ಯಾರ್ಕರ್ ಕಿಂಗ್ ಎಂದೇ ಜನಪ್ರಿಯತೆ ಪಡೆದಿರೋ ಜಸ್ಪ್ರೀತ್ ಬುಮ್ರಾ ಈಗ ಲಯತಪ್ಪಿದ್ದು ಸ್ಪಷ್ಟವಾಗುತ್ತಿದೆ. ಈ ಬಾರಿ ಅವರಿಗೆ ಹೆಚ್ಚಿನ ವಿಕೆಟ್ ಸಿಕ್ಕಿಲ್ಲ ಎಂಬ ಕೊರಗು ಒಂದು ಕಡೆಯಾದರೆ, ನೋಬಾಲ್ ಹಾಕುವ ಮೂಲಕ ದುಬಾರಿ ಆಗುತ್ತಿದ್ದಾರೆ. ಮೇ4 ಎಲ್ಎಸ್ಜಿ ವಿರುದ್ಧದ ಪಂದ್ಯದಲ್ಲಿ ಬುಮ್ರಾ ಅವರು ಲಯತಪ್ಪಿದ್ದು ಸ್ಪಷ್ಟವಾಗಿದೆ. ಹಿಮ್ಮತ್ ಸಿಂಗ್ ಅವರು ಬುಮ್ರಾ ಬಾಲಿಂಗ್ನಲ್ಲಿ ಕೀಪರ್ ಕ್ಯಾಚ್ ಕೊಟ್ಟರು. ದುರಾದೃಷ್ಟ ಎಂದರ ಅದು ನೋಬಾಲ್ ಆಯಿತು. ಆ ಬಳಿಕ ಒಂದು ವೈಡ್ ಹಾಕಿದರು. ಬಳಿಕ ಮತ್ತೆ ನೋಬಾಲ್ ಹಾಕಿದರು. ನಿನ್ನೆಯ ಪಂದ್ಯದಲ್ಲಿ ಮೂರು ಹಾಗೂ ಈ ಸೀಸನ್ ಅಲ್ಲಿ 9 ನೋಬಾಲ್ಗಳನ್ನು ಬುಮ್ರಾ ಎಸೆದಿದ್ದಾರೆ.
ಬೆಂಗಳೂರು (ಮೇ. 05): ಇಂಡಿಯನ್ ಪ್ರೀಮಿಯರ್ ಲೀಗ್ 2026 ರ 47 ನೇ ಪಂದ್ಯದಲ್ಲಿ ಬೃಹತ್ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ (Mumbai Indians) ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 6 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ, ಮುಂಬೈ ತಮ್ಮ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿತು. ಮುಂಬೈ 10 ಪಂದ್ಯಗಳಲ್ಲಿ 3 ರಲ್ಲಿ ಗೆದ್ದ ನಂತರ ಪಾಯಿಂಟ್ ಪಟ್ಟಿಯಲ್ಲಿ 9 ನೇ ಸ್ಥಾನದಲ್ಲಿದೆ, ಅತ್ತ ಲಕ್ನೋ ಸೂಪರ್ ಜೈಂಟ್ಸ್ 9 ಪಂದ್ಯಗಳಲ್ಲಿ 7 ರಲ್ಲಿ ಸೋತಿದ್ದು ಕೊನೆಯ ಸ್ಥಾನದಲ್ಲಿದೆ.
ರಘು ಶರ್ಮಾಗೆ ಚೊಚ್ಚಲ ವಿಕೆಟ್- ವಿಶೇಷ ಸೆಲೆಬ್ರೇಷನ್
33 ವರ್ಷದ ಸ್ಪಿನ್ನರ್ ರಘು ಶರ್ಮಾ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದರು. ಅತ್ಯುತ್ತಮ ಬೌಲಿಂಗ್ ಪ್ರದರ್ಶನ ಕೂಡ ನೀಡಿದರು. 4 ಓವರ್ಗಳಲ್ಲಿ 36 ರನ್ಗಳಿಗೆ 1 ವಿಕೆಟ್ ಪಡೆದರು. ಅವರು ತಮ್ಮ ಸ್ಪಿನ್ನಿಂದ ಲಕ್ನೋ ಬ್ಯಾಟ್ಸ್ಮನ್ಗಳನ್ನು ಪರದಾಡಿದರು. ಮಧ್ಯಮ ಓವರ್ಗಳಲ್ಲಿ ರನ್ ದರವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಇದರ ಜೊತೆಗೆ ಈ ಪಂದ್ಯದಲ್ಲಿ ತಮ್ಮ ಮೊದಲ ಐಪಿಎಲ್ ವಿಕೆಟ್ ಪಡೆದು ಅದನ್ನು ವಿಶೇಷ ರೀತಿಯಲ್ಲಿ ಆಚರಿಸಿದರು. ಇದರ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಮೊದಲ ವಿಕೆಟ್ ಪಡೆದ ನಂತರ, ರಘು ಶರ್ಮಾ ತಮ್ಮ ಜೇಬಿನಿಂದ ಒಂದು ಚೀಟಿಯನ್ನು ಹೊರತೆಗೆದರು, ಅದರಲ್ಲಿ “ರಾಧೆ-ರಾಧೆ. ಗುರುದೇವರ ಕೃಪೆಯಿಂದ, 15 ವರ್ಷಗಳ ನೋವಿನ ಅವಧಿ ಇಂದು ಕೊನೆಗೊಂಡಿದೆ. ಈ ಅವಕಾಶವನ್ನು ನೀಡಿದ್ದಕ್ಕಾಗಿ ಮುಂಬೈ ಇಂಡಿಯನ್ಸ್ (ಬ್ಲೂ ಮತ್ತು ಗೋಲ್ಡ್) ತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳು. ನಾನು ಯಾವಾಗಲೂ ಕೃತಜ್ಞನಾಗಿರುತ್ತೇನೆ. ಜೈ ಶ್ರೀ ರಾಮ್.” ಎಂದು ಬರೆದಿದ್ದರು.
