ಮೋದಿ ಸಾಗುವ ಮಾರ್ಗದಲ್ಲಿ ಸ್ಫೋಟಕ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ತನಿಖೆ ವೇಳೆ ಅಚ್ಚರಿಯ ಅಂಶ ಬಯಲಿಗೆ – Kannada News | Twist in Bengaluru PM Modi Security Case: Material Found Near Route Confirmed as Ammonium Nitrate Gel

ಬೆಂಗಳೂರು, ಮೇ 16: ಪ್ರಧಾನಿ ಮೋದಿ ಸಾಗುವ ಮಾರ್ಗದಲ್ಲಿ ಪತ್ತೆಯಾದ ವಸ್ತುವಿನ ಕುರಿತು ಪೊಲೀಸರ ತನಿಖೆಯಿಂದ ಹೊಸ ಮಾಹಿತಿ ಹೊರಬಿದ್ದಿದೆ. ಆರಂಭದಲ್ಲಿ ಜಿಲೆಟಿನ್ ಕಡ್ಡಿಗಳು ಎಂದು ಭಾವಿಸಲಾಗಿದ್ದರೂ, ಇದು ಅಮೋನಿಯಂ ನೈಟ್ರೇಟ್ ಜೆಲ್ ಎಂದು ದೃಢಪಟ್ಟಿದೆ. ಅಮೋನಿಯಂ ನೈಟ್ರೇಟ್ ಎಂಬುದು ಸ್ಪೋಟಕಗಳಲ್ಲಿ ಬಳಸುವ ಅಪಾಯಕಾರಿ ವಸ್ತುವಾಗಿದ್ದು, ಭಯದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಘಟನೆಯು ಮೇ 9ರ ರಾತ್ರಿ 8:05 ರಿಂದ ಮೇ 10ರ ಬೆಳಗ್ಗೆ 7:00 ಗಂಟೆಯ ನಡುವೆ, ಅಂದರೆ ಸುಮಾರು 11 ಗಂಟೆಗಳ ಅವಧಿಯಲ್ಲಿ ನಡೆದಿದೆ ಎಂದು ಅಂದಾಜಿಸಲಾಗಿದೆ. ಈ ಅವಧಿಯಲ್ಲಿ ಸ್ಥಳದಲ್ಲಿ ಪೊಲೀಸರ ಗಸ್ತು ಇರಲಿಲ್ಲ. ಸಿಸಿಟಿವಿ ಕ್ಯಾಮೆರಾಗಳು ಕೂಡ ಇಲ್ಲದಿರುವುದು ತನಿಖೆಗೆ ಸವಾಲಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ತಾಂತ್ರಿಕ ವಿಶ್ಲೇಷಣೆಗಳನ್ನು ಅವಲಂಬಿಸಿದ್ದಾರೆ. ಸ್ಪೋಟಕಕ್ಕೆ ಯಾವುದೇ ಡಿಟೋನೇಟರ್‌ಗಳು ಸಿಗದ ಕಾರಣ, ಸ್ಫೋಟದ ಸಾಧ್ಯತೆ ಕಡಿಮೆ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

National Dengue Day 2026: ಡೆಂಗ್ಯೂ ಜ್ವರದ ಬಗ್ಗೆ ನಿರ್ಲಕ್ಷ್ಯ ಬೇಡ, ಸಣ್ಣ ಅಸಡ್ಡೆಯೂ ಜೀವಕ್ಕೆ ಮಾರಕ – Kannada News | National Dengue Day 2026: Why celebrate National Dengue Day? Here’s the information

ರಾಷ್ಟ್ರೀಯ ಡೆಂಗ್ಯೂ ದಿನImage Credit source: Freepik

ಡೆಂಗ್ಯೂ (Dengue) ಜ್ವರ ಈಡೀಸ್‌ ಈಜಿಪ್ಟಿ ಜಾತಿಯ ಹೆಣ್ಣು ಸೊಳ್ಳೆಗಳಿಂದ ಮನುಷ್ಯರಿಗೆ ಹರಡುವ ಗಂಭೀರ ಕಾಯಿಲೆಯಾದ್ದು, ಇದರ ಸಣ್ಣ ನಿರ್ಲಕ್ಷ್ಯ ಕೂಡ ಜೀವಕ್ಕೆ ಮಾರಕವಾಗಿದೆ. ಈ ಜ್ವರದ ಲಕ್ಷಣ ಆರಂಭದಲ್ಲಿ ತುಂಬಾನೇ ಸೂಕ್ಷ್ಮವಾಗಿರುತ್ತದೆ. ಆನಂತರದಲ್ಲಿ ವಿಪರೀತ ತಲೆನೋವು, ಅತಿಯಾದ ಮೈಕೈ ನೋವು, ಕೀಲು ಗಂಟುಗಳಲ್ಲಿ ನೋವು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಈ ಜ್ವರದ ರೋಗಲಕ್ಷಣಗಳನ್ನು ಆರಂಭದಲ್ಲಿ ತಿಳಿದುಕೊಂಡು ಸೂಕ್ತ ಚಿಕಿತ್ಸೆಗಳನ್ನು ಪಡೆದುಕೊಳ್ಳದಿದ್ದರೆ, ಶ್ವಾಸಕೋಶ, ಲಿವರ್‌ ಇತ್ಯಾದಿ ದೇಹದ ಪ್ರಮುಖ ಅಂಗಗಳಲ್ಲಿ ಸಮಸ್ಯೆಗಳು ಕಾಣಿಸಿಕೊಂಡು ಇದು ಜೀವಕ್ಕೆ ಮಾರಕವಾಗುವ ಸಾಧ್ಯತೆ ಇದೆ. ಹಾಗಾಗಿ ಈ ಮಾರಣಾಂತಿಕ ಕಾಯಿಲೆ, ಇದರ ರೋಗ ಲಕ್ಷಣಗಳು ಹಾಗೂ ಸೂಕ್ತ ರೋಗ ನಿರ್ಣಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಭಾರತದಲ್ಲಿ ಪ್ರತಿವರ್ಷ ಮೇ 16 ರಂದು ರಾಷ್ಟ್ರೀಯ ಡೆಂಗ್ಯೂ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.

ರಾಷ್ಟ್ರೀಯ ಡೆಂಗ್ಯೂ ದಿನದ ಇತಿಹಾಸ ಹಾಗೂ ಮಹತ್ವವೇನು?

ರಾಷ್ಟ್ರೀಯ ಡೆಂಗ್ಯೂ ದಿನವು ಭಾರತದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಯೋಜನೆಯಾಗಿದ್ದು, ಡೆಂಗ್ಯೂ ವಿರೋಧಿ ದಿನ ಅಥವಾ ರಾಷ್ಟ್ರೀಯ ಡೆಂಗ್ಯೂ ದಿನವನ್ನು ಪ್ರತಿ ವರ್ಷ ಮೇ 16 ರಂದು ಆಚರಿಸಲಾಗುತ್ತದೆ. ಈ ದಿನದ ಮುಖ್ಯ ಉದ್ದೇಶವೇ ರೋಗ, ಅದರ ಕಾರಣಗಳು ಮತ್ತು ತಡೆಗಟ್ಟುವ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಾಗಿದೆ. ಈ ದಿನದಂದು ಡೆಂಗ್ಯೂ ತಡೆಗಟ್ಟುವ ಬಗೆಗಿನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ರಾಷ್ಟ್ರೀಯ ಡೆಂಗ್ಯೂ ದಿನವನ್ನು ಆಚರಿಸುವ ಉದ್ದೇಶವೇನು?

  • ಡೆಂಗ್ಯೂ ಎಂಬ ಗಂಭೀರ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸಲು ರಾಷ್ಟ್ರೀಯ ಡೆಂಗ್ಯೂ ದಿನವನ್ನು ಆಚರಿಸಲಾಗುತ್ತದೆ.
  • ಡೆಂಗ್ಯೂ ತಡೆಗಟ್ಟುವ ಕ್ರಮಗಳು, ರೋಗಲಕ್ಷಣಗಳನ್ನು ಗುರುತಿಸುವುದು ಮತ್ತು ಸೂಕ್ತ ಚಿಕಿತ್ಸೆ ಪಡೆಯುವ ಬಗ್ಗೆ ಜಾಗೃತಿ ಮೂಡಿಸಲು ರಾಷ್ಟ್ರೀಯ ಡೆಂಗ್ಯೂ ದಿನವನ್ನು ಆಚರಿಸಲಾಗುತ್ತದೆ.
  • ರಾಷ್ಟ್ರೀಯ ಡೆಂಗ್ಯೂ ದಿನದಂದು, ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ, ಡೆಂಗ್ಯೂ ಲಕ್ಷಣಗಳು, ಅದರ ಹರಡುವಿಕೆ ಮತ್ತು ತಡೆಗಟ್ಟುವ ಕ್ರಮಗಳನ್ನು ಚರ್ಚಿಸಲಾಗುತ್ತದೆ.

