ಭಾಗಲ್ಪುರ, ಏಪ್ರಿಲ್ 28: ಬಿಹಾರದ ಭಾಗಲ್ಪುರ ಜಿಲ್ಲೆಯಲ್ಲಿರುವ ಸುಲ್ತಾನಗಂಜ್ ಪುರಸಭೆ ಕಚೇರಿಯಲ್ಲಿ ಇಂದು ಹಗಲು ಹೊತ್ತಿನಲ್ಲಿಯೇ ಮನಬಂದಂತೆ ಗುಂಡು ಹಾರಿಸಿದ ಘಟನೆ ನಡೆದಿದೆ. ಈ ದಾಳಿಯಲ್ಲಿ ಪುರಸಭೆ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಭೂಷಣ್ ಕುಮಾರ್ ಸಾವನ್ನಪ್ಪಿದ್ದು, ಅಧ್ಯಕ್ಷ ರಾಜ್ಕುಮಾರ್ ಗುಡ್ಡು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಇಡೀ ಪ್ರದೇಶದಲ್ಲಿ ಆತಂಕ ಉಂಟುಮಾಡಿತು. ಬುಲೆಟ್ ಬೈಕ್ಗಳಲ್ಲಿ ಬಂದ ಐವರು ದಾಳಿಕೋರರು ಯಾವುದೇ ಮುನ್ಸೂಚನೆ ನೀಡದೆ ಗುಂಡು (firing) ಹಾರಿಸಿದರು. ಸಿಇಒ ಮತ್ತು ಅಧ್ಯಕ್ಷರ ಮೇಲೆ ಗುಂಡು ಹಾರಿಸಲಾಯಿತು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ಪ್ರಕರಣದ ತನಿಖೆಗಾಗಿ ಹಲವಾರು ತಂಡಗಳನ್ನು ರಚಿಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಏ.28: ರಾಜ್ಯದ ಅನೇಕ ಕಡೆ ಇಂದು (ಏ.28) ಹಲವು ಕಡೆ ಮಳೆಯಾಗಿದೆ. ಕೆಲವೊಂದು ಕಡೆ ಆಲಿಕಲ್ಲು ಮಳೆಯಾಗಿದೆ. ಇನ್ನು ಕೆಲವು ಭಾಗದಲ್ಲಿ ಬಿಸಿಲಿನ ಬಿಸಿ ಇತ್ತು. ಇದೀಗ ಈ ಬಿಸಿಲಿನ ಬಿಸಿಲಿನ ಬೇಗೆಯಿಂದ ಮುಕ್ತಿ ಸಿಗುವ ಮುನ್ಸೂಚನೆ ಸಿಕ್ಕಿದೆ. ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ವರದಿಯ ಪ್ರಕಾರ, ಏಪ್ರಿಲ್ ಅಂತ್ಯ ಹಾಗೂ ಮೇ ತಿಂಗಳ ಆರಂಭದಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಏಪ್ರಿಲ್ 30 ಮತ್ತು ಮೇ 1 ರಂದು ಮಳೆ ಅಬ್ಬರ ಹೆಚ್ಚಿರಲಿದೆ. ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ. ಸುಮಾರು 64.5mm ನಿಂದ 115.5mm ವರೆಗೆ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಹವಾಮಾನ ಇಲಾಖೆಯು ಈ ಭಾಗಗಳಿಗೆ #ಎಲ್ಲೋಅಲರ್ಟ್ (Yellow Alert) ನೀಡಿದೆ.
ಯಾವ ಜಿಲ್ಲೆಗಳಿಗೆ ಮಳೆ ಸಾಧ್ಯತೆ?
ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ಮತ್ತು ರಾಮನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಏಪ್ರಿಲ್ 29 ರಂದು ಕೆಲವು ಕಡೆ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.
ಏಪ್ರಿಲ್ 29 ರವರೆಗೆ ಬಿಸಿಲಿನ ತಾಪ ಹೆಚ್ಚಿದ್ದರೂ, ಏಪ್ರಿಲ್ 30 ರಿಂದ ಮಳೆಯ ಕಾರಣ ತಾಪಮಾನದಲ್ಲಿ ಗಣನೀಯ ಇಳಿಕೆಯಾಗಲಿದೆ. ಮೇ 1 ರ ವೇಳೆಗೆ ವಾತಾವರಣ ಸಾಕಷ್ಟು ತಂಪಾಗಲಿದೆ. ಮಳೆಯ ಮುನ್ಸೂಚನೆ ಇರುವುದರಿಂದ ಗಾಳಿಯಲ್ಲಿ ತೇವಾಂಶ ಹೆಚ್ಚಿರಲಿದೆ. ಇದರಿಂದ ಮಳೆಗೆ ಮುನ್ನ ಸೆಖೆ ಮತ್ತು ಮಳೆಯ ನಂತರ ತಂಪು ಅನುಭವವಾಗಲಿದೆ. ಗುಡುಗು ಸಹಿತ ಮಳೆಯಾಗುವ ಸಂದರ್ಭದಲ್ಲಿ ಗಾಳಿಯ ವೇಗ ಹೆಚ್ಚಿರಲಿದ್ದು, ಗಂಟೆಗೆ 30 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ.
ಇನ್ನು ಈ ವೇಳೆ ಸಾರ್ವಜನಿಕರಿಗೆ ಕೆಲವೊಂದು ಎಚ್ಚರಿಕೆ ಕ್ರಮಗಳನ್ನು ವಹಿಸಿಕೊಳ್ಳುವಂತೆ ಸಲಹೆಯನ್ನು ನೀಡಲಾಗಿದೆ. ಗುಡುಗು-ಮಿಂಚಿನ ಸಮಯದಲ್ಲಿ ಟಿವಿ, ಫ್ರಿಡ್ಜ್ ಅಂತಹ ವಿದ್ಯುತ್ ಉಪಕರಣಗಳ ಪ್ಲಗ್ ತೆಗೆಯಿರಿ. ಏಪ್ರಿಲ್ 30 ಮತ್ತು ಮೇ 1 ರಂದು ಭಾರಿ ಮಳೆಯಿಂದಾಗಿ ನಗರ ಪ್ರದೇಶಗಳಲ್ಲಿ (ವಿಶೇಷವಾಗಿ ಬೆಂಗಳೂರಿನಲ್ಲಿ) ರಸ್ತೆಗಳಲ್ಲಿ ನೀರು ನಿಲ್ಲುವ ಸಾಧ್ಯತೆ ಇದೆ, ಸಂಚಾರದ ವೇಳೆ ಜಾಗರೂಕರಾಗಿರಿ. ರೈತರು ಕೊಯ್ಲು ಮಾಡಿದ ಬೆಳೆಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಟ್ಟುಕೊಳ್ಳಲು ಇದು ಸೂಕ್ತ ಸಮಯ ಎಂದು ಹೇಳಿದ್ದಾರೆ.
