400 ಜನರಿಗೆ ಚಿನ್ನದ ಉಂಗುರ ಉಡುಗೊರೆ ನೀಡಿದ್ದರು ದಳಪತಿ ವಿಜಯ್ – Kannada News | Thalapathy Vijay once gifted 400 gold rings to his movie team

ದಳಪತಿ ವಿಜಯ್ (Thalapathy Vijay) ಈಗ ತಮಿಳುನಾಡಿನ ಸಿಎಂ. ಮೊದಲ ರಾಜಕೀಯ ಪ್ರಯತ್ನದಲ್ಲಿಯೇ ಯಶಸ್ವಿಯಾಗಿರುವ ವಿಜಯ್ ಇಂದು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ವಿಜಯ್ ರಾಜಕೀಯ ಪಕ್ಷ ಸ್ಥಾಪಿಸಿ ಎರಡೇ ವರ್ಷಗಳಾಗಿದ್ದರೂ, ಅವರು ಸಾಮಾಜಿಕ ಕಾರ್ಯವನ್ನು ಎರಡು ದಶಕದಿಂದಲೂ ಮಾಡುತ್ತಲೇ ಬಂದಿದ್ದಾರೆ. ಅದರಲ್ಲೂ ಉದಾರವಾಗಿ ದಾನಗಳನ್ನು ಮಾಡುತ್ತಲೇ ಇರುತ್ತಾರೆ. ಹಿಂದೊಮ್ಮೆ ಒಂದೇ ಬಾರಿಗೆ 400 ಮಂದಿಗೆ ಚಿನ್ನದ ಉಂಗುರಗಳನ್ನು ಉಡುಗೊರೆಯಾಗಿ ನೀಡಿದ್ದರು ವಿಜಯ್.

ವಿಜಯ್ ಅವರು ವಿಶೇಷ ಸಂದರ್ಭಗಳಲ್ಲಿ ಚಿನ್ನದ ಆಭರಣಗಳನ್ನು ನೀಡುತ್ತಾರೆ. ತಮ್ಮ ಹುಟ್ಟಿದ ದಿನದಂದು ಸರ್ಕಾರಿ ಆಸ್ಪತ್ರೆಯಲ್ಲಿ ಹುಟ್ಟಿದ ಹೆಣ್ಣು ಮಕ್ಕಳಿಗೆ ಚಿನ್ನದ ಉಂಗುರಗಳನ್ನು ಕೆಲ ವರ್ಷ ನೀಡಿದ್ದರು. ತಮ್ಮ ಅಭಿಮಾನಿ ಸಂಘದ ಪ್ರಮುಖರ ಹುಟ್ಟುಹಬ್ಬಗಳಿಗೆ ಚಿನ್ನದ ಆಭರಣಗಳನ್ನು ಅವರು ನೀಡುತ್ತಿದ್ದರು. ಆದರೆ ಒಮ್ಮೆ ಏಕಕಾಲಕ್ಕೆ ಒಟ್ಟಿಗೆ 400 ಮಂದಿಗೆ ಚಿನ್ನದ ಉಂಗುರ ನೀಡಿದ್ದರು.

ಇದನ್ನೂ ಓದಿ:ವಿಜಯ್ ಬಗ್ಗೆ ಸ್ಟಾಲಿನ್ ಮಾತು, ವೈರಲ್ ಆಗುತ್ತಿದೆ ಹಳೆ ವಿಡಿಯೋ

ವಿಜಯ್ ನಟಿಸಿದ್ದ ‘ಬಿಗಿಲ್’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಯಶಸ್ಸಾಗಿತ್ತು. ಆ ಸಂದರ್ಭದಲ್ಲಿ ವಿಜಯ್ ಅವರು ‘ಬಿಗಿಲ್’ ಹೆಸರು ಅಚ್ಚು ಹಾಕಿಸಿ, ಸಿನಿಮಾಕ್ಕಾಗಿ ಕೆಲಸ ಮಾಡಿದ ಎಲ್ಲ ತಂತ್ರಜ್ಞರು, ನಟ-ನಟಿಯರು ಮತ್ತು ಇತರೆ ಸಿಬ್ಬಂದಿಗಳಿಗೆ ಚಿನ್ನದ ಉಂಗುರ ಕೊಟ್ಟಿದ್ದರು. ಸಾಮಾನ್ಯ ಲೈಟ್ ಬಾಯ್ ಇಂದ ಹಿಡಿದು ಎಲ್ಲರಿಗೂ ಚಿನ್ನದ ಉಂಗುರಗಳನ್ನು ವಿಜಯ್ ಅವರು ಕೊಟ್ಟಿದ್ದರು. ಆ ಚಿನ್ನದ ಉಂಗುರಗಳ ಚಿತ್ರಗಳನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಆಗ ಹಂಚಿಕೊಂಡಿದ್ದರು.

ಈಗ ವಿಜಯ್ ಸಿಎಂ ಆಗಿದ್ದಾರೆ. ಚುನಾವಣೆಗೆ ಮುಂಚೆ ಅವರ ಟಿವಿಕೆ ಪಕ್ಷದಿಂದ ಹೊರತಂದಿದ್ದ ಪ್ರಣಾಳಿಕೆಯಲ್ಲೂ ಸಹ ಅವರು ಮಹಿಳೆಯರಿಗೆ ಚಿನ್ನದ ಆಭರಣಗಳನ್ನು ನೀಡುವ ಭರವಸೆಯನ್ನು ನೀಡಿದ್ದಾರೆ. ಮದುವೆ ಆಗುವ ಪ್ರತಿ ಮಹಿಳೆಗೆ 8 ಗ್ರಾಂ ಚಿನ್ನವನ್ನು ನೀಡುವುದಾಗಿ ವಿಜಯ್ ಅವರು ಭರವಸೆ ನೀಡಿದ್ದಾರೆ. ಇದರ ಜೊತೆಗೆ ವರ್ಷಕ್ಕೆ ಆರು ಉಚಿತ ಸಿಲಿಂಡರ್, ತಿಂಗಳಿಗೆ 2500 ರೂಪಾಯಿ ಹಣ. ಮಹಿಳಾ ಸುರಕ್ಷತೆಗಾಗಿ ವಿಶೇಷ ದಳ ಹೀಗೆ ಹಲವು ಭರವಸೆಗಳನ್ನು ಅವರು ನೀಡಿದ್ದಾರೆ. ಇದೆಲ್ಲವನ್ನೂ ಈಡೇರಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಫ್ಯಾಟಿ ಲಿವರ್ ಸಮಸ್ಯೆ ಇದ್ದರೆ ಈ ಅಂಗಗಳು ಕೆಲಸ ಮಾಡುವುದನ್ನು ನಿಲ್ಲಸಬಹುದು ಹುಷಾರ್! – Kannada News | Systemic Effects of Fatty Liver: From Metabolism to Brain Health

ಇತ್ತೀಚಿನ ದಿನಗಳಲ್ಲಿ ಫ್ಯಾಟಿ ಲಿವರ್ (Fatty Liver) ಸಮಸ್ಯೆ ವೇಗವಾಗಿ ಹೆಚ್ಚುತ್ತಿರುವುದು ಕಂಡುಬರುತ್ತಿದೆ. ಆರಂಭಿಕ ಹಂತದಲ್ಲಿ ಹೆಚ್ಚಿನ ಲಕ್ಷಣಗಳು ಕಾಣಿಸದ ಕಾರಣ ಅನೇಕರು ಇದನ್ನು ಸಾಮಾನ್ಯ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ತಜ್ಞರ ಪ್ರಕಾರ, ಫ್ಯಾಟಿ ಲಿವರ್ ಕೇವಲ ಯಕೃತ್ತಿನ ಸಮಸ್ಯೆಯಲ್ಲ; ಇದು ದೇಹದ ಇತರ ಪ್ರಮುಖ ಅಂಗಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ವೈದ್ಯರ ಪ್ರಕಾರ, ಯಕೃತ್ತಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಕೊಬ್ಬು ಜಮೆಯಾಗುವುದನ್ನು ಫ್ಯಾಟಿ ಲಿವರ್ ಎಂದು ಕರೆಯಲಾಗುತ್ತದೆ. ಯಕೃತ್ತು ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕುವುದು, ಜೀರ್ಣಕ್ರಿಯೆಗೆ ಸಹಾಯ ಮಾಡುವುದು ಹಾಗೂ ದೇಹದ ಶಕ್ತಿಯನ್ನು ಸಮತೋಲನದಲ್ಲಿ ಇಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದರೆ ಈ ಯಕೃತ್ತಿನ ಕಾರ್ಯಕ್ಷಮತೆ ಕುಂದಿದಾಗ ದೇಹದ ಇತರ ಅಂಗಗಳ ಮೇಲೂ ಪರಿಣಾಮ ಕಾಣಿಸಿಕೊಳ್ಳಬಹುದು. ಹಾಗಾದರೆ ಈ ಸಮಸ್ಯೆ ಯಾವ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ, ಫ್ಯಾಟಿ ಲಿವರ್ ಸಮಸ್ಯೆಯನ್ನು ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಯಾವ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ?

