Spiritual Difference: ಮನೆಯಲ್ಲೇ ಜಪ-ತಪ ಮಾಡಿದರೂ ದೇವಾಲಯಕ್ಕೆ ಏಕೆ ಹೋಗಬೇಕು? ಇಲ್ಲಿದೆ ವೈಜ್ಞಾನಿಕ ಮತ್ತು ಧಾರ್ಮಿಕ ಕಾರಣ – Kannada News | Home Worship vs. Temple Worship: Understanding the Spiritual Difference

ಮನೆ ಪೂಜೆ ಮತ್ತು ದೇವಾಲಯ ಪೂಜೆImage Credit source: Pinterest

ಅನೇಕ ಭಕ್ತರು ಪದೇ ಪದೇ ಕೇಳುವ “ಮನೆ ಪೂಜೆಗೂ ದೇವಾಲಯದ ಭೇಟಿಗೂ ವ್ಯತ್ಯಾಸವೇನು? ಎರಡೂ ಅನಿವಾರ್ಯವೇ?” ಎಂಬ ಪ್ರಶ್ನೆಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಮನೆಯಲ್ಲೇ ಪೂಜೆ, ಜಪ ಮಾಡಿದರೆ ಸಾಕು, ದೇವಾಲಯಕ್ಕೆ ಏಕೆ ಹೋಗಬೇಕು ಎಂಬ ಭಾವನೆ ಹಲವರಲ್ಲಿ ಇರುತ್ತದೆ. ಆದರೆ, ಎರಡೂ ಪೂಜಾ ವಿಧಾನಗಳು ತಮ್ಮದೇ ಆದ ವಿಶಿಷ್ಟ ಮಹತ್ವವನ್ನು ಹೊಂದಿವೆ ಮತ್ತು ಆಧ್ಯಾತ್ಮಿಕ ಪೂರ್ಣತೆಗೆ ಪರಸ್ಪರ ಪೂರಕವಾಗಿವೆ ಎಂದು ಗುರೂಜಿ ತಿಳಿಸಿದ್ದಾರೆ.

ಮನೆಯಲ್ಲಿ ಮಾಡುವ ಪೂಜೆ ಮುಖ್ಯವಾಗಿ ನಮ್ಮ ವೈಯಕ್ತಿಕ ತೃಪ್ತಿ ಮತ್ತು ಅಂತರಾತ್ಮದ ಶುದ್ಧೀಕರಣಕ್ಕಾಗಿ. ಮನೆಗಳಲ್ಲಿ ಇಡಲಾದ ವಿಗ್ರಹಗಳನ್ನು ಸಾಮಾನ್ಯವಾಗಿ ಶಾಸ್ತ್ರಬದ್ಧವಾಗಿ ಭೂಸ್ಥಾಪನೆ ಅಥವಾ ಪ್ರತಿಷ್ಠಾಪನೆ ಮಾಡಲಾಗುವುದಿಲ್ಲ. ಅವು ನಮ್ಮ ಭಕ್ತಿಯ ಸಂಕೇತವಾಗಿರುತ್ತವೆ ಮತ್ತು ಆಂತರಿಕ ಮನಸ್ಸನ್ನು ಶುದ್ಧೀಕರಿಸಲು ಸಹಾಯ ಮಾಡುತ್ತವೆ. ಸ್ನಾನ ಮಾಡಿ, ಶುದ್ಧ ಮನಸ್ಸಿನಿಂದ ಮನೆಯಲ್ಲಿ ಮಾಡುವ ಪೂಜೆ ನಮ್ಮ ದೇಹದ ಒಳಗಿರುವ ಅಂತರಾತ್ಮವನ್ನು ಶುದ್ಧಿ ಮಾಡುತ್ತದೆ. ಇದನ್ನು ಭಾವಿ ನೀರಿಗೆ ಹೋಲಿಸಬಹುದು – ಶುದ್ಧ ಮತ್ತು ವೈಯಕ್ತಿಕ.

ಇದಕ್ಕೆ ವ್ಯತಿರಿಕ್ತವಾಗಿ, ದೇವಾಲಯಗಳು ಶಕ್ತಿ ಕೇಂದ್ರಗಳಾಗಿವೆ. ಇಲ್ಲಿ ವಿಗ್ರಹಗಳನ್ನು ಶಾಸ್ತ್ರಬದ್ಧವಾಗಿ, ವೇದ ಮಂತ್ರಗಳೊಂದಿಗೆ ಭೂಸ್ಥಾಪನೆ ಮಾಡಿ ಪ್ರತಿಷ್ಠಾಪಿಸಲಾಗುತ್ತದೆ. ದೇವಾಲಯಗಳಲ್ಲಿ ತ್ರಿಕಾಲ ಪೂಜೆ ನಡೆಯುತ್ತದೆ, ಪರಿವಾರ ದೇವತೆಗಳು ಇರುತ್ತಾರೆ, ಮತ್ತು ಅವು ಪಂಚಭೂತಗಳನ್ನು ನಿಯಂತ್ರಿಸುವ ಶಕ್ತಿಯನ್ನು ಹೊಂದಿರುತ್ತವೆ. ಅರ್ಚಕರು ತಮ್ಮ ಶ್ರದ್ಧಾ ಭಕ್ತಿಯಿಂದ ಶಿಲೆಯನ್ನೂ ಶಂಕರನನ್ನಾಗಿ ಪರಿವರ್ತಿಸುವ ಶಕ್ತಿಯನ್ನು ಹೊಂದಿರುತ್ತಾರೆ (“ಅರ್ಚಕಸ್ಯ ಪ್ರಭಾವೇನ ಶಿಲಾಭವತಿ ಶಂಕರ”). ಈ ಪೂಜಿತ ಸ್ಥಳಗಳು ನಮ್ಮ ದೇಹದ ಹೊರಭಾಗಕ್ಕೆ, ಅಂದರೆ ಕಣ್ಣು, ಕಿವಿ, ಮೂಗು, ಕೈಗಳಿಗೆ ವಿಶೇಷವಾದ ಪ್ರಭಾವಳಿಯನ್ನು ನೀಡುತ್ತವೆ. ದೇವಾಲಯದ ಶಕ್ತಿಯು ದೈವಾಂಶವನ್ನು ಹೆಚ್ಚಿಸಿ, ನಾವು ಎಲ್ಲೇ ಹೋದರೂ ಯಶಸ್ಸು ಸಿಗುವಂತೆ ಮಾಡುತ್ತದೆ. ಇದನ್ನು ಪುಣ್ಯ ನದಿಗೆ ಹೋಲಿಸಲಾಗುತ್ತದೆ – ಸಾರ್ವತ್ರಿಕವಾಗಿ ಶುದ್ಧಿಕರಿಸುವ ಶಕ್ತಿ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಮನೆಯ ಪೂಜೆಯಿಂದ ಅಂತರಾತ್ಮವನ್ನು ಶುದ್ಧಿ ಮಾಡಿಕೊಂಡು, ಆ ಶುದ್ಧ ದೇಹ ಮತ್ತು ಮನಸ್ಸಿನೊಂದಿಗೆ ದೇವಸ್ಥಾನಕ್ಕೆ ಹೋದಾಗ, ದೇವಾಲಯದ ಶಕ್ತಿ ನಮ್ಮ ಬಾಹ್ಯ ದೇಹವನ್ನೂ ಶುದ್ಧೀಕರಿಸಿ, ದೈವಿಕ ಪ್ರಭಾವವನ್ನು ನೀಡುತ್ತದೆ. ಇದು ನಮ್ಮ ಜೀವನವನ್ನು ಪರಿಪೂರ್ಣಗೊಳಿಸುತ್ತದೆ. ಮನೆಯ ದೇವರನ್ನು “ಬೇರು” ಎಂದು ಪರಿಗಣಿಸಿದರೆ, ದೇವಾಲಯವು ಆ ಬೇರಿನಿಂದ ಬೆಳೆದ “ವೃಕ್ಷ” ಇದ್ದಂತೆ, ಅದು ಫಲಗಳನ್ನು ನೀಡುತ್ತದೆ.

