Tirumala Darshan: ತಿರುಮಲ ಭಕ್ತರಿಗೆ ಗುಡ್ ನ್ಯೂಸ್; 300 ರೂ. ದರ್ಶನ ಟಿಕೆಟ್ ಸಿಗಲಿಲ್ಲವೇ? ಇಲ್ಲಿದೆ ತಿಮ್ಮಪ್ಪನ ಭೇಟಿಗೆ ಮತ್ತೊಂದು ಸುಲಭ ದಾರಿ! – Kannada News | Tirumala Darshan: TTD’s New Srinivasa Divyanugraha Homam for Special Entry

ತಿರುಮಲ ಭಕ್ತರಿಗೆ ಗುಡ್ ನ್ಯೂಸ್Image Credit source: Pinterest

ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಲು ಬಯಸುವ ಭಕ್ತರಿಗೆ 300 ರೂ.ಗಳ ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳನ್ನು ಪಡೆಯುವುದು ದೊಡ್ಡ ಸವಾಲಾಗಿದೆ. ಆನ್‌ಲೈನ್‌ನಲ್ಲಿ ಟಿಕೆಟ್ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಅವು ಖಾಲಿಯಾಗುವುದರಿಂದ ಲಕ್ಷಾಂತರ ಭಕ್ತರು ದರ್ಶನ ಭಾಗ್ಯದಿಂದ ವಂಚಿತರಾಗುತ್ತಿದ್ದರು. ಇಂತಹ ಭಕ್ತರಿಗಾಗಿ ತಿರುಮಲ ತಿರುಪತಿ ದೇವಸ್ಥಾನಂ (TTD) ಈಗ ‘ಶ್ರೀನಿವಾಸ ದಿವ್ಯಾನುಗ್ರಹ ವಿಶೇಷ ಹೋಮ’ ಎಂಬ ಹೊಸ ಪರ್ಯಾಯ ಮಾರ್ಗವನ್ನು ಪರಿಚಯಿಸಿದೆ. ಈ ಹೋಮದಲ್ಲಿ ಪಾಲ್ಗೊಳ್ಳುವ ಮೂಲಕ ಭಕ್ತರು ಸುಲಭವಾಗಿ ದೇವರ ದರ್ಶನ ಪಡೆಯಬಹುದಾಗಿದೆ.

ಈ ವಿಶೇಷ ಸೌಲಭ್ಯದ ಅಡಿಯಲ್ಲಿ, ದಿವ್ಯಾನುಗ್ರಹ ಹೋಮದ ಟಿಕೆಟ್ ಪಡೆದವರಿಗೆ ಟಿಟಿಡಿ ನೇರವಾಗಿ 300 ರೂ. ಮೌಲ್ಯದ ವಿಶೇಷ ದರ್ಶನಕ್ಕೆ ಅವಕಾಶ ಮಾಡಿಕೊಡುತ್ತದೆ. ಒಂದು ಹೋಮದ ಟಿಕೆಟ್ ದರ 1600 ರೂ. ಆಗಿದ್ದು, ಇದರಲ್ಲಿ ಇಬ್ಬರು ಭಕ್ತರು ಭಾಗವಹಿಸಬಹುದು. ಹೋಮವು ಅಲಿಪಿರಿಯ ಸಪ್ತಗೋಪ್ರದಕ್ಷಿಣ ಶಾಲೆಯಲ್ಲಿ ಪ್ರತಿದಿನ ನಡೆಯಲಿದ್ದು, ಹೋಮ ಪೂರ್ಣಗೊಂಡ ನಂತರ ಅಂದೇ ಮಧ್ಯಾಹ್ನ 3 ಗಂಟೆಗೆ ಭಕ್ತರಿಗೆ ಶ್ರೀವಾರಿಯ ದರ್ಶನಕ್ಕೆ ಕಳುಹಿಸಿಕೊಡಲಾಗುತ್ತದೆ. ಈ ಮೂಲಕ ದರ್ಶನ ಟಿಕೆಟ್ ಸಿಗದವರು ಈ ಹೋಮದ ಮೂಲಕ ಪವಿತ್ರ ಕಾರ್ಯದಲ್ಲಿ ಭಾಗಿಯಾಗಿ ಸ್ವಾಮಿಯ ಕೃಪೆಗೆ ಪಾತ್ರರಾಗಬಹುದು.

ಇದನ್ನೂ ಓದಿ: ಭಾರತದ ಈ ಪಟ್ಟಣದಲ್ಲಿ ಈರುಳ್ಳಿ ಮಾರಾಟ ಮಾಡುವಂತಿಲ್ಲ, ನಿಷೇಧದ ಹಿಂದಿನ ಕುತೂಹಲಕಾರಿ ಸಂಗತಿ ಇಲ್ಲಿದೆ

ಮೇ ತಿಂಗಳ ಕೋಟಾಕ್ಕೆ ಸಂಬಂಧಿಸಿದ ದಿವ್ಯಾನುಗ್ರಹ ಹೋಮದ ಟಿಕೆಟ್‌ಗಳನ್ನು ಟಿಟಿಡಿ ಏಪ್ರಿಲ್ 25 ರಂದು (ಇಂದು) ಬೆಳಿಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಿದೆ. ಭಕ್ತರು ಟಿಟಿಡಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಈ ಟಿಕೆಟ್‌ಗಳನ್ನು ಕಾಯ್ದಿರಿಸಬಹುದಾಗಿದೆ. ಸಾಮಾನ್ಯ ದರ್ಶನ ಟಿಕೆಟ್‌ಗಳಿಗಾಗಿ ತಿಂಗಳುಗಟ್ಟಲೆ ಕಾಯುವ ಬದಲು, ಈ ಅವಕಾಶವನ್ನು ಬಳಸಿಕೊಳ್ಳುವುದು ಭಕ್ತರಿಗೆ ಹೆಚ್ಚು ಅನುಕೂಲಕರವಾಗಿದೆ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.

ದರ್ಶನದ ಜೊತೆಗೆ ತಿರುಮಲದಲ್ಲಿ ಈಗ ಉತ್ಸವಗಳ ಸಂಭ್ರಮವೂ ಮನೆಮಾಡಿದೆ. ಏಪ್ರಿಲ್ 25 ರಿಂದ ಮೂರು ದಿನಗಳ ಕಾಲ ಶ್ರೀ ಪದ್ಮಾವತಿ ಮತ್ತು ಶ್ರೀನಿವಾಸರ ‘ಪರಿಣಯೋತ್ಸವ’ ವೈಭವದಿಂದ ಜರುಗಲಿದೆ. ಮೊದಲ ದಿನ ಗಜ ವಾಹನ, ಎರಡನೇ ದಿನ ಅಶ್ವ ವಾಹನ ಮತ್ತು ಮೂರನೇ ದಿನ ಗರುಡ ವಾಹನದ ಮೇಲೆ ಮಲಯಪ್ಪ ಸ್ವಾಮಿಯ ಮೆರವಣಿಗೆ ನಡೆಯಲಿದೆ. ಈ ಸಂದರ್ಭದಲ್ಲಿ ತಿರುಮಲಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಿರುವುದರಿಂದ, ದರ್ಶನಕ್ಕೆ ಯಾವುದೇ ತೊಂದರೆಯಾಗದಂತೆ ಟಿಟಿಡಿ ವತಿಯಿಂದ ವ್ಯಾಪಕ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಫಿಲ್ ಸಾಲ್ಟ್ ಹೊರಗುಳಿಯಲು ಇದುವೇ ಕಾರಣ..!

Source link

ನನಗೆ 1 ಕೋಟಿ ರೂಪಾಯಿ ಯಾರೂ ಕೊಟ್ಟಿಲ್ಲ; ಸ್ಪಷ್ಟನೆ ಕೊಟ್ಟ ಜಮಿಲ್ ಜಮಾಲಿ – Kannada News | Rakesh Bedi’s Jameel Jamali Role in Dhurandhar Hits Big; Denies Aditya Dhar Bonus Rumor

‘ಧುರಂಧರ್’ ಮತ್ತು ‘ಧುರಂಧರ್: ದಿ ರಿವೆಂಜ್’ ಎರಡೂ ಚಿತ್ರಗಳಲ್ಲಿ ಜಮಿಲ್ ಜಮಾಲಿ ಪಾತ್ರವನ್ನು ನಿರ್ವಹಿಸುವ ಮೂಲಕ ನಟ ರಾಕೇಶ್ ಬೇಡಿ ಅಪಾರ ಜನಪ್ರಿಯತೆಯನ್ನು ಗಳಿಸಿದ್ದಾರೆ. ಈ ಚಿತ್ರಗಳ ಐತಿಹಾಸಿಕ ಯಶಸ್ಸಿನ ನಂತರ, ಈಗ ನಿರ್ದೇಶಕ ಆದಿತ್ಯ ಧರ್ ಅವರಿಗೆ ಬೋನಸ್ ನೀಡಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದಕ್ಕೆ ಅವರ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ.

ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್’ ಮತ್ತು ‘ಧುರಂಧರ್: ದಿ ರಿವೆಂಜ್’ ಎರಡೂ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಇತಿಹಾಸ ಸೃಷ್ಟಿಸಿವೆ. ಈ ಚಿತ್ರದೊಂದಿಗೆ ಸಂಬಂಧ ಹೊಂದಿರುವ ಪ್ರತಿಯೊಬ್ಬ ಕಲಾವಿದರು ಇದರಿಂದ ಪ್ರಯೋಜನ ಪಡೆಯುತ್ತಿದ್ದಾರೆ. ರಾಕೇಶ್ ಬೇಡಿ ಈ ಎರಡೂ ಚಿತ್ರಗಳಲ್ಲಿ ‘ಜಮೀಲ್ ಜಮಾಲಿ’ ಪಾತ್ರವನ್ನು ನಿರ್ವಹಿಸಿದ್ದಾರೆ. ಇದು ಅವರ ಜನಪ್ರಿಯತೆ ಹೆಚ್ಚಿಸಿದೆ.

ನಿರ್ದೇಶಕ ಆದಿತ್ಯ ಧರ್ ಮತ್ತು ನಿರ್ಮಾಪಕರು ರಾಕೇಶ್ ಕೆಲಸದಿಂದ ತುಂಬಾ ಪ್ರಭಾವಿತರಾಗಿದ್ದಾರೆ. ತಮ್ಮ ಔದಾರ್ಯವನ್ನು ಪ್ರದರ್ಶಿಸಿ, ಅವರು ರಾಕೇಶ್ ಬೇಡಿ ಅವರಿಗೆ 1 ಕೋಟಿ ರೂಪಾಯಿ ಹೆಚ್ಚು ಹಣ ನೀಡಲಾಗಿದೆ ಎಂದು ವರದಿ ಆಗಿತ್ತು. ಇದಕ್ಕೆ ಉತ್ತರಿಸಿರುವ ಅವರು, ‘ನನ್ನ ಖಾತೆಗಂತೂ ಬಂದಿಲ್ಲ.ಎಲ್ಲಿ ಬಂದಿದೆ ಹೇಳಿ ಹೋಗಿ ತೆಗೆದುಕೊಂಡು ಬರುತ್ತೇನೆ’ ಎಂದು ಉತ್ತರಿಸಿದ್ದಾರೆ.

ಅವರ ‘ಬಚ್ಚಾ ಹೈ ತು ಮೇರಾ’ ಎಂಬ ಸಂಭಾಷಣೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅವರ ಅನೇಕ ಮೀಮ್ಸ್‌ಗಳು ಸಹ ವೈರಲ್ ಆಗುತ್ತಿವೆ. ‘ಧುರಂಧರ್: ದಿ ರಿವೆಂಜ್’ ಚಿತ್ರದಲ್ಲಿ ಅವರ ಪಾತ್ರಕ್ಕೆ ದೊಡ್ಡ ಟ್ವಿಸ್ಟ್ ಇತ್ತು. ಚಿತ್ರದಲ್ಲಿ ರಣವೀರ್ ಸಿಂಗ್, ಅರ್ಜುನ್ ರಾಂಪಾಲ್, ಸಂಜಯ್ ದತ್, ಆರ್. ಮಾಧವನ್, ಸಾರಾ ಅರ್ಜುನ್ ನಟಿಸಿದ್ದಾರೆ.

ಇದನ್ನೂ ಓದಿ: ‘ಧುರಂಧರ್’ ಗೆದ್ದಿದ್ದಕ್ಕೆ ನಟ ರಾಕೇಶ್ ಬೇಡಿಗೆ 1 ಕೋಟಿ ರೂಪಾಯಿ ಬೋನಸ್ ಕೊಟ್ಟ ನಿರ್ಮಾಪಕರು

ರಾಕೇಶ್ ಬೇಡಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಧಾರಾವಾಹಿಗಳು ಮತ್ತು ರಂಗಭೂಮಿಯಲ್ಲೂ ಕೆಲಸ ಮಾಡಿದ್ದಾರೆ. ಆದಿತ್ಯ ಧರ್ ಅವರ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಚಿತ್ರದಲ್ಲಿ ಅವರು ಸಣ್ಣ ಪಾತ್ರವನ್ನು ನಿರ್ವಹಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಜನಿವಾರ ಜಟಾಪಟಿ: ಕಾಲೇಜು ಲೈಸೆನ್ಸ್ ರದ್ದು ಮಾಡಿ, 25 ಲಕ್ಷ ರೂ. ದಂಡ ಹಾಕಿ! ಸಿಎಂಗೆ ಬ್ರಾಹ್ಮಣ ಮಹಾಸಭಾ ಖಡಕ್ ಪತ್ರ – Kannada News | CET Janivara Row: Karnataka Brahmana Mahasabha Demands Action, writes to CM Siddaramaiah

ಕಾಲೇಜು ಲೈಸೆನ್ಸ್ ರದ್ದು ಮಾಡಿ, 25 ಲಕ್ಷ ರೂ. ದಂಡ ಹಾಕಿ! ಸಿಎಂಗೆ ಬ್ರಾಹ್ಮಣ ಮಹಾಸಭಾ ಖಡಕ್ ಪತ್ರ

ಬೆಂಗಳೂರು, ಏಪ್ರಿಲ್ 25: ಇತ್ತೀಚೆಗೆ ನಡೆದ ಸಿಇಟಿ ಪರೀಕ್ಷೆಯಲ್ಲಿ ಆನಂದ್ ಸುಧೀರ್ ರಾವ್ ಸೇರಿದಂತೆ ಐದಕ್ಕೂ ಹೆಚ್ಚು ಬ್ರಾಹ್ಮಣ ವಿದ್ಯಾರ್ಥಿಗಳಿಂದ ಜನಿವಾರ (Janivara Row) ತೆಗೆಸಿದ ಘಟನೆ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮುಖ್ಯಮಂತ್ರಿಗೆ ಪತ್ರ ಬರೆದು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ ಮನವಿಯಲ್ಲಿ, ಜನಿವಾರ ತೆಗೆಸಿದ ಪರೀಕ್ಷಾ ಕೇಂದ್ರದ ಕಾಲೇಜಿನ ಪರವಾನಗಿ ರದ್ದುಪಡಿಸುವಂತೆ ಆಗ್ರಹಿಸಲಾಗಿದೆ. ಜೊತೆಗೆ ಸಂಬಂಧಿಸಿದ ಸಂಸ್ಥೆಗೆ ಕನಿಷ್ಠ 25 ಲಕ್ಷ ರೂ. ದಂಡ ವಿಧಿಸಬೇಕೆಂದು ಒತ್ತಾಯಿಸಲಾಗಿದೆ.

ಬ್ರಾಹ್ಮಣ ಸಮುದಾಯದ ಮೇಲಿನ ಅತಿಕ್ರಮ ಎಂದ ಮಹಾಸಭಾ

ರಾಜ್ಯದಲ್ಲಿ ಜನಿವಾರದ ಜಟಾಪಟಿ ತೀವ್ರವಾಗಿದ್ದು, ಸಿಇಟಿ ಪರೀಕ್ಷಾರ್ಥಿಗಳ ಜನಿವಾರ ತೆಗೆಸಲು ನಿಯಮ ಇಲ್ಲದಿದ್ದರೂ ತೆಗೆಸಿರೋದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬೆನ್ನಲ್ಲೇ ಇದೀಗ ಮಡಿವಾಳ ಠಾಣೆಯ ಪೊಲೀಸರಿಂದ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹಾಸಭಾ ಅಧ್ಯಕ್ಷ ಎಸ್. ರಘುನಾಥ್, ಈ ಘಟನೆ ಅತ್ಯಂತ ದುರದೃಷ್ಟಕರ ಮತ್ತು ಖಂಡನೀಯ. ಜನಿವಾರ ತೆಗೆಸಿದ ಪರಿಣಾಮ ವಿದ್ಯಾರ್ಥಿಗಳು ಮತ್ತು ಪೋಷಕರು ಮಾನಸಿಕವಾಗಿ ನೊಂದಿದ್ದಾರೆ.

