ಮಕ್ಕಳು ಪ್ರೊಸೆಸ್ಡ್ ಫುಡ್ ಇಷ್ಟಪಟ್ಟು ತಿನ್ನುತ್ತಾರೆ ಎಂದು ಕೊಡುವುದಕ್ಕಿಂತ ಮುಂಚೆ ಈ ವಿಷಯ ತಿಳಿದುಕೊಳ್ಳಿ – Kannada News | Can Packaged Foods Trigger Asthma? Link Between UPFs and Lung Health

ಇತ್ತೀಚಿನ ದಿನಗಳಲ್ಲಿ ಮಕ್ಕಳ ಆಹಾರ ಪದ್ಧತಿಯಲ್ಲಿ ಅಲ್ಟ್ರಾ ಪ್ರೊಸೆಸ್ಡ್ ಫುಡ್ (Ultra Processed Food) ಬಳಕೆ ಹೆಚ್ಚಾಗುತ್ತಿರುವುದು ಆರೋಗ್ಯ ತಜ್ಞರಲ್ಲಿ ಆತಂಕ ಮೂಡಿಸಿದೆ. ಚಿಪ್ಸ್, ಪ್ಯಾಕೆಟ್ ಸ್ನ್ಯಾಕ್ಸ್, ಇನ್‌ಸ್ಟಂಟ್ ನೂಡಲ್ಸ್, ಬರ್ಗರ್, ಪಿಜ್ಜಾ ಮತ್ತು ಸಿಹಿಯಾಗಿರುವ ಪ್ರೊಸೆಸ್ಡ್ ಆಹಾರಗಳನ್ನು ಹೆಚ್ಚೆಚ್ಚು ಸೇವಿಸುವ ಮಕ್ಕಳಲ್ಲಿ ಅಸ್ತಮಾ (Asthma) ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚಾಗಬಹುದು ಎಂದು ಸಂಶೋಧನೆ ತಿಳಿಸಿದೆ. ಅಲ್ಟ್ರಾ ಪ್ರೊಸೆಸ್ಡ್ ಫುಡ್ ಏಕೆ ಅಪಾಯಕಾರಿ, ಇದಕ್ಕೂ ಅಸ್ತಮಾಗೆ ಇರುವ ಸಂಬಂಧವೇನು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಅಲ್ಟ್ರಾ ಪ್ರೊಸೆಸ್ಡ್ ಫುಡ್ ಏಕೆ ಅಪಾಯಕಾರಿ?

ಸಂಶೋಧಕರ ಪ್ರಕಾರ, ಅಲ್ಟ್ರಾ ಪ್ರೊಸೆಸ್ಡ್ ಫುಡ್ ಕೇವಲ ಹೊಟ್ಟೆಯ ಆರೋಗ್ಯವನ್ನು ಹಾಳು ಮಾಡುವುದಷ್ಟೇ ಅಲ್ಲ, ಬದಲಾಗಿ ದೇಹದ ‘ಗಟ್ ಮೈಕ್ರೋಬಯೋಮ್’ ಮೇಲೂ ದುಷ್ಪರಿಣಾಮ ಬೀರುತ್ತದೆ. ಇದರಿಂದ ರೋಗನಿರೋಧಕ ಶಕ್ತಿ ಕುಂದುತ್ತದೆ ಮತ್ತು ದೇಹದಲ್ಲಿ ಆಕ್ಸಿಡೇಟಿವ್ ಸ್ಟ್ರೆಸ್ ಹೆಚ್ಚಾಗುತ್ತದೆ. ಇದರ ಪರಿಣಾಮ ಶ್ವಾಸಕೋಶಗಳ ಮೇಲೂ ಬಿದ್ದು ಅಸ್ತಮಾ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. ಇಂತಹ ಆಹಾರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕಗಳು, ಪ್ರಿಸರ್ವೇಟಿವ್ಸ್, ಕೃತಕ ಫ್ಲೇವರ್‌ಗಳು ಮತ್ತು ನಾನಾ ರೀತಿಯ ಪದಾರ್ಥಗಳನ್ನು ಬಳಸಲಾಗುತ್ತದೆ. ಇವು ಮಕ್ಕಳ ದೇಹದ ಬೆಳವಣಿಗೆಗೆ ಹಾನಿಕಾರಕವಾಗಬಹುದು. ಜೊತೆಗೆ ಹೊಟ್ಟೆ ಸಂಬಂಧಿತ ಸಮಸ್ಯೆಗಳು, ಜೀರ್ಣಕ್ರಿಯೆ ತೊಂದರೆ ಹಾಗೂ ದೀರ್ಘಾವಧಿಯಲ್ಲಿ ಕ್ಯಾನ್ಸರ್ ಅಪಾಯವೂ ಹೆಚ್ಚಾಗಬಹುದು ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಇದನ್ನೂ ಓದಿ: ಅಸ್ತಮಾ ರೋಗಿಗಳೇ ಹವಾಮಾನ ಬದಲಾವಣೆಯಿಂದ ಸಮಸ್ಯೆಗಳಾಗುತ್ತಿದ್ಯಾ? ಹಾಗಿದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಿ

ಮಕ್ಕಳ ಆಹಾರದಲ್ಲಿ ಯಾವ ಬದಲಾವಣೆ ಅಗತ್ಯ?

ಆರೋಗ್ಯ ತಜ್ಞರ ಪ್ರಕಾರ ಮಕ್ಕಳಿಗೆ ತಾಜಾ ಹಣ್ಣು, ತರಕಾರಿ, ಮನೆಯಲ್ಲೇ ತಯಾರಿಸಿದ ಆಹಾರ, ಬೇಳೆ, ಹಾಲು ಮತ್ತು ಪ್ರೋಟೀನ್‌ಯುಕ್ತ ಆಹಾರ ನೀಡುವುದು ಉತ್ತಮ. ಜೊತೆಗೆ ಸಂಪೂರ್ಣ ಧಾನ್ಯಗಳನ್ನು ಬಳಸಿ ತಯಾರಿಸಿದ ಆಹಾರ ಹಾಗೂ ಕಡಿಮೆ ಸಕ್ಕರೆ ಇರುವ ಪದಾರ್ಥಗಳನ್ನು ಸೇವಿಸಲು ಉತ್ತೇಜಿಸಬೇಕು. ಪ್ಯಾಕೆಟ್ ಆಹಾರ ಮತ್ತು ಜಂಕ್ ಫುಡ್ ಬಳಕೆಯನ್ನು ಕಡಿಮೆ ಮಾಡುವುದು ಮಕ್ಕಳ ಆರೋಗ್ಯ ಕಾಪಾಡಲು ಅಗತ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Tv9 Kannada News Live: ಕರ್ನಾಟಕದಲ್ಲಿ ಹಿಜಾಬ್ ಕಿಚ್ಚು, ಮೇ 17ರವರೆಗೆ ಮಳೆ, 2 ದಿನ ವರ್ಕ್ ಫ್ರಂ ಹೋಂ ಘೋಷಿಸಿದ ಸರ್ಕಾರ – Kannada News | TV9 Kannada News Live: Karnataka Hijab Controversy, Rain Alert Till May 17, Delhi Govt Announces 2 Day Work From Home

ಪ್ರಾತಿನಿಧಿಕ ಚಿತ್ರ (ಎಐ ಚಿತ್ರ)Image Credit source: tv9 kannada

ಬೆಂಗಳೂರು, ಮೇ 14: ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದ ಹಿಜಾಬ್ ದಂಗಲ್ (hijab controversy) ಇದೀಗ ಕರ್ನಾಟಕದಲ್ಲಿ ಮತ್ತೆ ಸದ್ದು ಮಾಡುತ್ತಿದೆ. ಶಾಲಾ, ಕಾಲೇಜುಗಳಲ್ಲಿ ಹಿಜಾಬ್​ ಧರಿಸಲು ಅವಕಾಶ ನೀಡಲಾಗಿದ್ದು, ಆ ಮೂಲಕ ಬಿಜೆಪಿ (bjp) ಕಾಲದ ಸಮವಸ್ತ್ರ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಇನ್ನು ಈ ಹಿಜಾಬ್ ನಿಷೇಧ ತೆರವು ಆದೇಶಕ್ಕೆ ಬಿಜೆಪಿ ನಾಯಕರು ನಿಗಿನಿಗಿ ಎನ್ನುತ್ತಿದ್ದರೆ, ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇನ್ನು ಪೋಷಕರ ವಲಯದಲ್ಲಿ ಕೂಡ ಈ ಬಗ್ಗೆ ವಿರೋಧ ಕೇಳಿ ಬಂದಿದೆ.

ರಾಜ್ಯದಲ್ಲಿ ತಣ್ಣಾಗಿದ್ದ ಹಿಜಾಬ್ ಕಿಚ್ಚು ಮತ್ತೆ ಸ್ಫೋಟಗೊಂಡಿದೆ. ಇದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಕಾಂಗ್ರೆಸ್ ಸರ್ಕಾರವೇ ರಾಜ್ಯಕ್ಕೆ ಬೆಂಕಿ ಹಚ್ಚುತ್ತಿದೆ. ಶಾಲೆಗಳಲ್ಲಿ ಘರ್ಷಣೆಗಳಾದರೆ ಸರ್ಕಾರವೇ ಹೊಣೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.

ಸಿಎಂ ಸಿದ್ದರಾಮಯ್ಯ ಸಮರ್ಥನೆ

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರು ಸಿಎಂ ಸಿದ್ದರಾಮಯ್ಯ, ಇದು ಕೇವಲ ಹಿಜಾಬ್‌ಗೆ ಮಾತ್ರ ಸೀಮಿತವಲ್ಲ. ಜನಿವಾರ, ರುದ್ರಾಕ್ಷಿ, ಶಿವದಾರದಂತಹ ಸಾಂಪ್ರದಾಯಿಕ ಧಾರ್ಮಿಕ ಚಿಹ್ನೆಗಳನ್ನು ಧರಿಸಲು ಸಹ ಮುಕ್ತ ಅವಕಾಶವಿದೆ ಎಂದಿದ್ದಾರೆ. ಆ ಮೂಲಕ ಶಾಲೆ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿ 2022ರಲ್ಲಿ ಬಿಜೆಪಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹಿಂಪಡೆದಿರುವ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಕರ್ನಾಟಕ ಸೇರಿ 16 ರಾಜ್ಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ

ಭಾರತೀಯ ಚುನಾವಣಾ ಆಯೋಗವು ಕರ್ನಾಟಕ ಸೇರಿದಂತೆ ದೇಶದ 16 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ‘ವಿಶೇಷ ತೀವ್ರ ಪರಿಷ್ಕರಣೆ’ (Special Intensive Revision – SIR) ಕಾರ್ಯಕ್ರಮದ ಮೂರನೇ ಹಂತವನ್ನು ಘೋಷಿಸಿದೆ. ಜನಗಣತಿಯ ಮನೆ ಪಟ್ಟಿಯ ಕಾರ್ಯದೊಂದಿಗೆ ಸಮನ್ವಯ ಸಾಧಿಸುವ ಉದ್ದೇಶದಿಂದ ಈ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ. ಈ ಹಂತದಲ್ಲಿ ಸುಮಾರು 3.94 ಲಕ್ಷ ಬೂತ್ ಮಟ್ಟದ ಅಧಿಕಾರಿಗಳು ಅಂದಾಜು 36.73 ಕೋಟಿ ಮತದಾರರ ಮನೆಬಾಗಿಲಿಗೆ ತೆರಳಿ ಮಾಹಿತಿ ಪರಿಶೀಲಿಸಲಿದ್ದಾರೆ. ಕರ್ನಾಟಕವೊಂದರಲ್ಲೇ ಸುಮಾರು 59,050 ಬಿಎಲ್‌ಒಗಳು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದು, ಮತದಾರರ ಪಟ್ಟಿಯ ಪಾರದರ್ಶಕತೆಗಾಗಿ ರಾಜಕೀಯ ಪಕ್ಷಗಳ ಏಜೆಂಟ್‌ಗಳೂ ಸಹಕರಿಸಲಿದ್ದಾರೆ. ಹಿಮಾಚಲ ಪ್ರದೇಶ ಮತ್ತು ಜಮ್ಮು-ಕಾಶ್ಮೀರವನ್ನು ಹೊರತುಪಡಿಸಿ ಇಡೀ ದೇಶವನ್ನು ಈ ಹಂತವು ಒಳಗೊಳ್ಳಲಿದೆ.