ಹಾಗಾಗಿ, ಮನೆಯ ಪೂಜೆ ಮತ್ತು ದೇವಾಲಯದ ಭೇಟಿ ಎರಡೂ ಸಮಾನವಾಗಿ ಮುಖ್ಯ. ಎರಡರಲ್ಲಿ ಒಂದನ್ನು ಆರಿಸಿಕೊಳ್ಳುವ ಆಯ್ಕೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಮನಸ್ಸಿನ ಪ್ರಶಾಂತತೆ, ಜಪ, ಹೋಮ, ತಪಸ್ಸು ಇವು ದೇವಾಲಯದಲ್ಲಿ ಮಾಡಿದಾಗ ಸಿಗುವ ಫಲ ಸರ್ವರಿಗೂ ಸಿಗುತ್ತದೆ. ಹಿಂದೂ ಸನಾತನ ಸಂಸ್ಕೃತಿಯಲ್ಲಿ ನಂಬಿಕೆಯೇ ಆಧಾರವಾಗಿದ್ದು, ಈ ಎರಡೂ ಪೂಜಾ ವಿಧಾನಗಳು ನಮ್ಮ ಆಧ್ಯಾತ್ಮಿಕ ಮತ್ತು ಲೌಕಿಕ ಜೀವನದ ಸಮೃದ್ಧಿಗೆ ಅತ್ಯಗತ್ಯ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:01 am, Wed, 29 April 26

Source link

ಐಪಿಎಲ್ ನಿಯಮ ಬದಲಿಸಿ: ಬಿಸಿಸಿಐಗೆ ಪತ್ರ ಬರೆದ ಸುನಿಲ್ ಗವಾಸ್ಕರ್ – Kannada News | IPL 2026: Gavaskar Urges Strict Rules to Curb Slow Play

ಐಪಿಎಲ್ ಪಂದ್ಯಗಳು ನಿಗದಿತ ಸಮಯ ಮೀರಿ ಅತಿಯಾಗಿ ವಿಳಂಬವಾಗುತ್ತಿರುವುದಕ್ಕೆ ಭಾರತದ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಟಗಾರರು ಮತ್ತು ತಂಡಗಳು ನೀಡಲಾಗುವ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಎಂದು ಕಿಡಿಕಾರಿರುವ ಅವರು, 2026ರ ಆವೃತ್ತಿಯಿಂದ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (BCCI) ವಿಶೇಷ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ನಾಲ್ಕು ಪ್ರಮುಖ ವಿಷಯಗಳನ್ನು ಉಲ್ಲೇಖಿಸಿದ್ದು, ಈ ನಿಯಮಗಳನ್ನು ಜಾರಿಗೊಳಿಸುವಂತೆ ಆಗ್ರಹಿಸಿದ್ದಾರೆ. ಸುನಿಲ್ ಗವಾಸ್ಕರ್ ನೀಡಿರುವ ಪ್ರಮುಖ ಸಲಹೆಗಳು ಈ ಕೆಳಗಿನಂತಿವೆ…

ಮೈದಾನಕ್ಕೆ ಬರುವವರ ಸಂಖ್ಯೆ ಇಳಿಕೆಯಾಗಲಿ: ತಂತ್ರಗಾರಿಕೆಯ ವಿರಾಮದ (Strategic Timeout) ಸಮಯದಲ್ಲಿ ಕೋಚಿಂಗ್ ಸ್ಟಾಫ್ ಮತ್ತು ಮೀಸಲು ಆಟಗಾರರು ತಂಡೋಪತಂಡವಾಗಿ ಮೈದಾನಕ್ಕೆ ನುಗ್ಗುವುದನ್ನು ಗವಾಸ್ಕರ್ ಖಂಡಿಸಿದ್ದಾರೆ. ಕೇವಲ ಇಬ್ಬರು ಮೀಸಲು ಆಟಗಾರರು (ಪಾನೀಯ ನೀಡಲು) ಮತ್ತು ಇಬ್ಬರು ತರಬೇತುದಾರರಿಗೆ ಮಾತ್ರ ಮೈದಾನ ಪ್ರವೇಶಿಸಲು ಅನುಮತಿ ನೀಡಬೇಕು ಎಂದು ಗವಾಸ್ಕರ್ ಬಿಸಿಸಿಐಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಬ್ಯಾಟರ್‌ಗಳ ಸಮಯ ಮಿತಿ ಕಡಿತ: ಪ್ರಸ್ತುತ ಒಬ್ಬ ಬ್ಯಾಟರ್ ಔಟಾದ ನಂತರ ಮತ್ತೊಬ್ಬ ಬ್ಯಾಟರ್ ಕ್ರೀಸ್‌ಗೆ ಬರಲು ಎರಡು ನಿಮಿಷಗಳ ಕಾಲಾವಕಾಶವಿದೆ. ಆದರೆ, ಬ್ಯಾಟರ್‌ಗಳು ಈಗಾಗಲೇ ಡಗೌಟ್‌ನಲ್ಲಿ ಸಿದ್ಧವಾಗಿ ಕುಳಿತಿರುವುದರಿಂದ, ಈ ಸಮಯವನ್ನು ಒಂದು ನಿಮಿಷಕ್ಕೆ ಇಳಿಸಬೇಕು ಎಂದು ಗವಾಸ್ಕರ್ ಸಲಹೆ ನೀಡಿದ್ದಾರೆ.

ದಂಡದ ಬದಲಿಗೆ ‘ಪೆನಾಲ್ಟಿ ರನ್’ ಶಿಕ್ಷೆ: ಸ್ಲೋ ಓವರ್ ರೇಟ್ ಅಥವಾ ಪಂದ್ಯ ವಿಳಂಬವಾದರೆ ಪ್ರಸ್ತುತ ಪಂದ್ಯದ ಶುಲ್ಕದಲ್ಲಿ ದಂಡ ವಿಧಿಸಲಾಗುತ್ತದೆ. ಆದರೆ ಫ್ರಾಂಚೈಸಿಗಳೇ ಈ ದಂಡವನ್ನು ಪಾವತಿಸುವುದರಿಂದ ಆಟಗಾರರ ಮೇಲೆ ಇದು ಯಾವುದೇ ಪರಿಣಾಮ ಬೀರುತ್ತಿಲ್ಲ. ಇದರ ಬದಲಿಗೆ ಪಂದ್ಯದ ಸಮಯದಲ್ಲಿ ಪೆನಾಲ್ಟಿ ರನ್ ನೀಡುವುದು ಅಥವಾ ಅಂಕ ಪಟ್ಟಿಯಲ್ಲಿ ಅಂಕಗಳನ್ನು ಕಡಿತಗೊಳಿಸುವ ನಿಯಮ ತಂದರೆ ಮಾತ್ರ ಆಟಗಾರರು ಮತ್ತು ತಂಡಗಳು ಗಂಭೀರವಾಗಿ ವರ್ತಿಸುತ್ತಾರೆ ಎಂದು ಗವಾಸ್ಕರ್ ತಿಳಿಸಿದ್ದಾರೆ.

ಮೈದಾನದ ಪವಿತ್ರತೆ ಕಾಪಾಡಿ: ಲೆಜೆಂಡರಿ ಕಾಮೆಂಟೇಟರ್ ರಿಚಿ ಬೆನೊ ಅವರ ಮಾತನ್ನು ನೆನಪಿಸಿರುವ ಸುನಿಲ್ ಗವಾಸ್ಕರ್, “ಕ್ರಿಕೆಟ್ ಮೈದಾನವು ಅತ್ಯಂತ ಪವಿತ್ರವಾದ ಸ್ಥಳ. ಅಲ್ಲಿ ಆಡುವವರು ಮತ್ತು ಅಂಪೈರ್‌ಗಳನ್ನು ಹೊರತುಪಡಿಸಿ ಅನಗತ್ಯವಾಗಿ ಉಳಿದವರು ಪ್ರವೇಶಿಸಬಾರದು”. ಹೀಗಾಗಿ ಅನಗತ್ಯವಾಗಿ ಆಟಗಾರರು ಹಾಗೂ ಇತರೆ ಸಿಬ್ಬಂದಿಗಳು ಮೈದಾನ ಪ್ರವೇಶಿಸುವುದಕ್ಕೆ ಕಡಿವಾಣ ಹಾಕಬೇಕೆಂದು ಸುನಿಲ್ ಗವಾಸ್ಕರ್ ಆಗ್ರಹಿಸಿದ್ದಾರೆ.