ಲೇಡಿ ಹಾರ್ಡಿಂಗ್ ಆಸ್ಪತ್ರೆಯ ಮೆಡಿಸಿನ್ ವಿಭಾಗದ ನಿರ್ದೇಶಕ ಡಾ. ಎಲ್.ಎಚ್. ಘೋಟೇಕರ್ ಹೇಳುವ ಪ್ರಕಾರ, ಫ್ಯಾಟಿ ಲಿವರ್ ಸಮಸ್ಯೆಯಿಂದ ಹೃದಯ, ಮೂತ್ರಪಿಂಡ, ಪ್ಯಾಂಕ್ರಿಯಾಸ್ ಮತ್ತು ದೇಹದ ಮೆಟಾಬಾಲಿಸಂ ಮೇಲೂ ದುಷ್ಪರಿಣಾಮ ಉಂಟಾಗಬಹುದು. ಜೊತೆಗೆ ಫ್ಯಾಟಿ ಲಿವರ್ ಇರುವವರಲ್ಲಿ ಹೈ ಬ್ಲಡ್ ಪ್ರೆಶರ್, ಕೊಲೆಸ್ಟ್ರಾಲ್ ಹೆಚ್ಚಳ, ಇನ್ಸುಲಿನ್ ರೆಸಿಸ್ಟೆನ್ಸ್ ಹಾಗೂ ಟೈಪ್- 2 ಮಧುಮೇಹದ ಅಪಾಯ ಹೆಚ್ಚಾಗುತ್ತದೆ. ಯಕೃತ್ತು ಸರಿಯಾಗಿ ಕೆಲಸ ಮಾಡದಿದ್ದರೆ ದೇಹದಲ್ಲಿ ಉರಿಯೂತ ಹೆಚ್ಚಾಗಿ ಹೃದಯ ಮತ್ತು ರಕ್ತನಾಳಗಳ ಆರೋಗ್ಯಕ್ಕೂ ಹಾನಿಯಾಗಬಹುದು. ಕೆಲವೊಮ್ಮೆ ಮೂತ್ರಪಿಂಡದ ಕಾರ್ಯಕ್ಷಮತೆಯೂ ಕುಂದಬಹುದು. ಪ್ಯಾಂಕ್ರಿಯಾಸ್ ಮೇಲೆ ಪರಿಣಾಮ ಬಿದ್ದರೆ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ ಕಷ್ಟವಾಗಬಹುದು. ಸಮಸ್ಯೆ ಗಂಭೀರವಾದರೆ ಲಿವರ್ ಉರಿಯೂತ, ಫೈಬ್ರೋಸಿಸ್, ಸಿರೋಸಿಸ್ ಮತ್ತು ಲಿವರ್ ಫೇಲ್ಯರ್ ಅಪಾಯವೂ ಎದುರಾಗಬಹುದು.

ಇದನ್ನೂ ಓದಿ: ಈ ಆಹಾರಗಳನ್ನು ಸೇವನೆ ಮಾಡ್ತೀರಾ? ಹಾಗಿದ್ರೆ ಫ್ಯಾಟಿ ಲಿವರ್ ಸಮಸ್ಯೆ ಬರುತ್ತೆ ಹುಷಾರ್!

ಫ್ಯಾಟಿ ಲಿವರ್ ತಡೆಗಟ್ಟಲು ಏನು ಮಾಡಬೇಕು?

ಆರೋಗ್ಯಕರ ಆಹಾರ ಪದ್ಧತಿ ಮತ್ತು ನಿಯಮಿತ ವ್ಯಾಯಾಮ ಅತ್ಯಂತ ಮುಖ್ಯ. ಹೆಚ್ಚು ಎಣ್ಣೆ, ಸಕ್ಕರೆ, ಜಂಕ್ ಫುಡ್ ಮತ್ತು ಪ್ರೊಸೆಸ್ಡ್ ಆಹಾರವನ್ನು ಕಡಿಮೆ ಮಾಡಬೇಕು. ಹಣ್ಣು, ತರಕಾರಿ, ಧಾನ್ಯಗಳು ಮತ್ತು ಪ್ರೋಟೀನ್‌ಯುಕ್ತ ಆಹಾರ ಸೇವನೆ ಮಾಡಬೇಕು. ಪ್ರತಿದಿನ ಕನಿಷ್ಠ 30 ನಿಮಿಷ ವ್ಯಾಯಾಮ ಮಾಡುವುದು, ಸಾಕಷ್ಟು ನೀರು ಕುಡಿಯುವುದು ಮತ್ತು ತೂಕ ನಿಯಂತ್ರಣದಲ್ಲಿಡುವುದು ಅಗತ್ಯ. ಜೊತೆಗೆ ಧೂಮಪಾನ ಹಾಗೂ ಮದ್ಯಪಾನದಿಂದ ದೂರವಿರುವುದು ಲಿವರ್ ಆರೋಗ್ಯಕ್ಕೆ ಸಹಕಾರಿ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಮೆರಿಕಕ್ಕೆ ಇರಾನ್‌ನಿಂದ ‘ಸರ್ಪ್ರೈಸ್ ಅಟ್ಯಾಕ್’ ಎಚ್ಚರಿಕೆ: ಹಾರ್ಮುಜ್ ಜಲಸಂಧಿಯಲ್ಲಿ ಹೆಚ್ಚಿದ ಉದ್ವಿಗ್ನತೆ – Kannada News | Iran warns of surprise attack on US if it shows aggression in Hormuz Strait

ಟೆಹ್ರಾನ್, ಮೇ 10: ಅಮೆರಿಕವು ತನ್ನ ಮೇಲೆ ಯಾವುದೇ ರೀತಿಯ ಆಕ್ರಮಣಕಾರಿ ಧೋರಣೆ ತೋರಿದರೆ “ಸರ್ಪ್ರೈಸ್ ಅಟ್ಯಾಕ್” (ದಿಢೀರ್ ದಾಳಿ) ನಡೆಸಲಾಗುವುದು ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಎಚ್ಚರಿಕೆ ನೀಡಿದೆ. ಹಾರ್ಮುಜ್ ಜಲಸಂಧಿಯ (Strait of Hormuz) ನಿಯಂತ್ರಣದ ವಿಚಾರವಾಗಿ ಉಭಯ ದೇಶಗಳ ನಡುವೆ ಸಂಘರ್ಷ ತೀವ್ರಗೊಂಡಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಅಮೆರಿಕದ ಪಡೆಗಳು ಹಾರ್ಮುಜ್ ಜಲಸಂಧಿಯನ್ನು ಪ್ರವೇಶಿಸಲು ಅಥವಾ ಇರಾನ್‌ನ ಹಿತಾಸಕ್ತಿಗಳಿಗೆ ಧಕ್ಕೆ ತರಲು ಪ್ರಯತ್ನಿಸಿದರೆ, ಇರಾನ್ ತನ್ನಲ್ಲಿರುವ ಹೊಸ ತಂತ್ರಜ್ಞಾನದ ಶಸ್ತ್ರಾಸ್ತ್ರಗಳನ್ನು ಬಳಸಿ ಅನಿರೀಕ್ಷಿತ ದಾಳಿ ನಡೆಸಲಿದೆ ಎಂದು ಇರಾನ್ ಸೇನೆ ಹೇಳಿದೆ. ಹೊಸ ಶಸ್ತ್ರಾಸ್ತ್ರಗಳ ಬಳಕೆ ಮಾತ್ರವಲ್ಲ, ಹೊಸ ತಂತ್ರಗಾರಿಕೆಯನ್ನೂ ಈ ಪ್ರತಿದಾಳಿಯಲ್ಲಿ ಅಳವಡಿಸಲಾಗುವುದು ಎಂದು ಐಆರ್​ಜಿಸಿ ಹೇಳಿದೆ.

