ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಅವರು ಇಂದು (ಮೇ 10) ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಭೇಟಿ ನೀಡಿ, ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ 70ನೇ ಜನ್ಮದಿನಾಚರಣೆ ಹಾಗೂ ಸಂಸ್ಥೆಯ 45ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಪಾಲ್ಗೊಂಡರು. ಈ ಐತಿಹಾಸಿಕ ಸಂದರ್ಭದಲ್ಲಿ ನೂತನವಾಗಿ ನಿರ್ಮಿಸಲಾದ ಭವ್ಯ ‘ದಿವ್ಯ ಧ್ಯಾನ ಮಂದಿರ’ವನ್ನು ಲೋಕಾರ್ಪಣೆಗೊಳಿಸಿದ ಅವರು, ಬೆಂಗಳೂರಿನ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಹಿರಿಮೆಯನ್ನು ಕೊಂಡಾಡಿದರು. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಕಳೆದ ನಾಲ್ಕು ದಶಕಗಳಲ್ಲಿ ವಿಶಾಲ ವಟವೃಕ್ಷದಂತೆ ಬೆಳೆದು ಜಾಗತಿಕವಾಗಿ ಲಕ್ಷಾಂತರ ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತಂದಿದೆ ಎಂದು ಬಣ್ಣಿಸಿದ ಪ್ರಧಾನಿಯವರು, ಯೋಗ ಮತ್ತು ಧ್ಯಾನದ ಭಾರತೀಯ ಪರಂಪರೆಯನ್ನು ಸ್ಮರಿಸುತ್ತಾ ಗುರೂಜಿಯವರ 100ನೇ ಜನ್ಮದಿನದ ಶತಮಾನೋತ್ಸವ ಕಾರ್ಯಕ್ರಮಕ್ಕೂ ಮತ್ತೆ ಬರುವುದಾಗಿ ಆತ್ಮವಿಶ್ವಾಸದಿಂದ ಘೋಷಿಸಿದರು.
ಬೆಂಗಳೂರು, ಮೇ 10: ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಆತಂಕಕಾರಿ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಬೆಂಗಳೂರು ಹೊರವಲಯದ ಕಗ್ಗಲಿಪುರ ಗ್ರಾಮದ ತಾತಗುಣಿ ಬಳಿ, ಪ್ರಧಾನಿ ಮೋದಿ ಸಂಚರಿಸುವ ರಸ್ತೆ ಮಾರ್ಗದ ಸಮೀಪ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ಪ್ರಧಾನಮಂತ್ರಿಯವರ ಆರ್ಟ್ ಆಫ್ ಲಿವಿಂಗ್ ಆಶ್ರಮ ಭೇಟಿಯ ಮಾರ್ಗದಲ್ಲಿ ಈ ಜಿಲೆಟಿನ್ ಕಡ್ಡಿಗಳು ದೊರೆತಿವೆ.
ಈ ಸಂಬಂಧ ಓರ್ವ ಶಂಕಿತ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಬೆಂಗಳೂರು ನಗರ ಪೊಲೀಸ್ ಮತ್ತು ರಾಮನಗರ ಪೊಲೀಸರು ಜಂಟಿಯಾಗಿ ಈ ಪ್ರಕರಣದ ತನಿಖೆಯನ್ನು ಕೈಗೊಂಡಿದ್ದಾರೆ. ಜಿಲೆಟಿನ್ ಕಡ್ಡಿಗಳು ಉದ್ದೇಶಪೂರ್ವಕವಾಗಿ ಇರಿಸಲಾಗಿದೆಯೇ ಅಥವಾ ಇದರ ಹಿಂದಿನ ಉದ್ದೇಶವೇನು ಎಂಬುದು ಪೊಲೀಸರ ತನಿಖೆಯಿಂದ ಸ್ಪಷ್ಟವಾಗಬೇಕಿದೆ. ಸದ್ಯಕ್ಕೆ, ಈ ಘಟನೆ ಆತಂಕ ಹಾಗೂ ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ವಶಕ್ಕೆ ಪಡೆದಿರುವ ವ್ಯಕ್ತಿಯ ಹಿನ್ನೆಲೆ ಮತ್ತು ಈ ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮೇ 10: ಶ್ರೀ ಶ್ರೀ ರವಿಶಂಕರ್ ಗುರೂಜಿ 70ನೇ ಜನ್ಮೋತ್ಸವ ಹಾಗೂ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45ನೇ ವರ್ಷಾಚರಣೆ ಕಾರ್ಯಕ್ರಮ ಬೆಂಗಳೂರಿನ ಕನಕಪುರ ರಸ್ತೆಯ ಆಶ್ರಮದಲ್ಲಿ ಭಾನುವಾರ ನೆರವೇರಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ, ಕಮಲದ ಹೂವಿನ ಆಕೃತಿಯಲ್ಲಿ ನಿರ್ಮಾಣ ಮಾಡಲಾಗಿರುವ ಭವ್ಯವಾದ ‘ಧ್ಯಾನ ಮಂದಿರ’ವನ್ನು ಲೋಕಾರ್ಪಣೆಗೊಳಿಸಿದರು. ಇದೇ ಸಂದರ್ಭದಲ್ಲಿ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಪ್ರಧಾನಿ ಮೋದಿಗೆ ಆರ್ಟ್ ಆಫ್ ಲಿವಿಂಗ್ ಫೋಟೊ ಕೊಟ್ಟು ಸನ್ಮಾನಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಅಭಿಮಾನಿಗಳ ನಿರೀಕ್ಷೆಯಂತೆಯೇ ನಟ ದಳಪತಿ ವಿಜಯ್ (Thalapathy Vijay) ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಸಮಾರಂಭಕ್ಕೆ ವಿಜಯ್ ಅವರ ಆಪ್ತ ಸ್ನೇಹಿತೆ ತ್ರಿಶಾ ಕೃಷ್ಣನ್ ಅವರು ಆಗಮಿಸಿದ್ದು, ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ತ್ರಿಶಾ ಅವರ ಆಗಮನವು ಎಲ್ಲರ ಗಮನ ಸೆಳೆಯಿತು. ತ್ರಿಶಾ ಮತ್ತು ವಿಜಯ್ ಅವರು ಹಲವು ವರ್ಷಗಳಿಂದ ಆಪ್ತವಾಗಿದ್ದಾರೆ. ಅವರ ಬಗ್ಗೆ ಅನೇಕ ಗಾಸಿಪ್ಗಳು ಇವೆ. ಆದರೆ ಅವುಗಳಿಂದ ಅವರಿಬ್ಬರು ತಲೆ ಕೆಡಿಸಿಕೊಂಡಿಲ್ಲ. ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಬಂದ ತ್ರಿಶಾ ಅವರು ವಾಪಸ್ ತೆರಳುವಾಗ ಅವರಿಗೆ ಭದ್ರತೆ ನೀಡಲಾಯಿತು. ತ್ರಿಶಾ (Trisha Krishnan) ಅವರನ್ನು ನೋಡಲು ಅಭಿಮಾನಿಗಳು ಮುತ್ತಿಕೊಂಡಿದ್ದರು.
