ಕೆಲಸ ಕೊಡಿಸಿದ ಸ್ನೇಹಿತನಿಗೇ ಚಟ್ಟ ಕಟ್ಟಿದ ಫ್ರೆಂಡ್​​: ಎಣ್ಣೆ ನಶೆಯಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಎಂಡ್​ – Kannada News | Drunken Brawl Ends in Friend’s Murder in Surapura Taluk of Yadgir

ಯಾದಗಿರಿ, ಮಾರ್ಚ್​​ 03: ಮದ್ಯ ಸೇವಿಸದ ನಶೆಯಲ್ಲಿ ಸ್ನೇಹಿತರ ನಡುವೆ ಶುರುವಾದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಗುತ್ತಿಬಸವಣ್ಣನ ಕ್ರಾಸ್ ಬಳಿಯ ಕ್ರಶರ್​​ ಬಳಿ ನಡೆದಿದೆ. ವಿಜಯಪುರ ಜಿಲ್ಲೆಯ ತಾಳಿಕೋಟಿ ಮೂಲದ ಬಸನಗೌಡ (30) ಮೃತ ವ್ಯಕ್ತಿಯಾಗಿದ್ದು, ಈತನ ಸ್ನೇಹಿತ ಬಸನಗೌಡ ಎನ್ನುವವನೇ ಕೊಲೆ ಆರೋಪಿಯಾಗಿದ್ದಾನೆ.

ಮೃತಪಟ್ಟಿರುವ ವ್ಯಕ್ತಿ ಬಸನಗೌಡ ಕಳೆದ ಒಂದು ತಿಂಗಳಿನಿಂದ  ಕ್ರಶರ್ ಕಂಪನಿಯಲ್ಲಿ ಟಿಪ್ಪರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಕ್ರಶಿಂಗ್​ ಮಾಡಿದ ಕಲ್ಲುಗಳುನ್ನ ಟಿಪ್ಪರ್‌ನಲ್ಲಿ ಲೋಡ್ ಮಾಡಿಕೊಂಡು ಬೇರೆ ಕಡೆ ಸಾಗಿಸುವ ಕೆಲಸ ಈತನದ್ದಾಗಿತ್ತು. ಈ ನಡುವೆ ತಾಳಿಕೋಟಿಯಲ್ಲಿ ಕೆಲಸವಿಲ್ಲದೆ ಅಲೆಯುತ್ತಿದ್ದ ಸ್ನೇಹಿತ ಬಸನಗೌಡನಿಗೂ ತನ್ನದೇ ಕಂಪನಿಯಲ್ಲಿ ಕೆಲಸ ಕೊಡಿಸಿದ್ದ. ಎಂದಿನಂತೆ ನಿನ್ನೆ ಕೆಲಸ ಮುಗಿಸಿದ ಸ್ನೇಹಿತರು ಸಂಜೆ ಎಣ್ಣೆ ಹೊಡೆಯಲು ಕುಳಿತುಕೊಂಡಿದ್ದಾರೆ. ಮದ್ಯದ ನಶೆಯಲ್ಲಿದ್ದ ಇವರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಶುರುವಾಗಿದೆ. ಇದು ವಿಕೋಪಕ್ಕೆ ಹೋಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಕೊನೆಗೆ ಕೆಲಸ ಕೊಡಿಸಿದ್ದ ಬಸನಗೌಡಗೆ ಸ್ನೇಹಿತ ಬಸನಗೌಡ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾನೆ. ಹಲ್ಲೆ ಮಾಡಿದ ಬಳಿಕ ನಶೆಯಲ್ಲಿ‌ ಹೋಗಿ ಮಲಗಿದ್ದಾನೆ. ಆದರೆ ಇತ್ತ ಹಲ್ಲೆಗೊಳಗಾದ ಬಸನಗೌಡ ಬೆಳಗಾಗುವುದರಲ್ಲಿ ಮೃತಪಟ್ಟಿದ್ದಾನೆ.

ಇದನ್ನೂ ಓದಿ: ಫೋಕ್ಸೋ ಕೇಸ್​​ನಲ್ಲಿ ಇಂದು 2 ಬೆಳವಣಿಗೆ; ಕುತೂಹಲ ಮೂಡಿಸಿದ ಮಲ್ಲಿಕಾರ್ಜುನ ಮುತ್ಯಾ ನಡೆ

ಇಬ್ಬರು ಸ್ನೇಹಿತರು ಚೆನ್ನಾಗಿಯೇ ಇದ್ದರು. ಇವರ ನಡುವೆ ಯಾವುದೇ ಜಗಳ ಆಗಿರಲಿಲ್ಲ. ಹೀಗಿದ್ದರೂ ಕುಡಿದ ನಶೆಯಲ್ಲಿ ನಡೆದ ಘಟನೆ ಓರ್ವನ ಪ್ರಾಣ ಪಡೆದಿದೆ. ಘಟನಾ ಸ್ಥಳಕ್ಕೆ ಕೆಂಭಾವಿ ಪೊಲೀಸರು ಮತ್ತು ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ದೇಹವನ್ನ ಕೆಂಭಾವಿಯ ಶವಗಾರಕ್ಕೆ ರವಾನೆ ಮಾಡಿದ್ದಾರೆ. ವಿಚಾರಣೆ ವೇಳೆ ಮದ್ಯದ ಅಮಲಲ್ಲಿ ಸ್ನೇಹಿತನನ್ನು ತಾನೇ ಕೊಂದಿರೋದಾಗಿ ಆರೋಪಿಯೂ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಉಪಕಾರ ಮಾಡಲು ಹೋಗಿ ಸ್ನೇಹಿತನಿಂದಲೇ ವ್ಯಕ್ತಿ ಹತ್ಯೆಯಾಗಿರುವ ಹಿನ್ನೆಲೆ, ಆರೋಪಿ ವಿರುದ್ಧ ಮೃತನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆತನಿಗೆ ತಕ್ಕ ಶಿಕ್ಷೆಯಾಗಬೇಕು ಎಂಬ ಆಗ್ರಹವೂ ವ್ಯಕ್ತವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮಹಿಳೆಯ ಘೋಷಿತ ಆದಾಯ 4.81 ಲಕ್ಷ ರೂ; ಇನ್ಷೂರೆನ್ಸ್ ಕಟ್ಟಿದ್ದು 50 ಲಕ್ಷ ರೂ; ಕೋರ್ಟ್​ಗೆ ಹೋಯ್ತು ಕೇಸ್ – Kannada News | Woman pays Rs 50 lakh insurance premium, shows less than 5 lakh declared income, know what happened next

ಆದಾಯ ತೆರಿಗೆ ಇಲಾಖೆ ಈಗೀಗ ಬಹಳ ಕ್ರಿಯಾಶೀಲವಾಗಿದ್ದು, ತೆರಿಗೆ ವಂಚಕರು, ಕಪ್ಪು ಹಣದ ಜಾಡನ್ನು ಪತ್ತೆ ಮಾಡಲು ಬಹಳ ಎಚ್ಚರ ವಹಿಸುತ್ತದೆ. ಅಸಹಜ ಆದಾಯ ಹೆಚ್ಚಳ, ವಹಿವಾಟುಗಳಾದಲ್ಲಿ ಅದರ ಗಮನಕ್ಕೆ ಬೇಗ ಬರುತ್ತದೆ. ಅವನ್ನು ಪತ್ತೆ ಮಾಡಲೆಂದೇ ಎಐ ಇತ್ಯಾದಿ ಆಧುನಿಕ ತಂತ್ರಜ್ಞಾನವನ್ನು ಇಲಾಖೆ (Income Tax department) ಬಳಸುತ್ತದೆ. ಇತ್ತೀಚೆಗೆ ಮಹಿಳೆಯೊಬ್ಬರು ತಮ್ಮ ಘೋಷಿತ ಆದಾಯಕ್ಕಿಂತ ಹತ್ತು ಪಟ್ಟು ಹೆಚ್ಚು ಮೊತ್ತದಷ್ಟು ಹಣವನ್ನು ಇನ್ಷೂರೆನ್ಸ್ ಪ್ರೀಮಿಯಮ್ ಕಟ್ಟಲು ಬಳಸಿ, ಐಟಿ ಕಣ್ಣಿಗೆ ಸಿಕ್ಕು, ಕೋರ್ಟ್ ಕಟಕಟೆ ಏರಬೇಕಾದ ಘಟನೆ ಬೆಳಕಿಗೆ ಬಂದಿದೆ. ಇದು ಪ್ರತಿಯೊಬ್ಬರೂ ಕಲಿಯಬೇಕಾದ ಪಾಠ ಎನಿಸಬಹುದು.