ಬೆಂಗಳೂರು ನಗರದ ಹಲವೆಡೆ ಮಳೆ
ಪೀಣ್ಯ, ರಾಜಗೋಪಾಲನಗರ, ಮಾಗಡಿ ರಸ್ತೆಯಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಬಿರು ಬಿಸಿಲಿನಿಂದ ಬಳಲಿದ್ದ ಬೆಂಗಳೂರು ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಪೀಣ್ಯಾ, ರಾಜಗೋಪಾಲನಗರ, ಮಾಗಡಿ ರೋಡ್ ಬಳಿ ಆಲಿಕಲ್ಲು ಸಹಿತ ಮಳೆಯಾಗಿದೆ.
ಬೆಂಗಳೂರು ಗ್ರಾಮಾಂತರ: ಸಿಡಿಲು ಬಡಿದು ಲಕ್ಷಾಂತರ ಮೌಲ್ಯದ ಹಸು ಸಾವು
ಸಿಡಿಲಿನ ಆರ್ಭಟಕ್ಕೆ ಮೂಕಪ್ರಾಣಿಗಳು ಬಲಿಯಾಗುತ್ತಿವೆ. ಸೋಂಪುರ ಹೋಬಳಿಯ ಮರಳಕುಂಟೆ ಗ್ರಾಮದಲ್ಲಿ ಮರಕ್ಕೆ ಕಟ್ಟಿದ್ದ ಹಸುವಿನ ಮೇಲೆ ಸಿಡಿಲು ಬಡಿದು, ಸ್ಥಳದಲ್ಲೇ ಮೃತಪಟ್ಟಿರುವ ಆಘಾತಕಾರಿ ಘಟನೆ ನಡೆದಿದೆ. ಮರಳಕುಂಟೆ ಗ್ರಾಮದ ನಿವಾಸಿ, ರೈತ ವೀರಣ್ಣ ಅವರಿಗೆ ಸೇರಿದ ಹಸು ಇದಾಗಿದೆ. ವೀರಣ್ಣ ಅವರು ಎಂದಿನಂತೆ ತಮ್ಮ ಮನೆಯ ಮುಂದಿನ ಹಲಸಿನ ಮರದ ಕೆಳಗೆ ಹಸುವನ್ನು ಕಟ್ಟಿದ್ದರು. ಈ ವೇಳೆ ನಗರದಾದ್ಯಂತ ಗುಡುಗು ಸಹಿತ ಭಾರಿ ಮಳೆ ಸುರಿಯುತ್ತಿತ್ತು. ತೀವ್ರವಾಗಿ ಸಂಭವಿಸಿದ ಸಿಡಿಲಿನ ಹೊಡೆತಕ್ಕೆ ಹಲಸಿನ ಮರದ ಕೆಳಗೆ ಆಶ್ರಯ ಪಡೆದಿದ್ದ ಹಸು ಬಲಿಯಾಗಿದೆ. ಮೃತಪಟ್ಟ ಹಸುವಿನ ಮೌಲ್ಯ ಸುಮಾರು 80 ಸಾವಿರದಿಂದ 1 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ತನ್ನ ಇಡೀ ಕುಟುಂಬಕ್ಕೆ ಆಸರೆಯಾಗಿದ್ದ ಹಸುವನ್ನು ಕಳೆದುಕೊಂಡ ರೈತ ವೀರಣ್ಣ ಇದೀಗ ಆತಂಕ ಮತ್ತು ಆಘಾತಕ್ಕೆ ಒಳಗಾಗಿದ್ದಾರೆ. ಘಟನೆ ನಡೆದ ಬೆನ್ನಲ್ಲೇ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಮರಳಕುಂಟೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಹಸುವನ್ನು ಪಶುವೈದ್ಯರು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು, ವರದಿ ಬಂದ ನಂತರ ರೈತರಿಗೆ ಸರ್ಕಾರದಿಂದ ಸಿಗಬೇಕಾದ ಪರಿಹಾರದ ಬಗ್ಗೆ ಮಾಹಿತಿ ಲಭ್ಯವಾಗಲಿದೆ.
ಬೆಂಗಳೂರು, ಏಪ್ರಿಲ್ 28: ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಬೆಂಗಳೂರಿನಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಡಿಜಿ ಕಚೇರಿ ಮೈದಾನದಲ್ಲಿ ಮಾಕ್ಡ್ರಿಲ್ ನಡೆಸಲಾಗಿದೆ. ಅಣಕು ಪ್ರದರ್ಶನದಲ್ಲಿ ಅಗ್ನಿಶಾಮಕ ದಳ, ಗೃಹರಕ್ಷಕ ದಳ, ಸಿವಿಲ್ ಡಿಫೆನ್ಸ್ ಭಾಗಿಯಾಗಿದ್ದವು. ತುರ್ತು ಸಂದರ್ಭ ಅಥವಾ ಏರ್ಸ್ಟ್ರೈಕ್ ಆದಾಗ ಪರಿಸ್ಥಿತಿ ಎದುರಿಸಲು ಯಾವ ರೀತಿ ಸನ್ನದ್ಧರಾಗಬೇಕೆಂದು ಮಾಹಿತಿ ನೀಡಲಾಯಿತು. ಏರ್ಸ್ಟ್ರೈಕ್ ಸಂದರ್ಭದಲ್ಲಿ ಸೈರನ್ ಮೊಳಗಿದ ತಕ್ಷಣ ಮತ್ತು ರೆಡ್ಅಲರ್ಟ್ ಸೈರನ್ ಮೊಳಗಿದ ಕೂಡಲೇ ಸುರಕ್ಷಿತ ಜಾಗಕ್ಕೆ ಜನರನ್ನು ಹೇಗೆ ಸ್ಥಳಾಂತರ ಮಾಡಬೇಕೆಂದು ತಿಳಿಸಿಕೊಡಲಾಯಿತು.
