ಉದ್ಯೋಗ ಖಾತ್ರಿ ಕೆಲಸದ ವೇಳೆ ದುರ್ಘಟನೆ: ಬೆಂಕಿಯಂಥ ಬಿಸಿಲಿಗೆ ಬಲಿಯಾದ್ನಾ ಕಾರ್ಮಿಕ? – Kannada News | Raichur MGNREGA Worker Dies: Heat Stroke Suspected, Negligence Alleged

ರಾಯಚೂರು, ಏಪ್ರಿಲ್​​ 28: ಉದ್ಯೋಗ ಖಾತ್ರಿ ಯೋಜನೆಯ ಕೆಲಸಕ್ಕೆ ತೆರಳಿದ್ದ ಕಾರ್ಮಿಕನೋರ್ವ ಏಕಾಏಕಿ ಕುಸಿದುಬಿದ್ದು ಮೃತಪಟ್ಟಿರುವ ಘಟನೆ ರಾಯಚೂರಿನ (Raichur) ಯಾಪಲದಿನ್ನಿ ಗ್ರಾಮದ ಹೊರ ಭಾಗದಲ್ಲಿ ನಡೆದಿದೆ. ಹುಸೇನಪ್ಪ ಮಡಿವಾಳ (49) ಮೃತ ದುರ್ದೈವಿಯಾಗಿದ್ದು, ಕುಸಿದು ಬಿದ್ದ ಈತನನ್ನು ಕೂಡಲೇ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗ ಮಧ್ಯೆಯೇ ಹುಸೇನಪ್ಪ ಉಸಿರು ಚೆಲ್ಲಿದ್ದಾರೆ. ಘಟನೆ ಬೆನ್ನಲ್ಲೇ ಸುಡು ಬಿಸಿಲಿನಲ್ಲಿ ಕಾರ್ಮಿಕರನ್ನು ದುಡಿಸುತ್ತಿದ್ದ ಪಿಡಿಒ ವಿರುದ್ಧ ಆಕ್ರೋಶ ಕೇಳಿಬಂದಿದೆ.

ಹೀಟ್​​ ಸ್ಟ್ರೋಕ್​​ಗೆ ಬಲಿ?

ಇನ್ನು ಸುಮಾರು 40 ಡಿಗ್ರಿ ಸೆಲ್ಸಿಯಸ್​​ ತಾಪಮಾನದ ನಡುವೆಯೂ ಕಾರ್ಮಿಕರು ಯಾಪಲದಿನ್ನಿ ಗ್ರಾಮದ ಹೊರ ಭಾಗದಲ್ಲಿನ ಒಣಗಿ ಹೋಗಿರುವ ಕೆರೆಯಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಹೀಟ್​​ ಸ್ಟ್ರೋಕ್​​ಗೆ ಹುಸೇನಪ್ಪ ಮಡಿವಾಳ ಬಲಿಯಾಗಿದ್ದಾರೆ ಎಂದು ಮೃತನ ಕುಟುಂಬಸ್ಥರು ಮತ್ತು ಸ್ಥಳೀಯರು ಹೇಳ್ತಿದ್ದಾರೆ. ಆದರೆ ಹೀಟ್ ಸ್ಟ್ರೋಕ್​​ಗೆ ಬಲಿಯಾಗಿರೋದನ್ನ ಖಚಿತಪಡಿಸಲು ಪರೀಕ್ಷೆಗಳಿಲ್ಲ. ಮರಣೋತ್ತರ ಪರೀಕ್ಷೆಯಲ್ಲೂ ಆ ಅಂಶವನ್ನ ಪತ್ತೆಮಾಡಲು ಆಗಲ್ಲ ಎಂದು ರಿಮ್ಸ್ ಆಸ್ಪತ್ರೆಯ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ಬಸವರಾಜ್ ಪಾಟೀಲ್ ತಿಳಿಸಿದ್ದಾರೆ. ಬಿಸಿಲಿನ ತಾಪಕ್ಕೆ‌ ದೇಹದಲ್ಲಿ ನೀರಿನ ಅಂಶ ಕಡಿಮೆ ಆಗುವ ಕಾರಣ ಬಿಪಿ ಕಡಿಮೆಯಾಗಿ ಮೃತಪಡುವ ಸಾಧ್ಯತೆ ಇರುತ್ತೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಉದ್ಯೋಗ ಕೊಡಿಸುವ ನೆಪದಲ್ಲಿ ವೇಶ್ಯಾವಾಟಿಕೆ! ಮಹಿಳೆಯರನ್ನ ದಂಧೆಗೆ ಇಳಿಸ್ತಿದ್ದ ಕಿಂಗ್ ಪಿನ್ ಸೇರಿ 11 ಜನ ಅರೆಸ್ಟ್

ಪರಿಹಾರಕ್ಕೆ ಆಗ್ರಹ

ಇನ್ನು ಉದ್ಯೋಗ ಖಾತ್ರಿ ಕೆಲಸ ಮಾಡಿಸುವ ವೇಳೆ ಕನಿಷ್ಠ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂಬ ಆರೋಪ ಮೃತನ ಕಡೆಯವರಿಂದ ಕೇಳಿಬಂದಿದೆ. ಕೆಲಸ ನಡೆಯುತ್ತಿದ್ದ ಸ್ಥಳದಲ್ಲಿ ನೆರಳು, ಕುಡಿಯುವ ನೀರು, ORS ವ್ಯವಸ್ಥೆ ಸೇರಿದಂತೆ ಯಾವುದೂ ಇರಲಿಲ್ಲ. ಹೀಗಾಗಿ ಘಟನೆಗೆ ಯಾಪಲದಿನ್ನಿ ಗ್ರಾಮ ಪಂಚಾಯತಿ ಮತ್ತು ಪಿಡಿಒ ನಿರ್ಲಕ್ಷ್ಯ ಕಾರಣವಾಗಿದ್ದು, ಮೃತನ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂಬ ಆಗ್ರಹ ಕೇಳಿಬಂದಿದೆ. ಓರ್ವ ಕಾರ್ಮಿಕನ ಸಾವಾಗಿದ್ದರೂ ಈವರೆಗೆ ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಯಾರೊಬ್ಬರೂ ಕೂಡ ಮೃತನ ಕುಟುಂಬಸ್ಥರನ್ನು ಸಂಪರ್ಕಿಸಿಲ್ಲ ಎಂದು ಕೂಡ ದೂರಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಕೆರೆಬೇಟೆ’ ಬಳಿಕ ‘ಕಾಮನ್ ಮ್ಯಾನ್’: ಓಂ ಸಾಯಿ ಪ್ರಕಾಶ್ ಜೊತೆ ಗೌರಿ ಶಂಕರ್ ಸಿನಿಮಾ – Kannada News | Common Man Kannada movie ft Gowri Shankar directed by Om Sai Prakash

ನಟ ಗೌರಿ ಶಂಕರ್ (Gowri Shankar) ಅವರು ‘ಕೆರೆಬೇಟೆ’ ಸಿನಿಮಾ ಮೂಲಕ ಗಮನ ಸೆಳೆದಿದ್ದರು. ಆ ಬಳಿಕ ಸಣ್ಣ ಬ್ರೇಕ್ ತೆಗೆದುಕೊಂಡ ಅವರು ಈಗ ಹೊಸ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ (Om Sai Prakash) ಜೊತೆ ಗೌರಿ ಶಂಕರ್ ಸಿನಿಮಾ ಮಾಡುತ್ತಿದ್ದಾರೆ. ಇದು ಓಂ ಸಾಯಿ ಪ್ರಕಾಶ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 106ನೇ ಸಿನಿಮಾ. ಈ ಚಿತ್ರಕ್ಕೆ ‘ಕಾಮನ್ ಮ್ಯಾನ್’ (Common Man) ಎಂದು ಶೀರ್ಷಿಕೆ ಇಡಲಾಗಿದೆ. ಇತ್ತೀಚೆಗೆ ಈ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು.

‘ಕಾಮನ್ ಮ್ಯಾನ್’ ಸಿನಿಮಾದ ಕಥೆ ಏನು ಎಂಬ ಬಗ್ಗೆ ಚಿತ್ರತಂಡದವರು ಮಾಹಿತಿ ನೀಡಿದರು. ಸಾಮಾನ್ಯ ವ್ಯಕ್ತಿಯೊಬ್ಬ ರಾಜ್ಯದ ಮುಖ್ಯಮಂತ್ರಿಯಾದರೆ ಹೇಗಿರುತ್ತದೆ? ಈ ಎಳೆಯನ್ನು ಇಟ್ಟುಕೊಂಡು ಎನ್. ನರಸಿಂಹಮೂರ್ತಿ ಅವರು ಕಥೆ ಬರೆದು ‘ಸುರಭಿ ಫಿಲ್ಮ್ಸ್’ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಚಿತ್ರದ ಟೈಟಲ್ ಮತ್ತು ಫಸ್ಟ್ ಲುಕ್ ಬಿಡುಗಡೆ ಮಾಡಲಾಯಿತು.