ಪ್ರತಿಭಾ ಎನ್ನುವ ಮಹಿಳೆ ನಿರ್ದಿಷ್ಟ ಹಣಕಾಸು ವರ್ಷದಲ್ಲಿ ತನ್ನ ವಾರ್ಷಿಕ ಆದಾಯ 4.81 ಲಕ್ಷ ರೂ ಎಂದು ಐಟಿಆರ್​ನಲ್ಲಿ ಘೋಷಿಸಿದ್ದರು. ಆದರೆ, ಆ ವರ್ಷ ಆಕೆ 50 ಲಕ್ಷ ರೂ ಮೊತ್ತದ ಇನ್ಷೂರೆನ್ಸ್ ಪ್ರೀಮಿಯಮ್ ಪಾವತಿಸಿದ್ದರು. ಇದು ಆದಾಯ ಇಲಾಖೆಯ ಗಮನಕ್ಕೆ ಬಂದಿದೆ.

ಘೋಷಿತ ಆದಾಯ 4.81 ಇರುವಾಗ ಇನ್ಷೂರೆನ್ಸ್ ಪ್ರೀಮಿಯಮ್​ಗೆ ಪಾವತಿಸಲು 50 ಲಕ್ಷ ರೂ ಎಲ್ಲಿಂದ ಬಂತು ಎನ್ನುವುದು ಐಟಿ ಅನುಮಾನ. ಆ ಹಣದ ಮೂಲ ಯಾವುದೆಂದು ಸರಿಯಾಗಿ ವಿವರಿಸದಿದ್ದಾಗ ಅದನ್ನು ಅನ್​ಎಕ್ಸ್​ಪ್ಲೇನ್ಡ್ ಇನ್ವೆಸ್ಟ್​ಮೆಂಟ್ ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಎನ್​ಪಿಎಸ್ ಸ್ವಾಸ್ಥ್ಯ ಈಕ್ವಿಟಿ ಪ್ಲಸ್; ಇದು ರಿಟೈರ್ಮೆಂಟ್​ಗೂ ಸೈ, ಹೆಲ್ತ್​ಕೇರ್ ವೆಚ್ಚಕ್ಕೂ ಸೈ; ಹೇಗೆ ಕೆಲಸ ಮಾಡುತ್ತೆ ಈ ಹೈಬ್ರಿಡ್ ಸ್ಕೀಮ್?

ಯಾವುದೇ ಪ್ರಾಪರ್ಟಿ ಖರೀದಿ ನಡೆದಾಗ, ದೊಡ್ಡ ಮೊತ್ತದ ಇನ್ಷೂರೆನ್ಸ್ ಪ್ರೀಮಿಯಮ್ ಪಾವತಿಯಾದಾಗ, ದೊಡ್ಡ ಮೊತ್ತದ ಬ್ಯಾಂಕ್ ಠೇವಣಿ ಆದಾಗ, ಷೇರು ಅಥವಾ ಮ್ಯೂಚುವಲ್ ಫಂಡ್​ಗಳಲ್ಲಿ ದೊಡ್ಡ ಹೂಡಿಕೆಗಳಾದಾಗ, ಇತ್ಯಾದಿ ಸಂದರ್ಭದಲ್ಲಿ ತೆರಿಗೆ ಅಧಿಕಾರಿಗಳು ಆ ವಹಿವಾಟು ನಡೆಸಿದ ವ್ಯಕ್ತಿಯ ಆದಾಯ ಹರಿವನ್ನು ಪರಿಶೀಲಿಸುತ್ತಾರೆ. ಐಟಿ ರಿಟರ್ನಸ್​ನಲ್ಲಿ ಫೈಲ್ ಮಾಡಲಾದ ವಿವರವನ್ನು ಪರಿಶೀಲಿಸುತ್ತಾರೆ. ಮಹಿಳೆಯ ಕೇಸ್​ನಲ್ಲೂ ಆಗಿದ್ದು ಇದೆಯೇ.

ಕೋರ್ಟ್​ನಲ್ಲಿ ಮಹಿಳೆಯ ವಿವರಣೆಗೆ ಸಿಗಲಿಲ್ಲ ಸಮಾಧಾನ

50 ಲಕ್ಷ ರೂ ಹಣ ಎಲ್ಲಿಂದ ಬಂತು ಎಂದು ಕೇಳಿದಾಗ ಮಹಿಳೆ, ಅದು ತನ್ನ ವೈಯಕ್ತಿಕ ಹಣವಲ್ಲ. ತನ್ನ ಕುಟುಂಬದ ಹಿಂದೂ ಅವಿಭಜಿತ ಕುಟುಂಬ ಅಥವಾ ಎಚ್​ಯುಎಫ್​ಗೆ ಸೇರಿದ ಹಣ. ತಮ್ಮ ಕುಟುಂಬ ಹೊಂದಿರುವ ಸೇಬಿನ ತೋಟದಿಂದ ಬಂದ ಕೃಷಿ ಆದಾಯದ ಹಣ ಎಂದು ಆಕೆ ವಿವರಣೆ ಕೊಟ್ಟರು.

ಇಂಥ ಸಂದರ್ಭದಲ್ಲಿ ನಿರ್ದಿಷ್ಟ ಆದಾಯ ಬರುವಂತಹ ಕ್ಯಾಷ್ ಫ್ಲೋ ದಾಖಲೆಗಳು, ಎಂಒಯು, ಅಥವಾ ಸೇಲ್ ಡೀಡ್ ಅಥವಾ ಇನ್ನೇನಾದರೂ ಮಾರಾಟ ದಾಖಲೆಗಳಿವೆಯಾ ಎಂಬುದನ್ನು ಪರಿಶೀಲಿಸಲಾಗುತ್ತದೆ. ಈ ಮಹಿಳೆಯ ಪ್ರಕರಣದಲ್ಲೂ ಇದನ್ನು ಪರಿಶೀಲಿಸಲಾಗಿದೆ. ಆದರೆ ಸೂಕ್ತ ದಾಖಲೆಗಳು ಸಿಗಲಿಲ್ಲ. ಅಂದರೆ, 50 ಲಕ್ಷ ರೂ ಪ್ರೀಮಿಯಮ್ ಪಾವತಿಗೆ ಬೇಕಾದಷ್ಟು ಹಣವು ಆಕೆಯ ಕುಟುಂಬದಲ್ಲಿ ಇತ್ತು ಎನ್ನುವುದಕ್ಕೆ ದಾಖಲೆಗಳು ಇರಲಿಲ್ಲ.

ಇದನ್ನೂ ಓದಿ: ಮಾರ್ಕೆಟ್ ಟ್ರೆಂಡ್, ಎಕ್ಸ್​ಪೆನ್ಸ್ ರೇಶಿಯೋ, ಎಮರ್ಜೆನ್ ಫಂಡ್ ಇತ್ಯಾದಿ.. ಜನಸಾಮಾನ್ಯರು ಮಾಡುವ ಹೂಡಿಕೆ ತಪ್ಪುಗಳಿವು

ಮಹಿಳೆಯ ವಿವರಣೆಯು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಗೆ ಸಮಾಧಾನ ಕೊಡಲಿಲ್ಲ. ಆಕೆಯ ವಿರುದ್ಧ ತೀರ್ಪು ಬಂದಿತು. ಆಕೆ ದಂಡ ಸಮೇತವಾಗಿ 50 ಲಕ್ಷ ರೂಗೆ ತೆರಿಗೆ ಇತ್ಯಾದಿಯನ್ನು ಪಾವತಿಸುವಂತಾಯಿತು.