ಡೆಂಗ್ಯೂ ಜ್ವರದ ಲಕ್ಷಣಗಳೇನು?

ಡೆಂಗ್ಯೂ ಲಕ್ಷಣಗಳು ಸೌಮ್ಯ ಅಥವಾ ತೀವ್ರವಾಗಿರಬಹುದು. ಸೋಂಕು ತಗುಲಿದ ನಾಲ್ಕರಿಂದ ಏಳು ದಿನಗಳಲ್ಲಿ ಸೌಮ್ಯ ಲಕ್ಷಣಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ.  ತಲೆನೋವು, ಜ್ವರ, ಸ್ನಾಯು, ಮೂಳೆ ಮತ್ತು ಕೀಲು ನೋವು, ವಾಂತಿ, ಕಣ್ಣು ನೋವು ಕಾಣಿಸಿಕೊಳ್ಳುತ್ತದೆ.

ಡೆಂಗ್ಯೂ ಜ್ವರ ಉಲ್ಬಣಗೊಂಡರೆ, ದೇಹದಲ್ಲಿ ಪ್ಲೇಟ್‌ಲೆಟ್ ಎಣಿಕೆಗಳು ಕಡಿಮೆಯಾಗಲು ಪ್ರಾರಂಭಿಸುತ್ತವೆ. ಇದಲ್ಲದೆ ತೀವ್ರ ಹೊಟ್ಟೆ ನೋವು, ನಿರಂತರ ವಾಂತಿ, ಒಸಡುಗಳು ಅಥವಾ ಮೂಗಿನಿಂದ ರಕ್ತಸ್ರಾವ, ಮೂತ್ರ, ಮಲ ಅಥವಾ ವಾಂತಿಯಲ್ಲಿ ರಕ್ತ, ಉಸಿರಾಟದ ತೊಂದರೆ, ಸುಸ್ತು, ಕಿರಿಕಿರಿ ಅಥವಾ ಚಡಪಡಿಕೆಯಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ.

ಇದನ್ನೂ ಓದಿ: ಯೂರಿನ್ ಇನ್ಫೆಕ್ಷನ್ ಯಾವಾಗ ಅಪಾಯಕಾರಿಯಾಗಬಹುದು ಗೊತ್ತಾ? ಈ ಸೋಂಕಿನಿಂದ ರಕ್ಷಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ಡೆಂಗ್ಯೂ ತಡೆಗಟ್ಟಲು ಕ್ರಮಗಳೇನು?

  • ಕೂಲರ್‌ಗಳು ಮತ್ತು ನಿಮ್ಮ ಮನೆಯ ಇತರ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ.
  • ಮಲಗುವಾಗ ಸೊಳ್ಳೆ ಪರದೆ ಅಥವಾ ಸೊಳ್ಳೆ ನಿವಾರಕಗಳನ್ನು ಬಳಸಿ.
  • ನಿಮ್ಮ ಕಿಟಕಿಗಳು ಮತ್ತು ಬಾಗಿಲುಗಳನ್ನು ತೆರೆದಿಡುವುದನ್ನು ತಪ್ಪಿಸಿ.
  • ಸೊಳ್ಳೆಗಳಿಂದ ದೂರವಿರಲು ಉದ್ದ ತೋಳಿನ ಬಟ್ಟೆಗಳನ್ನು ಧರಿಸಿ.
  • ತಿಳಿ ಬಣ್ಣದ ಬಟ್ಟೆಗಳನ್ನು ಧರಿಸಿ. ತಿಳಿ ಬಣ್ಣದ ಬಟ್ಟೆಗಳು ಶಾಖದಿಂದ ಮಾತ್ರವಲ್ಲದೆ ಸೊಳ್ಳೆಗಳಿಂದಲೂ ರಕ್ಷಿಸುತ್ತವೆ. ಸೊಳ್ಳೆಗಳು ಗಾಢ ಬಣ್ಣಗಳಿಗೆ ಹೆಚ್ಚು ಆಕರ್ಷಿತವಾಗುತ್ತವೆ.
  • ಚರಂಡಿಗಳು, ಹೂವಿನ ಕುಂಡಗಳು ಮತ್ತು ಇತರ ಪ್ರದೇಶಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ. ಅವುಗಳಲ್ಲಿ ನೀರು ಸಂಗ್ರಹವಾಗಲು ಬಿಡಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Shani Jayanti 2026: ಶನಿ ದೋಷ, ಸಾಡೆಸಾತಿಯಿಂದ ಮುಕ್ತಿ ಪಡೆಯಲು ಇಂದು ತಪ್ಪದೇ ಈ ಕೆಲಸ ಮಾಡಿ – Kannada News | Shani jayanti 2026 effective remedies for saturn dosha and malefic effects

ಶನಿ ಜಯಂತಿಯು ಶನಿದೇವನ ಜನ್ಮದಿನವಾಗಿ ಆಚರಿಸಲ್ಪಡುವ ಪ್ರಮುಖ ಹಬ್ಬವಾಗಿದೆ. ಜೇಷ್ಠ ಮಾಸದಲ್ಲಿ ಶನಿವಾರ ಬರುವ ಅಮಾವಾಸ್ಯೆಯನ್ನು ಶನಿ ಜಯಂತಿ ಎಂದು ಆಚರಿಸಲಾಗುತ್ತದೆ. ಉದಾಹರಣೆಗೆ, 2026ರ ಮೇ 16ರಂದು ಬಂದ ಈ ಜೇಷ್ಠ ಅಮಾವಾಸ್ಯೆ, ಅಂದರೆ ಬಾದಾಮಿ ಅಮಾವಾಸ್ಯೆ, ಶನಿ ದೋಷ ನಿವಾರಣೆಗೆ ಅತ್ಯಂತ ಪ್ರಶಸ್ತವಾಗಿದೆ. ಅಮಾವಾಸ್ಯೆಯು ಬೆಳಗ್ಗೆ 5:11ಕ್ಕೆ ಪ್ರಾರಂಭವಾಗಿ, ಮರುದಿನ ಬೆಳಗ್ಗೆ 1:30ಕ್ಕೆ ಕೊನೆಗೊಳ್ಳುತ್ತದೆ. ಈ ದಿನದ ಮಹತ್ವದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ಶನಿ ಭಗವಾನನನ್ನು ನ್ಯಾಯಕಾರಕ ಹಾಗೂ ಕರ್ಮಫಲದಾತ ಎಂದು ಪರಿಗಣಿಸಲಾಗಿದೆ. ನಮ್ಮ ಜನ್ಮ ಕುಂಡಲಿಯಲ್ಲಿ ಸಾಡೆ ಸಾತಿ, ಅರ್ಧಾಷ್ಟಮ ಶನಿ, ಅಷ್ಟಮ ಶನಿ, ಪಂಚಮ ಶನಿ ಅಥವಾ ಶನಿ ದೃಷ್ಟಿ ಇರುವವರು ಆಗಾಗ ಎದುರಿಸುವ ಸ್ಪೀಡ್ ಬ್ರೇಕರ್‌ಗಳಂತಹ ಅಡೆತಡೆಗಳಿಂದ ಮುಕ್ತಿ ಪಡೆಯಲು ಈ ಶನಿ ಜಯಂತಿ ಅತ್ಯಂತ ಪವಿತ್ರ ದಿನ.

ಶನಿದೋಷ ನಿವಾರಣೆಗಾಗಿ ಹಲವು ವಿಧಿ ವಿಧಾನಗಳನ್ನು ಅನುಸರಿಸಬಹುದು. ಉಪವಾಸ, ಧ್ಯಾನ, ಪೂಜೆ, ಹಾಗೂ ದಾನ ಕಾರ್ಯಗಳನ್ನು ಮಾಡುವುದು ಶುಭ. ಸಾಸಿವೆ ಎಣ್ಣೆ, ಎಳ್ಳೆಣ್ಣೆ, ಎಳ್ಳಿನ ಬತ್ತಿ ದೀಪಗಳನ್ನು ಶನಿ ದೇವಸ್ಥಾನದಲ್ಲಿ ಹಚ್ಚುವುದು, ಶನಿ ಅಷ್ಟೋತ್ತರ ಸ್ಮರಣೆ ಮಾಡುವುದು, ಶನಿಗೆ ವಸ್ತ್ರ ಮತ್ತು ನೈವೇದ್ಯ ಅರ್ಪಿಸುವುದು ಗ್ರಹಕಾಟಗಳನ್ನು ಕಡಿಮೆ ಮಾಡುತ್ತದೆ. ಈ ದಿನ, ಹನುಮಾನ್ ಮತ್ತು ವೆಂಕಟೇಶ್ವರ ಸ್ವಾಮಿ ದರ್ಶನ ಮಾಡುವುದೂ ಸಹ ಶನಿ ದೇವರ ಪ್ರೀತಿಗೆ ಪಾತ್ರರಾಗಲು ಸಹಕಾರಿ. ಸಾಡೆಸಾತಿ, ಆರೋಗ್ಯ ಸಮಸ್ಯೆ ಅಥವಾ ಶಸ್ತ್ರಚಿಕಿತ್ಸೆಯಲ್ಲಿ ಅಡೆತಡೆಗಳಿರುವವರು ತಮ್ಮ ಹೆಸರಿನಲ್ಲಿ ಅರ್ಚನೆ ಮಾಡಿಸುವುದೂ ಫಲಪ್ರದ.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ

ಶನಿ ದೋಷ ನಿವಾರಣೆಗೆ ಒಂದು ವಿಶಿಷ್ಟ ತಂತ್ರವನ್ನು ವಿವರಿಸಲಾಗಿದೆ. ಒಂದು ಬಿಡಿಸಿದ ತೆಂಗಿನಕಾಯಿಯನ್ನು ತೆಗೆದುಕೊಂಡು ಅದನ್ನು ಪೂರ್ಣವಾಗಿ ಕಪ್ಪು ಹತ್ತಿ ಬಟ್ಟೆಯಿಂದ ಸುತ್ತಿ. ನಂತರ ಮೂರು ಎಳೆಯ ದಾರಗಳನ್ನು (ಕಪ್ಪು, ಬಿಳಿ, ಕೆಂಪು) ಆ ತೆಂಗಿನಕಾಯಿಗೆ ಸುತ್ತಿ. ಈ ತೆಂಗಿನಕಾಯಿಯನ್ನು ಎರಡೂ ಕೈಗಳಿಂದ ಹಿಡಿದು, ಪೂರ್ವಕ್ಕೆ ಅಭಿಮುಖವಾಗಿ ನಿಂತು, ನಿಮ್ಮ ತಲೆಯ ಸುತ್ತ ಎಂಟು ಬಾರಿ ಅಪ್ರದಕ್ಷಿಣಾಕಾರವಾಗಿ ತಿರುಗಿಸಿ. ನಂತರ, ಇದನ್ನು ಶನಿ ದೇವಸ್ಥಾನಕ್ಕೆ ಕೊಂಡೊಯ್ದು, ದೇವಸ್ಥಾನದ ಪ್ರಾಕಾರವನ್ನು ಎಂಟು ಬಾರಿ ಪ್ರದಕ್ಷಿಣೆ ಹಾಕಿ. ದೇವಸ್ಥಾನದ ಹೊರಗೆ ಆ ತೆಂಗಿನಕಾಯಿಯನ್ನು ಒಡೆದು, ಅದರ ಮೇಲಿದ್ದ ಬಟ್ಟೆಯನ್ನು (ಎಳ್ಳೆಣ್ಣೆಯಲ್ಲಿ ಅದ್ದಿದ್ದರೆ ಉತ್ತಮ) ಅಲ್ಲಿ ಉರಿಯುತ್ತಿರುವ ದೀಪಕ್ಕೆ ಹಾಕಿ. ಸ್ವಲ್ಪ ಸಮಯ ಅಲ್ಲೇ ಕುಳಿತುಕೊಂಡು, ಓಂ ಶಂ ಶನೇಶ್ಚರಾಯ ನಮಃ ಮಂತ್ರವನ್ನು 17 ಅಥವಾ 26 ಬಾರಿ ಜಪಿಸಿ, ನೇರವಾಗಿ ಮನೆಗೆ ಹಿಂದಿರುಗಿ. ಈ ವಿಧಾನದಿಂದ ಶನಿ ಕಾಟ ಕಡಿಮೆಯಾಗುತ್ತದೆ.

ಇದಲ್ಲದೆ, ಸಾಸಿವೆ ಎಣ್ಣೆ, ಎಳ್ಳೆಣ್ಣೆ ಅಥವಾ ಎಳ್ಳಿನ ಉಂಡೆಗಳನ್ನು ನೈವೇದ್ಯವಾಗಿ ಇಡಬಹುದು. ಸಣ್ಣ ಕಪ್ಪು ಬಟ್ಟೆಯನ್ನು ಜೋಬಿನಲ್ಲಿ ಇಟ್ಟುಕೊಂಡು, ಸಂಧ್ಯಾಕಾಲದಲ್ಲಿ ಅದನ್ನು ಎಲ್ಲಾದರೂ ಬಿಸಾಡುವುದರಿಂದಲೂ ಶುಭವಾಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಾವಣಗೆರೆ: ಶ್ರೀಮಂತ ಯುವಕರ ಬಲೆಗೆ ಬೀಳಿಸ್ತಿದ್ದ ಯುವತಿ, ಹಲ್ಲೆ ಮಾಡಿ ದೋಚುತ್ತಿದ್ದ ಹನಿಟ್ರ್ಯಾಪ್ ಗ್ಯಾಂಗ್ ಅರೆಸ್ಟ್ – Kannada News | Crime in Davanagere: Honeytrap Gang of Five Busted; Gram Panchayat Member Brutally Murdered in Channagiri

ಪಂಚಮಿ, ವೆಂಕಟೇಶ್, ಗಂಗಾ ಮಲ್ಲೇಶ್ ನಾಯ್ಕ ಹಾಗೂ ಜಗದೀಶImage Credit source: tv9

ದಾವಣಗೆರೆ, ಮೇ 16: ದಾವಣಗೆರೆ (Davanagere) ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಕ್ರಿಮಿನಲ್ ಪ್ರಕರಣಗಳು ವರದಿಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ. ದಾವಣಗೆರೆಯಲ್ಲಿ ಶ್ರೀಮಂತ ಯುವಕರನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ನಡೆಸಿ ಹಣ, ಒಡವೆ ಸುಲಿಗೆ ಮಾಡುತ್ತಿದ್ದ ಐದು ಮಂದಿ ಕಿಲಾಡಿಗಳನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ. ಮತ್ತೊಂದೆಡೆ, ಹಣ ಹಾಗೂ ಕೌಟುಂಬಿಕ ದ್ವೇಷದ ಹಿನ್ನೆಲೆ ಗ್ರಾಮ ಪಂಚಾಯತ್ ಸದಸ್ಯರೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.

ಮುಖ್ಯಾಂಶಗಳು

  • ಹನಿಟ್ರ್ಯಾಪ್ ಗ್ಯಾಂಗ್‌ನ ಐವರನ್ನು ಬಂಧಿಸಿದ ಪೊಲೀಸರು.
  • ₹10.20 ಲಕ್ಷ ಮೌಲ್ಯದ ಚಿನ್ನ ಹಾಗೂ ಕೃತ್ಯಕ್ಕೆ ಬಳಸಿದ್ದಇನ್ನೋವಾ ಕಾರು ವಶಕ್ಕೆ.
  • ಶ್ರೀಮಂತ ಯುವಕನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ದರೋಡೆ ಮಾಡಿದ್ದ ಗ್ಯಾಂಗ್.

ಹನಿಟ್ರ್ಯಾಪ್ ಪ್ರಕರಣದ ವಿವರ

ಪಂಚಮಿ (34), ಜಗದೀಶ (35), ಗಂಗಾ ಮಲ್ಲೇಶ್ ನಾಯ್ಕ (25) ಹಾಗೂ ವೆಂಕಟೇಶ್ (30) ಎಂಬವರೇ ಹನಿಟ್ರ್ಯಾಪ್ ಕೇಸ್​ನಲ್ಲಿ ಬಂಧಿತರಾದವರು. ಈ ಕಿಲಾಡಿ ಗ್ಯಾಂಗ್ ಮೊದಲು ಶ್ರೀಮಂತ ಹಿನ್ನೆಲೆಯುಳ್ಳ ಯುವಕರನ್ನು ಟಾರ್ಗೆಟ್ ಮಾಡುತ್ತಿತ್ತು. ಗ್ಯಾಂಗ್‌ನ ಸದಸ್ಯೆ ಪಂಚಮಿ (34) ಎಂಬಾಕೆ ಶ್ರೀಮಂತ ಯುವಕನೊಬ್ಬನೊಂದಿಗೆ ಸ್ನೇಹ ಬೆಳೆಸಿ, ಹರಿಹರ ತಾಲೂಕಿನ ಶಿವನಹಳ್ಳಿ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡಿದ್ದಾಳೆ. ಈ ವೇಳೆ ಹೊಂಚು ಹಾಕಿ ಕುಳಿತಿದ್ದ ಜಗದೀಶ, ಗಂಗಾ ಮಲ್ಲೇಶ್ ನಾಯ್ಕ, ವೆಂಕಟೇಶ್ ಹಾಗೂ ಮತ್ತೊಬ್ಬ ಆರೋಪಿ ಧಾವಿಸಿ ಬಂದು ಯುವಕನ ಮೇಲೆ ಹಲ್ಲೆ ನಡೆಸಿ, ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಇಡೀ ಗ್ಯಾಂಗ್ ಅನ್ನು ಜೈಲಿಗಟ್ಟಿದ್ದಾರೆ. ಈ ತಂಡ ಇನ್ನೂ ಹಲವು ಯುವಕರಿಗೆ ವಂಚಿಸಿರುವ ಶಂಕೆ ಇದ್ದು, ತನಿಖೆ ಚುರುಕುಗೊಂಡಿದೆ.