ಸುದ್ದಿಗೋಷ್ಠಿಯಲ್ಲಿ ಓಂ ಸಾಯಿ ಪ್ರಕಾಶ್ ಅವರು ಮಾತನಾಡಿದರು. ‘ಜೀವನದಲ್ಲಿ ಪ್ರತಿಯೊಬ್ಬರಿಗೂ ಏನಾದರೂ ಆಸೆ ಇರುತ್ತೆ. ಈ ಕಥೆಯಲ್ಲಿ ನಾಯಕ ಒಬ್ಬ ಲಾಯರ್. ಅನಿರೀಕ್ಷಿತವಾಗಿ ಅವನು ಮುಖ್ಯಮಂತ್ರಿ ಆಗುತ್ತಾನೆ. ನಂತರ ಅವನು ಏನೇನು ಮಾಡಬಹುದು ಎಂಬುದನ್ನು ಕುತೂಹಲಕರವಾಗಿ ತೋರಿಸುವ ಪ್ರಯತ್ನ ಮಾಡಿದ್ದೇನೆ. ಕಥೆ ಕೇಳಿದ ಕೂಡಲೇ ಇದು ಶೇಕಡ 100ರಷ್ಟು ಓಪನಿಂಗ್ ತೆಗೆದುಕೊಳ್ಳುತ್ತದೆ ಎನಿಸಿತು. ಇದು ಕಂಟೆಂಟ್ ಸಿನಿಮಾ, ಜಾತ್ರೆ ಸಿನಿಮಾ ಅಲ್ಲ’ ಎಂದು ಅವರು ಹೇಳಿದರು.

ರಂಗಭೂಮಿ ನಂಟು ಹೊಂದಿರುವ ನಿರ್ಮಾಪಕ ಎನ್. ನರಸಿಂಹಮೂರ್ತಿ ಮಾತನಾಡಿ, ‘ಈ ಮೊದಲು ಎರಡು ಚಿತ್ರಗಳನ್ನು ನಿರ್ಮಾಣ ಮಾಡಿದ್ದೆ. ಅದರಿಂದ ಸಾಕಷ್ಟು ಪಾಠವನ್ನೂ ಕಲಿತೆ. ಇದು ನನ್ನ ಮೂರನೇ ಸಿನಿಮಾ. ಇಂಥ ನಿರ್ದೇಶಕರ ಜತೆ ಎಷ್ಟು ಸಿನಿಮಾ ಬೇಕಾದರೂ ಮಾಡಬಹುದು‌. ಮಾತಿನ ಭಾಗ 40 ದಿನ ಚಿತ್ರೀಕರಣ ಎಂದಿದ್ದರು. ಆದರೆ 32 ದಿನಕ್ಕೇ ಮುಗಿಸಿದರು. ಚಿತ್ರದಲ್ಲಿ ನಾನು ಒಬ್ಬ ಮುಖ್ಯಮಂತ್ರಿಯ ಪಾತ್ರ ಮಾಡಿದ್ದೇನೆ’ ಎಂದರು.

ಇದನ್ನೂ ಓದಿ: ‘ಕೆರೆಬೇಟೆ 100 ಪರ್ಸೆಂಟ್​ ಚೆನ್ನಾಗಿದೆ’; ಗೆಳೆಯನ ಸಿನಿಮಾ ನೋಡಿ ಮೆಚ್ಚಿದ ಧ್ರುವ ಸರ್ಜಾ

ಓಂ ಸಾಯಿ ಪ್ರಕಾಶ್ ನಿರ್ದೇಶನದ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದಕ್ಕೆ ಗೌರಿ ಶಂಕರ್ ಸಂತಸ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾತನಾಡಿದರು. ‘ರಾಜಹಂಸ, ಕೆರೆಬೇಟೆ ನಂತರ ನನ್ನ ಅಭಿನಯದ 3ನೇ ಚಿತ್ರವಿದು. ನಿರ್ದೇಶಕರು ಹಾಕಿಕೊಂಡ ಪ್ಲಾನ್ ಪ್ರಕಾರವೇ ಸಿನಿಮಾ ಮಾಡಿ ಮುಗಿಸಿದ್ದಾರೆ. ಕೆರೆಬೇಟೆ ಬಳಿಕ ಒಳ್ಳೆಯ ಕಥೆಗಾಗಿ ಕಾಯುತ್ತಿದ್ದೆ. ಬಯಸಿದಂತಹ ಪಾತ್ರವೇ ಹುಡುಕಿಕೊಂಡು ಬಂತು’ ಎಂದು ಗೌರಿ ಶಂಕರ್ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಸೋಫಾ ಅಳತೆ ಮಾಡಿಕೊಡು ಬಾ’ ಎಂದು ಕರೆದು ಬರ್ಬರವಾಗಿ ಹತ್ಯೆ; ಬಾರ್ ಎದುರೇ ಯುವಕನ ತಲೆ ಮೇಲೆ ಕಲ್ಲು ಎತ್ತಿಹಾಕಿದ ಆಟೋ ಚಾಲಕ! – Kannada News | Kolar Crime News: Sofa Maker Murdered in Drug Fueled Brawl; Accused Arrested

ಕೋಲಾರ, ಏ.28: ಜಿಲ್ಲೆಯಲ್ಲಿ ಒಂದು ಆರ್ಡರ್​ ಇದೆ ಎಂದು ನಂಬಿಸಿ ಕರೆದೊಯ್ದು ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೋಲಾರ ನಗರದ ಹೊರವಲಯದಲ್ಲಿ ನಡೆದಿದೆ. ಬೀಡಿ ಕಾಲೋನಿಯ ನಿವಾಸಿ ಸಲ್ಮಾನ್ ಪಾಷಾ (26) ಕೊಲೆಯಾದ ದುರ್ದೈವಿ ಎಂದು ಹೇಳಲಾಗಿದ . ಸೋಫಾ ತಯಾರಿಕೆ ಮತ್ತು ರಿಪೇರಿ ಕೆಲಸ ಮಾಡಿಕೊಂಡಿದ್ದ ಸಲ್ಮಾನ್ ಪಾಷಾ ಮನೆಗೆ ನಿನ್ನೆ ರಾತ್ರಿ 11:30ರ ಸುಮಾರಿಗೆ ಪರಿಚಯಸ್ಥ ಹುಡುಗರು ಬಂದಿದ್ದರು. “ಹೊಸ ಸೋಫಾ ಆರ್ಡರ್ ಬಂದಿದೆ, ಅದರ ಅಳತೆ ತೆಗೆದುಕೊಳ್ಳಲು ಬಾ” ಎಂದು ಹೇಳಿ ಆಟೋದಲ್ಲಿ ಸಲ್ಮಾನ್‌ನನ್ನು ಕರೆದುಕೊಂಡು ಹೋಗಿದ್ದಾರೆ.

ಎಪಿಎಂಸಿ ಮಾರುಕಟ್ಟೆ ಸಮೀಪದ ಮೆಹಬೂಬ್ ಪೆಟ್ರೋಲ್ ಬಂಕ್ ಬಳಿಯಿರುವ ಲಕ್ಷ್ಮೀ ಬಾರ್ ಬಳಿ ಬಂದಾಗ ಎಲ್ಲರೂ ಮದ್ಯಪಾನ ಮಾಡಿದ್ದಾರೆ. ಈ ವೇಳೆ ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಸಲ್ಮಾನ್ ಮತ್ತು ಜಮಾಲ್ ಷಾ ನಗರದ ಆಟೋ ಚಾಲಕ ಅಬ್ದುಲ್ ರಶೀದ್ ನಡುವೆ ಗಲಾಟೆ ಶುರುವಾಗಿದೆ. ಗಾಂಜಾ ಮತ್ತು ಮದ್ಯದ ಅಮಲಿನಲ್ಲಿದ್ದ ಅಬ್ದುಲ್ ರಶೀದ್ ಏಕಾಏಕಿ ಸಲ್ಮಾನ್ ಪಾಷಾ ಮೇಲೆ ಕಲ್ಲು ಎತ್ತಿಹಾಕಿ, ನಂತರ ಚಾಕುವಿನಿಂದ ಮನಸೋಇಚ್ಛೆ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಸಲ್ಮಾನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಘಟನೆ ನಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ ನಗರ ಠಾಣಾ ಪೊಲೀಸರು, ಕೊಲೆ ಮಾಡಿ ಅದೇ ಸ್ಥಳದಲ್ಲಿ ಕುಡಿದ ಮತ್ತಿನಲ್ಲಿ ಬಿದ್ದಿದ್ದ ಆರೋಪಿ ಅಬ್ದುಲ್ ರಶೀದ್‌ನನ್ನು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಆರೋಪಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಮುಂದಿನ ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ಎಂ.ಜಿ. ರೋಡ್​ನಲ್ಲಿರುವ ಪ್ರತಿಷ್ಠಿತ ಹೋಟೆಲ್‌ನಲ್ಲಿ ಯುವತಿ ಮೇಲೆ ಹಲ್ಲೆ; ಮ್ಯಾನೇಜರ್ ಮೇಲೆ ಬಟ್ಟೆ ಹರಿಯಲು ಯತ್ನಿಸಿದ ಆರೋಪ