33 ವರ್ಷದ ರಘು ಶರ್ಮಾ ಜಲಂಧರ್ನಲ್ಲಿ ಜನಿಸಿದರು. ಅವರು ಲೆಗ್ ಸ್ಪಿನ್ನರ್. ಇಲ್ಲಿಯವರೆಗೆ ತಮ್ಮ ದೇಶೀಯ ವೃತ್ತಿಜೀವನದಲ್ಲಿ ಒಟ್ಟು 30 ಪಂದ್ಯಗಳನ್ನು ಆಡಿದ್ದಾರೆ. ಅವರು 12 ಪ್ರಥಮ ದರ್ಜೆ ಪಂದ್ಯಗಳು, 12 ಲಿಸ್ಟ್ ಎ ಪಂದ್ಯಗಳು ಮತ್ತು 6 ಟಿ 20 ಪಂದ್ಯಗಳನ್ನು ಆಡಿದ್ದಾರೆ. ಅವರು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 57 ವಿಕೆಟ್ಗಳು, ಲಿಸ್ಟ್ ಎ ಪಂದ್ಯಗಳಲ್ಲಿ 18 ಮತ್ತು ಟಿ 20 ಪಂದ್ಯಗಳಲ್ಲಿ 5 ವಿಕೆಟ್ಗಳನ್ನು ಕಬಳಿಸಿದ್ದಾರೆ. ದೇಶೀಯ ಕ್ರಿಕೆಟ್ನಲ್ಲಿ ಪಂಜಾಬ್ ಮತ್ತು ಪುದುಚೇರಿ ಪರ ಆಡಿದ್ದಾರೆ. 2017-18 ಋತುವಿನಲ್ಲಿ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದರು. ಲಕ್ನೋ ವಿರುದ್ಧದ ಪಂದ್ಯವು ರಘು ಶರ್ಮಾ ಅವರ ಎರಡನೇ ಐಪಿಎಲ್ ಪಂದ್ಯವಾಗಿತ್ತು. ಅವರು ಕಳೆದ ವರ್ಷ, ಅಂದರೆ 2025 ರಲ್ಲಿ ಮಧ್ಯ-ಋತುವಿನ ಬದಲಿ ಆಟಗಾರನಾಗಿ ತಂಡವನ್ನು ಸೇರಿದರು. ರಘು ಮುಂಬೈ ಇಂಡಿಯನ್ಸ್ ಪರ ನೆಟ್ ಬೌಲರ್ ಕೂಡ ಆಗಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮುಂಬೈ, ಮೇ 05: ತಲೆಗೆ ಮಚ್ಚು ಚುಚ್ಚಿದ್ದರೂ ಯುವಕನೊಬ್ಬ ಆಸ್ಪತ್ರೆಯ ಆವರಣದಲ್ಲಿ ಮೊಬೈಲ್ ಹಿಡಿದು ಏನೂ ಆಗಿಲ್ಲವೆಂಬಂತೆ ಓಡಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಮುಂಬೈನ ವಿಕ್ರೋಲಿ ಪ್ರದೇಶದಲ್ಲಿ ನಡೆದಿದೆ. ಆ ಆಯುಧವು ಆತನ ತಲೆಯಲ್ಲೇ ಸಿಲುಕಿಕೊಂಡಿತ್ತು. ಆದರೆ, ಇಂತಹ ಗಂಭೀರ ಸ್ಥಿತಿಯಲ್ಲೂ ಆತ ಮೊಬೈಲ್ ಬಳಸುತ್ತಾ ಆಸ್ಪತ್ರೆಗೆ ನಡೆದು ಬಂದಿರುವ ದೃಶ್ಯವು ನೋಡುಗರನ್ನು ಬೆಚ್ಚಿಬೀಳಿಸಿದೆ.
ಮೇ 4, 2026 ರಂದು ಮುಂಜಾನೆ ವಿಕ್ರೋಲಿಯ ಕಣ್ಣಂವರ್ ನಗರದಲ್ಲಿ ಇಸ್ಮಾ ಎಂಬ ಯುವಕನ ಮೇಲೆ ದುಷ್ಕರ್ಮಿಗಳು ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ದಾಳಿಯ ತೀವ್ರತೆಗೆ ಮಚ್ಚು ಆತನ ತಲೆಯೊಳಗೆ ಆಳವಾಗಿ ಇಳಿದಿತ್ತು. ತಲೆಗೆ ತೀವ್ರ ಗಾಯವಾಗಿದ್ದರೂ ಧೃತಿಗೆಡದ ಇಸ್ಮಾ, ಲೋಕಮಾನ್ಯ ತಿಲಕ್ ಮುನ್ಸಿಪಲ್ ಜನರಲ್ ಆಸ್ಪತ್ರೆಗೆ (ಸಿಯಾನ್ ಆಸ್ಪತ್ರೆ) ತಾನಾಗಿಯೇ ನಡೆದುಕೊಂಡು ಬಂದಿದ್ದಾರೆ.
ಆಸ್ಪತ್ರೆಯ ಟ್ರಾಮಾ ಐಸಿಯು ಹೊರಗೆ ಕಾಯುತ್ತಿದ್ದಾಗ, ತಲೆಯಲ್ಲಿ ಕುಡುಗೋಲು ಸಿಲುಕಿದ್ದರೂ ಆತ ಆಕಸ್ಮಿಕವಾಗಿ ತನ್ನ ಮೊಬೈಲ್ ಫೋನ್ ಬಳಸುತ್ತಿರುವುದು ಕಂಡುಬಂದಿದೆ. ಅತೀವ ರಕ್ತಸ್ರಾವವಾಗುತ್ತಿದ್ದರೂ ಆತ ಪೂರ್ಣ ಪ್ರಜ್ಞಾವಸ್ಥೆಯಲ್ಲಿದ್ದುದು ವೈದ್ಯಕೀಯ ಸಿಬ್ಬಂದಿಗೂ ಅಚ್ಚರಿ ಮೂಡಿಸಿದೆ.
ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮುಂಬೈನಲ್ಲಿ ಹೆಚ್ಚುತ್ತಿರುವ ಬೀದಿ ಹಿಂಸಾಚಾರ ಮತ್ತು ಕಾನೂನು ಸುವ್ಯವಸ್ಥೆಯ ಬಗ್ಗೆ ಸಾರ್ವಜನಿಕರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.ವಿಕ್ರೋಲಿ ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಿನಿಮಾ ರಂಗ ಮತ್ತು ರಾಜಕೀಯಕ್ಕೆ ಅವಿನಾಭಾವ ಸಂಬಂಧವಿದೆ. ಅದರಲ್ಲೂ ತಮಿಳುನಾಡು ರಾಜಕಾರಣದಲ್ಲಿ ಬೆಳ್ಳಿತೆರೆಯ ತಾರೆಗಳು ಆಡಳಿತದ ಚುಕ್ಕಾಣಿ ಹಿಡಿಯುವುದು ಹೊಸದೇನಲ್ಲ. ಆದರೆ, ಈಗ ನಟಿ ತ್ರಿಷಾ ಕೃಷ್ಣನ್ (Trisha Krishnan) ಅವರ ಹಳೆಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ. ಅಂದು ಅವರು ಕೇವಲ ತಮಾಷೆಗಾಗಿ ಹೇಳಿದ್ದ “ನಾನು ಸಿಎಂ ಆಗುತ್ತೇನೆ” ಎಂಬ ಮಾತು, ಇಂದು ಅವರ ಆಪ್ತ ಗೆಳೆಯ ದಳಪತಿ ವಿಜಯ್ ಅವರ ಜೀವನದಲ್ಲಿ ನಿಜವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.
ಕೆಲವು ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ತ್ರಿಷಾ ಅವರಿಗೆ ‘ನಿಮಗೆ ರಾಜಕೀಯಕ್ಕೆ ಬರುವ ಆಸೆ ಇದೆಯೇ?’ ಎಂಬ ಪ್ರಶ್ನೆ ಎದುರಾಗಿತ್ತು. ಅದಕ್ಕೆ ನಗುತ್ತಲೇ ಉತ್ತರಿಸಿದ್ದ ತ್ರಿಷಾ, ‘ನಾನು ರಾಜಕೀಯಕ್ಕೆ ಬಂದರೆ ನೇರವಾಗಿ ಮುಖ್ಯಮಂತ್ರಿಯೇ ಆಗುತ್ತೇನೆ’ ಎಂದು ತಮಾಷೆ ಮಾಡಿದ್ದರು. ಆ ಸಮಯದಲ್ಲಿ ಅದು ಕೇವಲ ಒಂದು ‘ಫನ್ನಿ’ ಸ್ಟೇಟ್ಮೆಂಟ್ ಆಗಿತ್ತೇ ಹೊರತು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ, ಇಂದು 2026ರ ಚುನಾವಣಾ ಫಲಿತಾಂಶದ ಮುನ್ಸೂಚನೆಗಳು ಹೊರಬೀಳುತ್ತಿರುವಾಗ, ಆ ಮಾತುಗಳು ಬೇರೆಯದೇ ಅರ್ಥ ಪಡೆದುಕೊಳ್ಳುತ್ತಿವೆ.
ದಳಪತಿ ವಿಜಯ್ ಅವರು ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ಮೂಲಕ ರಾಜಕೀಯಕ್ಕೆ ಧುಮುಕಿದಾಗ ಅನೇಕರು ಇದನ್ನು ಸಿನಿಮಾ ಸ್ಟಂಟ್ ಎಂದು ಭಾವಿಸಿದ್ದರು. ಆದರೆ, ಚುನಾವಣಾ ಕಣದಲ್ಲಿ ಅವರ ಪಕ್ಷ ಸಾಧಿಸುತ್ತಿರುವ ಅಭೂತಪೂರ್ವ ಮುನ್ನಡೆ ದ್ರಾವಿಡ ಪಕ್ಷಗಳ ಭದ್ರಕೋಟೆಯನ್ನು ನಡುಗಿಸಿದೆ. ವಿಜಯ್ ಸಿಎಂ ಗದ್ದುಗೆಯ ಸನಿಹಕ್ಕೆ ತಲುಪುತ್ತಿದ್ದಂತೆ, ಅಭಿಮಾನಿಗಳು ತ್ರಿಷಾ ಅವರ ಹಳೆಯ ವಿಡಿಯೋವನ್ನು ರೀಶೇರ್ ಮಾಡುತ್ತಾ, ‘ತ್ರಿಷಾ ಅಂದು ತಮಗಾಗಿ ಹೇಳಿದ್ದರೂ, ಅದು ವಿಜಯ್ ಪಾಲಿಗೆ ಸತ್ಯವಾಗುತ್ತಿದೆ’ ಎಂದು ಸಂಭ್ರಮಿಸುತ್ತಿದ್ದಾರೆ.
ಜಯ್ ಅವರ ಈ ರಾಜಕೀಯ ಪಯಣದಲ್ಲಿ ತ್ರಿಷಾ ಬೆನ್ನೆಲುಬಾಗಿ ನಿಂತಿದ್ದಾರೆ. ಫಲಿತಾಂದ ದಿನ (ಮೇ 4) ತ್ರಿಷಾ ಅವರ ಜನ್ಮದಿನ. ದೇ ದಿನ ವಿಜಯ್ ಅವರ ಪಕ್ಷ ಮುನ್ನಡೆ ಸಾಧಿಸಿರುವುದು ಒಂದು ಅದ್ಭುತ ಕಾಕತಾಳೀಯ. ತ್ರಿಷಾ ಅಂದು ತಮಾಷೆಗೆ ಹೇಳಿದ್ದ ಸಿಎಂ ಮಾತು, ಇಂದು ವಿಜಯ್ ಅವರ ಮೂಲಕ ಸಾಕಾರಗೊಳ್ಳುತ್ತಿರುವುದು ಅಭಿಮಾನಿಗಳಿಗೆ ‘ರಿಯಲ್ ಲೈಫ್ ಸಿನಿಮಾ’ ನೋಡಿದ ಅನುಭವ ನೀಡುತ್ತಿದೆ.