ಕಳೆದ ವರ್ಷವೂ ಇಂತಹ ಘಟನೆ ನಡೆದಾಗ ಮಹಾಸಭಾ ಕರ್ನಾಟಕ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು ಎಂದು ರಘುನಾಥ್ ತಿಳಿಸಿದ್ದಾರೆ. 2025ರ ಡಿಸೆಂಬರ್‌ನಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಭರವಸೆ ನೀಡಿದ್ದರೂ, ಇದೀಗ ಮತ್ತೆ ಇದೇ ರೀತಿಯ ಘಟನೆ ನಡೆದಿದೆ ಎಂಬುದಾಗಿ ಆರೋಪಿಸಲಾಗಿದೆ. ಈ ಘಟನೆ ಬ್ರಾಹ್ಮಣ ಸಮುದಾಯದ ಮೇಲಿನ ಅತಿಕ್ರಮ ಎಂದು ಮಹಾಸಭಾ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ ಪೊಲೀಸ್​ ಠಾಣೆ ಮೆಟ್ಟಿಲೇರಿದ ಜನಿವಾರ ದಂಗಲ್: ವಿವಾದ ಬೆನ್ನಲ್ಲೇ ಮೂವರು ವಶಕ್ಕೆ

ಚಿಕ್ಕಬಳ್ಳಾಪುರದಲ್ಲಿಯೂ ಇಂತದ್ದೇ ಘಟನೆ

ಇದೇ ವೇಳೆ ಚಿಕ್ಕಬಳ್ಳಾಪುರದಲ್ಲಿಯೂ ಇಂತಹದ್ದೇ ಘಟನೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಅಲ್ಲಿ ಸಹ ಹೋರಾಟ ನಡೆಯುತ್ತಿದೆ ಎಂದು ರಘುನಾಥ್ ತಿಳಿಸಿದ್ದಾರೆ. ಪ್ರಕರಣದ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ಸ್ವೀಕರಿಸಲು ವಿಳಂಬವಾಗುತ್ತಿದೆ ಎಂಬ ಅಸಮಾಧಾನವೂ ವ್ಯಕ್ತವಾಗಿದೆ. ಈ ಘಟನೆಗೆ ನ್ಯಾಯ ದೊರಕುವವರೆಗೆ ಹೋರಾಟ ಮುಂದುವರೆಯಲಿದೆ ಎಂದು ಮಹಾಸಭಾ ಎಚ್ಚರಿಕೆ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Rajat Patidar: ಇಡೀ ಪಂದ್ಯದ ಚಿತ್ರಣ ಬದಲಿಸಿದ್ದು ಇವರೇ..! – Kannada News | Rajat patidar post match interview after RCB Vs GT Match IPL 2026

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 34ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್​ ತಂಡವು 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 205 ರನ್​ ಕಲೆಹಾಕಿದ್ದರು. ಈ ಗುರಿಯನ್ನು ಆರ್​ಸಿಬಿ 18.5 ಓವರ್​ಗಳಲ್ಲಿ ಚೇಸ್ ಮಾಡಿ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಭರ್ಜರಿ ಗೆಲುವಿನ ಬಳಿಕ ಮಾತನಾಡಿದ ಆರ್‌ಸಿಬಿ ತಂಡದ ನಾಯಕ ರಜತ್ ಪಾಟಿದಾರ್, ತಂಡದ ಸಂಘಟಿತ ಪ್ರದರ್ಶನ ಮತ್ತು ವಿಶೇಷವಾಗಿ ಬೌಲರ್‌ಗಳ ಸಮಯೋಚಿತ ಲಯದ ಬಗ್ಗೆ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.

ಆರ್​ಸಿಬಿ ಬೌಲರ್​ಗಳ ಭರ್ಜರಿ ಪ್ರದರ್ಶನದ ಬಗ್ಗೆ ಮಾತನಾಡಿದ ರಜತ್ ಪಾಟಿದಾರ್, “ಭುವನೇಶ್ವರ್ ಕುಮಾರ್ ಮತ್ತು ಹೇಝಲ್​ವುಡ್​ ಪಂದ್ಯದ ಆರಂಭದಲ್ಲಿ ಹಾಕಿದ ಲೈನ್ ಮತ್ತು ಲೆಂತ್ ಅದ್ಭುತವಾಗಿತ್ತು. ಮಧ್ಯಮ ಓವರ್‌ಗಳಲ್ಲಿ ಸುಯಶ್ ಶರ್ಮಾ ರನ್ ವೇಗಕ್ಕೆ ಬ್ರೇಕ್ ಹಾಕಿದರು.

ಅದರಲ್ಲೂ ಮುಖ್ಯವಾಗಿ ಡೆತ್ ಓವರ್‌ಗಳಲ್ಲಿ ರಾಸಿಖ್ ಸಲಾಮ್, ಭುವಿ ಮತ್ತು ಹೇಝಲ್​ವುಡ್​ ನಿಖರವಾದ ಯಾರ್ಕರ್ ಎಸೆಯುವ ಮೂಲಕ ಎದುರಾಳಿಗಳನ್ನು 200-205 ರನ್ ಆಸುಪಾಸಿನಲ್ಲಿ ಕಟ್ಟಿಹಾಕಿದರು. ಇದುವೇ ಪಂದ್ಯದ ಟರ್ನಿಂಗ್ ಪಾಯಿಂಟ್. ಹೀಗಾಗಿ ಈ ಗೆಲುವಿನ ಶ್ರೇಯಸ್ಸು ವೇಗಿಗಳಿಗೆ ಸಲ್ಲಬೇಕು ಎಂದು ರಜತ್ ಪಾಟಿದಾರ್ ಹೇಳಿದ್ದಾರೆ.

ಇನ್ನು 206 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದರು. ಈ ಭರ್ಜರಿ ಬ್ಯಾಟಿಂಗ್ ಬಗ್ಗೆ ಮಾತನಾಡಿದ ಪಾಟಿದಾರ್,  ಜೇಕಬ್ ಬೆಥೆಲ್ ಮತ್ತು ಕೊಹ್ಲಿ ಉತ್ತಮ ಆರಂಭ ಒದಗಿಸಿದ್ದರು. ಆ ನಂತರ ದೇವದತ್ ಪಡಿಕ್ಕಲ್ ಅವರ ಆಟ ಅದ್ಭುತವಾಗಿತ್ತು. ಅವರ ಕ್ವಿಕ್‌ಫೈರ್ ಬ್ಯಾಟಿಂಗ್ ತಂಡಕ್ಕೆ ಅಗತ್ಯವಿತ್ತು. ಇಲ್ಲಿ ಕೊಹ್ಲಿ ಹಾಗೂ ಪಡಿಕ್ಕಲ್ ಪ್ರಚಂಡ ಬ್ಯಾಟಿಂಗ್ ಚೇಸಿಂಗ್​ ಅನ್ನು ಸುಲಭವನ್ನಾಗಿಸಿತು ಎಂದು ಪಾಟಿದಾರ್ ಅಭಿಪ್ರಾಯಪಟ್ಟಿದ್ದಾರೆ.

ಈ ಗೆಲುವಿನ ಹೊರತಾಗಿಯೂ ತಂಡದ ತಪ್ಪುಗಳನ್ನು ಸುಧಾರಿಸಿಕೊಳ್ಳಬೇಕಿದೆ. ಮಧ್ಯಮ ಓವರ್‌ಗಳಲ್ಲಿ ನಾವು ಬೆನ್ನುಬೆನ್ನಿಗೆ ವಿಕೆಟ್ ಕಳೆದುಕೊಂಡೆವು. ಇದು ಈ ಪಂದ್ಯದ ಪ್ರಮುಖ ಕಲಿಕೆಯಾಗಿದೆ. ಮುಂದಿನ ಪಂದ್ಯಗಳಲ್ಲಿ ಇಂತಹ ತಪ್ಪುಗಳು ಮರುಕಳಿಸದಂತೆ ನಾವು ಕೆಲಸ ಮಾಡಬೇಕಿದೆ.

ಮಧ್ಯಮ ಕ್ರಮಾಂಕದಲ್ಲಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಕೈಚೆಲ್ಲಿರುವುದನ್ನು ಹೊರತುಪಡಿಸಿದರೆ, ನಮ್ಮ ತಂಡವು ಇಂದು ಸಹ ಅತ್ಯುತ್ತಮ ಪ್ರದರ್ಶನ ನೀಡಿದೆ. ಇದೇ ಪ್ರದರ್ಶನವನ್ನು ಮುಂದಿನ ಮ್ಯಾಚ್​ಗಳಲ್ಲೂ ಮುಂದುವರೆಸುವ ವಿಶ್ವಾಸವಿದೆ ಎಂದು ರಜತ್ ಪಾಟಿದಾರ್ ಹೇಳಿದ್ದಾರೆ.

ಇದನ್ನೂ ಓದಿ: IPL 2026: ಮುಖಕ್ಕೆ ಚೆಂಡು ಬಡಿದು ಯುವ ಆಟಗಾರನಿಗೆ ಗಂಭೀರ ಗಾಯ!