“ಮನೆಗೆ ಆಸರೆಯಾಗಿದ್ದ ಮಗನನ್ನು ಆರ್ಡರ್ ಕೊಡ್ತೀವಿ ಅಂತ ಸುಳ್ಳು ಹೇಳಿ ಕರೆದುಕೊಂಡು ಹೋಗಿ ಕೊಂದಿದ್ದಾರೆ” ಎಂದು ಸಲ್ಮಾನ್ ತಂದೆ ಖಾದರ್ ಪಾಷಾ ಮತ್ತು ತಾಯಿ ಶಕೀಲಾ ಕಣ್ಣೀರಿಡುತ್ತಿದ್ದಾರೆ. ಜಿಲ್ಲೆಯಲ್ಲಿ ಗಾಂಜಾ ಮತ್ತು ಮಾದಕ ವಸ್ತುಗಳ ಹಾವಳಿ ಹೆಚ್ಚಾಗಿದ್ದು, ಇಂತಹ ಕೃತ್ಯಗಳಿಗೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

31 ವರ್ಷ ಜೈಲಿನಲ್ಲಿದ್ದ ರಾಜೀವ್ ಗಾಂಧಿ ಹತ್ಯೆಯ ಅಪರಾಧಿ ಈಗ ಹೈಕೋರ್ಟ್ ವಕೀಲ! – Kannada News | After 31 years in jail Rajiv Gandhi assassination convict becomes High Court advocate

ಚೆನ್ನೈ, ಏಪ್ರಿಲ್ 28: ಮಾಜಿ ಪ್ರಧಾನಿ ರಾಜೀವ್ ಗಾಂಧಿ (Rajiv Gandhi) ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಎ.ಜಿ. ಪೆರಾರಿವಾಲನ್ ಇದೀಗ ಹೈಕೋರ್ಟ್​ ವಕೀಲರಾಗಿದ್ದಾರೆ. 2022ರಲ್ಲಿ ಶಿಕ್ಷೆಯಿಂದ ವಿನಾಯಿತಿ ಪಡೆದು ಬಿಡುಗಡೆಯಾದ ಪೆರಾರಿವಾಲನ್ ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಕಾನೂನು ಕಾಲೇಜಿನಲ್ಲಿ ಕಾನೂನು ಅಧ್ಯಯನ ಮಾಡಿದರು. 2025ರಲ್ಲಿ ಅಖಿಲ ಭಾರತ ವಕೀಲರ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಅವರು ಈಗ ವಕೀಲರಾಗಿದ್ದಾರೆ.

ರಾಜೀವ್ ಗಾಂಧಿ ಹತ್ಯೆಯ ಆರೋಪಿಯಾಗಿದ್ದ ಪೆರಾರಿವಾಲನ್ ಅವರನ್ನು 2022ರ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಬಿಡುಗಡೆ ಮಾಡಲಾಯಿತು. ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ಅದರ ಅಧಿಕಾರವನ್ನು ಬಳಸಿಕೊಂಡು ಅವರ ದೀರ್ಘಕಾಲದ ಸೆರೆವಾಸವನ್ನು ಉಲ್ಲೇಖಿಸಲಾಯಿತು. ಅವರ ಮರಣದಂಡನೆಯನ್ನು ಈ ಹಿಂದೆ ಜೀವಾವಧಿ ಶಿಕ್ಷೆಗೆ ಇಳಿಸಲಾಗಿತ್ತು. ಅವರ ವಿರುದ್ಧದ ಭಯೋತ್ಪಾದನೆಗೆ ಸಂಬಂಧಿಸಿದ ಆರೋಪಗಳನ್ನು ಹಿಂತೆಗೆದುಕೊಳ್ಳಲಾಗಿತ್ತು.

ಜೈಲಿನಿಂದ ಬಿಡುಗಡೆಯಾದ ನಂತರ ಪೆರಾರಿವಾಲನ್ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಡಿಯಲ್ಲಿ ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಕಾನೂನು ಕಾಲೇಜಿಗೆ ಸೇರಿಕೊಂಡರು. 2025ರಲ್ಲಿ ಅವರು ತಮ್ಮ ಪದವಿಯನ್ನು ಪೂರ್ಣಗೊಳಿಸಿದರು. ಅದೇ ವರ್ಷ ಅಖಿಲ ಭಾರತ ಬಾರ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು.

ಇದನ್ನೂ ಓದಿ: ರಾಜೀವ್ ಗಾಂಧಿ ಮೃತದೇಹದ ಒಂದು ಚೂರೂ ಸಿಗಲಿಲ್ಲ; ವಿವಾದಕ್ಕೀಡಾದ ಆಜಂ ಖಾನ್ ಹೇಳಿಕೆ

ಪೆರಾರಿವಾಲನ್ ತಮ್ಮ ಜೀವನದ 31 ವರ್ಷಗಳನ್ನು ಆರೋಪಿ ಮತ್ತು ಅಪರಾಧಿಯಾಗಿ ಕಳೆದಿದ್ದರು. ಅದೇ ಕಾನೂನು ವ್ಯವಸ್ಥೆಯಲ್ಲಿ ಈಗ ಮದ್ರಾಸ್ ಹೈಕೋರ್ಟ್‌ನಲ್ಲಿ ವಕೀಲರಾಗಿ ಅಭ್ಯಾಸ ಮಾಡಲಿದ್ದಾರೆ. ಅವರಿಗೆ 54 ವರ್ಷ. ಸೋಮವಾರ ಕಪ್ಪು ಕೋಟ್ ಧರಿಸಿ, ಅವರು ತಮಿಳುನಾಡು ಮತ್ತು ಪುದುಚೇರಿಯ ಬಾರ್ ಅಸೋಸಿಯೇಷನ್‌ನಲ್ಲಿ ವಕೀಲರಾಗಿ ಸೇರಿಕೊಂಡರು.

1991ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಾಗ ಪೆರಾರಿವಾಲನ್ ಅವರಿಗೆ ಕೇವಲ 19 ವರ್ಷ ವಯಸ್ಸಾಗಿತ್ತು. ಈ ಹತ್ಯೆಯನ್ನು ಭಯೋತ್ಪಾದಕ ಸಂಘಟನೆ ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಳಂ (LTTE) ನಡೆಸಿತ್ತು. ಪೆರಾರಿವಾಲನ್ ಅವರನ್ನು ಅವರ ಮನೆಯಿಂದ ವಿಚಾರಣೆಗಾಗಿ ಕರೆದೊಯ್ಯಲಾಗಿತ್ತು. ಮರುದಿನ ಅವರನ್ನು ಕಳುಹಿಸುತ್ತೇವೆ ಎಂದು ಪೊಲೀಸರು ಹೇಳಿದ್ದರು. ಹೀಗಾಗಿ, ಅವರ ಪೋಷಕರೇ ಅವರನ್ನು ಪೊಲೀಸರಿಗೆ ಒಪ್ಪಿಸಿದ್ದರು. ಆದರೆ ಅವರನ್ನು ಬಿಡುಗಡೆ ಮಾಡಲಿಲ್ಲ. ಕೇಂದ್ರ ತನಿಖಾ ದಳ (ಸಿಬಿಐ) ಅವರನ್ನು ಕಸ್ಟಡಿಯಲ್ಲಿಟ್ಟುಕೊಂಡಿತು. ಅವರ ತಾಯಿಗೆ ಸಹ ಅವರನ್ನು ಭೇಟಿಯಾಗಲು ಅವಕಾಶ ನೀಡಲಿಲ್ಲ.

ನ್ಯಾಯಾಲಯವನ್ನು ಸಂಪರ್ಕಿಸುವುದರಿಂದ ಅವರ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎಂದು ಭಯಪಟ್ಟ ಅವರ ಕುಟುಂಬವು ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಲು ಹೆದರಿತು. ತಮ್ಮ ಮಗನನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ ಎಂದು ನಂಬಿತ್ತು. ಆದರೆ, ರಾಜೀವ್ ಗಾಂಧಿಯವರ ಹತ್ಯೆಗೆ ಕಾರಣವಾದ ಬಾಂಬ್ ಅನ್ನು ಸ್ಫೋಟಿಸಲು ಬಳಸಲಾದ 9 ವೋಲ್ಟ್ ಬ್ಯಾಟರಿಯನ್ನು ಪೆರಾರಿವಾಲನ್ ಖರೀದಿಸಿ ಕೊಟ್ಟಿದ್ದರು ಎಂಬುದು ಪೆರಾರಿವಾಲನ್ ವಿರುದ್ಧದ ಆರೋಪವಾಗಿತ್ತು. ಈ ಆರೋಪಕ್ಕೆ ಸಾಕ್ಷಿಯಾಗಿ ಅಂಗಡಿಯೊಬ್ಬ ಪೆರಾರಿವಾಲನ್ ತನ್ನ ಅಂಗಡಿಯಿಂದ ಬ್ಯಾಟರಿಯನ್ನು ಖರೀದಿಸಿದ್ದಾರೆ ಎಂದು ಹೇಳಿದ್ದ. ಹೀಗಾಗಿ, ಅವರ ವಿರುದ್ಧ ಭಯೋತ್ಪಾದಕ ಮತ್ತು ವಿಧ್ವಂಸಕ ಚಟುವಟಿಕೆಗಳನ್ನು ತಡೆಗಟ್ಟುವಿಕೆ ಕಾಯ್ದೆ (ಟಾಡಾ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಇದನ್ನೂ ಓದಿ: Rajiv Gandhi Assassination Case: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ಸಂತನ್ ಸಾವು

