ದೆಹಲಿಯಲ್ಲಿ ಟೇಕ್ ಆಫ್ ವೇಳೆ ಸ್ವಿಸ್ ಏರ್ ವಿಮಾನದ ಎಂಜಿನ್ ವಿಫಲ, ಕಾಣಿಸಿಕೊಂಡ ಬೆಂಕಿ, ಆರು ಪ್ರಯಾಣಿಕರಿಗೆ ಗಾಯ – Kannada News | Engine Failure Sparks Fire on Swiss Air Flight at Delhi Airport

ನವದೆಹಲಿ, ಏಪ್ರಿಲ್ 26: ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಮುಂಜಾನೆ ಸಂಭವಿಸಬಹುದಾಗಿದ್ದ ಭಾರಿ ವಿಮಾನ(Flight) ದುರಂತವೊಂದು ಪೈಲಟ್‌ಗಳ ಸಮಯಪ್ರಜ್ಞೆಯಿಂದ ತಪ್ಪಿದೆ. ಜ್ಯೂರಿಚ್‌ಗೆ ಹೊರಟಿದ್ದ ಸ್ವಿಸ್ ಏರ್ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.

ದೆಹಲಿಯಿಂದ ಜ್ಯೂರಿಚ್‌ಗೆ ಹೊರಟಿದ್ದ ಸ್ವಿಸ್ ಇಂಟರ್‌ನ್ಯಾಷನಲ್ ಏರ್ ಲೈನ್ಸ್ (LX147) ವಿಮಾನವು ಭಾನುವಾರ ಮುಂಜಾನೆ ರನ್‌ವೇಯಲ್ಲಿ ಓಡುತ್ತಿದ್ದಾಗ ತಾಂತ್ರಿಕ ಸಂಕಷ್ಟಕ್ಕೆ ಸಿಲುಕಿತು. ಎಂಜಿನ್‌ನಲ್ಲಿ ಕಾಣಿಸಿಕೊಂಡ ದೋಷದಿಂದಾಗಿ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿ ಘೋಷಿಸಲಾಯಿತು.

ವಿಮಾನವು ರನ್‌ವೇ 28/10 ರಲ್ಲಿ ಜ್ಯೂರಿಚ್‌ಗೆ ಹಾರಲು ವೇಗವನ್ನು ಹೆಚ್ಚಿಸುತ್ತಿದ್ದಾಗ, ಪೈಲಟ್‌ಗಳು ಎಂಜಿನ್‌ನಲ್ಲಿ ತಾಂತ್ರಿಕ ಸಮಸ್ಯೆಯನ್ನು ಪತ್ತೆಹಚ್ಚಿದರು. ವಿಮಾನದಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಪೈಲಟ್‌ಗಳು, ಒಂದು ಕ್ಷಣವೂ ತಡಮಾಡದೆ ಟೇಕ್ ಆಫ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ವಿಮಾನವನ್ನು ರನ್‌ವೇಯಲ್ಲೇ ನಿಲ್ಲಿಸಿದರು. ಪೈಲಟ್‌ಗಳ ಈ ಕ್ಷಿಪ್ರ ನಿರ್ಧಾರದಿಂದಾಗಿ ದೊಡ್ಡ ಮಟ್ಟದ ಅನಾಹುತವೊಂದು ತಪ್ಪಿದಂತಾಗಿದೆ.

ಮತ್ತಷ್ಟು ಓದಿ: 2 ತಿಂಗಳಿಂದ ಮುಚ್ಚಿದ್ದ ಇರಾನ್​ನ ಟೆಹ್ರಾನ್ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟ ಆರಂಭ

ವಿಮಾನದಲ್ಲಿ 228 ಪ್ರಯಾಣಿಕರು ಮತ್ತು 4 ಶಿಶುಗಳು ಸೇರಿದಂತೆ ಒಟ್ಟು 232 ಮಂದಿ ಇದ್ದರು. ಹೊಗೆ ಕಾಣಿಸಿಕೊಂಡಿದ್ದರಿಂದ ಭಯಭೀತರಾಗಿದ್ದ ಪ್ರಯಾಣಿಕರನ್ನು ತುರ್ತು ಸ್ಲೈಡ್‌ಗಳನ್ನು (Emergency Slides) ಬಳಸಿ ಕೆಳಗಿಳಿಸಲಾಯಿತು. ಈ ಧಾವಂತದ ಸ್ಥಳಾಂತರ ಪ್ರಕ್ರಿಯೆಯ ಸಮಯದಲ್ಲಿ ಆರು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಿಗೆ ಒಳಗಾಗಿದ್ದಾರೆ. ಗಾಯಾಳುಗಳಿಗೆ ತಕ್ಷಣವೇ ವೈದ್ಯಕೀಯ ಚಿಕಿತ್ಸೆ ನೀಡಲಾಗಿದ್ದು, ಯಾರಿಗೂ ಗಂಭೀರ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಘಟನೆಯ ನಂತರ ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. ಎಲ್ಲಾ ಸುರಕ್ಷತಾ ಶಿಷ್ಟಾಚಾರಗಳನ್ನು ಪಾಲಿಸಲಾಯಿತು. ಪ್ರಸ್ತುತ ಸ್ವಿಸ್ ಏರ್ ವಿಮಾನವನ್ನು ತಾಂತ್ರಿಕ ತಂಡಗಳು ಪರಿಶೀಲಿಸುತ್ತಿವೆ. ಎಂಜಿನ್ ಅಸಮರ್ಪಕ ಕಾರ್ಯಕ್ಕೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲಾಗುತ್ತಿದೆ. ಏತನ್ಮಧ್ಯೆ, ವಿಮಾನಯಾನ ಸಂಸ್ಥೆಯು ಸಂಕಷ್ಟಕ್ಕೀಡಾದ ಪ್ರಯಾಣಿಕರಿಗೆ ಹೋಟೆಲ್ ವಸತಿ ಮತ್ತು ಜ್ಯೂರಿಚ್‌ಗೆ ತೆರಳಲು ಪರ್ಯಾಯ ವಿಮಾನಗಳ ವ್ಯವಸ್ಥೆ ಮಾಡಲು ಕ್ರಮ ಕೈಗೊಂಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 11:20 am, Sun, 26 April 26

Source link

ನಡುರಸ್ತೆಯಲ್ಲಿ ಒಂಟಿ‌ ಕೋರೆ‌ ಸಲಗದ ಬಿಂದಾಸ್ ವಾಕ್!