ಚನ್ನಗಿರಿಯ ನಲ್ಲೂರು ಗ್ರಾಮದಲ್ಲಿ ಪಂಚಾಯತಿ ಸದಸ್ಯನ ಬರ್ಬರ ಹತ್ಯೆ

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಅತಾವುಲ್ಲಾ (46) ಎಂಬುವವರನ್ನು ತಡರಾತ್ರಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಅಡಿಕೆ ಕತ್ತರಿಸುವ ಕತ್ತಿ ಹಾಗೂ ಮಚ್ಚುಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಹಳೇ ಕಾರುಗಳ ವ್ಯಾಪಾರ ಮಾಡುತ್ತಿದ್ದ ಅತಾವುಲ್ಲಾ, ಭದ್ರಾವತಿ ತಾಲೂಕಿನ ಕಾಗೆಕೋಡುಮಗ್ಗಿ ಗ್ರಾಮದ ತನ್ನ ಸೋದರತ್ತೆಯ ಮಗಳ ಬಳಿ 2 ಲಕ್ಷ ರೂ. ಸಾಲ ಮಾಡಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಇಡೀ ಕರ್ನಾಟಕವನ್ನೇ ನಡುಗಿಸಿದ 4500 ಕೋಟಿ ರೂ. ವಂಚನೆ ಕೇಸ್: ಶಿವಂ ಅಸೋಸಿಯೇಟ್‌ ಮಾಲೀಕ ಅರೆಸ್ಟ್

ಸಾಲದ ಹಣದ ವಿವಾದ ಒಂದೆಡೆಯಾದರೆ, ಸೋದರತ್ತೆಯ ಮಗಳನ್ನು ಬಿಟ್ಟು ಅತಾವುಲ್ಲಾ ಬೇರೆ ಯುವತಿಯನ್ನು ಮದುವೆಯಾಗಿದ್ದಕ್ಕೆ ಸೋದರತ್ತೆ ತೀವ್ರ ದ್ವೇಷ ಸಾಧಿಸುತ್ತಿದ್ದಳು. ಇದೇ ಹಳೇ ದ್ವೇಷದ ಹಿನ್ನೆಲೆಯಲ್ಲಿ ಭದ್ರಾವತಿ ತಾಲೂಕಿನ ಶೇಖ್ ದಸ್ತುಗಿರಿ ಹಾಗೂ ಜಬೀವುಲ್ಲಾ ಎಂಬ ಹಂತಕರಿಗೆ ಸುಪಾರಿ ಕೊಟ್ಟು ಈ ಕೊಲೆ ಮಾಡಿಸಲಾಗಿದೆ ಎಂಬುದು ತಿಳಿದುಬಂದಿದೆ. ಸದ್ಯ ಚನ್ನಗಿರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಹಂತಕರ ಪತ್ತೆಗೆ ಜಾಲ ಬೀಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಮಾತನಾಡಿದ ಪವನ್ ಕಲ್ಯಾಣ್: ಆಗಿದ್ದ ಸಮಸ್ಯೆ ಏನು? – Kannada News | Pawan Kalyan talks about his health condition

ಪವನ್ ಕಲ್ಯಾಣ್ (Pawan Kalyan) ಇತ್ತೀಚೆಗಷ್ಟೆ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರು, ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಅವರ ಸಹೋದರ ಮೆಗಾಸ್ಟಾರ್ ಚಿರಂಜೀವಿ, ಅಲ್ಲು ಅರ್ಜುನ್ ಇನ್ನೂ ಹಲವರು ಟ್ವೀಟ್ ಮಾಡಿ ಶೀಘ್ರ ಗುಣಮುಖವಾಗುವಂತೆ ಕೋರಿದ್ದರು. ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರು ಪವನ್ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ವೈದ್ಯರ ಸಲಹೆಯಂತೆ ಕೆಲ ವಾರ ವಿಶ್ರಾಂತಿಯನ್ನೂ ಪಡೆದಿದ್ದರು. ಇದೀಗ ಶಸ್ತ್ರಚಿಕಿತ್ಸೆ ಬಳಿಕ ಮೊದಲ ಬಾರಿಗೆ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ಪವನ್ ಕಲ್ಯಾಣ್, ತಮಗಾಗಿದ್ದ ಆರೋಗ್ಯ ಸಮಸ್ಯೆಯ ಬಗ್ಗೆ ಮಾತನಾಡಿದ್ದಾರೆ.

ತಮ್ಮ ಜನಸೇನಾ ಪಕ್ಷದ ಸಭೆಯಲ್ಲಿ ಭಾಗಿ ಆಗಿದ್ದ ಪವನ್ ಕಲ್ಯಾಣ್, ತಮಗಾಗಿದ್ದ ಆರೋಗ್ಯ ಸಮಸ್ಯೆ ಬಗ್ಗೆ ವಿವರಿಸಿದರು. ‘ಕೋವಿಡ್ ಸಮಯದಲ್ಲಿ ನನಗೆ ಶ್ವಾಸಕೋಶದ ಸೋಂಕು ಆಗಿತ್ತು. ಅದು ಪೂರ್ಣವಾಗಿ ಗುಣವಾಗಿರಲಿಲ್ಲ. ಅದರ ಜೊತೆಗೆ ಚುನಾವಣೆಗೆ ಮುಂಚೆ ಸುಮಾರು ಒಂದೂವರೆ ವರ್ಷದ ಕಾಲ ದೂಳಿನಲ್ಲಿ ಓಡಾಟ, ವಿಶ್ರಾಂತಿ ಇಲ್ಲದ ಪ್ರಚಾರ ಇನ್ನಿತರೆಗಳಿಂದ ಆರೋಗ್ಯದಲ್ಲಿ ವ್ಯತ್ಯಾಸಗಳಾಗಿದ್ದವು’ ಎಂದರು.

‘ದೂಳಿನಲ್ಲಿ ಸಾಕಷ್ಟು ತಿರುಗಿ ಸೈನಸ್ ನಲ್ಲಿ ದೂಳು ಜಮೆಯಾಗಿ ಅಲ್ಲಿ ಗಟ್ಟಿಯಾಗಿಬಿಟ್ಟಿತ್ತು. ಇದರಿಂದ ಎಡಗಣ್ಣಿನ ಪಕ್ಕ ಪದೇ ಪದೇ ಊತ ಬರುತ್ತಿತ್ತು. ಒಂದು ಹಂತದಲ್ಲಂತೂ ಕಣ್ಣಿನ ದೃಷ್ಟಿ ಮಂದವಾಗಿತ್ತು, ಹಾಗೂ ಎಡಗಡೆ ಕಣ್ಣು ತಿರುಗಿಸಿದರೆ ಏನೂ ಕಾಣುತ್ತಲೇ ಇರಲಿಲ್ಲ. ಇದರ ಜೊತೆಗೆ ದೇಹದ ಕೆಲವೆಡೆ ಮಾಂಸಖಂಡಗಳು ಹರಿದಿವೆ, ಕೆಲ ಮೂಳೆಗಳಲ್ಲಿ ಬಿರುಕು ಮೂಡಿದೆ ಎಂಬುದು ಸಹ ಗೊತ್ತಾಯ್ತು’ ಎಂದಿದ್ದಾರೆ ಪವನ್.

ಇದನ್ನೂ ಓದಿ:ಚಿಕ್ಕಪ್ಪ ಪವನ್ ಕಲ್ಯಾಣ್ ದಾಖಲೆ ಮುರಿದ ರಾಮ್ ಚರಣ್

‘ನಾನು ಹೋದಲ್ಲೆಲ್ಲ ಅಭಿಮಾನಿಗಳು ಕೈ ಕುಲುಕುವುದು, ಕೈ ಕೊಟ್ಟರೆ ಎಳೆಯುವುದು ಮಾಡುತ್ತಾರೆ ಅದು ಅವರ ಪ್ರೀತಿ, ಆದರೆ ಅದರಿಂದ ನನಗೆ ಎರಡೂ ಭುಜಗಳಲ್ಲಿ ಮಾಂಸಖಂಡಗಳು ತುಸು ಹರಿದಿದ್ದು, ಮೂಳೆಗಳಲ್ಲಿ ಸಣ್ಣ ಬಿರುಕುಗಳು ಮೂಡಿವೆ. ಆದರೆ ಜೊತೆಗೆ ಕೆಲವು ಭಾಗಗಳಲ್ಲಿ ಅಸಹನೀಯ ನೋವು ಸಹ ಇತ್ತು. ಆದರೆ ನಾನು ಮೊದಲಿನಿಂದಲೂ ಮಾರ್ಷಲ್ ಆರ್ಟ್ಸ್ ತರಬೇತಿ, ವ್ಯಾಯಾಮಗಳನ್ನು ಮಾಡುತ್ತಿದ್ದರಿಂದ ದೇಹ ತಡೆದುಕೊಂಡಿದೆ’ ಎಂದು ಪವನ್ ಕಲ್ಯಾಣ್ ಹೇಳಿದರು.