ಇದನ್ನೂ ಓದಿ: ಯುದ್ಧ ಕೊನೆಗೊಳಿಸಲು ಇರಾನ್ ಮುಂದೆ ಹೊಸ ಕದನವಿರಾಮದ ಪ್ರಸ್ತಾಪವಿಟ್ಟ ಟ್ರಂಪ್

‘ಇರಾನ್​ನ ತೈಲ ಹಡಗುಗಳು ಮತ್ತು ಕಮರ್ಷಿಯಲ್ ಹಡಗುಗಳ ಮೇಲೆ ಯಾವುದೇ ಆಕ್ರಮಣವಾದಲ್ಲಿ ಗಲ್ಫ್ ಪ್ರದೇಶದಲ್ಲಿರುವ ಅಮೆರಿಕನ್ ಕೇಂದ್ರಗಳು ಹಾಗೂ ಶತ್ರು ಹಡಗುಗಳ ಮೇಲೆ ಭಾರೀ ಪ್ರಹಾರ ಮಾಡುತ್ತೇವೆ’ ಎಂದು ಐಆರ್​ಜಿಸಿಯ ನೇವಿ ಕಮಾಂಡ್ ಎಚ್ಚರಿಕೆ ಕೊಟ್ಟಿದೆ.

‘ಈ ಪ್ರದೇಶದಲ್ಲಿ ಅಮೆರಿಕದ ಗುರಿಗಳ ಮೇಲೆ ಲಾಕ್ ಮಾಡಿದ್ದೇವೆ. ಹೊಡೆಯುವ ಆದೇಶಕ್ಕಾಗಿ ಕಾಯುತ್ತಿದ್ದೇವೆ’ ಎಂದು ಐಆರ್​ಜಿಸಿಯ ವಾಯು ವಿಭಾಗವು ಹೇಳಿದೆ.

ಜಗತ್ತಿನ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯ ಮೇಲೆ ತನಗೆ ಸಂಪೂರ್ಣ ಹಕ್ಕಿದೆ ಎಂದು ಇರಾನ್ ಪ್ರತಿಪಾದಿಸಿದೆ. ಅಮೆರಿಕ ಬೆಂಬಲದ ಹಡಗುಗಳು ಈ ಮಾರ್ಗದಲ್ಲಿ ಸಂಚರಿಸುವುದನ್ನು ತಡೆಯಲು ಇರಾನ್ ಸಮುದ್ರದಲ್ಲಿ ಮೈನ್‌ಗಳನ್ನು (Mines) ಅಳವಡಿಸಿದೆ ಎಂಬ ವರದಿಗಳಿವೆ.

ಇದನ್ನೂ ಓದಿ: ಜಾಗತಿಕ ತೈಲ ಸಂಕಷ್ಟದ ನಡುವೆ ಇಂಧನ ಬಳಕೆ ಕಡಿತಕ್ಕೆ ಮೋದಿ ಕರೆ: ಚಿನ್ನ ಖರೀದಿ ತಪ್ಪಿಸುವಂತೆಯೂ ಮನವಿ

ಅಮೆರಿಕದ ‘ಪ್ರಾಜೆಕ್ಟ್ ಫ್ರೀಡಂ’

ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ಪ್ರಾಜೆಕ್ಟ್ ಫ್ರೀಡಂ’ ಆರಂಭಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಇರಾನ್ ತನ್ನ ಕ್ಷಿಪಣಿಗಳನ್ನು ಸನ್ನದ್ಧವಾಗಿರಿಸಿದೆ.

ಫೆಬ್ರವರಿ ಕೊನೆಯ ವಾರದಲ್ಲಿ ಆರಂಭವಾಗಿರುವ ಈ ಸಂಘರ್ಷದಿಂದಾಗಿ ಜಾಗತಿಕವಾಗಿ ತೈಲ ಬೆಲೆಗಳು ಗಗನಕ್ಕೇರಿವೆ. ಯುದ್ಧ ಅಂತ್ಯಗೊಳಿಸಲು ಎರಡೂ ದೇಶಗಳು ಇಚ್ಛಿಸಿವೆಯಾದರೂ, ಅನುಮಾನ ಮತ್ತು ಎಚ್ಚರಿಕೆಯಿಂದ ಹೆಜ್ಜೆಗಳನ್ನಿಡುತ್ತಿವೆ. ಹೀಗಾಗಿ, ಶಾಂತಿ ಒಪ್ಪಂದ ಏರ್ಪಡುವುದು ವಿಳಂಬವಾಗಿದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

RCB vs MI: W,W,W.. ಆರಂಭದಲ್ಲೇ ಮುಂಬೈಗೆ ಮರ್ಮಾಘಾತ ನೀಡಿದ ಭುವಿ – Kannada News | RCB vs MI IPL 2026: Bhuvneshwar Kumar Dismisses Rohit, Surya in Early Blitz

ಐಪಿಎಲ್ 2026 ರ 54ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈಗೆ, ಆರ್​ಸಿಬಿ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಮೊದಲ ಮೂರು ಓವರ್​ಗಳಲ್ಲೇ ಆಘಾತ ನೀಡಿದರು. ಆರ್​ಸಿಬಿ ಪರ ಬೌಲಿಂಗ್ ಆರಂಭಿಸಿದ ಭುವಿ, ಓವರ್​ನ ಕೊನೆಯ ಎಸೆತದಲ್ಲಿ ಮುಂಬೈ ಆರಂಭಿಕ ರಿಯಾನ್ ರಿಕಲ್ಟನ್ ಅವರ ವಿಕೆಟ್ ಉರುಳಿಸಿದರು. ರಿಕಲ್ಟನ್ ಕೇವಲ 2 ರನ್ ಬಾರಿಸಿ ಔಟಾದರು. ಆ ನಂತರ ಇನ್ನಿಂಗ್ಸ್​ನ ಮೂರನೇ ಓವರ್ ಎಸೆಯಲು ಬಂದ ಭುವಿ, ಈ ಓವರ್​ನ 5ನೇ ಎಸೆತದಲ್ಲಿ ರೋಹಿತ್ ಶರ್ಮಾ ಅವರ ವಿಕೆಟ್ ಪಡೆದರು. ಅದೇ ಓವರ್​ನ ಕೊನೆಯ ಎಸೆತದಲ್ಲಿ ಭುವಿಗೆ ಮತ್ತೊಂದು ವಿಕೆಟ್ ಸಿಕ್ಕಿತು. ರೋಹಿತ್ ವಿಕೆಟ್ ಬಳಿಕ ಬಂದಿದ್ದ ನಾಯಕ ಸೂರ್ಯಕುಮಾರ್ ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದರು. ಅಂದರೆ ಸೂರ್ಯ ಗೋಲ್ಡನ್ ಡಕ್​ಗೆ ಬಲಿಯಾದರು. ಈ ಮೂಲಕ ಭುವಿ ತಮ್ಮ ಖೋಟಾದ 2 ಓವರ್​ಗಳಲ್ಲಿ ಪ್ರಮುಖ 3 ವಿಕೆಟ್ ಉರುಳಿಸಿದರು.

Source link

ಜಾಗತಿಕ ತೈಲ ಸಂಕಷ್ಟದ ನಡುವೆ ಇಂಧನ ಬಳಕೆ ಕಡಿತಕ್ಕೆ ಮೋದಿ ಕರೆ: ಚಿನ್ನ ಖರೀದಿ ತಪ್ಪಿಸುವಂತೆಯೂ ಮನವಿ – Kannada News | PM Modi Urges Fuel Saving, Gold Purchase Halt Amidst Global Oil Crisis and Price Hike

ಹೈದರಾಬಾದ್, ಮೇ 10: ಪಶ್ಚಿಮ ಏಷ್ಯಾದ ಯುದ್ಧದಿಂದ ಉಂಟಾದ ಜಾಗತಿಕ ತೈಲ ಸಂಕಷ್ಟದ ನಡುವೆ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಭೀತಿ ಹೆಚ್ಚುತ್ತಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ (Narendra Modi) ದೇಶದ ಜನತೆಗೆ ಇಂಧನ ಉಳಿತಾಯದ ಕರೆ ನೀಡಿದ್ದಾರೆ. ವರ್ಕ್ ಫ್ರಾಂ ಹೋಂ ಪದ್ಧತಿಯನ್ನು ಮತ್ತೆ ಆರಂಭಿಸುವುದು, ಪೆಟ್ರೋಲ್-ಡೀಸೆಲ್ ಬಳಕೆಯನ್ನು ಕಡಿಮೆ ಮಾಡುವುದು ಹಾಗೂ ಒಂದು ವರ್ಷ ಮದುವೆಗಳಿಗೆ ಚಿನ್ನ ಖರೀದಿಸದಿರುವಂತೆ ಅವರು ಮನವಿ ಮಾಡಿದ್ದಾರೆ.

