ಶೃಂಗೇರಿ ಅಂಚೆ ಮತಗಳ ಮರು ಎಣಿಕೆ : ಬಿಜೆಪಿ, ಕಾಂಗ್ರೆಸ್​​​ಗೆ ಸಿಕ್ಕ ವೋಟ್​ ಎಷ್ಟು? ಫಲಿತಾಂಶ ಯಾವಾಗ ಘೋಷಣೆ; ಚುನಾವಣಾಧಿಕಾರಿ ಮಹತ್ವದ ಹೇಳಿಕೆ – Kannada News | Sringeri Postal Ballot Recount: Jeevaraj and Rajegowda Vote Counts Altered

ಚಿಕ್ಕಮಗಳೂರು, ಮೇ.3: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರುಪರಿಶೀಲನೆ ಮತ್ತು ಮರು ಎಣಿಕೆ ಪ್ರಕ್ರಿಯೆಯು ಹೈಕೋರ್ಟ್‌ನ ಆದೇಶದಂತೆ ಪೂರ್ಣಗೊಂಡಿದೆ. ಏಪ್ರಿಲ್ 6, 2026 ರಂದು ಹೈಕೋರ್ಟ್ ಹೊರಡಿಸಿದ ತೀರ್ಪಿನ ಪ್ರಕಾರ, ಸುಮಾರು 279 ಅಂಚೆ ಮತಪತ್ರಗಳನ್ನು ಮರು ಪರಿಶೀಲನೆ ಮತ್ತು ಮರು ಎಣಿಕೆ ಮಾಡಲಾಯಿತು. ಇವಿಎಂ ಮತಗಳ ಬಗ್ಗೆ ಯಾವುದೇ ಆದೇಶವಿರಲಿಲ್ಲ. ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮುರೋಳಿ ಅವರು ಅಂದಿನ ಚುನಾವಣಾಧಿಕಾರಿ ವೇದಮೂರ್ತಿ ವಿರುದ್ಧ ಅಂಚೆ ಮತಗಳ ಟ್ಯಾಂಪರಿಂಗ್ ಆರೋಪದ ಮೇಲೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ಕೈಗೊಳ್ಳಲಾಯಿತು. ಮರು ಎಣಿಕೆಯ ನಂತರ ಅಭ್ಯರ್ಥಿಗಳ ಮತಗಳಲ್ಲಿ ಗಮನಾರ್ಹ ಬದಲಾವಣೆಗಳು ಕಂಡುಬಂದಿವೆ. 2023 ರ ಮತ ಎಣಿಕೆಯಲ್ಲಿ ಮೇಲ್ಮನವಿದಾರ ಡಿ ಎನ್ ಜೀವರಾಜ್ ಅವರಿಗೆ 692 ಮತಗಳು ಬಂದಿದ್ದರೆ, ಮರು ಎಣಿಕೆಯ ನಂತರ ಅದು 690 ಕ್ಕೆ ಇಳಿದಿದೆ. ಇನ್ನು, ಎದುರುದಾರ ಟಿ ಡಿ ರಾಜೇಗೌಡರಿಗೆ ಮೂಲತಃ 569 ಮತಗಳು ಬಂದಿದ್ದವು. ಆದರೆ ಮರು ಎಣಿಕೆಯ ನಂತರ ಅವರ ಮತಗಳ ಸಂಖ್ಯೆ 314 ಕ್ಕೆ ಇಳಿದು 255 ಮತಗಳ ವ್ಯತ್ಯಾಸವಾಗಿದೆ. ಈ ಕುರಿತು ವರದಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ. ಸ್ಟ್ರಾಂಗ್ ರೂಂ ಅನ್ನು ಸೀಲ್ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾಕ್ಸ್ ಆಫೀಸ್‌ನಲ್ಲಿ ‘ಏಕ್ ದಿನ್’ ಸಿನಿಮಾಗೆ ಸೋಲು; 2ನೇ ದಿನ ಗಳಿಸಿದ್ದು ಕೇವಲ 1 ಕೋಟಿ ರೂಪಾಯಿ – Kannada News | Junaid Khan Sai Pallavi starrer Ek Din Box Office Collection day 2 report

ಆಮಿರ್ ಖಾನ್ ಪುತ್ರ ಜುನೈದ್ ಖಾನ್ (Junaid Khan) ಮತ್ತು ದಕ್ಷಿಣದ ಸ್ಟಾರ್ ನಟಿ ಸಾಯಿ ಪಲ್ಲವಿ ಕಾಂಬಿನೇಷನ್‌ನ ‘ಏಕ್ ದಿನ್’ (Ek Din) ಸಿನಿಮಾ ಕಳೆದ ಶುಕ್ರವಾರವಷ್ಟೇ ತೆರೆಕಂಡಿತ್ತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯಲು ಈ ಸಿನಿಮಾ ವಿಫಲವಾಗಿದೆ. ಮೊದಲ ದಿನವೇ ನೆಗೆಟಿವ್ ವಿಮರ್ಶೆ ಪಡೆದುಕೊಂಡಿದ್ದ ಈ ಚಿತ್ರ, ಎರಡನೇ ದಿನವೂ (ಶನಿವಾರ, ಮೇ 2) ಚೇತರಿಕೆ ಕಾಣದೆ ಗಳಿಕೆಯಲ್ಲಿ ಕುಸಿತ ಕಂಡಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಚಿತ್ರತಂಡಕ್ಕೆ ದೊಡ್ಡ ಪ್ರಮಾಣದ ನಷ್ಟ ಆಗಲಿದೆ.

ಸ್ಯಾಕ್ನಿಲ್ಕ್ ವರದಿಯ ಪ್ರಕಾರ, ‘ಏಕ್ ದಿನ್’ ಸಿನಿಮಾ ಎರಡನೇ ದಿನ ಕೇವಲ 1 ಕೋಟಿ ಕಲೆಕ್ಷನ್ ಮಾಡಿದೆ. ಮೊದಲ ದಿನ 1.15 ಕೋಟಿ ರೂಪಾಯಿ ಗಳಿಸಿದ್ದ ಈ ಚಿತ್ರಕ್ಕೆ ಶನಿವಾರ ರಜಾ ದಿನವಾಗಿದ್ದರೂ ಯಾವುದೇ ಲಾಭವಾಗಿಲ್ಲ. ಬೇರೆ ಸಿನಿಮಾಗಳ ಪ್ರಬಲ ಪೈಪೋಟಿ ಇರುವುದರಿಂದ ‘ಏಕ್ ದಿನ್’ ಚಿತ್ರದ ಬಾಕ್ಸ್ ಆಫೀಸ್ ಮೇಲೆ ತೀವ್ರ ಪೆಟ್ಟು ಬಿದ್ದಿದೆ.

ರಿತೇಶ್ ದೇಶ್‌ಮುಖ್ ನಟನೆಯ ‘ರಾಜಾ ಶಿವಾಜಿ’ ಸಿನಿಮಾ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಅಕ್ಷಯ್ ಕುಮಾರ್ ಅವರ ಕಾಮಿಡಿ-ಹಾರರ್ ಚಿತ್ರ ‘ಭೂತ್ ಬಂಗ್ಲ’ ಕೂಡ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಇದರ ಜೊತೆಗೆ ಹಾಲಿವುಡ್ ಸಿನಿಮಾ ‘ದಿ ಡೆವಿಲ್ ವೇರ್ಸ್ ಪ್ರಾಡಾ 2’ ಸಿನಿಮಾ ಕೂಡ ಚೆನ್ನಾಗಿ ಪ್ರದರ್ಶನ ಆಗುತ್ತಿದೆ. ಹಾಗಾಗಿ ‘ಏಕ್ ದಿನ್’ ಕಲೆಕ್ಷನ್ ಮಂಕಾಗಿದೆ.

ಇದನ್ನೂ ಓದಿ: ಮಗನ ಸಿನಿಮಾ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದ ಆಮಿರ್ ಖಾನ್; ವಿಡಿಯೋ ವೈರಲ್

‘ಏಕ್ ದಿನ್’ ಸಿನಿಮಾಗೆ ಸುನಿಲ್ ಪಾಂಡೆ ಅವರು ನಿರ್ದೇಶನ ಮಾಡಿದ್ದಾರೆ. ‘ಆಮಿರ್ ಖಾನ್ ಪ್ರೊಡಕ್ಷನ್ಸ್’ ಮೂಲಕ ಮನ್ಸೂರ್ ಖಾನ್, ಆಮಿರ್ ಖಾನ್ ಮತ್ತು ಅಪರ್ಣಾ ಪುರೋಹಿತ್ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದು 2016ರ ಥಾಯ್ ಸಿನಿಮಾ ‘ಒನ್ ಡೇ’ ರಿಮೇಕ್. ತನ್ನ ಸಹೋದ್ಯೋಗಿಯನ್ನು ಪ್ರೀತಿಸುವ ಯುವಕನೊಬ್ಬ, ಕೇವಲ ಒಂದು ದಿನದ ಮಟ್ಟಿಗೆ ಆಕೆಯ ಪ್ರೇಮಿಯಾಗಲು ಬಯಸುವ ಕಥಾಹಂದರ ಈ ಚಿತ್ರದಲ್ಲಿದೆ.

