ಮಳೆಗೆ ಕಾಂಪೌಂಡ್ ಕುಸಿದು 7 ಜನ ಸಾವು: ಮೃತರ ಬಗ್ಗೆ ಮಾಹಿತಿ ನೀಡಿದ ಡಿಕೆ ಶಿವಕುಮಾರ್​​ – Kannada News | Bengaluru: 7 death in Wall Collapse Amid Heavy Rain: DK Shivakumar Shares Details of Victims

ಬೆಂಗಳೂರು, ಏಪ್ರಿಲ್​ 29: ಮಳೆಯಿಂದಾಗಿ ಬೌರಿಂಗ್ ಆಸ್ಪತ್ರೆಯ ಎಮರ್ಜೆನ್ಸಿ ವಿಭಾಗದ ಬಳಿ ಕಾಂಪೌಂಡ್ ಕುಸಿತಗೊಂಡು ಬೀದಿಬದಿ ವ್ಯಾಪಾರ ಮಾಡಿತ್ತಿದ್ದ ಐವರು ಹಾಗೂ ಇಬ್ಬರು ಪಾದಚಾರಿಗಳು ಸೇರಿದಂತೆ 7 ಮಂದಿ ಉಸಿರು ನಿಲ್ಲಿಸಿದ್ದಾರೆ. ಬೆಂಗಳೂರು ಅಭಿವೃದ್ಧಿ ಸಚಿವರು ಆಗಿರುವ ಡಿಸಿಎಂ ಡಿಕೆ ಶಿವಕುಮಾರ್‌, ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದರು. ಬಳಿಕ ಮಾತನಾಡಿದ ಅವರು, ಮೃತರ ಪೈಕಿ ನಾಲ್ವರು ಸ್ಥಳೀಯ ವ್ಯಾಪಾರಿಗಳು, ಇಬ್ಬರು ಕೇರಳದವರು ಮತ್ತು ಮತ್ತೊಬ್ಬರ ಗುರುತು ಪತ್ತೆಯಾಗಿಲ್ಲ. ಆರು ವರ್ಷದ ಮಗು ಕೂಡ ಸಾವನ್ನಪ್ಪಿದೆ. ಮೃತಪಟ್ಟವರು ಒಬ್ಬರು ಪಾದರಕ್ಷೆ ವ್ಯಾಪಾರಿ ಮತ್ತು ಇನ್ನೊಬ್ಬರು ಬಟ್ಟೆ ವ್ಯಾಪಾರಿಯಾಗಿದ್ದರು. ಮಳೆಯಿಂದ ರಕ್ಷಿಸಿಕೊಳ್ಳಲು ಗೋಡೆಯ ಬಳಿ ನಿಂತಿದ್ದಾಗ ಸುಮಾರು ಎಂಟು ಅಡಿ ಎತ್ತರದ ಗೋಡೆ ಕುಸಿದು ಈ ದುರಂತ ಸಂಭವಿಸಿದೆ ಎಂದು ಡಿಕೆ ಶಿವಕುಮಾರ್‌ ಮಾಹಿತಿ ನೀಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಮಧುರೈ ಮೀನಾಕ್ಷಿ ದೇವಸ್ಥಾನದ ರಥೋತ್ಸವದಲ್ಲಿ ಸಾವಿರಾರು ಭಕ್ತರು ಭಾಗಿ – Kannada News | Large number of devotees witness the grand temple car procession in Madurai meenakshi temple

ಮಧುರೈ, ಏಪ್ರಿಲ್ 29: ವಿಶ್ವಪ್ರಸಿದ್ಧ ಮಧುರೈ ಮೀನಾಕ್ಷಿ (Madhurai Meenakshi Temple) ಅಮ್ಮನ ದೇವಸ್ಥಾನದ ಚಿತ್ತಿರೈ ಹಬ್ಬದ ರಥೋತ್ಸವವು ಇಂದು ಬೆಳಿಗ್ಗೆ ನಡೆಯಿತು. ದೇವಿಯನ್ನು ದೊಡ್ಡ ಅಲಂಕೃತ ರಥಗಳಲ್ಲಿ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮಧುರೈ ಮೀನಾಕ್ಷಿ ದೇವಸ್ಥಾನದ ಚಿತ್ತಿರೈ ಉತ್ಸವದ ಪ್ರಮುಖ ಕಾರ್ಯಕ್ರಮವಾದ ರಥೋತ್ಸವದಲ್ಲಿ ಇಂದು ಸಾವಿರಾರು ಭಕ್ತರು ಭಾಗಿಯಾದರು. ಹಬ್ಬದ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾದ ತಿರುಥೆರೋಟ್ಟಂ ಇಂದು ಬೆಳಿಗ್ಗೆ ಬಹಳ ವೈಭವ ಮತ್ತು ಪ್ರದರ್ಶನದೊಂದಿಗೆ ಪ್ರಾರಂಭವಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆ ಎರಡು ರಾಜ್ಯಗಳಲ್ಲಿ ‘ರಾಕಾ’ಗೆ ಭಾರಿ ಬೇಡಿಕೆ: ಹಕ್ಕು ಮಾರಾಟಕ್ಕೆ ಹರಾಜು ವಿಧಾನ? – Kannada News | Huge demand for Allu Arjun’s Raaka movie in UP and Bihar

ಅಲ್ಲು ಅರ್ಜುನ್ (Allu Arjun) ನಟನೆಯ ‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾಗಳು ಭಾರತದಾದ್ಯಂತ ಭಾರಿ ದೊಡ್ಡ ಹಿಟ್ ಆಗಿವೆ. ಅದರಲ್ಲೂ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಂತೂ ಸಿನಿಮಾ ಸೂಪರ್ ಬ್ಲಾಕ್ ಬಸ್ಟರ್ ಆಗಿವೆ. ಇದೀಗ ಅಲ್ಲು ಅರ್ಜುನ್ ‘ರಾಕಾ’ ಸಿನಿಮಾನಲ್ಲಿ ನಟಿಸುತ್ತಿದ್ದು, ಅಟ್ಲಿ ನಿರ್ದೇಶನದ ಈ ಸಿನಿಮಾದ ಚಿತ್ರೀಕರಣ ಇನ್ನೂ ಸಾಕಷ್ಟು ಬಾಕಿ ಇದೆ. ಹೀಗಿರುವಾಗಲೇ ಉತ್ತರ ಭಾರತದ ಎರಡು ರಾಜ್ಯಗಳಲ್ಲಿ ‘ರಾಕಾ’ ಸಿನಿಮಾದ ಹಕ್ಕು ಖರೀದಿಗೆ ಪೈಪೋಟಿ ಶುರುವಾಗಿದೆ. ಭಾರಿ ದೊಡ್ಡ ಮೊತ್ತದ ಆಫರ್ ಅನ್ನು ಸಹ ನೀಡಲಾಗುತ್ತಿದೆ.

‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾಗಳು ಉತ್ತರ ಭಾರತದಲ್ಲಿ ಭಾರಿ ಗಳಿಕೆ ಮಾಡಿದ್ದವು. ಅದರಲ್ಲೂ ಬಿಹಾರ ಮತ್ತು ಉತ್ತರ ಪ್ರದೇಶಗಳಲ್ಲಿ ಈ ಸಿನಿಮಾ ಮೋಡಿಯನ್ನೇ ಮಾಡಿತ್ತು. ಕಾರ್ಮಿಕನೊಬ್ಬ ನಾಯಕನಾಗುವ ಈ ಕತೆ ಯುಪಿ, ಬಿಹಾರ ಜನರಿಗೆ ಭಾರಿ ಹಿಡಿಸಿತ್ತು. ಇದೇ ಕಾರಣಕ್ಕೆ ‘ಪುಷ್ಪ 2’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಅಲ್ಲು ಅರ್ಜುನ್ ಬಿಹಾರದಲ್ಲೇ ಮಾಡಿದ್ದರು. ಯುಪಿ, ಬಿಹಾರದಲ್ಲಿ ಅಲ್ಲು ಅರ್ಜುನ್​​ಗೆ ಭಾರಿ ಅಭಿಮಾನಿ ವರ್ಗವಿದ್ದು, ಇದೀಗ ಅವರ ‘ರಾಕಾ’ ಸಿನಿಮಾದ ಬಿಹಾರ ಮತ್ತು ಯುಪಿ ಬಿಡುಗಡೆ ಹಕ್ಕು ಖರೀದಿಗೆ ವಿತರಕರು ನಾ ಮುಂದು-ತಾ ಮುಂದು ಎಂದು ಮುಗಿಬಿದಿದ್ದಾರೆ.

ಇದನ್ನೂ ಓದಿ:ಮುಂಬೈನಲ್ಲಿ ಐಷಾರಾಮಿ ಮನೆ ಬಾಡಿಗೆಗೆ ಪಡೆದ ಅಲ್ಲು ಅರ್ಜುನ್: ತಿಂಗಳ ಬಾಡಿಗೆ ಎಷ್ಟು ಗೊತ್ತೆ?

ಯುಪಿ ಮತ್ತು ಬಿಹಾರ ವಿತರಣೆ ಹಕ್ಕು ಖರೀದಿಗೆ ಪೈಪೋಟಿ ಶುರುವಾಗಿದ್ದು, ದೊಡ್ಡ ಮೊತ್ತದ ಹಣದ ಆಫರ್ ಅನ್ನು ಚಿತ್ರತಂಡದ ಮುಂದೆ ಕೆಲವರು ಇಟ್ಟಿದ್ದಾರೆ. ಕೆಲವು ಮಾಹಿತಿಗಳ ಪ್ರಕಾರ, ವಿತರಕರು ಹರಾಜು ಪ್ರಕ್ರಿಯೆ ಮೂಲಕ ವಿತರಣೆ ಹಕ್ಕು ಮಾರಾಟ ಮಾಡುವಂತೆಯೂ ಚಿತ್ರತಂಡವನ್ನು ಕೇಳಿದ್ದಾರೆ ಎನ್ನಲಾಗುತ್ತಿದೆ. ಹರಾಜಿನಲ್ಲಿ ಕೂಗಿ ಸಿನಿಮಾದ ವಿತರಣೆ ಹಕ್ಕು ಖರೀದಿ ಮಾಡಲು ವಿತರಕರು ಉತ್ಸುಕರಾಗಿದ್ದಾರೆ. ‘ರಾಕಾ’ ಸಿನಿಮಾವನ್ನು ಸನ್ ನೆಟ್​​ವರ್ಕ್ಸ್​ನ ಕಲಾನಿಧಿ ಮಾರನ್ ನಿರ್ಮಾಣ ಮಾಡುತ್ತಿದ್ದು, ಅವರು ಇದಕ್ಕೆ ಒಪ್ಪುತ್ತಾರಾ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.

‘ರಾಕಾ’ ಸಿನಿಮಾನಲ್ಲಿ ಅಲ್ಲು ಅರ್ಜುನ್ ಹಲವು ರೂಪಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾನಲ್ಲಿ ದೀಪಿಕಾ ಪಡುಕೋಣೆ ನಾಯಕಿ, ರಶ್ಮಿಕಾ ಮಂದಣ್ಣ ಮತ್ತು ಮೃಣಾಲ್ ಠಾಕೂರ್ ಸಹ ಸಿನಿಮಾನಲ್ಲಿದ್ದಾರೆ. ಇದು ಫ್ಯಾಂಟಸಿ ಆಕ್ಷನ್ ಸಿನಿಮಾ ಆಗಿದ್ದು, ಚಿತ್ರ ವಿಚಿತ್ರ ಜೀವಿಗಳು, ಅತ್ಯಾಧುನಿಕ ವಾಹನಗಳು, ಆಯುಧಗಳು, ಚಿತ್ರ ವಿಚಿತ್ರ ಲೊಕೇಶನ್​​ಗಳು ಸಿನಿಮಾನಲ್ಲಿ ಇರಲಿವೆ. ಇತ್ತೀಚೆಗಷ್ಟೆ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದ್ದು, ಪೋಸ್ಟರ್​​ನಲ್ಲಿ ಡೆವಿಲ್ ಅವತಾರದಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಚಪ್ಪರಿಸಿ ತಿನ್ನುತ್ತಿದ್ದ ಪನೀರ್ ಟಿಕ್ಕಾ ರೋಲ್​​ನಲ್ಲಿ ಹಲ್ಲಿ ಕಂಡು ಬೆಚ್ಚಿಬಿದ್ದ ಬೆಂಗಳೂರಿನ ಕ್ಯಾಬ್​​ ಚಾಲಕ – Kannada News | Bengaluru Bakery Shock: Lizard Found in Paneer Tikka Roll, Customer Hospitalized

ಬೆಂಗಳೂರು, ಏಪ್ರಿಲ್​​ 29: ಬೇಕರಿ ತಿಂಡಿಗಳಂದರೆ ಬಹುತೇಕ ಯುವ ಜನತೆಗೆ ಅಚ್ಚುಮೆಚ್ಚು. ಕೆಲವರಿಗಂತೂ ದಿನಕ್ಕೆ ಒಮ್ಮೆಯಾದರೂ ಬೇಕರಿಗೆ ಭೇಟಿ ನೀಡದಿದ್ದರೆ ಸಮಾಧಾನವೇ ಇರೋದಿಲ್ಲ. ಆದರೆ ಬೆಂಗಳೂರಲ್ಲಿ ಜನ ಬೆಚ್ಚಿಬೀಳುವಂತಹ ಘಟನೆಯೊಂದು ನಡೆದಿದ್ದು, ಬೇಕರಿಯಲ್ಲಿ ಖರೀದಿಸಿದ ಪನೀರ್ ಟಿಕ್ಕಾ ರೋಲ್‌ನಲ್ಲಿ ಹಲ್ಲಿ ಕಂಡುಬಂದಿರುವ ಘಟನೆ ಮಾಗಡಿ ಮುಖ್ಯ ರಸ್ತೆಯ ಹೌಸಿಂಗ್ ಬೋರ್ಡ್ ಸಮೀಪ ನಡೆದಿದೆ. ಇದನ್ನು ಸೇವಿಸಿದ್ದ 32 ವರ್ಷದ ವ್ಯಕ್ತಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾನೆ.

ಘಟನೆ ಏನು?

