ಎಐನಿಂದ ಉದ್ಯೋಗಗಳು ಹೋಗೋದು ಸುಳ್ಳಾ? ಕೆಲಸ ಸೇರುವ ಸಮಯ ಇದು ಎನ್ನುತ್ತಾರೆ ಜೆನ್ಸೆನ್ ಹುವಾಂಗ್ – Kannada News | Jensen Huang tells youth that AI won’t replace them, but someone using AI better than they will

ನವದೆಹಲಿ, ಮೇ 11: ಟೆಕ್ ಕಂಪನಿಗಳು ಕಳೆದ ಕೆಲ ತಿಂಗಳಿಂದ ಲಕ್ಷದಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿವೆ. ಕಳೆದ ಐದಾರು ವರ್ಷಗಳಿಂದಲೂ ಈ ಟ್ರೆಂಡ್ ಇದೆ. ಕೋವಿಡ್ ಕಾರಣವೊಡ್ಡಿ ಲೇ ಆಫ್ ಮಾಡಲಾಯಿತು, ಕಾಸ್ಟ್ ಕಟ್ಟಿಂಗ್ ಎಂದು ಹೇಳಿ ಮಾಡಲಾಯಿತು. ಈಗ ಎಐ ಕಾರಣ ನೀಡಲಾಗುತ್ತಿದೆ. ಎಐ ಪ್ರಬಲವಾಗಿ ಬೆಳೆಯುತ್ತಿರುವುದು ಹೌದು. ಆದರೆ, ಎಐನದ್ದೇ ಕಾರಣಕ್ಕೆ ಉದ್ಯೋಗಗಳು ನಶಿಸುತ್ತಿವೆಯಾ? ಟೆಕ್ ಪಂಡಿತರ ನಡುವೆಯೇ ಭಿನ್ನಾಭಿಪ್ರಾಯಗಳಿವೆ. ಇಲಾನ್ ಮಸ್ಕ್ ಅವರಂತಹ ದೊಡ್ಡ ಟೆಕ್ ಉದ್ಯಮಿಗಳೇ ಎಐನಿಂದ ಕೆಲಸ ಹೋಗುತ್ತೆ ಎಂತಿದ್ದಾರೆ. ಆದರೆ, ಇನ್ನೂ ಕೆಲವರು, ಎಐನಿಂದ ಕೆಲಸ ಹೋಗೋದು ನಿಜ. ಆದರೆ, ಹೊಸ ರೀತಿಯ ಉದ್ಯೋಗಗಳ ಸೃಷ್ಟಿಯಾಗುತ್ತೆ ಎಂತಿದ್ದಾರೆ. ಈ ಎರಡನೇ ವರ್ಗದವರ ಮಾತಿಗೆ ಎನ್​ವಿಡಿಯಾ ಸಂಸ್ಥಾಪಕ ಜೆನ್ಸೆನ್ ಹುವಾಂಗ್ (NVidia founder Jensen Huang) ಧ್ವನಿಗೂಡಿಸಿದ್ದಾರೆ.

ಅಮೆರಿಕದ ಪಿನ್ಸೆಲ್ವಿನೇಯಾದ ಕಾರ್ನೆಜೀ ಮೆಲ್ಲಾನ್ ಯೂನಿವರ್ಸಿಟಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ತೈವಾನ್ ಮೂಲದ ಅಮೆರಿಕನ್ ಉದ್ಯಮಿ ಜೆನ್ಸೆನ್ ಹುವಾಂಗ್, ಯುವಜನರಿಗೆ ಕೆಲಸ ಮಾಡಲು ಇದು ಪ್ರಶಸ್ತ ಸಮಯ ಎಂದಿದ್ದಾರೆ.

ಇದನ್ನೂ ಓದಿ: ಮೋದಿ ಕರೆಗೆ ಏರ್​ಟೆಲ್ ಮುಖ್ಯಸ್ಥರ ಬೆಂಬಲ; ಭಾರತದಲ್ಲಿ ಹೂಡಿಕೆ ಹೆಚ್ಚಿಸುವಂತೆ ಭಾರತೀಯ ಉದ್ಯಮಗಳಿಗೆ ಸುನೀಲ್ ಮಿತ್ತಲ್ ಕರೆ

‘ನಿಮ್ಮ ಕನಸುಗಳನ್ನು ಸಾಕಾರಗೊಳಿಸುವ ಸಮಯ ಈಗ ಬಂದಿದೆ. ಇದಕ್ಕಿಂತ ಹೆಚ್ಚು ಪ್ರಶಸ್ತ ಸಮಯ ಸಿಕ್ಕಲ್ಲ’ ಎಂದು ಶಕ್ತಿಶಾಲಿ ಜಿಪಿಯುಗಳನ್ನು ತಯಾರಿಸುವ ಎನ್​ವಿಡಿಯಾ ಕಂಪನಿಯ ಸಂಸ್ಥಾಪಕರು ಅಭಿಪ್ರಾಯಪಟ್ಟಿದ್ದಾರೆ.

ವಿವಿಧ ವರ್ಗಗಳ ಮಧ್ಯೆ ಇದ್ದ ತಂತ್ರಜ್ಞಾನ ಅಂತರವನ್ನು ಎಐ ತಗ್ಗಿಸುತ್ತಿದೆ ಎಂದು ಹೇಳಿದ ಹುವಾಂಗ್, ಎಲ್ಲಾ ರೀತಿಯ ಜನರು ಏನಾದರೂ ಉಪಯುಕ್ತವಾದುದನ್ನು ನಿರ್ಮಿಸಲು ಎಐ ಅವಕಾಶ ಕೊಡುತ್ತದೆ. ಇದರಿಂದ ಯುವಜನರಿಗೆ ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಹೊಸ ಅವಕಾಶಗಳು ತೆರೆದುಕೊಳ್ಳುತ್ತವೆ ಎಂದು ನಿರೀಕ್ಷಿಸಿದ್ದಾರೆ.

ಇದನ್ನೂ ಓದಿ: ಚಿನ್ನದ ಮೇಲೆ ಆಮದು ಸುಂಕ ಏರಿಕೆಯಾಗುತ್ತಾ? ಆಭರಣ ಪ್ರಿಯರಿಗೆ ನಿರಾಳ ತರುವ ಸುದ್ದಿ

ಎಐನಿಂದ ನಿಮ್ಮ ಕೆಲಸ ಹೋಗೋದಿಲ್ಲ…

ಕಾರ್ನೆಜೀ ಮೆಲ್ಲೋನ್ ಯೂನಿವರ್ಸಿಟಿಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಜೆನ್ಸೆನ್ ಹುವಾಂಗ್, ಎಐ ನಿಮ್ಮ ಕೆಲಸ ಕಿತ್ತುಕೊಳ್ಳುವುದಿಲ್ಲ. ಆದರೆ, ನಿಮಗಿಂತ ಚೆನ್ನಾಗಿ ಎಐ ಅನ್ನು ಬಳಸುವವರು ನಿಮ್ಮ ಕೆಲಸ ಕಸಿಯುತ್ತಾರೆ ಎಂದು ಹುವಾಂಗ್ ಎಚ್ಚರಿಸಿದ್ದಾರೆ.

ಇದೇ ವೇಳೆ, ಎಐನಿಂದಾಗಿ ಯಾರಿಗೂ ಕೆಲಸವೇ ಇರುವುದಿಲ್ಲ ಎಂದು ಹೇಳುವ ಕೆಲ ಟೆಕ್ ನಾಯಕರ ಅನಿಸಿಕೆಗಳಿಗೆ ಜೆನ್ಸೆನ್ ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಮಾತುಗಳು ಸರಿಯಲ್ಲ. ನನ್ನಂತೆ ಸಿಇಒಗಳಾಗಿರುವವರಿಂದ ಈ ಮಾತುಗಳು ಬರುತ್ತಿವೆ. ಸಿಇಒ ಆದಾಕ್ಷಣ ದೇವರಾದರಂತೆ ತಿಳಿದುಬಿಡುತ್ತಾರೆ. ಒಂದು ವಿಚಾರ ತಿಳಿಯುವ ಮುನ್ನವೇ ಎಲ್ಲಾ ತಿಳಿದಿದೆ ಎಂದು ಭಾವಿಸಿಬಿಡುತ್ತಾರೆ ಎಂದು ಎನ್​ವಿಡಿಯಾ ಸಿಇಒ ಜೆನ್ಸೆನ್ ಹುವಾಂಗ್ ಲೇವಡಿ ಮಾಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಅಗತ್ಯಸೇವೆಗಳು ಕೂಡ ದುಬಾರಿ ಆಗಬಹುದು ಎಂದ ಆರ್ಥಿಕ ತಜ್ಞ – Kannada News | Daily necessities things price hike Over Fuel Crisis says Finance Expert Rudramurth