‘ಮಹಾರಾಜ್’ ಮತ್ತು ‘ಲವ್ಯಾಪ’ ನಂತರ ಇದು ಜುನೈದ್ ಖಾನ್‌ ನಟನೆಯ ಮೂರನೇ ಸಿನಿಮಾ. ಬಹುಭಾಷಾ ನಟಿ ಸಾಯಿ ಪಲ್ಲವಿ ಅವರಿಗೆ ಬಾಲಿವುಡ್‌ನಲ್ಲಿ ಇದು ಮೊದಲ ಚಿತ್ರ. ಸಾಯಿ ಪಲ್ಲವಿ ಅವರು ಈ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿರುವುದು ಅಭಿಮಾನಿಗಳಲ್ಲಿ ಖುಷಿ ತಂದಿತ್ತಾದರೂ, ಕಳಪೆ ಕಲೆಕ್ಷನ್ ಆಗಿರುವುದು ನಿರಾಸೆ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಾಜೇಗೌಡ vs ಜೀವರಾಜ್: ಅಂಚೆ ಮತಗಳ ಮರು ಎಣಿಕೆ ಹೈಕೋರ್ಟ್ ಆದೇಶದಿಂದ ಇಲ್ಲಿಯವರೆಗೆ ಆಗಿದ್ದೇನು? ಯಾರಿಗೆ ಗೆಲುವು? – Kannada News | Sringeri Recount Saga: Invalid Ballots Challenge Rajegowda’s Win, EC Decision Awaited

ಚಿಕ್ಕಮಗಳೂರು, ಮೇ. 3: ಶೃಂಗೇರಿ ವಿಧಾನಸಭೆ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು, ಈ ಪ್ರಕ್ರಿಯೆ ಏಳು ಗಂಟೆಗೆ ಆರಂಭವಾಗಿ ದಿನವಿಡೀ ಮುಂದುವರಿದು ಅಂತಿಮವಾಗಿ ಅಂತ್ಯಗೊಂಡಿದೆ. ಈ ಘಟನೆಯ ಕುರಿತು ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರು ಪ್ರತಿಕ್ರಿಯಿಸಿದ್ದು, ಸ್ಟ್ರಾಂಗ್ ರೂಂನಿಂದಲೂ ಗೊಂದಲ ಶುರುವಾಗಿದ್ದು, ಇವಿಎಂಗಳನ್ನು ಇರಿಸಿರುವ ಕೋಣೆಯಲ್ಲಿ ಅನಗತ್ಯ ಸಮಸ್ಯೆಗಳು ಸೃಷ್ಟಿಯಾಗಿವೆ ಎಂದು ಅವರು ಆರೋಪಿಸಿದ್ದಾರೆ. ಒಂಬತ್ತು ಗಂಟೆಗೆ ಎಲ್ಲಾ 22 ಟ್ರಂಕ್‌ಗಳನ್ನು ತೆರೆದು ಬ್ಯಾಲೆಟ್‌ಗಳನ್ನು ಎಣಿಕೆ ಮಾಡಲಾಗಿದೆ. ಅಮಾನ್ಯ ಎಂದು ಪರಿಗಣಿಸಲಾಗಿದ್ದ ಮತಗಳಲ್ಲಿ ಡಿಕ್ಲರೇಶನ್ ಕೊರತೆಯಿಂದ ಕೆಲವು ಮತಗಳನ್ನು ಕೈಬಿಡಲಾಗಿದೆ. ಡಿ.ಎನ್. ಜೀವರಾಜ್ ಅವರ ಪ್ರಕಾರ, ಮಾನ್ಯ ಮತಗಳನ್ನು ಮತ್ತು ತಮ್ಮ ಎದುರಾಳಿ ಅಭ್ಯರ್ಥಿಯ ಮಾನ್ಯ ಮತಗಳನ್ನು ಲೆಕ್ಕ ಹಾಕಿದಾಗ, ಪ್ರಸ್ತುತ ಪರಿಸ್ಥಿತಿಯಲ್ಲಿ ತಮಗೆ ಬಹುಮತ ಬರುತ್ತಿದೆ. ಈ ಅಂಕಿಅಂಶಗಳನ್ನು ಚುನಾವಣಾ ಆಯೋಗಕ್ಕೆ ಕಳುಹಿಸಲಾಗುವುದು ಮತ್ತು ಆಯೋಗದ ನಿರ್ಧಾರಕ್ಕಾಗಿ ಕಾಯುತ್ತಿರುವುದಾಗಿ ಅವರು ತಿಳಿಸಿದ್ದಾರೆ. 2023ರ ಮೇ 13ರಂದು ಅಮಾನ್ಯ ಮತಗಳನ್ನು ಮಾನ್ಯಗೊಳಿಸುವಂತೆ ತಾವು ಸಲ್ಲಿಸಿದ್ದ ಅರ್ಜಿಯ ಕುರಿತು ಉಲ್ಲೇಖಿಸಿದ ಅವರು, ಕಳೆದ ಮೂರು ವರ್ಷಗಳಿಂದ ತಾವು ನಡೆಸುತ್ತಿದ್ದ ಹೋರಾಟಕ್ಕೆ ಈಗ ಜಯ ಸಿಕ್ಕಿದೆ ಎಂದು ತಿಳಿಸಿದ್ದಾರೆ. ಆದಾಗ್ಯೂ, ಚುನಾವಣಾ ಆಯೋಗ ಇಂದು ಫಲಿತಾಂಶ ಘೋಷಿಸುತ್ತದೆ ಎಂದು ಭಾವಿಸಿದ್ದೇನೆ ಎಂದು ಹೇಳಿದ್ದಾರೆ.

ಈ ಪ್ರಕ್ರಿಯೆಯಲ್ಲಿ ರಾಜಕೀಯ ಒತ್ತಡಗಳ ಬಗ್ಗೆಯೂ ಜೀವರಾಜ್ ಸುಳಿವು ನೀಡಿದ್ದಾರೆ. ಹೈಕೋರ್ಟ್‌ನ ನಿರ್ದೇಶನವಿದ್ದರೂ, ಕೇವಲ ವೋಟ್‌ಗಳನ್ನು ಡಿಕ್ಲೇರ್ ಮಾಡಿ ಕಳುಹಿಸಬೇಕೇ ಹೊರತು ಫಲಿತಾಂಶವನ್ನು ಘೋಷಿಸುವುದಲ್ಲ, ಆಡಳಿತಾರೂಢ ಪಕ್ಷವು ಈ ವಿಷಯವನ್ನು ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದು ನೋಡಬೇಕು ಎಂದಿದ್ದಾರೆ. ಇದೀಗ ಈ ಫಲಿತಾಂಶ ಕಾಂಗ್ರೆಸ್ ಪಕ್ಷದ ಸಂಭ್ರಮಾಚರಣೆ ನಿರಾಶೆಯಾಗಿ ಪರಿಣಮಿಸಿದ್ದು, ಈಗ ಬೇರೆ ರೀತಿಯ ಪರಿಣಾಮಗಳು ಕಂಡುಬರುತ್ತಿವೆ. ಆಡಳಿತಾರೂಢ ಪಕ್ಷವೇ ಆಗಿರುವುದರಿಂದ ಒತ್ತಡಗಳು ಇರಬಹುದು ಎಂದು ಜೀವರಾಜ್ ಅಭಿಪ್ರಾಯಪಟ್ಟಿದ್ದಾರೆ. ಡಿ. ರಾಜೇಗೌಡ ಅವರು ಎಣಿಕೆಯನ್ನು ನಿಲ್ಲಿಸಲು ಒತ್ತಡ ಹಾಕಿದ ಬಗ್ಗೆ ಪ್ರತಿಕ್ರಿಯಿಸಿದ ಜೀವರಾಜ್, ಅದು ರಾಜಕೀಯ ಪಕ್ಷದ ಸಹಜ ಕ್ರಿಯೆ ಎಂದು ಹೇಳಿ, ಕೋರ್ಟ್‌ನಲ್ಲಿರುವ ವಿಷಯದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಪ್ರಕರಣದ ಹಿನ್ನಲೆ ಏನು?:

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​​ನ ರಾಜೇಗೌಡ ಅವರು ಗೆಲುವು ಸಾಧಿಸಿದ್ದರು. ಆದರೆ ರಾಜೇಗೌಡ ಆಯ್ಕೆಯನ್ನು ಅಸಿಂಧಗೊಳಿಸಬೇಕು ಎಂದು ಡಿ.ಎನ್.ಜೀವರಾಜ್ ಅವರು ಅರ್ಜಿ ಸಲ್ಲಿಸಿದರು. ಕೇವಲ 200 ಮತಗಳ ಅಂತರದಿಂದ ಗೆದ್ದಿದ್ದು, ಅಂಚೆ ಮತಗಳ ಎಣಿಕೆಯಲ್ಲಿ ಅಧಿಕಾರಿಗಳು ಲೋಪ ಎಸಗಿದ್ದಾರೆ. ಜಿತೆಗೆ ಎದುರಾಳಿಯು ಚುನಾವಣೆಗೆ 120 ಕೋಟಿ ರೂ. ಖರ್ಚು ಮಾಡಿದ್ದಾರೆ. ಇದಕ್ಕೆ ಸಾಕ್ಷಿ ಇದೆ ಎಂದು ಅರ್ಜಿ ಸಲ್ಲಿಸಿದರು. ಜೀವರಾಜ್ ಅವರ ಅರ್ಜಿಯನ್ನು ವಜಾಗೊಳಿಸಬೇಕೆಂದು ಕಾಂಗ್ರೆಸ್​​ ಶಾಸಕ ರಾಜೇಗೌಡ ಅವರು ಹೈಕೋರ್ಟ್​​​ಗೆ ಮೇಲ್ಮನವಿ ಸಲ್ಲಿಸಿದ್ದರು. ಆದ್ರೆ ಹೈಕೋರ್ಟ್, ಅರ್ಜಿ ವಜಾಗೊಳಿಸಲು ನಿರಾಕರಿಸಿತ್ತು. ಬಳಿಕ ರಾಜೇಗೌಡ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಬಳಿಕ ಸುಪ್ರೀಂಕೋರ್ಟ್​ ರಾಜೇಗೌಡರ ಅರ್ಜಿಯನ್ನು ವಿಲೇವಾರಿ ಮಾಡಿದ್ದು, ಈ ಪ್ರಕರಣದ ಅರ್ಜಿಯನ್ನು ಹೈಕೋರ್ಟ್ ಮುಂದುವರಿಸಲಿದ್ದು, ಅರ್ಜಿದಾರರು ಅಲ್ಲಿ ಆಕ್ಷೇಪಣೆ ಸಲ್ಲಿಸಲು ಅರ್ಹರು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿತ್ತು.