ಅಗ್ರಹಾರ ದಾಸರಹಳ್ಳಿಯ ನಿವಾಸಿಯಾಗಿರುವ ಕ್ಯಾಬ್​​ ಚಾಲಕನಿಗೆ ಏಪ್ರಿಲ್ 25ರಂದು ಮಧ್ಯಾಹ್ನ ಊಟ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಸಂಜೆ ವೇಳೆಗೆ ಬೇಕರಿಗೆ ತೆರಳಿದ್ದ ಆತ ಮೊದಲು ಹನಿ ಕೇಕ್ ತಿಂದಿದ್ದಾನೆ. ಬಳಿಕ ಚಿಕನ್ ರೋಲ್ ಆರ್ಡರ್​​ ಮಾಡಿದ್ದು, ಈ ವೇಳೆ ಅದಿಲ್ಲ ಎಂಬ ಉತ್ತರ ಬೇಕರಿ ಸಿಬ್ಬಂದಿಯಿಂದ ಬಂದಿದೆ. ಹೀಗಾಗಿ ಪನೀರ್ ಟಿಕ್ಕಾ ರೋಲ್ ನೀಡುವಂತೆ ಚಾಲಕ ಕೇಳಿದ್ದಾರೆ. ರೋಲ್​​ನ ಸ್ವಲ್ಪ ತಿಂದ ಬಳಿಕ ಕ್ಯಾಬ್​ ಚಾಲಕ ಅಕ್ಷರಶಃ ಬೆಚ್ಚಿಬಿದ್ದಿದ್ದು, ಅದರೊಳಗೆ ಹಲ್ಲಿ ಇರೋದನ್ನು ಗಮನಿಸಿದ್ದಾರೆ. ಈ ಬಗ್ಗೆ ಬೇಕರಿ ಸಿಬ್ಬಂದಿಯನ್ನು ಪ್ರಶ್ನಿಸಿದರೆ ಅವರಿಂದ ಉಡಾಫೆ ಉತ್ತರ ಬಂದಿದೆಯಂತೆ.

ಇದನ್ನೂ ಓದಿ: ಬೈಕ್ ಪಾರ್ಕ್ ಮಾಡುವಾಗ ವಿದ್ಯುತ್ ಶಾಕ್ ತಗುಲಿ ಪಿಯುಸಿ ವಿದ್ಯಾರ್ಥಿ ಸಾವು!

ಬಳಿಕ ಕ್ಯಾಬ್​​ ಚಾಲಕ ವಾಂತಿಮಾಡಿಕೊಳ್ಳಲು ಆರಂಭಿಸಿದ್ದು, ಆತನನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಜೀರ್ಣ ಹಾಗೂ ಅತಿಸಾರ ಸಮಸ್ಯೆಯಿಂದ ಆತ ಬಳಲುತ್ತಿರೋದಾಗಿ ವೈದ್ಯರು ತಿಳಿಸಿದ್ದು, 24 ಗಂಟೆಗಳ ಕಾಲ ನಿಗಾದ ಅವಶ್ಯಕತೆ ಇದೆ ಎಂದಿದ್ದಾರೆ. ಆದರೆ ಆಸ್ಪತ್ರೆ ವೆಚ್ಚವನ್ನು ಭರಿಸಲು ಬೇಕರಿ ಸಿಬ್ಬಂದಿ ನಿರಾಕರಿಸಿದ್ದು, ತಮ್ಮ ಪರಿಚಯದ ಇನ್ನೊಂದು ಆಸ್ಪತ್ರೆಗೆ ಹೋಗುವಂತೆ ಹೇಳಿರೋದಾಗಿ ಕ್ಯಾಬ್​​ ಚಾಲಕ ಆರೋಪಿಸಿದ್ದಾರೆ. ಈ ಸಂಬಂಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಪನೀರ್ ಟಿಕ್ಕಾ ರೋಲ್​​ನಲ್ಲಿ ಹಲ್ಲಿ ಪತ್ತೆಯಾಗಿರುವ ಬಗ್ಗೆ ಕ್ಯಾಬ್​​ ಚಾಲಕನ ಬಳಿ ಯಾವುದೇ ಸಾಕ್ಷಿ ಇಲ್ಲವಂತೆ. ಗಾಬರಿಯಿಂದ ಫೋಟೋ ತೆಗೆದುಕೊಳ್ಳಲಾಗಿಲ್ಲ ಎಂದು ಆತ ಪೊಲೀಸರಿಗೆ ಆತ ತಿಳಿಸಿದ್ದಾನೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಧಾರಾಕಾರ ಮಳೆಗೆ ಬೆಂಗಳೂರು ತತ್ತರ: ಬಿರುಗಾಳಿಗೆ 50ಕ್ಕೂ ಹೆಚ್ಚು ಮರಗಳು ಧರೆಗೆ; ವಾಹನಗಳು ಜಖಂ

Source link

ಈ ರಾಶಿಯವರು ಒಂದು ಪಡೆಯಲು ಮತ್ತೊಂದು ಕಳೆದುಕೊಳ್ಳಬೇಕು: ಮೇ ತಿಂಗಳಲ್ಲಿ ನಿಮ್ಮ ಕೈಹಿಡಿಯುತ್ತಾನೆ ಕುಬೇರ – Kannada News | Kubera Yoga May 2026: Unlock Your Fortune & Overcome Challenges This Month

ಮೇ 2026 ರಲ್ಲಿ ಕುಜನು ಸ್ವಕ್ಷೇತ್ರವಾದ ಮೇಷದಲ್ಲಿ, ರವಿ ವೃಷಭದಲ್ಲಿ, ಬುಧನು ಸ್ವಕ್ಷೇತ್ರ ಮಿಥುನದಲ್ಲಿ, ಶುಕ್ರನೂ ಮಿಥುನದಲ್ಲಿ ಇರಲಿದ್ದು ಸ್ವಕ್ಷೇತ್ರದ ಗ್ರಹಗಳ ಸ್ಥಿತಿ ಹಾಗೂ ಅವರ ದೃಷ್ಟಿಯ ಪರಿಣಾಮ ಎಲ್ಲ ರಾಶಿಗೂ ಆಗಲಿದೆ. ಕುಲದೇವಾತಾರಾಧನೆಯನ್ನು ಏಕಾಗ್ರತೆಯಿಂದ ಪ್ರತಿದಿನ ಮಾಡಿ.

ಮೇಷ:

ಸಾಹಸದ ಮೇಲೇರಿ ಸವಾರಿ ಮಾಡಲೂಬಹುದು. ಈ ತಿಂಗಳು ನಿಮ್ಮ ವೇಗಕ್ಕೆ ಯಾರೂ ಕಡಿವಾಣ ಹಾಕಲಾಗದು! ವೃತ್ತಿರಂಗದಲ್ಲಿ ನೀವು ರಿಯಲ್ ಹೀರೋ. ಆರ್ಥಿಕವಾಗಿ ಧನಲಕ್ಷ್ಮಿ ಒಲಿಯಲಿದ್ದಾಳೆ, ಆದರೆ ಖರ್ಚಿನ ಮೇಲೆ ಹಿಡಿತವಿರಲಿ. ಪ್ರೀತಿಯ ಹಾದಿಯಲ್ಲಿ ಹೊಸ ಸಂಚಲನ ಶುರುವಾಗಲಿದೆ. ಆರೋಗ್ಯದಲ್ಲಿ ಉತ್ಸಾಹ ತುಂಬಿರುತ್ತದೆ.

