MI vs LSG: ಕಮ್​ಬ್ಯಾಕ್ ಅಂದ್ರೆ ಇದು: ರೋಹಿತ್ ಶರ್ಮಾ ಬಿರುಗಾಳಿಯ ಬ್ಯಾಟಿಂಗ್​ಗೆ ಉದಯವಾಯಿತು ಮೂರು ಬೃಹತ್ ದಾಖಲೆಗಳು – Kannada News | MI vs LSG A Big comeback from Rohit Sharma He create three huge records in Wankhede

ಬೆಂಗಳೂರು (ಮೇ. 05): ಐಪಿಎಲ್ 2026 ರ 47ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ, ಗಾಯದಿಂದ ಚೇತರಿಸಿಕೊಂಡು ಮರಳಿದ ಅನುಭವಿ ರೋಹಿತ್ ಶರ್ಮಾ (Rohit Sharma) ಅದ್ಭುತ ಇನ್ನಿಂಗ್ಸ್ ಆಡಿದರು. ಬಿರುಗಾಳಿಯ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿ 84 ರನ್‌ಗಳ ಮಹತ್ವದ ಕಾಣಿಕೆ ನೀಡಿದರು. ರೋಹಿತ್ ತಮ್ಮ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 7 ಸಿಕ್ಸರ್‌ಗಳನ್ನೂ ಬಾರಿಸಿದರು. ಇದರ ಜೊತೆಗೆ ಕೆಲ ದಾಖಲೆಯನ್ನು ಕೂಡ ಹಿಟ್​ಮ್ಯಾನ್ ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ.

ಲಕ್ನೋ ವಿರುದ್ಧ ಮಿಂಚಿನ ಅರ್ಧಶತಕ

ಈ ಪಂದ್ಯದಲ್ಲಿ ಆರಂಭದಿಂದಲೇ ರೋಹಿತ್ ಲಕ್ನೋ ಬೌಲರ್‌ಗಳನ್ನು ಕಾಡಿದರು. ಕೇವಲ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ರೋಹಿತ್ ಅವರ ಐಪಿಎಲ್ ವೃತ್ತಿಜೀವನದಲ್ಲಿ ನಾಲ್ಕನೇ ವೇಗದ ಅರ್ಧಶತಕವಾಗಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ರೋಹಿತ್ ಗಳಿಸಿದ ವೇಗದ ಅರ್ಧಶತಕ ಎಂಬ ದಾಖಲೆಯನ್ನೂ ಇದು ಸೃಷ್ಟಿಸಿತು. ಇದಕ್ಕೂ ಮೊದಲು, ಕೆಕೆಆರ್ ವಿರುದ್ಧ ಕೇವಲ 23 ಎಸೆತಗಳಲ್ಲಿ ರೋಹಿತ್ ಅರ್ಧಶತಕ ಗಳಿಸಿದ್ದರು.

ಲಕ್ನೋ ವಿರುದ್ಧ ವೃತ್ತಿಜೀವನದ ಅತ್ಯುತ್ತಮ ಸ್ಕೋರ್

ಐಪಿಎಲ್‌ಗೆ ಪ್ರವೇಶಿಸಿದಾಗಿನಿಂದ ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧ ದೊಡ್ಡ ಸ್ಕೋರ್ ಗಳಿಸಲು ರೋಹಿತ್ ಹೆಣಗಾಡುತ್ತಿದ್ದರು. ಆದರೆ ಈ ಬಾರಿ ಅವರು ಆ ತಡೆಗೋಡೆಯನ್ನು ಮುರಿದಿದ್ದಾರೆ. 2024 ರ ಋತುವಿನಲ್ಲಿ ಲಕ್ನೋ ವಿರುದ್ಧ 68 ರನ್ ಗಳಿಸಿದ್ದು ರೋಹಿತ್ ಅವರ ಇದುವರೆಗಿನ ಅತ್ಯಧಿಕ ಸ್ಕೋರ್ ಆಗಿದೆ. ಆದಾಗ್ಯೂ, ನಿನ್ನೆಯ ಪಂದ್ಯದಲ್ಲಿ 84 ರನ್ ಗಳಿಸುವ ಮೂಲಕ ರೋಹಿತ್ ಲಕ್ನೋ ವಿರುದ್ಧದ ತಮ್ಮ ವೈಯಕ್ತಿಕ ಅತ್ಯಧಿಕ ಸ್ಕೋರ್ ಅನ್ನು ಮುರಿದರು.

MI vs LSG: ರೋಹಿತ್, ರಿಕಲ್ಟನ್ ಅಬ್ಬರಕ್ಕೆ ಮಂಡಿಯೂರಿದ ಲಕ್ನೋ

ಮುಂಬೈ ಇತಿಹಾಸದಲ್ಲಿ ಅತ್ಯುತ್ತಮ ಜೊತೆಯಾಟ

ರೋಹಿತ್ ಶರ್ಮಾ ಮತ್ತು ರಯಾನ್ ರಿಕಲ್ಟನ್ ಮೈದಾನದಲ್ಲಿ ಅಬ್ಬರಿಸಿದರು. ಒಟ್ಟಾಗಿ, ಅವರು ಮೊದಲ ವಿಕೆಟ್‌ಗೆ 143 ರನ್‌ಗಳ ಬೃಹತ್ ಪಾಲುದಾರಿಕೆಯನ್ನು ನೀಡಿದರು. ಮುಂಬೈ ಇಂಡಿಯನ್ಸ್ ಇತಿಹಾಸದಲ್ಲಿ ಯಾವುದೇ ವಿಕೆಟ್‌ಗೆ ಇದು ನಾಲ್ಕನೇ ಅತ್ಯಧಿಕ ಜೊತೆಯಾಟ ಆಗಿದೆ. ಸೂರ್ಯಕುಮಾರ್ ಯಾದವ್ – ತಿಲಕ್ ವರ್ಮಾ ಕೂಡ ಈ ಹಿಂದೆ 143 ರನ್‌ಗಳ ಪಾಲುದಾರಿಕೆಯನ್ನು ದಾಖಲಿಸಿದ್ದರು. ಮುಂಬೈ ಪರ ಅತ್ಯಧಿಕ ಜೊತೆಯಾಟದ ದಾಖಲೆ ರೋಹಿತ್ – ಗಿಬ್ಸ್ (167 ರನ್) ಹೆಸರಿನಲ್ಲಿದೆ.

ಚೆನ್ನೈ ವಿರುದ್ಧದ ಪಂದ್ಯದಲ್ಲಿ ರೋಹಿತ್​ಗೆ ಗಾಯ

39 ವರ್ಷದ ರೋಹಿತ್ ಶರ್ಮಾ ಕಳೆದ ಏಪ್ರಿಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಬ್ಯಾಟಿಂಗ್ ಮಾಡುವಾಗ ಗಾಯಗೊಂಡರು. ಅವರಿಗೆ ಮಂಡಿರಜ್ಜು ಗಾಯವಾಯಿತು, ಇದರಿಂದಾಗಿ ಆ ಪಂದ್ಯದಲ್ಲಿ ಅವರು ಬ್ಯಾಟಿಂಗ್ ಮುಂದುವರಿಸಲು ಸಾಧ್ಯವಾಗಲಿಲ್ಲ. ಆ ನಂತರ ಅವರು ಕೆಲವು ಪಂದ್ಯಗಳನ್ನು ತಪ್ಪಿಸಿಕೊಂಡರು. ಕಳೆದ ಐದು ಪಂದ್ಯಗಳಿಂದ ತಂಡದಿಂದ ಹೊರಗುಳಿದಿದ್ದ ರೋಹಿತ್ ಅನುಪಸ್ಥಿತಿ ಮುಂಬೈ ಬ್ಯಾಟಿಂಗ್ ಸಾಲಿನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಆದರೆ ವಾಂಖೆಡೆ ಕ್ರೀಡಾಂಗಣದಲ್ಲಿ ರೋಹಿತ್ ಆಡಿದ ಇನ್ನಿಂಗ್ಸ್ ತಂಡಕ್ಕೆ ಹೊಸ ಚೈತನ್ಯ ತುಂಬಿತು. 229 ರನ್‌ಗಳ ಬೃಹತ್ ಗುರಿ ಕೂಡ ಮುಂಬೈಗೆ ತುಂಬಾ ಚಿಕ್ಕದಾದಂತೆ ಕಂಡುಬಂತು. ರೋಹಿತ್ ಔಟಾಗುವ ಹೊತ್ತಿಗೆ ಮುಂಬೈ ಗೆಲುವು ಖಚಿತವಾಗಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಂಗಾಳಕೊಲ್ಲಿಯಲ್ಲಿ ಭಾರತದ ಸಮರ ಗರ್ಜನೆ: ಅಗ್ನಿ-IV ಕ್ಷಿಪಣಿ ಪರೀಕ್ಷೆಗೆ ಸಕಲ ಸಿದ್ಧತೆ – Kannada News | India’s Agni IV Missile Test: Bay of Bengal Gears Up for Defense Might and NOTAM

