದ್ದರು. ಮದುವೆಯಾದ ಕೆಲವು ತಿಂಗಳ ನಂತರ, ಆಕೆಯ ಪತಿ ಆಕೆಯನ್ನು ದೆಹಲಿಗೆ ಕರೆದೊಯ್ದರು. ಸುಮಾರು 5 ತಿಂಗಳ ಹಿಂದೆ ಆತ ಬೇರೆ ಮಹಿಳೆಯ ಜೊತೆ ಸಂಬಂಧ ಹೊಂದಿ ಈ ಮಹಿಳೆಯನ್ನು ಬಿಟ್ಟು ಹೋದರು.

ಇದನ್ನೂ ಓದಿ: ಇವ್ನೆಂಥಾ ಮಗ, ಹೆತ್ತ ತಂದೆ ತಾಯಿಯನ್ನು ಹೊಡೆದು ಕೊಂದು, ದೇಹಗಳನ್ನು ಕತ್ತರಿಸಿ ನದಿಗೆಸೆದ ಮಗ

ಅಷ್ಟರಲ್ಲಾಗಲೇ ಗರ್ಭಿಣಿಯಾಗಿದ್ದ ಆಕೆ ಮಗುವನ್ನು ತೆಗೆಸಲೂ ಆಗದೆ ಗಂಡ ವಾಪಾಸ್ ಬರುತ್ತಾನೆಂದು ಕಾಯುತ್ತಲೇ ಇದ್ದಳು. ಮಗು ಹುಟ್ಟಿದ ವಿಷಯ ತಿಳಿದರೂ ಆತ ಬಾರದೆ ಇದ್ದುದರಿಂದ ಆಕೆ ತಾಳ್ಮಗೆಟ್ಟು ಮಗುವೇ ಬೇಡವೆಂದು ಹಠ ಹಿಡಿದಿದ್ದಳು. ತಾನೊಬ್ಬಳೇ ಆ ಮಗುವನ್ನು ಹೇಗೆ ಬೆಳೆಸುವುದು ಎಂಬ ಚಿಂತೆ ಆಕೆಯನ್ನು ಕಾಡಿತ್ತು. ಗಂಡ ಬಿಟ್ಟುಹೋದ ನಂತರ ಗೊತ್ತಿಲ್ಲದ ಊರಾದ ದೆಹಲಿಯಲ್ಲಿ ಬೇರೆಯವರ ಮನೆ ಅಡುಗೆ ಮಾಡಿ ಆಕೆ ಮನೆಯ ಬಾಡಿಗೆ ಕಟ್ಟಿ, ಜೀವನ ನಡೆಸುತ್ತಿದ್ದಳು. ಇನ್ನು ಮುಂದೆ ಪುಟ್ಟ ಮಗುವನ್ನು ಬಿಟ್ಟುಕೊಂಡು ಕೆಲಸ ಮಾಡಿ ದುಡಿಯಲೂ ಸಾಧ್ಯವಾಗದ ಕಾರಣದಿಂದ ಆಕೆ ಖಿನ್ನತೆಗೆ ಒಳಗಾಗಿದ್ದಳು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾಂಗ್ರೆಸ್ ಮುಖಂಡನಿಂದಲೇ ಪಡಿತರ ಅಕ್ಕಿ ಕಾಳ ಸಂತೆಯಲ್ಲಿ ಮಾರಾಟ: ಮಾಲು ಸಮೇತ ಸಿಕ್ಕಿಬಿದ್ದ – Kannada News | Congress leader accused of selling ration rice in the black market