1998ರಲ್ಲಿ ಟಾಡಾ ನ್ಯಾಯಾಲಯವು ರಾಜೀವ್ ಗಾಂಧಿ ಹತ್ಯೆಯಲ್ಲಿ ಕೊಲೆಗೆ ಸಂಚು ರೂಪಿಸಿದ ಆರೋಪ ಹೊತ್ತಿರುವ ಪೆರಾರಿವಾಲನ್ ಮತ್ತು ಇತರರನ್ನು ದೋಷಿ ಎಂದು ಘೋಷಿಸಿತು. ಆರಂಭದಲ್ಲಿ ನ್ಯಾಯಾಲಯವು ಅವರಿಗೆ ಮರಣದಂಡನೆ ವಿಧಿಸಿತು. ಈ ತೀರ್ಪನ್ನು 1999ರಲ್ಲಿ ಸುಪ್ರೀಂ ಕೋರ್ಟ್ ಎತ್ತಿಹಿಡಿಯಿತು. ಭಾರತ ಸರ್ಕಾರವು ಅವರ ಕ್ಷಮಾದಾನ ಅರ್ಜಿಯನ್ನು ನಿರ್ಧರಿಸುವಲ್ಲಿ 11 ವರ್ಷಗಳ ವಿಳಂಬದಿಂದಾಗಿ 2014ರಲ್ಲಿ ಸುಪ್ರೀಂ ಕೋರ್ಟ್ ಅವರ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿತು.

ಪೆರಾರಿವಾಲನ್ ಅವರ ಕುಟುಂಬದ ಹಲವು ವರ್ಷಗಳ ಕಾನೂನು ಹೋರಾಟದ ನಂತರ ಸುಪ್ರೀಂ ಕೋರ್ಟ್ ಮೇ 18, 2022ರಂದು ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ 31 ವರ್ಷಗಳ ಕಾಲ ಜೈಲಿನಲ್ಲಿ ಕಳೆದ ಪೆರಾರಿವಾಲನ್ ಅವರನ್ನು 142ನೇ ವಿಧಿಯ ಅಡಿಯಲ್ಲಿ ಅಧಿಕಾರವನ್ನು ಬಳಸಿಕೊಂಡು ಬಿಡುಗಡೆ ಮಾಡಲು ಆದೇಶಿಸಿತು.

ಜೈಲಿನಲ್ಲಿದ್ದರೂ ಪೆರಾರಿವಾಲನ್ ತಮ್ಮ ಶಿಕ್ಷಣವನ್ನು ಮುಂದುವರಿಸಿದ್ದರು. ತಮಿಳುನಾಡು ಮುಕ್ತ ವಿಶ್ವವಿದ್ಯಾಲಯ ನಡೆಸಿದ ಡಿಪ್ಲೊಮಾ ಕೋರ್ಸ್‌ನಲ್ಲಿ ಅಗ್ರಸ್ಥಾನ ಪಡೆದ ನಂತರ ಅವರು ಚಿನ್ನದ ಪದಕವನ್ನು ಪಡೆದರು. ಪ್ಲಸ್ ಟು ಪರೀಕ್ಷೆಯಲ್ಲಿ ಅವರು 1,200ರಲ್ಲಿ 1,096 ಅಂಕಗಳನ್ನು ಗಳಿಸುವ ಮೂಲಕ ಕೈದಿಗಳಲ್ಲಿ ಮೊದಲ ಸ್ಥಾನ ಪಡೆದರು. ಕೇಂದ್ರ ಕಾರಾಗೃಹದಲ್ಲಿ ಜೈಲು ಶಿಕ್ಷೆಯ ಸಮಯದಲ್ಲಿ, ಅವರು ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಅಪ್ಲಿಕೇಶನ್‌ಗಳಲ್ಲಿ ಪದವಿ ಮತ್ತು ಕಂಪ್ಯೂಟರ್ ಅಪ್ಲಿಕೇಶನ್‌ಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು. ಇದರ ಜೊತೆಗೆ 7 ಹೆಚ್ಚುವರಿ ಡಿಪ್ಲೊಮಾ ಕೋರ್ಸ್‌ಗಳನ್ನು ಪೂರ್ಣಗೊಳಿಸಿದರು. ಮರಣದಂಡನೆಯನ್ನು ಎದುರಿಸುತ್ತಿರುವಾಗ ಅವರು ಅವುಗಳಲ್ಲಿ ಕೆಲವನ್ನು ಪೂರ್ಣಗೊಳಿಸಿದ್ದರು.

2022ರಲ್ಲಿ ಬಿಡುಗಡೆಯಾದ ನಂತರ ಪೆರಾರಿವಾಲನ್ ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಕಾನೂನು ಕಾಲೇಜಿಗೆ ಸೇರಿದರು. ಅಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಿದರು. ನಂತರ, ಅವರು 2025 ರಲ್ಲಿ ಅಖಿಲ ಭಾರತ ವಕೀಲರ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, “ನನ್ನ ಮಹತ್ವಾಕಾಂಕ್ಷೆ ಪ್ರಸಿದ್ಧ ಕ್ರಿಮಿನಲ್ ವಕೀಲರಾಗುವುದಲ್ಲ. ಕಾನೂನು ನೆರವು ಇಲ್ಲದೆ ಜೈಲಿನಲ್ಲಿರುವ ಸಾವಿರಾರು ಕೈದಿಗಳಿಗೆ ಧ್ವನಿಯಾಗುವುದು ನನ್ನ ಗುರಿ. ವಿಶೇಷವಾಗಿ ಅಕಾಲಿಕ ಬಿಡುಗಡೆಗಾಗಿ ಕಾಯುತ್ತಿರುವ, ಸಹಾಯವನ್ನು ಪಡೆಯಲು ಸಾಧ್ಯವಾಗದ ಕಾರಣದಿಂದ ನ್ಯಾಯವನ್ನು ಪಡೆಯಲಾಗದ ಬಡ ಜೀವಾವಧಿ ಶಿಕ್ಷೆಗೊಳಗಾದವರಿಗೆ ನ್ಯಾಯ ಕೊಡಿಸುವುದು ನನ್ನ ಉದ್ದೇಶ” ಎಂದು ಪೆರಾರಿವಾಲನ್ ತಮಿಳುನಾಡು ಮತ್ತು ಪುದುಚೇರಿಯ ಬಾರ್ ಅಸೋಸಿಯೇಷನ್‌ಗೆ ವಕೀಲರಾಗಿ ಸೇರ್ಪಡೆಗೊಂಡ ನಂತರ ದಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶೂಟಿಂಗ್ ವೇಳೆ ಕೆಟ್ಟದಾಗಿ ಪ್ರ್ಯಾಂಕ್ ಮಾಡಿ ನಟಿಗೆ ಆಘಾತ ಉಂಟುಮಾಡಿದ್ದ ಅಕ್ಷಯ್ ಕುಮಾರ್ – Kannada News | Jacqueline Fernandez reveals traumatizing Prank by Akshay Kumar on Wheel Of Fortune finale

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಜನಪ್ರಿಯ ರಿಯಾಲಿಟಿ ಗೇಮ್ ಶೋ ‘ವೀಲ್ ಆಫ್ ಫಾರ್ಚೂನ್’ (Wheel of Fortune) ಏಪ್ರಿಲ್ 27ರಂದು ಮುಕ್ತಾಯವಾಗಿದೆ. ಈ ಫಿನಾಲೆ ಸಂಚಿಕೆಯಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಒಂದು ಇಂಟರೆಸ್ಟಿಂಗ್ ವಿಷಯ ಹಂಚಿಕೊಂಡಿದ್ದಾರೆ. ಅಕ್ಷಯ್ ಕುಮಾರ್ (Akshay Kumar) ಅವರು ಈ ಹಿಂದೆ ತಮಗೆ ಮಾಡಿದ್ದ ಒಂದು ಕೆಟ್ಟ ಪ್ರ್ಯಾಂಕ್ ಬಗ್ಗೆ ಈಗ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಬಾಯಿ ಬಿಟ್ಟಿದ್ದಾರೆ. ಆ ಪ್ರ್ಯಾಂಕ್​ನಿಂದ ತಮಗೆ ಆಘಾತ ಆಗಿತ್ತು ಎಂದು ಅವರು ಹೇಳಿದ್ದಾರೆ.