ಅಂಚೆ ಮತಪತ್ರಗಳ ಮರುಪರಿಶೀಲನೆ ಬಗ್ಗೆ ಹೈಕೋರ್ಟ್ ಆದೇಶದಲ್ಲಿ ಏನಿತ್ತು?

2023ರ ವಿಧಾನಸಭಾ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದಿಂದ ಗೆದ್ದು, ಶಾಸಕರಾಗಿದ್ದ ಕಾಂಗ್ರೆಸ್‌ನ ಕೆವೈ ನಂಜೇಗೌಡ ಆಯ್ಕೆ ಅಸಿಂಧುಗೊಳಿಸಿ ಮರು ಮತ ಎಣಿಕೆಗೆ ಆದೇಶಿಸಿತ್ತು. ಆದ್ರೆ, ಮರುಮತದಾನದಲ್ಲಿ ನಂಜೇಗೌಡ ಅವರೇ ಗೆದ್ದಿದ್ದಾರೆ. ಹೀಗಾಗಿ ನಂಜೇಗೌಡ ಅವರ ಪ್ರಕರಣ ಸುಖಾಂತ್ಯ ಕಂಡಿತ್ತು. ಇದರ ಬೆನ್ನಲ್ಲೇ ಮತ್ತೊರ್ವ ಶಾಸಕ ಸ್ಥಾನಕ್ಕೆ ಕುತ್ತುಬಂದಿದೆ. ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಆಯ್ಕೆ ಅಸಿಂಧು ಕೋರಿ ಬಿಜೆಪಿ ಪರಾಜಿತ ಅಭ್ಯರ್ಥಿ ಸಲ್ಲಿಸಿದ್ದ ತಕರಾರು ಅರ್ಜಿ ಸಂಬಂಧ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿತ್ತು. ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಆಯ್ಕೆ ಅಸಿಂಧು ಕೋರಿ ಬಿಜೆಪಿ ಅಭ್ಯರ್ಥಿ ಡಿ.ಎನ್.ಜೀವರಾಜ್ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ 279 ಅಂಚೆ ಮತಪತ್ರಗಳನ್ನು ಮೇ 2ಕ್ಕೆ ಮರುಪರಿಶೀಲನೆ ಮಾಡಿ ಫಲಿತಾಂಶ ಪ್ರಕಟಿಸುವಂತೆ ಹೇಳಿತ್ತು. ಇದೀಗ ಕೋರ್ಟ್​​ ಆದೇಶದಂತೆ ಚುನಾವಣಾ ಆಯೋಗ ಈ ಪ್ರಕ್ರಿಯೆಯನ್ನು ನಡೆಸಿದೆ.

ಇದನ್ನೂ ಓದಿ: ಕಾಂಗ್ರೆಸ್ ಶಾಸಕ ರಾಜೇಗೌಡರಿಗೆ ಬಿಗ್ ಶಾಕ್; ಅಂಚೆ ಮತಗಳ ಮರು ಎಣಿಕೆಯಲ್ಲಿ ತಿರುವು!

ಮರು ಮತ ಎಣಿಕೆಯಲ್ಲೂ ಶಾಸಕ ಟಿಡಿ ರಾಜೇಗೌಡಗೆ ಗೆಲುವು ಎಂದಿದ್ದೇಕೆ?

ಹೈಕೋರ್ಟ್ ಆದೇಶದ ಮೇರೆಗೆ ನೆನ್ನೆ (ಮೇ.2) ಮರು ಮತ ಎಣಿಕೆಯನ್ನು ನಡೆಸಲಾಗಿತ್ತು. ಈ ಮತ ಎಣಿಕೆ ನಡೆಯುತ್ತಿರುವಾಗಲೇ ಕಾಂಗ್ರೆಸ್​​​​​ ಶಾಸಕರ ಗೆಲುವು ಎಂದು ಹೇಳಲಾಗಿತ್ತು. ಈ ಹಿನ್ನಲ್ಲೆ ಚಿಕ್ಕಮಗಳೂರಿನ ಐಡಿಎಸ್​ಜಿ ಕಾಲೇಜು ಮುಂಭಾಗ ಕೈ ಕಾರ್ಯಕರ್ತರಿಂದ ಸಂಭ್ರಮಾಚರಣೆ ಜೋರಾಗಿತ್ತು. ಆದರೆ ಈ ಬಗ್ಗೆ ಚುನಾವಣಾ ಆಯೋಗ ಅಧಿಕೃತ ಘೋಷಣೆ ಮಾಡಿರಲಿಲ್ಲ. ರಾತ್ರಿ ಹೊತ್ತಿಗೆ ಮರು ಮತ ಎಣಿಕೆಯಲ್ಲಿ ದೊಡ್ಡ ತಿರುವು ಪಡೆದುಕೊಂಡಿತ್ತು. ಮತ ಎಣಿಕೆ ವೇಳೆ, ಸಿಂಧು, ಅಸಿಂಧು ಮತ ಲೆಕ್ಕಚಾರ ಕೂಡ ನಡೆದಿದೆ. ಈ ವೇಳೆ ಅಂಚೆ ಮತಗಳ ಪತ್ರದಲ್ಲಿ ರಾಜೇಗೌಡ ಮತ್ತು ಮತ್ತೊಬ್ಬ ಅಭ್ಯರ್ಥಿ ಇಬ್ಬರಿಗೂ ‘ಡಬ್ಬಲ್ ಟಿಕ್’ ಮಾಡಿರುವುದು ಕಂಡುಬಂದಿದೆ. ಈ ಕಾರಣಕ್ಕೆ 258 ಮತಗಳನ್ನು ತಿರಸ್ಕರಿಸಲಾಗಿದೆ. ಈ ಹಿಂದೆ 569 ಅಂಚೆ ಮತಗಳನ್ನು ಪಡೆದಿದ್ದ ರಾಜೇಗೌಡರ ಪಟ್ಟಿಯಿಂದ ಈಗ 255 ಮತಗಳು ಮರು ಎಣಿಕೆ ವೇಳೆ ಕಡಿತಗೊಂಡಿವೆ. ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರಿಗೆ ಬಂದಿದ್ದ 692 ಅಂಚೆ ಮತಗಳಲ್ಲಿ ಕೇವಲ 2 ಮತಗಳು ಮಾತ್ರ ತಿರಸ್ಕೃತಗೊಂಡಿವೆ. ಈಗಿನ ಮರು ಎಣಿಕೆಯಲ್ಲಿ ರಾಜೇಗೌಡರ 255 ಅಂಚೆ ಮತಗಳು ಕಡಿತಗೊಂಡಿರುವುದರಿಂದ, ಚುನಾವಣಾ ಫಲಿತಾಂಶದ ಅಂತಿಮ ಚಿತ್ರಣವು ಬದಲಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:51 am, Sun, 3 May 26

Source link

ಸಾಗರದ ಮಧ್ಯೆ ಭಾರತದ ಶಕ್ತಿಯ ಉದಯ: ಗ್ರೇಟ್ ನಿಕೋಬಾರ್ ಮಹಾಯೋಜನೆ ಬಗೆಗಿನ ಪ್ರಶ್ನೆಗಳಿಗೆ ಸರ್ಕಾರದ ಉತ್ತರ – Kannada News | Great Nicobar Project: India’s Power Rise, Govt Answers Rahul Gandhi on Security and Growth

ಶ್ರೀವಿಜಯಪುರಂ, ಮೇ 03: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ಅಂಡಮಾನ್-ನಿಕೋಬಾರ್​ನಲ್ಲಿನ ಗ್ರೇಟ್ ನಿಕೋಬಾರ್ ಯೋಜನೆ ಬಗ್ಗೆ ಅಪಸ್ವರ ಎತ್ತಿದ್ದಾರೆ. ಅವರು ಕೇಳಿರುವ ಪ್ರಶ್ನೆಗಳಿಗೆ ಸರ್ಕಾರ ಉತ್ತರ ನೀಡಿದೆ. ಸರ್ಕಾರ ಈ ಯೋಜನೆಯನ್ನು ರಾಷ್ಟ್ರೀಯ ರಕ್ಷಣೆಗೆ ಅತ್ಯಗತ್ಯ ಮತ್ತು ಮಹತ್ವಾಕಾಂಕ್ಷೆಯ ಯೋಜನೆ ಎಂದು ಕರೆಯುತ್ತಿದೆ ಆದರೆ ಕೆಲವರು ಇದನ್ನು ವಿರೋಧಿಸುತ್ತಿದ್ದಾರೆ. ರಾಹುಲ್ ಗಾಂಧಿ ಕೆಲವು ದಿನಗಳ ಹಿಂದಷ್ಟೇ ಅಂಡಮಾನ್-ನಿಕೋಬಾರ್ ದ್ವೀಪಕ್ಕೆ ಭೇಟಿ ನೀಡಿದ್ದರು. ಗ್ರೇಟ್ ನಿಕೋಬಾರ್ ದ್ವೀಪದಲ್ಲಿನ ಪರಿಸರ ನಾಶ ಮತ್ತು ಸ್ಥಳೀಯ ಬುಡಕಟ್ಟು ಜನಾಂಗದವರ ಸ್ಥಳಾಂತರದ ಬಗ್ಗೆ ಆತಂಕ ವ್ಯಕ್ತಪಡಿಸಿ, ಸ್ಥಳೀಯ ನಿಕೋಬಾರೀಸ್ ಸಮುದಾಯದ ಮುಖಂಡರನ್ನು ಭೇಟಿ ಮಾಡಿದ್ದರು.