ಬೆಂಗಳೂರು, ಡಿಸೆಂಬರ್​ 18: ಬಿಪಿಎಲ್​​ ಕಾರ್ಡ್​​ದಾರರಿಂದ ಕಡಿಮೆ ಬೆಲೆಗೆ ಅಕ್ಕಿ (rice) ಖರೀದಿಸಿ ಹೆಚ್ಚಿನ ಬೆಲೆಗೆ ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗಿರುವ ಸಾಕಷ್ಟು ಘಟನೆಗಳು ವರದಿಯಾಗಿವೆ. ಪಡಿತರ ಅಕ್ಕಿಯನ್ನು ಅಕ್ರಮವಾಗಿ ಖರೀದಿ ಮಾಡಿ ಬಳಿಕ ಕಾಳಸಂತೆಯಲ್ಲಿ ಮಾರಾಟ ಮಾಡಲು ಲಾರಿಯಲ್ಲಿ ಸಾಗಾಟ ಮಾಡುವಾಗ ಸಿಕ್ಕಿಬಿದ್ದ ಸಾಕಷ್ಟು ನಿದರ್ಶನಗಳಿವೆ. ಇದೀಗ ಕಾಂಗ್ರೆಸ್ (congress) ಮುಖಂಡನಿಂದಲೇ ಈ ಅಕ್ಕಿ ಮಾರಾಟ ದಂಧೆ ನಡೆಯುತ್ತಿರುವ ಆರೋಪ ಕೇಳಿಬಂದಿದೆ. ಕಾಳ ಸಂತೆಯಲ್ಲಿ ಬಿಪಿಎಲ್​ ಅಕ್ಕಿ ಮಾರಾಟ ನೆಪದಲ್ಲಿ ಎರಡು ಗುಂಪುಗಳ ನಡುವೆ ಆಕ್ರೋಶ ಭುಗಿಲೆದ್ದಿದೆ.

ಎರಡು ಗುಂಪುಗಳ ನಡುವೆ ಗಲಾಟೆ

ಕರ್ನಾಟಕ ರಾಷ್ಟ್ರ ಸಮಿತಿ ಹಾಗೂ ಅಲೀಮ್ ಎಂಬ ಕಾಂಗ್ರೆಸ್ ಮುಖಂಡನ ಮಧ್ಯೆ ಕಾಳ ಸಂತೆಯಲ್ಲಿ ಅಕ್ಕಿ ಮಾರಾಟ ನೆಪದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ಉಂಟಾಗಿದೆ. ಕಾಂಗ್ರೆಸ್ ಮುಖಂಡ ಅಲೀಮ್ ಎಂಬುವವರಿಂದ ಕಾನೂನು ಬಾಹಿರವಾಗಿ ಬಿಪಿಎಲ್ ಕಾರ್ಡ್​ದಾರರಿಂದ ಅಕ್ಕಿ ಖರೀದಿಸಿ ಹೆಚ್ಚಿನ ಬೆಲೆಗೆ ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಆರೋಪಿಸಿದೆ. ಅಷ್ಟೇ ಅಲ್ಲದೆ KRS ಪಕ್ಷದ ಮುಖಂಡರು ಅಕ್ರಮವಾಗಿ ಅಕ್ಕಿ ಸಾಗಾಟ ಮಾಡುತ್ತಿದ್ದವರನ್ನು ಹಿಡಿದು ಪೊಲೀಸ್​ ಠಾಣೆಗೆ ಕರೆತಂದಿದ್ದರು.

ಇದನ್ನೂ ಓದಿ: ಕರ್ನಾಟಕದ ಅನ್ನಭಾಗ್ಯ ಅಕ್ಕಿ ದುಬೈನಲ್ಲಿ ಮಾರಾಟವಾಗುತ್ತಿದ್ಯಾ? ಕಾಂಗ್ರೆಸ್-ಬಿಜೆಪಿ ಜಟಾಪಟಿ

ಇನ್ನು KRS ಪಕ್ಷದ ಮುಖಂಡರ ಆರೋಪವನ್ನು ಅಲೀಮ್ ಅಲ್ಲಗೆಳೆದಿದ್ದಾರೆ. ಸದ್ಯ ಕುಮಾರಸ್ವಾಮಿ ಲೇಔಟ್ ಸ್ಟೇಷನ್ ಸುತ್ತಮುತ್ತ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂಥಾಗಿದೆ. 300ಕ್ಕೂ ಹೆಚ್ಚು ಅಲೀಮ್ ಬೆಂಬಲಿಗರು ಹಾಗೂ KRS ಮುಖಂಡರು ಸೇರಿದ್ದ ಹಿನ್ನೆಲೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಸದ್ಯ ಎರಡು ಕಡೆಯ ಗುಂಪುಗಳನ್ನು ಪೊಲೀಸರು ಚದುರಿಸಿದ್ದಾರೆ.