​ವೃಷಭ:

ಬಂಗಾರದ ಸಮಯವನ್ನು ಸರಿಯಾಗಿ ಬಳಸಿಕೊಳ್ಳಬೇಕು. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ಕಾಲ ಬಂದಿದೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುವುದರಿಂದ ಮುಖದಲ್ಲಿ ಮಂದಹಾಸ ಮೂಡಲಿದೆ. ಕೌಟುಂಬಿಕವಾಗಿ ಹಳೆಯ ಸಮಸ್ಯೆಗಳು ಮಂಜಿನಂತೆ ಕರಗಲಿವೆ. ನಿಮ್ಮ ವ್ಯಕ್ತಿತ್ವಕ್ಕೆ ಹೊಸ ಮೆರುಗು ಬರಲಿದ್ದು, ಆಪ್ತರೊಂದಿಗೆ ಸುಂದರ ಕ್ಷಣಗಳನ್ನು ಕಳೆಯುವಿರಿ.

​ಮಿಥುನ:

ಈ ತಿಂಗಳು ಸಂವಹನದಲ್ಲಿ ಎತ್ತಿದ ಕೈ. ಮಾತೇ ಮುತ್ತು ಎನ್ನುವಂತೆ ನಿಮ್ಮ ಮಾತಿನಿಂದಲೇ ಅಸಾಧ್ಯವಾದುದನ್ನು ಸಾಧಿಸುವಿರಿ. ಹೊಸ ಸ್ನೇಹ ಸಂಬಂಧಗಳು ವೃತ್ತಿಜೀವನಕ್ಕೆ ಏಣಿ ಆಗಲಿವೆ. ದೂರದ ಪ್ರಯಾಣದ ಯೋಗವಿದ್ದು, ಅದು ಲಾಭದಾಯಕವಾಗಿರಲಿದೆ. ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಬಹುದು, ದ್ರವಾಹಾರ ಸೇವನೆ ಹೆಚ್ಚಿರಲಿ.

ಕರ್ಕಾಟಕ:

ನೆಮ್ಮದಿಯ ನಿಲ್ದಾಣದಲ್ಲಿ ಕೆಲವು ಕಾಲ ತಂಗಲು ಅವಕಾಶವಿದೆ. ಮನಸ್ಸಿನ ಗೊಂದಲಗಳು ನೀಗಿ ಶಾಂತಿ ನೆಲೆಸಲಿದೆ. ಮನೆಯವರ ಬೆಂಬಲ ನಿಮ್ಮ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಲಿದೆ. ಆರ್ಥಿಕವಾಗಿ ಅನಿರೀಕ್ಷಿತ ಮೂಲಗಳಿಂದ ಧನಾಗಮನವಾಗಲಿದೆ. ಆಧ್ಯಾತ್ಮಿಕ ಚಿಂತನೆಗಳು ನಿಮ್ಮನ್ನು ಹೊಸ ಲೋಕಕ್ಕೆ ಕರೆದೊಯ್ಯಲಿವೆ. ಪ್ರೀತಿಪಾತ್ರರಿಂದ ಉಡುಗೊರೆ ಪಡೆಯುವಿರಿ.

ಸಿಂಹ:

ಗರ್ಜನೆಯಿಂದ ನಿಮ್ಮ ಗತ್ತನ್ನು ಗೊತ್ತು ಮಾಡಿಸುವ ಹೊತ್ತು. ರಾಜಕೀಯ ಅಥವಾ ಸಾಮಾಜಿಕ ರಂಗದಲ್ಲಿರುವವರಿಗೆ ಇದು ಯಶಸ್ಸಿನ ಶಿಖರ. ನಿಮ್ಮ ನಿರ್ಧಾರಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತವೆ. ಪ್ರೀತಿಯ ವಿಷಯದಲ್ಲಿ ಸ್ವಲ್ಪ ಅಹಂ ಬಿಟ್ಟರೆ ಜೀವನ ಸ್ವರ್ಗ. ಹೂಡಿಕೆಗಳಿಗೆ ಇದು ಸುವರ್ಣ ಕಾಲ. ಬೆನ್ನು ನೋವಿನ ಬಗ್ಗೆ ಸ್ವಲ್ಪ ಜಾಗರೂಕರಾಗಿರಿ.

ಕನ್ಯಾ:

ತಾಳ್ಮೆಯ ಪರೀಕ್ಷೆಯಲ್ಲಿ ಈ ತಿಂಗಳು ಉತ್ತೀರ್ಣರಾಗುವಿರಿ. ಕತ್ತಲೆಯ ಅನಂತರ ಬೆಳಕು ಬಂದೇ ಬರುತ್ತದೆ, ಹಾಗೆಯೇ ನಿಮ್ಮ ಸಣ್ಣಪುಟ್ಟ ಹಿನ್ನಡೆಗಳು ಶೀಘ್ರದಲ್ಲೇ ಯಶಸ್ಸಾಗಿ ಬದಲಾಗಲಿವೆ. ಹಣಕಾಸಿನ ವಿಚಾರದಲ್ಲಿ ಜಾಗರೂಕತೆ ಇರಲಿ. ಮಕ್ಕಳ ಸಾಧನೆ ನಿಮಗೆ ಹೆಮ್ಮೆ ತರಲಿದೆ. ಗೆಳೆಯರೊಂದಿಗೆ ಸಣ್ಣ ಪ್ರವಾಸ ಮಾಡುವ ಸಾಧ್ಯತೆ ಇದೆ.

ತುಲಾ:

ಈ ತಿಂಗಳಲ್ಲಿ ಸಂತೋಷಕ್ಕೆ ಸುಗ್ಗಿ ಕಾಲವಾಗಲಿದೆ.
ಜೀವನದಲ್ಲಿ ಸಮತೋಲನ ಕಂಡುಕೊಳ್ಳುವಿರಿ. ಹಳೆಯ ಗೆಳೆಯರ ಭೇಟಿ ಹಳೆಯ ನೆನಪುಗಳನ್ನು ಮರುಕಳಿಸಲಿವೆ. ಉದ್ಯೋಗದಲ್ಲಿ ಬಡ್ತಿಗಾಗಿ ಕಾಯುತ್ತಿದ್ದವರಿಗೆ ಸಿಹಿ ಸುದ್ಧಿ ಕಾದಿದೆ. ಕೌಟುಂಬಿಕವಾಗಿ ಶುಭ ಕಾರ್ಯಗಳ ತಯಾರಿ ನಡೆಯಲಿದೆ. ನಿಮ್ಮ ನಗು ಎಲ್ಲರನ್ನೂ ಸೆಳೆಯಲಿದೆ.

ವೃಶ್ಚಿಕ:

ಗೆಲುವಿನ ಹಾದಿಯಲ್ಲಿ ಎಲ್ಲವೂ ಸುಖಮಯ. ಶತ್ರುಗಳು ನಿಮ್ಮ ಮುಂದೆ ಮಂಡಿಯೂರುವ ಕಾಲವಿದು. ಅಡಚಣೆಗಳ ನಡುವೆಯೂ ನಿಮ್ಮ ಕೆಲಸಗಳು ಸುಗಮವಾಗಿ ಸಾಗಲಿವೆ. ಆರ್ಥಿಕವಾಗಿ ಇದು ಲಾಭದಾಯಕ ತಿಂಗಳು. ಸಂಗಾತಿಯೊಂದಿಗೆ ಸಣ್ಣ ಮುನಿಸು ಬಂದರೂ ಅದು ಪ್ರೀತಿಯನ್ನು ಹೆಚ್ಚಿಸಲಿದೆ. ಆರೋಗ್ಯದ ಕಡೆ ನಿರ್ಲಕ್ಷ್ಯ ಬೇಡ.