ಈ ಸಲಹೆಗಳಿಗೆ ಕಾರಣವೇನು?

ಇತ್ತೀಚಿಗೆ ನಡೆದ ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ನಡುವಿನ ಪಂದ್ಯವು ಯಾವುದೇ ಸೂಪರ್ ಓವರ್ ಇಲ್ಲದಿದ್ದರೂ 4 ಗಂಟೆ 22 ನಿಮಿಷಗಳ ಕಾಲ ನಡೆದಿತ್ತು. ಡಿಆರ್‌ಎಸ್ ಮೇಲ್ಮನವಿಗಳು, ಓವರ್‌ಗಳ ನಡುವಿನ ಚರ್ಚೆಗಳು ಮತ್ತು ಪದೇ ಪದೇ ಮೈದಾನಕ್ಕೆ ಬರುವ ಮೀಸಲು ಆಟಗಾರರು ಪಂದ್ಯದ ಅವಧಿಯನ್ನು ಹೆಚ್ಚಿಸುತ್ತಿದ್ದಾರೆ ಎಂಬ ಆರೋಪ ಈ ಪಂದ್ಯದ ಬಳಿಕ ಕೇಳಿ ಬಂದಿತ್ತು. ಇದಾದ ಬಳಿಕ ಕೂಡ ಕೆಲ ಪಂದ್ಯಗಳು ನಿಗದಿತ ಸಮಯ ಮೀರಿತ್ತು. ಹೀಗಾಗಿಯೇ ಸುನಿಲ್ ಗವಾಸ್ಕರ್ ಐಪಿಎಲ್​ನಲ್ಲಿ ಕಟ್ಟು ನಿಟ್ಟಿನ ನಿಯಮ ಜಾರಿಗೊಳಿಸುವಂತೆ ಸೂಚಿಸಿದ್ದಾರೆ.

ಇದನ್ನೂ ಓದಿ: ಸೋಲಿನ ನಡುವೆಯೂ RCBಯ ಕಾಲೆಳೆದ ಡೆಲ್ಲಿ ಕ್ಯಾಪಿಟಲ್ಸ್ ಫ್ಯಾನ್ಸ್​!

ಬಿಸಿಸಿಐ ಕ್ರಮ ಕೈಗೊಳ್ಳುವುದೇ?

ಈಗಾಗಲೇ ಬಿಸಿಸಿಐ ಕೆಲವು ಶಿಸ್ತಿನ ಕ್ರಮಗಳನ್ನು ಕೈಗೊಂಡಿದೆಯಾದರೂ, ಸುನಿಲ್ ಗವಾಸ್ಕರ್ ಸೂಚಿಸಿರುವಂತೆ ಪೆನಾಲ್ಟಿ ರನ್‌ಗಳಂತಹ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಅಲ್ಲದೆ ಪಂದ್ಯಗಳು ರಾತ್ರಿ 11:30 ಅಥವಾ 12 ಗಂಟೆಯವರೆಗೆ ಸಾಗುವುದರಿಂದ ಕ್ರೀಡಾಂಗಣಕ್ಕೆ ಬರುವ ಅಭಿಮಾನಿಗಳೂ ಕೂಡ ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನೂ ಕೂಡ ಬಿಸಿಸಿಐ ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಇದೆ.

Source link

ಡಿಕೆಶಿ ಬಣಕ್ಕೆ ಮೇ ಕ್ರಾಂತಿ ಕನಸು: ದೆಹಲಿಯಲ್ಲಿ ಸಿದ್ದರಾಮಯ್ಯ ಬಣ ಅಹಿಂದ ಕಾರ್ಡ್​ ಪ್ಲೇ! – Kannada News | Karnataka Leadership Row: Siddaramaiah’s AHINDA Strategy in Delhi Amid DK Shivakumar Camp’s ‘May Revolution’ Hopes

ಬೆಂಗಳೂರು, ಏಪ್ರಿಲ್ 29: ಕರ್ನಾಟಕ ಕಾಂಗ್ರೆಸ್ ರಾಜಕಾರಣದಲ್ಲಿ ಮುಖ್ಯಮಂತ್ರಿ ಸ್ಥಾನದ ಕುರಿತಾದ ಗೊಂದಲಗಳು ಮತ್ತೆ ತಾರಕಕ್ಕೇರಿವೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಬಣಗಳ ನಡುವೆ ಅಧಿಕಾರಕ್ಕಾಗಿ ಪೈಪೋಟಿ ಜೋರಾಗಿದೆ. ಸಿದ್ದರಾಮಯ್ಯ ಬಣದಿಂದ ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ಹೆಚ್.ಸಿ. ಮಹದೇವಪ್ಪ ದೆಹಲಿಗೆ ತೆರಳಿ ಹೈಕಮಾಂಡ್‌ ಎದುರು ಅಹಿಂದ ಕಾರ್ಡ್‌ ಅಸ್ತ್ರ ಪ್ರಯೋಗಿಸಿದ್ದಾರೆ. ದಲಿತ ಮುಖ್ಯಮಂತ್ರಿ ಹುದ್ದೆಯ ಬೇಡಿಕೆಯನ್ನೂ ಇವರು ಮುಂದಿಟ್ಟಿದ್ದಾರೆ. ಮತ್ತೊಂದೆಡೆ, ಡಿಕೆ ಶಿವಕುಮಾರ್ ಬಣ ಮೇ ತಿಂಗಳಲ್ಲಿ ಮುಖ್ಯಮಂತ್ರಿ ಬದಲಾವಣೆಯ ಶುಭಸುದ್ದಿಯ ನಿರೀಕ್ಷೆಯಲ್ಲಿದೆ.

ಸಿದ್ದರಾಮಯ್ಯ ಮೌನದಿಂದ ಆತಂಕಗೊಂಡಿರುವ ಅಹಿಂದ ನಾಯಕರು ತಮ್ಮ ರಾಜಕೀಯ ಭವಿಷ್ಯ ಮತ್ತು ಸ್ಥಾನಮಾನಗಳ ಬಗ್ಗೆ ಸ್ಪಷ್ಟತೆ ಪಡೆಯಲು ದೆಹಲಿಗೆ ಧಾವಿಸಿದ್ದಾರೆ. ಅಹಿಂದ ಹೋರಾಟ ಆರಂಭವಾಗಿ 25 ವರ್ಷಗಳು ಕಳೆದಿರುವ ಹಿನ್ನೆಲೆಯಲ್ಲಿ, ಅಹಿಂದ ನಾಯಕರನ್ನು ಬಿಟ್ಟು ಯಾವುದೇ ನಿರ್ಣಯ ತೆಗೆದುಕೊಳ್ಳುವುದು ಸಾಧ್ಯವಿಲ್ಲ ಎಂದು ಸತೀಶ್ ಜಾರಕಿಹೊಳಿ ಮತ್ತು ಮಹದೇವಪ್ಪ ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಏತನ್ಮಧ್ಯೆ, ಕಾಂಗ್ರೆಸ್ ಹಿರಿಯ ನಾಯಕ ರಾಜಣ್ಣ, ಸಿದ್ದರಾಮಯ್ಯ ನಂತರ ದಲಿತ ಮುಖ್ಯಮಂತ್ರಿ ಕೂಗಿಗೆ ತಾವು ಬದ್ಧವಾಗಿರುವುದಾಗಿ ಹೇಳಿದ್ದಾರೆ. ಹೈಕಮಾಂಡ್ ನಿರ್ದೇಶನಕ್ಕೆ ಸಿದ್ದರಾಮಯ್ಯ ಬದ್ಧರಾಗಿದ್ದು, ಅಧಿಕಾರ ತ್ಯಾಗ ಮಾಡಲೂ ಸಿದ್ಧರಿದ್ದಾರೆ ಎಂದು ರಾಜಣ್ಣ ತಿಳಿಸಿದ್ದಾರೆ. ಒಟ್ಟಾರೆ, ಮೇ ತಿಂಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುವ ನಿರೀಕ್ಷೆಗಳಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾನೇನು ಹೀರೋಯಿನ್​ ಆಗಿ ನಟಿಸ್ತಿದೀನಾ? ಕೆಣಕಲು ಬಂದವರಿಗೆ ಅಭಿಷೇಕ್ ಬಚ್ಚನ್ ಖಡಕ್ ತಿರುಗೇಟು – Kannada News | Abhishek Bachchan’s Viral Reply to Trolls: Am I a Heroine? Strong Response on Solo Lead Roles