ವೈದ್ಯರ ಹಾಗಾಗಿ ಎಲ್ಲ ಕಾರ್ಯಕ್ರಮವನ್ನು ರದ್ದು ಮಾಡಿ, ಚಿಕಿತ್ಸೆಗೆ ಒಳಗಾದೆ. ಈಗ ಸುಮಾರು ಒಂದು ತಿಂಗಳ ಬಳಿಕ ನಾನು ಇಲ್ಲಿಗೆ ಬಂದಿದ್ದೇನೆ. ಜನರ ಪ್ರೀತಿಯಿಂದ ಸಮಸ್ಯೆ ಆದರೆ ನನಗೆ ನೋವೆನಿಸುವುದಿಲ್ಲ ಏಕೆಂದರೆ ಆ ನೋವನ್ನು ಹೋಗಲಾಡಿಸುವುದು ಸಹ ಜನರೇ’ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ. ಆರೋಗ್ಯ ಈಗ ಸಾಕಷ್ಟು ಸುಧಾರಿಸಿದ್ದು, ಇನ್ನು ಮುಂದೆ ರಾಜಕೀಯದಲ್ಲಿ ಸಕ್ರಿಯರಾಗಿರುವುದಾಗಿ ಪವನ್ ಕಲ್ಯಾಣ್ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಓಯ್ ಅಂಧೇರೇ… ತಿಲಕ್ ವರ್ಮಾಗೆ ಅರ್ಷದೀಪ್ ನಿಂದನೆ! ಭಾರೀ ಆಕ್ರೋಶ – Kannada News | Arshdeep Singh’s Colorist Slur Against Tilak Varma Sparks Outrage!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ವಿವಾದಗಳು ಮುಂದುವರೆದಿದೆ. ಈ ವಿವಾದಗಳ ಪಟ್ಟಿಗೆ ಹೊಸ ಸೇರ್ಪಡೆ ಅರ್ಷದೀಪ್ ಸಿಂಗ್ ಅವರ ನಿಂದನೆ. ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಪಂದ್ಯಕ್ಕೂ ಮುನ್ನ ಅರ್ಷದೀಪ್ ಸಿಂಗ್, ತಿಲಕ್ ವರ್ಮಾ ಅವರನ್ನು ಮೈ ಬಣ್ಣವನ್ನು ಪ್ರಸ್ತಾಪಿಸಿ ಕರೆಯುತ್ತಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೈರಲ್ ವೀಡಿಯೊದಲ್ಲೇನಿದೆ?

ಅರ್ಷದೀಪ್ ಸಿಂಗ್ ತಮ್ಮದೇ ಆದ ಸ್ನ್ಯಾಪ್‌ಚಾಟ್ ಖಾತೆಯಲ್ಲಿ ವೀಡಿಯೊವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ತಿಲಕ್ ವರ್ಮಾ ಅವರನ್ನು ಉದ್ದೇಶಿಸಿ, “ಓಯ್ ಅಂಧೇರೇ (ಕತ್ತಲೆಯೇ), ಸನ್‌ಸ್ಕ್ರೀನ್ ಹಚ್ಚಿಕೊಂಡಿದ್ದೀಯಾ?” ಎಂದು ಕೇಳಿದ್ದಾರೆ.

ಅಷ್ಟೇ ಅಲ್ಲದೆ ಕ್ಯಾಮೆರಾವನ್ನು ಸಹ ಆಟಗಾರ ನಮನ್ ಧೀರ್ ಕಡೆಗೆ ತಿರುಗಿಸಿ, ಅವರೇ ಪಂಜಾಬ್‌ನ ನಿಜವಾದ ‘ನೂರ್’ (ಕಾಂತಿ) ಎಂದು ಹೊಗಳಿದ್ದಾರೆ.

ಇಲ್ಲಿ ಅರ್ಷದೀಪ್ ಸಿಂಗ್ ಪಂಜಾಬಿ ಭಾಷೆಯಲ್ಲಿ ಅಂಧೇರೇ ಅಂದಿರುವುದು ಕರಿಯ ಎಂಬಾರ್ಥದಲ್ಲಿ. ಅಂದರೆ ಮೈ ಬಣ್ಣವನ್ನು ಪ್ರಸ್ತಾಪಿಸಿ ಹೀಯಾಳಿಸಿರುವುದು ಸ್ಪಷ್ಟ.

ಅರ್ಷದೀಪ್ ಸಿಂಗ್ ಅವರ  ಈ ಮಾತಿನಿಂದ ತಿಲಕ್ ವರ್ಮಾ ಮುಜುಗರಕ್ಕೊಳಗಾದಂತೆ ಕಂಡರೂ, ಪರಿಸ್ಥಿತಿಯನ್ನು ಶಾಂತವಾಗಿ ನಿಭಾಯಿಸಿದ್ದಾರೆ. “ನಾನು ಈಗಾಗಲೇ ಸನ್‌ಸ್ಕ್ರೀನ್ ಹಚ್ಚಿಕೊಂಡಿದ್ದೇನೆ, ನಾಳಿನ ಪಂದ್ಯದ ಕಡೆ ಗಮನ ಕೊಡೋಣ” ಎಂದು ಹೇಳಿ ಅಲ್ಲಿಂದ ತೆರಳಿದ್ದಾರೆ.

ನೆಟ್ಟಿಗರ ತೀವ್ರ ಆಕ್ರೋಶ:

ಟ್ವಿಟರ್ (X) ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಕ್ರಿಕೆಟ್ ಪ್ರೇಮಿಗಳು ಅರ್ಷದೀಪ್ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಡ್ರೆಸ್ಸಿಂಗ್ ರೂಮ್ ತಮಾಷೆಯ ಹೆಸರಿನಲ್ಲಿ ಇಂತಹ ವರ್ಣಭೇದದ ಕಾಮೆಂಟ್‌ಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಇಂತಹ ಸೂಕ್ಷ್ಮ ವಿಷಯಗಳಲ್ಲಿ ಆಟಗಾರರಿಗೆ ಸಾಮಾಜಿಕ ಜಾಲತಾಣಗಳ ಬಳಕೆಯ ಬಗ್ಗೆ ತರಬೇತಿ ನೀಡಬೇಕು ಮತ್ತು ಬಿಸಿಸಿಐ ಅರ್ಷದೀಪ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ.

ಬ್ಯಾಟ್​ ಮೂಲಕ ಉತ್ತರ:

ಅರ್ಷದೀಪ್ ಸಿಂಗ್​ ಮಾತುಗಳ ಮೂಲಕ ವಿವಾದ ಸೃಷ್ಟಿಸಿದರೆ, ತಿಲಕ್ ವರ್ಮಾ ತಮ್ಮ ಬ್ಯಾಟ್ ಮೂಲಕವೇ ತಕ್ಕ ಉತ್ತರ ನೀಡಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 33 ಎಸೆತಗಳಲ್ಲಿ ಭರ್ಜರಿ 6 ಸಿಕ್ಸರ್‌ಗಳ ನೆರವಿನಿಂದ ಅಜೇಯ 75 ರನ್ ಚಚ್ಚಿದರು. ಈ ಮೂಲಕ ಪಂಜಾಬ್ ಕಿಂಗ್ಸ್ ನೀಡಿದ 201 ರನ್​ಗಳ ಗುರಿ ಬೆನ್ನತ್ತುವ ಮೂಲಕ ತಿಲಕ್ ವರ್ಮಾ ಮುಂಬೈ ಇಂಡಿಯನ್ಸ್ ತಂಡಕ್ಕೆ 6 ವಿಕೆಟ್​ಗಳ ಭರ್ಜರಿ ಜಯ ತಂದುಕೊಟ್ಟಿದ್ದಾರೆ.