ಧನುಸ್ಸು:

ಬೌದ್ಧಿಕ ವಿಚಾರದಲ್ಲಿ ಇನ್ನಷ್ಟು ಚುರುಕುತನ. ನಿಮ್ಮ ಜ್ಞಾನ ಮತ್ತು ಕೌಶಲಕ್ಕೆ ವೇದಿಕೆ ಸಿಗಲಿದೆ. ಹೊಸ ವ್ಯವಹಾರ ಆರಂಭಿಸಲು ನಕ್ಷತ್ರಗಳು ಸಾಥ್ ನೀಡುತ್ತಿವೆ. ವಿದೇಶಿ ಪ್ರವಾಸದ ಕನಸು ನನಸಾಗುವ ಕಾಲ ಹತ್ತಿರದಲ್ಲಿದೆ. ಧಾರ್ಮಿಕ ಕಾರ್ಯಗಳಿಂದ ಮನೆಯಲ್ಲಿ ನೆಮ್ಮದಿ ನೆಲೆಸಲಿದೆ. ಖರ್ಚುಗಳು ಹೆಚ್ಚಾದರೂ ಆದಾಯಕ್ಕೆ ಕೊರತೆಯಿಲ್ಲ.

​ಮಕರ:

ಕಠಿಣ ಶ್ರಮ, ಸಿಹಿ ಫಲದ ಪ್ರಾಪ್ತಿ. ನಿಮ್ಮ ಸ್ಥಿರತೆ ಮತ್ತು ಶಿಸ್ತು ನಿಮಗೆ ಗೆಲುವು ತಂದುಕೊಡಲಿದೆ. ಆಸ್ತಿ ಪಾಸ್ತಿ ವಿಚಾರದಲ್ಲಿ ಲಾಭವಾಗುವ ಸೂಚನೆ ಇದೆ. ಸಂಗಾತಿಯ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಬಹುದು, ಕಾಳಜಿ ಇರಲಿ. ಹೂಡಿಕೆ ಮಾಡುವಾಗ ಹಿರಿಯರ ಸಲಹೆ ಪಡೆಯುವುದು ಉತ್ತಮ.

ಕುಂಭ:

ಹೊಸ ಬೆಳಕು ನಿಮ್ಮ ಬದುಕಿಗೆ. ನಿಮ್ಮ ಕ್ರಿಯಾಶೀಲತೆಗೆ ಹೊಸ ಆಯಾಮ ಸಿಗಲಿದೆ. ಸಮಾಜದಲ್ಲಿ ನಿಮ್ಮ ಗೌರವ ದುಪ್ಪಟ್ಟಾಗಲಿದೆ. ಹೊಸ ವಾಹನ ಅಥವಾ ಮನೆ ಖರೀದಿಸುವ ಯೋಗವಿದೆ. ಪ್ರೇಮ ಜೀವನದಲ್ಲಿ ಮಧುರತೆ ಇರಲಿದೆ. ಕ್ರೀಡಾಪಟುಗಳಿಗೆ ಮತ್ತು ಕಲಾವಿದರಿಗೆ ಈ ತಿಂಗಳು ಅತ್ಯಂತ ಅದ್ಭುತ.

ಮೀನ:

ಆನಂದದ ಅಲೆಗಳಿವೆ. ಮನಸ್ಸು ಹಗುರಾಗಲಿದೆ ಮತ್ತು ಸೃಜನಶೀಲ ಕೆಲಸಗಳಲ್ಲಿ ಯಶಸ್ಸು ಕಾಣುವಿರಿ. ಆರ್ಥಿಕ ಚೈತನ್ಯ ಹೆಚ್ಚಾಗಲಿದೆ. ದೀರ್ಘಕಾಲದ ಕಾಯಿಲೆಗಳಿಂದ ಮುಕ್ತಿ ಸಿಗುವ ಸಾಧ್ಯತೆ ಇದೆ. ಪ್ರೀತಿಪಾತ್ರರ ಜೊತೆ ಸಂಜೆ ಕಳೆಯುವುದು ನಿಮಗೆ ಹೊಸ ಚೈತನ್ಯ ನೀಡಲಿದೆ. ದಾನ ಧರ್ಮದಲ್ಲಿ ಆಸಕ್ತಿ ಹೆಚ್ಚಲಿದೆ.

– ಲೋಹಿತ ಹೆಬ್ಬಾರ್

Source link

‘ಸರ್ಸೆ ಸೆರಗು’ ಹಾಡು ವಿವಾದ: ಪ್ರೇಮ್ ಪರ ಕಿಚ್ಚ ಸುದೀಪ್ ಬ್ಯಾಟಿಂಗ್ – Kannada News | KD Song controversy Sudeep supports Director Prem

ಪ್ರೇಮ್ (Prem) ನಿರ್ದೇಶಿಸಿ, ಧ್ರುವ ಸರ್ಜಾ ನಟಿಸಿರುವ ‘ಕೆಡಿ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಇತ್ತೀಚೆಗಷ್ಟೆ ಸಿನಿಮಾದ ಟ್ರೈಲರ್ ಸಹ ಬಿಡುಗಡೆ ಆಗಿದೆ. ಚಿತ್ರತಂಡ ಇತ್ತೀಚೆಗಷ್ಟೆ ಸುದ್ದಿಗೋಷ್ಠಿ ಹಮ್ಮಿಕೊಂಡಿತ್ತು, ಸುದ್ದಿಗೋಷ್ಠಿಯಲ್ಲಿ ನಟ ಸುದೀಪ್ ಸಹ ಭಾಗಿ ಆಗಿದ್ದರು. ‘ಕೆಡಿ’ ಸಿನಿಮಾನಲ್ಲಿ ಸುದೀಪ್ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸುದೀಪ್ ಅವರು ಸಿನಿಮಾದ ಬಗ್ಗೆ, ತಮ್ಮ ಹಾಗೂ ಪ್ರೇಮ್ ಅವರ ಗೆಳೆತನದ ಬಗ್ಗೆ, ಧ್ರುವ ಸರ್ಜಾ ಬಗ್ಗೆ ಇನ್ನೂ ಸಾಕಷ್ಟು ವಿಷಯಗಳ ಬಗ್ಗೆ ಮಾತನಾಡಿದರು. ಅದೇ ಕಾರ್ಯಕ್ರಮದಲ್ಲಿ ಪ್ರೇಮ್ ಅವರು ಬರೆದ ಹಾಡು ವಿವಾದಕ್ಕೀಡಾದ ಬಗ್ಗೆಯೂ ಮಾತನಾಡಿದರು.