ಒಟ್ಟಾರೆಯಾಗಿ, ತ್ರಿಷಾ ಅವರ ಆ ಹಳೆಯ ಹೇಳಿಕೆ ಈಗ ವಿಜಯ್ ಅವರ ಯಶಸ್ಸಿನ ಮೆರುಗನ್ನು ಹೆಚ್ಚಿಸಿದೆ. ಸಿನಿಮಾ ಪರದೆಯ ಮೇಲೆ ಅಬ್ಬರಿಸುತ್ತಿದ್ದ ವಿಜಯ್ ಈಗ ರಾಜಕೀಯದ ಅಂಗಳದಲ್ಲಿ ಹೊಸ ಇತಿಹಾಸ ಬರೆಯಲು ಸಜ್ಜಾಗಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಮೂಡಿಬರುತ್ತಿರುವ ‘ರಾಣಿ’ ಧಾರಾವಾಹಿ ಹೊಸ ತಿರುವು ಪಡೆದುಕೊಂಡಿದೆ. ಕೇವಲ ಸಂಸಾರದ ಜಗಳ, ಕೌಟುಂಬಿಕ ಬಿಕ್ಕಟ್ಟುಗಳಿಗೆ ಬಹುತೇಕ ಧಾರಾವಾಹಿಗಳು ಸೀಮಿತ ಆಗಿರುತ್ತವೆ. ಆದರೆ, ‘ರಾಣಿ’ ಧಾರಾವಾಹಿ ಆ ರೀತಿ ಅಲ್ಲ. ಯಾವುದೋ ಅನಿವಾರ್ಯ ಕಾರಣಕ್ಕೆ ಬಾಲ್ಯದಲ್ಲಿ ಮೊಟಕಾಗಿದ್ದ ಅವಳ ಶಿಕ್ಷಣದ ಕನಸಿಗೆ ಈಗ ಜೀವ ಬಂದಿದೆ.
ರಾಣಿ ಹುಟ್ಟಿದ್ದು ಜೈಲಿನಲ್ಲಿ. ಹೀಗಾಗಿ, ವಿದ್ಯಾಭ್ಯಾಸ ನಡೆಸಲು ಆಕಗೆ ಸಾಧ್ಯವಾಗಿರಲಿಲ್ಲ. ಈಗ ಹಳೆಯ ಕಹಿ ನೆನಪುಗಳನ್ನು ಮರೆತು ಮತ್ತೆ ಅಕ್ಷರ ಲೋಕಕ್ಕೆ ಮರಳುತ್ತಿದ್ದಾಳೆ. ತನ್ನ ಮಗಳ ವಯಸ್ಸಿನ ವಿದ್ಯಾರ್ಥಿಗಳ ಜೊತೆಗೂಡಿ ಬೆಂಚಿನ ಮೇಲೆ ಕುಳಿತು ಪಾಠ ಕಲಿಯಲು ನಿರ್ಧರಿಸಿರುವ ಅವಳ ಧೈರ್ಯ ಮೆಚ್ಚುವಂತದ್ದು. ಸಮವಸ್ತ್ರ ಧರಿಸಿ ಶಾಲಾ ಬಾಲಕಿಯಂತೆ ಕಾಣಿಸಿಕೊಂಡಿರುವ ರಾಣಿಯ ಈ ಅವತಾರ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.
ಆದರೆ ರಾಣಿಯ ಈ ಸಾಹಸಕ್ಕೆ ಮನೆಯೊಳಗೆ ವಿರೋಧದ ಅಲೆ ಎದ್ದಿದೆ. ‘ಈ ವಯಸ್ಸಿನಲ್ಲಿ ಓದು ಬೇಕೆ?’ ಎಂಬ ವ್ಯಂಗ್ಯದ ಮಾತುಗಳು ಹಾಗೂ ಸರಳಾಳಂತಹ ಪಾತ್ರಗಳ ಕುತಂತ್ರಗಳು ಅವಳಿಗೆ ಅಡ್ಡಿಯಾಗುತ್ತಿವೆ. ಈ ಎಲ್ಲಾ ಸಾಮಾಜಿಕ ಮುಜುಗರ ಹಾಗೂ ಟೀಕೆಗಳನ್ನು ಕಡೆಗಣಿಸಿ, “ಕಲಿಯಲು ವಯಸ್ಸಿನ ಹಂಗಿಲ್ಲ” ಎಂಬ ಸಂದೇಶದೊಂದಿಗೆ ಅವಳು ಶಾಲೆಯ ಮೆಟ್ಟಿಲೇರಿದ್ದಾಳೆ. ಶಾಲಾ ಜೀವನದ ಮೊದಲ ಅನುಭವಗಳು ಈ ವಾರದ ಕಥಾಹಂದರದ ಪ್ರಮುಖ ಆಕರ್ಷಣೆಯಾಗಿವೆ.
ಹೊಸ ಪರಿಸರದಲ್ಲಿ ಶಿಕ್ಷಕರ ಪ್ರತಿಕ್ರಿಯೆ ಮತ್ತು ಸಹಪಾಠಿಗಳ ವರ್ತನೆ ರಾಣಿಯ ಮೇಲೆ ಎಂತಹ ಪ್ರಭಾವ ಬೀರಲಿದೆ ಎಂಬುದು ಕುತೂಹಲಕಾರಿ ಸಂಗತಿ. ಮಕ್ಕಳ ನಡುವೆ ಕುಳಿತು ಪಾಠ ಕೇಳುವಾಗ ಅವಳು ಪಡುವ ಸಂಕೋಚ ಮತ್ತು ಆನಂದದ ಕ್ಷಣಗಳು ವೀಕ್ಷಕರನ್ನು ಭಾವುಕರಾಗಿಸುವ ಸಾಧ್ಯತೆ ಇದೆ. ಇದು ಕೇವಲ ಓದು-ಬರಹ ಕಲಿಯುವ ಪ್ರಯತ್ನವಲ್ಲ, ಬದಲಾಗಿ ಕಳೆದುಹೋದ ತನ್ನ ಅಸ್ಮಿತೆಯನ್ನು ಹುಡುಕುವ ಪಯಣವಾಗಿದೆ.
ಈ ಬದಲಾವಣೆಯು ಸಮಾಜದ ಪ್ರತಿಯೊಬ್ಬ ಮಹಿಳೆಗೂ ಸ್ಫೂರ್ತಿ ನೀಡುವಂತಿದೆ. ಸಂಸಾರದ ನೊಗ ಹೊತ್ತು ತಮ್ಮ ಆಕಾಂಕ್ಷೆಗಳನ್ನು ಮರೆತ ಹೆಣ್ಣುಮಕ್ಕಳಿಗೆ ರಾಣಿ ಈಗ ಮಾದರಿಯಾಗಿದ್ದಾಳೆ. ಅಡೆತಡೆಗಳನ್ನು ಮೆಟ್ಟಿ ನಿಂತು ರಾಣಿ ಜ್ಞಾನದ ಶಿಖರ ಏರುತ್ತಾಳಾ? ಶಾಲಾ ಆವರಣದಲ್ಲಿ ಅವಳಿಗೆ ಎದುರಾಗುವ ಸವಾಲುಗಳು ಮುಂದಿನ ದಿನಗಳಲ್ಲಿ ಹೈಲೈಟ್ ಆಗಲಿವೆ. ‘ರಾಣಿ’ ಧಾರಾವಾಹಿ ಪ್ರತಿ ದಿನ ಸಂಜೆ 6 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.