ದೆಹಲಿ ಸರ್ಕಾರದ ದಿಟ್ಟ ಹೆಜ್ಜೆ: ವಾರದಲ್ಲಿ 2 ದಿನ ‘ವರ್ಕ್ ಫ್ರಮ್ ಹೋಮ್’, ‘ನೋ ಕಾರ್ ಡೇ’ ಜಾರಿ

ಪರಿಸರ ಮಾಲಿನ್ಯ ನಿಯಂತ್ರಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಕರೆಗೆ ಓಗೊಟ್ಟಿರುವ ದೆಹಲಿ ಸರ್ಕಾರವು ಮಹತ್ವದ ಕ್ರಮಗಳನ್ನು ಘೋಷಿಸಿದೆ. ರಾಜಧಾನಿಯಲ್ಲಿ ವಾಹನ ದಟ್ಟಣೆ ಮತ್ತು ಕಾರ್ಬನ್ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ವಾರದಲ್ಲಿ ಎರಡು ದಿನಗಳ ಕಾಲ ‘ವರ್ಕ್ ಫ್ರಮ್ ಹೋಮ್’ ಸೌಲಭ್ಯವನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ಇದರೊಂದಿಗೆ ಕಚೇರಿಗಳಲ್ಲಿ ಆನ್‌ಲೈನ್ ಮೀಟಿಂಗ್‌ಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚಿಸಲಾಗಿದೆ.

ಇನ್ನೂ ಓದಿ: Tv9 Kannada News Live: ಹೇಳಿದಂತೆ ಗುಡ್​​ನ್ಯೂಸ್​​ ಕೊಟ್ಟ ಡಿಕೆಶಿ, ಕೇರಳದಲ್ಲಿ ಕಾಂಗ್ರೆಸ್​​ಗೆ ಕಸಿವಿಸಿ; ಈ ಹೊತ್ತಿನ ಟಾಪ್​​ 5 ಸುದ್ದಿಗಳು ಇಲ್ಲಿವೆ

ಮಾಲಿನ್ಯದ ಮಟ್ಟವನ್ನು ತಗ್ಗಿಸುವ ಉದ್ದೇಶದಿಂದ ವಾರದಲ್ಲಿ ಒಂದು ದಿನವನ್ನು ‘ನೋ ಕಾರ್ ಡೇ’ ಎಂದು ಆಚರಿಸಲು ನಿರ್ಧರಿಸಲಾಗಿದ್ದು, ಅಂದು ಸಾರ್ವಜನಿಕರು ಮತ್ತು ಅಧಿಕಾರಿಗಳು ಖಾಸಗಿ ಕಾರುಗಳ ಬದಲಿಗೆ ಸಾರ್ವಜನಿಕ ಸಾರಿಗೆ ಅಥವಾ ಸೈಕಲ್ ಬಳಸುವಂತೆ ಉತ್ತೇಜಿಸಲಾಗುತ್ತಿದೆ. ಪ್ರಧಾನಿಯವರ ನನ್ನ ಭಾರತ, ನನ್ನ ಕೊಡುಗೆ ಅಭಿಯಾನದ ಭಾಗವಾಗಿ ಈ ಯೋಜನೆಗಳನ್ನು ರೂಪಿಸಲಾಗಿದೆ.

ಮೇ 15ರಿಂದ ಮೂರು ದಿನಗಳ ಕಾಲ ವರುಣನ ಆರ್ಭಟ ಸಾಧ್ಯತೆ

ಮೇ 15ರಿಂದ ಮೇ 17ರವರೆಗೆ ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧೆಡೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯ ಪ್ರಭಾವದಿಂದಾಗಿ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆಯ ಅಬ್ಬರ ಹೆಚ್ಚಿರಲಿದ್ದು, ನಗರದ ಹಲವೆಡೆ ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಸಾಧಾರಣದಿಂದ ಮಳೆಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ಮಂಗಳೂರಿನಲ್ಲಿ ವರುಣನ ಅಬ್ಬರ: ವಿಮಾನಗಳನ್ನ ಇಳಿಯಲು ಬಿಡದೇ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ

ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿಯೂ ಮಳೆ ಮುನ್ಸೂಚನೆ ನೀಡಲಾಗಿದ್ದು, ತಗ್ಗು ಪ್ರದೇಶಗಳಲ್ಲಿರುವ ಜನರು ಹಾಗೂ ವಾಹನ ಸವಾರರು ಜಾಗರೂಕತೆಯಿಂದ ಇರುವಂತೆ ಹವಾಮಾನ ಇಲಾಖೆ ಸೂಚಿಸಿದೆ. ಇನ್ನು ಮಳೆ ಜೊತೆಗೆ ಬಿರುಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲು ತಿಳಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On – 8:21 pm, Thu, 14 May 26

Source link

ಚಿನ್ನದ ಮೇಲಿನ ವಿವಿಧ ಹೂಡಿಕೆಗಳಿಗೆ ವಿವಿಧ ತೆರಿಗೆಗಳು ಹೇಗೆ? ಇಲ್ಲಿದೆ ಡೀಟೇಲ್ಸ್ – Kannada News | Gold Investment Tax Rules India: Capital Gains on Physical, Digital Gold, SGB & ETFs Explained

ಭಾರತೀಯರಿಗೆ ಚಿನ್ನದ ಮೇಲಿನ ಹೂಡಿಕೆ ಎಂದರೆ ಅಚ್ಚುಮೆಚ್ಚು. ಆದರೆ, ನೀವು ಯಾವ ರೂಪದಲ್ಲಿ ಚಿನ್ನವನ್ನು ಖರೀದಿಸುತ್ತೀರಿ (ಭೌತಿಕ ಚಿನ್ನ, ಡಿಜಿಟಲ್ ಚಿನ್ನ, ಗೋಲ್ಡ್ ಇಟಿಎಫ್ ಅಥವಾ ಸಾವರಿನ್ ಗೋಲ್ಡ್ ಬಾಂಡ್), ಮತ್ತು ಅದನ್ನು ಮಾರಿ ಎಷ್ಟು ಲಾಭ ಗಳಿಸುತ್ತೀರಿ ಎಂಬುದರ ಆಧಾರದ ಮೇಲೆ ಅದರ ಮೇಲಿನ ಆದಾಯ ತೆರಿಗೆ ನಿಯಮಗಳು ಬದಲಾಗುತ್ತವೆ. ಚಿನ್ನಕ್ಕೆ ಜಿಎಸ್​ಟಿ ಇರುತ್ತದೆ, ಖರೀದಿಸುವಾಗಲೂ ಮತ್ತು ಮಾರುವಾಗಲೂ ಜಿಎಸ್​ಟಿ ಇರುತ್ತದೆ. ಆದಾಯ ತೆರಿಗೆ ವಿಚಾರಕ್ಕೆ ಬಂದರೆ ಮಾರಿದಾಗ ಸಿಗುವ ಲಾಭಕ್ಕೆ ತೆರಿಗೆಗಳು ಇರುತ್ತವೆ. ಇತ್ತೀಚಿನ ಬಜೆಟ್ ನಿಯಮಗಳ ಅನ್ವೇಷಣೆಯೊಂದಿಗೆ, ಹೂಡಿಕೆದಾರರು ಚಿನ್ನದ ಮೇಲಿನ ಬಂಡವಾಳ ಲಾಭದ ತೆರಿಗೆ (Capital Gains Tax) ನಿಯಮಗಳನ್ನು ಸ್ಪಷ್ಟವಾಗಿ ತಿಳಿದುಕೊಳ್ಳುವುದು ಅತ್ಯಗತ್ಯ. ಯಾವ ರೀತಿಯ ಚಿನ್ನದ ಹೂಡಿಕೆಗೆ ಎಷ್ಟು ತೆರಿಗೆ ಅನ್ವಯಿಸುತ್ತದೆ ಎಂಬ ವಿವರ ಇಲ್ಲಿದೆ:

ಭೌತಿಕ ಚಿನ್ನ (Physical Gold – ಆಭರಣ, ನಾಣ್ಯ, ಬಿಸ್ಕತ್)

ಆಭರಣ, ಕಾಯಿನ್, ಬಿಸ್ಕತ್ ಇತ್ಯಾದಿ ಭೌತಿಕ ಚಿನ್ನವನ್ನು ನೀವೆಷ್ಟು ವರ್ಷ ಕಾಲ ಇಟ್ಟುಕೊಂಡು ಮಾರಾಟ ಮಾಡುತ್ತೀರಿ ಎಂಬುದರ ಮೇಲೆ ತೆರಿಗೆ ನಿರ್ಧಾರವಾಗುತ್ತದೆ. ಮಾರಾಟದಿಂದ ಸಿಗುವ ಲಾಭದ ಮೇಲೆ ಎರಡು ರೀತಿಯ ತೆರಿಗೆ ಅನ್ವಯ ಆಗುತ್ತದೆ. ಅಲ್ಪಾವಧಿ ಲಾಭ ಗಳಿಕೆ ಮತ್ತು ದೀರ್ಘಾವಧಿ ಲಾಭ ಗಳಿಕೆ ತೆರಿಗೆ ವಿಧಗಳಿರುತ್ತವೆ:

  • ಅಲ್ಪಾವಧಿ ಲಾಭ ಗಳಿಕೆ (STCG): ಚಿನ್ನವನ್ನು ಖರೀದಿಸಿದ 24 ತಿಂಗಳ (2 ವರ್ಷ) ಒಳಗಾಗಿ ಮಾರಾಟ ಮಾಡಿದರೆ, ಅದರಿಂದ ಬರುವ ಲಾಭವನ್ನು ನಿಮ್ಮ ಒಟ್ಟು ಆದಾಯಕ್ಕೆ ಸೇರಿಸಿ, ನಿಮ್ಮ ಆದಾಯ ತೆರಿಗೆ ಸ್ಲ್ಯಾಬ್ (Income Tax Slab) ದರದಂತೆ ತೆರಿಗೆ ವಿಧಿಸಲಾಗುತ್ತದೆ.
  • ದೀರ್ಘಾವಧಿ ಲಾಭ ಗಳಿಕೆ (LTCG): 24 ತಿಂಗಳಿಗಿಂತ ಹೆಚ್ಚು ಅವಧಿ ಇಟ್ಟುಕೊಂಡು ಮಾರಾಟ ಮಾಡಿದರೆ, ಬಂದ ಲಾಭದ ಮೇಲೆ ಶೇ. 12.5 ರಷ್ಟು ನಿಗದಿತ ದರದಲ್ಲಿ ತೆರಿಗೆ ಅನ್ವಯಿಸುತ್ತದೆ (ಹಳೆಯ ನಿಯಮದಲ್ಲಿದ್ದ ಇಂಡೆಕ್ಸೇಷನ್ ಸೌಲಭ್ಯವನ್ನು ಈಗ ತೆಗೆದುಹಾಕಲಾಗಿದೆ).