ನೀವೂ ಕೂಡ ದೊಡ್ಡ ಮೊತ್ತದ ಹಣವನ್ನು ಯಾವುದರಲ್ಲಾದರೂ ಹೂಡಿಕೆ ಮಾಡುತ್ತಿದ್ದಾಗ, ಆ ಹಣ ಎಲ್ಲಿಂದ ಬಂತು ಎನ್ನುವುದಕ್ಕೆ ಸೂಕ್ತ ದಾಖಲೆಗಳನ್ನು ಹೊಂದಿರುವುದು ಬಹಳ ಮುಖ್ಯ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ಯದಲ್ಲಿ ಹೆಚ್ಚುತ್ತಿದೆ ಬಾಂಬ್ ಬೆದರಿಕೆ: ಬೆಂಗಳೂರು ಸಿಟಿ ಸಿವಿಲ್ ಕೋರ್ಟ್‌ಗೆ ಹುಸಿ ಬಾಂಬ್ ಬೆದರಿಕೆ – Kannada News | Karnataka Bomb Threats: Bengaluru City Civil Court Targeted in Email Hoax, Police Investigate

ಬೆಂಗಳೂರು, ಮಾ.3: ರಾಜ್ಯದಲ್ಲಿ ಬಾಂಬ್ ಬೆದರಿಕೆಗಳು ಹೆಚ್ಚುತ್ತಿದೆ. ಇತ್ತೀಚಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ, ಶಾಲೆ, ಇದೀಗ ಕೋರ್ಟ್​​​ಗೂ ಬೆದರಿಕೆ ಬರುತ್ತಿದೆ. ಇಂದು ಮಧ್ಯಾಹ್ನ ಕಲಬುರ್ಗಿಯ ಜಿಲ್ಲಾ ಕೋರ್ಟ್​​ಗೆ ಬೆದರಿಕೆ ಬಂದಿತ್ತು. ಇದೀಗ ರಾಜಧಾನಿ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಆವರಣವನ್ನು ಸ್ಫೋಟಿಸುವುದಾಗಿ ಅಪರಿಚಿತರು ಇ-ಮೇಲ್ ಮೂಲಕ ಬೆದರಿಕೆ ಹಾಕಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಪೊಲೀಸರು ಮತ್ತು ಭದ್ರತಾ ಪಡೆಗಳು ಇಡೀ ಕೋರ್ಟ್ ಆವರಣವನ್ನು ಜಾಲಾಡಿದ್ದು, ಅಂತಿಮವಾಗಿ ಇದೊಂದು ‘ಹುಸಿ ಬಾಂಬ್ ಬೆದರಿಕೆ’ (Hoax Call) ಎಂದು ದೃಢಪಟ್ಟಿದೆ. ಇಂದು (ಮಾರ್ಚ್ 3, 2026) ಬೆಳಿಗ್ಗೆ ಕೋರ್ಟ್‌ನ ಅಧಿಕೃತ ಇ-ಮೇಲ್ ವಿಳಾಸಕ್ಕೆ ಸಂದೇಶ ಬಂದಿತ್ತು. ಇನ್ನು ಈ ಬೆದರಿಕೆ ಇ-ಮೇಲ್ ತಮಿಳು ಭಾಷೆಯಲ್ಲಿದೆ.

ಸುದ್ದಿ ತಿಳಿಯುತ್ತಿದ್ದಂತೆ ಹಲಸೂರು ಗೇಟ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಬಾಂಬ್ ನಿಷ್ಕ್ರಿಯ ದಳ (BDS) ಮತ್ತು ಶ್ವಾನದಳದೊಂದಿಗೆ ಕೋರ್ಟ್‌ನ ಪ್ರತಿ ಕೊಠಡಿ, ಕಾರಿಡಾರ್ ಮತ್ತು ಪಾರ್ಕಿಂಗ್ ಪ್ರದೇಶಗಳಲ್ಲಿ ತೀವ್ರ ಶೋಧ ನಡೆಸಲಾಯಿತು.

ಇದನ್ನೂ ಓದಿ: ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ: ಓಡಿದ ವಕೀಲರು

ಸುದೀರ್ಘ ಪರಿಶೀಲನೆಯ ನಂತರ ಯಾವುದೇ ಅನುಮಾನಾಸ್ಪದ ವಸ್ತುಗಳು ಅಥವಾ ಸ್ಫೋಟಕಗಳು ಪತ್ತೆಯಾಗಿಲ್ಲ. ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಲು ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇ-ಮೇಲ್ ಕಳುಹಿಸಿದ ಕಿಡಿಗೇಡಿಗಳ ಪತ್ತೆಗಾಗಿ ಸೈಬರ್ ಕ್ರೈಂ ವಿಭಾಗದ ನೆರವು ಪಡೆಯಲಾಗುತ್ತಿದೆ. ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಸ್ರೇಲ್-ಯುಎಸ್ ದಾಳಿಯಿಂದಾಗಿ ಇರಾನ್​ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಸುರಕ್ಷಿತ ಸ್ಥಳಕ್ಕೆ ಶಿಫ್ಟ್ – Kannada News | Embassy of India in Iran relocates Indian students in Tehran to safer locations

ಟೆಹ್ರಾನ್, ಮಾರ್ಚ್ 3: ಇರಾನ್‌ನ ರಾಜಧಾನಿ ಟೆಹ್ರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್‌ನ (Israel Attack) ದಾಳಿ ನಡೆಯುತ್ತಿರುವುದರಿಂದ ಹಲವಾರು ಭಾರತೀಯ ವಿದ್ಯಾರ್ಥಿಗಳನ್ನು ಟೆಹ್ರಾನ್‌ನ ಹೊರಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಕೆಲವು ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ಟೆಹ್ರಾನ್‌ನಲ್ಲಿಯೇ ಉಳಿಯಲು ನಿರ್ಧರಿಸಿದ್ದಾರೆ. ಅಂಥವರನ್ನು ಹೊರತುಪಡಿಸಿ ಉಳಿದವರನ್ನು ಶಿಫ್ಟ್ ಮಾಡಲಾಗಿದೆ. ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅವರಿಗೆ ತುರ್ತು ಸಂಪರ್ಕ ಸಂಖ್ಯೆಗಳನ್ನು ಸಹ ನೀಡಲಾಗಿದೆ.

ಟೆಹ್ರಾನ್ ನಗರದಲ್ಲಿ ದಾಳಿಯ ಅಪಾಯ ಹೆಚ್ಚಾದ ಕಾರಣದಿಂದ ಭಾರತದ ರಾಯಭಾರ ಕಚೇರಿಯು ಟೆಹ್ರಾನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಟೆಹ್ರಾನ್‌ನ ಹೊರಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ. ರಾಯಭಾರ ಕಚೇರಿಯು ಅವರಿಗೆ ಸಾರಿಗೆ, ಆಹಾರ ಮತ್ತು ವಸತಿ ವ್ಯವಸ್ಥೆಗಳನ್ನು ಮಾಡಿದೆ. ರಾಯಭಾರ ಕಚೇರಿಯ ಸಹಾಯವನ್ನು ನಿರಾಕರಿಸಿದ ಕೆಲವೇ ವಿದ್ಯಾರ್ಥಿಗಳು ಮಾತ್ರ ಟೆಹ್ರಾನ್‌ನಲ್ಲಿ ಉಳಿದಿದ್ದಾರೆ ಎಂದು ಕಾನ್ಸುಲೇಟ್ ತಿಳಿಸಿದೆ.