ಬೆಂಗಳೂರು, ಮೇ 5: ನೀವು ಇಂದು ತುಮಕೂರು ರಸ್ತೆ ಅಥವಾ ಪೀಣ್ಯ ಮಾರ್ಗವಾಗಿ ಸಂಚರಿಸುತ್ತಿದ್ದೀರಾ? ಹಾಗಿದ್ದಲ್ಲಿ ಈ ಸುದ್ದಿ ಗಮನಿಸಿ. ಈ ಹಿಂದೆ ಘೋಷಿಸಿದಂತೆ, ಪೀಣ್ಯ ಎಲಿವೇಟೆಡ್ ಫ್ಲೈಓವರ್ನ (Peenya Elevated Flyover) ಕೇಬಲ್ ಅಳವಡಿಕೆ ದುರಸ್ತಿ ಕಾಮಗಾರಿ ಹಾಗೂ ಅಂತಿಮ ಲೋಡ್ ಟೆಸ್ಟಿಂಗ್ ಹಿನ್ನೆಲೆಯಲ್ಲಿ ಇಂದಿನಿಂದ (ಮೇ 5) ಅನ್ವಯವಾಗುವಂತೆ ಮುಂದಿನ 4 ದಿನಗಳ ಕಾಲ ಫ್ಲೈಓವರ್ ಮೇಲೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಮೇ 5ರ ಬೆಳಗ್ಗೆ 5 ಗಂಟೆಯಿಂದ ಮೇ 8ರ ಬೆಳಗ್ಗೆ 11 ಗಂಟೆಯವರೆಗೆ ಫ್ಲೈಓವರ್ ಬಂದ್ ಮಾಡುತ್ತಿದೆ. ಈ ಅವಧಿಯಲ್ಲಿ ಫ್ಲೈಓವರ್ನ ಎರಡೂ ಬದಿಗಳಲ್ಲಿ ಸಂಚಾರ ಇರುವುದಿಲ್ಲ. ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ವಾಹನ ಸವಾರರು ಸಹಕರಿಸುವಂತೆ ಬೆಂಗಳೂರು ಟ್ರಾಫಿಕ್ ಪೊಲೀಸರು ವಿನಂತಿಸಿದ್ದಾರೆ.
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) May 1, 2026
ಪರ್ಯಾಯ ಮಾರ್ಗಗಗಳ ವಿವರ ಇಲ್ಲಿದೆ
ನೆಲಮಂಗಲದಿಂದ ಬೆಂಗಳೂರು ನಗರದ ಕಡೆಗೆ ಬರುವವರು: ಕೆನ್ನಮೆಟಲ್ ಫ್ಯಾಕ್ಟರಿ ಹತ್ತಿರ ಫ್ಲೈಓವರ್ ಕೆಳಭಾಗದ ಎನ್.ಹೆಚ್-4 ರಸ್ತೆ ಮತ್ತು ಸರ್ವಿಸ್ ರಸ್ತೆ ಮೂಲಕ 8ನೇ ಮೈಲಿ, ದಾಸರಹಳ್ಳಿ, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್, ಎಸ್.ಆರ್.ಎಸ್ ಜಂಕ್ಷನ್ ಮಾರ್ಗವಾಗಿ ಗೊರಗುಂಟೆಪಾಳ್ಯ ಅಥವಾ ಜಾಲಹಳ್ಳಿ ಕ್ರಾಸ್ ತಲುಪಬಹುದು.
ಸಿ.ಎಂ.ಟಿ.ಐ ನಿಂದ ನೆಲಮಂಗಲ ಕಡೆಗೆ ಹೋಗುವವರು: ಫ್ಲೈಓವರ್ ಕೆಳಭಾಗದ ಸರ್ವಿಸ್ ರಸ್ತೆ ಮೂಲಕ ಎಸ್.ಆರ್.ಎಸ್ ಜಂಕ್ಷನ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್, ಜಾಲಹಳ್ಳಿ ಕ್ರಾಸ್, ದಾಸರಹಳ್ಳಿ ಹಾಗೂ 8ನೇ ಮೈಲಿ ದಾಟಿ ನೆಲಮಂಗಲ ಟೋಲ್ ಕಡೆಗೆ ಸಾಗಬಹುದು.
ಈ ಹಿಂದೆ ಏಪ್ರಿಲ್ನಲ್ಲಿ ನಡೆಯಬೇಕಿದ್ದ ಈ ಪ್ರಕ್ರಿಯೆಯು ಕಾರಣಾಂತರಗಳಿಂದ ಮುಂದೂಡಲ್ಪಟ್ಟಿತ್ತು. ಇದೀಗ ಇಂದಿನಿಂದ ಕಾಮಗಾರಿ ಆರಂಭವಾಗುತ್ತಿರುವುದರಿಂದ ಸರ್ವಿಸ್ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಸವಾರರು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪ್ರಯಾಣ ಬೆಳೆಸುವುದು ಸೂಕ್ತ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ದಳಪತಿ ವಿಜಯ್ ಅವರ (Thalapathy Vijay) ರಾಜಕೀಯ ಜೀವನದ ಬಹುದೊಡ್ಡ ಕನಸು ನನಸಾಗುವ ಕಾಲ ಹತ್ತಿರ ಬಂದಿದೆ. ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅವರ ‘ತಮಿಳಗ ವೆಟ್ರಿ ಕಳಗಮ್’ (TVK) ಪಕ್ಷ ಬರೋಬ್ಬರಿ 106 ಸ್ಥಾನಗಳಲ್ಲಿ ಜಯಭೇರಿ ಬಾರಿಸುವ ಮೂಲಕ ರಾಜ್ಯದ ಅಧಿಕಾರದ ಗದ್ದುಗೆ ಏರುವುದು ಈಗ ಬಹುತೇಕ ಖಚಿತವಾಗಿದೆ. ಈ ಭರ್ಜರಿ ಯಶಸ್ಸಿನ ಬೆನ್ನಲ್ಲೇ, ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ವಿಜಯ್ ಅವರ ಕಾರಿನ ನಂಬರ್ ಪ್ಲೇಟ್ನ ವಿಷಯ ಮತ್ತೆ ಚರ್ಚೆಗೆ ಬಂದಿದೆ.