ಇದನ್ನೂ ಓದಿ: ಮ್ಯೂಚುವಲ್ ಫಂಡ್ ಡಿಸ್ಟ್ರಿಬ್ಯೂಟರ್ಸ್ ಮಾದರಿಯಲ್ಲಿ ಬಾಂಡ್ ವಿತರಕರ ಜಾಲ ಬೆಳೆಸಲು ಸೆಬಿ ಸಜ್ಜು

ಡಿಜಿಟಲ್ ಚಿನ್ನ (Digital Gold)

ವಿವಿಧ ಮೊಬೈಲ್ ಆಪ್‌ಗಳು ಮತ್ತು ಪ್ಲಾಟ್‌ಫಾರ್ಮ್‌ಗಳ ಮೂಲಕ ಖರೀದಿಸುವ ಡಿಜಿಟಲ್ ಚಿನ್ನಕ್ಕೂ ಭೌತಿಕ ಚಿನ್ನಕ್ಕಿರುವ ನಿಯಮಗಳೇ ಅನ್ವಯಿಸುತ್ತವೆ:

  • 24 ತಿಂಗಳ ಒಳಗಿನ ಮಾರಾಟಕ್ಕೆ ನಿಮ್ಮ ಆದಾಯ ತೆರಿಗೆ ಸ್ಲ್ಯಾಬ್‌ನಂತೆ ತೆರಿಗೆ ಇರುತ್ತದೆ.
  • 24 ತಿಂಗಳ ನಂತರದ ಮಾರಾಟಕ್ಕೆ ಶೇ. 12.5 ರಷ್ಟು ದೀರ್ಘಾವಧಿ ಬಂಡವಾಳ ಲಾಭದ ತೆರಿಗೆ (LTCG) ಅನ್ವಯವಾಗುತ್ತದೆ.

ಗೋಲ್ಡ್ ಇಟಿಎಫ್ ಮತ್ತು ಗೋಲ್ಡ್ ಮ್ಯೂಚುವಲ್ ಫಂಡ್‌ಗಳು

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಗೋಲ್ಡ್ ಇಟಿಎಫ್ ಮತ್ತು ಫಂಡ್‌ಗಳ ನಿಯಮಗಳು ಇತ್ತೀಚಿನ ತಿದ್ದುಪಡಿಗಳ ನಂತರ ಬದಲಾಗಿವೆ:

  • ಇವುಗಳನ್ನು ಖರೀದಿಸಿದ 12 ತಿಂಗಳ (1 ವರ್ಷ) ಒಳಗಾಗಿ ಮಾರಾಟ ಮಾಡಿದರೆ, ಬರುವ ಲಾಭವನ್ನು ಅಲ್ಪಾವಧಿ ಲಾಭ (STCG) ಎಂದು ಪರಿಗಣಿಸಿ ನಿಮ್ಮ ಟ್ಯಾಕ್ಸ್ ಸ್ಲ್ಯಾಬ್ ಪ್ರಕಾರ ತೆರಿಗೆ ವಿಧಿಸಲಾಗುತ್ತದೆ.
  • 12 ತಿಂಗಳ ನಂತರ ಮಾರಾಟ ಮಾಡಿದರೆ, ಅದನ್ನು ದೀರ್ಘಾವಧಿ ಲಾಭ (LTCG) ಎಂದು ಪರಿಗಣಿಸಿ ಶೇ. 12.5 ರಷ್ಟು ತೆರಿಗೆ ವಿಧಿಸಲಾಗುತ್ತದೆ.

ಸಾವರಿನ್ ಗೋಲ್ಡ್ ಬಾಂಡ್ (SGB)

ತೆರಿಗೆ ಉಳಿತಾಯದ ದೃಷ್ಟಿಯಿಂದ ಸರ್ಕಾರಿ ಗೋಲ್ಡ್ ಬಾಂಡ್‌ಗಳು ಅತ್ಯಂತ ಆಕರ್ಷಕವಿವೆ. ಆದರೆ, ಸದ್ಯ ಹೊಸ ಬಾಂಡ್​ಗಳನ್ನು ವಿತರಿಸುತ್ತಿಲ್ಲವಾದರೂ ಸುಮಾರು ಹತ್ತು ವರ್ಷಗಳ ಕಾಲ ಹೂಡಿಕೆಗೆ ಅವಕಾಶ ಇತ್ತು. ನೀವೀಗಾಗಲೇ ಈ ಸ್ಕೀಮ್​ನಲ್ಲಿ ಹೂಡಿಕೆ ಮಾಡಿದ್ದರೆ, ಅದು ಮೆಚ್ಯೂರಿಟಿ ಆದಾಗ ಸಿಗುವ ಲಾಭಕ್ಕೆ ಏನೇನು ತೆರಿಗೆ ಅನ್ವಯ ಆಗುತ್ತದೆ ಎನ್ನುವ ವಿವರ ಇಂತಿದೆ:

  • ಮೆಚುರಿಟಿ ಅವಧಿ: ನೀವು ಬಾಂಡ್ ಅನ್ನು ಪೂರ್ತಿ 8 ವರ್ಷಗಳ ಅವಧಿಯವರೆಗೆ ಇಟ್ಟುಕೊಂಡು, ಮೆಚುರಿಟಿ ಸಮಯದಲ್ಲಿ ಹಣ ಹಿಂಪಡೆದರೆ, ಬರುವ ಲಾಭಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿ ಇರುತ್ತದೆ (ಯಾವುದೇ ತೆರಿಗೆ ಇರುವುದಿಲ್ಲ).
  • ಅವಧಿಗೆ ಮುನ್ನ ಮಾರಾಟ (ಷೇರು ಮಾರುಕಟ್ಟೆಯಲ್ಲಿ): ಒಂದು ವೇಳೆ ನೀವು 12 ತಿಂಗಳ ಒಳಗಾಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ ನಿಮ್ಮ ಸ್ಲ್ಯಾಬ್ ದರದಂತೆ ಮತ್ತು 12 ತಿಂಗಳ ನಂತರ ಮಾರಾಟ ಮಾಡಿದರೆ ಶೇ. 12.5 ರಷ್ಟು LTCG ತೆರಿಗೆ ಅನ್ವಯಿಸುತ್ತದೆ.
  • ವಾರ್ಷಿಕ ಬಡ್ಡಿ: ಎಸ್‌ಜಿಬಿ ಮೇಲೆ ಸಿಗುವ ಶೇ. 2.50 ರಷ್ಟು ವಾರ್ಷಿಕ ಬಡ್ಡಿಯು ಸಂಪೂರ್ಣವಾಗಿ ನಿಮ್ಮ ಆದಾಯದ ಸ್ಲ್ಯಾಬ್ ಪ್ರಕಾರ ತೆರಿಗೆಗೆ ಒಳಪಡುತ್ತದೆ.

ಇದನ್ನೂ ಓದಿ: ಲಿಥಿಯಂ ಮತ್ತು ವಿರಳ ಭೂಖನಿಜಗಳಿಗೆ ರಷ್ಯಾ ಜೊತೆ ಶೀಘ್ರದಲ್ಲೇ ಭಾರತದ ಮಹತ್ವದ ಒಪ್ಪಂದ

ಹೂಡಿಕೆದಾರರಿಗೆ ಕಿವಿಮಾತು

ಚಿನ್ನದಲ್ಲಿ ಹೂಡಿಕೆ ಮಾಡುವ ಮುನ್ನ ಕೇವಲ ಲಾಭವನ್ನಷ್ಟೇ ಅಲ್ಲದೆ, ಭವಿಷ್ಯದಲ್ಲಿ ಅದನ್ನು ಮಾರಾಟ ಮಾಡುವಾಗ ಕೈ ಸೇರುವ ನಿವ್ವಳ ಹಣದ ಮೇಲಾಗುವ ತೆರಿಗೆಯ ಪರಿಣಾಮವನ್ನು ಲೆಕ್ಕ ಹಾಕುವುದು ಜಾಣತನ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಅಯೋಧ್ಯೆಯಲ್ಲಿ ರಣಬೀರ್ ಕಪೂರ್ ಹೂಡಿಕೆ: 3.31 ಕೋಟಿ ರೂಪಾಯಿಗೆ ಜಮೀನು ಖರೀದಿಸಿದ ನಟ – Kannada News | Ramayana actor Ranbir Kapoor buys property in Ayodhya Sarayu project for Rs 3 Cr

ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಬೆನ್ನಲ್ಲೇ ಈಗ ಬಾಲಿವುಡ್ ನಟ ರಣಬೀರ್ ಕಪೂರ್ ಕೂಡ ಅಯೋಧ್ಯೆಯಲ್ಲಿ ಭೂಮಿ ಖರೀದಿಸಿದ್ದಾರೆ. ಅಯೋಧ್ಯೆಯ (Ayodhya) ಸರಯೂ ನದಿ ದಂಡೆಯ ಮೇಲೆ ನಿರ್ಮಾಣವಾಗುತ್ತಿರುವ ‘ದಿ ಹೌಸ್ ಆಫ್ ಅಭಿನಂದನ್ ಲೋಧಾ’ ಅವರ ‘ದಿ ಸರಯೂ’ ಎಂಬ ಅತ್ಯಾಧುನಿಕ ರಿಯಲ್ ಎಸ್ಟೇಟ್ ಪ್ರಾಜೆಕ್ಟ್‌ನಲ್ಲಿ ರಣಬೀರ್ ಕಪೂರ್ (Ranbir Kapoor) ಅವರು 3.31 ಕೋಟಿ ರೂಪಾಯಿ ಮೌಲ್ಯದ ಜಾಗ ಖರೀದಿಸಿದ್ದಾರೆ ಎಂದು ಸಂಸ್ಥೆ ಗುರುವಾರ (ಮೇ 14) ಪ್ರಕಟಿಸಿದೆ.