ಚಿಕ್ಕಮಗಳೂರು, ಏಪ್ರಿಲ್ 26: ಮಲೆನಾಡು ಪ್ರದೇಶದಲ್ಲಿ ಕಾಡಾನೆಗಳ ಉಪಟಳ ದಿನೇದಿನೇ ಹೆಚ್ಚುತ್ತಿದ್ದು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗಡಿ ಭಾಗದಲ್ಲಿ ಮತ್ತೊಮ್ಮೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ವಗಡೆ ಶಾಲೆ ಸಮೀಪ ಒಂಟಿ ಕೋರೆ ಸಲಗ ರಸ್ತೆ ಮೇಲೆ ಬಿಂದಾಸ್ ಸಂಚಾರ ನಡೆಸಿ, ಜನರಲ್ಲಿ ಭೀತಿ ಉಂಟುಮಾಡಿದೆ. ದೇವನಗೂಲ್ ಹಾಗೂ ವಗಡೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈ ಆನೆ ಓಡಾಡುತ್ತಿರುವುದು ಸ್ಥಳೀಯರ ನಿದ್ರೆ ಕೆಡಿಸಿದೆ. ಅಲ್ಲದೆ ಆನೆ ಜನವಸತಿ ಪ್ರದೇಶಗಳತ್ತ ಬರುತ್ತಿರುವ ಹಿನ್ನೆಲೆಯಲ್ಲಿ ಜೀವಭಯ ಹೆಚ್ಚಾಗಿದೆ. ಕೂಡಲೇ ಈ ಕೋರೆ ಸಲಗವನ್ನು ಸೆರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ. ಘಟನೆ ಮೂಡಿಗೆರೆ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬರಿದಾದ ಹಿರೇಹಳ್ಳ ಜಲಾಶಯ: ಖಾಲಿ ಡ್ಯಾಂ ಮಕ್ಕಳಿಗೀಗ ಕ್ರಿಕೆಟ್​​ ಮೈದಾನ! – Kannada News | Dry Hirehalla Reservoir Turns into Cricket Ground for Children in Koppal

ಕೊಪ್ಪಳ, ಏಪ್ರಿಲ್​​ 26: ಮುದ್ಲಾಪೂರ ಬಳಿಯ ಹಿರೇಹಳ್ಳ ಜಲಾಶಯ ಸಂಪೂರ್ಣವಾಗಿ ಬತ್ತಿದ್ದು, ನೀರಿಲ್ಲದೆ ಭಣಗುಡುತ್ತಿದೆ. ಬರಿದಾಗಿರುವ 1.67 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯ‌ವನ್ನೇ ಮಕ್ಕಳು, ಯುವಕರು ಆಟದ ಮೈದಾನ ಮಾಡಿಕೊಂಡು ಕ್ರಿಕೆಟ್​​ ಆಡುತ್ತಿದ್ದಾರೆ. ಹತ್ತು ವರ್ಷಗಳ ನಂತರ ಜಲಾಶಯ ಬರಿದಾಗಿದ್ದು, ಕೇವಲ ಶೇ.20ರಷ್ಟು ನೀರು ಮಾತ್ರ ಉಳಿದಿದೆ. ಇನ್ನೊಂದು ತಿಂಗಳು‌ ಕಳೆದರೆ ಹನಿ ನೀರು ಕೂಡ ಜಲಾಶಯದಲ್ಲಿ ಸಿಗದ ಸ್ಥಿತಿ ತಲುಪಲಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

VIDEO: ಅಭಿಷೇಕ್ ಶರ್ಮಾ ಕೈ ಹಿಡಿದು ಎಳೆದ ಯುವತಿ! – Kannada News | IPL 2026: Abhishek Sharma Hand Held by Girl at Jaipur Hotel

ಐಪಿಎಲ್ ಕ್ರೇಝ್ ಎಷ್ಟೋ ಬಾರಿ ಅಭಿಮಾನದ ಗಡಿ ಮೀರಿ ಅತಿರೇಕಕ್ಕೆ ಸಾಕ್ಷಿಯಾಗುತ್ತದೆ. ಇದಕ್ಕೆ ಲೇಟೆಸ್ಟ್ ಉದಾಹರಣೆ ಎಂಬಂತೆ, ಸನ್ ರೈಸರ್ಸ್ ಹೈದರಾಬಾದ್ ತಂಡದ ಸ್ಟಾರ್ ಆಲ್ ರೌಂಡರ್ ಅಭಿಷೇಕ್ ಶರ್ಮಾ ಅವರು ಜೈಪುರದ ಹೋಟೆಲ್‌ನಲ್ಲಿ ಅಭಿಮಾನಿಯೊಬ್ಬರ ಅನಿರೀಕ್ಷಿತ ವರ್ತನೆಯಿಂದ ಮುಜುಗರಕ್ಕೊಳಗಾಗಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ ಈ ಘಟನೆ ಈಗ ಕ್ರಿಕೆಟ್ ವಲಯದಲ್ಲಿ ಆಟಗಾರರ ಭದ್ರತೆಯ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ನಡೆದಿದ್ದೇನು?

ಏಪ್ರಿಲ್ 25ರಂದು ಸವಾಯಿ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಸನ್​ರೈಸರ್ಸ್ ಹೈದರಾಬಾದ್ ನಡುವಣ ಪಂದ್ಯವಿತ್ತು. ಈ ಪಂದ್ಯಕ್ಕಾಗಿ ತಂಡದ ಹೋಟೆಲ್‌ನಿಂದ ಮೈದಾನಕ್ಕೆ ಹೊರಡಲು ಅಭಿಷೇಕ್ ಶರ್ಮಾ ಅವರು ಲಾಬಿಗೆ ಬಂದಾಗ, ಅಲ್ಲಿದ್ದ ಅಭಿಮಾನಿಗಳು ಅವರ ಹೆಸರನ್ನು ಕೂಗುತ್ತಾ ಸಂಭ್ರಮಿಸುತ್ತಿದ್ದರು. ಈ ನಡುವೆ, ಹಠಾತ್ತಾಗಿ ಬಂದ ಯುವತಿಯೊಬ್ಬರು ಅಭಿಷೇಕ್ ಅವರ ಕೈಯನ್ನು ಬಲವಾಗಿ ಹಿಡಿದು ಎಳೆದಿದ್ದಾರೆ.

ಈ ಅನಿರೀಕ್ಷಿತ ಘಟನೆಯಿಂದ ಅಭಿಷೇಕ್ ಶರ್ಮಾ ಒಂದು ಕ್ಷಣ ಗಾಬರಿಯಾದರು. ತಕ್ಷಣವೇ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ ಆ ಯುವತಿಯನ್ನು ದೂರ ಸರಿಸಿ, ಅಭಿಷೇಕ್ ಅವರನ್ನು ಸುರಕ್ಷಿತವಾಗಿ ತಂಡದ ಬಸ್‌ನತ್ತ ಕರೆದೊಯ್ದರು. ಈ ವಿಡಿಯೋ ಸದ್ಯ ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದು, ಆಟಗಾರರ ಖಾಸಗಿತನ ಮತ್ತು ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತವಾಗಿದೆ.