2024ರಲ್ಲಿ ‘ಗ್ರೇಟೆಸ್ಟ್ ಆಫ್ ಆಲ್ ಟೈಮ್’ (GOAT) ಸಿನಿಮಾ ಬಿಡುಗಡೆಯ ಸಮಯದಲ್ಲಿ ವಿಜಯ್ ಅವರು ಕಾರೊಂದರಲ್ಲಿ ಕಾಣಿಸಿಕೊಂಡಿದ್ದರು. ಆ ಕಾರಿನ ನಂಬರ್ ಪ್ಲೇಟ್ TN 07 CM 2026 ಎಂದಿತ್ತು. ಇದು ನಿರ್ದೇಶಕ ವೆಂಕಟ್ ಪ್ರಭು ಅವರ ಕಾರಾಗಿತ್ತು. ವಿಜಯ್ ಮೇಲಿನ ಅಭಿಮಾನಕ್ಕೋಸ್ಕರ ಅವರು ಈ ಸಂಖ್ಯೆ ತೆಗೆದುಕೊಂಡಿದ್ದರು ಎನ್ನಲಾಗಿದೆ. ವಿಶೇಷ ಎಂದರೆ ‘ಗೋಟ್’ ಸಿನಿಮಾದ ದೃಶ್ಯವೊಂದರಲ್ಲೂ ಇದೇ ಕಾರು ಬಳಕೆ ಆಗಿತ್ತು. ವಿಜಯ್ ಅವರು ಈ ಕಾರನ್ನು ಡ್ರೈವ್ ಮಾಡಿಕೊಂಡು ಹೋಗುವ ದೃಶ್ಯ ಇದೆ.
‘CM 2026’ ಎಂಬ ಕಾರು ಸಂಖ್ಯೆ ಈಗ ನಿಜವಾಗಿದೆ. ಅಂದುಕೊಂಡಂತೆಯೇ 2026ರ ಚುನಾವಣೆಯಲ್ಲಿ ವಿಜಯ್ ಕಿಂಗ್ ಆಗಿ ಹೊರಹೊಮ್ಮಿದ್ದಾರೆ.ವಿಜಯ್ ಈಗಾಗಲೇ ತಮ್ಮ ಭವಿಷ್ಯದ ಬಗ್ಗೆ ಸ್ಪಷ್ಟವಾಗಿದ್ದಾರೆ. ‘ಜನ ನಾಯಗನ್’ ಅವರ ಕೊನೆಯ ಚಿತ್ರವಾಗಲಿದೆ ಎಂದು ಘೋಷಿಸಿರುವ ವಿಜಯ್, ಪೂರ್ಣ ಪ್ರಮಾಣದಲ್ಲಿ ಜನಸೇವೆಯಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದಾರೆ. 2025ರಿಂದಲೇ ಪಕ್ಷ ಸಂಘಟನೆಯಲ್ಲಿ ಹಗಲಿರುಳು ಶ್ರಮಿಸಿದ್ದ ವಿಜಯ್ ಅವರಿಗೆ ತಮಿಳುನಾಡಿನ ಮತದಾರರು ಈಗ ಕೈ ಹಿಡಿದಿದ್ದಾರೆ.
ವಿಜಯ್ ಅವರ ಕೊನೆಯ ಚಿತ್ರವನ್ನು ನಿರ್ಮಾಣ ಮಾಡುತ್ತಿರುವ ಕೆವಿಎನ್ (KVN) ಪ್ರೊಡಕ್ಷನ್ಸ್ಗೆ ಇದು ಸಂಭ್ರಮದ ಸಮಯ. ಒಂದು ಕಡೆ ಅವರ ನಿರ್ಮಾಣದ ‘ಕೆಡಿ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದ್ದರೆ, ಮತ್ತೊಂದೆಡೆ ತಮ್ಮ ಮುಂದಿನ ಚಿತ್ರದ ನಾಯಕ ವಿಜಯ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವುದು ಸಂಸ್ಥೆಗೆ ಅತೀವ ಸಂತಸ ತಂದಿದೆ.
ಬೆಂಗಳೂರು, ಮೇ 05: ರಾಜ್ಯದಲ್ಲಿ ಬೆಂಗಳೂರು, ಹುಬ್ಬಳ್ಳಿಯ ಏರ್ ಕ್ವಾಲಿಟಿ (Bengaluru Air Quality) ಭಾರಿ ಸುಧಾರಣೆ ಕಂಡಿದೆ. ಆದರೂ ಬೆಂಗಳೂರಿನ ವಾಯು ಗುಣಮಟ್ಟ ಅಪಾಯಕಾರಿ ಮಟ್ಟದಲ್ಲಿಯೇ ಇದೆ ಎಂದು ತಜ್ಞರು ಹೇಳುತ್ತಾರೆ. ಹುಬ್ಬಳ್ಳಿಯ ವಾಯು ಗುಣಮಟ್ಟ ಇಂದು ಭಾರೀ ಸುಧಾರಣೆ ಕಂಡಿದ್ದು, ಉಳಿದೆಡೆಗಿಂತ ಎಷ್ಟೋ ಉತ್ತಮವಾಗಿದೆ ಎನ್ನಲಾಗಿದೆ. ಬೆಂಗಳೂರಿನ AQI ಸಧ್ಯಕ್ಕೆ ಒಳ್ಳೆಯ ಮಟ್ಟದಲ್ಲಿದ್ದು, ಆದರೂ ಬೆಂಗಳೂರಿನ ವಾಯು ಗುಣಮಟ್ಟ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.
ಬೆಂಗಳೂರಿನ ಏರ್ ಕ್ವಾಲಿಟಿ ಇಂದು ಕೇವಲ 98ರಷ್ಟಿದ್ದು, ಅತ್ಯಂತ ಒಳ್ಳೆಯ ಗುಣಮಟ್ಟದಲ್ಲಿದೆ. ಮಂಗಳೂರಿನಲ್ಲಿ ಕೆಲ ತಿಂಗಳ ಹಿಂದೆ ವಾಯು ಗುಣಮಟ್ಟ ಅಪಾಯಕಾರಿ ಮಟ್ಟಕ್ಕೆ ಇಳಿದಿತ್ತು. ಹಲವು ಬಾರಿ 200ರ ಗಡಿ ತಲುಪಿತ್ತು. ಆದರೆ ಇತ್ತೀಚೆಗೆ AQI ಸುಧಾರಣೆ ಕಂಡುಬಂದಿತ್ತು. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಹುಬ್ಬಳ್ಳಿ ಏರ್ ಕ್ವಾಲಿಟಿ ಇಂದು 52ಕ್ಕೆ ತಲುಪಿದೆ. ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.
ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)
ಬೆಂಗಳೂರು, ಮೇ 5: ಬೆಂಗಳೂರಿನ (Bengauru) ಹೋಟೆಲ್ ಊಟ-ತಿಂಡಿ ಪ್ರಿಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಮಧ್ಯಪ್ರಾಚ್ಯ ಯುದ್ಧದ ಭೀತಿ ಹಾಗೂ ಜಾಗತಿಕ ತೈಲ ಮಾರುಕಟ್ಟೆಯಲ್ಲಿನ ಏರಿಳಿತದಿಂದಾಗಿ ವಾಣಿಜ್ಯ ಎಲ್ಪಿಜಿ (Commercial LPG) ಸಿಲಿಂಡರ್ ದರದಲ್ಲಿ ಭಾರಿ ಏರಿಕೆಯಾಗಿದ್ದು, ಇದರ ನೇರ ಪರಿಣಾಮ ಹೋಟೆಲ್ ಆಹಾರ ಪದಾರ್ಥಗಳ ಮೇಲೆ ಬೀರಿದೆ.
ಬೆಂಗಳೂರಿನಲ್ಲಿ ಸಿಲಿಂಡರ್ ದರ ಎಷ್ಟಿದೆ?
ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 993 ರೂ. ಏರಿಕೆಯಾಗಿದ್ದು, 19 ಕೆಜಿ ತೂಕದ ಸಿಲಿಂಡರ್ ದರ ಈಗ 3,154 ರೂ. ತಲುಪಿದೆ. ಇಂಧನ ಬೆಲೆಯ ಈ ಬೃಹತ್ ಏರಿಕೆಯಿಂದ ಕಂಗಾಲಾಗಿರುವ ಹೋಟೆಲ್ ಮಾಲೀಕರು, ಅನಿವಾರ್ಯವಾಗಿ ತಿಂಡಿ, ಊಟ ಹಾಗೂ ಕಾಫಿ-ಟೀ ದರಗಳನ್ನು ಶೇ. 20ರಷ್ಟು ಹೆಚ್ಚಿಸಲು ಮುಂದಾಗಿದ್ದಾರೆ.
ಉದಾಹರಣೆಗೆ, ಬೆಂಗಳೂರಿನ ಗಾಂಧಿನಗರದ ಪ್ರಮುಖ ಹೋಟೆಲ್ಗಳಲ್ಲಿ ಒಂದಾದ ‘ರಸಪಾಕ’ದಲ್ಲಿ ಈಗಾಗಲೇ ದರ ಏರಿಕೆ ಜಾರಿಗೆ ಬಂದಿದೆ.
ಊಟ: 100 ರೂ. ನಿಂದ 120 ರೂ. ಗೆ ಏರಿಕೆ
ದೋಸೆ: 75 ರೂ. ನಿಂದ 85 ರೂ. ಗೆ ಏರಿಕೆ
ಪೂರಿ: 60 ರೂ. ನಿಂದ 75 ರೂ. ಗೆ ಏರಿಕೆ
ಟೀ: 20 ರೂ. ನಿಂದ 25 ರೂ. ಗೆ ಏರಿಕೆ
ಗ್ರಾಹಕರು ಮತ್ತು ಸಂಘದ ಪ್ರತಿಕ್ರಿಯೆ ಏನು?
ಕೆಲಸದ ನಿಮಿತ್ತ ಹೊರಗಡೆ ಬಂದಾಗ ಹೋಟೆಲ್ ಆಹಾರವೇ ನಮಗೆ ಆಧಾರ. ಹೀಗೆ ಪದೇ ಪದೇ ಬೆಲೆ ಏರಿಸುತ್ತಿದ್ದರೆ ಸಾಮಾನ್ಯ ಗ್ರಾಹಕರ ಜೇಬಿಗೆ ದೊಡ್ಡ ಕತ್ತರಿ ಬೀಳಲಿದೆ ಎಂದು ಗ್ರಾಹಕರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಹೋಟೆಲ್ ಮಾಲೀಕರ ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್, ಬೆಲೆ ಏರಿಕೆ ಮಾಡುವುದು ಆಯಾ ಹೋಟೆಲ್ ಮಾಲೀಕರಿಗೆ ಬಿಟ್ಟ ವಿಚಾರ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಯುದ್ಧದ ಎಫೆಕ್ಟ್ ಈಗ ಬೆಂಗಳೂರಿಗರ ತಟ್ಟೆಯ ಮೇಲೆ ಪ್ರಭಾವ ಬೀರಿದೆ.
ಬೆಂಗಳೂರು (ಮೇ. 05): ಐಪಿಎಲ್ 2026 ರ 47ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ, ಗಾಯದಿಂದ ಚೇತರಿಸಿಕೊಂಡು ಮರಳಿದ ಅನುಭವಿ ರೋಹಿತ್ ಶರ್ಮಾ (Rohit Sharma) ಅದ್ಭುತ ಇನ್ನಿಂಗ್ಸ್ ಆಡಿದರು. ಬಿರುಗಾಳಿಯ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿ 84 ರನ್ಗಳ ಮಹತ್ವದ ಕಾಣಿಕೆ ನೀಡಿದರು. ರೋಹಿತ್ ತಮ್ಮ ಇನ್ನಿಂಗ್ಸ್ನಲ್ಲಿ 6 ಬೌಂಡರಿ ಮತ್ತು 7 ಸಿಕ್ಸರ್ಗಳನ್ನೂ ಬಾರಿಸಿದರು. ಇದರ ಜೊತೆಗೆ ಕೆಲ ದಾಖಲೆಯನ್ನು ಕೂಡ ಹಿಟ್ಮ್ಯಾನ್ ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ.