ಇಂಧನ ಬಳಕೆ ಕಡಿತಕ್ಕೆ ಕರೆ

ಹೈದರಾಬಾದ್‌ನ ಪರೇಡ್ ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಾದ ಮೆಟ್ರೋ ಮತ್ತು ಬಸ್‌ಗಳನ್ನು ಜನರು ಹೆಚ್ಚು ಬಳಸಬೇಕು. ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಒತ್ತು ನೀಡಬೇಕು. ವರ್ಕ್ ಫ್ರಾಂ ಹೋಂನಂತಹ ಕ್ರಮಗಳಿಂದ ಇಂಧನ ಉಳಿತಾಯ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಬ್ಲಾಸ್ಟ್​​ ಬೆದರಿಕೆ, ಜಿಲೆಟಿನ್​​ ಪತ್ತೆ; ಪ್ರಧಾನಿ ಮೋದಿ ಬೆಂಗಳೂರು ಭೇಟಿ ವೇಳೆ ಖಾಕಿಗೆ ಟೆನ್ಷನ್​​ ತಂದ ಭದ್ರತೆ

ದೇಶದ ಜನರಿಗೆ ಮೋದಿ ಕಿವಿಮಾತು

ದೇಶದ ವಿದೇಶಿ ವಿನಿಮಯ ಸಂಗ್ರಹ ಉಳಿಸಲು ಜನರು ಒಂದು ವರ್ಷ ಚಿನ್ನ ಖರೀದಿ ತಪ್ಪಿಸುವಂತೆ ಸಲಹೆ ನೀಡಿದ ಅವರು, ದೇಶದಲ್ಲಿ ತಾಮ್ರದ ಕೊರತೆ ಕೂಡ ಹೆಚ್ಚಾಗಿರುವುದರಿಂದ ಸಂಪನ್ಮೂಲಗಳನ್ನು ಮಿತವಾಗಿ ಬಳಸಬೇಕು ಎಂದಿದ್ದಾರೆ. ಅಲ್ಲದೆ ಅತಿರೇಕದ ಖರ್ಚು ಮತ್ತು ವೈಭವ ಪ್ರದರ್ಶನದಿಂದ ದೂರವಿರಬೇಕು ಎಂದು ಮಧ್ಯಮ ವರ್ಗಕ್ಕೆ ಕಿವಿ ಮಾತು ಹೇಳಿದ ಪ್ರಧಾನಿ, ಸದ್ಯದ ಸಂಕಷ್ಟದ ಸಮಯದಲ್ಲಿ ವಿದೇಶ ಪ್ರವಾಸಗಳನ್ನು ಕಡಿಮೆ ಮಾಡಿದರೆ ದೇಶದ ಸಂಪತ್ತು ಹೊರಹೋಗುವುದನ್ನು ತಡೆಯಬಹುದು ಎಂದು ಹೇಳಿದ್ದಾರೆ.

ವಿಪಕ್ಷಗಳ ವಿರುದ್ಧವೂ ವಾಗ್ದಾಳಿ

ಇದೇ ವೇಳೆ ಕಾಂಗ್ರೆಸ್ ಮತ್ತು ಟಿಎಂಸಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮೋದಿ, ದೇಶದಲ್ಲಿ ಕಾಂಗ್ರೆಸ್ ಆಡಳಿತ ಇರುವ ಎಲ್ಲೆಡೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ದೇಶದಲ್ಲಿ ಕೇವಲ ಮೂರು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಸುಳ್ಳಿನ ರಾಜಕಾರಣ ನಡೆಸುತ್ತಿದೆ ಎಂದು ಟೀಕಿಸಿದ್ದಾರೆ. ಪಶ್ಚಿಮ ಬಂಗಾಳದ ಜನರು ಟಿಎಂಸಿ ಹಾಗೂ ಎಡಪಕ್ಷಗಳನ್ನು ತಿರಸ್ಕರಿಸಿ ಮಮತಾ ಬ್ಯಾನರ್ಜಿ ಅವರ ಸರ್ವಾಧಿಕಾರಕ್ಕೆ ತಿರುಗೇಟು ನೀಡಿದೆ. ದೇಶದಾದ್ಯಂತ ಬಿಜೆಪಿ ವಿಸ್ತರಿಸುತ್ತಿದ್ದು, ಕುಟುಂಬ ರಾಜಕಾರಣಕ್ಕಿಂತ ಜನರು ನಂಬಿಕೆಯ ರಾಜಕಾರಣಕ್ಕೆ ಬೆಂಬಲ ನೀಡುತ್ತಿದ್ದಾರೆ. ಒಮ್ಮೆ ಪಕ್ಷದ ಕಾರ್ಯಕರ್ತರೇ ಇಲ್ಲದಿದ್ದ ಪಶ್ಚಿಮ ಬಂಗಾಳದಲ್ಲಿಯೂ ಈಗ ಬಿಜೆಪಿ ಸರ್ಕಾರ ಬಂದಿದೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 8:44 pm, Sun, 10 May 26

Source link

CSK vs LSG: ಪ್ಲೇಆಫ್​ನಿಂದ ಅಧಿಕೃತವಾಗಿ ಹೊರಬಿದ್ದ ಲಕ್ನೋ; 5ನೇ ಸ್ಥಾನಕ್ಕೇರಿದ ಸಿಎಸ್​ಕೆ – Kannada News | IPL 2026: CSK Dominates LSG with Urvil Patel’s Fastest 50; Playoff Dream Alive!

ಐಪಿಎಲ್ 2026 ರ 53 ನೇ ಪಂದ್ಯದಲ್ಲಿ ಪ್ರಾಬಲ್ಯ ಮೆರೆದ ಚೆನ್ನೈ ಸೂಪರ್ ಕಿಂಗ್ಸ್ ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮಣಿಸಿ ಪ್ಲೇಆಫ್​ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಇದು ಈ ಆವೃತ್ತಿಯಲ್ಲಿ ಸಿಎಸ್​ಕೆ ತಂಡದ 5ನೇ ಗೆಲುವಾಗಿದ್ದು, ಪಾಯಿಂಟ್ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಇತ್ತ ಲಕ್ನೋ ತಂಡದ ಈ ಸೋಲಿನೊಂದಿಗೆ 10ನೇ ಸ್ಥಾನದಲ್ಲೇ ಉಳಿಯುವುದರ ಜೊತೆಗೆ ಪ್ಲೇ ಆಫ್​ ರೇಸ್​ನಿಂದ ಅಧಿಕೃತವಾಗಿ ಹೊರಬಿದ್ದಿದೆ. ಅಂದರೆ ಲೀಗ್ ಹಂತದಲ್ಲೇ ತನ್ನ ಪ್ರಯಾಣ ಮುಗಿಸಿದ ಮೊದಲ ತಂಡವಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ 203 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಸಿಎಸ್​ಕೆ ಕೊನೆಯ ಓವರ್​ನಲ್ಲಿ ಗೆಲುವು ದಾಖಲಿಸಿತು.

ಲಕ್ನೋಗೆ ಸ್ಫೋಟಕ ಆರಂಭ

ಈ ಪಂದ್ಯದಲ್ಲಿ, ಟಾಸ್ ಗೆದ್ದು ಚೆನ್ನೈ ಸೂಪರ್ ಕಿಂಗ್ಸ್ ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ಉತ್ತಮ ಆರಂಭವನ್ನು ಪಡೆಯಿತು. ಆರಂಭಿಕ ಜೋಶ್ ಇಂಗ್ಲಿಸ್ ಕೇವಲ 33 ಎಸೆತಗಳಲ್ಲಿ 10 ಬೌಂಡರಿ ಮತ್ತು 6 ಸಿಕ್ಸರ್‌ಗಳೊಂದಿಗೆ 85 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಆದರೆ ಅವರಿಗೆ ಇತರ ಆಟಗಾರರಿಂದ ಅಗತ್ಯ ಬೆಂಬಲ ಸಿಗಲಿಲ್ಲ. ಮಿಚೆಲ್ ಮಾರ್ಷ್ 10, ನಿಕೋಲಸ್ ಪೂರನ್ 1, ರಿಷಭ್ ಪಂತ್ 15, ಐಡೆನ್ ಮಾರ್ಕ್ರಾಮ್ 6, ಅಕ್ಷತ್ ರಘುವಂಶಿ 18, ಹಿಮ್ಮತ್ ಸಿಂಗ್ 17 ಮತ್ತು ಮೊಹಮ್ಮದ್ ಶಮಿ 0 ರನ್ ಗಳಿಸಿ ಔಟಾದರು. ಶಹಬಾಜ್ ಅಹ್ಮದ್ 25 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ ಅಜೇಯ 43 ರನ್ ಗಳಿಸಿದರು. ಚೆನ್ನೈ ಸೂಪರ್ ಕಿಂಗ್ಸ್ ಪರ ಜೇಮೀ ಓವರ್ಟನ್ 4 ಓವರ್‌ಗಳಲ್ಲಿ 36 ರನ್‌ಗಳಿಗೆ 3 ವಿಕೆಟ್ ಪಡೆದರೆ, ಅನ್ಶುಲ್ ಕಾಂಬೋಜ್ 2 ಮತ್ತು ನೂರ್ ಅಹ್ಮದ್ 1 ವಿಕೆಟ್ ಪಡೆದರು.