ಆರ್ಟ್ ಆಫ್ ಲಿವಿಂಗ್ ಧ್ಯಾನ ಮಂದಿರ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿImage Credit source: tv9
ಬೆಂಗಳೂರು, ಮೇ 10: ಆರ್ಟ್ ಆಫ್ ಲಿವಿಂಗ್ (Art of Living) ಸಂಸ್ಥೆಯ 45ನೇ ವರ್ಷಾಚರಣೆ ಹಾಗೂ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ (Sri Sri Ravi Shankar Guruji) ಅವರ 70ನೇ ಜನ್ಮೋತ್ಸವದ ಅಂಗವಾಗಿ ಬೆಂಗಳೂರಿನ ಕನಕಪುರ ರಸ್ತೆಯ ಆಶ್ರಮದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಪಾಲ್ಗೊಂಡರು. ಈ ಸಂದರ್ಭದಲ್ಲಿ ಕಮಲದ ಹೂವಿನ ಆಕೃತಿಯಲ್ಲಿ ನಿರ್ಮಾಣ ಮಾಡಲಾಗಿರುವ ಭವ್ಯವಾದ ‘ಧ್ಯಾನ ಮಂದಿರ’ವನ್ನು ಲೋಕಾರ್ಪಣೆಗೊಳಿಸಿದ ಅವರು, ಆಧ್ಯಾತ್ಮಿಕ ಶಕ್ತಿ ಮತ್ತು ಸಮಾಜ ಸೇವೆಯ ಮಹತ್ವದ ಬಗ್ಗೆ ಪ್ರಸ್ತಾಪಿಸಿದರು. ಗುರೂಜಿಯವರ ಮತ್ತು ಆಶ್ರಮದ ಸೇವಾ ಕಾರ್ಯಗಳು ಭಾರತವನ್ನು ‘ವಿಶ್ವಗುರು’ವನ್ನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಶ್ಲಾಘಿಸಿದರು.
ಮುಖ್ಯಾಂಶಗಳು
ಆಶ್ರಮದಲ್ಲಿ ನೂತನವಾಗಿ ನಿರ್ಮಿಸಲಾದ ಭವ್ಯ ‘ಧ್ಯಾನ ಮಂದಿರ’ವನ್ನು ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಿದರು.
‘ಗುರೂಜಿಯವರ 100ನೇ ವರ್ಷದ ಸಂಭ್ರಮಾಚರಣೆಗೂ ನಾನೇ ಬರುತ್ತೇನೆ’ ಎಂದು ಮೋದಿ ನುಡಿದರು.
ಪ್ರಕೃತಿ ರಕ್ಷಣೆ, ನೈಸರ್ಗಿಕ ಕೃಷಿ ಮತ್ತು ಜಲ ಸಂರಕ್ಷಣೆಯೇ ನಿಜವಾದ ‘ಬದುಕಿನ ಕಲೆ (Art of Living)’ ಎಂದು ಮೋದಿ ವ್ಯಾಖ್ಯಾನಿಸಿದರು.
ಸೇವೆಯೇ ಪರಮ ಧರ್ಮ
ತಮ್ಮ ಭಾಷಣದುದ್ದಕ್ಕೂ ‘ಸೇವೆ’ಯ ಮಹತ್ವವನ್ನು ಎತ್ತಿ ಉಲ್ಲೇಖಿಸಿದ ಮೋದಿ, ‘ನಮ್ಮಲ್ಲಿ ಸೇವೆ ಎನ್ನುವುದು ಪರಮ ಧರ್ಮ. ಪರೋಪಕಾರವೇ ಪುಣ್ಯ, ಪರಪೀಡನೆಯೇ ಪಾಪ. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಪ್ರತಿ ಕಾರ್ಯಕರ್ತನಲ್ಲೂ ಸೇವಾ ಭಾವನೆ ಎದ್ದು ಕಾಣುತ್ತಿದೆ. ಗುರೂಜಿ ಅವರು ಕಳೆದ 45 ವರ್ಷಗಳ ಹಿಂದೆ ಬಿತ್ತಿದ ಬೀಜ ಇಂದು ವಿಶಾಲವಾದ ಹೆಮ್ಮರವಾಗಿ ಬೆಳೆದು ನಿಂತಿದೆ. ಈ ವೃಕ್ಷದ ಸಾವಿರಾರು ಶಾಖೆಗಳು ಜಗತ್ತಿನಾದ್ಯಂತ ಲಕ್ಷಾಂತರ ಜನರ ಬದುಕನ್ನು ಸುಂದರಗೊಳಿಸುತ್ತಿವೆ ಎಂದು ಹರ್ಷ ವ್ಯಕ್ತಪಡಿಸಿದರು.