ಬೆಂಗಳೂರು, (ಮೇ 11):  ಮಧ್ಯಪ್ರಾಚ್ಯ ಯುದ್ದದಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ (Petrol and diesel) ಬೆಲೆ ಏರಿಕೆಯ ಭೀತಿ ಉಂಟಾಗಿರುವ ನಡುವೆಯೇ, ಎಚ್ಚರಿಕೆಯ ನುಡಿಗಳನ್ನು ಆಡಿರುವ ಪ್ರಧಾನಿ ನರೇಂದ್ರ ಮೋದಿ, ‘ಅಂತಾರಾಷ್ಟ್ರೀಯ ಸಂಘ ರ್ಷಗಳಿಂದ ಆಗುತ್ತಿರುವ ಬೆಲೆ ಏರಿಕೆಗಳನ್ನು ಎದುರಿಸಲು ಎಲ್ಲರಸಾಮೂಹಿಕ ಭಾಗೀದಾರಿಕೆ ಅಗತ್ಯವಾಗಿದೆ ಎಂದು ಹೇಳಿದ್ದಾರೆ. ಈ ಮೂಲಕ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸನ್ನಿಹಿತವಾಗಿದೆ ಎಂಬ ಪರೋಕ್ಷ ಸಂದೇಶ ರವಾನಿಸಿದ್ದಾರೆ. ಮೋದಿ ಅವರ ಈ ಹೇಳಿಕೆ ನಾನಾ ರೀತಿಯ ಚರ್ಚೆಗಳು ಶುರುವಾಗಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಳವಾಗಲಿದೆ ಎನ್ನಲಾಗಿದೆ. ಇದರ ಮಧ್ಯೆ ಆರ್ಥಿಕ ತಜ್ಞ ರುದ್ರಮೂರ್ತಿ ಅವರು ಟಿವಿ9 ಜೊತೆ ಮಾತನಾಡಿ, ಅಗತ್ಯ ವಸ್ತುಗಳ ಬಗ್ಗೆ ಬೆಲೆ ಏರಿಕೆಯಾಗಲಿದೆ ಎಂದಿದ್ದಾರೆ.

ಇದನ್ನೂ ನೋಡಿ: ಪ್ರಧಾನಿ ಮೋದಿ ಸಲಹೆ ಪಾಲಿಸದಿದ್ರೆ ದೇಶಕ್ಕೆ ಸಂಕಷ್ಟ ಎಂದ ರುದ್ರಮೂರ್ತಿ

Source link

ಜೆನ್ ಜೀ ಪ್ರೇಕ್ಷಕರ ಮನಗೆಲ್ಲುವ ಪ್ರಯತ್ನ; ಅಗಸ್ತ್ಯ ಹೊಸ ಸಿನಿಮಾ ‘ಡಿಂಚಕ್ ಡಿಂಚಕ್’ – Kannada News | Jotheyagi Hithavagi fame actor Agasthya new Kannada movie title Dinchak Dinchak

‘ಜೊತೆಯಾಗಿ ಹಿತವಾಗಿ’ ಎಂಬ ಕಾವ್ಯಾತ್ಮಕ ಚಿತ್ರದ ಮೂಲಕ ಸದ್ದಿಲ್ಲದೆ ಸ್ಯಾಂಡಲ್‌ವುಡ್ ಪ್ರವೇಶಿಸಿ ಪ್ರೇಕ್ಷಕರ ಗಮನ ಸೆಳೆದಿದ್ದ ಹೊಸ ನಟ ಅಗಸ್ತ್ಯ (Agasthya) ಅವರು ಈಗ ತಮ್ಮ ಎರಡನೇ ಸಿನಿಮಾದೊಂದಿಗೆ ಪ್ರೇಕ್ಷಕರ ಎದುರು ಬರಲು ಸಿದ್ಧತೆ ಮಾಡಿಕೊಂಡಿದ್ದಾರೆ. ವಿಭಿನ್ನ ಶೀರ್ಷಿಕೆಯ ಮೂಲಕ ಕುತೂಹಲ ಮೂಡಿಸುವ ಪ್ರಯತ್ನ ಅವರದ್ದಾಗಿದೆ. ಈ ಸಿನಿಮಾಗೆ ‘ಡಿಂಚಕ್ ಡಿಂಚಕ್’ (Dinchak Dinchak) ಎಂದು ಹೆಸರಿಡಲಾಗಿದೆ. ಹದಿಹರೆಯದವರ ತರಲೆ-ತಮಾಷೆ ಹಾಗೂ ಕೌಟುಂಬಿಕ ಭಾವನೆಗಳನ್ನೊಳಗೊಂಡ ಅಚ್ಚುಕಟ್ಟಾದ ಕಥಾ ಎಳೆಯನ್ನು ಅಗಸ್ತ್ಯ ಸಿದ್ಧಪಡಿಸಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತದ ಸಿನಿಮಾಗಳಲ್ಲಿ ವಿಚಿತ್ರ ಎನಿಸಿದರೂ, ಇಂದಿನ ತಲೆಮಾರಿಗೆ ಹತ್ತಿರವಾಗುವ ಶೀರ್ಷಿಕೆಗಳು ಹೆಚ್ಚು ಆಕರ್ಷಕ ಎನಿಸಿಕೊಳ್ಳುತ್ತಿವೆ ಎಂಬುದು ಚಿತ್ರತಂಡದ ನಂಬಿಕೆ. ಇದೇ ಹಾದಿಯಲ್ಲಿ ಹೊರಟಿರುವ ‘ಡಿಂಚಕ್ ಡಿಂಚಕ್’ ಚಿತ್ರತಂಡ, ಪ್ರಮುಖವಾಗಿ ಜನ್-ಜೀ (Gen-Z) ಮತ್ತು ಜನ್ ಆಲ್ಫಾ (Gen-Alpha) ವರ್ಗದವರನ್ನು ಗಮನದಲ್ಲಿ ಇಟ್ಟುಕೊಂಡಿದೆ.

ಕಳೆದ ವರ್ಷ ಬಿಡುಗಡೆಯಾಗಿದ್ದ ‘ಜೊತೆಯಾಗಿ ಹಿತವಾಗಿ’ ಸಿನಿಮಾ ಸೀಮಿತ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದರೂ, ಅಗಸ್ತ್ಯ ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಎರಡನೇ ಚಿತ್ರದಲ್ಲಿ ನಟನೆಯ ಜೊತೆಗೆ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಜವಾಬ್ದಾರಿಯನ್ನೂ ತಮ್ಮ ತಂಡದೊಂದಿಗೆ ಹಂಚಿಕೊಂಡು ಸಾಗಲು ಅಗಸ್ತ್ಯ ಅಣಿಯಾಗಿದ್ದಾರೆ ಎಂಬುದು ವಿಶೇಷ.

‘ಶ್ರೀರತ್ನ ಫಿಲ್ಮ್ ಕಂಪನಿ’ ಮೂಲಕ ಈ ಸಿನಿಮಾ ನಿರ್ಮಾಣ ಆಗಲಿದೆ. ಆನಂದ್ ರಾಜ ವಿಕ್ರಮ ಅವರು ಸಂಗೀತ ನೀಡುತ್ತಿದ್ದಾರೆ. ಈ ಸಿನಿಮಾದಲ್ಲಿ ವಿಭಿನ್ನ ಶೈಲಿಯ ಹಾಡುಗಳು ಇರಲಿವೆ ಎನ್ನಲಾಗಿದೆ. ಅಭಿರೇಖ ಕೃಷ್ಣ ಅವರು ಕಾಸ್ಟ್ಯೂಮ್ ಡಿಸೈನ್ ಮಾಡಲಿದ್ದಾರೆ. ಉತ್ತಮ ಮೇಕಿಂಗ್ ಸಲುವಾಗಿ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ ಎಂದು ಕ್ರಿಯೇಟಿವ್ ಹೆಡ್ ಪ್ರಶಾಂತ್ ಬಾಗೂರು ತಿಳಿಸಿದ್ದಾರೆ.