ಅಂದಹಾಗೆ ಗುಜರಾತ್ ಟೈಟಾನ್ಸ್ ವಿರುದ್ಧದ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದೆ. ಇನ್ನು ದ್ವಿತೀಯಾರ್ಧದಲ್ಲಿ ಆರ್​ಸಿಬಿ ತಂಡ ಮೂರು ಗೆಲುವು ದಾಖಲಿಸಿದರೆ ಪ್ಲೇಆಫ್ ಆಡುವುದು ಖಚಿತವಾಗಲಿದೆ.

Source link

Onion Ban City: ಭಾರತದ ಈ ಪಟ್ಟಣದಲ್ಲಿ ಈರುಳ್ಳಿ ಮಾರಾಟ ಮಾಡುವಂತಿಲ್ಲ, ನಿಷೇಧದ ಹಿಂದಿನ ಕುತೂಹಲಕಾರಿ ಸಂಗತಿ ಇಲ್ಲಿದೆ – Kannada News | Katra Onion Ban: Why Vaishno Devi’s Sacred Town Forbids Garlic and Tamasic Foods

ಈರುಳ್ಳಿ ಮಾರಾಟ ಮಾಡುವಂತಿಲ್ಲImage Credit source: gemini ai

ಭಾರತ ವೈವಿಧ್ಯತೆಗಳ ನಾಡು. ಇಲ್ಲಿನ ಭಾಷೆ, ಉಡುಗೆ ತೊಡುಗೆ ಮಾತ್ರವಲ್ಲ, ಆಹಾರ ಪದ್ಧತಿಯೂ ಪ್ರತಿ ನೂರು ಕಿಲೋಮೀಟರ್‌ಗೆ ಬದಲಾಗುತ್ತದೆ. ದಕ್ಷಿಣ ಭಾರತದಲ್ಲಿ ಅಕ್ಕಿ ಪ್ರಧಾನವಾದರೆ, ಉತ್ತರದಲ್ಲಿ ಗೋಧಿಯದ್ದೇ ಕಾರುಬಾರು. ಆದರೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಭಾರತೀಯ ಅಡುಗೆಮನೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ಒಂದು ವಸ್ತುವೆಂದರೆ ಅದು ಈರುಳ್ಳಿ. ಸಾರು, ಪಲ್ಯ, ಬಿರಿಯಾನಿ ಏನೇ ಇರಲಿ, ಈರುಳ್ಳಿ ಇಲ್ಲದ ಅಡುಗೆಯನ್ನು ಕಲ್ಪಿಸಿಕೊಳ್ಳುವುದು ಕಷ್ಟ.

ಆದರೆ, ಭಾರತದ ಸುಂದರ ಭೂಭಾಗವೊಂದರಲ್ಲಿ ಈರುಳ್ಳಿಯನ್ನು ಪತ್ತೆ ಹಚ್ಚುವುದು ಕೂಡ ಅಸಾಧ್ಯ ಎಂಬುದು ನಿಮಗೆ ಗೊತ್ತೇ? ಹೌದು, ಜಮ್ಮು ಮತ್ತು ಕಾಶ್ಮೀರದ ಕತ್ರಾ ಪಟ್ಟಣದಲ್ಲಿ ಈರುಳ್ಳಿಯ ಕೃಷಿ, ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಕತ್ರಾದಲ್ಲಿ ಈರುಳ್ಳಿ ಯಾಕೆ ನಿಷೇಧ?

ಜಮ್ಮು ಮತ್ತು ಕಾಶ್ಮೀರದ ಕತ್ರಾ ಪಟ್ಟಣವು ವಿಶ್ವಪ್ರಸಿದ್ಧ ವೈಷ್ಣೋದೇವಿ ದೇವಸ್ಥಾನದ ಪ್ರವೇಶ ದ್ವಾರವಾಗಿದೆ. ಈ ಪ್ರದೇಶವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಆಧ್ಯಾತ್ಮಿಕ ಶುದ್ಧತೆ ಮತ್ತು ಶಿಸ್ತನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಈ ಪಟ್ಟಣದ ಗಡಿಯೊಳಗೆ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ನಿಷೇಧಿಸಲಾಗಿದೆ.

ಇಲ್ಲಿನ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಅಥವಾ ರಸ್ತೆ ಬದಿಯ ಧಾಬಾಗಳಲ್ಲಿ ಈರುಳ್ಳಿ ಬೆಳ್ಳುಳ್ಳಿ ಮಿಶ್ರಿತ ಆಹಾರ ಲಭ್ಯವಿಲ್ಲ. ಅಷ್ಟೇ ಏಕೆ, ಸ್ಥಳೀಯ ಮಾರುಕಟ್ಟೆಗಳಲ್ಲಿಯೂ ಇವುಗಳ ಮಾರಾಟಕ್ಕೆ ಅವಕಾಶವಿಲ್ಲ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಧಾರ್ಮಿಕ ನಂಬಿಕೆ ಮತ್ತು ತಾಮಸಿಕ ಆಹಾರ:

ಹಿಂದೂ ಧರ್ಮದ ಆಹಾರ ಪದ್ಧತಿಯಲ್ಲಿ ಆಹಾರವನ್ನು ಮೂರು ವಿಧವಾಗಿ ವಿಂಗಡಿಸಲಾಗಿದೆ: ಸಾತ್ವಿಕ, ರಾಜಸಿಕ ಮತ್ತು ತಾಮಸಿಕ.

  • ತಾಮಸಿಕ ಆಹಾರ: ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಈ ಗುಂಪಿಗೆ ಸೇರಿಸಲಾಗಿದೆ. ಇವುಗಳು ಮನಸ್ಸಿನಲ್ಲಿ ಅಸ್ಥಿರತೆ, ಕೋಪ ಮತ್ತು ಆಲಸ್ಯವನ್ನು ಹೆಚ್ಚಿಸುತ್ತವೆ ಎಂದು ನಂಬಲಾಗಿದೆ.
  • ಸಾತ್ವಿಕ ಆಹಾರ: ಪೂಜೆ ಮತ್ತು ತೀರ್ಥಯಾತ್ರೆಗೆ ಬರುವ ಭಕ್ತರ ಮನಸ್ಸು ಶಾಂತವಾಗಿರಲಿ ಎಂಬ ಉದ್ದೇಶದಿಂದ ಇಲ್ಲಿ ಕೇವಲ ಸಾತ್ವಿಕ ಆಹಾರಕ್ಕೆ ಮಾತ್ರ ಆದ್ಯತೆ ನೀಡಲಾಗುತ್ತದೆ.

ರುಚಿಯಲ್ಲಿ ರಾಜಿ ಇಲ್ಲ:

ಈರುಳ್ಳಿ ಇಲ್ಲದಿದ್ದರೆ ಆಹಾರ ರುಚಿಯಾಗಿರುವುದಿಲ್ಲ ಎಂಬುದು ಅನೇಕರ ನಂಬಿಕೆ. ಆದರೆ ಕತ್ರಾದಲ್ಲಿ ಸಿಗುವ ಸಾತ್ವಿಕ ಆಹಾರವು ಈ ಮಾತನ್ನು ಸುಳ್ಳು ಮಾಡುತ್ತದೆ. ಇಲ್ಲಿನ ಆಹಾರವು ಅತ್ಯಂತ ಸ್ವಾದಿಷ್ಟವಾಗಿರುವುದಲ್ಲದೆ, ಆರೋಗ್ಯಕ್ಕೂ ಉತ್ತಮವಾಗಿರುತ್ತದೆ. ಯಾತ್ರಾರ್ಥಿಗಳು ಈರುಳ್ಳಿ ಇಲ್ಲದ ಈ ವಿಶೇಷ ಪಾಕಪದ್ಧತಿಯನ್ನು ಆಶ್ಚರ್ಯದಿಂದ ಸವಿಯುತ್ತಾರೆ. ಸ್ಥಳೀಯರು ಈ ಸಂಪ್ರದಾಯವನ್ನು ಕೇವಲ ಕಾನೂನು ಎಂದು ಪರಿಗಣಿಸದೆ, ತಮ್ಮ ಭಕ್ತಿಯ ಭಾಗವಾಗಿ ಅತ್ಯಂತ ಶ್ರದ್ಧೆಯಿಂದ ಪಾಲಿಸುತ್ತಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತೀವ್ರಗೊಂಡ ಕುಡಿಯುವ ನೀರಿನ ಅಭಾವ: ಅನುದಾನ ಒದಗಿಸಲು ಹಣಕಾಸು ಇಲಾಖೆಗೆ ಸಿಎಂ ಸೂಚನೆ, ಡಿಸಿಗಳಿಗೂ ಖಡಕ್ ಎಚ್ಚರಿಕೆ – Kannada News | Karnataka Water Crisis: CM Siddaramaiah Warns DCs, Allocates Rs 419 Crore for Drinking Water Supply