‘ಹೌಸ್‌ಫುಲ್’ ಸಿನಿಮಾದ ಹಾಡಿನ ಚಿತ್ರೀಕರಣದ ವೇಳೆ ಈ ಘಟನೆ ನಡೆದಿತ್ತು. ‘ಅದು ನನ್ನ ಮೊದಲ ಐಟಂ ಸಾಂಗ್ ಆಗಿತ್ತು. ಸೆಟ್‌ನಲ್ಲಿ ಸಾಕಷ್ಟು ಭದ್ರತಾ ಸಿಬ್ಬಂದಿ ಇದ್ದರು. ಇದನ್ನು ಗಮನಿಸಿದ ಅಕ್ಷಯ್ ನನ್ನ ಬಳಿ ಬಂದು, ನೀನು ಏನೋ ತಪ್ಪು ಮಾಡಿದ್ದೀಯಾ ಅನ್ಸುತ್ತೆ, ನೋಡು ಪೊಲೀಸರು ನಿನ್ನನ್ನೇ ಹುಡುಕಿಕೊಂಡು ಬಂದಿದ್ದಾರೆ. ಶೂಟಿಂಗ್ ಮುಗಿದ ಕೂಡಲೇ ನಿನ್ನನ್ನು ಸ್ಟೇಷನ್‌ಗೆ ಕರೆದೊಯ್ಯುತ್ತಾರೆ ಅಂತ ಗಂಭೀರವಾಗಿ ಸುಳ್ಳು ಹೇಳಿದ್ದರು’ ಎಂದಿದ್ದಾರೆ ಜಾಕ್ವೆಲಿನ್.

ಅಕ್ಷಯ್ ಅವರ ಈ ಮಾತನ್ನು ನಿಜವೆಂದು ನಂಬಿದ್ದ ಜಾಕ್ವೆಲಿನ್, ಇಡೀ ಹಾಡಿನ ಚಿತ್ರೀಕರಣದುದ್ದಕ್ಕೂ ಭಯದಲ್ಲೇ ನಟಿಸಿದ್ದರಂತೆ. ‘ಆ ಪ್ರ್ಯಾಂಕ್ ನನಗೆ ನಿಜಕ್ಕೂ ಆಘಾತ ಉಂಟುಮಾಡಿತ್ತು’ ಎಂದು ಅವರು ನಗುತ್ತಲೇ ನೆನಪಿಸಿಕೊಂಡರು. ಜಾಕ್ವೆಲಿನ್ ಅವರು ಅಕ್ರಮ ಹಣ ಸಾಗಣೆ ಪ್ರಕರಣದಲ್ಲಿ ಆರೋಪಿ ಆಗಿದ್ದಾರೆ. ಹಾಗಾಗಿ ಅವರು ಪೊಲೀಸರಿಗೆ ಹೆದರಿರುವ ಸಾಧ್ಯತೆ ಇದೆ.

ರಿಯಾಲಿಟಿ ಶೋನಲ್ಲಿ ಜಾಕ್ವೆಲಿನ್ ಅವರ ಮಾತಿಗೆ ತಮಾಷೆಯಾಗಿ ಪ್ರತಿಕ್ರಿಯಿಸಿದ ಅಕ್ಷಯ್ ಕುಮಾರ್, ‘ನೀವು ಪೊಲೀಸರಿಗೆ ಹೆದರಿದ್ದಲ್ಲ, ಆ ಸಮಯದಲ್ಲಿ ನಿಮ್ಮ ಬಳಿ ಸರಿಯಾದ ವೀಸಾ ಇರಲಿಲ್ಲ. ಅದಕ್ಕೆ ಅಷ್ಟು ಹೆದರಿದ್ದು’ ಎಂದು ಕಾಲೆಳೆದರು. ಬಳಿಕ ಅಕ್ಷಯ್ ಅವರು ತಮ್ಮ ಈ ತಮಾಷೆಗಾಗಿ ಜಾಕ್ವೆಲಿನ್ ಅವರಲ್ಲಿ ಕ್ಷಮೆಯನ್ನೂ ಕೇಳಿದರು.

ಇದನ್ನೂ ಓದಿ: ಅಕ್ಷಯ್ ಕುಮಾರ್ ಪುತ್ರ ಆರವ್ ಭಾಟಿಯಾ ತಿಂಗಳ ಸಂಬಳ ಕೇವಲ 4,500 ರೂಪಾಯಿ

ಇದೇ ವೇಳೆ ನಟಿ ಭೂಮಿ ಪೆಡ್ನೇಕರ್ ಕೂಡ ‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’ ಶೂಟಿಂಗ್ ವೇಳೆ ಅಕ್ಷಯ್ ತಮ್ಮನ್ನು ಬೈಕ್‌ನಲ್ಲಿ ಕೂರಿಸಿಕೊಂಡು ವೇಗವಾಗಿ ಹೋಗಿ ಹೇಗೆ ಹೆದರಿಸಿದ್ದರು ಎಂದು ಹಂಚಿಕೊಂಡರು. ಇನ್ನು, ನಿರ್ದೇಶಕಿ ಫರ್ಹಾ ಖಾನ್ ಅವರನ್ನು ಅಕ್ಷಯ್ ಕೆಣಕಿದಾಗ, ‘ನನ್ನ ಜೊತೆ ನೀವು ತೀಸ್ ಮಾರ್ ಖಾನ್ ಮತ್ತು ಜೋಕರ್ ಅಂತಹ ಫ್ಲಾಪ್ ಸಿನಿಮಾಗಳನ್ನು ಮಾಡಿದ್ದೇ ದೊಡ್ಡ ಪ್ರ್ಯಾಂಕ್, ಅದಕ್ಕಿಂತ ದೊಡ್ಡದು ಯಾವುದಿದೆ’ ಎಂದು ತಿರುಗೇಟು ನೀಡಿ ತಮಾಷೆ ಮಾಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

PBKS vs RR Playing XI: ಬಲಿಷ್ಠ ಪಡೆಗಳನ್ನೇ ಕಣಕ್ಕಿಳಿಸಿದ ಕಿಂಗ್ಸ್ ಮತ್ತು ರಾಯಲ್ಸ್ – Kannada News | PBKS vs RR Playing XI Punjab Kings vs Rajasthan Royals Today IPL 2026 match Confirmed playing 11 details with name in Kannada

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 40ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ಹಾಗೂ ರಾಜಸ್ಥಾನ್ ರಾಯಲ್ಸ್ (RR) ತಂಡಗಳು ಮುಖಾಮುಖಿಯಾಗಿವೆ. ಮುಲ್ಲನ್​ಪುರ್​ನಲ್ಲಿರುವ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಬೌಲಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಪಂಜಾಬ್ ಕಿಂಗ್ಸ್ ತಂಡವು ಮೊದಲು ಬ್ಯಾಟ್ ಮಾಡಲಿದೆ. ಇನ್ನು ಈ ಪಂದ್ಯಕ್ಕಾಗಿ ಉಭಯ ತಂಡಗಳಲ್ಲಿ ಕೆಲ ಬದಲಾವಣೆ ಮಾಡಲಾಗಿದೆ.

ಈ ಪಂದ್ಯದಲ್ಲಿ ಶಿಮ್ರಾನ್ ಹೆಟ್ಮೆಯರ್ ಬದಲಿಗೆ ರಾಜಸ್ಥಾನ್ ರಾಯಲ್ಸ್ ಪರ ದಸುನ್ ಶಾನಕ ಕಣಕ್ಕಿಳಿದಿದ್ದಾರೆ. ಹಾಗೆಯೇ ರವಿ ಬಿಷ್ಣೋಯ್ ಬದಲಿಗೆ ಯಶ್ ರಾಜ್ ಪೂಂಜಾ ಆಡುತ್ತಿದ್ದಾರೆ. ಇನ್ನು ಪಂಜಾಬ್ ಕಿಂಗ್ಸ್ ಪರ ಸುರ್ಯಾಂಶ್ ಶೆಡ್ಗೆ ಹಾಗೂ ಲಾಕಿ ಫರ್ಗುಸನ್ ಈ ಪಂದ್ಯದಲ್ಲಿ ಕಣಕ್ಕಿಳಿದಿದ್ದಾರೆ. ಅದರಂತೆ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್  ಈ ಕೆಳಗಿನಂತಿದೆ…

ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ವೈಭವ್ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರಿಯಾನ್ ಪರಾಗ್ (ನಾಯಕ), ಡೊನೊವನ್ ಫೆರೇರಾ, ರವೀಂದ್ರ ಜಡೇಜಾ, ದಸುನ್ ಶಾನಕ, ಜೋಫ್ರಾ ಆರ್ಚರ್, ನಾಂಡ್ರೆ ಬರ್ಗರ್, ಬ್ರಿಜೇಶ್ ಶರ್ಮಾ, ಯಶ್ ರಾಜ್ ಪೂಂಜಾ.

ಪಂಜಾಬ್ ಕಿಂಗ್ಸ್ (ಪ್ಲೇಯಿಂಗ್ XI): ಪ್ರಭ್​ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಪ್ರಿಯಾಂಶ್ ಆರ್ಯ, ಶ್ರೇಯಸ್ ಅಯ್ಯರ್ (ನಾಯಕ), ಕೂಪರ್ ಕೊನೊಲಿ, ಸೂರ್ಯಾಂಶ್ ಶೆಡ್ಗೆ, ನೆಹಾಲ್ ವಧೇರಾ, ಮಾರ್ಕಸ್ ಸ್ಟೊಯಿನಿಸ್, ಮಾರ್ಕೊ ಯಾನ್ಸೆನ್, ಲಾಕಿ ಫರ್ಗುಸನ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಹಲ್.