ಸೇವಾ ಭಾವನೆಯಿಂದ ಮಾಡಿದ ಕಾರ್ಯವು ಯಾವಾಗಲೂ ಸುಖದ ಫಲ ನೀಡುತ್ತದೆ ಎಂಬುದಕ್ಕೆ ಈ ಮಂದಿರವೇ ಸಾಕ್ಷಿ. ಈ ಆಶ್ರಮದ ಪವಿತ್ರ ಪರಿಸರದಲ್ಲಿ ಕಾಲ ಕಳೆದ ಸಂದರ್ಭ ಮತ್ತು ಇಲ್ಲಿನ ದಿವ್ಯ ಅನುಭವವು ಸ್ಮೃತಿಯಲ್ಲಿ ಸದಾ ಇರಲಿದೆ ಎಂದು ಮೋದಿ ನುಡಿದರು.
ಬೆಂಗಳೂರು ಮತ್ತು ಆಧ್ಯಾತ್ಮದ ಸಂಗಮ
ಬೆಂಗಳೂರು ಕೇವಲ ತಂತ್ರಜ್ಞಾನದ ನಗರವಲ್ಲ, ಇದು ಆಧ್ಯಾತ್ಮಿಕ ಚೇತನದ ಕೇಂದ್ರವೂ ಹೌದು ಎಂದು ಪ್ರಧಾನಿ ಬಣ್ಣಿಸಿದರು. ‘ಬೆಂಗಳೂರು ನಗರವು ವಿಶ್ವಕ್ಕೆ ಸಾಫ್ಟ್ವೇರ್ ಅನ್ನು ನೀಡುತ್ತಿದೆ. ಅದೇ ರೀತಿ ಆರ್ಟ್ ಆಫ್ ಲಿವಿಂಗ್ ಮೂಲಕ ವಿಶ್ವಕ್ಕೆ ಮಾನಸಿಕ ಶಾಂತಿಯ ಸಾಫ್ಟ್ವೇರ್ ಅನ್ನೂ ನೀಡುತ್ತಿದೆ. ಯೋಗ, ಧ್ಯಾನ ಮತ್ತು ಪ್ರಾಣಾಯಾಮಗಳು ಭಾರತದ ಸಂಸ್ಕಾರದ ಅವಿಭಾಜ್ಯ ಅಂಗಗಳಾಗಿದ್ದು, ಇವುಗಳನ್ನು ಜಾಗತಿಕ ಮಟ್ಟದಲ್ಲಿ ಜನಪ್ರಿಯಗೊಳಿಸುವಲ್ಲಿ ಈ ಸಂಸ್ಥೆಯ ಪಾತ್ರ ಹಿರಿದು’ ಎಂದು ಮೋದಿ ಮೆಚ್ಚುಗೆ ಸೂಚಿಸಿದರು.
ಪರಿಸರ ರಕ್ಷಣೆಗೆ ಮೋದಿ ಕರೆ
ಮುಂದಿನ ತಲೆಮಾರಿನ ಹಿತದೃಷ್ಟಿಯಿಂದ ಪರಿಸರವನ್ನು ಉಳಿಸುವುದು ನಮ್ಮೆಲ್ಲರ ಹೊಣೆ ಎಂದ ಪ್ರಧಾನಿ, ಆಶ್ರಮದ ಕಾರ್ಯಕರ್ತರಿಗೆ ಕೆಲವು ಮಹತ್ವದ ಕೆಲಸಗಳನ್ನು ವಹಿಸಿದರು. ‘ಕೆಮಿಕಲ್ ಗೊಬ್ಬರಗಳಿಂದ ನಮ್ಮ ಭೂಮಿ ತಾಯಿಯನ್ನು ರಕ್ಷಿಸುವುದು ಕೂಡ ಒಂದು ಆರ್ಟ್ ಆಫ್ ಲಿವಿಂಗ್. ನೈಸರ್ಗಿಕ ಕೃಷಿಗೆ ಹೆಚ್ಚಿನ ಒತ್ತು ನೀಡಿ. ಜಲ ಸಂರಕ್ಷಣೆ ಮತ್ತು ಪ್ರತಿ ಹನಿ ನೀರನ್ನು ಉಳಿಸುವುದು ಬದುಕಿನ ಅತ್ಯಗತ್ಯ ಕಲೆಯಾಗಲಿ ಎಂದರು.
ಯುವಶಕ್ತಿ ಮತ್ತು ಡಿಜಿಟಲ್ ಭಾರತ
ಭಾರತದ ಯುವಜನತೆ ಇಂದು ಬಾಹ್ಯಾಕಾಶದಿಂದ ಡಿಜಿಟಲ್ ಪೇಮೆಂಟ್ವರೆಗೆ ಎಲ್ಲ ರಂಗದಲ್ಲೂ ಮುಂಚೂಣಿಯಲ್ಲಿದ್ದಾರೆ ಎಂದು ಹೆಮ್ಮೆಯಿಂದ ಹೇಳಿದ ಮೋದಿ, ‘ಯುವಕರು ಮಾನಸಿಕವಾಗಿ ಶಾಂತರಾಗಿದ್ದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಆಧುನಿಕ ಯುಗದ ಒತ್ತಡಗಳನ್ನು ಎದುರಿಸಲು ಧ್ಯಾನ ಮಂದಿರವು ಶಾಂತಿ ಮತ್ತು ಚೈತನ್ಯದ ಕೇಂದ್ರವಾಗಲಿದೆ’ ಎಂದು ಆಶಿಸಿದರು.