ರಣಬೀರ್ ಖರೀದಿಸಿರುವ ಈ ಭೂಮಿಯು 2,134 ಚದರ ಅಡಿ ವಿಸ್ತೀರ್ಣವನ್ನು ಹೊಂದಿದ್ದು, ಇದು ದೇಗುಲ ನಗರಿ ಅಯೋಧ್ಯೆಯಲ್ಲಿ ಐಷಾರಾಮಿ ನಿವೇಶನಗಳಿಗೆ ಇರುವ ಬೇಡಿಕೆಯನ್ನು ಪ್ರತಿಫಲಿಸುತ್ತದೆ. 75 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿರುವ ಈ ಯೋಜನೆಯು ಸರಯೂ ನದಿಯ ದಡದಲ್ಲಿದೆ. ಇಲ್ಲಿ ಬೃಹತ್ ಕ್ಲಬ್‌ಹೌಸ್, 35ಕ್ಕೂ ಹೆಚ್ಚು ಆಧುನಿಕ ಸೌಲಭ್ಯಗಳು ಮತ್ತು ಐದು ಎಕರೆ ವಿಸ್ತೀರ್ಣದ ಸಂಪೂರ್ಣ ಸಸ್ಯಾಹಾರಿ ‘ದಿ ಲೀಲಾ’ ಐಷಾರಾಮಿ ಹೋಟೆಲ್ ಕೂಡ ತಲೆ ಎತ್ತಲಿದೆ.

ಈ ಹೂಡಿಕೆಯ ಬಗ್ಗೆ ಮಾತನಾಡಿರುವ ರಣಬೀರ್ ಕಪೂರ್, ‘ಅಯೋಧ್ಯೆ ನನ್ನನ್ನು ಆಯ್ಕೆ ಮಾಡಿದೆ ಎಂದು ನಾನು ನಂಬುತ್ತೇನೆ. ಇದು ನಮ್ಮ ಇತಿಹಾಸ ಮತ್ತು ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ನನ್ನ ಕುಟುಂಬದ ಪರಂಪರೆಯಲ್ಲಿ ಈ ಜಾಗವೂ ಒಂದಾಗಲಿ ಎಂಬುದು ನನ್ನ ಆಶಯ’ ಎಂದು ಸಂತಸ ಹಂಚಿಕೊಂಡಿದ್ದಾರೆ.

ವಿಶೇಷವೆಂದರೆ, ರಣಬೀರ್ ಕಪೂರ್ ಸದ್ಯ ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಚಿತ್ರದಲ್ಲಿ ಶ್ರೀರಾಮನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸುಮಾರು 4,000 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ಯಶ್ ಅವರು ರಾವಣನಾಗಿ, ಸಾಯಿ ಪಲ್ಲವಿ ಅವರು ಸೀತೆಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಶ್ರೀರಾಮನ ಪಾತ್ರಕ್ಕೆ ರಣಬೀರ್ ಕಪೂರ್​ಗಿಂತ ಉತ್ತಮ ನಟ ಯಾರೂ ಇಲ್ಲ: ನಮಿತ್ ಮಲ್ಹೋತ್ರಾ

ಅಮಿತಾಭ್ ಬಚ್ಚನ್ ಈಗಾಗಲೇ ಅಯೋಧ್ಯೆಯಲ್ಲಿ ಹಲವಾರು ಬಾರಿ ಭೂಮಿ ಖರೀದಿಸಿದ್ದಾರೆ. 2026ರ ಮಾರ್ಚ್‌ನಲ್ಲಿ ಅವರು 35 ಕೋಟಿ ರೂ. ವೆಚ್ಚದಲ್ಲಿ 2.67 ಎಕರೆ ಜಮೀನು ಖರೀದಿಸಿದ್ದರು. ಅದಕ್ಕೂ ಮುನ್ನ 2025ರಲ್ಲಿ 40 ಕೋಟಿ ರೂ. ಮತ್ತು 2024ರಲ್ಲಿ 14.5 ಕೋಟಿ ರೂ. ಮೌಲ್ಯದ ನಿವೇಶನಗಳನ್ನು ಅಯೋಧ್ಯೆಯಲ್ಲಿ ಖರೀದಿಸಿ ಸುದ್ದಿಯಾಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೋದಿ ಅವರ ಯುಎಇ-ಯೂರೋಪ್ ಪ್ರವಾಸ; 70 ಬಿಲಿಯನ್ ಡಾಲರ್ ವ್ಯಾಪಾರ ಪುಷ್ಟಿ ನಿರೀಕ್ಷೆ – Kannada News | India’s Global Push: Modi’s UAE & Europe Tour for Trade, Tech & Investment Growth

ನವದೆಹಲಿ, ಮೇ 14: ಭಾರತದ ರಫ್ತು ಮತ್ತು ಹೂಡಿಕೆಗೆ ಜಾಗತಿಕ ಮಟ್ಟದಲ್ಲಿ ಭಾರಿ ಉತ್ತೇಜನ ನೀಡುವ ಉದ್ದೇಶದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೇ 15 ರಿಂದ 20 ರವರೆಗೆ ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್) ಮತ್ತು ಪ್ರಮುಖ ಯುರೋಪಿಯನ್ ದೇಶಗಳ ಬಹು-ರಾಷ್ಟ್ರ ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ಈ ಮಹತ್ವದ ಐದು ರಾಷ್ಟ್ರಗಳ ವಿದೇಶಿ ಪ್ರವಾಸವನ್ನು ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟ (FIEO) ಬಲವಾಗಿ ಸ್ವಾಗತಿಸಿದೆ. ಪ್ರಧಾನಿ ಮೋದಿ ಅವರು ಈ ಪ್ರವಾಸದಲ್ಲಿ ಯುಎಇ, ನೆದರ್ಲ್ಯಾಂಡ್ಸ್, ಸ್ವೀಡನ್, ನಾರ್ವೆ ಮತ್ತು ಇಟಲಿ ದೇಶಗಳಿಗೆ ಭೇಟಿ ನೀಡಲಿದ್ದು, ಆಯಾ ದೇಶಗಳ ಉನ್ನತ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

70 ಬಿಲಿಯನ್ ಡಾಲರ್‌ಗೂ ಅಧಿಕ ವ್ಯಾಪಾರ ಪಾಲುದಾರಿಕೆ

ಎಫ್‌ಐಇಒ (FIEO) ಅಧ್ಯಕ್ಷ ಎಸ್. ಸಿ. ರಾಲ್ಹನ್ ಅವರ ಪ್ರಕಾರ, ಪ್ರಧಾನಿ ಭೇಟಿ ನೀಡುತ್ತಿರುವ ಈ ಎಲ್ಲಾ ದೇಶಗಳೊಂದಿಗೆ ಭಾರತವು ಈಗಾಗಲೇ ಜಂಟಿಯಾಗಿ 70 ಬಿಲಿಯನ್ ಡಾಲರ್​ಗಿಂತಲೂ (ಸುಮಾರು 6.6 ಲಕ್ಷ ಕೋಟಿ ರೂ.) ಹೆಚ್ಚಿನ ದ್ವಿಪಕ್ಷೀಯ ವ್ಯಾಪಾರವನ್ನು ಹೊಂದಿದೆ. ಪ್ರಧಾನಿಯವರ ಈ ಹೈ-ಲೆವೆಲ್ ಭೇಟಿಯು ಕ್ರಾಸ್-ಬಾರ್ಡರ್ ಹೂಡಿಕೆ, ತಂತ್ರಜ್ಞಾನ ವಿನಿಮಯ ಮತ್ತು ಮುಕ್ತ ವ್ಯಾಪಾರಕ್ಕೆ ಹೊಸ ವೇಗವನ್ನು ನೀಡಲಿದೆ.

ಇದನ್ನೂ ಓದಿ: ಮ್ಯೂಚುವಲ್ ಫಂಡ್ ಡಿಸ್ಟ್ರಿಬ್ಯೂಟರ್ಸ್ ಮಾದರಿಯಲ್ಲಿ ಬಾಂಡ್ ವಿತರಕರ ಜಾಲ ಬೆಳೆಸಲು ಸೆಬಿ ಸಜ್ಜು

ಪ್ರವಾಸದ ಪ್ರಮುಖ ಸ್ಟ್ರಾಟಿಜಿಗಳು

ಯುಎಇ ಜೊತೆ ಇಂಧನ ಮತ್ತು ಆರ್ಥಿಕ ಭದ್ರತೆ: ಮಧ್ಯಪ್ರಾಚ್ಯದಲ್ಲಿ ಇರಾನ್-ಅಮೆರಿಕ ಉದ್ವಿಗ್ನತೆಯಿಂದಾಗಿ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಏರುಪೇರಾಗುತ್ತಿರುವ ಬೆನ್ನಲ್ಲೇ ಮೋದಿ ಅವರ ಯುಎಇ ಭೇಟಿ ಗಮರ್ನಾಹವಾಗಿದೆ. ಭಾರತದ ಇಂಧನ ಸ್ಥಿರತೆ, ದೀರ್ಘಾವಧಿಯ ತೈಲ ಪೂರೈಕೆ ಮತ್ತು ಮೂಲಸೌಕರ್ಯಗಳಲ್ಲಿ ಯುಎಇ ಹೂಡಿಕೆಯನ್ನು ಖಚಿತಪಡಿಸಿಕೊಳ್ಳಲು ಈ ಭೇಟಿ ನೆರವಾಗಲಿದೆ.

ಯುರೋಪ್ ಜೊತೆ ಮುಕ್ತ ವ್ಯಾಪಾರ ಒಪ್ಪಂದ: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಭಾರತ-ಯುರೋಪಿಯನ್ ಯೂನಿಯನ್ ಮುಕ್ತ ವ್ಯಾಪಾರ ಒಪ್ಪಂದ (FTA) ಮತ್ತು ಭಾರತ-ಇಎಫ್‌ಟಿಎ (EFTA) ವ್ಯಾಪಾರ ಒಪ್ಪಂದಗಳ ಹಿನ್ನೆಲೆಯಲ್ಲಿ ಈ ಪ್ರವಾಸ ಆಯೋಜನೆಗೊಂಡಿದೆ.

ಭವಿಷ್ಯದ ತಂತ್ರಜ್ಞಾನಗಳು: ಗ್ರೀನ್ ಹೈಡ್ರೋಜನ್ (ಹಸಿರು ಇಂಧನ), ಸೆಮಿಕಂಡಕ್ಟರ್‌ಗಳು, ಕೃತಕ ಬುದ್ಧಿಮತ್ತೆ (AI), ರಕ್ಷಣಾ ವಲಯದ ಉತ್ಪಾದನೆ ಮತ್ತು ಕ್ಲೀನ್ ಟೆಕ್ನಾಲಜಿ ಕ್ಷೇತ್ರಗಳಲ್ಲಿ ಸಹಕಾರವನ್ನು ವೃದ್ಧಿಸಲು ಯುರೋಪ್ ನಾಯಕರೊಂದಿಗೆ ಮೋದಿ ಚರ್ಚಿಸಲಿದ್ದಾರೆ.