ಅಭಿಷೇಕ್ ಬಚ್ಚನ್ ಅವರನ್ನು ಎಲ್ಲರೂ ಆಡಿಕೊಳ್ಳುತ್ತಾರೆ. ಇದಕ್ಕೆ ಕಾರಣ ಅವರ ತಂದೆ ಅಮಿತಾಭ್ ಬಚ್ಚನ್ ಅವರ ಲೆಗಸಿ. ಅಷ್ಟು ದೊಡ್ಡ ಸ್ಟಾರ್ ಹೀರೋನ ಮಗನಾದರೂ ಅಭಿಷೇಕ್ ಅವರಿಗೆ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ, ಅವಕಾಶ ಸಿಕ್ಕಾಗಲೆಲ್ಲ ಅವರನ್ನು ಟ್ರೋಲ್ ಮಾಡುವ ಕೆಲಸ ಆಗುತ್ತಿದೆ. ಹೀಗಿರುವಾಗಲೇ ಅಭಿಷೇಕ್ ಬಚ್ಚನ್ ಅವರ ಈ ಹಿಂದಿನ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಕೆಣಕಲು ಬಂದವರಿಗೆ ಅವರು ಖಡಕ್ ಆಗಿ ಉತ್ತರ ನೀಡಿದ್ದಾರೆ.

ಅಭಿಷೇಕ್ ಬಚ್ಚನ್ ಚಿತ್ರರಂಗಕ್ಕೆ ಬಂದು ಹಲವು ವರ್ಷಗಳು ಕಳೆದಿವೆ. ಅವರು ‘ಗುರು’ ರೀತಿಯ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆದರೆ, ಇತ್ತೀಚೆಗೆ ಅವರು ಸಿನಿಮಾ ರಂಗದಲ್ಲಿ ಹೆಚ್ಚು ಸಕ್ರಿಯವಾಲ್ಲ. ಅವರು ನಟಿಸುತ್ತಿರುವ ಬಹುತೇಕ ಸಿನಿಮಾಗಳು ಮಲ್ಟಿ ಸ್ಟಾರರ್​ ಚಿತ್ರಗಳು. ಹೀಗಾಗಿ, ಸುದ್ದಿಗೋಷ್ಠಿ ಒಂದರಲ್ಲಿ ಅವರಿಗೆ ಪ್ರಶ್ನೆ ಒಂದು ಎದುರಾಯಿತು.

ಅಭಿಷೇಕ್ ಬಚ್ಚನ್ ಇದ್ದ ವೇದಿಕೆ ಮೇಲೆ ಅಕ್ಷಯ್ ಕುಮಾರ್, ರಿತೇಷ್ ದೇಶ್​​ಮುಖ್ ಮೊದಲಾದವರು ಇದ್ದರು. ಆಗ ರಿಪೋರ್ಟರ್, ‘ನೀವು ಸೋಲೋ ಹೀರೋ ಆಗಿ ಕಾಣಿಸಿಕೊಳ್ಳೋದು ಯಾವಾಗ’ ಎಂದು ಕೇಳಿದರು. ಪ್ರಶ್ನೆ ಅರ್ಥವಾದರೂ ಅಭಿಷೇಕ್ ಬಚ್ಚನ್ ಪ್ರಶ್ನೆ ಅರ್ಥವಾಗಿಲ್ಲ ಎಂದರು. ‘ಮೇಲ್ (ಪುರುಷ) ಲೀಡ್ ಆಗಿ ಕಾಣಿಸಿಕೊಳ್ಳೋದು ಯಾವಾಗ’ ಎಂದು ಕೇಳಿದರು. ಇದು ಅಭಿಷೇಕ್ ಕೋಪ ಹೆಚ್ಚಿಸಿತು. ‘ನಾನೇನು ಈಗ ಹೀರೋಯಿನ್ ಆಗಿ ನಟಿಸುತ್ತಿದ್ದೇನಾ’ ಎಂದು ನೇರವಾಗಿ ಕೇಳಿದರು.

ಇದನ್ನೂ ಓದಿ: ಮಲಗುವ ಮುನ್ನ ಐಶ್ವರ್ಯಾಗೆ ಮೂರು ಬಾರಿ ಕ್ಷಮೆ ಕೇಳುತ್ತಾರೆ ಅಭಿಷೇಕ್ ಬಚ್ಚನ್

‘ನೀವು ಯಾವ ಅರ್ಥದಲ್ಲಿ ಕೇಳುತ್ತಿದ್ದೀರಿ ಅನ್ನೋದು ನನಗೆ ಗೊತ್ತಾಯ್ತು’ ಎಂದು ಅಭಿಷೇಕ್ ಹೇಳಿದರು. ಇದು ಅವರನ್ನು ಟ್ರೋಲ್ ಮಾಡುವ ರೀತಿಯಲ್ಲಿ ಇತ್ತು. ಇದನ್ನು ಅರಿತುಕೊಂಡ ಅಭಿಷೇಕ್ ಖಡಕ್ ಆಗಿ ಪ್ರತಿಕ್ರಿಯಿಸಿದರು. ಆ ಬಳಿಕ ವರದಿಗಾರ ಕೂಡ ಸೈಲೆಂಟ್ ಆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 9:00 am, Wed, 29 April 26

Source link

ಹಾಸನದಲ್ಲಿ ಹಲವು ಅವಾಂತರ ಸೃಷ್ಟಿಸಿದ ಬೇಸಿಗೆ ಮಳೆ: ಧರೆಗುರುಳಿದ ವಿದ್ಯುತ್​ ಕಂಬ, ಮರಗಳು

ಹಾಸನ, ಏಪ್ರಿಲ್ 29: ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಜಿ.ಅಂಕನಹಳ್ಳಿಯಲ್ಲಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ವ್ಯಾಪಕ ಹಾನಿ ಸಂಭವಿಸಿದೆ. ಬೇಸಿಗೆ ಮಳೆಯ ತೀವ್ರತೆಗೆ ಹಲವು ವಿದ್ಯುತ್ ಕಂಬಗಳು ಮತ್ತು ಮರಗಳು ಧರೆಗುರುಳಿವೆ. ಈ ಘಟನೆಯಿಂದಾಗಿ ಜಿ.ಅಂಕನಹಳ್ಳಿ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯ ಆರ್ಭಟಕ್ಕೆ ರಸ್ತೆಗೆ ಅಡ್ಡಲಾಗಿ ಬಿದ್ದ ಮರದ ಕೊಂಬೆಗಳಿಂದ ಸಂಚಾರಕ್ಕೆ ಅಡ್ಡಿಯಾಗಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಗ್ರಾಮ ಪಂಚಾಯತ್ ಸಿಬ್ಬಂದಿ ರಸ್ತೆ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಬಿದ್ದ ಮರದ ಕೊಂಬೆಗಳನ್ನು ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕು ಸೇರಿ ಹಲವೆಡೆ ಭಾರಿ ಮಳೆ ಮುಂದುವರಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

International Dance Day 2026: ಅಂತಾರಾಷ್ಟ್ರೀಯ ನೃತ್ಯ ದಿನದ ಆಚರಣೆ ಹೇಗೆ ಪ್ರಾರಂಭವಾಯಿತು? – Kannada News | International Dance Day 2026: How did the celebration of International Dance Day begin?