ಇದನ್ನೂ ಓದಿ: ಇರಾನ್​ ಮೇಲೆ ಇಸ್ರೇಲ್-ಯುಎಸ್​ ದಾಳಿ; ಸಾವಿನ ಸಂಖ್ಯೆ 787ಕ್ಕೆ ಏರಿಕೆ

“ಇನ್ನೂ ಇರಾನ್‌ನಲ್ಲಿಯೇ ಉಳಿದಿರುವ ಇತರ ಭಾರತೀಯ ವಿದ್ಯಾರ್ಥಿಗಳು ಮತ್ತು ಭಾರತೀಯ ಪ್ರಜೆಗಳಿಗೆ ಈ ಹಿಂದೆ ನೀಡಲಾದ ಸಲಹೆಯು ಬದಲಾಗದೆ ಉಳಿದಿದೆ. ನೀವು ಇರುವ ಸ್ಥಳದಲ್ಲಿಯೇ ಇರಿ, ಸಾಧ್ಯವಾದಷ್ಟು ಮನೆ ಅಥವಾ ರೂಂನ ಒಳಗಿರಿ. ಕಿಟಕಿಗಳಿಂದ ದೂರವಿರಿ. ಎಲ್ಲಾ ಸಮಯದಲ್ಲೂ ಸರಿಯಾದ ಎಚ್ಚರಿಕೆ ವಹಿಸಿ. ಪ್ರತಿಭಟನೆಗಳ ಪ್ರದೇಶಗಳ ಬಳಿ ಓಡಾಡಬೇಡಿ. ಇರಾನ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿರಿ” ಎಂದು ಭಾರತ ಸೂಚಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

‘ಭೀಮಾ ತೀರದಲ್ಲಿ’ ರೀ-ರಿಲೀಸ್: ಬಜೆಟ್ ಇನ್ನಿತರೆ ಮಾಹಿತಿ ಹಂಚಿಕೊಂಡ ನಿರ್ಮಾಪಕ – Kannada News | Producer Anaji Nagaraj talks about Bheema Theeradalli movie re release

ದುನಿಯಾ ವಿಜಯ್ (Duniya Vijay) ನಟನೆಯ ‘ಭೀಮಾ ತೀರದಲ್ಲಿ’ ಸಿನಿಮಾ 2012 ರಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ಬಿಡುಗಡೆ ಆದಾಗ ಸಾಕಷ್ಟು ವಿವಾದವೂ ಆಗಿತ್ತು. ಆದರೆ ಸಿನಿಮಾ ಹಿಟ್ ಎನಿಸಿಕೊಂಡಿತ್ತು. ಇದೀಗ 14 ವರ್ಷಗಳ ಬಳಿಕ ‘ಭೀಮಾ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ಸಿನಿಮಾದ ನಿರ್ಮಾಪಕ ಅಣಜಿ ನಾಗರಾಜ್ ಮತ್ತು ನಿರ್ದೇಶಕ ಓಂ ಪ್ರಕಾಶ್ ರಾವ್ ಅವರುಗಳು ‘ಭೀಮಾ ತೀರದಲ್ಲಿ’ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಆಗ ಸಿನಿಮಾಕ್ಕೆ ಬಜೆಟ್ ಎಷ್ಟಾಗಿತ್ತು, ಚಿತ್ರೀಕರಣದ ಸಂದರ್ಭದಲ್ಲಿ ನಡೆದ ಸ್ವಾರಸ್ಯಕರ ಘಟನೆಗಳ ಬಗ್ಗೆಯೂ ಮಾತನಾಡಿದ್ದಾರೆ. ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಲಾರೆಸ್ ವಿಶ್ವ ಕ್ರೀಡಾ ಪ್ರಶಸ್ತಿಗೆ ಭಾರತ ಮಹಿಳಾ ಕ್ರಿಕೆಟ್ ತಂಡ ನಾಮನಿರ್ದೇಶನ – Kannada News | Laureus Awards 2026: Indian Women’s Cricket Team & Sports Stars Nominated

2026 ರ ಲಾರೆಸ್ ವಿಶ್ವ ಕ್ರೀಡಾ ಪ್ರಶಸ್ತಿಗಳಿಗೆ (2026 Laureus World Sports Awards) ನಾಮನಿರ್ದೇಶನಗಳನ್ನು ಪ್ರಕಟಿಸಲಾಗಿದೆ. 2025 ರಲ್ಲಿ ಏಕದಿನ ವಿಶ್ವಕಪ್ ಗೆದ್ದ ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು (Indian Women’s Cricket Team) ಸಹ ನಾಮನಿರ್ದೇಶನಗೊಂಡ ತಂಡಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ಲಾರೆಸ್ ವರ್ಷದ ತಂಡ ವಿಭಾಗದಲ್ಲಿ ನಾಮನಿರ್ದೇಶನ ಮಾಡಲಾಗಿದೆ. ಈ ವಿಭಾಗದಲ್ಲಿ ಭಾರತ ಮಹಿಳಾ ತಂಡವನ್ನು ಹೊರತುಪಡಿಸಿ ವಿವಿಧ ಕ್ರೀಡೆಗಳಲ್ಲಿ ತಮ್ಮ ಛಾಪು ಮೂಡಿಸಿರುವ ಪ್ರಪಂಚದಾದ್ಯಂತದ ಐದು ತಂಡಗಳನ್ನು ಆಯ್ಕೆ ಮಾಡಲಾಗಿದೆ. ಅಂದರೆ, ಒಟ್ಟು ಆರು ತಂಡಗಳನ್ನು ಲಾರೆಸ್ ವರ್ಷದ ತಂಡಕ್ಕೆ ನಾಮನಿರ್ದೇಶನ ಮಾಡಲಾಗಿದೆ.

ಸ್ಪರ್ಧೆಯಲ್ಲಿ ಈ 6 ತಂಡಗಳು

ವಿಶ್ವ ಚಾಂಪಿಯನ್ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಲಾರೆಸ್ ವರ್ಷದ ತಂಡ ಪ್ರಶಸ್ತಿಗಾಗಿ ಸ್ಪರ್ಧಿಸಲಿರುವ ಐದು ತಂಡಗಳಲ್ಲಿ ಇಂಗ್ಲೆಂಡ್ ಮಹಿಳಾ ಫುಟ್ಬಾಲ್ ತಂಡ, ಯುರೋಪಿಯನ್ ರೈಡರ್ ಕಪ್ ತಂಡ (ಗಾಲ್ಫ್), ಮೆಕ್‌ಲಾರೆನ್ ಫಾರ್ಮುಲಾ 1 ತಂಡ (ಯುಕೆ), ಬ್ಯಾಸ್ಕೆಟ್‌ಬಾಲ್‌ನ ಒಕ್ಲಹೋಮ ಸಿಟಿ ಥಂಡರ್ (ಯುಎಸ್‌ಎ) ಮತ್ತು ಫುಟ್‌ಬಾಲ್ ಕ್ಲಬ್ ಪ್ಯಾರಿಸ್ ಸೇಂಟ್-ಜರ್ಮೈನ್ (ಫ್ರಾನ್ಸ್) ಸೇರಿವೆ. 2025 ರ ಏಕದಿನ ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನಕ್ಕಾಗಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ನಾಮನಿರ್ದೇಶನ ಮಾಡಲಾಗಿದೆ.

ಈ 8 ವಿಭಾಗಗಳಲ್ಲಿ ನಾಮನಿರ್ದೇಶನ

ಲಾರೆಸ್ ವಿಶ್ವ ಕ್ರೀಡಾ ಪ್ರಶಸ್ತಿಗಳನ್ನು ವರ್ಷದ ತಂಡ ಸೇರಿದಂತೆ ಎಂಟು ವಿಭಾಗಗಳಲ್ಲಿ ನೀಡಲಾಗುತ್ತದೆ. ಇವುಗಳಿಗೆ ನಾಮನಿರ್ದೇಶನಗಳನ್ನು ಮ್ಯಾಡ್ರಿಡ್‌ನಲ್ಲಿ ನಡೆದ ಸಮಾರಂಭದಲ್ಲಿ ಘೋಷಿಸಲಾಗಿದ್ದು, ವರ್ಷದ ತಂಡ ಸೇರಿದಂತೆ ಎಂಟು ವಿಭಾಗಗಳಲ್ಲಿ ನಾಮನಿರ್ದೇಶನ ಮಾಡಲಾಗಿದೆ.