ಉರ್ವಿಲ್ ಸಿಡಿಲಬ್ಬರ

ಈ ಗುರಿ ಬೆನ್ನಟ್ಟಿದ ಚೆನ್ನೈ ಪರ, ಸಂಜು ಸ್ಯಾಮ್ಸನ್ ಮತ್ತು ನಾಯಕ ರುತುರಾಜ್ ಗಾಯಕ್ವಾಡ್ ಕೂಡ ಆಕ್ರಮಣಕಾರಿ ಆರಂಭವನ್ನು ನೀಡಿದರು, ನಾಲ್ಕನೇ ಓವರ್ ವೇಳೆಗೆ ತಂಡವನ್ನು 50 ರನ್‌ಗಳ ಹತ್ತಿರಕ್ಕೆ ತಂದರು. ಆದರೆ ಮೊದಲ ವಿಕೆಟ್ ಪತನದ ನಂತರ, ಉರ್ವಿಲ್ ಪಟೇಲ್ ಆಗಮನದೊಂದಿಗೆ ನಿಜವಾದ ಬಿರುಗಾಳಿ ಆರಂಭವಾಯಿತು. ತಮ್ಮ ಮೊದಲ ಎಸೆತದಲ್ಲಿ ಸಿಂಗಲ್ ಪಡೆದ ನಂತರ, ಉರ್ವಿಲ್ ಮುಂದಿನ ಏಳು ಎಸೆತಗಳಲ್ಲಿ ಆರು ಸಿಕ್ಸರ್‌ಗಳು ಮತ್ತು ಒಂದು ಬೌಂಡರಿ ಬಾರಿಸಿದರು. ಈ ಸಿಕ್ಸರ್‌ಗಳಲ್ಲಿ ಐದು, ಸತತ ಐದು ಎಸೆತಗಳಲ್ಲಿ ಬಂದವು. ಹೀಗಾಗಿ ಉರ್ವಿಲ್ ಕೇವಲ 13 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಯಶಸ್ವಿ ಜೈಸ್ವಾಲ್ ಅವರ ವೇಗದ ಅರ್ಧಶತಕದ ದಾಖಲೆಯನ್ನು ಸರಿಗಟ್ಟಿದರು.

ಕೊನೆಯ ಓವರ್​ನಲ್ಲಿ ಗೆದ್ದ ಸಿಎಸ್​ಕೆ

ಉರ್ವಿಲ್ ಪಟೇಲ್ ಕ್ರೀಸ್​ನಲ್ಲಿರುವವರೆಗೂ, ಚೆನ್ನೈ ತಂಡವು ಆರಾಮದಾಯಕ ಗೆಲುವಿನತ್ತ ಸಾಗುವ ಲಕ್ಷಣ ತೋರುತ್ತಿತ್ತು. ಆದಾರೆ ಅವರ ವಿಕೆಟ್‌ ಪತನದ ಬಳಿಕ ತಂಡದ ರನ್ ವೇಗವೂ ನಿಧಾನವಾಯಿತು. ಇಲ್ಲಿಂದ ಲಕ್ನೋ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದಂತೆ ತೋರುತ್ತಿತ್ತು. ಅಂತಿಮ ಓವರ್‌ನಲ್ಲಿ ಚೆನ್ನೈ ಗೆಲ್ಲಲು 10 ರನ್‌ಗಳು ಬೇಕಾಗಿದ್ದವು, ಆದರೆ ರಿಷಭ್ ಪಂತ್ ಚೆಂಡನ್ನು ಶಿವಂ ದುಬೆ ಮುಂದೆ ಸ್ಪಿನ್ನರ್ ಐಡೆನ್ ಮಾರ್ಕ್ರಾಮ್‌ಗೆ ಹಸ್ತಾಂತರಿಸಿದರು. ದುಬೆ ಸತತ ಎರಡು ಸಿಕ್ಸರ್‌ಗಳನ್ನು ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:19 pm, Sun, 10 May 26

Source link

ವಿಶ್ವ ದಾಖಲೆ ಬರೆಯುತ್ತದೆಯೇ ‘ಮೈಖಲ್’ ಸಿನಿಮಾ: ಗಳಿಸಿರುವುದೆಷ್ಟು? ಗಳಿಸಬೇಕಾದ್ದೆಷ್ಟು? – Kannada News | Michael movie collects 570 million dolor will beat Avatar

ವಿಶ್ವದ ನಂಬರ್ 1 ಪಾಪ್ ಸ್ಟಾರ್, ಎಂಟರ್ಟೈನರ್ ಎಂದೇ ಕರೆಯಲಾಗುವ ದಿವಂಗತ ಮೈಖಲ್ ಜಾಕ್ಸನ್ (Michael) ಜೀವನ ಆಧರಿಸಿದ ‘ಮೈಖಲ್’ ಸಿನಿಮಾ ಮೂರು ವಾರಗಳ ಹಿಂದೆ ವಿಶ್ವದಾದ್ಯಂತ ಬಿಡುಗಡೆ ಆಗಿದೆ. ಮೊದಲ ದಿನ ವಿಮರ್ಶಕರಿಂದ ಧನಾತ್ಮಕ ವಿಮರ್ಶೆಗಳನ್ನು ಗಳಿಸದೇ ಇದ್ದರು, ಪ್ರೇಕ್ಷಕರು ಮಾತ್ರ ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ. ಮೈಖಲ್ ಜಾಕ್ಸನ್ ಅಭಿಮಾನಿಗಳು ವಿಶ್ವದಾದ್ಯಂತ ಇದ್ದು, ಎಲ್ಲೆಡೆ ಈ ಸಿನಿಮಾ ಉತ್ತಮ ಗಳಿಕೆ ಮಾಡುತ್ತಿದೆ. ಈ ಸಿನಿಮಾ ಸಾರ್ವಕಾಲಿಕ ಬಾಕ್ಸ್ ಆಫೀಸ್ ರೆಕಾರ್ಡ್ ಅನ್ನು ಮುರಿಯುವ ಸಾಧ್ಯತೆ ಇದೆ ಎಂದು ಕೆಲ ಬಾಕ್ಸ್ ಆಫೀಸ್ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

‘ಮೈಖಲ್’ ಸಿನಿಮಾ ಬಿಡುಗಡೆ ಆದ ಮೂರು ವಾರಗಳಲ್ಲಿ 570 ಮಿಲಿಯನ್​​ಗೂ ಹೆಚ್ಚು ಹಣವನ್ನು ಗಳಿಕೆ ಮಾಡಿದೆ. ಅಂದರೆ ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಈ ಸಿನಿಮಾ ಈಗಾಗಲೇ 5300 ಕೋಟಿಗೂ ಹೆಚ್ಚು ಮೊತ್ತವನ್ನು ಗಳಿಸಿದೆ. ಆದರೆ ಸಾರ್ವಕಾಲಿಕ ಬಾಕ್ಸ್ ಆಫೀಸ್ ದಾಖಲೆಯನ್ನು ಮುರಿಯಲು ಸಿನಿಮಾ ಇನ್ನೂ ಸಾಕಷ್ಟು ಮೊತ್ತ ಗಳಿಸಬೇಕಿದೆ. ಅದು ಅಷ್ಟು ಸುಲಭವಲ್ಲ.

ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಈ ವರೆಗೆ ಅತಿ ಹೆಚ್ಚು ಹಣ ಗಳಿಸಿರುವ ಸಿನಿಮಾ 2009 ರಲ್ಲಿ ಬಿಡುಗಡೆ ಆಗಿರುವ ‘ಅವತಾರ್’ ಆ ಸಿನಿಮಾ 2.97 ಬಿಲಿಯನ್ ಡಾಲರ್​​ಗಳನ್ನು ಗಳಿಸಿದೆ. ಅಂದರೆ ಭಾರತೀಯ ಲೆಕ್ಕಾಚಾರದಲ್ಲಿ ಆ ಸಿನಿಮಾ 27 ಸಾವಿರ ಕೋಟಿಗೂ ಹೆಚ್ಚು ಮೊತ್ತವನ್ನು ಗಳಿಕೆ ಮಾಡಿದೆ. ಅದರ ನಂತರದ ಸ್ಥಾನದಲ್ಲಿರುವ ‘ಅವೇಂಜರ್ಸ್: ದಿ ಎಂಡ್​​ಗೇಮ್’ ಸಿನಿಮಾ ಸುಮಾರು 25 ಸಾವಿರ ಕೋಟಿ ಮೊತ್ತ ಗಳಿಸಿದೆ. ಈ ಸಿನಿಮಾಗಳನ್ನು ಹಿಂದಿಕ್ಕಲು ‘ಮೈಖಲ್’ ಸಿನಿಮಾ ಈಗ ಗಳಿಸಿರುವುದಕ್ಕಿಂತಲೂ ಆರು ಪಟ್ಟು ಹೆಚ್ಚು ಮೊತ್ತ ಗಳಿಸಬೇಕಿದೆ. ಅದು ಸುಲಭ ಸಾಧ್ಯವಲ್ಲ.