ನವದೆಹಲಿ, ಮೇ 05: ಭಾರತವು ತನ್ನ ರಕ್ಷಣಾ ಸಿದ್ಧತೆಯನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದ್ದು, ಬಂಗಾಳಕೊಲ್ಲಿ(Bay Of Bengal)ಯ ಸುಮಾರು 3,550 ಕಿ.ಮೀ. ವ್ಯಾಪ್ತಿಯನ್ನು ‘ಅಪಾಯಕಾರಿ ವಲಯ’ವೆಂದು ಘೋಷಿಸಿ NOTAM ಸೂಚನೆ ಹೊರಡಿಸಿದೆ. ಈ ದೀರ್ಘ ವ್ಯಾಪ್ತಿಯ ಕಾರಿಡಾರ್ ಭಾರತದ ಪ್ರಮುಖ ಪರಮಾಣು ಸಾಮರ್ಥ್ಯದ ಅಗ್ನಿ-IV (Agni-IV) ಕ್ಷಿಪಣಿ(Missile)ಯ ಉಡಾವಣೆಯ ಮುನ್ಸೂಚನೆಯನ್ನು ನೀಡುತ್ತಿದೆ.

ಅಗ್ನಿ-IV: ಭಾರತದ ಪರಮಾಣು ತ್ರಿಕೋನದ ಬಲ
ರಕ್ಷಣಾ ಮೂಲಗಳ ಪ್ರಕಾರ, ಪ್ರಸ್ತುತ ಘೋಷಿಸಲಾಗಿರುವ 3,500–4,000 ಕಿ.ಮೀ ವ್ಯಾಪ್ತಿಯು ಮಧ್ಯಂತರ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯಾದ (IRBM) ಅಗ್ನಿ-IV ರ ಸಾಮರ್ಥ್ಯಕ್ಕೆ ಹೊಂದಿಕೆಯಾಗುತ್ತದೆ. ಇದು ಎರಡು ಹಂತದ ಘನ-ಇಂಧನ ಚಾಲಿತ ಕ್ಷಿಪಣಿಯಾಗಿದ್ದು, 1,000 ಕೆಜಿ ತೂಕದ ಸಿಡಿತಲೆಯನ್ನು ಹೊತ್ತೊಯ್ಯಬಲ್ಲದು.

ವಿಮಾನಯಾನ ಕ್ಷೇತ್ರದಲ್ಲಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ NOTAM (Notice to Airmen/Air Missions) ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಇದು ವಾಯುಯಾನ ಅಧಿಕಾರಿಗಳು ಪೈಲಟ್‌ಗಳು ಮತ್ತು ವಿಮಾನ ಸಿಬ್ಬಂದಿಗೆ ನೀಡುವ ಸಮಯ-ಸೂಕ್ಷ್ಮ ಹಾಗೂ ನಿರ್ಣಾಯಕ ಅಧಿಸೂಚನೆಯಾಗಿದೆ.

ವಿಮಾನ ಹಾರಾಟದ ಹಾದಿಯಲ್ಲಿ ಎದುರಾಗಬಹುದಾದ ತಾತ್ಕಾಲಿಕ ಅಪಾಯಗಳು, ರನ್‌ವೇ ಮುಚ್ಚುವಿಕೆ ಅಥವಾ ವಿಮಾನ ನಿಲ್ದಾಣದ ಸೇವೆಗಳಲ್ಲಿನ ಬದಲಾವಣೆಗಳ ಬಗ್ಗೆ ಇದು ನೈಜ-ಸಮಯದ ಮಾಹಿತಿ ನೀಡುತ್ತದೆ.

ದೀರ್ಘ-ಶ್ರೇಣಿಯ ಕ್ಷಿಪಣಿ ಪರೀಕ್ಷೆಗಳು ಅಥವಾ ಹೆಚ್ಚಿನ ಅಪಾಯದ ಮಿಲಿಟರಿ ಕಾರ್ಯಾಚರಣೆಗಳ ಸಮಯದಲ್ಲಿ, ನಿರ್ದಿಷ್ಟ ವಾಯುಪ್ರದೇಶವನ್ನು ನಾಗರಿಕ ವಿಮಾನಗಳಿಗೆ ನಿರ್ಬಂಧಿಸಲು NOTAM ಅನ್ನು ಬಳಸಲಾಗುತ್ತದೆ.

ಇದು ಮಿಲಿಟರಿ ಕ್ಷಿಪಣಿಗಳು ಅಥವಾ ಡ್ರೋನ್‌ಗಳು ಯಾವುದೇ ಅಡೆತಡೆಯಿಲ್ಲದೆ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುವುದಲ್ಲದೆ, ವಾಣಿಜ್ಯ ವಿಮಾನಗಳು ಅಪಘಾತಕ್ಕೆ ಈಡಾಗದಂತೆ ರಕ್ಷಿಸುತ್ತದೆ.
ಬಂಗಾಳಕೊಲ್ಲಿಯಲ್ಲಿ ಭಾರತ ನಡೆಸಲಿರುವ ಅಗ್ನಿ-IV ಕ್ಷಿಪಣಿ ಪರೀಕ್ಷೆಗೂ ಮುನ್ನ ಸುಮಾರು 3,550 ಕಿ.ಮೀ ವ್ಯಾಪ್ತಿಯಲ್ಲಿ ವಾಯುಪ್ರದೇಶವನ್ನು ನಿರ್ಬಂಧಿಸಲು ಇಂತಹದ್ದೇ ಒಂದು NOTAM ಹೊರಡಿಸಲಾಗಿದೆ. ಪೈಲಟ್‌ಗಳು ತಮ್ಮ ಹಾರಾಟದ ಯೋಜನೆ ರೂಪಿಸುವ ಮೊದಲು ಈ ಎನ್ಕೋಡ್ ಮಾಡಿದ ಸೂಚನೆಗಳನ್ನು ಕಡ್ಡಾಯವಾಗಿ ಪರಿಶೀಲಿಸುತ್ತಾರೆ.