ಇದನ್ನೂ ಓದಿ: ಕನ್ನಡದ ಕಲಾವಿದರು ನಟಿಸಿದ ‘ಕೃಷ್ಣಾವತಾರಂ’ ಚಿತ್ರಕ್ಕೆ ಉತ್ತರ ಪ್ರದೇಶದಲ್ಲಿ ತೆರಿಗೆ ವಿನಾಯಿತಿ

ಈಗ ‘ಡಿಂಚಕ್ ಡಿಂಚಕ್’ ಸಿನಿಮಾದ ಚಿತ್ರೀಕರಣಕ್ಕೆ ಪೂರ್ವ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಉಳಿದ ತಾಂತ್ರಿಕ ವರ್ಗದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ವಿಭಿನ್ನ ಶೀರ್ಷಿಕೆಯೊಂದಿಗೆ ಸೆಟ್ಟೇರಲಿರುವ ‘ಡಿಂಚಕ್ ಡಿಂಚಕ್’ ಸಿನಿಮಾ ಎಷ್ಟು ಡಿಫರೆಂಟ್ ಆಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಸ್ತೆ ಅಪಘಾತದಲ್ಲಿ ತೆಲುಗು ನಟ ಭರತ್ ಕಾಂತ್ ನಿಧನ; ಚಿತ್ರರಂಗದ ಕಂಬನಿ – Kannada News | Telugu actor Bharath Kanth dies in Car Accident in Hyderabad Outer Ring Road

ತೆಲುಗು ಚಿತ್ರರಂಗದ ಉದಯೋನ್ಮುಖ ನಟ ಭರತ್ ಕಾಂತ್ (31) ಅವರು ಹೈದರಾಬಾದ್‌ನ ಹೊರವರ್ತುಲ ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Car Accident) ನಿಧನರಾಗಿದ್ದಾರೆ. ಭರತ್ ಅವರೊಂದಿಗೆ ಪ್ರಯಾಣಿಸುತ್ತಿದ್ದ ಸಾಯಿ ತ್ರಿಲೋಕ್ ಎಂಬುವವರು ಕೂಡ ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಅದಿಬಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಎಕ್ಸಿಟ್ ನಂ. 12ರ ಬಳಿ ತಡರಾತ್ರಿ ಈ ಅಪಘಾತ ಸಂಭವಿಸಿದೆ. ಭರತ್ ಕಾಂತ್ (Bharath Kanth), ಸಾಯಿ ತ್ರಿಲೋಕ್ ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಟ್ರಕ್‌ಗೆ ಹಿಂಬದಿಯಿಂದ ಬಲವಾಗಿ ಡಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲೇ ಭರತ್ ಕಾಂತ್ ಮತ್ತು ಸಾಯಿ ತ್ರಿಲೋಕ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಭರತ್ ಕಾಂತ್ ಮತ್ತು ಸಾಯಿ ತ್ರಿಲೋಕ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಭರತ್ ಕಾಂತ್ ಅವರು ‘ಗ್ರಾಮಂ’ ಮತ್ತು ‘ಟೆನೆಂಟ್’ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುವ ಮೂಲಕ ಗುರುತಿಸಿಕೊಂಡಿದ್ದರು. ಕೇವಲ ಸಿನಿಮಾಗಳಲ್ಲದೇ ‘ಗೀತಾಂಜಲಿ’ ಮತ್ತು ‘ಪಾರ್ವತಿ ಪರಮೇಶ್ವರಲು’ ಮುಂತಾದ ಜನಪ್ರಿಯ ವೆಬ್ ಸರಣಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಅವರೊಂದಿಗೆ ಮೃತಪಟ್ಟ ಸಾಯಿ ತ್ರಿಲೋಕ್ ಅವರು ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದರು.

ಭರತ್ ಅವರ ಆಪ್ತ ಗೆಳತಿ ಹಾಗೂ ನಟಿ ಆಶು ರೆಡ್ಡಿ ಈ ಸಾವಿನ ಸುದ್ದಿಯಿಂದ ದಿಗ್ಭ್ರಾಂತರಾಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಭರತ್ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿರುವ ಅವರು, ‘ಇದು ನನಗೆ ವೈಯಕ್ತಿಕ ನಷ್ಟ. ನನ್ನ ಆತ್ಮೀಯ ಗೆಳೆಯ, ನನ್ನ ಎಮರ್ಜೆನ್ಸಿ ಕಾಂಟ್ಯಾಕ್ಟ್ ಮತ್ತು ನನ್ನ ಕುಟುಂಬದಂತಿದ್ದ ವ್ಯಕ್ತಿ ಈಗ ನಿಧನರಾಗಿದ್ದಾರೆ. ನೀನು ಹೋದ ಜಾಗಕ್ಕೆ ಈ ಸಂದೇಶ ತಲುಪುವುದಿಲ್ಲ ಎಂದು ಗೊತ್ತಿದ್ದರೂ ಬರೆಯುತ್ತಿದ್ದೇನೆ. ನಿನ್ನ ನಗು ಯಾವಾಗಲೂ ನೆನಪಿರುತ್ತದೆ’ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಭೀಕರ ಅಪಘಾತ: ಪ್ರಭಾಸ್ ನಟನೆಯ ‘ಫೌಜಿ’ ಚಿತ್ರತಂಡದ ಸದಸ್ಯ ಸಾವು; ಶೂಟಿಂಗ್ ಸ್ಥಗಿತ

ಕಾರು ಚಾಲಕನ ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಮೃತರ ದೇಹಗಳನ್ನು ಉಸ್ಮಾನಿಯಾ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿತ್ತು. ಮರಣೋತ್ತರ ಪರೀಕ್ಷೆ ನಡೆಸಿದ ನಂತರ ದೇಹಗಳನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೇಸಿಗೆಯಲ್ಲಿ ಹಾವುಗಳು ಪದೇ ಪದೇ ಮನೆ ಬಳಿ ಕಾಣಿಸಿಕೊಳ್ಳಲು ಈ ಮರ ಗಿಡಗಳೇ ಮುಖ್ಯ ಕಾರಣ – Kannada News | These are the trees and plants that attract snakes

ಬೇಸಿಗೆಯಲ್ಲಿ ತಂಪು ಜಾಗವನ್ನು ಹುಡುಕುತ್ತಾ ಹಾವುಗಳು (snakes) ಬಿಲದಿಂದ ಹೊರಬರುತ್ತವೆ. ಹೀಗೆ ಸುಳಿದಾಡುತ್ತಾ ಬರುವ ಹಾವುಗಳು ಜನವಸತಿ ಪ್ರದೇಶಗಳಿಗೆ ಪ್ರವೇಶಿಸುತ್ತವೆ.  ಪೊದೆ,  ಮರ ಗಿಡಗಳ ಬುಡ ಸೇರಿದಂತೆ ತಂಪಾದ ಸ್ಥಳಗಳ ಬಳಿ ಹಾವುಗಳು ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ಮನೆ ಸುತ್ತ ಎಷ್ಟೇ ಸ್ವಚ್ಛವಾಗಿ ಇಟ್ಟುಕೊಂಡರೂ ಸಹ ಪದೇ ಪದೇ ಹಾವುಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಮನೆ ಸುತ್ತಲೂ ಇರುವ ಈ ಕೆಲವೊಂದು ಮರ ಗಿಡಗಳು ಕಾರಣವಂತೆ. ಹೌದು ಕೆಲವು ಸಸ್ಯಗಳ ಬಳಿ ಹಾವುಗಳು ಬೇಗನೇ ಆಕರ್ಷಿತವಾಗುತ್ತದೆ.   ಆದ್ದರಿಂದ ನಿಮ್ಮ ಮನೆಯ ಬಳಿ ಈ ಸಸ್ಯಗಳಿದ್ದರೆ, ಸ್ವಲ್ಪ ಜಾಗರೂಕರಾಗಿರಿ.

ಹಾವುಗಳನ್ನು ಆಕರ್ಷಿಸುವ ಮರ ಗಿಡಗಳಿವು:

ಶ್ರೀಗಂಧ: ಶ್ರೀಗಂಧವು ಅದರ ಪರಿಮಳಯುಕ್ತ ಮರ ಮತ್ತು ತಂಪಾಗಿಸುವ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಈ ಮರ ಹಾವುಗಳನ್ನು ಸಹ ಆಕರ್ಷಿಸುತ್ತವೆ.  ಬೇಸಿಗೆಯಲ್ಲಿ ಹಾವುಗಳು ಶಾಖದಿಂದ ತಪ್ಪಿಸಿಕೊಳ್ಳಲು ಮರದ ತೇವಾಂಶವುಳ್ಳ ಮತ್ತು ತಂಪು ವಾತಾವರಣವನ್ನು ಹುಡುಕುತ್ತಿರುತ್ತವೆ.  ಶ್ರೀಗಂಧದ ಮರವು ನೈಸರ್ಗಿಕವಾಗಿ ತಂಪಾಗಿರುತ್ತದೆ, ಆದ್ದರಿಂದ ಬೇಸಿಗೆಯ ತಿಂಗಳುಗಳಲ್ಲಿ, ಹಾವುಗಳು ತಮ್ಮ ದೇಹದ ಉಷ್ಣತೆಯನ್ನು ನಿಯಂತ್ರಿಸಲು ಈ ಮರದ ಬೇರುಗಳು ಅಥವಾ ಕೊಂಬೆಗಳಲ್ಲಿ ವಿಶ್ರಾಂತಿ ಪಡೆಯಲು ಬಯಸುತ್ತವೆ. ನಿಮ್ಮ ಮನೆಗೆ ಬಹಳ ಹತ್ತಿರದಲ್ಲಿ ಶ್ರೀಗಂಧದ ಮರವಿದ್ದರೆ, ಅಲ್ಲಿ ಹಾವುಗಳು ವಾಸಿಸುವ ಸಾಧ್ಯತೆ ಹೆಚ್ಚು.