ಇದನ್ನೂ ಓದಿ:ಗರ್ಲ್​​ಫ್ರೆಂಡ್ ಜೊತೆಗೆ ಬಿಗ್​​ಬಾಸ್ ಮೈಖಲ್ ವರ್ಕೌಟ್?

‘ಮೈಖಲ್’ ಸಿನಿಮಾದ ಗಳಿಕೆ ದಿನೇ-ದಿನೇ ಹೆಚ್ಚಾಗುತ್ತಿದೆ. ಆದರೂ ಈಗಿನ ಗಳಿಕೆಯ ಆರು ಪಟ್ಟು ಮೊತ್ತವನ್ನು ಗಳಿಸುವುದು ಸುಲಭದ ಮಾತಲ್ಲ. ‘ಮೈಖಲ್’ ಸಿನಿಮಾ ಭಾರತದಲ್ಲಿ ಸಹ ಉತ್ತಮ ಗಳಿಕೆ ಮಾಡುತ್ತಿದ್ದು, ಮೂರು ವಾರಗಳಲ್ಲಿ ಭಾರತದಲ್ಲಿ 58 ಕೋಟಿ ರೂಪಾಯಿಗಳ ಗಳಿಕೆ ಮಾಡಿದೆ. ಇದು ಸಹ ದೊಡ್ಡ ಮೊತ್ತವೇನೂ ಅಲ್ಲ. ‘ಅವೇಂಜರ್ಸ್’, ‘ಸ್ಪೈಡರ್​​ಮ್ಯಾನ್’ ಸಿನಿಮಾಗಳು ಭಾರತದಲ್ಲಿ 200 ಕೋಟಿ ಗಳಿಸಿದ ಉದಾಹರಣೆ ಇದೆ.

‘ಮೈಖಲ್’ ಸಿನಿಮಾವು ಮೈಖಲ್ ಜಾಕ್ಸನ್ ಅವರ ಮೊದಲಾರ್ಧದ ಜೀವನದ ಕತೆಯನ್ನು ಒಳಗೊಂಡಿದೆ. ಮೈಖಲ್ ಪಾತ್ರದಲ್ಲಿ, ಮೈಖಲ್ ಜಾಕ್ಸನ್ ಅವರ ಸಹೋದರನ ಮಗ ಜಫ್ಪಾರ್ ಮೈಖಲ್ ನಟಿಸಿದ್ದಾರೆ. ಭಾರತೀಯ ಮೂಲದ ಪಾಪ್ ಗಾಯಕ ಪ್ರಿನ್ಸ್ ಅವರ ಜೀವನವನ್ನು ತೆರೆಗೆ ತಂದಿದ್ದ ಆಂಟೊನಿ ಫಕು ಅವರೇ ಈ ಸಿನಿಮಾವನ್ನೂ ನಿರ್ದೇಶಿಸಿದ್ದು, ಸಿನಿಮಾದ ಎರಡನೇ ಭಾಗವೂ ಸಹ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಯ್ಯೂಟೂಬೇ ಗುರು: ಬಿಸಿಲಿನ ಅಬ್ಬರದ ನಡುವೆ ಚಿಕ್ಕಬಳ್ಳಾಪುರದಲ್ಲಿ ಕಾಶ್ಮೀರಿ ಆ್ಯಪಲ್​​ ಬೆಳೆದ ರೈತ! – Kannada News | From YouTube to Orchard: Chikkaballapur Farmer Cultivates Kashmiri Apples Successfully

ಬೆಳೆದ ಬೆಳೆ ಜೊತೆ ರೈತImage Credit source: Tv9 Kannada

ಚಿಕ್ಕಮಗಳೂರು, ಮೇ 10: ಸೇಬು ಅಂದ ತಕ್ಷಣ ನಮಗೆ ನೆನಪಾಗೋದೇ ಕಾಶ್ಮೀರ. ಯಾಕೆಂದರೆ ಶೀತವಲಯದ ಪ್ರಮುಖ ಬೆಳೆಗಳಲ್ಲೊಂದಾದ ಸೇಬನ್ನು ಭಾರದಲ್ಲಿ ಹೆಚ್ಚಾಗಿ ಬೆಳೆಯುವ ರಾಜ್ಯಗಳೆಂದರೆ ಅವು ಹಿಮಾಚಲ ಪ್ರದೇಶ ಮತ್ತು ಜಮ್ಮು ಕಾಶ್ಮೀರ. ಆದರೆ ಜನರ ಈ ಅನಿಸಿಕೆಯನ್ನು ಸುಳ್ಳು ಮಾಡುವ ನಿಟ್ಟಿನಲ್ಲಿ ನಮ್ಮದೇ ಕರ್ನಾಟಕದ ರೈತರೊಬ್ಬರು ಗಮನ ಸೆಳೆದಿದ್ದಾರೆ. ರಾಜಧಾನಿ ಬೆಂಗಳೂರಿನ ಪಕ್ಕವೇ ಕಾಶ್ಮೀರಿ ಆ್ಯಪಲ್​​ ಬೆಳೆ ಬೆಳೆದು ಸೈ ಎನಿಸಿಕೊಂಡಿದ್ದಾರೆ.

ಮುಖ್ಯಾಂಶಗಳು

  • ಚಿಕ್ಕಬಳ್ಳಾಪುರದಲ್ಲಿ ಕಾಶ್ಮೀರಿ ಆ್ಯಪಲ್​​ ಬೆಳೆದ ರೈತ
  • ಅಡ್ಡಗಲ್ಲದ ವ್ಯಕ್ತಿಯೋರ್ವರಿಂದ ವಿಶಿಷ್ಠ ಸಾಧನೆ
  • ಬಿಸಲಿನ ಅಬ್ಬರದ ನಡುವೆಯೂ ಕೈ ಹಿಡಿದ ಬೆಳೆ

ಚಿಕ್ಕಬಳ್ಳಾಪುರ ತಾಲೂಕಿನ ಅಡ್ಡಗಲ್ಲ ಗ್ರಾಮದ ರೈತ ಅನಿಲ್ ಎನ್ನುವವರು ತನ್ನ ಒಂದು ಎಕರೆ ಜಮೀನಿನಲ್ಲಿ ಸೇಬು ಬೆಳೆ ಬೆಳೆದಿದ್ದಾರೆ. ಈ ಜಮೀನಿಲ್ಲಿ ಟೊಮ್ಯಾಟೋ ಸೇರಿದಂತೆ ಇತರ ತರಕಾರಿ ಬೆಳೆದಿದ್ದ ಅನಿಲ್,​​ ಈ ಹಿಂದೆ ಸಾಕಷ್ಟು ಬಾರಿ ಕೈಸುಟ್ಟುಕೊಂಡಿದ್ದರು. ಹೀಗಾಗಿ ಇದೇ ಬೆಳೆಯನ್ನು ಮತ್ತೆ ಬೆಳೆದು ನಷ್ಟ ಅನುಭವಿಸುವ ಬದಲು ಹೊಸತೇನನ್ನಾದರೂ ಮಾಡಬೇಕೆಂದು ಯೋಚಿಸಿದ್ದಾರೆ. ಅದರಂತೆ ಹೊಲದಲ್ಲಿ ಅವರು 400 ಆ್ಯಪಲ್​​ ಗಿಡಗಳನ್ನು ಹಾಕಿದ್ದು, ಅವುಗಳಲ್ಲೀಗ ಭರ್ಜರಿ ಫಸಲು ಬಂದಿದೆ.

ಇದನ್ನೂ ಓದಿ: ರಣಬಿಸಿಲಲ್ಲೂ ನಳನಳಿಸಿದ ‘ದಿಲ್ ಖುಷ್’; ವಿಶಿಷ್ಟ ತಳಿಯ ದ್ರಾಕ್ಷಿಗೆ ಭಾರೀ ಡಿಮ್ಯಾಂಡ್

ಯ್ಯೂಟೂಬೇ ಗುರು!