ಐಪಿಎಲ್ ಅಂಗಳದಲ್ಲಿ ಕೇವಲ ಬ್ಯಾಟ್ ಮತ್ತು ಬಾಲ್ ನಡುವಿನ ಹೋರಾಟ ಮಾತ್ರವಲ್ಲದೆ, ಆಟಗಾರರ ನಡುವಿನ ಸಂಭ್ರಮಾಚರಣೆಯ ಜಿದ್ದಾಜಿದ್ದೂ ನೋಡುಗರಿಗೆ ಭರಪೂರ ಮನರಂಜನೆ ನೀಡುತ್ತದೆ. ಇತ್ತೀಚೆಗೆ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ನಡೆದ ಪಂದ್ಯವು ಇಂತಹದ್ದೇ ಒಂದು ಸ್ವಾರಸ್ಯಕರ ಘಟನೆಗೆ ಸಾಕ್ಷಿಯಾಯಿತು. ರಾಜಸ್ಥಾನ ರಾಯಲ್ಸ್ ತಂಡದ ರವೀಂದ್ರ ಜಡೇಜಾ ಅವರ ‘ಪಾಕೆಟ್’ ಸಂಭ್ರಮಕ್ಕೆ, ಅಫ್ಘಾನ್ ಸ್ಪಿನ್ ಮಾಂತ್ರಿಕ ರಶೀದ್ ಖಾನ್ ನೀಡಿದ ತಮಾಷೆಯ ತಿರುಗೇಟು ಇದೀಗ ವೈರಲ್ ಆಗಿದೆ. ಅಷ್ಟಕ್ಕೂ ಈ ‘ಪಾಕೆಟ್ ವೀಡಿಯೋ’ ಹಿಂದಿನ ಕಥೆಯೇನು? ಇಲ್ಲಿದೆ ಸಂಪೂರ್ಣ ವಿವರ.
ಏನಿದು ‘ಪಾಕೆಟ್’ ಸೆಲೆಬ್ರೇಷನ್?
ಜೈಪುರದಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ವೇಳೆ ರಾಜಸ್ಥಾನ್ ರಾಯಲ್ಸ್ನ ರವೀಂದ್ರ ಜಡೇಜಾ ಅವರು ಜೋಸ್ ಬಟ್ಲರ್ ಅವರ ವಿಕೆಟ್ ಪಡೆದು, ನಿನ್ನ ವಿಕೆಟ್ ನನ್ನ ಪಾಕೆಟ್ನಲ್ಲಿ ಎಂಬಾರ್ಥದಲ್ಲಿ ‘ಪಾಕೆಟ್ ಸೆಲೆಬ್ರೇಷನ್’ ಮಾಡಿದ್ದರು.
ಗುಜರಾತ್ ಟೈಟಾನ್ಸ್ ಈ ಪಂದ್ಯವನ್ನು 77 ರನ್ಗಳ ಬೃಹತ್ ಅಂತರದಿಂದ ಗೆದ್ದ ನಂತರ, ರಶೀದ್ ಖಾನ್ ಅವರು ಒಂದು ವಿಶೇಷ ವೀಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ತಮ್ಮ ಜೇಬಿನಲ್ಲಿದ್ದ ವಸ್ತುವನ್ನು ಹುಡುಕುವಂತೆ ಅಭಿನಯಿಸಿದ ರಶೀದ್ ಖಾನ್, ನನ್ನ ಪಾಕೆಟ್ನಲ್ಲಿ 2 ಪಾಯಿಂಟ್ ಇದೆ ಎಂದು ತೋರಿಸಿದ್ದಾರೆ.
ಅಂದರೆ ನಿನ್ನ ಕಿಸೆಯಲ್ಲಿ ವಿಕೆಟ್ ಇದ್ದರೆ, ನನ್ನ ಜೇಬಿನಲ್ಲಿ 2 ಪಾಯಿಂಟ್ ಇದೆ ಎಂದು ರಶೀದ್ ಖಾನ್ ಪರೋಕ್ಷವಾಗಿ ರವೀಂದ್ರ ಜಡೇಜಾಗೆ ತಿರುಗೇಟು ನೀಡಿದ್ದಾರೆ. ಈ ಮೂಲಕ ವಿಕೆಟ್ಗಿಂತ ಪಾಯಿಂಟ್ ಮುಖ್ಯ ಎಂಬುದನ್ನು ಸಾರಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಪಂದ್ಯದ ಮುಖ್ಯಾಂಶಗಳು:
ಟೈಟಾನ್ಸ್ ಬ್ಯಾಟಿಂಗ್: ಶುಭ್ಮನ್ ಗಿಲ್ (84) ಮತ್ತು ಸಾಯಿ ಸುದರ್ಶನ್ (55) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡವು 20 ಓವರ್ಗಳಲ್ಲಿ 229 ರನ್ ಕಲೆಹಾಕಿತು.
ರಾಜಸ್ಥಾನ್ ರಾಯಲ್ಸ್ ಬ್ಯಾಟಿಂಗ್: 230 ರನ್ಗಳ ಕಠಿಣ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡವು 16.3 ಓವರ್ಗಳಲ್ಲಿ 152 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ 77 ರನ್ಗಳಿಂದ ಸೋಲೊಪ್ಪಿಕೊಂಡಿದೆ.
ರಶೀದ್ ಖಾನ್ ಮ್ಯಾಜಿಕ್: ಈ ಪಂದ್ಯದಲ್ಲಿ ಮಿಂಚಿದ ರಶೀದ್ ಖಾನ್ 4 ಓವರ್ಗಳಲ್ಲಿ 33 ರನ್ ನೀಡಿ 4 ಪ್ರಮುಖ ವಿಕೆಟ್ ಪಡೆದರು. ಇದರಲ್ಲಿ ರವೀಂದ್ರ ಜಡೇಜಾ ಅವರ ವಿಕೆಟ್ ಕೂಡ ಸೇರಿತ್ತು ಎಂಬುದು ವಿಶೇಷ.