ಈ ಯೋಜನೆಯನ್ನು ರಾಹುಲ್ ಗಾಂಧಿ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ವಿನಾಶ ಮತ್ತು ಅತಿದೊಡ್ಡ ಹಗರಣ ಎಂದು ಕರೆದಿದ್ದಾರೆ. ಆದರೆ ಈ ಆರೋಪಗಳಿಗೆ ಸರ್ಕಾರ ಉತ್ತರ ನೀಡಿದೆ. ಅಂಡಮಾನ್ ಸಮುದ್ರದ ನೀಲಿ ಅಲೆಗಳ ನಡುವೆ ಇರುವ ಗ್ರೇಟ್ ನಿಕೋಬಾರ್ ದ್ವೀಪವು ಕೇವಲ ಒಂದು ಪ್ರವಾಸಿ ತಾಣವಲ್ಲ, ಅದು ಭಾರತದ ಭವಿಷ್ಯದ ಆರ್ಥಿಕ ಮತ್ತು ರಕ್ಷಣಾ ಶಕ್ತಿಯ ಕೇಂದ್ರಬಿಂದು. ಇಲ್ಲಿ ಜಾರಿಯಾಗುತ್ತಿರುವ ಬೃಹತ್ ಯೋಜನೆಯು ರಾಷ್ಟ್ರದ ಹಿತಾಸಕ್ತಿ ಮತ್ತು ಪರಿಸರದ ರಕ್ಷಣೆಯನ್ನು ಸಮಾನವಾಗಿ ಗೌರವಿಸುವ ಒಂದು ಮಹತ್ವಾಕಾಂಕ್ಷೆಯ ಪಯಣವಾಗಿದೆ.

ಈ ಯೋಜನೆಯು ಕೇವಲ ಕಟ್ಟಡ ಅಥವಾ ಬಂದರುಗಳ ನಿರ್ಮಾಣವಲ್ಲ, ಬದಲಿಗೆ ಅಂಡಮಾನ್ ಸಮುದ್ರ ಮತ್ತು ಆಗ್ನೇಯ ಏಷ್ಯಾದಲ್ಲಿ ಭಾರತದ ಅಧಿಪತ್ಯವನ್ನು ಬಲಪಡಿಸುವ ಒಂದು ದೃಢವಾದ ಹೆಜ್ಜೆ. ಇಲ್ಲಿ ಸ್ಥಾಪನೆಯಾಗಲಿರುವ ಅಂತಾರಾಷ್ಟ್ರೀಯ ಟ್ರಾನ್ಸ್‌ಶಿಪ್‌ಮೆಂಟ್ ಟರ್ಮಿನಲ್ ಭಾರತವನ್ನು ಜಾಗತಿಕ ವ್ಯಾಪಾರ ಭೂಪಟದಲ್ಲಿ ಪ್ರಮುಖ ಲಾಜಿಸ್ಟಿಕ್ಸ್ ಕೇಂದ್ರವಾಗಿ ಗುರುತಿಸಲಿದೆ. ಇದು ಬಂಗಾಳ ಕೊಲ್ಲಿಯ ಇತರ ಸ್ಪರ್ಧಾತ್ಮಕ ಬಂದರುಗಳಿಗಿಂತ ಭಾರತಕ್ಕೆ ಹೆಚ್ಚಿನ ಭೌಗೋಳಿಕ ಅನುಕೂಲವನ್ನು ಒದಗಿಸಲಿದೆ.

ಅನೇಕರಲ್ಲಿ ಕಾಡುವ ಪ್ರಶ್ನೆಯೆಂದರೆ, ಈ ಅಭಿವೃದ್ಧಿಯಿಂದ ದ್ವೀಪದ ಪರಿಸರಕ್ಕೆ ಹಾನಿಯಾಗುವುದಿಲ್ಲವೇ? ಇದಕ್ಕೆ ಉತ್ತರ ಯೋಜನೆಯ ವಿನ್ಯಾಸದಲ್ಲೇ ಇದೆ. ದ್ವೀಪದ ಜೀವವೈವಿಧ್ಯಕ್ಕೆ ಧಕ್ಕೆಯಾಗದಂತೆ ತಡೆಯಲು ಅತ್ಯಂತ ಕಟ್ಟುನಿಟ್ಟಾದ ‘ಪರಿಸರ ನಿರ್ವಹಣಾ ಯೋಜನೆ’ಯನ್ನು ಸಿದ್ಧಪಡಿಸಲಾಗಿದೆ. ಯಾವುದೇ ಸಂಭಾವ್ಯ ತೊಂದರೆಗಳನ್ನು ಮೊದಲೇ ಗುರುತಿಸಿ, ಅವುಗಳನ್ನು ತಗ್ಗಿಸುವ ಜಾರಿಗೊಳಿಸಬಹುದಾದ ಷರತ್ತುಗಳನ್ನು ವಿಧಿಸಲಾಗಿದೆ.

ಮತ್ತಷ್ಟು ಓದಿ: Video: ಪ್ರಧಾನಿ ಮೋದಿ ಮತ್ತು ನನಗೆ ಇಬ್ರಿಗೂ ‘ಹೆಂಡತಿ’ ಸಮಸ್ಯೆ ಇಲ್ಲ ಎಂದ ರಾಹುಲ್ ಗಾಂಧಿ

ಝೂಲಾಜಿಕಲ್ ಸರ್ವೇ ಆಫ್ ಇಂಡಿಯಾ ಮತ್ತು ಐಐಟಿಗಳಂತಹ ಪ್ರತಿಷ್ಠಿತ ಸಂಸ್ಥೆಗಳ ಮೂಲಕ ಕಠಿಣ ಪರಿಸರ ಪರಿಣಾಮ ಮೌಲ್ಯಮಾಪನ (EIA) ನಡೆಸಲಾಗಿದೆ. ಜೀವವೈವಿಧ್ಯ ಸಂರಕ್ಷಣೆ, ಹವಳಗಳ ಸ್ಥಳಾಂತರ ಮತ್ತು ವನ್ಯಜೀವಿ ನಿರ್ವಹಣಾ ತಂತ್ರಗಳನ್ನು ಈ ಯೋಜನೆಯಲ್ಲಿ ಅಳವಡಿಸಲಾಗಿದೆ.

ಕೇವಲ ಶೇ.1.82ರಷ್ಟು ಭೂಮಿ ಮಾತ್ರ ಬಳಕೆ

ಯೋಜನೆಯು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಒಟ್ಟು ಅರಣ್ಯ ಪ್ರದೇಶದ ಕೇವಲ 1.82% ರಷ್ಟು ಭೂಮಿಯನ್ನು ಮಾತ್ರ ಬಳಸಿಕೊಳ್ಳುತ್ತಿದೆ. ಈ ಯೋಜನೆಯು ಸಮುದ್ರ ಮಾರ್ಗಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ವಿದೇಶಿ ಶಕ್ತಿಗಳನ್ನು ಎದುರಿಸಲು ಭಾರತಕ್ಕೆ ಸಹಾಯ ಮಾಡುತ್ತದೆ. ಅಲ್ಲದೆ, ಮ್ಯಾನ್ಮಾರ್‌ನ ಬೇಟೆಗಾರರಿಂದ ಹವಳ ಮತ್ತು ಸಮುದ್ರ ಸಂಪನ್ಮೂಲಗಳ ಲೂಟಿಯನ್ನು ತಡೆಯಲು ಇದು ಪೂರಕವಾಗಲಿದೆ.

ಇಲ್ಲಿ ಸ್ಥಾಪನೆಯಾಗಲಿರುವ ಅಂತಾರಾಷ್ಟ್ರೀಯ ಟ್ರಾನ್ಸ್‌ಶಿಪ್‌ಮೆಂಟ್ ಟರ್ಮಿನಲ್ ಭಾರತವನ್ನು ಜಾಗತಿಕ ವ್ಯಾಪಾರ ಭೂಪಟದಲ್ಲಿ ಪ್ರಮುಖ ಲಾಜಿಸ್ಟಿಕ್ಸ್ ಕೇಂದ್ರವಾಗಿ ಗುರುತಿಸಲಿದೆ.

ಸುಸ್ಥಿರ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿ
ಈ ಯೋಜನೆಯು ದ್ವೀಪದ ಮೂಲಸೌಕರ್ಯ ಅಂತರವನ್ನು ಕಡಿಮೆ ಮಾಡುವುದಲ್ಲದೆ, ಭಾರಿ ಮೊತ್ತದ ಸಾಗಣೆ ವೆಚ್ಚವನ್ನು ಉಳಿಸುತ್ತದೆ ಮತ್ತು ಸ್ಥಳೀಯರಿಗೆ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸುತ್ತದೆ. ಸ್ಥಳೀಯ ಸಮುದಾಯಗಳ ರಕ್ಷಣೆಯನ್ನು ಯೋಜನೆಯ ಕೇಂದ್ರಬಿಂದುವಾಗಿ ಇರಿಸಿಕೊಳ್ಳಲಾಗಿದ್ದು, ಅಭಿವೃದ್ಧಿಯು ಎಲ್ಲರನ್ನೂ ಒಳಗೊಳ್ಳುವಂತೆ ಖಚಿತಪಡಿಸಲಾಗಿದೆ.