ಧಾರ್ಮಿಕ ಹಬ್ಬ, ಹರಿದಿನಗಳನ್ನು ಆಚರಿಸುವಂತೆ ಪ್ರತಿ ತಿಂಗಳು ಸಹ ಒಂದಷ್ಟು ಪ್ರಮುಖ ರಾಷ್ಟ್ರೀಯ ಅಂತಾರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲಾಗುತ್ತದೆ. ಒಂದೊಂದು ಉದ್ದೇಶ, ಧ್ಯೇಯವಾಕ್ಯಗಳನ್ನು ಇಟ್ಟುಕೊಂಡು ಜನ ಜಾಗೃತಿಯನ್ನು ಮೂಡಿಸುವ ಸಲುವಾಗಿ ಈ ದಿನಾಚರಣೆಗಳನ್ನು ಆಚರಿಸಲಾಗುತ್ತದೆ. ಇನ್ನೇನೂ ವರ್ಷದ 5 ನೇ ತಿಂಗಳಾದ ಮೇ (May) ಆರಂಭವಾಗುತ್ತಿದ್ದು, ಈ ತಿಂಗಳಲ್ಲಿ ಯಾವೆಲ್ಲಾ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ ಎಂಬುದನ್ನು ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ.
ಮೇ ತಿಂಗಳಲ್ಲಿನ ರಾಷ್ಟ್ರೀಯ ಅಂತಾರಾಷ್ಟ್ರೀಯ ಕಾರ್ಯಕ್ರಮಗಳು:
ನಟ ಚೇತನ್ ಅಹಿಂಸಾ ಅವರು ಡಾ. ರಾಜ್ಕುಮಾರ್ ಸಮಾಧಿ (Dr Rajkumar Samadhi) ಜಾಗಕ್ಕೆ ಸಂಬಂಧಿಸಿದಂತೆ ನೀಡಿದ ಹೇಳಿಕೆ ತೀವ್ರ ವಿವಾದಕ್ಕೆ ಕಾರಣ ಆಗಿದೆ. ಸಮಾಧಿಗೆ ಎರಡೂವರೆ ಎಕರೆ ಜಾಗ ನೀಡಿದ್ದು ಸರಿಯಲ್ಲ ಎಂದು ಅನೇಕರು ವಿರೋಧಿಸಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ‘ಚೇತನ್ ಕ್ಷಮೆ ಕೇಳಿದ ಬಳಿಕ ಮತ್ತೆ ಮಾತು ಬದಲಿಸಿದ್ದಾನೆ. ನಿಜವಾಗಿಯೂ ಅವನು ಒಬ್ಬ ಅರೆಹುಚ್ಚ. ಅವನಿಗೆ ಯೋಚನಾ ಶಕ್ತಿ ಇಲ್ಲ. ಅಂಥವರನ್ನು ನಮ್ಮ ಜೊತೆ ಇಟ್ಟುಕೊಂಡರೆ ನಮಗೂ ಕೆಟ್ಟ ಹೆಸರು ಬರುತ್ತದೆ. ಅವನು ಯಾವುದೇ ಸಿನಿಮಾದಲ್ಲಿ ನಟಿಸಿದರೂ ಅದನ್ನು ಬಹಿಷ್ಕರಿಸಬೇಕು ಅಂತ ಜನರು ತೀರ್ಮಾನ ಮಾಡಿದ್ದಾರೆ’ ಎಂದು ಸಾರಾ ಗೋವಿಂದು (Sa Ra Govind) ಅವರು ಹೇಳಿದ್ದಾರೆ.
Keep Kids Hydrated in Hot Weather: Expert Advice by Dr. Harish
ಮಕ್ಕಳು ಹೊರಾಂಗಣದಲ್ಲಿ ಆಟವಾಡುವಾಗ ಸಹಜವಾಗಿಯೇ ಹೆಚ್ಚು ಬೆವರುತ್ತಾರೆ, ಇದರಿಂದ ದೇಹ ಬೇಗ ಡಿಹೈಡ್ರೇಟ್ ಆಗುತ್ತದೆ. ಸರಿಯಾದ ಪ್ರಮಾಣದಲ್ಲಿ ನೀರು ಮತ್ತು ಅನ್ಯ ದ್ರವ್ಯಗಳ ಸೇವನೆಯಿಂದ ನಷ್ಟವಾದ ದ್ರವಗಳನ್ನು ಸಮರ್ಪಕವಾಗಿ ಮರುಪೂರಣಗೊಳಿಸದಿದ್ದರೆ ಮಕ್ಕಳಲ್ಲಿ ನಿರ್ಜಲೀಕರಣ (Dehydration) ಉಂಟಾಗುವ ಸಾಧ್ಯತೆ ಇರುತ್ತದೆ. ಇದರ ಪರಿಣಾಮವಾಗಿ ಬಾಯಿ ಒಣಗುವುದು, ಮೂತ್ರ ಪ್ರಮಾಣ ಕಡಿಮೆಯಾಗುವುದು, ದೌರ್ಬಲ್ಯ, ಕಿರಿಕಿರಿ ಮುಂತಾದ ಲಕ್ಷಣಗಳು ಕಾಣಿಸಬಹುದು. ವಿಶೇಷವಾಗಿ ಶಿಶು ಮತ್ತು ಚಿಕ್ಕ ಮಕ್ಕಳಿಗೆ ಬಾಯಾರಿಕೆಯಾಗುವುದನ್ನು ಸರಿಯಾಗಿ ವ್ಯಕ್ತಪಡಿಸಲು ಸಾಧ್ಯವಿಲ್ಲ, ಆದ್ದರಿಂದ ಡಿಹೈಡ್ರೇಷನ್ ಬೇಗ ಉಂಟಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಈ ವಿಷಯವಾಗಿ ಪೋಷಕರು ಹೆಚ್ಚಿನ ಗಮನ ಹರಿಸುವುದು ಮುಖ್ಯವಾಗುತ್ತದೆ. ಅದಕ್ಕಾಗಿಯೇ ಯೆಲಹಂಕ ಮಣಿಪಾಲ್ ಆಸ್ಪತ್ರೆಯ ಲೀಡ್ ಕನ್ಸಲ್ಟೆಂಟ್ – ಪೀಡಿಯಾಟ್ರಿಕ್ಸ್ ಮತ್ತು ಪೀಡಿಯಾಟ್ರಿಕ್ ನಿಯೋನೇಟಲ್ ಇಂಟೆನ್ಸಿವಿಸ್ಟ್ ಡಾ. ಹರೀಶ್ ಕುಮಾರ್ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಾರೆ.