‘ಕೆಡಿ’ ಸಿನಿಮಾಕ್ಕಾಗಿ ‘ಸರ್ಸೆ ಸೆರಗು’ ಎಂಬ ಹಾಡೊಂದನ್ನು ಪ್ರೇಮ್ ಬರೆದಿದ್ದು, ನೋರಾ ಫತೇಹಿ ಡ್ಯಾನ್ಸ್ ಮಾಡಿದ್ದ ಆ ಐಟಂ ಹಾಡು ಕೆಲ ವಾರಗಳ ಹಿಂದೆ ಬಿಡುಗಡೆ ಆಗಿತ್ತು. ಹಾಡಿಗೆ ತೀವ್ರ ವಿರೋಧ ಉತ್ತರ ಭಾರತದಲ್ಲಿ ವ್ಯಕ್ತವಾಯ್ತು. ಲೋಕಸಭೆಯಲ್ಲೂ ಸಹ ಹಾಡಿನ ಬಗ್ಗೆ ಚರ್ಚೆ ಆಗಿದ್ದಲ್ಲದೆ, ರಾಷ್ಟ್ರೀಯ ಮಹಿಳಾ ಆಯೋಗವು ಸ್ವಯಂ ಪ್ರೇರಿತ ದೂರು ಸಹ ದಾಖಲಿಸಿಕೊಂಡಿತು. ಕೊನೆಗೆ ಹಾಡನ್ನು ಯೂಟ್ಯೂಬ್​​ನಿಂದ ತೆಗೆಯಲಾಯ್ತು. ಹಲವರು ಹಲವು ರೀತಿಯಲ್ಲಿ ಹಾಡಿನ ಬಗ್ಗೆ ಮಾತನಾಡಿದರು. ಇದೀಗ ಸುದೀಪ್ ಸಹ ವಿವಾದದ ಬಗ್ಗೆ ಮಾತನಾಡಿದ್ದು, ಪ್ರೇಮ್ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸುದೀಪ್, ‘ಪ್ರೇಮ್ ಹಲವಾರು ಅದ್ಭುತವಾದ ಹಾಡುಗಳನ್ನು ಕನ್ನಡಕ್ಕೆ ನೀಡಿದ್ದಾರೆ. ತಾಯಿಯ ಬಗ್ಗೆ, ಪ್ರೀತಿಯ ಬಗ್ಗೆ ಹಲವಾರು ಅದ್ಭುತ ಹಾಡುಗಳನ್ನು ನೀಡಿದ್ದಾರೆ. ಈಗ ತಪ್ಪಾಗಿದೆ, ಕೆಲವೊಮ್ಮೆ ಹಾಗಾಗುವುದುಂಟು, ಏನೋ ಮಾಡುವ ಪ್ರಯತ್ನ ಮಾಡುತ್ತೇವೆ, ಅದು ಸರಿಯಾಗಿ ವರ್ಕೌಟ್ ಆಗುವುದಿಲ್ಲ, ಈಗಲೂ ಆಗಿರುವುದು ಅದೇ. ಅಷ್ಟು ಮಾತ್ರಕ್ಕೆ, ನಮ್ಮ ವ್ಯಕ್ತಿಯನ್ನೇ ನಾವು ಕಡೆಗಣಿಸುವುದು, ಕ್ಷುಲ್ಲಕವಾಗಿಸುವುದು ಸರಿಯಲ್ಲ’ ಎಂದು ಹೇಳಿದ್ದಾರೆ.

ಇದನ್ನೂ ಓದಿ:‘ಕೆಡಿ’ ವಿಳಂಬ ಆಗಿದ್ದೇಕೆ? ಪ್ರೇಮ್ ಪರವಾಗಿ ನಿಂತ ಸುದೀಪ್

ಹೊರ ರಾಜ್ಯದವರಿಗೆ ಪ್ರೇಮ್ ಅವರ ಕೆಲಸ ಗೊತ್ತಿಲ್ಲ. ಕನ್ನಡ ಸಿನಿಮಾಕ್ಕೆ ಪ್ರೇಮ್ ಅವರ ಕಾಣ್ಕೆ ಗೊತ್ತಿಲ್ಲ. ಅವರು ಏನಾದರೂ ಮಾತನಾಡಿಕೊಳ್ಳಲಿ ಆದರೆ ನಮಗೆ ಗೊತ್ತಲ್ಲ. ಇಷ್ಟೋಂದು ಸೇವೆ ನೀಡಿರುವ, ಕಾಣಿಕೆಗಳನ್ನು ನೀಡಿರುವ ವ್ಯಕ್ತಿಯನ್ನು ಒಂದೇ ಒಂದು ವಿಷಯ ಇರಿಸಿಕೊಂಡು ಸಣ್ಣವರನ್ನಾಗಿ ಮಾಡಿಬಿಟ್ಟಂತೆ ನನಗೆ ಭಾಸವಾಯ್ತು. ನಾನು ಆ ಸಮಯದಲ್ಲಿ ಪ್ರೇಮ್ ಅವರ ಜೊತೆಗೆ ಮಾತನಾಡಿದೆ. ಏನೂ ಆಗಿಲ್ಲ, ಆ ಸಾಹಿತ್ಯ ಕೈಬಿಟ್ಟು ಮತ್ತೊಂದು ಸಾಹಿತ್ಯ ಬರೆದು ಬಿಟ್ಟರಾಯ್ತು ಬಿಡಿ ಎಂದು ಧೈರ್ಯ ತುಂಬಿದೆ, ಈಗ ಹಾಗೆಯೇ ಮಾಡಲಾಗಿದೆ’ ಎಂದಿದ್ದಾರೆ ಸುದೀಪ್.

‘ಕೆಡಿ’ ಸಿನಿಮಾವನ್ನು ಪ್ರೇಮ್ ನಿರ್ದೇಶಿಸಿದ್ದು, ಕೆವಿಎನ್ ನಿರ್ಮಾಣ ಮಾಡಿದೆ. ಸಿನಿಮಾನಲ್ಲಿ ದೊಡ್ಡ ತಾರಾಗಣವೇ ಇದೆ. ರೀಷ್ಮಾ ನಾಯಕಿ, ಶಿಲ್ಪಾ ಶೆಟ್ಟಿ, ಸಂಜಯ್ ದತ್, ರಮೇಶ್ ಅರವಿಂದ್, ಅಭಿಜಿತ್ ಇನ್ನೂ ಕೆಲವರಿದ್ದಾರೆ. ನಟ ಸುದೀಪ್ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ಸಿನಿಮಾಕ್ಕಿದೆ. ಸಿನಿಮಾ ಏಪ್ರಿಲ್ 30ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

MI vs SRH: ಮುಂಬೈ ಪರ ಅತಿವೇಗದ ಶತಕ ಬಾರಿಸಿದ ರಿಯಾನ್ ರಿಕಲ್ಟನ್ – Kannada News | IPL 2026: Ryan Rickelton Blazes Fastest MI Century vs SRH, Breaks Record!

ಐಪಿಎಲ್ 2026 ರ 41 ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ನಡೆಯಿತು. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಪರ ಆರಂಭಿಕ ರಿಯಾನ್ ರಿಕಲ್ಟನ್ ಸ್ಫೋಟಕ ಶತಕ ಬಾರಿಸುವ ಮೂಲಕ ತಂಡವನ್ನು 200 ರನ್​ಗಳ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ತಮ್ಮ ಶತಕದ ಇನ್ನಿಂಗ್ಸ್​ನಲ್ಲಿ 44 ಎಸೆತಗಳನ್ನು ಎದುರಿಸಿದ ರಿಕಲ್ಟನ್ ಎಂಟು ಬೌಂಡರಿ ಮತ್ತು ಏಳು ಸಿಕ್ಸರ್‌ಗಳನ್ನು ಬಾರಿಸಿದರು. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡದ ಪರ ಅತಿ ವೇಗದ ಶತಕ ಬಾರಿಸಿದ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ನಿರ್ಮಿಸಿದರು.