ಬೆಂಗಳೂರು, ಏಪ್ರಿಲ್ 25: ಕರ್ನಾಟಕದ (Karnataka) ಹಲವು ಜಿಲ್ಲೆಗಳಲ್ಲಿ ರಣ ಬಿಸಿಲಿನ ಜೊತೆಗೆ ಕುಡಿಯುವ ನೀರಿನ (Drinking Water) ಸಮಸ್ಯೆ ಉಲ್ಬಣಿಸುತ್ತಿದ್ದು, ಈ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಂಭೀರವಾಗಿ ಪರಿಗಣಿಸಿದ್ದಾರೆ. ಜನರಿಗೆ ಕುಡಿಯುವ ನೀರಿನ ತೊಂದರೆಯಾದರೆ ಆಯಾ ಜಿಲ್ಲಾಧಿಕಾರಿಗಳೇ ನೇರ ಹೊಣೆ ಎಂದು ಸಿಎಂ ಮತ್ತೊಮ್ಮೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಕುಡಿಯುವ ನೀರಿನ ಪೂರೈಕೆಗಾಗಿ ಈಗಾಗಲೇ ಸರ್ಕಾರ 419.50 ಕೋಟಿ ರೂ. ಹಣವನ್ನು ಮೀಸಲಿಟ್ಟಿದೆ. ಜಿಲ್ಲಾಧಿಕಾರಿಗಳ ವರದಿಯ ಆಧಾರದ ಮೇಲೆ ಹೆಚ್ಚುವರಿ ಅನುದಾನ ಒದಗಿಸಲು ಹಣಕಾಸು ಇಲಾಖೆಗೆ ಸಿಎಂ ಸೂಚಿಸಿದ್ದಾರೆ. ಕಂದಾಯ, ಪಂಚಾಯತ್ ರಾಜ್ ಮತ್ತು ನಗರಾಭಿವೃದ್ಧಿ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.

ಟ್ಯಾಂಕರ್ ಮತ್ತು ಖಾಸಗಿ ಬೋರ್‌ವೆಲ್ ಮೊರೆ

ರಾಜ್ಯದ 114 ತಾಲೂಕುಗಳ 598 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಸದ್ಯ 137 ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ನೀರಿನ ಲಭ್ಯತೆ ಹೆಚ್ಚಿಸಲು ಖಾಸಗಿ ಬೋರ್‌ವೆಲ್ ಮತ್ತು ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆಯಲು ಸರ್ಕಾರ ನಿರ್ಧರಿಸಿದೆ. ರಾಜ್ಯದ 14 ಪ್ರಮುಖ ಜಲಾಶಯಗಳಲ್ಲಿ ಸದ್ಯ 321.93 ಟಿಎಂಸಿ ನೀರು ಲಭ್ಯವಿದ್ದು, ಸೋರಿಕೆ ತಡೆದು ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಲು ಸೂಚಿಸಲಾಗಿದೆ.

ಟಾಸ್ಕ್‌ಫೋರ್ಸ್ ಸಭೆ ಮತ್ತು ಆರೋಗ್ಯ ಮುನ್ನೆಚ್ಚರಿಕೆ

ಪ್ರತಿ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ತಕ್ಷಣವೇ ‘ಟಾಸ್ಕ್‌ಫೋರ್ಸ್’ ಸಭೆ ನಡೆಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಬಿಸಿಲಿನ ತಾಪದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ಎದುರಿಸಲು ಆರೋಗ್ಯ ಇಲಾಖೆಯೊಂದಿಗೆ ಸೇರಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು, ಉಸ್ತುವಾರಿ ಸಚಿವರು ಮತ್ತು ಜಿ.ಪಂ. ಸಿಇಒಗಳಿಗೆ ಸಿಎಂ ನಿರ್ದೇಶನ ನೀಡಿದ್ದಾರೆ.

ವರದಿ: ಈರಣ್ಣ ಬಸವ, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

World Malaria Day 2026: ಮಲೇರಿಯಾ ಜ್ವರ ಹೇಗೆ ಹರಡುತ್ತದೆ? ಈ ರೋಗ ಬರದಂತೆ ತಡೆಗಟ್ಟಲು ಏನು ಮಾಡಬೇಕು? – Kannada News | World Malaria Day 2026: How does malaria occur? What is the way to prevent it?

ಮಲೇರಿಯಾ (Malaria) ಸೊಳ್ಳೆಗಳಿಂದ ಮನುಷ್ಯರಿಗೆ ಹರಡುವ ಕಾಯಿಲೆಯಾಗಿದೆ. ಸೋಂಕು ಹೊಂದಿದ ಅನಾಫಿಲಿಸ್‌ ಸೊಳ್ಳೆ ಮನುಷ್ಯನಿಗೆ ಕಚ್ಚಿದಾಗ ಈ ಜ್ವರ ಬರುತ್ತದೆ. ಈ ಕಾಯಿಲೆಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಮಲೇರಿಯಾದ ಇತರ ಗಂಭೀರ ಪರಿಣಾಮಗಳು ಮೂತ್ರಪಿಂಡದ ವೈಫಲ್ಯ, ಯಕೃತ್ತಿನ ವೈಫಲ್ಯ ಮತ್ತು ಮೆದುಳಿನ ಸೋಂಕು ಉಂಟು ಮಾಡಬಹುದು. ಆದ್ದರಿಂದ ಈ ಗಂಭೀರ ಕಾಯಿಲೆ ಹಾಗೂ ಅದನ್ನು ತಡೆಗಟ್ಟುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ಏಪ್ರಿಲ್‌ 25 ರಂದು ವಿಶ್ವ ಮಲೇರಿಯಾ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.

ವಿಶ್ವ ಮಲೇರಿಯಾ ದಿನದ ಇತಿಹಾಸವೇನು?

ವಿಶ್ವ ಮಲೇರಿಯಾ ದಿನವನ್ನು ಪ್ರತಿ ವರ್ಷ ಏಪ್ರಿಲ್ 25 ರಂದು ಆಚರಿಸಲಾಗುತ್ತದೆ. ಈ ದಿನದ ಉದ್ದೇಶವು ಮಾರಕ ಕಾಯಿಲೆಯಾದ ಮಲೇರಿಯಾ ಬಗ್ಗೆ ಜಾಗೃತಿ ಮೂಡಿಸುವುದು. ಇದನ್ನು ಆಫ್ರಿಕನ್ ದೇಶಗಳಲ್ಲಿ 2000 ರಲ್ಲಿ ಆಫ್ರಿಕಾ ಮಲೇರಿಯಾ ದಿನವೆಂದು ಆಚರಿಸಲು ಪ್ರಾರಂಭಿಸಲಾಯಿತು. ನಂತರ ಇದನ್ನು 2008 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ಜಾಗತಿಕವಾಗಿ ಆಚರಿಸುವ ನಿರ್ಧಾರವನ್ನು ಕೈಗೊಂಡಿತು. ಅಂದಿನಿಂದ ಪ್ರತಿವರ್ಷ ಜಗತ್ತಿನಾದ್ಯಂತ ವಿಶ್ವ ಮಲೇರಿಯಾ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ವಿಶ್ವ ಮಲೇರಿಯಾ ದಿನದ ಮಹತ್ವವೇನು?

  • ಪ್ರಪಂಚದಾದ್ಯಂತದ ಅನೇಕ ದೇಶಗಳಲ್ಲಿ ಮಲೇರಿಯಾ ಗಂಭೀರ ಆರೋಗ್ಯ ಸಮಸ್ಯೆಯಾಗಿದೆ. ಇದು ಸೊಳ್ಳೆಗಳಿಂದ ಹರಡುವ ರೋಗವಾಗಿದ್ದು, ತಕ್ಷಣ ಚಿಕಿತ್ಸೆ ನೀಡದಿದ್ದರೆ ಮಾರಕವಾಗಬಹುದು. ಆದ್ದರಿಂದ ಈ ಗಂಭೀರ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.
  • ಮಲೇರಿಯಾ ತಡೆಗಟ್ಟುವಿಕೆ, ಸುರಕ್ಷಿತ ಕ್ರಮಗಳು ಮತ್ತು ಸಕಾಲಿಕ ಚಿಕಿತ್ಸೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ವಿಶ್ವ ಮಲೇರಿಯಾ ದಿನದ ಉದ್ದೇಶವಾಗಿದೆ.
  • ಈ ದಿನವು ಸರ್ಕಾರಗಳು, ಸರ್ಕಾರೇತರ ಸಂಸ್ಥೆಗಳು ಮತ್ತು ಆರೋಗ್ಯ ಸಂಸ್ಥೆಗಳು ಮಲೇರಿಯಾವನ್ನು ನಿಯಂತ್ರಿಸಲು ಮತ್ತು ತಡೆಗಟ್ಟಲು ಸಾಮೂಹಿಕ ಪ್ರಯತ್ನಗಳನ್ನು ಮಾಡಲು ಪ್ರೇರೇಪಿಸುತ್ತದೆ.ಪ್ರಾರಂಭಿಸಿತು.