ಹೆಡ್ ಟು ಹೆಡ್​:

ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ 2008 ರಿಂದ ಐಪಿಎಲ್​ನಲ್ಲಿ ಕಣಕ್ಕಿಳಿಯುತ್ತಿರುವ ತಂಡಗಳು. ಈ ತಂಡಗಳು ಈವರೆಗೆ 30 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಅತ್ಯಧಿಕ ಪಂದ್ಯಗಳನ್ನು ಗೆದ್ದಿರುವುದು ರಾಜಸ್ಥಾನ್ ರಾಯಲ್ಸ್. ಆರ್​ಆರ್​ ಒಟ್ಟು 17 ಮ್ಯಾಚ್​ಗಳಲ್ಲಿ ಗೆಲುವು ದಾಖಲಿಸಿದರೆ, ಪಂಜಾಬ್ ಕಿಂಗ್ಸ್ ಕೇವಲ 13 ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿದೆ.

ಇದಾಗ್ಯೂ ಕಳೆದ ಸೀಸನ್​ನಲ್ಲಿನ ಮುಖಾಮುಖಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಮ್ಯಾಚ್​ನಲ್ಲಿ ಜಯ ಸಾಧಿಸಿತ್ತು. ಅಲ್ಲದೆ ಪ್ರಸ್ತುತ ಅಂಕ ಪಟ್ಟಿಯಲ್ಲಿ ಪಂಜಾಬ್ ಕಿಂಗ್ಸ್ ಅಗ್ರಸ್ಥಾನದಲ್ಲಿದ್ದರೆ, ರಾಜಸ್ಥಾನ್ ರಾಯಲ್ಸ್ ನಾಲ್ಕನೇ ಸ್ಥಾನದಲ್ಲಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.

ರಾಜಸ್ಥಾನ್ ರಾಯಲ್ಸ್ ತಂಡ: ರಿಯಾನ್ ಪರಾಗ್ (ನಾಯಕ), ರವೀಂದ್ರ ಜಡೇಜಾ, ಸ್ಯಾಮ್ ಕರನ್, ಡೊನೊವನ್ ಫೆರೇರಾ, ಸಂದೀಪ್ ಶರ್ಮಾ, ಶುಭಂ ದುಬೆ, ವೈಭವ್ ಸೂರ್ಯವಂಶಿ, ಲುವಾನ್-ಡ್ರೆ ಪ್ರಿಟೋರಿಯಸ್, ಶಿಮ್ರಾನ್ ಹೆಟ್ಮೆಯರ್, ಯಶಸ್ವಿ ಜೈಸ್ವಾಲ್, ಧ್ರುವ ಜುರೆಲ್, ಯುಧ್ವೀರ್ ಸಿಂಗ್ ಚರಕ್, ಜೋಫ್ರಾ ಆರ್ಚರ್, ತುಷಾರ್ ದೇಶಪಾಂಡೆ, ಕ್ವೇನಾ ಮಫಾಕ, ನಾಂಡ್ರೆ ಬರ್ಗರ್, ರವಿ ಬಿಷ್ಣೋಯ್, ಸುಶಾಂತ್ ಮಿಶ್ರಾ, ಯಶ್ ರಾಜ್ ಪುಂಜಾ, ವಿಘ್ನೇಶ್ ಪುತ್ತೂರ್, ರವಿ ಸಿಂಗ್, ಅಮನ್ ರಾವ್, ಬ್ರಿಜೇಶ್ ಶರ್ಮಾ, ಆಡಮ್ ಮಿಲ್ನ್​, ಕುಲದೀಪ್ ಸೇನ್.

ಇದನ್ನೂ ಓದಿ: ಸೋಲಿನ ನಡುವೆಯೂ RCBಯ ಕಾಲೆಳೆದ ಡೆಲ್ಲಿ ಕ್ಯಾಪಿಟಲ್ಸ್ ಫ್ಯಾನ್ಸ್​!

ಪಂಜಾಬ್ ಕಿಂಗ್ಸ್ ತಂಡ: ಶ್ರೇಯಸ್ ಅಯ್ಯರ್ (ನಾಯಕ), ಪ್ರಭ್​ಸಿಮ್ರಾನ್ ಸಿಂಗ್, ಪ್ರಿಯಾಂಶ್ ಆರ್ಯ, ಶಶಾಂಕ್ ಸಿಂಗ್, ನೆಹಾಲ್ ವಧೇರಾ, ಮಾರ್ಕಸ್ ಸ್ಟೊಯಿನಿಸ್, ಅಝ್ಮತುಲ್ಲಾ ಒಮರ್​ಝಾಹಿ, ಮಾರ್ಕೊ ಯಾನ್ಸೆನ್, ಹರ್ಪ್ರೀತ್ ಬ್ರಾರ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಮುಶೀರ್ ಖಾನ್, ಪ್ಯಾಲಾ ಅವಿನಾಶ್, ಹರ್ನೂರ್ ಪನ್ನು, ಸೂರ್ಯಾಂಶ್ ಶೆಡ್ಗೆ, ಮಿಚೆಲ್ ಓವನ್, ಕ್ಸೇವಿಯರ್ ಬಾರ್ಟ್ಲೆಟ್, ಲಾಕಿ ಫರ್ಗುಸನ್, ವೈಶಾಕ್ ವಿಜಯ್‌ಕುಮಾರ್, ಯಶ್ ಠಾಕೂರ್, ವಿಷ್ಣು ವಿನೋದ್, ಕೂಪರ್ ಕೊನೊಲಿ, ಬೆನ್ ದ್ವಾರ್ಶುಯಿಸ್, ಪ್ರವೀಣ್ ದುಬೆ, ವಿಶಾಲ್ ನಿಶಾದ್.

Source link

ಉಮರ್ ಸಂಬಂಧಿತ ಕಾರ್ಯಕ್ರಮಕ್ಕೆ ವಿರೋಧ: BJP ಪ್ರತಿಭಟನೆ ವೇಳೆ ಹೈಡ್ರಾಮಾ; ಪ್ರತಿಭಟನಾ ನಿರತರು ಖಾಕಿ ವಶಕ್ಕೆ – Kannada News | Umar Khalid Book Event in Bengaluru: BJP Protests Amidst Tight Police Security

ಬೆಂಗಳೂರು, ಏಪ್ರಿಲ್​​ 28: ದೊಮ್ಮಲೂರು ಸಮೀಪದ ಬೆಂಗಳೂರು ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆದ ಉಮರ್ ಖಲೀದ್ ಅಂಡ್ ಹಿಸ್ ವರ್ಲ್ಡ್ ಪುಸ್ತಕ ಸಂಬಂಧ ಕಾರ್ಯಕ್ರಮಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. 2020ರ ದೆಹಲಿ ಗಲಭೆ ಪ್ರಕರಣದಲ್ಲಿ ಯುಎಪಿಎ ಅಡಿಯಲ್ಲಿ ಆರೋಪಿಯಾಗಿರುವ ಉಮರ್ ಖಲೀದ್ ಕುರಿತ ಈ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಎಂದು ಬಿಜೆಪಿ ಒತ್ತಾಯಿಸಿತ್ತು. ಹೀಗಾಗಿ ಕಾರ್ಯಕ್ರಮ ನಡೆಯುವ ಸ್ಥಳದ ಹೊರಗೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಆದರೆ, ಕಾರ್ಯಕ್ರಮ ಆರಂಭವಾಗುವ ಒಂದು ಗಂಟೆ ಮುನ್ನವೇ ಪೊಲೀಸರು ಪ್ರತಿಭಟನಾನಿರತ ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.  ನಟ ಪ್ರಕಾಶ್ ರಾಜ್, ಇತಿಹಾಸಕಾರ ರಾಮಚಂದ್ರ ಗುಹ, ಜಾನಕಿ ನಾಯರ್ ಸೇರಿದಂತೆ ಹಲವು ಸಂಪನ್ಮೂಲ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.  ಕಾರ್ಯಕ್ರಮಕ್ಕೆ ಪೂರ್ವ-ನೋಂದಣಿ ಮಾಡಿದವರಿಗೆ ಮಾತ್ರ ಪ್ರವೇಶ ನೀಡಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Source link

ಎಂ.ಜಿ. ರೋಡ್​ನಲ್ಲಿರುವ ಪ್ರತಿಷ್ಠಿತ ಹೋಟೆಲ್‌ನಲ್ಲಿ ಯುವತಿ ಮೇಲೆ ಹಲ್ಲೆ; ಮ್ಯಾನೇಜರ್ ಮೇಲೆ ಬಟ್ಟೆ ಹರಿಯಲು ಯತ್ನಿಸಿದ ಆರೋಪ – Kannada News | Bengaluru Shock: Tandoor Hotel Manager Accused of Misbehavior, Assault on MG Road

ಬೆಂಗಳೂರು, ಏ.28: ಸಿಲಿಕಾನ್ ಸಿಟಿಯ ಹೃದಯಭಾಗ ಎಂ.ಜಿ. ರಸ್ತೆಯಲ್ಲಿರುವ (MG Road) ಪ್ರಖ್ಯಾತ ‘ತಂದೂರ್ ಹೋಟೆಲ್’ನಲ್ಲಿ ಯುವತಿಯೊಬ್ಬಳ ಮೇಲೆ ಮ್ಯಾನೇಜರ್ ಅಸಭ್ಯವಾಗಿ ವರ್ತಿಸಿ, ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಹೋಟೆಲ್ ಮ್ಯಾನೇಜರ್ ರವಿ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಕೀರ್ತಿ ಎಂಬ ಯುವತಿ ನಿನ್ನೆ (ಏ.27) ಮಧ್ಯಾಹ್ನ ಸುಮಾರು 2:30ರ ಸಮಯದಲ್ಲಿ ತಮ್ಮ ಸ್ನೇಹಿತರೊಂದಿಗೆ ಊಟಕ್ಕಾಗಿ ತಂದೂರ್ ಹೋಟೆಲ್‌ಗೆ ತೆರಳಿದ್ದರು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಗ್ರಾಹಕರು ಮತ್ತು ಹೋಟೆಲ್ ಮ್ಯಾನೇಜರ್ ನಡುವೆ ಗಲಾಟೆ ಸಂಭವಿಸಿದೆ ಎನ್ನಲಾಗಿದೆ.