ಪೋಷಕರಿಗಾಗಿ ಸರಳ ಸಲಹೆ;
ಡಾ. ಹರೀಶ್ ಕುಮಾರ್ ಹೇಳುವ ಪ್ರಕಾರ ಮೊದಲು, ಮಕ್ಕಳಿಗೆ ನೀರು ಯಾವಾಗಲೂ ಸುಲಭವಾಗಿ ದೊರೆಯುವಂತೆ ನೋಡಿಕೊಳ್ಳಬೇಕು. ಶಾಲೆಯ ಬ್ಯಾಗ್, ಆಟದ ಸ್ಥಳ ಮತ್ತು ಹಾಸಿಗೆಯ ಬಳಿಯಲ್ಲಿ ನೀರಿನ ಬಾಟಲ್ ಇಡಿ. ಬಣ್ಣಬಣ್ಣದ ಬಾಟಲ್ಗಳು ಅಥವಾ ಸ್ಟ್ರಾ ಬಳಸಿ ಮಕ್ಕಳಿಗೆ ನೀರು ಕುಡಿಯುವ ಆಸಕ್ತಿ ಹೆಚ್ಚಿಸಿ. ಸಾಧ್ಯವಾದಷ್ಟು ಪ್ಲಾಸ್ಟಿಕ್ ಬಾಟಲ್ಗಳನ್ನು ಬಳಕೆ ಮಾಡುವುದನ್ನು ತಪ್ಪಿಸಿ.
ಬರಿ ದಾಹವಾದಾಗ ಮಾತ್ರವಲ್ಲ, ಪ್ರತಿ 30– 60 ನಿಮಿಷಗಳಿಗೊಮ್ಮೆ ನೀರು ಕುಡಿಯಲು ಮಕ್ಕಳನ್ನು ಉತ್ತೇಜಿಸಿ. ಜೊತೆಗೆ, ಕಲ್ಲಂಗಡಿ, ಕರಬೂಜ, ಕಿತ್ತಳೆ, ಸೌತೆಕಾಯಿ, ಟೊಮೇಟೊ ಮುಂತಾದ ನೀರಿನಾಂಶ ಹೆಚ್ಚು ಇರುವ ಹಣ್ಣು, ತರಕಾರಿಗಳನ್ನು ಆಹಾರದಲ್ಲಿ ಸೇರಿಸುವುದನ್ನು ಮರೆಯಬೇಡಿ.
ದೇಹ ಹೈಡ್ರೇಟ್ ಆಗಿರಲು ಎಳನೀರು, ಮಜ್ಜಿಗೆ, ಲಿಂಬು ನೀರು (ಸ್ವಲ್ಪ ಉಪ್ಪಿನೊಂದಿಗೆ) ಮುಂತಾದ ದ್ರವಗಳ ಸೇವನೆಯ ರೂಢಿಮಾಡಿಸಿ. ಸಕ್ಕರೆಪೂರಿತ ಅಥವಾ ಪ್ಯಾಕೇಜ್ ಪಾನೀಯಗಳು, ಸೋಡಾ ಮುಂತಾದವುಗಳ ಸೇವನೆಯನ್ನು ಆದಷ್ಟು ತಪ್ಪಿಸಿ.
ತೀವ್ರವಾದ ಬಿಸಿಲಿನ ಸಮಯವಾದ ಮಧ್ಯಾಹ್ನ 11 ರಿಂದ 4 ಗಂಟೆಯ ವರೆಗೆ ಮಕ್ಕಳು ಹೊರಾಂಗಣ ಚಟುವಟಿಕೆಯಲ್ಲಿ ತೊಡಗದಂತೆ ನೋಡಿಕೊಳ್ಳಿ. ಈ ಸಮಯದಲ್ಲಿ ಮಕ್ಕಳು ಆದಷ್ಟು ಮನೆಯ ಒಳಗಡೆ ಅಥವಾ ನೆರಳಿನ ಸ್ಥಳಗಳಲ್ಲಿ ಇರುವುದು ಒಳ್ಳೆಯದು.
ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ವಾತಾವರಣಕ್ಕೆ ಸೂಕ್ತವಾದ ಬಟ್ಟೆಗಳನ್ನು ಬಳಸಿ, ಉದಾಹರಣೆಗೆ ಸಡಿಲವಾದ, ಹಗುರವಾದ, ಮತ್ತು ಗಾಳಿಯಾಡುವ ಹತ್ತಿ (ಕಾಟನ್) ಬಟ್ಟೆಗಳನ್ನು ಬಳಸಿ.
ಮಕ್ಕಳಲ್ಲಿ ಡಿಹೈಡ್ರೇಷನ್ ಲಕ್ಷಣಗಳಾದ ಒಣ ತುಟಿ, ಕಡಿಮೆ ಮೂತ್ರ, ತಲೆಸುತ್ತು ಅಥವಾ ದೌರ್ಬಲ್ಯ ಕಂಡುಬಂದರೆ ತಕ್ಷಣ ದ್ರವರೂಪದ ಆಹಾರಗಳ ಸೇವನೆಯನ್ನು ಹೆಚ್ಚಿಸಿ, ತಂಪಾದ ಸ್ಥಳದಲ್ಲಿ ವಿಶ್ರಾಂತಿ ಕೊಡಿಸಿ. ಶಿಶು ಮತ್ತು ಚಿಕ್ಕ ಮಕ್ಕಳಿಗೆ ವಿಶೇಷ ಕಾಳಜಿ ಅಗತ್ಯ. ತಾಯಿ ಹಾಲು ಅಥವಾ ಫಾರ್ಮುಲಾ ಆಹಾರವನ್ನು ನಿಯಮಿತವಾಗಿ ನೀಡುತ್ತಿರಿ.
ಈ ಸರಳ ಕ್ರಮಗಳಿಂದ ಬೇಸಿಗೆಯಲ್ಲೂ ಮಕ್ಕಳ ಆರೋಗ್ಯವನ್ನು ಸುರಕ್ಷಿತವಾಗಿ ಕಾಪಾಡಬಹುದು.