ಅಂತಾರಾಷ್ಟ್ರೀಯ ನೃತ್ಯ ದಿನImage Credit source: Getty Images

ನೃತ್ಯವು (Dance) ಒಬ್ಬ ವ್ಯಕ್ತಿಯು ತನ್ನ ಆಂತರಿಕತೆಯನ್ನು ಅನ್ವೇಷಿಸಲು ಅನುವು ಮಾಡಿಕೊಡುವ, ಭಾವನೆಯನ್ನು ವ್ಯಕ್ತಪಡಿಸುವ ಒಂದು ಕಲಾ ಪ್ರಕಾರವಾಗಿದೆ. ಈ ನೃತ್ಯ ಕಲೆ ಮನೋರಂಜನೆಯನ್ನು ನೀಡುವುದು, ಭಾವನೆಯನ್ನು ವ್ಯಕ್ತಪಡಿಸುವುದು, ಸಂಸ್ಕೃತಿಯನ್ನು ಪ್ರತಿನಿಧಿಸುವುದು ಮಾತ್ರವಲ್ಲದೆ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಉತ್ತೇಜಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ನೃತ್ಯದ ವೈವಿಧ್ಯತೆಯನ್ನು ಗುರುತಿಸಲು ಮತ್ತು ಈ ಕಲಾ ಪ್ರಕಾರವನ್ನು ಗೌರವಿಸಲು ಪ್ರತಿವರ್ಷ ಏಪ್ರಿಲ್‌ 29 ರಂದು ಅಂತರರಾಷ್ಟ್ರೀಯ ನೃತ್ಯ ದಿನವನ್ನು ಆಚರಿಸಲಾಗುತ್ತದೆ.  ಈ ದಿನದ ಆಚರಣೆ ಹೇಗೆ ಪ್ರಾರಂಭವಾಯಿತು, ಇದರ ಮಹತ್ವವೇನು ಎಂಬುದನ್ನು ತಿಳಿಯೋಣ ಬನ್ನಿ.

ಅಂತಾರಾಷ್ಟ್ರೀಯ ನೃತ್ಯ ದಿನದ ಇತಿಹಾಸವೇನು?

ಅಂತಾರಾಷ್ಟ್ರೀಯ ನೃತ್ಯ ದಿನಾಚರಣೆಯನ್ನು 1982 ರಲ್ಲಿ ಅಂತಾರಾಷ್ಟ್ರೀಯ ರಂಗಭೂಮಿ ಸಂಸ್ಥೆಯ (ಐಟಿಐ) ಅಂತಾರಾಷ್ಟ್ರೀಯ ನೃತ್ಯ ಸಮಿತಿಯು ಪ್ರಾರಂಭಿಸಿತು. ಐಟಿಐ ಒಂದು ಸರ್ಕಾರೇತರ ಸಂಸ್ಥೆಯಾಗಿದ್ದು, ಇದು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ)ಯ ಭಾಗವಾಗಿದೆ. ಅಂತಾರಾಷ್ಟ್ರೀಯ ನೃತ್ಯ ದಿನವನ್ನು ನೃತ್ಯ ಮಾಂತ್ರಿಕ ಜೀನ್ ಜಾರ್ಜಸ್ ನೊವೆರೆ ಅವರಿಗಾಗಿ ಸಮರ್ಪಿಸಲಾಗಿದೆ. ಜಾರ್ಜಸ್ ನೊವೆರೆ ಒಬ್ಬ ಪ್ರಸಿದ್ಧ ಬ್ಯಾಲೆ ಮಾಸ್ಟರ್ ಆಗಿದ್ದರು, ಅವರನ್ನು ಬ್ಯಾಲೆಯ ಪಿತಾಮಹ ಎಂದೂ ಕರೆಯುತ್ತಾರೆ. ಈ ಡ್ಯಾನ್ಸ್‌ ಮಾಂತ್ರಿಕನ ಜನ್ಮ ದಿನದ ಸವಿ ನೆನಪಿಗಾಗಿ 1982 ರಲ್ಲಿ, ಐಟಿಐನ ನೃತ್ಯ ಸಮಿತಿಯು ಜಾರ್ಜಸ್ ನೊವೆರ್ರೆ ಅವರ ಜನ್ಮದಿನವಾದ ಏಪ್ರಿಲ್ 29 ರಂದು ಅಂತಾರಾಷ್ಟ್ರೀಯ ನೃತ್ಯ ದಿನವನ್ನು ಆಚರಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಿತು. ಆ ಬಳಿಕ ಪ್ರತಿ ವರ್ಷ ಈ ವಿಶೇಷ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ಇದನ್ನೂ ಓದಿ: ಮೇ ತಿಂಗಳ ಪ್ರಮುಖ ರಾಷ್ಟ್ರೀಯ-ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ

ಅಂತಾರಾಷ್ಟ್ರೀಯ ನೃತ್ಯ ದಿನದ ಮಹತ್ವವೇನು?

  • ಅಂತಾರಾಷ್ಟ್ರೀಯ ನೃತ್ಯ ದಿನವು ನೃತ್ಯ ಕಲೆಯ ಮಹತ್ವವನ್ನು ಆಚರಿಸುವ ಮತ್ತು ಬೆಂಬಲಿಸುವ ಮಹತ್ವದ ದಿನವಾಗಿದೆ. ಈ ದಿನವು ಕಲೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುತ್ತದೆ. ಅಲ್ಲದೆ  ಇದು ಹಲವಾರು ಪ್ರಕಾರದ ನೃತ್ಯ ಪ್ರಕಾರಗಳು ಹಾಗೂ ನೃತ್ಯ ಕಲೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ.
  • ಪ್ರತಿ ವರ್ಷ ಏಪ್ರಿಲ್ 29 ರಂದು, ನೃತ್ಯ ಕಲೆಯನ್ನು ಬೆಂಬಲಿಸಲು ಮತ್ತು ಉತ್ತೇಜಿಸಲು ಪ್ರಪಂಚದಾದ್ಯಂತ ಅಂತಾರಾಷ್ಟ್ರೀಯ ನೃತ್ಯ ದಿನವನ್ನು ಆಚರಿಸಲಾಗುತ್ತದೆ.
  • ನೃತ್ಯ ಕಲೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಜನರಿಗೆ ನೃತ್ಯ ಕಲೆಯ ಮಹತ್ವವನ್ನು ಅರ್ಥಮಾಡಿಕೊಳ್ಳಲು ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಈ ದಿನದಂದು, ನೃತ್ಯ ಕಲೆಯನ್ನು ವೈಭವೀಕರಿಸುವ ವಿವಿಧ ನೃತ್ಯ ಸಂಬಂಧಿತ ಕಾರ್ಯಕ್ರಮಗಳು ಮತ್ತು ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಅಷ್ಟೇ ಅಲ್ಲದೆ ನೃತ್ಯಗಾರರನ್ನು ಗೌರವಿಸುವುದ ಜೊತೆಗೆ ನೃತ್ಯದ ಪ್ರಯೋಜನಗಳ ಬಗ್ಗೆ ಜನರಿಗೆ ತಿಳಿಸಲು ಈ ವಿಶೇಷ ದಿನವನ್ನು ಆಚರಿಸಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಂದ್ಯದ ನಡುವೆ ರಿಯಾನ್ ಪರಾಗ್ ‘ಧಮ್ ಮಾರೋ ಧಮ್: ಜೈಲು ಶಿಕ್ಷೆಯ ಭೀತಿ..! – Kannada News | IPL 2026: Riyan Parag Triggers Massive Controversy Over Vaping Incident

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ 19ನೇ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿ ಪರಾಗ್ ‘ವೇಪಿಂಗ್’ (E-Cigarette) ಸೇದುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದರ ಬೆನ್ನಲ್ಲೇ ಐಪಿಎಲ್​ ನಿಯಮಗಳ ಬಗ್ಗೆ ಪ್ರಶ್ನೆಗಳೆದ್ದಿವೆ.

ಏಪ್ರಿಲ್ 28ರಂದು ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಿಯಾನ್ ಪರಾಗ್ 16 ಎಸೆತಗಳಲ್ಲಿ 29 ರನ್ ಗಳಿಸಿ ಔಟಾದರು. ಅವರು ಪೆವಿಲಿಯನ್‌ಗೆ ಮರಳಿದ ನಂತರ, ಎರಡನೇ ಇನಿಂಗ್ಸ್‌ನ 16ನೇ ಓವರ್ ನಡೆಯುತ್ತಿದ್ದಾಗ ಬ್ರಾಡ್‌ಕಾಸ್ಟ್ ಕ್ಯಾಮೆರಾ ಡ್ರೆಸ್ಸಿಂಗ್ ರೂಮ್‌ನತ್ತ ತಿರುಗಿತು. ಈ ವೇಳೆ ಪರಾಗ್ ಎಲೆಕ್ಟ್ರಾನಿಕ್ ಸಿಗರೇಟ್ ಅಥವಾ ವೇಪ್ ಬಳಸುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಈ ದೃಶ್ಯದ ತುಣುಕುಗಳು ಇದೀಗ ವೈರಲ್ ಆಗಿವೆ.