ಲಕ್ನೋ ವಿರುದ್ಧ ಮಿಂಚಿನ ಅರ್ಧಶತಕ
ಈ ಪಂದ್ಯದಲ್ಲಿ ಆರಂಭದಿಂದಲೇ ರೋಹಿತ್ ಲಕ್ನೋ ಬೌಲರ್ಗಳನ್ನು ಕಾಡಿದರು. ಕೇವಲ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ರೋಹಿತ್ ಅವರ ಐಪಿಎಲ್ ವೃತ್ತಿಜೀವನದಲ್ಲಿ ನಾಲ್ಕನೇ ವೇಗದ ಅರ್ಧಶತಕವಾಗಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ರೋಹಿತ್ ಗಳಿಸಿದ ವೇಗದ ಅರ್ಧಶತಕ ಎಂಬ ದಾಖಲೆಯನ್ನೂ ಇದು ಸೃಷ್ಟಿಸಿತು. ಇದಕ್ಕೂ ಮೊದಲು, ಕೆಕೆಆರ್ ವಿರುದ್ಧ ಕೇವಲ 23 ಎಸೆತಗಳಲ್ಲಿ ರೋಹಿತ್ ಅರ್ಧಶತಕ ಗಳಿಸಿದ್ದರು.
ಲಕ್ನೋ ವಿರುದ್ಧ ವೃತ್ತಿಜೀವನದ ಅತ್ಯುತ್ತಮ ಸ್ಕೋರ್
ಐಪಿಎಲ್ಗೆ ಪ್ರವೇಶಿಸಿದಾಗಿನಿಂದ ಲಕ್ನೋ ಸೂಪರ್ಜೈಂಟ್ಸ್ ವಿರುದ್ಧ ದೊಡ್ಡ ಸ್ಕೋರ್ ಗಳಿಸಲು ರೋಹಿತ್ ಹೆಣಗಾಡುತ್ತಿದ್ದರು. ಆದರೆ ಈ ಬಾರಿ ಅವರು ಆ ತಡೆಗೋಡೆಯನ್ನು ಮುರಿದಿದ್ದಾರೆ. 2024 ರ ಋತುವಿನಲ್ಲಿ ಲಕ್ನೋ ವಿರುದ್ಧ 68 ರನ್ ಗಳಿಸಿದ್ದು ರೋಹಿತ್ ಅವರ ಇದುವರೆಗಿನ ಅತ್ಯಧಿಕ ಸ್ಕೋರ್ ಆಗಿದೆ. ಆದಾಗ್ಯೂ, ನಿನ್ನೆಯ ಪಂದ್ಯದಲ್ಲಿ 84 ರನ್ ಗಳಿಸುವ ಮೂಲಕ ರೋಹಿತ್ ಲಕ್ನೋ ವಿರುದ್ಧದ ತಮ್ಮ ವೈಯಕ್ತಿಕ ಅತ್ಯಧಿಕ ಸ್ಕೋರ್ ಅನ್ನು ಮುರಿದರು.
ರೋಹಿತ್ ಶರ್ಮಾ ಮತ್ತು ರಯಾನ್ ರಿಕಲ್ಟನ್ ಮೈದಾನದಲ್ಲಿ ಅಬ್ಬರಿಸಿದರು. ಒಟ್ಟಾಗಿ, ಅವರು ಮೊದಲ ವಿಕೆಟ್ಗೆ 143 ರನ್ಗಳ ಬೃಹತ್ ಪಾಲುದಾರಿಕೆಯನ್ನು ನೀಡಿದರು. ಮುಂಬೈ ಇಂಡಿಯನ್ಸ್ ಇತಿಹಾಸದಲ್ಲಿ ಯಾವುದೇ ವಿಕೆಟ್ಗೆ ಇದು ನಾಲ್ಕನೇ ಅತ್ಯಧಿಕ ಜೊತೆಯಾಟ ಆಗಿದೆ. ಸೂರ್ಯಕುಮಾರ್ ಯಾದವ್ – ತಿಲಕ್ ವರ್ಮಾ ಕೂಡ ಈ ಹಿಂದೆ 143 ರನ್ಗಳ ಪಾಲುದಾರಿಕೆಯನ್ನು ದಾಖಲಿಸಿದ್ದರು. ಮುಂಬೈ ಪರ ಅತ್ಯಧಿಕ ಜೊತೆಯಾಟದ ದಾಖಲೆ ರೋಹಿತ್ – ಗಿಬ್ಸ್ (167 ರನ್) ಹೆಸರಿನಲ್ಲಿದೆ.
ಚೆನ್ನೈ ವಿರುದ್ಧದ ಪಂದ್ಯದಲ್ಲಿ ರೋಹಿತ್ಗೆ ಗಾಯ
39 ವರ್ಷದ ರೋಹಿತ್ ಶರ್ಮಾ ಕಳೆದ ಏಪ್ರಿಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಬ್ಯಾಟಿಂಗ್ ಮಾಡುವಾಗ ಗಾಯಗೊಂಡರು. ಅವರಿಗೆ ಮಂಡಿರಜ್ಜು ಗಾಯವಾಯಿತು, ಇದರಿಂದಾಗಿ ಆ ಪಂದ್ಯದಲ್ಲಿ ಅವರು ಬ್ಯಾಟಿಂಗ್ ಮುಂದುವರಿಸಲು ಸಾಧ್ಯವಾಗಲಿಲ್ಲ. ಆ ನಂತರ ಅವರು ಕೆಲವು ಪಂದ್ಯಗಳನ್ನು ತಪ್ಪಿಸಿಕೊಂಡರು. ಕಳೆದ ಐದು ಪಂದ್ಯಗಳಿಂದ ತಂಡದಿಂದ ಹೊರಗುಳಿದಿದ್ದ ರೋಹಿತ್ ಅನುಪಸ್ಥಿತಿ ಮುಂಬೈ ಬ್ಯಾಟಿಂಗ್ ಸಾಲಿನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಆದರೆ ವಾಂಖೆಡೆ ಕ್ರೀಡಾಂಗಣದಲ್ಲಿ ರೋಹಿತ್ ಆಡಿದ ಇನ್ನಿಂಗ್ಸ್ ತಂಡಕ್ಕೆ ಹೊಸ ಚೈತನ್ಯ ತುಂಬಿತು. 229 ರನ್ಗಳ ಬೃಹತ್ ಗುರಿ ಕೂಡ ಮುಂಬೈಗೆ ತುಂಬಾ ಚಿಕ್ಕದಾದಂತೆ ಕಂಡುಬಂತು. ರೋಹಿತ್ ಔಟಾಗುವ ಹೊತ್ತಿಗೆ ಮುಂಬೈ ಗೆಲುವು ಖಚಿತವಾಗಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