ಅಷ್ಟಕ್ಕೂ ಸೇಬು ಬೆಳೆ ಬೆಳೆಯೋದು ಹೇಗೆಂದು ಯೂಟ್ಯೂಬ್​​ ನೋಡಿ ರೈತ ಅನಿಲ್​​ ಗಿಡಗಳನ್ನು ಹಾಕಿದ್ದರು. ಜೊತೆಗೆ ಅಲ್ಲಿ ಸಿಕ್ಕ ಮಾಹಿತಿಯನ್ನು ಅಧರಿಸಿ ತುಮಕೂರು ಮೂಲಕ ಕೃಷಿ ಪದವಿಧರ ಶಶಿಕುಮಾರ್ ಮಾರ್ಗದರ್ಶನದಲ್ಲಿ ಆ್ಯಪಲ್​​ ಬೆಳೆದಿದ್ದಾರೆ. ಇಸ್ರೇಲ್ ಮೂಲದ ತಳಿಯ ಗಿಡಗಳನ್ನು ತರಿಸಿ ಪ್ರಯೋಗ ಮಾಡಿದ್ದು,  ಸೇಬಿನ ಫಸಲು ಉತ್ತಮವಾಗಿ ಬಂದಿದೆ. ಸದ್ಯ ಒಂದು ಗಿಡದಲ್ಲಿ ಹತ್ತು ಕೆಜಿಯಷ್ಟು ಬೆಳೆ ಬಂದಿದ್ದು, ಹಣ್ಣುಗಳನ್ನು ವರ್ತಕರಿಗೆ ಕೊಡುವುದರ ಬದಲು ಸಾರ್ವಜನಿಕರು ತೋಟಕ್ಕೆ ಬಂದು ಮನಸ್ಸೋ ಇಚ್ಚೆ ಕಿತ್ತುಕೊಂಡು ಹಣ ನೀಡುವಂತೆ ರೈತ ಅನಿಲ್​ ಮನವಿ ಮಾಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅಸ್ಸಾಂ ಮುಖ್ಯಮಂತ್ರಿಯಾಗಿ ಮತ್ತೊಮ್ಮೆ ಹಿಮಂತ ಬಿಸ್ವ ಶರ್ಮಾ ಆಯ್ಕೆ: ಮೇ 12ಕ್ಕೆ ಪ್ರಮಾಣ ವಚನ ಸ್ವೀಕಾರ – Kannada News | Himanta Biswa Sarma to be Assam CM for Second Term; Oath on May 12 After NDA Selects Leader

ಗುವಾಹಟಿ, ಮೇ 10: ಹಿಮಂತ ಬಿಸ್ವ ಶರ್ಮಾ (Himanta Biswa Sarma) ಅವರು ಎರಡನೇ ಬಾರಿಗೆ ಅಸ್ಸಾಂನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ. ಇಂದು ನಡೆದ ಎನ್‌ಡಿಎ (NDA) ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರನ್ನು ಸರ್ವಾನುಮತದಿಂದ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಹಿಮಂತ ಬಿಸ್ವ ಶರ್ಮಾ ಅವರು ಮೇ 12 ರಂದು ಅಸ್ಸಾಂನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಅಸ್ಸಾಮ್ ರಾಜಧಾನಿ ಗುವಾಹಟಿಯಲ್ಲಿ ಭಾನುವಾರ ನಡೆದ ಪ್ರಮುಖ ಸಭೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳಾದ ಎಜಿಪಿ (AGP) ಮತ್ತು ಯುಪಿಪಿಎಲ್ (UPPL) ಶಾಸಕರು ಶರ್ಮಾ ಅವರನ್ನು ತಮ್ಮ ನಾಯಕನೆಂದು ಘೋಷಿಸಿದರು. ಅಸ್ಸಾಂನಲ್ಲಿ ಬಿಜೆಪಿಯನ್ನು ಸತತವಾಗಿ ಎರಡನೇ ಬಾರಿಗೆ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶರ್ಮಾ ಅವರಿಗೆ ಹೈಕಮಾಂಡ್ ಮತ್ತೊಮ್ಮೆ ಮನ್ನಣೆ ನೀಡಿದೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ 10 ಲಕ್ಷ ಕೋಟಿ ರೂ ಸಾಲದ ಫಜೀತಿ; ಇಲ್ಲಿದೆ ಅತಿಹೆಚ್ಚು ಸಾಲ ಇರುವ ರಾಜ್ಯಗಳ ಪಟ್ಟಿ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಬಿಜೆಪಿ ಶಾಸಕಾಂಗ ಪಕ್ಷ ಹಾಗೂ ಎನ್​ಡಿಎ ಶಾಸಕಾಂಗ ಪಕ್ಷದ ಸಭೆ ನಡೆಸಿದರು. ಇದರಲ್ಲಿ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಹಿಮಂತ ಬಿಸ್ವ ಶರ್ಮಾ ಅವರ ಹೆಸರನ್ನು ಪ್ರಸ್ತಾಪಿಸಿ ಎಂಟು ನಿರ್ಣಯಗಳ ಸಲ್ಲಿಕೆಯಾಯಿತು. ರಂಜೀತ್ ಕುಮಾರ್ ದಾಸ್, ಬಿಸ್ವಜಿತ್ ದೈಮರಿ, ರಾಮೇಶ್ವರ್ ತೇಲಿ, ಅಶೋಕ್ ಸಿಂಘಾಲ್, ಪಿಜುಶ್ ಹಜಾರಿಕಾ ಮೊದಲಾದ ಹಿರಿಯ ನಾಯಕರು ಹಿಮಂತರ ಹೆಸರನ್ನು ಮುಂದಿಟ್ಟರು. ಸಭೆಯಲ್ಲಿದ್ದ ಬಹುತೇಕ ಎಲ್ಲಾ ಸದಸ್ಯರೂ ಈ ನಿರ್ಣಯಗಳನ್ನು ಬೆಂಬಲಿಸಿದರು. ಇದರೊಂದಿಗೆ ಹಿಮಂತ ಅವರು ಸರ್ವಾನುಮತದಿಂದ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದರು.

ಇತ್ತೀಚೆಗೆ ನಡೆದ ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು ಸ್ಪಷ್ಟ ಬಹುಮತವನ್ನು ಪಡೆದುಕೊಂಡಿತ್ತು. 126 ಕ್ಷೇತ್ರಗಳ ಪೈಕಿ ಎನ್​ಡಿಎ 102 ಸ್ಥಾನ ಗಳಿಸಿತು. ಈ ಮೈತ್ರಿಕೂಟದಲ್ಲಿ ಬಿಜೆಪಿಯೊಂದೇ 82 ಸ್ಥಾನ ಪಡೆದಿದೆ. ಎಜಿಪಿ ಮತ್ತು ಬಿಒಪಿಎಫ್ ತಲಾ 20 ಸ್ಥಾನ ಗಳಿಸಿವೆ.

ಇದನ್ನೂ ಓದಿ: ವಿಜಯ್ ಪ್ರಮಾಣವಚನ ಕಾರ್ಯಕ್ರಮದಲ್ಲಿ ಮೊದಲು ವಂದೇ ಮಾತರಂ, ನಂತರ ಜನಗಣಮನ, ತಮಿಳು ಗೀತೆ; ಇದು ಹೊಸ ಮೆಸೇಜಾ?

ಮೇ 12, ಮಂಗಳವಾರ ನಡೆಯುವ ಈ ಕಾರ್ಯಕ್ರಮದೊಂದಿಗೆ ಅಸ್ಸಾಂನಲ್ಲಿ ಹೊಸ ಸರ್ಕಾರದ ಆಡಳಿತ ಅಧಿಕೃತವಾಗಿ ಆರಂಭವಾಗಲಿದೆ. ರಾಜಕೀಯ ವಿಶ್ಲೇಷಕರ ಪ್ರಕಾರ, ಹಿಮಂತ ಬಿಸ್ವ ಶರ್ಮಾ ಅವರ ಆಡಳಿತ ವೈಖರಿ ಮತ್ತು ಈಶಾನ್ಯ ಭಾರತದಲ್ಲಿ ಬಿಜೆಪಿಯನ್ನು ಬಲಪಡಿಸಿದ ಅವರ ಕಾರ್ಯತಂತ್ರವೇ ಈ ಪುನರಾಯ್ಕೆಗೆ ಪ್ರಮುಖ ಕಾರಣವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ವಿಜಯ್ ಬಗ್ಗೆ ಸ್ಟಾಲಿನ್ ಮಾತು, ವೈರಲ್ ಆಗುತ್ತಿದೆ ಹಳೆ ವಿಡಿಯೋ – Kannada News | CM Stalin’s old video talking about Thalapathy Vijay getting viral