ICC ODI Rankings: ಏಕದಿನ ಕ್ರಿಕೆಟ್​ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ ಸ್ಮೃತಿ ಮಂಧಾನ

ವಿಶ್ವ ಕ್ರೀಡಾಳು ಪ್ರಶಸ್ತಿಗೆ ನಾಮನಿರ್ದೇಶನಗೊಂಡವರು

ಲಾರೆಸ್ ವಿಶ್ವ ಕ್ರೀಡಾಳು ಪ್ರಶಸ್ತಿಗೆ ನಾಮನಿರ್ದೇಶನಗೊಂಡವರಲ್ಲಿ ಟೆನಿಸ್ ತಾರೆಗಳಾದ ಕಾರ್ಲೋಸ್ ಅಲ್ಕರಾಜ್ ಮತ್ತು ಮೊಂಡೊ ಡುಪ್ಲಾಂಟಿಸ್ ಸೇರಿದ್ದಾರೆ. ಲಾರೆಸ್ ವಿಶ್ವ ಕ್ರೀಡಾಳು ಪ್ರಶಸ್ತಿಗೆ ನಾಮನಿರ್ದೇಶನಗೊಂಡವರಲ್ಲಿ ಅರಿನಾ ಸಬಲೆಂಕಾ, ಇವಾನಾ ಬೊನ್ಮಾಟಿ ಮತ್ತು ವಿಶ್ವಪ್ರಸಿದ್ಧ ಈಜುಗಾರ್ತಿ ಕೇಟೀ ಲೆಡೆಕಿ ಸೇರಿದ್ದಾರೆ. ಇವರೆಲ್ಲರೂ 2025 ರಲ್ಲಿ ನೀಡಿದ ಉತ್ತಮ ಪ್ರದರ್ಶನಕ್ಕಾಗಿ ನಾಮನಿರ್ದೇಶನಗೊಂಡಿದ್ದಾರೆ.

ಲಾರೆಸ್ ವಿಶ್ವ ಕ್ರೀಡಾ ಪ್ರಶಸ್ತಿಗಳು 2026 ರ ವಿಜೇತರನ್ನು ಏಪ್ರಿಲ್ 20 ರಂದು ಮ್ಯಾಡ್ರಿಡ್‌ನ ಸಿಬೆಲೆಸ್ ಅರಮನೆಯಲ್ಲಿ ಘೋಷಿಸಲಾಗುವುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:47 pm, Tue, 3 March 26

Source link

ಮಗು ಹುಟ್ಟುವ ಮುನ್ನವೇ ಶ್ರವಣ ಸಾಮರ್ಥ್ಯ ಪತ್ತೆಹಚ್ಚಲು ಏಮ್ಸ್‌ನ ಹೊಸ ಪ್ರಯತ್ನ! – Kannada News | Detecting Hearing Loss in Fetal Stage

ಸಾಮಾನ್ಯವಾಗಿ ಕೆಲವು ಆಸ್ಪತ್ರೆಗಳಲ್ಲಿ ಶಿಶುಗಳ ಜನನದ ನಂತರ ಶ್ರವಣ ತಪಾಸಣೆ (ನಿಯೋನೇಟಲ್ ಹಿಯರಿಂಗ್ ಸ್ಕ್ರೀನಿಂಗ್) ನಡೆಯದೇ ಇರುವುದರಿಂದ, ಮಗುವಿಗೆ ಸರಿಯಾಗಿ ಕೇಳುತ್ತಿದೆಯೇ ಇಲ್ಲವೇ ಎಂಬುದು ಸಮಯಕ್ಕೆ ಸರಿಯಾಗಿ ಪತ್ತೆಯಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ದೆಹಲಿ ಏಮ್ಸ್ (AIIMS) ಆಸ್ಪತ್ರೆಯವರು ಗರ್ಭದಲ್ಲಿಯೇ ಮಗುವಿನ ಶ್ರವಣ ಸಾಮರ್ಥ್ಯವನ್ನು ಗುರುತಿಸುವ ದಿಶೆಯಲ್ಲಿ ಮಹತ್ವದ ಪ್ರಯತ್ನ ಆರಂಭಿಸಿದ್ದಾರೆ. ಏಮ್ಸ್‌ನ ಡಾ. ಕಪಿಲ್ ಸಿಕ್ಕಾ ಈ ಬಗ್ಗೆ ಕೆಲವು ಮಾಹಿತಿ ಹಂಚಿಕೊಂಡಿದ್ದು ಗರ್ಭದಲ್ಲಿರುವ ಮಗುವಿನ ಕೇಳಿಸಿಕೊಳ್ಳುವ ಸಾಮರ್ಥ್ಯವನ್ನು ಜನನಕ್ಕೂ ಮುನ್ನವೇ ಪರೀಕ್ಷಿಸುವ ವಿಧಾನಗಳ ಕುರಿತು ಸಂಶೋಧನೆ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದ ಕೆಲವು ಪರೀಕ್ಷೆಗಳು ಲಭ್ಯವಿದ್ದು, ಅವುಗಳ ಮೂಲಕ ಶ್ರವಣ ಶಕ್ತಿ ಎಷ್ಟಿದೆ ಅಥವಾ ಕಿವಿ (Ear) ಎಷ್ಟು ಕೇಳಿಸುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು ಎಂದು ಹೇಳಿದ್ದಾರೆ. ಹಾಗಾದರೆ ಈ ರೀತಿಯ ತಪಾಸಣೆ ಏಕೆ ಅಗತ್ಯ, ಶ್ರವಣ ಸಮಸ್ಯೆಗೆ ಪರಿಹಾರವೇನು ಎಂಬುದರ ಬಗ್ಗೆ ತಿಳಿದುಕೊಳ್ಳಿ.

ಡಾ. ಸಿಕ್ಕಾ ಅವರ ಪ್ರಕಾರ, ಮಗುವಿನ ಜನನದ ಮೊದಲ ಆರು ತಿಂಗಳೊಳಗೆ ಶ್ರವಣ ಸಮಸ್ಯೆಯನ್ನು ಗುರುತಿಸಿದರೆ ಚಿಕಿತ್ಸೆ ಉತ್ತಮ ಫಲಿತಾಂಶ ನೀಡುತ್ತದೆ ಮತ್ತು ಭಾಷಾ ಅಭಿವೃದ್ಧಿಯ ಮೇಲಿನ ಪರಿಣಾಮವೂ ಕಡಿಮೆಯಾಗುತ್ತದೆ. ಆದರೆ ಹಲವು ಸಂದರ್ಭಗಳಲ್ಲಿ ಜನನದ 24 ರಿಂದ 48 ಗಂಟೆಗಳ ಒಳಗೆ ನವಜಾತ ಶಿಶುಗಳ ಶ್ರವಣ ತಪಾಸಣೆ ನಡೆಯುವುದಿಲ್ಲ. ಕೆಲವು ಕಡೆಗಳಲ್ಲಿ ಯುನಿವರ್ಸಲ್ ನವಜಾತ ಹಿಯರಿಂಗ್ ಸ್ಕ್ರೀನಿಂಗ್ ನಡೆಸಲಾಗುತ್ತಿದೆ. ಆದರೆ ಈ ಪರೀಕ್ಷೆ ನಡೆಯದಿದ್ದರೆ, ಮಗು ಒಂದು ವರ್ಷಕ್ಕೆ ಸಮೀಪಿಸಿ ಧ್ವನಿಗೆ ಪ್ರತಿಕ್ರಿಯೆ ನೀಡದಿದ್ದಾಗ ಮಾತ್ರ ಪೋಷಕರು ಸಮಸ್ಯೆಯನ್ನು ಅರಿಯುತ್ತಾರೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಕಿವಿ ಕೇಳಿಸದಿರುವುದು ಕೇವಲ ವೃದ್ಧಾಪ್ಯದ ಸಮಸ್ಯೆಯಲ್ಲ; ಚಿಕ್ಕ ವಯಸ್ಸಿನಲ್ಲಿ ಹೀಗಾಗುವುದಕ್ಕೆ ಕಾರಣವೇನು?

ಶ್ರವಣ ಸಮಸ್ಯೆಗೆ ಪರಿಹಾರವೇನು?