ಮಲ್ಲಿಗೆ  ಗಿಡ: ಮಲ್ಲಿಗೆ ಗಿಡವು ತನ್ನ ಆಹ್ಲಾದಕರ ಪರಿಮಳಕ್ಕೆ ಹೆಸರುವಾಸಿಯಾಗಿದೆ. ಅದರ ಜೊತೆಗೆ ಇವು ಹಾವುಗಳನ್ನು ಸಹ ಆಕರ್ಷಿಸುತ್ತವೆ. ಮಲ್ಲಿಗೆ ಗಿಡಗಳ ಸುತ್ತಲೂ ಸಣ್ಣ ಕೀಟಗಳು ಹೆಚ್ಚಾಗಿರುತ್ತವೆ. ಅವು ಹಾವಿನ ಆಹಾರವಾಗಿದ್ದು, ಆದ್ದರಿಂದ ಮಲ್ಲಿಗೆ ಸಸಿ ಇರುವ ಕಡೆ ಹಾವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುತ್ತವೆ.

ಬಿದಿರು: ಬಿದಿರಿನ ಮರಗಳು ತುಂಬಾ ಸುಂದರವಾಗಿ ಮತ್ತು ಸೊಗಸಾಗಿ ಕಾಣುತ್ತವೆ, ಆದರೆ ಅವುಗಳು ಹಾವುಗಳಿಗೆ ಆಶ್ರಯ ತಾಣವಾಗಿದೆ.  ಬಿದಿರು ಗಿಡಗಳು ದಡ್ಡವಾಗಿರುತ್ತವೆ, ಅಲ್ಲದೆ ಬಿದಿರಿನ ಎಲೆಗಳ ಕೆಳಗೆ ತೇವಾಂಶ ಹಾಗೆಯೇ ಉಳಿದು ಬಿಡುತ್ತದೆ. ಆದ ಕಾರಣ ಹಾವುಗಳು ಹೆಚ್ಚಾಗಿ ಬಿದಿರು ಗಿಡಗಳ ಬಳಿ ಸುಳಿದಾಡುತ್ತವೆ. ಇದಲ್ಲದೆ ಹಲ್ಲಿಗಳು ಮತ್ತು ಸಣ್ಣ ಜೀವಿಗಳು ಸಹ ಬಿದಿರಿನ ಬಳಿ ವಾಸಿಸುತ್ತವೆ, ಈ ಆಹಾರಗಳನ್ನು ಹುಡುಕುತ್ತಲೂ ಹಾವುಗಳು ಬಿದಿರಿನ ಬಳಿ ಬರುತ್ತವೆ.  ಹಾಗಾಗಿ ಮನೆಯ ಸುತ್ತಲೂ ದಟ್ಟವಾದ ಬಿದಿರಿನ ಗಿಡಗಳಿದ್ದರೆ ಅದನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಅವಶ್ಯಕ.

ಇದನ್ನೂ ಓದಿ: ಹಾಗಲಕಾಯಿ ಕಹಿ ತೆಗೆದು ಹಾಕಲು ಸಿಂಪಲ್‌ ಟಿಪ್ಸ್‌ ಫಾಲೋ ಮಾಡಿ

ಸಿಟ್ರಸ್‌ ಹಣ್ಣಿನ ಮರಗಳು: ನಿಂಬೆ, ಕಿತ್ತಳೆ ಸೇರಿದಂತೆ  ಸಿಟ್ರಸ್ ನಂತಹ ಮುಳ್ಳಿನ ಮರಗಳು, ಹಾಗೆಯೇ ಚಿಕ್ಕು,  ಮಾವಿನಂತಹ ದಟ್ಟವಾದ ನೆರಳು ನೀಡುವ ಮರಗಳು ಹಾವುಗಳನ್ನು ಆಕರ್ಷಿಸುತ್ತವೆ. ಈ ಮರಗಳ ಮೇಲೆ ಪಕ್ಷಿಗಳು ಗೂಡು ಕಟ್ಟುತ್ತವೆ ಮತ್ತು ಇಲಿಗಳು ನೆಲದ ಮೇಲೆ ಬೀಳುವ ಹಣ್ಣುಗಳನ್ನು ತಿನ್ನಲು ಬರುತ್ತವೆ. ತಮ್ಮ ಈ ಆಹಾರದ ಸಲುವಾಗಿ ಹಾಗೂ ಈ ಮರಗಿಡಗಳ ಸುತ್ತಲಿನ ಪ್ರದೇಶ ತಂಪಾಗಿರುವ ಕಾರಣ ಹಾವುಗಳು ಹೆಚ್ಚಾಗಿ ಈ ಮರಗಿಡಗಳ ಬಳಿ ಕಾಣಿಸಿಕೊಳ್ಳುತ್ತವೆ.

ಸೈಪ್ರೆಸ್: ಸೈಪ್ರೆಸ್ ಒಂದು ಅಲಂಕಾರಿಕ ಸಸ್ಯವಾಗಿದ್ದು, ಇವು ಆಕರ್ಷಕವಾಗಿ ಕಾಣುತ್ತವೆ. ಆದರೆ ಹಾವುಗಳಿಗೆ ಅಡಗಿಕೊಳ್ಳಲು ಸಾಕಷ್ಟು ಸ್ಥಳಾವಕಾಶವನ್ನು ಒದಗಿಸುತ್ತವೆ. ಈ ಸಸ್ಯ ಇದ್ದರೆ ಮನೆ ಬಳಿ ಹಾವುಗಳು ಆಗಾಗ್ಗೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ಬಾಳೆ ಗಿಡ: ಬಾಳೆ ಗಿಡಗಳು ಇರುವಲ್ಲಿಯೂ ಹಾವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಈ ಗಿಡದ ತೇವಾಂಶ ಮತ್ತು ಈ ಗಿಡದ ಸುತ್ತಲೂ ಇರುವ ತಂಪಾದ ವಾತಾವರಣ ಹಾವುಗಳನ್ನು ಆಕರ್ಷಿಸುತ್ತವೆ. ಆದ್ದರಿಂದ, ನಿಮ್ಮ ಅಂಗಳದಲ್ಲಿ ಬಾಳೆ ಗಿಡಗಳನ್ನು ನೆಡುವುದನ್ನು ತಪ್ಪಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ICC Annual Ranking: ಏಕದಿನ ಕ್ರಿಕೆಟ್​ನಲ್ಲಿ ಮುಂದುವರೆದ ಭಾರತದ ಪಾರುಪತ್ಯ – Kannada News | ICC Annual ODI Rankings: Team India Retains No.1 Spot Amid IPL Break, Pakistan Slips

ಟಿ20 ವಿಶ್ವಕಪ್ ಮುಗಿದ ಬಳಿಕ ಟೀಂ ಇಂಡಿಯಾ (Team India) ಅಂತರರಾಷ್ಟ್ರೀಯ ಕ್ರಿಕೆಟ್​ನಿಂದ ದೂರ ಉಳಿದಿದೆ. ಪ್ರಸ್ತುತ ಐಪಿಎಲ್ (IPL 2026) ನಡೆಯುತ್ತಿರುವುದರಿಂದ ಭಾರತ ತಂಡ ಯಾವುದೇ ಸರಣಿಗಳನ್ನು ಆಡುತ್ತಿಲ್ಲ. ಐಪಿಎಲ್​ನ ಲೀಗ್ ಹಂತ ಮುಗಿಯುವ ಹಂತಕ್ಕೆ ಬಂದಿದ್ದು, ಆ ಬಳಿಕ ಪ್ಲೇಆಫ್ ಸುತ್ತು ನಡೆಯಲಿದೆ. ಇದರೊಂದಿಗೆ ಐಪಿಎಲ್​ಗೆ ತೆರೆ ಬೀಳಲಿದೆ. ಇದರ ನಂತರವೇ ಟೀಂ ಇಂಡಿಯಾ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಮರಳಲಿದೆ. ಅಂದರೆ 2 ತಿಂಗಳಿಂದ ಟೀಂ ಇಂಡಿಯಾ ಯಾವುದೇ ಸರಣಿಗಳನ್ನು ಆಡದಿದ್ದರೂ ಐಸಿಸಿ (ICC) ರ್ಯಾಂಕಿಂಗ್​ನಲ್ಲಿ ಮಾತ್ರ ತನ್ನ ಪಾರುಪತ್ಯ ಮೆರೆದಿದೆ. ವಾಸ್ತವವಾಗಿ ಐಸಿಸಿ ತನ್ನ ವಾರ್ಷಿಕ ರ್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಟೀಂ ಇಂಡಿಯಾ ಈ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಅಗ್ರಸ್ಥಾನದಲ್ಲಿ ಟೀಂ ಇಂಡಿಯಾ