ಈ ಗೆಲುವಿನೊಂದಿಗೆ ಗುಜರಾತ್ ಟೈಟಾನ್ಸ್ ತಂಡವು ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದೆ. ಅಲ್ಲದೆ ಮುಂದಿನ ಮೂರು ಮ್ಯಾಚ್ಗಳಲ್ಲಿ ಒಂದು ಗೆಲುವು ಸಾಧಿಸಿದರೆ ಪ್ಲೇಆಫ್ ಆಡುವುದನ್ನು ಖಚಿತಪಡಿಸಿಕೊಳ್ಳಲಿದೆ.
ಚೆನ್ನೈ, ಮೇ 10: ತಮಿಳುನಾಡು ರಾಜಕೀಯದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ದಶಕಗಳ ಕಾಲ ಆಳಿದ್ದ ದ್ರಾವಿಡ ಪಕ್ಷಗಳ ಭದ್ರಕೋಟೆಯನ್ನು ಭೇದಿಸಿದ ಟಿವಿಕೆ (TVK) ಮುಖ್ಯಸ್ಥ ದಳಪತಿ ವಿಜಯ್ ಇಂದು ತಮಿಳುನಾಡಿನ 24ನೇ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ್ದಾರೆ. ನೆಹರು ಕ್ರೀಡಾಂಗಣದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಪ್ರತಿಜ್ಞಾವಿಧಿ ಬೋಧಿಸಿದ್ದಾರೆ.
ಪ್ರಮಾಣವಚನಕ್ಕೂ ಮುನ್ನ ಭಾಷಣ ಮಾಡಿದ ವಿಜಯ್, ಇಂದು ನಾನು ಇಲ್ಲಿ ನಿಂತಿರುವುದು ಒಬ್ಬ ನಟನಾಗಿ ಅಲ್ಲ, ನಿಮ್ಮ ಮನೆಯ ಮಗನಾಗಿ. ಈ ಮಣ್ಣಿನ ಜನರ ಆಶೀರ್ವಾದದಿಂದ ನಾನು ಇಂದು ಈ ಜವಾಬ್ದಾರಿಯನ್ನು ಹೊರುತ್ತಿದ್ದೇನೆ. ನಮ್ಮ ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಇದು ಕೇವಲ ಒಂದು ಬದಲಾವಣೆಯಲ್ಲ, ಇದು ಹೊಸ ಪರ್ವದ ಆರಂಭ. ಭ್ರಷ್ಟಾಚಾರ ಮುಕ್ತ ಮತ್ತು ಪಾರದರ್ಶಕ ಆಡಳಿತ ನೀಡುವುದು ನನ್ನ ಮೊದಲ ಗುರಿ. ಜನಸಾಮಾನ್ಯರ ಒಂದು ರೂಪಾಯಿ ಕೂಡ ವ್ಯರ್ಥವಾಗದಂತೆ ನಾನು ನೋಡಿಕೊಳ್ಳುತ್ತೇನೆ. ತಮಿಳುನಾಡಿನ ಪ್ರತಿಯೊಬ್ಬ ನಾಗರಿಕನಿಗೂ ಸಾಮಾಜಿಕ ನ್ಯಾಯ ಸಿಗುವಂತೆ ಮಾಡುವುದೇ ನನ್ನ ಈ ಪಯಣದ ಉದ್ದೇಶ. ನಿಮ್ಮ ಪ್ರೀತಿ ಮತ್ತು ಬೆಂಬಲ ಹೀಗೆಯೇ ಇರಲಿ. ವಾಳಗ ತಮಿಳಗಂ (ತಮಿಳುನಾಡು ಬಾಳಲಿ)! ಎಂದಿದ್ದಾರೆ.
ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಸಿ. ಜೋಸೆಫ್ ವಿಜಯ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಜಯ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಪ್ರಧಾನಿಯವರು ತಮ್ಮ ಎಕ್ಸ್ ಖಾತೆಯಲ್ಲಿ, ವಿಜಯ್ ಅವರ ಮುಂದಿನ ಅಧಿಕಾರವಧಿಗೆ ಶುಭ ಕೋರಿದ್ದಾರೆ. ವಿಜಯ್ ಅವರ ಮುಂದಿನ ಅಧಿಕಾರವಧಿಗೆ ಶುಭ ಕೋರಿರುವ ಮೋದಿ, ಜನರ ಜೀವನವನ್ನು ಸುಧಾರಿಸಲು ಕೇಂದ್ರ ಸರ್ಕಾರವು ತಮಿಳುನಾಡು ಸರ್ಕಾರದ ಜೊತೆಗೂಡಿ ಕೆಲಸ ಮಾಡುವುದನ್ನು ಮುಂದುವರಿಸಲಿದೆ ಎಂದು ತಿಳಿಸಿದ್ದಾರೆ. ತಮಿಳುನಾಡಿನ ಸಮಗ್ರ ಅಭಿವೃದ್ಧಿಗಾಗಿ ಒಟ್ಟಾಗಿ ಶ್ರಮಿಸುವ ಸಂಕಲ್ಪವನ್ನು ಅವರು ಒತ್ತಿ ಹೇಳಿದ್ದಾರೆ.