ಮತ್ತಷ್ಟು ಓದಿ: ಭಾರತದ ಬ್ರಹ್ಮೋಸ್ ಕ್ಷಿಪಣಿಗೆ ಹೆಚ್ಚಿದ ಬೇಡಿಕೆ; ರಹಸ್ಯವಾಗಿ 4,000 ಕೋಟಿ ರೂ ಮೊತ್ತಕ್ಕೆ ಒಪ್ಪಂದ ಮಾಡಿಕೊಂಡ ಎರಡು ದೇಶಗಳು

ಆಧುನೀಕರಣದ ಪರ್ವ
ಭಾರತವು ಇತ್ತೀಚಿನ ತಿಂಗಳುಗಳಲ್ಲಿ ಕ್ಷಿಪಣಿ ಪರೀಕ್ಷೆಗಳನ್ನು ಚುರುಕುಗೊಳಿಸಿದೆ, 800 ಕಿ.ಮೀ. ವ್ಯಾಪ್ತಿಗೆ ವಿಸ್ತರಿಸಲಾದ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯ ಪರೀಕ್ಷೆಗಳು ನಡೆಯುತ್ತಿದ್ದು, ಇದು 2027 ರ ಅಂತ್ಯಕ್ಕೆ ಸೇನೆಗೆ ಸೇರ್ಪಡೆಯಾಗುವ ನಿರೀಕ್ಷೆಯಿದೆ. ಜಲಾಂತರ್ಗಾಮಿಯಿಂದ ಉಡಾವಣೆ ಮಾಡಬಹುದಾದ K-4 ಮತ್ತು ಹೈಪರ್ಸಾನಿಕ್ LRAShM ಗಳಂತಹ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಮೇಲೆ ಡಿಆರ್‌ಡಿಒ ಗಮನವಿರಿಸಿದೆ.

NOTAM ಮತ್ತು ಸುರಕ್ಷತಾ ಕ್ರಮಗಳು
ದೀರ್ಘ-ಶ್ರೇಣಿಯ ಕ್ಷಿಪಣಿಗಳು ಹಾರಾಟ ನಡೆಸುವಾಗ ನಾಗರಿಕ ವಿಮಾನಗಳಿಗೆ ಯಾವುದೇ ಅಪಾಯ ಉಂಟಾಗಬಾರದು ಎಂಬ ಉದ್ದೇಶದಿಂದ ಈ NOTAM ನೀಡಲಾಗುತ್ತದೆ. ಸಕ್ರಿಯವಾಗಿರುವ ಅವಧಿಯಲ್ಲಿ ವಾಣಿಜ್ಯ ಮತ್ತು ನಾಗರಿಕ ವಿಮಾನಗಳು ಈ ವಲಯಕ್ಕೆ ಪ್ರವೇಶಿಸುವಂತಿಲ್ಲ.

ಇದು ಮಿಲಿಟರಿ ವಿಮಾನಗಳು, ಕ್ಷಿಪಣಿಗಳು ಅಥವಾ ಡ್ರೋನ್‌ಗಳು ಯಾವುದೇ ಅಡೆತಡೆಯಿಲ್ಲದೆ ಕಾರ್ಯನಿರ್ವಹಿಸಲು ಮತ್ತು ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ತಡೆಯಲು ಸಹಾಯ ಮಾಡುತ್ತದೆ. ಈ ಪರೀಕ್ಷೆಯು ಭಾರತದ ರಕ್ಷಣಾ ಕ್ಷೇತ್ರದಲ್ಲಿ ಒಂದು ದೊಡ್ಡ ಮೈಲಿಗಲ್ಲಾಗಿದ್ದು, ಜಾಗತಿಕ ರಕ್ಷಣಾ ಭೂಪಟದಲ್ಲಿ ದೇಶದ ಸ್ಥಾನವನ್ನು ಮತ್ತಷ್ಟು ಎತ್ತರಕ್ಕೊಯ್ಯಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕರ್ನಾಟಕ ಹವಾಮಾನ ವರದಿ: ಬೆಂಗಳೂರಿನಲ್ಲಿ ಇನ್ನೂ 3 ದಿನ ಮಳೆರಾಯನದ್ದೇ ಹವಾ! ದಕ್ಷಿಣ ಒಳನಾಡಿಗೆ ಯೆಲ್ಲೋ ಅಲರ್ಟ್​ – Kannada News | Bengaluru temperature: Thundershowers in Bengaluru and most of the state, Rainy weather till next 3 days

ಬೆಂಗಳೂರಿನಲ್ಲಿ ಇನ್ನೂ 3 ದಿನ ಮಳೆರಾಯನದ್ದೇ ಹವಾ! Image Credit source: MediaForge AI

ಬೆಂಗಳೂರು, ಮೇ 05: ಬೆಂಗಳೂರು ಸೇರಿದಂತೆ ಇಂದು ರಾಜ್ಯದ ಹಲವೆಡೆ ಮಳೆಯಾಗುವ ಮುನ್ಸೂಚನೆಯಿದೆ ಎಂದು ಹವಾಮಾನ (Karnataka Weather) ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಮುಂದಿನ ಮೂರು ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದೆಲ್ಲೆಡೆ ಮುಂದಿನ ನಾಲ್ಕು ದಿನ ಮಳೆಯಾಗಲಿದ್ದು, ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಎಲ್ಲೆಲ್ಲಿ  ಮಳೆ

ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಒಣ ಹವೆಯಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕರ್ನಾಟಕದ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಂಭವವಿದ್ದು, ಉಳಿದೆಡೆ ಶುಷ್ಕ ವಾತಾವರಣವಿರಲಿದೆ ಎಂದು ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಬಳ್ಳಾರಿ, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ 30-40 ಕಿ. ಮೀ ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಜೋರು ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

ಇನ್ನೂ ಮೂರು ದಿನ ಗುಡುಗು, ಮಳೆಯಬ್ಬರ!

ಮೇ 7 ಮತ್ತು 8 ರಂದು ಬೆಳಗಾವಿ, ಉತ್ತರ ಕನ್ನಡ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಇವುಗಳನ್ನು ಹೊರತುಪಡಿಸಿ ರಾಜ್ಯದ ಉಳಿದೆಲ್ಲಾ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದ್ದು, ಎಲ್ಲೋ ಅಲರ್ಟ್ ಜಾರಿಯಲ್ಲಿರುತ್ತದೆ. ಬೀದರ್, ಕಲಬುರ್ಗಿ, ವಿಜಯಪುರ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಸಾಧಾರಣ ಮಳೆಯ ನಿರೀಕ್ಷೆಯಿದೆ. ಈ ಆರು ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಇತರೆಲ್ಲಾ ಭಾಗಗಳಲ್ಲಿ ಯೆಲ್ಲೋ ಅಲರ್ಟ್ ಇರಲಿದೆ.

ಮೈಸೂರು ಜಿಲ್ಲೆಯಲ್ಲಿ ಮಳೆಯ ಅನಾಹುತ

ಮೈಸೂರು ಜಿಲ್ಲೆಯಲ್ಲಿ ಮಳೆ ಮತ್ತು ಗಾಳಿಯ ಆರ್ಭಟ ಮುಂದುವರಿದಿದೆ. ಹುಣಸೂರು ತಾಲ್ಲೂಕಿನ ಬಿಳಿಕೆರೆ ಹಾಗೂ ಮನುಗನಹಳ್ಳಿ ಮಧ್ಯೆ ಮಳೆ ಗಾಳಿಗೆ ಬೃಹತ್ ಮರವೊಂದು ಧರೆಗುರುಳಿದೆ. ಇದರಿಂದಾಗಿ ಮೈಸೂರು-ಹುಣಸೂರು ಮುಖ್ಯ ರಸ್ತೆಯಲ್ಲಿ ಸಂಚಾರಕ್ಕೆ ತೀವ್ರ ಅಡಚಣೆಯಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೋಮವಾರವೂ ‘ಕೆಡಿ’ ಭರ್ಜರಿ ಕಲೆಕ್ಷನ್; ಕೆವಿಎನ್​​ಗೆ ಒಂದೇ ದಿನ ಡಬಲ್ ಧಮಾಕ – Kannada News | KD Movie Box Office: Strong Monday Collection, Dhruva Sarja’s Film Passes Key Test