ಮಲೇರಿಯಾ ರೋಗ ಹೇಗೆ ಹರಡುತ್ತದೆ?

ಅನಾಫಿಲಿಸ್‌ ಎಂಬ ಹೆಣ್ಣು ಸೊಳ್ಳೆಯಿಂದ ಮಲೇರಿಯಾ ರೋಗ ಹರಡುತ್ತದೆ. ಈ ಸೊಳ್ಳೆ ಪ್ಲಾಸ್ಮೊಡಿಯಂ ಎಂಬ ಪ್ಯಾರಾಸೈಟ್‌ನಿಂದ ತಾನು ಸೋಂಕಿಗೆ ಒಳಗಾಗಿ ಮನುಷ್ಯರಿಗೂ ಸೋಂಕನ್ನು ಹರಡುತ್ತವೆ. ಒಂದು ಸಲ ಈ ಸೋಂಕಿಗೆ ಒಳಗಾದ ಅನಾಫಿಲಿಸ್‌ ಸೊಳ್ಳೆ  ಮನುಷ್ಯರಿಗೆ ಕಚ್ಚಿದ ಬಳಿಕ ಪ್ಲಾಸ್ಮೋರಿಯಾವು ಮನುಷ್ಯನ ಯಕೃತ್ತಿನಲ್ಲಿ ಸಂತಾನಾಭಿವೃದ್ಧಿ ಮಾಡಿ, ಸೋಂಕು ಉಂಟು ಮಾಡುತ್ತದೆ ಮತ್ತು ಕೆಂಪು ರಕ್ತಕಣಗಳನ್ನು ನಾಶ ಪಡಿಸುತ್ತದೆ.

ಇದನ್ನೂ ಓದಿ: ಲಿವರ್‌ ಆರೋಗ್ಯಕರವಾಗಿರಬೇಕಂದ್ರೆ ತಪ್ಪದೇ ಈ ಆಹಾರಗಳನ್ನು ಸೇವನೆ ಮಾಡಲೇಬೇಕು

ಮಲೇರಿಯಾ ರೋಗದ ಲಕ್ಷಣಗಳು?

ಜ್ವರ, ಶೀತ, ತಲೆನೋವು, ಸುಸ್ತು, ಆಯಾಸ, ದೇಹ ನೋವು, ರಕ್ತಹೀನತೆ, ಉಸಿರಾಟದ ತೊಂದರೆ, ಕಡಿಮೆ ರಕ್ತದೊತ್ತಡ, ವಾಂತಿ ಇವೆಲ್ಲವೂ ಮಲೇರಿಯಾದ ಲಕ್ಷಣಗಳು.  ಈ ರೀತಿಯ ಚಿಹ್ನೆಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಆರಂಭಿಕ ಚಿಕಿತ್ಸೆಯು ಮಲೇರಿಯಾ ತೀವ್ರವಾಗುವುದನ್ನು ತಡೆಯಬಹುದು ಮತ್ತು ಜೀವಗಳನ್ನು ಉಳಿಸಬಹುದು.

ಮಲೇರಿಯಾ ರೋಗವನ್ನು ತಡೆಗಟ್ಟುವ ಕ್ರಮಗಳೇನು?

  • ಮಲೇರಿಯಾ ತಡೆಗಟ್ಟಲು ಸೊಳ್ಳೆ ಪರದೆ ಬಳಸುವುದು ಅತ್ಯಗತ್ಯ. ರಾತ್ರಿ ಮಲಗುವಾಗ ಸೊಳ್ಳೆ ಪರದೆ ಬಳಸುವುದರಿಂದ ಸೊಳ್ಳೆ ಕಡಿತದ ಅಪಾಯ ಕಡಿಮೆಯಾಗುತ್ತದೆ.
  • ಮನೆ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡುವುದು ಸಹ ಮುಖ್ಯವಾಗಿದೆ. ನಿಂತ ನೀರು, ಕಸ ಅಥವಾ ಮಣ್ಣು ಸೊಳ್ಳೆಗಳಿಗೆ ಪ್ರಮುಖ ಸಂತಾನೋತ್ಪತ್ತಿ ಸ್ಥಳಗಳಾಗಿವೆ. ಆದ್ದರಿಂದ, ನೀರಿನ ನಿಶ್ಚಲತೆಯನ್ನು ತಪ್ಪಿಸಿ, ಮತ್ತು ಅಪಾಯ ಹೆಚ್ಚಿದ್ದರೆ, ಮಲೇರಿಯಾ ವಿರೋಧಿ ಔಷಧಿಗಳಿಗಾಗಿ ವೈದ್ಯರನ್ನು ಸಂಪರ್ಕಿಸಿ.
  • ಸೊಳ್ಳೆ ಕಡಿತವನ್ನು ತಪ್ಪಿಸಲು ಪೂರ್ಣ ಪ್ಯಾಂಟ್‌ ಮತ್ತು ಪೂರ್ಣ ತೋಳಿನ ಬಟ್ಟೆಗಳನ್ನು ಧರಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Astrological Guidelines: ವಧು-ವರರ ನಕ್ಷತ್ರ ಒಂದೇ ಆಗಿದ್ದರೆ ಮದುವೆಯಾಗಬಾರದೇ? ಜ್ಯೋತಿಷ್ಯ ಸಲಹೆ ಇಲ್ಲಿದೆ – Kannada News | Same Nakshatra Marriages: Astrological Guidelines and Compatibility

ವಧು-ವರರ ನಕ್ಷತ್ರ ಒಂದೇImage Credit source: Pinterest

ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳಲ್ಲಿ ಒಂದೆಂದರೆ, ವಧು-ವರರ ನಕ್ಷತ್ರ ಒಂದೇ ಇದ್ದರೆ ವಿವಾಹ ಮಾಡಬಹುದೇ ಎಂಬುದು. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಗುರೂಜಿಯವರು ಹೇಳುವಂತೆ, ಕೆಲವು ನಿರ್ದಿಷ್ಟ ನಕ್ಷತ್ರಗಳಲ್ಲಿ ವಧು-ವರರ ಪಾದಗಳು ಭಿನ್ನವಾಗಿದ್ದಂತಹ ಸಂದರ್ಭದಲ್ಲಿ ವಿವಾಹಕ್ಕೆ ಅನುಮತಿ ಇದೆ. ಈ ನಕ್ಷತ್ರಗಳು ರೋಹಿಣಿ, ಆರ್ದ್ರ, ಮಕಾ, ಹಸ್ತ, ವಿಶಾಖ, ಶ್ರವಣ, ಉತ್ತರಾಭಾದ್ರ ಮತ್ತು ರೇವತಿ. ಈ ನಕ್ಷತ್ರಗಳ ಅಡಿಯಲ್ಲಿ, ಪಾದಗಳ ವ್ಯತ್ಯಾಸವಿದ್ದರೆ ವಿವಾಹವು ಸಮಂಜಸವೆಂದು ಪರಿಗಣಿಸಲಾಗುತ್ತದೆ.

ಆದರೆ, ಕೆಲವು ನಕ್ಷತ್ರಗಳ ವಿಚಾರದಲ್ಲಿ ಏಕ ನಕ್ಷತ್ರ ವಿವಾಹವು ಅಷ್ಟು ಸಮಂಜಸವಾಗಿರುವುದಿಲ್ಲ, ಅಂದರೆ ಅವು ಮಧ್ಯಮ ಫಲಿತಾಂಶವನ್ನು ನೀಡುತ್ತವೆ ಮತ್ತು ಹೆಚ್ಚಿನ ಫಲವಿರುವುದಿಲ್ಲ. ಈ ನಕ್ಷತ್ರಗಳು ಅಶ್ವಿನಿ, ಕೃತಿಕ, ಮೃಗಶಿರ, ಪುನರ್ವಸು, ಪುಷ್ಯ, ಪೂರ್ವಾಷಾಡ ಮತ್ತು ಉತ್ತರಾಷಾಡ. ಈ ನಕ್ಷತ್ರಗಳಲ್ಲಿ ಏಕ ನಕ್ಷತ್ರ ವಿವಾಹವು ಅಷ್ಟು ಉತ್ತಮವಲ್ಲ ಎಂದು ಹೇಳಲಾಗುತ್ತದೆ.