ಡಾ. ಕಪಿಲ್ ಸಿಕ್ಕಾ ಹೇಳುವ ಪ್ರಕಾರ, ತೀವ್ರ ಶ್ರವಣ ಹಾನಿ ಕಂಡುಬಂದಲ್ಲಿ ಶಿಶುಗಳಿಗೆ ಕಾಕ್ಲಿಯರ್ ಇಂಪ್ಲಾಂಟ್ ಪರಿಣಾಮಕಾರಿ ಚಿಕಿತ್ಸೆಯಿದೆ. ಅಲ್ಲದೆ, ಆಡಿಯಟರಿ ಬ್ರೈನ್‌ಸ್ಟೆಮ್ ಇಂಪ್ಲಾಂಟ್ ಮೊದಲಾದ ನವೀನ ತಂತ್ರಜ್ಞಾನಗಳು, ಗಂಭೀರ ನರ ಸಂಬಂಧಿತ ಶ್ರವಣ ದೋಷಗಳಲ್ಲಿಯೂ ಕೇಳುವ ಸಾಮರ್ಥ್ಯವನ್ನು ಸುಧಾರಿಸಲು ನೆರವಾಗುತ್ತಿವೆ. ಏಮ್ಸ್ ದೆಹಲಿಯ ಈ ಹೊಸ ಪ್ರಯತ್ನವು ಭವಿಷ್ಯದಲ್ಲಿ ಜನನಕ್ಕೂ ಮುನ್ನವೇ ಶ್ರವಣ ಸಮಸ್ಯೆಗಳನ್ನು ಪತ್ತೆಹಚ್ಚಲು ಅನುವು ಮಾಡಿಕೊಡುವುದರಿಂದ ಈ ಸಮಸ್ಯೆಗಳು ಕಂಡುಬರುವ ಪ್ರಮಾಣ ಕಡಿಮೆಯಾಗುತ್ತದೆ. ಅಷ್ಟೇಅಲ್ಲ, ಇದು ಮಕ್ಕಳ ಭಾಷಾ ಹಾಗೂ ಸಮಗ್ರ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದಂತಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಂಚರಿಸುತ್ತಿದ್ದಾಗಲೇ ಬಸ್​​​​ನ ಇಂಜಿನ್‌ನಲ್ಲಿ ಕಾಣಿಸಿಕೊಂಡ ಬೆಂಕಿ: ಕಾಲೇಜು ಬಳಿ ಹೊತ್ತಿ ಉರಿದ KSRTC ಬಸ್​​​ – Kannada News | Chikkamagaluru KSRTC Bus Engine Fire Near Junior College; No Fatalities

ಚಿಕ್ಕಮಗಳೂರು, ಮಾ.3: ಕಾಫಿನಾಡಿನ ಹೃದಯಭಾಗದಲ್ಲಿರುವ ಜೂನಿಯರ್ ಕಾಲೇಜು ಬಳಿ ಇಂದು (ಮಾ.3) ಮಧ್ಯಾಹ್ನ ಕೆಎಸ್‌ಆರ್‌ಟಿಸಿ ಬಸ್​​​​​​ ಸಂಚರಿಸುತ್ತಿದ್ದಾಗಲೇ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿತು. ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಚಿಕ್ಕಮಗಳೂರು ಡಿಪೋಗೆ ಸೇರಿದ ಈ ಬಸ್ ಇಂದು ಮಧ್ಯಾಹ್ನ ಜಿಲ್ಲಾ ಕೇಂದ್ರದಿಂದ ಹಾಸನಕ್ಕೆ ತೆರಳುತ್ತಿತ್ತು ಎಂದು ಹೇಳಲಾಗಿದೆ. ಬಸ್ ನಿಲ್ದಾಣದಿಂದ ಹೊರಟು ಜೂನಿಯರ್ ಕಾಲೇಜು ಸಮೀಪ ತಲುಪುತ್ತಿದ್ದಂತೆ ಬಸ್ಸಿನ ಇಂಜಿನ್ ಭಾಗದಲ್ಲಿ ಏಕಾಏಕಿ ದಟ್ಟ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿತು. ಬೆಂಕಿಯ ಸುಳಿವು ಸಿಗುತ್ತಿದ್ದಂತೆ ಚಾಲಕ ತಕ್ಷಣ ಬಸ್ಸನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ, ಪ್ರಯಾಣಿಕರೆಲ್ಲರನ್ನು ಕೆಳಗಿಳಿಯುವಂತೆ ಸೂಚಿಸಿದರು. ಇದರಿಂದಾಗಿ ಬಸ್ಸಿನಲ್ಲಿದ್ದ ಹತ್ತಾರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕೂಡಲೇ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದರು. ಆದರೂ ಬಸ್ಸಿನ ಮುಂಭಾಗ ಹಾನಿಯಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟಾಕ್ಸಿಕ್ ಅಬ್ಬರ: ‘ತಬಾಹಿ’ ಹಾಡು ಟ್ರೆಂಡ್, ಯಾವ ಭಾಷೆಯಲ್ಲಿ ಅಧಿಕ ವೀಕ್ಷಣೆ? – Kannada News | Toxic movie Tabahi song which language gets highest views on YouTube

ಇಡೀ ದೇಶವೇ ಕಾತರದಿಂದ ಕಾಯುತ್ತಿರುವ ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ‘ಟಾಕ್ಸಿಕ್‘ (Toxic: A Fairy Tale for Grown-ups) ಚಿತ್ರದ ಮೊದಲ ಹಾಡು ‘ತಬಾಹಿ’ ನಿನ್ನೆ (ಮಾರ್ಚ್ 03) ಬಿಡುಗಡೆ ಆಗಿದೆ. ಹಾಡಿನ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಅದರಲ್ಲೂ ಕೇವಲ ಲಿರಿಕಲ್ ವಿಡಿಯೋ ಮಾತ್ರವೇ ಬಿಡುಗಡೆ ಮಾಡಿರುವುದಕ್ಕೆ ಯಶ್ ಅಭಿಮಾನಿಗಳು ನಿರಾಸೆ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೂ ಸಹ ಯೂಟ್ಯೂಬ್​​ನಲ್ಲಿ ಕೋಟ್ಯಂತರ ಮಂದಿ ಹಾಡನ್ನು ನೋಡಿದ್ದಾರೆ. ಐದು ಭಾಷೆಗಳಲ್ಲಿ ಸಿನಿಮಾದ ಹಾಡು ಬಿಡುಗಡೆ ಆಗಿದ್ದು, ಯಾವ ಭಾಷೆಯ ಹಾಡು ಹೆಚ್ಚು ವೀಕ್ಷಣೆಗಳನ್ನು ಗಿಟ್ಟಿಸಿಕೊಂಡಿದೆ? ಮಾಹಿತಿ ಇಲ್ಲಿದೆ…

‘ಟಾಕ್ಸಿಕ್’ ಸಿನಿಮಾದ ‘ತಬಾಹಿ’ ಹಾಡು ಅತಿ ಹೆಚ್ಚು ವೀಕ್ಷಣೆ ಪಡೆದಿರುವುದು ಹಿಂದಿ ಭಾಷೆಯಲ್ಲಿ. ಹಿಂದಿ ಆವೃತ್ತಿಯ ಹಾಡು 2 ಮಿಲಿಯನ್ (20 ಲಕ್ಷ) ವೀಕ್ಷಣೆಗಳನ್ನು ಪಡೆದುಕೊಂಡಿದೆ. ಎರಡನೇ ಸ್ಥಾನ ಕನ್ನಡ ಆವೃತ್ತಿಯದ್ದು, ಯೋಗರಾಜ್ ಭಟ್ ಅವರ ಸಾಹಿತ್ಯವಿರುವ ಕನ್ನಡ ಆವೃತ್ತಿಯ ಹಾಡು 17 ಲಕ್ಷ ವೀಕ್ಷಣೆಗಳೊಂದಿಗೆ ಟ್ರೆಂಡ್ ಆಗುತ್ತಿದೆ. ರಾಮಜೋಗಯ್ಯ ಶಾಸ್ತ್ರಿ ಸಾಹಿತ್ಯ ಬರೆದಿರುವ ತೆಲುಗು ಹಾಡು 4.37 ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದೆ. ತಮಿಳು ಹಾಡಿಗೆ 1.8 ಲಕ್ಷ ಮತ್ತು ಮಲಯಾಳಂ ಆವೃತ್ತಿ 78 ಸಾವಿರ ವೀಕ್ಷಣೆಗಳನ್ನು ಯೂಟ್ಯೂಬ್​​ನಲ್ಲಿ ಪಡೆದುಕೊಂಡಿದೆ. ಈ ಮಾಹಿತಿಯು ಮಾರ್ಚ್ 03ರ ಸಂಜೆ ವೇಳೆಗೆ ಸಂಗ್ರಹಿಸಿದ ಮಾಹಿತಿ ಆಗಿದ್ದು, ವೀವ್ಸ್​​ಗಳ ಸಂಖ್ಯೆ ಪ್ರತಿ ಗಂಟೆಗೂ ಬದಲಾಗುತ್ತಲೇ ಇರುತ್ತದೆ.