ವಿಡಿಯೋ ವೈರಲ್ ಮತ್ತು ಆಕ್ರೋಶ:

ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆ ಶುರುವಾಗಿದೆ. ಅಭಿಮಾನಿಗಳು ಆಟಗಾರರನ್ನು ಪ್ರೀತಿಸುವುದು ಸರಿ, ಆದರೆ ಅವರ ವೈಯಕ್ತಿಕ ಘನತೆಯನ್ನು ಗೌರವಿಸಬೇಕು ಎಂದು ನೆಟ್ಟಿಗರು ಈ ಘಟನೆಯನ್ನು ಖಂಡಿಸಿದ್ದಾರೆ. ಕ್ರಿಕೆಟಿಗರು ಎಷ್ಟೇ ಜನಪ್ರಿಯರಾಗಿದ್ದರೂ, ಅವರ ಅನುಮತಿಯಿಲ್ಲದೆ ಅವರನ್ನು ಮುಟ್ಟುವುದು ಅಥವಾ ಎಳೆಯುವುದು ಸರಿಯಲ್ಲ ಎಂಬ ಅಭಿಪ್ರಾಯಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿವೆ.

ಗೆದ್ದು ಬೀಗಿದ ಸನ್​ರೈಸರ್ಸ್ ಹೈದರಾಬಾದ್:

ಈ ಕಹಿ ಘಟನೆಯ ಹೊರತಾಗಿಯೂ ಮೈದಾನದಲ್ಲಿ ಅಭಿಷೇಕ್ ಶರ್ಮಾ ತಮ್ಮ ಏಕಾಗ್ರತೆ ಕಳೆದುಕೊಳ್ಳಲಿಲ್ಲ. ರಾಜಸ್ಥಾನ್ ರಾಯಲ್ಸ್ ನೀಡಿದ್ದ 229 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ ತಂಡಕ್ಕೆ ಅಭಿಷೇಕ್ ಭರ್ಜರಿ ಆರಂಭ ನೀಡಿದರು. ಕೇವಲ 29 ಎಸೆತಗಳಲ್ಲಿ 57 ರನ್ ಸಿಡಿಸುವ ಮೂಲಕ ಎಸ್​ಆರ್​ಹೆಚ್ ತಂಡಕ್ಕೆ ಅದ್ಭುತ ಆರಂಭ ಒದಗಿಸಿದ್ದರು.

ಇದನ್ನೂ ಓದಿ: ಒಂದು ಶತಕಕ್ಕೆ ‘ವೈಭವ’ದ ೮ ದಾಖಲೆಗಳು ಉಡೀಸ್

ಈ ಆರಂಭದೊಂದಿಗೆ ಸನ್​ರೈಸರ್ಸ್ ಹೈದರಾಬಾದ್ ತಂಡವು ಕೇವಲ 18.3 ಓವರ್​ಗಳಲ್ಲಿ 229 ರನ್​ಗಳಿಸಿ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಎಸ್​ಆರ್​ಹೆಚ್ ತಂಡ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.

Source link

Vaibhav Suryavamshi: ಮೈದಾನದಲ್ಲೇ ಕಣ್ಣೀರಿಟ್ಟ ವೈಭವ್ ಸೂರ್ಯವಂಶಿ – Kannada News | Vaibhav Suryavanshi burst into tears on the field after scoring a century against Sunrisers Hyderabad

ಬೆಂಗಳೂರು (ಏ. 26): ಇಂಡಿಯನ್ ಪ್ರೀಮಿಯರ್ ಲೀಗ್ 2026 ರಲ್ಲಿ (Indian Premier League) ಶನಿವಾರ ನಡೆದ ಎರಡೂ ಪಂದ್ಯವು ರಣರೋಚಕವಾಗಿತ್ತು. ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಊಹಿಸಲೂ ಸಾಧ್ಯವಿಲ್ಲದ ಘಟನೆ ನಡೆಯಿತು. ರಾಜಸ್ಥಾನ ರಾಯಲ್ಸ್ ತಂಡದ 15 ವರ್ಷದ ಓಪನರ್ ವೈಭವ್ ಸೂರ್ಯವಂಶಿ ತಮ್ಮ ಬ್ಯಾಟಿಂಗ್ ಮೂಲಕ ಶತಕ ಗಳಿಸಿ, ಇಡೀ ಕ್ರಿಕೆಟ್ ಜಗತ್ತಿಗೇ ಶಾಕ್ ಕೊಟ್ಟರು. ಇದರ ಜೊತೆಗೆ ಇವರು ಮೈದಾನದಲ್ಲೇ ಕಣ್ಣೀರಿಟ್ಟ ಘಟನೆಯೂ ನಡೆಯಿತು.

ಮೈದಾನದಲ್ಲಿ ಕಣ್ಣೀರು ಹಾಕಿದ ವೈಭವ್ ಸೂರ್ಯವಂಶಿ

ಶತಕ ಗಳಿಸಿದ ನಂತರ, ವೈಭವ್ ತನ್ನ ಭಾವನೆಗಳನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ, ಅವರ ಕಣ್ಣುಗಳಲ್ಲಿ ಆನಂದದ ಕಣ್ಣೀರು ತುಂಬಿತು. ವೈಭವ್ ಅವರ ಭಾವನಾತ್ಮಕ ಆಚರಣೆಯು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಶತಕ ಸಿಡಿಸುತ್ತಿದ್ದಂತೆ ವೈಭವ್ ತಮ್ಮ ಟ್ರೇಡ್‌ಮಾರ್ಕ್ ಸೆಲ್ಯೂಟ್ ಮತ್ತು ಹಾರ್ಟ್ ಸಿಂಬಲ್ ತೋರಿಸಿ ಸಂಭ್ರಮಿಸಿದರು. 15 ನೇ ವಯಸ್ಸಿನಲ್ಲಿ ವಿಶ್ವದ ಅತಿದೊಡ್ಡ ವೇದಿಕೆಯಲ್ಲಿ ಅಂತಹ ದಾಖಲೆ ಸಾಧಿಸುವುದು ಅಷ್ಟೊಂದು ಸುಲಭದ ಮಾತಲ್ಲ. ಶತಕ ಸಿಡಿಸಿದ ಕೂಡಲೇ ಇವರು ಖುಷಿಯಿಂದ ಕಣ್ಣೀರಿಟ್ಟರು.