ಈ ಯೋಜನೆ ಆರ್ಥಿಕ ಲಾಭಕ್ಕಲ್ಲ

ಈ ಯೋಜನೆಯು ಕೇವಲ ಆರ್ಥಿಕ ಲಾಭಕ್ಕಾಗಿ ಅಲ್ಲ, ಇಲ್ಲಿನ ಸ್ಥಳೀಯ ಸಮುದಾಯಗಳ ರಕ್ಷಣೆಯನ್ನು ತನ್ನ ಯೋಜನೆಯ ಕೇಂದ್ರಬಿಂದುವಾಗಿರಿಸಿಕೊಂಡಿದೆ. ಸುಸ್ಥಿರ ಮತ್ತು ಅಂತರ್ಗತ ಬೆಳವಣಿಗೆಯ ಮೂಲಕ ದ್ವೀಪವಾಸಿಗಳ ಬದುಕನ್ನು ಹಸನುಗೊಳಿಸುವುದು ಮತ್ತು ರಾಷ್ಟ್ರೀಯ ಭದ್ರತೆಯನ್ನು ಖಚಿತಪಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಒಟ್ಟಾರೆಯಾಗಿ, ಗ್ರೇಟ್ ನಿಕೋಬಾರ್ ಯೋಜನೆಯು ಆಧುನಿಕ ಭಾರತದ ಆರ್ಥಿಕ ಕನಸುಗಳಿಗೆ ರೆಕ್ಕೆ ನೀಡುವ ಜೊತೆಗೆ, ಪರಿಸರ ಸ್ನೇಹಿ ಅಭಿವೃದ್ಧಿಗೆ ಮಾದರಿಯಾಗುವಂತೆ ವಿನ್ಯಾಸಗೊಂಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

IPL 2026: ಡಗೌಟ್​ನಿಂದಲೇ ಹಾರ್ದಿಕ್​ಗೆ ನಾಯಕನ ಪಾಠ ಮಾಡಿದ ರೋಹಿತ್ ಶರ್ಮಾ – Kannada News | Rohit Sharma teaches Hardik Pandya a lesson in Captain from the dugout Watch the video

ಬೆಂಗಳೂರು (ಮೇ. 03): ಗಾಯದ ಕಾರಣದಿಂದಾಗಿ ರೋಹಿತ್ ಶರ್ಮಾ (Rohit Sharma) ಪ್ರಸ್ತುತ ಐಪಿಎಲ್ 2026 ರಲ್ಲಿ ಆಟದಿಂದ ಹೊರಗುಳಿದಿದ್ದಾರೆ. ಇಂಜುರಿ ಮಧ್ಯೆಯೂ ಅವರು ತಂಡದೊಂದಿಗೆ ಪ್ರತಿ ಪಂದ್ಯದಲ್ಲೂ ಕಾಣಿಸಿಕೊಳ್ಳುತ್ತಾರೆ, ಪ್ಲೇಯಿಂಗ್ ಇಲೆವೆನ್‌ನಲ್ಲಿ ಇಲ್ಲದಿದ್ದರೂ ಡಗೌಟ್​ನಲ್ಲಿದ್ದು ತಂಡಕ್ಕೆ ಸಪೋರ್ಟ್ ಮಾಡುತ್ತಿದ್ದಾರೆ. ಆರ್‌ಸಿಬಿ ವಿರುದ್ಧದ ಋತುವಿನ 20 ನೇ ಪಂದ್ಯದ ಸಮಯದಲ್ಲಿ, ರೋಹಿತ್ ಮಂಡಿರಜ್ಜು ಗಾಯಕ್ಕೆ ತುತ್ತಾದರು. ಗಂಭೀರ ಗಾಯವಾಗಿಲ್ಲ ಎಂದು ವರದಿಯಾಗಿದ್ದರೂ ಅವರನ್ನು ಇನ್ನೂ ಸಂಪೂರ್ಣ ಫೀಟ್ ಆಗಿಲ್ಲ.

ರೋಹಿತ್ ಅವರ ಸಲಹೆಯಿಂದ ಸಿಎಸ್​ಕೆ ವಿಕೆಟ್‌ ಪತನ

ಶನಿವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ಗೆ ರೋಹಿತ್ ಶರ್ಮಾ ನೀಡಿದ ಸಲಹೆ ಬಹಳ ಉಪಯುಕ್ತವಾಗಿತ್ತು. ಸಂಜು ಸ್ಯಾಮ್ಸನ್ ಔಟಾದ ನಂತರವೂ ಚೆನ್ನೈ ಸೂಪರ್ ಕಿಂಗ್ಸ್ ಬಿರುಸಿನ ರನ್ ಕಲೆಹಾಕುತ್ತಿತ್ತು. ಈ ಸಂದರ್ಭ ಐದನೇ ಓವರ್‌ನಲ್ಲಿ, ರೋಹಿತ್ ಡಗೌಟ್‌ನಿಂದ ಸ್ಪಿನ್ನರ್​ಗೆ ಬೌಲಿಂಗ್ ನೀಡಲು ಹಾರ್ದಿಕ್​ಗೆ ಸಿಗ್ನಲ್ ನೀಡಿದರು. ಮುಂದಿನ ಓವರ್‌ನಲ್ಲಿ, ನಾಯಕ ಹಾರ್ದಿಕ್ ಪಾಂಡ್ಯ ಅಲ್ಲಾ ಅಜ್ನಾಫರ್ ಅವರನ್ನು ಕರೆತಂದರು. ಅದರಂತೆ ನಾಲ್ಕನೇ ಎಸೆತದಲ್ಲಿ ಉರ್ವಿಲ್ ಪಟೇಲ್ ಬೌಲ್ಡ್ ಆದರು. ಉರ್ವಿಲ್ 12 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಾಯದಿಂದ 24 ರನ್ ಗಳಿಸಿದರು. ಸ್ಟಾರ್ ಸ್ಪೋರ್ಟ್ಸ್ ಕೂಡ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದೆ.

5 ಬಾರಿ ಚಾಂಪಿಯನ್ ನಾಯಕ ರೋಹಿತ್ ಶರ್ಮಾ

ರೋಹಿತ್ ಶರ್ಮಾ ಅವರನ್ನು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಅವರು 2013 ರಿಂದ 2023 ರವರೆಗೆ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿದ್ದರು. ಈ 11 ಸೀಸನ್‌ಗಳಲ್ಲಿ ಮುಂಬೈ ಐದು ಪ್ರಶಸ್ತಿಗಳನ್ನು ಗೆದ್ದುಕೊಂಡಿತು. 2024 ರ ಸೀಸನ್‌ಗೆ ಮೊದಲು, ಮುಂಬೈ ಇಂಡಿಯನ್ಸ್ ರೋಹಿತ್ ಅವರನ್ನು ಬದಲಾಯಿಸಿ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವವನ್ನು ಹಸ್ತಾಂತರಿಸಿತು.

CSK vs MI: ಇದು ನಮ್ಮ ಸೀಸನ್ ಅಲ್ಲ: ಸಿಎಸ್​ಕೆ ವಿರುದ್ಧದ ಸೋಲಿನ ನಂತರ ದುಃಖಿತರಾದ ಹಾರ್ದಿಕ್ ಪಾಂಡ್ಯ

ಮುಂಬೈ ಇಂಡಿಯನ್ಸ್​ಗೆ 8 ವಿಕೆಟ್‌ಗಳ ಸೋಲು

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 8 ವಿಕೆಟ್‌ಗಳಿಂದ ಸೋತಿತು. ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ತಂಡವು 7 ವಿಕೆಟ್‌ಗಳಿಗೆ 159 ರನ್ ಗಳಿಸಿತು. 11 ನೇ ಓವರ್‌ನಲ್ಲಿ ತಂಡದ ಸ್ಕೋರ್ 99 ರನ್‌ಗಳಾಗಿತ್ತು. ಆದರೆ ಇದರ ನಂತರ, ಸಿಎಸ್‌ಕೆ ಬೌಲರ್‌ಗಳು ಬಲವಾದ ಪುನರಾಗಮನ ಮಾಡಿದರು. ಪವರ್‌ಪ್ಲೇನಲ್ಲಿ ಎರಡು ವಿಕೆಟ್‌ಗಳನ್ನು ಕಳೆದುಕೊಂಡರೂ, ಸಿಎಸ್‌ಕೆ 8 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ನಾಯಕ ರುತುರಾಜ್ ಗಾಯಕ್ವಾಡ್ ಅಜೇಯ 67 ರನ್‌ಗಳನ್ನು ಮತ್ತು ಕಾರ್ತಿಕ್ ಶರ್ಮಾ ಅಜೇಯ 54 ರನ್‌ಗಳನ್ನು ಗಳಿಸಿದರು. ಇಬ್ಬರ ನಡುವೆ 98 ರನ್‌ಗಳ ಪಾಲುದಾರಿಕೆ ಇತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಏನು ಮಾಡ್ತಿದ್ದೀರಾ? ರೋಹಿತ್ ಶರ್ಮಾ ಮುಖದಲ್ಲಿ ಹತಾಶೆ, ನೋವು, ನಿರಾಸೆ! – Kannada News | Rohit Sharma in the dugout unhappy MI vs CSK Match

ಐಪಿಎಲ್ 2026ರ ಅತ್ಯಂತ ನಿರೀಕ್ಷಿತ ಪಂದ್ಯಗಳಲ್ಲಿ ಒಂದಾದ ಮುಂಬೈ ಇಂಡಿಯನ್ಸ್ (MI) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಹಣಾಹಣಿಯು ಅಭಿಮಾನಿಗಳಿಗೆ ಕೇವಲ ಆಟದ ರೋಮಾಂಚನವನ್ನಷ್ಟೇ ನೀಡಲಿಲ್ಲ, ಬದಲಿಗೆ ಒಂದು ಭಾವನಾತ್ಮಕ ಕ್ಷಣಕ್ಕೂ ಸಾಕ್ಷಿಯಾಯಿತು. ಮೇ 2ರಂದು ನಡೆದ ಈ ಪಂದ್ಯದಲ್ಲಿ ಮುಂಬೈ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅವರು ಡಗೌಟ್‌ನಲ್ಲಿ ಅತ್ಯಂತ ನಿರಾಶೆ ಮತ್ತು ಅಸಮಾಧಾನದಿಂದ ಕುಳಿತಿದ್ದ ದೃಶ್ಯಗಳು ಈಗ ಕ್ರೀಡಾ ಲೋಕದಲ್ಲಿ ಚರ್ಚೆಗೆ ಕಾರಣವಾಗಿವೆ.

ಈ ಪಂದ್ಯದ ವೇಳೆ ನಾಯಕ ಹಾರ್ದಿಕ್ ಪಾಂಡ್ಯ ತೆಗೆದುಕೊಳ್ಳುತ್ತಿದ್ದ ಕೆಲ ನಿರ್ಧಾರಗಳಿಂದ, ಪ್ರಮುಖವಾಗಿ ಬೌಲಿಂಗ್ ಬದಲಾವಣೆಗಳ ವೇಳೆ ರೋಹಿತ್ ಶರ್ಮಾ ಡಗೌಟ್​ನಲ್ಲಿ ನಿರಾಸೆ ವ್ಯಕ್ತಪಡಿಸುತ್ತಿರುವುದು ಕಂಡು ಬಂತು. ಅಲ್ಲದೆ ತಂಡದ ಒಟ್ಟಾರೆ ಪ್ರದರ್ಶನವನ್ನು ನೋಡಿ ಹತಾಶರಾಗಿ ಕೂತಿದ್ದರು. ಇದೀಗ ಹಿಟ್​ಮ್ಯಾನ್ ಅವರ ಈ ಭಾವನಾತ್ಮಕ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

2024ರಲ್ಲೇ ನಿರಾಸೆ ವ್ಯಕ್ತಪಡಿಸಿದ್ದ ಹಿಟ್​ಮ್ಯಾನ್!