ಇನ್ನು ಕೆಲವು ನಕ್ಷತ್ರಗಳಲ್ಲಿ ಏಕ ನಕ್ಷತ್ರ ವಿವಾಹವನ್ನು ಸಂಪೂರ್ಣವಾಗಿ ನಿಷಿದ್ಧವೆಂದು ಪರಿಗಣಿಸಲಾಗುತ್ತದೆ. ಇಲ್ಲಿ ಪಾದಗಳು ಏನೇ ಇರಲಿ, ಏಕ ನಕ್ಷತ್ರ ವಿವಾಹ ಆಗಬಾರದು. ಈ ನಕ್ಷತ್ರಗಳು ಭರಣಿ, ಆಶ್ಲೇಷ, ಸ್ವಾತಿ, ಜ್ಯೇಷ್ಠ, ಮೂಲ, ಧನಿಷ್ಠ, ಶತಭಿಷ ಮತ್ತು ಪೂರ್ವಭಾದ್ರ. ಇಂತಹ ವಿವಾಹದಿಂದ ಯಾರಿಗಾದರೂ ಒಬ್ಬರಿಗೆ ಕಂಟಕ, ಆರೋಗ್ಯ ಸಮಸ್ಯೆಗಳು, ಸಂತಾನ ಭಾಗ್ಯವಿಲ್ಲದಿರುವುದು ಮತ್ತು ಜೀವನಪೂರ್ತಿ ಬಹಳ ಭಿನ್ನಾಭಿಪ್ರಾಯಗಳು ಉಂಟಾಗಬಹುದು ಎಂದು ಹೇಳಲಾಗುತ್ತದೆ. ಒಂದೇ ನಕ್ಷತ್ರದಲ್ಲಿ ರಾಶಿ ಹೊಂದಿದವರಲ್ಲಿ ನಾನು ಹೆಚ್ಚು, ನೀನು ಹೆಚ್ಚು ಎಂಬಂತಹ ಭಿನ್ನಾಭಿಪ್ರಾಯಗಳು ಬಂದು, ಸಂಬಂಧದಲ್ಲಿ ಇಬ್ಬರೂ ಟೈಗರ್ಸ್‌ ಆದಂತೆ ಆಗುತ್ತದೆ ಎಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಹೇಗೆ ಒಂದೇ ರಕ್ತ ಸಂಬಂಧದಲ್ಲಿ ವಿವಾಹವಾದಾಗ ಮಾನಸಿಕ ಏರುಪೇರುಗಳಾಗುವ ಸಾಧ್ಯತೆಗಳನ್ನು ಗಮನಿಸಲಾಗಿದೆಯೋ, ಅದೇ ರೀತಿ ಏಕ ನಕ್ಷತ್ರದ ವಿವಾಹದ ವಿಚಾರದಲ್ಲೂ ಎಚ್ಚರಿಕೆ ವಹಿಸುವುದು ಮುಖ್ಯ. ಆದ್ದರಿಂದ, ಏಕ ನಕ್ಷತ್ರ ವಿವಾಹದ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು, ತಿಳಿದಿರುವ ಪಂಡಿತರು ಅಥವಾ ಜ್ಯೋತಿಷಿಗಳನ್ನು ಸಂಪರ್ಕಿಸಿ, ವಿಷಯವನ್ನು ಅವರ ಮುಂದೆ ಇಟ್ಟು, ಸಂಪೂರ್ಣವಾಗಿ ಪರಿಷ್ಕಾರ ಮಾಡಿಕೊಂಡು ವಿವಾಹ ಮಾಡಿಕೊಳ್ಳುವುದು ತುಂಬಾನೇ ಒಳ್ಳೆಯದು ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅವಳಿ ಸುರಂಗ ಮಾರ್ಗ, ಮೇಲ್ಸೇತುವೆಗಳಿಗೆ ಬೇಕಿದೆ ಡಿಫೆನ್ಸ್ ಜಾಗ; ಸಚಿವ ರಾಜನಾಥ್ ಸಿಂಗ್​ಗೆ ಡಿ ಕೆ ಶಿವಕುಮಾರ್ ಮನವಿ – Kannada News | Bengaluru Infra: DK Shivakumar Seeks Defense Land for Twin Tunnels, Flyovers, Roads

ಕೇಂದ್ರ ಸಚಿವರ ಜೊತೆ ಡಿಸಿಎಂ ಡಿ.ಕೆ.ಶಿ ಮಹತ್ವದ ಚರ್ಚೆ

ನವದೆಹಲಿ, ಏಪ್ರಿಲ್ 25: ಡಿ.ಕೆ. ಶಿವಕುಮಾರ್ (DK Shivakumar) ಅವರು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಶುಕ್ರವಾರ ಭೇಟಿ ಮಾಡಿ ಬೆಂಗಳೂರಿನ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ರಕ್ಷಣಾ ಇಲಾಖೆ ಭೂಮಿಯನ್ನು ಒದಗಿಸುವಂತೆ ಹಾಗೂ ವಿಮಾನ ನಿಲ್ದಾಣಗಳ ಸುತ್ತಮುತ್ತಲ ಕಟ್ಟಡ ಎತ್ತರದ ನಿರ್ಬಂಧಗಳನ್ನು ಸಡಿಲಿಸುವಂತೆ ಮನವಿ ಸಲ್ಲಿಸಿದ್ದಾರೆ.

ನಿರ್ಬಂಧ ಸಡಿಲಗೊಳಿಸುವಂತೆ ಕೋರಿಕೆ

ನವದೆಹಲಿಯಲ್ಲಿ ನಡೆದ ಈ ಸಭೆಯಲ್ಲಿ ಬೆಂಗಳೂರು ನಗರದ ವೇಗವಾದ ಅಭಿವೃದ್ಧಿಗೆ ಕೆಲವು ರಕ್ಷಣಾ ನೀತಿಗಳು ಅಡ್ಡಿಯಾಗುತ್ತಿರುವ ಬಗ್ಗೆ ಶಿವಕುಮಾರ್ ವಿವರಿಸಿದ್ದಾರೆ. ವಿಶೇಷವಾಗಿ ಹೆಚ್ಎಎಲ್ ವಿಮಾನ ನಿಲ್ದಾಣ ಹಾಗೂ ಯಲಹಂಕ ವಾಯುನೆಲೆ ಸುತ್ತಮುತ್ತಲ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ನೀಡಲಾಗುತ್ತಿರುವ ನಿರಾಕ್ಷೇಪಣಾ ಪತ್ರ (NOC) ಪ್ರಕ್ರಿಯೆಯಲ್ಲಿ ಕಠಿಣ ನಿಯಮಗಳನ್ನು ವಿಧಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ರಕ್ಷಣಾ ಇಲಾಖೆ ವಿಮಾನ ನಿಲ್ದಾಣಗಳ ಸುತ್ತಮುತ್ತಲ ಪ್ರದೇಶದಲ್ಲಿ ವಿಧಿಸಲಾಗಿರುವ ಕಟ್ಟಡಗಳ ಎತ್ತರದ ನಿರ್ಬಂಧಗಳ ಸಡಿಲಿಕೆ, ಅವಳಿ ಸುರಂಗ ಮಾರ್ಗ, ರೋಟರಿ ಮೇಲ್ಸೇತುವೆ ಸೇರಿದಂತೆ ವಿವಿಧ ಯೋಜನೆ ಜಾರಿಗೆ ರಕ್ಷಣಾ ಇಲಾಖೆ ಜಾಗಗಳನ್ನು ನೀಡುವಂತೆ ಹಾಗೂ ಸುರಕ್ಷತೆ ಹಾಗೂ ಪ್ರಗತಿಯ ವಿಚಾರವನ್ನು ಗಮನದಲ್ಲಿಟ್ಟುಕೊಂಡು ನಿರ್ಬಂಧಗಳನ್ನು ಸಡಿಲಗೊಳಿಸಿ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಿದ್ದಾರೆ.