‘ಈ ಸಿನಿಮಾ ನಿಜಕ್ಕೂ ಗೆಲ್ಲುತ್ತಾ’ ಎಂದು ಪ್ರಶ್ನೆ ಮಾಡಿದವರಿಗೆಲ್ಲ ‘ಕೆಡಿ’ ಚಿತ್ರ ಸರಿಯಾದ ಉತ್ತರವನ್ನೇ ನೀಡಿದೆ. ಧ್ರುವ ಸರ್ಜಾ ವೃತ್ತಿ ಜೀವನಕ್ಕೆ ಮತ್ತೊಂದು ಗೆಲುವು ಸಿಕ್ಕಿದೆ. ಪ್ರೇಮ್ ಅವರು ನಿರ್ದೇಶನದಲ್ಲಿ ತಾವು ಗ್ರಿಪ್ ಕಳೆದುಕೊಂಡಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ‘ಕೆಡಿ’ ಸಿನಿಮಾ (KD Movie) ಬಾಕ್ಸ್ ಆಫೀಸ್​​ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಗುರುವಾರದಿಂದ ಭಾನುವಾರದವರೆಗೆ ಸಿನಿಮಾ ಗೆದ್ದು ಬೀಗಿದೆ. ಸೋಮವಾರದ ಪರೀಕ್ಷೆಯಲ್ಲೂ ಸಿನಿಮಾ ಮೆಚ್ಚುಗೆ ಪಡೆದಿದೆ. ಈ ಮೂಲಕ ಸಿನಿಮಾ ಗೆದ್ದಿದೆ ಎಂಬ ಅಭಿಪ್ರಾಯವನ್ನು ಬಾಕ್ಸ್ ಆಫೀಸ್​ ಪಂಡಿತರು ಹೊರಹಾಕುತ್ತಿದ್ದಾರೆ.

ಬಾಕ್ಸ್ ಆಫೀಸ್ ಲೆಕ್ಕ ನೀಡುವ ‘ಸ್ಯಾಕ್​ನಿಲ್ಕ್’ ವರದಿ ಪ್ರಕಾರ ‘ಕೆಡಿ’ ಸಿನಿಮಾ ಸೋಮವಾರದ ಪರೀಕ್ಷೆಯಲ್ಲಿ ಪಾಸ್ ಆಗಿದೆ. ಸಾಮಾನ್ಯವಾಗಿ ಕಲೆಕ್ಷನ್ ವಿಷಯದಲ್ಲಿ ವೀಕೆಂಡ್​​ನಲ್ಲಿ ಉತ್ತಮ ಗಳಿಕೆ ಆದರೂ ವಾರದ ದಿನಗಳಲ್ಲಿ ಸಿನಿಮಾ ಮಂಕಾಗುತ್ತದೆ. ಆದರೆ, ‘ಕೆಡಿ’ ಚಿತ್ರದ ವಿಷಯದಲ್ಲಿ ಹಾಗಾಗಿಲ್ಲ. ವಾರದ ದಿನವೂ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿದೆ.

ಏಪ್ರಿಲ್ 30ರಂದು ಸಿನಿಮಾ 4.10 ಕೋಟಿ ರೂಪಾಯಿ ಗ್ರಾಸ್ ಹಾಗೂ 3.50 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಓಪನಿಂಗ್ ದಿನ ಆಗಿದ್ದರಿಂದ ಸಿನಿಮಾ ಉತ್ತಮ ಗಳಿಕೆ ಮಾಡಿದೆ. ಅಂದು ಈ ಚಿತ್ರಕ್ಕೆ ಸಿಕ್ಕಿದ್ದು 845 ಶೋಗಳು. ಎರಡನೇ ದಿನವೂ ಮೊದಲ ದಿನದಷ್ಟೇ ಕಲೆಕ್ಷನ್ ಆಗಿದೆ. ಶನಿವಾರ ಹಾಗೂ ಭಾನುವಾರ ಅನುಕ್ರಮವಾಗಿ 2.40 ಕೋಟಿ ರೂಪಾಯಿ ಹಾಗೂ 2.75 ಕೋಟಿ ರೂಪಾಯಿ ಗಳಿಕೆ ಆಗಿದೆ. ಸೋಮವಾರ ಸಿನಿಮಾ 2.93 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ವರದಿ ಆಗಿದೆ. ಈ ಮೂಲಕ ಚಿತ್ರದ ಗಳಿಕೆ 16.27 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಆಗಿದೆ. 13.95 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಆಗಿದೆ.

ಇದನ್ನೂ ಓದಿ: ದಯವಿಟ್ಟು ಆ ವಿಡಿಯೋ ಹಾಕಬೇಡಿ: ಜನರಿಗೆ ‘ಕೆಡಿ’ ನಿರ್ದೇಶಕ ಪ್ರೇಮ್ ಮನವಿ

‘ಕೆಡಿ’ ಸಿನಿಮಾದ ಗೆದ್ದಿದ್ದು ಒಂದು ಕಡೆಯಾದರೆ, ವಿಜಯ್ ಅವರು ಸಿಎಂ ಆಗುತ್ತಿದ್ದಾರೆ ಎಂಬುದು ಮತ್ತೊಂದು ಕಡೆ. ಈ ವಿಷಯ ಕೆವಿಎನ್ ಸಂಸ್ಥೆಯ ಖುಷಿ ಹೆಚ್ಚಿಸಿದೆ. ಒಂದೇ ದಿನ ಎರಡೆರಡು ಖುಷಿ ಸುದ್ದಿಗಳು ಸಿನಿಮಾಗೆ ಸಿಕ್ಕಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:10 am, Tue, 5 May 26

Source link

ಪಂಚರಾಜ್ಯ ಫಲಿತಾಂಶ: ಬಂಗಾಳದಲ್ಲಿ ಅರಳಿದ ಕಮಲ, ತಮಿಳುನಾಡಿನಲ್ಲಿ ವಿಜಯ್ ಸುನಾಮಿ; ದೀದಿ-ಸ್ಟಾಲಿನ್-ಪಿಣರಾಯಿ ಮಹಾ ಪತನ – Kannada News | Assembly Election Results 2026: BJP Wins West Bengal, Vijay’s TVK Storms Tamil Nadu, UDF Wins Kerala Full details here with numbers

ಪ್ರಧಾನಿ ಮೋದಿ ಹಾಗೂ ವಿಜಯ್Image Credit source: PTI

ನವದೆಹಲಿ, ಮೇ 5: ದೇಶವೇ ಕುತೂಹಲದಿಂದ ಕಾಯುತ್ತಿದ್ದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ (Assembly Election Results 2026) ಪ್ರಕಟವಾಗಿದ್ದು, ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ 15 ವರ್ಷಗಳ ಸುದೀರ್ಘ ಆಡಳಿತಕ್ಕೆ ಅಂತ್ಯ ಹಾಡಿರುವ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಇತ್ತ ತಮಿಳುನಾಡಿನಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಡಿಎಂಕೆ ಮತ್ತು ಎಐಎಡಿಎಂಕೆ ಭದ್ರಕೋಟೆಯನ್ನು ಪುಡಿಗಟ್ಟುವ ಮೂಲಕ ಇತಿಹಾಸ ನಿರ್ಮಿಸಿದೆ.

ಪಶ್ಚಿಮ ಬಂಗಾಳ: ದೀದಿ ಕೋಟೆ ಧೂಳೀಪಟ

ಬಂಗಾಳದ ರಣಕಣದಲ್ಲಿ ಮೋದಿ-ಶಾ ಜೋಡಿಯ ತಂತ್ರಗಾರಿಕೆಗೆ ಮಮತಾ ಬ್ಯಾನರ್ಜಿ ಸೋತು ಸುಣ್ಣವಾಗಿದ್ದಾರೆ. ಒಟ್ಟು 293 ಸ್ಥಾನಗಳಲ್ಲಿ ಬಿಜೆಪಿ 206 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ದ್ವಿಶತಕ ಬಾರಿಸಿದೆ. ಆಡಳಿತಾರೂಢ ಟಿಎಂಸಿ ಕೇವಲ 81 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳುವ ಮೂಲಕ ಅಧಿಕಾರ ಕಳೆದುಕೊಂಡಿದೆ.