ಶತಕ ಸಿಡಿಸಿದಾಗ ಕಣ್ಣಿರಿಟ್ಟ ವೈಭವ್ ಸೂರ್ಯವಂಶಿ ವಿಡಿಯೋ:

ಹೈದರಾಬಾದ್ ಬೌಲರ್‌ಗಳ ಬೆವರಿಳಿಸಿದ ವೈಭವ್

ವೈಭವ್ ಸೂರ್ಯವಂಶಿ ಹೈದರಾಬಾದ್ ಬೌಲರ್‌ಗಳನ್ನು ಮೈದಾನದ ಮೂಲೆ ಮೂಲೆಗೂ ಅಟ್ಟಿದರು. ಕೇವಲ 36 ಎಸೆತಗಳಲ್ಲಿ 103 ರನ್ ಗಳಿಸಿದ ಅದ್ಭುತ ಇನ್ನಿಂಗ್ಸ್ ಆಡಿದರು, ಇದರಲ್ಲಿ 12 ಅಮೋಘ ಸಿಕ್ಸರ್‌ಗಳು ಮತ್ತು 5 ಬೌಂಡರಿಗಳು ಸೇರಿವೆ. ವೈಭವ್ ಕೇವಲ 15 ಎಸೆತಗಳಲ್ಲಿ ಅರ್ಧಶತಕವನ್ನು ತಲುಪಿದರು, ಸತತ ನಾಲ್ಕು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಕ್ರೀಡಾಂಗಣದಲ್ಲಿ ಸಂಚಲನ ಮೂಡಿಸಿದರು. ಆದಾಗ್ಯೂ, ಶತಕ ಸಿಡಿಸಿ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಶಕೀಬ್ ಹುಸೇನ್‌ ಬೌಲಿಂಗ್​ನಲ್ಲಿ ಎಲ್‌ಬಿಡಬ್ಲ್ಯೂ ಆಗಿ ಔಟಾದರು.

DC vs PBKS Records: 529 ರನ್ಸ್, 33 ಸಿಕ್ಸರ್ಸ್, 49 ಬೌಂಡರಿಗಳು: ದಾಖಲೆಯ ಪುಸ್ತಕ ಬರೆದ ದೆಹಲಿ-ಪಂಜಾಬ್ ಪಂದ್ಯ

ಐಪಿಎಲ್ ಇತಿಹಾಸದಲ್ಲಿ ಮೂರನೇ ಅತಿ ವೇಗದ ಶತಕ

ವೈಭವ್ ಅವರ ಶತಕವು ಈಗ ಐಪಿಎಲ್ ಇತಿಹಾಸದಲ್ಲಿ ಮೂರನೇ ಅತ್ಯಂತ ವೇಗದ ಶತಕವಾಗಿ ದಾಖಲಾಗಿದೆ. ಕುತೂಹಲಕಾರಿಯಾಗಿ, ಟಾಪ್ ಮೂರು ವೇಗದ ಶತಕಗಳಲ್ಲಿ ಎರಡು ವೈಭವ್ ಅವರದ್ದಾಗಿವೆ. ಕಳೆದ ಋತುವಿನಲ್ಲಿ ಅವರು 35 ಎಸೆತಗಳಲ್ಲಿ ಶತಕ ಗಳಿಸಿದರು ಮತ್ತು ಈ ಬಾರಿ 36 ಎಸೆತಗಳಲ್ಲಿ ಈ ಸಾಧನೆ ಮಾಡಿದರು. ಕ್ರಿಸ್ ಗೇಲ್ ಅವರ 30 ಎಸೆತಗಳ ದಾಖಲೆಯು ಇನ್ನೂ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಸದ್ಯದಲ್ಲೇ ಟೀಮ್ ಇಂಡಿಯಾಕ್ಕೆ ಎಂಟ್ರಿ?

ಈ ಸ್ಫೋಟಕ ಇನ್ನಿಂಗ್ಸ್ ನಂತರ, ವೈಭವ್ ಸೂರ್ಯವಂಶಿ ಭಾರತೀಯ ತಂಡಕ್ಕೆ ಪಾದಾರ್ಪಣೆ ಮಾಡುವ ಬಗ್ಗೆ ಊಹಾಪೋಹಗಳು ತೀವ್ರಗೊಂಡಿವೆ. ವೈಭವ್ ತನ್ನ ಬ್ಯಾಟಿಂಗ್ ಮೂಲಕ ತಾನು ಸಂಪೂರ್ಣವಾಗಿ ಪ್ರಬುದ್ಧ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಸಿದ್ಧನಿದ್ದೇನೆ ಎಂದು ಸಾಬೀತುಪಡಿಸಿದ್ದಾನೆ ಎಂದು ಕ್ರಿಕೆಟ್ ಪಂಡಿತರು ಮತ್ತು ಅಭಿಮಾನಿಗಳು ಹೇಳುತ್ತಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡ್ರಗ್ಸ್ ಪ್ರಕರಣದಲ್ಲಿ ಶ್ರದ್ಧಾ ಕಪೂರ್, ನೋರಾ ಫತೇಹಿಗೆ ಬಿಗ್ ರಿಲೀಫ್; ಪೊಲೀಸರಿಗೆ ಸಿಗಲೇ ಇಲ್ಲ ಸಾಕ್ಷಿ – Kannada News | Police find no evidence against Shraddha Kapoor Nora Fatehi in 2022 drugs case