ಇದನ್ನೂ ಓದಿ:ಜನರ ಟೀಕೆ ಬಳಿಕ ಯಶ್ ಜೊತೆ ನಾಯಕಿ ಮುಖ ತೋರಿಸಿದ ‘ಟಾಕ್ಸಿಕ್’ ಚಿತ್ರತಂಡ

ಈ ಹಿಂದೆ ಬಿಡುಗಡೆ ಆಗಿದ್ದ ಯಶ್ ಅವರ ಪಾತ್ರದ ಇಂಟ್ರೊಡಕ್ಷನ್ ಟೀಸರ್ ಮತ್ತು ಸಿನಿಮಾದ ಟೀಸರ್​​ಗೆ ಹೋಲಿಸಿದರೆ ಇದು ಕಡಿಮೆ ಸಂಖ್ಯೆ ಎನ್ನಬಹುದು. ಯಶ್ ಅವರ ಇಂಟ್ರೊಡಕ್ಷನ್ ಟೀಸರ್ ಸುಮಾರು ಒಂದು ಕೋಟಿಗೂ ಹೆಚ್ಚಿನ ವೀವ್ಸ್ ಗಳಿಸಿಕೊಂಡಿತ್ತು. ಟ್ರೈಲರ್ ಸಹ ಸಖತ್ ಟ್ರೆಂಡ್ ಆಗಿತ್ತು. ಆದರೆ ನಿನ್ನೆ ಬಿಡುಗಡೆ ಆಗಿರುವ ಹಾಡು ಹೆಚ್ಚಿನ ಹೈಪ್ ಸೃಷ್ಟಿ ಮಾಡಿಲ್ಲವೆಂದೇ ಹೇಳಬೇಕು.

ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಯಶ್ ಅವರ ಜೊತೆಗೆ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಶಿ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾದ ಟ್ರೈಲರ್ ಮಾರ್ಚ್ 8 ರಂದು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಸಿನಿಮಾದ ಟ್ರೈಲರ್ ‘ಟಾಕ್ಸಿಕ್’ ಸಿನಿಮಾಕ್ಕೆ ಭರ್ಜರಿ ಪ್ರಚಾರವನ್ನು ಕೊಡಲಿದೆ, ಹೈಪ್ ಹೆಚ್ಚಿಸಲಿದೆ ಎಂಬುದು ಯಶ್ ಅಭಿಮಾನಿಗಳ ನಿರೀಕ್ಷೆಯಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಎಲೆಕ್ಷನ್​​​ಗೆ 2 ವರ್ಷ ಮೊದಲೇ ಬಿಜೆಪಿ ಅಭ್ಯರ್ಥಿಗಳ ಘೋಷಣೆ: ಬಿಎಸ್​​ವೈ ವಿರುದ್ಧ ಭುಗಿಲೆದ್ದ ಆಕ್ರೋಶ – Kannada News | BJP Leader Angry On BS Yediyurappa For Announced Davanagere Candidate Name For Upcoming Karnataka Assembly Poll

ದಾವಣಗೆರೆ, (ಮಾರ್ಚ್ 03): ಕರ್ನಾಟಕ ಬಿಜೆಪಿಯಲ್ಲಿ (Karnataka BJP) ಮತ್ತೆ ಅಸಮಾಧಾನ ಸ್ಫೋಟಕಗೊಂಡಿದೆ. ಈ ಬಾರಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ (BS Yediyurappa) ಅವರ ನಡೆಯಿಂದಲೇ ಅಸಮಾಧಾನ ಭುಗಿಲೆದ್ದಿದೆ. ಹೌದು..  ವಿಧಾನಸಭೆ ಚುನಾವಣೆ (Karnataka Assembly Election) ಇನ್ನೂ ಎರಡು ವರ್ಷ ಇರುವಾಗಲೇ ಬಿಎಸ್ ಯಡಿಯೂರಪ್ಪ ತಮ್ಮ ಬೆಂಬಲಿಗರಿಗೆ ಟಿಕೆಟ್ ಘೋಷಣೆ ಮಾಡಿದ್ದಾರೆ. ಹೊನ್ನಾಳಿಯಲ್ಲಿ ನಡೆದ ರೇಣುಕಾಚಾರ್ಯ ಜನ್ಮ ದಿನ ಕಾರ್ಯಕ್ರಮದಲ್ಲಿ ಪಕ್ಕದ ಹರಪನಹಳ್ಳಿ ಸೇರಿ ದಾವಣಗೆರೆ (Davanagere) ಜಿಲ್ಲೆಯ ಬಹುತೇಕ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆ ಘೋಷಣೆ ಘೋಷಣೆ ಮಾಡಿದ್ದಾರೆ. ಇದರಿಂದ ಪಕ್ಷೀಯ ಮುಖಂಡರು ಯಡಿಯೂರಪ್ಪ ತಿರುಗಿಬಿದ್ದಿದ್ದು, ಹೊನ್ನಾಳಿಯಲ್ಲಿ ಮಾಡಿದ ಘೋಷಣೆಯನ್ನು ಕೂಡಲೇ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ. ಮೊದಲೇ ಬಿಜೆಪಿಯಲ್ಲಿ ಮುಸುಕಿನ ಗುದ್ದಾಟಗಳು ನಡೆಯುತ್ತಿದ್ದು, ಇವುಗಳನ್ನು ಬಗೆರಿಸಬೇಕಾದ ಹಿರಿಯ ನಾಯಕ ಯಡಿಯೂರಪ್ಪನವರೇ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಗಳು ಕೇಳಿಬಂದಿವೆ.

ಕಳೆದ ಲೋಕಸಭೆ ಚುನಾವಣೆಯಿಂದ ದಾವಣಗೆರೆ ಬಿಜೆಪಿ ಮನೆಯೊಂದು ಮೂರು ಬಾಗಿಲು ಆಗಿದೆ. ಒಂದಾಗುವುದು ಕಷ್ಟದ ಕೆಲಸ ಎಂಬ ಮಾತುಗಳು ಕೇಳಿ ಬರುತ್ತಿದೆ. ಮಾಜಿ ಸಂಸದ ಜಿಎಂ ಸಿದ್ದೇಶ್ವರ ಹಾಗೂ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಅವರ ಬಣಗಳನ್ನ ಒಂದು ಮಾಡುವ ಜವಾಬ್ದಾರಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗೆ ವಹಿಸಲಾಗಿತ್ತು. ಮೃದು ಸ್ವಭಾವದ ಶೆಟ್ಟರ್ ಹೇಳುವಷ್ಟು ಹೇಳಿ ಮೌನಕ್ಕೆ ಶರಣಾಗಿದ್ದಾರೆ. ಈಗ ಹೊಸ ವಿವಾದ ಅಂದ್ರೆ ಮೊನ್ನೆ ಹೊನ್ನಾಳಿಯಲ್ಲಿ ಮಾಜಿ ಸಿಎಂ ಬಿಎಸ್ ವೈ ಮಾಡಿದ ಮಾತುಗಳು. ಫೆಬ್ರುವರಿ 28 ರಂದು ಹೊನ್ನಾಳಿಯಲ್ಲಿ ನಡೆದ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಅವರ 64ನೇ ಜನ್ಮ ದಿನದ ಕಾರ್ಯಕ್ರಮದಲ್ಲಿ. ಇದು ಬಿಜೆಪಿಯ ಇನ್ನೊಂದು ಬಣದ ನಿದ್ದೆಗೆಡಿಸಿದೆ.