ಬೆಂಗಳೂರು, ಏಪ್ರಿಲ್ 28: ಶಾಲಾ ವಾರ್ಷಿಕೋತ್ಸವ ಸೇರಿದಂತೆ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಸಭ್ಯ ಹಾಡುಗಳಿಗೆ ಮಕ್ಕಳು ನೃತ್ಯ ಮಾಡುವುದನ್ನು ಶಾಲಾ ಶಿಕ್ಷಣ ಇಲಾಖೆ ನಿಷೇಧಿಸಿದೆ. ಪ್ರಾಥಮಿಕ ಶಿಕ್ಷಣ ನಿರ್ದೇಶಕರು ಹೊರಡಿಸಿರುವ ಸುತ್ತೋಲೆಯಲ್ಲಿ, ರಾಜ್ಯದ ಎಲ್ಲಾ ಶಾಲೆಗಳು (ಖಾಸಗಿ ಶಾಲೆಗಳೂ ಸೇರಿ) ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಲಾಗಿದೆ. ಅಸಭ್ಯ ಹಾಡುಗಳಿಗೆ ಮಕ್ಕಳಿಂದ ನೃತ್ಯ ಮಾಡಿಸಿದರೆ, ಸಂಬಂಧಿತ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಾಲೆ ನಿರ್ವಹಣೆ ಮಾಡುವವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಎಚ್ಚರಿಕೆ ನೀಡಲಾಗಿದೆ.
ಯಾವೆಲ್ಲ ಹಾಡುಗಳಿಗೆ ಅವಕಾಶ?
ದೇಶಭಕ್ತಿ, ಪ್ರೇರಣಾದಾಯಕ ಹಾಗೂ ಸಕಾರಾತ್ಮಕ ಸಂದೇಶ ಹೊಂದಿರುವ ಹಾಡುಗಳನ್ನು ಮಕ್ಕಳ ನೃತ್ಯಕ್ಕೆ ಬಳಸಿಕೊಳ್ಳಬೇಕು. ಕನ್ನಡ ಮತ್ತು ಸಂಸ್ಕೃತಿ, ಮೌಲ್ಯಗಳನ್ನು ಉತ್ತೇಜಿಸುವ ಗೀತೆಗಳಿಗೆ ಆದ್ಯತೆ ನೀಡಬೇಕು. ಹಾಡುಗಳ ಆಯ್ಕೆ ಪ್ರಕ್ರಿಯೆಯಲ್ಲಿ ಮುಖ್ಯ ಶಿಕ್ಷಕರು ಸ್ವತಃ ಮುತುವರ್ಜಿವಹಿಸಬೇಕೆಂದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಮಕ್ಕಳಿಗೆ ಅನರ್ಹವಾಗಿರುವ ಅಶ್ಲೀಲ ಪದಗಳಿರುವ ಹಾಡುಗಳಿಗೆ ನೃತ್ಯ ಮಾಡುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದು ಮಕ್ಕಳ ತಪ್ಪಲ್ಲ, ಶಿಕ್ಷಕರು ಹಾಡಿನ ವಿಷಯವನ್ನು ಪರಿಶೀಲಿಸಿ ನಂತರವೇ ಅನುಮತಿ ನೀಡಬೇಕು ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರಿನ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿ ಈ ಸುತ್ತೋಲೆ ಹೊರಡಿಸಲಾಗಿದೆ. ಮದ್ಯಪಾನ, ಧೂಮಪಾನ ಇತ್ಯಾದಿ ವಿಷಯಗಳನ್ನು ಒಳಗೊಂಡ ಹಾಡುಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದಲ್ಲದೆ, ವೇಷಭೂಷಣ ಆಯ್ಕೆಯಲ್ಲೂ ಶಿಕ್ಷಕರು ಗಮನಹರಿಸಬೇಕು. ವಿದ್ಯಾರ್ಥಿಗಳು ಶಿಸ್ತಿನ ಉಡುಪಿನಲ್ಲಿ ಕಾಣಿಸಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಕೆಲವು ಖಾಸಗಿ ಶಾಲೆಗಳು ಈಗಾಗಲೇ ಈ ನಿಯಮವನ್ನು ಅನುಸರಿಸಿ, ವಾರ್ಷಿಕೋತ್ಸವಗಳಲ್ಲಿ ಚಿತ್ರಗೀತೆಗಳನ್ನು ಬಳಸುವುದನ್ನು ತಪ್ಪಿಸುತ್ತಿವೆ. ಪ್ರತಿ ವರ್ಷ ವಿಭಿನ್ನ ಥೀಮ್ಗಳನ್ನು ಆಯ್ಕೆ ಮಾಡುತ್ತೇವೆ. ಚಿಕ್ಕ ಮಕ್ಕಳಿಗೆ ಹೂವು, ಪ್ರಾಣಿ, ಸಂಗೀತದಂತಹ ವಿಷಯಗಳ ಗೀತೆ ಬಳಸುತ್ತೇವೆ. ಹೈಸ್ಕೂಲ್ ವಿದ್ಯಾರ್ಥಿಗಳು ದೇಶಭಕ್ತಿ, ಇತಿಹಾಸ ಮತ್ತು ಜನಪದ ಗೀತೆಗಳಿಗೆ ನೃತ್ಯ ಮಾಡುತ್ತಿದ್ದಾರೆ ಎಂದು ನಗರದ ಖಾಸಗಿ ಶಾಲೆಯ ಪ್ರಾಂಶುಪಾಲರೊಬ್ಬರು ತಿಳಿಸಿರೋದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಬೇಸಿಗೆಯ ಸಮಯದಲ್ಲಿ ಮನೆಯ ಹೊರಗಡೆ ಹಾವುಗಳ ಕಾಟ ತೀರಾ ಹೆಚ್ಚಾಗುವಂತೆ, ಮನೆಯೊಳಗಡೆ ಹಲ್ಲಿಗಳ (lizards) ಕಾಟ ಹೆಚ್ಚಾಗುತ್ತದೆ. ಈ ಹಲ್ಲಿಗಳು ಮನುಷ್ಯರಿಗೆ ತೊಂದರೆ ನೀಡುವುದಿಲ್ಲ ನಿಜ, ಆದರೆ ಅವುಗಳು ನಾವು ತಿನ್ನುವ ಆಹಾರಕ್ಕೆ ಬಿದ್ದರೆ ನಮಗೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ ಮನೆಯಲ್ಲಿ ಹಲ್ಲಿಗಳಿದ್ದರೆ ಹೆಚ್ಚಿನವರು ಭಯ ಪಡುತ್ತಾರೆ. ಮತ್ತು ಅವುಗಳ ಹಾವಳಿಯಿಂದ ಮುಕ್ತಿ ಪಡೆಯಲು ಮಾರುಕಟ್ಟೆಯಲ್ಲಿ ಸಿಗುವಂತಹ ರಾಸಾಯನಿಕಯುಕ್ತ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಅವು ಹಲ್ಲಿಗಳ ಮೇಲೆ ಪರಿಣಾಮ ಬೀರುವುದಿಲ್ಲ. ಹೀಗಿರುವಾಗ ಮನೆಯೊಳಗಡೆ ಕಿಟಕಿ, ಬಾಗಿಲಿನ ಪಕ್ಕ ತುಳಸಿ ಗಿಡವನ್ನು ಇಡುವ ಮೂಲಕ ಬಲು ಸುಲಭವಾಗಿ ಮನೆಯಿಂದ ಓಡಿಸಬಹುದು. ಈ ಕುರಿತ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ.