ಬಾಲಿವುಡ್ ನಟಿಯರಾದ ಶ್ರದ್ಧಾ ಕಪೂರ್ (Shraddha Kapoor) ಮತ್ತು ನೋರಾ ಫತೇಹಿ ಅವರಿಗೆ ಬಹುದಿನಗಳ ಕಾಲ ತಲೆನೋವಾಗಿದ್ದ 2022ರ ಡ್ರಗ್ಸ್ ಪ್ರಕರಣದಲ್ಲಿ ಬಿಗ್ ರಿಲೀಫ್ ಸಿಕ್ಕಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎನ್ನಲಾಗುತ್ತಿದೆ. ಮುಂಬೈ ಪೊಲೀಸರು ಸಿದ್ಧಪಡಿಸುತ್ತಿರುವ ಪೂರಕ ದೋಷಾರೋಪ ಪಟ್ಟಿಯಲ್ಲಿ ಕೇವಲ ನಟಿಯರಷ್ಟೇ ಅಲ್ಲದೆ, ಸೋಷಿಯಲ್ ಮೀಡಿಯಾ ಸ್ಟಾರ್ ಓರಿ, ನಟ ಸಿದ್ದಾಂತ್ ಕಪೂರ್ ಮತ್ತು ರಾಜಕಾರಣಿ ಜೀಶನ್ ಸಿದ್ದಿಕಿ ಅವರಿಗೂ ಕ್ಲೀನ್ ಚಿಟ್ (Clean Chit) ಸಿಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಪ್ರಕರಣದ ಹಿನ್ನೆಲೆ: 2022ರ ಆಗಸ್ಟ್ ತಿಂಗಳಲ್ಲಿ ಮುಂಬೈ ಪೊಲೀಸರ ಡ್ರಗ್ಸ್ ವಿರೋಧಿ ದಳವು ಮೊಹಮ್ಮದ್ ಸಲೀಂ ಶೇಖ್ ಎಂಬ ಡ್ರಗ್ ಪೆಡ್ಲರ್‌ನನ್ನು ಬಂಧಿಸಿ, ಆತನಿಂದ 1.19 ಲಕ್ಷ ರೂಪಾಯಿ ಮೌಲ್ಯದ ಮೆಫೆಡ್ರೋನ್ ವಶಪಡಿಸಿಕೊಂಡಿತ್ತು. ವಿಚಾರಣೆ ವೇಳೆ ಶೇಖ್, ತಾನು ಬಾಲಿವುಡ್‌ನ ಹಲವು ಗಣ್ಯರು ಭಾಗವಹಿಸುವ ಪಾರ್ಟಿಗಳಿಗೆ ಡ್ರಗ್ಸ್ ಪೂರೈಕೆ ಮಾಡಿದ್ದಾಗಿ ಹೇಳಿಕೆ ನೀಡಿದ್ದ.

ಈ ಹೇಳಿಕೆಯ ಆಧಾರದ ಮೇಲೆ ಹಲವು ಪ್ರಮುಖರ ಹೆಸರುಗಳು ಹೊರಬಂದಿದ್ದವು. ಈ ತನಿಖೆಯ ಭಾಗವಾಗಿ 2025ರಲ್ಲಿ ಶ್ರದ್ಧಾ ಕಪೂರ್ ಮತ್ತು ನೋರಾ ಫತೇಹಿ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಖ್ಯಾತ ಸೆಲೆಬ್ರಿಟಿಗಳ ಹೆಸರು ತಳುಕು ಹಾಕಿಕೊಂಡಿದ್ದರಿಂದ ಈ ಪ್ರಕರಣವು ಭಾರಿ ಸುದ್ದಿ ಆಗಿತ್ತು. ಬಾಲಿವುಡ್ ಮಂದಿಗೆ ಚಿಂತೆ ಶುರುವಾಗಿತ್ತು.

ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ತನಿಖಾಧಿಕಾರಿಗಳು ಈ ಗಣ್ಯರಿಗೂ ಮತ್ತು ಡ್ರಗ್ಸ್ ಪೂರೈಕೆ ಜಾಲಕ್ಕೂ ನೇರ ಸಂಬಂಧವಿರುವ ಯಾವುದೇ ಸಾಕ್ಷ್ಯಗಳನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ‘ನಾವು ಈಗಾಗಲೇ ಮೂವರ ವಿರುದ್ಧ ಪ್ರಾಥಮಿಕ ಚಾರ್ಜ್‌ಶೀಟ್ ಸಲ್ಲಿಸಿದ್ದೇವೆ. ಈಗ ಬಂಧಿತರಾಗಿರುವ ಇತರ ಆರೋಪಿಗಳ ವಿರುದ್ಧ ಪೂರಕ ಚಾರ್ಜ್‌ಶೀಟ್ ಸಲ್ಲಿಸಲಾಗುವುದು. ಸೆಲೆಬ್ರಿಟಿಗಳನ್ನು ಈ ಪ್ರಕರಣಕ್ಕೆ ಲಿಂಕ್ ಮಾಡಲು ನಮ್ಮ ಬಳಿ ಸಾಕಷ್ಟು ಪುರಾವೆಗಳಿಲ್ಲ’ ಎಂದು ಮೂಲಗಳು ತಿಳಿಸಿರುವುದಾಗಿ ವರದಿ ಆಗಿದೆ.

ಇದನ್ನೂ ಓದಿ: ಶ್ರದ್ಧಾ ಕಪೂರ್ ಕತ್ತನ್ನು ಹಿಡಿದು ಕಾರಿನೊಳಗೆ ನೂಕಿದ ಬಾಯ್​ಫ್ರೆಂಡ್; ಫ್ಯಾನ್ಸ್ ಆಕ್ರೋಶ

ಈ ಬೆಳವಣಿಗೆಯಿಂದಾಗಿ ಕಳೆದ ಮೂರು ವರ್ಷಗಳಿಂದ ಈ ಪ್ರಕರಣದಲ್ಲಿ ಕೇಳಿಬರುತ್ತಿದ್ದ ಬಾಲಿವುಡ್ ತಾರೆಯರ ಹೆಸರುಗಳು ಈಗ ಅಧಿಕೃತವಾಗಿ ಕೈಬಿಡಲ್ಪಡಲಿವೆ. ನೇರವಾಗಿ ಡ್ರಗ್ಸ್ ಪೂರೈಕೆಯಲ್ಲಿ ಭಾಗಿಯಾಗಿರುವ ಇತರ ಆರೋಪಿಗಳ ವಿರುದ್ಧ ತನಿಖೆ ಮುಂದುವರಿಯಲಿದೆ. ಈ ಬಗ್ಗೆ ಶ್ರದ್ಧಾ ಕಪೂರ್, ನೋರಾ ಫತೇಹಿ ಮುಂತಾದವರು ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಫ್ಲೈ 91 ವಿಮಾನಕ್ಕೆ ಮತ್ತೆ ಲ್ಯಾಂಡಿಂಗ್​​ ಸಮಸ್ಯೆ: ವಾರ ಕಳೆಯುವುದರ ಒಳಗೆ ಹುಬ್ಬಳ್ಳಿಯಲ್ಲಿ ಮೂರನೇ ಘಟನೆ – Kannada News | Fly91 Hubballi Landing Problems: Third Incident in a Week Raises Safety Concerns