ಯುವತಿ ಕೀರ್ತಿ ಅವರು ನೀಡಿರುವ ದೂರಿನಲ್ಲಿ ಏನಿದೆ?

ಹೋಟೆಲ್ ಮ್ಯಾನೇಜರ್ ರವಿ ಯುವತಿಯೊಂದಿಗೆ ಅತ್ಯಂತ ಕೆಟ್ಟದಾಗಿ ನಡೆದುಕೊಂಡಿದ್ದಾನೆ ಎಂದು ಹೇಳಲಾಗಿದೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಯುವತಿಯ ಮೇಲೆ ಹಲ್ಲೆ ನಡೆಸಿದ್ದಾನೆ.ಗಲಾಟೆಯ ಸಂದರ್ಭದಲ್ಲಿ ಮ್ಯಾನೇಜರ್ ಯುವತಿಯ ಬಟ್ಟೆ ಹರಿಯಲು ಯತ್ನಿಸಿದ್ದಾನೆ ಎಂಬ ಗಂಭೀರ ಆರೋಪವನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಸವಾರರೇ ಎಚ್ಚರ! ಬೆಂಗಳೂರಲ್ಲಿ ಮತ್ತೆ ತಲೆ ಎತ್ತಿದ ‘ಪಂಕ್ಚರ್ ಮಾಫಿಯಾ’; ಹೆಬ್ಬಾಳ ರಸ್ತೆಯಲ್ಲಿ ಮೊಳೆಗಳ ರಾಶಿ!

ಘಟನೆ ನಡೆದ ಬೆನ್ನಲ್ಲೇ ಕೀರ್ತಿ ಅವರು ಹಲಸೂರು ಪೊಲೀಸ್ ಠಾಣೆಗೆ ಧಾವಿಸಿ ದೂರು ನೀಡಿದ್ದಾರೆ. ಯುವತಿಯ ದೂರಿನ ಅನ್ವಯ ಪೊಲೀಸರು ಮ್ಯಾನೇಜರ್ ರವಿ ವಿರುದ್ಧ ಎಫ್‌ಐಆರ್ (FIR) ದಾಖಲಿಸಿಕೊಂಡಿದ್ದಾರೆ. ಹೋಟೆಲ್‌ನಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೋಲಿನ ನಡುವೆಯೂ RCBಯ ಕಾಲೆಳೆದ ಡೆಲ್ಲಿ ಕ್ಯಾಪಿಟಲ್ಸ್ ಫ್ಯಾನ್ಸ್​! – Kannada News | IPL 2026: DC Fans Celebrate Avoiding RCB’s Infamous Record

ಸೋಲಿನ ಅಂಚಿನಲ್ಲಿದ್ದಾಗಲೂ ಅಭಿಮಾನಿಗಳು ಸಂಭ್ರಮಿಸಲು ಸಾಧ್ಯವೇ? ಸಾಧ್ಯ ಎಂಬುದಕ್ಕೆ ಡೆಲ್ಲಿ ಕ್ಯಾಪಿಟಲ್ಸ್ (DC) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಣ ಪಂದ್ಯ ಸಾಕ್ಷಿ. ಆರ್​ಸಿಬಿ ವಿರುದ್ಧದ ಈ ಹಣಾಹಣಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟರ್​ಗಳು ಪೆವಿಲಿಯನ್ ಪರೇಡ್ ನಡೆಸುತ್ತಿದ್ದರೂ, ಅಭಿಮಾನಿಗಳು ಮಾತ್ರ ತಮ್ಮ ತಂಡವು ಕನಿಷ್ಠ 50 ರನ್ ಬಾರಿಸಲಿ ಎಂದು ಕಾತರದಿಂದ ಕಾಯುತ್ತಿದ್ದರು. ಯಾವಾಗ ತಂಡದ ಸ್ಕೋರ್ 49 ದಾಟಿತೋ, ಆಗ ಸ್ಟೇಡಿಯಂನಲ್ಲಿ ಮೊಳಗಿದ ಸಂಭ್ರಮದ ಅಲೆ ಅಷ್ಟಿಷ್ಟಲ್ಲ. ಆ ಅಪರೂಪದ ಕ್ಷಣ ಮತ್ತು ಅದರ ಹಿಂದಿನ ಸ್ವಾರಸ್ಯಕರ ಕಥೆ ಇಲ್ಲಿದೆ.

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಆರ್‌ಸಿಬಿ ಬೌಲರ್‌ಗಳ ಮಾರಕ ದಾಳಿಗೆ ಸಿಲುಕಿ ದಿಕ್ಕೆಟ್ಟಿತು. ಪವರ್‌ಪ್ಲೇ ಮುಕ್ತಾಯದ ವೇಳೆಗೆ ಕೇವಲ 13 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದ ಡೆಲ್ಲಿ, ಐಪಿಎಲ್ ಇತಿಹಾಸದ ಅತ್ಯಂತ ಕಡಿಮೆ ಮೊತ್ತಕ್ಕೆ ಔಟ್ ಆಗುವ ಭೀತಿಯಲ್ಲಿತ್ತು.

ಐಪಿಎಲ್ ಇತಿಹಾಸದಲ್ಲಿ 49 ರನ್ ಅತ್ಯಂತ ಕಡಿಮೆ ಮೊತ್ತ. ಈ ಹೀನಾಯ ದಾಖಲೆ ಇರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೆಸರಿನಲ್ಲಿ. 2017ರ ಐಪಿಎಲ್​ ಸೀಸನ್​ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆರ್​ಸಿಬಿ ಕೇವಲ 49 ರನ್​ಗಳಿಗೆ ಆಲೌಟ್ ಆಗಿದ್ದರು.

ಈ ಹೀನಾಯ ದಾಖಲೆಯನ್ನು ಅಳಿಸಿ ಹಾಕುವ ಅವಕಾಶ ಆರ್​ಸಿಬಿ ಮುಂದಿತ್ತು. ಏಕೆಂದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೇವಲ 13 ರನ್​ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಹೀಗಾಗಿ ಎಲ್ಲರೂ ಆರ್​ಸಿಬಿ ತನ್ನ ಅನಗತ್ಯ ದಾಖಲೆಯ ಹಣೆಪಟ್ಟಿಯನ್ನು ಕಳಚಲಿದೆ ಎಂದು ಭಾವಿಸಿದ್ದರು.

ಆದರೆ ಇತ್ತ ಡೆಲ್ಲಿ ಕ್ಯಾಪಿಟಲ್ಸ್ ಅಭಿಮಾನಿಗಳು ಒಂದು ಬಾರಿ ತಂಡದ ಸ್ಕೋರ್ 49 ದಾಟಲು ಕಾಯುತ್ತಿದ್ದರು. ಹೀಗಾಗಿಯೇ ಪ್ರತಿ ರನ್​ ಬಂದಾಗಲೂ ಹರ್ಷೋದ್ಘಾರ ಮುಗಿಲು ಮುಟ್ಟುತ್ತಿತ್ತು.

49 ಸಂಭ್ರಮ:

ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಸ್ಕೋರ್ 40 ರನ್ ದಾಟುತ್ತಿದ್ದಂತೆ ಸ್ಟೇಡಿಯಂನಲ್ಲಿದ್ದ ಅಭಿಮಾನಿಗಳು “49… 49…” ಎಂದು ಏಕದನಿಯಲ್ಲಿ ಕೂಗಲಾರಂಭಿಸಿದರು. ಡೆಲ್ಲಿ ತಂಡವು 49 ರನ್‌ಗಳನ್ನು ದಾಟಲಿ ಎಂಬುದು ಅವರ ಈ ಸಂಭ್ರಮದ ಹಿಂದಿನ ಉದ್ದೇಶವಾಗಿತ್ತು.

ಅಂತಿಮವಾಗಿ ಕೈಲ್ ಜೇಮಿಸನ್ ಸಿಕ್ಸರ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 50ರ ಗಡಿ ದಾಟಿಸಿದರು. ಇತ್ತ ತಂಡದ ಸ್ಕೋರ್ ಐವತ್ತು ದಾಟುತ್ತಿದ್ದಂತೆ ಇಡೀ ಸ್ಟೇಡಿಯಂ ಕಿಕ್ಕಿರಿದು ಸಂಭ್ರಮಿಸಿತು. ಇದು ತಂಡ ಗೆದ್ದಾಗ ಆಗುವ ಸಂಭ್ರಮಕ್ಕಿಂತಲೂ ಹೆಚ್ಚಾಗಿತ್ತು!