ಹಲ್ಲಿಗಳ ಕಾಟದಿಂದ ಮುಕ್ತಿ ಪಡೆಯಲು ಮನೆಯಲ್ಲಿ ನೆಡಿ ತುಳಸಿ ಗಿಡ:
ಧಾರ್ಮಿಕ ಮಹತ್ವವನ್ನು ಹೊಂದಿರುವ ತುಳಸಿ ಗಿಡ, ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ ಮಾತ್ರವಲ್ಲ, ಹಲ್ಲಿ, ಸೊಳ್ಳೆ, ಕೀಟಗಳ ಕಾಟದಿಂದ ಮುಕ್ತಿ ಪಡೆಯಲು ಸಹಕಾರಿ. ಹೌದು ತುಳಸಿ ಗಿಡಗಳು ಹಲ್ಲಿಗಳು ಇಷ್ಟಪಡದ ಆಹ್ಲಾದಕರ ವಾಸನೆಯನ್ನು ಹೊರಸೂಸುತ್ತವೆ. ಈ ವಾಸನೆ ಹೊಸ ಸೂಸುವ ಜಾಗದಲ್ಲಿ ಹಲ್ಲಿಗಳು ಇರಲು ಇಷ್ಟಪಡುವುದಿಲ್ಲ, ಅಲ್ಲಿಂದ ಓಡಿ ಹೋಗುತ್ತವೆ. ತುಳಸಿ ಗಿಡವನ್ನು ಮನೆಯಲ್ಲಿ ಇಡುವುದರಿಂದ ಹಲ್ಲಿಗಳ ಹಾವಳಿಯೂ ಇರುವುದಿಲ್ಲ, ಜೊತೆಗೆ ಮನೆಯಲ್ಲಿ ಸಕಾರಾತ್ಮಕ ಶಕ್ತಿಯೂ ನೆಲೆಸುತ್ತದೆ.
ಹಲ್ಲಿಗಳ ಹೊರತಾಗಿ, ಬೇಸಿಗೆಯಲ್ಲಿ ಸೊಳ್ಳೆಗಳು, ನೊಣಗಳು ಮತ್ತು ಕೀಟಗಳ ಕಾಟವೂ ಹೆಚ್ಚಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮನೆಯಲ್ಲಿ ಅಲ್ಲಲ್ಲಿ ಪಾಟ್ಗಳಲ್ಲಿ ತುಳಸಿ ಗಿಡಗಳನ್ನು ಇಡುವ ಮೂಲಕ ಕೀಟ ನೊಣಗಳು ಮನೆಯೊಳಗೆ ಪ್ರವೇಶಿಸದಂತೆ ನೋಡಿಕೊಳ್ಳಬಹುದು.
ನೀವು ನಿಮ್ಮ ಬಾಲ್ಕನಿ, ಕಿಟಕಿ ಅಥವಾ ಬಾಗಿಲಿನ ಬಳಿ ನೀವು ತುಳಸಿ ಗಿಡವನ್ನು ಇಡಬಹುದು. ಇದು ಹಲ್ಲಿಗಳನ್ನು ದೂರವಿಡುವುದಲ್ಲದೆ, ಸೊಳ್ಳೆಗಳು ಮತ್ತು ಕೀಟಗಳ ಕಾಟದಿಂದಲೂ ಪರಿಹಾರವನ್ನು ನೀಡುತ್ತದೆ.
ನೀವು ಪಾಟ್ನಲ್ಲಿ ತುಳಸಿ ಗಿಡವನ್ನು ಇಡಲು ಬಯಸದಿದ್ದರೆ, ನಿಮ್ಮ ಮನೆಯ ಪ್ರತಿ ಮೂಲೆಯಲ್ಲೂ ತುಳಸಿ ಎಲೆಗಳನ್ನು ಇಡಬಹುದು. ಇದಲ್ಲದೆ ನೀವು ತುಳಸಿ ಎಲೆಗಳನ್ನು ನೀರಿನಲ್ಲಿ ಕುದಿಸಿ, ಅದರ ರಸವನ್ನು ಬಾಟಲಿಯಲ್ಲಿ ತುಂಬಿಸಿ ಮನೆಯ ಪ್ರತಿಯೊಂದು ಮೂಲೆಯಲ್ಲೂ ಸಿಂಪಡಿಸುವ ಮೂಲಕವೂ ಹಲ್ಲಿ, ಸೊಳ್ಳೆ, ನೊಣಗಳು ಮನೆ ಪ್ರವೇಶಿಸದಂತೆ ನೋಡಿಕೊಳ್ಳಬಹುದು.
ಶಿರಸಿ, ಏ.28: ಕರ್ನಾಟಕದ ಸರ್ಕಾರಿ ಸಾರಿಗೆ ವ್ಯವಸ್ಥೆ ಎಷ್ಟೊಂದು ಕೆಟ್ಟೋಗಿದೆ ಎಂದರೆ ಇದಕ್ಕೆ ಉತ್ತಮ ಉದಾಹರಣೆ ಇಲ್ಲಿದೆ ನೋಡಿ. ಸರ್ಕಾರಕ್ಕೆ ತೆರಿಗೆ ಪಾವತಿಸುವ ಸಾರ್ವಜನಿಕರಿಗೆ ಸಿಗುತ್ತಿರುವ ಪ್ರತಿಫಲ ಮಾತ್ರ ಶೂನ್ಯ ಎನ್ನುವುದಕ್ಕೆ ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿಯೇ ಸಾಕ್ಷಿ. ಈ ರಸ್ತೆಯ ಸ್ಥಿತಿ ಎಷ್ಟು ಭೀಕರವಾಗಿದೆಯೆಂದರೆ, ಇದು ಹೆದ್ದಾರಿಯೋ ಅಥವಾ ಆಫ್-ರೋಡ್ ರ್ಯಾಲಿ ನಡೆಯುವ ಕೆಸರು ಗದ್ದೆಯೋ ಎಂಬ ಅನುಮಾನ ಮೂಡುತ್ತಿದೆ.