ಹುಬ್ಬಳ್ಳಿ, ಏಪ್ರಿಲ್​​ 26: ಕಳೆದ ಒಂದು ವಾರದ ಅವಧಿಯಲ್ಲಿ ಮೂರನೇ ಬಾರಿಗೆ ಫ್ಲೈ 91 ವಿಮಾನಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡಿಂಗ್​​ ಸಮಸ್ಯೆ ಉಂಟಾಗಿದೆ. ನಿನ್ನೆ ಮಧ್ಯಾಹ್ನ 3.13ಕ್ಕೆ ಹೈದರಾಬಾದ್​​ನಿಂಗ ಹೊರಟಿದ್ದ ವಿಮಾನ ಸಂಜೆ 4.30ಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಹವಾಮಾನ ವೈಪರಿತ್ಯ ಹಿನ್ನೆಲೆಯಲ್ಲಿ ಆಗಸದಲ್ಲಿಯೇ ಕೆಲ ಸಮಯ ವಿಮಾನ ಸುತ್ತುಹೊಡೆದಿದೆ. ಅಂತಿಮವಾಗಿ ನಲವತ್ತು ನಿಮಿಷಗಳ ಕಾಲ ಆಕಾಶದಲ್ಲಿ ಹಾರಾಡಿ ಸಂಜೆ 5.09ಕ್ಕೆ ಫ್ಲೈ 91 ಸಂಸ್ಥೆಯ ಜಿಒಎ 3401 ಪ್ಲೈಟ್ ಲ್ಯಾಂಡ್​​ ಆಗಿದೆ.

ಅಷ್ಟಕ್ಕೂ ಫ್ಲೈ 91 ಸಂಸ್ಥೆಗೆ ಸೇರಿದ ವಿಮಾನಗಳಿಗೆ ಹುಬ್ಬಳ್ಳಿಯಲ್ಲಿ ಲ್ಯಾಂಡಿಂಗ್​​ ಸಮಸ್ಯೆ ಆಗುತ್ತಿರುವುದು ಇದೇ ಮೊದಲೇನಲ್ಲ. ಫೆ. 19ರಂದು ಹೈದರಾಬಾದ್​​ನಿಂದ ಹುಬ್ಬಳ್ಳಿ ಏರ್​​ಪೋರ್ಟ್​ಗೆ ಬರುತ್ತಿದ್ದ ಫ್ಲೈಟ್ ಏಕಾಏಕಿ ವೇಗದ ನಿಯಂತ್ರಣ ಕಳೆದುಕೊಂಡು 4 ಗಂಟೆ ಆಗಸದಲ್ಲೇ ಹಾರಾಡಿತ್ತು. ಬಳಿಕ 4 ಗಂಟೆ ತಡವಾಗಿ ಬೆಂಗಳೂರಿನಲ್ಲಿ ವಿಮಾನವನ್ನು ಲ್ಯಾಂಡ್​​ ಮಾಡಲಾಗಿತ್ತು. ಹವಾಮಾನ ವೈಪರೀತ್ಯ ಹಿನ್ನೆಲೆ ಲ್ಯಾಂಡಿಂಗ್ ಸಮಸ್ಯೆಯಾಗಿದೆ ಎಂದು ಹೇಳಲಾಗಿತ್ತಾದರೂ ತಾಂತ್ರಿಕ ಸಮಸ್ಯೆಯೇ ಇದಕ್ಕೆ ಕಾರಣ ಎಂಬ ಆರೋಪಗಳೂ ಕೇಳಿಬಂದಿದ್ದವು. ಮತ್ತೊಂದೆಡೆ ಘಟನೆ ಬಗ್ಗೆ ಮಾಹಿತಿ ನೀಡದೆ ನಿರ್ಲಕ್ಷ್ಯ ತೋರಲಾಗಿದೆ ಎಂದು ಪ್ರಯಾಣಿಕರ ಕುಟುಂಬಸ್ಥರು ಏರ್​​ಲೈನ್ಸ್ ವಿರುದ್ಧ ಅಸಮಾಧಾನಗೊಂಡಿದ್ದರು.

ಇದನ್ನೂ ಓದಿ: ವಿಮಾನದೊಳಗೆ ಪ್ರಯಾಣಿಕರ ಚೀರಾಟ, ಕಣ್ಣೀರು; ಸಾವಿನ ದರ್ಶನ ಮಾಡಿಸಿದ FLY91 ವಿಮಾನ

ಈ ಘಟನೆ ಮಾಸುವ ಮುನ್ನವೇ ಫೆ.21ರಂದು ಕೂಡ ಇದೇ ರೀತಿಯ ಸಮಸ್ಯೆ ಫ್ಲೈ 91 ವಿಮಾನಕ್ಕೆ ಆಗಿತ್ತು. ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಂದಿದ್ದ ವಿಮಾನದ ಲ್ಯಾಂಡಿಂಗ್ ವೇಳೆ ಸಮಸ್ಯೆ ಆಗಿತ್ತು. ಸಂಜೆ 7 ಗಂಟೆಗೆ ಬೆಂಗಳೂರಿನಿಂದ ಹೊರಟಿದ್ದ ಫ್ಲೈಟ್​​ ರಾತ್ರಿ 8.15ಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡಿಂಗ್​ ಆಗಬೇಕಿತ್ತು. ಆದರೆ 1 ಗಂಟೆ ಸುತ್ತಾಟ ಬಳಿಕ ರಾತ್ರಿ 9.15ಕ್ಕೆ ವಿಮಾನ ಸುರಕ್ಷಿತವಾಗಿ ಲ್ಯಾಂಡ್​​ ಆಗಿತ್ತು. ಈ ಬಾರಿಯೂ ಹವಾಮಾನ ವೈಪರೀತ್ಯದಿಂದ ಸಮಸ್ಯೆ ಎಂದು ಅಧಿಕಾರಿಗಳು ಹೇಳಿದ್ದರಾದರೂ ಫ್ಲೈ 91 ವಿಮಾನಕ್ಕೆ ಮಾತ್ರ ಯಾಕೆ ತೊಂದರೆ ಎಂಬ ಪ್ರಶ್ನೆ ಉದ್ಭವವಾಗಿತ್ತು. ಆ ಬಳಿಕ ಕೇವಲ ಮೂರು ದಿನಗಳ ಅಂತರದಲ್ಲಿ ಇದೇ ಸಂಸ್ಥೆಯ ವಿಮಾನಕ್ಕೆ ಮತ್ತೆ ಲ್ಯಾಂಡಿಂಗ್​​ ಸಮಸ್ಯೆ ಆಗಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ. ವಿಮಾನ ಸಂಸ್ಥೆಯ ವಿರುದ್ಧ ಪ್ರಯಾಣಿಕರಿಂದ ತೀವ್ರ ಆಕ್ರೋಶವೂ ವ್ಯಕ್ತವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 10:31 am, Sun, 26 April 26