ಅಭಿಮಾನಿಗಳ ಈ ಚೇಷ್ಟೆಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. “ಆರ್‌ಸಿಬಿ ತನ್ನ 49 ರನ್‌ಗಳ ದಾಖಲೆಯನ್ನು ಉಳಿಸಿಕೊಂಡಿದ್ದಕ್ಕೆ ಅಭಿಮಾನಿಗಳಿಗೆ ಧನ್ಯವಾದಗಳು” ಎಂದು ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ.

ಪಂದ್ಯದ ಫಲಿತಾಂಶ:

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 16.3 ಓವರ್​ಗಳಲ್ಲಿ 75 ರನ್ ಬಾರಿಸಿ ಆಲೌಟ್ ಆಗಿತ್ತು. ಈ ಸುಲಭ ಗುರಿಯನ್ನು ಆರ್​ಸಿಬಿ ತಂಡ 6.3 ಓವರ್​ಗಳಲ್ಲಿ ಚೇಸ್ ಮಾಡಿ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಇದನ್ನೂ ಓದಿ: ೬ ಎಸೆತಗಳಿಂದ ಭರ್ಜರಿ ದಾಖಲೆ ತಪ್ಪಿಸಿಕೊಂಡ RCB

ಒಟ್ಟಿನಲ್ಲಿ ಈ ಪಂದ್ಯವು ಡೆಲ್ಲಿ ಕ್ಯಾಪಿಟಲ್ಸ್ ಅಭಿಮಾನಿಗಳ ಪಾಲಿಗೆ ಇದು ಮರೆಯಬೇಕಾದ ಪಂದ್ಯವಾದರೂ, ಕ್ರೀಡಾಂಗಣದಲ್ಲಿ ಮೊಳಗಿದ ‘49’ರ ಘೋಷಣೆ ಮಾತ್ರ ಐಪಿಎಲ್ ಇತಿಹಾಸದ ತಮಾಷೆಯ ಕ್ಷಣಗಳಲ್ಲಿ ಒಂದಾಗಿ ಉಳಿಯಲಿದೆ.

Published On – 4:52 pm, Tue, 28 April 26

Source link

CRPF Recruitment 2026: 9,175 ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ; SSLC ಮತ್ತು ITI ಪಾಸಾದವರಿಗೆ ಸುವರ್ಣವಕಾಶ – Kannada News | CRPF Recruitment 2026: 9175 Constable/Tradesman Vacancies Announced! Apply Now

ಕೇಂದ್ರ ಮೀಸಲು ಪೊಲೀಸ್ ಪಡೆ (CRPF) 2026ನೇ ಸಾಲಿನ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಕಾನ್ಸ್‌ಟೇಬಲ್ (ತಾಂತ್ರಿಕ, ಟ್ರೇಡ್ಸ್‌ಮನ್ ಮತ್ತು ಪಯೋನಿಯರ್) ವಿಭಾಗಗಳಲ್ಲಿ ಒಟ್ಟು 9,175 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇದರಲ್ಲಿ ಆಂಧ್ರಪ್ರದೇಶಕ್ಕೆ 504 ಮತ್ತು ತೆಲಂಗಾಣಕ್ಕೆ 353 ಹುದ್ದೆಗಳನ್ನು ಹಂಚಿಕೆ ಮಾಡಲಾಗಿದ್ದು, ದೇಶಾದ್ಯಂತ ಮಹಿಳಾ ಅಭ್ಯರ್ಥಿಗಳಿಗೆ 79 ಹುದ್ದೆಗಳು ಮೀಸಲಿವೆ. ಪಯೋನಿಯರ್ ವಿಭಾಗದ ಹುದ್ದೆಗಳಿಗೆ ಎಲ್ಲಾ ರಾಜ್ಯದ ಅಭ್ಯರ್ಥಿಗಳು ಸ್ಪರ್ಧಿಸಬಹುದಾಗಿದೆ.

ಅರ್ಹತೆ ಮತ್ತು ವಯೋಮಿತಿ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಅಥವಾ ಸಂಬಂಧಿತ ಟ್ರೇಡ್‌ನಲ್ಲಿ ITI ಉತ್ತೀರ್ಣರಾಗಿರಬೇಕು. ಚಾಲಕ (Driver) ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು 10ನೇ ತರಗತಿಯ ಜೊತೆಗೆ ಭಾರೀ ವಾಹನ ಚಾಲನಾ ಪರವಾನಗಿ (HMV License) ಹೊಂದಿರಬೇಕು. ವಯೋಮಿತಿಯು ಸಾಮಾನ್ಯ ಹುದ್ದೆಗಳಿಗೆ 18 ರಿಂದ 23 ವರ್ಷ ಹಾಗೂ ಚಾಲಕ ಹುದ್ದೆಗಳಿಗೆ 21 ರಿಂದ 27 ವರ್ಷಗಳ ಒಳಗಿರಬೇಕು. ಸರ್ಕಾರದ ನಿಯಮದಂತೆ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ವಿಧಾನ:

ಅಭ್ಯರ್ಥಿಗಳ ಆಯ್ಕೆಯು ಬಹುಹಂತಗಳಲ್ಲಿ ನಡೆಯಲಿದೆ. ಮೊದಲಿಗೆ ದೈಹಿಕ ದಕ್ಷತೆ ಪರೀಕ್ಷೆ (PET) ಮತ್ತು ದೈಹಿಕ ಗುಣಮಟ್ಟ ಪರೀಕ್ಷೆ (PST) ನಡೆಸಲಾಗುವುದು. ಇದರಲ್ಲಿ ಅರ್ಹರಾದವರಿಗೆ 100 ಅಂಕಗಳ ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ (CBT) ಇರಲಿದ್ದು, ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳ ಕಡಿತವಿರುತ್ತದೆ (Negative Marking). ನಂತರ ಅಗತ್ಯವಿರುವ ಹುದ್ದೆಗಳಿಗೆ 50 ಅಂಕಗಳ ಕೌಶಲ್ಯ ಪರೀಕ್ಷೆ (Trade Test), ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವ ಮೂಲಕ ಅಂತಿಮ ಆಯ್ಕೆ ಮಾಡಲಾಗುತ್ತದೆ.

ದೈಹಿಕ ಮಾನದಂಡಗಳು:

ದೈಹಿಕ ಗುಣಮಟ್ಟ ಪರೀಕ್ಷೆಯಲ್ಲಿ ಪುರುಷ ಅಭ್ಯರ್ಥಿಗಳು ಕನಿಷ್ಠ 170 ಸೆಂ.ಮೀ ಎತ್ತರ ಮತ್ತು ಮಹಿಳಾ ಅಭ್ಯರ್ಥಿಗಳು ಕನಿಷ್ಠ 157 ಸೆಂ.ಮೀ ಎತ್ತರ ಹೊಂದಿರಬೇಕು (ಎಸ್‌ಟಿ ಅಭ್ಯರ್ಥಿಗಳಿಗೆ ಸಡಿಲಿಕೆ ಇದೆ). ದೈಹಿಕ ದಕ್ಷತೆ ಪರೀಕ್ಷೆಯಲ್ಲಿ ಪುರುಷರು 5 ಕಿಲೋಮೀಟರ್ ಓಟವನ್ನು 24 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕಾಗುತ್ತದೆ. ಮಹಿಳೆಯರಿಗೆ 1.6 ಕಿಲೋಮೀಟರ್ ಓಟದ ಗುರಿ ಇರುತ್ತದೆ.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ವೇತನ ಮತ್ತು ಅರ್ಜಿ ಸಲ್ಲಿಕೆ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಹಂತ-3ರ ಅಡಿಯಲ್ಲಿ ಆಕರ್ಷಕ ವೇತನ ನೀಡಲಾಗುತ್ತದೆ. ಆರಂಭಿಕ ಮೂಲ ವೇತನ 21,700 ರೂ. ಆಗಿದ್ದು, ಡಿಎ, ಎಚ್‌ಆರ್‌ಎ ಸೇರಿದಂತೆ ವಿವಿಧ ಭತ್ಯೆಗಳೊಂದಿಗೆ ಮಾಸಿಕ ವೇತನ ಸುಮಾರು 40,000 ರೂ. ಗಳವರೆಗೆ ಇರುತ್ತದೆ. ಆಸಕ್ತ ಅಭ್ಯರ್ಥಿಗಳು ಮೇ 19, 2026 ರೊಳಗೆ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕವಿದ್ದು, ಎಸ್‌ಸಿ/ಎಸ್‌ಟಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ಪ್ರಮುಖ ಮಾಹಿತಿ:

  • ಒಟ್ಟು ಹುದ್ದೆಗಳು: 9,175
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 19
  • ವಿದ್ಯಾರ್ಹತೆ: 10ನೇ ತರಗತಿ / ITI
  • ಅಧಿಕೃತ ವೆಬ್‌ಸೈಟ್: www.rect.crpf.gov.in

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version