ದಳಪತಿ ವಿಜಯ್ (Thalapathy Vijay) ತಮಿಳುನಾಡಿನ ಸಿಎಂ ಆಗಿದ್ದಾರೆ. ಡಿಎಂಕೆ, ಎಐಎಡಿಎಂಕೆಗಳ ಕಪಿಮುಷ್ಠಿಯಿಂದ ಸಿಎಂ ಸ್ಥಾನವನ್ನು ಕಸಿದುಕೊಂಡಿದ್ದಾರೆ. ಆರು ದಶಕಗಳ ಬಳಿಕ ಮೊದಲ ಬಾರಿಗೆ ಈ ಎರಡೂ ಪಕ್ಷಗಳ ಹೊರತಾಗಿ ಮೂರನೇ ಪಕ್ಷವೊಂದು ಸರ್ಕಾರ ರಚಿಸಿದೆ, ಅದುವೇ ವಿಜಯ್ ಅವರ ಟಿವಿಕೆ ಪಕ್ಷ. ಚುನಾವಣೆಗೆ ಮುಂಚೆ, ಆಡಳಿತದಲ್ಲಿದ್ದ ಡಿಎಂಕೆ ಪಕ್ಕಾ ಚುನಾವಣೆ ಗೆಲ್ಲುತ್ತದೆ ಎನ್ನಲಾಗುತ್ತಿತ್ತು. ಎಐಎಡಿಎಂಕೆಗೂ ಅವಕಾಶಗಳಿವೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಸ್ವತಃ ಸಿಎಂ ಸ್ಟಾಲಿನ್ ಸಹ ಈ ಬಾರಿ ವಿಜಯ ಖಾತ್ರಿ ಎಂಬ ಭರವಸೆಯಲ್ಲಿದ್ದರು, ಆದರೆ ವಿಜಯ್ ಭರ್ಜರಿ ಹೊಡೆತ ನೀಡಿದರು. ಅದರ ಬೆನ್ನಲ್ಲೆ ಇದೀಗ ಸ್ಟಾಲಿನ್ ಮತ್ತು ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರ ಹಳೆಯ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದೆ.

ಸ್ಟಾಲಿನ್ ಅವರು ಸಿಎಂ ಆಗಿದ್ದಾಗೊಮ್ಮೆ ಖಾಸಗಿ ಚಾನೆಲ್ ಒಂದರಲ್ಲಿ ವಿದ್ಯಾರ್ಥಿಗಳೊಡನೆ ಸಂವಾದ ನಡೆಸಿದ್ದರು. ಆಗ ವಿದ್ಯಾರ್ಥಿನಿ ಒಬ್ಬಾಕೆ, ನೀವು ಸಿನಿಮಾಗಳನ್ನು ನೋಡುತ್ತೀರ, ನೋಡುತ್ತೀರಾದರೆ ನಿಮಗೆ ಯಾವ ನಟ ಇಷ್ಟ ಎಂದು ಕೇಳುತ್ತಾರೆ. ಅದಕ್ಕೆ ಸಿಎಂ ಸ್ಟಾಲಿನ್, ‘ನಾನು ಸಿನಿಮಾಗಳನ್ನು ನೋಡುತ್ತೇನೆ. ಒಳ್ಳೆಯ ಸಿನಿಮಾ ಎಂದಾದರೆ ಸಮಯ ಮಾಡಿಕೊಂಡು ನೋಡುತ್ತೇನೆ. ನನಗೆ ಇಷ್ಟವಾದ ಸ್ಟೈಲ್ ಆದ ನಟ ರಜನೀಕಾಂತ್, ಯುವಕರನ್ನು ಆಕರ್ಷಿಸುವಂಥಹಾ ನಟ ವಿಜಯ್ ಸಹ ಇಷ್ಟ. ನವರಸಗಳ ನಟ ಅಜಿತ್ ಅವರೂ ಸಹ ನನಗೆ ಇಷ್ಟವಾದ ನಟ’ ಎಂದಿದ್ದರು.

ಸ್ಟಾಲಿನ್ ಅವರಿಗೆ ವಿಜಯ್ ಇಷ್ಟವಾದ ನಟ ಆಗಿದ್ದರು, ಆದರೆ ತಮ್ಮ ಇಷ್ಟದ ನಟನೇ ಈಗ ತಮ್ಮ ಪಕ್ಷಕ್ಕೆ ಹೀನಾಯ ಸೋಲು ಕಾಣಿಸಿದ್ದಾರೆ. ಸ್ಟಾಲಿನ್ ಅವರು ಕಾರ್ಯಕ್ರಮವೊಂದರಲ್ಲಿ ವಿಜಯ್ ಅವರನ್ನು ಭೇಟಿ ಆಗಿ, ಹಸ್ತಲಾಘವ ಮಾಡುತ್ತಿರುವ ಹಳೆಯ ವಿಡಿಯೋ ಒಂದು ಸಹ ಇದೇ ಸಮಯದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ:ದಳಪತಿ ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​.ಡಿ. ಕುಮಾರಸ್ವಾಮಿ: ಕಾರಣ ಇಲ್ಲಿದೆ

ಸ್ಟಾಲಿನ್ ಅವರ ಪುತ್ರ, ನಟ, ಮಾಜಿ ಸಚಿವ ಉದಯ ನಿಧಿ ಸ್ಟಾಲಿನ್ ಅವರು ವಿಜಯ್ ಬಗ್ಗೆ ಮಾತನಾಡಿದ್ದ ವಿಡಿಯೋ ಒಂದು ಸಹ ಇದೀಗ ವೈರಲ್ ಆಗುತ್ತಿದೆ. ಅದರಲ್ಲಿ ಉದಯನಿಧಿ ಅವರು ವಿಜಯ್ ಅವರೊಟ್ಟಿಗಿನ ತಮ್ಮ ಗೆಳೆತನದ ಬಗ್ಗೆ ಮಾತನಾಡಿದ್ದಾರೆ. ‘ನಾನು ಅವರನ್ನು ಭೇಟಿಯಾಗಿ ಸಾಕಷ್ಟು ಸಮಯ ಆಯ್ತು, ಹೊಸ ವರ್ಷಕ್ಕೆ ಭೇಟಿ ಆಗಿದ್ದೆ. ವಿಜಯ್ ಅವರು ಸುಲಭವಾಗಿ ಯಾರನ್ನೂ ತಮ್ಮ ಹತ್ತಿರದ ಸರ್ಕಲ್​​ಗೆ ಸೇರಿಸಿಕೊಳ್ಳುವುದಿಲ್ಲ. ಸೇರಿಸಿಕೊಂಡರೆಂದರೆ ಅವರು ಅತ್ಯಾಪ್ತ ಸ್ನೇಹಿತರಾದಂತೆ. ನಾನು ಮುಂಚೆ ಅವರ ಬಹಳ ಆತ್ಮೀಯ ಸ್ನೇಹಿತನಾಗಿದ್ದೆ ಆದರೆ ಆ ಬಳಿಕ ನನಗೂ ಅವರಿಗೂ ತುಸು ಮುನಿಸುಗಳು ಏರ್ಪಟ್ಟಿತು’ ಎಂದಿದ್ದಾರೆ.

‘ಕೆಲವರು ನನ್ನ ಬಗ್ಗೆ ಅವರ ಬಳಿ, ಅವರ ಬಗ್ಗೆ ನನ್ನ ಬಳಿ ಚಾಡಿಗಳನ್ನು ಹೇಳಿದ್ದರು. ಇದರಿಂದ ನಮ್ಮ ಗೆಳೆತನದಲ್ಲಿ ಬಿರುಕು ಬಿಟ್ಟತು. ಬಳಿಕ ಒಂದು ದಿನ ನಾನೇ ಹೋಗಿ ಅವರಿಗೆ ಪರಿಸ್ಥಿತಿ ವಿವರಿಸಿದೆ. ಬಳಿಕ ಎಲ್ಲವೂ ತಿಳಿ ಆಯ್ತು. ಆಗೊಮ್ಮೆ, ಈಗೊಮ್ಮೆ ನಾವು ಭೇಟಿ ಆಗುತ್ತೇವೆ. ನನ್ನನ್ನು ಆಗಾಗ್ಗೆ ಮನೆಗೆ ಅವರು ಆಹ್ವಾನಿಸುತ್ತಾರೆ, ಆದರೆ ಭೇಟಿ ಆಗಿ ಸಾಕಷ್ಟು ದಿನಗಳಾದವು’ ಎಂದಿದ್ದರು. ಈ ವಿಡಿಯೋ ಸಹ ವೈರಲ್ ಆಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version