Source link

ಬೀದಿ ನಾಯಿಯ ಮೇಲೆ ಮಚ್ಚಿನಿಂದ ಹಲ್ಲೆ! ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ – Kannada News | Cruelty in Bengaluru: Coconut Seller Attacks Stray Dog with Machete in K.R. Puram; Brutal Act Caught on CCTV

ಬೆಂಗಳೂರು, ಏಪ್ರಿಲ್ 26: ನಗರದ ಕೆ.ಆರ್. ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೀದಿ ನಾಯಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ಬೆಳಕಿಗೆ ಬಂದಿದೆ. ನಿನ್ನೆ(ಏ.25) ಬೆಳಿಗ್ಗೆ 8.30ರ ಸುಮಾರಿಗೆ ಎಳೆನೀರು ವ್ಯಾಪಾರಿಯೊಬ್ಬನು ಮಚ್ಚಿನಿಂದ ನಾಯಿಯ ಮೇಲೆ ದಾಳಿ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಿರಿಯ ನಾಗರಿಕರೊಬ್ಬರು ಸಾಕಿಕೊಂಡಿದ್ದ ಈ ಬೀದಿ ನಾಯಿಯಿಂದ ತೊಂದರೆ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ವ್ಯಾಪಾರಿ, ಎಳೆನೀರು ಕೊಚ್ಚುವ ಮಚ್ಚಿನಿಂದ ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ. ಘಟನೆಯಿಂದ ಸ್ಥಳೀಯರಲ್ಲಿ ಆಕ್ರೋಶ ವ್ಯಕ್ತವಾಗಿದೆ. ವಿಕಾಸ್ ನೀಡಿದ ದೂರಿನ ಆಧಾರದ ಮೇಲೆ ಕೆ.ಆರ್. ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ನಾವು ಸೋಲಲು ಅರ್ಹರಾಗಿದ್ದೆವು… ಅಕ್ಷರ್ ಪಟೇಲ್ ಅಚ್ಚರಿಯ ಹೇಳಿಕೆ – Kannada News | Axar patel post match interview after Dc vs Pbks match 2026

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​​ನ 35ನೇ ಪಂದ್ಯವು ಐತಿಹಾಸಿಕ ಚೇಸಿಂಗ್​ಗೆ ಸಾಕ್ಷಿಯಾಗಿತ್ತು. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್​ಗಳಲ್ಲಿ 264 ರನ್ ಕಲೆಹಾಕಿದ್ದರು. ಈ ಕಠಿಣ ಗುರಿಯನ್ನು ಪಂಜಾಬ್ ಕಿಂಗ್ಸ್ 18.5 ಓವರ್​ಗಳಲ್ಲಿ ಚೇಸ್ ಮಾಡಿ ಅಮೋಘ ಜಯ ಸಾಧಿಸಿತು.

ಈ ಸೋಲಿನ ಬಳಿಕ ಮಾತನಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್, ತಂಡದ ಕಳಪೆ ಫೀಲ್ಡಿಂಗ್ ಮತ್ತು ಬೌಲಿಂಗ್ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸೋಲಿಗೆ ಬೇರೆ ಯಾರನ್ನೂ ಹೊಣೆ ಮಾಡುವಂತಿಲ್ಲ. ಏಕೆಂದರೆ “ನಾವು ಸೋಲಲು ಅರ್ಹರಾಗಿದ್ದೆವು” ಎಂದು ಅಕ್ಷರ್ ಪಟೇಲ್ ನೇರವಾಗಿಯೇ ಹೇಳಿದ್ದಾರೆ.

ಈ ಪಿಚ್ ಬ್ಯಾಟಿಂಗ್‌ಗೆ ಪೂರಕವಾಗಿತ್ತು ಮತ್ತು ಮೈದಾನ ಚಿಕ್ಕದಾಗಿದ್ದರಿಂದ ಸಿಕ್ಸರ್‌ಗಳು ಬರುವುದು ಸಹಜವಾಗಿತ್ತು. ಆದರೆ, ಸಿಕ್ಕ ಅವಕಾಶಗಳನ್ನು ನಾವು ಬಳಸಿಕೊಳ್ಳಲಿಲ್ಲ. ಫೀಲ್ಡರ್‌ಗಳು ಬೌಲರ್‌ಗಳಿಗೆ ಬೆಂಬಲ ನೀಡದಿದ್ದರೆ ಇಂತಹ ಪಂದ್ಯಗಳನ್ನು ಗೆಲ್ಲುವುದು ಕಷ್ಟ ಎಂದು ಅಕ್ಷರ್ ಬೇಸರ ವ್ಯಕ್ತಪಡಿಸಿದ್ದಾರೆ.

ಪವರ್‌ಪ್ಲೇ ಅವಧಿಯಲ್ಲಿ ವೇಗದ ಬೌಲರ್‌ಗಳು ಹೆಚ್ಚು ರನ್ ಬಿಟ್ಟುಕೊಟ್ಟಿದ್ದು ಮತ್ತು ಫೀಲ್ಡಿಂಗ್‌ನಲ್ಲಿ ಮಾಡಿದ ಎಡವಟ್ಟುಗಳು ಪಂದ್ಯದ ಗತಿಯನ್ನು ಬದಲಿಸಿದವು. ಪಂಜಾಬ್ ಕಿಂಗ್ಸ್ ಮೊದಲ 6 ಓವರ್‌ಗಳಲ್ಲೇ ದಾಖಲೆಯ ರನ್ ಗಳಿಸಿದ್ದು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮುಳುವಾಯಿತು.

ಡೆಲ್ಲಿ ಕ್ಯಾಪಿಟಲ್ಸ್ 264 ರನ್ ಗಳಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ತನ್ನ ಬ್ಯಾಟಿಂಗ್ ಶಕ್ತಿಯನ್ನು ತೆರೆದಿಟ್ಟಿತ್ತು. 264 ರನ್ ಎಂಬುದು ದೊಡ್ಡ ಮೊತ್ತ. ಬ್ಯಾಟಿಂಗ್‌ನಲ್ಲಿ ನಾವು ಶ್ರೇಷ್ಠ ಪ್ರದರ್ಶನ ನೀಡಿದ್ದೇವೆ, ಇದು ಸಕಾರಾತ್ಮಕ ಅಂಶ. ಆದರೆ ಅದೃಷ್ಟ ಮತ್ತು ಫೀಲ್ಡಿಂಗ್ ಎರಡೂ ನಮಗೆ ಸಾಥ್ ನೀಡಲಿಲ್ಲ ಎಂದು ಅಕ್ಷರ್ ಹೇಳಿದ್ದಾರೆ.