  • ಒಟ್ಟು ಸ್ಥಾನಗಳು: 293
  • ಬಿಜೆಪಿ: 206 ಸ್ಥಾನಗಳು (ಸ್ಪಷ್ಟ ಬಹುಮತ)
  • ಟಿಎಂಸಿ: 81 ಸ್ಥಾನಗಳು
  • ಕಾಂಗ್ರೆಸ್: 02 ಸ್ಥಾನಗಳು
  • ಇತರೆ: 03 ಸ್ಥಾನಗಳು
  • ವಿಶೇಷ: ಮುಖ್ಯಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿ ಅವರಿಗೆ ಸೋಲು ಎದುರಾಗಿದೆ.

ತಮಿಳುನಾಡು: ದಳಪತಿ ವಿಜಯ್ ಆರ್ಭಟ

ದ್ರಾವಿಡ ನಾಡಿನಲ್ಲಿ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಸುಂಟರಗಾಳಿ ಎಬ್ಬಿಸಿದೆ. 234 ಕ್ಷೇತ್ರಗಳ ಪೈಕಿ ಟಿವಿಕೆ 107 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಕೊಳತ್ತೂರು ಕ್ಷೇತ್ರದಲ್ಲಿ ಟಿವಿಕೆ ಅಭ್ಯರ್ಥಿ ಬಾಬು ವಿರುದ್ಧ ಸೋಲೊಪ್ಪಿಕೊಂಡಿರುವುದು ಡಿಎಂಕೆ ಪಾಲಿಗೆ ಭಾರಿ ಹಿನ್ನಡೆಯಾಗಿದೆ.

  • ಒಟ್ಟು ಸ್ಥಾನಗಳು: 234
  • ಟಿವಿಕೆ (ವಿಜಯ್): 107 ಸ್ಥಾನಗಳು
  • ಡಿಎಂಕೆ: 60 ಸ್ಥಾನಗಳು
  • AIADMK: 47 ಸ್ಥಾನಗಳು
  • ಕಾಂಗ್ರೆಸ್: 05 ಸ್ಥಾನಗಳು
  • ಇತರೆ: 04 ಸ್ಥಾನಗಳು
  • ವಿಶೇಷ: ಸಿಎಂ ಎಂ.ಕೆ. ಸ್ಟಾಲಿನ್ ಅವರಿಗೆ ಕೊಳತ್ತೂರು ಕ್ಷೇತ್ರದಲ್ಲಿ ಸೋಲಿನ ಆಘಾತವಾಗಿದೆ.

ಕೇರಳದಲ್ಲಿ ಕಾಂಗ್ರೆಸ್‌ ಜಯಭೇರಿ: ಎಲ್​ಡಿಎಫ್​ನ 21 ಸಚಿವರಿಗೇ ಸೋಲು!

ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಲ್​ಡಿಎಫ್ ಆಡಳಿತಕ್ಕೆ ಮತದಾರರು ಬ್ರೇಕ್ ಹಾಕಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ 102 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಸಾಧಿಸಿದೆ.

  • ಒಟ್ಟು ಸ್ಥಾನಗಳು: 140
  • ಯುಡಿಎಫ್ (ಕಾಂಗ್ರೆಸ್ ಮೈತ್ರಿ): 102 ಸ್ಥಾನಗಳು
  • ಎಲ್​ಡಿಎಫ್ (ಎಡಪಕ್ಷಗಳು): 35 ಸ್ಥಾನಗಳು
  • ಎನ್​ಡಿಎ (ಬಿಜೆಪಿ ಮೈತ್ರಿ): 03 ಸ್ಥಾನಗಳು
  • ವಿಶೇಷ: ಕೇರಳ ಸಂಪುಟದ 21 ಸಚಿವರಿಗೆ ಈ ಚುನಾವಣೆಯಲ್ಲಿ ಸೋಲಾಗಿದೆ.

ಅಸ್ಸಾಂನಲ್ಲಿ ಬಿಜೆಪಿಗೆ ಹ್ಯಾಟ್ರಿಕ್

ಅಸ್ಸಾಂನಲ್ಲಿ ಸಿಎಂ ಹಿಮಂತ್ ಬಿಸ್ವಾ ಶರ್ಮಾ ನೇತೃತ್ವದಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ. 126 ಕ್ಷೇತ್ರಗಳ ಪೈಕಿ ಬಿಜೆಪಿ 82 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ.

  • ಒಟ್ಟು ಸ್ಥಾನಗಳು: 126
  • ಬಿಜೆಪಿ: 82 ಸ್ಥಾನಗಳು
  • ಕಾಂಗ್ರೆಸ್: 19 ಸ್ಥಾನಗಳು
  • ಇತರೆ: 22 ಸ್ಥಾನಗಳು

ಪುದುಚೇರಿಯಲ್ಲಿ ಎನ್​ಡಿಎಗೆ ಮತ್ತೆ ಅಧಿಕಾರ

ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಎನ್​ಡಿಎ ಮಿತ್ರಕೂಟ 16 ಸ್ಥಾನಗಳೊಂದಿಗೆ ಮತ್ತೆ ಅಧಿಕಾರ ಹಿಡಿದಿದೆ.

  • ಒಟ್ಟು ಸ್ಥಾನಗಳು: 30
  • ಬಿಜೆಪಿ+ (ಎನ್​ಡಿಎ): 16 ಸ್ಥಾನಗಳು
  • ಡಿಎಂಕೆ: 05 ಸ್ಥಾನಗಳು
  • ಕಾಂಗ್ರೆಸ್: 03 ಸ್ಥಾನಗಳು
  • ಟಿವಿಕೆ: 02 ಸ್ಥಾನಗಳು

ಚುನಾವಣಾ ಫಲಿತಾಂಶದ ಹೈಲೈಟ್ಸ್​ಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Daily Devotional: ದೇವರ ಮನೆಯಲ್ಲಿ ಯಾವಾಗಲೂ ದೀಪ ಉರಿಯುತ್ತಿರಬೇಕು ಯಾಕೆ? – Kannada News | Akhanda Jyoti: Puja room should always be lit up, know why

ದೇವರ ಮನೆಯಲ್ಲಿ ಯಾವಾಗಲೂ ದೀಪ ಉರಿಯುತ್ತಿರಬೇಕು ಯಾಕೆ? ಎಂದು ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಪ್ರತಿಯೊಬ್ಬರ ಮನೆಯಲ್ಲಿಯೂ ದೇವರ ಕೋಣೆ ಅಥವಾ ಪೂಜಾ ಸ್ಥಳವು ಸಕಾರಾತ್ಮಕ ಶಕ್ತಿಗಳ ಆಗರವಾಗಬೇಕೆಂಬ ಆಶಯವಿರುತ್ತದೆ. ಈ ನಿಟ್ಟಿನಲ್ಲಿ ಅಖಂಡ ಜ್ಯೋತಿ ಅಥವಾ ನಿರಂತರ ದೀಪಕ್ಕೆ ನಮ್ಮ ಸಂಪ್ರದಾಯದಲ್ಲಿ ಮಹತ್ವದ ಸ್ಥಾನವಿದೆ. 24 ಗಂಟೆಯೂ ದೀಪ ಉರಿಯುವುದರಿಂದ ಮನೆಯಲ್ಲಿ ಧನಾತ್ಮಕ ಭಾವನೆಗಳು ಹೆಚ್ಚಿ, ಯಾವುದೇ ಕಷ್ಟಗಳಿದ್ದರೂ ಅವುಗಳ ತೀವ್ರತೆ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ.