ವಿವಿಧ ಯೋಜನೆ ಜಾರಿಗೆ ಬೇಕಿದೆ ರಕ್ಷಣಾ ಇಲಾಖೆ ಜಾಗ

ಬೆಂಗಳೂರಿನಲ್ಲಿ ಸಂಚಾರಿ ದಟ್ಟಣೆ ನಿವಾರಣೆಗೆ ಕೈಗೊಂಡಿರುವ ವಿವಿಧ ಯೋಜನೆಗಳಿಗೆ ಅಗತ್ಯವಿರುವ ರಕ್ಷಣಾ ಇಲಾಖೆ ಜಾಗ ನೀಡುವ ಬಗ್ಗೆ ಚರ್ಚಿಸಿ ಮನವಿ ಸಲ್ಲಿಸಿದರು.ಬೆಂಗಳೂರು ಸಂಚಾರ ದಟ್ಟಣೆಗೆ ಪರಿಹಾರವಾಗಿ ರೂಪಿಸಲಾಗಿರುವ ಅವಳಿ ಸುರಂಗ ಯೋಜನೆಗೆ ಹೆಬ್ಬಾಳದ ಬಳಿ 2.039 ಎಕರೆ ಜಾಗ ಅಗತ್ಯವಿದೆ. ಬೈಯ್ಯಪ್ಪನ ಹಳ್ಳಿ ರೈಲ್ವೆ ಜಂಕ್ಷನ್ ಗೆ ಸಂಪರ್ಕ ಸಾಧಿಸುವ ರೋಟರಿ ಮೇಲ್ಸೇತುವೆಗೆ 1.197 ಎಕರೆ ಜಾಗ ಅಗತ್ಯವಿದೆ. ಏರ್ ಪೋರ್ಟ್ ರಸ್ತೆ (ಬಳ್ಳಾರಿ ರಸ್ತೆ)ಯಿಂದ ಸರೋವರ ಬಡಾವಣೆಗೆ ನಿರ್ಮಿಸಲು ಉದ್ದೇಶಿಸಿರುವ 60 ಅಡಿ ಸಂಪರ್ಕ ರಸ್ತೆ ಡಿಫೆನ್ಸ್ ಡೈರಿ ಫಾರ್ಮ್ ಬಳಿ ಹಾದು ಹೋಗಲಿದೆ. ಈ ಯೋಜನೆಗೆ ಬಳಕೆಯಾಗುವ ಜಾಗಕ್ಕೆ ಬದಲಿ ಜಾಗ ನೀಡಿ ಸಹಕರಿಸಬೇಕೆಂಬ ಮನವಿಗಳನ್ನು ಸಚಿವರ ಮುಂದಿಟ್ಟಿದ್ದಾರೆ.

ಲೋವರ್ ಆಗರಂ ರಸ್ತೆಯ ಸರ್ಕಾರಿ ಆಸ್ಪತ್ರೆಯಿಂದ ಸರ್ಜಾಪುರ ರಸ್ತೆ ಮಾರ್ಗವಾಗಿ ಈಜಿಪುರ ಜಂಕ್ಷನ್ ವರೆಗೂ 24 ಮೀಟರ್ ರಸ್ತೆ ನಿರ್ಮಾಣಕ್ಕೆ 13.709 ಎಕರೆ ಜಾಗದ ಅಗತ್ಯವಿದೆ. ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ ಈ ಎಲ್ಲಾ ಜಾಗವನ್ನು ತ್ವರಿತವಾಗಿ ಹಸ್ತಾಂತರ ಮಾಡಬೇಕಾಗಿದೆ. ಈ ಜಾಗಗಳ ಹಸ್ತಾಂತರದಿಂದ ರಕ್ಷಣಾ ಇಲಾಖೆ ಕಾರ್ಯಚರಣೆಗೆ ಯಾವುದೇ ಅಡ್ಡಿಯಾಗುವುದಿಲ್ಲ. ಹೀಗಾಗಿ ಈ ಜಾಗಗಳನ್ನು ಸಮಾನ ಮೌಲ್ಯ ಭೂಮಿ (EVL) ಅಥವಾ ಸಮಾನ ಮೌಲ್ಯ ಮೂಲಸೌಕರ್ಯ (EVI) ನೀತಿ ಅಡಿಯಲ್ಲಿ ಹಸ್ತಾಂತರ ಮಾಡಬೇಕು ಎಂದು ಮನವಿ ಮಾಡಲಾಗಿದೆ ಎಂದು ಶಿವಕುಮಾರ್ ಅವರು ಮಾಹಿತಿ ನೀಡಿದ್ದಾರೆ.

ಮನವಿ ಪತ್ರದಲ್ಲೇನಿದೆ?

ರಕ್ಷಣಾ ಇಲಾಖೆಯ ಕೆಲವು ನೀತಿಗಳಿಂದ ಬೆಂಗಳೂರಿನ ಪ್ರಗತಿಗೆ ಅಡ್ಡಿಯಾಗಿದೆ. ಬೆಂಗಳೂರಿನ ರಕ್ಷಣಾ ವಿಮಾನ ನಿಲ್ದಾಣಗಳ 20 ಕಿ.ಮೀ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಚಟುವಟಿಕೆಗಳಿಗೆ ನಿರಾಕ್ಷೇಪಣಾ ಪತ್ರ (NOC) ನೀಡುವಾಗ ವಿಮಾನ ನಿಲ್ದಾಣದ ಅಧಿಕಾರಿಗಳು ವಿಪರೀತ ನಿರ್ಬಂಧಗಳನ್ನು ವಿಧಿಸುತ್ತಿದ್ದಾರೆ. ಬೆಂಗಳೂರು ವಿಶ್ವದ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ. ಹೆಚ್ಎಎಲ್ ವಿಮಾನ ನಿಲ್ದಾಣ ಬೆಂಗಳೂರಿನ ಹೃದಯ ಭಾಗದಲ್ಲಿದ್ದು, ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಆದರೆ ಹೆಚ್ಚುವರಿಯಾಗಿ ವಿಧಿಸಲಾಗಿರುವ ನಿರ್ಬಂಧಗಳು ಈ ಪ್ರದೇಶಗಳಲ್ಲಿ ಅಭಿವೃದ್ಧಿಗೆ ಅಡ್ಡಿಯಾಗಿವೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಈ ವಿಚಾರವಾಗಿ ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿಗಳು, ರಕ್ಷಣಾ ಸಚಿವಾಲಯದ ರಕ್ಷಣಾ ಉತ್ಪಾದನಾ ಇಲಾಖೆ ಕಾರ್ಯದರ್ಶಿಗಳು ಹಾಗೂ ರಕ್ಷಣಾ ಕಾರ್ಯದರ್ಶಿಗಳಿಗೆ ಪತ್ರಗಳನ್ನು ಬರೆಯಲಾಗಿದೆ. ವಿಮಾನ ಸುರಕ್ಷತೆ ಹಾಗೂ ನಗರದ ಅಭಿವೃದ್ಧಿ ಎರಡರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಪರಿಶೀಲನೆ ನಡೆಸಿ, ಎದುರಾಗಿರುವ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಎಂದು ಡಿಸಿಎಂ ಮನವಿ ಮಾಡಿದ್ದಾರೆ.

ಇದನ್ನೂ ಓದಿ ಸಿದ್ದರಾಮಯ್ಯ ಆಪ್ತರಿಂದ ಸಭೆ, ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ: ಸಿಎಂ ಬದಲಾವಣೆ ಚರ್ಚೆ ಮತ್ತೆ ಮುನ್ನೆಲೆಗೆ ಬರೋ ಸುಳಿವು

ಬೆಂಗಳೂರಿನ ಅಭಿವೃದ್ಧಿಗೆ ಇರುವ ನಿರ್ಬಂಧಗಳ ಕುರಿತು ವಿವರಿಸಿರುವ ಡಿಸಿಎಂ

ಬೆಂಗಳೂರಿನಲ್ಲಿ ನಾಲ್ಕು ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿ ಹೆಚ್ಎಎಲ್ ಹಾಗೂ ಯಲಹಂಕ ವಾಯುನೆಲೆ ರಕ್ಷಣಾ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ವಿಮಾನ ನಿಲ್ದಾಣಗಳ ಸುತ್ತಮುತ್ತಲ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಮಾಡಲು ವಿಮಾನ ನಿಲ್ದಾಣ ಅಧಿಕಾರಿಗಳಿಂದ ನಿರಾಕ್ಷೇಪಣ ಪತ್ರ ಪಡೆಯಬೇಕಾಗಿದೆ. ವಿಮಾನ ನಿಲ್ದಾಣದ ಸುತ್ತಮುತ್ತಲ 15 ಕಿ.ಮೀ ವ್ಯಾಪ್ತಿಯಲ್ಲಿ ಕಟ್ಟಡಗಳ ಎತ್ತರದ ಮಿತಿಯನ್ನು 150 ಮೀ. ನಿಗದಿಪಡಿಸಲಾಗಿದೆ ಎಂದು ಜಿ.ಎಸ್.ಆರ್ 751 (ಇ) ನಿಯಮದಲ್ಲಿ ಸೂಚಿಸಲಾಗಿದೆ. ಆದರೆ ರಕ್ಷಣಾ ಇಲಾಖೆ ವಿಮಾನ ನಿಲ್ದಾಣಗಳು ಈ ವಿಪರೀತ ನಿರ್ಬಂಧ ಹೇರುವುದರ ಜತೆಗೆ 150 ಮೀ. ಎತ್ತರದ ಮಿತಿಯನ್ನು 15 ಕಿ.ಮೀ ಮೀರಿ 20 ಕಿ.ಮೀ ವರೆಗೂ ವಿಸ್ತರಿಸಿವೆ. ಈ ನಿರ್ಬಂಧಗಳು ಈ ಬೆಂಗಳೂರು ನಗರದ ಪ್ರಗತಿಗೆ ಮಾರಕವಾಗಿವೆ ಎಂದು ಡಿ ಕೆ ಶಿವಕುಮಾರ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version