ನಿಯಮಗಳ ಉಲ್ಲಂಘನೆ:

ರಿಯಾನ್ ಪರಾಗ್ ಅವರ ಈ ನಡೆಯು ಹಲವು ಕಾನೂನು ಮತ್ತು ಕ್ರೀಡಾ ನಿಯಮಗಳ ಉಲ್ಲಂಘನೆ ಎನ್ನಬಹುದು. ಏಕೆಂದರೆ ಭಾರತದಲ್ಲಿ ಇ-ಸಿಗರೇಟ್​ ಬಳಕೆಯನ್ನು ನಿಷೇಧಿಸಲಾಗಿದೆ. ಅಲ್ಲದೆ ಇದು ಬಿಸಿಸಿಐನ ಶಿಷ್ಟಾಚಾರದ ಉಲ್ಲಂಘನೆ ಕೂಡ ಹೌದು. ಹಾಗಿದ್ರೆ ರಿಯಾನ್ ಪರಾಗ್ ಉಲ್ಲಂಘಿಸಿರುವ ನಿಯಮಗಳಾವುವು ಎಂದು ನೋಡುವುದಾದರೆ…

  • ಭಾರತೀಯ ಕಾನೂನು: ಭಾರತದಲ್ಲಿ 2019 ರಿಂದಲೇ ಇ-ಸಿಗರೇಟ್ ಮತ್ತು ವೇಪ್‌ಗಳ ಬಳಕೆ ಹಾಗೂ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
  • ಬಿಸಿಸಿಐ ಶಿಷ್ಟಾಚಾರ: ಕ್ರೀಡಾಂಗಣದ ಆವರಣದಲ್ಲಿ ಮತ್ತು ವಿಶೇಷವಾಗಿ ಡ್ರೆಸ್ಸಿಂಗ್ ರೂಮ್‌ನಲ್ಲಿ ಧೂಮಪಾನ ಮಾಡುವುದು ಕಟ್ಟುನಿಟ್ಟಾದ ಶಿಸ್ತು ಉಲ್ಲಂಘನೆಯಾಗಿದೆ.
  • ಯುವ ಪೀಳಿಗೆಗೆ ತಪ್ಪು ಸಂದೇಶ: ಲಕ್ಷಾಂತರ ಯುವ ಅಭಿಮಾನಿಗಳು ವೀಕ್ಷಿಸುವ ಐಪಿಎಲ್‌ನಲ್ಲಿ ತಂಡದ ನಾಯಕನೇ ಇಂತಹ ಕೆಲಸ ಮಾಡುವುದು ಬೇಜವಾಬ್ದಾರಿತನ. ಐಪಿಎಲ್ ವೇಳೆ​ ಆಟಗಾರರು ತಪ್ಪು ಸಂದೇಶ ನೀಡುವಂತಹ ಯಾವುದೇ ಚಟುವಟಿಕೆಗಳಲ್ಲಿ ಭಾಗಿಯಾಗಬಾರದೆಂಬ ನಿಯಮವಿದೆ.

ಪರಾಗ್ ಮೇಲೆ ಶಿಸ್ತು ಕ್ರಮ?

ಈಗಾಗಲೇ ಕಳಪೆ ಫಾರ್ಮ್‌ನಿಂದಾಗಿ ಟೀಕೆಗೆ ಗುರಿಯಾಗಿರುವ ರಿಯಾನ್ ಪರಾಗ್ ಅವರಿಗೆ ಈ ಘಟನೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಐಪಿಎಲ್ ಆಡಳಿತ ಮಂಡಳಿ ಅಥವಾ ಬಿಸಿಸಿಐ ಈ ಬಗ್ಗೆ ಅಧಿಕೃತ ತನಿಖೆ ನಡೆಸಿ ದಂಡ ಅಥವಾ ಪಂದ್ಯದಿಂದ ನಿಷೇಧ ಹೇರುವ ಸಾಧ್ಯತೆಯಿದೆ.

ಸಂಜು ಸ್ಯಾಮ್ಸನ್ ಬದಲಿಗೆ ನಾಯಕತ್ವ ವಹಿಸಿಕೊಂಡಿದ್ದ ಪರಾಗ್, ಈ ಸೀಸನ್‌ನಲ್ಲಿ ಬ್ಯಾಟಿಂಗ್‌ನಲ್ಲಿ ವಿಫಲರಾಗಿದ್ದಾರೆ. ತಂಡ ಪಂದ್ಯವನ್ನು ಗೆದ್ದಿದ್ದರೂ, ನಾಯಕನ ಈ ವರ್ತನೆಯು ರಾಜಸ್ಥಾನ್ ರಾಯಲ್ಸ್ ಮ್ಯಾನೇಜ್‌ಮೆಂಟ್‌ಗೆ ತಲೆನೋವಾಗಿ ಪರಿಣಮಿಸಿದೆ.

ಐಪಿಎಲ್ ನೀತಿ ಸಂಹಿತೆ ಮತ್ತು ಬಿಸಿಸಿಐನ ಆರೋಗ್ಯ ಮತ್ತು ಸುರಕ್ಷತಾ ಶಿಷ್ಟಾಚಾರಗಳ ಅಡಿಯಲ್ಲಿ ಪರಾಗ್ ಅವರ ಮೇಲೆ ಈ ಕೆಳಗಿನ ಕ್ರಮಗಳನ್ನು ಜರುಗಿಸಬಹುದು:

  • ದಂಡ: ಪಂದ್ಯದ ಶುಲ್ಕದಲ್ಲಿ ಶೇಕಡಾವಾರು ಕಡಿತ ಅಥವಾ ಭಾರಿ ಮೊತ್ತದ ದಂಡ ವಿಧಿಸಬಹುದು. ಉದಾಹರಣೆಗೆ, ಈ ಹಿಂದಿನ ಕೆಲವು ಶಿಸ್ತು ಉಲ್ಲಂಘನೆಗಳಿಗೆ ಆಟಗಾರರಿಗೆ ಲಕ್ಷಾಂತರ ರೂಪಾಯಿ ದಂಡ ವಿಧಿಸಲಾಗಿದೆ.
  • ಪಂದ್ಯದಿಂದ ನಿಷೇಧ: ಇದು ಗಂಭೀರ ಸ್ವರೂಪದ ಶಿಸ್ತು ಉಲ್ಲಂಘನೆ ಎಂದು ಪರಿಗಣಿಸಲ್ಪಟ್ಟರೆ, ಪರಾಗ್ ಅವರನ್ನು 1 ರಿಂದ 2 ಪಂದ್ಯಗಳ ಕಾಲ ನಿಷೇಧಿಸುವ ಸಾಧ್ಯತೆಯೂ ಇದೆ.
  • ಅಧಿಕೃತ ಎಚ್ಚರಿಕೆ: ಮೊದಲ ಬಾರಿಯ ಅಪರಾಧವೆಂದು ಪರಿಗಣಿಸಿ ಬಿಸಿಸಿಐ ಅವರಿಗೆ ಅಧಿಕೃತ ಎಚ್ಚರಿಕೆ ಪತ್ರವನ್ನು ನೀಡಬಹುದು.
  • ನಾಯಕತ್ವದ ಮೇಲೆ ಪ್ರಭಾವ: ತಂಡದ ನಾಯಕನಾಗಿ ಇಂತಹ ವರ್ತನೆ ತೋರಿರುವುದರಿಂದ, ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯು ತನ್ನ ಬ್ರ್ಯಾಂಡ್ ಮೌಲ್ಯ ಕಾಪಾಡಲು ಆಂತರಿಕವಾಗಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬಹುದು.