ಇದನ್ನೂ ಓದಿ: ಲಿಥಿಯಂ ಮತ್ತು ವಿರಳ ಭೂಖನಿಜಗಳಿಗೆ ರಷ್ಯಾ ಜೊತೆ ಶೀಘ್ರದಲ್ಲೇ ಭಾರತದ ಮಹತ್ವದ ಒಪ್ಪಂದ

ಭಾರತೀಯ ರಫ್ತುದಾರರಿಗೆ ಬಂಪರ್ ಅವಕಾಶ

ಪ್ರಧಾನಿ ಅವರ ಈ ಭೇಟಿಯಿಂದಾಗಿ ಭಾರತದ ಇಂಜಿನಿಯರಿಂಗ್, ಫಾರ್ಮಾಸ್ಯುಟಿಕಲ್ಸ್ (ಔಷಧ), ಶುದ್ಧ ಇಂಧನ, ಜವಳಿ, ಆಹಾರ ಸಂಸ್ಕರಣೆ ಮತ್ತು ಡಿಜಿಟಲ್ ವ್ಯಾಪಾರ ವಲಯದ ರಫ್ತುದಾರರಿಗೆ ಹೊಸ ಮಾರುಕಟ್ಟೆಗಳು ಮುಕ್ತವಾಗಲಿವೆ. ಅಷ್ಟೇ ಅಲ್ಲದೆ, ಪ್ರಧಾನಿಯವರು ‘ಯುರೋಪಿಯನ್ ರೌಂಡ್ ಟೇಬಲ್ ಫಾರ್ ಇಂಡಸ್ಟ್ರಿ’ ಮತ್ತು ‘ಭಾರತ-ನಾರ್ವೆ ಬಿಸಿನೆಸ್ ಮತ್ತು ರಿಸರ್ಚ್ ಶೃಂಗಸಭೆ’ಯಲ್ಲೂ ಭಾಗವಹಿಸಲಿದ್ದಾರೆ.

ಜಾಗತಿಕ ಆರ್ಥಿಕ ಅನಿಶ್ಚಿತತೆಯ ನಡುವೆಯೂ ಭಾರತವನ್ನು ವಿಶ್ವಾಸಾರ್ಹ ಆರ್ಥಿಕ ಪಾಲುದಾರ ಹಾಗೂ ಜಾಗತಿಕ ಪ್ರಗತಿಯ ಪ್ರಮುಖ ಚಾಲನಾ ಶಕ್ತಿಯಾಗಿ ಬಿಂಬಿಸಲು ಈ 6 ದಿನಗಳ ವಿದೇಶಿ ಪ್ರವಾಸ ಅತ್ಯಂತ ನಿರ್ಣಾಯಕವಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ವಕೀಲರ ಕೋಟ್ ಧರಿಸಿ ಹೈಕೋರ್ಟ್​ಗೆ ಬಂದ ಮಮತಾ ಬ್ಯಾನರ್ಜಿಗೆ ಶಾಕ್ ನೀಡಿದ ಬಾರ್ ಕೌನ್ಸಿಲ್ – Kannada News | BCI seeks details of Mamata Banerjees practice records after she appears in the Calcutta High Court wearing advocate attire

ನವದೆಹಲಿ, ಮೇ 14: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata Banerjee) ಇಂದು ಕೊಲ್ಕತ್ತಾ ಹೈಕೋರ್ಟ್‌ಗೆ ವಕೀಲರ ಕೋಟ್ ಧರಿಸಿ ಹಾಜರಾಗಿದ್ದರು. ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣವನ್ನು ಅವರು ವಾದಿಸಿದ್ದರು. ಟಿಎಂಸಿಯ ಹಿರಿಯ ನಾಯಕರಾದ ಚಂದ್ರಿಮಾ ಭಟ್ಟಾಚಾರ್ಯ ಮತ್ತು ಕಲ್ಯಾಣ್ ಬ್ಯಾನರ್ಜಿ ಅವರೊಂದಿಗೆ ನ್ಯಾಯಾಲಯಕ್ಕೆ ಆಗಮಿಸಿದ್ದ ಮಮತಾ ಬ್ಯಾನರ್ಜಿ ತಾವೇ ವಾದ ಮಂಡಿಸಿದ್ದರು. ಈ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ವಕೀಲ ವೃತ್ತಿಯಲ್ಲಿ ನಿಜಕ್ಕೂ ಅನುಭವ ಹೊಂದಿದ್ದಾರಾ? ಎಂಬ ಪ್ರಶ್ನೆಗಳು ಮೂಡಿವೆ.

2026ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಪಕ್ಷದ ಕಚೇರಿಗಳ ಮೇಲೆ ದಾಳಿ ನಡೆಸಲಾಗಿತ್ತು. ಹಲವಾರು ಟಿಎಂಸಿ ಕಾರ್ಯಕರ್ತರು ಹಿಂಸಾಚಾರವನ್ನು ಎದುರಿಸಿದ್ದರು ಎಂದು ಅರ್ಜಿಯಲ್ಲಿ ಹೈಕೋರ್ಟ್​ಗೆ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಆರೋಪಿಸಲಾಗಿದೆ. ಟಿಎಂಸಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಕೂಡ ಅರ್ಜಿಯಲ್ಲಿ ಆರೋಪಿಸಲಾಗಿದೆ.

ಇದನ್ನೂ ಓದಿ: ಕರಿಕೋಟ್ ಧರಿಸಿ ಕಣ್ ಕುಕ್ಕಿದ ಮಮತಾ; ಬಂಗಾಳ ಹಿಂಸಾಚಾರ ಪ್ರಕರಣದಲ್ಲಿ ಕೋರ್ಟ್​ನಲ್ಲಿ ದೀದಿ ವಕೀಲಿಕೆ

ಮೇ 12ರಂದು ಕೊಲ್ಕತ್ತಾ ಹೈಕೋರ್ಟ್‌ಗೆ ಈ ಬಗ್ಗೆ ಅರ್ಜಿ ಸಲ್ಲಿಸಲಾಯಿತು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸುಜೋಯ್ ಪಾಲ್ ಮತ್ತು ನ್ಯಾಯಮೂರ್ತಿ ಪಾರ್ಥಸಾರಥಿ ಸೇನ್ ನೇತೃತ್ವದ ವಿಭಾಗೀಯ ಪೀಠದ ಮುಂದೆ ಈ ಪ್ರಕರಣದ ವಿಚಾರಣೆ ಇಂದು ನಡೆಯಿತು.

ಈ ಪ್ರಕರಣದ ವಿಚಾರಣೆ ಮುಗಿದ ಬಳಿಕ ನ್ಯಾಯಾಲಯದ ಆವರಣದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರು ಹೈಕೋರ್ಟ್‌ನಿಂದ ಹೊರಬರುತ್ತಿದ್ದಂತೆ, ವಕೀಲರ ಒಂದು ವಿಭಾಗವು ಅವರನ್ನು “ಕಳ್ಳಿ” ಎಂದು ಕರೆದಿದೆ ಎಂದು ಆರೋಪಿಸಲಾಗಿದೆ. ಟಿಎಂಸಿ ಮುಖಂಡರು ಮತ್ತು ವಕೀಲರು ಆಕೆಯನ್ನು ಸುರಕ್ಷಿತವಾಗಿ ಕೋರ್ಟ್ ಆವರಣದಿಂದ ಹೊರತರಲು ಹರಸಾಹಸ ಪಡಬೇಕಾಯಿತು.

ಇದನ್ನೂ ಓದಿ: ಪಶ್ಚಿಮ ಬಂಗಾಳದ ಸಂಪುಟವನ್ನು ವಿಸರ್ಜಿಸಿದ ರಾಜ್ಯಪಾಲ; ಮಮತಾ ಬ್ಯಾನರ್ಜಿ ಈಗ ಮಾಜಿ ಸಿಎಂ

ಬಾರ್ ಕೌನ್ಸಿಲ್ ಆಫ್ ಇಂಡಿಯಾ ಪಶ್ಚಿಮ ಬಂಗಾಳದ ಬಾರ್ ಕೌನ್ಸಿಲ್‌ಗೆ ಪತ್ರ ಬರೆದಿದ್ದು, ಮಮತಾ ಬ್ಯಾನರ್ಜಿ ಕೊಲ್ಕತ್ತಾ ಹೈಕೋರ್ಟ್‌ನಲ್ಲಿ ವಕೀಲರ ಗೌನ್​​ನಲ್ಲಿ ಕಾಣಿಸಿಕೊಂಡಿದ್ದಕ್ಕೆ ವಿವರ ಕೇಳಿದ್ದಾರೆ. ಮಮತಾ ಬ್ಯಾನರ್ಜಿ ಅವರ ಕಾನೂನು ಅಭ್ಯಾಸದ ದಾಖಲಾತಿ ಮತ್ತು ಪ್ರಾಕ್ಟಿಸ್​​ಗೆ ಸಂಬಂಧಿಸಿದ ದಾಖಲೆಗಳನ್ನು ನೀಡಲು ಬಿಸಿಐ ಕೋರಿದೆ.

ಬಾರ್ ಕೌನ್ಸಿಲ್ ಆಫ್ ಇಂಡಿಯಾವು ಮಮತಾ ಬ್ಯಾನರ್ಜಿ ಅವರು ವಕೀಲರಾಗಿ ದಾಖಲಾತಿಯಾಗಿದ್ದು, ಯಾವುದೇ ಅಮಾನತು ಅಥವಾ ಅಭ್ಯಾಸದ ಪುನರಾರಂಭ, ಅವರ ಕಾನೂನು ಅಭ್ಯಾಸದ ಪ್ರಮಾಣಪತ್ರದ ಬಗ್ಗೆ ಮಾಹಿತಿಯನ್ನು ಕೇಳಿದೆ. ಎರಡು ದಿನದೊಳಗೆ ದಾಖಲೆ ನೀಡುವಂತೆ ರಾಜ್ಯ ವಕೀಲರ ಪರಿಷತ್‌ಗೆ ಸೂಚಿಸಲಾಗಿದೆ. ಮಮತಾ ಬ್ಯಾನರ್ಜಿ ಅವರು ವಕೀಲರ ಉಡುಪಿನಲ್ಲಿ ಟಿಎಂಸಿ ಪರ ವಕೀಲರಾಗಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ಪಶ್ಚಿಮ ಬಂಗಾಳದ ಬಾರ್ ಕೌನ್ಸಿಲ್‌ನಲ್ಲಿ ಹೈಕೋರ್ಟ್ ವಕೀಲರಾಗಿ ನೋಂದಾಯಿಸಿಕೊಂಡಿದ್ದಾರೆಯೇ ಎಂದು ತಿಳಿಯಲು ಬಾರ್ ಕೌನ್ಸಿಲ್ ಆಫ್ ಇಂಡಿಯಾ ದಾಖಲೆ ಕೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:57 pm, Thu, 14 May 26

Source link

Video: ಎಳನೀರು ವ್ಯಾಪಾರಿಯೊಂದಿಗೆ ಚೌಕಾಸಿ ಮಾಡಿದ ವಿದೇಶಿ ಮಹಿಳೆ – Kannada News | A foreign woman haggling with a coconut water vendor

ಹೆಣ್ಣು ಮಕ್ಕಳು ಚೌಕಾಸಿ ಮಾಡೋದ್ರಲ್ಲಿ ಎತ್ತಿದ ಕೈ. ಯಾವುದೇ ಅಂಗಡಿಗೆ ಹೋದ್ರು ಚೌಕಾಸಿ ಮಾಡದೇ ಏನನ್ನೂ ಖರೀದಿಸಲ್ಲ. ಆದರೆ ಇದೀಗ ಈ ವಿದೇಶಿ ಮಹಿಳೆ (foreign woman) ಚೌಕಾಸಿ ಮಾಡೋದ್ರಲ್ಲಿ ಭಾರತೀಯ ನಾರಿಯರನ್ನೇ ಮೀರಿಸುವಂತಿದ್ದಾಳೆ. ರಸ್ತೆ ಬದಿಯಲ್ಲಿದ್ದ ಎಳನೀರು ವ್ಯಾಪಾರಿ ಬಳಿ ವಿದೇಶಿ ಚೌಕಾಸಿ ಮಾಡಿ ಎಳನೀರು ಖರೀದಿ ಮಾಡಿದ್ದಾಳೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಶಾಕ್ ಆಗಿದ್ದಾರೆ.