Source link

ತೈಲ ಬೆಲೆ ಹೆಚ್ಚಳ ಭಾರತದಲ್ಲೇ ಕನಿಷ್ಠ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟನೆ – Kannada News | Global Fuel Crisis: Minister Pralhad Joshi Slams Congress, Says India’s Petrol Price Hike Lowest Globally

ತೈಲ ಬೆಲೆ ಹೆಚ್ಚಳ ಭಾರತದಲ್ಲೇ ಕನಿಷ್ಠ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟನೆImage Credit source: PTI

ನವದೆಹಲಿ, ಮೇ 16: ಜಾಗತಿಕ ಸಂಘರ್ಷ, ಬಿಕ್ಕಟ್ಟಿದ್ದರೂ ಭಾರತವು ತೈಲ ಬೆಲೆಯನ್ನು ಅತ್ಯಂತ ಕನಿಷ್ಠ ಮಟ್ಟದಲ್ಲಿ ಹೆಚ್ಚಳ ಮಾಡಿದೆ. ಬೇರೆ ಬೇರೆ ರಾಷ್ಟ್ರಗಳಲ್ಲಿ ಶೇ 20 ರಿಂದ 45ರಷ್ಟು ಏರಿಕೆ ಕಂಡಿದ್ದರೆ, ನಮ್ಮ ದೇಶದಲ್ಲಿ ಕೇವಲ ಶೇ 3.2ರಷ್ಟು ಮಾತ್ರವೇ ಹೆಚ್ಚಿಸಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ (Pralhad Joshi) ಸ್ಪಷ್ಟಪಡಿಸಿದ್ದಾರೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ 3 ರೂ. ಏರಿಕೆ ಬೆನ್ನಲ್ಲೇ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮುಗಿಬಿದ್ದಿವೆ. ಈ ಹಿನ್ನೆಲೆಯಲ್ಲಿ ಪ್ರಲ್ಹಾದ್ ಜೋಶಿ ಅಂಕಿಅಂಶ ಸಮೇತ ಸ್ಪಷ್ಟನೆ ನೀಡಿದ್ದಾರೆ.

ಮುಖ್ಯಾಂಶಗಳು

  • ದೇಶದಲ್ಲಿ ಡೀಸೆಲ್, ಪೆಟ್ರೋಲ್ ಬೆಲೆ ಕೇವಲ ಶೇ 3.2 ರಷ್ಟು ಏರಿಕೆ.
  • ಜಾಗತಿಕವಾಗಿ ಶೇ 20-40ರಷ್ಟು ಹೆಚ್ಚಿದೆ ಎಂದ ಪ್ರಲ್ಹಾದ ಜೋಶಿ.
  • ಯಾವುದೇ ಬಿಕ್ಕಟ್ಟು, ಸಂಘರ್ಷ ಸ್ಥಿತಿ ಇಲ್ಲದಿದ್ರೂ ಕಾಂಗ್ರೆಸ್ ಸರ್ಕಾರ ಹೆಚ್ಚಿಸಿದ್ದೇಕೆ ಎಂದು ಪ್ರಶ್ನಿಸಿದ ಜೋಶಿ.

ಪಶ್ಚಿಮ ಏಷ್ಯಾ ಸಂಘರ್ಷ ಮತ್ತು ಇಂಧನ ಪೂರೈಕೆ ಅಡ್ಡಿ ಆತಂಕದ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದ ನಾಗರಿಕರ ಹಿತದೃಷ್ಟಿಯಿಂದ ಕೆಲವೇ ದಿನಗಳ ಹಿಂದೆ ಅಬಕಾರಿ ಸುಂಕವನ್ನು 10 ರೂ. ಕಡಿಮೆ ಮಾಡಿತ್ತು. ಆದರೆ, ಇದೀಗ ಬ್ರೆಂಟ್ ಕಚ್ಚಾ ತೈಲ ಬೆಲೆ ಐತಿಹಾಸಿಕ ಗರಿಷ್ಠ ಮಟ್ಟಕ್ಕೆ ಏರುತ್ತಿದ್ದರಿಂದ ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಳ ಅನಿವಾರ್ಯವಾಗಿದೆ. ಆದರೂ ವಿಶ್ವದಲ್ಲೇ ಅತ್ಯಂತ ಕನಿಷ್ಠ ಮಟ್ಟದಲ್ಲಿ ಅಂದರೆ 3 ರೂ. ಏರಿಕೆ ಮಾಡಿದೆ ಎಂದು ಜೋಶಿ ಹೇಳಿದ್ದಾರೆ.

ಭಾರತದಲ್ಲೇ ಅತ್ಯಂತ ಕನಿಷ್ಠ ಏರಿಕೆ: ಜೋಶಿ

ಜಾಗತಿಕವಾಗಿ ನೋಡಿದರೆ ತೈಲ ಬೆಲೆಯನ್ನು ಭಾರತವೇ ಆತ್ಯಂತ ಕಡಿಮೆ‌‌ ಮಟ್ಟದಲ್ಲಿ ಏರಿಕೆ ಮಾಡಿದೆ. ಯುಎಸ್ಎ +44.5%, ಶ್ರೀಲಂಕಾ +38.2%, ಯುಕೆ +19.2%, ಜರ್ಮನಿ +13.7% ರಷ್ಟು ಹೆಚ್ಚಳ ಮಾಡಿದ್ದರೆ, ತಮ್ಮ ಸರ್ಕಾರ ಭಾರತದಲ್ಲಿ‌ ಕೇವಲ +3.2% ಹೆಚ್ಚಳ ಮಾಡಿದೆ ಅಷ್ಟೇ ಎಂದು ಸಚಿವರು ಅಂಕಿ ಅಂಶ ಸಹಿತ ವಿವರಿಸಿ ಕಾಂಗ್ರೆಸ್ ಗೆ ಚಾಟಿ ಬೀಸಿದ್ದಾರೆ.

ಜಗತ್ತಿನೆಲ್ಲೆಡೆ ಎಲ್ಲಾ ರಾಷ್ಟ್ರಗಳು ಇಂಧನ ಬಿಕ್ಕಟ್ಟು ಎದುರಿಸುತ್ತಿವೆ. ಇಂಧನ ಪೂರೈಕೆ ಮತ್ತು ತೈಲ ಆಮದು ಮಾಡಿಕೊಳ್ಳುವ ದೇಶಗಳಂತೂ ತೀವ್ರ ಒತ್ತಡದಲ್ಲಿವೆ. ವಾಸ್ತವ ಗೊತ್ತಿದ್ದರೂ ಈ ವಿಷಯದಲ್ಲಿ ಕಾಂಗ್ರೆಸ್ ಬೂಟಾಟಿಕೆ ಮಾಡುತ್ತಿದೆ ಎಂದು ಸಚಿವರು ಕಿಡಿ ಕಾರಿದ್ದಾರೆ.

ಕಾಂಗ್ರೆಸ್ ಸರ್ಕಾರ ಹೆಚ್ಚಿಸಿದ್ದೇಕೆ: ಜೋಶಿ ಪ್ರಶ್ನೆ

ಜಾಗತಿಕ ತೈಲ ಪೂರೈಕೆಯಲ್ಲಿ ಯಾವುದೇ ಅಡಚಣೆ ಇಲ್ಲದಿದ್ದರೂ ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರ ಎರೆಡೆರಡು ಬಾರಿ ಇಂಧನ ತೆರಿಗೆ ಹೆಚ್ಚಿಸಿದ್ದೇಕೆ ಎಂದು ಜೋಶಿ ಪ್ರಶ್ನಿಸಿದ್ದಾರೆ.

ಪೆಟ್ರೋಲ್, ಡೀಸೆಲ್ ಸೆಸ್ ಹೆಚ್ಚಿಸಿದ್ದ ಕರ್ನಾಟಕ ಕಾಂಗ್ರೆಸ್ ಸರ್ಕಾರ

ಕರ್ನಾಟಕ ಕಾಂಗ್ರೆಸ್ ಸರ್ಕಾರ 2024ರ ಜೂನ್ 15ಕ್ಕೆ ಪೆಟ್ರೋಲ್ ವ್ಯಾಟ್ ಅನ್ನು ಶೇ 25.92ರಿಂದ ಶೇ.29.84 ಮತ್ತು ಡೀಸೆಲ್ ಮೇಲೆ ಶೇ 14.34 ರಿಂದ ಶೇ 18.44ರಷ್ಟು ಹಾಗೂ 3 ರೂ. ಪ್ರತಿ ಲೀಟರ್ ಗೆ ಹೆಚ್ಚಿಸಿತ್ತು. 2025ರ ಏಪ್ರಿಲ್ 1ಕ್ಕೆ ಡೀಸೆಲ್ ವ್ಯಾಟ್ ಮತ್ತೆ ಶೇ.21.17ಕ್ಕೆ ಏರಿಕೆಯಾಗಿದ್ದು, ಡೀಸೆಲ್ ಬೆಲೆ ಸುಮಾರು 91 ರೂ. ಏರಿಸಿದ್ದು, ಕೇವಲ 10 ತಿಂಗಳಲ್ಲಿ 5 ರೂ. ಹೆಚ್ಚಿಸಿದೆ. ಇದೇಕೆ ಎಂದು ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ಬೂಟಾಟಿಕೆ: ಜೋಶಿ

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ 50ಕ್ಕೂ ಹೆಚ್ಚು ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿ ಜನಜೀವನ ದುಸ್ಥರಗೊಳಿಸಿದೆ. ಆದರೆ, ಈಗ ಕೇಂದ್ರದತ್ತ ಬೆರಳು ತೋರಿ ಪಾಠ ಮಾಡಲು ಬರುತ್ತಿದೆ. ಇದು ಬೂಟಾಟಿಕೆ ರಾಜಕಾರಣವಲ್ಲದೆ ಮತ್ತೇನೂ ಅಲ್ಲವೆಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ದರ ಭರ್ಜರಿ ಏರಿಕೆ; ಜನಸಾಮಾನ್ಯರಿಗೆ ಬೆಲೆ ಏರಿಕೆಯ ಆಘಾತ 

ಪ್ರಸ್ತುತ ಸನ್ನಿವೇಶದಲ್ಲಿ ತೈಲ ಬೆಲೆ ಏರಿಕೆಯನ್ನು ದೇಶದ ಜನ ಅರ್ಥ ಮಾಡಿಕೊಳ್ಳಬಲ್ಲರು. ಅದರಂತೆ ರಾಜ್ಯ ಸರ್ಕಾರ ಸಹ ಕೇಂದ್ರದ ಅನಿವಾರ್ಯ ನಿಲುವುಗಳನ್ನು ಗೌರವಿಸಬೇಕು ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RCB 38 ವರ್ಷದ ಆಟಗಾರನನ್ನು ಆಯ್ಕೆ ಮಾಡಲು ಇದುವೇ ಕಾರಣ!