ಕೆಲವು ದಿನಗಳ ಹಿಂದೆ ಟೆಸ್ಟ್ ಮತ್ತು ಟಿ20 ಅಂತರರಾಷ್ಟ್ರೀಯ ಶ್ರೇಯಾಂಕಗಳಲ್ಲಿ ವಾರ್ಷಿಕ ಬದಲಾವಣೆಗಳನ್ನು ಪ್ರಕಟಿಸಿದ ನಂತರ, ಐಸಿಸಿ ಮೇ 11 ರಂದು ವಾರ್ಷಿಕ ಏಕದಿನ ರ್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸಿದೆ. ಪ್ರತಿ ವರ್ಷ, ಮೇ ತಿಂಗಳಲ್ಲಿ, ಐಸಿಸಿ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ.

ಈ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಟೀಂ ಇಂಡಿಯಾ ತನ್ನ ನಂಬರ್ ಒನ್ ಸ್ಥಾನವನ್ನು ಉಳಿಸಿಕೊಂಡಿದೆ. ಟೀಂ ಇಂಡಿಯಾ ಪ್ರಸ್ತುತ 118 ಅಂಕಗಳೊಂದಿಗೆ ನಂ. 1 ಸ್ಥಾನದಲ್ಲಿದ್ದು, ನ್ಯೂಜಿಲೆಂಡ್ 113 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಪ್ರಸ್ತುತ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ 109 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಇದರರ್ಥ ಮೊದಲ ಮೂರು ಸ್ಥಾನಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

2026 ರ ಟಿ20 ವಿಶ್ವಕಪ್‌ನಲ್ಲಿ ಮ್ಯಾಚ್ ಫಿಕ್ಸಿಂಗ್..! ತನಿಖೆ ಪ್ರಾರಂಭಿಸಿದ ಐಸಿಸಿ

ಪಾಕಿಸ್ತಾನಕ್ಕೆ ಹಿನ್ನಡೆ

ದಕ್ಷಿಣ ಆಫ್ರಿಕಾ ಒಂದು ಸ್ಥಾನ ಜಿಗಿದು ನಾಲ್ಕನೇ ಸ್ಥಾನಕ್ಕೆ ತಲುಪಿದರೆ, ಇತ್ತ ಪಾಕಿಸ್ತಾನ ಕುಸಿತ ಕಂಡಿದೆ. ಕಳೆದ ವರ್ಷ ತವರಿನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದ ಪಾಕಿಸ್ತಾನ ಐದನೇ ಸ್ಥಾನಕ್ಕೆ ಕುಸಿದಿದೆ. ಇತರ ತಂಡಗಳಲ್ಲಿ, ಶ್ರೀಲಂಕಾ ಆರನೇ ಸ್ಥಾನದಲ್ಲಿದ್ದರೆ, ಅಫ್ಘಾನಿಸ್ತಾನ ಏಳನೇ ಸ್ಥಾನ, ಇಂಗ್ಲೆಂಡ್ ಎಂಟನೇ ಸ್ಥಾನ, ಬಾಂಗ್ಲಾದೇಶ ಒಂಬತ್ತನೇ ಸ್ಥಾನ ಮತ್ತು ಎರಡು ಬಾರಿಯ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ ಹತ್ತನೇ ಸ್ಥಾನದಲ್ಲಿದೆ. ಐರ್ಲೆಂಡ್ 11 ನೇ ಸ್ಥಾನದಲ್ಲಿದ್ದರೆ, ಜಿಂಬಾಬ್ವೆ 12 ನೇ ಸ್ಥಾನದಲ್ಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:36 pm, Mon, 11 May 26

Source link

ಅಂಜನಾದ್ರಿಗೆ 2 ಕೋಟಿ ರೂ. ಚಿನ್ನಾಭರಣ ಕಾಣಿಕೆ: ಹಲವು ಅನುಮಾನಗಳಿಗೆ ಕಾರಣವಾಯ್ತು ಉದ್ಯಮಿಯ ಬಿಲ್ – Kannada News | Anjanadri Temple Gold Donation Row: Businessman Mahesh Reddy’s Released Bill Raises Doubts

ಕೊಪ್ಪಳ, ಮೇ 11: ನಗರದ ಸುಪ್ರಸಿದ್ಧ ಅಂಜನಾದ್ರಿ ಬೆಟ್ಟದ (Anjanadri Betta) ಆಂಜನೇಯ ಸ್ವಾಮಿಗೆ ಹೈದರಾಬಾದ್​​ ಮೂಲದ ಉದ್ಯಮಿ ಮಹೇಶ ರೆಡ್ಡಿ ನೀಡಿದ್ದ 2.50 ಕೋಟಿ ಮೌಲ್ಯದ ಚಿನ್ನದ (Gold) ಆಭರಣಗಳು ಅಸಲಿಗೆ ಬಂಗಾರವೇ ಅಲ್ಲ ಎಂಬ ಸ್ಫೋಟಕ ಸತ್ಯ ಬಯಲಾಗಿದೆ. ಹೀಗಾಗಿ ಆಭರಣ ಖರೀದಿಯ ಅಧಿಕೃತ ಬಿಲ್ ನೀಡುವಂತೆ ಜಿಲ್ಲಾಡಳಿತ ನೋಟಿಸ್ ಬೆನ್ನಲ್ಲೇ, ಇದೀಗ ಉದ್ಯಮಿ ಬಿಲ್ ಬಿಡುಗಡೆ ಮಾಡಿದ್ದು, ಆದರೆ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಮುಖ್ಯಾಂಶಗಳು

  • ಕೊಪ್ಪಳ ಜಿಲ್ಲಾಡಳಿತ ನೋಟಿಸ್ ಬೆನ್ನಲ್ಲೇ ಬಂಗಾರ ಖರೀದಿ ಬಿಲ್ ಬಿಡುಗಡೆ ಮಾಡಿದ ಉದ್ಯಮಿ
  • ಹಲವು ಅನುಮಾನಗಳಿಗೆ ಕಾರಣವಾದ ಬಂಗಾರ ಖರೀದಿ ಬಿಲ್​​
  • 8 ದಿನಗಳಲ್ಲಿ ಇಷ್ಟೆಲ್ಲಾ ಆಭರಣಗಳು ತಯಾರಿಸಲು ಹೇಗೆ ಸಾಧ್ಯ?

ಮೇ 8ರಂದು ಅಂಜನಾದ್ರಿ ದೇವಸ್ಥಾನಕ್ಕೆ ಪ್ರಭಾವಳಿ, ಚಕ್ರ, ಗದೆ ಸೇರಿದಂತೆ ವಿವಿಧ ಚಿನ್ನದ ವಸ್ತುಗಳನ್ನು ಮಹೇಶ್ ರೆಡ್ಡಿ ಕುಟುಂಬ ಸಮೇತ ಬಂದು ದೇಣಿಗೆ ನೀಡಿದ್ದರು. ಈ ದೇಣಿಗೆಗೆ ಸಂಬಂಧಿಸಿದಂತೆ ಖರೀದಿ ಬಿಲ್ ಸಲ್ಲಿಸುವಂತೆ ಜಿಲ್ಲಾಡಳಿತವು ಕಳೆದ ಎರಡು ದಿನಗಳಿಂದ ನೋಟಿಸ್ ನೀಡಿತ್ತು. ಅದರಂತೆ ಇಂದು ಉದ್ಯಮಿ ಮಹೇಶ್ ರೆಡ್ಡಿ ಬಿಲ್ ಸಲ್ಲಿಸಿದ್ದಾರೆ.

ಇದನ್ನೂ ಓದಿ: 2.5 ಕೋಟಿ ರೂ. ಮೌಲ್ಯದ ಆಭರಣದಲ್ಲಿ ಇರೋದು ಬರೀ 28 ಗ್ರಾಂ ಬಂಗಾರ! ಅಂಜನಾದ್ರಿ ದೇಣಿಗೆಯಲ್ಲಿ ಮಹಾ ಗೋಲ್‌ಮಾಲ್?