ಐಪಿಎಲ್ 2024ರ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ಸಹಾಯಕ ಕೋಚ್ ಅಭಿಷೇಕ್ ನಾಯರ್ ನಡುವಿನ ಖಾಸಗಿ ಸಂಭಾಷಣೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿತ್ತು.

ಈ ವಿಡಿಯೋದಲ್ಲಿ ರೋಹಿತ್ ಶರ್ಮಾ, ಒಂದೊಂದಾಗಿ ಎಲ್ಲವೂ ಬದಲಾಗುತ್ತಿದೆ… ಅದು ಅವರ ಇಷ್ಟ, ನಾನದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ನೀಡಿದ ನಂತರ ತಂಡದಲ್ಲಿ ಆದ ಬದಲಾವಣೆಗಳ ಬಗ್ಗೆ ಅವರು ಈ ಮಾತು ಹೇಳಿರಬಹುದು ಎಂದು ವಿಶ್ಲೇಷಿಸಲಾಗಿತ್ತು.

ಅಷ್ಟೇ ಅಲ್ಲದೆ ಇದೇ ವೇಳೆ  ಮುಂಬೈ ಇಂಡಿಯನ್ಸ್ ತಂಡದೊಂದಿಗಿನ ತಮ್ಮ ದಶಕದ ಸುದೀರ್ಘ ಸಂಬಂಧವನ್ನು ಸ್ಮರಿಸಿದ ರೋಹಿತ್, “ಏನೇ ಆದರೂ ಇದು ನನ್ನ ಮನೆ. ಈ ತಂಡವನ್ನು ಕಟ್ಟಿದ್ದು ನಾನು” ಎಂದು ಭಾವುಕರಾಗಿ ನುಡಿದಿದ್ದರು. ಇದೀಗ ಅದೇ ತಂಡದ ಕುಸಿತವನ್ನು ರೋಹಿತ್ ಶರ್ಮಾ ಕಣ್ಣಾರೆ ಕಾಣುತ್ತಿದ್ದಾರೆ. ಇದಕ್ಕೆ ಸಾಕ್ಷಿ ಸಿಎಸ್​ಕೆ ವಿರುದ್ಧದ ಪಂದ್ಯದ ವೇಳೆ ಹಿಟ್​ಮ್ಯಾನ್ ಮುಖದಲ್ಲಿ ಕಾಣಿಸಿಕೊಂಡ ಹಾವಭಾವ.

ರೋಹಿತ್ ಶರ್ಮಾ ಬೇಸರಕ್ಕೆ ಕಾರಣವೇನು?

  • ಗಾಯದ ಸಮಸ್ಯೆ ಮತ್ತು ಅಸಹಾಯಕತೆ: ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ರೋಹಿತ್, ಈ ಮಹತ್ವದ ಪಂದ್ಯದಲ್ಲಿ ಆಡುವ ಬಳಗದಿಂದ ಹೊರಗುಳಿಯಬೇಕಾಯಿತು. ತಮ್ಮ ನೆಚ್ಚಿನ ತಂಡ ಸಂಕಷ್ಟದಲ್ಲಿರುವಾಗ ಮೈದಾನಕ್ಕಿಳಿದು ನೆರವಾಗಲು ಸಾಧ್ಯವಾಗದ ಅಸಹಾಯಕತೆ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು.
  • ತಂಡದ ಕಳಪೆ ಪ್ರದರ್ಶನ: ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಕೇವಲ 159 ರನ್‌ಗಳಿಗೆ ಸೀಮಿತವಾಯಿತು. ಈ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಸಿಎಸ್‌ಕೆ, ತುತುರಾಜ್ ಗಾಯಕ್ವಾಡ್ ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ತನ್ನ ತಂಡದ ಸತತ ಸೋಲು ರೋಹಿತ್ ಅವರ ಬೇಸರಕ್ಕೆ ಮುಖ್ಯ ಕಾರಣವಾಗಿತ್ತು.
  • ಅಂಕಪಟ್ಟಿಯಲ್ಲಿ ಕುಸಿತ: ಈ ಸೋಲಿನೊಂದಿಗೆ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿಯಿತು. 9 ಪಂದ್ಯಗಳಲ್ಲಿ ಕೇವಲ ಎರಡು ಜಯ ದಾಖಲಿಸಿರುವ ಮುಂಬೈ ತಂಡಕ್ಕೆ ಪ್ಲೇ-ಆಫ್ ಹಾದಿ ಬಹುತೇಕ ಮುಚ್ಚಿಹೋಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ರೋಹಿತ್ ಅವರ ಈ ಫೋಟೋಗಳು ವೈರಲ್ ಆಗಿದ್ದು, “ಮುಂಬೈ ಸಾಮ್ರಾಜ್ಯವನ್ನು ಕಟ್ಟಿದ ವ್ಯಕ್ತಿ ಇಂದು ಅಸಹಾಯಕನಾಗಿ ಕುಳಿತಿದ್ದಾರೆ” ಎಂದು ಅಭಿಮಾನಿಗಳು ಮರುಗುತ್ತಿದ್ದಾರೆ. ಅನೇಕರು ಇದನ್ನು ಮುಂಬೈ ಇಂಡಿಯನ್ಸ್‌ನಲ್ಲಿ ರೋಹಿತ್ ಶರ್ಮಾ ಅವರ ಶಕೆಯ ಅಂತ್ಯ ಎಂದು ಬಣ್ಣಿಸುತ್ತಿದ್ದಾರೆ.

ಇದನ್ನೂ ಓದಿ: IPL 2026: ಐಪಿಎಲ್​ ಅಂಗಳದಲ್ಲಿ CSK ಯುವ ದಾಂಡಿಗನ ಗನ್ ಸೆಲೆಬ್ರೇಷನ್!

ಒಟ್ಟಾರೆಯಾಗಿ, ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯವು ಮುಂಬೈ ಇಂಡಿಯನ್ಸ್​ ಅಭಿಮಾನಿಗಳಿಗೆ ಕೇವಲ ಸೋಲನ್ನಷ್ಟೇ ಅಲ್ಲದೆ, ತಮ್ಮ ನೆಚ್ಚಿನ ಆಟಗಾರನ ಕಣ್ಣಲ್ಲಿನ ನೋವನ್ನೂ ಉಣಬಡಿಸಿತು ಎಂದರೆ ತಪ್ಪಾಗಲಾರದು.

Source link

‘ಜೀ5’ ಮೂಲಕ ಒಟಿಟಿ ಅಂಗಳಕ್ಕೆ ಕಾಲಿಡುತ್ತಿದೆ ‘ಲವ್ ಮಾಕ್ಟೇಲ್ 3’ ಸಿನಿಮಾ; ಪ್ರಸಾರ ಯಾವಾಗ? – Kannada News | Love Mocktail 3 Movie OTT Release Darling Krishna new movie streaming on Zee5 on 8 May

ನಟ, ನಿರ್ದೇಶಕ ಡಾರ್ಲಿಂಗ್ ಕೃಷ್ಣ (Darling Krishna) ಅವರು ‘ಲವ್ ಮಾಕ್ಟೇಲ್’ ಸರಣಿಯ ಮೂರು ಸಿನಿಮಾಗಳ ಮೂಲಕ ಗೆಲುವು ಕಂಡಿದ್ದಾರೆ. ‘ಲವ್ ಮಾಕ್ಟೇಲ್’ ಮತ್ತು ‘ಲವ್ ಮಾಕ್ಟೇಲ್ 2’ ಯಶಸ್ಸಿನ ಬಳಿಕ ಅವರು ‘ಲವ್ ಮಾಕ್ಟೇಲ್ 3’ (Love Mocktail 3) ಸಿನಿಮಾಗೆ ನಿರ್ದೇಶನ ಮಾಡಿದರು. ಅಲ್ಲದೇ, ಅವರೇ ಮುಖ್ಯ ಭೂಮಿಕೆ ನಿಭಾಯಿಸಿದರು. ಮಾರ್ಚ್ 19ಕ್ಕೆ ಬಿಡುಗಡೆ ಆಗಿದ್ದ ಈ ಸಿನಿಮಾ ಹಿಟ್ ಆಗಿದೆ. ಈಗ ಒಟಿಟಿಯಲ್ಲಿ (OTT) ಈ ಸಿನಿಮಾವನ್ನು ನೋಡುವ ಸಮಯ ಹತ್ತಿರ ಆಗಿದೆ. ಆ ಕುರಿತು ಮಾಹಿತಿ ಹೊರಬಿದ್ದಿದೆ.

‘ಜೀ5’ ಒಟಿಟಿ ಮೂಲಕ ‘ಲವ್ ಮಾಕ್ಟೇಲ್ 3’ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ. ಮೇ 8ರಿಂದ ಈ ಸಿನಿಮಾ ಒಟಿಟಿಯಲ್ಲಿ ಪ್ರಸಾರ ಆಗಲಿದೆ. ಚಿತ್ರಮಂದಿರದಲ್ಲಿ ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಪಾಸಿಟಿವ್ ವಿಮರ್ಶೆ ಪಡೆದಿದ್ದ ಈ ಸಿನಿಮಾಗೆ ಈಗ ಒಟಿಟಿ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

‘ಲವ್ ಮಾಕ್ಟೇಲ್ 3’ ಸಿನಿಮಾದಲ್ಲಿ ತಂದೆ-ಮಗಳ ಎಮೋಷನಲ್ ಕಹಾನಿ ಇದೆ. ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್, ಯದುನಂದನ್ ಅವರು ಈ ಕಥೆ ಬರೆದಿದ್ದಾರೆ. ‘ಕ್ರಿಸ್ಮಿ ಫಿಲ್ಮ್ಸ್’ ಮೂಲಕ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತಾ, ಅಮೃತಾ ಐಯ್ಯಂಗಾರ್, ದಿಲೀಪ್ ರಾಜ್, ಶ್ವೇತಾ ಪ್ರಸಾದ್, ರೇಖಾ ಕೂಡ್ಲಿಗಿ ಮುಂತಾದವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ.