ಆದರೆ, ಎಣ್ಣೆ ದೀಪ ಅಥವಾ ತುಪ್ಪದ ದೀಪಗಳನ್ನು ನಿರಂತರವಾಗಿ ಉರಿಸುವುದು ಅಷ್ಟು ಸುಲಭವಲ್ಲ. ಅವು ಕೆಲವು ಗಂಟೆಗಳ ನಂತರ ಆರಿಹೋಗಬಹುದು. ಹೀಗಾಗಿ, ದೀಪಾರತಿ ಮಾಡುವಾಗ ಎಣ್ಣೆ ದೀಪದ ಜೊತೆಗೆ ದೇವರ ಮನೆಯಲ್ಲಿ ಮಂದವಾದ ಜೀರೋ ಕ್ಯಾಂಡಲ್ ಬಲ್ಬ್ ಅನ್ನು ನಿರಂತರವಾಗಿ ಉರಿಸುವುದು ಉತ್ತಮ ಪರಿಹಾರವಾಗಿದೆ ಎಂದು ಗುರೂಜಿ ವಿವರಿಸಿದ್ದಾರೆ.

 

 

 

Source link

Horoscope Today: ಇಂದು ಈ ರಾಶಿಯವರು ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮೇ 5, ಮಂಗಳವಾರದ ದ್ವಾದಶ ರಾಶಿಗಳ ಫಲಾಫಲವನ್ನು ನೀಡಿದ್ದಾರೆ. ಪರಾಭವನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಕೃಷ್ಣ ಪಕ್ಷದ ಚೌತಿ ಮತ್ತು ಅನುರಾಧ ನಕ್ಷತ್ರದ ಈ ದಿನದ ಮಹತ್ವವನ್ನು ವಿವರಿಸಿದ್ದಾರೆ. ಈ ಮಂಗಳವಾರವು ಸಂಕಷ್ಟ ಚತುರ್ಥಿಯ ವಿಶೇಷ ದಿನವಾಗಿದೆ. ವಿನಾಯಕನ ಪೂಜೆ ಮತ್ತು ಆರಾಧನೆಗಳಿಂದ ಸಂಕಷ್ಟಗಳು ನಿವಾರಣೆಯಾಗುತ್ತವೆ ಎಂದು ಗುರೂಜಿ ತಿಳಿಸಿದ್ದಾರೆ. ರವಿ ಮೇಷ ರಾಶಿಯಲ್ಲಿ ಮತ್ತು ಚಂದ್ರ ವೃಶ್ಚಿಕ ರಾಶಿಯ ಜೇಷ್ಠ ನಕ್ಷತ್ರದಲ್ಲಿ ಸಂಚಾರ ಮಾಡುತ್ತಾನೆ ಎಂದು ಗುರೂಜಿ ದಿನ ಭವಿಷ್ಯ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

 

 

 

Source link

ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ಒತ್ತಡದ ಕಾರ್ಯವನ್ನು ನಿರ್ವಹಿಸಲು ಅಸಾಧ್ಯ – Kannada News | Horoscope May 05 Tuesday 2026; Dina Rashi Bhavishya Today, Checkout the details here

ಮೇಷ ರಾಶಿ:

ನಿಜವಾದ ಯಶಸ್ಸಿಗೆ ಅಡ್ಡದಾರಿಯನ್ನು ಹುಡುಕಿದರೆ ಪ್ರಯೋಜನವಾಗದು. ಯಾರದೋ ಸುದ್ದಿಯನ್ನು ಮತ್ಯಾರಿಗೋ ಹೇಳುತ್ತ ಸಮಯವನ್ನು ಕಳೆಯುವಿರಿ. ಇದು ನಿಮಗೆ ಬೇಸರ ತರಿಸುವ ಕೆಲಸವಾಗಿರುತ್ತದೆ. ಹೊಸ ಯೋಜನೆಗಳು ಸಿಗಲಿದೆ. ಸಂಬಂಧಗಳು ಸುಧಾರಿಸುವ ಹಂತಕ್ಕೆ ಹೋಗಲಿವೆ. ಪ್ರಭಾವೀ ವ್ಯಕ್ತಿಗಳ ಒತ್ತಡಕ್ಕೆ ಕೊನೆಗೂ ಶರಣಾಗಬೇಕಾಗುವುದು. ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಮುಂದಡಿ ಇಡುವಿರಿ.

ವೃಷಭ ರಾಶಿ:

ಅತಿಯಾದ ದೇಹಾಲಸ್ಯದಿಂದ ಕಾರ್ಯಗಳು ಸಮಯಕ್ಕೆ ಸರಿಯಾಗಿ ಆಗದೇ ವಿಳಂಬವಾಗಲಿದೆ. ನಿಮ್ಮ‌ಅಜ್ಞಾನವನ್ನು ನೀವೇ ಪ್ರದರ್ಶಿಸುವಿರಿ‌. ನೀವು ನಿರ್ಮಿಸಿಕೊಂಡ ನೂತನ ಗೃಹದಲ್ಲಿ ವಾಸವು ಆರಂಭವಾಗಲಿದೆ. ಸ್ವಯಂ ಕೃತ ಅಪರಾಧವೇ ನಿಮಗೆ ಮುಳುವಾಗಬಹುದು. ಆಕಸ್ಮಿಕ ಲಾಭದ ನಿರೀಕ್ಷೆಯಲ್ಲಿ ನೀವು ಇರುವಿರಿ. ದಾಂಪತ್ಯದಲ್ಲಿ ಕೆಲವು ಕಹಿ ಮಾತುಗಳು ಬರಬಹುದು. ನೀವು ಇಂದು ಕೈಲಾಗದೇ ಇರುವ ಅಬಲರು.

ಮಿಥುನ ರಾಶಿ :

ನಿಮಗೆ ಸುಳ್ಳನ್ನು ಆಡುವವರು ಎನ್ನುವ ಹಣೆಪಟ್ಟಿ ಬೀಳಲಿದೆ. ನಿಮ್ಮ ಮಾತಿಗೆ ಬಿಡಿಗಾಸಿನಷ್ಟೂ ಬೆಲೆ ಇಲ್ಲದೇ ಕಡಿಮೆಯಾಗಬಹುದು. ನೀರಿಗೆ ಸಂಬಂಧಿಸಿದ ಉದ್ಯೋಗಾವಕಾಶಗಳು ಹೆಚ್ಚು ಸಿಗಬಹುದು. ಮನಸ್ಸಿನ ದುಗುಡವನ್ನು ಶಾಂತಮಾಡಿಕೊಳ್ಳುವಿರಿ. ಕೋಪವನ್ನು ಬಲವಂತವಾಗಿ ತಡೆಯುವಿರಿ. ಊರಿನಿಂದ ಹೊರಹೋಗುವ ಸಾಧ್ಯತೆ ಇದೆ. ಕಲಾವಿದರು ಹೆಚ್ಚಿನ ಪ್ರಶಂಸೆಯನ್ನು ಗಳಿಸುವರು.

ಕರ್ಕಾಟಕ ರಾಶಿ:

ಪ್ರಭಾವೀ ವ್ಯಕ್ತಿತ್ವವನ್ನು ಜನಕ್ಕೆ ತಿಳಿಸುವಿರಿ. ನೀವಿಡುವ ಹೆಜ್ಜೆಯು ಗುರುತಾಗಲಿದೆ. ಎಂತಹ ಹೆಜ್ಜೆಗಳನ್ನು ಇಡಬೇಕು ಎನ್ನುವುದನ್ನು ತೀರ್ಮಾನಿಸಿಕೊಳ್ಳಿ. ವಿರೋಧಿಗಳ ಮಾತಿನ ಭರದಲ್ಲಿ ನಿಮ್ಮ ಮಾತು ಗೌಣವಾಗಬಹುದು. ನಿಮ್ಮನ್ನು ನಿಂದಿಸುವವರನ್ನು ನೀವು ದೂರವಿರಿಸುವಿರಿ. ಆಡಿದ ಮಾತನ್ನು ತಿರುಚುವ ಕೆಲಸ ಮಾಡುವುದು ಬೇಡ. ಬಂದಿದ್ದನ್ನು ಬಂದಂತೆ ಸ್ವೀಕರಿಸಲು ಕಷ್ಟವಾಗದು. ಮನೆಯಲ್ಲಿ ಆಸ್ತಿಯ ವಿಚಾರವಾಗಿ ಸಣ್ಣ ಬಿರುಸಿನ ಮಾತುಗಳು ಕೇಳಿಬರಬಹುದು.