ರಿಕಲ್ಟನ್, ವಿಲ್ ಜ್ಯಾಕ್ಸ್ ಜೊತೆಗೂಡಿ ತಂಡಕ್ಕೆ 93 ರನ್‌ಗಳ ಸ್ಫೋಟಕ ಆರಂಭ ನೀಡಿದರು. ಈ ಹಂತದಲ್ಲಿ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಜ್ಯಾಕ್ಸ್ ಔಟಾದ ನಂತರವೂ ಅಮೋಘ ಪ್ರದರ್ಶನ ಮುಂದುವರಿಸಿದ ರಿಕಲ್ಟನ್ ತಮ್ಮ ಮೊದಲ ಐಪಿಎಲ್ ಶತಕವನ್ನು ದಾಖಸಿದರು. ಕೇವಲ 44 ಎಸೆತಗಳಲ್ಲಿ ಈ ಸಾಧನೆ ಮಾಡಿದ ರಿಕಲ್ಟನ್ ಐಪಿಎಲ್‌ನಲ್ಲಿ ಮುಂಬೈ ಪರ ಅತ್ಯಂತ ವೇಗದ ಶತಕ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡರು. 2008 ರಲ್ಲಿ ಸನತ್ ಜಯಸೂರ್ಯ 45 ಎಸೆತಗಳಲ್ಲಿ ಶತಕ ಬಾರಿಸಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು. ತಿಲಕ್ ವರ್ಮಾ ಕೂಡ ಇದೇ ಆವೃತ್ತಿಯಲ್ಲಿ 45 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಈ ದಾಖಲೆಯನ್ನು ಸರಿಗಟ್ಟಿದ್ದರು.

Source link

ಪ್ರತಿನಿತ್ಯ ಸಂಗೀತ ಕೇಳುವುದರಿಂದ ಏನೆಲ್ಲಾ ಪ್ರಯೋಜನಗಳನ್ನು ಪಡೆಯಬಹುದು ಗೊತ್ತಾ? – Kannada News | Is it a good habit to listen to music every day?

ಸಂಗೀತ (music) ಕೇಳುವುದರಿಂದ ಮನಸ್ಸಿಗೆ ತೃಪ್ತಿಯಾಗುತ್ತದೆ. ಆದ್ದರಿಂದ ಮನಸ್ಸಿಗೆ ಖುಷಿಯಾದಾಗ, ಬೇಜಾರಾದಾಗ ಹೆಚ್ಚಿನವರು ಸಂಗೀತವನ್ನು ಆಲಿಸುತ್ತಾರೆ. ಅದರಲ್ಲೂ ಕೆಲವರಂತೂ ಪ್ರತಿನಿತ್ಯ ಹಾಡು ಕೇಳುತ್ತಾರೆ. ಹೀಗೆ ಮನಸ್ಸಿನ ಖುಷಿಗೆ, ಮನೋರಂಜನೆಯ ಉದ್ದೇಶದಿಂದ ಆಲಿಸುವ ಸಂಗೀತದಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳೂ ಲಭಿಸುತ್ತವೆಯಂತೆ. ಹೌದು ಹಾಡು ಕೇಳುವುದರಿಂದ ನಮಗೆ ಮನರಂಜನೆ ಸಿಗುವುದಲ್ಲದೆ, ಒತ್ತಡ ಕಡಿಮೆಯಾಗಿ ಮನಸ್ಸೂ ಹಗುರವಾಗುತ್ತದೆ. ಹಾಗಿದ್ದರೆ ಒಟ್ಟಾರೆಯಾಗಿ ಸಂಗೀತ ಕೇಳುವುದರಿಂದ ಏನೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಎಂಬುದನ್ನು ನೋಡೋಣ ಬನ್ನಿ.

ಸಂಗೀತ ಕೇಳುವುದರಿಂದ ಲಭಿಸುವ ಪ್ರಯೋಜನಗಳೇನು?

ಒತ್ತಡ ಕಡಿಮೆಯಾಗುತ್ತದೆ: ಸಂಗೀತ ಕೇಳುವುದರಿಂದ ಒತ್ತಡ ಮತ್ತು ಆತಂಕ ಕಡಿಮೆಯಾಗುತ್ತದೆ. ನಾವು ಹಾಡುಗಳನ್ನು ಕೇಳಿದಾಗ, ಮೆದುಳು ‘ಹಿತವಾದ ಭಾವನೆ’ ನೀಡುವ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ, ಇದು ಒತ್ತಡವನ್ನು ಕಡಿಮೆ ಮಾಡುತ್ತದೆ. ಸಂಗೀತವು ನಮ್ಮ ಹಾರ್ಮೋನುಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ನಿಮ್ಮ ನೆಚ್ಚಿನ ಸಂಗೀತವನ್ನು ಕೇಳಿದಾಗ, ನಿಮ್ಮ ದೇಹದ ಕಾರ್ಟಿಸೋಲ್ ಮಟ್ಟಗಳು ಕಡಿಮೆಯಾಗುತ್ತವೆ. ಇದರಿಂದ ಮನಸಗಸು ಶಾಂತ ಮತ್ತು ನಿರಾಳವಾಗುತ್ತದೆ.

ಉತ್ತಮ ನಿದ್ರೆ ಪಡೆಯಲು ಸಹಕಾರಿ: ರಾತ್ರಿಯಲ್ಲಿ ನಿದ್ರಿಸಲು ತೊಂದರೆಯಾಗಿದ್ದರೆ, ಮಲಗುವ ಮುನ್ನ ಮೃದುವಾದ ಸಂಗೀತವನ್ನು ಕೇಳುವುದು ಪ್ರಯೋಜನಕಾರಿಯಾಗಿದೆ. ಹಾಡುಗಳು ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತವೆ ಮತ್ತು ನಿಮ್ಮ ದೇಹವನ್ನು ವಿಶ್ರಾಂತಿ ಮಾಡುತ್ತವೆ, ಇದು ನಿಮಗೆ ಉತ್ತಮ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಪ್ರತಿದಿನ ಹಾಡುಗಳನ್ನು ಕೇಳುವುದರಿಂದ ನಿಮ್ಮ ನಿದ್ರೆಯ ಗುಣಮಟ್ಟವನ್ನು ಸುಧಾರಿಸಬಹುದು.

ಏಕಾಗ್ರತೆ ಮತ್ತು ಗಮನವನ್ನು ಹೆಚ್ಚಿಸುತ್ತದೆ: ಹಾಡುಗಳು  ಏಕಾಗ್ರತೆ ಮತ್ತು ಗಮನವನ್ನು ಹೆಚ್ಚಿಸುತ್ತವೆ. ಅಧ್ಯಯನ ಮಾಡುವಾಗ ಅಥವಾ ಕೆಲಸ ಮಾಡುವಾಗ ಶಾಂತವಾದ, ಮೃದು  ಸಂಗೀತವನ್ನು ಕೇಳುವುದರಿಂದ ಗಮನ ಬೇರೆಡೆ ಸೆಳೆಯುವುದು ಕಡಿಮೆಯಾಗುತ್ತದೆ ಮತ್ತು ಕೆಲಸದ ಮೇಲೆ ಗಮನಹರಿಸಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಅನೇಕ ಜನರು ಕೆಲಸ ಮಾಡುವಾಗ ಸಂಗೀತವನ್ನು ಕೇಳುತ್ತಾರೆ.