Source link

ಮೆಟ್ರೋ ಪ್ರಯಾಣಿಕರೇ ಗಮನಿಸಿ! ಭಾನುವಾರ ಹೊಸಹಳ್ಳಿ-ಕಬ್ಬನ್ ಪಾರ್ಕ್ ಮೆಟ್ರೋ ಸಂಚಾರ ಬೆಳಿಗ್ಗೆ 9 ಗಂಟೆಗೆ ಆರಂಭ – Kannada News | Namma Metro Purple Line: Hosahalli Cubbon Park Metro to Start at 9 AM on May 17, Sunday

ಭಾನುವಾರ ಹೊಸಹಳ್ಳಿ-ಕಬ್ಬನ್ ಪಾರ್ಕ್ ಮೆಟ್ರೋ ಸಂಚಾರ ಬೆಳಿಗ್ಗೆ 9 ಗಂಟೆಗೆ ಆರಂಭ

ಬೆಂಗಳೂರು, ಮೇ 16: ನಗರದ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಮೇ 17ರ ಭಾನುವಾರದಂದು ಅತ್ಯಗತ್ಯ ತಾಂತ್ರಿಕ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಬೆಳಿಗ್ಗೆ 7:00 ಗಂಟೆಯಿಂದ 9:00 ಗಂಟೆಯವರೆಗೆ ಒಟ್ಟು ಎರಡು ಗಂಟೆಗಳ ಅವಧಿಗೆ ರೈಲು ಸಂಚಾರದಲ್ಲಿ ಭಾಗಶಃ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಪ್ರಕಟಣೆಯಲ್ಲಿ ತಿಳಿಸಿದೆ.

ಮುಖ್ಯಾಂಶಗಳು

  • ಭಾನುವಾರ ಬೆಳಿಗ್ಗೆ ಏಳರಿಂದ ಒಂಬತ್ತರವರೆಗೆ ಎರಡು ಗಂಟೆಗಳ ಕಾಲ ಮೆಟ್ರೋ ಸಂಚಾರ ಸ್ಥಗಿತ
  • ಹೊಸಹಳ್ಳಿ ಹಾಗೂ ಕಬ್ಬನ್ ಪಾರ್ಕ್ ನಿಲ್ದಾಣಗಳ ನಡುವೆ ತಾಂತ್ರಿಕ ನಿರ್ವಹಣಾ ಕಾಮಗಾರಿ
  • ನೇರಳೆ ಮಾರ್ಗದ ಇತರ ಭಾಗಗಳು ಹಾಗೂ ಹಸಿರು, ಹಳದಿ ಮಾರ್ಗಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ

ಯಾವ ನಿಲ್ದಾಣಗಳ ನಡುವೆ ಸಂಚಾರ ಸ್ಥಗಿತ?

ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮತ್ತು ಸೆಂಟ್ರಲ್ ಕಾಲೇಜಿನ ಸರ್ ಎಂ. ವಿಶ್ವೇಶ್ವರಯ್ಯ ಮೆಟ್ರೊ ನಿಲ್ದಾಣಗಳ ನಡುವೆ ತುರ್ತು ಮತ್ತು ಅಗತ್ಯ ಸುರಕ್ಷತಾ ಕಾಮಗಾರಿಗಳು ನಡೆಯಲಿವೆ. ಈ ತಾಂತ್ರಿಕ ಕಾರಣದಿಂದಾಗಿ, ಭಾನುವಾರ ಬೆಳಿಗ್ಗೆ 2 ಗಂಟೆಗಳ ಕಾಲ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣ (ಹೊಸಹಳ್ಳಿ) ಮತ್ತು ಕಬ್ಬನ್ ಪಾರ್ಕ್ ಮೆಟ್ರೊ ನಿಲ್ದಾಣಗಳ ನಡುವೆ ಮೆಟ್ರೋ ರೈಲು ಸೇವೆಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿವೆ. ಬೆಳಿಗ್ಗೆ 9:00 ಗಂಟೆಯ ನಂತರ ಈ ಮಾರ್ಗದಲ್ಲಿ ಎಂದಿನಂತೆ ರೈಲುಗಳು ಸಂಚರಿಸಲಿವೆ.
ಪರ್ಯಾಯ ಮಾರ್ಗಗಳಲ್ಲಿ ಎಂದಿನಂತೆ ಸಂಚಾರ ಲಭ್ಯ

ನೇರಳೆ ಮಾರ್ಗದ ಒಂದು ಭಾಗದಲ್ಲಿ ಸಂಚಾರ ಸ್ಥಗಿತಗೊಂಡಿದ್ದರೂ, ಪ್ರಯಾಣಿಕರ ಅನುಕೂಲಕ್ಕಾಗಿ ಇನ್ನುಳಿದ ಮಾರ್ಗಗಳಲ್ಲಿ ಬೆಳಿಗ್ಗೆ 7:00 ಗಂಟೆಯಿಂದಲೇ ರೈಲು ಸೇವೆಗಳು ಲಭ್ಯವಿರಲಿವೆ. ಚಲ್ಲಘಟ್ಟದಿಂದ ವಿಜಯನಗರದವರೆಗೆ ಮತ್ತು ಎಂ.ಜಿ. ರಸ್ತೆಯಿಂದ ವೈಟ್‌ಫೀಲ್ಡ್‌ (ಕಾಡುಗೋಡಿ) ನಿಲ್ದಾಣಗಳ ನಡುವೆ ರೈಲುಗಳು ಎಂದಿನ ವೇಳಾಪಟ್ಟಿಯಂತೆ ಚಲಿಸಲಿವೆ. ಮಾದಾವರ ಮತ್ತು ರೇಷ್ಮೆ ಸಂಸ್ಥೆ ನಿಲ್ದಾಣಗಳ (ಹಸಿರು ಮಾರ್ಗ) ನಡುವಿನ ಸಂಚಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆರ್.ವಿ. ರಸ್ತೆ ಮತ್ತು ಬೊಮ್ಮಸಂದ್ರ (ಹಳದಿ ಮಾರ್ಗ) ನಡುವಿನ ಮೆಟ್ರೋ ರೈಲುಗಳು ಸಹ ಎಂದಿನಂತೆ ಕಾರ್ಯನಿರ್ವಹಿಸಲಿವೆ.

ಭಾನುವಾರ ಬೆಳಿಗ್ಗೆ ಮೆಜೆಸ್ಟಿಕ್ ಅಥವಾ ಕಬ್ಬನ್ ಪಾರ್ಕ್ ಕಡೆಗೆ ಪ್ರಯಾಣಿಸಲು ಯೋಜಿಸುವ ಸಾರ್ವಜನಿಕರು ಈ ಸಮಯದ ವ್ಯತ್ಯಯವನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಯೋಜಿಸಲು ಕೋರಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Daily Devotional: ಸದಾ ಹಣದ ಚಿಂತೆ ಮಾಡುತ್ತಿದ್ದರೆ ಜ್ಯೋತಿಷ್ಯದ ಪ್ರಕಾರ ಯಾವ ದೋಷ ಕಾಡುತ್ತೆ ಗೊತ್ತಾ? – Kannada News | The Perils of Excessive Money Obsession: A Spiritual and Astrological Perspective on Wealth and Well being