ಸಿಂಹ ರಾಶಿ:

ಉದ್ವೇಗಕ್ಕೆ ಒಳಗಾಗದೇ ತಾಳ್ಮೆಯಿಂದ ವರ್ತಿಸುವುದು ಉಚಿತ. ಕಬ್ಬಿಣಕ್ಕೆ ಸಂಬಂಧಿಸಿದ ಕಾರ್ಯದಲ್ಲಿ ಹೆಚ್ಚು ಒತ್ತಡ. ದಾಂಪತ್ಯದಲ್ಲಿ ಮಾತಿನ ಸಣ್ಣ ಬಿಸಿ ಉಂಟಾಗಬಹುದು. ಮನಸ್ಸಿನಲ್ಲಿ ಒಡಕುಗಳು ಮೂಡಬಹುದು. ಆದಷ್ಟು ಮುಂದುವರಿಯದೇ ನಿಲ್ಲಿಸಲು ಪ್ರಯತ್ನಿಸಿ. ಮುಂದೆ ಅದು ವಿಚ್ಛೇದನಕ್ಕೆ ಕಾರಣವಾಗಬಹುದು. ಆರೋಗ್ಯವು ಕೆಡಲಿದ್ದು ಹತ್ತಾರು ಆಲೋಚನೆಗಳು ಬರಬಹುದು. ನಿಮ್ಮನ್ನು ಭಾವನಾತ್ಮಕವಾಗಿ ಕಟ್ಟಿಹಾಕಬಹುದು.

ಕನ್ಯಾ ರಾಶಿ:

ಕೆಲವರು ನಿಮ್ಮೆದುರು ಮಾತನಾಡದೇ ಹಿಂಬದಿಯಿಂದ ಮಾತನಾಡಲಿದ್ದಾರೆ. ಗುರುವಿನ ಅನುಗ್ರಹದಿಂದ ಉದ್ಯಮಕ್ಕೆ ಬಲ ಸಿಗಲಿದೆ. ಕೃಷಿಯ ಬಗ್ಗೆ ಆಸಕ್ತಿ ಇರುವ ನೀವು ಕೃಷಿಯನ್ನು ಮಾಡಿ ಸ್ವಲ್ಪಮಟ್ಟಿನ ಲಾಭವನ್ನು ಗಳಿಸುವಿರಿ. ತಂದೆಯು ನಿಮ್ಮ ಕೆಲಸಕ್ಕೆ ಧನಸಹಾಯವನ್ನು ಮಾಡಲಿದ್ದಾರೆ. ಕೆಲವರ ಸಹವಾಸದಿಂದ ನಿಮ್ಮ ದಿಕ್ಕು ತಪ್ಪಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಉತ್ತಮಸ್ಥಾನವು ಸಿಗಲಿದೆ. ಅಲ್ಪಾವಧಿಯಲ್ಲಿ ಅಧಿಕ ಲಾಭಕ್ಕಾಗಿ ಹೂಡಿಕೆ ಮಾಡುವಿರಿ.

ತುಲಾ ರಾಶಿ:

ಒತ್ತಡಗಳನ್ನು ನಿವಾರಿಸುವ ಉಪಾಯವು ಕರಗತವಾಗಿದ್ದು ಅನಾಯಾಸದಿಂದ ಕಾರ್ಯಗಳನ್ನು ಮಾಡಿ ಮುಗಿಸುವಿರಿ. ಮಾತುಗಾರಿಕೆಯಿಂದ ಆಗದ ಕೆಲಸವನ್ನೂ ಆಗಿಸಿಕೊಳ್ಳುವಿರಿ. ಹೊಸ ಕೆಲಸವನ್ನು ಆರಂಭಿಸುವವರು ಆರಂಭಿಸಲು ಯೋಗ್ಯವಾದ ಸಮಯವಾಗಿದೆ. ಯಾರಿಂದಲೋ ಪ್ರೇರಿತರಾಗಿ ಆಸ್ತಿಯನ್ನು ಪಡೆಯುವ ಹುನ್ನಾರ ನಡೆಸುವಿರಿ. ಇಂದು ನಿಮ್ಮ ಮಾತಿನ ಆರಂಭವೇ ನೀವು ಎಂತಹವರು ಎನ್ನುವುದನ್ನು ತಿಳಿಸುತ್ತದೆ.

ವೃಶ್ಚಿಕ ರಾಶಿ:

ನೀವು ಬಹಳ ದಿನಗಳಿಂದ ಮಾಡುತ್ತಿರುವ ಕಾರ್ಯಗಳು ಮುಂದೆ ಹೋಗುತ್ತಿದ್ದು ಇಂದು ಅದನ್ನು ಪೂರೈಸುವಿರಿ. ಇಂದು ಮನಸ್ಸು ನಿರಾಳವಾಗಿ ಯಾವದೇ ಒತ್ತಡಕ್ಕೆ ಸಿಲುಕದೇ ಇರುವುದು. ನಿಮ್ಮ ಯಾರಾದರೂ ಕೆಣಕಬಹುದು. ಸರ್ಕಾರದ ಕಾರ್ಯದಲ್ಲಿ ಸರಿಯಾದ ಮಾಹಿತಿ ಕೊರತೆ. ದುರಭ್ಯಾಸವು ಮನೆಯವರಿಗೆ ಗೊತ್ತಾಗಲಿದೆ. ನೀವು ಹೇಳಿದ ಕೆಲಸವೂ ವೇಗವಾಗಿ ಮುಗಿಯದು. ಸ್ನೇಹಿತರಿಗೆ ಬೇಸರವಾಗಬಾರದೆಂದು ಅವರ ಜೊತೆ ಸಮಸ್ಯೆ ಕಳೆಯುವಿರಿ.

ಧನು ರಾಶಿ:

ಇಂದು ನಿಮ್ಮ ಅನಗತ್ಯ ಕಾರ್ಯಗಳ ಪಟ್ಟಿಯೇ ದೊಡ್ಡದಾಗುವುದು. ಅವಶ್ಯಕತೆಗಳನ್ನು ಮಾತ್ರ ನೀಗಿಸಿಕೊಳ್ಳುವ ಪ್ರಯತ್ನವನ್ನು ಮಾಡಿ. ಯಾವುದೇ ಸಾಹಸಕ್ಕೆ ಕೈ ಹಾಕಲು ಹೋಗುವುದು ಬೇಡ‌. ವಿದೇಶದ ವಿದ್ಯಾಭ್ಯಾಸಕ್ಕೆ ಅವಕಾಶ ಸಿಗಲಿದೆ. ನಿಮಗೆ ಭವಿಷ್ಯದ ಚಿಂತೆ‌ ಇರಲಿದೆ. ಮಕ್ಕಳ ಜೊತೆ ಕೆಲವು ಸಮಯವನ್ನು ಕಳೆಯುವಿರಿ. ವೈದ್ಯಕೀಯ ವೃತ್ತಿಯಲ್ಲಿ ತುರ್ತು‌ ಕಾರ್ಯಗಳು ಬರುವುದು. ಪ್ರೇಮಕ್ಕಾಗಿ ಹೆಚ್ಚು ಖರ್ಚನ್ನು ಮಾಡಬೇಕಾದೀತು.