ಚುನಾವಣಾ ಫಲಿತಾಂಶಗಳು ಪ್ರಕಟವಾದಾಗಲೂ ಪ್ರಧಾನಿ ನರೇಂದ್ರ ಮೋದಿ ಅವರು ಟಿವಿಕೆ ಪಕ್ಷವು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದಕ್ಕೆ ಅಭಿನಂದನೆ ಸಲ್ಲಿಸಿದ್ದರು. ಇದೀಗ ಸಿ. ಜೋಸೆಫ್ ವಿಜಯ್ ಅವರು ಅಧಿಕಾರದ ಚುಕ್ಕಾಣಿ ಹಿಡಿದು ಮುಖ್ಯಮಂತ್ರಿ ಗದ್ದುಗೆ ಏರಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಶುಭಾಶಯ ಕೋರಿದ್ದಾರೆ.
‘ಸಿ.ವಿ. ಶಿವಶಂಕರ್ (CV Shivashankar) ಕಲಾ ಪ್ರತಿಷ್ಠಾನ’ದ ವತಿಯಿಂದ ಇತ್ತೀಚೆಗೆ ಎರಡು ವಿಶೇಷ ಪ್ರಶಸ್ತಿಗಳನ್ನು ಪ್ರದಾನಿಸಲಾಯಿತು. ಕವಿರಾಜ್ (Kaviraj) ಅವರಿಗೆ ‘ಭರವಸೆಯ ಬರಹಗಾರ’ ಪ್ರಶಸ್ತಿ ಮತ್ತು ಸಂದೀಪ್ ಸುಂಕದ್ ಅವರಿಗೆ ‘ನಿಷ್ಣಾತ ನಿರ್ದೇಶಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಡಾ. ಜಯಮಾಲಾ, ಹಿರಿಯ ನಟಿ ಡಾ. ಗಿರಿಜಾ ಲೋಕೇಶ್, ಹಿರಿಯ ರಾಜಕಾರಣಿ ಹಾಗೂ ಚಿತ್ರರಂಗದ ಕಾರ್ಯಕರ್ತ ಡಾ. ಮದನ್ ಪಟೇಲ್ ಮತ್ತು ಸದಾಶಿವ ಶೆಣೈ ಉಪಸ್ಥಿತರಿದ್ದರು.
ಈ ವೇಳೆ ನಿರ್ದೇಶಕ ವೆಂಕಟ್ ಭಾರದ್ವಾಜ್ ಅವರು ಮಾಡಿದರು. ಸಿ.ವಿ. ಶಿವಶಂಕರ್ ಕಲಾ ಪ್ರತಿಷ್ಠಾನದ ಉದ್ದೇಶ ಮತ್ತು ಧ್ಯೇಯವನ್ನು ಅವರು ವಿವರಿಸಿದರು. ತಮ್ಮ ಜೀವನಕಾಲದಲ್ಲಿ ಸಿ.ವಿ. ಶಿವಶಂಕರ್ ಅವರು ಹೊಸ ಪ್ರತಿಭೆಗಳಿಗೆ ಸದಾ ಪ್ರೋತ್ಸಾಹ ನೀಡುತ್ತಿದ್ದರು ಮತ್ತು ಕನ್ನಡ ಚಿತ್ರರಂಗಕ್ಕೆ ಅನೇಕ ಕಲಾವಿದರನ್ನು ಪರಿಚಯಿಸಿದ್ದರು ಎಂದು ಅವರು ತಿಳಿಸಿದರು. ಕನ್ನಡ ಭಾಷೆ ಮತ್ತು ಕನ್ನಡ ಚಿತ್ರರಂಗದ ಅಭಿವೃದ್ಧಿಯೇ ಶಿವಶಂಕರ್ ಅವರ ಜೀವನದ ಪ್ರಮುಖ ಧ್ಯೇಯವಾಗಿತ್ತು ಎಂದು ಹೇಳಿದರು.
ಸಿ.ವಿ. ಶಿವಶಂಕರ್ ಅವರ ಜೀವನ ಹಾಗೂ ಸಾಧನೆಗಳನ್ನು ಒಳಗೊಂಡ ಅಭಿಮಾನಿ ಪುಸ್ತಕವನ್ನು ಡಾ. ಜಯಮಾಲಾ ಮತ್ತು ವೇದಿಕೆಯಲ್ಲಿದ್ದ ಗಣ್ಯರು ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಪುಸ್ತಕದ ಲೇಖಕರಾದ ದಿವಂಗತ ಜಿ.ಜಿ. ನಾಗರಾಜ್ ಅವರ ಪತ್ನಿ ಕೃಷ್ಣವೇಣಿ ನಾಗರಾಜ್ ಹಾಗೂ ಪುಸ್ತಕದ ವಿನ್ಯಾಸಕರಾದ ಈಶ್ವರ್ ಬಡಿಗೇರ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸದಾಶಿವ ಶೆಣೈ ಅವರು ಸಿ. ವಿ. ಶಿವಶಂಕರ್ ಅವರ ಜೀವನ ಹೋರಾಟವನ್ನು ಸ್ಮರಿಸಿದರು. ವಿಶೇಷವಾಗಿ ಕನ್ನಡ ಕುವರ ಚಿತ್ರದ ಕುರಿತು ಪ್ರಸ್ತಾಪಿಸಿ, ಆ ಚಿತ್ರವನ್ನು ಬಿಡುಗಡೆ ಮಾಡಲು ಶಿವಶಂಕರ್ ಅವರು 30 ವರ್ಷಗಳ ಕಾಲ ಹೋರಾಟ ನಡೆಸಿದರೂ ಅದು ಇನ್ನೂ ಬಿಡುಗಡೆಯಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಹಿರಿಯ ನಿರ್ದೇಶಕರ ಬಿಡುಗಡೆ ಆಗದ ಚಿತ್ರಗಳಿಗೆ ಅವಕಾಶ ಕಲ್ಪಿಸಬೇಕೆಂದು ಅವರು ಡಾ. ಜಯಮಾಲಾ ಅವರಿಗೆ ಮನವಿ ಮಾಡಿದರು.