ಏನು ಈ ಸಿನಿಮಾ ಕಥೆ?

ಈ ಕಥೆಯು ಆದಿತ್ಯ (ಡಾರ್ಲಿಂಗ್ ಕೃಷ್ಣ) ಮತ್ತು ನಿಧಿ(ಸಂವೃತಾ) ಸುತ್ತ ನಡೆಯುತ್ತದೆ. ನಿಧಿಯನ್ನು ಆದಿತ್ಯ ದತ್ತು ತೆಗೆದುಕೊಂಡಿರುತ್ತಾನೆ. ಅವರಿಬ್ಬರ ನಡುವಿನ ತಂದೆ-ಮಗಳ ಬಾಂಧವ್ಯವನ್ನು ಈ ಕಥೆ ಎತ್ತಿ ಹಿಡಿಯಲಿದೆ. ತಂದೆ-ಮಗಳ ದಿನಚರಿ, ತುಂಟಾಟ, ಅವರಿಬ್ಬರ ನಡುವಿನ ಪ್ರೀತಿ, ಅವರೊಂದಿಗೆ ಅವರ ಮನೆಯ ಕೇರ್‌ಟೇಕರ್‌ ಜಗ್ಗನ ತಮಾಷೆ ಮುಂತಾದವುಗಳನ್ನು ಈ ಸಿನಿಮಾ ವಿವರಿಸುತ್ತದೆ. ಬಳಿಕ ಭಾವುಕ ತಿರುವು ಸಿಗುತ್ತದೆ.

ಇದನ್ನೂ ಓದಿ: ‘ಧುರಂಧರ್ 2’ ಎದುರು ತೆರೆಕಂಡರೂ ಸೂಪರ್ ಹಿಟ್ ಆದ ‘ಲವ್ ಮಾಕ್ಟೇಲ್ 3’

ಇಷ್ಟೆಲ್ಲ ಪ್ರೀತಿಯಿಂದ ಸಾಕಿದ ದತ್ತು ಮಗಳನ್ನು ಆದಿತ್ಯ ಕಳೆದುಕೊಳ್ಳುತ್ತಾನಾ ಎಂಬ ಪ್ರಶ್ನೆ ಮೂಡುತ್ತದೆ. ಅದು ಯಾಕೆ ಎಂಬುದನ್ನು ಸಿನಿಮಾದಲ್ಲಿಯೇ ನೋಡಬೇಕು. ದ್ವಿತಿಯಾರ್ಧ ಪೂರ್ತಿ ಎಮೋಷನಲ್ ಆಗಿಯೇ ಸಿನಿಮಾ ಸಾಗುತ್ತದೆ. ಆದ್ದರಿಂದ ಫ್ಯಾಮಿಲಿ ಪ್ರೇಕ್ಷಕರಿಗೆ ಈ ಸಿನಿಮಾ ಹೆಚ್ಚು ಇಷ್ಟ ಆಗುತ್ತದೆ. ‘ಜೀ5’ ಮೂಲಕ ‘ಲವ್ ಮಾಕ್ಟೇಲ್ 3’ ಸಿನಿಮಾ ಬಿಡುಗಡೆ ಆಗುತ್ತಿರುವುದು ಡಾರ್ಲಿಂಗ್ ಕೃಷ್ಣ ಅವರಿಗೆ ಸಂತಸ ತಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಸೂಪರ್​ ಮಾರ್ಕೆಟ್​​ ಲೂಟಿ ಮಾಡಲು ಬಂದ ಕಳ್ಳರಿಗೆ ಸಿಬ್ಬಂದಿ ಕಲಿಸಿದ ಪಾಠ ನೋಡಿ – Kannada News | Robbery Attempt in Brazil Foiled as Staff Fight Back, Suspects Arrested

ಬ್ರೆಜಿಲ್‌ನಲ್ಲಿ ನಡೆದ ಈ ದರೋಡೆ ಯತ್ನವು ಕಳ್ಳರ ಪಾಲಿಗೆ ಅಕ್ಷರಶಃ ದುಸ್ವಪ್ನವಾಗಿ ಪರಿಣಮಿಸಿತ್ತು. ಶಸ್ತ್ರಸಜ್ಜಿತರಾಗಿ ಬಂದ ದರೋಡೆಕೋರರಿಗೆ ಸೂಪರ್​ ಮಾರ್ಕೆಟ್​ನ ಸಿಬ್ಬಂದಿ ನೀಡಿರುವ ತಿರುಗೇಟು ಎಲ್ಲೆಡೆ ಚರ್ಚೆಯಾಗುತ್ತಿದೆ. ಬ್ರೆಜಿಲ್‌ನ ಮಳಿಗೆಯೊಂದಕ್ಕೆ ನುಗ್ಗಿದ ಶಸ್ತ್ರಸಜ್ಜಿತ ದರೋಡೆಕೋರರು, ಸಿಬ್ಬಂದಿಯನ್ನು ಬೆದರಿಸಿ ನಗದು ರಿಜಿಸ್ಟರ್‌ನಲ್ಲಿದ್ದ ಹಣವನ್ನು ಲೂಟಿ ಮಾಡಲು ಯತ್ನಿಸಿದ್ದಾರೆ.

ದರೋಡೆಕೋರರಲ್ಲೊಬ್ಬ ಹಣವನ್ನು ಚೀಲಕ್ಕೆ ತುಂಬಿಸಿಕೊಳ್ಳುತ್ತಿದ್ದಾಗ, ಅಲ್ಲಿನ ಸಿಬ್ಬಂದಿ ಧೈರ್ಯ ಪ್ರದರ್ಶಿಸಿ ಮಚ್ಚಿನಿಂದ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದಾರೆ.ದರೋಡೆಕೋರರಲ್ಲಿ ಒಬ್ಬನನ್ನು ಬಂಧಿಸಿ ಈಗಾಗಲೇ ಜೈಲಿಗೆ ಕಳುಹಿಸಲಾಗಿದೆ. ಉದ್ಯೋಗಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಬ್ಬ ಶಂಕಿತ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನಿಗೆ ಚಿಕಿತ್ಸೆ ಮುಂದುವರೆದಿದೆ. ಶಸ್ತ್ರಸಜ್ಜಿತರಾಗಿ ಬಂದಿದ್ದರೂ, ಪ್ರಾಣದ ಹಂಗು ತೊರೆದು ಮಳಿಗೆಯ ಸಿಬ್ಬಂದಿ ತೋರಿದ ಈ ಸಾಹಸವು ದರೋಡೆಕೋರರ ಯೋಜನೆಯನ್ನು ಸಂಪೂರ್ಣವಾಗಿ ವಿಫಲಗೊಳಿಸಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಗಂಡನ ಎರಡನೇ ಮದುವೆ ತಡೆಯಲು ಮಂಟಪಕ್ಕೆ ಗರ್ಭಿಣಿ ಪತ್ನಿ ಎಂಟ್ರಿ! ಮುಂದೇನಾಯ್ತು ಗೊತ್ತಾ? – Kannada News | Pregnant Wife Stops Husband’s Second Marriage in Doddaballapura: Groom Detained

ಕುಮಾರ್ ಮತ್ತು ಆತನ ಗರ್ಭಿಣಿ ಪತ್ನಿ

ದೊಡ್ಡಬಳ್ಳಾಪುರ, ಮೇ 03: ಮನೆಯವರ ಒತ್ತಡಕ್ಕೆ ಮಣಿದು ಮೊದಲ ಪತ್ನಿಗೆ ವಂಚಿಸಿ ಎರಡನೇ ಮದುವೆಯಾಗಲು ಮುಂದಾಗಿದ್ದ ವರನೊಬ್ಬನ ಮದುವೆಯನ್ನು ಗರ್ಭಿಣಿ ಪತ್ನಿ (Pregnant Wife) ಮಂಟಪಕ್ಕೇ ಬಂದು ನಿಲ್ಲಿಸಿರುವ ಘಟನೆ ದೊಡ್ಡಬಳ್ಳಾಪುರ ನಗರದ ಬಸವ ಭವನದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.

ಮನೆಯವರ ಒತ್ತಾಯಕ್ಕೆ ಎರಡನೇ ಮದುವೆ

ಕೇರಳ ಮೂಲದ ಮಹಿಳೆಯನ್ನು ಪ್ರೀತಿಸಿ ಕಳೆದ ಒಂದು ವರ್ಷದ ಹಿಂದೆಯಷ್ಟೇ ಕುಮಾರ್ ಎಂಬ ಯುವಕ ವಿವಾಹವಾಗಿದ್ದ. ಈಗ ಕುಮಾರ್ ಪತ್ನಿ ಏಳು ತಿಂಗಳ ಗರ್ಭಿಣಿ. ಆದರೆ ಮನೆಯವರ ಒತ್ತಡಕ್ಕೆ ಮಣಿದ ಕುಮಾರ್, ತನ್ನ ಮೊದಲ ಮದುವೆಯ ವಿಷಯ ಮರೆಮಾಚಿ ಮತ್ತೊಬ್ಬ ಯುವತಿಯೊಂದಿಗೆ ಎರಡನೇ ಮದುವೆಯಾಗಲು ಸಿದ್ಧತೆ ನಡೆಸಿದ್ದ. ವಿಶೇಷವೆಂದರೆ ತಾನು ಎರಡನೇ ಮದುವೆಯಾಗುತ್ತಿರುವ ವಿಷಯವನ್ನು ಸ್ವತಃ ಕುಮಾರ್ ಅವರೇ ತಡರಾತ್ರಿ ಮೊದಲ ಪತ್ನಿ ಕರೆ ಮಾಡಿ ತಿಳಿಸಿದ್ದ. ಮನೆಯವರು ಬಲವಂತವಾಗಿ ಈ ಮದುವೆ ಮಾಡಿಸುತ್ತಿದ್ದಾರೆ ಎಂದು ಆಕೆ ಬಳಿ ಅಸಹಾಯಕತನ ವ್ಯಕ್ತಪಡಿಸಿದ್ದ ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಕಂಗಾಲಾದ ಗರ್ಭಿಣಿ ರಾತ್ರೋರಾತ್ರಿ ಕೇರಳದಿಂದ ದೊಡ್ಡಬಳ್ಳಾಪುರಕ್ಕೆ ಧಾವಿಸಿದ್ದಾರೆ.