ನಿರ್ಣಾಯಕ ಕ್ಷಣಗಳಲ್ಲಿ ಪಂದ್ಯವನ್ನು ನಮ್ಮತ್ತ ತಿರುಗಿಸಿಕೊಳ್ಳುವಲ್ಲಿ ನಾವು ವಿಫಲರಾಗುತ್ತಿದ್ದೇವೆ. ಪದೇ ಪದೇ ಒಂದೇ ತಪ್ಪುಗಳನ್ನು ಮಾಡುವುದು ಸರಿಯಲ್ಲ. ನಾವು ಮತ್ತೆ ಈ ಕುಳಿತು ಚರ್ಚಿಸಿ, ಮುಂದಿನ ಪಂದ್ಯಗಳಲ್ಲಿ ಎಲ್ಲಿ ಸುಧಾರಿಸಿಕೊಳ್ಳಬೇಕು ಎಂಬುದನ್ನು ನೋಡುತ್ತೇವೆ. ಈ ಮೂಲಕ ಮುಂದಿನ ಮ್ಯಾಚ್​ಗಳಲ್ಲಿ ಇಂತಹ ತಪ್ಪುಗಳನ್ನು ನಡೆಯದಂತೆ ನೋಡಿಕೊಳ್ಳಬೇಕಿದೆ ಎಂದು ಅಕ್ಷರ್ ಪಟೇಲ್ ಇದೇ ವೇಳೆ ತಿಳಿಸಿದ್ದಾರೆ.

ಇದನ್ನೂ ಓದಿ: ಒಂದು ಶತಕಕ್ಕೆ ‘ವೈಭವ’ದ ೮ ದಾಖಲೆಗಳು ಉಡೀಸ್

ಈ ಪಂದ್ಯದ ಸೋಲಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅಂಕ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಕುಸಿದಿದೆ. ಅತ್ತ ಭರ್ಜರಿ ಗೆಲುವು ದಾಖಲಿಸಿರುವ ಪಂಜಾಬ್ ಕಿಂಗ್ಸ್ ತಂಡವು 13 ಅಂಕಗಳೊಂದಿಗೆ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

Source link

Gold Rates: ಚಿನ್ನದ ಬೆಲೆ 10 ದಿನದಲ್ಲಿ 140 ರೂ ಇಳಿಕೆ; ಇಲ್ಲಿದೆ ದರಪಟ್ಟಿ – Kannada News | Gold Price Today on 26th April 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಏಪ್ರಿಲ್ 26: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕಳೆದ ಕೆಲ ವಾರಗಳಿಂದ ಬಾರಿ ಬಾರಿ ಏರಿಳಿತಗಳನ್ನು ಕಾಣುತ್ತಿವೆ. ಚಿನ್ನದ ಬೆಲೆ (Gold Rates) ಈ ವಾರಾಂತ್ಯದಲ್ಲಿ 100 ರೂ ಏರಿಕೆಯಾದರೂ ಕಳೆದ 10 ದಿನದಲ್ಲಿ ಗ್ರಾಮ್​ಗೆ 140 ರೂನಷ್ಟು ಕಡಿಮೆ ಆಗಿದೆ. 14,260 ರೂನಿಂದ 14,120 ರೂಗೆ ಇಳಿದಿದೆ. ಬೆಳ್ಳಿ ಬೆಲೆ ಗ್ರಾಮ್​ಗೆ 5 ರೂ ಮಾತ್ರ ಕಡಿಮೆ ಆಗಿದೆ. ವಿದೇಶಗಳಲ್ಲೂ ಇದೇ ಟ್ರೆಂಡ್ ಇದೆ. ಕಳೆದ ಕೆಲ ವಾರಗಳ ಹಿಂದಕ್ಕೆ ಹೋಲಿಸಿದರೆ ಅಲ್ಲಿ ಚಿನ್ನ, ಬೆಳ್ಳಿ ಬೆಲೆಗಳಲ್ಲಿ ಹೆಚ್ಚಿನ ವ್ಯತ್ಯಯ ಆಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,41,200 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,54,040 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,41,200 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 26,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 27,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಏಪ್ರಿಲ್ 26ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,404 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,120 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,553 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,404 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,120 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,120 ರೂ
  • ಚೆನ್ನೈ: 14,200 ರೂ
  • ಮುಂಬೈ: 14,120 ರೂ
  • ದೆಹಲಿ: 14,135 ರೂ
  • ಕೋಲ್ಕತಾ: 14,120 ರೂ
  • ಕೇರಳ: 14,120 ರೂ
  • ಅಹ್ಮದಾಬಾದ್: 14,125 ರೂ
  • ಜೈಪುರ್: 14,135 ರೂ
  • ಲಕ್ನೋ: 14,135 ರೂ
  • ಭುವನೇಶ್ವರ್: 14,120 ರೂ

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಇದ್ದೂ ಅದನ್ನು ಬಳಸದೇ ಇದ್ದರೆ ಏನಾಗುತ್ತೆ? ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತಾ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 579 ರಿಂಗಿಟ್ (13,745 ರುಪಾಯಿ)
  • ದುಬೈ: 525.50 ಡಿರಾಮ್ (13,491 ರುಪಾಯಿ)
  • ಅಮೆರಿಕ: 147.50 ಡಾಲರ್ (13,889 ರುಪಾಯಿ)
  • ಸಿಂಗಾಪುರ: 187.50 ಸಿಂಗಾಪುರ್ ಡಾಲರ್ (13,824 ರುಪಾಯಿ)
  • ಕತಾರ್: 530 ಕತಾರಿ ರಿಯಾಲ್ (13,686 ರೂ)
  • ಸೌದಿ ಅರೇಬಿಯಾ: 534 ಸೌದಿ ರಿಯಾಲ್ (13,408 ರುಪಾಯಿ)
  • ಓಮನ್: 55.80 ಒಮಾನಿ ರಿಯಾಲ್ (13,623 ರುಪಾಯಿ)
  • ಕುವೇತ್: 43.60 ಕುವೇತಿ ದಿನಾರ್ (13,396 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 260 ರೂ
  • ಚೆನ್ನೈ: 270 ರೂ
  • ಮುಂಬೈ: 260 ರೂ
  • ದೆಹಲಿ: 260 ರೂ
  • ಕೋಲ್ಕತಾ: 260 ರೂ
  • ಕೇರಳ: 270 ರೂ
  • ಅಹ್ಮದಾಬಾದ್: 260 ರೂ
  • ಜೈಪುರ್: 260 ರೂ
  • ಲಕ್ನೋ: 260 ರೂ
  • ಭುವನೇಶ್ವರ್: 270 ರೂ
  • ಪುಣೆ: 260

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 10:14 am, Sun, 26 April 26

Source link

Exit mobile version