ಜಯಮಾಲಾ ಅವರು ಮಾತನಾಡಿ, ಸಿ.ವಿ. ಶಿವಶಂಕರ್ ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು. ರಸ್ತೆ ನಾಮಕರಣದ ವಿಷಯವಾಗಿ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಭರವಸೆ ನೀಡಿದರು. ಜೊತೆಗೆ ಹಿರಿಯ ನಿರ್ದೇಶಕರ ಹಳೆಯ ಸಿನಿಮಾಗಳನ್ನು ಡಿಜಿಟೈಸ್ ಮಾಡಿ ಸಂರಕ್ಷಿಸುವ ಅಗತ್ಯತೆಯ ಕುರಿತು ಮಾತನಾಡಿ, ಕನ್ನಡ ಚಿತ್ರರಂಗದ ಇತಿಹಾಸ ಉಳಿಸಬೇಕಾದ ಮಹತ್ವವನ್ನು ಒತ್ತಿಹೇಳಿದರು.
ಗಿರಿಜಾ ಲೋಕೇಶ್ ಅವರು ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡು, 12ನೇ ವಯಸ್ಸಿನಲ್ಲಿ ಸಿ.ವಿ. ಶಿವಶಂಕರ್ ಅವರ ಬಳಿ ನೃತ್ಯ ಕಲಿತ ದಿನಗಳನ್ನು ಸ್ಮರಿಸಿದರು. ಅವರ ಪ್ರಾಮಾಣಿಕತೆ, ಸಮಯಪಾಲನೆ ಹಾಗೂ ಸರಳತೆಯನ್ನು ಕೊಂಡಾಡಿದರು. ಮದನ್ ಪಟೇಲ್ ಅವರು ಸಿ.ವಿ. ಶಿವಶಂಕರ್ ಅವರ ಹೆಸರಿನಲ್ಲಿ ರಸ್ತೆ ನಾಮಕರಣ ಮಾಡುವ ಪ್ರಸ್ತಾವನೆ ಕಳೆದ ಎರಡು ವರ್ಷಗಳಿಂದ ಬಾಕಿಯಿದ್ದು, ಅದನ್ನು ಶೀಘ್ರ ಜಾರಿಗೆ ತರಲು ಸರ್ಕಾರಕ್ಕೆ ಪತ್ರ ಬರೆಯುವಂತೆ ಡಾ. ಜಯಮಾಲಾ ಅವರಿಗೆ ಮನವಿ ಮಾಡಿದರು.
ಬೆಂಗಳೂರು, ಮೇ 10: ಬೆಂಗಳೂರಿನಲ್ಲಿ ನಡೆದ ಆರ್ಟ್ ಆಫ್ ಲಿವಿಂಗ್ನ 45ನೇ ವರ್ಷದ ಸಂಭ್ರಮಾಚರಣೆ ಹಾಗೂ ಹೊಸ ಧ್ಯಾನ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸ್ವತಃ ಪ್ರಧಾನಿಗಳೇ ಒಬ್ಬ ಯೋಗಿಯಾಗಿದ್ದು, ಅವರ 10 ವರ್ಷಗಳ ಆಡಳಿತದಲ್ಲಿ ಭಾರತವು ವಿಶ್ವಮಟ್ಟದಲ್ಲಿ ಹೊಸ ಎತ್ತರಕ್ಕೆ ಏರಿದೆ ಎಂದು ಅವರು ಬಣ್ಣಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿಶ್ವದ ನಾನಾ ಭಾಗಗಳಿಂದ ಭಕ್ತರು ಭಾಗಿಯಾಗಿದ್ದರು.
ಮುಖ್ಯಾಂಶಗಳು
ಭಾರತವನ್ನು ಆರ್ಥಿಕವಾಗಿ 3ನೇ ಸ್ಥಾನಕ್ಕೆ ತಂದ ಮೋದಿ ಒಬ್ಬ ನೈಜ ಯೋಗಿ ಎಂದ ಗುರೂಜಿ
ರಾಮಮಂದಿರ ನಿರ್ಮಾಣಕ್ಕೆ ಕರ್ನಾಟಕದ ಶಿಲೆ ಮತ್ತು ಶಿಲ್ಪಿಯ ಕೊಡುಗೆಯ ಬಗ್ಗೆ ಗುರೂಜಿ ಮಾತು
ಸ್ವಚ್ಛ ಭಾರತ ಮತ್ತು ಸುರಕ್ಷಿತ ದೇಶ ನಿರ್ಮಿಸಿದ ಪ್ರಧಾನಿ ಕಾರ್ಯವೈಖರಿಗೆ ಶ್ಲಾಘನೆ
ಸೇವಾ ಕಾರ್ಯಗಳಿಗೆ ಚಾಲನೆ
ತಮ್ಮ 70ನೇ ಜನ್ಮೋತ್ಸವದ ನಿಮಿತ್ತ ಆಶ್ರಮವು ಹಮ್ಮಿಕೊಂಡಿರುವ ನದಿ ಪುನಶ್ಚೇತನ, ನೈಸರ್ಗಿಕ ಕೃಷಿ ಮತ್ತು ಗ್ರಾಮೀಣ ಶಿಕ್ಷಣ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ನಮ್ಮ ಸಂಭ್ರಮವು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿದಾಗ ಮಾತ್ರ ಅದು ಸಾರ್ಥಕವಾಗುತ್ತದೆ. ಭಾರತದ ಹಳ್ಳಿಗಳು ಸಮೃದ್ಧವಾದರೆ ಇಡೀ ದೇಶ ಸುಭಿಕ್ಷವಾಗುತ್ತದೆ ಎಂದು ಅವರು ಹೇಳಿದರು.