ಇಲ್ಲಿ ವೈರಲ್ ಆಗಿರುವ ದೃಶ್ಯಗಳಲ್ಲಿ ಕೆಎಸ್ಆರ್ಟಿಸಿ (KSRTC) ಬಸ್ವೊಂದು ಕೆಸರಿನಲ್ಲಿ ಸಿಲುಕಿ ಮುಂದೆ ಸಾಗಲು ಹರಸಾಹಸ ಪಡುತ್ತಿರುವುದು ಕಂಡುಬಂದಿದೆ. ಬಲಿಷ್ಠವಾದ ಸರ್ಕಾರಿ ಬಸ್ಗಳೇ ಈ ರಸ್ತೆಯಲ್ಲಿ ಸಂಚರಿಸಲು ಅಸಹಾಯಕವಾಗಿರುವಾಗ, ದ್ವಿಚಕ್ರ ವಾಹನಗಳು ಮತ್ತು ಸಣ್ಣ ಕಾರುಗಳ ಪರಿಸ್ಥಿತಿ ಹೇಳತೀರದು. ತುರ್ತು ಚಿಕಿತ್ಸೆಗೆ ತೆರಳುವ ಆಂಬ್ಯುಲೆನ್ಸ್ಗಳೂ ಇಲ್ಲಿ ಗಂಟೆಗಟ್ಟಲೆ ಸಿಲುಕಿಕೊಳ್ಳುವ ಭೀತಿ ಎದುರಾಗಿದೆ. ಈ ಬಗ್ಗೆ ಪೋಸ್ಟ್ವೊಂದನ್ನು @KarnatakaPortfolio ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
Public Pays, System Fails Roads Reduced to Slush and Shame
The condition of this road is absolutely shocking. This is the Sirsi–Haveri National Highway, yet it hardly resembles a highway in any sense. A KSRTC bus can be seen struggling just to move forward, battling through… pic.twitter.com/5rYWBlLneL
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಮಾರ್ಗದ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ ಸಾರ್ವಜನಿಕರು ರಸ್ತೆ ತೆರಿಗೆಯನ್ನು ಸರಿಯಾದ ಸಮಯದಲ್ಲಿ ಪಾವತಿಸುತ್ತಿದ್ದರೂ, ಕನಿಷ್ಠ ಗುಣಮಟ್ಟದ ರಸ್ತೆಯನ್ನು ನೀಡಲು ಸರ್ಕಾರ ವಿಫಲವಾಗಿದೆ ಎಂದು ದೂರಿದ್ದಾರೆ. ಹೊಂಡ-ಗುಂಡಿಗಳು ಹಾಗೂ ಕೆಸರಿನಿಂದಾಗಿ ಈ ರಸ್ತೆಯು ಮೃತ್ಯುಪಂಜರವಾಗಿ ಮಾರ್ಪಟ್ಟಿದೆ ಎಂದು ಹಲವು ಜನ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಕೇವಲ ನೆಪಗಳನ್ನು ಹೇಳುವುದನ್ನು ಬಿಟ್ಟು ಕೂಡಲೇ ಈ ಹೆದ್ದಾರಿಯ ದುರಸ್ತಿಗೆ ಮುಂದಾಗಬೇಕಿದೆ. ಇಲ್ಲದಿದ್ದರೆ ದೊಡ್ಡ ಮಟ್ಟದ ಅಪಘಾತ ಸಂಭವಿಸುವ ಮುನ್ನವೇ ಎಚ್ಚೆತ್ತುಕೊಳ್ಳುವುದು ಒಳಿತು ಎಂದು ಎಚ್ಚರಿಕೆ ನೀಡಿದ್ದಾರೆ.
ನವದೆಹಲಿ, ಏಪ್ರಿಲ್ 28: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ (Delhi excise policy case) ಆರೋಪಿಯಾಗಿರುವ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಮಾಜ ಸಚಿವ ಮನೀಶ್ ಸಿಸೋಡಿಯಾ ಹೈಕೋರ್ಟ್ ನ್ಯಾಯಮೂರ್ತಿ ಸ್ವರಣ ಕಾಂತ ಶರ್ಮಾ ಅವರ ವಿರುದ್ಧ ಕಾನೂನು ಹೋರಾಟ ಮುಂದುವರೆಸಿದ್ದಾರೆ. ಅವರೆದುರು ವಿಚಾರಣೆಗೆ ಹಾಜರಾಗುವುದಿಲ್ಲ, ತಮ್ಮ ಕೇಸಿಗೆ ಯಾವುದೇ ವಕೀಲರನ್ನು ನೇಮಿಸುವುದಿಲ್ಲ ಎಂದು ಅವರು ಪಟ್ಟು ಹಿಡಿದಿದ್ದಾರೆ. ಹೀಗಾಗಿ, ಈ ಕಾನೂನು ಸಮರ ಹೊಸ ತಿರುವು ಪಡೆದುಕೊಂಡಿದೆ. ಆಮ್ ಆದ್ಮಿ ಪಕ್ಷದ ನಾಯಕರಾದ ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅವರು ನ್ಯಾಯಮೂರ್ತಿ ಸ್ವರಣ ಕಾಂತ ಶರ್ಮಾ ಅವರ ದೆಹಲಿ ಹೈಕೋರ್ಟ್ ಪೀಠದ ಮುಂದೆ ಹಾಜರಾಗಲು ನಿರಾಕರಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರ ಪ್ರಕರಣದ ವಿಚಾರಣೆಯಿಂದ ನ್ಯಾಯಾಧೀಶರಾದ ಸ್ವರಣ ಕಾಂತ ಶರ್ಮಾ ಹಿಂದೆ ಸರಿಯಬೇಕೆಂದು ಕೋರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ ನಂತರ ವಿವಾದ ಭುಗಿಲೆದ್ದಿದೆ. ಆದರೆ, ನ್ಯಾಯಾಧೀಶರ ವಿರುದ್ಧದ ಆರೋಪಗಳು ಸಾಕ್ಷ್ಯಗಳಿಂದ ಬೆಂಬಲಿತವಾಗಿಲ್ಲ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಕೇವಲ ಗ್ರಹಿಕೆಗಳು ಅಥವಾ ಅನುಮಾನಗಳ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗದು ಎಂದು ನ್ಯಾಯಾಲಯ ಹೇಳಿದೆ. ಇಂತಹ ಅರ್ಜಿಗಳು ನ್ಯಾಯ ವ್ಯವಸ್ಥೆಯಲ್ಲಿ ಸಾರ್ವಜನಿಕ ನಂಬಿಕೆಯನ್ನು ಕುಗ್ಗಿಸಬಹುದು ಎಂದು ಎಚ್ಚರಿಸಿದೆ. ನ್ಯಾಯಮೂರ್ತಿ ಸ್ವರಣ ಕಾಂತ ಶರ್ಮಾ ಕೂಡ ದೆಹಲಿ ಅಬಕಾರಿ ನೀತಿ ಪ್ರಕರಣದಿಂದ ಹಿಂದೆ ಸರಿಯಬೇಕೆಂದು ಕೋರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದಾರೆ. ತಾನು ಯಾವುದೇ ಕಾರಣಕ್ಕೂ ಈ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ.