ಬೇಸರವನ್ನು ಹೋಗಲಾಡಿಸುತ್ತದೆ: ನೀವು ಬೇಸರಗೊಂಡಿದ್ದರೆ ಅಥವಾ ದಣಿದಿದ್ದರೆ, ನಿಮ್ಮ ನೆಚ್ಚಿನ ಹಾಡು ಕೇಳಿ. ಇದು ನಿಮ್ಮ ಮನಸ್ಥಿತಿಯನ್ನು ತಕ್ಷಣವೇ ಬದಲಾಯಿಸಬಹುದು. ಸಂಗೀತವು ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಮತ್ತು ಸಕಾರಾತ್ಮಕ ಆಲೋಚನೆಗಳನ್ನು ಬೆಳೆಸಲು ಸಹಾಯ ಮಾಡುತ್ತದೆ, ಇದು ನಕಾರಾತ್ಮಕ ಆಲೋಚನೆಗಳು ಮನಸ್ಸಿಗೆ ಬರದಂತೆ ತಡೆಯುತ್ತದೆ.

ಇದನ್ನೂ ಓದಿ: ಬೇಸಿಗೆಯಲ್ಲಿ ಫ್ರಿಡ್ಜ್‌ ನೀರು ಕುಡಿಯೋದ್ರಿಂದ ಏನಾಗುತ್ತೆ ಗೊತ್ತಾ?

ಹೃದಯದ ಆರೋಗ್ಯಕ್ಕೆ ಒಳ್ಳೆಯದು: ಸಂಗೀತ ಕೇಳುವುದು ಹೃದಯದ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಕೆಲವು ಸಂಶೋಧನೆಗಳ ಪ್ರಕಾರ, ಶಾಂತ ಸಂಗೀತವು ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಹೃದಯ ಬಡಿತವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ. ಇದು ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಒಟ್ಟಾರೆ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.

ಹೀಗೆ  ಕೆಲವು ನಿಮಿಷಗಳ ಕಾಲ ಸಂಗೀತ ಕೇಳುವುದರಿಂದ ಮಾನಸಿಕ ವಿಶ್ರಾಂತಿ ಲಭಿಸುತ್ತದೆ, ದೈಹಿಕ ಆರೋಗ್ಯವೂ ಸುಧಾರಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು ಮಳೆಗೆ ಮತ್ತೊಂದು ಬಲಿ: ಬೈಕ್ ಪಾರ್ಕ್ ಮಾಡುವಾಗ ವಿದ್ಯುತ್ ಶಾಕ್ ತಗುಲಿ ಪಿಯುಸಿ ವಿದ್ಯಾರ್ಥಿ ಸಾವು! – Kannada News | Bengaluru Monsoon Mayhem: Rain Claims 8 Lives, Electrocution and Compound Collapse

ಬೆಂಗಳೂರು, ಏ.29: ರಾಜಧಾನಿಯಲ್ಲಿ ಇಂದು ಆರ್ಭಟಿಸಿದ ಮಳೆಯು ಸಾವು-ನೋವುಗಳ ಸರಣಿಯನ್ನೇ ಸೃಷ್ಟಿಸುತ್ತಿದೆ. ಈಗಾಗಲೇ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ರಸ್ತೆ ಬದಿ ವ್ಯಾಪಾರಿಗಳು ಮತ್ತು ಪಾದಚಾರಿಗಳು ಸೇರಿದಂತೆ 7 ಜನರು ಸಾವನ್ನಪ್ಪಿದ್ದಾರೆ. ಇದೀಗ ಮತ್ತೊಂದು ಸಾವು ಸಂಭವಿಸಿದೆ. ನಗರದ ಯಾರಬ್ ನಗರದಲ್ಲಿ ವಿದ್ಯುತ್ ಶಾಕ್ ತಗುಲಿ ಸೈಯದ್ ಸೂಫಿಯಾನ್ ಎಂಬ ವಿದ್ಯಾರ್ಥಿ ದಾರುಣವಾಗಿ ಸಾವನ್ನಪ್ಪಿದ್ದಾನೆ.

ಇತ್ತೀಚೆಗಷ್ಟೇ ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದ ಸೈಯದ್ ಸೂಫಿಯಾನ್, ಸಂಜೆ ಮಳೆ ಸುರಿಯುತ್ತಿದ್ದ ವೇಳೆ ಯಾರಬ್ ನಗರದಲ್ಲಿ ತನ್ನ ಬೈಕ್ ಪಾರ್ಕ್ ಮಾಡಲು ಪ್ರಯತ್ನಿಸುತ್ತಿದ್ದನು. ಈ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ವಿದ್ಯುತ್ ತಂತಿ ಅಥವಾ ಕಂಬದಿಂದ ವಿದ್ಯುತ್ ಪ್ರವಹಿಸಿ ಶಾಕ್ ತಗುಲಿದೆ ಎನ್ನಲಾಗಿದೆ. ಘಟನೆಯಲ್ಲಿ ಸೈಯದ್ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ.

ಮಗನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯಕ್ಕೆ ವಿದ್ಯುತ್ ಹೇಗೆ ಪ್ರವಹಿಸಿತು ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲವಾದರೂ, ಮಳೆಯಿಂದಾದ ಅವಾಂತರವೇ ಈ ಸಾವಿಗೆ ಕಾರಣ ಎಂಬುದು ಪ್ರಾಥಮಿಕವಾಗಿ ತಿಳಿದುಬಂದಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ವರುಣನ ಆರ್ಭಟಕ್ಕೆ ಘನಘೋರ ದುರಂತ; ಕಾಂಪೌಂಡ್ ಕುಸಿದು 7 ಜನ ಸಾವು

ಕಾಂಪೌಂಡ್ ಕುಸಿದು ಸಾವನ್ನಪ್ಪಿದವರಿಗೆ 5 ಲಕ್ಷ ರೂ. ಪರಿಹಾರ ಘೋಷಣೆ:

ಇಂದು ಆರ್ಭಟಿಸಿದ ಬಿರುಗಾಳಿ ಮತ್ತು ಆಲಿಕಲ್ಲು ಸಹಿತ ಮಳೆಯು ದೊಡ್ಡ ಮಟ್ಟದ ಪ್ರಾಣಹಾನಿಗೆ ಕಾರಣವಾಗಿದೆ. ನಗರದ ಬೌರಿಂಗ್ ಆಸ್ಪತ್ರೆ ಸಮೀಪದ ಕಾಂಪೌಂಡ್ ಕುಸಿದು ಬಿದ್ದ ಪರಿಣಾಮ 7 ಜನರು ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ತಕ್ಷಣವೇ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪರಿಸ್ಥಿತಿಯನ್ನು ಪರಿಶೀಲಿಸಿ ಸಂತ್ರಸ್ತರಿಗೆ ನೆರವು ಘೋಷಿಸಿದ್ದಾರೆ. ಮೃತಪಟ್ಟ ಏಳು ಜನರ ಕುಟುಂಬಸ್ಥರಿಗೆ ಸರ್ಕಾರದಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ಧನವನ್ನು ಘೋಷಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ 7 ಮಂದಿಗೆ ಸರ್ಕಾರಿ ವೆಚ್ಚದಲ್ಲೇ ಸಂಪೂರ್ಣ ಉಚಿತ ಚಿಕಿತ್ಸೆ ನೀಡುವಂತೆ ಸಿಎಂ ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.ಈ ಘಟನೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಅಥವಾ ಅಜಾಗರೂಕತೆ ಕಂಡುಬಂದಲ್ಲಿ, ಅವರನ್ನು ತಕ್ಷಣವೇ ಕೆಲಸದಿಂದ ಅಮಾನತುಗೊಳಿಸುವುದಾಗಿ ಮತ್ತು ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version