ಮೋದಿಯವರ ಕಾರ್ಯವೈಖರಿಗೆ ಪ್ರಶಂಸೆ
ವೇದಿಕೆಯಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಮಾತನಾಡಿದ ಗುರೂಜಿಯವರು, ಗಲೀಜು, ಬಡತನ ಮತ್ತು ಅವ್ಯವಸ್ಥೆಯಿಂದ ಕೂಡಿದ್ದ ದೇಶಕ್ಕೆ ಮೋದಿ ಅವರು ‘ಸ್ವಚ್ಛ ಭಾರತ’ ಅಭಿಯಾನದ ಮೂಲಕ ಹೊಸ ರೂಪ ನೀಡಿದ್ದಾರೆ. ಈ ಹಿಂದೆ ದೇಶದಲ್ಲಿದ್ದ ಭಯೋತ್ಪಾದನೆಯ ಆತಂಕ ದೂರವಾಗಿ, ದೇಶ ಸುರಕ್ಷಿತವಾಗಿದೆ ಎಂದು ಗುರೂಜಿ ಹೇಳಿದರು.
ಅಯೋಧ್ಯೆಯ ಭವ್ಯ ರಾಮ ಮಂದಿರದ ನಿರ್ಮಾಣವನ್ನು ಶ್ಲಾಘಿಸಿದ ಅವರು, ರಾಮಲಲ್ಲಾನ ಮೂರ್ತಿಯ ಕೆತ್ತನೆಗೆ ಬಳಸಿದ ಶಿಲೆ ಹಾಗೂ ಅದನ್ನು ಕೆತ್ತಿದ ಶಿಲ್ಪಿ (ಅರುಣ್ ಯೋಗಿರಾಜ್) ಇಬ್ಬರೂ ಕರ್ನಾಟಕದವರು ಎಂಬುದು ಹೆಮ್ಮೆಯ ವಿಷಯ ಎಂದರು. ಭಾರತವು ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದು, ಈ ಹಿಂದೆ 14ನೇ ಸ್ಥಾನದಲ್ಲಿದ್ದ ದೇಶ ಇಂದು 3ನೇ ಸ್ಥಾನಕ್ಕೆ ಏರಿದೆ ಎಂದು ಅವರು ಮೆಚ್ಚುಗೆ ಸೂಚಿಸಿದರು.
ಯೋಗ ಮತ್ತು ಆಯುರ್ವೇದಕ್ಕೆ ಜಾಗತಿಕ ಮನ್ನಣೆ ದೊರಕಿಸಿಕೊಟ್ಟ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ. ಆಯುಷ್ ಸಚಿವಾಲಯದ ಸ್ಥಾಪನೆಯು ಆಯುರ್ವೇದದ ಪುನರುತ್ಥಾನಕ್ಕೆ ಕಾರಣವಾಗಿದೆ. ಈ ಹಿಂದೆ ದೇಶವನ್ನು ಕಾಡುತ್ತಿದ್ದ ಭಯೋತ್ಪಾದನೆಯ ಕರಿನೆರಳು ದೂರವಾಗಿದ್ದು, ಇಂದು ಜನತೆ ಸುರಕ್ಷಿತ ಭಾವನೆಯಲ್ಲಿದ್ದಾರೆ. ಕಾಶಿಯ ಅಭಿವೃದ್ಧಿಯು ಅದ್ಭುತವಾಗಿದ್ದು, ಕರ್ನಾಟಕದ ದಂಪತಿಗಳು ತಮ್ಮ ಕುಟುಂಬದೊಂದಿಗೆ ಅಲ್ಲಿಗೆ ಭೇಟಿ ನೀಡಬೇಕು ಎಂದು ಕರೆ ನೀಡಿದರು. ಕೊನೆಯಲ್ಲಿ, ನಮ್ಮವರಿಗೆ ನಾವು ಧನ್ಯವಾದಗಳನ್ನು ಹೇಳುವುದಿಲ್ಲ, ಏಕೆಂದರೆ ಧನ್ಯವಾದ ಹೇಳಿದರೆ ಅವರು ಪರಕೀಯರಾಗುತ್ತಾರೆ; ಮೋದಿ ಅವರು ನಮ್ಮವರು ಎಂದು ಭಾವುಕರಾಗಿ ನುಡಿದರು.
ಆಧ್ಯಾತ್ಮಿಕತೆಯೇ ಬದುಕಿನ ದಾರಿ
ತಮ್ಮ ಆಶೀರ್ವಚನದಲ್ಲಿ ಗುರೂಜಿಯವರು, ಮನುಷ್ಯನು ಬಾಹ್ಯ ಸುಖಗಳಿಗಿಂತ ಒಳಗಿನ ಶಾಂತಿಯನ್ನು ಕಂಡುಕೊಳ್ಳಬೇಕು ಎಂದು ತಿಳಿಸಿದರು. ಧ್ಯಾನ ಎಂಬುದು ಕೇವಲ ಕಣ್ಣು ಮುಚ್ಚಿ ಕುಳಿತುಕೊಳ್ಳುವುದಲ್ಲ, ಅದು ನಮ್ಮ ಆತ್ಮದೊಂದಿಗೆ ನಾವು ಅನುಸಂಧಾನ ಮಾಡುವ ಪ್ರಕ್ರಿಯೆ. ಜಗತ್ತು ಇಂದು ಯುದ್ಧ ಮತ್ತು ಆತಂಕಗಳ ಸುಳಿಯಲ್ಲಿದೆ, ಇಂತಹ ಸಮಯದಲ್ಲಿ ಪ್ರೀತಿ ಮತ್ತು ಕರುಣೆ ಮಾತ್ರ ನಮ್ಮನ್ನು ರಕ್ಷಿಸಬಲ್ಲವು ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