ಭಾರತೀಯ ಕಾನೂನಿನ ಅಡಿಯಲ್ಲಿ ಕ್ರಮಗಳು:

ಭಾರತದಲ್ಲಿ ಇ-ಸಿಗರೇಟ್ ಅಥವಾ ವೇಪ್‌ಗಳನ್ನು 2019ರ ‘ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ ಕಾಯ್ದೆ’ (PECA) ಅಡಿಯಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದರ ಅನ್ವಯ:

  • ಜೈಲು ಶಿಕ್ಷೆ: ಮೊದಲ ಬಾರಿಯ ಅಪರಾಧಕ್ಕೆ 1 ವರ್ಷದವರೆಗೆ ಜೈಲು ಶಿಕ್ಷೆ ಅನುಭವಿಸುವ ಸಾಧ್ಯತೆಯಿದೆ.
  •  ದಂಡ: ಕಾನೂನು ಉಲ್ಲಂಘನೆಗಾಗಿ ₹1 ಲಕ್ಷದವರೆಗೆ ದಂಡ ವಿಧಿಸಬಹುದು.
  • ಮರುಕಳಿಸಿದರೆ: ಎರಡನೇ ಬಾರಿ ಅಥವಾ ಪದೇ ಪದೇ ಇಂತಹ ಕೃತ್ಯವೆಸಗಿದರೆ 3 ವರ್ಷಗಳವರೆಗೆ ಜೈಲು ಮತ್ತು ₹5 ಲಕ್ಷದವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

ಪ್ರಸ್ತುತ ಬಿಸಿಸಿಐ ಈ ದೃಶ್ಯಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದು, ಶೀಘ್ರದಲ್ಲೇ ಅಧಿಕೃತ ಹೇಳಿಕೆ ಹೊರಬೀಳುವ ನಿರೀಕ್ಷೆಯಿದೆ.

Source link

Video: ಹುಷಾರಿಲ್ಲ ಅಂದ್ರೆ ಪ್ರೂಫ್ ಕೊಡು ಎಂದ ಅಧಿಕಾರಿ, ಐವಿ ಡ್ರಿಪ್​ ಹಾಕಿಸಿಕೊಂಡು ಕೆಲಸಕ್ಕೆ ಹಾಜರಾದ ಅಂಗನವಾಡಿ ಕಾರ್ಯಕರ್ತೆ – Kannada News | Bihar Worker Turns Up With IV Drip After Asked for Illness Proof

ಪಾಟ್ನಾ, ಏಪ್ರಿಲ್ 29: ಹುಷಾರಿಲ್ಲ ರಜೆ ಬೇಕು ಅಂದ್ರೆ ಅಧಿಕಾರಿ ಪ್ರೂಫ್ ಕೊಡು ಎಂದು ಕೇಳಿದ್ದಕ್ಕೆ ಅಂಗನವಾಡಿ ಕಾರ್ಯಕರ್ತೆ ಐವಿ ಡ್ರಿಪ್ ಹಾಕಿಸಿಕೊಂಡು ಆಸ್ಪತ್ರೆಗೆ ಹಾಜರಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ. ವೈರಲ್ ಆಗಿರುವ ಈ ವೀಡಿಯೊದಲ್ಲಿ, ಮಹಿಳೆ ಐವಿ ಡ್ರಿಪ್ ಹಾಕಿಸಿಕೊಂಡಿರುವುದು, ನಡುಗುತ್ತಾ ಪತಿಯ ಸಹಾಯದಿಂದ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಆಕೆ ಕೆಲಸಕ್ಕೆ ಬಾರದಿದ್ದಾಗ ಅಧಿಕಾರಿಯೊಬ್ಬರು ಕರೆ ಮಾಡಿದಾಗ ಆಕೆಗೆ ಅನಾರೋಗ್ಯ, ಕೆಲಸಕ್ಕೆ ಬರಲು ಸಾಧ್ಯವಿಲ್ಲ ಎಂದು ಪತಿ ಹೇಳಿದ್ದಾರೆ. ಆದರೆ ಅಷ್ಟಕ್ಕೆ ಸುಮ್ಮನಿರದ ಅಧಿಕಾರಿ ಪುರಾವೆ ಕೇಳಿದ್ದರು, ಹಾಗಾಗಿ ಮಹಿಳೆ ಐವಿ ಡ್ರಿಪ್ ಹಾಕಿಕೊಂಡೇ ಕೆಲಸಕ್ಕೆ ಹಾಜರಾಗಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮನೆ ಬಾಗಿಲು ಹಾಕಲು ಮರೆತು ಹೋದ ಯುವತಿ, ಪಾರ್ಸೆಲ್ ಡೆಲಿವರಿಗೆಂದು ಬಂದ ವ್ಯಕ್ತಿ ಮಾಡಿದ್ದೇನು? – Kannada News | Delivery Worker Steps Up, Guards Home After Spotting Open Door

ದಿವ್ಯಾ ಉನ್ನಿ ಯಾವುದೋ ಗಡಿಬಿಡಿಯಲ್ಲಿ ಮನೆಯ ಬಾಗಿಲು ಹಾಕದೆ ಹೊರಗೆ ಹೋಗಿದ್ದರು. ಅಮ್ಜದ್ ಮನೆಗೆ ಪಾರ್ಸೆಲ್ ಕೊಡಲು ಬಂದ ವ್ಯಕ್ತಿಯೊಬ್ಬರು ಬಾಗಿಲು ತೆರೆದಿದ್ದನ್ನು ನೋಡಿ ಮೊದಲು ಮಾಲೀಕರು ಮನೆಯೊಳಗಿದ್ದಾರೆ ಎಂದುಕೊಂಡರು. ಬಳಿಕ ಯಾರೂ ಇಲ್ಲವೆಂದು ಅರಿವಾಗಿತ್ತು. ಸಾಕಿದ ಬೆಕ್ಕು ಕೂಡ ಅಲ್ಲೇ ಇತ್ತು. ಬಳಿಕ ಪಾರ್ಸೆಲ್ ಅನ್ನು ಸುರಕ್ಷಿತವಾಗಿ ಮನೆಯ ಒಳಗೆ ಟೇಬಲ್ ಮೇಲಿರಿಸಿದ್ದಾರೆ.

ಮನೆಯೊಳಗೆ ಯಾರೂ ಇಲ್ಲದಿದ್ದರೂ ಬಾಗಿಲು ತೆರೆದಿದ್ದರೆ ಕಳ್ಳರ ಭಯ ಅಥವಾ ಸಾಕುಪ್ರಾಣಿಗಳು ಓಡಿಹೋಗುವ ಅಪಾಯವಿರುತ್ತದೆ ಎಂದು ಅರಿತ ಅಮ್ಜಾದ್, ಮೊದಲು ಪಾರ್ಸೆಲ್ ಅನ್ನು ಸುರಕ್ಷಿತವಾಗಿ ಮನೆಯೊಳಗಿನ ಮೇಜಿನ ಮೇಲೆ ಇಟ್ಟರು. ಬಳಿಕ ದಿವ್ಯಾ ಅವರಿಗೆ ಫೋನ್ ಮಾಡಿ ವಿಷಯ ತಿಳಿಸಿದರು. ಅಷ್ಟಕ್ಕೇ ಸುಮ್ಮನಾಗದ ಅವರು, ದಿವ್ಯಾ ಅವರು ಮನೆಗೆ ವಾಪಸ್ ಬರುವವರೆಗೂ ಬೇರೆಲ್ಲೂ ಹೋಗದೆ ದ್ವಾರದ ಬಳಿಯೇ ಕಾವಲು ನಿಂತರು.

ದಿವ್ಯಾ ಅವರು ಮನೆಗೆ ಬಂದಾಗ ಬಾಗಿಲ ಬಳಿ ಕಾವಲು ಕಾಯುತ್ತಿದ್ದ ಅಮ್ಜಾದ್ ಅವರ ಪ್ರಾಮಾಣಿಕತೆ ಕಂಡು ಭಾವುಕರಾದರು. ಈ ದೃಶ್ಯವನ್ನು ಅವರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ನನ್ನ ಬೆಕ್ಕು ಓಡಿಹೋಗದಂತೆ ಮನೆಯನ್ನು ಕಾಯುತ್ತಿದ್ದರು ಪ್ರಾಮಾಣಿಕತೆ ಕಂಡು ಖುಷಿಪಟ್ಟಿದ್ದಾರೆ. ಡೆಲಿವರಿ ಕಂಪನಿಗೆ ಅಮ್ಜಾದ್ ಅವರಿಗೆ ಹೆಚ್ಚಿನ ವೇತನ ನೀಡುವಂತೆ ಮನವಿ ಮಾಡಿದ್ದಾರೆ.