Jennifer ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ವಿದೇಶಿ ಮಹಿಳೆ ಕನ್ನಡದಲ್ಲಿ ಮಾತನಾಡುತ್ತಾ ಬೀದಿ ಬದಿಯಲ್ಲಿ ಎಳನೀರು ಮಾರುತ್ತಿದ್ದ ಮಹಿಳೆಯ ಬಳಿ ಬರುತ್ತಿರುವುದನ್ನು ಕಾಣಬಹುದು. ಎಳನೀರಿಗೆ ಎಷ್ಟು ಹಣ ಎಂದು ವಿದೇಶಿ ಮಹಿಳೆ ಕೇಳಿದ್ದಾಳೆ. ಆ ತಕ್ಷಣವೇ ಐವತ್ತು ರೂಪಾಯಿ ಎಂದು ವ್ಯಾಪಾರಿ ಹೇಳುತ್ತಿದ್ದಂತೆ ಚೌಕಾಸಿ ಮಾಡಿ ಮೂವತ್ತು ರೂಪಾಯಿಗೆ ಕೊಡುವಂತೆ ಕೇಳಿದ್ದಾಳೆ. ಕೊನೆಗೆ 40 ರೂಗೆ ಎರಡು ಎಳನೀರು ಖರೀದಿ ಮಾಡಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಯುರೋಪಿನಲ್ಲಿ ಎರಡು ತಿಂಗಳ ವಾಸ, ವಿದೇಶದಲ್ಲಿ ಕಲಿತ ಜೀವನ ಪಾಠ ಹಂಚಿಕೊಂಡ ಭಾರತೀಯ ಮಹಿಳೆ

ಈ ವಿಡಿಯೋ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಕನ್ನಡ ಚೆನ್ನಾಗಿ ಮಾತಾಡ್ತೀರಾ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, 60 ರೂ ಇದೆ ಈಗ ಎಂದು ಹೇಳಿದ್ದಾರೆ. ಮತ್ತೊಬ್ಬರು, ತುಂಬಾ ಚೆನ್ನಾಗಿ ಕನ್ನಡ ಮಾತನಾಡುತ್ತೀರಾ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಂಗಳೂರಿನಲ್ಲಿ ವರುಣನ ಅಬ್ಬರ: ವಿಮಾನಗಳನ್ನ ಇಳಿಯಲು ಬಿಡದೇ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ

ಮಂಗಳೂರು, (ಮೇ 14): ಕರ್ನಾಟಕದ (karnataka) ಹಲವೆಡೆ ಮಳೆಯಾಗುತ್ತಿದ್ದು, ಬೇಸಿಗೆ ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಮಳೆರಾಯ ಕೂಲ್ ಮಾಡಿದ್ದಾನೆ. ಅದರಲ್ಲೂ ಬೇಸಿಗೆ ಧಗೆಯಿಂದ ಹೆರಾಣಾಗಿರುವ ಮಂಗಳೂರಿಗರಿಗೆ ಇಂದು (ಮೇ 14) ಮಳೆರಾಯ ತಂಪೆರೆದಿದ್ದಾನೆ. ಇನ್ನೊಂದೆಡೆ ಧಾರಾಕಾರ ಮಳೆಯಿಂದಾಗಿ ಮಂಗಳೂರು ಏರ್​​ಪೋರ್ಟ್​​ನಲ್ಲಿ ವಿಮಾನಗಳ ಲ್ಯಾಂಡಿಂಗ್ ಸಮಸ್ಯೆಯಾಗಿದೆ. ಹೌದು…ಹವಾಮಾನ ವೈಪರೀತ್ಯದಿಂದ ವಿಮಾನಗಳು ಲ್ಯಾಂಡಿಗ್ ಸಮಸ್ಯೆಯಾಗಿದ್ದು, ಇಳಿಯಲಾಗದೇ ವಿಟ್ಲ ಬಳಿ ಎರಡು ವಿಮಾನಗಳು ಆಕಾಶದಲ್ಲೇ ಸುತ್ತಾಡುತ್ತಿವೆ. ಇದರಿಂದ ಪ್ರಯಾಣಿಕರು ಆತಂಕಗೊಂಡಿದ್ದಾರೆ.

ಇದನ್ನೂ ಓದಿ : ಹವಾಮಾನ ವರದಿ: ವಾರಾಂತ್ಯಕ್ಕೆ ಬೆಂಗಳೂರಲ್ಲಿ ವರುಣನ ಅಬ್ಬರ, ಮೇ 17ರ ವರೆಗೆ ರಾಜ್ಯದ ವಿವಿಧೆಡೆ ಮಳೆ

Source link

ಕೇಂದ್ರೀಯ ವಿದ್ಯಾಲಯಗಳ ವಸ್ತ್ರಸಂಹಿತೆ ವಿರೋಧಿಸಬೇಕಲ್ವಾ? ಹಿಜಾಬ್ ವಿರೋಧಿಸಿದ ಬಿಜೆಪಿಗರಿಗೆ ಸಿಎಂ ತಿರುಗೇಟು – Kannada News | Hijab Row In Karnataka: CM Siddaramaiah Hits back at BJP Leaders

ಬೆಂಗಳೂರು, (ಮೇ 14): ಸಂವಿಧಾನದ ಆಶಯವಾಗಿರುವ ಸರ್ವಧರ್ಮ ಸಮಭಾವದ ಆಶಯಕ್ಕೆ ಅನುಗುಣವಾಗಿಯೇ ರಾಜ್ಯದ ಶಾಲಾ-ಕಾಲೇಜುಗಳಲ್ಲಿ (School And Colleges) ಪರಿಷ್ಕೃತ ವಸ್ತ್ರಸಂಹಿತೆಯನ್ನು ಜಾರಿಗೊಳಿಸಲಾಗಿದೆ. ಇದು ಯಾರನ್ನಾದರೂ ಓಲೈಸುವ ಇಲ್ಲವೇ ನೋಯಿಸುವ ಉದ್ದೇಶದ ವಸ್ತ್ರಸಂಹಿತೆ ಅಲ್ಲ. ಎಲ್ಲ ಜಾತಿ-ಧರ್ಮಗಳ ಆಚರಣೆ, ಸಂಪ್ರದಾಯಗಳನ್ನು ಗೌರವಿಸುವ ವಸ್ತ್ರಸಂಹಿತೆಯಾಗಿದೆ.ಜಾತಿ, ಧರ್ಮಗಳ ಆಧಾರದಲ್ಲಿ ಸಮಾಜವನ್ನು ಒಡೆಯುತ್ತಿರುವವರಿಗೆ ಇದರಿಂದ ನೋವಾಗಿರುವುದು ಸಹಜವೇ ಆಗಿದೆ. ಅವರು ಮೊದಲು ತಮ್ಮೊಳಗೆ ಇಣುಕಿ ಆತ್ಮವಿಮರ್ಶೆ ಮಾಡಲಿ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹಿಜಾಬ್​​ ಗೆ (Hijab) ಅನುಮತಿ ನೀಡಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.

  • ಹಿಜಾಬ್‌ಗೆ ಅನುಮತಿ ನೀಡಿದ್ದಕ್ಕೆ ವಿಪಕ್ಷಗಳ ಟೀಕೆ ಸಿಎಂ ಸಿದ್ದರಾಮಯ್ಯ ಆಕ್ರೋಶ.
  • ಸಂವಿಧಾನದ ಆಶಯವಾಗಿರುವ ಸರ್ವಧರ್ಮ ಸಮಭಾವದ ಆಶಯಕ್ಕೆ ಅನುಗುಣವಾಗಿಯೇ ಪರಿಷ್ಕೃತ ವಸ್ತ್ರಸಂಹಿತೆಯನ್ನು ಜಾರಿ.
  • ಸಿಎಂ ಸಿದ್ದರಾಮಯ್ಯರಿಂದ ಮಾಧ್ಯಮ ಪ್ರಕಟಣೆ ಮೂಲಕ ಸಿದ್ದರಾಮಯ್ಯ ತಿರುಗೇಟು.