ಸಲ್ಲಿಕೆಯಾದ ಬಿಲ್‌ನ ಪ್ರಕಾರ, 2026ರ ಎಪ್ರಿಲ್ 28ರಂದು ಹೈದರಾಬಾದ್‌ನ ತಿರುಮಾಲ್ ಜುವೆಲ್ಲರ್ಸ್‌ನಲ್ಲಿ 1400 ಗ್ರಾಂ ಚಿನ್ನವನ್ನು ಖರೀದಿಸಲಾಗಿದೆ. ಎಎಂಆರ್ ಕಂಪನಿ ಹೆಸರಿನಲ್ಲಿ ಬಿಡುಗಡೆಯಾಗಿರುವ ಬಿಲ್‌ನ ಮೊತ್ತ 2 ಕೋಟಿ 20 ಲಕ್ಷದ 42 ಸಾವಿರ ರೂಪಾಯಿ ಆಗಿದೆ. ಆದರೆ ಬಿಲ್ ಬಿಡುಗಡೆ ದಿನಾಂಕವನ್ನು ಏಪ್ರಿಲ್ 24 ಎಂದು ನಮೂದಿಸಲಾಗಿದ್ದು, ಇದು ಗೊಂದಲಕ್ಕೆ ಕಾರಣವಾಗಿದೆ.

ಇದು ಕೇವಲ ಪ್ರಚಾರದ ಗಿಮಿಕ್ಕಾ?

ಸುಂದರ ಕಲಾಕೃತಿ ಹೊಂದಿರುವ ಪ್ರಭಾವಳಿ, ಚಕ್ರ, ಆಂಜನೇಯನ ಗದೇ ಸೇರಿ 12 ಆಭರಣಗಳನ್ನ ಮಹೇಶ್ ರೆಡ್ಡಿ ನೀಡಿದ್ದರು. ಬಂಗಾರ ಖರೀದಿಯ ಬಳಿಕ 08 ದಿನಗಳಲ್ಲಿ, ಇಷ್ಟೆಲ್ಲಾ ತಯಾರು ಮಾಡಲು ಹೇಗೆ ಸಾಧ್ಯವಾಯಿತು ಎನ್ನುವ ಅನುಮಾನ ಶುರುವಾಗಿದೆ. ಇನ್ನು ಜಿಲ್ಲಾಡಳಿತ ಇದನ್ನ ಪರಿಶೀಲನೆ ನಡೆಸಿದ ಬಳಿಕ, ಆಭರಣದಲ್ಲಿ 1400 ಗ್ರಾಂ ಬಂಗಾರ ಇರುವುದು ಪತ್ತೆಯಾಗಿಲ್ಲ. ಹೀಗಾಗಿ ಜಿಲ್ಲಾಡಳಿತ ಖಜಾನೆಗೆ ಆಭರಣಗಳನ್ನ ಜಮಾ ಮಾಡಿಕೊಂಡಿಲ್ಲ. ಇದು ಕೇವಲ ಪ್ರಚಾರದ ಗಿಮಿಕ್ಕಾ ಎಂಬ ಪ್ರಶ್ನೆ ಇದೀಗ ಭಕ್ತರಲ್ಲಿ ಮೂಡಿದೆ.

ಘಟನೆ ಹಿನ್ನೆಲೆ

ಉದ್ಯಮಿ ಮಹೇಶ ರೆಡ್ಡಿ ಮೇ 08ರಂದು ಕಿಷ್ಕಿಂಧಾ ಅಂಜನಾದ್ರಿಯ ಆಂಜನೇಯ ದೇವಸ್ಥಾನಕ್ಕೆ ಭರ್ಜರಿ ದೇಣಿಗೆ ನೀಡಿದ್ದರು. ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರ ಆಪ್ತ ಗೆಳೆಯರೂ ಆಗಿರುವ ಮಹೇಶ ರೆಡ್ಡಿ, ಸ್ವಾಮಿಗೆ ಪ್ರಭಾವಳಿ, ಚಕ್ರ ಹಾಗೂ ಗದೆಯನ್ನು ದಾನವಾಗಿ ಅರ್ಪಿಸಿದ್ದರು. 2.50 ಕೋಟಿ ಮೌಲ್ಯದ ಬಂಗಾರದ ಆಭರಣಗಳು ಎಂದು ಸ್ವತಃ ಜನಾರ್ದನ ರೆಡ್ಡಿ ಅವರೇ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು. ಆದರೆ, ದೇಣಿಗೆ ಸ್ವೀಕರಿಸಿದ ಬಳಿಕ ಜಿಲ್ಲಾಡಳಿತ ಈ ಆಭರಣಗಳನ್ನು ತಾಂತ್ರಿಕ ಪರಿಶೀಲನೆಗೆ ಒಳಪಡಿಸಿದಾಗ ಅಸಲಿ ಬಣ್ಣ ಬಯಲಾಗಿದೆ.

ಇದನ್ನೂ ಓದಿ: ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!

ತಜ್ಞರ ತಂಡ ಪರಿಶೀಲಿಸಿದಾಗ ಅಷ್ಟು ದೊಡ್ಡ ಆಭರಣಗಳಲ್ಲಿ ಇದ್ದದ್ದು ಕೇವಲ 250 ರಿಂದ 300 ಗ್ರಾಂ ಬಂಗಾರ ಮಾತ್ರ. ಕೋಟಿ ಬೆಲೆ ಬಾಳುತ್ತದೆ ಎಂದು ಹೇಳಲಾದ ಆಭರಣಗಳು ಅಸಲಿಗೆ ತಾಮ್ರದ ಮೇಲೆ ಬಂಗಾರದ ಲೇಪನ ಮಾಡಲಾಗಿದೆ ಎಂದು ಜಿಲ್ಲಾಡಳಿತದ ಪರೀಶಿಲನೆ ವೇಳೆ ಬಯಲು ಮಾಡಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಭಾರೀ ಕುತೂಹಲ ಮೂಡಿಸಿದ ತಮಿಳುನಾಡು ಸಿಎಂ ವಿಜಯ್-ಮಾಜಿ ಮುಖ್ಯಮಂತ್ರಿ ಸ್ಟಾಲಿನ್ ಭೇಟಿ – Kannada News | Tamil Nadu CM Vijay meets DMK President MK Stalin at their residence

ಚೆನ್ನೈ, ಮೇ 11: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಇಂದು ಮಾಜಿ ಮುಖ್ಯಮಂತ್ರಿ ಮತ್ತು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಇದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಮಾಜಿ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಸಿಎಂ ವಿಜಯ್ ಅವರನ್ನು ಆತ್ಮೀಯವಾಗಿ ಮನೆಗೆ ಸ್ವಾಗತಿಸಿದರು. ಹಸ್ತಲಾಘವ ನೀಡುವ ಮೂಲಕ ವಿಜಯ್ ಅವರಿಗೆ ಸ್ವಾಗತ ನೀಡಿದ ಸ್ಟಾಲಿನ್ ಬಳಿಕ ಹೂಗುಚ್ಛ ನೀಡಿ, ರೇಷ್ಮೆ ಶಾಲು ಹೊದಿಸಿದರು.

ಏಪ್ರಿಲ್ 23ರ ಚುನಾವಣೆಗೆ ಮುಂಚಿತವಾಗಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮತ್ತು ಡಿಎಂಕೆ ತೀವ್ರ ಚುನಾವಣಾ ಸ್ಪರ್ಧೆಯಲ್ಲಿ ತೊಡಗಿತ್ತು. ವಿಜಯ್ ಕೂಡ ಡಿಎಂಕೆ ವಿರುದ್ಧ ಸಾಕಷ್ಟು ವಾಗ್ದಾಳಿ ನಡೆಸಿದ್ದರು. ನಿನ್ನೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವಾಗಲೂ ಸಿಎಂ ವಿಜಯ್ ಡಿಎಂಕೆ ಸರ್ಕಾರ ಭಾರೀ ಸಾಲ ಮಾಡಿ ಹೋಗಿದೆ ಎಂದು ಆರೋಪಿಸಿದ್ದರು. ಇದಕ್ಕೆ ಸ್ಟಾಲಿನ್ ಕೂಡ ತಿರುಗೇಟು ನೀಡಿದ್ದರು. ಅದರ ಬೆನ್ನಲ್ಲೇ ಇಬ್ಬರೂ ನಾಯಕರು ಮುಖಾಮುಖಿ ಭೇಟಿಯಾಗಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೋದಿ ಕರೆಗೆ ಏರ್​ಟೆಲ್ ಮುಖ್ಯಸ್ಥರ ಬೆಂಬಲ; ಭಾರತದಲ್ಲಿ ಹೂಡಿಕೆ ಹೆಚ್ಚಿಸುವಂತೆ ಭಾರತೀಯ ಉದ್ಯಮಗಳಿಗೆ ಸುನೀಲ್ ಮಿತ್ತಲ್ ಕರೆ – Kannada News | Sunil Bharti Mittal urges India companies to double down on investments