ಮತ್ತಷ್ಟು ಓದಿ: ವೈದ್ಯಕೀಯ ಉಪಕರಣಗಳ ಸಾಗಿಸುವ ಲಿಫ್ಟ್​​ನಲ್ಲಿ ತಲೆ ಸಿಲುಕಿ ಮಹಿಳಾ ಸಿಬ್ಬಂದಿ ಸಾವು

ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಅಮ್ಜಾದ್ ಅವರ ಮೇಲೆ ಪ್ರಶಂಸೆಯ ಮಳೆ ಸುರಿಸಿದ್ದಾರೆ. ನಿಜವಾದ ಹೀರೊ ಎಂದರೆ ಇವರೇ ಬೆಕ್ಕನ್ನು ಸಾಕಿರುವ ನನಗೆ ಆ ಭಯ ಎಂತಹುದು ಎಂದು ನನಗೆ ಗೊತ್ತು, ಅಮ್ಜಾದ್ ಅದ್ಭುತ ಕೆಲಸ ಮಾಡಿದ್ದಾರೆ ಎಂಬಂತಹ ಸಾವಿರಾರು ಕಾಮೆಂಟ್‌ಗಳು ಹರಿದುಬರುತ್ತಿವೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 7:50 am, Wed, 29 April 26

Source link

45ನೇ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ ಕಪೂರ್ ಕುಟುಂಬದ ಕುಡಿ – Kannada News | Neetu Kapoor’s ‘Daadi Ki Shaadi’: Riddhima Kapoor Sahni’s Bollywood Debut at 45

ನಟಿ ನೀತು ಕಪೂರ್  ನಟಿಸಿರುವ ‘ದಾದಿ ಕಿ ಶಾದಿ’ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇದರಲ್ಲಿ ಹಾಸ್ಯನಟ ಕಪಿಲ್ ಶರ್ಮಾ ಮತ್ತು ಸಾದಿಯಾ ಖತೀಬ್ ಕೂಡ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಕಪೂರ್ ಕುಟುಂಬದ ಮಗಳು ಕೂಡ ಇದರಲ್ಲಿ ಕಾಣಿಸಿಕೊಂಡಿದ್ದಾರೆ. ಅವರು 45 ನೇ ವಯಸ್ಸಿನಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಈ ಚಿತ್ರದಲ್ಲಿ ನೀತು ಕಪೂರ್ ‘ದಾದಿ’ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರ ನೀತು ಕಪೂರ್‌ಗೆ ತುಂಬಾ ವಿಶೇಷವಾಗಿದೆ. ಏಕೆಂದರೆ ಅವರ ಮಗಳು ರಿದ್ಧಿಮಾ ಕಪೂರ್ ಸಾಹ್ನಿ ಈ ಚಿತ್ರದಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

ರಿಷಿ ಕಪೂರ್ ಮತ್ತು ನೀತು ಕಪೂರ್ ಅವರ ಪುತ್ರಿ ಮತ್ತು ರಣಬೀರ್ ಕಪೂರ್ ಅವರ ಸಹೋದರಿ ರಿದ್ಧಿಮಾ ಕಪೂರ್ ಸಾಹ್ನಿ ಕಳೆದ ಹಲವಾರು ವರ್ಷಗಳಿಂದ ಫ್ಯಾಷನ್ ಡಿಸೈನಿಂಗ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಅವರ ಪತಿ ಭರತ್ ಸಾಹ್ನಿ ದೆಹಲಿಯ ಅತಿದೊಡ್ಡ ಉದ್ಯಮಿಗಳಲ್ಲಿ ಒಬ್ಬರು. ಅವರು ಸುಮಾರು 250 ಕೋಟಿ ರೂ. ಮೌಲ್ಯದ ಉಡುಪು ರಫ್ತು ವ್ಯವಹಾರವನ್ನು ಹೊಂದಿದ್ದಾರೆ. ಭರತ್ ಸಾಹ್ನಿ ಕಳೆದ ಎರಡು ದಶಕಗಳಿಂದ ಈ ವ್ಯವಹಾರದಲ್ಲಿ ಸಕ್ರಿಯರಾಗಿದ್ದಾರೆ ಮತ್ತು ಅವರ ಕಂಪನಿಯು ವಿದೇಶಗಳಲ್ಲಿ ಅನೇಕ ದೊಡ್ಡ ಬ್ರಾಂಡ್‌ಗಳಿಗೆ ಬಟ್ಟೆಗಳನ್ನು ಪೂರೈಸುತ್ತದೆ.

ರಿದ್ಧಿಮಾ ಕಪೂರ್ ಅವರನ್ನು ಮದುವೆಯಾದ ನಂತರವೂ, ಭರತ್ ಎಲ್ಲರಿಂದ ದೂರವಿರಲು ಬಯಸುತ್ತಾರೆ. ಅವರು ಬಾಲಿವುಡ್ ಪಾರ್ಟಿಗಳು ಅಥವಾ ಕಾರ್ಯಕ್ರಮಗಳಲ್ಲಿ ವಿರಳವಾಗಿ ಕಾಣಿಸಿಕೊಳ್ಳುತ್ತಾರೆ. ಅವರು ನೆಟ್‌ಫ್ಲಿಕ್ಸ್‌ನ ‘ಫ್ಯಾಬ್ಯುಲಸ್ ಲೈವ್ಸ್ ವರ್ಸಸ್ ಬಾಲಿವುಡ್ ವೈವ್ಸ್’ ಕಾರ್ಯಕ್ರಮದ ಮೂರನೇ ಸೀಸನ್‌ನಲ್ಲಿ ಕಾಣಿಸಿಕೊಂಡರು. ಇದರಲ್ಲಿ, ಅವರು ಅತ್ತೆ ನೀತು ಕಪೂರ್, ಪತ್ನಿ ರಿದ್ಧಿಮಾ ಮತ್ತು ಮಗಳು ಸಮೈರಾ ಅವರೊಂದಿಗೆ ಹಾಜರಿದ್ದರು. ಕಪೂರ್ ಕುಟುಂಬದ ದೀಪಾವಳಿ ಮತ್ತು ಹೊಸ ವರ್ಷದ ಪಾರ್ಟಿಗಳಲ್ಲಿ ಭರತ್ ಕೂಡ ಕಾಣಿಸಿಕೊಂಡಿದ್ದಾರೆ. ಭರತ್ ಅವರ ವೈಯಕ್ತಿಕ ಸಂಪತ್ತು ಸುಮಾರು 100 ಕೋಟಿ ರೂ. ಅವರು ದೆಹಲಿಯ ಐಷಾರಾಮಿ ಪ್ರದೇಶದಲ್ಲಿ ತಮ್ಮ ಪತ್ನಿ ರಿದ್ಧಿಮಾ ಮತ್ತು ಇಡೀ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ.

ಇದನ್ನೂ ಓದಿ:‘ನಾನು ಮತ್ತೊಂದು ಮದುವೆ ಆಗ್ತೀನಿ’; ರಣಬೀರ್ ಕಪೂರ್ ಹೇಳಿಕೆಗೆ ಟೀಕೆ 

ರಣಬೀರ್ ಕಪೂರ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರೂ, ರಿದ್ಧಿಮಾ ಎಂದಿಗೂ ಗ್ಲಾಮರ್ ಜಗತ್ತಿಗೆ ಕಾಲಿಡುವ ಬಗ್ಗೆ ಯೋಚಿಸಿರಲಿಲ್ಲ. ಈಗ 45 ನೇ ವಯಸ್ಸಿನಲ್ಲಿ, ಅವರಿಗೆ ‘ದಾದಿ ಕಿ ಶಾದಿ’ ಚಿತ್ರಕ್ಕೆ ಅವಕಾಶ ಬಂದಿದೆ. ಈ ಚಿತ್ರ ಮೇ 8 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಕಪಿಲ್ ಶರ್ಮಾ ನಿರ್ಮಿಸಿದ್ದಾರೆ ಮತ್ತು ಆಶಿಶ್ ಆರ್. ಮೋಹನ್ ನಿರ್ದೇಶಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version