ರಾಜ್ಯ ಸರ್ಕಾರದಿಂದ ಹಿಜಾಬ್ ಗೆ ಅನುಮತಿ ನೀಡಿರುವುದಕ್ಕೆ ವಿಪಕ್ಷಗಳು ಟೀಕೆ ಮಾಡುತ್ತಿರುವುದಕ್ಕೆ ಸಿಎಂ ಸಿದ್ದರಾಮಯ್ಯನವರು ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದು, ಇಂದು ದೇಶಾದ್ಯಂತ ಚರ್ಚೆಯಾಗುತ್ತಿರುವುದು ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ರದ್ದಾಗಿರುವ ನೀಟ್ ಪರೀಕ್ಷೆಗಳ ಬಗ್ಗೆ
ಅಮಾಯಕ ವಿದ್ಯಾರ್ಥಿಗಳ ಭವಿಷ್ಯವನ್ನೇ ಮುರುಟಿ ಹಾಕಿರುವ ಇಂತದ್ದೊಂದು ಗಂಭೀರ ಅಪರಾಧದ ಬಗ್ಗೆ ಪರೀಕ್ಷಾ ಪೇ ಚರ್ಚಾ ಮಾಡಿ. ಮಕ್ಕಳನ್ನು ಮುದ್ದು ಮಾಡುವ ಪ್ರಧಾನಿ ನರೇಂದ್ರ ಮೋದಿಯವರಾಗಲಿ, ರಾಜ್ಯದ ಬಿಜೆಪಿ ನಾಯಕರಾಗಲಿ ಚಕಾರ ಎತ್ತುತ್ತಿಲ್ಲ. ಈ ಅಪರಾಧದಲ್ಲಿ ಬಿಜೆಪಿಯ ನಾಯಕರೇ ಭಾಗಿಯಾಗಿದ್ದಾರೆಂಬ ಗಂಭೀರ ಆರೋಪಗಳಿದ್ದರೂ ಎಲ್ಲ ಬಿಜೆಪಿ ನಾಯಕರು ತಮ್ಮ ಪ್ರಧಾನಿ ಮತ್ತು ಶಿಕ್ಷಣ ಸಚಿವರನ್ನು ಸಮರ್ಥಿಸಲು ಹೊರಟಿದ್ದಾರೆ. ಇದು ನೀಟ್ ಪರೀಕ್ಷೆಯಲ್ಲಿನ ಅಕ್ರಮಕ್ಕೆ ಬಲಿಯಾಗಿರುವ ದೇಶದ 22 ಲಕ್ಷ ವಿದ್ಯಾರ್ಥಿಗಳಿಗೆ ಬಗೆಯುವ ದ್ರೋಹ ಅಲ್ಲವೇ? ಎಂದು ಹಿಜಾಬ್ ವಿರೋಧಿಗಳಿಗೆ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಹಿಜಾಬ್​​​ ವಿವಾದ ಮತ್ತೆ ಮುನ್ನೆಲೆಗೆ: ಸರ್ಕಾರದ ನಡೆಗೆ ಸಿಡಿದೆದ್ದ ವಿಪಕ್ಷ ಬಿಜೆಪಿ

ಕೇಂದ್ರೀಯ ವಿದ್ಯಾಲಯಗಳ ವಸ್ತ್ರಸಂಹಿತೆಯನ್ನೂ ವಿರೋಧಿಸಬೇಕಲ್ವಾ?

ನಮ್ಮ ಸರ್ಕಾರ ನಡೆಸಿದ್ದ ಸಿಇಟಿ ಪರೀಕ್ಷೆಯಲ್ಲಿ ಒಂದೆರಡು ಕೇಂದ್ರಗಳಲ್ಲಿ ಲೋಪಗಳು ಕಂಡುಬಂದಾಗ ಹಾರಾಟ-ಹೋರಾಟ ನಡೆಸಿದ್ದ ರಾಜ್ಯದ ಬಿಜೆಪಿ ನಾಯಕರು, ಕರ್ನಾಟಕದ ಒಂದು ಲಕ್ಷಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ಅನ್ಯಾಯವಾದಾಗ ಬಾಯಿಗೆ ಬೀಗಹಾಕಿಕೊಂಡು ಕೂತಿದ್ದಾರೆ. ಕನಿಷ್ಠ ರಾಜ್ಯದ ವಿದ್ಯಾರ್ಥಿಗಳ ಬಗ್ಗೆಯಾದರೂ ಇವರಿಗೆ ಕಾಳಜಿ ಬೇಡವೇ? ಒಂದೆರಡು ಕಡೆಗಳಲ್ಲಿ ಜನಿವಾರ ತೆಗೆಸಿದಾಗ, ಉಡುಪಿಯ ಒಂದೆರಡು ಶಾಲೆಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಾಗ ಇಡೀ ಕರ್ನಾಟಕಕ್ಕೆ ಕೋಮುದ್ವೇಷದ ಬೆಂಕಿ ಹಚ್ಚಲು ಹೊರಟ ಈ ಬಿಜೆಪಿ ನಾಯಕರಿಗೆ ನೀಟ್ ಪರೀಕ್ಷೆಯ ರದ್ದತಿಯಿಂದ ರೋದಿಸುತ್ತಿರುವ ವಿದ್ಯಾರ್ಥಿಗಳ ಕಣ್ಣೀರು ಕಾಣಿಸುತ್ತಿಲ್ಲವೇ? ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಜಾರಿಗೊಳಿಸಿರುವ ವಸ್ತ್ರಸಂಹಿತೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕೇಂದ್ರಿಯ ವಿದ್ಯಾಲಯಗಳ ವಸ್ತ್ರಸಂಹಿತೆಗೆ ಅನುಗುಣವಾಗಿಯೇ ಇದೆ. ರಾಜ್ಯ ಸರ್ಕಾರ ಹೊರಡಿಸಿರುವ ವಸ್ತ್ರ ಸಂಹಿತೆಯನ್ನು ವಿರೋಧಿಸುವವರು ಕೇಂದ್ರೀಯ ವಿದ್ಯಾಲಯಗಳ ವಸ್ತ್ರಸಂಹಿತೆಯನ್ನೂ ವಿರೋಧಿಸಬೇಕಲ್ವಾ? ಎಂದು ತಿರುಗೇಟು ನೀಡಿದ್ದಾರೆ.

ಯಾಕೆ ಈ ಹಿಪಾಕ್ರಸಿ?

ಹಿಜಾಬ್ ಧರಿಸಲು ಅವಕಾಶ ನೀಡಿರುವುದು ಮುಸ್ಲಿಮರ ಓಲೈಕೆಯಾದರೆ ಜನಿವಾರ, ಪೇಟ/ಟರ್ಬನ್ ಧರಿಸಲು ಅವಕಾಶ ನೀಡಿರುವುದು ಆಯಾಧರ್ಮಗಳ ಓಲೈಕೆಯಾಗುವುದೇ? ರಾಜ್ಯದ ಹಿಂದಿನ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಸಿಇಟಿ ಪರೀಕ್ಷೆಗಳು ಕ್ರಾಂತಿಕಾರಿ ಕ್ರಮವಾಗಿತ್ತು. ಅದರಿಂದಾಗಿ ಸಾವಿರಾರು ಬಡವಿದ್ಯಾರ್ಥಿಗಳು ಕೂಡಾ ಎಂಜನಿಯರ್, ಡಾಕ್ಟರ್ ಗಳಾಗಿದ್ದರು. ಬಿಜೆಪಿ ಸರ್ಕಾರ ಅದನ್ನು ವ್ಯವಸ್ಥಿತವಾಗಿ ನಾಶಮಾಡಿದೆ. 2024ರಲ್ಲಿ ನೀಟ್ ಪರೀಕ್ಷಾ ವ್ಯವಸ್ಥೆಯನ್ನು ಜಾರಿಗೆ ತಂದಾಗ ನಮ್ಮ ಸರ್ಕಾರ ಅದನ್ನು ವಿರೋಧಿಸಿತ್ತು. ನೀಟ್ ನಿಂದಾಗಿ ರಾಜ್ಯದ ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಈ ವ್ಯವಸ್ಥೆ ಮೂಲಕ ಕೇಂದ್ರ ಸರ್ಕಾರ ರಾಜ್ಯದ ಶಿಕ್ಷಣದ ಹಕ್ಕನ್ನು ಕಳೆದುಕೊಂಡಿದೆ ಎಂದು ಕಿಡಿಕಾರಿದ್ದಾರೆ.

ದಶಕಗಳಿಂದ ಸಿಇಟಿ ಪರೀಕ್ಷೆಗಳನ್ನು ನಮ್ಮ ಸರ್ಕಾರಗಳು ಸುರಕ್ಷಿತವಾಗಿ ನಡೆಸಿಕೊಂಡು ಬಂದಿವೆ.
ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರಕ್ಕೆ ಕನಿಷ್ಠ ಒಂದು ನೀಟ್ ಪರೀಕ್ಷೆಯನ್ನು ಸುವ್ಯವಸ್ಥಿತವಾಗಿ ನಡೆಸುವ ಯೋಗ್ಯತೆ ಇಲ್ಲದಂತಾಗಿದೆ. ಇದು ಕೇಂದ್ರ ಸರ್ಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಈ ಲೋಪಕ್ಕೆ ನಾನು ನೇರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಹೊಣೆ ಮಾಡುತ್ತೇನೆ.ಅವರು ದೇಶದ ವಿದ್ಯಾರ್ಥಿಗಳ ಕ್ಷಮೆ ಕೇಳಬೇಕು ಮತ್ತು ಅಸಮರ್ಥ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ಅವರನ್ನು ತಕ್ಷಣದಿಂದ ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸುತ್ತೇನೆ ಎಂದು ಆಗ್ರಹಿಸಿದ್ದಾರೆ.

ಶಿಕ್ಷಣ ಸಂಸ್ಥೆಗಳು ವೈಚಾರಿಕತೆ, ವೈಜ್ಞಾನಿಕತೆ, ಸಮಾನತೆ, ಭ್ರಾತೃತ್ವ, ಘನತೆ, ಪರಸ್ಪರ ಗೌರವ ಮತ್ತು ಜಾತ್ಯತೀತ ದೃಷ್ಟಿಕೋನವನ್ನು ಉತ್ತೇಜಿಸಬೇಕು. ಸಾಂವಿಧಾನಿಕ ಅರ್ಥದಲ್ಲಿ ಜಾತ್ಯತೀತತೆ ಎಂದರೆ ವೈಯಕ್ತಿಕ ನಂಬಿಕೆಗಳಿಗೆ ವಿರುದ್ಧವಲ್ಲ ಬದಲಾಗಿ ಎಲ್ಲರಿಗೂ ಸಮಾನ ಗೌರವ ನೀಡುವಿಕೆ, ಸಾಂಸ್ಥಿಕ ನಿಷ್ಪಕ್ಷಪಾತತೆ ಮತ್ತು ತಾರತಮ್ಯ ರಹಿತ ವರ್ತನೆಯಾಗಿದೆ. ಸರ್ಕಾರವು ಸಾಂವಿಧಾನಿಕ ತತ್ವಗಳಿಗೆ ಅನುಗುಣವಾಗಿ ಎಲ್ಲಾ ಧರ್ಮ ಮತ್ತು ಸಂಪ್ರದಾಯಗಳ ಬಗ್ಗೆ ತಟಸ್ಥ ಮತ್ತು ಸಮಾನ ನಿಲುವು ಹೊಂದಿರಬೇಕಿದೆ.