ಹಣ ಎಂದು ಚಿಂತಿಸುವುದುImage Credit source: Pinterest

ಬೆಳಗ್ಗೆ ಸೂರ್ಯೋದಯದಿಂದ ಸೂರ್ಯಾಸ್ತದ ತನಕ ಕೇವಲ ಹಣ, ಹಣ, ಹಣ ಎಂದು ಚಿಂತಿಸುವುದು ವ್ಯಕ್ತಿಯ ಜೀವನದ ಮೇಲೆ ಯಾವ ಪರಿಣಾಮ ಬೀರುತ್ತದೆ, ಮತ್ತು ಜ್ಯೋತಿಷ್ಯದ ಪ್ರಕಾರ ಯಾವ ದೋಷಗಳು ಉಂಟಾಗುತ್ತವೆ ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಹಿರಿಯರು ಹೇಳಿದಂತೆ “ಅತಿ ಸರ್ವತ್ರ ವರ್ಜಯೇತ್” – ಅಂದರೆ ಯಾವುದೇ ವಿಷಯದಲ್ಲಿ ಅತಿರೇಕ ಸಲ್ಲದು. ಪ್ರೀತಿ, ದುಃಖ, ವ್ಯಾಮೋಹ, ಆಸೆ ಅಥವಾ ಸಂಪತ್ತು ಯಾವುದೂ ಕೂಡ ಅತಿಯಾದರೆ ಅದು ಕಂಟಕವಾಗಿ ಪರಿಣಮಿಸುತ್ತದೆ. ನಾವು ಅನ್ಯ ಮಾರ್ಗಗಳಿಂದ, ಅಂದರೆ ವಾಮಮಾರ್ಗದಿಂದ ಹಣ ಸಂಪಾದಿಸಲು ಹೊರಟಾಗ, ಸಂಬಂಧಗಳನ್ನು ಕಡೆಗಣಿಸಿ, ನೈತಿಕ ಮೌಲ್ಯಗಳನ್ನು ಮರೆತು, ಕಾಲಿಗೆ ಸಿಕ್ಕವರನ್ನು ತುಳಿಯಲು ಸಿದ್ಧರಾಗುತ್ತೇವೆ. ಭಗವಂತನು ಎಲ್ಲವನ್ನೂ ಗಮನಿಸುತ್ತಿರುತ್ತಾನೆ; ಇಂತಹ ಸಂಪಾದನೆಯ ಲೆಕ್ಕವೊಂದು ನಮ್ಮ ಜೀವನದ ಪುಸ್ತಕವನ್ನೇ ಹಾಳುಮಾಡಬಹುದು, ಅಂದರೆ ನಮ್ಮ ಜೀವನವನ್ನೇ ನಾಶಮಾಡಬಹುದು.

ಧರ್ಮ, ಅರ್ಥ, ಕಾಮ, ಮೋಕ್ಷ ಇವು ಚತುರ್ವಿಧ ಪುರುಷಾರ್ಥಗಳು. ಈ ಪುರುಷಾರ್ಥಗಳಲ್ಲಿ, ಧರ್ಮದ ನಂತರವೇ ಅರ್ಥ (ಹಣ) ಬರುತ್ತದೆ. ಇದರ ಅರ್ಥವೇನೆಂದರೆ, ಹಣವನ್ನು ಧರ್ಮಸಮ್ಮತವಾಗಿ ಗಳಿಸಬೇಕು. ಧರ್ಮದಿಂದ ಹಣ ಗಳಿಸಿ, ಆ ಹಣದಿಂದ ಆಸೆಗಳನ್ನು ತೀರಿಸಿಕೊಂಡು, ಅಂತಿಮವಾಗಿ ಮೋಕ್ಷದೆಡೆಗೆ ಸಾಗಬೇಕು. ಆದರೆ, ಅನೇಕರು ಕೇವಲ ಹಣದ ಚಿಂತೆಯಲ್ಲಿ ಮುಳುಗಿ, ಸುಖ ಸಂತೋಷಗಳಿಗೆ ದೂರವಾಗಿ, ಪ್ರಕೃತಿಯ ಮೇಲಿನ ವ್ಯಾಮೋಹವನ್ನು ಕಳೆದುಕೊಳ್ಳುತ್ತಾರೆ. ಎಷ್ಟು ಹಣ ಗಳಿಸಿದರೂ ತೃಪ್ತಿ ಸಿಗುವುದಿಲ್ಲ; ಲಕ್ಷದಿಂದ ಕೋಟಿ, ಕೋಟಿಯಿಂದ ಸಾವಿರ ಕೋಟಿ ಎಂದು ಹಣದ ಹಿಂದೆ ಓಡುತ್ತಾ ಆಯುಷ್ಯ ಕಡಿಮೆ ಆಗುತ್ತಿರುವುದನ್ನು ಅರಿಯುವುದೇ ಇಲ್ಲ.

ಹಣದ ವ್ಯಾಮೋಹವು ಸಂಬಂಧಗಳನ್ನು ಹಾಳು ಮಾಡುತ್ತದೆ, ನಮ್ಮ ಮೌಲ್ಯಗಳನ್ನು ಮರೆಸುತ್ತದೆ. ಜ್ಯೋತಿಷ್ಯದ ಪ್ರಕಾರ, ಈ ಅತಿಯಾದ ಹಣದ ಚಿಂತೆ ದೈವಬಲವನ್ನು ದೂರ ಮಾಡುತ್ತದೆ. ಮುಪ್ಪಿನ ಕಾಲದಲ್ಲಿ ದೇಹದ ಅಂಗಾಂಗ ವೈಫಲ್ಯ, ಮೂಲವ್ಯಾಧಿ ಮುಂತಾದ ಅನಾರೋಗ್ಯಗಳಿಗೆ ಇದು ಕಾರಣವಾಗಬಹುದು ಎಂದು ಶಾಸ್ತ್ರಗಳು ಹೇಳುತ್ತವೆ. ಹಣದ ವ್ಯಾಮೋಹವು ದೇಹಕ್ಕೆ ಕಂಟಕವಾಗಬಹುದು.

ಇದನ್ನೂ ಓದಿ: ನಿಮ್ಮ ಜನ್ಮ ದಿನಾಂಕದಲ್ಲೇ ಅಡಗಿದೆ ಮದುವೆಯ ರಹಸ್ಯ; ನಿಮಗಾಗುವುದು ಪ್ರೇಮ ವಿವಾಹವೋ ಅಥವಾ ಅರೇಂಜ್ ಮ್ಯಾರೇಜ್?

ಹಣಕಾಸಿನ ಬಗ್ಗೆ ಚಿಂತಿಸಲು ನಿರ್ದಿಷ್ಟ ಸಮಯಗಳನ್ನು ಶಾಸ್ತ್ರಗಳು ಸೂಚಿಸುತ್ತವೆ. ಬ್ರಾಹ್ಮಿ ಮುಹೂರ್ತದಲ್ಲಿ (ಬೆಳಗ್ಗಿನ ಜಾವ) ಹಣದ ಚಿಂತೆ ಮಾಡಲೇಬಾರದು. ಅದೇ ರೀತಿ ಸಂಧ್ಯಾಕಾಲದಲ್ಲಿ (ಸೂರ್ಯಾಸ್ತದ ನಂತರ) ವ್ಯಾಪಾರ ಅಥವಾ ಉದ್ಯೋಗ ಮುಗಿಸಿ ಮನೆಗೆ ಬಂದಾಗಲೂ ಹಣದ ಚಿಂತೆ ಮಾಡಬಾರದು. ನಿಮ್ಮ ಸಾಲಗಳಿದ್ದರೆ ಅದರ ಬಗ್ಗೆ ಚಿಂತಿಸಬಹುದು, ಆದರೆ “ಹಣ ಬೇಕು, ಬೇಕು, ಬೇಕು” ಎಂಬ ಅತಿಯಾದ ಆಸೆಯ ಚಿಂತೆಯನ್ನು ಸಂಧ್ಯಾಕಾಲದಲ್ಲಿ ಅಥವಾ ಬ್ರಾಹ್ಮಿ ಮುಹೂರ್ತದಲ್ಲಿ ಮಾಡುವವರಿಗೆ ಕೊನೆಯ ಕಾಲದಲ್ಲಿ ಕಷ್ಟಕರ ಜೀವನ ಎದುರಾಗುವ ಸಾಧ್ಯತೆ ಇರುತ್ತದೆ. ಅಭಿಜಿನ್ ಮುಹೂರ್ತದಲ್ಲಿ (ಸುಮಾರು 11 ರಿಂದ 3 ಗಂಟೆಯವರೆಗೆ) ಹಣದ ಬಗ್ಗೆ ಚಿಂತಿಸುವುದು ಸೂಕ್ತ. ಮಧ್ಯಾಹ್ನ 3 ರಿಂದ 5 ಗಂಟೆಯವರೆಗೆ ಹಣಕಾಸಿನ ಪ್ರಯತ್ನಗಳನ್ನು ಮಾಡಬಹುದು.

ಶಾಸ್ತ್ರಗಳು ಎಂದಿಗೂ ಸುಳ್ಳಾಗುವುದಿಲ್ಲ. ಆದ್ದರಿಂದ, ಹಣವನ್ನು ಧರ್ಮದಿಂದ ಗಳಿಸಿ, ಅತಿಯಾದ ಆಸೆಯನ್ನು ತ್ಯಜಿಸಿ, ಸಮತೋಲಿತ ಮತ್ತು ಸಂತೋಷದಾಯಕ ಜೀವನವನ್ನು ನಡೆಸಲು ಪ್ರಯತ್ನಿಸಬೇಕು ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version