ಕಾಂಗ್ರೆಸ್ ಮುಖಂಡ ಅಲೀಮ್​​ ದಂಧೆ ನಡೆಸುತ್ತಿದ್ದಾನೆ: ರಘುಪತಿ ಭ

ಇನ್ನು ಈ ಬಗ್ಗೆ KRS ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುಪತಿ ಭಟ್ ಮಾತನಾಡಿದ್ದು, ಹಲವು ದಿನಗಳ ಹಿಂದೆ ಈ ರೀತಿ ಅಕ್ರಮವಾಗಿ ಬಿಪಿಎಲ್​​ ಅಕ್ಕಿ ಮಾರಾಟದ ಮಾಹಿತಿ ಸಿಕ್ತು. ನಾವು ಪೂರ್ವ ತಯಾರಿ ಮಾಡಿಕೊಂಡು ಅಕ್ಕಿ ತುಂಬಿಸಿಕೊಂಡು ಹೋಗುತ್ತಿದ್ದ ಜನರನ್ನು ಹಿಡಿದಿದ್ದೇವೆ. ಸುಮಾರು 45 ಅಕ್ಕಿ ಚೀಲಗಳನ್ನು ನಾವು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದೇವೆ ಎಂದರು.

ಇದನ್ನೂ ಓದಿ: ಯಾದಗಿರಿ: ಶಾಲಾ ಮಕ್ಕಳ ಬಿಸಿಯೂಟಕ್ಕೆ ಹುಳ ಬಿದ್ದಿರೋ ಅಕ್ಕಿ ಬೇಳೆ; TV9 ರಿಯಾಲಿಟಿ ಚೆಕ್​ನಲ್ಲಿ ಬಯಲಾಯ್ತು ಅಸಲಿಯತ್ತು

ಅಲೀಮ್ ಎಂಬ ಕಾಂಗ್ರೆಸ್ ಮುಖಂಡನೇ ಈ ದಂಧೆಯನ್ನು ನಡೆಸುತ್ತಿದ್ದಾನೆ. ಮುಂದಿನ ಪಾಲಿಕೆ ಚುನಾವಣೆಯಲ್ಲಿ ನಿಲ್ಲಬೇಕು ಅಂತ ಅಲೀಮ್ ಪ್ಲಾನ್ ಮಾಡಿಕೊಂಡಿದ್ದಾನೆ. ಯಲಚೇನಹಳ್ಳಿ, ಇಲಿಯಾಸ್ ನಗರ ಸುತ್ತಮುತ್ತ ಆತನ ಹಾವಳಿ ಮಿತಿಮೀರಿದೆ. ನಾವು KRS ಪಕ್ಷದ ಮುಖಂಡರು ಸಕ್ರಿಯವಾಗಿ ಸಮಾಜಸೇವೆಯಲ್ಲಿ ತೊಡಗಿದ್ದೇವೆ. ನಮ್ಮ ಜನಪ್ರಿಯತೆಯನ್ನು ಸಹಿಸಲು ಆಗದೆ ಈ ರೀತಿ ಹಗೆ ಸಾಧಿಸುತ್ತಿದ್ದಾನೆ. ಅವನ ಅಕ್ರಮಗಳನ್ನು ಬಯಲಿಗೆ ಎಳೆದಿದ್ದಕ್ಕಾಗಿ ನಮಗೆ ಬೆದರಿಕೆ ಹಾಕುತ್ತಿದ್ದಾರೆ. ಅವರ ಕಡೆಯ 200 ಹುಡುಗರನ್ನು ಕರೆಸಿ ಹಲ್ಲೆ ಮಾಡಲು ಯತ್ನಿಸುತ್ತಿದ್ದಾರೆ. ನಾವು ಕಾನೂನು ಹೋರಾಟ ಮುಂದುವರೆಸುತ್ತೇವೆ. ಪೊಲೀಸರು ನಮಗೆ ರಕ್ಷಣೆ ನೀಡಬೇಕು ಎಂದು ಅವರು ಹೇಳಿದ್ದಾರೆ.

ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version