ಮಕರ ರಾಶಿ:

ಕಛೇರಿಯಲ್ಲಿ ನಿಮ್ಮನ್ನು ಹಿಮ್ಮೆಟ್ಟಿಸಲು ಕಾಯುತ್ತಿರುವರು. ಅವರಿಗೆ ನೀವು ಆಹಾರವಾಗಲಿದ್ದೀರಿ. ಇಂದು ನಿಮ್ಮ ಆತ್ಮಸಾಕ್ಷಿಯಂತೆ ನಡೆದುಕೊಳ್ಳುವಿರಿ. ಎದೆಗುಂದುವ ಸ್ಥಿತಿ ಇಂದು ಬರಬಹುದು. ನಿಮ್ಮ ಅನಂತರ ಕೆಲಸ ಮಾಡುವವರಿಂದ ನಿಮಗೆ ಕೆಲವು ಮಾತುಗಳು ಸಿಗಬಹುದು. ಯಾವ ಬಲವನ್ನು ನಂಬದೇ ಸ್ವಪ್ರಯತ್ನದಿಂದ ಎಲ್ಲವನ್ನೂ ಮಾಡಲು ಬಯಸುವಿರಿ. ಮುರಿದ ಸಂಬಂಧಗಳು ಎಷ್ಟೇ ಆದರೂ ಸರಿಯಾಗಿ ಕೂಡಿಕೊಳ್ಳುವುದು ಕಷ್ಟವಾದೀತು.

ಕುಂಭ ರಾಶಿ:

ನಿಮಗೆ ಸಿಗಬೇಕಾದ ಜವಾಬ್ದಾರಿ ಮತ್ತೊಬ್ಬರಿಗೆ ಸಿಗಲಿದೆ. ದೂರದ ಊರಿಗೆ ವೈಯಕ್ತಿಕ ಕಾರ್ಯದ ನಿಮಿತ್ತ ಪ್ರಯಾಣ ಮಾಡಲಿದ್ದೀರಿ. ಸ್ನೇಹಿತ ಮಾತುಗಳು ನಿಮಗೆ ಕಸಿವಿಸಿ ವಾತಾವರಣವನ್ನು ಉಂಟುಮಾಡಲಿದೆ. ಉನ್ನತ ವಿದ್ಯಾಭ್ಯಾಸವನ್ನು ಮಾಡುವವರಿಗೆ ವಿದೇಶಗಳಲ್ಲಿ ಅವಕಾಶವು ದೊರೆಯಲಿದೆ. ರಾಜಕೀಯದಲ್ಲಿ ಬದಲಾವಣೆಯನ್ನು ತರಿಸುವುದು. ಮಕ್ಕಳ ವಿದ್ಯಾಭ್ಯಾಸದ ಚಿಂತೆ ಇರಲಿದೆ.

ಮೀನ ರಾಶಿ:

ಖುಷಿಯಾಗಿರಲು ಕೆಲವು ಸಂಗತಿಗಳು ನಿಮ್ಮ ಪಾಲಿಗೆ ಬರಲಿವೆ. ವಿನಾಕಾರಣ ಸಂಗಾತಿಯ ನಡುವೆ ಸಣ್ಣ ಕಲಹಗಳು ಹುಟ್ಟಿಕೊಳ್ಳಬಹುದು. ಅನಿವಾರ್ಯವಾಗಿ ಹೊರಗಿನ ತಿಂಡಿಯನ್ನು ತಿನ್ನಬೇಕಾದೀತು. ಉದರಕ್ಕೆ ಸಂಬಂಧಿಸಿದ ರೋಗವು ಬಂದು ಆರೋಗ್ಯವು ಕೆಡುವುದು. ನಿಮಗೆ ಕೆಲವು ಶುಭ ಶಕುನಗಳು ಕಾಣಿಸಿಕೊಳ್ಳಲಿದ್ದು ಅದರಂತೆ ನಿಮ್ಮ ನಡಿಗೆ ಇರಲಿ. ಭೂಮಿಯ ವ್ಯಾಪಾರದಲ್ಲಿ ಜಯವಾಗಲಿದೆ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಭರಣೀ, ವಾರ : ಮಂಗಳ, ಪಕ್ಷ : ಕೃಷ್ಣ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಮೂಲಾ, ಯೋಗ : ಶಿವ, ಕರಣ : ಬವ, ಸೂರ್ಯೋದಯ – 06 – 01 am, ಸೂರ್ಯಾಸ್ತ – 06 – 40 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:31 – 17:06, ಯಮಗಂಡ ಕಾಲ 09:11 – 10:46, ಗುಳಿಕ ಕಾಲ 12:21 – 13:56

-ಲೋಹಿತ ಹೆಬ್ಬಾರ್ – 8762924271 (what’s app only)

Source link

MI vs LSG: ರೋಹಿತ್, ರಿಕಲ್ಟನ್ ಅಬ್ಬರಕ್ಕೆ ಮಂಡಿಯೂರಿದ ಲಕ್ನೋ – Kannada News | MI Break Losing Streak at Wankhede: Beat LSG in IPL 2026 Match 47, Dim Playoff Hopes

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ರ 47 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಲಕ್ನೋ ತಂಡವನ್ನು ಮಣಿಸಿದ ಮುಂಬೈ ತಂಡ ತನ್ನ ತವರಿನಲ್ಲಿ ಸೋಲುಗಳ ಸರಮಾಲೆ ಮುರಿದಿದೆ. ಇದು ಈ ಆವೃತ್ತಿಯಲ್ಲಿ ಮುಂಬೈ ತಂಡದ ಮೂರನೇ ಗೆಲುವಾದರೆ, ಇತ್ತ ಇದು ಲಕ್ನೋ ತಂಡದ 7ನೇ ಸೋಲಾಗಿದೆ. ಈ ಸೋಲಿನೊಂದಿಗೆ ಮುಂಬೈನಂತೆ ಲಕ್ನೋ ತಂಡದ ಪ್ಲೇ ಆಫ್ ಕನಸು ಕೂಡ ಭಾಗಶಃ ಭಗ್ನವಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ 228 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಮುಂಬೈ ರಿಕಲ್ಟನ್ ಹಾಗೂ ರೋಹಿತ್ ಅವರ ಅಬ್ಬರದ ಬ್ಯಾಟಿಂಗ್​ನಿಂದಾಗಿ ಗೆಲುವು ದಾಖಲಿಸಿತು.

Source link

ದಳಪತಿ ವಿಜಯ್ ಮನೆ ಎದುರು ಜಮಾಯಿಸಿದ ಅಭಿಮಾನಿಗಳು; ಧನ್ಯವಾದ ತಿಳಿಸಿದ ನಟ – Kannada News | Thalapathy Vijay waves at fans gathered in front of his house after TVK win

ನಟ ದಳಪತಿ ವಿಜಯ್ (Thalapathy Vijay) ಅವರು ತಮಿಳುನಾಡು ಚುನಾವಣೆಯಲ್ಲಿ ಜಯ ಗಳಿಸಿದ್ದಾರೆ. ಅವರ ಟಿವಿಕೆ (TVK) ಪಕ್ಷ ಬರೋಬ್ಬರಿ 107 ಸ್ಥಾನಗಳನ್ನು ಗೆದ್ದಿದೆ. ಈ ಗೆಲುವಿಗಾಗಿ ಎಲ್ಲರೂ ದಳಪತಿ ವಿಜಯ್ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು ವಿಜಯ್ ನಿವಾಸದ ಎದುರು ಜಮಾಯಿಸಿದ್ದಾರೆ. ಚೆನ್ನೈನಲ್ಲಿರುವ ತಮ್ಮ ಪೋಷಕರ ಮನೆಯ ಹೊರಗೆ ಜಮಾಯಿಸಿದ್ದ ಜನಸಮೂಹವನ್ನು ನೋಡಿ ವಿಜಯ್ ಅವರು ಕೈಬೀಸಿ ಧನ್ಯವಾದ ತಿಳಿಸಿದರು. ತಮಿಳುನಾಡು ಚುನಾವಣೆಯಲ್ಲಿ ಅವರ ಪಕ್ಷವು ಗರಿಷ್ಠ ಮುನ್ನಡೆ ಸಾಧಿಸಿದೆ. ಮೊದಲ ಪ್ರಯತ್ನದಲ್ಲೇ ದಳಪತಿ ವಿಜಯ್ ಅವರು ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕೂಡ ವಿಜಯ್ ಅವರಿಗೆ ಸೋಶಿಯಲ್ ಮೀಡಿಯಾ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version