ಅದೇ ರೀತಿ ಯಾರಿಗೂ ತೊಂದರೆಯಾಗದಂತಹ ಸೀಮಿತ ಸಾಂಪ್ರದಾಯಿಕ ಅಥವಾ ನಂಬಿಕೆ ಆಧಾರಿತ ಆಚರಣೆಗಳಿಂದಾಗಿ ಯಾವುದೇ ವಿದ್ಯಾರ್ಥಿಗೆ ಶಿಕ್ಷಣ ಹಕ್ಕು ನಿರಾಕರಣೆ ಆಗದಂತೆ ನೋಡಿಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಿಗದಿತ ಸಮವಸ್ತ್ರಕ್ಕೆ ಪೂರಕವಾಗಿ ಮತ್ತು ಅದಕ್ಕೆ ಹೊಂದಿಕೊಳ್ಳುವಂತೆ ಸೀಮಿತ ಸಾಂಪ್ರದಾಯಿಕ ಅಥವಾ ನಂಬಿಕೆ ಆಧಾರಿತ ಗುರುತುಗಳನ್ನು ಧರಿಸಲು ಅವಕಾಶ ಕಲ್ಪಿಸಲು ನಮ್ಮ ಸರ್ಕಾರ ನಿರ್ಧರಿಸಿದೆ. ಸಾರ್ವಜನಿಕ ಸುವ್ಯವಸ್ಥೆ, ಸುರಕ್ಷತೆ, ತರಗತಿಯ ವಾತಾವರಣ ಮತ್ತು ಶಿಕ್ಷಣ ಸಂಸ್ಥೆಗಳ ಜಾತ್ಯತೀತ ಸ್ವರೂಪಕ್ಕೆ ಧಕ್ಕೆಯಾಗದಂತೆ ಶಿಕ್ಷಣ ವ್ಯವಸ್ಥೆಯಲ್ಲಿ ಶಿಸ್ತು, ಸಮಾನತೆ ಮತ್ತು ಘನತೆಯನ್ನು ಮರುಸ್ಥಾಪಿಸಲು ನಾವು ಬದ್ಧರಿದ್ದೇವೆ ಎಂದು ಮಾಧ್ಯಮ ಪ್ರಕಟಣೆ ಹೊರಡಿಸುವ ಮೂಲಕ ವಿರೋಧಿಗಳಿಗೆ ತಿರುಗೇಟು ಕೊಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 6:58 pm, Thu, 14 May 26

Source link

ತಂದೆಯ ಈ ಅಭ್ಯಾಸಗಳು ಮಕ್ಕಳನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ – Kannada News | These habits of fathers play an important role in shaping children into good individuals

ಮಕ್ಕಳ (children’s) ಬೆಳವಣಿಗೆಯಲ್ಲಿ ತಾಯಿಯಷ್ಟೆ ತಂದೆಗೂ ಜವಾಬ್ದಾರಿಗಳಿವೆ. ಮಕ್ಕಳಿಗೆ ಉತ್ತಮ ಸಂಸ್ಕಾರ ಸಿಗುವಲ್ಲಿ ತಂದೆ-ತಾಯಿ ಇಬ್ಬರ ಪಾತ್ರ ಕೂಡ ಮುಖ್ಯವಾಗಿರುತ್ತದೆ. ಮಕ್ಕಳನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಶಿಕ್ಷಣ ಮಾತ್ರವಲ್ಲ ಪೋಷಕರು ಸಹ ಮುಖ್ಯ ಪಾತ್ರವನ್ನು ವಹಿಸುತ್ತಾರೆ. ಅದರಲ್ಲೂ ಮಕ್ಕಳನ್ನು ಗೌರವಾನ್ವಿತ ವ್ಯಕ್ತಿಗಳನ್ನಾಗಿ, ಉತ್ತಮ ನಾಗರಿಕರನ್ನಾಗಿ ಮಾಡುವಲ್ಲಿ ತಂದೆ ಮುಖ್ಯ ಪಾತ್ರವನ್ನು ವಹಿಸುತ್ತಾರೆ. ಹಾಗಾಗಿ ತಂದೆಯಂದಿರು  ಈ ಕೆಲವು ಅಭ್ಯಾಸಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ, ಅವರ ಮಕ್ಕಳನ್ನು ಸಹ ಸುಸಂಸ್ಕೃತರನ್ನಾಗಿ, ಆದರ್ಶ ನಾಗರಿಕನನ್ನು ರೂಪಿಸಬಹುದು. ಹಾಗಿದ್ದರೆ ತಂದೆಯ ಯಾವ ಅಭ್ಯಾಸಗಳು ಮಕ್ಕಳನ್ನು ಸುಸಂಸ್ಕೃತರನ್ನಾಗಿಸುತ್ತವೆ ಎಂಬುದನ್ನು ನೋಡೋಣ ಬನ್ನಿ.

ತಂದೆಯ ಯಾವ ಅಭ್ಯಾಸಗಳು ಮಕ್ಕಳನ್ನು ಸುಸಂಸ್ಕೃತರನ್ನಾಗಿಸುತ್ತವೆ?

ಪ್ರಾಮಾಣಿಕತೆ ಮತ್ತು ಸತ್ಯದ ಹಾದಿ: ಮಕ್ಕಳು ನಾವು ಹೇಳುವುದನ್ನು ಕೆಲವೊಂದು ಬಾರಿ ಕೇಳುವುದಿಲ್ಲ ಆದರೆ ನಾವು  ಏನು ಮಾಡುತ್ತೆವೆಯೋ ಅದನ್ನೇ ನೋಡಿ ಅವರು ಕಲಿಯುತ್ತಾರೆ. ಹಾಗಿರುವಾಗ ಒಬ್ಬ ತಂದೆ ತನ್ನ ಕೆಲಸ, ಸಂಬಂಧ ಮತ್ತು ಸಮಾಜದಲ್ಲಿ ಪ್ರಾಮಾಣಿಕರಾಗಿದ್ದರೆ, ಮಕ್ಕಳು ಸ್ವಾಭಾವಿಕವಾಗಿ ಪ್ರಾಮಾಣಿಕತೆಯ ಮಹತ್ವವನ್ನು ಕಲಿಯುತ್ತಾರೆ.  ತಂದೆಯ ಈ ಅಭ್ಯಾಸವು ಮಕ್ಕಳಲ್ಲಿ ಪ್ರಾಮಾಣಿಕತೆಯನ್ನು ಗುಣವನ್ನು ಬೆಳೆಸುತ್ತದೆ. ಭವಿಷ್ಯದಲ್ಲಿ ಅವರನ್ನು ವಿಶ್ವಾಸಾರ್ಹ ವ್ಯಕ್ತಿಗಳನ್ನಾಗಿ ಮಾಡುತ್ತದೆ.

ಶಿಸ್ತು ಮತ್ತು ಸಮಯಪಾಲನೆ: ಬೆಳಗ್ಗೆ ಬೇಗನೆ ಏಳುವುದು, ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಪೂರ್ಣಗೊಳಿಸುವುದು, ಸಮಯಕ್ಕೆ ಸರಿಯಾಗಿ ಊಟ ಮಾಡುವುದು, ವ್ಯಾಯಾಮ ಮಾಡುವುದು ಇವೆಲ್ಲವನ್ನು ಶಿಸ್ತು ಬದ್ಧವಾಗಿ ಪಾಲಿಸಿದರೆ, ಸಮಯವನ್ನು ಸರಿಯಾಗಿ ಪಾಲಿಸಿದರೆ ಮಕ್ಕಳು ಸಹ ಇದನ್ನೇ ಕಲಿಯುತ್ತಾರೆ. ಮಕ್ಕಳು ಸಹ ಈ ಶಿಸ್ತನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ.

ಮಹಿಳೆಯರಿಗೆ ಗೌರವ ನೀಡುವುದು: ಮಕ್ಕಳು ತಮ್ಮ ತಂದೆ ತಮ್ಮ ತಾಯಿ ಮತ್ತು ಇತರ ಮಹಿಳೆಯರೊಂದಿಗೆ ಹೇಗೆ ವರ್ತಿಸುತ್ತಾರೆ ಎಂಬುದನ್ನು ಗಮನಿಸುವ ಮೂಲಕ ಸಂಬಂಧಗಳಿಗೆ ಗೌರವವನ್ನು ನೀಡುವುದನ್ನು, ಮಹಿಳೆಯರ ಜೊತೆ ಹೇಗೆ ವರ್ತಿಸಬೇಕು ಎಂಬುದನ್ನು ಕಲಿಯುತ್ತಾರೆ. ತಂದೆ ಮನೆಯಲ್ಲಿ ಗೌರವಯುತ ಭಾಷೆ ಮತ್ತು ನಡವಳಿಕೆಯನ್ನು ಬಳಸಿದರೆ, ಮಕ್ಕಳು ಸಹ ಸಭ್ಯ ರೀತಿಯಲ್ಲಿ ಇರುತ್ತಾರೆ.

ಇದನ್ನೂ ಓದಿ: ಪೋಷಕರು ತಮ್ಮ ಮಕ್ಕಳ ಮುಂದೆ ವಿಷಯಗಳನ್ನು ಎಂದಿಗೂ ಚರ್ಚಿಸಬಾರದು

ತಾಳ್ಮೆ ಮತ್ತು ಸಂಯಮ: ಜೀವನದಲ್ಲಿ ಏರಿಳಿತಗಳು ಇದ್ದೇ ಇರುತ್ತವೆ. ಕಷ್ಟದ ಸಮಯದಲ್ಲಿ ತಾಳ್ಮೆಯನ್ನು ಕಳೆದುಕೊಳ್ಳದೆ ಸಂಯಮದಿಂದ ತಂದೆ ವರ್ತಿಸಿದರೆ, ತಂದೆಯ ಈ ತಾಳ್ಮೆ ಮಕ್ಕಳನ್ನು ಮಾನಸಿಕವಾಗಿ ಬಲಪಡಿಸುತ್ತದೆ. ಈ ಗುಣವು ಅವರನ್ನು ಸುಸಂಸ್ಕೃತರು ಮತ್ತು ಉತ್ತಮ ನಾಯಕರನ್ನಾಗಿ ರೂಪಿಸುತ್ತವೆ ಮತ್ತು ಮುಖ್ಯವಾಗಿ ಕಷ್ಟಗಳನ್ನು ಸಂಯಮದಿಂದ ಹೇಗೆ ಎದುರಿಸಿ ನಿಲ್ಲಬೇಕು ಎಂಬುದನ್ನು ಕಲಿಯುತ್ತಾರೆ.

ಇತರರಿಗೆ ಸಹಾಯ ಮಾಡುವ ಪ್ರವೃತ್ತಿ: ಮಕ್ಕಳು ತಮ್ಮ ತಂದೆ ಇತರರಿಗೆ ಸಹಾಯ ಮಾಡುವುದನ್ನು ನೋಡಿದಾಗ ಅವರು ಸಹ ಪರಹಿತಚಿಂತನೆ ಮತ್ತು ದಯೆಯ ಮೌಲ್ಯಗಳನ್ನು ಬೆಳೆಸಿಕೊಳ್ಳುತ್ತಾರೆ. ಅಗತ್ಯವಿರುವವರಿಗೆ ಆರ್ಥಿಕ ಸಹಾಯ ಮಾಡುವುದಾಗಲಿ ಅಥವಾ ಸಾಮಾಜಿಕ ಸೇವೆ ಮಾಡುವುದಾಗಲಿ ಈ ಎಲ್ಲಾ ಸದ್ಗುಣಗಳು ಮಕ್ಕಳಲ್ಲಿ ಸಹಾನುಭೂತಿಯನ್ನು ತುಂಬುತ್ತವೆ, ಮಕ್ಕಳನ್ನು ದಯಾಳು ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:05 pm, Thu, 14 May 26

Source link

Exit mobile version