ಕೇಜ್ರಿವಾಲ್ ಎತ್ತಿದ ಆರೋಪಗಳನ್ನು ಹೈಕೋರ್ಟ್ ಪರಿಶೀಲಿಸಿದ್ದು, ಅದರಲ್ಲಿ ಪಕ್ಷಪಾತದ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಹೇಳಿದೆ. ಕೇಜ್ರಿವಾಲ್ ಮತ್ತು ನಂತರ ಸಿಸೋಡಿಯಾ ಅವರು ನ್ಯಾಯಮೂರ್ತಿ ಸ್ವರಣ ಕಾಂತ ಶರ್ಮಾ ಅವರ ಮಕ್ಕಳನ್ನು ಕೇಂದ್ರ ಸರ್ಕಾರದ ವಕೀಲರನ್ನಾಗಿ ಸೇರಿಸಲಾಗಿದೆ ಎಂದು ಹೇಳಿಕೊಂಡು ಹಿತಾಸಕ್ತಿ ಸಂಘರ್ಷವನ್ನು ಆರೋಪಿಸಿದ್ದರು. ಕೇಂದ್ರ ಸರ್ಕಾರವು ಸಿಬಿಐ ಮೂಲಕ ಭಾಗಿಯಾಗಿರುವುದರಿಂದ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರತಿನಿಧಿಸುವುದರಿಂದ ಇದು ನ್ಯಾಯಸಮ್ಮತತೆಯ ಬಗ್ಗೆ ಆತಂಕವನ್ನು ಉಂಟುಮಾಡಿದೆ ಎಂದು ಅವರು ವಾದಿಸಿದ್ದರು.
ಆದರೆ, ಈ ವಾದವನ್ನು ತಿರಸ್ಕರಿಸಿದ ಹೈಕೋರ್ಟ್, ನ್ಯಾಯಾಧೀಶರ ಕುಟುಂಬದ ಸದಸ್ಯರ ಮತ್ತು ಪ್ರಸ್ತುತ ಪ್ರಕರಣದ ನಡುವೆ ಯಾವುದೇ ನೇರ ಸಂಪರ್ಕ ಕಂಡುಬಂದಿಲ್ಲ ಎಂದು ಹೇಳಿದೆ. ನ್ಯಾಯಾಧೀಶರೊಂದಿಗಿನ ಸಂಬಂಧದ ಕಾರಣದಿಂದಾಗಿ ನ್ಯಾಯಾಧೀಶರ ಕುಟುಂಬದ ಸದಸ್ಯರು ಕಾನೂನು ವೃತ್ತಿಯನ್ನು ಮುಂದುವರಿಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಆರ್ಎಸ್ಎಸ್ನ ಅಖಿಲ ಭಾರತೀಯ ಅಧಿವಕ್ತ ಪರಿಷತ್ ಆಯೋಜಿಸಿದ ಕಾರ್ಯಕ್ರಮಗಳಲ್ಲಿ ನ್ಯಾಯಮೂರ್ತಿ ಶರ್ಮಾ ಭಾಗವಹಿಸುವುದಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಎತ್ತಿದ ಮತ್ತೊಂದು ಆಕ್ಷೇಪಣೆ. ಹೈಕೋರ್ಟ್ ಈ ಆರೋಪವನ್ನು ತಿರಸ್ಕರಿಸಿತು. ನ್ಯಾಯಾಧೀಶರು ಬಹು ಸಂಘಗಳು ಆಯೋಜಿಸುವ ಕಾನೂನು, ಶೈಕ್ಷಣಿಕ ಮತ್ತು ವೃತ್ತಿಪರ ಕಾರ್ಯಕ್ರಮಗಳಿಗೆ ನಿಯಮಿತವಾಗಿ ಹಾಜರಾಗುತ್ತಾರೆ ಎಂದು ಸ್ಪಷ್ಟಪಡಿಸಿತು.
ಅಬಕಾರಿ ನೀತಿ ಪ್ರಕರಣದ ವಿವಾದ ಈಗ ರದ್ದಾಗಿರುವ ದೆಹಲಿ ಅಬಕಾರಿ ನೀತಿ 2021-22ರಿಂದ ಹುಟ್ಟಿಕೊಂಡಿದೆ. ಇದನ್ನು ಕೇಂದ್ರ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯ ತನಿಖೆ ಮಾಡಿದೆ. ಈ ಪ್ರಕರಣವು ಎಎಪಿಯ ಹಿರಿಯ ನಾಯಕರ ಬಂಧನಗಳು, ರಾಜೀನಾಮೆಗಳು ಮತ್ತು ದೀರ್ಘಕಾಲದ ಮೊಕದ್ದಮೆಗಳಿಗೆ ಕಾರಣವಾಗಿದೆ. ವಿಚಾರಣಾ ನ್ಯಾಯಾಲಯವು ಈ ಹಿಂದೆ ಕೇಜ್ರಿವಾಲ್, ಸಿಸೋಡಿಯಾ ಮತ್ತು ಇತರರನ್ನು ಭ್ರಷ್ಟಾಚಾರ ಪ್ರಕರಣದಿಂದ ಖುಲಾಸೆಗೊಳಿಸಿತ್ತು. ಸಿಬಿಐ ಆ ನಿರ್ಧಾರವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿ, ನ್ಯಾಯಮೂರ್ತಿ ಸ್ವರಣ ಕಾಂತ ಶರ್ಮಾ ಅವರ ಪೀಠದ ಮುಂದೆ ತಂದಿತು. ಈ ಬಗ್ಗೆಯೂ ಇದೀಗ ಕೇಜ್ರಿವಾಲ್ ಮತ್ತು ಸಿಸೋಡಿಯಾ ತಗಾದೆ ತೆಗೆದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