ಇದನ್ನೂ ಓದಿ: ರಾಜ್ಯ ರಾಜಕಾರಣದಲ್ಲಿ ಫೋನ್​​ ಟ್ಯಾಪಿಂಗ್​​ ಬಿರುಗಾಳಿ: ವಿಪಕ್ಷಗಳ ಮೇಲೆ ಮುಗಿಬಿದ್ದ ಕಾಂಗ್ರೆಸ್​​

ಹಲವು ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿದ ಬಿಎಸ್​​ವೈ

ಹೊನ್ನಾಳಿಯಲ್ಲಿ ನಡೆದ  ಮಾಜಿ ಶಾಸಕ ರೇಣುಕಾಚಾರ್ಯ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ದಾವಣಗೆರೆ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ಸಂಭವನೀಯ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಿದ್ದಾರೆ.  ಹೊನ್ನಾಳಿಗೆ ಎಂಪಿ ರೇಣುಕಾಚಾರ್ಯ, ಚನ್ನಗಿರಿ- ಮಾಡಾಳ್ ವಿರೂಪಾಕ್ಷಪ್ಪ , ಹರಿಹರ-ಚಂದ್ರಶೇಖರ ಪೂಜಾರ, ದಾವಣಗೆರೆ ಉತ್ತರ ಲೋಕಕೆರೆ ನಾಗರಾಜ್, ಜಗಳೂರು ಎಸ್ ವಿ ರಾಮಚಂದ್ರ ಹಾಗೂ ಹರಪನಹಳ್ಳಿ-ಕರುಣಾಕರ ರೆಡ್ಡಿಗೆ ಟಿಕೆಟ್ ಘೋಷಣೆ ಮಾಡಿದ್ದಾರೆ. ಇದು ಇತರೆ ನಾಯಕರ ಆಕ್ರೊಶಕ್ಕೆ ಕಾರಣವಾಗಿದೆ.

ಬಹಿರಂಗ ಅಸಮಾಧಾನ ಹೊರ ಹಾಕಿದ ಬಿಜೆಪಿ ನಾಯಕ

ಈ ಸಂಬಂಧ ದಾವಣಗೆರೆ ಬಿಜೆಪಿ ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ ಶಾಂತರಾಜ್‌ ಪಾಟೀಲ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು. ಇತ್ತೀಚೆಗೆ ಹೊನ್ನಾಳಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಯಡಿಯೂರಪ್ಪ, ಜಿಲ್ಲೆಯ ಹಲವು ಕ್ಷೇತ್ರಗಳ ಬಿಜೆಪಿಯ ಸಂಭವನೀಯ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ್ದಾರೆ. ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಎಂ.ಪಿ. ರೇಣುಕಾಚಾರ್ಯ ಅವರನ್ನು ಸಚಿವರನ್ನಾಗಿ ಮಾಡುವಂತೆ ಕೋರಿದ್ದಾರೆ. ಪಕ್ಷದ ಶಿಷ್ಟಾಚಾರವನ್ನು ಉಲ್ಲಂಘಿಸುವಂತಹ ಹೇಳಿಕೆಯನ್ನು ಯಡಿಯೂರಪ್ಪ ಅವರಿಂದ ನಿರೀಕ್ಷಿಸಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಯಡಿಯೂರಪ್ಪ ಅವರು ಪಕ್ಷದ ಪ್ರಶ್ನಾತೀತ ನಾಯಕ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದಿರುವ ಅವರ ಬಗ್ಗೆ ಅಪಾರ ಗೌರವವಿದೆ. ಅವರು ಭಾಷಣದಲ್ಲಿ ಆಡಿರುವ ಮಾತುಗಳ ಬಗ್ಗೆ ಮಾತ್ರ ಆಕ್ಷೇಪವಿದೆ. ಇದು ಅವರಿಗೆ ಶೋಭೆ ತರುವುದಿಲ್ಲ. ಪಕ್ಷದ ಕಾರ್ಯಕರ್ತರ ಉತ್ಸಾಹ ಕುಗ್ಗಿಸುವ ಪ್ರಯತ್ನವನ್ನು ಯಡಿಯೂರಪ್ಪ ಅವರು ಮಾಡಬಾರದು’ ಎಂದು ಅಸಮಾಧಾನ ಹೊರಹಾಕಿದರು.

ಬಿಜೆಪಿ ಇತರ ಪಕ್ಷಕ್ಕಿಂತ ಭಿನ್ನ. ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ‌ ಶಿಷ್ಟಾಚಾರವಿದೆ. ಕೇಂದ್ರ ಸಂಸದೀಯ ಮಂಡಳಿಯು ಅಭ್ಯರ್ಥಿ ಆಯ್ಕೆ ಮಾಡುತ್ತದೆ. ಏಕಾಏಕಿ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಇಂತಹವರನ್ನೇ ಗೆಲ್ಲಿಸುವಂತೆ ಅವರು ಮಾಡಿಕೊಂಡ ಮನವಿ ಸರಿಯಲ್ಲ. ಪಕ್ಷದಿಂದ ಹೊರನಡೆದು ಪ್ರಾದೇಶಿಕ ಪಕ್ಷವೊಂದನ್ನು ಸಂಘಟಿಸುವ ಹುನ್ನಾರ ಅವರಲ್ಲಿ ಇರುವಂತೆ ಕಾಣುತ್ತಿದೆ’ ಎಂದು ದೂರಿದರು.

ಬಿ.ವೈ. ವಿಜಯೇಂದ್ರ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ಬಳಿಕ ಪ್ರತಿ ಜಿಲ್ಲೆಯಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ. ವಿಬಿ-ಜಿರಾಮ್‌ಜಿ ಕುರಿತು ಇತ್ತೀಚೆಗೆ ಹೊನ್ನಾಳಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಪಕ್ಷದ ಶಾಸಕ ಬಿ.ಪಿ. ಹರೀಶ್, ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ಅವರಿಗೆ ಆಹ್ವಾನ ನೀಡಿರಲಿಲ್ಲ. ಗುಂಪುಗಾರಿಕೆ ಮಾಡುವವರ ಜೊತೆ ಸೇರಿದ ವಿಜಯೇಂದ್ರ ಅವರು ಪಕ್ಷವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು.

ವರಿಷ್ಠರ ಗಮನಕ್ಕೆ ತರಲು ತೀರ್ಮಾನ

ಬಿಎಸ್ ವೈ ಹೇಳಿಕೆಗೆ ದಾವಣಗೆರೆ ಬಿಜೆಪಿ ಬಿ ಟೀಮ್ ಆಕ್ರೋಶ ವ್ಯಕ್ತಪಡಿಸಿದ್ದು, ಇದನ್ನ ಖಂಡಿಸಿ ಇನ್ನೊಂದು ಬಿಜೆಪಿ ಬಣ ಇದೇ ಮಾರ್ಚ್ 5ರಂದು ಜಿಎಂ ಐಟಿ ಕಾಲೇಜ್ ಅತಿಥಿ ಗೃಹದಲ್ಲಿ ಪ್ರತಿಭಟನಾ ಸಭೆ ಮುಂದಾಗಿದೆ. ಮಾಜಿ ಸಂಸದ ಜಿಎಂ ಸಿದ್ದೇಶ್ವರ ಹಾಗೂ ಹಾಲಿ ಶಾಸಕ ಬಿಪಿ ಹರೀಶ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ತಮ್ಮ ವಿಚಾರವನ್ನ ಪಕ್ಷದ ವರಿಷ್ಠರ ಗಮನಕ್ಕೆ ತರಲುಪಿಸಲು ನಿರ್ಧರಿಸಿದೆ. ಇನ್ನು ಪ್ರತಿಭಟನಾ ಸಭೆ ಮಾಡುವ ದಿನವೇ ಜಿಲ್ಲಾ ಬಿಜೆಪಿ ಕಚೇರಿಗೆ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ಬರುತ್ತಿದ್ದಾರೆ. ಈ ವೇಳೆ ಈ ವಿಚಾರವನ್ನು ಅವರ ಗಮನಕ್ಕೆ ತರಲು ಸಹ ತೀರ್ಮಾನಿಸಿದ್ದಾರೆ.

ರಾಜ್ಯದಲ್ಲಿ ಹೇಗೆ ಬಿಜೆಪಿಯಲ್ಲಿ ಗೊಂದಲಗಳಿವೆ ಅದರಂತೆ ದಾವಣಗೆರೆ ಜಿಲ್ಲೆಯಲ್ಲಿ ಗೊಂದಲಗಳು ಹೆಚ್ಚಾಗಿದ್ದು, ಬಣ ಬಡಿದಾಟುಗಳು ನಡೆದಿವೆ.  ಇನ್ನೊಂದೆಡೆ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ. ಇದರ ನಡುವೆಯೇ ಬಿಜೆಪಿಯಲ್ಲಿ ಈಗ ಹೊಸ ಗೊಂದಲ ಸೃಷ್ಟಿಸಿದ್ದು, ಇದು ಮುಂದೆ ಯಾವ ಹಂತಕ್ಕೆ ಹೋಗಲಿದೆ ಎಂದು ಕಾದುನೋಡಬೇಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version