ಸುನಿಲ್ ಭಾರ್ತಿ ಮಿತ್ತಲ್Image Credit source: PTI

ನವದೆಹಲಿ, ಮೇ 11: ಜಾಗತಿಕವಾಗಿ ಪಶ್ಚಿಮ ಏಷ್ಯಾದಲ್ಲಿ (Middle East) ಉದ್ವಿಗ್ನ ಪರಿಸ್ಥಿತಿ ನೆಲೆಸಿದ್ದರೂ, ಭಾರತೀಯ ಉದ್ಯಮಿಗಳು ಹಿಂಜರಿಯದೆ ದೇಶದ ಒಳಗಿನ ಹೂಡಿಕೆಯನ್ನು ದುಪ್ಪಟ್ಟುಗೊಳಿಸಬೇಕು ಎಂದು ಭಾರ್ತಿ ಎಂಟರ್‌ಪ್ರೈಸಸ್ ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ (Sunil Bharti Mittal) ಅವರು ಕರೆ ನೀಡಿದ್ದಾರೆ. ಜಾಗತಿಕ ಹೊಯ್ದಾಟಗಳ ನಡುವೆ ಭಾರತೀಯ ಆರ್ಥಿಕ ಬೆಳವಣಿಗೆ ಸರಾಗವಾಗಿ ಮುಂದುವರಿಯುವಂತಾಗಲು ಉದ್ಯಮಗಳು ದೊಡ್ಡ ಪಾತ್ರ ವಹಿಸಬೇಕು ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ಕರೆಯನ್ನು ಸುನೀಲ್ ಮಿತ್ತಲ್ ಪುನರುಚ್ಚರಿಸಿದ್ದಾರೆ.

ಭಾರತೀಯ ಉದ್ಯಮ ಒಕ್ಕೂಟ (CII) ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪ್ರಸ್ತುತ ಜಾಗತಿಕ ಸವಾಲುಗಳ ನಡುವೆಯೂ ಭಾರತವು ಹೂಡಿಕೆಗೆ ಅತ್ಯಂತ ಸುರಕ್ಷಿತ ಮತ್ತು ಆಕರ್ಷಕ ತಾಣವಾಗಿ ಹೊರಹೊಮ್ಮಿದೆ ಎಂದು ಅಭಿಪ್ರಾಯಪಟ್ಟರು. ಜಾಗತಿಕ ರಾಜಕೀಯ ಸಂಘರ್ಷಗಳು ಮಾರುಕಟ್ಟೆಯ ಮೇಲೆ ಪ್ರಭಾವ ಬೀರಬಹುದು. ಆದರೆ ಭಾರತೀಯ ಕಂಪನಿಗಳು ದೀರ್ಘಾವಧಿಯ ಲಾಭವನ್ನು ಗಮನದಲ್ಲಿಟ್ಟುಕೊಂಡು ಮೂಲಸೌಕರ್ಯ ಮತ್ತು ಉತ್ಪಾದನಾ ವಲಯದಲ್ಲಿ ತಮ್ಮ ಹೂಡಿಕೆಯನ್ನು ಹೆಚ್ಚಿಸಬೇಕು ಎಂದು ಮಿತ್ತಲ್ ಒತ್ತಿಹೇಳಿದ್ದಾರೆ.

ಇದನ್ನೂ ಓದಿ: ಚಿನ್ನದ ಮೇಲೆ ಆಮದು ಸುಂಕ ಏರಿಕೆಯಾಗುತ್ತಾ? ಆಭರಣ ಪ್ರಿಯರಿಗೆ ನಿರಾಳ ತರುವ ಸುದ್ದಿ

ಚೀನಾ ಮತ್ತು ಯುರೋಪ್‌ ದೇಶಗಳ ಆರ್ಥಿಕತೆಗೆ ಹೋಲಿಸಿದರೆ ಭಾರತದ ಆರ್ಥಿಕತೆಯು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಈ ಸ್ಥಿರತೆಯನ್ನು ಬಳಸಿಕೊಂಡು ಭಾರತೀಯ ಉದ್ಯಮಗಳು (India Inc) ವಿಶ್ವಮಟ್ಟದಲ್ಲಿ ತನ್ನ ಪ್ರಾಬಲ್ಯ ಸಾಧಿಸಬೇಕು ಎಂದರು.

ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆಯು ತೈಲ ಬೆಲೆ ಮತ್ತು ಸರಬರಾಜು ಸರಪಳಿಯ ಮೇಲೆ ಪರಿಣಾಮ ಬೀರಬಹುದು. ಆದರೆ ಭಾರತದ ಬಲವಾದ ಆಂತರಿಕ ಬೇಡಿಕೆಯು ಇಂತಹ ಆಘಾತಗಳನ್ನು ತಡೆದುಕೊಳ್ಳುವ ಶಕ್ತಿ ಹೊಂದಿದೆ ಎಂದು ಭಾರ್ತಿ ಏರ್ಟೆಲ್​ನ ಮುಖ್ಯಸ್ಥರಾದ ಅವರು ವಿಶ್ವಾಸ ವ್ಯಕ್ತಪಡಿಸಿದರು. ತಂತ್ರಜ್ಞಾನ ಮತ್ತು ಡಿಜಿಟಲ್ ವಲಯದಲ್ಲಿ ಭಾರತ ಸಾಧಿಸುತ್ತಿರುವ ಪ್ರಗತಿಯನ್ನು ಶ್ಲಾಘಿಸಿದ ಅವರು, ಮುಂಬರುವ ದಿನಗಳಲ್ಲಿ ಉದ್ಯೋಗ ಸೃಷ್ಟಿಗೆ ಈ ವಲಯಗಳು ಪ್ರಮುಖವಾಗಿವೆ ಎಂದರು.

ಇದನ್ನೂ ಓದಿ: ಚಿನ್ನ ಕೊಳ್ಳಬೇಡಿ, ವರ್ಕ್ ಫ್ರಂ ಹೋಮ್ ಮಾಡಿ, ಎಣ್ಣೆ ಹೆಚ್ಚು ಬಳಸದಿರಿ ಎಂದೆಲ್ಲಾ ಮೋದಿ ಅಂದಿದ್ದು ಯಾಕೆ? ಇಲ್ಲಿದೆ ನಿಜ ಕಾರಣ

‘ಇದು ಸಂಕಷ್ಟದ ಸಮಯ. ಒಂದು ದೇಶವಾಗಿ ನಾವು ಬಹಳ ವೇಗದಲ್ಲಿ ಬೆಳೆಯುತ್ತಿದ್ದೇವೆ. ಕೆಲವೊಮ್ಮೆ ಪರಿಸ್ಥಿತಿಗಳು ಯಾರದೇ ನಿಯಂತ್ರಣ ತಪ್ಪಿ ಉದ್ಭವಿಸಿಬಿಡುತ್ತವೆ. ಮಧ್ಯಪ್ರಾಚ್ಯದ ಇವತ್ತಿನ ಪರಿಸ್ಥಿತಿಯು ಜಾಗತಿಕ ಆರ್ಥಿಕತೆಗಳ ಮೇಲೆ ಬಹಳ ಒತ್ತಡ ತಂದಿದೆ. ಇಂಥ ಹೊತ್ತಲ್ಲಿ ಭಾರತೀಯ ಕಂಪನಿಗಳು ಆಮದು ಕಡಿಮೆ ಮಾಡಬೇಕು. ನವೀಕರಿಸಬಹುದಾದ ಇಂಧನದ ಅಳವಡಿಕೆ ಹೆಚ್ಚಿಸಬೇಕು. ದೇಶೀಯವಾಗಿ ಹೂಡಿಕೆಗಳನ್ನು ಹೆಚ್ಚಿಸಬೇಕು ಎಂದು ಮಿತ್ತಲ್ ಕರೆ ನೀಡಿದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಗೇಲಿ ಮಾಡಿದ್ದ ಕೆಕೆಆರ್​ಗೆ ತಕ್ಕ ತಿರುಗೇಟು ನೀಡುತ್ತಾ ಆರ್​ಸಿಬಿ? – Kannada News | IPL 2026: RCB vs KKR Match 57 Playoff Hopes and Revenge Battle Heats Up!