ಇದನ್ನೂ ಓದಿ ಹನಿಯೂರು ಚಂದ್ರೇಗೌಡ ಒಬ್ಬರಿಗೆ ನಟ, ಇನ್ನೊಬ್ಬರಿಗೆ ಪ್ರೊಫೆಸರ್: ತನಿಖೆ ವೇಳೆ ಸ್ಫೋಟಕ ಸತ್ಯ ಬಯಲು

ಮದುವೆ ಮಂಟಪದಲ್ಲಿ ಹೈಡ್ರಾಮಾ

ಇಂದು (ಮೇ 3) ಬೆಳಗ್ಗೆ ಮದುವೆ ಶಾಸ್ತ್ರಗಳು ಆರಂಭವಾಗುವ ಮುನ್ನವೇ ಕಲ್ಯಾಣ ಮಂಟಪಕ್ಕೆ ಎಂಟ್ರಿ ಕೊಟ್ಟ ಕುಮಾರ್ ಪತ್ನಿ, ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತಪಡಿಸಿ ಮದುವೆಯನ್ನು ತಡೆದಿದ್ದಾರೆ. ತನ್ನ ಮದುವೆಯ ದಾಖಲೆಗಳು ಮತ್ತು ಗರ್ಭಿಣಿಯಾಗಿರುವ ವಿಷಯವನ್ನು ತಿಳಿಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗುತ್ತಿದ್ದಂತೆಯೇ ದೊಡ್ಡಬಳ್ಳಾಪುರ ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ತಕ್ಷಣವೇ ವರ ಕುಮಾರ್‌ನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ವರನನ್ನು ವಶಕ್ಕೆ ಪಡೆದಿದ್ದು, ಮೊದಲ ಮದುವೆಯ ದಾಖಲೆಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಸದ್ಯ ಹಸೆಮಣೆ ಏರಬೇಕಿದ್ದ ವರ ಈಗ ಕಂಬಿ ಎಣಿಸುವಂತಾಗಿದ್ದು, ಎರಡನೇ ಮದುವೆಯಾಗಬೇಕಿದ್ದ ಯುವತಿಯ ಕುಟುಂಬಸ್ಥರು ಕಂಗಾಲಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಐಪಿಎಲ್​ ಅಂಗಳದಲ್ಲಿ CSK ಯುವ ದಾಂಡಿಗನ ಗನ್ ಸೆಲೆಬ್ರೇಷನ್! – Kannada News | IPL 2026: Kartik Sharma recreates MS Dhoni’s gun celebration

ಕ್ರಿಕೆಟ್ ಲೋಕದಲ್ಲಿ ಎಂ.ಎಸ್. ಧೋನಿ ಎಂದರೆ ಅದೊಂದು ಭಾವನೆ. ಅವರ ಆಟ, ನಾಯಕತ್ವದಷ್ಟೇ ಅವರ ಹಳೆಯ ಸ್ಟೈಲ್‌ಗಳು ಕೂಡ ಇಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಹಸಿರಾಗಿವೆ. ಇದಕ್ಕೆ ಸಾಕ್ಷಿ ಎಂಬಂತೆ, ಶನಿವಾರ (ಮೇ 2, 2026) ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ಯುವ ಆಟಗಾರ ಕಾರ್ತಿಕ್ ಶರ್ಮಾ ಧೋನಿಯವರ ಐಕಾನಿಕ್ ‘ಗನ್ ಸೆಲೆಬ್ರೇಷನ್’ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಗೆಲುವಿನ ಹಂತದಲ್ಲಿ, ಟ್ರೆಂಟ್ ಬೌಲ್ಟ್ ಎಸೆತವನ್ನು ಬೌಂಡರಿಗಟ್ಟುವ ಮೂಲಕ ಕಾರ್ತಿಕ್ ಶರ್ಮಾ ತಂಡಕ್ಕೆ ಜಯ ತಂದುಕೊಟ್ಟರು. ಈ ವೇಳೆ ತಮ್ಮ ಬ್ಯಾಟ್ ಅನ್ನು ಗನ್‌ನಂತೆ ಹಿಡಿದು ಸಂಭ್ರಮಿಸಿದರು. ಇದು 2005ರಲ್ಲಿ ಜೈಪುರದಲ್ಲಿ ಶ್ರೀಲಂಕಾ ವಿರುದ್ಧ 183 ರನ್ ಚಚ್ಚಿದಾಗ ಧೋನಿ ಮಾಡಿದ್ದ ಸಂಭ್ರಮಾಚರಣೆಯನ್ನು ನೆನಪಿಸಿತು.
ಇದೀಗ ಕಾರ್ತಿಕ್ ಶರ್ಮಾ ಅವರ ಗನ್ ಸೆಲೆಬ್ರೇಷನ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕಾರ್ತಿಕ್ ಶರ್ಮಾ ಇನಿಂಗ್ಸ್ ವಿಶೇಷ:

  • ಚೊಚ್ಚಲ ಅರ್ಧಶತಕ: ಈ ಪಂದ್ಯದಲ್ಲಿ ಕಾರ್ತಿಕ್ ಶರ್ಮಾ ಕೇವಲ 40 ಎಸೆತಗಳಲ್ಲಿ ಅಜೇಯ 54 ರನ್ ಸಿಡಿಸಿದರು. ಇದು ಐಪಿಎಲ್‌ನಲ್ಲಿ ಅವರ ಚೊಚ್ಚಲ ಅರ್ಧಶತಕವಾಗಿದೆ.
  • ಜವಾಬ್ದಾರಿಯುತ ಬ್ಯಾಟಿಂಗ್: ಸಿಎಸ್​ಕೆ ತಂಡವು ಆರಂಭದಲ್ಲಿ 2 ವಿಕೆಟ್ ಕಳೆದುಕೊಂಡಾಗ ಕ್ರೀಸ್​ಗೆ ಆಗಮಿಸಿದ ಕಾರ್ತಿಕ್ ಶರ್ಮಾ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿ ತಂಡಕ್ಕೆ ಎಂಟು ವಿಕೆಟ್‌ಗಳ ಭರ್ಜರಿ ಜಯ ತಂದುಕೊಡುವಲ್ಲಿ ಯಶಸ್ವಿಯಾದರು.
  •  ಪೂರ್ವ ನಿಯೋಜಿತ ಸಂಭ್ರಮ: ಪಂದ್ಯದ ನಂತರ ಮಾತನಾಡಿದ ಕಾರ್ತಿಕ್ ಶರ್ಮಾ, “ಇಂದು ನಾನು ರನ್ ಗಳಿಸಿದರೆ ಧೋನಿ ಸರ್ ಅವರಂತೆ ಸಂಭ್ರಮಿಸಬೇಕೆಂದು ಮೊದಲೇ ನಿರ್ಧರಿಸಿದ್ದೆ” ಎಂದು ಹೇಳಿಕೊಂಡಿದ್ದಾರೆ.

ಯಾರು ಈ ಕಾರ್ತಿಕ್ ಶರ್ಮಾ?

ರಾಜಸ್ಥಾನದ ದೇಶೀಯ ಕ್ರಿಕೆಟ್‌ನಿಂದ ಬಂದಿರುವ 20 ವರ್ಷದ ಕಾರ್ತಿಕ್ ಶರ್ಮಾ ಅವರನ್ನು ಅಭಿಮಾನಿಗಳು ಪ್ರೀತಿಯಿಂದ “ರಾಜಸ್ಥಾನದ ಧೋನಿ” ಎಂದೇ ಕರೆಯುತ್ತಾರೆ. 2026ರ ಹರಾಜಿನಲ್ಲಿ ಸಿಎಸ್‌ಕೆ ಫ್ರಾಂಚೈಸಿ ಕಾರ್ತಿಕ್ ಅವರನ್ನು ಬರೋಬ್ಬರಿ 14.20 ಕೋಟಿ ರೂಪಾಯಿಗೆ ಖರೀದಿಸಿತ್ತು. ವಿಕೆಟ್ ಕೀಪರ್-ಬ್ಯಾಟರ್ ಆಗಿರುವ ಇವರು ಧೋನಿಯ ಉತ್ತರಾಧಿಕಾರಿ ಎಂದೇ ಬಿಂಬಿತವಾಗುತ್ತಿದ್ದಾರೆ.

ಇದನ್ನೂ ಓದಿ: ಬೆಂಕಿಯ ಉಂಡೆಗಳನ್ನೇ ಎಸೆಯಬೇಕಿತ್ತೇನೋ… ಪಾಂಡ್ಯ ಅಸಹಾಯಕತೆ!

ಇನ್ನು ಮುಂಬೈ ಇಂಡಿಯನ್ಸ್ ವಿರುದ್ಧದ ಈ ಗೆಲುವಿನೊಂದಿಗೆ  ಚೆನ್ನೈ ಸೂಪರ್ ಕಿಂಗ್ಸ್ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದ್ದು, ಪ್ಲೇ-ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಇನ್ನುಳಿದ 5 ಪಂದ್ಯಗಳಲ್ಲಿ 4 ಮ್ಯಾಚ್​ಗಳಲ್ಲಿ ಸಿಎಸ್​ಕೆ ತಂಡ ಗೆದ್ದರೆ ಪ್ಲೇಆಫ್ ಪ್ರವೇಶಿಸುವುದು ಖಚಿತ.

Source link

Exit mobile version