ಐಪಿಎಲ್ 2026 (IPL 2026) ರ 57ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ (RCB vs KKR)​ ತಂಡಗಳು ಮುಖಾಮುಖಿಯಾಗಲಿವೆ. ಪ್ಲೇ ಆಫ್ ದೃಷ್ಟಿಯಿಂದ ಈ ಪಂದ್ಯ ಉಭಯ ತಂಡಗಳಿಗೂ ನಿರ್ಣಾಯಕವಾಗಿದೆ. ಅದರಲ್ಲೂ ಆರ್​ಸಿಬಿಗೆ ಹೋಲಿಸಿದರೆ, ಕೆಕೆಆರ್​ಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಗೆದ್ದರಷ್ಟೇ ಕೆಕೆಆರ್​ಗೆ ಪ್ಲೇಆಫ್ ಕನಸು ಜೀವಂತ, ಇಲ್ಲದಿದ್ದರೆ ಅದು ಕೂಡ ಲೀಗ್ ಹಂತದಲ್ಲೇ ಹೊರಬೀಳಲಿದೆ. ಹೀಗಾಗಿ ರಹಾನೆ ಪಡೆ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಇತ್ತ ಆರ್​ಸಿಬಿ, ಲೀಗ್ ಆರಂಭಕ್ಕೂ ಮುನ್ನ ಕೆಕೆಆರ್ ಫ್ರಾಂಚೈಸಿ ಮಾಡಿದ್ದ ಅವಮಾನಕ್ಕೆ ತಕ್ಕ ತಿರುಗೇಟು ನೀಡಲು ತಯಾರಾಗಿದೆ.

ಪ್ರೋಮೋದಲ್ಲಿ ಆರ್​ಸಿಬಿಗೆ ಅವಮಾನ

ವಾಸ್ತವವಾಗಿ ಐಪಿಎಲ್ ಆರಂಭಕ್ಕೂ ಮುನ್ನ ಕೆಕೆಆರ್ ಫ್ರಾಂಚೈಸಿ ತನ್ನ ತಂಡದ ನೂತನ ಜೆರ್ಸಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿತ್ತು. 1:38 ನಿಮಿಷಗಳ ವಿಡಿಯೋದಲ್ಲಿ ಕೆಕೆಆರ್ ತನ್ನ ಕೆಲವು ಐತಿಹಾಸಿಕ ಸಾಧನೆಗಳನ್ನು ನೆನಪು ಮಾಡಲು ಪ್ರಯತ್ನಿಸಿತ್ತು. ಇದರಲ್ಲಿ ಹೆಚ್ಚಿನದಾಗಿ ಆರ್​ಸಿಬಿ ವಿರುದ್ಧ ಕೆಕೆಆರ್ ತಂಡದ ಪಾರುಪತ್ಯ ಹೇಗಿತ್ತು ಎಂಬುದನ್ನು ಹೇಳುವುದರ ಜೊತೆಗೆ ಉದ್ದೇಶಪೂರ್ವಕವಾಗಿಯೇ ಆರ್​​ಸಿಬಿಯನ್ನು ಅಣಕಿಸುವ ಕೆಲಸ ಮಾಡಿತ್ತು.

ಕೆಕೆಆರ್ ಫ್ರಾಂಚೈಸಿ ಬಿಡುಗಡೆ ಮಾಡಿದ್ದ ಆ ವಿಡಿಯೋದಲ್ಲಿ ಮೊದಲಿಗೆ ಟ್ರಾಫಿಕ್ ಸಿಗ್ನಲ್‌ ತೋರಿಸಲಾಗಿದ್ದು, ಆ ಸಿಗ್ನಲ್​ನ ಒಂದು ದೀಪದಲ್ಲಿ 49 ಎಂದು ಬರೆಯಲಾಗಿತ್ತು. ಸಾಮಾನ್ಯವಾಗಿ ಇದು 49 ಸೆಕೆಂಡುಗಳನ್ನು ಅರ್ಥೈಸುತ್ತದೆಯಾದರೂ, ಇಲ್ಲಿ ತನ್ನ ಬುದ್ಧಿ ಬಳಸಿರುವ ಕೆಕೆಆರ್, ಹಾಲಿ ಚಾಂಪಿಯನ್ ಬೆಂಗಳೂರು ತಂಡವನ್ನು 49 ರನ್​ಗಳಿಗೆ ಆಲೌಟ್ ಮಾಡಿದ್ದನ್ನು ನೆನಪಿಸುವ ಕೆಲಸ ಮಾಡಿತ್ತು.

ವಾಸ್ತವವಾಗಿ, 2017 ರ ಆವೃತ್ತಿಯಲ್ಲಿ ಕೆಕೆಆರ್ ಹಾಗೂ ಆರ್​ಸಿಬಿ ನಡುವೆ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಕೆಕೆಆರ್ 131 ರನ್ ಕಲೆಹಾಕಿತ್ತು. ಈ ಗುರಿ ಬೆನ್ನಟ್ಟಿದ್ದ ಆರ್​ಸಿಬಿ ಕೇವಲ 49 ರನ್​ಗಳಿಗೆ ಆಲೌಟ್ ಆಗಿ, ಐಪಿಎಲ್ ಇತಿಹಾಸದಲ್ಲೇ ಅತಿ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಮೊದಲ ತಂಡವೆಂಬ ಮುಜುಗರದ ದಾಖಲೆಗೆ ಕೊರಳೊಡ್ಡಿತ್ತು.

158 ರನ್ ನೆನಪಿಸಿದ್ದ ಕೆಕೆಆರ್

ಇದಾದ ಬಳಿಕ ಸಿನಿಮಾ ಚಿತ್ರೀಕರಣದಲ್ಲಿ 158ನೇ ಟೇಕ್ ಎಂಬುದನ್ನು ಬಳಸಿರುವ ಕೆಕೆಆರ್ ಮತ್ತೆ ಆರ್​ಸಿಬಿಯನ್ನು ಅಣಕಿಸುವ ಕೆಲಸ ಮಾಡಿತ್ತು. ಐಪಿಎಲ್ ಮೊದಲ ಆವೃತ್ತಿಯಲ್ಲಿ ಆರ್​ಸಿಬಿ ಹಾಗೂ ಕೆಕೆಆರ್ ನಡುವೆ ಮೊದಲ ಪಂದ್ಯ ನಡೆದಿತ್ತು. ಆ ಪಂದ್ಯದಲ್ಲಿ ಕೆಕೆಆರ್ ಪರ ಆಡಿದ್ದ ಬ್ರೆಂಡನ್ ಮೆಕಲಮ್ ಬರೋಬ್ಬರಿ 158 ರನ್​ಗಳ ಇನ್ನಿಂಗ್ಸ್ ಆಡಿದ್ದರು. ಆ ಪಂದ್ಯದಲ್ಲೂ ಆರ್​ಸಿಬಿ ಹೀನಾಯವಾಗಿ ಸೋತಿತ್ತು.

IPL 2026: ಆರ್​ಸಿಬಿ ಮುಂದಿನ ಪಂದ್ಯ ಯಾವಾಗ? ಎದುರಾಳಿ ಯಾರು?

ಅದೇ ರೀತಿ, ಒಂದು ಸ್ಥಳದಲ್ಲಿ, 105/0 6 ಓವರ್‌ಗಳು ಎಂದು ಬರೆಯಲಾಗಿತ್ತು. ಇದು 2017 ರಲ್ಲಿ ಆರ್‌ಸಿಬಿ ವಿರುದ್ಧದ ಪಂದ್ಯದ ಪವರ್‌ಪ್ಲೇನಲ್ಲಿ ಕೆಕೆಆರ್‌ ದಾಖಲಿಸಿದ ಅತ್ಯಧಿಕ ಸ್ಕೋರ್ ಆಗಿತ್ತು. ಈ ಎಲ್ಲಾ ಹಳೆಯ ಘಟನೆಗಳನ್ನು ನೆನಪಿಸುತ್ತಾ ಆರ್​ಸಿಬಿಯನ್ನು ಜರಿಯುವ ಕೆಲಸವನ್ನು ಕೆಕೆಆರ್ ಮಾಡಿತ್ತು. ಇದೀಗ ಆರ್​ಸಿಬಿ, ಕೆಕೆಆರ್​ಗೆ ಸರಿಯಾದ ಪಾಠ ಕಲಿಸಲು ಸಜ್ಜಾಗಿದೆ. ಇತ್ತ ಅಭಿಮಾನಿಗಳು ಕೂಡ ಆರ್​ಸಿಬಿ, ಕೆಕೆಆರ್​ ವಿರುದ್ಧ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದನ್ನು ನೋಡಲು ಕಾದು ಕುಳಿತಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:50 pm, Mon, 11 May 26

Source link

Exit mobile version